Thursday, September 9, 2021

ಸೌಭಾಗ್ಯಗಳನ್ನು ದಯಪಾಲಿಸುವ ಸ್ವರ್ಣಗೌರೀ-ಮಂಗಳಗೌರೀ (Saubhagyagalannu Dayapaalisuva Svarnagauri-Mangalagauri)

ಲೇಖಕಿ ; ಮೈಥಿಲೀ ರಾಘವನ್

(ಪ್ರತಿಕ್ರಿಯಿಸಿರಿ lekhana@ayvm.in)




ಭಾದ್ರಪದಮಾಸದಲ್ಲಿ ಬರುವ ಪ್ರಮುಖ, ಸಂಭ್ರಮದ ಹಬ್ಬವೆಂದರೆ "ಗೌರೀಹಬ್ಬ"ವೆಂದು ಪ್ರಸಿದ್ಧವಾಗಿರುವ ಸ್ವರ್ಣಗೌರೀವ್ರತ.  ಮರುದಿನದ ಗಣೇಶನ ಹಬ್ಬವೂ ಸೇರಿದಂತೆ 'ಗೌರೀ-ಗಣೇಶ' ಎಂಬುದಾಗಿ ಜನರ ಸಂತಸ-ಸಂಭ್ರಮಗಳಿಗೆ ವಿಷಯವಾಗಿದೆ ಇದು.

ಇದನ್ನು 'ಹೆಂಗಸರ ಹಬ್ಬ' ಎಂಬುದಾಗಿ ವ್ಯವಹರಿಸುವುದನ್ನು ಕಾಣುತ್ತೇವೆ. ಕಾರಣ, ಇಂದು ಪ್ರಧಾನವಾಗಿ ಪೂಜೆಯನ್ನು ನಡೆಸುವವರು ಹೆಂಗಸರೇ. ಆದರೂ ಹೆಂಗಸರ ಪೂಜೆಗೆ ಸಹಕಾರವನ್ನು ನೀಡುವುದಲ್ಲದೆ ಪುರುಷರೂ ಸಹ ಜಗನ್ಮಾತೆಯಾದ ಗೌರೀದೇವಿಯನ್ನು ಕುಟುಂಬಕ್ಷೇಮಕ್ಕಾಗಿ ನಮಿಸಿ-ಪ್ರಾರ್ಥಿಸಬೇಕಾಗಿದೆ. ಸ್ತ್ರೀಯರೂ ಸಹ ಪುರುಷರನ್ನು ಹಬ್ಬದ ಸಂಭ್ರಮದಿಂದ ದೂರವಿಡಬೇಕಾಗಿಲ್ಲ. ಗೌರಿದೇವಿಯೊಬ್ಬಳನ್ನೇ ಪೂಜಿಸಿದಾಗಲೂ, ಪರಮೇಶ್ವರ ಸಹಿತವಾಗಿ 'ಪಾರ್ವತೀ-ಪರಮೇಶ್ವರರು', ಜಗನ್ಮಾತಾಪಿತೃಗಳು ಎಂಬುದಾಗಿಯೇ ಸ್ತುತಿಸುತ್ತಾರೆ.

