Thursday, November 10, 2022

ಒಂದೇ ಶಕ್ತಿಯ ಮೂರು ಮುಖಗಳು-ತ್ರಿಮೂರ್ತಿಗಳು ( Onde Saktiya Muru Mukhagaiu-Trimurtigalu)

ಶ್ರೀ ಭಾಷ್ಯಂ ರಾಮಚನ್ದ್ರಾಚಾರ್

(ಪ್ರತಿಕ್ರಿಯಿಸಿರಿ lekhana@ayvm.in)



 

ತ್ರಿಪುರಾಸುರರ ಸಂಹಾರ, ತ್ರಿಮೂರ್ತಿಗಳು ಸಹಕರಿಸಿ ಸಾಧಿಸುವ ಕೆಲಸದ ಒಂದು ನಿದರ್ಶನ. 


ತ್ರಿಪುರಾಸುರರು, ಸುಬ್ರಹ್ಮಣ್ಯ ಸಂಹಾರ ಮಾಡಿದ ತಾರಕಾಸುರನ ಸುಪುತ್ರರು. ಅವರ ಹೆಸರು ತಾರಾಕ್ಷ, ಕಮಲಾಕ್ಷ ಮತ್ತು ವಿದ್ಯುನ್ಮಾಲಿ. ಮುವರೂ ಈಶ್ವರನ ಪರಮ ಭಕ್ತರು,  ಸತ್ಯವಂತರು, ಧರ್ಮಿಷ್ಟರು, ಮಹಾಪರಾಕ್ರಮಿಗಳು ಮತ್ತು ಉದಾರವಂತರು. ಇಷ್ಟೆಲ್ಲಾ ಒಳ್ಳೆಯ ಗುಣಗಳಿದ್ದರೂ  ಅವರು ದೇವತೆಗಳ ಪರಮ ದ್ವೇಷಿಗಳು. ಅವರು  ಅತ್ಯಂತ ತೀವ್ರವಾದ ತಪಸ್ಸನ್ನು ಪಂಚಾಗ್ನಿಮಧ್ಯದಲ್ಲಿ ಆಚರಿಸಿ, ಬ್ರಹ್ಮದೇವರನ್ನು ಒಲಿಸಿಕೊಂಡು 'ಸಾವಿಲ್ಲದ' ವರವನ್ನು ಬೇಡುತ್ತಾರೆ. ಅದಾಗದೆಂದ ಬ್ರಹ್ಮದೇವರಲ್ಲಿ,  ಸಾವು ಬಂದರೆ ಅದು ಪರಶಿವನಿಂದಲೇ  ಬರಬೇಕೆಂದು ಕೇಳಿ ಪಡೆಯುತ್ತಾರೆ. ಪರಮ ಭಕ್ತರನ್ನು ಎಂದೂ ಪರಶಿವ ವಧಿಸಲಾರನೆಂಬ ತೀವ್ರನಂಬಿಕೆ ಅವರದು. ಬ್ರಹ್ಮದೇವರ ಆಜ್ಞೆಯಂತೆ ಮಯಾಸುರ ಮೂರು ಪಟ್ಟಣಗಳನ್ನು ನಿರ್ಮಿಸಿಕೊಡುತ್ತಾನೆ - ಕಬ್ಬಿಣ , ಬೆಳ್ಳಿ  ಮತ್ತು ಚಿನ್ನದಿಂದ. ಈ  ಪಟ್ಟಣಗಳು ಯಾವಾಗಲೂ ವೇಗವಾಗಿ  ಸಂಚರಿಸುತ್ತಿರುತ್ತವೆ. 


