Thursday, April 15, 2021

ಪಾಠವೂ ಒಂದು ಪೂಜೆಯೇ (Pathavu Ondu Pujeye)


ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)



ಪಾಠವೆಂಬುದು ನಮ್ಮ ಜೀವನದ ಮುಖ್ಯ ಧ್ಯೇಯವನ್ನು ಸಾಧಿಸಲು ಬಹುಮುಖ್ಯ ಸಾಧನ. ಅಂತೆಯೇ ಪೂಜೆಯೂ ಸಹ. ಪೂಜೆಯು ಪೂಜ್ಯ ಮತ್ತು ಪೂಜಕ ಇವರ ಮಧ್ಯೆ ನಡೆಯುವ ಒಂದು ಬಗೆಯ ಮಾನಸಿಕ ವ್ಯಾಪಾರ. ಪಾಠವೂ ಆಚಾರ್ಯ-ಶಿಷ್ಯರ ನಡುವೆ ಏರ್ಪಡುವ ಮಾತಿನ ಮೂಲಕ ನಡೆಯುವ ಕ್ರಿಯೆ. ಅಂದರೆ ಪೂಜೆಗೆ ಯಾವೆಲ್ಲ ನಿಯಮಗಳನ್ನು ಅನುಸರಿಸುವುದು ಅನಿವಾರ್ಯವೋ ಆ ಎಲ್ಲಾ ನಿಯಮಗಳನ್ನು ಅನುಸರಿಸುವುದು ಪಾಠಕ್ಕೂ ಅಷ್ಟೇ ಅನಿವಾರ್ಯ. ವಿದ್ಯೆಯನ್ನುಪಡೆಯಲು ನಾವು ಪಾಠಕ್ಕೆ ಕುಳಿತುಕೊಳ್ಳುತ್ತೇವೆ. ಇದನ್ನು 'ವಿದ್ಯಾಭ್ಯಾಸ' ಎಂದು ಕರೆಯುತ್ತಾರೆ. 

