ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಸೈನ್ಯಸಮೇತನಾಗಿಯಾಗಲಿ, ಒಬ್ಬನೊಂದಿಗಾಗಲಿ, ಇಬ್ಬಿಬ್ಬರೊಂದಿಗಾಗಲಿ, ಮೂವರೊಂದಿಗೂ
ಆಗಲಿ - ಯುದ್ಧ ಮಾಡಲು ತಾನು ಸಿದ್ಧನೆಂದು ಜರಾಸಂಧನು ಕೃಷ್ಣಭೀಮಾರ್ಜುನರ ಮುಂದೆ
ಘೋಷಿಸಿಕೊಂಡನಷ್ಟೆ?
ಹಾಗೆ ಹೇಳಿದ್ದೇ ಅಲ್ಲದೆ, ಭಯಂಕರವಾದ ಕಾರ್ಯವನ್ನು ಮಾಡಹೊರಟಿದ್ದ
ಈ ಮೂವರೊಂದಿಗೆ ಸೆಣಸಲು ಸಿದ್ಧನೂ ಆದನು. "ನನ್ನ ಪುತ್ರನಾದ ಸಹದೇವನಿಗೆ
ಪಟ್ಟಾಭಿಷೇಕವನ್ನು ನೆರವೇರಿಸಿ" ಎಂಬುದಾಗಿ ತನ್ನ ಕಡೆಯವರಿಗೆ ಆಜ್ಞೆಯಿತ್ತನು.
ಹಾಗೆ ಹೇಳಿದವನೇ ತನ್ನ ಹಿಂದಿನ ಸೇನಾಪತಿಗಳಾದ ಕೌಶಿಕ ಹಾಗೂ ಚಿತ್ರಸೇನ - ಇವರಿಬ್ಬರನ್ನೂ
ಸ್ಮರಿಸಿಕೊಂಡನು. ಅವರಿಬ್ಬರೇ ಹಿಂದೆ ಹಂಸ-ಡಿಂಭಕ ಎಂದು ಹೆಸರಾಗಿದ್ದವರು. ಅವರಿಬ್ಬರೂ
ಬದುಕಿದ್ದಾಗ ಪುರುಷರೆಲ್ಲರೂ ಅವರನ್ನು ಆದರಿಸುತ್ತಿದ್ದರು, ಕೊಂಡಾಡುತ್ತಿದ್ದರು.
ಜರಾಸಂಧನು ಬಲಶಾಲಿಗಳಲ್ಲಿ ಶ್ರೇಷ್ಠನಾದ ರಾಜನು. ಆತನ ಪರಾಕ್ರಮ ಭೀಕರವಾದದ್ದು.
“ಯದುವಂಶದವರಾರಿಂದಲೂ ಆತನು ನಾಶಹೊಂದಬಾರದು” - ಎಂಬುದು ಬ್ರಹ್ಮನ ಆಜ್ಞೆಯಾಗಿತ್ತು.
ಶ್ರೀಕೃಷ್ಣನಾದರೂ ಪುರುಷಶಾರ್ದೂಲ, ಎಂದರೆ ನರಶ್ರೇಷ್ಠ ಹಾಗೂ ಸತ್ಯಸಂಧ. ಎಂದೇ ತಾನೇ
ಕೊಲ್ಲಲು ಸಮರ್ಥನಾಗಿದ್ದರೂ ಹಾಗೆ ಮಾಡಲಿಲ್ಲ. ಜರಾಸಂಧನಂತೂ ಯುದ್ಧ ಮಾಡುವುದೆಂದು
ನಿಶ್ಚಯಿಸಿಕೊಂಡಿದ್ದನಷ್ಟೆ. ಆತನನ್ನು ಕುರಿತು ಯದುನಂದನನಾದ ಶ್ರೀಕೃಷ್ಣನು ಹೀಗೆ ಹೇಳಿದನು:
"ರಾಜನೇ, ನಮ್ಮೀ ಮೂವರಲ್ಲಿ ಯಾರೊಂದಿಗೆ ಯುದ್ಧಮಾಡಲು ನಿನಗೆ ಮನಸ್ಸಿದೆ? ನಮ್ಮಲ್ಲಿ
ಯಾರು ನಿನ್ನೊಡನೆ ಯುದ್ಧ ಮಾಡಲು ಸಿದ್ಧರಾಗಬೇಕು?" ಕೃಷ್ಣನು ಹೀಗೆ ಹೇಳಲಾಗಿ, ಆ
ಮಹಾತೇಜಸ್ವಿಯಾದ ಜರಾಸಂಧನು ಭೀಮಸೇನನೊಡನೆ ಸೆಣಸಲು ಬಯಸಿದನು.
ಒಡನೆಯೇ ಜರಾಸಂಧನ ಪುರೋಹಿತನು ಹೆಲವು ಮಂಗಲಕಾರ್ಯಗಳನ್ನು ನೆರವೇರಿಸಿದನು:
ಗೋರೋಚನ-ಮಾಲೆಗಳು, ಇನ್ನಿತರ ಮಂಗಲದ್ರವ್ಯಗಳು, ಹಾಗೂ ಕೆಲವು
ಔಷಧಿಗಳು - ತುಂಬ ನೋವಾದಾಗ ಅದನ್ನು ನಿವಾರಿಸತಕ್ಕವು, ಹಾಗೂ ಮೂರ್ಛಿತನಾದಾಗ
ಎಚ್ಚರವಾಗಿಸುವಂತಹವು - ಇವುಗಳನ್ನೂ ತಂದನು. ಯುಯುತ್ಸುರಾಜನ ಮುಂದೆ, ಎಂದರೆ ಯುದ್ಧ
ಮಾಡಲು ಬಯಸಿರುವ ಜರಾಸಂಧನ ಮುಂದೆ, ಇವುಗಳೊಡನೆ ಉಪಸ್ಥಿತನಾದನು.
