ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಅರ್ಜುನನು ಅಸ್ತ್ರಗಳನ್ನು ಬೇಡಿದನಷ್ಟೆ. ಅದಕ್ಕೆ ಇಂದ್ರನು ಹೀಗೆ ಹೇಳಿದನು:
"ಪಾಂಡವನೇ, ಯಾವ ಕಾಲಕ್ಕೆ ಮಹಾದೇವನು ನಿನ್ನ ವಿಷಯದಲ್ಲಿ ಪ್ರಸನ್ನನಾಗುವನೋ, ಆಗ ನಿನಗೆ ಎಲ್ಲ ಪ್ರಕಾರದ ಅಸ್ತ್ರಗಳನ್ನೂ ನಾ ಕೊಡುವೆ. ಅಂತಹ ಸಮಯವು ಎಂದು ಬರುವುದೆಂಬುದನ್ನು ನಾ ಬಲ್ಲೆ, ಅರ್ಜುನಾ: ನಿನ್ನ ಮಹಾತಪಸ್ಸಿನಿಂದ ಸಂತುಷ್ಟನಾಗಿ ನಾನು ನಿನಗೆ ಆಗ್ನೇಯಾಸ್ತ್ರ ಹಾಗೂ ವಾಯವ್ಯಾಸ್ತ್ರಗಳನ್ನು ಸಂಪೂರ್ಣವಾಗಿ ಕೊಡಲಿರುವೆ. ಅದೇ ಸಮಯಕ್ಕೇ ನೀನು ನನ್ನ ಎಲ್ಲ ಅಸ್ತ್ರಗಳನ್ನೂ ಪಡೆಯುವೆ."
ಆಗ ಕೃಷ್ಣನೂ ವರವೊಂದನ್ನು ಕೇಳಿ ಪಡೆದನು – "ಪಾರ್ಥನೊಂದಿಗೆ ನನ್ನ ಪ್ರೀತಿಯು ಶಾಶ್ವತವಾಗಿ ಇರುವಂತಹುದಾಗಬೇಕು" ಎಂದು. ಇಂದ್ರನು ಆ ವರವನ್ನಿತ್ತನು.
ಹೀಗೆ ಅವರಿಬ್ಬರಿಗೂ ವರಗಳನ್ನಿತ್ತು, ಅಗ್ನಿದೇವನ ಅನುಜ್ಞೆಯನ್ನೂ ಸಂಪಾದಿಸಿಕೊಂಡು, ತನ್ನ ಸ್ವರ್ಗಕ್ಕೆ ಹೊರಟುಹೋದನು, ಇಂದ್ರ.
ಆ ಬಳಿಕ ಮೃಗ-ಪಕ್ಷಿ-ಸಮೇತವಾಗಿ ಆ ಕಾಡನ್ನುಅಗ್ನಿಯು ಒಟ್ಟಾರೆ ದಹಿಸಿದನು. ಮತ್ತು ಸಂಪೂರ್ಣವಾಗಿ ತೃಪ್ತಿಗೊಂಡವನಾಗಿ ಆರು ದಿನಗಳ ಕಾಲ ಅಲ್ಲೇ ವಿಶ್ರಾಂತಿ ತೆಗೆದುಕೊಂಡನು.
ಮಾಂಸಭಕ್ಷಣವನ್ನು ಮಾಡಿ, ಮೇದಸ್ಸು-ರಕ್ತಗಳನ್ನು ಪಾನಮಾಡಿ, ಪರಮಸಂತೋಷದಿಂದ ಕೂಡಿದವನಾಗಿದ್ದ ಅಗ್ನಿಯು, ಕೃಷ್ಣಾರ್ಜುನರನ್ನು ಕುರಿತು ಹೀಗೆ ಹೇಳಿದನು:
"ನೀವಿಬ್ಬರೂ ಪುರುಷಶ್ರೇಷ್ಠರು. ನನಗೆ ತೃಪ್ತಿಯಾಗುವಷ್ಟು ಸಂತೋಷವುಂಟುಮಾಡಿದ್ದೀರಿ. ನಿಮಗೆ ನಾನು ಅನುಮತಿಯನ್ನು ನೀಡುತ್ತಿದ್ದೇನೆ. ನಿಮಗೆ ಎಲ್ಲಿಷ್ಟವೋ ಅಲ್ಲಿ ಓಡಾಡಿಕೊಂಡಿರಿ." – ಎಂದು.
ಅಗ್ನಿಯು ಹೀಗೆ ಅನುಮತಿಸಲಾಗಿ, ಅರ್ಜುನ-ವಾಸುದೇವರು ಹಾಗೂ ದಾನವನಾದ ಮಯ – ಈ ಮೂವರೂ ಯಥೇಷ್ಟವಾಗಿ ಸುತ್ತಾಡಿ, ರಮಣೀಯವಾದ ನದೀತಟದಲ್ಲಿ ಒಟ್ಟಿಗೆ ಕುಳಿತರು.
