Sunday, October 5, 2025

ಪ್ರಶ್ನೋತ್ತರ ರತ್ನಮಾಲಿಕೆ 32 (Prasnottara Ratnamalike 32)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೩೪. ಮರಣವು ಯಾವುದು?

ಉತ್ತರ - ಮೂರ್ಖತನ.

ಪ್ರಶ್ನೋತ್ತರ ರತ್ನಮಾಲಿಕೆಯಲ್ಲಿ ಕೇಳಲಾಗುವ ಪ್ರಶ್ನೆಯು ಮತ್ತು ಅದಕ್ಕೆ ಕೊಡುವ ಉತ್ತರವು ನಮ್ಮ ಊಹೆಗೂ ನಿಲುಕದಷ್ಟು ವಿಸ್ಮಯಕಾರಿಯಾಗಿರುತ್ತದೆ. ಹೀಗೂ ಈ ಪ್ರಶ್ನೆಗೆ ಉತ್ತರ ಉಂಟೇ? ಎಂಬುದಾಗಿ ಒಮ್ಮೆ ಅನಿಸುವುದು. ಯೋಚಿಸಬೇಕಾದ  ವಿಚಾರ ಇಷ್ಟೇ, ಈ ಪ್ರಶ್ನೆಗೆ? ಇದೇ ಉತ್ತರ ಹೇಗೆ ಸಾಧ್ಯವಾಗುತ್ತದೆ? ಎಂದೂ. ಇಂತಹ ವಿಸ್ಮಯಾವಹ ಪ್ರಕೃತಪ್ರಶ್ನೆಯಾದ 'ಮರಣವು ಯಾವುದು?' ಎಂಬುದಕ್ಕೆ 'ಮೂರ್ಖತನ' ಎಂಬ ಉತ್ತರ. ಹೇಗೆ ಒಂದಕ್ಕೊಂದು ಇಷ್ಟು ಸಂಬಂಧವಾದದ್ದು? ಮೂರ್ಖತನವು ಮರಣಕ್ಕೆ ಸದೃಶವದು ಹೇಗೆ? ಎಂಬುದನ್ನು ಇಲ್ಲಿ ವಿವೇಚಿಸಬೇಕಾಗಿದೆ.

ಮೂರ್ಖ ಎಂದರೆ ತಿಳುವಳಿಕೆ ಇಲ್ಲದವನು, ಬುದ್ಧಿ ಇಲ್ಲದವನು, ಅಜ್ಞ ಇತ್ಯಾದಿ ಅರ್ಥವನ್ನು ಹೇಳಬಹುದು. ಅಂದರೆ ಯಾವ ವಸ್ತುವನ್ನು ಅಥವಾ ವಿಚಾರವನ್ನು ಅದು ಹೇಗಿದೆಯೋ ಅಂತೆಯೇ ತಿಳಿದುಕೊಳ್ಳುವುದಕ್ಕೆ ಪ್ರಾಜ್ಞತೆ ಅಥವಾ ಬುದ್ಧಿಮತ್ತೆ ಎಂದು ಕರೆಯುವುದಾದರೆ, ಇದಕ್ಕೆ ವಿರುದ್ಧವಾದದ್ದು ಅಂದರೆ ವಸ್ತು ಒಂದಿದೆ; ಅದನ್ನು ಇನ್ನೊಂದು ಬಗೆಯಿಂದ ತಿಳಿದುಕೊಳ್ಳುವಂಥದ್ದು. ಇದಕ್ಕೆ 'ಮೂರ್ಖತನ' ಎಂದು ಕರೆಯಬಹುದು. ಇದು ಆ ವ್ಯಕ್ತಿಯ ಸ್ವಭಾವವೇ ಆಗಿರುತ್ತದೆ. ಯಾವುದೋ ಒಂದು ಸಂದರ್ಭದಲ್ಲಿ ಒಂದು ವಿಷಯವನ್ನು ಅನ್ಯಥಾ ಭಾವಿಸುವಂಥದ್ದು ಮಾನವನ ಸಹಜ ಗುಣವಷ್ಟೇ. ಆದರೆ ಮೂರ್ಖತನದ ವ್ಯಕ್ತಿ ಎಲ್ಲಾ ಕಾಲದಲ್ಲೂ ಅನ್ಯಥಾ ಭಾವಿಸುವುದೇ ಅವನ ಸ್ವಭಾವ ಆಗಿರುತ್ತದೆ. ಅವನಿಗೆ ಒಳ್ಳೆಯದು ಎಂಬ ವಿಷಯವೇ ಬಳಿ ಸುಳಿಯದು. ಒಳ್ಳೆಯದೆಂದರೆ ಕಾದ ಕಬ್ಬಿಣವನ್ನು ಇಟ್ಟಂತೆ ಸುಡುವುದು. ಒಂದು ಸುಭಾಷಿತ ಹೀಗೆ ಮೂರ್ಖರ ಬಗ್ಗೆ ಹೇಳುತ್ತದೆ - ವಿಷಸರ್ಪಕ್ಕೆ ಹಾಲನ್ನು ಎರೆದರೆ ಅದು ತನ್ನ ವಿಷವನ್ನು ಬಿಡುವುದೇ? ಅಂತಯೇ ಮೂರ್ಖರಿಗೆ ಮಾಡುವ ಉಪದೇಶವು ಕೋಪಕ್ಕೆ ಕಾರಣವಾಗುತ್ತದೆಯೇ ವಿನಾ ಮೂರ್ಖತನದ ಶಾಂತಿಗಲ್ಲ ಎಂಬುದಾಗಿ. ಇವರು ಎಂದಿಗೂ ತಾವು ತಿಳಿದಿದ್ದನ್ನು ಬದಲಿಸದ ಸ್ವಭಾವದವರಾಗಿರುತ್ತಾರೆ. 'ತಾನು ಕಂಡ ಮೊಲಕ್ಕೆ ಮೂರು ಕಾಲು' ಎಂಬ ಸಂಕುಚಿತ ಬುದ್ಧಿ ಇವರದ್ದಾಗಿರುತ್ತದೆ. ಹಾಗಾಗಿ ಈ ವ್ಯಕ್ತಿ ಎಂದೂ ಉದ್ಧಾರವಾಗುವುದಿಲ್ಲ. ಇಂತಹ ಸ್ವಭಾವ ಉಳ್ಳವನು ಇದ್ದರೂ ಇಲ್ಲದಂತೆ. ಅಂದರೆ ಅದು ಮರಣಕ್ಕೆ ಸದೃಶವಷ್ಟೇ. 

ಮರಣ ಎಂದರೆ ಪ್ರಾಣ ಗತಿಸಿ ಕೇವಲ ಶರೀರ ಮಾತ್ರ ಇರುವಂತಹ ಸ್ಥಿತಿ. ಅಲ್ಲಿ ಇರುವ ದೇಹಕ್ಕೆ ಯಾವುದೇ ಮೌಲ್ಯವಿರುವುದಿಲ್ಲ. ಅದನ್ನು ಕೊನೆಗೆ ಬೆಂಕಿಯಲ್ಲೋ ಅಥವಾ ಭೂಮಿಯಲ್ಲೊ ವಿಸರ್ಜಿಸಬೇಕಾಗುತ್ತದೆ. ಹಾಗೆಯೇ ಈ ಮೂರ್ಖನ ಜೀವನವು ಮರಣದಂತೆ ಎಂಬುದಾಗಿ ಇಲ್ಲಿ ಉತ್ತರಿಸಲಾಗಿದೆ. 

ಬುದ್ಧಿಮತ್ತೆ ಅಥವಾ ಸಜ್ಜನಿಕೆ ಇದ್ದರೆ ಮರಣವನ್ನು ಸುಖವಾಗಿ ಸ್ವಾಗತಿಸುವಂತೆ ಮಾಡಿಕೊಳ್ಳಬಹುದು. ಅಂತಹ ಜೀವನವನ್ನು ಬದುಕಿ ಮರಣದಲ್ಲೂ ತನ್ನ ಸಜ್ಜನಿಕೆಯನ್ನು ಪ್ರಸ್ತುತಪಡಿಸಬಹುದು.  "ಶರಣರ ಜೀವನವನ್ನು ಮರಣದಲ್ಲಿ ನೋಡು" ಎಂಬ ಗಾದೆಗೂ ಇದೇ ಅರ್ಥ. ಅಂದರೆ ಒಬ್ಬ ಮೂರ್ಖನ ಬಾಳು ಮರಣಕ್ಕೂ ಕಷ್ಟಪಡುವ ರೀತಿಯದ್ದು. ಜೀವನ ಎಂದರೇನು? ಜೀವನದ ಉದ್ದೇಶ ಏನು? ಅದಕ್ಕನುಗುಣವಾದ ಜೀವನವನ್ನು ಹೇಗೆ ಮಾಡಬೇಕು? ಎಂಬ ಯಾವುದೇ ರೀತಿಯ ಪರಿಜ್ಞಾನ ಇಲ್ಲದಿದ್ದಾಗ ಮರಣವೂ ಕಷ್ಟದಾಯಕವಾಗುತ್ತದೆ ಎಂಬುದನ್ನು ನಾವು ಅನೇಕರ ಮರಣದಲ್ಲಿ ನೋಡಬಹುದು. ಹಾಗಾಗಿಯೇ ಈ ಮೂರ್ಖತನವು ಮರಣಕ್ಕೆ ಸದೃಶ ಎಂಬ ಉತ್ತರವನ್ನು ಇಲ್ಲಿ ಕೊಡಲಾಗಿದೆ.

ಸೂಚನೆ : 05/08/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ಕೃಷ್ಣಕರ್ಣಾಮೃತ 77 ರಾಜರಿಗೆ ತಗಲುವ ಹದಿನಾಲ್ಕು ದೋಷಗಳು (Krishakarnamrta 77)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ರಾಜ್ಯವು ಸುವ್ಯಸ್ಥಿತವಾಗಿರಬೇಕೆಂದರೆ ರಾಜನು ಯಾವ ಯಾವ ಎಚ್ಚರಗಳನ್ನು ವಹಿಸಬೇಕೆಂಬುದನ್ನು ಯುಧಿಷ್ಠಿರನಿಗೆ ನಾರದರು ತಿಳಿಹೇಳುತ್ತಿದ್ದಾರೆ.

ಹದಿನಾಲ್ಕು ರಾಜದೋಷಗಳುಂಟು. ಅವೆಲ್ಲವನ್ನೂ ನೀನು ಬಿಟ್ಟಿರುವೆಯಲ್ಲವೆ? ಏಕೆಂದರೆ ರೂಢಮೂಲರಾದ ರಾಜರು ಸಹ, ಎಂದರೆ ಆಳವಾಗಿ ಬೇರುಬಿಟ್ಟಿರುವ ರಾಜರೂ ಕೂಡ, ಇವುಗಳಿಂದಲೇ ಬಹುವಾಗಿ ಹಾಳಾಗುವರು.

ಯಾವುವು ಆ ಚತುರ್ದಶ-ರಾಜದೋಷಗಳು? ಇವು: ನಾಸ್ತಿಕ್ಯ - ಎಂದರೆ ವೇದಗಳಲ್ಲಿ ನಂಬಿಕೆಯಿಲ್ಲದಿರುವುದು; ಅನೃತ - ಎಂದರೆ ಸುಳ್ಳು ಹೇಳುವುದು; ಕ್ರೋಧ - ಎಂದರೆ ಕೋಪಿಯಾಗಿರುವುದು; ಪ್ರಮಾದ - ಎಂದರೆ ಜಾಗರೂಕತೆಯಿಲ್ಲದಿರುವುದು; ದೀರ್ಘಸೂತ್ರತೆ - ಎಂದರೆ ಕೆಲಸವನ್ನು ಬೇಗಮುಗಿಸದೆ ಎಳೆದಾಡಿ ವಿಳಂಬಮಾಡುವುದು; ಜ್ಞಾನಿಗಳನ್ನು ಆಗಾಗ್ಗೆ ಕಾಣದಿರುವುದು; ಆಲಸ್ಯ - ಎಂದರೆ ಸೋಮಾರಿತನ; ಪಂಚವೃತ್ತತೆ - ಎಂದರೆ ಪಂಚೇಂದ್ರಿಯಪರವಶನಾಗಿರುವುದು;  ವಿಷಯಗಳನ್ನು ಕುರಿತು ಏಕಚಿಂತನ - ಎಂದರೆ ಒಬ್ಬನೇ ಸಮಾಲೋಚನೆ ಮಾಡುವುದು; ಹಾಗೆಯೇ ಅರ್ಥಜ್ಞರಲ್ಲದವರೊಡನೆ ಚಿಂತನೆಮಾಡುವುದು; ಮಾಡಬೇಕೆಂದು ನಿಶ್ಚಯಮಾಡಿಯಾಗಿರುವುದನ್ನು ಆರಂಭಿಸದೆಯೇ ಇರುವುದು; ಮಾಡಿದ ಮಂತ್ರಾಲೋಚನೆಯನ್ನು ಗುಟ್ಟಾಗಿಡದಿರುವುದು; ಮಂಗಲಕಾರ್ಯಗಳೆನಿಸುವ ದೇವಪೂಜೆ ಮೊದಲಾದುವನ್ನು ಮಾಡದಿರುವುದು; ಎಲ್ಲ ಶತ್ರುಗಳ ಮೇಲೂ ಒಂದೇ ಸಮಯಕ್ಕೇ ದಾಳಿ ಮಾಡುವುದು.

ಈ ಹದಿನಾಲ್ಕು ರಾಜದೋಷಗಳನ್ನೂ ನೀನು ವರ್ಜಿಸಿರುವೆ ತಾನೆ (ಎಂದರೆ ತೊರೆದಿರುವೆ ತಾನೆ)?

ವೇದಗಳು ನಿನ್ನ ಪಾಲಿಗೆ ಸಫಲವಾಗಿದೆಯಲ್ಲವೇ? ಸಂಪತ್ತೂ ನಿನಗೆ ಫಲಪ್ರದವಾಗಿದೆಯಷ್ಟೆ? ನಿನ್ನ ಪತ್ನಿಯರೂ ಸಫಲರಷ್ಟೆ? ಹಾಗೆಯೇ ನಿನ್ನ ಶಾಸ್ತ್ರಜ್ಞಾನವೂ ಸಫಲವಾಗಿರುವುದಷ್ಟೆ?"

ನಾರದರು ಹೀಗೆ ದೀರ್ಘವಾಗಿ ಮಾತನಾಡಿದ ಬಳಿಕ, ಯುಧಿಷ್ಠಿರನು ಕೇಳಿದನು: "ವೇದಗಳು ಹೇಗೆ ಸಫಲವಾಗುವುವು? ಧನವು ಸಫಲವಾಗುವುದು ಹೇಗೆ? ಪತ್ನಿಯು ಸಫಲಳಾಗುವುದೆಂತು? ಶ್ರುತವು, ಎಂದರೆ ಶಾಸ್ತ್ರಜ್ಞಾನವು, ಸಫಲವಾಗುವುದು ಹೇಗೆ?"

ಆಗ ನಾರದರು ಹೇಳಿದರು: "ವೇದಗಳ ಸಫಲತೆಯು ಅಗ್ನಿಹೋತ್ರ(ವೆಂಬ ಯಜ್ಞ)ದ ಆಚರಣೆಯಲ್ಲಿ. ಧನಗಳು ಸಫಲವಾಗುವುದು ದಾನದಿಂದ ಹಾಗೂ ಭೋಗದಿಂದ. ಪತಿಗೆ ರತಿಸುಖವನ್ನೀಯುವುದು ಹಾಗೂ ಪುತ್ರವತಿಯಾಗುವುದೇ ಪತ್ನಿಯ ಸಫಲತೆಯೆನಿಸುವುದು; ಶೀಲ ಮತ್ತು ಸದ್ವೃತ್ತ, ಎಂದರೆ ಒಳ್ಳೆಯ ನಡತೆ - ಇದುವೆ ಶಾಸ್ತ್ರಜ್ಞಾನದ ಫಲವೆನಿಸುವುದು - ಎಂದರು.

ಮಹಾತಪಸ್ವಿಗಳಾದ ನಾರದರು ಇದಿಷ್ಟು ಹೇಳಿ, ಆ ಬಳಿಕೆ ಧರ್ಮಾತ್ಮನಾದ ಯುಧಿಷ್ಠಿರನನ್ನು ಕುರಿತಾಗಿ ಈ ಮಾತನ್ನು ಕೇಳಿದರು:

"ಹೆಚ್ಚು ಲಾಭವನ್ನು ಮಾಡಿಕೊಳ್ಳುವುದಕ್ಕೋಸ್ಕರ ದೂರದೂರದೇಶಗಳಿಂದ ವ್ಯಾಪಾರಿಗಳು ಬರುವರಷ್ಟೆ? ಅವರಿಂದ ಶುಲ್ಕ(ಸುಂಕ)ವನ್ನು ವಸೂಲಿಮಾಡತಕ್ಕದ್ದುಂಟಷ್ಟೆ. ಅದನ್ನೆಲ್ಲಾ ಅದರ ಅಧಿಕಾರಿಗಳು ಸರಿಯಾಗಿ ವಸೂಲಿಮಾಡುತ್ತಿರುವರಷ್ಟೆ?

ಮಾನಿತರಾದ (ಎಂದರೆ ಮಾನ್ಯತೆಯನ್ನು ಪಡೆದ) ವ್ಯಾಪಾರಿಗಳು ಮಾರುಕಟ್ಟೆಗೆ ಸಾಮಾನು-ಸರಂಜಾಮುಗಳನ್ನು ತರುವರಲ್ಲವೆ? ಆಗ ಅವರಿಗೆ ಜನತೆಯಿಂದಲೂ, ಅದಕ್ಕಿಂತ ಮುಖ್ಯವಾಗಿ ನಿನ್ನ ರಾಷ್ಟ್ರದ ಅಧಿಕಾರಿವರ್ಗದಿಂದಲೂ, ಏನೂ ವಂಚನೆಯಾಗಬಾರದು. ತತ್ಸಂಬಂಧದ ವ್ಯವಹಾರಗಳೆಲ್ಲವೂ ಋಜುವಾಗಿವೆಯಷ್ಟೆ?

ಧರ್ಮವನ್ನೂ ಅರ್ಥವನ್ನೂ ಚೆನ್ನಾಗಿ ಬಲ್ಲವರೂ ಅರ್ಥಶಾಸ್ತ್ರವೇತ್ತರೂ ಆದ ವೃದ್ಧರ ಧರ್ಮಾರ್ಥಸಹಿತವಾದ ಮಾತುಗಳನ್ನು ನಿತ್ಯವೂ ಕೇಳುತ್ತಿರುವೆಯಷ್ಟೆ?

ಕೃಷಿಯಿಂದ ಧಾನ್ಯಸಂಚಯವಾಗುವಾಗಲೂ, ಗೋಸಂತತಿಯ ವೃದ್ಧಿಯಾಗುವಾಗಲೂ, ವೃಕ್ಷಗಳು ಫಲಪುಷ್ಪಭರಿತವಾಗಿರುವಾಗಲೂ - ಧರ್ಮಪ್ರಾಪ್ತಿಗೋಸ್ಕರವಾಗಿ ದ್ವಿಜರಿಗೆ ತುಪ್ಪ-ಜೇನುಗಳ ಸಮರ್ಪಣೆಯಾಗುವುದಷ್ಟೆ?

ಸೂಚನೆ : 05/08/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.   

Saturday, October 4, 2025

ಸನಾತನ ಎಂದರೇನು ? {Sanatana Endarenu)

ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)




ಸನಾತನ ಈ ಪದ ಬಹಳ ಪ್ರಚಲಿತವಾಗಿದೆ. ಸನಾತನ ಧರ್ಮ, ಸನಾತನ ಸಂಪ್ರದಾಯ, ಸನಾತನಿಗಳು ಇಲ್ಲೆಲ್ಲಾ ಸನಾತನ ಎಂಬ ಪದದ ಬಳಕೆಯಾಗಿದೆ. ಹಾಗೆ ಬಳಸುವವರಲ್ಲಿ ಅನೇಕರು ಸನಾತನ ಎಂದರೆ ಹಳೆಯದು, ಪ್ರಾಚೀನ ಎಂಬ ಅರ್ಥದಲ್ಲೇ ಅದನ್ನು ಬಳಸುತ್ತಾರೆ. ನಮ್ಮ ಪಕ್ಕದ ರಾಜ್ಯದ ರಾಜಕೀಯ ಪ್ರಮುಖರೊಬ್ಬರು ಸನಾತನ ಧರ್ಮವು ಸಾಮಾಜಿಕ ನ್ಯಾಯ, ಸಮಾನತೆಗೆ ವಿರುದ್ಧವಾಗಿದೆ, ಇದನ್ನು ತೊಡೆದುಹಾಕಬೇಕು ಎಂಬ ಆಕ್ಷೇಪಾರ್ಹ ಮಾತುಗಳನ್ನು ಆಡಿರುವುದನ್ನು ಕೇಳಿದ್ದೇವೆ. ಅವರಲ್ಲದೇ ಆಧುನಿಕ ವಿಚಾರವಂತರು ಅನೇಕರು ಅದು ಜಡ್ಡು, ಹಳೆಯದು, ಇಂದಿನ ಕಾಲಕ್ಕೆ ಪ್ರಸ್ತುತವಲ್ಲ ಎಂಬ ಮಾತುಗಳನ್ನು ಮೇಜು ಗುದ್ದಿ ಹೇಳುವುದನ್ನು ಕೇಳುತ್ತೇವೆ. ಈ ನಡುವೆ ಸನಾತನ ಧರ್ಮ ನಮ್ಮದು, ಅದು ಉಳಿಯಬೇಕು ಎಂಬ ಆಗ್ರಹ, ಹೋರಾಟಗಳೂ ಸಾಕಷ್ಟು ನಡೆದಿವೆ.

ಆದರೆ "ಸನಾತನ" ಎಂಬ ಪದವನ್ನು ಯಾರು ತಂದರೋ, ಯಾವ ಸಂಸ್ಕೃತಿಯಲ್ಲಿ ಅದು ಜನಜನಿತವಾಗಿ ಬರುತ್ತಿದೆಯೋ, ಯಾವ ಭಾಷೆಯಲ್ಲಿ ಅದು ಬಂದಿದೆಯೋ ಅಲ್ಲಿ ಅದರ ಅರ್ಥವನ್ನು ಹುಡುಕುವುದು ನ್ಯಾಯಬದ್ಧವಾಗಿದೆ. ಸಂಸ್ಕೃತ ಭಾಷೆಯ ಪದ. "ಸನಾ"  ಎಂದರೆ ನಿತ್ಯ, ಶಾಶ್ವತ. ಸನಾತನ ಎಂದರೆ ಶಾಶ್ವತವಾಗಿರುವ ಎಂಬ ಅರ್ಥ ಬರುತ್ತದೆ.

ಹೀಗಾಗಿ ಮೇಲಿನ ಪದಗಳು- ನಿತ್ಯ ಶಾಶ್ವತವಾದ, ಬದಲಿಸಲಾಗದ ಧರ್ಮ-ಸನಾತನ ಧರ್ಮ. ನಿತ್ಯ ಶಾಶ್ವತವಾಗಿ ಬೆಳೆಸಿದ ಸಂಪ್ರದಾಯ-ಸನಾತನ ಸಂಪ್ರದಾಯ. ನಿತ್ಯ ಶಾಶ್ವತವಾದ ಬದುಕಿನ ವಿಧಾನವನ್ನು ಅನುಸರಿಸುವವನು-ಸನಾತನಿ ಎಂಬ ಅರ್ಥವನ್ನು ಒಳಗೊಂಡಿವೆಯೇ ಹೊರಟು ಹಿಂದಿನದು ಎಂದಲ್ಲ.

ಯಾವುದು ನಿತ್ಯ ಶಾಶ್ವತವಾದ ಬದುಕು?

ವಿಶ್ವದ ಎಲ್ಲಾ ಸಂಗತಿಗಳೂ ಕಾಲದ ಪ್ರಭಾವಕ್ಕೆ ಒಳಗಾಗಿ ಬದಲಾಗುತ್ತಿರುವಾಗ ನಿತ್ಯ ಶಾಶ್ವತ  ಎಂಬುದು ಉಂಟೇ? ಎಂಬುದು ಪ್ರಶ್ನೆ.ಆದರೆ ಮಾನವನ ಉಗಮದಿಂದ ಇಲ್ಲಿಯವರೆಗೆ ಬದಲಾಗದ ವಿಷಯಗಳೂ ಉಂಟು. ಅಂದಿನಿಂದ ಇಂದಿನ ವರೆಗೂ ಆಲೋಚನೆ ಮಾಡುವುದು ಬುದ್ಧಿ. ನೋಡುವುದು ಕಣ್ಣು. ಕೇಳುವುದು ಕಿವಿ.ಎಂಬ ವ್ಯವಸ್ಥೆಯಲ್ಲಿ ಬದಲಾವಣೆ ಇಲ್ಲ. ಹೀಗೆ ಕಾಲ ಬದಲಾದಂತೆ ಬದಲಾಗುವ ವ್ಯವಸ್ಥೆ ಇದ್ದಂತೆ ಬದಲಾಗದ ವ್ಯವಸ್ಥೆಯೂ ಇರುತ್ತದೆ. ಆದರೆ ಈ ದೇಶದ ಜ್ಞಾನಿಗಳು ಕಾಲದ ಪ್ರಭಾವಕ್ಕೆ ಒಳಗಾಗದ ಬೆಳಕೊಂದನ್ನು ಕಂಡುಕೊಂಡಿದ್ದಾರೆ.

ಸ ಹಿ ಲೋಕಯೋನಿರಮೃತಸ್ಯ ಪದಮ್

ಸೂಕ್ಷ್ಮo ಪರಾಯಣಮಚಲಂ ಹಿ ಪದಮ್

ತತ್ಸಾಂಖ್ಯಯೋಗಿಭಿರುದಾಹೃತಂ ತಂ

ಬುದ್ಧ್ಯಾ ಯದಾತ್ಮಭಿರಿದಂ ಸನಾತನಂ||

ಅದು ವಿಶ್ವವು ವಿಕಾಸವಾಗುವ ಎಡೆ.ಅಮೃತದ ಸ್ಥಾನ. ಮೃತ್ಯುವು ಯಾವ ಎಡೆಯನ್ನು ಸೊಂಕಲಾರದೋ , ಯಾವುದನ್ನು ಮುಟ್ಟಿದಾಗ ವಿಶ್ವವನ್ನು ಯಾವ ಶಕ್ತಿಯು ತುಂಬಿಕೊಂಡಿದೆ ಎಂಬ ಅರಿವಾಗುವುದೋ ಅಂತಹ ಅಮೃತದ ನೆಲೆ. ಮೃತ್ಯುವಿನಿಂದ ಅಮೃತತ್ವದ ಎಡೆಗೆ ನಮ್ಮನ್ನು ಕರೆದೊಯ್ಯು ಎಂಬುದು ಭಾರತೀಯರ ನಿತ್ಯದ ಪ್ರಾರ್ಥನೆ.ಅಂತಹ ಅಮೃತದ ನೆಲೆಯನ್ನೇ ಸನಾತನ ಎಂದಿದ್ದಾರೆ. ಅದು ಸ್ಥೂಲ ದೃಷ್ಟಿಗೆ ಗೋಚರವಲ್ಲದ ಸೂಕ್ಷ್ಮತಮವಾದ ಬದುಕು.. ಅದು ಶ್ರೇಷ್ಠವಾದ ಗತಿ. ಬದಲಾಗದ ಸ್ಥಿರವಾದ ಬದುಕು. ಇದನ್ನು ಹೇಳಿದವರು-ಸಾಂಖ್ಯ ಯೋಗಿಗಳು. ತಮ್ಮ ಬುದ್ಧಿ ಮನಸ್ಸುಗಳನ್ನು ಮುಂದಕ್ಕೆ ಮಾತ್ರವೇ ಹರಿಸದೇ, ಹಿಂಬದಿಗೂ ಹರಿಸುತ್ತಾ "ತನ್ಮನೋ ವಿಲಯಂ ಯಾತಿ ತದ್ವಿಷ್ನೋ ಪರಮಂ ಪದಮ್" . ಎಂದು ಆ ಶಾಶ್ವತವಾದ ನೆಲೆಯನ್ನು ಮುಟ್ಟಿ,ಅಲ್ಲಿ ಆದ ದರ್ಶನದಿಂದ ಅರಳಿದ ಮನಸ್ಸಿನಿಂದ ಹೊರಬಂದ ಪದವೇ ಸನಾತನ. ಆ ದರ್ಶನವು ಕೊಟ್ಟ ಸುಖ, ನೆಮ್ಮದಿ,ತಂಪು ಇವುಗಳನ್ನು ಅನುಭವಿಸಿ ಜೀವಲೋಕಕ್ಕೆ ಅದೇ ಸುಖವೇ ಬೇಕಿರುವುದು, ಎಂಬ ಲೋಕಹಿತ ದೃಷ್ಟಿಯಿಂದ ಅದನ್ನು ಹೊಂದುವ ಆಚಾರ ವಿಚಾರಗಳನ್ನೇ ಸಾಧನ ಧರ್ಮವಾಗಿ ತಂದರು.

