ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಅದೆಂದು ಕಾಣುವೆ ಕೃಷ್ಣನನ್ನು? - ಎಂದು ಕೇಳುತ್ತಿದ್ದಾನೆ ಲೀಲಾಶುಕ. ಹೇಗಿದ್ದಾನೆ, ಈ ಕೃಷ್ಣ? ವೇಣುನಾದವನ್ನು ಮಾಡುತ್ತಿರುವ ಬಾಲಕೃಷ್ಣನಿವನು.
ಎಂತಹ ಬಾಲಕ? ಮಧುರಾಕೃತಿಗಳಲ್ಲಿ, ಎಂದರೆ ಮಧುರವಾದ ಆಕಾರವನ್ನು ಹೊಂದಿರುವವರಲ್ಲಿ, ಮೂರ್ಧಾಭಿಷಿಕ್ತನಾದವನು. ಬಾಲಕೃಷ್ಣನಿಗಿಂತಲೂ ಮಧುರವೇ? ಎಂದೇ ಆತನನ್ನು ಮಧುರಾಕೃತಿಯುಳ್ಳವರ ರಾಜನೆನ್ನುವುದು.
ಯಾರೂ ತನ್ನನ್ನೇ ತಾನು ಸುಮ್ಮನೆ "ರಾಜ" ಎಂದು ಕರೆದುಕೊಂಡುಬಿಡುವುದಲ್ಲ. ಕಿರೀಟಧರಿಸಿದವನೇ ರಾಜ ಅಲ್ಲವೇ? ಅದೂ ಅಲ್ಲ. ಯಾರಿಗೆ ಪಟ್ಟಾಭಿಷೇಕವಾಗಿದೆಯೋ ಆತನನ್ನೇ ರಾಜನೆನ್ನುವುದು. ಅಭಿಷೇಕವೆಂದರೆ ನೀರು ಸುರಿಯುವುದು. ಮಹಾರಾಜನಿಗೆ ಮೂರ್ಧಾಭಿಷೇಕವೇ ಸಲ್ಲುವುದು. ಎಂದರೆ, ಅಭಿಷೇಕದ ದಿನದಂದು ಎಲ್ಲ ಪುಣ್ಯನದಿಗಳಿಂದಲೂ ತೀರ್ಥವನ್ನು ತಂದು ಆತನ ತಲೆಯ ಮೇಲೆ ಮಂತ್ರಪೂರ್ವಕವಾಗಿ ಸುರಿಯುವುದಾಗಿರುತ್ತದೆ. ಮೂರ್ಧಾ ಎಂದರೆ ಶಿರಸ್ಸು. ಸಾರಾಂಶವಾಗಿ, ಮುದ್ದಾದ ಮಕ್ಕಳ ಅರಸನೆಂದರೆ, ಎಂದರೆ ಅಲ್ಲೂ ಮೂರ್ಧಾಭಿಷಿಕ್ತನೆಂದರೆ, ಈ ಬಾಲಮುಕುಂದನೇ ಸರಿ!
ಮಧುರವಾದ ಮುಖವುಳ್ಳವರೆಷ್ಟೋ ಮಂದಿಯಿರಬಹುದು. ಆದರೆ ಬಾಲಕೃಷ್ಣನ ಸೊಗಸೇ ಬೇರೆ ತೆರನಾದುದು. ಹೇಗೆ? ಕೃಷ್ಣನ ವಿಶಿಷ್ಟ-ಲಕ್ಷಣವೇ ಆತನ ಕೊಳಲಲ್ಲವೇ? ಕೊಳಲೆಂದರೆ ಸುಮ್ಮನೆ ಆ ವಾದ್ಯವನ್ನು ಕೈಯಲ್ಲಿ ಹಿಡಿದುಕೊಂಡಿರುವುದಲ್ಲ; ಕೊಳಲನ್ನು ನುಡಿಸುವುದು: ಅದರಿಂದ ಆಗ ಹೊರಡುವ ನಿನಾದಗಳೇ ವಿಶಿಷ್ಟವಾದವು.
