ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)
ದುರ್ಲಭಂ ತ್ರಯಮೇವೈತತ್ ದೇವಾನುಗ್ರಹಹೇತುಕಮ್|
ಮನುಷ್ಯತ್ವಂ ಮುಮುಕ್ಷುತ್ವಂ ಮಹಾಪುರುಷಸಂಶ್ರಯಃ ||
ಪಡೆಯಲು ಬಹಳ ಕಷ್ಟವಾಗಿದ್ದು, ಭಗವಂತನ ಅನುಗ್ರಹವೊಂದರಿಂದಲೇ ದೊರಕುವ ಮೂರು ಭಾಗ್ಯಗಳು- ಮನುಷ್ಯತ್ವ, ಮೋಕ್ಷದ ಅಪೇಕ್ಷೆ ಮತ್ತು ಮಹಾಪುರುಷರ ಆಶ್ರಯ. ಇದು ಜ್ಞಾನಿಶ್ರೇಷ್ಠರಾದ ಶಂಕರ ಭಗವತ್ಪಾದರ "ವಿವೇಕ ಚೂಡಾಮಣಿ" ಗ್ರಂಥದ ಮಾತು. ಏಕೆ ಈ ಮೂರು ವಿಷಯಗಳನ್ನು ಇಷ್ಟೊಂದು ದುರ್ಲಭ ಎಂದೂ, ಬಹಳ ಪ್ರಧಾನವೆಂದೂ ಭಾವಿಸಲಾಗಿದೆ?
ಮನುಷ್ಯತ್ವ
ನಾವೆಲ್ಲರೂ ಮನುಷ್ಯರೇ. ಎಂದಮೇಲೆ ಇದರ ಬಗ್ಗೆ ವಿಚಾರ ಮಾಡುವುದೇನಿದೆ ಎನಿಸಬಹುದು. ಮತ್ವಾ ಸೀವ್ಯತೇ ಇತಿ ಮನುಷ್ಯಃ ಎಂಬುದು ಮನುಷ್ಯ ಪದದ ಅರ್ಥ. ಎಲ್ಲಾ ವಿಷಯದಲ್ಲಿಯೂ ಅರಿತು ಹೆಜ್ಜೆ ಇಡುವವನು. ಮನುಷ್ಯ ಎಂದಿದ್ದಾರೆ. ಅರಿವಿನ ವ್ಯಾಪ್ತಿ ಮನುಷ್ಯನಿಗೆ ಇದ್ದಷ್ಟು ಇತರ ಪ್ರಾಣಿಗಳಿಗೆ ಇಲ್ಲ. ಅವು ನಿಸರ್ಗ ನೇಮಿಸಿದಂತೆ ತಮ್ಮ ಇರುವಿಕೆಗೆ ಬೇಕಾದಷ್ಟು ಅರಿವನ್ನು ಮಾತ್ರ ಹೊಂದಿರುತ್ತವೆ. ಆದರೆ ಮನುಷ್ಯ ಹಾಗಲ್ಲ. ಅವನು ತನ್ನ ದೇಹದ ಒಳಿತು ಕೆಡುಕುಗಳ ಬಗ್ಗೆ, ಹೊರಗಿನ ಲೋಕದ ಹಿತ, ಅಹಿತಗಳ ಬಗ್ಗೆ, ವ್ಯಾಪಕವಾಗಿ ಆಲೋಚಿಸಬಲ್ಲ. ಅದರಲ್ಲೇನಾದರೂ ಏರುಪೇರಾದರೆ ಸರಿಮಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆಯೂ ಚಿಂತನೆ ನಡೆಸಬಲ್ಲ. ಒಂದು ಆಡು, ಅದು ಸೃಷ್ಟಿಯಾದಂದಿನಿಂದ ಹೆಚ್ಚು ವ್ಯತ್ಯಾಸವೇನೂ ಇಲ್ಲದೇ ಹಾಗೆಯೇ ಇದೆ. ಅದೇ ಹುಲ್ಲನ್ನು ತಿನ್ನುತ್ತದೆ,ಅದೇ ರೀತಿಯ ಜೀವನ ಮಾಡುತ್ತದೆ . ಆದರೆ ಮನುಷ್ಯನ ಪ್ರಗತಿಗೆ ಎಣೆಯೇ ಇಲ್ಲ. ಅವನ ವ್ಯಾಪಕವಾದ ನೋಟವೇ ಅವನ ಜೀವನದಲ್ಲಿ ಅನೇಕ ಪರಿಷ್ಕಾರಗಳನ್ನು ತಂದಿದೆ. ಜೀವನಕ್ರಮದಲ್ಲಿ ಪರಿವರ್ತನೆಯನ್ನು ಕಾಣಬಹುದು. ಐವತ್ತು ವರ್ಷಗಳ ಹಿಂದಿದ್ದ ಜೀವನಕ್ರಮ ಈಗಿಲ್ಲ.