ಸೃಷ್ಟಿಯಲ್ಲಿ ಕ್ರಮಬದ್ಧವಾದ ನಡೆ

ಒಂದು ಬೀಜದಿಂದ ವಿಕಾಸವಾದ ವೃಕ್ಷದಲ್ಲಿ ಕ್ರಮಬದ್ಧವಾದ ನಡೆ ಇರುತ್ತದೆ.ಅಂಕುರ,ಕಾಂಡ,ಕೊಂಬೆ,ಎಲೆ,ಹೂವು.ಕಾಯಿ,ಹಣ್ಣು ಮತ್ತೆ ಬೀಜದಲ್ಲಿ ಪರ್ಯವಸಾನ. ಹಾಗೆಯೇ ವೃಕ್ಷದ ಬೆಳವಣಿಗೆ ಆದರೆ ಅದು ಸಹಜ. ಹಾಗೆ ಬೆಳೆಯುವಂತೆ ಮಾಡುವ ಕೃಷಿಯೆಲ್ಲವೂ ಧರ್ಮವೇ. ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು- ತೆಂಗಿನ ಮರ ಪಾಪಾಸ್ ಕಳ್ಳಿ ಬಿಟ್ಟಿತು ಅಂದರೆ ಅದು ಅಸಹಜ. ಅದರ ಬಾಳಾಟ ಅದರ ಸೃಷ್ಟಿಯಂತೆಯೇ ಸಾಗಬೇಕು.ಎಲ್ಲಿಂದ ಆರಂಭವಾಯಿತೋ ಆ ಮೂಲದಲ್ಲೇ ನಿಲ್ಲಬೇಕು" ಹಾಗೆಯೇ ನಿತ್ಯವಾದ ಸನಾತನವಾದ ಪರಮಾತ್ಮ ಬೀಜದಿಂದ ಹೊರಟ ನಮ್ಮ ಜೀವನ ವೃಕ್ಷಗಳು ವಿಕಾಸದ ಎಲ್ಲಾ ಹಂತಗಳಲ್ಲೂ ಪರಮಾತ್ಮ ಬೀಜದ ಧರ್ಮವನ್ನೇ ಇಟ್ಟುಕೊಂಡು ತುಂಬಿದ ಬಾಳನ್ನು ನಡೆಸಿ ಮತ್ತೆ ಪರಮಾತ್ಮ ಬೀಜದಲ್ಲೇ ನೆಲೆ ನಿಲ್ಲುವಂತಾದರೆ ಅದು ಸಹಜವಾದ ಜೀವನ ಎಂದರು ಶ್ರೀರಂಗ ಮಹಾಗುರುಗಳು. ಹಾಗೆ ನಡೆಯುವಂತೆ ಜೀವನ ವಿಧಾನವನ್ನು ರೂಪಿಸಿದರೆ ಆ ಸನಾತನ ಧರ್ಮ. ಅಂತಹ ವಿಧಾನವನ್ನೇ ಕೆಡಿಸದೇ ಹಾಗೇ ಮುಂದು ಮುಂದಿನ ಪೀಳಿಗೆಗೆ ಕೊಡುತ್ತಾ ಬಂದರೆ ಅದು ಸನಾತನ ಸಂಪ್ರದಾಯ.

ಬೇರಿನಿಂದ ಬೇರೆಯಾಗಿಲ್ಲ

ಇಲ್ಲಿನ ಯಾವ ಸಂಪ್ರದಾಯಗಳೂ ಸನಾತನವಾದ ಬದುಕಿನ ಬೇರಿನಿಂದ ಬೇರೆಯಾಗಿ ಬಂದಿಲ್ಲ. ಎಂದೇ ಯಾವುದೇ ಭಾರತೀಯ ವಿದ್ಯೆ, ಕಲೆಗಳನ್ನು ಹಿಡಿದು ಹೊರಟರೆ ಅದು ಆ ಕಲಾನಾಥನಾದ ಭಗವಂತನಲ್ಲೇ ನಿಲ್ಲಿಸುತ್ತದೆ. ಶ್ರೀರಂಗ ಮಹಾಗುರುಗಳು ಹೇಳಿದಂತೆ-"ಸನಾತನಾರ್ಯ ಭಾರತ ಮಹರ್ಷಿಗಳು ಕೇವಲ ಭೌತಿಕದಲ್ಲೇ ನಿಲ್ಲದೇ ದೈವಿಕವಾಗಿ ಏನಿದೆ? ಆಧ್ಯಾತ್ಮಿಕವಾಗಿ ಏನಿದೆ? ಎಂದು ನೋಡುತ್ತಾ ದೈವೀ ರಾಜ್ಯ, ಆತ್ಮ ರಾಜ್ಯಗಳನ್ನು ಪ್ರವೇಶಿಸಿ ಜ್ಞಾನಭಂಡಾರವನ್ನು ತಲುಪಿದರು." ಹಾಗೆ ಬೇರಿನೊಡನೆ ಇದ್ದಾಗ ಆ ಜೀವನ ವೃಕ್ಷದಲ್ಲಿ ರಸವಿದೆ, ಸೌಂದರ್ಯವಿದೆ, ಮಾಧುರ್ಯವಿದೆ. ಇಲ್ಲವೇ ನೀರಸ. ಹೀಗಾಗಿ ಸನಾತನ ಎಂದಾಗ ನಿತ್ಯ ಶಾಶ್ವತನಾದ ಭಗವಂತನನ್ನೇ ಹೇಳಿರುವುದು. ಅವನಿಂದ ವಿಕಾಸವಾದ ಎಲ್ಲವೂ ಸನಾತನದ ವ್ಯಾಪ್ತಿಗೆ ಬರುತ್ತವೆ. ಸನಾತನ ಧರ್ಮ ಸಂಸ್ಕೃತಿಗಳು ಎಲ್ಲಾ ಕಾಲಕ್ಕೂ ಪ್ರಸ್ತುತವೇ. ಅದನ್ನು ಅಪ್ರಸ್ತುತ ಎನ್ನುವವರು ಜೀವನ ವೃಕ್ಷದ ಸಮಗ್ರ ಪರಿಚಯವಿಲ್ಲದವರು.ಅದರ ಅರ್ಥ ಸಂಪತ್ತಿಯನ್ನು ಕಂಡುಕೊಂಡಿಲ್ಲ. ಅದು ಅವರ ದೃಷ್ಟಿದೋಷ. ಅದನ್ನು ಅವರೇ ಸರಿ ಮಾಡಿಕೊಳ್ಳಬೇಕು. ಆ ಮೂಲವಸ್ತು ಕೇಂದ್ರಿತವಾಗಿ ಬಂದ ಸಂಸ್ಕೃತಿಯೇ ಸನಾತನ ಸಂಸ್ಕೃತಿ. ನಾವೆಲ್ಲರೂ ಅಷ್ಟೇ ಏಕೆ ವಿಶ್ವದ ಎಲ್ಲಾ ಜೀವಿಗಳೂ ಸನಾತನರಾಗಬೇಕೆಂಬುದೇ ಈ ದೇಶದ ಮಹರ್ಷಿಗಳ ಜೀವನ ದೃಷ್ಟಿ, ಎಂದೇ ಅವರ ಧೀರ ಘೋಷಣೆ- "ವಿಶ್ವವನ್ನೇ ಶ್ರೇಷ್ಠವನ್ನಾಗಿಸೋಣ" ಎಂದಾಗಿದೆ. ನಾವೆಲ್ಲಾ ಈ ಅರ್ಥದಲ್ಲಿ ಸನಾತನಿಗಳಾಗೋಣ.

ಸೂಚನೆ : 
04/10/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ

ಕೃಷ್ಣಕರ್ಣಾಮೃತ 77 ಸತ್ತಮೇಲಲ್ಲ, ಆಧ್ಯಾತ್ಮಿಕದ ಸವಿ: ಸಾಯುವ ಮುನ್ನವೇ(Krishakarnamrta 77)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಸಾವು ಯಾರಿಗೆ ಭಯ ತರದು? ಸಾವು ಬಂದರೆ ನಾವು ಇಲ್ಲವಾಗುವೆವಲ್ಲವೆ? ತಾನಿರಬಾರದೆಂಬ ತವಕ ಯಾರಿಗೆ ಬಂದೀತು? ಕಣ್ಮರೆಯಾಗುವೆನೆಂಬ ಕಲ್ಪನೆಯೂ ಕ್ಲೇಶಕಾರಿಯೇ, ಅಸಹನೀಯವೇ, ಆತಂಕ ತರುವಂತಹುದೇ.

ಮೇಲೆ ಹೇಳಿದುದೆಲ್ಲ ಸಾಧಾರಣರ ಸಾವಿನ ಬಗೆಗೆ. ಮಹಾತ್ಮರಿಗೂ ಭಯವಾಗಬಹುದು. ಆದರೆ ಕಾರಣ ಬೇರೆ. ಲೀಲಾಶುಕನಿಗೂ ಆತಂಕವೇ:  ಸಾವಿನತ್ತ ಸಾಗುವುದಕ್ಕೂ ಮೊದಲೇ ಒಂದು ಮುಖ್ಯವಾದ ಕೆಲಸವಾಗಬೇಕಾಗಿದೆ, ಆಗಲೇಬೇಕಾಗಿದೆ.

ಏಕೆ? ಸಾವಿನ ಸಮಯದಲ್ಲಿ ಸ್ಮರಣೆಯಾದರೆ ಅಷ್ಟೇ ಸಾಕಲ್ಲವೆ? ಅಂತಕಾಲದ ಸ್ಮರಣೆಯ ಬಗ್ಗೆ ಹಾಗೆಂದು ಭಗವದ್ಗೀತೆಯಲ್ಲಿಯೇ ಹೇಳಿಲ್ಲವೇ? – ಎಂದು ಕೇಳಬಹುದು. ಹೀಗೆಂಬುದಾಗಿ ಕೇಳುವುದು ಸುಲಭ. ಸಾವಿನ ಕ್ಷಣ ಹೇಗಿರುವುದೋ ಬಲ್ಲವರಾರು?

ಇಲ್ಲ, ಕೊನೆಗಾಲದ ಕೆಲ ಲಕ್ಷಣಗಳನ್ನಂತೂ ಹೇಳಬಹುದು. ಏನವು? ಆಗಾಗುವ ತಾಪ ಹೀಗೆಂದು ವರ್ಣಿಸಲಾಗದಂತಹುದು. ಎಂದೇ ಅದನ್ನು "ಕೋಽಪಿ ತಾಪಃ" ಎನ್ನುತ್ತಾನೆ, ಕವಿ. 

ಆಗಿನ ನೋವು ಹೇಗಿರಬಹುದೆಂದು ಕಿಂಚಿತ್ತಾಗಿ ಸೂಚಿಸಬಹುದು. ಹೇಗೆ? ಎಲ್ಲ ಮರ್ಮ-ಸ್ಥಾನಗಳಿಗೂ ಘಾತವು ಆಗಾಗುವುದು. ಅದೂ ಸಾಧಾರಣವಾದ ಹೊಡೆತವಲ್ಲ. ದೃಢವಾದ ಅಭಿಘಾತವದು. ಯಾವುದೇ ಮರ್ಮಸ್ಥಾನಕ್ಕೆ ಏಟುಬಿದ್ದವ ತತ್ತರಿಸಿಹೋಗುತ್ತಾನೆ. ಹೊರಗಿನಿಂದ ಬೀಳುವ ಏಟಿಗೇ ಬೊಬ್ಬೆಯಿಡುವಂತಾಗುತ್ತದೆ. ಆದರಿದೋ, ಒಳಗಿನಿಂದಲೇ ಆಗುವ ಅತಿಶಯವಾದ ಅಭಿಘಾತ. ಅದರಿಂದಾಗುವ ಪರಿಣಾಮ ಅವಾಚ್ಯ. ಏಕೆ? ಆಗಾಗುವ ತಬ್ಬಿಬ್ಬು ಎಂತಹುದೆಂದರೆ ಏನಾಯಿತೆಂಬುದೇ ಗೋಚರವಾಗದು. ಆದರೂ ಅದನ್ನು ಪರಿಕಿಸಲಂತೂ ಆಗುವುದೇ ಇಲ್ಲ. 

ಅಷ್ಟೇ ಅಲ್ಲ. ನಮ್ಮ ನಾನಾಂಗಗಳ ನಡುವೆ ಸಂಧಿಗಳುಂಟಲ್ಲವೇ? ಸಂಧಿಗಳೆಲ್ಲ ಪಟುವಾಗಿದ್ದಾಗ ಶರೀರವೇ ಒಂದು ಸಂಘವಾಗಿ ಕೆಲಸ ಮಾಡುತ್ತದೆ. ಆದರೆ ಮರಣವಪ್ಪಳಿಸುತ್ತಲೇ ಸಂಧಿ-ಬಂಧನಗಳೇ ಕಿತ್ತುಕೊಂಡುಬಿಡುತ್ತವೆ. ಆಂತರಿಕವಾಗಿಯೇ ಹೀಗಾಗಿಹೋದಾಗಲಂತೂ ಕೈಕಾಲುಗಳನ್ನೂ ಆಡಿಸಲಾಗುವುದಿಲ್ಲ. ಆಗಿರುವ ಸಂಧಿ-ಬಂಧದ ಶಿಥಿಲತೆಯನ್ನು ಹೇಳಿಕೊಳ್ಳಲೂ ಆಗುವುದಿಲ್ಲ, ಸರಿಪಡಿಸಲೂ ಆಗುವುದಿಲ್ಲ. ಎಲ್ಲ ಹತೋಟಿಗಳೂ ತಪ್ಪುತ್ತವೆ. 

