Sunday, March 1, 2026

ಕೃಷ್ಣಕರ್ಣಾಮೃತ 95 ಗೋಕುಲಾಲಂಕಾರನಾದ ಯೋಗಿಧ್ಯೇಯ-ತೇಜೋಮೂರ್ತಿಗೆ ನಮಃ (Krishakarnamrta 95)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ರಾಜಯೋಗದಿಂದ ಭಗವಂತನನ್ನು ಹೊಂದಬಹುದು – ಎಂಬುದು ಪ್ರಸಿದ್ಧವಷ್ಟೆ. ಆದರೆ ಭಕ್ತಿಯೋಗಕ್ಕೆ ಆ ತೆರನಾದ ಸಾಮರ್ಥ್ಯವುಂಟೇ? – ಎಂದು ಶಂಕಿಸುವವರಿಗೆ ಇಲ್ಲಿ, ಲೀಲಾಶುಕನ ಈ ಶ್ಲೋಕದಲ್ಲಿ, ಉತ್ತರವಿದೆ.

ಗೋಪಾಲ-ಭೂಪಾಲನೆಂದರೆ ಗೋಪಾಲಕರ ರಾಜನಾದ ನಂದ-ಭೂಪ. ಅತನ ಕುಮಾರನೆಂದರೆ  ಇನ್ನಾರು, ಶ್ರೀಕೃಷ್ಣನೇ. ಆತನ ಮೂರ್ತಿಯೆಂದರೆ ಕೃಷ್ಣನ ಶರೀರವೇ. ಮೈಯನ್ನು ಮೂರ್ತಿಯೆನ್ನುವುದೂ ಉಂಟು.

ಧ್ಯಾನವೆಂದರೇನು? ಭಗವನ್ಮೂರ್ತಿಯನ್ನು ಆ-ಪಾದ-ಮಸ್ತಕ ಧ್ಯಾನಿಸುವುದೇ. ಆ-ಪಾದಂ ಎಂದರೆ "ಚರಣದಿಂದ ಆರಂಭಿಸಿ". ಆ-ಚೂಡಂ ಎಂದರೆ "ಶೀರ್ಷ-ಪರ್ಯಂತ", "ತಲೆಯವರೆಗೆ".

ಹೀಗೆ, "ಆ" ಎನ್ನುವುದಕ್ಕೆ "-ಇಲ್ಲಿಂದ" ಎಂಬ ಅರ್ಥವೂ ಇದೆ; ಹಾಗೆಯೇ, "-ಇಲ್ಲಿಯವರೆಗೆ" ಎಂಬ ಅರ್ಥವೂ ಇದೆ. ಧ್ಯಾನಿಸುವುದೆಂದರೆ ಧ್ಯೇಯ-ವಸ್ತುವನ್ನು ಚಿತ್ತದಲ್ಲಿ ತುಂಬಿಕೊಂಡಿರುವುದೇ.

ಅತಿಪ್ರಸಕ್ತವೆಂದರೆ ಆದರ-ಭರಿತವಾದದ್ದು. ಅತಿಪ್ರಸಕ್ತವಾದ ಮನಸ್ಸಿನಿಂದ ಯಮಿಗಳು, ಎಂದರೆ ಮುನಿಗಳು, "ಕುಡಿದೇಬಿಡು"ತ್ತಾರಂತೆ, ಶ್ರೀಕೃಷ್ಣನ ಮೂರ್ತಿಯನ್ನು! ಎವೆಯಿಕ್ಕದೆ ನೋಡುವುದನ್ನೇ "ಕಣ್ಣಿನಿಂದ ಕುಡಿಯುವುದು" - ಎಂಬುದಾಗಿ ವರ್ಣಿಸುತ್ತಾರೆ. ಹಾಗೆಯೇ, ಎಡೆಬಿಡದೆ ಧ್ಯಾನಿಸುವುದನ್ನು "ಮನಸ್ಸಿನಿಂದ ಕುಡಿಯುವುದು" - ಎನ್ನುತ್ತಾರೆ. ಧ್ಯಾನಕಾರ್ಯವೆಂಬುದು ಯೋಗಿಗಳಿಗೂ ಪರಮ-ಸುಲಭವೆಂದೇನಲ್ಲ. ಅದೂ ಶ್ರಮ-ಸಾಧ್ಯವೇ. ಮನಸ್ಸನ್ನು ಹಿಡಿದಿಡುವುದನ್ನು ಸುಲಭವೆಂದು ಯಾರು ಹೇಳಿಯಾರು?

