Monday, April 26, 2021

ಆರ್ಯಸಂಸ್ಕೃತಿ ದರ್ಶನ-40(Arya Samskruti Darshana-40)

ಗುಡುಗು ಏನು ಹೇಳುತ್ತದೆ ?
ಲೇಖಕರು: ಡಾ||ಶ್ರೀ ಎಸ್.ವಿ. ಚಾಮು


   
ಬೃಹದಾರಣ್ಯಕದಲ್ಲಿ ನೀತಿಯ ಬಗ್ಗೆ ಒಂದು ಸಣ್ಣ ಕಥೆ ಇದೆ.
"ದೇವತೆಗಳು, ಮನುಷ್ಯರು ಮತ್ತು ಅಸುರರು ಮೂವರೂ ಪ್ರಜಾಪತಿಯ ಮಕ್ಕಳು. ಅವರು ಪ್ರಜಾಪತಿಯಲ್ಲಿ ಬ್ರಹ್ಮಚಾರಿಗಳಾಗಿ ವಾಸಮಾಡಿದರು. ಅವರಲ್ಲಿ ದೇವತೆಗಳು ಬ್ರಹ್ಮಚಾರಿಗಳಾಗಿ ವಾಸಮಾಡಿ, ಪ್ರಜಾಪತಿಗೆ "ನೀನು ನಮಗೆ ಉಪದೇಶ ಮಾಡು" ಎಂದು ಹೇಳಿದರು.
ಅವನು ಅವರಿಗೆ "ದ" ಎಂಬ ಅಕ್ಷರವನ್ನು ಹೇಳಿ ತಿಳಿದಿರಾ? " ಎಂದು ಕೇಳಿದನು. ಅವರು ತಿಳಿಯಿತು. "ನೀವು ದಮನ ಮಾಡಿರಿ (ದಾಮ್ಯತ] ಎಂದು ಹೇಳಿದೆ" ಎಂದು ಅವನಿಗೆ ಹೇಳಿದರು. ಅವನು," ಓಂ, ನೀವು ನನ್ನ ಮನಸ್ಸನ್ನು ತಿಳಿದಿರಿ" ಎಂದು ಹೇಳಿದನು.
ನಂತರ ಮನುಷ್ಯರು ಅವನನ್ನು ಕೇಳಿದರು, "ನಮಗೆ ಹೇಳು". ಅವನು ಅವರಿಗೂ ಸಹ "ದ" ಎಂಬ ಅಕ್ಷರವನ್ನೇ ಹೇಳಿ "ತಿಳಿದಿರಾ" ಎಂದು ಕೇಳಿದನು. ಅವರು "ತಿಳಿದೆವು, ನೀವು ದಾನ ಮಾಡಿರಿ  (ದತ್ತ) ಎಂದು ನೀನು ನಮಗೆ ಹೇಳಿದೆ" ಎಂದರು. ಅವನು "ಓಂ,ನೀವು ನನ್ನ ಮನಸ್ಸನ್ನು ತಿಳಿದಿರಿ" ಎಂದು ಹೇಳಿದನು.
ನಂತರ ಅಸುರರು ಅವನನ್ನು ಕೇಳಿದರು "ನಮಗೆ ಹೇಳು". ಅವನು ಅವರಿಗೂ ಸಹ " ದ " ಎಂಬ ಅಕ್ಷರವನ್ನೇ ಹೇಳಿ, "ತಿಳಿದಿರಾ" ಎಂದು ಕೇಳಿದನು. ಅವರು "ತಿಳಿದೆವು, ನೀವು ದಯೆ ತೋರಿಸಿರಿ (ದಯಧ್ವ೦) ಎಂದು ನೀನು ನಮಗೆ ಹೇಳಿದೆ" ಎಂದರು. ಅವನು "ಓಂ, ನೀವು   ನನ್ನ ಮನಸ್ಸನ್ನು ತಿಳಿದಿರಿ" ಎಂದು ಹೇಳಿದನು. ಅದನ್ನೇ "ಬಾನುಲಿಯಾದ ಗುಡುಗು ದ—ದ---ದ ದಾಮ್ಯತ, ದತ್ತ, ದಯಧ್ವಂ..(ವಶದಲ್ಲಿರಿಸಿಕೊಳ್ಳಿರಿ, ದಾನಮಾಡಿರಿ, ದಯೆತೋರಿಸಿರಿ) ಎಂದು ಹೇಳುತ್ತವೆ. ಆದುದರಿಂದ ದಮ, ದಾನ ಮತ್ತು ದಯೆಗಳನ್ನು ಅನುಸರಿಸಬೇಕು" ಇದು ಆ ಕಥೆ.

ಅಗ್ನಿ, ಚಂದ್ರ, ದಿಕ್ಕುಗಳು, ಸೂರ್ಯ ಮತ್ತು ವಾಯುಗಳು, ವಾಕ್ಕು, ಮನಸ್ಸು, ಶ್ರೋತ್ರ, ಚಕ್ಷುಸ್ಸು ಮತ್ತು ಪ್ರಾಣಗಳ ಉತ್ಪತ್ತಿಗೆ ಕಾರಣರಾದ ಪ್ರತಿದೇವತೆಗಳು, ಉಪನಿಷತ್ತುಗಳು, ವಾಕ್ಕು, ಮನಸ್ಸು, ಮುಂತಾದವುಗಳನ್ನು ದೇವತೆಗಳೆಂದು ವ್ಯವಹರಿಸುತ್ತವೆ. ಯಾರಲ್ಲಿ ಯಾವ ಕೊರತೆಯಿದೆಯೋ ಅದನ್ನು ಸರಿಮಾಡಿಕೊಳ್ಳುವುದೇ ನೀತಿಯ ಸಾರ. ಈ ದೇವತೆಗಳು ದಾರಿತಪ್ಪಿ ಹೋಗುವ ಸಂಭವ ಬಹಳ ಜಾಸ್ತಿ. ಅವರು ತಮ್ಮನ್ನು  ವಶದಲ್ಲಿರಿಸಿಕೊಂಡಿದ್ದರೆ ಆಗ ಎಲ್ಲವೂ ಕ್ಷೇಮವಾಗಿರುತ್ತದೆ. ಆದುದರಿಂದ ಪ್ರಜಾಪತಿಯು ದೇವತೆಗಳಿಗೆ "ದಾಮ್ಯತ" ಎಂದು ಹೇಳುತ್ತಾನೆ. ಅವನು " ದ " ಎಂದು ಹೇಳಿದಾಗ, ದೇವತೆಗಳು ತಮಗೆ ಸಹಜವಾದ ಕೊರತೆ ಏನೆಂಬುದನ್ನು ಅರಿತು, ತಾವೇ "ದಾಮ್ಯತ " ಎಂದು ಹೇಳುವುದು ಕುತೂಹಲಕಾರಿಯಾಗುತ್ತದೆ.