 ಸಕಲವಿಧ-ವಿವಶತೆಯೂ ಅತಿಶಯಿತ-ವೇದನೆಯೂ ಒಟ್ಟಿಗೇ ಅನಿರೀಕ್ಷ್ಯವಾಗಿ ಹಾಗೂ ಅಪ್ರತೀಕಾರ್ಯವಾಗಿ ಉಂಟಾಗುತ್ತಿರುವಾಗ, ಏನು ಮಾಡಬೇಕೆಂಬುದಾಗಿ ದಿಕ್ಕೇ ತೋಚದಂತೆ ಆಗಿಬಿಡುತ್ತಿರಲು,  ಭಗವಂತನ ಸ್ಮರಣೆಯು ಅದೆಲ್ಲಿಂದ ಬಂದೀತು?

ಎಂದೇ ಲೀಲಾಶುಕನು ಕೇಳಿಕೊಳ್ಳುವುದಾದರೂ, ಶ್ರೀಕೃಷ್ಣನ ಸುಂದರವದನದ ದರ್ಶನವು ಮೊದಲೇ ಆಗಿಬಿಡಲೆಂದು. ಅದನ್ನು ಆತನು ಕೇಳಿಕೊಳ್ಳುವ ಬಗೆಯೂ ವಿಶಿಷ್ಟವೇ.

ಪ್ರಭುವೇ, ಅವಸಾನಕಾಲವು ಆಗಮಿಸುವುದರೊಳಗೆ ನಿನ್ನ ಮುಖಚಂದ್ರನ ದರ್ಶನವಾಗಬೇಕು. ಅ ಚಂದ್ರಾತಪದ ಪ್ರಭಾವದಿಂದಾಗಿ ನನ್ನ ಚಿತ್ತಧಾರೆಯು ದ್ವಿಗುಣಿತವಾಗಬೇಕು - ಎನ್ನುತ್ತಾನೆ.

ಏನು ಹಾಗೆಂದರೆ? ಚಂದ್ರಾತಪ ಅಥವಾ ಚಂದ್ರಿಕೆಯೆಂದರೆ ಬೆಳದಿಂಗಳು. ಚಂದ್ರನಿದ್ದ ಮೇಲೆ, ಅರ್ಥಾತ್ ಪೂರ್ಣಚಂದ್ರನಿದ್ದ ಮೇಲೆ, ಚಂದ್ರಿಕೆಯಿರದೇ? ಅದರ ಪ್ರಭಾವವಿರದೇ? "ಚಿತ್ತಧಾರೆ"ಯೆನ್ನುವುದರಲ್ಲೇ "ಚಿತ್ತವೊಂದು ಸಮುದ್ರ"ವೆಂಬುದರ ಧ್ವನಿಯಿರುವುದು. 

ಪೂರ್ಣಚಂದ್ರನು ಬಂದಾಗ (ಗುರುತ್ವಾಕರ್ಷಣದಿಂದಾಗಿ) ಸಮುದ್ರವು ಚಂದ್ರನತ್ತ ಉಕ್ಕುವುದಷ್ಟೆ. ಹಾಗೆ ನಿನ್ನ ಮುಖಚಂದ್ರನು ಕಣ್ಣ ಮುಂದೆ ಕಾಣುತ್ತಲೇ ನನ್ನ ಚಿತ್ತವು ನಿನ್ನತ್ತ ಉಕ್ಕಲಿ. ದ್ವಿಗುಣಿತವಾಗಿ, ಎಂದರೆ ಎರಡರಷ್ಟಾಗಿ, ಉಕ್ಕಲಿ – ಎಂದು ಕವಿ ಕೋರಿದ್ದಾನೆ.

ವಿಭೋ! - ಎಂದು ಸಂಬೋಧಿಸಿರುವುದೇ ಅದಕ್ಕಾಗಿ. ಸರ್ವ-ಸಾಮರ್ಥ್ಯವುಳ್ಳವನು ವಿಭು. ಕದ್ದು ಬರುವ ಕೊನೆಗಾಲ ಬಳಿ ಸಾರುವ ಮೊದಲೇ ನಿನ್ನ ಮುಖಚಂದ್ರನ ದರ್ಶನವನ್ನು ದಯಪಾಲಿಬಿಡು - ಎಂಬ ಅರಿಕೆ ಆತನದು.

ಶ್ಲೋಕ ಹೀಗಿದೆ:

ಯಾವನ್ನ ಮೇ ನಿಖಿಲ-ಮರ್ಮ-ದೃಢಾಭಿಘಾತಂ

ನಿಃಸಂಧಿ-ಬಂಧನಂ ಉಪೈತಿ ನ ಕೋಽಪಿ ತಾಪಃ |

ತಾವದ್ ವಿಭೋ ಭವತು ತಾವಕ-ವಕ್ತ್ರ-ಚಂದ್ರ- 

-ಚಂದ್ರಾತಪ-ದ್ವಿಗುಣಿತಾ ಮಮ ಚಿತ್ತ-ಧಾರಾ ||

 

ಯಾವತ್-ತಾವತ್ ಎಂಬ ಪದಗಳಿಂದ ಪ್ರಥಮಪಾದ-ತೃತೀಯಪಾದಗಳು ಆರಂಭಗೊಂಡಿವೆ. ಎಷ್ಟರಲ್ಲಿ-ಅಷ್ಟರಲ್ಲಿ - ಎಂಬುದು ಅವುಗಳ ಅರ್ಥ.

ಯಾವತ್-ತಾವತ್-ಗಳನ್ನುಳ್ಳ ಮುಂದಿನ ಶ್ಲೋಕದಲ್ಲಿ ಸಹ ಇದೇ ಸಂನಿವೇಶವನ್ನು ಲೀಲಾಶುಕನು ಪರಿಭಾವಿಸುತ್ತಾನೆ. ಈ ಶ್ಲೋಕ ಹೀಗಿದೆ:

ಯಾವನ್ನ ಮೇ ನರ-ದಶಾ ದಶಮೀ ದೃಶೋಽಪಿ

ರಂಧ್ರಾದ್ ಉಪೈತಿ ತಿಮಿರೀಕೃತ-ಸರ್ವ-ಭಾವಾ |

ಲಾವಣ್ಯ-ಕೇಲಿ-ಸದನಂ ತವ ತಾವದ್ ಏವ

ಲಕ್ಷ್ಯಾಸಮ್ ಉತ್-ಕ್ವಣಿತ-ವೇಣು ಮುಖೇಂದು-ಬಿಂಬಂ ||

 

ಸಾವಿಗೆ "ಹತ್ತನೆಯ ಅವಸ್ಥೆ" ಎನ್ನುವರು. ಏಕೆ? ಕಾಮವು ಉತ್ಕಟವಾಗುತ್ತಿದ್ದಂತೆ ಹತ್ತು ಅವಸ್ಥೆಗಳು ಸಾಧ್ಯವಂತೆ. ಮೊದಲನೆಯದು ಬಯಕೆ. ಅದು ಹೆಚ್ಚಾದಂತೆ ಎರಡನೆಯದು ಪ್ರಿಯನನ್ನೇ ಕುರಿತಾದ ಚಿಂತನ. ಮೂರನೆಯದು ಕಾಡುವ ಸ್ಮೃತಿ, ನೆನಪು. ನಾಲ್ಕನೆಯದು ಆತನಲ್ಲಿರುವ ಗುಣಗಳ ಕೊಂಡಾಟ. ಐದನೆಯದು ಉದ್ವೇಗ. ಆರನೆಯದು ಪ್ರಲಾಪ. ಏಳನೆಯದು ಉನ್ಮಾದ. ಎಂಟನೆಯದು ಕಾಮ-ವ್ಯಾಧಿ. ಒಂಭತ್ತನೆಯದು ಜಡತೆ. ಹತ್ತನೆಯದೇ ಮರಣ. 

ತೀವ್ರತಮವಾದ ಪ್ರೀತಿಯು ಪೂರೈಸದೆ ಸಾವಿಗೆ ತುತ್ತಾದವರುಂಟಲ್ಲವೇ? ಎಂದೇ ಅದೇ ಕೊನೆಯದಾದ ದಶಮೀ ನರ-ದಶೆ.

ಹೀಗೆ "ಹತ್ತನೆಯ ಸ್ಥಿತಿ"ಯೆಂದೇ ಕರೆಸಿಕೊಳ್ಳಲಾಗುವ ಮರಣವು ಯಾರಿಗೆ ತಪ್ಪಿದ್ದು? ಹಾಗಿದ್ದರೂ ನಾನು ಸಾಯಲು ಸಿದ್ಧನಾಗಿದ್ದೇನೆ ಎನ್ನುವವರುಂಟೆ? ಅದು ಬಂದಾಗ ನಾವು ವಿಹ್ವಲರಾಗುತ್ತೇವೆ. ಕಣ್ಣಿಗೆ ಕತ್ತಲು ಕವಿಯುತ್ತದೆ. ಬಾಹ್ಯಾಂಧಕಾರವಲ್ಲ, ಕಣ್ಣೊಳಗಣ ಕತ್ತಲೆಯದು. ಈ ಅಂತಸ್ತಿಮಿರವು ಆವರಿಸಿದಾಗ ಸಮಸ್ತ-ವಸ್ತುಗಳೂ ವಿಲೀನವಾಗುತ್ತವೆ. ಎಂದರೆ ಬರೀ ರೂಪವು ಮಾತ್ರವಲ್ಲ, ಶಬ್ದ-ಸ್ಪರ್ಶ-ರಸ-ಗಂಧಗಳೂ ಅಗ್ರಾಹ್ಯವಾಗಿಬಿಡುತ್ತವೆ. ಅರ್ಥಾತ್, ಯಾವ ಇಂದ್ರಿಯವೂ ಕೆಲಸಮಾಡದು.

ಎಂದೇ ಅಂತಹ ಸ್ಥಿತಿಯು ಬಂದು ಗ್ರಸಿಸುವ ಮೊದಲೇ, ಎಂದರೆ ನುಂಗಿಹಾಕುವ ಮೊದಲೇ, ನಾನು ನೋಡಿಬಿಡಬೇಕು ದೇವಾ ಎನ್ನುತ್ತಾನೆ, ಲೀಲಾಶುಕ. ಏನನ್ನು ಕಾಣಬೇಕು? ನಿನ್ನ ಮುಖಚಂದ್ರ-ಬಿಂಬವನ್ನು.

ಆ ಮುಖಚಂದ್ರ-ಬಿಂಬದ ವಿಶೇಷವೇನು? - ಎಂಬುದನ್ನು ಎರಡು ಪದಗಳಿಂದ ಸೂಚಿಸುತ್ತಾನೆ. ಮೊದಲನೆಯದಾಗಿ ಅದು ಲಾವಣ್ಯ-ಕೇಲಿ-ಸದನ. ಮಾಧುರ್ಯ-ಪರಂಪರೆಯೇ ಲಾವಣ್ಯ. ಕೇಲಿ ಎಂದರೆ ಆಟ. ಲಾವಣ್ಯದ ಆಟಕ್ಕೆ ಅದು ಸದನ - ಎಂದರೆ ನೆಲೆಮನೆ. ಎಷ್ಟಾದರೂ ಕೃಷ್ಣನ ಲಾವಣ್ಯವೇ ಲಾವಣ್ಯ. ಅದರ ಮುಂದೆ ಮತ್ತಾವ ಲಾವಣ್ಯ? ಆತನ ಆಟವೇ ಆಟ. ಆತನ ಆಟಗಳೆದುರು ಮತ್ತಾವುದು ನಿಲ್ಲುವುದು? ಹೀಗೆ ಕೃಷ್ಣನ ಬಗೆಬಗೆಯ ಲಾವಣ್ಯಗಳಿಗೂ ಬಗೆಬಗೆಯ ಕ್ರೀಡೆಗಳಿಗೂ ಆಸ್ಪದವಾದುದು ಆತನ ಸೊಗಸಿನ ಮೊಗ.

ಎರಡನೆಯ ವಿಶೇಷಣವೆಂದರೆ ಅದು ವೇಣುವನ್ನು ಧರಿಸಿರುವಿಕೆ. ಎಂತಹ ವೇಣುವದು? ಉತ್-ಕ್ವಣಿತವಾದ ವೇಣು. ಎಂದರೆ ಎತ್ತರದ ಧನಿಯುಳ್ಳದ್ದು, ಅರ್ಥಾತ್ ತಾರದ ದನಿ ಅದರದು. ತಾರಕವಾದ ನಾದವನ್ನುಳ್ಳದ್ದದು. ಯೋಗಿಗಳಿಗೆ ಒಳಗಿವಿಯೊಳಗೆ ಕೇಳಿಬರುವ ಅಂತರ್ನಾದಕ್ಕೆ ಸರಿಸಮವಾದುದು.

ಹೀಗೆ ಅಲ್ಲಿ ಕಣ್ಣುಗಳಿಗೆ ಸವಿಯುಣಿಸುವ ರೂಪ-ಮಾಧುರ್ಯವಿದೆ; ಕಿವಿಗಳಿಗೆ ತಂಪೆರೆಯುವ ನಾದ-ಮಾಧುರ್ಯವಿದೆ. ಮಧುರಾಕೃತಿಯ ದರ್ಶನ, ಹಾಗೂ ಯೋಗದ ಉನ್ನತಾನುಭವ – ಇವುಗಳು ಕೂಡಿರುವೆಡೆಯಿದು. ಮರಣವಪ್ಪಳಿಸುವ ಮುನ್ನ, ಸಾವನ್ನಪ್ಪುವ ಮುನ್ನ, ನನ್ನ ಕಣ್ಗಳಿಗೂ ಕಿವಿಗಳಿಗೂ ಹಬ್ಬವೆನಿಸುವ ತಾರಕಯೋಗವನ್ನು ಅನುಗ್ರಹಿಸುವ ಭಾಗ್ಯವನ್ನು ಬೇಡುತ್ತಿದ್ದಾನೆ, ಭಕ್ತಕವಿ ಲೀಲಾಶುಕ.

ಸತ್ತಮೇಲಲ್ಲ, ಆಧ್ಯಾತ್ಮಿಕದ ಸವಿ: ಸಾಯುವ ಮುನ್ನವೇ.

ಸೂಚನೆ : 04/10/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ

ಬೊಟ್ಟು (Bottu)

ಲೇಖಕರು : ಡಾ II ಭಾರತ್. ಎಸ್  

ಪ್ರತಿಕ್ರಿಯಿಸಿರಿ (lekhana@ayvm.in)



ಬೊಟ್ಟು (ಪೊಟ್ಟು ) ಹಣೆಗೇ ಇಟ್ಟು ಕೊಳ್ಳು ವಂತಹ ಒಂದು ಬಿಂದು. ಇದು ಭಾರತೀಯ ಪ್ರಾಚೀನ ಪರಂಪರೆಯನ್ನು ಅನುಸರಿಸುವವರ ಒಂದು ಕಲಾತ್ಮಕವಾದ,ಶ್ರೇಷ್ಠವಾದ ಆಚಾರ. 

ಪಾಶ್ಚಾತ್ಯ ಚಿಂತನಾನುಕ್ರಮಕ್ಕೆ ದಾಸರಾದವರು ಇದನ್ನ ಬ್ಯೂಟಿ ಸ್ಪಾಟ್ (Beauty-Spot), ಫ್ಯಾಷನ್ ಸ್ಪಾ ಟ್(Fashion-Spot) ಎಂದೆಲ್ಲ ಕರೆದಿರುವುದುಂಟು. ಇದನ್ನು ಚಿತ್ರ -ವಿಚಿತ್ರವಾದ ಆಕಾರ ಮತ್ತು ಬಣ್ಣಗಳಲ್ಲಿ ಧರಿಸುವದನ್ನು  ನಾವು ಸಾಮಾನ್ಯವಾಗಿ ನೋಡುತ್ತೇವೆ. ಮತ್ತು ಸೀರೆ, ಮತ್ತು ಇತರ ಉಡಿಗೆಗಳ ಬಣ್ಣಕ್ಕೆ ತಕ್ಕಂತೆ ಬಿಂದುವನ್ನು ಹಣೆಯಲ್ಲಿ ಫ್ಯಾಷನ್ (Fashion statement) ಗುರುತಾಗಿ ಅಲಂಕರಿಸಿಕೊಳ್ಳುತ್ತಾರೆ. ಅಂಗಡಿಗಳಲ್ಲಿ , ಪ್ಲಾಸ್ಟಿ ಕ್ Sticker, ಬಟ್ಟೆ (Dye) ಇತ್ಯಾ ದಿ ಪದಾರ್ಥಗಳಿಂದ ತಯಾರಿಸಲ್ಪಟ್ಟ ಬಹುರೂಪ, ಬಹುಬಣ್ಣ ವೈವಿದ್ಯಗಳ  ಬಿಂದಿಗಳನ್ನು ಮಾರುತ್ತಾರೆ. ಇದು ಆಧುನಿಕ ಅಲಂಕಾರ ಪದ್ಧತಿಗೆ ಹೊಂದಿಕೊಳ್ಳುವುದು ಮತ್ತು ಧರಿಸುವುದಕ್ಕೆ ಸುಲಭ ಎಂಬ ಕಾರಣದಿಂದ ಪ್ರಚಲಿತವಾಗಿದೆ. ಈ ಬಿಂದುವಲ್ಲದೆ  ನಮ್ಮ ದೇಶದ ವಿವಿಧಪ್ರಾಂತಗಳಲ್ಲಿ ದೇವತಾ ಉಪಾಸನೆಗೆ ತಕ್ಕಂತೆ ಅನೇಕ ಆಕಾರಗಳಲ್ಲಿ   ಪುಂಡ್ರಗಳನ್ನು ಧರಿಸುತ್ತಾರೆ. ವಾಮಪಂಥೀಯ ಚಿಂತಕರು ಈ ಸಾಂಪ್ರದಾಯಿಕ ಗುರುತನ್ನು Caste Mark ಎಂಬ ಶಬ್ದದಿಂದ ಅವಹೇಳನೆ ಮಾಡುತ್ತಾರೆ. ಇನ್ನು ಕೆಲವರು- ಇದು ನಮ್ಮ ಗುಂಪು, ಇತರರಗಿಂತ ನಾವು ಭಿನ್ನ , ಎಂದು ತೋರಿಸುಕೊಳ್ಳುವುದಕ್ಕಾಗಿ     ಇರುವ ಒಂದು ಹೊರಗುರುತು, ಅಷ್ಟೆ ಎನ್ನುವುದೂ ಉಂಟು. 

ಆದರೆ,  ಈ ಆಚಾರವನ್ನು ತಂದವರು ಭಾರತೀಯ ಮಹರ್ಷಿಗಳು. ಇದರ ಹಿಂದಿನ ವಿಜ್ಞಾನವನ್ನೂ ಅವರ ಚಿಂತನಾ ಕ್ರಮದಲ್ಲೇ ಅರಿಯುವುದು ಹೆಚ್ಚು ಸೂಕ್ತ. ಈ ದೇಶದ ಮಹರ್ಷಿಗಳು ತಾವು ಜೀವನದ ಒಳಸೌಖ್ಯವನ್ನು ಅನುಭವಿಸಿ, ಸ್ಥೂಲವಾಗಿ ಕಾಣುವ ಈ ಜಗತ್ತಿನ ಸೂಕ್ಷ್ಮ ರೂಪವೇನು? ಅದಕ್ಕೂ ಹಿಂದಿನ ಪರ ರೂಪವೇನು? ಎಂಬುದನ್ನು ತಮ್ಮ ತಪಸ್ಯೆಯಿಂದ ಕಂಡುಕೊಂಡರು. ಆ ಪರರೂಪವೇ ನಿತ್ಯದಲ್ಲೂ ಬೆಳಗುತ್ತಿರುವ ಮತ್ತು ಸೂಕ್ಷ್ಮ ಮತ್ತು ಸ್ಥೂಲರೂಪಗಳಿಗೂ ಕಾರಣವಾಗಿದೆ ಎಂಬುದನ್ನು ಅರಿತರು. ಈ ಮೂರೂ ಕ್ಷೇತ್ರಗಳಲ್ಲಿನ ಬಾಳಾಟದಲ್ಲಿ ಅತ್ಯಂತ ನೆಮ್ಮದಿ, ಸುಖ ಶಾಂತಿ ಇರುವುದನ್ನು ಗಮನಿಸಿ ಅದಕ್ಕೆ ಪರಸ್ಪರ ವಿರೋಧವಿಲ್ಲದ , ಪೂರಕವಾದ ಜೀವನ ವ್ಯವಸ್ಥೆಯನ್ನು ಈ ದೇಶದಲ್ಲಿ ರೂಪಿಸಿದರು. ಅಂತಹ ಜೀವನ ವಿಧಾನದಲ್ಲಿ ನಮ್ಮನ್ನು ಆ ಆನಂದದೆಡೆಗೆ ಒಯ್ಯುವ ಅಲಂಕಾರಗಳನ್ನೂ ಬಹಳ ವೈಜ್ಞಾನಿಕವಾಗಿ ಅವರು ತಂದಿದ್ದಾರೆ ಎಂಬುದನ್ನು ಮರೆಯಲಾಗದು. ಅಂತಹ ಅಲಂಕಾರಗಳಲ್ಲಿ ಒಂದು, ಹಣೆಯ ತಿಲಕ, ಬೊಟ್ಟು .  ಯಾರು ಕೇವಲ ಭೌತಿಕ ದೃಷ್ಟಿಯಿಂದ ಇದನ್ನು ಬ್ಯೂಟಿ ಸ್ಪಾಟ್ ಎಂದರೋ, ಋಷಿಗಳ ದೃಷ್ಟಿಯಲ್ಲಿ ಅದು ಒಳಬೆಳಗುವ ಪರಂಜ್ಯೋತಿಯ ಬ್ಯೂಟಿ ಸ್ಪಾಟ್ ಆಗಿದೆ.  

ಜ್ಞಾನಿಗಳು ಪರಮಾತ್ಮ ಸಾಕ್ಷಾತ್ಕಾರವನ್ನು ಪಡೆಯುವ ಮಾರ್ಗದಲ್ಲಿ ಸಾಗುವಾಗ ಒಂದು ಜ್ಯೋತಿರ್ಮಯವಾದ ಬಿಂದುವನ್ನ್ನುಭ್ರೂಮಧ್ಯ ಸ್ಥಾನದಲ್ಲಿ ದರ್ಶನ ಮಾಡುತ್ತಾರೆ. ಆ ದರ್ಶನವೇ ಅವರು ಹಿಂದೆಂದೂ ಅನುಭವಿಸಿರದ ಪರಮಾನಂದವನ್ನು, ನೆಮ್ಮದಿಯನ್ನೂ, ಕೃತಕೃತ್ಯ ಭಾವವನ್ನು ಅನುಭವಿಸಿದರು. ಇದನ್ನೇ "ಬಿಂದೋರ್ನಾದಸಮುತ್ಪನ್ನ: ಸಮುದಿತೇ ನಾದೆ ಜಗತ್ಕಾರಣಂ।" ಈ ಬಿಂದುವಿನಿಂದಲೇ ನಾದ ಉತ್ಪ ನ್ನವಾಗುತ್ತೆ. ಅದರಿಂದಲೇ ಸಮಸ್ತ ಸೃಷ್ಟೀ ಹೊರಹೊಮ್ಮುತ್ತದೆ! ಎಂಬುದು ಅವರ ಅನುಭವದ ಧೀರ ಘೋಷ. ಹೀಗೆ  ಯಾವ ಜ್ಯೋ ತಿರ್ಮಯವಾದ ಬಿಂದುವನ್ನು  ಅಂತರಂಗದಲ್ಲಿ ದರ್ಶನ  ಮಾಡಿದರೋ, ಅದರ ಸ್ಮರಣೆ ಉಂಟಾಗಲು ಹೊರಗೂ ಅದೇ ಬಗೆಯ ಅಲಂಕಾರ. ಹೊರಬಿಂದುವನ್ನು ನೋಡುತ್ತಾ ಒಳದರ್ಶನದೆಡೆಗೆ ಜೀವಲೋಕವನ್ನು ಸೆಳೆಯುವ ಸಂಸ್ಕಾರವನ್ನು ತಂದುಕೊಡುವುದಕ್ಕಾಗಿ ಈ ಹೊರ ಅಲಂಕಾರವನ್ನು ಸಂಸ್ಕೃತಿಯಾಗಿ ಅವರು ತಂದುದು. ಈ ಆಚರಣೆಯನ್ನು ಅವರು ಜೀವಲೋಕದ ಮೇಲಿನ ಕರುಣೆಯಿಂದ ತಂದುಕೊಟ್ಟದ್ದು ಎಂಬುದನ್ನು ಮರೆಯಬಾರದು. ಹೊರ ಬಿಂದುವಿನ  ಮಾಧ್ಯಮವಾಗಿ ನಮ್ಮ ಮನೋಬುದ್ಧಿಗಳನ್ನು ಒಳಗೆ ಬೆಳಗುವ ಪರಬ್ರಹ್ಮನ ಕಡೆಗೆ ಏರಿಸುವ ಉಪಾಯ ಈ ಅಲಂಕಾರದಲ್ಲಿದೆ. ನಾವು ಸೇರಬೇಕಾದ ಜೀವನ ಧ್ಯೇಯದ ನಕ್ಷೆಯಾಗಿ ಈ ಬೊಟ್ಟಿನ ಅಲಂಕಾರ ಇದೆ ಎಂಬುದೇ ಸತ್ಯಾರ್ಥ.

ಎಂದೇ ಇದು ಕೇವಲ ಹೊರ ಅಲಂಕಾರ ಮಾತ್ರವಲ್ಲದೇ ಅದಕ್ಕೆ ಉಪಯೋಗಿಸುವ ದ್ರವ್ಯ, ಬಣ್ಣ, ಗಾತ್ರ ಇತ್ಯಾದಿ ಎಲ್ಲವನ್ನೂ ಅವರು ನಿರ್ದೇಶಿಸಿದ್ದಾರೆ. ಅದು ನಮ್ಮ ಐಹಿಕ ಪಾರಮಾರ್ಥಿಕ ಜೀವನದ ಮೇಲ್ಮೆಗೆ ಸಹಕಾರಿಯಾಗುವಂತೆ ಯೋಜಿಸಿದ್ದಾರೆ ಎಂಬುದು ಗಮನಾರ್ಹ. ಅದರ ವಿದ್ಯೆಯನ್ನು ಅರಿತು ಆಚರಿಸಿದಾಗ ಭೌತಿಕವಾಗಿ ಆರೋಗ್ಯ ವೃದ್ಧಿ,ಐಶ್ವರ್ಯಪ್ರಾಪ್ತಿ, ದೈವಿಕ ಕ್ಷೇತ್ರದಲ್ಲಿ ಪಾಪ ನಿವಾರಣೆ, ನಾಡೀ ಶುದ್ಧಿ, ದೇವತಾ ದರ್ಶನ ಮತ್ತು ಕಡೆಯಲ್ಲಿ ಆಧ್ಯಾತ್ಮ ಕ್ಷೇತ್ರದಲ್ಲಿ ಪರಮಾತ್ಮಾನುಭವದಲ್ಲಿ ಪರ್ಯವಸಾನವಾಗುವಷ್ಟು ವ್ಯಾಪ್ತಿಯನ್ನು ಹೊಂದಿದೆ. 

