Tuesday, July 2, 2024

ಋಷಿ-ಪ್ರಾರ್ಥನೆ: ಸ್ತ್ರೀರತ್ನ-ಸೃಷ್ಟಿ (Rshi Prarthane: Striratna-Srishti)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)





ಅಲ್ಲಿಗೆ ಯಜ್ಞಗಳು ನಿಂತವು. ಸ್ವಾಧ್ಯಾಯವು ನಿಂತಿತು. ರಾಜರು ಕೊಲೆಯಾದರು. ಬ್ರಾಹ್ಮಣರು ಹತರಾದರು. ಭೂಮಿಯ ಮೇಲೆ ಉತ್ಸವಗಳೂ ಯಜ್ಞಗಳೂ ಉತ್ಪಾಟಿತವಾದವು, ಎಂದರೆ ಕಿತ್ತೊಗೆಯಲ್ಪಟ್ಟವು. ಎಲ್ಲ ಕಡೆಯೂ ಹಾಹಾಕಾರ, ಭಯ-ಭೀತತೆಗಳು ಉಂಟಾದವು.

ಅಂಗಡಿಗಳಲ್ಲಿ ಕೊಳ್ಳುವುದು-ಮಾರುವುದುಗಳೂ ಕುಲಗೆಟ್ಟವು. ದೇವ-ಕಾರ್ಯಗಳು ನಿಂತುಹೋದವು. ಪುಣ್ಯ-ವಿವಾಹಗಳೂ ಇಲ್ಲವಾದವು. ಕೃಷಿಯು ಕೆಟ್ಟಿತು. ಗೋರಕ್ಷೆಯು ಹಾಳಾಯಿತು. ನಗರಗಳೂ ಆಶ್ರಮಗಳೂ ಧ್ವಂಸಗೊಂಡವು. ಎಲ್ಲಿ ನೋಡಿದರಲ್ಲಿ ಮೂಳೆಗಳು, ಅಸ್ಥಿಪಂಜರಗಳು ಚೆಲ್ಲಾಡಿದ್ದು, ಭೂಮಿಯೇ ಉಗ್ರ-ದರ್ಶನವಾಯಿತು. ಇನ್ನು ಪಿತೃ-ಕಾರ್ಯವೆಂಬುದೆಲ್ಲುಳಿಯಿತು? ವಷಟ್ಕಾರ-ಮಂಗಳಗಳು ಮುಗಿದವು. ಜಗತ್ತೆಲ್ಲವೂ ಭಯಾನಕವಾಗಿಬಿಟ್ಟು ನೋಡಲೇ ಆಗದಂತಾಯಿತು.

ಸುಂದ-ಉಪಸುಂದರ ಆ ದುಷ್ಕೃತ್ಯಗಳನ್ನು ಕಂಡು ಸೂರ್ಯ-ಚಂದ್ರರೇ ಖಿನ್ನರಾದರು. ಗ್ರಹಗಳು, ತಾರೆಗಳು, ನಕ್ಷತ್ರಗಳು, ದೇವತೆಗಳು - ಇವರೂ ಖಿನ್ನರಾದರು. ಹೀಗೆ ತಮ್ಮ ಕ್ರೂರ-ಕಾರ್ಯಗಳಿಂದ ಎಲ್ಲಾ ದಿಕ್ಕುಗಳನ್ನು ಗೆದ್ದು, ಆ ದೈತ್ಯರಿಬ್ಬರು ಶತ್ರು-ರಹಿತರೇ ಆಗಿಬಿಟ್ಟು ಕುರುಕ್ಷೇತ್ರವನ್ನೇ ತಮ್ಮ ನಿವಾಸ-ಸ್ಥಾನವನ್ನಾಗಿ ಮಾಡಿಕೊಂಡುಬಿಟ್ಟರು.