ಅವು ಹೇಗಿವೆಯೆಂದು ಹೇಳಲು ಮೂರು ವಿಶೇಷಣಗಳನ್ನು ಬಳಸುತ್ತಾನೆ, ಕವಿ. ಆ ನಾದಗಳು ಸಮೃದ್ಧವಾಗಿವೆ. ಹೇಗೆ? ಅವಲ್ಲಿ ಆಕರ್ಷಕತ್ವವೆಂಬುದಿದೆ. ಅಷ್ಟೇ ಅಲ್ಲ. ಭಾವ-ರಾಗ-ತಾಳಗಳಿಂದ ಅವು ಕೂಡಿವೆ. ಭಾವ-ರಾಗ-ತಾಳ-ಸಮೇತವಾಗಿ ಅನೇಕರು ಕೊಳಲನ್ನು ನುಡಿಸಬಹುದು. ಆದರೆ ಈ ಬಾಲನ ಮುರಲೀ-ನಿನಾದದಲ್ಲಿ ಭಾವದ ಸಮೃದ್ಧಿಯೇ ಇದೆ, ಹಾಗೆಯೇ ರಾಗ-ಸಮೃದ್ಧಿಯೂ ಇದೆ, ಬಹುವಿಧ ತಾಳಗಳ ಯೋಜನೆಯಿದೆ. ಅಲ್ಲದೆ, ಭಾವಕ್ಕೆ ಹೊಂದುವ ರಾಗ, ಗಾನಕ್ಕೆ ಹೊಂದುವ ತಾಳ - ಇವುಗಳಲ್ಲಿ ವೈವಿಧ್ಯ-ಬಾಹುಲ್ಯಗಳೇ ನಾದಗಳು ಸಮೃದ್ಧವಾದವೆಂದು ತೋರಿಸುವುವು. ಜೊತೆಗೆ, ಸ್ವರವಿನ್ಯಾಸ-ವಿಶೇಷಗಳು, ಗಮಕಗಳು, ಉರುಟುಗಳು - ಇವುಗಳ ಸಮೃದ್ಧಿಯೂ ಸೇರಿವೆ. ಈ ವೈಶಿಷ್ಟ್ಯಗಳಲ್ಲದೆ, ಕೃಷ್ಣ-ಗಾನದ ಮತ್ತೂ ವಿಶೇಷವೆಂದರೆ, ಯೋಗ-ವೇದ್ಯವಾದ ಅಂತರ್ನಾದಗಳ ಪರಿಗಳೂ ಅದರಲ್ಲಿ ಮಿಳಿತವಾಗಿರುವುವು. ಹೀಗೆ ಸರ್ವಾರ್ಥದಲ್ಲೂ ಸಮೃದ್ಧವಾಗಿದೆ, ವೇಣು-ನಾದ.
ಎರಡನೆಯದಾಗಿ, ಆ ನಿನಾದಗಳು ಅಮೃತಾಯಮಾನವಾಗಿವೆ. ನಾದಗಳ ಸಮೃದ್ಧಿಯೇ ಇದಕ್ಕೆ ಕಾರಣವೆನ್ನಬಹುದು. ಏಕೆ? ಬೇರೆಬೇರೆಯವರಿಗೆ ಬೇರೆಬೇರೆ ರಾಗಗಳು ಇಷ್ಟವಾಗುವುವು. ತಾಳ-ವೈಚಿತ್ರ್ಯವೂ ನಾನಾಜನ-ರಂಜಕ. ಕೆಲವು ಭಾವಗಳನ್ನು ಯುಕ್ತವಾಗಿ ಬಿಂಬಿಸಿದಾಗ ಹಾರ್ದವಾಗಿ ಮೆಚ್ಚುವಂತಾಗುವುದು.
ಯೋಗಿಗಳಂತೂ ತಮ್ಮ ಉನ್ನತವಾದ ಯೋಗಾವಸ್ಥೆಗಳಲ್ಲಿ ಯಥಾರ್ಥವಾಗಿಯೇ ಅಮೃತಪಾನವನ್ನು ಮಾಡುವರು; ಅಂತಹವರ ಆ ಸ್ಥಿತಿಗಳಿಗೆ ಪೋಷಕವಾದ ನಾದ-ವಿಶೇಷಗಳೂ ಗಾನ-ವಿಶೇಷಗಳೂ ಇಲ್ಲಿ ಹೊಮ್ಮುವುವಾಗಿದ್ದು, ಎಲ್ಲರಿಗೂ ತಮ್ಮ ತಮ್ಮ ಸ್ತರಗಳಿಗನುಸಾರವಾಗಿ ಈ ವೇಣುನಾದಗಳು ಅಮೃತಮಯವಾಗಿ ತೊರುತ್ತವೆ.
