Sunday, April 5, 2026

ಕೃಷ್ಣಕರ್ಣಾಮೃತ 99 ಕೊಳಲಿನುಲಿ ಕದಲಿಸಲಿ ಒಳಮುಳುಗಿದ ಚಿತ್ತವನು! (Krishakarnamrta 99)


ಲೇಖಕರು :
 ಪ್ರೊ. ಕೆ. ಎಸ್. ಕಣ್ಣನ್ 

(ಪ್ರತಿಕ್ರಿಯಿಸಿರಿ lekhana@ayvm.in)




ಜೀವನದಲ್ಲಿ ಎಷ್ಟೆಷ್ಟೋ ಮಹತ್ತಾದ ಸಾಧನೆಗಳನ್ನು ಮಾಡಿರುವವರ ಬಗ್ಗೆ ಆಗಾಗ್ಗೆ ಕೇಳುತ್ತಲೇ ಇರುತ್ತೇವೆ. ಆದರೆ ಎಲ್ಲದಕ್ಕಿಂತಲೂ ಕಷ್ಟವೆನಿಸಬಹುದಾದ ಸಾಧನೆಯೆಂದರೆ ಯಾವುದು, ಹಾಗೂ ಅದನ್ನು ಸಾಧಿಸಿದವರು ಯಾರು? - ಎಂಬ ಪ್ರಶ್ನೆಗಳಿಗೆ ಉತ್ತರವು ಸುಲಭವಲ್ಲ.                        

ಆದರೂ ಒಂದು ರೀತಿಯಲ್ಲಿ ಉತ್ತರವು ಕಷ್ಟವೂ ಅಲ್ಲ. ಏಕೆ? ಎಲ್ಲರಿಗೂ ಕಷ್ಟವೆನಿಸುವ, ಎಂತಹ ಧೀಮಂತರಿಗೂ ಅಸಾಧ್ಯವೆಂದೇ ತೋರುವ, ಒಂದು ಕಾರ್ಯವಿದೆ. ಅಲ್ಲಿ ಎಲ್ಲರೂ ಸೋಲುವವರೇ, ಹೆಚ್ಚು ಕಡಿಮೆ. 

ಯಾವುದು ಅಂತಹ ಘನವಾದ ಕಾರ್ಯ? ಹಿಮಾಲಯದ ಶಿಖರಕ್ಕೇರುವುದೇ? ಕಡಲ ಅಡಿಯನ್ನು ಕೆರೆಯುವುದೇ? ಅನ್ಯ-ಗ್ರಹದಲ್ಲಿ ಅಲೆಯುವುದೇ?

ಇದಾವುದೂ ಅಲ್ಲ. ಇರುವಲ್ಲೇ ಸುಮ್ಮನೆ ಕುಳಿತುಕೊಳ್ಳುವುದು! ಸುಮ್ಮನೆಯೆಂದರೂ ಸುಮ್ಮನೆಯಲ್ಲ: ಹಾಗೆ ಕುಳಿತು ಧ್ಯಾನದಲ್ಲಿ ಆಳವಾಗಿ ಮುಳುಗುವುದು; ಅದರಲ್ಲೇ ಮೈಮರೆತು ಅದರ ತುತ್ತತುದಿಯಾದ ಸಮಾಧಿ-ಸ್ಥಿತಿಯ ಎತ್ತರಕ್ಕೆ ಹತ್ತುವುದು! ಮತ್ತು ಆ ಸಮಾಧಿಗೆ ಭಂಗವಿಲ್ಲದಂತೆ ಅಲ್ಲೇ ಕೆಲಕಾಲ ನೆಲೆಗೊಂಡಿರುವುದು. ಇವನ್ನು ಸುಲಭವೆನ್ನುವವರಾರು?

ವಸ್ತು-ಸ್ಥಿತಿ ಹಾಗಿರಲು, ಲೀಲಾಶುಕನು ವಿಚಿತ್ರವಾದ ವರವೊಂದನ್ನು ಬಯಸುತ್ತಿದ್ದಾನೆ: ದೇವಾ, ನನಗೆಂದು ಸಮಾಧಿ-ಭಂಗವಾದೀತು? - ಎಂದು ಆಶಿಸುತ್ತಿದ್ದಾನೆ! 

