Monday, April 27, 2026

ವ್ಯಾಸ ವೀಕ್ಷಿತ 185 ಭೀಮನಿಂದಾದ ಜರಾಸಂಧ-ವಧೆ (Vyaasa Vikshita 185)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

image.png

ಆಗ ಶ್ರೀಕೃಷ್ಣನು ಜರಾಸಂಧವಧೆಯು ಬೇಗನೆ ಆಗಲೆಂದು ಬಯಸಿ, ತ್ವರೆಪಡಿಸುತ್ತಾ ಭೀಮನಿಗೆ ಹೇಳಿದನು:

“ಭೀಮನೇ, ಯಾವ ಪರದೈವದ ಸತ್ತ್ವವು ನಿನ್ನಲ್ಲುಂಟೋ, ಹಾಗೆಯೇ ವಾಯುದೇವನ ಸತ್ತ್ವವೆಂಬುದು ಯಾವುದು ನಿನ್ನಲ್ಲುಂಟೋ, ಅದನ್ನೀಗ ನಮಗೆ ನೀನು ಬೇಗನೆ ತೋರಿಸು. ನಿನ್ನಿಂದಲ್ಲದೆ ಮತ್ತಾರಿಂದಲೂ ಈತನಿಗೆ ಸಾವಿಲ್ಲ. ವಾಯುವನ್ನು ಸ್ಮರಿಸಿ, ಈ ಮಗಧರಾಜನನ್ನು ಕೊಲ್ಲು."

ಕೃಷ್ಣನು ಹೀಗೆ ಹೇಳಲು, ಅರಿಂದಮನಾದ, ಎಂದರೆ ಶತ್ರುಗಳನ್ನು ದಮನಮಾಡುವ, ಭೀಮಸೇನನು ಜರಾಸಂಧನನ್ನು ಮೇಲಕ್ಕೆತ್ತಿ ತಿರುಗಿಸಿದನು. ಆಗ ಕೃಷ್ಣನು, ಜರಾಸಂಧ-ವಧೆಯು ಬೇಗನೆ ನೆರವೇರಲೆಂದು, ಭೀಮಸೇನನತ್ತ ನೋಡುತ್ತಾ ಹುಲ್ಲುಕಡ್ಡಿಯೊಂದನ್ನು ಮುರಿದನು. ಅದಕ್ಕೆ ಸರಿಯಾಗಿ ಭೀಮನು ನೂರುಬಾರಿ ಜರಾಸಂಧನನ್ನು ತಿರುಗಿಸಿ, ಆತನ ಬೆನ್ನನ್ನು ಹಿಸುಕಿ ಮುದ್ದೆ ಮಾಡಿ, ತನ್ನ ಮಂಡಿಗಳ ಮೇಲೆ ಅಪ್ಪಳಿಸಿ, ಆತನ ಬೆನ್ನನ್ನು ಮುರಿದನು, ಹಾಗೂ ಗರ್ಜಿಸಿದನು. ಆತನೊಂದು ಕಾಲನ್ನು ಹಿಡಿದುಕೊಂಡು ಮತ್ತೊಂದನ್ನು ಮೆಟ್ಟಿ ಶರೀರವನ್ನು ಇಬ್ಭಾಗವಾಗಿಸಿದನು.

ಆಗ ಜರಾಸಂಧನ ಆ ಶರೀರಭಾಗಗಳೆರಡು ಮತ್ತೆ ಸೇರಿಕೊಂಡವು, ಹಾಗೂ ಜರಾಸಂಧನು ಮತ್ತೆ ಬಾಹುಯುದ್ಧಕ್ಕೆ ಆರಂಭಮಾಡಿಕೊಂಡನು. ಈಗ ಯುದ್ಧವು ತುಮುಲವೂ ರೋಮಹರ್ಷಣವೂ ಆಗಿದ್ದಿತು. ಅದು ಸರ್ವಲೋಕ-ಕ್ಷಯಕರವೂ ಸರ್ವಜೀವಗಳಿಗೂ ಭಯಾವಹವೂ ಆಗಿತ್ತು.

ಮತ್ತೆ ಕೃಷ್ಣನು ಆ ಕಡ್ಡಿಯನ್ನು ಮುರಿದು ವ್ಯತ್ಯಸ್ತಮಾಡಿ ಬಿಸುಟನು. ಅದರ ಅರ್ಥವನ್ನು ಅರಿತುಕೊಂಡ ಭೀಮಸೇನನು ಜರಾಸಂಧನನ್ನು ಸೀಳಿ, ಶರೀರದ ಆ ಎರಡು ಭಾಗಗಳನ್ನು ಕಾಲಿನಿಂದ ವ್ಯತ್ಯಾಸಮಾಡಿ ಒದ್ದೆಸೆದನು.

ಹಾಗೂ ಗಟ್ಟಿಯಾಗಿ ಗರ್ಜಿಸಿದನು. ಜರಾಸಂಧನು ಆಗ ಶವರೂಪವಾದನು. ಆತನ ಮಾಂಸವೊಣಗಿತು, ಮೂಳೆ ಮುರಿಯಿತು, ಚರ್ಮ ಹರಿಯಿತು, ಮಸ್ತಿಷ್ಕವು ಮುದ್ದೆಯಾಯಿತು. ಆಗ ಜರಾಸಂಧನು ಪಿಂಡೀಭೂತನಾಗಿ ಕಂಡನು.

