Saturday, November 1, 2025

ಕೃಷ್ಣಕರ್ಣಾಮೃತ 80 ಸುಧಾ-ಸಮುದ್ರದಲ್ಲಿ ಈಜಾಡುವ ಸೊಗಸು (Krishakarnamrta 80)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಭಗವಂತನನ್ನು ಒಲಿಸಿಕೊಳ್ಳುವುದು ಹೇಗೆ? - ಎಂಬ ಪ್ರಶ್ನೆಯು ಯಾರನ್ನು ಕಾಡಿಲ್ಲ?

ಭಗವಂತನೆಂತಹವನು? ನಮ್ಮಂತೆಯೋ ಅಲ್ಲವೋ?

ನಮ್ಮಂತೆಯೇ ಆದರೆ ಆತನೂ ಒಬ್ಬ ಪುರುಷ. ಏಕೆ? ಪುರುಷಾರ್ಥ ಎಂಬ ಪದದ ವಿವರಣೆಯಲ್ಲೇ ಗೊತ್ತಾಗುವಂತೆ, ಪುರುಷನೆಂದರೆ ಜೀವನಲ್ಲವೇ? ಆತನೂ ನಮ್ಮಂತೆಯೇ ಆಗಿಬಿಟ್ಟಲ್ಲಿ ಅವನಿಗೂ ನಮಗೂ ವಿಶೇಷವೇನು ಬಂತು?

ಇದಕ್ಕೆ ಪ್ರತಿಯಾಗಿ, ಆತನು ಕಿಂಚಿತ್ತೂ ನಮ್ಮಂತಲ್ಲ - ಎಂದುಬಿಟ್ಟರೂ ಕಷ್ಟವೇ. ಒಂದು ನಂಟು ಏರ್ಪಡಬೇಕಾದರೆ ಅದೇನೋ ಒಂದು ಸಮಾನ-ಧರ್ಮವಿರಬೇಕಲ್ಲವೇ? ಸ್ವಲ್ಪವಾದರೂ.

ಹೌದು. ಸಾಧರ್ಮ್ಯವಿದೆ. ಜೊತೆಗೆ ವೈಧರ್ಮ್ಯವೂ ಇದೆ. ನಾವು ಪುರುಷರಾದರೆ ಆತನು ಪರಮಪುರುಷ. ಹಾಗೋ? ಹಾಗಾದರೆ ಆತನೆಲ್ಲಿರುವನೆಂಬುದನ್ನು ಹೇಳಿ, ಅಲ್ಲಿಗೇ ಹೋಗಿ ಸ್ನೇಹ ಬೆಳೆಸಿದರಾಯ್ತು - ಎಂದೆನಿಸುತ್ತದಲ್ಲವೇ?

ಆತನ ವಿಳಾಸವೂ ಹೇಳಬಹುದಾದದ್ದೇ. ಆತನೊಂದು ಗುಹೆಯಲ್ಲಿದ್ದಾನೆ; ಅಲ್ಲಿ ಅಡಗಿದ್ದಾನೆ. ಯಾವ ಗುಹೆಯದು? ಎಲ್ಲಿದೆ? ಎಷ್ಟು ದೂರ?

ಎಷ್ಟು ದೂರವೂ ಅಲ್ಲ. ನಮ್ಮೊಳಗೇ ಇರುವಂತಹುದು! ಅದು ನಮ್ಮ ಬುದ್ಧಿಯೆಂಬ ಗುಹೆ, ಅಥವಾ ಹೃದಯವೆಂಬ ಗುಹೆ.  ಹೊರಗಿನದ್ದಾದರೆ ಸರಿ, ಅಲ್ಲಿಗೆ ಪ್ರಯಾಣಿಸಬಹುದು - ದೂರವಾದರೂ ಚಿಂತೆಯಿಲ್ಲ. ಆದರೆ ಒಳಗೇ ಇರುವ ಗುಹೆಯೆಂದರೆ ಹುಡುಕುವುದು ಹೇಗೆ? ಅದಕ್ಕೆ ಕ್ರಮವೇನು? ಹಾಗೂ ಅದು ಯಾರಿಗೆ ಸಾಧ್ಯ?

ಆತ್ಮಜ್ಞರಿಗೆ ಮಾತ್ರವೇ ಸಾಧ್ಯವದು. ಸನಕ ಮುಂತಾದ ಪುರಾಣ-ಪುರುಷರಿಗೆ ಮಾತ್ರವೇ ಸಾಧ್ಯವದು. ಎಷ್ಟಾದರೂ ಯೋಗವಿದ್ಯೆಯಲ್ಲಿ ಪಳಗಿದವರಲ್ಲವೇ ಅವರು? ಹೃದಯ-ಗುಹಾ-ನಿಹಿತನಾದ ಪರಮ-ಪುರುಷನ ಉಪಾಸನೆಯನ್ನು ದಹರವಿದ್ಯಾ – ಎಂಬುದರ ಉಪದೇಶದಲ್ಲಿ ಉಪನಿಷತ್ತು ನಿರೂಪಿಸಿದೆಯಲ್ಲವೇ? ಹೀಗಾಗಿ, ಆತ ಯೋಗಿಗಮ್ಯ, ಯೋಗಗಮ್ಯ.

ನಮಗದು ಅಸಾಧ್ಯವೆನಿಸುವುದಲ್ಲಾ? ಹಾಗಾದರೆ ನಾವೇನು ಮಾಡುವುದು? - ಎಂಬ ಪ್ರಶ್ನೆಗೆ ಒಳ್ಳೆಯ ಉತ್ತರವನ್ನೇ ಕೊಟ್ಟಿದ್ದಾನೆ, ಲೀಲಾಶುಕ. ಆತ್ಮಸಾಧನೆಯನ್ನು ಮಾಡಿಲ್ಲದ ಬಡಪಾಯಿಗಳು ನಾವು. ನಾವು ಏನೋ ಆಟವಾಡಿಕೊಂಡಿರಲಷ್ಟೇ ಬಲ್ಲೆವು - ಎನ್ನುವಿರಾ? ಅಂತಹವರಿಗೇ ಸಲ್ಲತಕ್ಕ ಉತ್ತರ, ಆತನದು.

ನಿಮಗೆ ಜಲ-ಕ್ರೀಡೆ ಇಷ್ಟವಷ್ಟೆ? ಬನ್ನಿ, ಆ ಮಾರ್ಗದಲ್ಲೇ ಗುರಿಮುಟ್ಟಬಹುದು! - ಎನ್ನುತ್ತಾನೆ, ಕವಿ.

ಯಶೋದೆಯ ಶಿಶುವೆಂದರೆ ಕೃಷ್ಣ. ಆತನ ಬಾಲಲೀಲೆಗಳು ಯಾರನ್ನೂ ಆಕರ್ಷಿಸುವಂತಹವು. ಆ ಬಾಲಲೀಲೆಗಳಾದರೂ ಒಂದೇ ಎರಡೇ? ಆ ಬಾಲಲೀಲೆಗಳ ಕಥೆಗಳೇ ಒಂದು ಸಮುದ್ರ. ಅಮೃತ-ಸಮುದ್ರವೇ ಅದು.

ನಿಮಗೆ ಉಪ್ಪುನೀರಿನ ಸಮುದ್ರತೀರದ ಜಲದಲ್ಲಾಡುವ ಆಟವು ಗೊತ್ತಿರಬಹುದು. ಆದರೆ ಕೃಷ್ಣಬಾಲಲೀಲೆಯ ಕಥೆಗಳು ಒಂದು ಸುಧಾ-ಸಿಂಧುವೇ ಸರಿ - ಎಂದರೆ ಅಮೃತ-ಸಮುದ್ರವೇ ಸರಿ.

ಲವಣ-ಸಮುದ್ರದಲ್ಲಿ ಮುಳುಗುವುದು ಸೊಗಸೋ, ಸುಧಾ-ಸಾಗರದಲ್ಲಿ ಮೀಯುವುದು ಸೊಗಸೋ? ಹೇಳಿ. ಕೃಷ್ಣನ ಈ ಕಥಾಮೃತದಲ್ಲಿ ಮನಸಾರ ಮಿಂದೆದ್ದು ಈಜಾಡಿ ನಲಿದಾಡಿದರೆ ಸಾಕು; ಗಹನವಾದ ಯೋಗಮಾರ್ಗದ ಕ್ಲಿಷ್ಟ-ಸಾಧನೆಯಿಂದ ಏನನ್ನು ಆ ಆತ್ಮಜ್ಞರು ಪಡೆದರೋ ಅದನ್ನೇ ನಾವೂ ಪಡೆಯಬಹುದು!

