Sunday, May 25, 2025

ಕೃಷ್ಣಕರ್ಣಾಮೃತ 64 ಬಿಳೀಸಮುದ್ರವನ್ನುಕ್ಕಿಸುವ ಕರೀಚಂದ್ರ! (Krishakarnamrta 64)


ಲೇಖಕರು :
 ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ನಮ್ಮ ಮನಸ್ಸು ಚಂಚಲವೆಂಬುದು ನಮಗೆಲ್ಲ ಗೊತ್ತಿರುವ ವಿಷಯವೇ. ಆದರೆ ಕೆಲವು ಧನ್ಯರಿರುತ್ತಾರೆ. ಅವರ ಮನಸ್ಸು ಅವಿಚಲ, ಎಂದರೆ ಅತ್ಯಂತ-ನಿಶ್ಚಲ. ಅಂತಹ ಮನಸ್ಸಿನಿಂದ ಅವರು ಅನುಚುಂಬಿಸಿದರು, ಶ್ರೀಕೃಷ್ಣನನ್ನು. ಅನುಚುಂಬನವೆಂದರೆ ಮತ್ತೆ ಮತ್ತೆ ಮುತ್ತಿಡುವುದು. "ಮನಸ್ಸಿನಿಂದ ಅನುಚುಂಬಿಸುವುದು" - ಎಂದರೆ ಮತ್ತೇನು, ಚೆನ್ನಾಗಿ ಧ್ಯಾನಿಸುವುದೆಂದೇ.

ಯಾವುದನ್ನು ಅವರು ಧ್ಯಾನಿಸಿದುದು? ಕೃಷ್ಣನ ಮಧುರಿಮ-ಶ್ರಿಯನ್ನು - ಅರ್ಥಾತ್ ಮಾಧುರ್ಯ-ಲಕ್ಷ್ಮಿಯನ್ನು. ಎಂದರೆ ಮಧುರತೆಯ ಸಂಪತ್ತನ್ನು. ಕೃಷ್ಣನಾದರೂ ಮನುಜಾಕೃತಿಯನ್ನು - ಎಂದರೆ ಮನುಷ್ಯ ಶರೀರವನ್ನು - ಧರಿಸಿದ ವಿಭುವಲ್ಲವೇ?

ಆತನ ಆ ರೂಪಸಿರಿಯನ್ನು ಮನಸ್ಸಿನಿಂದ ಮುಟ್ಟುವಾಗ, ಅವರ ಬಾಯಿಂದ ಕೆಲವು ಉದ್ಗಾರಗಳು ಹೊರಟವು. ಏನೆಂದು? "ಹೇ ದೇವ, ಹೇ ಕೃಷ್ಣ, ಹೇ ದಯಿತ!" - ಎಂಬುದಾಗಿ. ದಯಿತನೆಂದರೆ ಪ್ರಿಯ ಎಂದೇ. ದೇವ-ಕೃಷ್ಣ-ದಯಿತ! ಎಂಬುದೇ ಅವರ ಜಲ್ಪವಾಗಿತ್ತು. ಸಾಧಾರಣವಾಗಿ ಜಲ್ಪವೆಂದರೆ ಹರಟೆ, ಅಥವಾ ಏನೇನೋ ಮಾತನಾಡುವುದು. ಇಲ್ಲಿ ಹಾಗಲ್ಲ. ಜಲ್ಪವೆಂದರೆ ಅಂತರ್ಮುಖರಾಗಿರುವವರ ಮುಖದಿಂದ ಹೊಮ್ಮುವ ಈ ತೆರನ ಉದ್ಗಾರಗಳು.

ಅಂತಹ ಪರವಶ-ಸ್ಥಿತಿಗಳು ನನ್ನಲ್ಲಿಯೂ ಉಂಟಾಗುವುವಲ್ಲವೇ, ಎಂದಾದರೂ? - ಎಂದು ಬಯಸಿ ಬಯಸಿ ಕೇಳಿಕೊಳ್ಳುತ್ತಿದ್ದಾನೆ, ಲೀಲಾಶುಕ ಕವಿ. ಕೃಷ್ಣದರ್ಶನಾನುಭವಗಳ ಹಂಬಲಿಕೆ, ನಮ್ಮ ಕವಿಗೆ.