ಅವನ ಜೀವನ ನಿರ್ವಹಣೆಗೆ ಅನುಕೂಲಕರವಾದ ಅಸಂಖ್ಯ ವಸ್ತುಗಳ, ಉಪಕರಣಗಳ ಆವಿಷ್ಕಾರ ಮನುಷ್ಯನಿಂದ ನಡೆದಿದೆ.ಇವೆಲ್ಲವೂ ಅವನ ಅರಿವಿನ ವ್ಯಾಪ್ತಿಗೆ ಸಾಕ್ಷಿಗಳೇ. ಆದರೆ ಆಚಾರ್ಯರು ಹೇಳುತ್ತಿರುವ ಮನುಷ್ಯತ್ವ ಇಷ್ಟೇ ಅಲ್ಲ. ಅರಿತು ಹೆಜ್ಜೆ ಇಡುವವನು ಎಂದಾಗ ಕೇವಲ ಸ್ಥೂಲ ಪ್ರಪಂಚಕ್ಕೆ ಮಾತ್ರ ಆ ಅರಿವು ಸೀಮಿತವಾಗಿಲ್ಲ. ಸ್ಥೂಲದ ಹಿಂದೆ ಈ ಸ್ಥೂಲ ಪ್ರಪಂಚಕ್ಕೂ ಆಧಾರವಾಗಿರುವ ಸೂಕ್ಷ್ಮ ಪ್ರಪಂಚವೊಂದುಂಟು. ಅಲ್ಲಿಂದಲೇ ಶಕ್ತಿಯು ಹರಿದು ಸ್ಥೂಲ ಪ್ರಪಂಚಕ್ಕೂ ಕಾರಣವಾಗಿರುವುದು. ಅದೊಂದು ಪ್ರಕಾಶಮಯವಾದ ದೇವತೆಗಳ ಸಾಮ್ರಾಜ್ಯ.ಹೊರಗಣ್ಣಿಗೆ ಕಾಣದು. ಅದನ್ನು ಅರಿಯಲು ತಪಸ್ಸಿನ ಕಣ್ಣು ಬೇಕಾಗುತ್ತದೆ. ಅಂತಹ ತಪಸ್ಸನ್ನು ಆಚರಿಸಿ ಆ ಅರಿವನ್ನೂ ಪಡೆಯುವುದು ಮನುಷ್ಯನಿಂದ ಮಾತ್ರ ಸಾಧ್ಯ. ಅಂತಹ ಅರಿವೂ ಇದ್ದಾಗ ಅವನು ಮನುಷ್ಯ. ಈ ಸೂಕ್ಷ್ಮ ಪ್ರಪಂಚಕ್ಕೂ ಹಿಂದೆ ಎಲ್ಲಕ್ಕೂ ಮೂಲವಾಗಿ ಬೆಳಗುತ್ತಿರುವ "ಪರ " ಎನ್ನುವ ಪ್ರಪಂಚವುಂಟು. ಅದೇ ಎಲ್ಲಾ ಆನಂದದ ಮೂಲ. "ಜೀವನ ವೃಕ್ಷಕ್ಕೆ ಮೂಲವುಂಟು. ಆ ಮೂಲವೇ ವಿದ್ಯಾಮೂಲವಾದ ಶರೀರವನ್ನು ಹೊಂದಿರುವ ಆ ಜ್ಯೋತಿಯಾಗಿದೆಯಪ್ಪಾ" ಎಂಬ ಶ್ರೀರಂಗ ಮಹಾಗುರುಗಳ ಮಾತೂ ಇಲ್ಲಿ ಸ್ಮರಣೀಯ. ವಿಶ್ವವೆಲ್ಲವೂ ಆ ಮೂಲ ಶಕ್ತಿಯಿಂದಲೇ ನಡೆಯುತ್ತಿರುವುದು ಎಂಬ ಅರಿವನ್ನೂ ಮನುಷ್ಯನು ಗುರುವಿನ ಅನುಗ್ರಹದಿಂದ , ತನ್ನ ಸಾಧನೆಯಿಂದ ಪಡೆಯಬಹುದು. ಹೀಗೆ ಮೂರೂ ಕ್ಷೇತ್ರಗಳಲ್ಲಿ ಅರಿತು ಹೆಜ್ಜೆಗಳನ್ನು ಇಟ್ಟು ಜೀವನವನ್ನು ಸಾರ್ಥಕ ಪಡಿಸಿಕೊಳ್ಳುವುದೇ ಜ್ಞಾನಿಗಳು ಹೇಳಿದ ಮನುಷ್ಯತ್ವ.