ಮೂರನೆಯದಾಗಿ, ಈ ನಾದಗಳು ಆತಾಯಮಾನವಾಗಿವೆ, ಎಂದರೆ ವಿಸ್ತಾರಹೊಂದುತ್ತಿರುವಂತಹವಾಗಿವೆ. ಸ್ವರ-ಪ್ರಸ್ತಾರಗಳು, ಆಲಾಪನಗಳು, ತಾನಗಳು, ಪಲ್ಲವಿಗಳು - ಎಂದು ನಾನಾ-ಪ್ರಕಾರವಾಗಿ ಅವುಗಳ ವಿಸ್ತಾರ. ಮನುಷ್ಯರು ಮಾತ್ರವಲ್ಲದೆ ಪ್ರಾಣಿ-ಪಕ್ಷಿಗಳಿಗೂ ಆಕರ್ಷಣವಾಗುವ ಪರಿಗಳಲ್ಲಿ ವಿಸ್ತಾರಹೊಂದತಕ್ಕವು, ಅವು. ಕೃಷ್ಣನನ್ನು ಮನಸಾ ಯಾರು ಯಾರು ಮೆಚ್ಚುವರೋ ಅವರಿಗೆಲ್ಲಾ ಇಷ್ಟವಾಗುವಂತಿದೆ, ಈ ನಾದ-ವಿಸ್ತಾರ. ಕೃಷ್ಣನೇ ಯಾರನ್ನು ಉದ್ಧರಿಸಬೇಕೆಂದು ಬಯಸುವನೋ, ಅವರಿಗೆಲ್ಲ ರುಚಿಸುವಂತಾಗುವ ಸಂಚಾರಗಳನ್ನುಳ್ಳವು, ಅವು. ವಾಸ್ತವವಾಗಿ, ತ್ರಿಲೋಕಗಳ ಮೇಲೂ ಪರಿಣಾಮ ಬೀರುವಂತೆ ವಿಸ್ತಾರವಾಗತಕ್ಕವು. ಹೀಗೆ ನಾನಾಪ್ರಕಾರವಾಗಿದೆ ಆ ನಾದಗಳ ವಿಸ್ತಾರ.
ಅಂತಹ ಮುರಲೀ-ನಿನಾದಗಳಿಂದ ಲಕ್ಷಿತನಾದ ಬಾಲಕನಿವನು. ಹೀಗೆ ತನ್ನ ರೂಪಾಮೃತ-ನಾದಾಮೃತಗಳಿಂದ ಎಲ್ಲರನ್ನೂ ಬೆರಗುಗೊಳಿಸುವ ಈ ಬಾಲನನ್ನು ನಾನದೆಂದು ಕಾಣುವೆ? - ಎಂದು ಲೀಲಾಶುಕನು ಹಂಬಲಿಸುವುದರಲ್ಲಿ ಆಶ್ಚರ್ಯವಾದರೂ ಏನಿದೆ?
ಶ್ಲೋಕ ಹೀಗಿದೆ:
ಸಾರ್ಧಂ ಸಮೃದ್ಧೈಃ ಅಮೃತಾಯಮಾನೈಃ /
ಆತಾಯಮಾನೈಃ ಮುರಲೀ-ನಿನಾದೈಃ |
ಮೂರ್ಧಾಭಿಷಿಕ್ತಂ ಮಧುರಾಕೃತೀನಾಂ /
ಬಾಲಂ ಕದಾ ನಾಮ ವಿಲೋಕಯಿಷ್ಯೇ ||
***
ನನ್ನ ಹೃದಯದಲ್ಲಿ ಕೃಷ್ಣನು ಕ್ರೀಡಿಸಲಿ - ಎಂದು ಈ ಶ್ಲೋಕದಲ್ಲಿ ಲೀಲಾಶುಕನು ಪ್ರಾರ್ಥಿಸುತ್ತಾನೆ.