ಅಯ್ಯೋ, ಹೀಗೆ ಬಯಸುವುದೇನು ಯುಕ್ತವೇ? ಅಷ್ಟು ಕಷ್ಟಪಟ್ಟು ಸಂಪಾದಿಸಿದುದನ್ನು ಕೆಡಿಸಿಕೊಳ್ಳಲು ವಿವೇಕವುಳ್ಳವರು ಯಾರಾದರೂ ಅಪೇಕ್ಷಿಸಿಯಾರೆ?

ಅಷ್ಟೇ ಅಲ್ಲ. ಸಮಾಧಿ-ವಿಘ್ನವು ಹೇಗಾದರೆ ತನಗಿಷ್ಟವೆಂದು ಸಹ ಸೂಚಿಸುತ್ತಿದ್ದಾನೆ! "ದೇವಾ, ನೀನು ಕಾಣಿಸಿಕೊಳ್ಳಬೇಕು, ನಿನ್ನ ವೇಣು-ಧ್ವನಿಯು ರಣಿಸಬೇಕು, ಹಾಗಾಗಿ ಸಮಾಧಿ-ಭಂಗವಾಗಬೇಕು" - ಎನ್ನುತ್ತಿದ್ದಾನೆ!

ಕೃಷ್ಣನು ಹೇಗೆ ತೋರಬೇಕಂತೆ? ಆತನ ಕೊಳಲಿನ ರವವು ಹೇಗಿರಬೇಕಂತೆ? – ಇವೆರಡನ್ನೂ ಸ್ಪಷ್ಟಪಡಿಸುತ್ತಿದ್ದಾನೆ, ಕವಿ. ನೀನು ನನ್ನೆದುರಿಗೆ ಅವತೀರ್ಣನಾಗಬೇಕು, ಎಂದರೆ ಅವತರಿಸಬೇಕು. ಅರ್ಥಾತ್, ಪ್ರಕಟಿಸಿಕೊಳ್ಳಬೇಕು. ಚಂದ್ರನ ತೇಜಸ್ಸಿನೊಂದಿಗೆ ತೋರಬೇಕು. ಯಾವ ಚಂದ್ರ? ಪ್ರಸನ್ನನಾದ ಚಂದ್ರನಂತಿರುವ ನಿನ್ನ ಮುಖವೇ ತೇಜಸ್ವಿಯಲ್ಲವೇ? ಲೋಕದಲ್ಲಿ ನಾವು ಕಾಣುವ ಚಂದ್ರ ಕಲಂಕಿತ. ಆದರೆ ಕೃಷ್ಣನ ಮುಖ ಪ್ರಸನ್ನವಾದುದು, ಎಂದರೆ ತಿಳಿಯಾದುದು, ಕಳಂಕ-ರಹಿತವಾದುದು. ಚಂದ್ರನನ್ನು ಮೃಗಾಂಕ, ಶಶಾಂಕ - ಎನ್ನುವರಲ್ಲವೇ? ಆ ಕುರುಹುಗಳೇ ಲೌಕಿಕ-ಚಂದ್ರನ ಸೊಬಗಿಗೆ ಒಂದಿಷ್ಟು ಕಳಂಕದಂತೆ. ಆದ್ದರಿಂದ ಹಾಗೆ ಬೇಡ. ನಿನ್ನ ಮುಖವೇ ಇನ್ನೂ ಚೆನ್ನಿರುವ ಚಂದ್ರ.

ಹಿಂದೊಮ್ಮೆ ದರ್ಶನಕೊಟ್ಟಾಗಿತ್ತಲ್ಲವೆ? – ಎಂದರೆ, ಹೌದು, ಆದರೂ ಮತ್ತೆ ಬೇಕು - ಎಂಬ ಬಿನ್ನಹ. ಏಕೆ? ಕೃಷ್ಣನು ಎಷ್ಟಾದರೂ ದಯಾ-ಸಮುದ್ರನಲ್ಲವೇ? ಬರೀ ಸಮುದ್ರವಲ್ಲ, ದಯೆಯ ಮಹಾಂಬುಧಿಯೇ ಅವನು. ಚಂದ್ರನ ತೇಜಸ್ಸಿನೊಂದಿಗೆ ಅವತರಿಸಿ ಬರುವ ಸಮುದ್ರ! 