ಕಥೆ ಕೇಳುವುದಕ್ಕಿಂತಲೂ ಸುಲಭೋಪಾಯವೇ? ಪರಮ-ಪುರುಷನೇ ಬಾಲ-ಕೃಷ್ಣನಾಗಿ ಬಂದಿರಲು, ಆತನ ಕಥಾಸ್ವಾದವೂ ಕೊನೆಗೆ ಕಥಾನಾಯಕನ ಉಪಾಸನೆಯೇ ಆಗಿ ಪರಿಣಮಿಸುತ್ತದೆ. ತಪೋ-ಲಭ್ಯವಾದುದನ್ನು ಲೀಲಾ-ಲಭ್ಯವನ್ನಾಗಿ ಮಾಡಿಕೊಡುತ್ತದೆ!

ಶ್ಲೋಕದ ಪೂರ್ವಾರ್ಧವು ಪ್ರಾಚೀನವಾದ ಕಷ್ಟೋಪಾಯವನ್ನೂ, ಉತ್ತರಾರ್ಧವು ನೂತನವಾದ ಸುಲಭೋಪಾಯವನ್ನೂ ನಿರೂಪಿಸುತ್ತವೆ.

ಉಪಾಸತಾಂ ಆತ್ಮವಿದಃ ಪುರಾಣಾಃ

ಪರಂ ಪುಮಾಂಸಂ ನಿಹಿತಂ ಗುಹಾಯಾಂ |

ವಯಂ ಯಶೋದಾ-ಶಿಶು-ಬಾಲ-ಲೀಲಾ-

ಕಥಾ-ಸುಧಾ-ಸಿಂಧುಷು ಲೀಲಯಾಮಃ ||

***

ಕೃಷ್ಣನು ಕುಮಾರನಾದರೂ ದೈವವೇ ಸರಿ. ಆತನನ್ನಲ್ಲವೇ ಆಶ್ರಯಿಸಬೇಕಾದುದು? ಈ ಬಾಲಕೃಷ್ಣನು ಹೇಗಿದ್ದಾನೆ? ಎಂಬುದನ್ನು ಶ್ಲೋಕದ ನಾಲ್ಕು ಪಾದಗಳಲ್ಲಿಯ ನಾಲ್ಕು ಚಿತ್ರಣಗಳಿಂದ ತಿಳಿಸುತ್ತಾನೆ, ಲೀಲಾಶುಕ.

ಬಾಲಕೃಷ್ಣನ ಬಾಯಲ್ಲಿ ಸವಿಯೆನಿಸುವ ಸುಗಂಧವಿದೆ. ಯಾವ ಘಮವದು? ಇನ್ನೇನು, ನವನೀತದ ಘಮಲೇ ಆತನ ಬಾಯುಸಿರಲ್ಲಿ ತೋರುವುದು. ನವನವವಾದ ನವನೀತವೆಂದ ಮೇಲೆ ಹೊಸತನದ ಸೊಗಸು ಅದರ ವಾಸನೆಯಲ್ಲಿರದೇ? ಎಲ್ಲೆಡೆ ಬೆಣ್ಣೆ ಗಿಟ್ಟಿಸಿಕೊಳ್ಳುವ ಚಾತುರ್ಯ ಈ ಬಾಲನದು. ಬೆಣ್ಣೆ ಮೆದ್ದ ಬಾಯಲ್ಲಿ ಬರುವ ಮಾತು ಮಾತ್ರ ಕಳ್ಳತನದ್ದೇ. ಪಳಗಿದ ಕಳ್ಳ; ಮಾತಿನ ಮಲ್ಲ. ಚತುರ-ಚೋರರಲ್ಲಿ ಧುರೀಣ, ಅಗ್ರಗಣ್ಯ. ನುಡಿಯೇ ಹೊರಗೆಡಹುವುದು ಆತನ ಚೌರ್ಯ-ಚಾತುರ್ಯವನ್ನು.