ಇಲ್ಲಿ ಪುರಾಣದ ಕಥೆಯೊಂದನ್ನು ಸ್ಮರಿಸಬಹುದಾಗಿದೆ. ಒಮ್ಮೆ ಕೈಲಾಸದಲ್ಲಿ ಶಿವ ಮತ್ತು ಪಾರ್ವತಿಯರಲ್ಲಿ ಯಾರು ಹೆಚ್ಚು ಶ್ರೇಷ್ಠರು? ಎಂಬ ಪ್ರಶ್ನೆಯೆದ್ದಿತು. ಶಿವಗಣಗಳೆಲ್ಲರೂ ಉತ್ತರಿಸದೆ ಮೌನವನ್ನು ವಹಿಸಿದರು. ಆಗ ಭೃಂಗಿಮುನಿಯು 'ಶಿವನೇ ಶ್ರೇಷ್ಠ' ಎಂದು ಉತ್ತರಿಸಿದನಂತೆ.  ಶಕ್ತಿಯ ಹಿರಿಮೆಯನ್ನು ಒಪ್ಪದೆ ಶಿವನೇ  ಹೆಚ್ಚು ಎಂದು ಸಾರಿದರು. ಇದರಿಂದ ಕೋಪಗೊಂಡ ದೇವಿಯು "ನಿನ್ನಲ್ಲಿರುವ ನನ್ನ ಅಂಶವನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ" ಎಂದು ಆತನ ಶರೀರದಲ್ಲಿನ ಸಪ್ತಧಾತುಗಳನ್ನೂ ಶೋಷಿಸಿಬಿಟ್ಟಳು. ಮುನಿಯು ಬರಿ ಅಸ್ತಿಪಂಜರವಾಗಿ ಉಳಿಯಬೇಕಾಯಿತು.  ಇದು ಸೂಚಿಸುವ ತತ್ತ್ವಾರ್ಥವೆಂದರೆ,  ಶಿವ-ಶಕ್ತಿಯರ ಸಮಾಯೋಗದಿಂದಲೇ ಸೃಷ್ಟಿಯು ಮುಂದುವರಿದಿರುವುದು.  ಆದ್ದರಿಂದ ಅವರಿಬ್ಬರ ಪಾತ್ರವೂ ಸಮಾನವಾಗಿದೆ.  ಲೋಕದಲ್ಲಿ ಪತಿ-ಪತ್ನಿಯರು ಶಿವ-ಶಕ್ತಿಯರ ಪ್ರತಿನಿಧಿಗಳಾಗಿ ವರ್ತಿಸಬೇಕಾಗಿರುವುದರಿಂದ ಇಬ್ಬರೂ ಸೇರಿಯೇ ಪೂಜಿಸುವುದೆಂಬುದು ಜ್ಞಾನಿಸಮ್ಮತವಾದದ್ದು.

 ಶಿವ-ಶಕ್ತಿಯರು ಸೇರಿಯೇ ಇರುವವರಾಗಿದ್ದರೆ, ಗೌರಿಯನ್ನು ಮಾತ್ರವೇ ಅಂದು ಪೂಜಿಸಬಹುದೇ? ಎಂದರೆ, ಅದಕ್ಕೆ ಜ್ಞಾನಿಗಳ ಉತ್ತರ, ಪುರುಷಾರ್ಥಗಳ ಕೆಲವು ವಿಶೇಷಭಾಗಗಳ ಪ್ರಾಪ್ತಿಗಾಗಿ ಅವುಗಳನ್ನನುಗ್ರಹಿಸುವ ದೇವಿಯನ್ನು ಪ್ರತ್ಯೇಕವಾಗಿ ಪೂಜಿಸುವುದು ಸೂಕ್ತವೇ ಆಗಿದೆ. ದೇವಿಯ ಪೂಜೆಯಿಂದ ದೇವನೂ ಸಂತುಷ್ಟನಾಗುತ್ತಾನೆ ಎಂಬ ಅಂಶವನ್ನೂ ನೆನಪಿಡಬೇಕಾಗಿದೆ.

ಯಾರು ಈ ಗೌರೀ?

