Tuesday, December 22, 2020

ಮಹಾಭಾರತವು ‘ಪಂಚಮವೇದ’ ಹೇಗೆ ಆದೀತು? (Mahabharatavu Panncamaveda Hege Aditu?)

ಲೇಖಕರು: ಮೈಥಿಲೀ ರಾಘವನ್
 (ಪ್ರತಿಕ್ರಿಯಿಸಿರಿ lekhana@ayvm.in)




ಪಾಂಡವರು ಜೂಜಾಟದಲ್ಲಿ ಸೋತು ವನವಾಸ ಮಾಡುತ್ತಿದ್ದಾಗ,  ದುರ್ಯೋಧನನು ಪಾಂಡವರ ದುಃಸ್ಥಿತಿಯನ್ನು ಕಣ್ಣಾರೆ ಕಂಡು ಆನಂದಿಸುವ ದುರುದ್ದೇಶದಿಂದ ಅಲ್ಲಿಗೆ ಬಂದನು. ದುರಹಂಕಾರದಿಂದ ವರ್ತಿಸಿ ಅಲ್ಲಿದ್ದ ಗಂಧರ್ವರೊಡನೆ ಯುದ್ಧ ಮಾಡಿ ಪರಾಜಯಗೊಂಡು ಪರಿವಾರಸಮೇತನಾಗಿ ಬಂಧಿಸಲ್ಪಟ್ಟನು.  ಕೌರವಸೇನೆಯಲ್ಲಿದ್ದ ಕೆಲವರು ಹೇಗೋ  ತಪ್ಪಿಸಿಕೊಂಡು ಓಡಿಬಂದು ದುರ್ಯೋಧನನನ್ನು ಕಾಪಾಡೆಂದು ಯುಧಿಷ್ಠಿರನಲ್ಲಿ ಮೊರೆಯಿಟ್ಟರು. ಯುಧಿಷ್ಠಿರನ ಆಜ್ಞೆಯಂತೆ ಅರ್ಜುನಾದಿಗಳು ಗಂಧರ್ವರೊಂದಿಗೆ ಯುದ್ಧಮಾಡತೊಡಗಿದರು. ಕೊನೆಗೆ ಗಂಧರ್ವಮುಖಂಡನಾದ ಚಿತ್ರಸೇನನು ಗೆಳೆಯನಾದ ಅರ್ಜುನನೊಂದಿಗೆ ಸಮಾಧಾನಗೊಂಡು ಧರ್ಮಿಷ್ಠನಾದ ಯುಧಿಷ್ಠಿರನ ಆಶಯದಂತೆ ಕೌರವರೆಲ್ಲರನ್ನೂ ಬಿಡುಗಡೆಮಾಡಿ  ಹಸ್ತಿನಾವತಿಗೆ ಕಳಿಸಿದನು. ಯುದ್ಧದಲ್ಲಿ ಪಲಾಯನಮಾಡಿ ಓಡಿಹೋಗಿದ್ದ ಕರ್ಣನು ಹಿಂದಿರುಗುತ್ತಿದ್ದ ದುರ್ಯೋಧನನನ್ನು ಪ್ರಶಂಸೆ ಮಾಡುತ್ತಾನೆ - "ಎಂತಹ ಪರಾಕ್ರಮಿ ನೀನು! ಗಂಧರ್ವರನ್ನೇ ಸೋಲಿಸಿಬಂದಿದ್ದೀಯೆ!" ಇದನ್ನು ಕೇಳಿ ಅವಮಾನದಿಂದ ಕುಗ್ಗಿದ ದುರ್ಯೋಧನನು ನಡೆದ ವೃತ್ತಾಂತವನ್ನು ತಿಳಿಸಿ  "ಅವಮಾನಿತನಾಗಿ ಬದುಕುವುದಕ್ಕಿಂತಲೂ ಪ್ರಾಯೋಪವೇಶಮಾಡಿ ಪ್ರಾಣತ್ಯಾಗ ಮಾಡುತ್ತೇನೆ" ಎಂದು ಹಠಹಿಡಿದು ಅನ್ನ-ಆಹಾರಗಳನ್ನು ತೊರೆದನು. ಆಗ ಪಾತಾಳದಿಂದ ದೈತ್ಯ-ದಾನವರು ದುರ್ಯೋಧನನನ್ನು ತಮ್ಮಲ್ಲಿಗೆ ಕರೆಸಿಕೊಂಡು "ದುರ್ಯೋಧನ, ನೀನು ನಮ್ಮ ಅಂಶದಿಂದ ದೇವತೆಗಳನ್ನು ಪರಾಜಯಗೊಳಿಸಲು ಹುಟ್ಟಿಬಂದಿದ್ದೀಯೆ. ಹೀಗೆ ಎದೆಗುಂದಿ ಉದ್ದಿಷ್ಟಕಾರ್ಯವನ್ನು ಕೈಬಿಡಬಾರದು. ಬರಲಿರುವ ಯುದ್ಧದಲ್ಲಿ ಕರ್ಣನೇ ಮುಂತಾದವರು ದೈತ್ಯ-ದಾನವರ ಅಂಶದಿಂದ ಕೂಡಿ ನಿನಗೆ ಸಹಾಯಮಾಡುವರು" ಎಂಬುದಾಗಿ ಹುರಿದುಂಬಿಸಿ  ಆಲಿಂಗನಮಾಡಿಕೊಂಡು ಕಳುಹಿಸಿಕೊಟ್ಟರು.

