Saturday, February 27, 2021

ಕವಿ ಮತ್ತು ಬ್ರಹ್ಮಾ (Kavi Mattu Brahma)

ಡಾ.  ಎನ್. ಎಸ್. ಸುರೇಶ್
(ಪ್ರತಿಕ್ರಿಯಿಸಿರಿ lekhana@ayvm.in)



ಚತುರ್ಮುಖ ಬ್ರಹ್ಮನು ಜಗತ್ತಿನ ಸೃಷ್ಟಿಕರ್ತ. 'ಯತೋವಾ ಇಮಾನಿ ಭೂತಾನಿ ಜಾಯಂತೇ| ಯೇನ ಜಾತಾನಿ ಜೀವಂತಿ| ಯತ್ಪ್ರಯಂತಿ ಅಭಿಸಂವಿಶಂತಿ| ಎಂಬ ಉಪನಿಷದ್ವಾಣಿಯಂತೆ, ಬ್ರಹ್ಮದಿಂದಲೇ ಹುಟ್ಟಿ, ಅದರಿಂದಲೇ ವಿಕಾಸಪಡೆದು ಅದರಲ್ಲಿಯೇ ಲಯವನ್ನು ಕಾಣುತ್ತದೆ ಪ್ರಪಂಚ. ಅತ್ಯಂತ ವೈವಿಧ್ಯಮಯವಾದ, ತ್ರಿಗುಣಾತ್ಮಕವಾದ ಮತ್ತು ವಿಚಿತ್ರವಾದ ಜಗತ್ತಿನ ನಿರ್ಮಾಣ ಇವನಿಂದಲೇ. ಕಟು-ಆಮ್ಲ-ಮಧುರ-ಲವಣ-ತಿಕ್ತ-ಕಷಾಯಗಳೆಂಬ ಷಡ್ರಸೋಪೇತವಾದ ಆಹಾರವೇ ಮೊದಲಾದವುಗಳಿಂದ ಅದರ ವಿಕಾಸವೂ ಅವನಿಂದಲೇ. ಆ ಎಲ್ಲ ರಸಗಳ ನೆಲೆ ಮಧುರ ರಸವೇ. ಇನ್ನು ಕಡೆಯದಾಗಿ ಅದರ ಅಂತ್ಯವೂ ಅವನಿಂದಲೇ. ಅಂತೆಯೇ, ಕವಿಯೂ ಕೂಡ ಕಾವ್ಯವೆಂಬ ಜಗತ್ತಿನ ಬ್ರಹ್ಮನೇ. 'ಅಪಾರೇ ಕಾವ್ಯಸಂಸಾರೇ ಕವಿರೇಕಃ ಪ್ರಜಾಪತಿಃ' – ಅಪಾರವಾದ ಕಾವ್ಯ ಜಗತ್ತಿನಲ್ಲಿ ಕವಿಯೇ ಒಬ್ಬ ಪ್ರಜಾಪತಿ. ತನಗೆ ಹೇಗೆ ಬೇಕೋ ಹಾಗೆ ಕಾವ್ಯ ಪ್ರಪಂಚವನ್ನು ಸೃಷ್ಟಿಸುತ್ತಾನೆ. ಆದರೆ ಬ್ರಹ್ಮನು ಉಪಯೋಗಿಸುವ ಸಾಧನಗಳಿಗಿಂತ ಇವನ ಸಾಧನಗಳು ವಿಭಿನ್ನ. ವಾಕ್ ಎಂಬುದು ಇವನ ಕಾವ್ಯಪ್ರಪಂಚದ ಸೃಷ್ಟಿಗೆ ಆಧಾರ. ಇನ್ನು ಉಪಮಾದಿ ಅಲಂಕಾರಗಳೇ ಸಾಧನ. ಇವನು ಶೃಂಗಾರ-ವೀರ-ಕರುಣ-ಅದ್ಭುತ- ಹಾಸ್ಯ-ಭಯಾನಕ-ಬೀಭತ್ಸ-ರೌದ್ರ-ಶಾಂತಗಳೆಂಬ ನವರಸಗಳನ್ನು ಉಪಯೋಗಿಸಿಕೊಂಡು ತನ್ನ ಸಾಮ್ರಾಜ್ಯವನ್ನು ಕಟ್ಟುತ್ತಾನೆ. ಎಲ್ಲ ರಸಗಳೂ ಶಾಂತರಸದಲ್ಲಿಯೇ ಲಯ ಹೊಂದುತ್ತವೆ. ಶ್ರೀರಂಗಮಹಾಗುರುಗಳು ಇದನ್ನು ವರ್ಣಿಸುವಾಗ 'ರಸಗಳೆಲ್ಲವೂ ಮೋಡಗಳ ಚಕ್ಕೆಗಳಂತೆ ವಿವಿಧ ವರ್ಣಗಳಿಂದ ಕೂಡಿರುತ್ತವೆ. ಶಾಂತರಸವು ಆಕಾಶದಂತೆ ನಿರ್ಲಿಪ್ತ. ಚಿತ್ರಮಂದಿರದಲ್ಲಿ ಹೇಗೆ ಬೆಂಕಿ, ಮಳೆ, ಗಾಳಿ, ಮಿಂಚು, ಸಿಡಿಲು, ಯುದ್ಧ ಮುಂತಾದ ಭಯಾನಕ ದೃಶ್ಯಗಳು ಮತ್ತು ವಿವಿಧ ರಸಗಳು ತೆರೆಯ ಮೇಲೆ ಬಂದು ಹೋದರೂ ತೆರೆಯು ಮಾತ್ರ ನಿರ್ಲಿಪ್ತವಾಗಿರುತ್ತದೆಯೋ ಹಾಗೆಯೇ ಜೀವನು ಅನೇಕ ರೀತಿಯ ರಸಗಳನ್ನು ಪ್ರಾರಬ್ಧ ಕರ್ಮವಶಾತ್ ಅನುಭವಿಸುತ್ತಿದ್ದರೂ ಪದ್ಮಪತ್ರದ ಮೇಲಿರುವ ಜಲ ಬಿಂದುವಿನಂತೆ ನಿರ್ಲಿಪ್ತ. ಆತಿಥೇಯನು(ಮನೆಗೆ ಬಂದ ಅತಿಥಿಯನ್ನು ಸತ್ಕರಿಸುವವನು) ರಥವನ್ನು ಓಡಿಸಿಕೊಂಡು ಬಂದಂತಹ ಅಶ್ವಗಳಿಗೆ ಅವಕ್ಕೆ ಬೇಕಾದ ಆಹಾರವನ್ನು ಒದಗಿಸುವಂತೆಯೇ, ಕವಿಯು ಓದುಗನಿಗೆ ಶೃಂಗಾರಾದಿ ರಸಗಳನ್ನು ಉಣಬಡಿಸುತ್ತಾ ಇಂದ್ರಿಯಾಶ್ವಗಳಿಗೆ ಬೇಕಾದ ಆಹಾರವನ್ನು ಒದಗಿಸುತ್ತಾನೆ. ಅಂತೆಯೇ ಆತಿಥೇಯನು ರಥಿಗೆ ಬೇಕಾದ ಆಹಾರವನ್ನು ಒದಗಿಸುವಂತೆ, ಕವಿಯು ಜೀವಾತ್ಮನಿಗೂ ಅವನಿಗೆ ಬೇಕಾದ ನೆಮ್ಮದಿ, ಸಂತೋಷ, ಆನಂದಗಳೆಂಬ ಆಹಾರಗಳನ್ನು ಒದಗಿಸುತ್ತಾ ಉಪನಿಷತ್ಪ್ರತಿಪಾದ್ಯವಾದ 'ರಸೋ ವೈ ಸಃ| ರಸಂ ಹ್ಯೇವಾಯಂ ಲಬ್ಧ್ವಾs ನಂದೀಭವತಿ' 'ಭಗವಂತನು ರಸ ಸ್ವರೂಪಿಯು. ಅವನನ್ನು ಪಡೆದವನು ರಸಸ್ವರೂಪಿಯೇ ಆಗಿ ಆನಂದಮಯನಾಗುತ್ತಾನೆ', ಎಂಬ ಮಾತಿಗನುಗುಣವಾಗಿ ಪರಮಾತ್ಮನಲ್ಲಿಯೇ ಸಹೃದಯರ ಮನಸ್ಸನ್ನು ನೆಲೆ ನಿಲ್ಲಿಸುತ್ತಾನೆ. 