Thursday, August 10, 2023

ಪುತ್ರನಿಂದ ಬ್ರಹ್ಮಜ್ಞಾನ ಪಡೆದ ಮಹಾತಾಯಿ ದೇವಹೂತಿ (Putraninda Brahmajnana Padeda Mahatayi Devahuti)

ಲೇಖಕರು : ಭಾಷ್ಯಂ ರಾಮಚಂದ್ರಾಚಾರ್ 
ಪ್ರತಿಕ್ರಿಯಿಸಿರಿ lekhana@ayvm.in)




ಹಿಮಾಲಯದ ಪರ್ವತ ಶ್ರೇಣಿ. ಪಾರ್ವತೀ- ಪರಮೇಶ್ವರರು ವಿಹರಿಸುವ ತಾಣ. ಪ್ರಶಾಂತ ಗಂಭೀರ ವಾತಾವರಣ. ಅಲ್ಲೊಂದು
ಸುಂದರ, ರಮಣೀಯ ಆಶ್ರಮ. ಪ್ರಜಾಪತಿಗಳಲ್ಲಿ ಒಬ್ಬರಾದ ಕರ್ದಮ ಮಹರ್ಷಿಗಳು ತಪೋ- ಧ್ಯಾನ - ಸಮಾಧಿಯಲ್ಲಿ ಮುಳುಗಿ
ಆಗತಾನೆ ಹೊರಬಂದು ಬಾಹ್ಯಪ್ರಪಂಚದ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ಆಸೀನರಾಗಿದ್ದಾರೆ. ಅಲ್ಲಿಗೆ
ಸ್ವಾಯಂಭುವ ಮನು, ಅವರ ಪತ್ನಿ ಶತರೂಪಾ ಮತ್ತು ಪುತ್ರಿ ದೇವಹೂತಿಯರು ದೇದೀಪ್ಯಮಾನವಾದ ರಥದಲ್ಲಿ
ಆಗಮಿಸುತ್ತಾರೆ. ಕರ್ದಮರನ್ನು ಏಕಾಂತದಲ್ಲಿ ಕಂಡ ಸ್ವಾಯಂಭುವ ಮನುವು, ತನ್ನ ಮಗಳಾದ ಸರ್ವ ಗುಣ ಸಂಪನ್ನೆಯಾದ
ದೆವಹೂತಿಯನ್ನು ವರಿಸುವಂತೆ ಕರ್ದಮರಲ್ಲಿ ಪ್ರಾರ್ಥಿಸುತ್ತಾನೆ. ಬ್ರಹ್ಮಚರ್ಯಾಶ್ರಮದಲ್ಲಿ ಸಾಧಿಸಬೇಕಾದ ಭಗವತ್ಸಾಕ್ಷಾತ್ಕಾರ
ಸಿದ್ಧಿಗಳನ್ನೆಲ್ಲ ಪಡೆದ ಕರ್ದಮರು, ವಂಶವೃದ್ಧಿಗೋಸ್ಕರ ಗೃಹಸ್ಥಾಶ್ರಮವನ್ನು ಸ್ವೀಕರಿಸುವ ಉದ್ದೇಶದಿಂದ
ಪರವಾಸುದೇವನನ್ನು ಕುರಿತು ತಪಸ್ಸು ಮಾಡಿರುತ್ತಾರೆ. ಪ್ರತ್ಯಕ್ಷನಾದ ಭಗವಂತ 'ನಿನಗೆ ಯೋಗ್ಯಳಾದ ಕನ್ಯೆಯು ತಾನಾಗಿಯೇ
ಶೀಘ್ರದಲ್ಲಿ ಬರುವವಳಿದ್ದಾಳೆ. ಸ್ವಾಯಂಭುವ ಮನುವಿನ ಪುತ್ರಿ. ಅವಳನ್ನು ನೀನು ವಿವಾಹವಾಗು. ನಾನೇ ನಿನ್ನ ವೀರ್ಯದಲ್ಲಿ
ಇಳಿದು, ನಿನಗೆ ಪುತ್ರನಾಗಿ ಜನಿಸುವೆ' ಎಂಬ ವರ ಕೊಟ್ಟಿರುತ್ತಾನೆ. ಇದನ್ನು ನೆನೆದ ಕರ್ದಮರು- ತಾನು
ಸಂತಾನೋತ್ಪತ್ತಿಯವರೆವಿಗೂ, ಗೃಹಸ್ಥ ಧರ್ಮಪಾಲಿಸಿ ಅನಂತರ ಸಂನ್ಯಾಸಧರ್ಮಕ್ಕೆ ಮನಕೊಡುವೆನೆಂಬ ನಿಬಂಧನೆಯ ಮೇಲೆ
ವಿವಾಹಕ್ಕೆ ಸಮ್ಮತಿಸುತ್ತಾರೆ, ಒಪ್ಪಿದ ರಾಜದಂಪತಿಗಳು, ಆ ಆಶ್ರಮದಲ್ಲೇ ತಮ್ಮ ಪ್ರೀತಿಯಪುತ್ರಿ ದೇವಹೂತಿಯನ್ನು
ಕರ್ದಮರಿಗೆ ವಿವಾಹ ಮಾಡಿಕೊಡುತ್ತಾರೆ.