ಅನುಚುಂಬತಾಂ ಅವಿಚಲೇನ ಚೇತಸಾ/
ಮನುಜಾಕೃತೇರ್ ಮಧುರಿಮ-ಶ್ರಿಯಂ ವಿಭೋಃ |
ಅಯಿ ದೇವ ಕೃಷ್ಣ ದಯಿತೇತಿ ಜಲ್ಪತಾಂ/
ಅಪಿ ನೋ ಭವೇಯುರ್ ಅಪಿ ನಾಮ ತಾದೃಶಾಃ ||


ಮತ್ತೊಂದು ಶ್ಲೋಕ:

ಎಂದು ಕಾಣುವೆ ಕೃಷ್ಣನನ್ನು? - ಎಂದು ಕೇಳುತ್ತಿದ್ದಾನೆ, ಲೀಲಾಶುಕ. ಎಂತಹವನು ಕೃಷ್ಣ? ಆತನು ವಿಶಾಲ-ಲೋಚನ - ಎಂದರೆ ಅಗಲವಾದ ಕಣ್ಣುಳ್ಳವನು. ಆಯತವಾದ ನಯನಗಳೆಂದರೆ ಆಕರ್ಷಣಾತಿಶಯವೇ. ಅಂತಹ ಕಣ್ಣುಗಳು ನಮ್ಮ ಕಣ್ಣುಗಳನ್ನು ಸೆಳೆಯುವುವೇ.

ಆತನು ವಿಶಿಷ್ಟವಾಗಿ ಕಿಶೋರನಾಗಿ ತೋರಿದುದು ಕೃಷ್ಣಾವತಾರದಲ್ಲೇ, ಅಲ್ಲವೇ? ಆ ಕಿಶೋರ-ವೇಷವು ಬಹಳವಾಗಿಯೇ ಆಕರ್ಷಿಸಿತು, ಗೋಪಿಕೆಯರನ್ನು. ಅವರಿಗೆ ಬಹುವಿಶೇಷವಾಗಿಯೇ ದರ್ಶನೀಯನಾಗಿದ್ದನು ಆತ.

ಅವರಾದರೂ ಎಂತಹವರು? ಅವರು ಕೃಶೋದರಿಯರು - ಎಂದರೆ ಕೃಶವಾದ ಉದರವುಳ್ಳವರು. ಅರ್ಥಾತ್ ಸಣ್ಣದಾದ ಸೊಂಟವುಳ್ಳವರು. ಬಡನಡುವೆಂಬುದೇ ನಾರಿಯರ ಸೌಂದರ್ಯ-ಲಕ್ಷಣಗಳಲ್ಲಿ ಒಂದು. ಮತ್ತು ಮುಖ್ಯವಾದ ಲಕ್ಷಣವೂ ಸಹ. ಏಕೆ? ವದನವೋ ನಯನವೋ ಮುದ್ದಾಗಿದರೂ, ನಡುವಿನಲ್ಲಿ ಕೊಬ್ಬು ಮನೆಮಾಡಿದ್ದರೆ ಸೌಂದರ್ಯವನ್ನದು ಕೆಡಿಸುವುದು. ಎಂದೇ ಸುಂದರಿಯೆಂದು ಹೇಳಲು ಕೃಶೋದರಿಯೆಂದೊಂದು ಪದವನ್ನು ಹೇಳಿದರೂ ಸಾಕು. ಉಳಿದ ಲಕ್ಷಣಗಳು ಊಹ್ಯ. ದುಡಿದು ಕೆಲಸಮಾಡುವವರ ಶರೀರಕೃಶತೆ-ದೃಢತೆಗಳು ನೋಡಲೇ ಲಕ್ಷಣ. ಆ ಬಗೆಯವರು ಈ ಗೊಲ್ಲತಿಯರು. ಇಂತಹ ಕೃಶೋದರಿಯರ ಕಣ್ಣುಗಳಿಗೆ ವಿಶೇಷ-ದೃಶ್ಯನಾಗಿ ತೋರುತ್ತಾನೆ, ಕಿಶೋರ ಕೃಷ್ಣ.

