Sunday, May 25, 2025

ಧರ್ಮ, ಯುದ್ಧ, ಮತ್ತು ಧರ್ಮಯುದ್ಧ: ಒಂದು ವಿಮರ್ಶೆ (Dharma, Yuddha, Mattu Dharmayuddha: Ondu Vimarshe)

ಲೇಖಕರು : ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)


ನಮ್ಮ ಪುರಾಣ-ಇತಿಹಾಸಗಳಲ್ಲಿ ಬಹಳ ಪ್ರಸಿದ್ಧವಾದ ಯುದ್ಧವೆಂದರೆ ಮಹಾಭಾರತದ ಯುದ್ಧವಷ್ಟೆ? ೧೮ ಅಕ್ಷೌಹಿಣೀಸೈನ್ಯವು, ಎಂದರೆ ಸುಮಾರು ೪ ಲಕ್ಷ ಸೈನಿಕರು, ಅದರಲ್ಲಿ ಹತರಾದರು ಎಂದು ಆ ಗ್ರಂಥ ಹೇಳುತ್ತದೆ. ಆಗಿನ ಕಾಲದ ವಿಶ್ವಯುದ್ಧವೇ ಅದಾಗಿತ್ತೆನ್ನಬಹುದು. ಮಹಾಭಾರತದ ಯುದ್ಧಕ್ಕೆ ಹಲವಾರು ಕಾರಣಗಳಿದ್ದವಾದರೂ, ಮುಖ್ಯವಾವುದು?

ನೇರಕಾರಣವೆಂದರೆ ಪಾಂಡವರ ಭಾಗದ ರಾಜ್ಯವನ್ನು ಅವರು ವನವಾಸ-ಅಜ್ಞಾತವಾಸಗಳನ್ನು ಮುಗಿಸಿ ಬಂದ ನಂತರ ಷರತ್ತಿನಂತೆ ಅವರಿಗೆ ಹಿಂದಿರುಗಿಸದಿದ್ದದ್ದು ಎನ್ನಬಹುದು. ಆದರೆ ಅವರು ಕಾಡಿಗೆ ಹೋದದ್ದೇಕೆ? ದುರ್ಯೋಧನನು ತನ್ನ ಸೋದರಮಾವ ಶಕುನಿಯ ಸಹಾಯದಿಂದ ಆಡಿಸಿದ ಮೋಸದ ಪಗಡೆಯಾಟಕ್ಕೆ ಅವರು ಸೋತದ್ದರಿಂದ. ಧೃತರಾಷ್ಟ್ರನು ಅದನ್ನು ತಡೆಯಲಿಲ್ಲ. ದುಃಶಾಸನನು ದ್ರೌಪದಿಯ ವಸ್ತ್ರಹರಣಕ್ಕೆ ಪ್ರಯತ್ನಿಸಿದ. ಕರ್ಣನು ಅವಳನ್ನು ದಾಸಿ ಎಂದು ಕರೆದ. ಯುಧಿಷ್ಠಿರಾದಿಗಳನ್ನು ಕೌರವಪಕ್ಷದ ಹಲವರು ಅಪಮಾನಗೊಳಿಸಿದರು. ಭೀಷ್ಮಾದಿಗಳು ನ್ಯಾಯಕ್ಕಾಗಿ ನಿಲ್ಲಲಿಲ್ಲ. ಹೀಗೆ ಹಲವಾರು ಜನರು ಆನುಷಂಗಿಕವಾಗಿ ಪಾಂಡವರ ಆ ಸೋಲಿಗೂ ಅಪಮಾನಕ್ಕೂ ಕಾರಣರಾದರೂ, ಆ ಸಭೆಯಲ್ಲಾದ ಅನ್ಯಾಯದ ಆಟಕ್ಕೆ ಮೂಲಕಾರಣ ದುರ್ಯೋಧನನೇ ಸರಿ. ಎಲ್ಲಕ್ಕೂ ಮೂಲದಲ್ಲಿದ್ದದ್ದು ಅವನ ಅಸೂಯೆ.