ಭಗವಂತನ ಆಲಿಂಗನೆಯಿಂದ ಭಕ್ತರಲ್ಲಿ ಭಗವದ್ಭಾವವು ತುಂಬುವಂತೆಯೇ ದೈತ್ಯ ಆಲಿಂಗನದಿಂದ ಆತನ ಆಸುರೀಭಾವವು ವೃದ್ಧಿಹೊಂದಿ ಉತ್ಸಾಹದಿಂದ ಮರಳಿಬಂದನು!

ಪಾಂಡವರು ದೈವಾಂಶಸಂಭೂತರೆಂಬುದು ಪ್ರಸಿದ್ಧವೇ ಆಗಿದೆ. ಆದ್ದರಿಂದ ಮಹಾಭಾರತದ  ಮುಖ್ಯಕಥಾಭಾಗವೆಂಬುದು ದೇವಾಸುರರ(ಧರ್ಮಾಧರ್ಮಗಳ) ಮಧ್ಯೆ ನಡೆದ ಘರ್ಷಣೆ-ಯುದ್ಧವೇ ಆಗಿದೆ. ವೇದವು ಹೇಳುವುದೂ ದೇವಾಸುರರ ಸಂಘರ್ಷವನ್ನೇ.

ಅಂತೆಯೇ ಮಹಾಭಾರತವು ಪುರುಷಾರ್ಥಮಯವಾದ ಜೀವನದ ಆವಶ್ಯಕತೆಯನ್ನೂ, ಅಂತಹ ಜೀವನದಿಂದ ಪಡೆಯಬಹುದಾದ ಮಹಾಫಲವನ್ನೂ ಸ್ಪಷ್ಟಪಡಿಸುತ್ತದೆ. ಧರ್ಮಮಯಜೀವನವನ್ನು ನಡೆಸಿದಾಗ ಅರ್ಥ-ಕಾಮಗಳು ತಾವಾಗಿಯೇ ಸಿದ್ಧಿಸುವುವು ಎಂಬುದಾಗಿ ಭಗವಾನ್ವೇದವ್ಯಾಸರು ಸಾರುತ್ತಾರೆ. ಒಟ್ಟಾರೆ, ವೇದಗಳ ಸಾರವನ್ನೇ ಈ ಮಹಾಕಾವ್ಯವು ತಿಳಿಸುವುದರಿಂದ ಪಂಚಮವೇದವೆಂದು ವಿಖ್ಯಾತವಾಗಿದೆ.

