Thursday, August 24, 2023

ಜಡಭರತನ ಶ್ರೇಷ್ಠ ಜೀವನಗಾಥೆ (Jadabharatana Srestha Jivanagathe)

ಲೇಖಕರು : ಭಾಷ್ಯಂ ರಾಮಚಂದ್ರಾಚಾರ್ 
ಪ್ರತಿಕ್ರಿಯಿಸಿರಿ lekhana@ayvm.in)




ಜುಳು ಜುಳು ಮಂಜುಳ ನಾದದಿಂದ ಪ್ರಶಾಂತವಾಗಿ ಹರಿಯುತ್ತಿದ್ದ ನದಿ. ಸುತ್ತಲೂ ಅರಣಿಕರು ವಿಹರಿಸುತ್ತಿದ್ದ ಕಾಡು, ಅದರಲ್ಲಿನ ದುಂಬಿ - ಜೀರುಂಡೆಗಳ ನಾದ. ಹತ್ತಿರದಲ್ಲೇ ಸಪ್ತಋಷಿಗಳಲ್ಲಿ ಒಬ್ಬರಾದ ಪುಲಹರ ಆಶ್ರಮ. ಈ ಪ್ರಶಾಂತ ವಾತಾವರಣದಲ್ಲಿ ಆಗತಾನೆ ಆಹ್ನಿಕ ಧ್ಯಾನಗಳನ್ನು ಮುಗಿಸಿದ ರಾಜರ್ಷಿ ಭರತರು, ದಹರಾಕಾಶದಲ್ಲಿ ಕಂಡು ಅನುಭವಿಸಿದ ಜ್ಞಾನಸೂರ್ಯನ ಪ್ರಕಾಶ- ಪ್ರಶಾಂತತೆಯ ವಿಸ್ತಾರವನ್ನು, ಪ್ರಣವ ನಾದದ ವಿಸ್ತಾರವನ್ನು ಹೊರಪ್ರಕೃತಿಯಲ್ಲೂ ಅನುಭವಿಸುತ್ತ ಇನ್ನೂ ಒಳಅನುಭವದ ಗುಂಗಿನಲ್ಲೇ ಇದ್ದರು. ಈ ಮಧ್ಯೆ, ಈ ವಾತಾವರಣವನ್ನು ಭೇದಿಸಿ ಹೊರಟ ಸಿಂಹದ ಘರ್ಜನೆ. ಹತ್ತಿರದಲ್ಲೇ ಮೇಯುತ್ತಿದ್ದ ತುಂಬು ಗರ್ಭಿಣಿಯಾದ ಒಂದು ಹರಿಣಿ, ಬೆಚ್ಚಿ, ಬೆದರಿ ದಿಕ್ಕು ಕಾಣದೆ ತನ್ನನ್ನು, ತನ್ನ ಒಳಗಿನ ಕಿರು ಜೀವವನ್ನು ಪಾರುಮಾಡಲೋಸುಗ ಶಕ್ತಿಮೀರಿದ ಪ್ರಯತ್ನದಿಂದ ನದಿಯನ್ನು ಹಾರಿ ದಾಟಲು ಉದ್ಯುಕ್ತವಾಯಿತು. ತನ್ನ ಭಾರವನ್ನು ಮತ್ತು ಉದರದಲ್ಲಿದ್ದ ಕಿರಿಯ ಭಾರವನ್ನೂ ದಾಟಿಸಲಾಗದೆ ನೀರಿನಲ್ಲಿ ಬಿದ್ದು ಅಸು ನೀಗಿತು. ಅದೃಷ್ಟವಶಾತ್ ಗರ್ಭದಲ್ಲಿದ್ದ ಮರಿ ಹೊರಬಂದಿತು. ಈ ಘಟನೆಗಳನ್ನು ಇನ್ನೂ ಒಳಗುಂಗಿನಲ್ಲೇ ಇದ್ದ ಆತ್ಮಗುಣಸಂಪನ್ನನಾದ ಋಷಿಯ ಮನಸ್ಸು ಗುರುತಿಸಿ, ದಯೆ ಒಸರಿ, ಕರುಣಾರಸವಾಗಿ ದ್ರವಿಸಿ, ಅವರ ಹೊರ ಇಂದ್ರಿಯಗಳಿಗೆ ಚೈತನ್ಯವನ್ನು ಕೊಟ್ಟು, ನದಿಯಲ್ಲಿ ಧುಮಿಕಿಸಿ ಆ ಕಂದನನ್ನು ಕಾಪಾಡುವಂತೆ ಮಾಡಿತು. ಮರಿಯನ್ನು ಆಶ್ರಮಕ್ಕೆ ತಂದ ಅವರು, ಅದಕ್ಕೆ ಹಾಲುಯ್ದು, ಮೇವುಣಿಸಿ ಸಂರಕ್ಷಿಸಲುದ್ಯುಕ್ತರಾದರು. ಕ್ರಮೇಣ ಬೆಳೆಯುತ್ತಿದ್ದ ಆ ಜಿಂಕೆ , ತನ್ನ ಮಿಂಚಿನ ಕುಡಿನೋಟದಿಂದ, ಚಿಮ್ಮುವ ಹಾರುವಿಕೆಯಿಂದ, ಪ್ರೀತಿಯವರ್ತನೆಯಿಂದ ಅವರ ಕರುಣೆಯನ್ನು ವಾತ್ಸಲ್ಯವಾಗಿ, ಪ್ರೀತಿಯಾಗಿ ಅವರಿಗೇ ತಿಳಿಯದಂತೆ ಮಾರ್ಪಡಿಸಿತು. ತಾನು ದರ್ಭ ಸಂಗ್ರಹಕ್ಕೆ ಹೋದರೂ ಮರಿಯದೇ ಗುಂಗು, ಧ್ಯಾನದಲ್ಲೂ ಕೆಲವೊಮ್ಮೆ ಅದರ ಯೋಚನೆಯೇ! ಪ್ರೀತಿ ಕೊನೆಗೆ ಎಲ್ಲಿಲ್ಲದ ಮೋಹವಾಗಿ ಪರಿಣಮಿಸಿ, ಭಗವಂತನ ಧ್ಯಾನದ ಬದಲಿಗೆ ಜಿಂಕೆಯ ಧ್ಯಾನದಲ್ಲಿ ಪರ್ವ್ಯವಸಾನಗೊಂಡಿತು. ತನ್ನ ಅಂತ್ಯಕಾಲದಲ್ಲೂ ಆ ಹರಿಣದ ನೆನಪಿನಲ್ಲೇ ಋಷಿ ಅಸುನೀಗಿದರು. ಅಂತ್ಯಕಾಲದಲ್ಲಿ ಯಾವ ಚಿಂತೆಯಲ್ಲಿರುತ್ತೇವೆಯೋ ಮರು ಜನ್ಮ ಅದರಲ್ಲೇ ಎಂಬ ಭಗವಂತನ ನಿಯಮದಂತೆ , ಭರತರು ಜಿಂಕೆಯಾಗಿಯೇ ಜನ್ಮ ಪಡೆದರು. ಆದರೂ ಪೂರ್ವಜನ್ಮದ ಸಂಸ್ಕಾರ ಬಲವಾಗಿದ್ದದರಿಂದ, ತನ್ನ ಹಿಂದಿನ ಜನ್ಮದ ನೆನಪು ಪ್ರಖರವಾಗಿಯೇ ಇದ್ದಿತು. ಈ ತಪ್ಪನ್ನು ಮತ್ತೆ ಮಾಡಬಾರದು ಎಂದು ಸಂಕಪಲ್ಪಿಸಿದ ಆ ಋಷಿ ಜಿಂಕೆ, ಒಬ್ಬ ಋಷಿ ಆಶ್ರಮದಲ್ಲಿ ತನ್ನ ಜೀವನವನ್ನು ಕಳೆದು ಮತ್ತೆ ಮಾನವನಾಗಿ ಜನಿಸಿತು. ಹುಟ್ಟಿನಿಂದಲೇ ಆಧ್ಯಾತ್ಮದಲ್ಲೇ ತಲ್ಲೀನರಾಗಿ, ಮಹಾಬುದ್ಧಿವಂತರಾಗಿದ್ದರೂ, ಲೌಕಿಕವಿಷಯಗಲ್ಲಿ ಜಡರಾಗಿ 'ಜಡಭರತ' ಎಂಬ ಬಿರುದು ಪಡೆದರು. ತಂದೆ -ತಾಯಿಯರು ಸ್ವರ್ಗಸ್ಥರಾದ ಬಳಿಕ ಅವರ ಅಣ್ಣ - ತಮ್ಮಂದಿರು ಅವರನ್ನು ಕೂಲಿಯವನಂತೆ ದುಡಿಸಿಕೊಂಡು, ಅಧಮ ಆಹಾರವನ್ನು ಕೊಡುತ್ತಿದ್ದರಂತೆ. ಆದರೂ ಧೃಢಕಾಯರಾಗಿದ್ದ ಇವರು ಒಮ್ಮೆ ಹೊಲದ ಬಳಿಯಲ್ಲಿದ್ದಾಗ, ಕೆಲವು ಬೇಡರು ಕಾಳಿಕಾದೇವಿಗೆ ಬಲಿಕೊಡುವುದಕ್ಕಾಗಿ ಕರೆದೊಯ್ದರಂತೆ. ಒಳ್ಳೆಯ ಆಹಾರ ಸಿಕ್ಕದ ಇವರಿಗೆ ಮೃಷ್ಟಾನ್ನ ಭೋಜನ ಬಡಿಸಿದಾಗ ಆನಂದದಿಂದ ಆಸ್ವಾದಿಸಿದರಂತೆ. ಬೇಡರು ಇವರನ್ನು ಬಲಿಕೊಡಲು ಉದ್ಯುಕ್ತರಾದಾಗ, ಕಾಳಿಕಾದೇವಿ ಪ್ರತ್ಯಕ್ಷಳಾಗಿ , ಅವರ ಕತ್ತಿಯಿಂದ ಅವರನ್ನೇ ಕತ್ತರಿಸಿ, ' ಬ್ರಹ್ಮ ಜ್ಞಾನಿಗೆ ನಮಸ್ಕಾರ' ಎಂದು ಇವರಿಗೇ ನಮಸ್ಕರಿಸಿ ಅಂತರ್ಧಾನಳಾದಳಂತೆ.