ಮೇಲೆ ಗಮನಿಸಿದಂತೆ ಗೌರಿಯು ಶಿವನ ಅರ್ಧಾಂಗಿ. ಶಿವನ ಮಡದಿಯಾಗಿದ್ದ ದಾಕ್ಷಾಯಣೀ(ಸತೀದೇವಿ). ತನ್ನ ಪತಿಗಾದ ಅಪಮಾನವನ್ನು ತಾಳಲಾರದೆ ದೇಹತ್ಯಾಗವನ್ನು ಮಾಡಿದಳು. ಮುಂದೆ ಹಿಮವಂತನ ಮಗಳಾಗಿ ಜನಿಸಿದಳು.  ಮಹಾದೇವನು ತಪಸ್ಸಿನಲ್ಲೇ ಮಗ್ನನಾಗಿದ್ದಾಗ  ಆತನನ್ನು ತಪಸ್ಯೆಯಿಂದ ಹೊರತರಲು ಕಾಮದೇವನ ಮೂಲಕ  ದೇವತೆಗಳು ಪ್ರಯತ್ನಿಸಿದಾಗ ಕುಪಿತನಾದ ಶಿವನು ಕಾಮನನ್ನು ಭಸ್ಮಮಾಡಿದ. ಹಿಮವಂತನ ಮಗಳಾದ ಗೌರಿಯು ಕಠಿಣ ತಪಸ್ಯೆಯಿಂದ ಶಿವನನ್ನು ಒಲಿಸಿಕೊಂಡಳು. ಪ್ರಸನ್ನನಾದ ಶಿವನು ಲೋಕಕಲ್ಯಾಣಕ್ಕಾಗಿ ತಾನಾಗಿಯೇ ಕಾಮನನ್ನು ಬರಮಾಡಿಕೊಂಡು ಗೌರಿಯನ್ನು ವಿವಾಹವಾದ ಎಂಬುದು ಪುರಾಣಕಥೆ.

 ಶ್ರೀಕೃಷ್ಣನೇ ತಾನು ದೇವಕಿಯ ಗರ್ಭದಲ್ಲಿ ಹುಟ್ಟುವಾಗ ಯೋಗಮಾಯೆಯಾದ ಗೌರಿದೇವಿಯು ಯಶೋದೆಯ ಗರ್ಭದಲ್ಲಿ ಅವತರಿಸಿದಳು. ಆತನ ಅವತಾರದಲ್ಲಿ ನೆರವಾದ ಆಕೆಯನ್ನು ಲೋಕವು ತನ್ನ(ನಾರಾಯಣನ)ಸೋದರಿಯೆಂದು ಕೊಂಡಾಡಲಿ ಎಂಬುದಾಗಿ ಶ್ರೀಕೃಷ್ಣನೇ ಹೇಳುತ್ತಾನೆ ಎನ್ನುತ್ತದೆ ಶ್ರೀಮದ್ಭಾಗವತ.

ಗೌರೀಪೂಜೆಯ ಉದ್ದೇಶ  

ಪ್ರಧಾನವಾಗಿ ಗೌರೀಪೂಜೆಯನ್ನು ಮಾಡುವುದು ಒಳ್ಳೆಯ ದಾಂಪತ್ಯಸೌಭಾಗ್ಯಕ್ಕಾಗಿ. ಇದನ್ನು ಸಾರುವ ಪುರಾಣದ ಕಥಾಭಾಗಗಳಲ್ಲಿ ಪ್ರಮುಖವಾದವುಗಳೆಂದರೆ ಗೋಪಿಕೆಯರು ಕೃಷ್ಣನನ್ನೇ ಪತಿಯಾಗಿ ಪಡೆಯಲು ಮಾಡಿದ ಪೂಜೆ, ರುಕ್ಮಿಣೀದೇವಿಯು ತನ್ನ ವಿವಾಹಸಂದರ್ಭದಲ್ಲಿ ಆಚರಿಸಿದ ಗೌರೀಪೂಜೆ. ಇದನ್ನೇ ಆಧರಿಸಿ ಇಂದೂ  ವಿವಾಹಪೂರ್ವಭಾವಿಯಾಗಿ ಗೌರೀಪೂಜೆಯನ್ನು ಮಾಡುವ ಪದ್ಧತಿಯಿದೆ. ದಾಂಪತ್ಯಸೌಖ್ಯವನ್ನಷ್ಟೇ ಅಲ್ಲದೆ ಸರ್ವಮಂಗಲಗಳನ್ನೂ-ಸತ್ಸಂತಾನವನ್ನೂ-ಸುಖಸಮೃದ್ಧಿಗಳನ್ನೂ ಕರುಣಿಸಬಲ್ಲ ಮಹಾತಾಯಿ ಈಕೆ.

