Saturday, February 13, 2021

ಸಹನೆ ಏಕಿರಬೇಕು ? (Sahane Ekirabeku?)

ಶ್ರೀಮತಿ ಡಾ. ಶ್ರುತಿ ಪ್ರಸಾದ್

(ಪ್ರತಿಕ್ರಿಯಿಸಿರಿ lekhana@ayvm.in)

 

ಒಮ್ಮೆ  ದೇಶದ ವಿಜ್ಞಾನಿಗಳು ಹೀಗೊಂದುಪ್ರಯೋಗವನ್ನು ಮಾಡಿದರು.  ಎಲ್ಲ ಮಕ್ಕಳ ಮುಂದೆಯೂ  ಒಂದೊಂದು  ಮಿಠಾಯಿಯನ್ನು ಇಟ್ಟು, ಅದನ್ನು ೧೫ ನಿಮಿಷಗಳು ಕಳೆದ ಬಳಿಕ ತಿಂದರೆ ಎರಡು ಮಿಠಾಯಿಗಳನ್ನು ಕೊಡುವುದಾಗಿ  ಅವರಿಗೆ ತಿಳಿಸಿದರು. ಕೆಲವು ಮಕ್ಕಳುಎರಡು ಮಿಠಾಯಿಯ ಆಸೆಯಿಂದ, ಕಾದು, ಹೆಚ್ಚು ಲಾಭ ಪಡೆದರು. ಉಳಿದ ಮಕ್ಕಳುಕಾಯಲಾರದೆ, ತಕ್ಷಣ ಅದನ್ನು ತ್ವರಿತ ತೃಪ್ತಿಗಾಗಿಸಹನೆ ಇಲ್ಲದೆ ತಿಂದರು. ವರ್ಷಗಳು ಕಳೆದವು. ಮತ್ತೆ ಈ ಮಕ್ಕಳನ್ನು ಪರಿಶೀಲಿಸಲಾಯಿತು. ತಮ್ಮ ಕೈಗೆ ಬಂದಿದ್ದನ್ನು ಬಾಯಿಗೆ ಹಾಕದೆ,ತಾಳ್ಮೆಯಿಂದ ಇದ್ದ ಮಕ್ಕಳು ಇತರರಿಗಿಂತ ಭಾವನಾ ಪ್ರಚೋದನೆಗಳನ್ನು ನಿಯಂತ್ರಿಸುವ ಸಾಮರ್ಥ್ಯವುಳ್ಳವರಾಗಿ ಬೆಳೆದಿದ್ದರು.ಶೈಕ್ಷಣಿಕ ಸಾಧನೆಗಳನ್ನು ಮಾಡಿ, ಕೆಟ್ಟ ಚಟಗಳಿಗೆ ತುತ್ತಾಗದ ಹಾಗೆ ಬೆಳೆದಿದ್ದರು. ಇಂದಿನ ಕಾಲದಲ್ಲಿ ಜಗತ್ತು ವೇಗದ ಗತಿಯಲ್ಲಿ ಸಾಗುತ್ತಿದೆ. ಅಂದುಕೊಂಡಿದ್ದು ತಕ್ಷಣಣ ನಡೆಯಬೇಕೆಂಬ ತವಕ. ತಾವಂದು ಕೊಂಡಿದ್ದಕ್ಕಿಂತ ಪರಿಣಾಮ ವಿರುದ್ಧವಾದರೆ ಸಹಿಸುವ ಧೃತಿಯಿಲ್ಲ. ಅನುಕೂಲವಾದ ಕಾಲಾವಕಾಶಕ್ಕೆ ಕಾಯುವ ತಾಳ್ಮೆಯಿಲ್ಲ. ದೊಡ್ದವರಾದ ನಮಗೇ ಈಗತಿಯಾದರೆ, ಇನ್ನು ಚಿಕ್ಕಮಕ್ಕಳ ಪಾಡು ಹೇಳತೀರದು. ಹೆಚ್ಚಾಗಿ ಈಗಿನ ಕಾಲದ ಮಕ್ಕಳಲ್ಲಿ ಅಸಹನೆ ಮತ್ತು ತ್ವರಿತ ತೃಪ್ತಿಯುಎದ್ದುಕಾಣುತ್ತಾ ಇದೆ. ಪೋಷಕರ ಸಮಯದ ಅಭಾವದಿಂದ ಮಕ್ಕಳ ನಡವಳಿಕೆ ಮತ್ತು ಮಾನಸಿಕ ಸ್ಥಿತಿಯ ಮೇಲೆ ಪರಿಣಾಮಆಗುತ್ತಿದೆ. ಗಗನಕ್ಕೆ ಹಾರುವ ಸಾಮರ್ಥ್ಯವನ್ನೂ ಬೆಳೆಸುತ್ತಿರುವ ಇಂದಿನ ಶಿಕ್ಷಣ ಪದ್ಧತಿಯು ಕೆಲವೊಮ್ಮೆ ವ್ಯಕ್ತಿತ್ವದ ಕೆಲವುಮುಖಗಳನ್ನು ಬೆಳೆಸುವ ಕೆಲಸದಲ್ಲಿ ಹಿಂದೆಬಿದ್ದಿದೆ. ಪ್ರಾಚೀನ ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಆತ್ಮಗುಣಗಳಲ್ಲೊಂದಾದ ಸಹನಶೀಲತೆಯನ್ನು ಬೆಳೆಸುವ ವ್ಯವಸ್ಥೆ ಇತ್ತು. 