ಮುಮುಕ್ಷುತ್ವ -:
ಮುಮುಕ್ಷುತ್ವ - ಹಾಗೆಂದರೇನು? ಜೀವನದಲ್ಲಿ ಬಿಡುಗಡೆಯನ್ನು ಹೊಂದುವ ಆಸೆ. ಮೋಕ್ಷದ ಅಪೇಕ್ಷೆ. ಬಂಧನದಲ್ಲಿರುವುದನ್ನು ಯಾರೂ ಬಯಸುವುದಿಲ್ಲ. ಬೀಜವು ವೃಕ್ಷವಾಗತೊಡಗಿದಾಗ ಒಂದು ದೃಷ್ಟಿಯಿಂದ ವೃಕ್ಷದಲ್ಲಿ ಬಂಧಿಯಾಗಿರುತ್ತದೆ. ತನ್ನ ಕ್ರಮಬದ್ಧವಾದ ವಿಕಾಸದೊಡನೆ ಪುನಃ ಬೀಜವಾದಾಗಲೇ ಅದಕ್ಕೆ ಮುಕ್ತಿ. ಹಾಗಾಗಲೆಂದೇ ಅದರ ಮುಂದಿನ ನಡೆಯೆಲ್ಲವೂ.ಹಾಗೆಯೇ ನಾವೆಲ್ಲರೂ ಆ ಮಹಾ ಚೈತನ್ಯದ ಕಿಡಿಗಳಾಗಿ, ಜೀವವಾಗಿ ಈ ಶರೀರದೊಳಗೆ ಬಂಧಿಯಾಗಿದ್ದೇವೆ. ನಮ್ಮ ನಡೆಯೆಲ್ಲವೂ ಮತ್ತೆ ಆ ಮಹಾ ಚೈತನ್ಯದಲ್ಲಿ ಒಂದಾಗಿ ಮುಕ್ತರಾಗುವ ಉದ್ದೇಶದಿಂದ ಕೂಡಿದ್ದಾಗ ಅದು ಜೀವದ ಸಹಜ ನಡೆ. ಎಲ್ಲರೂ ಬಯಸಬೇಕಾದ ನಡೆಯೆಂದು ಹಾಗೆ ವ್ಯವಸ್ಥಿತವಾಗಿ ಬದುಕಿದ ಈ ದೇಶದ ಜ್ಞಾನಿಗಳ ಮಾತು. ಮೋಕ್ಷವೆಂದರೆ ಚೇತನನ ತವರುಮನೆ ಎಂದು ಮಾರ್ಮಿಕವಾಗಿ ಪೂಜ್ಯ ರಾಮಭದ್ರಾಚಾರ್ಯರು ತಮ್ಮ " ತತ್ವಾರ್ಥ ಸಾಹಸ್ರೀ ಎಂಬ ಗ್ರಂಥದಲ್ಲಿ ಕೊಂಡಾಡಿದ್ದಾರೆ. ಮಾನವ ದೇಹದ ರಚನೆಯಲ್ಲಿಯೇ ಮುಮುಕ್ಷುತ್ವ ವನ್ನು ಹೊಂದುವ ವ್ಯವಸ್ಥೆ ಇದೆ ಎಂದು ಈ ದೇಹದಲ್ಲಿ ಅದನ್ನು ಅನುಭವಿಸಿ ಸುಖಿಸಿದವರ ಮಾತು. ಇತರ ಪ್ರಾಣಿಗಳ ದೇಹದಲ್ಲಿ ಆ ವ್ಯವಸ್ಥೆ ಇಲ್ಲ. ಅವು ನಿಸರ್ಗವಿಟ್ಟಂತೆ ಇರುತ್ತವೆ ಅಷ್ಟೇ. ಆದರೆ ಮನುಷ್ಯನಿಗೆ ತನ್ನ ಬಿಡುಗಡೆಗಾಗಿ ಪ್ರಯತ್ನಿಸುವ ಅವಕಾಶ ಉಂಟು. ಈ ದೇಹ ರಚನೆಯಲ್ಲಿ ಮನಸ್ಸು, ಬುದ್ಧಿ, ಅಹಂಕಾರ, ಚಿತ್ತಗಳೆಂಬ ಅಂತಃಕರಣ ಚತುಷ್ಟಯಗಳುಂಟು. ಅವೆಲ್ಲವೂ ತನ್ನ ಸಹಜವಾದ ಆನಂದದ ಸ್ವರೂಪವನ್ನು ತಪಸ್ಯೆಯಿಂದ ಚಿಂತಿಸಬಲ್ಲವು. ಸಾಧನೆಯಿಂದ ಆ ಒಳ ಅನುಭವವನ್ನು ಗಳಿಸಬಲ್ಲವು. ಅಂತಹ ಅಪೇಕ್ಷೆ ಹುಟ್ಟಬೇಕು ಅಷ್ಟೇ. ಅದನ್ನೇ ಆಚಾರ್ಯರು ಭಗವಂತನ ಅನುಗ್ರಹದಿಂದಲೇ ಸಾಧ್ಯ ಎಂದಿರುವುದು. ಅವನ ಅನುಗ್ರಹಕ್ಕಾಗಿ ಹಾತೊರೆಯುವ ಮನಸ್ಸನ್ನು ಬೆಳೆಸಿಕೊಳ್ಳುವುದೇ ನಮ್ಮ ಸಾಧನೆಯಾಗಬೇಕಿದೆ.