ತಾನಿರುವುದು ಒಬ್ಬ ಋಷಿವರೇಣ್ಯರ ಆಶ್ರಮವೆಂದು ಅರಿತ ದೇವಹೂತಿ, ರಾಜಪುತ್ರಿಯೆಂದು ಮರೆತು, ಆಶ್ರಮದ ಗಾಂಭೀರ್ಯಕ್ಕೆ
ತಕ್ಕಂತೆ, ಸರ್ವಜ್ಞರಾದ ಕರ್ದಮರ ಸೇವೆಯಲ್ಲಿ ನಿರತಳಾಗುತ್ತಾಳೆ, ಪಾರ್ವತೀದೇವಿ ಪರಶಿವನ ಸೇವೆಯಲ್ಲಿ ನಿರತಳಾದಂತೆ.
ಹಲವು ಕಾಲದ ಸೇವೆಯಿಂದ ಸಂತೃಪ್ತರಾಗಿ, ಸೊರಗಿದ ರಾಜಕುಮಾರಿಯನ್ನು ಕಂಡ ಕರ್ದಮರು, ಅವಳಿಗೆ ದೇವತೆಗಳ
ಭೋಗವನ್ನು ಅನುಭವಿಸಲು ಯೋಗ್ಯವಾದಂತಹ ದಿವ್ಯದೇಹವನ್ನು ಅನುಗ್ರಹಿಸುತ್ತಾರೆ, ತಮ್ಮ ತಪೋಬಲದಿಂದ. ಕಾಲಕ್ರಮದಲ್ಲಿ
ಕರ್ದಮ-ದೇವಹೂತಿಯರಿಗೆ ಒಂಭತ್ತು ಸ್ತ್ರೀ ರತ್ನಗಳು ಜನಿಸುತ್ತವೆ. ಅವರನ್ನೆಲ್ಲಾ ಸರಿಯಾದ ವರರಿಗೆ
ವಿವಾಹಮಾಡಿಕೊಡುತ್ತಾರೆ.