ಸಮಾಧಿ-ಸ್ಥಿತಿಯಲ್ಲಿ ಕುಳಿತವರು ಕಣ್ಣುಮುಚ್ಚಿರುತ್ತಾರಲ್ಲವೇ? ಅಂತಹವರೆದುರಿಗೆ ತಾ ಬಂದು ನಿಂತರೂ ಅವರಿಗೆ ಗೊತ್ತಾಗುವುದು ಹೇಗೆ? ಅದಕ್ಕೇ ಹೇಳುತ್ತಿರುವುದು - ನಿನ್ನ ಲೀಲಾ-ವೇಣುವಿನೊಂದಿಗೆ ಬಾ. ಅದರ ರವಾಮೃತ ಅಥವಾ ನಾದ-ಪೀಯೂಷವು ನನ್ನ ಸಮಾಧಿಯನ್ನು ತಾನಾಗಿ ಕದಲಿಸುವುದು - ಎಂದು. ಆ ವಿಲಾಸಮಯವಾದ ವೇಣುವೇ ಲೀಲಾ-ಮುರಲಿ. ಅದರ ನಾದವೇ ಅಮೃತ.

ದಯಾ-ಸಮುದ್ರವೆಂಬುದು ಅತ್ಯಂತ ಅಪೇಕ್ಷಿತ. ಮುಖ-ಚಂದ್ರನೋ ಪರಮಾಹ್ಲಾದಕ. ನಾದಾಮೃತವಂತೂ ಅತಿಶಯವಾಗಿ ಆಸ್ವಾದ್ಯ. ಇವೆಲ್ಲ ಎದುರಿಗೆ ತೋರುವುದಾದರೆ, ಆಗ ಸಮಾಧಿಗೆ ಭಂಗವಾದರೆ ಚಿಂತೆಯೇ ಇಲ್ಲ. ಏಕೆ? ಸಮಾಧಿ-ಸ್ಥಿತಿಯನ್ನು ಏರಿದವನಿಗೆ ದೊರೆಯಬೇಕಾದದ್ದೇನು? ಅಮೃತವೇ ಅಲ್ಲವೇ? ಇಲ್ಲಿ ದೊರೆಯುತ್ತಿರುವುದೂ ಅದೇ ಎಂದಾಯಿತಲ್ಲ! ಈ ಬಗೆಯಲ್ಲಿ ಸಮಾಧಿ-ಭಂಗವೆಂಬುದಾಗುವುದಾದರೆ ಒಳ ಅನುಭವಕ್ಕೂ ಹೊರ ಅನುಭವಕ್ಕೂ ಭೇದವೆಲ್ಲಿ ಬಂದೀತು?

ಕಣ್ಣಿಗೂ ಕಿವಿಗೂ ಸುಲಭವಾಗಿ ಹೀಗೆ ಅಮೃತಾನುಭವವಾಗುವುದಾದರೆ, ನಿರಂತರ-ಧ್ಯಾನಕ್ಕಾಗಿ ಆಂತರಂಗಿಕ-ಶ್ರಮವನ್ನು ಪಡುತ್ತಲೇ ಇರುವುದೇತಕ್ಕೆ? ಎಂದೇ ಲೀಲಾಶುಕನು ಹೀಗೆ ಹಾತೊರೆಯುವುದು. ಅಂತಹ ಅನುಭವಕ್ಕಾಗಿಯೇ ಆ ಬಗೆಯ ಸಮಾಧಿ-ಭಂಗವು ನನಗೆ ಅದೆಂದು ದೊರೆಯುವುದೋ - ಎಂದು ಹಂಬಲಿಸುತ್ತಿದ್ದಾನೆ, ಭಕ್ತಕವಿ.

ಪುನಃ ಪ್ರಸನ್ನೇನ ಮುಖೇಂದು-ತೇಜಸಾ/

ಪುರೋವತೀರ್ಣಸ್ಯ ಕೃಪಾ-ಮಹಾಂಬುಧೇಃ |

ತದೇವ ಲೀಲಾ-ಮುರಲೀ-ರವಾಮೃತಂ

ಸಮಾಧಿ-ವಿಘ್ನಾಯ ಕದಾ ನು ಮೇ ಭವೇತ್?! || 

***

ಮತ್ತೊಂದು ಶ್ಲೋಕ.