ಸಾವಿರ ವರ್ಷಕ್ಕೊಮ್ಮೆ ಸ್ವಲ್ಪವೇ ಸಮಯ  ಸಂಧಿಸುತ್ತವೆ. ಅಂತಹ  ಸಮಯದಲ್ಲಿ, ಅಭಿಜಿನ್ ಮುಹೂರ್ತದಲ್ಲಿ ಒಂದೇ ಬಾಣದಲ್ಲಿ ಮಹಾದೇವನೇ ಅವರನ್ನು ಕೊಲ್ಲುವಂತಾದರೆ ಅವರಿಗೆ ಸಾವು ಎಂಬ ವರವಿದೆ. ವರಪಡೆದು ಕೊಬ್ಬಿದ ಇವರನ್ನು ಜಯಿಸಲು   ಸಾಧ್ಯವಾಗದೆ, ದೇವತೆಗಳು ಶಿವನಲ್ಲಿ ಮೊರೆಹೋಗುತ್ತಾರೆ. ಆಗ ಪರಶಿವನು ಧರ್ಮಿಷ್ಠರಾದ  ಇವರನ್ನು ವಧಿಸಲು ಸಾಧ್ಯವಿಲ್ಲ; ಏನಾದರೂ ಮಾಡಿ ಅವರನ್ನು ಧರ್ಮದಿಂದ ಜಾರುವಂತೆ  ಮಾಡಿದರೆ, ನಾನು ವಿಚಾರಿಸಿಕೊಳ್ಳುವೆ ಎಂದು ಆಶ್ವಾಸನೆ ಕೊಡುತ್ತಾನೆ.  ಆಗ ದೇವತೆಗಳು ವಿಷ್ಣುವನ್ನು ಮೊರೆಹೊಗುತ್ತಾರೆ. ವಿಷ್ಣುವು ಒಂದು ಯತಿವೇಷಧಾರಿಯಾದ 'ಮುಂಡಿ' ರೂಪವನ್ನು ಸೃಷ್ಟಿಸಿ, ಆತನನ್ನು ನಾರದರೊಡಗೂಡಿಸಿ ಇವರ ರಾಜ್ಯಕ್ಕೆ ಕಳುಹಿಸುತ್ತಾನೆ. ಇವನು ಧರ್ಮದ ಆಚಾರಣೆಗಳಾದ ಯಜ್ಞ, ಪಿತೃಪೂಜೆ, ದೇವತೆಗಳ ಧ್ಯಾನ  ಫಲ ಕೊಡವು. ದೇವತೆಗಳೇ ಬಹಳ ತಪ್ಪುಗಳನ್ನು ಮಾಡುತ್ತಾರೆ.


