Monday, March 30, 2026

ವ್ಯಾಸ ವೀಕ್ಷಿತ 180 ಜರಾಸಂಧನ ಮೂದಲಿಕೆಗೆ ಕೃಷ್ಣನಿತ್ತ ದಿಟ್ಟ ಉತ್ತರ ( Vyaasa Vikshita 180)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 

(ಪ್ರತಿಕ್ರಿಯಿಸಿರಿ lekhana@ayvm.in)



ಅದಕ್ಕೆ ಜರಾಸಂಧನು ಹೇಳಿದನು:
"ನಿಮ್ಮೊಂದಿಗೆ ವೈರವೆಂಬುದು ಎಂದುಂಟಾಯಿತು? - ಎಂಬುದು ನನ್ನ ಸ್ಮರಣೆಗೆ ಬರುತ್ತಿಲ್ಲ. ಯೋಚಿಸಿದರೂ ಹೊಳೆಯುತ್ತಿಲ್ಲ. ನನ್ನ ಕಡೆಯಿಂದ ಯಾವುದೇ ಅಪರಾಧವೆಂಬುದಿಲ್ಲದಿರುವಾಗ, ನಿರಪರಾಧನಾದ ನನ್ನನ್ನು ಶತ್ರುವೆಂಬುದಾಗಿ ಹೇಗೆ ಪರಿಗಣಿಸಿದಿರಿ, ವಿಪ್ರರೇ? ಸಾಧು-ಪುರುಷರ ವರ್ತನೆಯೆಂದರೆ ಹೀಗಿರುವುದೇ? ಯಾರಿಗಾದರೂ ಧರ್ಮಕ್ಕೆ ಹೊಡೆತಬಿತ್ತೆಂದರೆ ಮನಸ್ಸು ಸಂತಾಪಗೊಳ್ಳುತ್ತದೆ. ಮಹಾರಥಿಯೆಂದೂ ಧರ್ಮಜ್ಞನೆಂದೂ ಕರೆಸಿಕೊಳ್ಳುವ ಯಾವನೇ ಕ್ಷತ್ರಿಯನು ಅನ್ಯಥಾ ನಡೆದುಕೊಳ್ಳುವವನಾಗಿ ಅಪರಾಧವಿಲ್ಲದವನ ಮೇಲೇರಿ ಹೋಗುವನೋ, ಅಂತಹವನು ಪಾಪಗತಿಯನ್ನು ಹೊಂದುವನು, ಹಾಗೂ ತನ್ನ ಶ್ರೇಯಸ್ಸಿಗೇ ಭಂಗವನ್ನು ತರುವನು. ಸತ್ಕರ್ಮಗಳನ್ನು ಮಾಡುವುದೆನ್ನುವುದರಲ್ಲಿ ಕ್ಷತ್ರಿಯರ ಧರ್ಮವೆಂಬುದೇ ಮೂರೂ ಲೋಕಗಳಲ್ಲಿ ಶ್ರೇಷ್ಠವೆನಿಸತಕ್ಕದ್ದು. ಧರ್ಮಜ್ಞರು ಬೇರಿನ್ನಾವುದೇ ಧರ್ಮವನ್ನು ಪ್ರಶಂಸಿಸುವುದಿಲ್ಲ.

ನಾನಾದರೋ ಸ್ವಧರ್ಮದಲ್ಲಿ ನೆಲೆಗೊಂಡಿರತಕ್ಕವನು. ಮನಸ್ಸನ್ನು ಸಂಯಮದಲ್ಲಿ ಇಟ್ಟುಕೊಂಡಿರುವವನು. ಪ್ರಜೆಗಳ ವಿಷಯದಲ್ಲಿ ಏನೂ ಅಪರಾಧವನ್ನು ಎಸಗದಿರುವವನು. ನನ್ನ ವಿಷಯದಲ್ಲಿ ಏನೋ ಪ್ರಮಾದದಿಂದಲೇ ನೀವು ಹೀಗೆ ಹೇಳುತ್ತಿರುವಿರಿ."

ಅದಕ್ಕೆ ಕೃಷ್ಣನು ಹೇಳಿದನು:
ಒಂದು ಕುಲದ ಉದ್ದಾರವೆಂಬುದು ದೊಡ್ಡಕೆಲಸವಯ್ಯಾ, ಮಹಾಬಾಹುವೇ! ಕುಲದ ಗೌರವವನ್ನುಳಿಸುವಂತಹವನು ಎಲ್ಲೋ ಒಬ್ಬನಿದ್ದಾನು. ಅಂತಹ ಮಹಾಪುರುಷನೊಬ್ಬನ ಆಣತಿಯಂತೆಯೇ ನಾವೀಗ ನಿನಗೆ ದಂಡನವನ್ನೀಯಲು ಬಂದಿದ್ದೇವೆ. ಈ ಭೂಮಿಯ ಮೇಲಿರುವ ಅನೇಕ ಕ್ಷತ್ರಿಯ ರಾಜರನ್ನು ನೀನು ಸೆರೆಗೆ ನೂಕಿರುವೆ. ಇದು ಕ್ರೂರಾಪರಾಧ. ಇದನ್ನು ಮಾಡಿಯೂ ನಿನ್ನನ್ನು ನೀನೇ ನಿರಪರಾಧಿಯೆಂದುಕೊಳ್ಳುವುದೇ?