ಬೊಟ್ಟನ್ನು ಧರಿಸುವ ಭ್ರೂಮಧ್ಯ ಪ್ರದೇಶ ಆಜ್ಞಾಚಕ್ರದ ಸ್ಥಾನ. ಯೋಗಿಗಳು ಪ್ರಕೃತಿ ಚಕ್ರಗಳನ್ನೆಲ್ಲ ದಾಟಿ  ಊರ್ಧ್ವ ಮುಖವಾಗಿ ಸಂಚರಿಸಿದಾಗ ಈ ಜಾಗದಲ್ಲಿಯೇ ಅವರಿಗೆ  ಒಂದು ಜೋತಿರ್ಮಯವಾದ ಬಿಂದು ದರ್ಶನ ಆಗುವುದು. ಅದಕ್ಕಾಗಿ ಅಲ್ಲೇ ಬೊಟ್ಟನ್ನು ಧರಿಸಬೇಕು. ಅದನ್ನೂ ದಾಟಿ ಮೇಲಕ್ಕೆ ಏರಿದಾಗ ಲಲಾಟ ಮತ್ತು ಮೂರ್ಧನ್ಯ ಪ್ರದೇಶಗಳಲ್ಲಿ  ಅರ್ಧಚಂದ್ರ , ತ್ರಿಕೋನ ಇತ್ಯಾದಿ ಆಕಾರಗಳಲ್ಲಿ ದರ್ಶನಗಳು ಆಗುತ್ತದೆ ಎಂಬುದು ಯೋಗಶಾಸ್ತ್ರಗಳು ಸಾರುವ ಮಾತು. ಅಂತಹ ಲಾಂಛನಗಳನ್ನು ಅಲ್ಲಲ್ಲಿ ಧರಿಸುವುದೂ ಈ ಕಾರಣದಿಂದಲೇ. 

ನಾವು ಧರಿಸುವ ಬೊಟ್ಟು ಸುಂದರವಾದ ವೃತ್ತಾಕಾರದಿಂದ ಒಳಗಿನ ದರ್ಶನಕ್ಕೆ ಹೊಂದಿರುವಂತೆ ಕೂಡಿರಬೇಕು. ಇದರ ಅಳತೆ ಜ್ಞಾನಿಗಳು ನಿರ್ದೇಶಿಸಿದ ಮಾನದಿಂದ ಕೂಡಿರಬೇಕು. ,ಬಿಂದುವಿನ ಪದಾರ್ಥಗಳು ಕುಂಕುಮ-ಕೇಸರಿ, ಶ್ರೀ ಗಂಧ, ಚಂದನ, ಗೋಪಿಚಂದನ ಇದ್ಯಾ ದಿ ಪದಾರ್ಥಗಳಿಂದ ರಚಿತವಾಗಿರಬೇಕು. ಇದರ ಹಿಂದೆ ಒಂದು ದ್ರವ್ಯ ಸಂಯೋಜನೆಯ ವಿಜ್ಞಾನವೂ ಇದೆ ಎಂಬುದನ್ನು ಗಮನಿಸಬೇಕು. ಹಾಗಾದಾಗ  ಇದರ ದರ್ಶನ ಕಲ್ಯಾಣಕಾರಿಯೂ-ಹಿತಕಾರಿಯೂ ಹೌದು. ಮತ್ತು ಒಳಬೆಳಗುವ  ಆತ್ಮಜ್ಯೋ ತಿಯ ವರ್ಣಕ್ಕೆ ಹಳದಿ, ಸುವರ್ಣ, ಕುಂಕುಮದ ವರ್ಣಗಳು ಹೋಲುವುದರಿಂದ  ಬಿಂದುವಿನ ವರ್ಣವೂ ಇದಕ್ಕೆ ತಕ್ಕಂತೇ ಇರಬೇಕಾಗುತ್ತದೆ. ನಮ್ಮ ಮನಸ್ಸಿಗೆ ಚಂದವೆಂದು ಕಾಣುವ ಯಾವ ಯಾವುದೋ ಬಣ್ಣಗಳ, ಆಕಾರಗಳ ಬೊಟ್ಟುಗಳನ್ನು ಧರಿಸುವುದು ಒಳಜೀವನದ ಪರಿಚಯವಿಲ್ಲದ ಆಚರಣೆಯಾಗಿ ಹಾನಿಕಾರಕವಾಗಬಹುದಾಗಿದೆ .

"ದೇಹವೇ ದೇವಾಲಯ" ಎಂಬ ಯೋಗಮರ್ಮವನ್ನು ಅರಿತು ತಂದ ಉತ್ಕೃಷ್ಟವಾದ ಆಚರಣೆ ಈ ಬೊಟ್ಟಿನ ಅಲಂಕಾರ. ದೇಹದರ್ಶನ ಒಳಗಿನ ದೇವದರ್ಶನಕ್ಕೆ ಸಹಕಾರಿಯಾಗುವಂತಿದ್ದರೆ ಅದೇ ಸಹಜವಾದ ಅಲಂಕಾರ. ಈ ಉತ್ತಮವಾದ ಕಲಾಪೂರ್ಣವಾದ ಸಂಪ್ರದಾಯವನ್ನು ಆಚರಿಸಿದರೆ ನಮಗೆ ಒಳ-ಹೊರ ಆರೊಗ್ಯ , ಮನಸ್ಸಿನ ನೆಮ್ಮದಿ,ಉಂಟಾಗಿ  ಪರಮಾತ್ಮ ಸಾಕ್ಷಾತ್ಕಾರಕ್ಕೆ ಸಾಧನವೂ ಆಗುತ್ತದೆ. ಅದಕ್ಕೆಂದೇ -. "ದೀಪಪ್ರಕಾಶಂ ಪರಮಾತ್ಮಾನಂ ಪಶ್ಯನ್ ಊರ್ಧ್ವ ಪುಂಡ್ರಮ್ ಧಾರಯೇತ್ ಯೋಗಿ ಲಲಾಟೇ"  ಎಂಬ ಮಾತು ಬಂದಿರುವುದು. ಋಷಿಗಳ ಸಮಗ್ರ ದೃಷ್ಟಿಯ ಈ ಅಲಂಕಾರವೂ ನಮ್ಮ ಇಹ-ಪರ ಜೀವನಗಳನ್ನು ಸಮೃದ್ಧಿಗೊಳಿಸಿಕೊಳ್ಳಲು ಸಹಕಾರಿಯಾಗಲಿ. ಆ ಪವಿತ್ರ ಭಾವದಿಂದ ನಾವೆಲ್ಲರೂ ಅವರ ಈ ಕೊಡುಗೆಯನ್ನು ಭಾವಿಸಿ ಆಚರಿಸುವ ಸದ್ಬುದ್ಧಿಯನ್ನು ಭಗವಂತ ನಮಗೆ ಕರುಣಿಸಲಿ ಎಂದು ಪ್ರಾರ್ಥಿಸೋಣ.!

ಸೂಚನೆ : 04/10/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ

ಅಷ್ಟಾಕ್ಷರೀ - 90 ಸ್ವದೇಶೋ ಭುವನತ್ರಯಂ (Astakshari 90)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಈ ನೆಲ ಮಾತ್ರವಲ್ಲ, ತ್ರಿಜಗವೂ ನಮ್ಮ ದೇಶವೇ

ಬ್ರಿಟಿಷರ ದಬ್ಬಾಳಿಕೆಯಿಂದ ಬೇಸತ್ತಿದ್ದ ಭಾರತವು ಸ್ವಾತಂತ್ರ್ಯಪೂರ್ವಕಾಲದಲ್ಲಿ ಎರಡು ಬಾರಿ ಸ್ವದೇಶಿ ಚಳುವಳಿಯನ್ನು ಕಂಡಿತು - ಎನ್ನುತ್ತಾರೆ ಇತಿಹಾಸಜ್ಞರು: ೧೮೫೦ರ ಆಸುಪಾಸಿನಲ್ಲಿ, ಹಾಗೂ ೧೯೦೫ರ ಆಸುಪಾಸಿನಲ್ಲಿ ಇವುಗಳಾರಂಭವಾಯಿತು. ಮೊದಲನೆಯದರಲ್ಲಿ ನೌರೋಜಿ-ಗೋಖಲೆ-ರಾನಡೆ-ಟಿಳಕ-ಪ್ರಭೃತಿಗಳ ಮುಂದಾಳುತ್ವವಿತ್ತು. ಎರಡನೆಯದರಲ್ಲಿ ಗಾಂಧೀಜಿಯವರದು.

ಭಾರತದ ಸಂಪತ್ತನ್ನು ವ್ಯವಸ್ಥಿತವಾಗಿ ಬ್ರಿಟಿಷರು ಕೊಳ್ಳೆಹೊಡೆಯುತ್ತಿದ್ದುದನ್ನು ದಾದಾಭಾಯಿ ನೌರೋಜಿ ಎಲ್ಲರ ಮುಂದೆ ತೆರೆದಿಟ್ಟರು. ಬಂಗಾಳವನ್ನೊಡೆದು ಮುಸ್ಲಿಮರಿಗೆ ಪೂರ್ವಬಂಗಾಳವನ್ನು ಬ್ರಿಟಿಷರಿತ್ತದ್ದು ಎರಡನೆಯದಕ್ಕೆ ನಾಂದಿಯಾಯಿತು. ಆಂಗ್ಲ-ವಸ್ತ್ರಗಳನ್ನು ಲಕ್ಷಾಧಿಕವಾಗಿ ಸುಡುತ್ತಾ ಖಾದಿಚಳುವಳಿಯಾರಂಭವಾಯಿತು. ವಿದೇಶೀಮಾಲುಗಳನ್ನು ಬಹಿಷ್ಕರಿಸಿ ಸ್ವದೇಶೋತ್ಪಾದನಗಳಿಗೇ ಪ್ರೋತ್ಸಾಹವೀಯಬೇಕೆಂಬ ತತ್ತ್ವವು ಆರ್ಥಿಕ-ಸ್ವಾತಂತ್ರ್ಯವೆಂಬ ತನ್ನ ಮೊದಲ ಹೆಜ್ಜೆಯನ್ನು ಕಂಡಿತು. ಸ್ವರಾಜ್ಯವೆಂಬುದು ತಮ್ಮ ಜನ್ಮಸಿದ್ಧ ಹಕ್ಕೆಂದು ಟಿಳಕರು ಘೋಷಿಸಿದರು. ಭಗತ್ ಸಿಂಗ್ ಮೊದಲಾದ ಧೀರರು ಬ್ರಿಟಿಷರು ತತ್ತರಿಸುವಂತೆ ಸಿಡಿದೆದ್ದರು. ಬ್ರಿಟಿಷರ ಉಚ್ಚಾಟನೆಯಾಯಿತು.

ಆದರೆ ಮತ್ತೆ ಮೋಹವಾವರಿಸಿತು, ನಮ್ಮ ಜನತೆಗೆ. ವಿದೇಶೀ-ವಸ್ತು-ವ್ಯಾಮೋಹ ಮರುಕಳಿಸಿತು. ಈಗಂತೂ ಪ್ರಧಾನಮಂತ್ರಿಗಳ ನೇತೃತ್ವದಲ್ಲಿ ಸ್ವದೇಶೀ ಆಂದೋಳನಕ್ಕೆ ನವರೂಪವೇ ಬಂದಿದೆ. ಸ್ವದೇಶೀ-ತಾಂತ್ರಿಕತೆಯೂ ರೂಪುಗೊಳ್ಳುತ್ತಿದೆ. ಸ್ವದೇಶೀ ಚಳುವಳಿಯ ಸ್ಮರಣೆ-ಪ್ರಸ್ತುತತೆಗಳು ಮನ್ ಕೀ ಬಾತ್ ಗಳಲ್ಲೂ ಪ್ರತಿಪಾದಿತವಾಗಿವೆ. ಈಚೆಗೆ ಅಮೇರಿಕಾಧ್ಯಕ್ಷರು ತಾಳಿದ ಕಟುನಿಲುವುಗಳಿಗೆ ಪ್ರತಿಯಾಗಿ, ಉತ್ಕಟವಾದ ಆತ್ಮನಿರ್ಭರತೆಗೆ ಕರೆನೀಡಲಾಗಿದೆಯಷ್ಟೆ.

ರಾಜಕೀಯ-ಸ್ವಾತಂತ್ರ್ಯವೊಂದು ಯಜ್ಞವೆಂದೂ ಸ್ವದೇಶೀ ಆಂದೋಳನವು ಯಜ್ಞ-ಕಲ್ಪವೆಂದೂ ಯೋಗಿ ಅರವಿಂದರು ನಿರೂಪಿಸಿದರು. ಹಾಗೆ ನೋಡಿದರೆ ರವೀಂದ್ರನಾಥಠಾಕೂರರೇ ಸ್ವದೇಶೀಚಳುವಳಿಯ ವಿಷಯವಾಗಿ ಲಘುವಾಗಿ ಮಾತನಾಡಿದವರು.

ಕೇವಲ ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕರೆ ಸಾಲದೆಂಬುದನ್ನು ಚಿಕ್ಕಂದಿನಲ್ಲೇ ಮನಗಂಡು, ಸಾಂಸ್ಕೃತಿಕವಾದ ನಮ್ಮತನವು ದೃಢವಾಗಬೇಕೆಂದು ಪ್ರತಿಪಾದಿಸಿ, ಆ ದಿಶೆಯಲ್ಲಿ ಶ್ರಮಿಸಿದವರೆಂದರೆ ರಾಷ್ಟ್ರೀಯ-ಸ್ವಯಂಸೇವಕ-ಸಂಘದ ಸಂಸ್ಥಾಪಕರಾದ ಡಾ. ಹೆಡಗೇವಾರರೇ ಸರಿ. ಇತ್ತ ಕಲೆಗೂ ಸ್ವದೇಶೀ-ಸಿದ್ಧಾಂತಕ್ಕೂ ಇರುವ ನಂಟನ್ನು ಡಾ. ಆನಂದಕುಮಾರಸ್ವಾಮಿಗಿಂತಲೂ ಮಿಗಿಲಾಗಿ ಪ್ರತಿಪಾದಿಸಿದವರುಂಟೆ?

