Monday, March 23, 2026

ಪ್ರಶ್ನೋತ್ತರ ರತ್ನಮಾಲಿಕೆ 58 (Prasnottara Ratnamalike 58)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ - ೫೮ - ದುರ್ಲಭವಾದ ಚತುರ್ಭದ್ರಗಳು ಯಾವುವು ?

ಉ. ಪ್ರಿಯವಾದ ಮಾತಿನಿಂದ ಕೂಡಿದ ದಾನ, ಗರ್ವರಹಿತವಾದ ಜ್ಞಾನ, ಕ್ಷಮಾದಿಂದ ಕೂಡಿದ ಶೌರ್ಯ ಮತ್ತು ತ್ಯಾಗದಿಂದ ಕೂಡಿದ ವಿತ್ತ 

ಈ ಹಿಂದಿನ ಪ್ರಶ್ನೋತ್ತರದಲ್ಲಿ 'ಚತುರ್ಭದ್ರ ಅಂದರೆ ಯಾವುದು?' ಎಂಬ ವಿಷಯವನ್ನು ವಿವರಿಸಲಾಗಿತ್ತು. ನಾಲ್ಕು ಪುರುಷಾರ್ಥಗಳೇ ಚತುರ್ಭದ್ರಗಳು ಎಂಬ ವಿವರಣೆ ಅಲ್ಲಿತ್ತು. ಇದಕ್ಕೂ ಮುಂದುವರಿದ ಪ್ರಶ್ನೆ ಇದಾಗಿದೆ. ದುರ್ಲಭವಾದ ಚತುರ್ಭದ್ರಗಳು ಯಾವುವು? ಎಂದು. ಅಂದರೆ ಇಲ್ಲಿ ಹೇಳಿದ ನಾಲ್ಕು ಸಂಗತಿಗಳು ನಾಲ್ಕು ಪುರುಷಾರ್ಥಗಳನ್ನು ಪಡೆಯಲು ಅತ್ಯಂತ ಸಹಕಾರಿಗಳು ಎಂಬುದು ಎರಡು ಪ್ರಶ್ನೋತ್ತರಗಳನ್ನು ಗಮನಿಸಿದಾಗ ತಿಳಿದುಬರುವ ಅಂಶವಾಗಿದೆ. ಹಾಗಾಗಿ ಈ ಉತ್ತರದಲ್ಲಿ ಚತುರ್ಭದ್ರವನ್ನು ಸಾಧಿಸಲು ಬೇಕಾದ ದುರ್ಲಭವಾದ ಚತುರ್ಭದ್ರಗಳು ಯಾವುವು? ಎಂಬುದನ್ನು ತಿಳಿಯಬೇಕಾದ ಸಂದರ್ಭವಿದೆ.

ದಾನ ಮಾಡಬೇಕು. ಆದರೆ ದಾನವನ್ನು ಮಾಡುವಾಗ ಪ್ರಿಯವಾದ ಮಾತಿನಿಂದ ದಾನ ಮಾಡಬೇಕು. ಅಂದರೆ ದಾನವನ್ನು ಕೊಡುವ ಸಂದರ್ಭದಲ್ಲಿ ಸ್ವೀಕರಿಸುವವರ ಮನಸ್ಸು ಮೃದುವಾಗಿರಬೇಕು; ಅಂತಹ ಮನಸ್ಸನ್ನು ನಿರ್ಮಿಸಬೇಕು; ಅಂತಹ ಮನಸ್ಸನ್ನು ನಿರ್ಮಿಸಲು ಇರುವ ಉತ್ತಮ ಸಾಧನವೇ ಪ್ರಿಯವಾದ ಮಾತು. ಪ್ರಿಯವಾದ ಮಾತಿನಿಂದ ದಾನ ಮಾಡಿದಾಗ ದಾನಕ್ಕೆ ಹೆಚ್ಚಿನ ಮಹತ್ವ ಬರುತ್ತದೆ ಎಂಬುದು ಇದರ ಅರ್ಥ.

ಜ್ಞಾನವು ಗರ್ವದಿಂದ ರಹಿತವಾದಾಗ ಶೋಭಿಸುತ್ತದೆ. ಇದಕ್ಕೆ ಸಂಬಂಧಪಟ್ಟ ಒಂದು ಸುಭಾಷಿತ ಹೀಗಿದೆ - 'ವಿದ್ಯಾ ವಿನಯೇನ ಶೋಭತೇ' ಎಂಬುದಾಗಿ. ವಿನಯ ಎಂದರೆ ಗರ್ವ ಇಲ್ಲದಿರುವುದು. ಜ್ಞಾನವು ಎತ್ತರದಲ್ಲಿರುವ ವಿಷಯ. ಅದು ನಮ್ಮಲ್ಲಿಗೆ ಬರಬೇಕಾದರೆ ಬಾಗುವಿಕೆ ಅತ್ಯಂತ ಅನಿವಾರ್ಯ. ಈ ಬಾಗುವಿಕೆಯೇ ವಿನಯ ಎಂಬುದಾಗಿ ಕರೆಸಿಕೊಳ್ಳುತ್ತದೆ. ಹಾಗಾಗಿ ಜ್ಞಾನದ ಹರಿವು ವಿನಯದಲ್ಲಿ ನೆಲೆನಿಲ್ಲುತ್ತದೆ. ವಿನಯವಂತಿಕೆ ಜ್ಞಾನವನ್ನು ಇನ್ನಷ್ಟು ಪರಿಶೋಧಿಸುತ್ತದೆ.

