Sunday, May 22, 2022

ಅಷ್ಟಾಕ್ಷರೀ​ - 11 ಬುದ್ಧಿನಾಶಾತ್ ಪ್ರಣಶ್ಯತಿ (Astakshara Darshana 11 Buddhinashat Pranashyati)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ತಾನು ಚೆನ್ನಾಗಬೇಕು - ಎಂಬ ಆಸೆ ಯಾರಿಗಿಲ್ಲ? ಏನೋ ದುಃಖಾತಿರೇಕವಾದಾಗ ಬದುಕೇ ಬೇಡವೆನಿಸಿ, ಸಾಯುವ ಆಸೆ ಹುಟ್ಟಿಕೊಳ್ಳಬಹುದು. ಅದರೆ ಆಸೆ ಬಹುಮಂದಿಗೆ ಬಹುಕಾಲ ನಿಲ್ಲುವುದಿಲ್ಲ, ನಿಲ್ಲುವುದಲ್ಲ. ತೀರಾ ಬುದ್ಧಿಗೆಟ್ಟವರು, ಎಷ್ಟೋ ಕೋಟಿಗೊಬ್ಬರು, ಆ ದೃಢಸಂಕಲ್ಪವನ್ನು ದೀರ್ಘಕಾಲ ಏಕರೂಪವಾಗಿ ಉಳಿಸಿಕೊಂಡಾರು. ಅಂತಹವರನ್ನು  ಬಿಟ್ಟರೆ, ಸಾಯಬೇಕೆಂದುಕೊಂಡವರಿಗೆ ಸರಿಯಾಗಿ ಸಾಂತ್ವನ ಹೇಳುವವವರು ಸಮಯಕ್ಕೆ ಸರಿಯಾಗಿ ಸಿಕ್ಕರೆ, ಸಾಯುವ ಸಂಕಲ್ಪವು ಸಡಿಲವಾಗುವುದು. ಆದರೆ ಬುದ್ಧಿ ಹಾಳಾದವರಿಗೆ ಮಾತ್ರ ಹಿತೈಷಿಗಳ ಮಾತೂ ಪಥ್ಯವಲ್ಲ: ರಾವಣನಿಗೆ ವಿಭೀಷಣನ ನುಡಿ ಹಿಡಿಸಲಿಲ್ಲ; ವಾಲಿಗೆ ತಾರೆಯ ಮಾತು ರುಚಿಸಲಿಲ್ಲ.

ಬುದ್ಧಿ ಕೆಡುವುದು ಎಂದರೇನು? ಅದು ಹಾಗೆ ಆಗುವುದು ಯಾವಾಗ, ಏತಕ್ಕೆ? - ಎಂಬ ಪ್ರಶ್ನೆಗಳು ಬರುವಂತಹವೇ. "ನನ್ನ ರೂಪವು ಕೆಡಲಿ" "ನನ್ನ ಆರೋಗ್ಯವು ಹೋಗಲಿ" ಎಂದು ಯಾರಿಗಾದರೂ ಬಯಕೆ ಬಂದೀತೇ? ಅವೆರಡಕ್ಕಿಂತಲೂ ಮನಸ್ಸಿನ ಆರೋಗ್ಯ ಬಹುಮುಖ್ಯವೇ ಸರಿ: ದೈಹಿಕರೋಗಗಳಿಗೆ ಪರಿಹಾರಗಳು ಸಿಕ್ಕಾವು; ಆದರೆ ಮನಸ್ಸಿಗೋ ಬುದ್ಧಿಗೋ ರೋಗ ಹತ್ತಿತೆಂದರೆ ಅದಕ್ಕೆ ಪರಿಹಾರವನ್ನು ಕೊಡುವುದು ಯಾರಿಗೂ ಸುಲಭವಲ್ಲ.

ಸ್ವಾಸ್ಥ್ಯವೆಂದರೆ ಆರೋಗ್ಯವೆಂಬುದು ಎಲ್ಲರಿಗೂ ತಿಳಿದಿರುವುದೇ. ಆದರೂ ಪದಗಳ ಮೂಲಕ್ಕೇ ಹೋಗಿ ನೋಡಿದರೆ ಭೇದವು ಗೋಚರವಾಗುತ್ತದೆ. ಯಾವನಿಗೆ ಏನೂ ರೋಗವಿಲ್ಲವೋ ಅಂತಹವನು "ಅರೋಗ". ಅರೋಗನ ಸ್ಥಿತಿಯೇ (ಅಥವಾ ಭಾವವೇ) ಅರೋಗತೆ. ಅರೋಗತೆಯೇ "ಆರೋಗ್ಯ": ಆರೋಗ್ಯವೆಂದರೆ ರೋಗಗಳಿಲ್ಲದಿರುವಿಕೆ.