ಚಿಕ್ಕಂದಿನಿಂದಲೇ ದುರ್ಯೋಧನನಿಗೆ ಪಾಂಡವರ ಬಗೆಗೇ, ವಿಶೇಷವಾಗಿ ಭೀಮನ ಬಗ್ಗೆ, ಅಳೆಯಲಾರದಷ್ಟು ಅಸೂಯೆಯಿದ್ದಿತು. ಆ ಕಾರಣಕ್ಕೇ ಬಾಲ್ಯದಲ್ಲಿಯೇ ಭೀಮನನ್ನು ಕೊಲ್ಲಲು, ಕೊಲ್ಲಿಸಲು ಅವನು ಹಲವು ಅಸಫಲ ಪ್ರಯತ್ನಗಳನ್ನು ಮಾಡಿದ್ದು. ಯೌವನಾವಸ್ಥೆಯಲ್ಲಿ ಅವನು ವಾರಣಾವತದಲ್ಲಿ ಅರಗಿನ ಮನೆ ಕಟ್ಟಿಸಿ ಅದರಲ್ಲಿ ಪಾಂಡವರೆಲ್ಲರನ್ನೂ ಸುಡಿಸಿಲೆಳಸಿದನು. ಪಾಂಡವರ ಅದೃಷ್ಟದಿಂದಲೂ, ವಿದುರನ ಚಾಕಚಕ್ಯತೆಯಿಂದಲೂ ಅವರೆಲ್ಲರೂ ಆ ಪ್ರಾಣಾಪಾಯವನ್ನು ತಪ್ಪಿಸಿಕೊಂಡರು. ಮೇಲಾಗಿ ಇವೆಲ್ಲದರ ನಂತರ ದ್ರೌಪದಿಯನ್ನು ಪಾಂಡವರು ಮದುವೆಯಾಗುವಂತಾಯಿತು. ಅವರು ಬದುಕುಳಿದದ್ದಲ್ಲದೆ ಯಶಸ್ವಿಗಳಾಗಿ ದ್ರುಪದನಂತಹ ಬಲಶಾಲಿ ರಾಜನ ಬಾಂಧವ್ಯ ದೊರೆತುದುದರಿಂದ ಧೃತರಾಷ್ಟ್ರನು ಅವರಿಗೆ ಅರ್ಧರಾಜ್ಯ ಕೊಡಲೇಬೇಕಾಯಿತು.

ಪಾಂಡವರ ಅಭಿವೃದ್ಧಿಯಿಂದಾಗಿ ಸುಯೋಧನನ ಅಸೂಯೆ ಬೆಳೆಯುತ್ತಲೇ ಹೋಗುವಂತಾಯಿತು. ಖಾಂಡವಪ್ರಸ್ಥ ಇಂದ್ರಪ್ರಸ್ಥವಾಯಿತು. ಯುಧಿಷ್ಠಿರನು ರಾಜಸೂಯಯಾಗವನ್ನು ಸಫಲವಾಗಿ ಮಾಡುವಂತಾಯಿತು. ದಾಯಾದಿಯಾದ ದುರ್ಯೋಧನನಿಗೆ ಅಲ್ಲಿ ಸಿಕ್ಕ ಜವಾಬ್ದಾರಿಯಾದರೂ ಏನು? ಬಂದ ರಾಜರುಗಳ ಕಪ್ಪಕಾಣಿಕೆಗಳನ್ನು ಸ್ವೀಕರಿಸಿ ರಾಜ್ಯಕೋಶಕ್ಕೆ ಜಮಾ ಮಾಡುವುದು! ಅಲ್ಲಿ ಬಂದು ಸುರಿದ ಧನಸಂಪತ್ತು ಅವನಲ್ಲಿ ಆಗಲೇ ಧಗಧಗಿಸುತ್ತಿದ್ದ ಅಸೂಯಾಗ್ನಿಗೆ ಆಜ್ಯವಾಯಿತು. ಇದಕ್ಕೆ ಮತ್ತೂ ಗಾಳಿ ಹಾಕಿದುದು ಅವನು ಆ ಮಯನಿರ್ಮಿತ ಅರಮನೆಯಲ್ಲಿ ದಂಗಾಗಿ ಎಡವಿ ಬಿದ್ದಾಗ ಆದ ಅವಮಾನ.