ಅತಿ ಆಸೆಯು ಮನುಷ್ಯರ ಸಹಜದೋಷ. ಅವರು ಸುಲಭವಾಗಿ ಕೊಡರು. ಕೊಡಬೇಕೆಂದು ಉದಾರವಾದ ಸಂಕಲ್ಪಗಳನ್ನು ಮಾಡಿಕೊಂಡರೂ ಸಹ, ಕೊಡಬೇಕಾದ ಸಂದರ್ಭ ಬಂದಾಗ, ಕೊಡಲು ಹಿಂದೆಗೆಯುವರು. ಪ್ರಜಾಪತಿಯು ಉಚ್ಚರಿಸುವ "ದ " ಎಂಬ ಅಕ್ಷರವು ಅವರ ಸ್ವಭಾವ ದೋಷವನ್ನು ಓಸರಿಸಿ ಅವರಿಗೆ "ದತ್ತ"---ದಾನಮಾಡಿರಿ-- ಎಂಬ ನೀತಿಯು ಅರಿವಾಗುವಂತೆ ಮಾಡಿಸುತ್ತದೆ.
ಕ್ರೌರ್ಯವು  ಅಸುರರ ಸ್ವಭಾವ. ಆದುದರಿಂದ ಪ್ರಜಾಪ್ರತಿಯು ಹೇಳುವ" ದ" ಎಂಬ ಅಕ್ಷರವು ಅವರಲ್ಲಿ ದಯೆತೋರಿಸಿರಿ—ದಯಧ್ವಂ-- ಎಂಬ ಭಾವವನ್ನೇ ಮೂಡಿಸುತ್ತದೆ.
ಈ ದಮ, ದಾನ ಮತ್ತು ದಯೆಗಳೇ ನೀತಿಯ ತಳಹದಿಗಳು. ಅವೇ ಪ್ರಜಾಪತಿಯು ಸೃಷ್ಟಿಸಿರುವ ಪ್ರಕೃತಿಯೆಲ್ಲವನ್ನೂ ಹಾಸುಹೊಕ್ಕಾಗಿ ಹೆಣೆದುಕೊಂಡಿರುತ್ತವೆ. ಅವನ್ನೇ ಪ್ರಕೃತಿಯ ವಾಣಿಯಾದ ಗುಡುಗು ದ-ದ-ದ ಎಂದು ಹೇಳುತ್ತದೆ. ಗುಡುಗುವುದರ ಮೂಲಕ ಮೋಡವು ಪ್ರಜಾಪತಿಯ ಸಂದೇಶ ಮತ್ತು ಆದೇಶಗಳನ್ನೇ ಎಲ್ಲರಿಗೂ ಕೇಳಿಸುವಂತೆ ಉಚ್ಚವಾದ ಧ್ವನಿಯಲ್ಲಿ ಹೇಳುತ್ತದೆ. ಎಲ್ಲಿಯಾದರೂ ಮನುಷ್ಯರು ಅವುಗಳನ್ನು ಮರೆತು ಹೋದಾರೆಂದು ಎಣಿಸಿ, ಗುಡುಗು ಪ್ರತಿವರ್ಷವೂ ವರ್ಷಾಕಾಲವು ಬಂದೊಡನೆಯೇ ದ-ದ-ದ ಎಂದು ಹೇಳಿಯೇ ನಂತರ  ಜೀವಾತವಾದ ಮಳೆಯನ್ನು ಕರೆಯುತ್ತದೆ.
ಆದರೆ ಗುಡುಗಿನ ಸಂದೇಶಕ್ಕೆ ನಾವು ಕಿವುಡುರಂತೆಯೇ ಇರುತ್ತೇವೆ. ಗುರುಕುಲದಲ್ಲಿ ಅಸುರ ಬಾಲಕರಿಗೆ ದಯೆ ಏಕೆ ತೋರಿಸಬೇಕು ಎಂಬ ಬಗ್ಗೆ ಪ್ರಹ್ಲಾದನು ಮಾಡುವ ಉಪದೇಶವನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು.
ನಹ್ಯಚ್ಯುತಂ  ಪ್ರೀಣಯತೋ  ಬಹ್ವಾಯಾಸೋsಸುರಾತ್ಮಜಾಃ|
ಆತ್ಮತ್ವಾತ್ ಸರ್ವಭೂತಾನಾಂ ಸಿದ್ಧ ತ್ವಾದಿಹ ಸರ್ವತಃ||
ಪರಾವರೇಷು ಭೂತೇಷು ಬ್ರಹ್ಮಾನ್ತಸ್ಥಾವರಾದಿಷು|  
ಭೌತಿಕೇಷು ವಿಕಾರೇಷು ಭೂತೇಶ್ವಥ ಮಹತ್ಸು ಚ||
ಗುಣೇಷು ಗುಣಸಾಮ್ಯೇ ಚ ಗುಣವ್ಯತಿಕರೇ ತಥಾ |
ಏಕ ಏವ ಪರೋಹ್ಯಾತ್ಮಾ ಭಗವಾನೀಶ್ವರೋsವ್ಯಯಃ ||
ಪ್ರತ್ಯಗಾತ್ಮಸ್ವರೂಪೇಣ ದೃಶ್ಯರೂಪೇಣ ಚ ಸ್ವಯಂ |
ವ್ಯಾಪ್ಯ ವ್ಯಾಪಕ ನಿರ್ದೇಶ್ಯೋ  ಹ್ಯನಿರ್ದೇಶ್ಯೋsವಿಕಲ್ಪಿತಃ ||
ಕೇವಲಾನುಭವಾನಂದ ಸ್ವರೂಪಃ ಪರಮೇಶ್ವರಃ|
ಮಾಯಯಾನ್ತರ್ಹಿತೈಶ್ವರ್ಯ ಈಯತೇ ಗುಣ ಸರ್ಗಯಾ ||
ತಸ್ಮಾತ್ ಸರ್ವೇಷು ಭೂತೇಷು ದಯಾಂ  ಕುರುತ ಸೌಹೃದಂ |
ಅಸುರಂ ಭಾವ ಮುನ್ಮುಚ್ಯ ಯಯಾ ತುಷ್ಯತ್ಯಧೋಕ್ಷಜಃ ||

