Wednesday, November 27, 2019

ಸತ್ಸಂಕಲ್ಪ (Sathsankalpa)

ಲೇಖಕರು: ಶ್ರೀ. ಕೆ. ಎಲ್. ಮಧುಸೂಧನ.  


ಒಂದೂರಿನಲ್ಲಿ ಒಬ್ಬ ನಿರ್ಗತಿಕನಾದ ಯುವಕನಿದ್ದನು ಹಾಗೂ ಭಿಕ್ಷೆಯಂದ ಜೀವನಸಾಗಿಸುತ್ತಿ ದ್ದನು. ಊರೂರಿಗೆ ಸಂಚರಿಸುತ್ತಿದ್ದನು. ಒಮ್ಮೆ ಅವನಿಗೆ ಅನಿರೀಕ್ಷಿತವಾಗಿ ಒಬ್ಬ ಪ್ರಸಿಧ್ಧ ಜ್ಯೋತಿಷಿಯ ಭೇಟಿಯಾಗಿ ತನ್ನ ‘ಕೈ’ ತೋರಿಸಿ ಭವಿಷ್ಯ ಹೇಳಬೇಕೆಂದು ಕೇಳಿಕೊಂಡನು. ಯುವಕನಿಗೆ ಸ್ವಲ್ಪ ಸತ್ಸಂಸ್ಕಾರವಿತ್ತು.  ಜ್ಯೋತಿಷಿಯು ಆತನ ‘ಕೈ’ ನೋಡಿ ಗಾಬರಿಯಿಂದ ಮಾರನೆಯ ದಿನ ಬರಲು ಹೇಳಿದನು. ಯುವಕನಿಗೆ ಸ್ವಲ್ಪ ಆಸೆ ಚಿಗುರೊಡೆಯತು. ರಾತ್ರಿ ಒಂದು ಪಾಳುಗುಡಿಯಲ್ಲಿ ಮಲಗಲುದ್ಯುಕ್ತನಾದನು. ಆದರೆ ನಿದ್ದೆ ಬರಲಿಲ್ಲ. ಅದೊಂದು ವೈಭವದಿಂದ ಮೆರೆದ ಶಿವನ ದೇವಾಲಯವಾಗಿದ್ದಿತು.  ಹಾಗಾಗಿ ಇವನಿಗೆ ಶಿವನಲ್ಲಿ ಭಕ್ತಿಮೂಡಿ ತನಗೆ ಶಕ್ತಿ ಸಾಮರ್ಥ್ಯಗಳನ್ನು ಭಗವಂತನು ಕರುಣಿಸಿದರೆ ತಾನು ಆ ದೇವಾಲಯವನ್ನು ಜೀರ್ಣೋದ್ಧಾರ ಮಾಡುವುದಾಗಿ ಮನಸಿಸನಲ್ಲಿ ಸಂಕಲ್ಪಿಸಿದನು.

ಸ್ವಲ್ಪ ಹೊತ್ತಿಗೆ ಅವನಿಗರಿವಿಲ್ಲದೆಯೇ ನಿದ್ದೆ ಆವರಿಸಿತು. ಮಧ್ಯರಾತ್ರಿರಯಲ್ಲಿ ಇದ್ದಕ್ಕಿದ್ದ ಹಾಗೇ ಭಯಂಕರವಾದ ಶಬ್ದವಾಯತು. ಗಾಬರಿಯಿಂದೆದ್ದು ನೋಡುತ್ತಾನೆ ಇವನ ಪಕ್ಕದಲ್ಲಿಯೇ ಕಲ್ಲಿನ ಕಂಬವೊಂದು ಮುರಿದು ಬಿದ್ದಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಎದ್ದು, ರಾತ್ರಿಯೆಲ್ಲಾ ಹೇಗೋ ಕಳೆದು ಬೆಳಿಗ್ಯೆ ಗ್ರಾಮದ ಕೆರೆಯಲ್ಲಿ ಶೌಚಾದಿ ಕಾರ್ಯ ಮುಗಿಸಿ ಜ್ಯೋತಿಷಿಯ ಬಳಿಸಾರಿದನು. ಇವನು ಬಂದಿದ್ದನ್ನು ನೋಡಿ ಜ್ಯೋತಿಷಿಯು ಆಶ್ಚರ್ಯದಿಂದ ಹಿಂದಿನ ದಿವಸ ಹೇಗೆ ಕಳೆದೆಯೆಂದು ಕೇಳಿದನು. ಆತನು ಯಥಾವತ್ತಾಗಿ ತಿಳಿಸಿದನು. ಆ ಜ್ಯೋತಿಷಿಯು ಯುವಕನಿಗೆ ಆತನ ಆಯಸ್ಸು ಹಿಂದಿನ ದಿನವೇ ಮುಗಿದಿತ್ತೆಂದು ಹೇಳುತ್ತಾನೆ. ನಿನ್ನ ಸತ್ಯಸಂಕಲ್ಪದಿಂದ ನಿನಗೆ ಭಗವಂತನು ಆಯಸ್ಸನ್ನು ಕರುಣಿಸಿದ್ದಾನೆ. ಆದ್ದರಿಂದ ನೀನು ಪುರುಷಪ್ರಯತ್ನ ಮಾಡು, ದೈವಾನುಕೂಲವಾಗಿ ನಿನ್ನ ಅಸೆ ಈಡೇರುತ್ತದೆ ಎಂದನು. ಅವನು ಎಲ್ಲಾ ಭೋಗ ಭಾಗ್ಯಗಳನ್ನನುಭವಿಸಿ, ಧರ್ಮದಿಂದ ಜೀವನ ಸಾಗಿಸಿದನು..