ಹೀಗೆ ಅಸೂಯೆಯೇ ಮೂರ್ತಿವೆತ್ತಂತಿದ್ದ ದುರ್ಯೋಧನನು ಪಾಂಡವರ ರಾಜ್ಯವನ್ನು ಮೋಸದಿಂದಾದರೂ ಕಿತ್ತುಕೊಳ್ಳಲು ಹೊಂಚು ಹಾಕಿದುದರಲ್ಲಿ ಆಶ್ಚರ್ಯವೇ ಇಲ್ಲ. ಅಧರ್ಮದ ಮುಂದೆ ಋಜುಧರ್ಮದಿಂದ ನಡೆದವರಿಗೆ ದೊರೆಯಲೇಬೇಕಾದ ಅನುಭವ ಪಾಂಡವರಿಗೆ ದೊರೆಯುವಂತಾಯಿತು. ೧೨ ವರ್ಷಗಳ ವನವಾಸವನ್ನೂ ಒಂದು ವರ್ಷದ ಅಜ್ಞಾತವಾಸವನ್ನೂ ತೀರಿಸಿ ಬಂದರವರು. ಆದರೂ ದುರ್ಯೋಧನನು ಪಾಂಡವರ ಪಾಲನ್ನು ಹಿಂದಿರುಗಿಸುವಂತೆ ಕಾಣಲಿಲ್ಲ.

ಆಯಿತು, ಭಗವಂತ ಶ್ರೀಕೃಷ್ಣನು ಧರ್ಮವನ್ನೇ ಪಾಲಿಸುತ್ತಾ ಸಾಮಮಾರ್ಗದಲ್ಲಿ ಸಂಧಾನಕಾರ್ಯವನ್ನೂ ಪ್ರಯತ್ನಿಸಿದ. ಅದು ಕೆಲಸ ಮಾಡದಿದ್ದಾಗ ದಾನವಾಗಿ, ಅರ್ಧರಾಜ್ಯದ ಬದಲು ಕೇವಲ ಐದು ಹಳ್ಳಿಗಳನ್ನು ಪಾಂಡವರಿಗಾಗಿ ಕೇಳಿದ. ದುರ್ಯೋಧನನು ಸೂಜಿಮೊನೆಯಷ್ಟೂ ಭೂಮಿಯನ್ನು ತಾನು ಕೊಡಲೊಲ್ಲೆ ಎಂದಾಗ ಭೇದಮಾರ್ಗ ಪ್ರಯತ್ನಿಸಿ, ಕರ್ಣನನ್ನು ದುರ್ಯೋಧನನಿಂದ ಬೇರ್ಪಡಿಸಲು ಯತ್ನಿಸಿದ ಶ್ರೀಕೃಷ್ಣ. ಹೇಗೆ? ಕರ್ಣನ ಜನ್ಮದ ರಹಸ್ಯವನ್ನು ಅವನಿಗೆ ತಿಳಿಸಿ ಕುಂತೀಪುತ್ರರಲ್ಲಿ ಅವನು ಹಿರಿಯನೆಂದೂ ಪಾಂಡವರು ಅವನನ್ನು ತಮ್ಮ ಅಗ್ರಜನೆಂದು ಒಪ್ಪುವರೆಂದೂ ಹೇಳಿ ಕರ್ಣನನ್ನು ಪಾಂಡವರ ಪಕ್ಷಕ್ಕೆ ತರಬಯಸಿದ. ಸುಯೋಧನನಿಗೆ ಋಣಿಯಾದ ಕರ್ಣನು ಒಪ್ಪದಿದ್ದದ್ದರಿಂದ ಆ ಪ್ರಯತ್ನವೂ ವಿಫಲವಾಯಿತು. ಸಾಮ-ದಾನ-ಭೇದಗಳೆಲ್ಲ ನಡೆಯದಾದಾಗಲೇ ಕೊನೆಯ ಉಪಾಯವಾದ ದಂಡವನ್ನು ತರಬೇಕಾಯಿತು. ಅದುವೇ ಯುದ್ಧ.