ಇನ್ನಾತನ ನೇತ್ರವೋ? ಕಳ್ಳಳುವಿಗೆ ಪ್ರಸಿದ್ಧವಾದದ್ದು! ಬರೀ ಸದ್ದಲ್ಲ, ಕಪಟದ ಕಣ್ಣೀರನ್ನೇ ಕರೆಯಬಲ್ಲ ಕಣ್ಗಳು, ಅವನವು. ರೋದನ ಮಾಡಿ ಕೆಲಸ ಸಾಧಿಸಿಕೊಳ್ಳುವ ಜಾಣ್ಮೆ ಅವಲ್ಲಿದೆ.

ಮುಖದ ಈ ವಿಶೇಷಗಳಲ್ಲದೆ, ಹೆಜ್ಜೆಯಲ್ಲೂ ವಿಶೇಷವಿದೆ. ಕೋಮಲವಾದ ತಾಂಡವವಾಡುವ ಕಾಲುಗಳು, ಆತನವು. ಕಾಳಿಯ-ಮರ್ದನದ ವೇಳೆ ಕಠೋರವಾದ ನರ್ತನವಾದರೂ, ಎಳಸಿನ ಕುಣಿತದಲ್ಲಿ ಕೋಮಲತೆಯೇ.

ಶ್ಲೋಕದ ನಾಲ್ಕು ಪಾದಗಳು ವದನೇ-ವಚನೇ-ನಯನೇ-ಚರಣೇ ಎಂದು ಮೂರುಮೂರಕ್ಷರಗಳಿಂದಲೇ ಆರಂಭವಾಗುತ್ತವೆ. ಮಿತವಾದ ಅನುಪ್ರಾಸದಿಂದ ಶೋಭಿಸುವ ಪದ್ಯವಿದು.

ಮುದ್ದಿನ ಎಳೆವಯಸ್ಸಿನ ಮಗುವೆಂದರೆ ಮುದ್ದಾಡುವವರೇ ಎಲ್ಲರೂ. ಚೂಟಿಯಾದ ಬಾಲ, ಕಪಟದಿಂದಲೂ ಕೆಲಸ ಸಾಧಿಸಿಕೊಳ್ಳಬಲ್ಲ ಕುಮಾರ. ಈತನು ಆಕರ್ಷಕನೂ ಹೌದು. ಆಶ್ರಯಿಸಿ, ಆತನನ್ನೇ – ಎನ್ನುತ್ತಾನೆ, ಕವಿ.

ವದನೇ ನವನೀತ-ಗಂಧವಾಹಂ
ವಚನೇ ತಸ್ಕರ-ಚಾತುರೀ-ಧುರೀಣಮ್ |
ನಯನೇ ಕುಹನಾಶ್ರುಮಾಶ್ರಯೇಥಾಃ
ಚರಣೇ ಕೋಮಲ-ತಾಂಡವ-ಕುಮಾರಮ್ ||

***

ತನ್ನ ಬಾಲ್ಯದಲ್ಲಿಯೇ ಗೋಪರನ್ನು ಕೃಷ್ಣನು ರಕ್ಷಿಸಿದ ಬಗೆ ಒಂದೆರಡಲ್ಲ. ಯಮುನಾನದಿಯ ದಡದಲ್ಲಲ್ಲವೇ ಕೃಷ್ಣನ ನಾನಾ-ಲೀಲೆಗಳು ನಡೆದದ್ದು?

ಕಾಳಿಯ-ದಮನವಾದ ಬಳಿಕ, ಗೋಪರೂ ಗೋವುಗಳೂ ಹಸಿವು ಬಾಯಾರಿಕೆಗಳಿಂದ ಬಳಲಿದ್ದರಿಂದ, ಯಮುನಾ-ತಟದಲ್ಲೇ ರಾತ್ರಿ ಉಳಿದುಕೊಂಡಿದ್ದರು. ಆಗೊಂದು ಕಾಳ್ಗಿಚ್ಚು ಕಾಣಿಸಿಕೊಂಡಿತು! ಗ್ರೀಷ್ಮದಲ್ಲಿ ದಾವಾಗ್ನಿಯೆಂಬುದು  ಸಾಮಾನ್ಯವೇ ಸರಿ. ಮಲಗಿದ್ದ ಗೋಕುಲವಾಸಿಗಳನ್ನದು ಸುತ್ತುವರಿಯಿತು. ಅವರೆಲ್ಲರನ್ನೂ ಅದು ಸುಟ್ಟುಹಾಕಿಬಿಡುವುದರಲ್ಲಿತ್ತು!

