Tuesday, August 15, 2023

ಯಕ್ಷ ಪ್ರಶ್ನೆ 50 (Yaksha prashne 50)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ – 49 ದೈವದತ್ತನಾದ ಮಿತ್ರ ಯಾರು  ?

ಉತ್ತರ - ಭಾರ್ಯಾ 

ಕುಟುಂಬ ವ್ಯವಸ್ಥೆಯಲ್ಲಿ ಸತಿ-ಪತಿಯರ ಪಾತ್ರ ಬಹಳ ಮಹತ್ತ್ವದ್ದು ಮತ್ತು ಸಮಾನವಾದದ್ದು. ಅವರ ಸಮಭಾಗಿತ್ವದಿಂದಲೇ ಆ ಕುಟುಂಬವು ಔನ್ನತ್ಯಕ್ಕೆ ಏರಲು ಸಾಧ್ಯ. ಭಾರತೀಯ ಸಂಸ್ಕೃತಿಯು ಮಡದಿಗಿ ಪತಿಯಷ್ಟೇ ಸ್ಥಾನವನ್ನು ಕೊಟ್ಟಿದೆ. 'ಅರ್ಧಂ ಭಾರ್ಯಾ ಮನುಷ್ಯಸ್ಯ' 'ಶ್ರೀಕಂಠಾರ್ಧಶರೀರಿಣೀಂ' ಎಂದು ಪಾರ್ವತಿಯನ್ನು ವರ್ಣಿಸಿದ್ದುಂಟು. ಉಪದೇಶದ ಮೂರು ಕ್ರಮಗಳಲ್ಲಿ ಕಾಂತಾಸಂಮಿತಾ ಎಂದು ಭಾರ್ಯೆಯನ್ನು ಒಬ್ಬ ಉಪದೇಶವನ್ನು ಮಾಡುವ ಸ್ಥಾನದಲ್ಲಿ ಇಟ್ಟು ಗೌರವಿಸಿದ್ದು ಇದೇ ಸಂಸ್ಕೃತಿ. ವಿವಾಹ ಎಂಬ ಅತಿಮುಖ್ಯವಾದ ಸಂಸ್ಕಾರ ಕರ್ಮವು ಸ್ತ್ರೀಯನ್ನು ಪುರುಷನ ಸಮಾನತೆಯ ಪ್ರತೀಕವಾಗಿಸಿದೆ. ಹೆಂದತಿಗೆ ಸಂಸ್ಕೃತದಲ್ಲಿ ಸಹಧರ್ಮಿಣೀ' ಎಂಬ ಪದ ಬಂದಿದೆ. ಧರ್ಮಕಾರ್ಯವನ್ನು ಮಾಡುವಾಗ ಪತ್ನಿ ಇಲ್ಲದಿದ್ದರೆ ಆ ಕಾರ್ಯವು ಪರಿಪೂರ್ಣವಾಗಲಾರದು. 'ಪತ್ನಿ ಎಂಬ ಶಬ್ದವು ಯಜ್ಞದಲ್ಲಿ ಪತ್ನಿಯ ಸಹಭಾಗಿತ್ವವನ್ನು ಸೂಚಿಸುವಂತಹದ್ದು. ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳೂ ಕೂಡ ಸಂತೋಷಪಾಡುತ್ತಾರೆ. ಪತ್ನಿಯು ಕಣ್ಣಿರಿಟ್ಟ ಮನೆಯು ಉದ್ಧಾರವಾಗುವುದಿಲ್ಲ ಎಂಬ ಮಾತೂ ಜನಜನಿತವಾದುದು. ಇಷ್ಟೆಲ್ಲಾ ವಿಚಾರವನ್ನು ನೋಡಿದಾಗ ನಮಗೆ ಮನದಟ್ಟಾಗುವುದೇನೆಂದರೆ ಕುಟುಂಬದ ವ್ಯವಸ್ಥೆಯಿಂದಲೇ ಭಾರತೀಯ ಸಂಸ್ಕೃತಿಗೆ ಜಗಮನ್ನಣೆ ದೊರೆಯಲು ಕಾರಣಳೇ ಭಾರ್ಯಾ ಎಂಬುದನ್ನು ತಿಳಿಸಲು ಯಕ್ಷನು ದೈವದತ್ತನಾದ ಮಿತ್ರ ಯಾರು ? ಎಂಬ ಪ್ರಶ್ನೆಯನ್ನು ಕೇಳುತ್ತಾನೆ. ಅದಕ್ಕೆ ಧರ್ಮರಾಜನು 'ಭಾರ್ಯಾ' ಎಂಬ ಉತ್ತರವನ್ನು ಕೊಡುತ್ತಾನೆ. 