ಪೂಜೆ/ವ್ರತದ ವಿಧಾನ

ಗೌರೀಪೂಜೆಯ ಆಚರಣೆಯ ಮೊದಲ ಹಂತ ಆಕೆಯನ್ನು ಹೃದಯದಲ್ಲಿ ಧ್ಯಾನಮಾಡುವುದೇ ಆಗಿದೆ.  ಒಳಗೆ ಕಂಡ-ಧ್ಯಾನ ಮಾಡಿದ ಜಗನ್ಮಾತೆಯನ್ನು ನಂತರ ಹೊರಗಡೆಯೂ ಇತರ ಮಾಧ್ಯಮಗಳಿಂದ ಪೂಜಿಸುವುದು ಮಹರ್ಷಿವಿಹಿತ ಪೂಜಾಕ್ರಮ.

ಮನೆಯಲ್ಲಿ ಶುದ್ಧವಾದ ಸ್ಥಳದಲ್ಲಿ ಮಂಟಪವನ್ನು ರಚಿಸಿ, ಅಲಂಕರಿಸಿ, ಕಲಶಸ್ಥಾಪನೆಯನ್ನು ಮಾಡುತ್ತಾರೆ. ಗೌರೀದೇವಿಯ ವಿಗ್ರಹವನ್ನು ಸ್ವರ್ಣದಿಂದಲೋ, ಅರಿಸಿನದಿಂದಲೋ ಅಥವಾ ಗಂಗಾತೀರದ ಮರಳು-ಮೃತ್ತಿಕೆಯಿಂದ ಮಾಡುತ್ತಾರೆ. ಗಂಗೆಯ ಸಾಮೀಪ್ಯವಿಲ್ಲದವರು ಯಾವುದಾದರೂ ಜಲಾಶಯದಲ್ಲಿ ಗಂಗೆಯನ್ನು ಆವಾಹನೆಮಾಡಿ ಅಲ್ಲಿನ ಮಣ್ಣನ್ನು ತಂದು ಮಾಡುವುದುಂಟು.

ಆವಾಹಿತಳಾದ ದೇವಿಯನ್ನು ಷೋಡಶೋಪಚಾರಗಳಿಂದ ಪೂಜಿಸುತ್ತಾರೆ. ಹದಿನಾರು ಗ್ರಂಥಿಗಳುಳ್ಳ ದಾರವನ್ನಿಟ್ಟು ಆ ಗ್ರಂಥಿಗಳಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ದೇವಿಗೆ ಪ್ರಿಯವಾದ ಉಪಚಾರಗಳು, ಮಂತ್ರ-ತಂತ್ರಗಳಿಂದ ಪೂಜೆಯು ಸಂಪನ್ನಗೊಳ್ಳುತ್ತದೆ. ಪೂಜಾವಿಧಾನಗಳಲ್ಲಿ ಕೆಲವು ವ್ಯತ್ಯಾಸಗಳು ಕಂಡುಬಂದರೂ ಎಲ್ಲದರ ಹಿಂದಿನ ಆಶಯವೂ ದೇವಿಯನ್ನು ಪ್ರಸನ್ನಗೊಳಿಸಿ ಆಕೆಯ ಅನುಗ್ರಹವನ್ನು ಪಡೆಯುವುದೇ ಆಗಿದೆ.