ಸ್ವಾಸ್ಥ್ಯವು ಅಷ್ಟುಮಾತ್ರವಲ್ಲ. ಸ್ವಸ್ಥನ ಸ್ಥಿತಿಯು (ಅಥವಾ ಭಾವವು) ಸ್ವಾಸ್ಥ್ಯ. ಸ್ವಸ್ಥನಾರು? - ಎಂಬ ಪ್ರಶ್ನೆಗೆ ಸುಶ್ರುತನಿತ್ತ ಉತ್ತರವನ್ನು ಶ್ರೀರಂಗಮಹಾಗುರುಗಳು ಆಗಾಗ್ಗೆ ಜ್ಞಾಪಿಸುತ್ತಿದ್ದರು. ಶರೀರದಲ್ಲಿ (ವಾತ-ಪಿತ್ತ-ಕಫಗಳೆಂಬ ಮೂರು) 'ದೋಷ'ಗಳಿರುತ್ತವೆ; ಅವು 'ಸಮ'ನಾಗಿರಬೇಕು. ಹಾಗೆಯೇ ಶರೀರದಲ್ಲಿಯ ಅಗ್ನಿ-ಧಾತುಕ್ರಿಯೆ-ಮಲಕ್ರಿಯೆಗಳೂ ಸಮನಾಗಿರಬೇಕು. ಮತ್ತು ಇವೆಲ್ಲಕ್ಕೂ ಆಧಾರಭೂತವಾಗಿ, ಆತ್ಮ-ಇಂದ್ರಿಯ-ಮನಸ್ಸುಗಳು ಪ್ರಸನ್ನವಾಗಿರಬೇಕು - ಎಂದು ಲಕ್ಷಣವು ಹೇಳುತ್ತದೆ. (ಇಲ್ಲಿಯ ಪಾರಿಭಾಷಿಕವಿಷಯಕ್ಕೆ ಬಹುವಿಸ್ತೃತವಾದ ವಿವರಣೆಯೇ ಬೇಕಲ್ಲವೇ?) ಇಷ್ಟೆಲ್ಲ ಲೆಕ್ಕಾಚಾರಗಳಿರುವುದರಿಂದಲೇ, "ಆಸ್ಪತ್ರೆಗೆ ಸೇರಿಲ್ಲದವರೆಲ್ಲ ಸ್ವಸ್ಥರೆಂದೇನಲ್ಲ" ಎಂಬುದಾಗಿ ಶ್ರೀರಂಗಮಹಾಗುರುಗಳು ವಿನೋದವಾಗಿ ಪ್ರತಿಪಾದಿಸುತ್ತಿದ್ದರು.

ಇಲ್ಲಿ ನಮಗೆ ಕೊನೆಯ ಅಂಶ ಪ್ರಸ್ತುತ. ಆತ್ಮನ ಅಥವಾ ಮನಸ್ಸಿನ ಪ್ರಸನ್ನತೆಯೆಂದರೇನು? ಹಾಗೆಯೇ, ಬುದ್ಧಿಯು ನಾಶವಾಗುವುದೆಂತು? - ಎಂಬ ಎರಡೂ ಪ್ರಶ್ನೆಗಳಿಗೂ ಭಗವದ್ಗೀತೆಯಲ್ಲಿ ಉತ್ತರವನ್ನು ಕಾಣಬಹುದು. ಜೀವನವು ಅತ್ಯಂತಸಂಕೀರ್ಣವೆಂಬುದು ನಿರ್ವಿವಾದ. ಆದರೆ ಕಾರ್ಯ-ಕಾರಣ-ಭಾವವು ಮಾತ್ರ ಎಲ್ಲೆಡೆಯೂ ಇರುವುದೇ: ಪ್ರತಿಯೊಂದು ಕಾರ್ಯದ ಹಿಂದೆಯೂ ಕಾರಣವೊಂದು ಇದ್ದೇ ಇರುವುದು. ಪ್ರತಿಯೊಂದು ಕಾರಣದಿಂದಲೂ ಏನೋ ಪರಿಣಾಮವೊಂದು ಆಗಿಯೇ ತೀರುವುದು. ಒಂದೆಂದರೆ ಒಂದೇ ಅಲ್ಲ. ಒಂದು ಕಾರ್ಯದ ಹಿಂದೆ ಹಲವು ಕಾರಣಗಳಿದ್ದಾವು; ಒಂದು ಕಾರಣದಿಂದ ಹಲವು ಕಾರ್ಯಗಳು ಜನಿಸಿಯಾವು. ಆದರೆ ಕಾರ್ಯ-ಕಾರಣ-ಭಾವದ ಸರಪಣಿಯು ಮಾತ್ರ ಸರ್ವವ್ಯಾಪಿ. ಒಂದರ್ಥದಲ್ಲಿ ಇಡೀ ವಿಜ್ಞಾನದ ಸಾರಾಂಶವೇ ಇದು.