ಈ ಮಧ್ಯೆ, ಸಿಂಧುಸೌವೀರದೇಶದ ರಾಜ ರಾಹುಗಣ ಎಂಬುವವನು ಅವಧೂತ ಶಿಖಾಮಣಿಗಳಾದ ದತ್ತಾತ್ರೇಯರಲ್ಲಿ ಜ್ಞಾನ- ವೈರಾಗ್ಯ ಪಾಠವನ್ನು ಕಲಿಯಲು ಬೋವಿಗಳು ಹೊತ್ತ ಪಲ್ಲಕ್ಕಿಯಲ್ಲಿ ಪ್ರಯಾಣಮಾಡುತ್ತಿದ್ದನಂತೆ. ಪಲ್ಲಕ್ಕಿ ಹೊರುವರಲ್ಲಿ ಒಬ್ಬನಿಗೆ ಅನಾರೋಗ್ಯವಾದಾಗ, ಗಟ್ಟಿಮುಟ್ಟಾಗಿದ್ದ ಭರತರು ಕಣ್ಣಿಗೆ ಬೀಳಲು, ಅವರನ್ನೇ ಪಲ್ಲಕ್ಕಿಯನ್ನು ಹೊರಲು ನಿಯಮಿಸಿಕ್ಕೊಂಡರಂತೆ. ಎಲ್ಲರಿಗಿಂತಲೂ ಎತ್ತರವಾಗಿದ್ದ ಭರತರು, ನೆಲವನ್ನು ನೋಡುತ್ತಾ, ಭೂಮಿಯಲ್ಲಿ ಓಡಾಡುವ ಕ್ರಿಮಿ ಕೀಟಗಳಿಗೆ ತೊಂದರೆಯಾಗದಂತೆ ವಕ್ರ ವಕ್ರವಾಗಿ ಕಾಲಿಡುತ್ತಿದ್ದರು. ಒಳಗಿದ್ದ ಮಹಾರಾಜನಿಗೆ ಹಿಂಸೆಯಾಗಿ ತಡೆಯಲಾಗದ ಕೋಪದಿಂದ 'ಸರಿಯಾಗಿ ನಡೆ, ಇಲ್ಲದಿದ್ದರೆ ತಕ್ಕ ಶಿಕ್ಷೆಮಾಡುತ್ತೇನೆ ನಾನು' ಎಂದು ಗದರಿಸುತ್ತಾನೆ. ಬ್ರಹ್ಮಭಾವವನ್ನು ಪಡೆದು ವಿವೇಕಿಯಾಗಿರುವ ನನ್ನನ್ನು ಶಿಕ್ಷೆಮಾಡುವುದರಿಂದ ನಿನಗೇನೂ ಲಾಭ? ನಾನು ತಲುಪಬೇಕಾದ ಸ್ಥಾನ ಯಾವುದು ಇಲ್ಲ. ನನಗೆ ಎಲ್ಲವೂ ಒಂದೇ' ಎಂದು ಉತ್ತರಿಸುತ್ತಾರೆ. ಕೇಳಿದ ರಾಜ ಕಕ್ಕಾ ಬಿಕ್ಕಿಯಾಗಿ, ಇಳಿದು, ಸಾತ್ವಿಕ ತೇಜಸ್ಸಿನಿಂದ ಬೆಳಗುತ್ತಿದ್ದ ಮೂರ್ತಿಯನ್ನು ಕಂಡು, ಒಡನೆಯೇ ನಮಸ್ಕರಿಸಿ, 'ಮಹಾತ್ಮರೇ ತಾವು ಯಾರು? ಪರಮ ತೇಜಸ್ಸಿನಿಂದ ತುಂಬಿರುವಿರಲ್ಲ? ನಾನು ಅರೆಸಿಕೊಂಡು ಹೊರಟ ದತ್ತಾತ್ರೇಯರೇ ನನಗೆ ತಿಳುವಳಿಕೆ ಕೊಡಬೇಕೆಂದು ಇಲ್ಲಿ ಬಂದಿದ್ದಾರೆಯೇ? ತತ್ವವನ್ನು ಉಪದೇಶ ಮಾಡಬೇಕು ತಾವು' ಎಂದು ಬೇಡಿಕ್ಕೊಳ್ಳುತ್ತಾನೆ.

ಆಗ ಭರತರು, ಸಂಸಾರವನ್ನು ಒಂದು ಅರಣ್ಯಕ್ಕೆ ಹೋಲಿಸಿ, ಕಾಮ, ಕ್ರೋಧ, ಲೋಭ, ಮೋಹ, ಮದ , ಮಾತ್ಸರ್ಯ ಗಳೆಂಬ ಕ್ರೂರ ಮೃಗಗಳಿಂದ ತುಂಬಿರುವ ಸಂಸಾರವನ್ನು ಕೆಲವೊಮ್ಮೆ ಕುಶಲತೆಯಿಂದ, ಕೆಲವೊಮ್ಮೆ ಚಾತುರ್ಯದಿಂದ, ಕೆಲವೊಮ್ಮೆ ಬಲಪ್ರಯೋಗದಿಂದ ಹೇಗೆ ತಪ್ಪಿಸಿ ಕೊಳ್ಳಬೇಕು ಎಂದು ವಿಶದವಾಗಿ ತಿಳಿಯಪಡಿಸಿ ತತ್ವೋಪದೇಶವನ್ನು ಮಾಡುತ್ತಾರೆ. ಉಪದೇಶವನ್ನು ಪಡೆದ ರಾಜ, ವಾನಪ್ರಸ್ಥಾಶ್ರಮದಲ್ಲಿದ್ದುಕೊಂಡು, ತಪಸ್ಸು ಮಾಡಿ ಆತ್ಮೋದ್ಧಾರವನ್ನು ಮಾಡಿಕೊಳ್ಳುತ್ತಾನೆ.

ರಾಜರ್ಷಿ ಭರತರ ಹಿಂದಿನವರ ಕಥೆಯೂ ಬಹಳ ರಮಣೀಯ. ಪ್ರಿಯವ್ರತ ಮತ್ತು ಉತ್ತಾನಪಾದ ಸ್ವಾಯಂಭು ಮನುವಿನ ಪುತ್ರರು. ಉತ್ತಾನಪಾದನ ಮಗನೇ ಧ್ರುವಕುಮಾರ. ಪ್ರಿಯವ್ರತ ಉತ್ತಾನಪಾದನ ಅಣ್ಣ. ಬ್ರಹ್ಮ ದೇವರ ಆಜ್ಞೆಯಂತೆ ಗೃಹಸ್ಥಾಶ್ರಮವನ್ನು ಸ್ವೀಕರಿಸಿ, ಧರ್ಮಮಾರ್ಗದಲ್ಲಿ ರಾಜ್ಯವಾಳಿ, ಜಿತೇಂದ್ರಿಯನಾಗಿ ಕೊನೆಗೆ ಭಗವಂತನ ಪಾದವನ್ನು ತಲುಪುತ್ತಾನೆ. ಆ ಪರಂಪರೆಯಲ್ಲಿ ನಾಭಿ ಎಂಬ ರಾಜರ್ಷಿ. ಆತನು ಮತ್ತು ಅವನ ಧರ್ಮ ಪತ್ನಿ ಮೇರುದೇವಿ, ಶ್ರೀಮನ್ನಾರಾಯಣನನ್ನು ಆರಾಧಿಸಿ ತಮಗೆ ಅವನಂತಹ ಪುತ್ರ ಬೇಕು ಎಂಬ ವರ ಬೇಡುತ್ತಾರೆ. ತನ್ನಂತೆ ಅಥವಾ ತನಗಿಂತ ಮಿಗಿಲಾದವರು ಯಾರೂ ಇಲ್ಲವೆಂದ ಭಗವಂತ, ತನ್ನ ಕಲೆಯಿಂದ ಅವರ ಪುತ್ರನಾಗಿ ಜನಿಸುತ್ತಾನೆ. ಅವನೇ ಮಹಾತ್ಮನಾದ ಋಷಭದೇವ. ಈ ಅವತಾರದ ಉದ್ದೇಶ, ಆದರ್ಶ ಗೃಹಸ್ಥಾಶ್ರಮದ ಧರ್ಮವನ್ನು ಬೋಧಿಸಿ, ಭಗವಂತನನ್ನು ಆರಾಧಿಸಿ ನಂತರ ಅವಧೂತರ ಆದರ್ಶವನ್ನು ತೋರಿಸುವುದು. ಈ ಉದ್ದೇಶಕ್ಕೆ ತಕ್ಕಂತೆ, ಋಷಭದೇವ, ಜಯಂತಿ ಎಂಬ ದಿವ್ಯಕನ್ಯೆಯನ್ನು