ಅಪರಾಧಿಗಳಲ್ಲದ ಇತರ ರಾಜರನ್ನು ಒಬ್ಬ ರಾಜನು ಅದೆಂತು ಹಿಂಸಿಸಿಯಾನು, ರಾಜಶ್ರೇಷ್ಠನೇ? ರಾಜರುಗಳನ್ನು ಜೈಲಿಗೆ ತಳ್ಳಿ ಅವರನ್ನು ರುದ್ರನಿಗೆ ಬಲಿಗೊಡಲು ನೀನು ಬಯಸುತ್ತಿರುವೆಯಲ್ಲವೇ? ನೀನು ಎಸಗುವ ಆ ಪಾಪವು ನಮಗೆ ಅಂಟಿಕೊಳ್ಳುತ್ತದೆ, ಓ ಜರಾಸಂಧ! ಆದರೆ ನಾವು ಧರ್ಮವನ್ನು ಪಾಲಿಸತಕ್ಕವರು, ಧರ್ಮದ ರಕ್ಷಣೆಯನ್ನು ಮಾಡಲು ಸಮರ್ಥರಾಗಿರುವವರು.

ದೇವತೆಗೆಂದು ಮನುಷ್ಯರನ್ನು ಬಲಿಗೊಡುವುದನ್ನು ನಾವೆಂದೂ ಕಂಡವರಲ್ಲ. ಹಾಗಿರಲು ಶಿವನ ಯಜ್ಞಕ್ಕಾಗಿ ಅಷ್ಟೊಂದು ಮನುಷ್ಯರನ್ನು ಬಲಿಗೊಡಲಿರುವೆಯೆಂಬುದೇ ಒಪ್ಪಲಾಗದ ಸಂಗತಿ. ನೀನು ಕ್ಷತ್ರಿಯ. ಉಳಿದ ರಾಜರು ನಿನಗೆ ಸವರ್ಣರು. ಎಂದರೆ ಅವರೂ ಕ್ಷತ್ರಿಯವಂಶದವರೇ. ಹೀಗೆ ತಾನು ಸವರ್ಣನಾಗಿದ್ದು ಸವರ್ಣರಾದವರನ್ನೇ ನೀನು ಪಶುಗಳನ್ನಾಗಿಸಹೊರಟಿರುವೆ!

ಜರಾಸಂಧ, ಮತ್ತಾರು ತಾನೆ ನಿನ್ನಂತೆ ಈ ರೀತಿಯಾಗಿ ದುರ್ಮತಿಯನ್ನು ಹೊಂದಿದ್ದಾರು?  ಯಾವ ಯಾವ  ಅವಸ್ಥೆಯಲ್ಲಿ ಯಾವ ಯಾವ ಕರ್ಮವನ್ನು ಒಬ್ಬನು ಮಾಡುತ್ತಾನೋ, ಅದದೇ ಅವಸ್ಥೆಯಲ್ಲಿ ಅದರ ಫಲವನ್ನು ಹೊಂದಬೇಕಾಗುತ್ತದೆ. ನೀನು ಜ್ಞಾತಿಕ್ಷಯಕರ – ಎಂದರೆ ಬಂಧುಗಳನ್ನೇ ನಾಶಮಾಡಲಿಕ್ಕೆ ಹೊರಟಿರತಕ್ಕವನು. ಆದರೆ ನಾವು ಆರ್ತರಿಗೆ, ಎಂದರೆ ಸಂಕಟಕ್ಕೆ ಒಳಗಾಗಿರುವವರಿಗೆ, ರಕ್ಷಣೆಯನ್ನು ಕೊಡತಕ್ಕವರು. ಆದ್ದರಿಂದ, ಎಂದರೆ ಜ್ಞಾತಿವೃದ್ದಿಗಾಗಿ ನಿನ್ನ ವಧೆಯನ್ನು ಮಾಡಲು ಬಂದಿರುವಂಥವರು.

ಈ ಲೋಕದಲ್ಲಿ ಕ್ಷತ್ರಿಯರಲ್ಲಿ ಗಂಡಸೆಂಬುವನೇ ಮತ್ತೊಬ್ಬನಿಲ್ಲ – ಎಂದ ನೀನೇನ್ನನ್ನು ಭಾವಿಸಿಕೊಂಡಿರುವೆಯೋ, ಅದು ನಿನ್ನ ಮಹತ್ತಾದ ಬುದ್ಧಿ-ವಿಪ್ಲವವೇ ಸರಿ. ಸ್ವಾಭಿಮಾನಿಯಾದ ಯಾವ ಕ್ಷತ್ರಿಯನು ತಾನೆ ತನ್ನ ಬಂಧುಗಳನ್ನು ಅರಿತವನಾಗಿ, ಅವರನ್ನು ಕಾಪಾಡಲೋಸುಗ ಮಾಡಬೇಕಾದ ರಣವನ್ನು ತಪ್ಪಿಸಿಕೊಂಡಾನು – ಅದರಿಂದಲೇ ಸ್ವರ್ಗಪ್ರಾಪ್ತಿಯು ತನಗಂಟಾಗುವುದು – ಎಂಬುದನ್ನು ಅರಿತಿದ್ದೂ ಸಹ?

ರಣವೆಂಬುದು ಒಂದು ಯಜ್ಞ. ರಣಯಜ್ಞದಲ್ಲಿ ದೀಕ್ಷೆಗೊಂಡ ಕ್ಷತ್ರಿಯರು ಸ್ವರ್ಗದಲ್ಲಿ ಆಸ್ಥೆಯುಳ್ಳವರಾಗಿ, ತಮಗೆ ಅಭೀಷ್ಟವಾದ ಲೋಕಗಳನ್ನು ಸೇರುವರೆಂಬುದನ್ನು ನೀನೂ ಅರಿತಿರಬೇಕಷ್ಟೆ?

ಸೂಚನೆ : 29/3/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.