ಗೌರೀ-ಗೌರೀಪೂಜಾ ಕ್ರಮದಲ್ಲಿನ ತತ್ತ್ವಾರ್ಥಗಳು

ಗೌರಿಯು ಹಿಮವಂತನ ಪುತ್ರಿಯೆಂಬುದು ಪುರಾಣೋಕ್ತಿ. ಆದರೆ ಪುರಾಣಕಥೆಗಳು ಕೆಲವು ಗಹನವಾದ ತತ್ತ್ವಗಳನ್ನು, ಸತ್ಯಗಳನ್ನು ಮನವರಿಕೆ ಮಾಡುವ ಉದ್ದೇಶದಿಂದ ಹೊರಟಿರುವವು ಎಂಬ ಶ್ರೀರಂಗಮಹಾಗುರುಗಳ ಮಾತು ಗಮನಾರ್ಹವಾಗಿದೆ. ಮಹರ್ಷಿಗಳು ಅಂತರಂಗಸಾಧನೆಯಲ್ಲಿ ತಮ್ಮ ಬೆನ್ನುಹುರಿಯ ಉನ್ನತಸ್ಥಾನವನ್ನು ಏರಿದಾಗ ಪರಮಾನಂದಭರಿತರಾಗಿ ಇಂದ್ರಿಯವ್ಯಾಪಾರಗಳೆಲ್ಲವೂ  ಸ್ತಬ್ಧವಾಗಿಬಿಡುತ್ತವೆ. ಮೈಮರಗಟ್ಟುತ್ತದೆ. ಈ ಅಂಶಗಳನ್ನು ಹೋಲುವ ಹಿಮವತ್ಪರ್ವತವನ್ನೇ ಕಥೆಯಲ್ಲಿ ಆರಿಸಿಕೊಂಡಿದ್ದಾರೆ. ಹಾಗೆ ಆನಂದತುಂದಿಲನಾದವನು ಅಲ್ಲಿಯೇ ನಿಂತುಬಿಡದೆ ಮುಂದೆ ಲೋಕದಲ್ಲಿ ತನ್ನ ಜ್ಞಾನಾನಂದಗಳನ್ನು ಬೆಳೆಸಬೇಕಾದರೆ ಆ ಸ್ಥಾನದಿಂದ ಕೆಳಗಿಳಿಯಬೇಕು. ಇಂದ್ರಿಯಗಳ ಕೆಲಸವೂ ಜರುಗಬೇಕು. ಆದ್ದರಿಂದ ಆತನನ್ನು ಅಲ್ಲಿಂದ ಲೋಕಪ್ರಜ್ಞೆಗೆ ಇಳಿಸಲು ಕಾಮನ ಮೂಲಕ ಇಂದ್ರಿಯಾಧೀಶರಾದ ದೇವತೆಗಳ ಪ್ರಯತ್ನ. ಅದು ಅಕಾಲದಲ್ಲಾದರೆ ಕೆಡಕು. ಸಕಾಲವಾದರೆ ಉತ್ತುಂಗಸ್ಥಾನದಿಂದ ಪ್ರಕೃತಿಮಾತೆಯು(ಶಕ್ತಿಸ್ವರೂಪಿಣಿಯು) ತನ್ನ ಚೈತನ್ಯಕ್ಕೆ ಮೂಲನಾದ ಶಿವನೊಡನೆ ಸೇರಿ ಕೆಳಗಿಳಿದಾಗ ಅಲ್ಲಿ ಶಿವ-ಶಿವೆಯರ ಸೇರುವೆ-ವಿವಾಹ. ಅಲ್ಲಿಂದ ಮುಂದೆ ಸಂತಾನಪ್ರಾಪ್ತಿ.  ಆದ್ದರಿಂದಲೇ ದಾಂಪತ್ಯಸೌಭಾಗ್ಯಕ್ಕಾಗಿ ಜಗನ್ಮಾತೆಯ ಪೂಜೆ.