ವಿವಾಹವಾಗಿ ಅನೇಕ ಪುತ್ರರನ್ನು ಪಡೆಯುತ್ತಾನೆ. ಅವರ ಪುತ್ರನೇ ಮಹಾತ್ಮನಾದ ಭರತ, ಮುಂದೆ ಜಡ-ಭಾರತನಾದವನು. ನಮ್ಮ ದೇಶಕ್ಕೆ 'ಭಾರತ' ಎಂಬ ಹೆಸರು ಬರುವುದಕ್ಕೆ ಈ ಭರತನೇ ಕಾರಣ ಎಂದು ಶ್ರೀಮದ್ಭಾಗವತವು ತಿಳಿಸುತ್ತದೆ ಆದರ್ಶ ಗೃಹಸ್ಥ ಧರ್ಮ ವನ್ನು ಪಾಲಿಸಿದ ಋಷಭ ಮಹಾರಾಜ, ತನ್ನ ಸುಪುತ್ರನಾದ ಭರತನಿಗೆ ಪಟ್ಟಕಟ್ಟಿ, ತಾನು ಅಕ್ಷರ ಬ್ರಹ್ಮದಲ್ಲಿ ತಾದಾತ್ಯ್ಮವನ್ನು ಹೊಂದಿ, ವರೇಣ್ಯ ಎಂಬುದಕ್ಕೆ ವಿಷಯನಾಗಿ, ಪಾಪಾದಿ ಬಂಧನಗಳೆನ್ನೆಲ್ಲ ಅಶ್ವ ಧೂಳು ಕೊಡವುವಂತೆ ಕೊಡವಿ, ತತ್ವಮಸಿ ಎಂಬ ಶ್ರುತಿ ವಾಕ್ಯಕ್ಕೆ ವಿಷಯನಾದ ಭಗವಂತನಲ್ಲಿ ತಾದಾತ್ಮ್ಯಹೊಂದಿ ಅ-ವ-ಧೂ-ತ ನಾಗಿ, ಆಧರ್ಮವನ್ನು ಬೊಧಿಸುತ್ತಾ, ಯಾವ ಬಂಧನಗಳೂ ಇಲ್ಲದೆ, ಕೊನೆಗೆ ಅನಂತದಲ್ಲೇ ಲೀನವಾಗುತ್ತಾನೆ. ಈ ಋಷಭದೇವನನ್ನು ವೈದಿಕರು ಪೂಜಿಸುವಂತೆಯೇ ಜೈನರೂ ಆದಿತೀರ್ಥಂಕರನೆಂದು ಪೂಜಿಸುತ್ತಾರೆ.

 ಮಹಾತ್ಮನಾದ ಭರತ, ಚಕ್ರವರ್ತಿಯಾಗಿ, ವಿಶಾಲ ಭೂಮಂಡಲವನ್ನು ತನ್ನ ತಮ್ಮಂದಿರಿಗೆ ವಿಭಜಿಸಿಕೊಟ್ಟು, ಸಾಮ, ದಾನ, ಭೇದ, ದಂಡವೆಂಬ ನಾಲ್ಕು ಉಪಾಯಗಳಲ್ಲೂ ಪರಿಣಿತನಾಗಿ ಧರ್ಮದಿಂದ ತಾನೇ ನೇರವಾಗಿ ಆಳುತ್ತಿದ್ದ ಭಾಗಕ್ಕೆ 'ಭಾರತವರ್ಷ' ಎಂದು ಹೆಸರು ಬರುವಂತೆ ಮಾಡಿದನು. ಭರತನು ವಿಶ್ವರೂಪನ ಪುತ್ರಿಯಾದ ಪಂಚಜನೀ ಎಂಬ ಕನ್ಯೆಯನ್ನು ವರಿಸಿ ಸದ್ಗೃಹಸ್ಥನಾಗಿ, ಭೂಮಿಯನ್ನು ಆಳಿದನು. ನಂತರ ವಾನಪ್ರಸ್ಥವನ್ನು ಸ್ವೀಕರಿಸಿ ಸಪ್ತರ್ಷಿಗಳಲ್ಲಿ ಒಬ್ಬರಾದ ಪುಲಹರ ಆಶ್ರಮದಲ್ಲಿದ್ದುಕೊಂಡು ಅದ್ಭುತವಾದ ತಪಸ್ಸನ್ನು ಆಚರಿಸಿದನು. ಅಲ್ಲಿದ್ದಾಗಲೇ ನಡೆದಿದ್ದು ಜಿಂಕೆಯ ಕಥೆ.