'ನದೀನಾಂ ಸಾಗರೋ ಗತಿಃ' ಎಂಬಂತೆ ನದಿಗಳು ತಾವು ಹುಟ್ಟಿದ ಸ್ಥಳದಿಂದ ಮುಂದುವರೆದು ಬೆಟ್ಟ-ಗುಡ್ಡ- ವನ-ಮುಂತಾದ ಪ್ರದೇಶಗಳಲ್ಲಿ ಹರಿದು ಸಾಗರವನ್ನು ಸೇರುವಂತೆ, ಕವಿಯು ಅನೇಕ ರಸಗಳಲ್ಲಿ ಓದುಗರನ್ನು ಮುಳುಗಿಸುತ್ತಾ ಅಂತ್ಯದಲ್ಲಿ ಶಾಂತಿ ಸಮೃದ್ಧವಾದ ಆನಂದ ಸಾಗರದಲ್ಲಿ ಓದುಗರನ್ನು ನಿಲ್ಲಿಸುತ್ತಾನೆ. ಆದ್ದರಿಂದಲೇ 'ಕಾವ್ಯಾನಂದ ರಸಾಸ್ವಾದಃ ಬ್ರಹ್ಮಾನಂದ ಸಹೋದರಃ' ಎಂಬ ಮಾತು ಕಾವ್ಯದ ಪ್ರಾಮುಖ್ಯವನ್ನು ತಿಳಿಸುತ್ತದೆ.

ಕವಿ ಮತ್ತು ಪರಮಾತ್ಮಾ 
ಪರಮಾತ್ಮನೇ ಆದಿ ಕವಿ. ಪರಮಾತ್ಮನನ್ನು 'ಕವಿಂ ಕವೀನಾಮ್', 'ಕವಿಗಳಿಗೂ ಕವಿ' ಎಂದು ವೇದವು ವರ್ಣಿಸಿದೆ. "ಬ್ರಹ್ಮಣಃ ಕ್ಷತ್ರಂ ನಿರ್ಮಿತಮ್ | ಬ್ರಹ್ಮಬ್ರಾಹ್ಮಣ ಆತ್ಮನಾ | ಅಂತರಸ್ಮಿನ್ ಇಮೇ ಲೋಕಾಃ | ಅಂತರ್ವಿಶ್ವಮಿದಂಜಗತ್ | ಬ್ರಹ್ಮೈವಭೂತಾನಾಂ ಜ್ಯೇಷ್ಠಮ್ | ತೇನ ಕೋಽರ್ಹತಿ ಸ್ಪರ್ಧಿತುಮ್ |""ಬ್ರಹ್ಮನಿಂದಲೇ ಎಲ್ಲವೂ ಸೃಷ್ಟಿಸಲ್ಪಟ್ಟಿದೆ. ಅವನಲ್ಲಿಯೇ ಈ ಎಲ್ಲಾ ಲೋಕಗಳೂ ಇವೆ. ಬ್ರಹ್ಮನೇ ಎಲ್ಲಾ ಜೀವಿಗಳಿಗೂ ಜ್ಯೇಷ್ಠನು. ಅವನೊಡನೆ ಸ್ಪರ್ಧಿಸಲು ಯಾರಿಗೆ ತಾನೇ ಸಾಧ್ಯ ?' ಎಂದು ವೇದ ವಾಣಿಯು ಬ್ರಹ್ಮನ ಮಹಿಮೆಯನ್ನು ಕೊಂಡಾಡುತ್ತದೆ. ಕವಿಯೂ ಕೂಡ ಆ ಪರವಸ್ತುವನ್ನು ಅನುಭವಿಸಿದವನಾಗಿರಬೇಕು. ಒಳ ಬೆಳಕನ್ನು ಕಂಡವನಾಗಿರಬೇಕು. ಅಂತಹ ಕವಿಯು ತಾನು ಅನುಭವಿಸಿದ ಆನಂದವನ್ನು ತನ್ನ ವಾಗರ್ಥ ಸಂಪತ್ತಿನಿಂದ ಓದುಗರ, ಸಹೃದಯರ ಅನುಭವಕ್ಕೆ ತಂದು ಕೊಡುವ ಸಾಮರ್ಥ್ಯವನ್ನು ಹೊಂದಿರುವವನಾಗಿರುತ್ತಾನೆ. ಇಂತಹ ಕವಿಯನ್ನು ವರ್ಣಿಸುತ್ತಾ ಶ್ರೀ ಶಂಕರಭಗವತ್ಪಾದರು ತಮ್ಮ ಜೀವನ್ಮುಕ್ತಾನಂದಲಹರಿಯಲ್ಲಿ - ಇಮಾಂ ಮುಕ್ತಾವಸ್ಥಾಂ ಪರಮಶಿವಸಂಸ್ಥಾಂ ಗುರುಕೃಪಾ-ಸುಧಾಪಾಂಗಾವಾಪ್ಯಾಂ ಸಹಜ-ಸುಖ-ವಾಪ್ಯಾಮನುದಿನಮ್ | ಮುಹುರ್ಮಜ್ಜನ್ಮಜ್ಜನ್ಭಜತಿ ಸುಕೃತೀ ಚೇನ್ನರವರಃ ತದಾ ಯೋಗೀ ತ್ಯಾಗೀ ಕವಿರಿತಿ ವದಂತೀಹ ಕವಯಃ || " ಯಾವನು ಗುರುಕೃಪಾಮೃತವೆಂಬ ನೋಟದಿಂದ ತನಗೆ ದೊರೆತ ಸಹಜಸುಖವೆಂಬ ಬಾವಿಯಲ್ಲಿ ದಿನದಿನವೂ ತನ್ನನ್ನು ಮುಳುಗಿಸಿಕೊಂಡು ಮುಕ್ತನಾಗಿ ಪರಮಾತ್ಮನಲ್ಲಿ ಬೆರೆತು ಆನಂದವನ್ನು ಅನುಭವಿಸುತ್ತಿರುವನೋ ಅವನನ್ನೇ ಕವಿಗಳು 'ತ್ಯಾಗೀ' 'ಯೋಗೀ' 'ಕವಿ' ಗಳೆಂದು ಬಣ್ಣಿಸಿದ್ದಾರೆ." ಎಂಬುದಾಗಿ ತಿಳಿಸಿದ್ದಾರೆ. ಇಂತಹವನಲ್ಲವೇ 'ಕವಿ' ಪದಕ್ಕೆ ಯೋಗ್ಯನಾದವನು ? ಏಲಕ್ಕಿ ತಿಂದವನ ಬಾಯಿಯಿಂದ ಬರುವ ಮಾತುಗಳು ಆ ಏಲಕ್ಕಿಯ ಸೌಗಂಧ್ಯವನ್ನು ಹೊತ್ತುತರುವಂತೆ ತಾನು ಒಳಗೆ ಅನುಭವಿಸಿದ ಆನಂದವನ್ನು, ಒಳಬೆಳಕನ್ನು ನೋಡುತ್ತಾ ವಾಗರ್ಥಗಳ ರೂಪವಾಗಿ ಹೊರಹೊಮ್ಮಿದ ಸಾಹಿತ್ಯವಲ್ಲವೇ 'ಕಾವ್ಯ' ಪದಕ್ಕೆ ಭಾಜನವಾಗುವುದು ? ವಾಲ್ಮೀಕಿಯೇ ಆದಿಕವಿ, ಶ್ರೀಮದ್ರಾಮಾಯಣವೇ ಆದಿಕಾವ್ಯ ಮೇಲೆ ವರ್ಣಿಸಿದ 'ಕವಿ' ಪದದ ವಿವರಣೆಗೆ ಭಾಜನರಾದವರಲ್ಲಿ ಮೊದಲಸ್ಥಾನ ವಾಲ್ಮೀಕಿಗಳಿಗೆ ಸಲ್ಲುತ್ತದೆ. ಹೃದಯಾಕಾಶದಲ್ಲಿ ಪರಂಜ್ಯೋತೀರೂಪದಲ್ಲಿ ಬೆಳಗುತ್ತಿರುವ ಯಾವ ಶ್ರೀರಾಮನನ್ನು ನಾರದಾದಿ ಮುನಿಗಳ ಉಪದೇಶದಿಂದಲೂ ಸ್ವತಃ ತಪಸ್ಸಿನಿಂದಲೂ ಕಂಡುಕೊಂಡರೋ, ಅದೇ ಶ್ರೀರಾಮನ ಜೀವನತತ್ತ್ವವನ್ನು ತಮ್ಮ ಕಾವ್ಯವಾದ ಶ್ರೀಮದ್ರಾಮಾಯಣದಲ್ಲಿ ವರ್ಣಿಸಿದ್ದಾರೆ. 'ವೇದವೇದ್ಯೇ ಪರೇ ಪುಂಸಿ ಜಾತೇ ದಶರಥಾತ್ಮಜೇ| ವೇದಃ ಪ್ರಾಚೇತಸಾದಾಸೀತ್ ಸಾಕ್ಷಾತ್ ರಾಮಾಯಣಾತ್ಮನಾ|| ಎಂದರೆ, 'ವೇದವೇದ್ಯನಾದ ಪರಮಪುರುಷನಾದ ಶ್ರೀರಾಮನು ದಶರಥಪುತ್ರನಾಗಿ ಅವತರಿಸಿರಲು, ವಾಲ್ಮೀಕಿಮುನಿಗಳಿಂದ ವೇದವು ರಾಮಾಯಣರೂಪದಲ್ಲಿ ಹೊರಹೊಮ್ಮಿತು' ಎಂಬ ವರ್ಣನೆಯು ಆದಿಕವಿ ವಾಲ್ಮೀಕಿಯ ಮತ್ತು ಆದಿಕಾವ್ಯ ರಾಮಾಯಣದ ಮಹತ್ತ್ವವನ್ನು ಸಾರುತ್ತದೆ. ಜನ್ಮ-ವ್ಯಾಧಿ-ಜರಾ-ವಿಪತ್ತಿ-ಮರಣಾದಿ ಅನೇಕ ತೊಂದರೆಗಳಿಂದ ಕೂಡಿರುವ ಸಂಸಾರವನ್ನು ದಾಟಿಸಿ ಸಹೃದಯಿಯಾದ ಓದುಗನನ್ನು ಶಾಶ್ವತವಾದ ಬ್ರಹ್ಮಪದದಲ್ಲಿ ನಿಲ್ಲಿಸುತ್ತದೆ ಆದಿಕಾವ್ಯವಾದ ಶ್ರೀಮದ್ರಾಮಾಯಣ. ಅಂತೆಯೇ, ವ್ಯಾಸಮಹರ್ಷಿಗಳ ಮಹಾಭಾರತ 'ಪಂಚಮವೇದ'ವೆಂದೇ ಪ್ರಖ್ಯಾತವಾಗಿದೆ, ಸಂಸ್ಕೃತವಾಙ್ಮಯದ ಪಂಚಮಹಾಕಾವ್ಯಗಳಾದ ಕವಿಕುಲಗುರು ಮಹರ್ಷಿ ಕಾಳಿದಾಸನ ರಘುವಂಶ ಮತ್ತು ಕುಮಾರಸಂಭವ, ಭಾರವಿಯ ಕಿರಾತಾರ್ಜುನೀಯ, ಮಾಘಮಹಾಕವಿಯ ಶಿಶುಪಾಲವಧೆ ಮತ್ತು ಶ್ರೀಹರ್ಷಕವಿಯ ನೈಷಧ ಮಹಾಕಾವ್ಯಗಳು ಪ್ರಸಿದ್ಧಕೃತಿಗಳು.

ಸೂಚನೆ : 27/2/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.