ಆ ತರುಣನ ಹೆಸರನ್ನು ಹೇಳುತ್ತೇವೆ - ಎನ್ನುತ್ತಾನೆ, ಲೀಲಾಶುಕ. ಆ ತರುಣನು ಮತ್ತಾರು? ಸಾಕ್ಷಾತ್ ಕೃಷ್ಣನೇ. ಅವನ ಹೆಸರನ್ನು ಹೇಳುವುದರಲ್ಲೇ ಲೀಲಾಶುಕನಿಗೆ ಒಂದು ಸಂತೋಷ.

ಎಂತಹ ತರುಣನವನು? ತನ್ನ ಕಿವಿಯಂಚಿನಿಂದ ಏನನ್ನೋ ಕೇಳಿಸಿಕೊಳ್ಳುತ್ತಿರುವವನು. ಏನನ್ನು? ವ್ರಜ-ಸುಂದರಿಯರ ಅನುಲಾಪಗಳನ್ನು. ಅನುಲಾಪವೆಂದರೆ ಮತ್ತೆ ಮತ್ತೆ ಹೇಳುತ್ತಿರುವುದು. ಗೊಲ್ಲತಿಯರು ಪದೇ ಪದೇ ಹೇಳಿಕೊಳ್ಳುತ್ತಿರುವುದನ್ನು ಕೇಳುತ್ತಿದ್ದಾನೆ. ಅದೂ ಅರ್ಧಮರ್ಧವಾಗಿ ಅವರು ಹೇಳುತ್ತಿರುವುದನ್ನು.

ಯಾವುದನ್ನು ಅವರು ಹಾಗೆ ಉಚ್ಚರಿಸುತ್ತಿರುವುದು? ತಮ್ಮದೇ "ಅಕೃತ್ರಿಮವಾದ ಸರಸ್ವತಿ"ಗಳನ್ನು.  ಹಾಗೆಂದರೆ, "ಕಪಟವಿಲ್ಲದ ನುಡಿಗಳನ್ನು" ಎಂದರ್ಥ. ಶುದ್ಧವಾದ ಹೃದಯದಿಂದ ಹೊಮ್ಮಿದ ಮಾತಲ್ಲವೇ ಅದು? ಎಂದೇ ಸದ್ಭಾವನೆಯನ್ನು ಅದು ಹೊತ್ತಿರುತ್ತದೆ. 

ನಿಷ್ಕಪಟವಾದ ನುಡಿಯು ಎಂದಿಗೂ ಸರಲವಾದುದು, ಎಂದೇ ಸೊಗಸಾದುದೂ. ಅದನ್ನು ಮತ್ತೆ ಮತ್ತೆ ನುಡಿದರೂ, ಅರ್ಧಮರ್ಧವಾಗಿ ಹೇಳಿದರೂ ಕೃತ್ರಿಮವಲ್ಲದ ಆ ಪ್ರೀತಿಯ ಮಾತಿಗೆ ಎಂದಿಗೂ ಬೆಲೆಯುಂಟೇ. ಎಳೆಯ ಮಕ್ಕಳ ಮಾತೂ ಹಾಗೆಯೇ ಇರುವುದಲ್ಲವೇ? ಅವುಗಳ ಮಾತು ಅಸ್ಪಷ್ಟವಿರಬಹುದು, ತೊದಲಿರಬಹುದು. ಅಪೂರ್ಣ-ವಾಕ್ಯವೇ ಇರಬಹುದು, ಹೇಳಲೆಳಸಿ ಮಧ್ಯಕ್ಕೇ ನಿಂತು ಅಪೂರ್ಣವೂ ಆಗಿರಬಹುದು. ಏನೇ ಆದರೂ, ಮುಗ್ಧಹೃದಯದ ಮುದ್ದುನುಡಿಗಳಲ್ಲೇ ಸವಿಯಿರುವುದು. 