ಥಟ್ಟನೆದ್ದ ಗೋಪರು ಓಡಿಹೋಗಿ ಶ್ರೀಕೃಷ್ಣನಲ್ಲಿ ಶರಣಾದರು. "ಅಮಿತ-ವಿಕ್ರಮನಾದ ಕೃಷ್ಣನೇ, ಈ ಘೋರತಮ-ಕಾಲಾಗ್ನಿಯು ದುಸ್ತರ, ಎಂದರೆ ನಮಗೆ ದಾಟಲಾರದ್ದು. ಕೃಷ್ಣ, ಕೃಷ್ಣ, ಈ ವಹ್ನಿಯು ನಮ್ಮನ್ನು ಸುಡುತ್ತಿದೆ. ನಾವೋ ನಿನ್ನ ಚರಣವನ್ನು ಬಿಟ್ಟುಹೋಗಲಾರೆವು. ಅದೊಂದೇ ನಮಗೆ ಭಯರಹಿತ-ಸ್ಥಾನ. ನಮ್ಮನ್ನು ಕಾಪಾಡು!" - ಎಂದು ಬೇಡಿಕೊಂಡರು. ಆಗ ಅನಂತಶಕ್ತಿ-ಧಾರಿಯಾದ ಆ ಅಗ್ನಿಯನ್ನು ಕೃಷ್ಣನು ಕುಡಿದುಹಾಕಿಬಿಟ್ಟನು. ಹೀಗೆ ಹೇಳುತ್ತದೆ, ಭಾಗವತ ಕಥೆ.

ಗೋಪಾಲಕರ ರಕ್ಷಣೆಗಾಗಿ ಇಂತಹ ಮಹಾಕಾರ್ಯವನ್ನು ಮಾಡಿದ ಕೃಷ್ಣನು ಶರಣಾರ್ಥಿಗಳಿಗೆ ಶರಣ್ಯನಾಗಲಾರನೇ? ಶರಣಾರ್ಥಿಗಳು ಎಂದರೆ ಆಶ್ರಯವನ್ನು ಬೇಡಿ ಬಂದವರು, ನಾವು. ಶರಣ್ಯನೆಂದರೆ ರಕ್ಷಣೆ ಕೊಡುವವ.

ಗೋಪರಿಗಾಗಿ ಅಗ್ನಿಪಾನವನ್ನೇ ಮಾಡಿದವ, ನಮಗೆ ರಕ್ಷಣೆಕೊಡದೆ ಹೋದಾನೇ? ಸಾಧ್ಯವೇ ಇಲ್ಲ, ರಕ್ಷಿಸಿಯೇ ತೀರುವನು.

ನಾಲ್ಕು ಪಾದಗಳ ಆರಂಭದ ದ್ವಿತೀಯಾಕ್ಷರ-ತೃತೀಯಾಕ್ಷರ ಪ್ರಾಸಾಲಂಕಾರವು ಒಂದು ಸೊಗಸು. ಹಾಗೆಯೇ ಗೋಪ-ಗೋಪ, ನಂದ-ನಂದ, ಶರಣ-ಶರಣ್ಯ – ಇವುಗಳಲ್ಲೂ ಅನುಪ್ರಾಸವೇ.

ಅಮುನಾಖಿಲ-ಗೋಪ-ಗೋಪನಾರ್ಥಂ

ಯಮುನಾ-ರೋಧಸಿ ನಂದ-ನಂದನೇನ |

ದಮುನಾ ವನ-ಸಂಭವಃ ಪಪೇ ನಃ

ಕಿಮು ನಾಸೌ ಶರಣಾರ್ಥಿನಾಂ ಶರಣ್ಯಃ ||

ಸೂಚನೆ : 1/11/2025 ರಂದು   ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.