ಸುಂದೋಪಸುಂದರಿಂದಾದ ಉಪಟಳ ತೀವ್ರವಾಯಿತು. ಅದನ್ನು ಕಂಡ ಎಲ್ಲ ದೇವರ್ಷಿಗಳು, ಸಿದ್ಧರು, ಪರಮರ್ಷಿಗಳು - ಇವರಿಗೆಲ್ಲಾ ಉತ್ಕಟವಾದ ಖೇದವಾಯಿತು. ಅವರುಗಳೆಲ್ಲರೂ ಜಿತ-ಕ್ರೋಧರು, ಜಿತಾತ್ಮರು, ಜಿತೇಂದ್ರಿಯರು. ಎಂದರೆ ಕೋಪವನ್ನು ಗೆದ್ದವರು, ಮನಸ್ಸನ್ನು ಗೆದ್ದವರು, ಇಂದ್ರಿಯಗಳನ್ನು ಗೆದ್ದವರು. ಆದರೂ ಜಗತ್ತಿನ ಬಗ್ಗೆ ಅವರಿಗೆ ದಯೆಯು ಉಕ್ಕಿ ಬಂದಿತು. ಎಂದೇ ಬ್ರಹ್ಮನ ಭವನಕ್ಕೆ ಅವರೆಲ್ಲರೂ ಹೋದರು. ಅಲ್ಲಿ ಪಿತಾಮಹನನ್ನು, ಎಂದರೆ ಬ್ರಹ್ಮನನ್ನು, ಕಂಡರು. ಆಸೀನನಾಗಿದ್ದ ಆತನ ಸುತ್ತಲೂ ದೇವತೆಗಳು, ಬ್ರಹ್ಮರ್ಷಿಗಳು, ಸಿದ್ಧರು ಇದ್ದರು.

ಅಲ್ಲಿಯೇ ಮಹಾದೇವನೂ, ಅಗ್ನಿ-ವಾಯುಗಳೂ, ಚಂದ್ರ-ಸೂರ್ಯರೂ, ಇಂದ್ರ-ಪರಮೇಷ್ಠಿಗಳೂ ಇದ್ದರು. ವೈಖಾನಸರು, ವಾಲಖಿಲ್ಯರು, ಮುಂತಾದ ಮಹರ್ಷಿಗಳು ದೀನರಾಗಿ ಅಲ್ಲಿಗೆ ಆಗಮಿಸಿದರು. ಸುಂದೋಪಸುಂದರ ಕೃತ್ಯಗಳನ್ನೆಲ್ಲವನ್ನೂ ಹೇಳಿದರು. ಅವರಿಬ್ಬರು ಮಾಡಿದ ಸೂರೆ, ಎಸಗಿದ ದುಷ್ಕೃತ್ಯಗಳು, ಅದನ್ನು ಮಾಡಿದ ಕ್ರಮ - ಇದೆಲ್ಲವನ್ನೂ ಪಿತಾಮಹನಿಗೆ ತಿಳಿಸಿದರು.

ಆಗ ದೇವತೆಗಳೂ ಪರಮರ್ಷಿಗಳೂ ಅದೇ ವಿಷಯವನ್ನೇ ಮುಂದಿಟ್ಟುಕೊಂಡು ಬ್ರಹ್ಮನನ್ನು ಪ್ರೇರಿಸಿದರು.ಆಗ ಬ್ರಹ್ಮನು ಅವರೆಲ್ಲರ ಮಾತನ್ನು ಕೇಳಿದನು. ಕ್ಷಣಕಾಲ ಯೋಚಿಸಿದನು. ತನ್ನ ಕರ್ತವ್ಯವನ್ನು ನಿಶ್ಚಯಿಸಿದನು. ಅವರಿಬ್ಬರ ಸಂಹಾರವನ್ನು ಕುರಿತಾಗಿ ಚಿಂತಿಸಿದನು; ವಿಶ್ವಕರ್ಮನನ್ನು ಬರಮಾಡಿಕೊಂಡನು. ವಿಶ್ವಕರ್ಮನು ಬರಲಾಗಿ, ಬ್ರಹ್ಮನು ಆತನಿಗೆ ಆದೇಶವಿತ್ತನು. "ಮನಸ್ಸನ್ನು ಸೂರೆಗೊಂಡುಬಿಡುವಂತಹ ತರುಣಿಯೊಬ್ಬಳನ್ನು ಸೃಷ್ಟಿಮಾಡು" - ಎಂದನು.