ಬುದ್ಧಿನಾಶದ ಹಿಂದೆಯಿರುವ  ಕಾರ್ಯಕಾರಣಭಾವ-ಶೃಂಖಲೆಯನ್ನು ಗೀತೆಯು ಸುಭಗವಾಗಿ ತೋರಿಗೊಟ್ಟಿದೆ: "[ಇಂದ್ರಿಯ]ವಿಷಯಗಳ ಧ್ಯಾನದಿಂದಾಗಿ ಅವುಗಳ ಬಗ್ಗೆ ಒಂದು ಸಂಗವು (ಎಂದರೆ ಆಸಕ್ತಿಯು) ಉಂಟಾಗುತ್ತದೆ. ಉತ್ಕಟವಾದ ಸಂಗದಿಂದ ಕಾಮವು (ಎಂದರೆ ಬಯಕೆಯು) ಜನಿಸುತ್ತದೆ (ಎಂದರೆ, ಬಯಸಿದ್ದು ಬೇಕೇಬೇಕೆನಿಸುತ್ತದೆ); [ಬಯಕೆಯೀಡೇರದಿದ್ದಾಗ] ಅದು ಕ್ರೋಧಕ್ಕೆ ಎಡೆಮಾಡಿಕೊಡುತ್ತದೆ; ಕ್ರೋಧದಿಂದ ಸಂಮೋಹವು (ಎಂದರೆ ಸರಿ-ತಪ್ಪುಗಳು ಗೊತ್ತಾಗದಿರುವುದು) ಉಂಟಾಗುತ್ತದೆ; ಸಂಮೋಹದಿಂದ ಸ್ಮೃತಿಯ ಭ್ರಮೆಯಾಗುತ್ತದೆ (ಎಂದರೆ ಶಾಸ್ತ್ರದಿಂದಲೋ ಹಿರಿಯರಿಂದಲೋ ಪಡೆದ ಸದುಪದೇಶವು ಜಾರುತ್ತದೆ: ಗೊತ್ತಿದ್ದ ಸರಿದಾರಿಯೂ ಮರೆಯುತ್ತದೆ); ಸ್ಮೃತಿಭ್ರಂಶದಿಂದ ಬುದ್ಧಿನಾಶವಾಗುತ್ತದೆ (ಎಂದರೆ, ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬ ವಿವೇಚನೆಯು ಹಾಳಾಗುತ್ತದೆ); ಹಾಗೂ ಕೊನೆಯದಾಗಿ, ಬುದ್ಧಿನಾಶವಾದವನು ಪೂರ್ಣವಾಗಿ ಹಾಳಾಗುತ್ತಾನೆ. ಹೀಗೆ ಇಲ್ಲಿ ಎಂಟು ಘಟ್ಟಗಳನ್ನೂ, ಒಂದರಿಂದ ಮತ್ತೊಂದು ಮತ್ತೊಂದರಿಂದ ಮಗದೊಂದು ಜನಿಸುವುದನ್ನೂ, ಕಾರ್ಯ-ಕಾರಣಗಳ ಕೊಂಡಿಗಳಾಗಿ ಕಾಣಿಸಿದೆ.

ಇಷ್ಟು ಮಾತ್ರವಲ್ಲದೆ, ಮತ್ತು ಇದಕ್ಕೆ ಪ್ರತಿಯಾಗಿ, ಸಂಕ್ಷೇಪವಾಗಿ ಪ್ರಸನ್ನತೆಯನ್ನು ಪಡೆಯುವ ಬಗೆಯನ್ನೂ ಅಲ್ಲೇ ತಿಳಿಸಿದೆ. ಇಂದ್ರಿಯವಿಷಯಗಳನ್ನೇ ರಾಗದ್ವೇಷಗಳಿಲ್ಲದ, ಹಾಗೂ ತನ್ನ ವಶದಲ್ಲೇ ಇರುವ, ಇಂದ್ರಿಯ-ಮನಸ್ಸುಗಳಿಂದ ಅನುಭವಿಸುತ್ತಿರುವವನು ಪ್ರಸಾದವನ್ನು ಹೊಂದುವನು - ಎಂದೂ ತಿಳಿಸಿದೆ. (ಪ್ರಸಾದವೆಂದರೆ ಪ್ರಸನ್ನತೆಯೇ).

ಅಂತೂ ಇವಿಷ್ಟರ ಒಟ್ಟಾರೆ ನೋಟವನ್ನು ಹೀಗೆ ಹೇಳಬಹುದು. ಇಂದ್ರಿಯಗಳಿಂದ ನಾನಾಸುಖಗಳನ್ನು ಪಡೆಯುವುದೇ ದೋಷವೆಂದಲ್ಲ. ಸಂಗವೇ ತಪ್ಪಲ್ಲ. ಇಂದ್ರಿಯಗಳ ಮೇಲೆ ಹಿಡಿತವಿದ್ದಲ್ಲಿ ತೊಂದರೆಯಿಲ್ಲ. ಬದಲಾಗಿ, ಹಾಗಿಲ್ಲದಾದಾಗ, ಪರಿಣಾಮಪರಂಪರೆಯಿಂದ ಬುದ್ಧಿನಾಶವೂ, ಅದರಿಂದಾಗಿ ಅಧೋಗತಿಯೂ, ಸಿದ್ಧವೇ.

ಬುದ್ಧಿಯನ್ನು ಚೆನ್ನಾಗಿಟ್ಟುಕೊಳ್ಳೋಣ, ಸ್ವಸ್ಥರಾಗೋಣ!

ಸೂಚನೆ: 22/05/2022 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.