ಇಷ್ಟೆಲ್ಲಾ ಭೋಗ ಭಾಗ್ಯಗಳಿದ್ದರೂ ದೇವಹೂತಿಯ ಮನದಲ್ಲಿ ಒಂದು ಕೊರತೆ - ತಾನೊಬ್ಬ ಬ್ರಹ್ಮರ್ಷಿಯ ಪತ್ನಿಯಾದರೂ
ಅವರಿಂದ ಬ್ರಹ್ಮ ಮಾರ್ಗವನ್ನು ತಿಳಿದುಕ್ಕೊಳ್ಳಲಿಲ್ಲವಲ್ಲವೆಂದು. ಪತಿಯನ್ನು ಏಕಾಂತದಲ್ಲಿ ಕಂಡ ಅವಳು, ಬ್ರಹ್ಮಕ್ಕೆ
ದಾರಿಯನ್ನು ಬೇಡುತ್ತಾಳೆ. ಮಹಾಜ್ಯೋತಿಯನ್ನು ಗರ್ಭದಲ್ಲಿ ಧರಿಸಿರುವಳೆಂದು ಅರಿತ ಅವರು, ದೇವಹೂತಿಗೆ ತಿಳಿಸುತ್ತಾರೆ
'ನಿನ್ನ ಗರ್ಭದಲ್ಲಿ ಈಗ ಬೆಳಗುತ್ತಿರುವವನು ಸಾಕ್ಷಾತ್ ಶ್ರೀಮನ್ನಾರಾಯಣನೇ. ಅವನೇ ನಿನಗೆ ದಾರಿಯನ್ನು ತೋರಿಸುತ್ತಾನೆ. ಈಗ
ನನ್ನ ಗೃಹಸ್ಥಧರ್ಮದ ಸಂಕಲ್ಪ ಮುಗಿದಿರುವುದರಿಂದ, ಮಾತಿನಂತೆ ಸನ್ಯಸ್ಥನಾಗುತ್ತೇನೆ' ಎಂದು ತಿಳಿಸಿ ತಮ್ಮ ಮುಂದಿನದಾರಿಗೆ
ಹೊರಡುತ್ತಾರೆ.

ದೇದೀಪ್ಯಮಾನವಾದ ಶಿಶು ಜನಿಸುತ್ತದೆ. ತಾನ್ಯಾರೆಂದು ಹುಟ್ಟಿನಿಂದಲೇ ಅರಿತ ಮಗು, ಶೀಘ್ರವಾಗಿ ಬೆಳೆದು ತಾರುಣ್ಯಕ್ಕೆ
ಕಾಲಿಡುತ್ತದೆ, ಕಪಿಲರಾಗಿ, ಮಹಾಮುನಿಯಾಗಿ. ಬೆಳೆದುನಿಂತ ದಿವ್ಯ ಮಂಗಲಸುಂದರಾಂಗನಾದ ಪುತ್ರ ಶ್ರೀಮನ್ನಾರಾಯಣನೇ
ಎಂದು ಅರಿತ ದೇವಹೂತಿ ಅವನನ್ನು ಏಕಾಂತದಲ್ಲಿ ಕಂಡು ನಮಸ್ಕರಿಸಿ 'ನೀನ್ಯಾರೆಂದು ನಿನ್ನ ತಂದೆಯವರಿಂದ ತಿಳಿದಿದ್ದೇನೆ.
ನನಗೆ ಭಗವಂತನ ಮಾರ್ಗವನ್ನು ತಿಳಿಸಿಕೊಡು' ಎಂದು ಬೇಡುತ್ತಾಳೆ. ತಾಯಿ ಮಗನಿಗೆ ನಮಸ್ಕರಿಸಬಹುದೇ? ಆದರೆ ಮಗ
ಭಗವಂತನೇ ಆದಾಗ? ಗುರುವಾಗಬೇಕಾದಾಗ? ದೇವಕೀದೇವಿಯು ತನ್ನಪುತ್ರನಿಗೆ ನಮಸ್ಕರಿಸಲಿಲ್ಲವೇ?