ಬಹಳ ಮುಖ್ಯವಾಗಿ ಭಾರತವು ಈಚೆಗೆ ದಿವಾಳಿಯೆದ್ದಿರುವುದು ಬೌದ್ಧಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ - ಎಂಬುದನ್ನು ದಿಟ್ಟವಾಗಿ ಪ್ರತಿಪಾದಿಸಿದವರು, ಗುರೂಜಿ ಎಂದು ಪ್ರಸಿದ್ಧರಾದ ಗೋಳವಲಕರರೇ ಸರಿ.

ಹಾಗಾದರೆ ಸ್ವದೇಶವೆಂದರೇನೆಂಬುದರ ಬಗ್ಗೆ ಭಾರತೀಯ-ಚಿಂತನೆಯೇನಾದರೂ ಉಂಟೆ?

ಸಾಧಾರಣವಾಗಿ ಎಲ್ಲರಿಗೂ ತಾನು, ತನ್ನ ಕುಟುಂಬ, ತನ್ನ ಮನೆ, ತನ್ನ ಮನೆತನ - ಇವುಗಳು ದೊಡ್ಡದಾಗಿ ಕಾಣುತ್ತವೆ, ಸರಿಯೇ. ಇವಕ್ಕಿಂತಲೂ ಗ್ರಾಮ- ಜನಪದಗಳನ್ನು ದೊಡ್ಡದಾಗಿ ಕಾಣುವುದಿದೆ. ತನ್ನ ದೇಶವೆಂದರೆ ಭೂಪಟದಲ್ಲಿ ಗೆರೆಯೆಳೆದು ಇಲ್ಲಿಂದ ಇಲ್ಲಿಯವರೆಗೆ - ಎಂದು ಅವಧಿಗಳನ್ನು ಸೂಚಿಸುವ ಕ್ರಮವಿದೆ: ಕರಾರುವಾಕ್ಕಾಗಿ ಹೇಳಲು ಅಕ್ಷಾಂಶ-ರೇಖಾಂಶಗಳ ಉಲ್ಲೇಖವಾಗುತ್ತದೆ. ಸ್ವದೇಶದ ಭೂವಲಯವೆಂದು ಹೇಳುವಲ್ಲಿ ಕಲ್ಲು-ಮಣ್ಣು, ಬೆಟ್ಟ-ಗುಡ್ಡ, ನದಿ-ಝರಿಗಳಿಂದ ಗುರುತಿಸಲಾಗುವ ಸೀಮೆಯಾಗಿ ತೋರಿಸುವುದಿದೆ. 

ಆದರೆ ಇದನ್ನು ಮೀರಿ ಭೂಮಿಯೆಲ್ಲವೂ ಒಂದೇ ಕುಟುಂಬದಂತೆ - ಎಂದುಕೊಳ್ಳುವುದು ವಿಶಾಲಮನೋಭಾವವಲ್ಲವೇ? ಮನೋವೈಶಾಲ್ಯವೆಂದು ಕಣ್ಣುಮುಚ್ಚಿಕುಳಿತುಕೊಳ್ಳುವುದೂ ಸರಿಯಲ್ಲ: ನಾಡಿಗೋ, ಮನುಕುಲಕ್ಕೋ ಕಂಟಕಪ್ರಾಯರಾದವರ ಮೇಲೆ ಒಂದು ಕಣ್ಣಿಟ್ಟೇ ಇರಬೇಕಾಗುತ್ತದೆ.

ನಮ್ಮ ದೇಶದ ಜ್ಞಾನಿಗಳಂತೂ ಭೂಮಿಯನ್ನೇ ತಾಯಿಯನ್ನಾಗಿಯೂ, ಸ್ವರ್ಗವನ್ನೇ ತಂದೆಯನ್ನಾಗಿಯೂ ಕಂಡಿರುವರು. ಈ ತಾತ್ತ್ವಿಕನೋಟವನ್ನೇ ಸ್ಪಷ್ಟತರವಾಗಿ ಕಂಡುಕೊಂಡು ಪರಮಪುರುಷ-ಪರಾಪ್ರಕೃತಿಗಳನ್ನೇ ತಂದೆತಾಯಿಗಳನ್ನಾಗಿ ತೋರಿಸುವುದಿದೆ: ಇದರ ಅಭಿವ್ಯಕ್ತಿಯಾಗಿಯೇ, ಪಾರ್ವತೀ-ಮಹೇಶ್ವರರನ್ನೇ ತಾಯಿ-ತಂದೆಗಳೆಂದೂ ಶಿವಭಕ್ತರನ್ನೇ ಬಂಧುಗಳೆಂದೂ ಹೇಳಿ, ಸ್ವದೇಶವೆಂದರೆ ಮೂರೂ ಲೋಕಗಳು (ಸ್ವದೇಶೋ ಭುವನತ್ರಯಂ) – ಎಂದಿದೆ , ಅನ್ನಪೂರ್ಣಾಷ್ಟಕದ ಕೊನೆಯಲ್ಲಿ . ಹೀಗೆಯೇ ಕಮಲಾ-ಜನಾರ್ದನರನ್ನೂ ವಿಷ್ಣುಭಕ್ತರನ್ನೂ ಮಾತಾ-ಪಿತೃಗಳೆಂದೂ ಬಂಧುಗಳೆಂದೂ ಹೇಳುವುದಿದೆ.

ಬಹುಪ್ರಾಚೀನವಾದ ವಿಷ್ಣುಪುರಾಣದಲ್ಲಿ ಭಾರತದೇಶವನ್ನು ಸ್ವರ್ಗ-ಅಪವರ್ಗಗಳ ಸಾಧನೆಗೆ ಎಡೆಯಾದುದೆಂದೇ ಸ್ತುತಿಸಿದೆ (ಅಪವರ್ಗವೆಂದರೆ ಮೋಕ್ಷ).

ನಮ್ಮ ದೃಷ್ಟಿಯು ಭೌತಿಕಕ್ಕೆ ಸೀಮಿತವಾದಾಗ ದೇಶವೆಂಬುದು ಕಲ್ಲು-ಮಣ್ಣುಗಳ ಸೀಮೆಯಾಗುತ್ತದೆ. ಆದರೆ ಶ್ರೀರಂಗಮಹಾಗುರುಗಳು ಹೇಳಿರುವಂತೆ, ನಮ್ಮ ನೋಟವು ಆಧಿಭೌತಿಕದೊಂದಿಗೆ ಅದನ್ನೂ ಮೀರಿದ ಆಧಿದೈವಿಕ-ಆಧ್ಯಾತ್ಮಿಕಕ್ಷೇತ್ರಗಳ ನೋಟಗಳನ್ನೂ ಒಳಗೊಳ್ಳುವುದಾಗಿರಬೇಕು.

ಬೇರೆ ದೇಶದವರ ದೃಷ್ಟಿಯು ಭೌತಿಕಕ್ಕೆ ಸೀಮಿತವೆಂದರೆ ನಮ್ಮದೂ ಹಾಗೆಯೇ ಇರಬೇಕೆಂದೇ? ಋಷಿದೃಷ್ಟಿಯು ಪರಿಮಿತವಲ್ಲ, ತ್ರಿಕ್ಷೇತ್ರ-ಸಾಮರಸ್ಯವನ್ನು ಕಂಡುಕೊಳ್ಳುವಂತಹುದು.

ಸ್ವದೇಶವೆನ್ನುವಾಗ ಸ್ವದೇಶದ ಹೆಸರನ್ನೂ ಒಮ್ಮೆ ಜ್ಞಾಪಿಸಿಕೊಳ್ಳಬೇಕಷ್ಟೆ. ಭಾ-ರತವೆನ್ನುವಾಗ ಭಾ ಎಂದರೆ ಬೆಳಕು, ಜ್ಞಾನ: ಎಲ್ಲ ಬೆಳಕುಗಳಿಗೂ ಮೂಲವಾದ ಪರಮಾತ್ಮಪ್ರಕಾಶ, ಅರ್ಥಾತ್ ಪರಂಜ್ಯೋತಿ. ಭಾರತದ ಸಾಂಸ್ಕೃತಿಕ-ರಾಜಧಾನಿಯಾಗಿದ್ದು ವಿದ್ಯೆಗೆ ಹೆಸರಾಗಿದ್ದ 'ಕಾಶಿ'ಯೆಂಬುದರ ಅರ್ಥವೂ ಅದೇ ಆತ್ಮಜ್ಯೋತಿಯೇ ತಾನೆ? ಹೀಗಾಗಿ, ಶ್ರೀರಂಗಮಹಾಗುರುಗಳು ಹೇಳುವಂತೆ, "ನಮ್ಮ ಜೀವನದ ನೆಲೆಯು ಪರಮವ್ಯೋಮವೇ ಆಗಿದೆ".

ಸ್ವದೇಶವೆಂಬುದನ್ನು ಭೌತಿಕಕ್ಕೆ (ಸೀ)ಮಿತಗೊಳಿಸದೆ, ಮಹಾಮೇಧಾವಿಗಳಾದ ಋಷಿಗಳು ಕಂಡುಕೊಂಡಿದ್ದ ತ್ರಿಕ್ಷೇತ್ರಗಳಿಗೂ ಅನ್ವಯಮಾಡಿಕೊಂಡರಲ್ಲವೆ, ಭಾ-ರತರಾದವರ ಜೀವಿತದ ಸಾರ್ಥಕ್ಯ?

ಸೂಚನೆ: 03/10//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

Thursday, October 2, 2025

ನವರಾತ್ರ - 10 (Navaratra - 10)

ಲೇಖಕರು : ವಿದ್ವಾನ್ ಅನಂತ ಬಿ.ಜಿ.

ಪ್ರತಿಕ್ರಿಯಿಸಿರಿ (lekhana@ayvm.in)



ದುರ್ಗಾಷ್ಟಮಿಯ ನಂತರ ಇಂದು ಮಹಾನವಮಿ. ಇಂದು 'ಜಯಂತೀ ಮಂಗಲಂ' ಎಂಬ ಮಂತ್ರದಿಂದ ಅಥವಾ 'ನಮೋ ದೇವ್ಯೈ ಮಹಾದೇವ್ಯೈ' ಎಂಬ ಶ್ಲೋಕದಿಂದ ಅಥವಾ ದುರ್ಗಾ ಸಪ್ತಶತಿಯ ಶ್ಲೋಕಗಳಿಂದ ಹೋಮವನ್ನು ಮಾಡಬೇಕು. ಈ ಹೋಮವನ್ನು ತುಪ್ಪ ಬೆರೆಸಿದ ಮತ್ತು ಬಿಳಿಎಳ್ಳು ಮಿಶ್ರವಾದ ಪಾಯಸದಿಂದ ಅಥವಾ ಬರಿಯ ಬಿಳಿಯ ಎಳ್ಳುಗಳಿಂದ ದೂರ್ವೆ ಸಾಸಿವೆ ಅರಳು ಅಡಿಕೆ ಜವೆ ಬಿಲ್ವಪತ್ರೆ ಕೆಂಪುಚಂದನವೃಕ್ಷದ ಚೂರು ಇತ್ಯಾದಿಗಳಿಂದ ಮಿಶ್ರಿತವಾದ ಪಾಯಸದಿಂದ ಮಾಡಬೇಕು.

        ಮಹಾನವಮಿಯ ಆರಾಧ್ಯ ದೇವಿ, ಶುಂಭಹಾದುರ್ಗೆ.  ಅವಳ ಸ್ವರೂಪವು ಅತ್ಯದ್ಭುತವಾದುದು.


ತ್ರಿನೇತ್ರಾಂ ಚಂದ್ರಚೂಡಾಂ ಚ ಮುಕುಟೇನೋಪಶೋಭಿತಾಮ್

ಸೂರ್ಯಕೋಟಿ ಪ್ರತೀಕಾಶಾಂ

ಶುಂಭಾಸುರವಿಮರ್ದಿನೀಮ್/

ಸಿಂಹಾರೂಢಾಂ ಮಹಾದುರ್ಗಾಂ

ತ್ರಿದಶೈರಪಿ ಪೂಜಿತಾಮ್

ನವಮ್ಯಾಂ ಪೂಜಯೇದ್ದೇವೀಂ

ಅಭೀಷ್ಟಫಲದಾಯಿನೀಮ್//


ಇವಳು ಮಹಾಸಿಂಹದ ಮೇಲೆ ಸ್ಥಿತಳಾಗಿರುವ ಮಹಾದೇವಿ. ಶಿವನ ಅರ್ಧಾಂಗಿನಿಯಾದ ಇವಳು ಪರಶಿವನಂತೆಯೇ ಹಣೆಯಲ್ಲಿ ಮೂರನೆಯ ಕಣ್ಣುಳ್ಳವಳು, ಶಿವನಂತೆಯೇ ಶಿರಸ್ಸಿನಲ್ಲಿ ಚಂದ್ರಕಲೆಯಿಂದ ವಿಭೂಷಿತಳಾದವಳು. ಸ್ವತಃ ಕೋಟಿ ಸೂರ್ಯರ ಕಾಂತಿಯಿಂದ ಕೂಡಿದವಳಾಗಿ ಶುಂಭಾಸುರನನ್ನು ಮರ್ದನಮಾಡಿ ದೇವತೆಗಳಿಂದಲೂ ಪೂಜಿತಳಾದ ಮಹಾದೇವಿ. ಮೇಲಾಗಿ ಭಕ್ತಿಯಿಂದ ಪೂಜಿಸಿದವರಿಗೆ ಬೇಕಾದ ಇಷ್ಟಾರ್ಥಗಳನ್ನು ಕೊಡುವವಳು.