ಜೀವನದ ಪ್ರತಿ ಹೆಜ್ಜೆಯಲ್ಲೂ ನಮಗೆ ದ್ವಂದ್ವಗಳು ಎದುರಾಗುತ್ತವೆ. ಅದರಲ್ಲಿ ನಮಗೆ ಈ ಸದ್ಯದಲ್ಲಿ ಇಷ್ಟವಾಗದೆ ಹೋದರೂ,ದೀರ್ಘಕಾಲದಲ್ಲಿ ಯಾವುದು ಒಳಿತನ್ನು ಮಾಡುತ್ತದೋ ಅದನ್ನು ನಾವು ಸಹನೆಯಿಂದ ಆರಿಸಿಕೊಳ್ಳಬೇಕು. ಸುಖ-ದುಖ, ಉಷ್ಣ-ಶೀತ, ಇಷ್ಟ ಮತ್ತು ಅನಿಷ್ಟ ಘಟನೆಗಳನ್ನು ಸಮ ಭಾವದಿಂದ ಸ್ವೀಕರಿಸುವ ಮನಸ್ಸನ್ನು ಬೆಳೆಸಿಕೊಳ್ಳಬೇಕು. ಇದನ್ನು ತಪವೆಂದೂಅಷ್ಟಾಂಗಯೋಗದ ಒಂದು ಹೆಜ್ಜೆಯಾದ ನಿಯಮದಲ್ಲಿ ಅಂತರ್ಗತವಾಗಿರುವುದೆಂದೂ ಹೇಳುತ್ತಾರೆ. ಶ್ರೀರಾಮನು ಪಟ್ಟಾಭಿಷೇಕವನ್ನೂ ಮತ್ತು ನಾರುಮಡಿಯ ವನವಾಸವನ್ನೂ ಒಂದೇ ರೀತಿಯಾಗಿ ಭಾವಿಸಿ ಪ್ರಸನ್ನ ಆತ್ಮ-ಇಂದ್ರಿಯ-ಮನಸ್ಸುಗಳಿಂದ ಸ್ವೀಕರಿಸಿದ್ದು, ನಮಗೆ ಆದರ್ಶವಾಗಿರಬೇಕು. ಹೀಗೆ ರೂಢಿಸಿಕೊಳ್ಳುವುದರಿಂದ ಚಿತ್ತಚಾಂಚಲ್ಯ ಕಡಿಮೆಯಾಗಿ,ಯೋಗಮಾರ್ಗದ ಸುಷುಮ್ನಾ ನಾಡಿಯಲ್ಲಿ ಪ್ರಾಣವು ಸಾಗಿ ಪ್ರತಿ ಜೀವಿಯ ಹಕ್ಕಾದ ಆತ್ಮಸಾಕ್ಷಾತ್ಕಾರಕ್ಕೆ ಅನುವು ಮಾಡಿಕೊಡುತ್ತದೆ. ಹದಿನೆಂಟು ವರ್ಷವಾದ ಕೂಡಲೇ ಮತ ಚಲಾಯಿಸುವ ಹಕ್ಕು ಹೇಗೆ ಸಹಜವಾಗಿಯೇಬರುವುದೋ, ಹಾಗೆಯೇ ಮನುಷ್ಯನಾಗಿ ಹುಟ್ಟಿದ ಪ್ರತಿಜೀವಿಗೂ ಆತ್ಮದರ್ಶನ ಪಡೆಯುವ ಹಕ್ಕಿರುತ್ತದೆ ಎಂಬುದು ಶ್ರೀರಂಗಮಹಾಗುರುಗಳ ಉದ್ಘೋಷ. ಸಹನಶೀಲತೆ ಮೊದಲಾದ ಆತ್ಮಗುಣಗಳು ನಮ್ಮನ್ನು ಅತ್ತ ಕರೆದೊಯ್ಯಲು ಸಹಕಾರಿ.

ಸೂಚನೆ: 13/2/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.