ಆಗ ಆ ವಿಶ್ವಕರ್ಮನು ಹಾಗೆಯೇ ಮಾಡಿದನು. ಮೂರೂ ಲೋಕಗಳಲ್ಲಿ ಸ್ಥಾವರವೋ ಜಂಗಮವೋ, ಎಂದರೆ ಚಲನವಿಲ್ಲದವೋ, ಚಲನವುಳ್ಳವೋ, ಅದಾವುದೇ ಜೀವಿಯಿರಲಿ, ಅವಲ್ಲಿ ಯಾವಯಾವದು ದರ್ಶನೀಯವೋ, ಅದದೆಲ್ಲವನ್ನೂ ಈ ಶರೀರದಲ್ಲಿ ಸಂಗ್ರಹ ಮಾಡಿಟ್ಟನು. ಅವಳ ಶರೀರದಲ್ಲಿ ಕೋಟಿಗಟ್ಟಲೆ ರತ್ನಗಳನ್ನು ಸಮಾವೇಶಗೊಳಿಸಿದನು. ಸರ್ವ-ರತ್ನ-ರಾಶಿಮಯಿಯಾದ ಆ ನಾರಿಯನ್ನು ದೇವ-ರೂಪಿಣಿಯಾಗಿ ಸೃಷ್ಟಿಸಿದನು. ಮಹಾ-ಪ್ರಯತ್ನದಿಂದ ವಿಶ್ವಕರ್ಮನು ಅವಳನ್ನು ಸೃಷ್ಟಿಸಿದನಲ್ಲವೇ? ಎಂದೇ, ಮೂರೂ ಲೋಕಗಳ ನಾರಿಯರಲ್ಲಿ ಅವಳು ಅಪ್ರತಿಮಳೆನಿಸಿದಳು. ಅವಳ ಶರೀರದಲ್ಲಿ ರೂಪ-ಸಂಪತ್ತಿನಿಂದ ಕೂಡಿರದ ಒಂದು ಸೂಕ್ಷ್ಮವಾದ ಎಡೆಯೂ ಇರಲಿಲ್ಲ.

ಹಾಗೂ ಅವಳತ್ತ ಎಲ್ಲಿಯೇ ದೃಷ್ಟಿಬೀರಿದರೂ ಅದು ಅಲ್ಲಿ ನೆಡದಿರುವಂತಿರಲಿಲ್ಲ. ಕಾಮರೂಪಳಾದ, ಎಂದರೆ ಇಷ್ಟಪಟ್ಟ ರೂಪವನ್ನು ಧರಿಸಬಲ್ಲ, ಲಕ್ಷ್ಮಿಯೇ ಮೈತಾಳಿಬಂದಂತಿದ್ದಳು, ಆಕೆ!

ಸೂಚನೆ : 30/6/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ96 (Yaksha prashne 96)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ –  95 ಋಷಿಗಳು ಹೇಳಿದ ಸ್ಥೈರ್ಯ ಯಾವುದು ?

ಉತ್ತರ - ಸ್ವಧರ್ಮದಲ್ಲಿ ಇರುವುದೇ ಸ್ಥೈರ್ಯ. 

ಈ ಪ್ರಶ್ನೆಯಲ್ಲಿ ಯಕ್ಷನು ಸ್ಥೈರ್ಯ ಅಥವಾ ಧೈರ್ಯ ಎಂದರೇನು ? ಎಂಬ ಬಗ್ಗೆ ವಿವರಣೆಯನ್ನು ಕೇಳಿದಂತಿದೆ. ಅದಕ್ಕೆ ಧರ್ಮಜ ಉತ್ತರ ಸ್ಪಷ್ಟವಾಗಿದೆ. ಸ್ವಧರ್ಮದಲ್ಲಿ ಇರುವುದೇ ಧೈರ್ಯ ಎಂಬುದು. ಹಾಗಾಗಿ ಇಲ್ಲಿ ನಾವು ಅತಿಮುಖ್ಯವಾಗಿ ಗಮನಿಸಬೇಕಾದುದು ಸ್ವಧರ್ಮದ ವಿಷಯವನ್ನು. 'ಸ್ವಧರ್ಮ' ಎಂಬ ವಿಷಯ ಅರ್ಥವಾದರೆ ಅದರಿಂದ ಧೈರ್ಯ ಹೇಗೆ ಸಾಧ್ಯವಾಗಬಹುದು ಎಂಬುದೂ ಅರಿವಿಗೆ ಬರುತ್ತದೆ. ಹಾಗಾದರೆ ಸ್ವಧರ್ಮ ಎಂದರೇನು? 