ನಮಸ್ಕರಿಸಿದ ತಾಯಿಗೆ ಕಪಿಲರು' ಸಾಂಖ್ಯಯೋಗದರ್ಶನ'ವನ್ನು ಉಪದೇಶಿಸುತ್ತಾರೆ. ತ್ರಿಗುಣಾತ್ಮಕವಾದ ಪ್ರಕೃತಿ ಹೇಗೆ ಆತ್ಮಕ್ಕೆ
ಮೋಸಮಾಡುತ್ತದೆ - ಸರಿಯಿಲ್ಲದ ಕನ್ನಡಿ ಪ್ರತಿಬಿಂಬವನ್ನು ಹೇಗೆಹೇಗೋ ತೋರಿಸುವಂತೆ. ಆತ್ಮ ನಮ್ಮೊಳಗಡೆಯೇ ಅಡಗಿದೆ -
ಆತ್ಮಾ ಗುಹಾಯಾಂ ನಿಹಿತೊsಸ್ಯ ಜಂತೋ: ಮಾನವರು ತಮ್ಮೊಳಗೇ ಇರುವ ಹಿರಣ್ಯಗರ್ಭನನ್ನು ಅರಿಯದೆ ದುಃಖದ
ಕಡಲಿನಲ್ಲಿ ಮುಳುಗಿರುತ್ತಾರೆ - ಭೂಮಿಯಲ್ಲಿ ಅಡಗಿರುವ ಸುವರ್ಣದ ಮೇಲೆ ಓಡಾಡುತ್ತಿದ್ದರೂ ಭಿಕಾರಿಯಾಗಿ ಅಲೆಯುವಂತೆ.
ಪಂಚಮಹಾಭೂತಗಳು, ಪಂಚಕರ್ಮೇಂದ್ರಿಯಗಳು, ಪಂಚಜ್ಞಾನೇಂದ್ರಿಯಗಳು, ಪಂಚ ತನ್ಮಾತ್ರೆಗಳು, ಮನಸ್ಸು, ಅಹಂಕಾರ, ಬುದ್ಧಿ
(ಮಹತ್), ಪ್ರಕೃತಿ ಇವುಗಳಿಂದ ಮಾಡಿದ ಇಪ್ಪತ್ತುನಾಲ್ಕು ಪೊರೆಗಳನ್ನು, ತಾನ್ಯಾರೆಂದು ಚಿಂತಿಸುವುದರಮೂಲಕ, ಭಕ್ತಿಯಿಂದ,
ಮಹಾಪುರುಷನ ಧ್ಯಾನದಿಂದ, ಮತ್ತು ಇವೆಲ್ಲವನ್ನೂ ಸೇರಿಸಿಕೊಂಡು ಹೇಗೆ ಬಂಧನದಿಂದ ಬಿಡುಗಡೆ ಹೊಂದುವುದು
ಎಂಬುದೆಲ್ಲವನ್ನೂ ತಿಳಿಸಿಕೊಟ್ಟು, ತನ್ನ ಮೂರ್ತಿಯೇ ಒಳಮಾರ್ಗದಲ್ಲಿ ಕೊಂಡೊಯ್ಯುವ ಮಂಗಲವಿಗ್ರಹವಾದುದರಿಂದ

ಅದನ್ನೇ ಹೇಗೆ ಧ್ಯಾನಮಾಡುವುದೆಂದು ತಿಳಿಸಿಕೊಟ್ಟು, 'ನಾನು ನಿನಗೆ ಬಹಳ ಪ್ರಿಯವಾದವನು, ದೇಹ ಸಂಬಂಧದಿಂದ
ಮಾತ್ರವಲ್ಲ, ಆತ್ಮಸಂಬಂಧದಿಂದಲೂಕೂಡ. ನನ್ನನು ಪ್ರೀತಿಯಿಂದ, ಅಥವಾ ಭಕ್ತಿಯಿಂದ, ತಂದೆಯಾಗಿ, ಗುರುವಾಗಿ ಕೊನೆಗೆ
ನಾನೇ ಆತ್ಮವೆಂದು ಧ್ಯಾನಮಾಡಮ್ಮ' 'ತಿಳಿಯಿತೇ?ಅರ್ಥವಾಯಿತೇ? ಮನಸ್ಸಿಗೆ ಬಂತೇ?' ಎಂದು ಮತ್ತೆಮತ್ತೆ ಕೇಳಿ, ಅವಳಿಗೆ
ತಿಳಿಯಿತೆಂದು ಮನದಟ್ಟುಮಾಡಿಕೊಂಡು, ತಾನೂ ಈಶಾನ್ಯ ದಿಕ್ಕಿಗೆ ತಪಸ್ಸಿಗೆ ಹೊರಡುತ್ತಾರೆ.