ವೇದವೆಂದರೇನು?
ಸೃಷ್ಟಿಮೂಲವಾದ ಪರಂಜ್ಯೋತಿಯೇ ಪರಮಾರ್ಥದಲ್ಲಿ 'ವೇದ'ವೆನಿಸಿಕೊಳ್ಳುತ್ತದೆ. 'ವೇದ'ವೆಂಬುದು('ವಿದಜ್ಞಾನೇ')- ಜ್ಞಾನ(ಪರಂಜ್ಯೋತಿ)ವೆಂಬ ಅರ್ಥವನ್ನೇ ಕೊಡುತ್ತದೆ. 'ಪರಾತ್ಮಾ ವಿಂದತೇ ಏನ ಸ ವೇದೋ ವೇದ ಉಚ್ಯತೇ'(ಪರಮಾತ್ಮ ಯಾವುದರಿಂದ ತಿಳಿಯಲ್ಪಡುತ್ತಾನೆಯೋ ಅದೇ ವೇದ) ಎಂಬ ಆರ್ಷವಾಣಿಯೂ ಇದನ್ನೇ ಪುಷ್ಟೀಕರಿಸುತ್ತದೆ.  ಜ್ಯೋತಿಸ್ವರೂಪವಾದ  'ವೇದದ' ಅನುಭವಸ್ಥಾನದಿಂದ ಹೊರಟು, ಆ ಪರಂಜ್ಯೋತಿಯ ಕಡೆಗೇ ದಿಗ್ದರ್ಶನ ಮಾಡುವ ಮಂತ್ರಸಾಹಿತ್ಯರಾಶಿ ರೂಪದ ವೇದವು ಮುಂದಿನ ಹಂತದಲ್ಲಿ ವೇದವೆಂಬುದಾಗಿ ಕರೆಯಲ್ಪಡುತ್ತದೆ. ಅಂತೆಯೇ ವೇದಮಂತ್ರಗಳ ರೂಪವಿಲ್ಲದಿದ್ದರೂ ಅದರ ಸಾರವನ್ನೇ ಹೇಳುತ್ತಾ ಪರಂಜ್ಯೋತಿಯ ಕಡೆಗೆ ಸಾಗುವ ಕ್ರಮವನ್ನು ನಾನಾ ರೂಪಗಳಲ್ಲಿ ಬಿತ್ತರಿಸುವ ಕಾವ್ಯಗಳನ್ನೂ, ಸಾಹಿತ್ಯಗಳನ್ನೂ ವೇದವೆಂಬುದಾಗಿಯೇ ಕರೆದಿದ್ದಾರೆ ಜ್ಞಾನಿಗಳು. ಈ ವಿಚಾರವನ್ನು ಶ್ರೀರಂಗಮಹಾಗುರುಗಳು ಸರಳಸುಂದರವಾದ ಉದಾಹರಣೆಯ ಮೂಲಕ ತಿಳಿಯಪಡಿಸಿದರು – ತೆಂಗಿನ ಕಾಯೆಂಬುದು ಒಳಗಿನ ಬಿಳಿಯ ತಿರುಳುಮಾತ್ರವೇ. ಆದರೆ ಆ ತಿರುಳನ್ನೊಳಗೊಂಡಿರುವ ಕಾರಣದಿಂದಾಗಿ ಕರಟ-ಮಟ್ಟೆಗಳ ಸಹಿತವಾದದ್ದನ್ನೂ ತೆಂಗಿನಕಾಯೆಂದೇ ವ್ಯವಹರಿಸುತ್ತೇವೆ. ಆದರೆ ತಿರುಳಿನಿಂದ ಬೇರ್ಪಟ್ಟರೆ ಅವುಗಳಿಗೆ ಕರಟ,ಮಟ್ಟೆ ಇತ್ಯಾದಿ ನಾಮಗಳಷ್ಟೇ ಅನ್ವಯವಾಗುವುವು!

ಈ ಕಾರಣದಿಂದಲೇ ಮಹಾಭಾರತವು ಪಂಚಮವೇದವಾದಂತೆಯೇ ನಾಟ್ಯ'ವೇದ', ಆಯು'ರ್ವೇದ' ಮುಂತಾದವುಗಳೂ ಅರ್ಥವತ್ತಾದ ಹೆಸರುಗಳಾಗಿವೆ.

ಸೂಚನೆ: 22/12/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.