ಮಹಾತ್ಮರ ಸಹವಾಸ
ಇನ್ನೊಂದು ಮಹಾಪುರುಷರ ಸಹವಾಸ. ಇದೊಂದು ಇದ್ದರೆ ಮೇಲಿನ ಎರಡೂ ಭಾಗ್ಯಗಳು ಲಭಿಸಿದಂತೆಯೇ. ಜೀವನದಲ್ಲಿ ಮಹತ್ತಾದುದು ಎಂದರೆ ಈ ಜೀವನ ಮೂಲದಲ್ಲಿ ಬೆಳಗುತ್ತಿರುವ ಭಗವಂತನ ಅರಿವು, ಸಾಕ್ಷಾತ್ಕಾರ. ಅದರಿಂದ ಒದಗುವ ನೆಮ್ಮದಿಗಾಗಿಯೇ ಎಲ್ಲಾ ಸಾಧಕರದ್ದೂ ಸಾಧನೆ. ಅಂತಹ ಮಹತ್ತಾದುದನ್ನು ಪಡೆದುಕೊಂಡವರೇ ಮಹಾತ್ಮರು, ಮಹಾ ಪುರುಷರು. ಕೇವಲ ಭೌತಿಕ ವಿಷಯಗಳನ್ನು ಸಾಧನೆ ಮಾಡಿದವರಲ್ಲ. ಅಂತಹ ಗುರುಜನರ ಮಾರ್ಗದರ್ಶನವೇ ನಮ್ಮನ್ನು ನಿಜವಾದ ಮನುಷ್ಯರನ್ನಾಗಿ ಮಾಡುತ್ತದೆ, ನಮಗೆ ಮುಮುಕ್ಷುತ್ವದ ಅಪೇಕ್ಷೆಯನ್ನೂ ಉಂಟುಮಾಡುತ್ತದೆ. ಹೇಗೆ ನಮಗೆ ಸಂಗೀತ ಜ್ಞಾನವಿಲ್ಲದಿದ್ದರೂ ಒಂದು ಸಂಗೀತ ಕಚೇರಿಯಲ್ಲಿ ಕುಳಿತಾಗ ಅಷ್ಟು ಸಮಯ ನಮಗೆ ಸರಿಯಾಗಿ ತಾಳ ಹಾಕಲು ಬರುವಂತೆ, ಸಹವಾಸವೆನ್ನುವುದು ಅವರಲ್ಲಿನ ಸದ್ವಸ್ತುವನ್ನು ಬಯಸುವ, ಅದಕ್ಕಾಗಿ ಜೀವನದಲ್ಲಿ ಸಾಧನೆಮಾಡುವ ಮನಸ್ಸು ಹುಟ್ಟುವಂತೆ ಮಾಡುತ್ತದೆ.
ಹೀಗೆ ಮನುಷ್ಯತ್ವ, ಮುಮುಕ್ಷುತ್ವ ಮತ್ತು ಮಹಾಪುರುಷರ ಸಹವಾಸಕ್ಕಾಗಿ ಅನವರತವೂ ಆ ಸರ್ವೇಶ್ವರನನ್ನು ಪ್ರಾರ್ಥಿಸೋಣ. ಅವನ ಕರುಣೆ ನಮ್ಮನ್ನು ಕಾಪಾಡಲಿ ಎಂದು ಅವನಲ್ಲಿ ಅಂಗಲಾಚೋಣ.