ಜಗನ್ನಿಯಾಮಕನಾದ ಈಶ್ವರನ ಅವಶ್ಯಕತೆ ಏನೂ ಇಲ್ಲ. ಕರ್ಮಗಳೇ ಫಲವನ್ನು ಕೊಡುವಾಗ ಈಶ್ವರನ  ಅವಶ್ಯಕತೆಯಾದರೂ ಏನು? ಈ ರೀತಿಯಾಗಿ  ಅಧರ್ಮವನ್ನೇ ಧರ್ಮವೆಂದು ಅತ್ಯಾಕರ್ಷಕವಾಗಿ ಬೋಧಿಸುತ್ತಾ ಇವರ ರಾಜ್ಯದಲ್ಲಿ ತಿರುಗುತ್ತಿದ್ದ. ನಾರದರು ತ್ರಿಪುರಾಸುರರ ಬಳಿ ಹೋಗಿ ಮುಂಡಿಯ ಬೋಧನೆಯನ್ನು ಅದ್ಭುತವಾಗಿ ಹಾಡಿ -ಹೊಗಳಿ, ಮನವೊಲಿಸಿ ಇವರಿಗೆ ಶಿಷ್ಯರನ್ನಾಗಿಸಿ,  ಅವರನ್ನು ಧರ್ಮಮಾರ್ಗದಿಂದ ಜಾರುವಂತೆ ಮಾಡಿ ತನ್ನ  ಕೆಲಸವಾಯಿತೆಂದು ಹಿಂತಿರುಗುತ್ತಾರೆ. ಬ್ರಹ್ಮದೇವರಿಂದ ವರಪಡೆದು ಮಯನಿರ್ಮಿತವಾದ, ಸತ್ತವರನ್ನು ಬದುಕಿಸುವ ಮಾಯಾಕೊಳದ  ನೀರನ್ನು ವಿಷ್ಣು ಮತ್ತು ಬ್ರಹ್ಮ, ಆಕಳು -ಕರುಗಳಾಗಿ, ಮಯ ನೋಡುತ್ತಿದ್ದಂತೆಯೇ ಹೀರಿಬಿಡುತ್ತಾರೆ. ಹೀಗೆ ಧರ್ಮದಿಂದ ಜಾರಿ ಸಿದ್ದಪಡಿಸಿದ ತ್ರಿಪುರಾಸುರರನ್ನು ಬ್ರಹ್ಮನ ಸಾರಥ್ಯದಲ್ಲಿ  ಕಾಲಸ್ವರೂಪವಾದ ರಥದಲ್ಲಿ ಕುಳಿತು, ವಿಷ್ಣುರೂಪಿಯಾದ ಅಗ್ನಿಯ ಅಲಗಿನಿಂದ  ಕೂಡಿದ ಬಾಣವನ್ನು ಪ್ರಯೋಗಿಸಿ ಮೂರುಪಟ್ಟಣಗಳು ಅಭಿಜಿನ್ ಮುಹೂರ್ತದಲ್ಲಿ ಒಂದಾಗಿ ಸೇರಿದಾಗ ಈಶ್ವರ ಭಸ್ಮ ಮಾಡುತ್ತಾನೆ. ಇದು ಸಂಕ್ಷಿಪ್ತವಾದ ತ್ರಿಪುರಾಸುರರ ಕಥೆ. ಭಕ್ತರಾದ ತ್ರಿಪುರೇಶ್ವರರು ಈಶ್ವರನ ಸಾನ್ನಿಧ್ಯ  ಹೊಂದುತ್ತಾರೆ. 

 

ಈ ಕಥೆಯಲ್ಲಿ ತ್ರಿಮೂರ್ತಿಗಳೂ ಒಂದಾಗಿ ಸೇರುವುದನ್ನು ಕಾಣುತ್ತೇವೆ. ಈ ಕಥೆಯ ತತ್ತ್ವಾರ್ಥವನ್ನು ಶ್ರೀರಂಗ ಮಹಾಗುರುಗಳು ಈ ರೀತಿ ವಿಶದಪಡಿಸಿದ್ದರು. ತ್ರಿಪುರಗಳು ಸತ್ತ್ವ, ರಜಸ್, ತಮೋಗುಣಗಳ ಸಂಕೇತ. ಅವುಗಳು ನಿಂತಲ್ಲಿಯೇ ನಿಲ್ಲದೆ ಯಾವಾಗಲೂ ಸಂಚರಿಸುತ್ತಿರುತ್ತವೆ. ಅವುಗಳು ಒಂದೆಡೆ ಸೇರಿದಾಗ ತ್ರಿಮೂರ್ತಿಗಳ ಸಹಕಾರದಿಂದ ನಾಶಪಡಿಸಬೇಕಾಗುತ್ತದೆ, ಆಗ ಸಾಮ್ಯ ಉಂಟಾಗುತ್ತದೆ. ಆಗಷ್ಟೇ ಸಮಾಧಿಸ್ಥಿತಿ ಏರ್ಪಡುವುದು. ಈ ಕಥೆ, ಅಧ್ಭುತವಾದ  ಯೋಗ ಸಮಾಧಿಯ ಸ್ಥಿತಿಗೇರುವ ಗುಟ್ಟನ್ನು ಬಿಚ್ಚಿಕೊಡುತ್ತದೆ.


ಸೂಚನೆ:  10/10/2019 ರಂದು ಈ ಲೇಖನ ವಿಶ್ವ ವಾಣಿಯ ಗುರು ಪುರವಾಣಿ ಅಂಕಣದಲ್ಲಿ ಪ್ರಕಟವಾಗಿದೆ.