ಎರಡೂ ಪಕ್ಷಗಳು ಕುರುಕ್ಷೇತ್ರದಲ್ಲಿ ಎದುರುಬದುರು ನಿಂತಾಗ, ಅರ್ಜುನನ ಅರ್ಧಂಬರ್ಧ ಜ್ಞಾನ ಹೊರಬಂದಿತು. ವೀರನೂ ತಿಳಿವಳಿಕೆಯುಳ್ಳವನೂ ಆದ ಅರ್ಜುನನಿಗೂ ಅಂತಹ ಸಂದರ್ಭದಲ್ಲಿ ಸಂಶಯವೇರ್ಪಟ್ಟಿದ್ದು ಅಚ್ಚರಿಯೇನಲ್ಲ. ಆದರೆ ಆ ಸಂಶಯನಿವಾರಣೆಗೆ ಭಗವಂತನೇ ಅವನಿಗೆ ಮಾರ್ಗದರ್ಶಿಯಾಗಿ ಸಿಕ್ಕಿದುದರಿಂದ ಕೊನೆಗೆ ಅವನಿಗೆ ಮನಸ್ಸು ತಿಳಿಯಾಗಿ ತನ್ನ ಕರ್ತವ್ಯ ಮಾಡಲು ಮುನ್ನಡೆಯುವಂತಾಯಿತು.

ಈ ಬಗ್ಗೆ ಶ್ರೀರಂಗಮಹಾಗುರುಗಳು ಕೊಟ್ಟ ಮಾರ್ಮಿಕವಾದ ವಿವರಣೆಯ ಸಂಗ್ರಹ ಹೀಗಿದೆ: ದುರ್ಯೋಧನನು ಧರ್ಮವನ್ನು ಕಾಡಿಗೆ ಅಟ್ಟಿ ಅದು ಅಜ್ಞಾತವಾಸ ಮಾಡಬೇಕು ಎನ್ನುವಂತೆ ಮಾಡಿದ. ಹಾಗೂ ಇದ್ದದ್ದಾಯಿತು. ಐವರು ಪಾಂಡವರು ಜ್ಞಾನೇಂದ್ರಿಯಗಳಂತೆ - ಅವಕ್ಕೆ ಒಂದಿಷ್ಟು ಜಾಗ ಕೊಡು ಎಂದರೆ ದುರ್ಯೋಧನನು ಜ್ಞಾನಕ್ಕೆ ಜ್ಞಾನೇಂದ್ರಿಯಗಳಿಗೆ ಧರ್ಮಕ್ಕೆ ಒಂದಿಷ್ಟೂ ಸ್ಥಳ ಕೊಡುವುದಿಲ್ಲವೆಂದನು. ಹೀಗೆ ಜ್ಞಾನಕ್ಕೆ ಸ್ಥಾನಕೊಡದೆ ಅಂಧನ ನೂರೊಂದು ಮಕ್ಕಳು, ಎಂದರೆ ನೂರೊಂದು ನಾಡಿಗಳು, ಆಕ್ರಮಿಸಿ ನಿಂತಿದ್ದವು. ದುರ್ಯೋಧನನ ದುರ್ಗುಣಗಳನ್ನು ಹೀಗೇ ಬಿಟ್ಟರೆ ರಾಜ್ಯಕ್ಕೆ, ಎಂದರೆ ಜೀವಿಗಳಿಗೇ, ಅಪಾಯ ಎಂದು ತಿಳಿದು ಭಗವಂತನು ಧರ್ಮಸ್ಥಾಪನೆಗೆ ಬೇಕಾದ ಯುದ್ಧಕ್ಕೆ ತನ್ನ ಬೆಂಬಲವನ್ನು ಮಾರ್ಗದರ್ಶನದ ಮೂಲಕ ಒದಗಿಸಿದನು.

