Sunday, March 8, 2026

ಪ್ರಶ್ನೋತ್ತರ ರತ್ನಮಾಲಿಕೆ 56 (Prasnottara Ratnamalike 56)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಕಲಿಕಾಲದಲ್ಲೂ ಕುಲ ಮತ್ತು ಶೀಲದಲ್ಲೂ ಸದಾ ಅಚಲನಾದವನು ಯಾರು ?

ಉ. ಸಜ್ಜನ ಮಹಾಪುರುಷ

ಈ ಪ್ರಶ್ನೆಯು ಬಹಳ ವಿಶಿಷ್ಟವಾದದ್ದು. ಏಕೆಂದರೆ ಕಾಲ ಮತ್ತು ವ್ಯಕ್ತಿಯ ನಡುವೆ ಇರುವ ಸಂಬಂಧವನ್ನು ವಿವರಿಸುವ ಪ್ರಶ್ನೋತ್ತರ ಇದಾಗಿದೆ. ಕಾಲವೆಂಬುದು ಹೇಗೆ ವ್ಯಕ್ತಿಯ ಮೇಲೆ ಪ್ರಭಾವವನ್ನು ಬೀರಬಲ್ಲದು? ಎಂಬುದು ಇಲ್ಲಿದೆ. ಪುರುಷನೊಬ್ಬನು ತನ್ನ ಶೀಲ ಮೊದಲಾದ ಗುಣಗಳನ್ನು ಅನೇಕ ಕಾರಣಗಳಿಂದ ಬದಲಿಸುತ್ತಾನೆ. ಎಲ್ಲವೂ ಇದ್ದಂತೆ ಇರುವುದಿಲ್ಲ. ವ್ಯಕ್ತಿಯ ಕುಲ ಮತ್ತು ಶೀಲಾ ಎಂಬುದನ್ನು ಬದಲಿಸಬಹುದು. ಅಂತಹ ಶಕ್ತಿ ಯಾವುದಕ್ಕೆ ಇದೆ? ಎಂದರೆ ಕಾಲಕ್ಕೆ ಇದೆ ಎಂಬುದು ಇಲ್ಲಿನ ಆಶಯ. ಹಾಗಾಗಿ ಅಂತಹ ಕಾಲ ಮತ್ತು ವ್ಯಕ್ತಿ ನಡುವೆ ಸಂಬಂಧ ಹೇಗಿದೆ? ಎಂಬುದನ್ನು ಇಲ್ಲಿ ತಿಳಿಯಬಹುದಾಗಿದೆ