ಯಶೋದೆಯ ಕೂಸಾಗಿ ಬೆಳೆದವನಲ್ಲವೇ, ಕೃಷ್ಣ? ಆತನನ್ನು ಬೆಳೆಸಿ ಅವಳಿಗೇನು ದಕ್ಕಿತು? – ಎಂದು ಕೇಳುವವರುಂಟೇನೋ? ಅದಕ್ಕೇ ಕವಿ ಆ ಬಗ್ಗೆಯೇ ಒಂದು ಮಾತು ಹೇಳುತ್ತಾನೆ - ಅವಳಿಗೆ ಕೀರ್ತಿ ಸಿಕ್ಕಿತು. ಸಿಕ್ಕಿತೇನು, ಉಕ್ಕಿತೇ ಸರಿ.

ಉಕ್ಕುವುದು, ಹೆಚ್ಚುವುದು, ವರ್ಧಿಸುವುದು - ಇವನ್ನು ಹೇಳಲು ಸುಂದರವಾದ ರೂಪಕವೊಂದು ಲಭ್ಯವಿದೆ, ಸಂಸ್ಕೃತ-ಸಾಹಿತ್ಯದಲ್ಲಿ. ಚಂದ್ರನು ಬಂದನೆಂದರೆ ಸಮುದ್ರವು ಉಕ್ಕುವುದಲ್ಲವೇ? ಅದರಲ್ಲೂ ಪರ್ವ-ದಿನಗಳಲ್ಲಿ ನೋಡಬೇಕು, ಅಲೆಗಳ ಉಬ್ಬರದ ಭರದ ಆ ವೈಭವವನ್ನು! ಇಲ್ಲಿ ಕೃಷ್ಣನೇ ಚಂದ್ರ, ಯಶೋದೆಯ ಕೀರ್ತಿಯೇ ಸಮುದ್ರ. ಈ ಕೃಷ್ಣ-ಚಂದ್ರನಿಂದಾಗಿ ಯಶೋದೆಯ ಯಶಸ್ಸು ವರ್ಧಿಸಿತು.

ಆದರೆ ಇಲ್ಲೊಂದು ವೈಲಕ್ಷಣ್ಯವಿದೆ. ಲೋಕದಲ್ಲಿ ನಾವು ನೋಡುವ ಚಂದ್ರ ಬೆಳ್ಳಗಿರುತ್ತಾನೆ. ಚಿತ್ರಕಾರರು ಸಮುದ್ರವನ್ನು ಮೂಡಿಸುವಾಗ ನೀಲವರ್ಣವನ್ನು ಬಳಸುತ್ತಾರೆ. ಫೋಟೋ ತೆಗೆದಾಗಲೂ ನೀಲವರ್ಣವೇ ಕಾಣಿಸುವುದೇ. ಎಷ್ಟಾದರೂ ಆಕಾಶದ ಬಣ್ಣ ಅಲ್ಲಿ ಪ್ರತಿಫಲಿತವಾಗಿರುತ್ತದೆಯಲ್ಲವೇ?

ಇಲ್ಲಿದೋ ಇವು ಅದಲುಬದಲಾಗಿವೆ! ಹೇಗೆ? ಈತ, ಎಂದರೆ ಈ ಕೃಷ್ಣನು, ನೀಲ-ನಿಶಾಕರ. ನಿಶಾಕರನೆಂದರೆ ಚಂದ್ರ. ಎಂದರೆ ನೀಲವರ್ಣದ ಚಂದ್ರ! ಆದರೆ ಇಲ್ಲಿಯ ಸಮುದ್ರದ ವರ್ಣವೂ ಬೇರೆಯೇ! ಅದು ಬೆಳ್ಳಗಿದೆ. ಏಕೆ? ಕೀರ್ತಿಯೆಂಬುದನ್ನು ಬಿಳಿಯ ಬಣ್ಣದ್ದೆಂದು ಹೇಳುವ "ಕವಿ-ಸಮಯ"ವು ಭಾರತದ ಎಲ್ಲ ಪ್ರಾಚೀನ-ಸಾಹಿತ್ಯದಲ್ಲಿ ಸುಪ್ರಸಿದ್ಧ. ಕೀರ್ತಿಯೆಂಬುದು ಅಮೂರ್ತ. ಎಂದರೆ ಆಕಾರವಿಲ್ಲ; ಜೊತೆಗೆ ಬಣ್ಣವೂ ಇಲ್ಲ. ಆದರೂ ಕವಿಗಳೆಲ್ಲರ ನಡುವಣ ಒಪ್ಪಂದವೆಂಬಂತಿರುವುದನ್ನೇ ಕವಿ-ಸಮಯವೆನ್ನುವುದು. ಹೀಗಾಗಿ ಬಿಳಿಯ ಸಮುದ್ರವನ್ನುಕ್ಕಿಸುವ ಕೃಷ್ಣಚಂದ್ರನೀತ!