ಯೋಗಿಗಳು ಅಷ್ಟು ಕಷ್ಟಪಟ್ಟು ಯಾವುದನ್ನು ಸಾಧಿಸುವರೋ ಅದನ್ನು ಗೋಪಿಯರು ಬಹು-ಸುಲಭವಾಗಿಯೇ ಸಾಧಿಸಿಬಿಡುತ್ತಾರೆ! – ಎನ್ನುವಂತಾಗಿದೆ. ಯೋಗಿಗಳು ಶ್ರೀಕೃಷ್ಣಮೂರ್ತಿಯನ್ನು ಹಾಗೆ "ಕುಡಿದರೂ", ನಿಜವಾಗಿ ರಸಾಸ್ವಾದವನ್ನು ಮಾಡಿದವರೆಂದರೆ ಗೋಪಿಯರೇ – ಎನ್ನುತ್ತಾನೆ, ಕವಿ. ಕೃಷ್ಣನ ಮೂರ್ತಿಯ ರಸವನ್ನು ಬಲ್ಲವರು ಭಕ್ತಿ ಉಕ್ಕಿರುವ ಚಿತ್ತದ ಗೋಪಿಕೆಯರೇ ಸರಿ.

ಯೋಗದ ಉನ್ನತಾವಸ್ಥೆಯಲ್ಲಿ ಏನು ಲಭ್ಯವಾಗುವುದೋ ಅದನ್ನೇ ಉತ್ಕಟವಾದ ಭಕ್ತಿಯೂ ದೊರಕಿಸಿಕೊಡುವುದು - ಎಂಬುದಾಗಿ ಶ್ರೀರಂಗಮಹಾಗುರುಗಳು ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.

ಅಂತಹ ನಂದ-ಪುತ್ರನ ಮೂರ್ತಿಯು ನಿಮ್ಮನ್ನು ಪೊರೆಯಲಿ – ಎನ್ನುತ್ತಾನೆ, ಲೀಲಾಶುಕ.

ಆಪಾದಂ ಆಚೂಡಂ ಅತಿಪ್ರಸಕ್ತೈಃ /
ಆಪೀಯಮಾನಾ ಯಮಿನಾಂ ಮನೋಭಿಃ |
ಗೋಪೀಜನ-ಜ್ಞಾತ-ರಸೋವತಾದ್ ವೋ /
ಗೋಪಾಲ-ಭೂಪಾಲ-ಕುಮಾರ-ಮೂರ್ತಿಃ ||


ಮತ್ತೊಂದು ಶ್ಲೋಕ:

ಕೃಷ್ಣನಿಗೆ ನಮಸ್ಕಾರ ಹೇಳುತ್ತಿದ್ದಾನೆ, ಲೀಲಾಶುಕ - ತುಭ್ಯಂ ನಮಃ, ಎಂದು; ಆದರೆ ಕೃಷ್ಣನ ಹೆಸರನ್ನೇ ಹೇಳಹೋಗಿಲ್ಲ! ಏಕೆ? ಕೃಷ್ಣನೊಂದು ಮಹಸ್ಸು. ಮಹಸ್ಸೆಂದರೆ ತೇಜಸ್ಸಲ್ಲವೇ?  ಮಹಸ್ಸಿಗೆ ನಮಸ್ಸನ್ನು ಹೇಳಿದೆ. ಎಂತಹ ಮಹಸ್ಸು ಅದು? ಹೀಗೆಂದು ಹೇಳಲಾಗದುದು! ಎದುರಿಗೆ ತೋರಿದರೂ ವರ್ಣಿಸಲಾಗದುದು.

"ಈ" ತೇಜಸ್ಸಿಗೆ ನಮಃ - ಎಂದರೆ ಎದುರು ತೋರುತ್ತಿರುವ ತೇಜಸ್ಸಿಗೆ ನಮಸ್ಕಾರವೆಂದೇ. "ಅದು"/"ಆ" – ಎಂದರೆ ದೂರದಲ್ಲಿರುವುದು; "ಇದು"/"ಈ" – ಎಂದರೆ ಹತ್ತಿರದಲ್ಲೇ/ಎದುರಿಗೇ ಇರುವುದು.