ಪರಮಾತ್ಮನು ನಮ್ಮ ಮನಸ್ಸಿನ ಅಧಿಪತಿಯಾಗಿ ಎಲ್ಲಾ ವ್ಯಾಪಾರಗಳಿಗೆ ಸಾಕ್ಷಿಯಾಗಿರುತ್ತಾನೆ. ಅವನ ನಿಯಮಕ್ಕೊಳಪಟ್ಟು ಒಳಗೆ ಮತ್ತು ಹೊರಗೆ ಶಕ್ತಿರೂಪವಾಗಿ ಕೆಲಸ ಮಾಡುವ ದೇವತೆಗಳು ಶುಭಾಶುಭ ಫಲಗಳನ್ನು ನೀಡುತ್ತಾರೆ. ಒಳ್ಳೆಯ ಭಾವನೆಗಳಿದ್ದಾಗ ಸತ್ಫಲಗಳನ್ನೂ ದುಷ್ಟಾಲೋಚನೆ ಇದ್ದಾಗ ದುಷ್ಫಲವನ್ನು ನೀಡುತ್ತಾರೆ.ನಾವು ದೈವೀ ಶಕ್ತಿಗಳಿಗೆ ವಂಚಿಸಿ ಏನನ್ನೂ ಸಾಧಿಸಲಾಗುವುದಿಲ್ಲ. ಈ ಸತ್ಯವನ್ನು ನಾವು ಸದಾ ನೆನೆಪಿಡಬೇಕು. ಧರ್ಮ ಒಂದಿದ್ದರೆ ಜೀವನದಲ್ಲಿ ಎಲ್ಲವೂ ಇದ್ದಂತೆಯೇ. ಅದಿಲ್ಲವಾದರೆ ಏನೆಲ್ಲಾ ಇದ್ದರೂ ಎಲ್ಲವೂ ಶೂನ್ಯವೇ. ಈ ಮೇಲಿನ ಕಥೆಯಿಂದ ಯಾವುದೇ ಮನುಷ್ಯನು ತನ್ನ ಜೀವನದಲ್ಲಿ ಒಳ್ಳೆಯ ನಿರ್ಧಾರವನ್ನು ಮಾಡಿದವನಾಗಿ ಧರ್ಮಮಯವಾದ ಬಾಳಾಟಕ್ಕಾಗಿ ಜೀವನವನ್ನು ಮುಡುಪಾಗಿಟ್ಟರೆ  ಅವನಿಗೆ ಎಲ್ಲಾ ಅನುಕೂಲವನ್ನು ದೈವವು ಒದಗಿಸಿಕೊಡುತ್ತದೆ.

ಇದು ಮಹರ್ಷಿ ಸಂಸೃತಿಯ ಜೀವನದ ಒಂದು ವಿಚಾರಧಾರೆ. ಅಂತಹ ಸ್ಫೂರ್ತಿಯನ್ನು ನೀಡಿದ ಶ್ರೀರಂಗ ಮಹಾಗುರುಗಳನ್ನು ಸ್ಮರಿಸುತ್ತಾ ಧರ್ಮವೊಂದಿದ್ದರೆ ಅರ್ಥಕಾಮಗಳು ತಾವಾಗಿಯೇ ಸಿದ್ಧಿಸುತ್ತವೆ ಹಾಗೂ ಜೀವನವನ್ನು ಬಂಧನದಿಂದ ಬಿಡುಗಡೆ ಮಾಡಿ ಶಾಶ್ವತ ಶಾಂತಿ ಸೌಖ್ಯಾನಂದ ನೆಲೆಯಾದ ಮೋಕ್ಷದಲ್ಲಿಯೇ ನಿಲ್ಲಿಸುತ್ತದೆ ಎಂಬುದನ್ನು ತಿಳಿಸುತ್ತಾ ಅತ್ತ ಕಡೆ ಭಾರತ ನಾಡಿನ ಜನರು ಸಾಗುವಂತಾಗಲಿ ಎಂದು ಅಶಿಸೋಣ.   

ಸೂಚನೆ:  27/11/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.