ನಾವೆಲ್ಲಾ ಭಗವಂತನಿಂದ ೨೫ ಮೈಲಿಗಳ ದೂರದಲ್ಲಿ ಇದ್ದೇವೆ. ೨೪ ಪ್ರಕೃತಿ ತತ್ವಗಳು, ೨೫ ನೆಯ ಜೀವ. ೨೬ ನೇ ಪರತತ್ತ್ವವೇ
ಭಗವಂತ ಎಂದು ಶ್ರೀರಂಗ ಮಹಾಗುರುಗಳು ಮಾರ್ಮಿಕವಾಗಿ ತಿಳಿಸಿದ್ದು ಇಲ್ಲಿ ಸ್ಮರಣೀಯ. ಸಕಲ ಸುಖ ಭೋಗಗಳು
ಮುಂದಿದ್ದರೂ ಪರಮಾನಂದದ ನೆಲೆಯಾದ ಬ್ರಹ್ಮತತ್ತ್ವದ ಉಪದೇಶಕ್ಕಾಗಿ ಮಗನನ್ನೇ ಆಶ್ರಯಿಸಿದ ಮಹಾತಾಯಿ ದೆವಹೂತಿಗೆ
ನಮೋನಮಃ. ಹಿಮಾಲಯದ ಮಡಿಲಲ್ಲಿ ಕಪಿಲವಸ್ತು ಎಂದು ಅವರಹೆಸರಿನಿಂದಲೇ ಪ್ರಸಿದ್ಧವಾದ ಸ್ಥಳದಲ್ಲಿ ಜನಿಸಿ (ಗೌತಮ
ಬುದ್ಧರಿಗೆ ಬಹಳ ಮೊದಲು), ತಾಯಿಗೆ ಉಪದೇಶಮಾಡುವ ನೆಪದಲ್ಲಿ ಲೋಕೋದ್ಧಾರಕ್ಕಾಗಿ ಎಲ್ಲಾ ಶಾಸ್ತ್ರಗಳಿಗೆ
ಬೆನ್ನುಮೂಳೆಯಂತಿರುವ - ಪಾತಂಜಲಂ ಕಾಪಿಲಂಚ ಸರ್ವಶಾಸ್ತ್ರೋಪಕಾರಕಂ - 'ಸಾಂಖ್ಯ ದರ್ಶನ' ವನ್ನು ಉಪದೇಶಿಸಿ, -
ಪ್ರಕೃತಿಯನ್ನು ದಾಟುವಮಾರ್ಗವನ್ನು ತಿಳಿಯಪಡಿಸಿ, ಈಶಾನ್ಯವನ್ನು ಪವಿತ್ರಗೊಳಿಸಿರುವ ಸಿದ್ಧರಲ್ಲಿ ಅತ್ಯಂತ ಶ್ರ್ರೇಷ್ಠರಾದ ,
ಭಗವಂತನ ಅವತಾರವೇ ಆದ ಕಪಿಲ ಮಹರ್ಷಿಗಳಿಗೆ ನಮೋನಮಃ. ದೇವಹೂತಿಯ ಆದರ್ಶ, ಕಪಿಲರ ಉಪದೇಶ ನಮ್ಮೆಲ್ಲರ
ದಾರಿದೀವಿಗೆಯಾಗಲಿ.

ಸೂಚನೆ: 10/08/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ಯಲ್ಲಿ ಪ್ರಕಟವಾಗಿದೆ.