ಎಂತಹುದು ನನ್ನ ಹೃದಯ? ಅದು ಕಠಿನವಾಗಿದ್ದರೆ ಅತನ ಮೃದು-ಪಾದಗಳು ನೋಯವೇ? - ಎಂಬ ಪ್ರಶ್ನೆಯು ಬರಬಹುದಲ್ಲವೇ? ಎಂದೇ, ಹಾಗಲ್ಲವೆಂದು ಮೊದಲೇ ಸ್ಪಷ್ಟಪಡಿಸುತ್ತಾನೆ: ನನ್ನ ಹೃದಯವು ಆರ್ದ್ರವಾದುದು - ಎಂದು. ಆರ್ದ್ರವೆಂದರೆ ಒದ್ದೆ, ಅಥವಾ ಮೃದು. ತನ್ನ ಹೃದಯವು ಒಣಕಲಾದರೂ ಆತನ(ಲ್ಲಿಯ) ಪ್ರೇಮರಸದಿಂದ ಮಾರ್ದವವನ್ನು ಹೊಂದಿದೆ. ಆತನ ಮೇಲಣ ಪ್ರೇಮದಿಂದಾಗಿ ಸ್ನಿಗ್ಧವಾಗಿದೆ, ಎಂದರೆ ಸ್ನೇಹ-ಭಾವದಿಂದ ಕೂಡಿದೆ. ವಿಯೋಗದಿಂದ ತಾಪಗೊಂಡಿರುವ ಹೃದಯವು ಆತನ ಚರಣ-ಸ್ಪರ್ಶವಾಗುತ್ತಲೇ ಸ್ನಿಗ್ಧತೆಯನ್ನು, ಅರ್ಥಾತ್ ಸ್ನೇಹಭಾವವನ್ನು, ಹೊಂದುವುದಲ್ಲವೇ?
ತನ್ನ ಹೃದಯದಲ್ಲಿ ಚೆನ್ನಾಗಿ ಆಡಲಿ ಎನ್ನುವುದನ್ನು ಆಕ್ರೀಡತಾಂ - ಎಂದಿದ್ದಾನೆ. ಇಲ್ಲಿ "ಆ" ಎಂಬ ಉಪಸರ್ಗಕ್ಕೆ "ಚೆನ್ನಾಗಿ" ಎಂದರ್ಥ.
ಕೃಷ್ಣನು ಆಡಲಿ - ಎಂದು ಹೇಳುವುದರ ಬದಲು, ಕವಿಯು "ಆ ಓಜಸ್ಸು ಆಡಲಿ" - ಎನ್ನುತ್ತಾನೆ. ಓಜಸ್ಸೆಂದರೆ ತೇಜಸ್ಸೇ. ಕೃಷ್ಣನು ತೇಜೋರಾಶಿಯಲ್ಲವೇ? ಎಂತಹ ಓಜಸ್ಸದು? ಭುವನಾರ್ದ್ರವಾದದ್ದು - ಎಂದರೆ ಭುವನವನ್ನೇ ಆರ್ದ್ರಮಾಡುವಂತಹುದು. ಅರ್ಥಾತ್ ಜಗತ್ತನ್ನೇ ತನ್ನ ಪ್ರೇಮರಸದಿಂದ ತೋಯಿಸುವಂತಹುದು. ಒಳ್ಳೆಯ ಸಂಗೀತವನ್ನು ಕೇಳಿದರೆ ಎಲ್ಲರ ಮನಸ್ಸೂ ಕರಗುವುದು. ಬೆಟ್ಟಗಳೂ ಕರಗುವುವು - ಎಂದು ಕೂಡ ಲೀಲಾಶುಕನೇ ಬೇರೆಡೆ ಹೇಳಿರುವನಲ್ಲವೆ? ಹೀಗಾಗಿ ಜಗತ್ತೆಲ್ಲವೂ ಕರಗುವಂತಾಗಿರುವುದು ಯಾವುದರಿಂದಲೋ ಅಂತಹ ಓಜಸ್ಸದು.
ಕೃಷ್ಣನ ಆಟವೆಂಬುದಾದರೂ ಹೇಗಿರುವುದು? ಆತನ ಪಾದಕಮಲಗಳು ಅರುಣ-ವರ್ಣವನ್ನು ಹೊಂದಿರುವುದು. ಅಂತಹ ಕೆಂದಾವರೆಯ ಪರಿಯ ಕಾಲುಗಳು ಕ್ರೀಡಿಸಲಿ - ಎಂಬ ಭಾವ.