ಶೌರ್ಯ ಎಂಬುದು ಬಹಳ ದೊಡ್ಡ ಗುಣ. ಅದು ಶರೀರ, ಇಂದ್ರಿಯ, ಮನಸ್ಸು ಇವುಗಳು ಬಲಿಷ್ಠವಾದಾಗ ರೂಪಿತಗೊಳ್ಳುವ ಒಂದು ವಿಶೇಷಗುಣ. ಈ ಗುಣವು ಪರಿಪೂರ್ಣವಾಗಬೇಕಾದರೆ ಅದಕ್ಕೆ ಕ್ಷಮಾ ಎಂಬ ಗುಣವು ಬೇಕು. ಸಹನೆ ಎಂಬುದು ಇದರ ಅರ್ಥ. ಶೌರ್ಯದಿಂದ ಕೂಡಿರುವ ವ್ಯಕ್ತಿಯು ಬಲಹೀನನಾದವನ ಮೇಲೆ ತನ್ನ ಬಲವನ್ನು ಪ್ರಯೋಗಿಸಬಾರದು; ಅದಕ್ಕೆ ಅವನಿಗೆ ಸಹನೆ ಅಥವಾ ಕ್ಷಮೆ ಎಂಬ ಗುಣ ಅತ್ಯಂತ ಅವಶ್ಯಕ. ಯಾರ ಮೇಲೆ ಬಲಪ್ರಯೋಗವನ್ನು ಮಾಡಬೇಕು? ಯಾರ ಮೇಲೆ ಬಲಪ್ರಯೋಗವನ್ನು ಮಾಡಬಾರದು? ಎಂಬ ವಿವೇಕವನ್ನು ಕ್ಷಮಾ ಗುಣವು ಶೌರ್ಯ ಇದ್ದವನಿಗೆ ಕಲಿಸುತ್ತದೆ.

ಮನುಷ್ಯನು ಧನವನ್ನು ಸಂಪಾದನೆ ಮಾಡಬೇಕಾದದ್ದು ಅತ್ಯಂತ ಅನಿವಾರ್ಯ. ಧನವಿಲ್ಲದಿದ್ದರೆ ಅವನ ಜೀವನ ಸಾರ್ಥಕವಲ್ಲ. ಧನವಿಲ್ಲದ ಜೀವನ ಉಸಿರಿಲ್ಲದ ಶವದಂತೆ. ಆದರೆ ಸಂಪಾದನೆ ಮಾಡಿದ ಧನವು ಉಳಿಯಬೇಕಾದರೆ ಅದು ತ್ಯಾಗದಿಂದ ಮಾತ್ರ ಸಾಧ್ಯ. ಅದಕ್ಕೆ ದಾಸರು ಹೇಳುವುದು "ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ" ಎಂಬುದಾಗಿ. ಇಟ್ಟು ಇಟ್ಟು ಧನವು ಹಾಳಾಗುತ್ತದೆ. ನಿಂತ ನೀರು ಕೆಡುತ್ತದೆ. ಹರಿಯುವ ನೀರು ಶುದ್ಧವಾಗಿರುತ್ತದೆ. ಸಂಪಾದಿಸಿದ ವಿತ್ತವು ತ್ಯಾಗದಿಂದ ಶುದ್ಧವಾಗುತ್ತದೆ. ಮತ್ತಷ್ಟು ಶುದ್ಧವಾದ ಧನ - ಸಂಪತ್ತು ಅವನನ್ನು ಸೇರಿಕೊಳ್ಳುತ್ತದೆ. ಹಾಗಾಗಿ ತ್ಯಾಗದಿಂದ ಕೂಡಿದ ಧನವು ಆ ವ್ಯಕ್ತಿಯಲ್ಲಿ ವ್ಯಕ್ತಿತ್ವವನ್ನು ರೂಪಿಸುತ್ತದೆ. ಹೀಗೆ ದಾನ, ಜ್ಞಾನ, ಶೌರ್ಯ ಮತ್ತು ಧನ ಈ ನಾಲ್ಕು ಸಂಪತ್ತುಗಳು ಉಳಿಯಬೇಕಾದರೆ ಏನು ಮಾಡಬೇಕು ಎಂಬ ಉತ್ತರ ಈ ಪ್ರಶ್ನೋತ್ತರದಲ್ಲಿ ಇದೆ ಎಂಬುದನ್ನು ನಾವು ಗಮನಿಸಬೇಕು.

ಸೂಚನೆ : 22/3/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.