Sunday, March 8, 2026

ವ್ಯಾಸ ವೀಕ್ಷಿತ 178 ರಾಕ್ಷಸನ ಚರ್ಮದಿಂದಾದ ನಗಾರಿ ( Vyaasa Vikshita 178)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 

(ಪ್ರತಿಕ್ರಿಯಿಸಿರಿ lekhana@ayvm.in)



ಜರಾಸಂಧವಧೆಗಾಗಿ ಕೃಷ್ಣಾರ್ಜುನ-ಭೀಮಸೇನರು ಮಗಧ-ದೇಶಕ್ಕೆ ಪ್ರಯಾಣಿಸಿದರಷ್ಟೆ. ಮಗಧವನ್ನು  ಸಮೀಪಿಸುತ್ತಲೇ ಕೃಷ್ಣನು ಅದರ ಸೊಬಗನ್ನು ತಾನೇ ವರ್ಣಿಸಿದನು:

"ಈ ಪಂಚ-ಪರ್ವತಗಳು ಹೇಗಿವೆ! ಮಹಾ-ಶಿಖರಗಳನ್ನುಳ್ಳ ಇವು ತಂಪನೆಯ ನೆರಳುಳ್ಳ ಮರಗಳಿಂದ ತುಂಬಿವೆ. ಇವೈದೂ ಒಟ್ಟಿಗೆ ಸೇರಿ, ಪರಸ್ಪರ ಅಂಟಿಕೊಂಡಿದ್ದು, ಈ ಗಿರಿವ್ರಜ-ನಗರವನ್ನು ಕಾಪಾಡುತ್ತಿರುವಂತಿದೆಯಲ್ಲವೇ? ಮರದ ಕೊಂಬೆಗಳ ಕೊನೆಗಳನ್ನು ಹೂಗಳು ದಟ್ಟವಾಗಿ ಸುತ್ತುವರೆದಿವೆ. ಮತ್ತು ಆ ಹೂಗಳಾದರೂ ಮನೋಹರವೂ ಸುಗಂಧಭರಿತವೂ ಆಗಿವೆ; ಕಾಮಿಜನರಿಗೆ ಪ್ರಿಯವೆನಿಸುವ ಲೋಧ್ರಗಿಡಗಳ ಕಾಡುಗಳಿಂದ ತುಂಬಿವೆ.

ಕಠೋರವ್ರತ-ಪಾಲಕರಾದ ಗೌತಮ-ಮಹರ್ಷಿಗಳು ಶೂದ್ರ-ಸ್ತ್ರೀಯಾದ ಔಶೀನರಿಯಲ್ಲಿ ಕಾಕ್ಷೀವಂತ ಮೊದಲಾದ ಮಕ್ಕಳನ್ನು ಪಡೆದದ್ದು ಈ ಎಡೆಯಲ್ಲಿಯೇ. ಅದೇ ಕಾರಣಕ್ಕೇ ಅವರು ಇಲ್ಲೇ ಇದ್ದು ಮಗಧ-ದೇಶದ ರಾಜರನ್ನು ಅನುಗ್ರಹಿಸುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಅಂಗದೇಶ, ವಂಗದೇಶ ಮುಂತಾದ ದೇಶಗಳ ಮಹಾಬಲಶಾಲಿಗಳಾದ ರಾಜರುಗಳು ಇಲ್ಲಿಗೆ ಬಂದು ಸಂತೋಷವಾಗಿ ಇರುತ್ತಿದರು.

ಅರ್ಜುನ, ನೋಡು ಈ ಆಕರ್ಷಕವಾದ ಪಿಪ್ಪಲಗಳ ಕಾಡುಗಳನ್ನು ಹಾಗೂ ಶುಭವಾದ ಲೋಧ್ರಗಳ ಕಾಡುಗಳನ್ನು. ಇವೆಲ್ಲವೂ ಗೌತಮರ ವಾಸಸ್ಥಾನಕ್ಕೆ ಸಮೀಪದಲ್ಲೇ ಹುಟ್ಟಿ ಬೆಳೆದುಕೊಂಡಿವೆ. ಈ ಸ್ಥಾನಕ್ಕೆ ಮನುವಿನ ಅನುಗ್ರಹವಾಗಿದೆ. ಎಂದೇ ಇಲ್ಲಿ ಎಂದೂ ಕ್ಷಾಮವಿಲ್ಲ. ಬೇರೆ ಅನುಗ್ರಹಗಳೂ ಈ ಎಡೆಗೆ ಉಂಟು.

ಹೀಗೆ ಈ ನಗರವು ರಮಣೀಯವಾಗಿರುವುದಲ್ಲದೆ ದುರಾಧರ್ಷವೂ ಆಗಿದೆ – ಅರ್ಥಾತ್, ಯಾರೂ ಇದನ್ನು ಧ್ವಂಸಮಾಡಲಾಗದು. ಇಂತಹ ಜಾಗದಲ್ಲಿ ಅರ್ಥ-ಸಿದ್ಧಿಗಾಗಿ, ಎಂದರೆ ಅಪಾರವಾದ ಸಂಪತ್ತಿನ ಗಳಿಕೆಗಾಗಿ, ಜರಾಸಂಧನು ನೆಲೆಯೂರಿದ್ದಾನೆ.