ಹೀಗೆ ಬ್ರಾಹ್ಮಣನಿಂದ ಸ್ವಸ್ತಿವಾಚನವಾದ ಬಳಿಕ, ಕ್ಷತ್ರಧರ್ಮವನ್ನು ಸ್ಮರಿಸಿದ ಜರಾಸಂಧನು
ಯುದ್ಧಕ್ಕೆ ಸನ್ನಧನಾದನು. ಕಿರೀಟವನ್ನು ತೆಗೆದನು. ಕೇಶಗಳನ್ನು ಕಟ್ಟಿದನು. ಹಾಗೆ ಸಿದ್ಧನಾದ
ಜರಾಸಂಧನು, ತನ್ನ ದಡವನ್ನೇ ಮೀರಿ ಬರುವ ಸಮುದ್ರದ ಹಾಗೆ ತೋರಿದನು!
ಭಯಂಕರವಾದ ಪರಾಕ್ರಮವುಳ್ಳ ಆ ಧೀಮಂತ ಜರಾಸಂಧನು ಭೀಮನನ್ನು ಕುರಿತು, "ಭೀಮನೇ,
ನಿನ್ನೊಡನೆ ನಾನು ಯುದ್ಧಮಾಡುವೆ. ಏಕೆಂದರೆ ಶ್ರೇಷ್ಠರೊಡನೆ ಹೋರಾಡಿ ಸೋಲುವುದು ಸಹ
ಶ್ರೇಷ್ಠವಾದದ್ದೇ!" ಎಂದನು.
ಹೀಗೆ ಹೇಳಿ ಅವನು ಭೀಮಸೇನನನ್ನು ಎದುರ್ಗೊಂಡನು. ಬಲ ಎಂಬ ಅಸುರನು ಇಂದ್ರನನ್ನು ಹೇಗೆ
ಎದುರ್ಗೊಂಡನೋ ಹಾಗೆಯೇ ಇದಿತ್ತು.
ಅಷ್ಟರಲ್ಲಿ ಶ್ರೀಕೃಷ್ಣನಿಂದ ಸ್ವಸ್ತ್ಯಯನವನ್ನು ಪಡೆದು, ಭೀಮಸೇನನೂ ಸಹ ಇತ್ತ ಸಿದ್ಧನಾದನು,
ಜರಾಸಂಧನನ್ನು ಸಮೀಪಿಸಿದನು. ಆಗ ಇಬ್ಬರೂ ವೀರರು ಮಹಾ-ಹರ್ಷದಿಂದ ಕೂಡಿದವರಾಗಿ
ಪರಸ್ಪರ-ಜಯಾಕಾಂಕ್ಷಿಗಳಾಗಿ, ತಮ್ಮ ಬಾಹುಗಳನ್ನೇ ಶಸ್ತ್ರಗಳನ್ನಾಗಿಸಿಕೊಂಡು ಸೆಣಸಿದರು.
ಮೊದಲು ಕೈಕೈ ಹಿಡಿದರು. ಪರಸ್ಪರ ಪಾದಾಭಿವಂದನ ಮಾಡಿದರು. ಕಂಕುಳಿನಿಂದ ಕಂಕುಳನ್ನು
ತಳ್ಳಿದರು. ಮಹಾಶಬ್ದಸಹಿತವಾಗಿ ತಮ್ಮ ತೋಳುಗಳನ್ನು ತಟ್ಟಿಕೊಂಡರು. ಒಬ್ಬರು ಮತ್ತೊಬ್ಬರ
ಕತ್ತಿಗೆ ಇಕ್ಕಿದರು, ಮತ್ತೆ ಮತ್ತೆ ಹೊಡೆತವಿತ್ತರು. ಒಬ್ಬರ ಅಂಗವನ್ನು ಮತ್ತೊಬ್ಬರು ಅದುಮಿ ಹಿಡಿದರು.
ಪರಸ್ಪರ ಆಸ್ಫಾಲನ ಮಾಡಿದರು, ಎಂದರೆ ಅಪ್ಪಳಿಸಿದರು. ಚಿತ್ರಹಸ್ತ, ಕಕ್ಷಾಬಂಧ ಮುಂತಾದ
ಪಟ್ಟುಗಳನ್ನು ಹಾಕಿದರು. ಒಬ್ಬರ ಕತ್ತು-ತಲೆಗಳಿಗೊಬ್ಬರು ಇಡಿದರು: ಆ ಏಟುಗಳು ಎಷ್ಟು
ತೀವ್ರವಾಗಿದ್ದವೆಂದರೆ ಕಿಡಿಗಳು ಬಂದಂತಾಯಿತು; ಸಿಡಿಲು ಬಡಿದಂತಾಯಿತು!
ಸೂಚನೆ : 12/4/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.