ಋಣಾನುಬಂಧದಿಂದ ಪಶು, ಪತ್ನಿ ಸುತ ಮತ್ತು ಆಲಯ ದೊರೆಯುತ್ತವೆ ಎಂಬ ಮಾತಿದೆ. ಆ ಋಣವನ್ನೇ ದೈವ ಎಂದಿದ್ದಾರೆ. ದೈವ ಎಂದರೆ ದೇವರಲ್ಲ. ದೇವ ಅಲ್ಲ. ಅದು ನಮ್ಮ ಕರ್ಮದ ಸಂಚಿತವಾದ ರೂಪವಷ್ಟೇ. ಮಾಡಿದ ಪ್ರತಿಯೊಂದು ಕರ್ಮಕ್ಕೂ ಒಂದು ಫಲ ಇದ್ದೇ ಇದೆ. ವರ್ತಮಾನದಲ್ಲಿ ನಾವು ಯಾವುದನ್ನು ಮಾಡದೆ ಅನುಭವಿಸುತ್ತಿದ್ದೇವೋ ಅದನ್ನೇ ಅದೃಷ್ಟ ದೈವ ಭಾಗ್ಯ ಎಂದೆಲ್ಲಾ ಕರೆಯುತ್ತಾರೆ. ಇಂದ ಕರ್ಮಫಲರೂಪವಾಗಿ ಸಿಗಿವಂತಹದ್ದೇ ಭಾರ್ಯಾ ಎಂದರ್ಥ. ಆ ಭಾರ್ಯೆಯೇ ಪುರುಷನ ಜೀವದನಲ್ಲಿ ಸಿಗಬಹುದಾದ ಉತ್ತಮ ಮಿತ್ರ. ಮಿತ್ರನ ಪಾತ್ರ ಜೀವನಕ್ಕೆ ಅನೇಕ ಬಾರಿ ಜೀವಿಕೆಯನ್ನು ಕೊಡುವುದುಂಟು. ಅಂತಹ ಮಿತ್ರರಲ್ಲಿ ಹೆಂಡತಿಯು ಮೊದಲಿಗಳು. ಏಕೆಂದರೆ ಉಳಿದೆಲ್ಲಾ ಮಿತ್ರರು ಯಾವುದೇ ಸಂದರ್ಭಕ್ಕೂ ನಮ್ಮಿಂದ ದೂರವಾಗಬಹುದು. ಆದರೆ ಪತ್ನಿ ಮಾತ್ರ ವಿವಾಹದಿಂದ ಆರಂಭವಾದ ಜೀವನ ಪಯಣಕ್ಕೆ ಅಂತ್ಯದದವರೆಗೂ ಸಹಚಾರಿಣೀ. ಪುರುಷನಿಂದ ಪಾಪಕಾರ್ಯಗಳು ಆಗದಂತೆ ನೋಡಿಕೊಳ್ಳುತ್ತಾಣೆ, ಉತ್ತಮ ಕಾರ್ಯಗಳಲ್ಲಿ ಅವನನ್ನು ತೊಡಗಿಸುತ್ತಾಳೆ. ರಹಸ್ಯವಾದುದನ್ನು ರಕ್ಷಿಸುತ್ತಾಳೆ. ಗುಣವನ್ನು ಬಿತ್ತರಿಸುತ್ತಾ ದೋಷಗಳನ್ನು ಅವನಿಗೆ ಅರಿವಾಗದಂತೆ ದೂರೀಕರಿಸುತ್ತಾಳೆ. ಯಾವುದೇ ಆಪತ್ತಿನಲ್ಲೂ ಆಕೆಯು ಪತಿಯ ಜೊತೆ ಇದ್ದು ಸಹಕರಿಸುತ್ತಾಳೆ. ಸಂಪತ್ತಿನಲ್ಲಿ ಮಾತ್ರ ಜೊತೆಗಿರುವವರು ಮಿತ್ರರಾಗುವುದಿಲ್ಲ. ಮಿತ್ರನ ಲಕ್ಷಣ ಪರಿಪೂರ್ಣವಾಗಿ ಅನ್ವಯವಾಗುವುದು ಭಾರ್ಯೆಯಲ್ಲಿ ಮಾತ್ರ. ಅವಳು ಕೇವಲ ಇಹಲೋಕಕ್ಕೆ ಮಾತ್ರವಲ್ಲ ಸಪ್ತ ಊರ್ಧ್ವಲೋಕದ ಪ್ರಯಾಣದಲ್ಲೂ ಸಹಪಥಿಕಳೇ. ಅದನ್ನೇ ನೆನಪಿಸಲು ವಿವಾಹದಲ್ಲಿ 'ಸಪ್ತಪದೀ' ಎಂಬ ಮುಖ್ಯವಾದ ಘಟ್ಟ. ಏಳು ಹೆಜ್ಜೆ ನಡೆದು ಮಿತ್ರನಾಗು ಬಾಣಿನುದ್ದಾಕ್ಕೂ ಹಾಗೇ ಇರುವಂತವಳು ಭಾರ್ಯೆ.  

ಸೂಚನೆ : 13/8/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.