ಸ್ವಧರ್ಮ ಎಂದರೆ ಅದರದರ ಧರ್ಮ ಎಂದರ್ಥ. ಇಲ್ಲಿ ಧರ್ಮ ಎಂಬ ಶಬ್ದಕ್ಕೆ ಅದರದರ ನೈಜಸ್ವಭಾವ ಅಥವಾ ಸ್ವರೂಪ ಅಥವಾ ಕಂಡೀಶನ್. ಆದ್ದರಿಂದ ಪ್ರತಿಯೊಂದು ಪ್ರದಾರ್ಥ ಅಥವಾ ವಸ್ತುವಿನ ಸ್ವಭಾವದ ಪರಿಚಯವಾಗಬೇಕಾದುದು ಅನಿವಾರ್ಯವಷ್ಟೆ. ಪದಾರ್ಥವನ್ನು ಸೃಷ್ಟಿ ಮಾಡುವಾಗ ಪದಾರ್ಥಕ್ಕೆ ಯಾವ ಉದ್ದೇಶವಿತ್ತೋ, ಅದನ್ನು ಪೂರ್ಣ ಮಾಡುವಂತಿದ್ದರೆ ಅದು ಅದರದರ ಸಹಜತೆಯಲ್ಲಿದೆ ಎಂದರ್ಥ. ಹಾಗಿದ್ದಾಗ ಮಾತ್ರ ಆ ವಸ್ತುವಿನಿಂದ ನಮ್ಮ ಉದ್ದೇಶಿತವಾದ ಕಾಮನೆ ಈಡೇರುತ್ತದೆ. ಇದಕ್ಕೆ ಕಾರಣವಿಷ್ಟೇ ಅದು ಸ್ವಧರ್ಮದಲ್ಲಿ ಎಂಬುದು. 