ಇಂತಹವನ ಮನೆಗೇ ಹೋಗಿ ನಾವಿಂದು ಆತನ ದರ್ಪವನ್ನು ಅಡಗಿಸಲಿದ್ದೇವೆ" – ಎಂದನು.

ಹೀಗೆ ಮಾತುಕತೆಯಾದ ಮೇಲೆ ಕೃಷ್ಣಾರ್ಜುನ-ಭೀಮಸೇನರು ಮಗಧ-ರಾಜಧಾನಿಯತ್ತ ಸಾಗಿದರು. ಅಲ್ಲಿ ನಾಲ್ಕುವರ್ಣದ ಜನಗಳೂ ಇದ್ದರು. ಜನರೆಲ್ಲರೂ ಹೃಷ್ಟ-ಪುಷ್ಟರಾಗಿದ್ದರು - ಎಂದರೆ ಸಂತೋಷಭರಿತರೂ ಒಳ್ಳೆಯ ಪೋಷಣೆಯನ್ನು ಹೊಂದಿದ್ದವರೂ ಆಗಿದ್ದರು.

ಅನೇಕವಾದ ಉತ್ಸವಗಳಿಂದ ಕೂಡಿದ್ದ ಗಿರಿ-ವ್ರಜವನ್ನು ಅವರು ತಲುಪಿದರು. ಆದರೆ ಅವರು ನಗರದ್ವಾರದ ಮೂಲಕ ಅದನ್ನು ಪ್ರವೇಶಿಸಲಿಲ್ಲ. ಬದಲಾಗಿ ಚೈತ್ಯಕ-ಪರ್ವತವನ್ನು ಹತ್ತಿದರು. ಅದಾದರೂ ನಗರವಾಸಿಗಳಿಂದ ಪೂಜಿತವಾದದ್ದು, ಜನರಿಗೆ ಪ್ರಿಯವಾದದ್ದು.

ಹಿಂದೆ ಅಲ್ಲೊಬ್ಬ ರಾಕ್ಷಸನಿದ್ದ. ಆತನ ಹೆಸರು ಋಷಭ. ಆತ ಮಾಂಸಭಕ್ಷಕ. ಜರಾಸಂಧನ ತಂದೆಯಾದ ಬೃಹದ್ರಥ ಅಲ್ಲಿಗೆ ಹೋಗಿ ಆತನನ್ನು ಸಂಹರಿಸಿದ. ಆತನ ಚರ್ಮವನ್ನು ಸುಲಿಸಿದ. ಮೂರು ಭೇರಿಗಳನ್ನು ಮಾಡಿಸಿ, ಆ ಭೇರಿಗಳಿಗೆ ಆ ರಾಕ್ಷಸನ ಚರ್ಮವನ್ನು ಬಳಸಿದ. ಆ ಭೇರಿಗಳು ಹೇಗಿದ್ದುವೆಂದರೆ, ಒಮ್ಮೆ ಸದ್ದು ಮಾಡಿದರೆ ಸಾಕು, ಅವುಗಳ ಮೇಲೆ ದಿವ್ಯ-ಪುಷ್ಪಗಳ ವರ್ಷವಾಗುತ್ತಿತ್ತು. ಹಾಗಿದ್ದ ಆ ಮೂರೂ ನಗಾರಿಗಳನ್ನು ಭೀಮಾರ್ಜುನರು ಧ್ವಂಸ ಮಾಡಿದರು. ಅದಂತೂ ಜರಾಸಂಧನ ಶಿರಸ್ಸನ್ನು ಮೆಟ್ಟಿದ ಹಾಗೆಯೇ ಭಾಸವಾಯಿತು.

ಆ ಬಳಿಕ ಆ ಪರ್ವತದ ಶೃಂಗವನ್ನು ಹತ್ತಿದರು. ಆ ಶೃಂಗವು ಸ್ಥಿರವಾಗಿತ್ತು, ಸುವಿಪುಲವಾಗಿತ್ತು. ಗಂಧಗಳಿಂದಲೂ ಮಾಲೆಗಳಿಂದಲೂ ಅದನ್ನು ಅರ್ಚಿಸುವುದು ಅಲ್ಲಿಯ ಜನರ ಸಂಪ್ರದಾಯವಾಗಿತ್ತು. ಹಾಗೆ ಸುಪ್ರತಿಷ್ಠಿತವಾದ ಆ ಪರ್ವತ-ಶಿಖರವನ್ನು ತಮ್ಮ ವಿಪುಲವಾದ ಬಾಹುಗಳಿಂದಲೇ ಹೊಡೆದುರುಳಿಸಿದರು, ಆ ಮೂವರು ವೀರರು. ಬಳಿಕ ಹರ್ಷದಿಂದ ಕೂಡಿದವರಾಗಿ ಪುರ-ಪ್ರವೇಶವನ್ನು ಮಾಡಿದರು.


ಸೂಚನೆ : 8/3/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.