ಹೀಗೆ "ಕಿಂ ನೋ ರಾಜ್ಯೇನ ಗೋವಿಂದ" (ರಾಜ್ಯದಿಂದ ನಮಗಾಗಬೇಕಾದುದೇನು?) ಎಂದು ಕೇಳಿದ ಅರ್ಜುನನು "ಸ್ಥಿತೋಽಸ್ಮಿ ಗತಸಂದೇಹಃ" (ಸಂದೇಹದಿಂದ ಮುಕ್ತನಾಗಿ ನಿಂತಿದ್ದೇನೆ) ಎಂದು ಹೇಳುವ ತನಕ ಧರ್ಮಸ್ಥಾಪನೆಗಾಗಿ ಭಗವಂತನು ಅವನನ್ನು ಕರೆದುತಂದ. ಧರ್ಮ-ಅಧರ್ಮಗಳ ಮಧ್ಯೆ ಸೆಣಸಾಟವಾಗಿದ್ದಾಗ, ಅಸ್ಥಾನ-ಸ್ನೇಹ-ಕಾರುಣ್ಯ - ಎಂದರೆ ತೋರಿಸಬಾರದ ಜಾಗದಲ್ಲಿ ಸ್ನೇಹ-ಕರುಣೆಗಳನ್ನು ತೋರಿಸುವುದು - ಸಲ್ಲದು. ದೈವೀಸಂಪತ್ತಿನ ನೆಲೆವೀಡಾದ ಭಾರತಭೂಮಿಯ ಆ ಸಂಪತ್ತು ಅಸುರರ/ಅಧರ್ಮದ ಪಾಲಾಗಬಾರದೆಂಬ ಕಾರಣದಿಂದಲೇ ಈ ಯುದ್ಧವು ನಡೆಯಬೇಕಾದುದು - ಎಂಬುದಾಗಿ ಅರ್ಜುನನು ಮನಗಾಣುವಂತಾಯಿತು.

ಮತ್ತೊಂದು ಯುದ್ಧದ ಸಂದರ್ಭವನ್ನು ನಾವೆಲ್ಲರೂ ನೋಡುತ್ತಿದ್ದೇವೆ. ದುರ್ಯೋಧನನ ಅಸೂಯೆ, ಯುದ್ಧ, ಅರ್ಜುನನು ಪಾಲಿಸಿದ ಕರ್ತವ್ಯ ಇತ್ಯಾದಿಗಳನ್ನು ಕುರಿತ ಈ ಮೇಲೆ ಮಾಡಿದ ವಿಮರ್ಶೆಗೂ, ಇಂದು ಭಾರತವೆದುರಿಸುತ್ತಿರುವ ಸ್ಥಿತಿಗೂ ಹಲವು ಸಾಮ್ಯಗಳು ನಮ್ಮ ಮನಸ್ಸಿಗೆ ತಾವೇತಾವಾಗಿ ಬರುತ್ತವೆ.

"ನಿನ್ನ ಕರ್ತವ್ಯವೆಂದು ಧರ್ಮಕ್ಕಾಗಿ ಯುದ್ಧಮಾಡು" ಎಂದು ಉಪದೇಶಿಸಿರುವ ಶ್ರೀಕೃಷ್ಣನ ಮಾತುಗಳು ನಮಗೆ ದಾರಿದೀಪವಲ್ಲವೇ?


ಸೂಚನೆ : 24/05/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.