ಆ ಬಳಿಕ, ಕೃಷ್ಣ-ಸಂನಿಧಿಯಲ್ಲಿ ಕುಳಿತ ಮಯನು ಅರ್ಜುನನನ್ನು ಮತ್ತೆ ಮತ್ತೆ ಪ್ರಶಂಸಿಸಿ, ಕೈಜೋಡಿಸಿ, ಮಧುರವಾದ ಮಾತಿನಿಂದ ಹೀಗೆ ನುಡಿದನು:
"ಶ್ರೀಕೃಷ್ಣನು ನನ್ನ ವಿಷಯದಲ್ಲಿ ಬಹಳವೇ ಕೋಪಗೊಂಡಿದ್ದನು. ಅಗ್ನಿಯಂತೂ ಸುಡಬಯಸಿದ್ದನು. ಹಾಗಿರುವಲ್ಲಿ ಈ ಇಬ್ಬರ ದೆಸೆಯಿಂದಲೂ ನನ್ನನ್ನು ಕಾಪಾಡಿದ್ದೀರಿ. ನಿಮಗಾಗಿ ನಾನು ಯಾವ ಸೇವೆಯನ್ನು ಮಾಡಿಕೊಡಲಿ?"
ಅದಕ್ಕೆ ಅರ್ಜುನನು ಹೇಳಿದನು:
"ಮಹಾಸುರನೇ, ನೀನು ಮಾಡಬೇಕಾದದ್ದನ್ನೆಲ್ಲಾ ಮಾಡಿದ್ದೀಯೆ. ಹೋಗಿ ಬಾ. ನಿನಗೆ ಮಂಗಳವಾಗಲಿ. ನಮ್ಮ ವಿಷಯದಲ್ಲಿ ನೀನು ಪ್ರೀತಿಯುಳ್ಳವನಾಗಿರು. ನಾವೂ ನಿನ್ನ ವಿಷಯದಲ್ಲಿ ಸಂತೋಷದಿಂದಿದ್ದೇವೆ."
ಅದಕ್ಕೆ ಮಯನು ಹೇಳಿದನು:
"ಪುರುಷಶ್ರೇಷ್ಠನೇ, ನೀನು ಹೇಳಿರುವುದೆಲ್ಲಾ ಯುಕ್ತವೇ ಆಗಿದೆ. ಆದರೂ ಸಹ ಪ್ರೀತಿಪೂರ್ವಕವಾಗಿ ನಾನೇನನ್ನಾದರೂ ತಮಗಾಗಿ ಮಾಡಬಯಸುತ್ತೇನೆ.
ನಾನು ದಾನವರ ವಿಶ್ವಕರ್ಮ. ಶಿಲ್ಪವಿದ್ಯಾ-ನಿಪುಣ. ನಿನಗೋಸ್ಕರವಾಗಿ ಏನನ್ನಾದರೂ ಮಾಡಲು ಇಚ್ಛಿಸುತ್ತೇನೆ. ಹಿಂದೆ ನಾನು ದಾನವರಿಗಾಗಿ ಅನೇಕ ಪ್ರಾಸಾದಗಳನ್ನು, ಎಂದರೆ ಅರಮನೆಗಳನ್ನು, ಕಟ್ಟಿಕೊಟ್ಟಿರುವೆನು.
ಸುಖಸಾಧನವೂ ರಮಣೀಯವೂ ಭೋಗಭರಿತವೂ ಆದ ನಿರ್ಮಾಣಗಳು ಅವು. ಹಾಗೆಯೇ ರಮ್ಯವಾದ ಉದ್ಯಾನಗಳು, ಬಗೆಬಗೆಯ ಸರೋವರಗಳು, ವಿಚಿತ್ರವಾದ ಶಸ್ತ್ರಗಳು ಹಾಗೂ ಎಲ್ಲೆಂದರಲ್ಲಿಗೆ ಹೋಗಬಲ್ಲ ರಥಗಳು, ಅಟ್ಟಗಳು-ಪ್ರಾಕಾರಗಳು-ತೋರಣಗಳು - ಇವುಗಳಿಂದ ಕೂಡಿದ ವಿಶಾಲನಗರಿಗಳು, ಹಾಗೂ ಸಹಸ್ರಾರು ಸಂಖ್ಯೆಯಲ್ಲಿರುವ ಮುಖ್ಯವೂ ವಿಚಿತ್ರವೂ ಆದ ವಾಹನಗಳು, ರಮಣೀಯವಾದ ಸುಖಪ್ರದ ಸುರಂಗಗಳು - ಇವೆಲ್ಲವನ್ನೂ ನಿರ್ಮಿಸಿಕೊಟ್ಟಿದ್ದೇನೆ. ಅದಕ್ಕೇ ತಮಗೂ ಏನನ್ನಾದರೂ ಮಾಡಿಕೊಡಲು ನಾನು ಇಚ್ಛಿಸುತ್ತೇನೆ" - ಎಂದನು.
ಅದಕ್ಕೆ ಅರ್ಜುನನು ಹೇಳಿದನು: "ಪ್ರಾಣಸಂಕಟವೊಂದರಿಂದ ನಾನು ನಿನ್ನನ್ನು ಬಿಡಿಸಿರುವೆನೆಂಬ ಭಾವನೆಯಿಂದ ನೀನು ನನಗೇನನ್ನಾದರೂ ಮಾಡಿಕೊಡಬೇಕೆಂದಿರುವೆ. ಎಂದೇ ನಿನ್ನಿಂದ ಏನನ್ನಾದರೂ ಮಾಡಿಸಿಕೊಳ್ಳಬೇಕೆಂದು ನನಗನ್ನಿಸುವುದಿಲ್ಲ" - ಎಂದನು.
ಸೂಚನೆ : 25/5/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.