ಅತ್ತ ಸಾಕುತಾಯಿಗೆ ಯಶೋರಾಶಿಯನ್ನು ತಂದಿರುವ, ಇತ್ತ ಗೊಲ್ಲನಲ್ಲೆಯರ ಕಣ್ಣಿಗೆ ಹಬ್ಬವಾದ, ಈ ಕಿಶೋರ-ಕೃಷ್ಣನನ್ನು ನಾನದೆಂದು ಕಾಣುವೆ? – ಎಂಬ ಕೇಳ್ಕೆ ಇಲ್ಲಿದೆ.

ಕಿಶೋರ-ವೇಷೇಣ ಕೃಶೋದರೀ-ದೃಶಾಂ/
ವಿಶೇಷ-ದೃಶ್ಯೇನ ವಿಶಾಲ-ಲೋಚನಮ್ |
ಯಶೋದಯಾ ಲಬ್ಧ-ಯಶೋ-ನವಾಂಬುಧೇಃ/
ನಿಶಾಮಯೇ ನೀಲ-ನಿಶಾಕರಂ ಕದಾ? ||


ಮತ್ತೊಂದು ಶ್ಲೋಕ:

ಕೃಷ್ಣನು ನಮ್ಮನ್ನು ಕಾಪಾಡಲಿ. ಆತನೊಂದು ಓಜಸ್ಸು. ಓಜಸ್ಸೆಂದರೂ ತೇಜಸ್ಸೆಂದೇ. ಎಂತಹ ತೇಜಸ್ಸದು? ಕಿಶೋರ-ಭಾವದಲ್ಲಿರುವ ಓಜಸ್ಸು. ಏನದರ ವಿಶೇಷಗಳು? ನಾಲ್ಕು ವಿಶೇಷಗಳು ಅದರಲ್ಲಿವೆ.

ಮೊದಲನೆಯದಾಗಿ ಅದು ವಿಲಾಸ-ಲಕ್ಷ್ಮಿಯ ಪ್ರಕೃತಿ. ಎಂದರೆ, ವಿಲಾಸ-ಸಂಪತ್ತಿಗೆ ಅದುವೇ ಮೂಲನೆಲೆ. "ಪ್ರಕೃತಿ"ಯೆಂದರೆ ಇಲ್ಲಿ ಜನ್ಮಭೂಮಿ.

ಎರಡನೆಯದಾಗಿ ಅದು ಪ್ರಕೃತಿ-ಜಡ - ಎಂದರೆ ಸ್ವಭಾವತಃ ಜಡವಾದುದು. ಜಡವೆಂದರೆ ನಿಷ್ಕ್ರಿಯ. ಯಾವುದರ ಬಗ್ಗೆ ಜಡ? ನಮಿಸುವವರ ಅಪರಾಧದ ಬಗ್ಗೆ.