ಭೀಕರವಾಗಿ ಗರ್ಜಿಸುತ್ತಾ ಭೀಮನು ಜರಾಸಂಧನನ್ನು ಜಜ್ಜಿ ಬಜ್ಜಿ ಮಾಡುತ್ತಿರಲು ಉಂಟಾದ ನಾದವು ತುಮುಲವಾಗಿತ್ತು. ಎಲ್ಲ ಪ್ರಾಣಿಗಳಿಗೂ ಭಯಂಕರವಾಗಿತ್ತು. ಮಗಧದೇಶದ ಪ್ರಜೆಗಳು ಬಹುವಾಗಿಯೇ ತ್ರಾಸಗೊಂಡರು. ಗರ್ಭಿಣಿಯರಿಗೆ ಗರ್ಭಸ್ರಾವವಾಯಿತು. ಏಕೆಂದರೆ ಭೀಮಸೇನ-ಜರಾಸಂಧರ ಗರ್ಜನ-ನಾದಗಳು ಹಾಗಿದ್ದವು.

“ಇದೇನು ಹಿಮಾಲಯವೇ ಒಡೆದುಹೋಯಿತೇ? ಅಥವಾ ಭೂಮಿಯೇ ಸೀಳುತ್ತಿದೆಯೇ?” - ಹೀಗೆಲ್ಲ ಮಾಗಧರು ಯೋಚನೆ ಮಾಡಹತ್ತಿದರು.

ನಿದ್ದೆ ಮಾಡುತ್ತಿರುವಂತೆ ಬಿದ್ದಿದ್ದ ಆ ಸತ್ತ ರಾಜನನ್ನು ಆ ರಾಜದ್ವಾರದಲ್ಲಿಯೇ ಬಿಟ್ಟವರಾಗಿ, ಆ ಮೂರೂ ವೀರರು ಆ ರಾತ್ರಿಯಲ್ಲೇ ಹೊರಹೊರಟರು. ಪತಾಕೆಯಿಂದ ಮಂಡಿತವಾದ ಜರಾಸಂಧ-ರಥವನ್ನೇ ಶ್ರೀಕೃಷ್ಣನು ಸಿದ್ಧಪಡಿಸಿಕೊಂಡನು; ಭ್ರಾತೃಗಳಿಬ್ಬರನ್ನೂ, ಎಂದರೆ ಭೀಮಾರ್ಜುನರನ್ನು, ರಥಕ್ಕೆ ಹತ್ತಿಸಿಕೊಂಡನು. ತಾನೇ ಸಾರಥಿಯಾದನು.

ಅಲ್ಲಿಂದ ಹೊರಹೊರಟು, ಸೆರೆಯಾಗಿದ್ದ ತನ್ನೆಲ್ಲ ಬಂಧುಗಳನ್ನು ಮೊದಲು ಸೆರೆಯಿಂದ ಬಿಡಿಸಿದನು. ರತ್ನಗಳಿಗೆ ಅರ್ಹರೆನಿಸಿದ್ದ ಆ ರಾಜರುಗಳು, ಜರಾಸಂಧನೆಂಬ ಮಹತ್ತಾದ ಭಯದಿಂದ ಬಿಡುಗಡೆ ಪಡೆದವರಾಗಿ, ಶ್ರೀಕೃಷ್ಣನಿಗೆ ತಮ್ಮ ರತ್ನಗಳನ್ನೇ ಸಮರ್ಪಿಸಿದರು.

ಕೃಷ್ಣನಿಗಂತೂ ಯಾವ ಗಾಯವೂ ಆಗಿರಲಿಲ್ಲ. ಅವನ ಬಳಿ ಶಸ್ತ್ರಗಳೆಲ್ಲವೂ ಇದ್ದವು. ಶತ್ರುವನ್ನಂತೂ ಗೆದ್ದಾಯಿತು. ಈಗ ಆ ರಾಜರುಗಳೊಂದಿಗೆ ಆತನು ಆ ದಿವ್ಯರಥವನ್ನೇರಿ ಗಿರಿವ್ರಜದಿಂದ ಹೊರಹೊರಟನು.

ಆ ರಥದ ಹೆಸರೇ ಸೋದರ್ಯವಾನ್ ಎಂಬುದಾಗಿ. ಅದರಲ್ಲೀಗ ಇಬ್ಬರು ಯೋಧರು, ಎಂದರೆ ಭೀಮಾರ್ಜುನರು, ಕುಳಿತಿದ್ದರು. ಕೃಷ್ಣನೇ ಸಾರಥಿ. ಅನೇಕ ಬಾರಿ ಶತ್ರುಗಳಿಂದ ಆಘಾತಗಳನ್ನು ಎದುರಿಸಿದರೂ ಅದು ಮತ್ತೆ ಮತ್ತೆ ನೋಡಬೇಕೆನ್ನುವಂತೆಯೇ ಇತ್ತು. 

ಸೂಚನೆ : 26/4/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.