ವಿದ್ಯಾ ಎಂದರೆ ಜ್ಞಾನ ಅಥವಾ ವಿದ್ಯೆಗೆ ದೇವತೆಯಾದ ಸರಸ್ವತಿ. ಅಭಿ- ಎದುರು, ಆಸ- ಕುಳಿತುಕೊಳ್ಳುವುದು. ಅಂದರೆ ವಿದ್ಯಾಧಿದೇವತೆಯಾದ ಸರಸ್ವತಿಯ ಎದುರು ಕುಳಿತು ಅವಳನ್ನು ನಮ್ಮ ಮಸ್ತಿಷ್ಕಕ್ಕೆ ಆವಾಹನೆ ಮಾಡುವ ವಿಧಾನವಲ್ಲವೇ ಈ ಪಾಠವೆಂಬುದು!. ಪೂಜೆಯಲ್ಲೂ ನಾವು ದೇವರ ಮುಂದು ಕುಳಿತುಕೊಂಡು ನಮ್ಮ ಹೃದಯಮಂದಿರಕ್ಕೆ ಭಗವಂತನನ್ನುಆವಾಹಿಸುತ್ತೇವೆ. ದೇವರನ್ನು ಆವಾಹಿಸುವ ವಿಧಾನ ಪೂಜೆಯಾದರೆ ವಿದ್ಯೆ-ಜ್ಞಾನವನ್ನು ಪಡೆಯುವ ವಿಧಿ ಪಾಠವಲ್ಲವೇ? ಹಾಗಾಗಿ ಪಾಠವೂ ಒಂದು ಪೂಜೆಯೇ ಆಗಿದೆ. ಸಾಮಾನ್ಯವಾಗಿ ಪೂಜೆಯ ಸಂದರ್ಭದಲ್ಲಿ ಶುಚಿರ್ಭೂತನಾಗಿ, ಏಕಾಗ್ರಚಿತ್ತನಾಗಿ, ಪೂಜೆಗೆ ಬೇಕಾದ ಪರಿಕರಗಳೊಂದಿಗೆ, ಭಗವಂತನ ಎದುರು ಆಸೀನರಾಗಿ ಪೂಜೆಯನ್ನು ಮಾಡುತ್ತೇವೆ. ಹಾಗೆಯೇ ವಿದ್ಯೆಯನ್ನು ಗ್ರಹಣಮಾಡುವ ಸಂದರ್ಭದಲ್ಲಿ "ಆಚಾರ್ಯದೇವೋ ಭವ!" ಎಂಬ ಮನಸ್ಸಿನಿಂದ ವಿದ್ಯೆಯನ್ನು ನೀಡುವ ಆಚಾರ್ಯರ ಎದುರು ವಿದ್ಯಾರ್ಥಿಯು ವಿದ್ಯಾಮಂದಿರದಲ್ಲಿ ಕುಳಿತು ವಿದ್ಯೆಯನ್ನು ಸ್ವೀಕರಿಸುತ್ತಾನೆ. ಹೇಗೆ ಪೂಜೆಯನ್ನು ಮಾಡುವಾಗ ಭಗವಂತನಲ್ಲಿ ಶ್ರದ್ಧೆ, ಭಕ್ತಿ ಭಾವ, ಏಕಾಗ್ರತೆ, ಪೂಜಾಪರಿಕರ ಇವುಗಳಲ್ಲಿ ವ್ಯತ್ಯಾಸವಾದರೆ ಪೂಜಾಫಲವು ಲಭಿಸುವುದಿಲ್ಲವೋ, ಅಂತೆಯೇಪಾಠವನ್ನು ಸ್ವೀಕರಿಸುವಾಗ ಆಚಾರ್ಯರ ವಿಷಯದಲ್ಲಿ ಶ್ರದ್ಧೆ, ಗೌರವ, ಏಕಾಗ್ರತೆ ಮೊದಲಾದ ಗುಣಗಳಿಲ್ಲದಿದ್ದರೆಪಾಠದ ಫಲವಾದ ವಿದ್ಯೆ ಬಾರದು.ಪೂಜಾವಿಧಾನದಲ್ಲಿ ಏರು ಪೇರುಗಳಾದರೆ ಏನು ವಿರುದ್ಧ ಫಲ ಲಭಿಸುತ್ತದೆ ಎಂಬುದಕ್ಕೆ ಕಾಳಿದಾಸನು ಬರೆದ ರಘುವಂಶವೆಂಬಕಾವ್ಯದಲ್ಲಿ ಒಂದು ಪ್ರಸಂಗ ಬರುತ್ತದೆ. ದಿಲೀಪ ಮಹಾರಾಜನು ಸಂತತಿ ಇಲ್ಲದೆ ಪರಿತಪಿಸುತ್ತಾನೆ. ಇದಕ್ಕೆಪರಿಹಾರವನ್ನು ಕಂಡುಕೊಳ್ಳಲು ಗುರುವಾದ ವಸಿಷ್ಠರ ಬಳಿ ತೆರಳುತ್ತಾನೆ. ವಸಿಷ್ಠರು ತಮ್ಮ ದಿವ್ಯದೃಷ್ಟಿಯಿಂದ, ದಿಲೀಪನಿಂದ ಹಿಂದೆ ಮಾಡಲ್ಪಟ್ಟ ಅಚಾತುರ್ಯವನ್ನು ತಿಳಿಸುತ್ತಾರೆ. ಒಮ್ಮೆ, ದಿಲೀಪನು ಪತ್ನಿಯ ಋತುಕಾಲವನ್ನುತಿಳಿದು, ಸ್ವರ್ಗದಿಂದ ಆತುರದಿಂದ ತನ್ನ ನಗರಕ್ಕೆ ಧಾವಿಸುತ್ತಾನೆ. ಆಗ ದಿಲೀಪನು, ಕಲ್ಪತರುವಿನ ಛಾಯೆಯಲ್ಲಿಮಲಗಿರುವ ಕಾಮಧೇನುವನ್ನು ಕಂಡರೂ ನಮಸ್ಕರಿಸದೇ ಬರುತ್ತಾನೆ. ಆಗ ಕಾಮಧೇನುವು 'ನಿನಗೆ ಸಂತತಿಯಾಗದಿರಲಿ' ಎಂದು ಶಾಪವನ್ನು ಕೊಡುತ್ತಾಳೆ. ಹೀಗೆ, ಶಾಪದ ವೃತ್ತಾಂತವನ್ನು ವಸಿಷ್ಠರು ದಿಲೀಪನಿಗೆ ತಿಳಿಸುತ್ತಾರೆ. ಈ ಶಾಪವು ಪರಿಹಾರವಾಗಿ ನಿನಗೆ ಪ್ರಜಾಭಾಗ್ಯವು ಸಿಗಬೇಕಾದರೆ ಅವಳ ಮಗಳಾದ ನಂದಿನಿಯನ್ನು ಪೂಜಿಸಬೇಕು. ಅವಳ ಅನುಗ್ರಹವನ್ನು ಪಡೆದರೆ ಮಾತ್ರ ಸಂತತಿಸಾಧ್ಯ. ಅಂದರೆ ಪೂಜ್ಯವಾದ ಅಥವಾ ಗೌರವಕ್ಕೆಅರ್ಹರಾದವರನ್ನು ತಿರಸ್ಕರಿಸುವುದರಿಂದ ನಾವು ಪಡೆಯಲೇಬೇಕಾದ ವಿದ್ಯೆಯು ಸರಿಯಾಗಿ ಲಭಿಸುವುದಿಲ್ಲ. ಸರಿಯಾದರೀತಿಯಲ್ಲಿ ವಿದ್ಯಾಗ್ರಹಣವು ಆಗದಿದ್ದರೆ "ವಿದ್ಯಾಭ್ಯಾಸ ಹೋಗಿ ವಿದ್ಯಾಭಾಸವಾಗುತ್ತದೆಪ್ಪ" ಎಂಬ ಶ್ರೀರಂಗಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯ. ಆದ್ದರಿಂದ ಪೂಜೆಗೆ ಬೇಕಾದ ನಿಯಮಪಾಲನೆ, ಪಾಠಕ್ಕೂ ಅತ್ಯವಶ್ಯ. ನಾವು ಎಷ್ಟರಮಟ್ಟಿಗೆ ಪೂಜೆಯಲ್ಲಿ ತಲ್ಲೀನರಾಗಿರಬೇಕೆಂದರೆ – ಒಂದು ವೇಳೆ ಯಮನೇ ನಮ್ಮನ್ನು ಕರೆದೊಯ್ಯಲುಬಂದಿದ್ದರೂ, ಪೂಜೆ ಮುಗಿದ ಮೇಲೆಯೇ ನಮ್ಮನ್ನು ಮುಟ್ಟಬೇಕು. ಅಂತೆಯೇ ನಾವು ಪಾಠದಲ್ಲಿರುವಾಗ ಯಮಬಂದರೂ, ಅವನು ಪಾಠದ ಅನಂತರವಷ್ಟೇ ಪಾಠದ ಸ್ಥಳಕ್ಕೆ ಬರಬೇಕು!. ಇಂತಹ ಬದ್ಧತೆಯೆಂಬುದು ಪಾಠಕರಲ್ಲಿ ಮತ್ತು ಪಾಠ ಸ್ವೀಕರಿಸುವ ಶಿಷ್ಯರಲ್ಲಿ ಇದ್ದಾಗ ಮಾತ್ರ ವಿದ್ಯೆ ಎಂಬ ಸರಸ್ವತಿಯು, ನಮ್ಮ ಬುದ್ಧಿಯಲ್ಲಿಳಿಯಲುಸಾಧ್ಯ. ಪಾಠವೆಂಬುದು ಅಧ್ಯಾಪಕ ಮತ್ತು ವಿದ್ಯಾರ್ಥಿಯ ದ್ವಿನಿಷ್ಠ-ಅವಿನಾಭಾವ-ಸಂಬಂಧ. ಪಾಠ ಮತ್ತು ಪೂಜೆಯು, ನಮ್ಮ ಜೀವನದ ಮುಖ್ಯ ಉದ್ದೇಶವಾದ ಭಗವಂತನ ಸಾಕ್ಷಾತ್ಕಾರವನ್ನು ಪಡೆಯಲು ಸಾಧನ.ಸಾಧನವು, ಸಾಧ್ಯವನ್ನು ಮುಟ್ಟಲು ಸಮರ್ಥವಾಗುವ ರೀತಿಯಲ್ಲಿ ಇಟ್ಟುಕೊಳ್ಳಬೇಕಾದುದು ಸಫಲತೆಯನ್ನುಪಡೆಯಬೇಕೆಂಬವರ  ಸಂಕಲ್ಪವಾಗಿರಬೇಕು.

ಸೂಚನೆ: 15/04/2021 ರಂದು ಈ ಲೇಖನ ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.