ನಾಲ್ಕು ವಿಶೇಷಣಗಳು ಆ ತೇಜಸ್ಸಿಗೆ. ಶ್ಲೋಕದ ಇಡೀ ಪೂರ್ವಾರ್ಧವೇ ಒಂದು ವಿಶೇಷಣ. ಮಿಕ್ಕ ಮೂರು ಉತ್ತರಾರ್ಧದಲ್ಲಿ. ಅವಲ್ಲಿ ಒಂದನ್ನು ಹೇಳಿಯಾಯಿತು. ಇನ್ನು ಮೂರಿವೆ.

ಶ್ರೀಕೃಷ್ಣನು ಗೋಕುಲಕ್ಕೇ ಮಂಡನ – ಎಂಬುದು ಎರಡನೆಯದು. ಮಂಡನವೆಂದರೆ ಅಲಂಕಾರ. ಕೃಷ್ಣನು ಗೋಕುಲಾಲಂಕಾರ. ಎಂತಹ ಗೋಕುಲವದು? ಶ್ರೀ-ಮತ್ ಆದ ಗೋಕುಲವದು. ಹಾಗೆಂದರೆ ಸಿರಿ-ಸಂಪತ್ತುಗಳಿಂದ ಕೂಡಿದುದು – ಎಂದರ್ಥ: ಎಷ್ಟಾದರೂ ಗೋ-ಸಮೃದ್ಧಿ, ಗವ್ಯ-ಸಮೃದ್ಧಿಗಳಿಂದ ಕೂಡಿದ ಎಡೆ ತಾನೆ? ಆದ್ದರಿಂದ ಶ್ರೀ-ಮತ್. ಅಲ್ಲದೆ, ಗೋವುಗಳಿರುವೆಡೆಯಲ್ಲಿ ಲಕ್ಷ್ಮಿಯೂ ಇರುವಳು - ಎನ್ನುವರಲ್ಲವೆ? ಹಾಗೂ ಶ್ರೀ-ಮತ್. ಎಂದೇ ಅದು ಬಡಗೋಕುಲವೇನಲ್ಲ.

ಅಂತಹ ಶ್ರೀಮದ್ಗೋಕುಲಕ್ಕೆ ಭೂಷಣ, ನಮ್ಮ ಕೃಷ್ಣ, ಬಡವರ ನಡುವೆ ಬೆಳೆದವನೇನಲ್ಲ. ಅಲ್ಲದೆ, ಮುದ್ದಿನಲ್ಲೂ ಚೂಟಿತನದಲ್ಲೂ ಅತಿಶಯವೆಂದರೆ, ಮನೆಗೇನು, ಕೇರಿಗೇನು, ಇಡೀ ಊರಿಗೇ ಭೂಷಣ, ಕುಲಕ್ಕೇ ಮಂಡನ ವಾಗುವುದೇ.

ಮೂರನೆಯದಾಗಿ, ಆತನು ಮಾಧುರ್ಯವೊಂದೇ ತುಂಬಿರುವ ಅರ್ಣವ. ಅರ್ಣವವೆಂದರೆ ಸಾಗರ. ನಾವು ನೋಡಿರುವ ಸಮುದ್ರವೆಲ್ಲಾ ಬರೀ ಉಪ್ಪುನೀರಿನದು. ಆದರಿವನು ಮಾಧುರ್ಯದ ವಾರಿಧಿ. ಮಗು ಕಡುಮುದ್ದಾಗಿದ್ದರೆ ಅದುವೇ ಮಾಧುರ್ಯ. ಮಾಧುರ್ಯವೊಂದೇ ಇರುವ ದೊಡ್ಡಸಮುದ್ರವೇ ಆದರೆ ಮಾಧುರ್ಯೈಕ-ಮಹಾರ್ಣವ – ಎಂದು ತಾನೆ ಹೇಳಬೇಕು?