ಪ್ರೇಮವೇನಾದರೂ ಕಪಟ - ಎಂಬುದು ಗೊತ್ತಾಗಿಹೋದಲ್ಲಿ, ಮಾತಿನಲ್ಲಿ ನವಿರಿದ್ದರೂ ಅದರಲ್ಲಿ ರುಚಿಯುಳಿದೀತೇ? ಬದಲಾಗಿ, ಕಾಪಟ್ಯದಿಂದಾಗಿ ಕೆರಳಿದ ಕೋಪದ ನುಡಿಯೇ ಹೊಮ್ಮೀತು!

ಎಂದೇ ಕೃಷ್ಣನು "ಆರ್ದ್ರಾಶಯದಿಂದ" ಕೇಳಿಸಿಕೊಳ್ಳುತ್ತಾನೆ. ಹಾಗೆಂದರೆ "ಸರಸ-ಹೃದಯದಿಂದ, ಆಸ್ವಾದನೆಯೊಂದಿಗೆ" - ಎಂಬ ಅರ್ಥ. ಎಂದೇ ಅದು ಬರೀ ಕೇಳಿಸಿಕೊಳ್ಳುವುದಲ್ಲ. ಅದನ್ನು ಸಂಭಾವಿಸುತ್ತಿದ್ದಾನೆ, ಎಂದರೆ ಬೆಲೆಗೊಟ್ಟು, ಆದರವಿಟ್ಟು, ಆಲಿಸುತ್ತಿದ್ದಾನೆ - ಎಂದರ್ಥ.

ಈ ಶ್ಲೋಕದ ತಾತ್ಪರ್ಯವೆಂದರೆ, ಭಗವಂತನು ಭಾಷೆಗಿಂತಲೂ ಭಾವಕ್ಕೆ ಹೆಚ್ಚು ಮನಸ್ಸು ಕೊಡುವನು - ಎಂಬುದು. ಇದನ್ನೇ "ಭಾವಗ್ರಾಹೀ ಜನಾರ್ದನಃ" ಎನ್ನುವರು. 

ಆತನ ನಡೆಯನ್ನು ನೋಡಿ: ಹಳ್ಳಿಯ ಹೆಣ್ಣುಗಳೆಂದು ತಿರಸ್ಕಾರವಿಲ್ಲ. ಭಾಷೆಯು ಸುಪರಿಷ್ಕೃತವಲ್ಲವೆಂದು ಕಡೆಗಾಣಿಸುವುದಲ್ಲ. ಪೌನರುಕ್ತ್ಯವಿದೆಯೆಂದು ಅಪಹಸಿಸುವುದಲ್ಲ. ಶುದ್ಧಹೃದಯದಿಂದ ಹೊಮ್ಮಿದ ನುಡಿಗೆ ಒಡನೆಯೇ ಮನ್ನಣೆ ನೀಡುವ ಸಹೃದಯ-ತರುಣನಿವನು. 

ಎಂದೇ, ಹೇಳಿದರೆ ಅಂತಹವನ ಹೆಸರನ್ನೇ ಹೇಳಬೇಕಲ್ಲವೆ? 

ಶ್ಲೋಕದ ಮೊದಲೆರಡು ಪಾದಗಳಲ್ಲಿ ಗೊಲ್ಲತಿಯರ ನುಡಿಯ ಪರಿ; ಮೂರನೆಯದರಲ್ಲಿ ಅದನ್ನು ಕೃಷ್ಣನು ಆಲಿಸುವ ಬಗೆ; ಹಾಗೂ ಕೊನೆಯದರಲ್ಲಿ ಕವಿಯ ಪ್ರತಿಕ್ರಿಯೆಗಳು ಮೂಡಿವೆ. 

ಶ್ಲೋಕ ಹೀಗಿದೆ:

ಅರ್ಧಾನುಲಾಪಾನ್ ವ್ರಜಸುಂದರೀಣಾಂ /

ಅಕೃತ್ರಿಮಾಣಾಂ ಚ ಸರಸ್ವತೀನಾಂ |

ಆರ್ದ್ರಾಶಯೇನ ಶ್ರವಣಾಂಚಲೇನ /

ಸಂಭಾವಯಂತಂ ತರುಣಂ ಗೃಣೀಮ || 

ಸೂಚನೆ :4/4/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.