ಋಷಿಗಳು ಯಾವ ಬಗೆಯ ಸ್ವಧರ್ಮವನ್ನು ಯಾವುದಕ್ಕೆ ಹೇಳಿದ್ದಾರೆ? ಎಂಬುದಕ್ಕೆ ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಮಾತು ಪುಷ್ಟಿಯನ್ನು ಕೊಡುತ್ತದೆ. "ಶ್ರೇಯಾನ್ ಸ್ವಧರ್ಮಃ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್" - ತನ್ನ ತನ್ನ ಧರ್ಮವನ್ನು ಆಚರಿಸುವುದರಲ್ಲಿ ಉಂಟಾಗುವ ಸ್ವಲ್ಪ ದೋಷವಾದರೂ ಪರಧರ್ಮದ ಆಚರಣೆಯ ಬಹುಗುಣಕ್ಕಿಂತಲೂ ಉತ್ತಮ" ಎಂಬುದಾಗಿ. ಮಾನವನ ಮುಖ್ಯಧ್ಯೇಯವೆಂದರೆ ಮೋಕ್ಷ. ಇದಕ್ಕೆ ಸಾಧನೀಭೂತವಾದ ಯಾವೆಲ್ಲ ವಿಷಯಗಳಿವೆಯೋ ಅವೆಲ್ಲವೂ ಅದದರ ಸಹಜತೆಯಲ್ಲಿ ಇರಬೇಕಾಗುತ್ತದೆ. ಅತ್ಯಂತ ಮುಖವಾದ ಸಾಧನವೆಂದರೆ ನಮ್ಮ ಶರೀರವಾಗಿದೆ. ಮಾನವಶರೀರವನ್ನೇ ಬಳಸಿಕೊಂಡು ಇದೇ ಜನ್ಮದಲ್ಲೇ ಮೋಕ್ಷವನ್ನು ಸಾಧಿಸಬೇಕಾಗಿದೆ.  ಹಾಗಾಗಿ ಈ ಶರೀರವು ಅದರ  ಕಂಡೀಶನ್ನಲ್ಲಿ ಇರುವುದರ ಬಗ್ಗೆ ವಿವರಣೆಯನ್ನು ಕೊಟ್ಟಿದ್ದನ್ನು ಶ್ರೀರಂಗ ಮಹಾಗುರುಗಳು ಆಯುರ್ವೇದದಲ್ಲಿ ಹೇಳಿರುವ ಒಂದು ಶ್ಲೋಕವನ್ನು ಹೇಳುತ್ತಿದ್ದರು. ಅದಾವುದೆಂದರೆ " ಸಮದೋಷಃ ಸಮಾಗ್ನಿಶ್ಚ ಸಮಧಾತುಮಲಕ್ರಿಯಃ । ಪ್ರಸನ್ನಾತ್ಮೇಂದ್ರಿಯಮನಾಃ ಸ್ವಸ್ಥ ಇತ್ಯಭಿಧೀಯತೇ" ಎಂದು. ವಾತ ಪಿತ್ತ ಕಫಗಳೆಂಬ ಮೂರು ಬಗೆಯ ದೋಷಗಳಿಂದ ಕೂಡಿದೆ ಈ ದೇಹ. ಈ ಮೂರರ ಯಾವುದೋ ಬಗೆಯ ಕಾಂಬಿನೇಶನ್ ಇದ್ದರೆ ಮಾತ್ರ ಆ ವ್ಯಕ್ತಿ ಆರೋಗ್ಯವಾಗಿರುತ್ತಾನೆ. ಇವುಗಳಲ್ಲಿ ಯಾವುದೊಂದು ವ್ಯತ್ಯಯವಾದರೂ ಅನಾರೋಗ್ಯ ಉಂಟಾಗುತ್ತದೆ. ವಾತ ಪಿತ್ತ ಕಫದಿಂದ ಬರುವ ರೋಗಗಳು ಶರೀರದ ಆರೋಗ್ಯದ ಸ್ಥಿತಿಯನ್ನು ಹಾನಿ ಮಾಡುತ್ತದೆ. ಅಷ್ಟೇ ಅಲ್ಲ ಮಾನಸಿಕ ಆರೋಗ್ಯವನ್ನೂ ನಾಶ ಮಾಡುತ್ತದೆ. ಶರೀರರವೇ ಧರ್ಮಸಾಧನೆಗೆ ಅತಿಮುಖ್ಯವಾದ ಸಲಕರಣೆ ತಾನೆ! ಶರೀರವು ಮನಸ್ಸು ಇಂದ್ರಿಯ ಬುದ್ಧಿ ಆತ್ಮ ಇವೆಲ್ಲದರ ಸಮಷ್ಟಿರೂಪವಾದುದು. ಇವೆಲ್ಲದರ ಸ್ವಧರ್ಮಸ್ಥಿತಿಯೇ ಆರೋಗ್ಯ ಎನ್ನಲಾಗಿದೆ.  ಯಾವ ವ್ಯಕ್ತಿ ಆರೋಗ್ಯವಂತನಾಗಿರುತ್ತಾನೋ ಆತ ಯಾವ ಕಾರ್ಯವನ್ನು ಬೇಕಾದರೂ ಮಾಡಬಹುದು. ಆ ಕಾರ್ಯಕ್ಕೆ ಬೇಕಾದ ಎಲ್ಲಾ ಬಗೆಯ ಅನುಕೂಲತೆಗಳು ಒದಗಿಬರುತ್ತವೆ. ಆಗ ತಾನೆ ಧೈರ್ಯವು ಬರುತ್ತದೆ. ಧೈರ್ಯವೆಂದರೆ ಸ್ಥಿರವಾದ ಬುದ್ಧಿಯಷ್ಟೇ. ಆರೋಗ್ಯವೇ ಸ್ಥಿರತೆ. ಸ್ವಧರ್ಮವೇ ಸ್ಥಿರತೆ. 

ಸೂಚನೆ : 30/6/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.