"ಎಲೆ ಅಸುರ ಬಾಲಕರೇ,. ಅಚ್ಯುತನಿಗೆ ಪ್ರೀತಿಯುಂಟುಮಾಡುವುದು ಬಹಳ ಪ್ರಯಾಸವಲ್ಲ. ಏಕೆಂದರೆ ಅವನು ಎಲ್ಲ ಜೀವಿಗಳ ಆತ್ಮ. ಅವನು ಎಲ್ಲೆಲ್ಲಿಯೂ ಎಲ್ಲದರಲ್ಲಿಯೂ ಇರುತ್ತಾನೆ. ಗಿಡಮರಗಳಿಂದ ಆರಂಭಿಸಿ ಬ್ರಹ್ಮನವರೆಗೆ ಇರುವ ಸಣ್ಣ ಮತ್ತು ದೊಡ್ಡ ಪ್ರಾಣಿಗಳಲ್ಲಿ,, ಪಂಚ ಭೂತಗಳಿಂದ ಉಂಟಾದ ಪದಾರ್ಥಗಳಲ್ಲಿ, ಪಂಚ ಮಹಾ ಭೂತಗಳಲ್ಲಿ, ಮೂರುಗುಣಗಳಲ್ಲಿ ಮತ್ತು ಅವುಗಳ ಸಾಮ್ಯದಲ್ಲಿ ಅವಿನಾಶಿಯಾದ ಅವನೇ ಇರುತ್ತಾನೆ. ಅವನೇ ಅಂತರ್ಯಾಮಿಯಾದ ದೃಶ್ಯಾದೃಶ್ಯವಾದ ಜಗತ್ತು. ಅವನು ಅನಿರ್ವಚನೀಯ. ವಿಕಲ್ಪರಹಿತ ದ್ರಷ್ಟೃ ದೃಶ್ಯಗಳೆರಡೂ ಅವನೇ. ವ್ಯಾಪ್ಯ (ಜಗತ್ತು) ಮತ್ತು ವ್ಯಾಪಕ (ವ್ಯಾಪಿಸುವವನು) ಎರಡೂ ಅವನೇ. ಅವನು ಕೇವಲಾನಂದ ಸ್ವರೂಪ. ಅವನೇ ಪರಮೇಶ್ವರ. ಗುಣಮಯವಾದ ಸೃಷ್ಟಿಗೆ ಕಾರಣವಾದ ಮಾಯೆಯು ಅವನ ಐಶ್ವರ್ಯ(ಮಹಿಮೆ] ಯನ್ನು ಮುಚ್ಚಿರುತ್ತದೆ. ಆದುದರಿಂದ ಅಸುರ ಭಾವವನ್ನು ಬಿಟ್ಟು ನೀವು ಎಲ್ಲ ಭೂತಗಳಲ್ಲಿಯೂ ದಯೆ ಮತ್ತು ಸೌಹೃದಗಳನ್ನು ತೋರಿಸಿರಿ. ಅದರಿಂದ ಅಧೋಕ್ಷಜನು (ಅಚ್ಯುತನು) ಪ್ರೀತಿಗೊಳ್ಳುತ್ತಾನೆ."

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ:10 ಸಂಚಿಕೆ: 03 1988 ಜನವರಿ ತಿಂಗಳಲ್ಲಿ  ಪ್ರಕಟವಾಗಿದೆ.