'ಶ್ರೀಮದ್ ಭಾಗವತಕಥಾಮೃತಸಾರದಲ್ಲಿ' ಪೂಜ್ಯ ಶ್ರೀ ಶ್ರೀರಂಗಪ್ರಿಯಸ್ವಾಮಿಯವರು ಅವರ ಗುರುಗಳಾದ ಶ್ರೀರಂಗಮಹಾಗುರುಗಳು ಕೊಟ್ಟ ನೋಟದಿಂದ ವರ್ಣಿಸಿರುವ ಶ್ರೀಮದ್ಭಾಗವತದ ಐದನೆಯ ಸ್ಕಂಧವನ್ನಲಂಕರಿಸಿರುವ 'ಭರತೋಪಾಖ್ಯಾನ'ದ ಮೇಲೆ ಈ ಲೇಖನ ಆಧರಿಸಿದೆ. ಸಂಸಾರದಲ್ಲಿದ್ದರೂ ಕುಶಲತೆಯಿಂದ ಅರಿಷಡ್ವರ್ಗಗಳಿಂದ ತಪ್ಪಿಸಿಕ್ಕೊಂಡು, ರಾಗ-ಮೋಹಗಳ ಬಂಧಗಳಿಗೆ ಒಳಗಾಗದೆ, ಭಗವಂತನ ತಾದಾತ್ಮ್ಯ ವನ್ನು ಹೊಂದಿ, ಅಂತ್ಯ ಕಾಲದಲ್ಲಿ ಅವನೆಡೆಯಲ್ಲಿಯೇ ಮನಸ್ಸಿದ್ದರೆ, ಅವನಲ್ಲೇ ಲೀನವಾಗಬಹುದು ಎಂದು ಈ ಕಥೆಗಳ ಸಾರಾಂಶ. ಭಗವಂತನ ಧ್ಯಾನ ಬಿಟ್ಟು ಜಿಂಕೆಯ ವ್ಯಾಮೋಹದಲ್ಲಿ ತೊಡಗಿದ್ದರಿಂದ ಜಿಂಕೆಯಾಗಿ ಜನ್ಮ ತಳೆಯಬೇಕಾದುದು ದುರ್ದೈವ. ಆದರೂ ಒಳ್ಳೆಯ ಸಂಸ್ಕಾರ, ಕರ್ಮಗಳು ಅವನ ಪೂರ್ವಜನ್ಮದ ಸ್ಮರಣೆಯನ್ನು ಹಾಗೇ ಉಳಿಸಿ ಮತ್ತೆ ಮಹಾ ಧ್ಯೇಯದತ್ತ ಸಾಗುವಂತಾದುದು ಸುಕೃತದ ಫಲ. ನಾವೆಲ್ಲಾ ಕಲಿಯಬೇಕಾದ ಜೀವನ ಪಾಠಗಳನ್ನು ಬಿತ್ತರಿಸುವ ಕಥೆಯಾಗಿ, 'ಭಾರತ' ಎಂಬ ನಾಮಧೇಯಕ್ಕೆ ಕಾರಣರಾದ ಭರತ ಮಹಾಮುನಿಗೆ ನಮೋನಮಃ.

ಸೂಚನೆ: 24/08/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ಯಲ್ಲಿ ಪ್ರಕಟವಾಗಿದೆ.