ಕೃತ ಪ್ರೇತ ದ್ವಾಪರ ಮತ್ತು ಕಲಿ ಎಂಬುದಾಗಿ ಕಾಲ ನಾಲ್ಕು ಬಗೆ. ಈ ನಾಲ್ಕರ ಹಿಂದಿರುವ ವಿಷಯವಾದರೂ ಏನು? ಈ ನಾಲ್ಕರ ಪ್ರಭೇದಕ್ಕೆ ಕಾರಣವೇನು? ಈ ಪ್ರಭೇದವು ಹೇಗೆ ವ್ಯಕ್ತಿಯ ಮೇಲೆ ಪ್ರಭಾವವನ್ನು ಬೀರುತ್ತದೆ? ಅತ್ಯಂತ ಪ್ರಧಾನವಾಗಿ ಯುಗ ಎಂಬ ಭೇದವು ಧರ್ಮದ ಹಿನ್ನೆಲೆಯಲ್ಲಿ ಬಂದಿದೆ. ಕೃತಯುಗದಲ್ಲಿ ಧರ್ಮವು ಪೂರ್ಣವಾಗಿ ಇರುತ್ತದೆ. ಪ್ರೇತಾಯುಗದಲ್ಲಿ ಅದೇ ಧರ್ಮವು ಕಾಲು ಭಾಗ ನಷ್ಟವಾಗುತ್ತದೆ. ಅಂದರೆ ಮುಕ್ಕಾಲು ಭಾಗ ಧರ್ಮ ಕಾಲು ಭಾಗ ಅಧರ್ಮ. ದ್ವಾಪರಯುಗದಲ್ಲಿ ಅರ್ಧ ಧರ್ಮ ಮತ್ತು ಅರ್ಧ ಅಧರ್ಮ. ಕಲಿಯುಗದಲ್ಲಿ ಮುಕ್ಕಾಲು ಭಾಗ ಅಧರ್ಮ ಕಾಲುಭಾಗ ಧರ್ಮ ಎಂಬುದಾಗಿ ಈ ಯುಗದ ಸ್ವಭಾವವನ್ನು ಧರ್ಮದ ಆಧಾರದ ಮೇಲೆ ಹೇಳಲಾಗಿದೆ. ಸೃಷ್ಟಿಯಲ್ಲಿ ಧರ್ಮದ ಕಾರಣದಿಂದ ಈ ವ್ಯತ್ಯಾಸವನ್ನು ಕಾಣಬಹುದು. ಆದರೆ ಈ ಪ್ರಶ್ನೆಯಲ್ಲಿ ಹೇಳಲಾದ ಸಜ್ಜನ ಅಥವಾ ಮಹಾಪುರುಷನ ಕುಲದಲ್ಲಾಗಲಿ ಅಥವಾ ಶೀಲದಲ್ಲಾಗಲಿ ಈ ಯುಗದ ಪರಿಣಾಮವಾಗಿ ಅಥವಾ ಕಾಲದ ಪರಿಣಾಮವಾಗಿ ಅವನಲ್ಲಿ ಯಾವ ವ್ಯತ್ಯಾಸನ್ನೂ ಕಾಣಲಾಗದು. ಕುಲ ಮತ್ತು ಶೀಲ ಇವೆರಡೂ ಪರಿವರ್ತಿತವಾಗುವುದು ಸಾಮಾನ್ಯವಾಗಿ ಬಹಳ ಕಷ್ಟ ಸಾಧ್ಯ. ಅಂದರೆ ಒಬ್ಬ ವ್ಯಕ್ತಿಯ ಪರಿವರ್ತನೆಯನ್ನು ಅವನ ಕುಲಶೀಲದಲ್ಲಿ ನೋಡಬಹುದು. ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಈ ಎರಡು ಮಾನದಂಡಗಳಿಂದಲೇ ಅಳೆಯುವುದುಂಟು. ವ್ಯಕ್ತಿ ಹೇಗಿದ್ದಾನೆ? ಎಂದರೆ ಅವನ ಕುಲವನ್ನು ಮತ್ತು ಶೀಲವನ್ನು ಪ್ರಶ್ನಿಸುವುದುಂಟು. ಮಹಾಪುರುಷನು ತನ್ನ ಕುಲಕ್ಕೆ ಕಳಂಕ ಬಾರದ ರೀತಿಯಲ್ಲಿ ವರ್ತಿಸುತಾನೆ.  ಕಾಲದಲ್ಲಿ ಎಷ್ಟೇ ವೈಷಮ್ಯ ಕಂಡುಬಂದರೂ ಆತ ಕುಲದಲ್ಲೂ ಮತ್ತು ಶೀಲದಲ್ಲೂ ಆವಿಚಲಿತನಾಗಿಯೇ ಇರುತ್ತಾನೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಶ್ರೀರಾಮಚಂದ್ರ. ಆತ ತನ್ನ ಕುಲಕ್ಕೆ ಬರುವ ಕಳಂಕವನ್ನು ತಪ್ಪಿಸುವುದಕೋಸ್ಕರ ಸೀತಾಪರಿತ್ಯಾಗದಂತಹ ಕಾರ್ಯಗಳನ್ನು ತನ್ನ ಜೀವನದಲ್ಲಿ ಮಾಡುತ್ತಾನೆ. ಚಿಕ್ಕ ಸಂಗತಿಯನ್ನು ಅವಗಣಿಸದೆ ಪ್ರತಿಯೊಂದುಕ್ಕೂ ಮಾನ್ಯತೆಯನ್ನು ಕೊಡುವುದನ್ನು ಕಾಣಬಹುದು. ಅಂದರೆ ಯಾವುದೇ ನಿಮಿತ್ತವೂ ಮಹಪುರುಷನನ್ನು ಕದಲಿಸುವುದಿಲ್ಲ ಎಂದರ್ಥ. ಮಹಾಪುರುಷನ ಲಕ್ಷಣವಿದಲ್ಲವೇ?

ಸೂಚನೆ : 8/3/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.