ಎಂತಹ ಮಾಧುರ್ಯವದು? - ಎಂದು ಸ್ವಲ್ಪ ಹೇಳುವಿರಾ? – ಎಂದರೆ, ಹೇಳಲಾಗದು. ಏಕೆ? ಆ ಮಾಧುರ್ಯವು ಮಾತಿಗೆಟುಕದು. ಸಕ್ಕರೆಯನ್ನು ಸವಿದಿಲ್ಲದವನಿಗೆ, ಏನೆಂದು ಹೇಳಿ ಅದರ ಸವಿಯನ್ನು ಅರ್ಥಮಾಡಿಸಬಹುದು? ನಾಲಿಗೆಯೇ, ಸಕ್ಕರೆಯನ್ನು ಸವಿದಿರುವೆಯೆಲ್ಲಾ, ಅದರ ರುಚಿಯನ್ನೊಮ್ಮೆ ಬಣ್ಣಿಸು – ಎಂದರೆ ಏನು ಹೇಳೀತು? ಎಷ್ಟು ಹೇಳಿದರೆ ಅರ್ಥಮಾಡಿಸಲಾದೀತು? ಮಾತಿನಿಂದ ಪ್ರಯೋಜನವಿಲ್ಲ; ಸುಮ್ಮನೆ ಒಮ್ಮೆ ಸವಿಯಬೇಕು, ಅಷ್ಟೆ. ಅರಿಯುವ ವಿಷಯವದು, ಅರುಹುವ ವಿಷಯವಲ್ಲ. ಹೀಗೆ ಲೌಕಿಕವಾದ ಮಾಧುರ್ಯವನ್ನೇ ವಿವರಿಸಿ ತಿಳಿಸಲಾಗದೆನ್ನುವಾಗ, ಇನ್ನು ಕೃಷ್ಣ-ಮಾಧುರ್ಯವನ್ನು ವಾಕ್ಕಿನ ದ್ವಾರಾ ವಿಶದಪಡಿಸಲಾದೀತೇ?

ಹೋಗಲಿ, ಮನಸ್ಸಿಗಾದರೂ ಗೋಚರವಾಗುವುದೇ ಅದು? - ಎಂದರೆ ಮನಸ್ಸಿಗೂ ನಿಲುಕದು, ಅದು! ಮನಸ್ಸಿಗೂ ವಾಕ್ಕಿಗೂ ದೂರದಲ್ಲೇ ಸ್ಫುರಿಸುವ ವಿಶಿಷ್ಟವಾದ ಮಾಧುರ್ಯವದು! ಸರ್ವ-ವಿಲಕ್ಷಣವಾದದ್ದರಿಂದಲೇ, ಎಂದರೆ ಮಿಕ್ಕೆಲ್ಲಕ್ಕಿಂತಲೂ ವಿಭಿನ್ನವಾಗಿರುವುದರಿಂದಲೇ, ಅದನ್ನು "ಇದರಂತೆ/ಅದರಂತೆ" ಎಂದೇನನ್ನೂ ಹೇಳಲಾಗದುದು. ಅನುಭವೈಕಗೋಚರವದು! ಪರಬ್ರಹ್ಮವು ವಚೋದೂರ-ಮನೋದೂರವೆಂದು, ವಸ್ತುತಃ ವಾಗತೀತ-ಮನೋತೀತವೆಂದೇ, ಉಪನಿಷತ್ತೇ ಉದ್ಗರಿಸುವುದಲ್ಲವೇ?

ಕೊನೆಯದಾಗಿ, ಅದು ಸುಕೃತಿಗಳ ಭಾವಗಳಲ್ಲಿ ಚೆನ್ನಾಗಿ ಬೆಳಗುವುದು. ಪ್ರಕಾಶಮಾನವಾಗಿ ಹೊಳೆಯುವುದನ್ನೇ ಇಲ್ಲಿ ನಿರ್ಭಾಸಿಯೆಂದಿರುವುದು. ನಿರಂತರವಾಗಿ ಯಾವುದು ಭಾಸಿಸುವುದೋ, ಎಂದರೆ ಪ್ರಕಾಶಿಸುವುದೋ, ಅಂತಹುದೇ ನಿರ್ಭಾಸಿ.

ಸುಕೃತಿಗಳ ಭಾವಗಳೆಂದರೆ ಎಂತಹ ಭಾವಗಳು ಅವು? ಅವು ಚಾಪಲ-ಭೂಷಿತವೆನಿಸತಕ್ಕವು. ಕೃಷ್ಣನನ್ನು ನೋಡಬೇಕೆಂಬ ಆಸೆಯೇನುಂಟೋ, ಆ ಆಸೆಯೇ ಚಾಪಲ. ಅವರ ಭಾವಗಳಿಗೆ ಈ ಚಾಪಲವೇ ಭೂಷಿತ. ಭೂಷಣ ಅಥವಾ ಭೂಷಿತವೆಂದರೆ ಅಲಂಕಾರ.

ಇನ್ನು ಅವರ ಚಾಪಲವಾದರೂ ಅಲ್ಪವಾದುದಲ್ಲ, ಭೂಯಸ್ಸಾದುದು. ಎಂದರೆ ಅತ್ಯಧಿಕವಾದುದು.