ಶ್ರೀಕೃಷ್ಣನು ತನ್ನದೇ ವೇಣುನಾದವನ್ನು ಆಸ್ವಾದಿಸುತ್ತಿದ್ದಾನೆ - ಎಂದೂ ಹೇಳುತ್ತಾನೆ, ಕವಿ. ಏಕೆ? ಆ ವೇಣುನಾದದಲ್ಲೇ ಒಂದು ವಿನೋದವಿದೆ. ವಿನೋದವೆಂಬುದಕ್ಕೆ ಪ್ರೇರಣೆಯೆಂಬ ಅರ್ಥ ಇಲ್ಲಿ. ಮಧ್ಯದಲ್ಲಿ ಆಗಾಗ ಮೃದುವಾದ ಹಾಸವೋ ಬೇರೆಬೇರೆ ಭಾವಗಳ ತೋರುವಿಕೆಯೋ - ಇವೆಲ್ಲವೂ ವಿನೋದವೆಂದು ಪರಿಗಣಿಸಲ್ಪಡುವುವು. ತಾನ-ಆಲಾಪಗಳೂ ವಿನೋದವೇ. ವಿನೋದವೆಂಬುದು ಸಂಸ್ಕೃತಪದ; ಕನ್ನಡದಲ್ಲಿಲ್ಲದ ಕೆಲವು ಅರ್ಥಗಳು ಈ ಪದಕ್ಕಿವೆ.
ಕೃಷ್ಣನ ಮುಖದಲ್ಲೇ ನಾನಾಭಾವಗಳು ತೋರುವುದನ್ನೂ ಹೇಳಿದೆ. ಆತನ ಮುಖಾಂಬುಜ ಅಥವಾ ವದನ-ಕಮಲವು ಅವ್ಯಾಜ-ಮಂಜುಲವಾದುದು.
ವ್ಯಾಜವೆಂದರೆ ನೆಪ, ಕಾರಣ; ಅವ್ಯಾಜವೆಂದರೆ ಯಾವುದೇ ನಿಮಿತ್ತವಿಲ್ಲದಿರುವುದು. ಮಂಜುಲವೆಂದರೆ ಮನೋಹರ. ಅಲ್ಲಿಗೆ, ಯಾವುದೇ ಅಲಂಕಾರ-ಆಭರಣಗಳೆಂದಿಲ್ಲದಿದ್ದರೂ, ಅಂದರೆ ನಿರ್ವ್ಯಾಜವಾಗಿಯೂ, ಮನೋಹರವಾದ ಮುಖ-ಕಮಲ ಅವನದು. ಅದರಲ್ಲಿ ಹಲವು ಮುಗ್ಧ-ಭಾವಗಳು ತೋರುತ್ತಿರುತ್ತವೆ. ಅಂತಹ ಭಾವಗಳಿಂದ ಶೋಭಿಸುವ ತೇಜಸ್ಸು, ಕೃಷ್ಣನೆಂದರೆ.
ಜಗವನ್ನೇ ಮುದಗೊಳಿಸುವ ಮೃದುಗೊಳಿಸುವ ಓಜಸ್ಸೇ ಕೃಷ್ಣ. ಆತನು ನನ್ನ ಹೃದಯದಲ್ಲಿ ತನ್ನ ಕೆಂಪಾದ ಪಾದಗಳಿಂದ ಆಡಲಿ - ಎಂಬ ಕೋರಿಕೆ ಲೀಲಾಶುಕನದು.
ಶ್ಲೋಕ ಹೀಗಿದೆ:
ಅವ್ಯಾಜ-ಮಂಜುಲ-ಮುಖಾಂಬುಜ-ಮುಗ್ಧ-ಭಾವೈಃ /
ಆಸ್ವಾದ್ಯಮಾನ-ನಿಜ-ವೇಣು-ವಿನೋದ-ನಾದಂ |
ಆಕ್ರೀಡತಾಂ ಅರುಣ-ಪಾದ-ಸರೋರುಹಾಭ್ಯಾಂ /
ಆರ್ದ್ರೇ ಮದೀಯ-ಹೃದಯೇ ಭುವನಾದ್ರಂ ಓಜಃ ||
ಶ್ಲೋಕದ ನಾಲ್ಕೂ ಪಾದಗಳೂ 'ಆ'ಕಾರದಿಂದಲೇ ಆರಂಭಗೊಂಡಿವೆ. ಪ್ರಥಮಪಾದದಲ್ಲಿ ಜಕಾರ-ಮಕಾರಗಳು, ದ್ವಿತೀಯದಲ್ಲಿ ನಕಾರ-ದಕಾರಗಳು ವಿಲಸಿಸಿವೆ. ತೃತೀಯದಲ್ಲಿ ರೇಫಗಳು, ತುರೀಯದಲ್ಲಿ ಯಕಾರ-ದಕಾರಗಳು.
ಸೂಚನೆ : 7/3/2026 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.