ಪೂಜೆಗೆ ಸುವರ್ಣವೇ ಏಕೆ? ಸೌಲಭ್ಯವಿಲ್ಲದಿದ್ದಾಗ ಅರಿಸಿನವೇ ಏಕೆ? ಬೆಳ್ಳಿಯಿಂದಾಗಬಾರದೇಕೆ? ಎಂಬ ಪ್ರಶ್ನೆಗಳಿಗೆ ವೈಜ್ಞಾನಿಕ ನೋಟದಿಂದಲೇ ಉತ್ತರವನ್ನು ಹುಡುಕಬೇಕಾಗಿದೆ. ಜ್ಞಾನಿಗಳ ಅನುಭವವು ಸಾರುವಂತೆ ಗೌರೀಮಾತೆಯು ಚಾಂಪೇಯ(ಸಂಪಿಗೆಹೂವಿನ) ವರ್ಣದವಳು. ಆ ವರ್ಣವನ್ನೂ, ಆಕೆಯ ಹೊಳಪನ್ನೂ ಬಹುಮಟ್ಟಿಗೆ ಹೋಲುವುದು ಸುವರ್ಣ. ಜೊತೆಗೆ ಸುವರ್ಣದ ದರ್ಶನ, ಸ್ಪರ್ಶಗಳು ನಮ್ಮೊಳಗೆ ದೇವಿಯ ಸಾಕ್ಷಾತ್ಕಾರಕ್ಕೆ ಪೋಷಕವಾದ ಕೇಂದ್ರಗಳನ್ನು ತೆರೆಯಲು ಸಹಕರಿಸುತ್ತದೆ. ದೇವ-ದೇವಿಯರನ್ನು ತಮ್ಮೊಳಗೆ ಸ್ವತಃ ಕಂಡನುಭವಿಸಿದವರೂ, ಮಹರ್ಷಿಹೃದಯವನ್ನರಿತವರೂ ಆಗಿದ್ದ ಶ್ರೀರಂಗಮಹಾಗುರುಗಳು ಸುವರ್ಣದ ಧರ್ಮವು ಬಹುಮಟ್ಟಿಗೆ ಅರಿಸಿನದಲ್ಲೂ ಕಂಡುಬರುವುದನ್ನೂ ತಮ್ಮ ನಾಡೀವಿಜ್ಞಾನದ ಮೂಲಕ ನಿರೂಪಿಸಿದರು. ಆದ್ದರಿಂದಲೇ ಸುವರ್ಣದ ಸೌಲಭ್ಯವಿಲ್ಲದಿದ್ದಾಗ  ಅರಿಸಿನವನ್ನುಪಯೋಗಿಸುವ ಕ್ರಮವನ್ನು ವಿಧಿಸಿರುವುದು ಸೂಕ್ತವಾಗಿದೆಯೆಂಬ ವಿವರಣೆಯನ್ನೂ ನೀಡಿದರು. ಪೂಜೆಯಲ್ಲಿ ಗ್ರಂಥಿಗಳ, ಉಪಚಾರಗಳ ಸಂಖ್ಯೆ ಮುಂತಾದವುಗಳಲ್ಲಿ ಹದಿನಾರೆಂಬ ಸಂಖ್ಯೆಯು ವಿಶೇಷವಾಗಿ ಎದ್ದು ಕಾಣುತ್ತದೆ. ಇದು ಜಗನ್ಮಾತೆಯ ಷೋಡಶಕಲೆಗಳ ಸೂಚಕ.

ಸೌಭಾಗ್ಯದಾಯಿನಿಯಾದ ಜಗನ್ಮಾತೆಯನ್ನು-ಜಗದಾದಿದಂಪತಿಗಳನ್ನು ದಂಪತೀಸಮೇತರಾಗಿ ಈ ಶುಭಪರ್ವದಲ್ಲಿ ಪೂಜಿಸಿ  ಸಕಲಸೌಭಾಗ್ಯಗಳನ್ನೂ ಗಳಿಸಿ ನಲಿಯೋಣ.

ಸೂಚನೆ: 9/9/2021 ರಂದು ಈ ಲೇಖನ ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.