ಚಾಪಲವು ಉಂಟಾದರೂ ಎಷ್ಟೋ ವೇಳೆ ಅದನ್ನು ಮುಚ್ಚಿಟ್ಟುಕೊಳ್ಳುವುದಾಗುತ್ತದೆ. ಆದರೆ ಅದು ಉಕ್ಕಿ ಬರುವ ವೇಳೆ ಸ್ಫುಟವಾಗಿ ಆವಿರ್ಭಾವಗೊಂಡುಬಿಡುತ್ತದೆ.

ಕೃಷ್ಣನನ್ನು ಕಂಡರೆ ಆಗುವುದು ಹರ್ಷ-ವರ್ಷವೇ. ವರ್ಷವೆಂದರೆ ಮಳೆ, ಅಥವಾ ಮಳೆಸುರಿಯುವಂತೆ ಸುರಿಯುವುದು. ಕೃಷ್ಣನನ್ನು ಕಂಡವರಲ್ಲಿ ಸಂತೋಷದ ಧಾರೆಯೇ ಸುರಿಯುವುದಷ್ಟೆ? ಆ ಅತಿಶಯವನ್ನೇ ನಿರ್ಭರವೆಂದಿರುವುದು. ಅವರ ಮನಸ್ಸು ಅದಕ್ಕೆ ಸೋತಿದೆ. ಆ ವಿವಶತೆಯ ಓಘವೆಂತಹುದು! ವಿವಶಾವೇಶವೆಂದರೆ ಅದೇ. ಆ ಕಾರಣಕ್ಕೇ ಅದು ಸ್ಫುಟವಾಗಿ ಪ್ರಕಟಗೊಂಡಿರುವುದು ಕೂಡ.

ಒಟ್ಟಿನಲ್ಲಿ ಹೇಳುವುದಾದರೆ, ಹರ್ಷಾತಿರೇಕದಿಂದ ಕೂಡಿರುವ ಸಜ್ಜನರು ಶ್ರೀಕೃಷ್ಣನ ವಿಷಯದಲ್ಲಿ ಭಾವ-ಭರಿತರಾಗಿದ್ದಾರೆ. ಕೃಷ್ಣನನ್ನು ವಿಶೇಷವಾಗಿ ನೋಡಬೇಕೆಂಬ ಅವರ ಚಾಪಲವು ಎದ್ದು ಕಾಣುತ್ತಿದೆ. ಕೃಷ್ಣನಾದರೂ ಶ್ರೀಗೋಕುಲಕ್ಕೆ ಭೂಷಣನಾಗಿದ್ದಾನೆ. ಮನೋವಾಗತೀತನಾಗಿದ್ದಾನೆ, ಕೃಷ್ಣ. ಮಧುರತೆಯದೇ ಮಹಾಸಾಗರ ಅವನು.

ಹೀಗೆಲ್ಲ ಇರುವ ಅವರ್ಣನೀಯ-ತೇಜಸ್ಸಾದ ಕೃಷ್ಣನೇ, ನಿನಗೆ ನಮಸ್ಕಾರ - ಎನ್ನುತ್ತಾನೆ, ಲೀಲಾಶುಕ.

ತುಭ್ಯಂ ನಿರ್ಭರ-ಹರ್ಷ-ವರ್ಷ-ವಿವಶಾವೇಶ-ಸ್ಫುಟಾವಿರ್ಭವದ್-/

ಭೂಯಶ್ಚಾಪಲ-ಭೂಷಿತೇಷು ಸುಕೃತಾಂ ಭಾವೇಷು ನಿರ್ಭಾಸಿನೇ |

ಶ್ರೀಮದ್-ಗೋಕುಲ-ಮಂಡನಾಯ ಮನಸಾಂ ವಾಚಾಂ ಚ ದೂರ-ಸ್ಫುರನ್-/

ಮಾಧುರ್ಯೈಕ-ಮಹಾರ್ಣವಾಯ ಮಹಸೇ ಕಸ್ಮೈಚಿದಸ್ಮೈ ನಮಃ ||

ಶ್ಲೋಕದಲ್ಲಿ ಅನುಪ್ರಾಸಾಲಂಕಾರವಿದೆ – ವಿಶೇಷವಾಗಿ ಕೊನೆಯ ಪಾದದಲ್ಲಿ.

ಸೂಚನೆ : 14/2/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.