ಅವನಿಗೆ ಬಾಗಿ ನಮಸ್ಕರಿಸುವವರು ಅಪರಾಧಿಗಳೇ ಆಗಿರಬಹುದು. ಮತ್ತು ಅಪರಾಧವೆಂದರೂ ಒಂದೆರಡು ಮಾತ್ರವಲ್ಲದೆ ಅದೊಂದು ಮನ್ನಿಸಲಾಗದಷ್ಟು ದೊಡ್ಡ ಸಾಲೇ ಆಗಿರಬಹುದು. ಒಂದೇ ಒಂದು ತಪ್ಪಾಗಿದ್ದರೆ ಕ್ಷಮಿಸಬಹುದು. ಅಪರಾಧ-ಪರಂಪರೆಯೇ ಆದರೆ, ಎಂದರೆ ಸಾಲುಸಾಲು ತಪ್ಪುಗಳೇ ಆಗಿದ್ದಲ್ಲಿ, ಯಾರು ಕ್ಷಮಿಸಿಯಾರು? ಆದರೆ ನಮ್ಮ ಕೃಷ್ಣನು ಹಾಗಲ್ಲ.ಪ್ರಣತರ ಅಪರಾಧ-ವೀಥಿಯನ್ನೂ ಕ್ಷಮಿಸಿಬಿಡುವಂತಹವನೇ ಅವನು – ಎನ್ನುತ್ತಾನೆ, ಕವಿ.

ಮೂರನೆಯದಾಗಿ, ಸುಕೃತಿಗಳಿರುವರೆಲ್ಲಾ, ಅವರ ವಿಷಯದಲ್ಲಿ ತನ್ನ ಸಾಂನಿಧ್ಯವನ್ನು ಅನುಗ್ರಹಿಸುವ ತೇಜಸ್ಸದು. ಸುಕೃತಿಯೆಂದರೆ ಸುಕೃತಗಳನ್ನು ಮಾಡಿರುವವ. ಸುಕೃತವೆಂದರೆ ಪುಣ್ಯ.

ಮತ್ತು ನಾಲ್ಕನೆಯದಾಗಿ, ನಿಜವಾದ ಸುಕೃತಿಗಳೆಂದರೆ ಯೋಗಪರಾಯಣರು. ಅವರು ಮನಸ್ಸಿನಲ್ಲಿ ಪ್ರಣಿಧಾನವನ್ನು ಮಾಡತಕ್ಕವರು, ಎಂದರೆ ಆಳವಾಗಿ ಧ್ಯಾನಿಸತಕ್ಕವರು. ಪ್ರಣಿಧಾನವೆಂದರೆ ಐಕಾಗ್ರ್ಯ, ಏಕಾಗ್ರತೆ. ಅವರ ಆ ಪ್ರಣಿಧಾನಕ್ಕೆ ಪಾತ್ರವಾದದ್ದು ಆ ತೇಜಸ್ಸು. ಹೀಗೆ ಯೋಗಿ-ಧ್ಯೇಯವಾದ ಓಜಸ್ಸೇ ಕೃಷ್ಣನು.

ಶ್ಲೋಕದ ನಾಲ್ಕು ಪಾದಗಳಲ್ಲಿಯ ಆರಂಭ-ಪ್ರಾಸವನ್ನು ಗಮನಿಸಬಹುದು: ಪ್ರಕೃತಿ-ಪ್ರಕೃತಿ-ಸುಕೃತಿ-ಸುಕೃತಿ. ಪ್ರಕೃತಿ ಮತ್ತು ಸುಕೃತಿ ಎಂಬ ಪದಗಳನ್ನು ಬೇರೆ ಬೇರೆ ಅರ್ಥಗಳಲ್ಲಿ ಯುಕ್ತವಾಗಿ ಬಳಸಿರುವುದು, ಕವಿಗೆ ಭಾಷೆಯ ಮೇಲಿರುವ ಹಿಡಿತಕ್ಕೂ ಕನ್ನಡಿ ಹಿಡಿಯುತ್ತದೆ:

ಪ್ರಕೃತಿರವತು ನೋ ವಿಲಾಸ-ಲಕ್ಷ್ಯಾಃ/
ಪ್ರಕೃತಿ-ಜಡಂ ಪ್ರಣತಾಪರಾಧ-ವೀಥ್ಯಾಂ |
ಸುಕೃತಿ-ಕೃತ-ಪದಂ ಕಿಶೋರಭಾವೇ/
ಸುಕೃತಿ-ಮನಃ-ಪ್ರಣಿಧಾನ-ಪಾತ್ರಂ ಓಜಃ ||

ಸೂಚನೆ : 24/05/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.