        ಇಂದು ಆಯುಧ ಪೂಜೆಯೂ ಹೌದು. ನಮ್ಮ ನಿತ್ಯಜೀವನಕ್ಕೆ ಸಹಕಾರ ಕೊಟ್ಟು ರಕ್ಷಣೆ ಮಾಡುತ್ತಿರುವ ಎಲ್ಲ ಪದಾರ್ಥಗಳೂ ಆಯುಧಗಳೇ. ಅವುಗಳನ್ನು ದುರ್ಗಿಯ ರೂಪದಲ್ಲಿ, ಮಹಾಲಕ್ಷ್ಮಿಯ ರೂಪದಲ್ಲಿ ಭಾವಿಸಿ ಪೂಜಿಸುವುದು ಸಂಪ್ರದಾಯ. ಆಯುಧಗಳನ್ನು ಗಂಧ ಪುಷ್ಪ ಧೂಪ ದೀಪ ನೈವೇದ್ಯಗಳಿಂದ ಪೂಜಿಸಬೇಕು. ಯಾರು ಮಾಂಸಾಹಾರವನ್ನು ಬಳಸುತ್ತಾರೋ ಅಂಥವರು ಆಯುಧಗಳಿಗೆ ಬಲಿಯನ್ನು ಕೊಡುವ ಸಂಪ್ರದಾಯವಿದೆ. ಉಳಿದವರು ಬೂದುಗುಂಬಳಕಾಯಿ, ನಿಂಬೆಹಣ್ಣು, ಉದ್ದು ಇತ್ಯಾದಿಗಳಿಂದ ಕೂಡಿದ ಅನ್ನ, ಹಿಟ್ಟಿನಿಂದ ಮಾಡಿದ ಪಶು ಇತ್ಯಾದಿಗಳಿಂದಲೇ ಬಲಿಯನ್ನು ಕೊಡಬೇಕು. ಇಂದಿಗೆ ಒಂಬತ್ತು ದಿವಸಗಳ ನವದುರ್ಗೆಯರ ಪೂಜೆ ಮಂಗಳವಾಗುತ್ತದೆ. ನಾಳೆ ವಿಜೃಂಭಣೆಯ ವಿಜಯದಶಮಿಯನ್ನು ಆಚರಿಸಿ, ಆನಂದಿಸೋಣ !.

ಕೃಷ್ಣಾರ್ಪಣಮಸ್ತು

ಸೂಚನೆ: 1/10//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ. 


ನವರಾತ್ರ - 9 (Navaratra - 9)

ಲೇಖಕರು : ವಿದ್ವಾನ್ ಅನಂತ ಬಿ.ಜಿ.

ಪ್ರತಿಕ್ರಿಯಿಸಿರಿ (lekhana@ayvm.in)


ಯಾರನ್ನು ದಾಟಿ ಹೋಗುವುದು ಸಾಧ್ಯವಿಲ್ಲವೋ ಅವಳು ದುರ್ಗೆ.  ಅವಳು ಸಂಪ್ರೀತಳಾಗಿ ಸಮ್ಮತಿಸಿದರೆ ಮಾತ್ರ ಅದನ್ನು ದಾಟಲು ಸಾಧ್ಯ. ಯಾವುದನ್ನು? ಎಂದರೆ ಒಳಗಿನ ಮತ್ತು ಹೊರಗಿನ ದುರ್ಗಗಳನ್ನು. ಹೊರ ಜಗತ್ತಿನ ಶತ್ರುಗಳ ಕೋಟೆ ಕೊತ್ತಲಗಳನ್ನು ದಾಟಿ ವಿಜಯ ಸಾಧಿಸಲು ರಣಚಂಡಿಯ ಸಹಕಾರವು ಹೇಗೆ ಅಗತ್ಯವೋ ಅಂತೆಯೇ ಸಾಧನೆಯ ಒಳ ಪ್ರಪಂಚದಲ್ಲಿ ಎದುರಾಗುವ ದುರ್ಗ ರೂಪವಾದ ಅಡೆತಡೆಗಳನ್ನು ಸುಖವಾಗಿ ದಾಟಲು ದುರ್ಗಾ ಪರಮೇಶ್ವರಿಯ ಪ್ರಸನ್ನತೆಯು ಅಷ್ಟೇ ಅನಿವಾರ್ಯ. ದುರ್ಗೆಯನ್ನು ನಂಬಿದವರಿಗೆ ದುರ್ಗತಿಯಿಲ್ಲ. ಆದ್ದರಿಂದಲೇ ದುರ್ಗಾ- ದುರ್ಗತಿ ನಾಶಿನೀ ಎನ್ನುತ್ತಾರೆ ಜ್ಞಾನಿಗಳು. 

ಇಂದು ದುರ್ಗಾಷ್ಟಮೀ.


 ದುರ್ಗಾಷ್ಟಮಿಯ ಆರಾಧ್ಯದೇವತೆ  ನಿಶುಂಭಹಾ ದುರ್ಗೆ. ಅವಳ ಸ್ವರೂಪವನ್ನು ವಿಸ್ತಾರವಾಗಿ ವರ್ಣಿಸಲಾಗಿದೆ.


ಶ್ವೇತವಸ್ತ್ರಾದ್ಯಲಂಕಾರೈಃ ಭೂಷಿತಾಂ ಚತುರ್ಭುಜಾಮ್

ತ್ರಿಶೂಲಂ ಡಮರುಂ ಚೈವ

ರಥಾಂಗಂ ಕುಲಿಶಂ ತಥಾ

ಕುಠಾರಂ ಶಂಖಮಭಯಂ

ಪಾಶಶಕ್ತಿಂ ಚ ಯಷ್ಟಿಕಾಂ

ಖೇಟಂ ಶರಾಸನಂ ಚಕ್ರಂ

ಕಮಂಡಲುಧೃತಾಂ ಶುಭಾಮ್

ಏವಂ ಸ್ವರೂಪಸಂಯುಕ್ತಾಂ

ಅಷ್ಟಮ್ಯಾಂ ಪೂಜಯೇನ್ನೃಪ//


ಬಿಳಿಯ ವಸ್ತ್ರವನ್ನೂ ಆಭರಣಗಳನ್ನೂ ಧರಿಸಿ ಕೈಗಳಲ್ಲಿ ತ್ರಿಶೂಲ ಡಮರು ಚಕ್ರ ವಜ್ರ ಕೊಡಲಿ ಶಂಖ ಪಾಶ ಶಕ್ತಿ ಖಡ್ಗ ಬಿಲ್ಲು ಬಾಣ ಕಮಂಡಲು ಇತ್ಯಾದಿಗಳನ್ನು ಹಿಡಿದು ದುಷ್ಟರಿಗೆ ಭಯವನ್ನೂ ಸಜ್ಜನರಿಗೆ ಅಭಯವನ್ನೂ ಉಂಟುಮಾಡುವ ಪರಮ ಮಂಗಳಮೂರ್ತಿ.


       ‌ ಹೇಳಿ ಕೇಳಿ ದುರ್ಗೆಯು ಯುದ್ಧದ ಅಭಿಮಾನಿ ದೇವತೆ. ಶುಂಭ ನಿಶುಂಭರಂಥಹಾ ಮಹಾಬಲಿಷ್ಟರಾದ ಅಸುರರನ್ನು ರಣಭೂಮಿಯಲ್ಲಿ ಕಿರುಚಿಕೊಳ್ಳುವಂತೆ ಮಾಡಿದವಳು. ರಜಸ್ಸು ತಮಸ್ಸುಗಳೇ ತುಂಬಿಕೊಂಡಿರುವ ಮಹಾದುಷ್ಟರಾದ ಅಸುರರನ್ನು ಶಿಕ್ಷಿಸಲು ಅದೇ ರಜಸ್ಸನ್ನೇ ಆಶ್ರಯಿಸಿಕೊಂಡು ತನ್ನ ಅಷ್ಟ ಭುಜಗಳಲ್ಲಿ ವಿಧವಿಧವಾದ ಆಯುಧಗಳನ್ನು ಧರಿಸಿಕೊಂಡು ಸದಾ ಯುದ್ಧ ಸನ್ನದ್ಧಳಾದವಳು. ಅವಳ ಸ್ವರೂಪವು ಹೀಗೆ ತಾನೇ ಇರಬೇಕು.


      ಅಂತಹ ಮಹಾತಾಯಿಯನ್ನು ಜೀವನದ ಒಳ ಹೊರಗಿನ ಕಷ್ಟಗಳ ನಿವಾರಣೆಗಾಗಿ, ಸರ್ವ ಸಂಪನ್ನತೆಗಾಗಿ ಮತ್ತು ಮನಸ್ಸಿನ ಆನಂದಕ್ಕಾಗಿ ಆರಾಧಿಸೋಣ.


ಸೂಚನೆ: 30/9//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ

ನವರಾತ್ರ - 8 (Navaratra - 8)

ಲೇಖಕರು : ವಿದ್ವಾನ್ ಅನಂತ ಬಿ.ಜಿ.

ಪ್ರತಿಕ್ರಿಯಿಸಿರಿ (lekhana@ayvm.in)


ಮೊದಲ ಮೂರು ರಾತ್ರಿಗಳಲ್ಲಿ ಲಕ್ಷ್ಮಿಯ ಪೂಜೆಯನ್ನು ಅನಂತರದ ಮೂರು ರಾತ್ರಿಗಳಲ್ಲಿ ಸರಸ್ವತಿಯ ಪೂಜೆಯನ್ನು ನಿರ್ವಹಿಸಿ ಇಂದಿನಿಂದ ಪ್ರಾರಂಭಿಸಿ ಮೂರು ದಿನಗಳ ಪರ್ಯಂತ ದುರ್ಗಾ ಮಹಾಶಕ್ತಿಯನ್ನು ಪೂಜಿಸಬೇಕು. ಈ 9 ದಿವಸಗಳ ಪರ್ಯಂತವೂ ಚಂಡೀ ಸಪ್ತಶತಿಪಾಠ, ನಾರಾಯಣಹೃದಯ ಪಾಠ, ಲಕ್ಷ್ಮಿ ಹೃದಯಪಾಠ ಇತ್ಯಾದಿಗಳನ್ನು ಮಾಡುವುದಾಗಿ ಸಂಕಲ್ಪಿಸಿ ಪಾರಾಯಣವನ್ನು ಮಾಡಬೇಕು. ಪಾರಾಯಣದ ನಿಯಮಗಳೆಂದರೆ, ಮಧ್ಯದಲ್ಲಿ ಎದ್ದು ಹೋಗಬಾರದು, ಪಾರಾಯಣವನ್ನು ನಿಲ್ಲಿಸಬಾರದು, ಅರ್ಥವನ್ನು ತಿಳಿದು ಸ್ಪಷ್ಟವಾದ ಉಚ್ಚಾರಣೆ, ರಸ-ಭಾವ-ಸ್ವರಸಹಿತವಾಗಿ ಪಾರಾಯಣವನ್ನು ಮಾಡಬೇಕು. ಹಾಗಾಗಿ ಈ ಮಂತ್ರಗಳ ದೀಕ್ಷೆಯನ್ನು ಪಡೆದು ಅಭ್ಯಾಸ ಮಾಡಿದವರಿಂದ ಇವುಗಳನ್ನು ಮಾಡಿಸುವುದು ಉತ್ತಮ. ಹಾಗೆ ಪಾರಾಯಣವು ನಡೆಯುತ್ತಿರುವಾಗ ಅತ್ಯಂತ ಶ್ರದ್ಧೆಯಿಂದ ಅದನ್ನು ಶ್ರವಣ ಮಾಡಬೇಕು..


ಕುಮಾರೀ ಪೂಜೆ

ಜಗನ್ಮಾತೆಯನ್ನು ಪುಟ್ಟ ಮಕ್ಕಳಲ್ಲಿ ಕಾಣುವ ಸಂಪ್ರದಾಯ ನಮ್ಮದು. ಎರಡನೇ ವರ್ಷದಿಂದ ಆರಂಭಿಸಿ ಹತ್ತು ವಯಸ್ಸಿನವರೆಗಿನ ಹೆಣ್ಣು ಮಕ್ಕಳನ್ನು 'ಕುಮಾರೀ' ಎಂದು ಕರೆಯುತ್ತಾರೆ. ಅವರನ್ನು ಜಗನ್ಮಾತೆಯ ಸ್ಥಾನದಲ್ಲಿ ಕುಳ್ಳಿರಿಸಿ ಅವರಲ್ಲಿ ಕ್ರಮವಾಗಿ ಕುಮಾರೀ, ತ್ರಿಮೂರ್ತಿ, ಕಲ್ಯಾಣೀ, ರೋಹಿಣೀ, ಕಾಲೀ, ಚಂಡಿಕಾ, ಶಾಂಭವೀ, ದುರ್ಗಾ, ಭದ್ರಾ ಎಂಬ ಒಂಭತ್ತು ದೇವಿಯರನ್ನು ಸಂಕಲ್ಪಿಸಿ ಅವಾಹಿಸಬೇಕು. ದುರ್ಗಾಪರಮೇಶ್ವರಿಯನ್ನು ಅವರಲ್ಲಿ ಭಾವಿಸಿ ಪೂಜಿಸಿ ಅವರ ಆಶೀರ್ವಾದವನ್ನು ಪಡೆಯಬೇಕು.

         ಏಳನೆಯ ದಿವಸದ ದೇವತೆ- ರಕ್ತಬೀಜಹಾ ದುರ್ಗೆ ಎಂಬುದಾಗಿ. ಅವಳ ಸ್ವರೂಪವು ಇಂತಿದೆ-


ರಕ್ತ ವರ್ಣಾದ್ಯಲಂಕಾರಾಂ

 ದ್ವಿಭುಜಾಂಬುಜ ಧಾರಿಣೀಮ್/

ಸಪ್ತಮ್ಯಾಂ ಪೂಜೆಯೇದ್ದೇವೀಂ

 ರಥಾರೂಢಾಂ ಪ್ರಯತ್ನತಃ//


        ಈ ದೇವಿಯು ಎರಡು ಭುಜಗಳುಳ್ಳವಳು. ಎರಡು ಭುಜಗಳಲ್ಲಿ ಎರಡು ಕಮಲಗಳನ್ನು ಧರಿಸಿರುವವಳು. ರಥದಲ್ಲಿ ಕುಳಿತವಳಾಗಿ ಕೆಂಪು ಮೊದಲಾದ ವರ್ಣಗಳಿಂದ ಕೂಡಿದ ಅಲಂಕಾರ ಸಾಮಗ್ರಿಗಳಿಂದ ಕಂಗೊಳಿಸುತ್ತಿರುವವಳು ಎಂಬುದು ವಿಶೇಷ. ನಾಳೆಯ ದಿವಸ ದುರ್ಗಾಷ್ಟಮೀ ಮಹಾ ಪರ್ವದಿವಸ. ಅದನ್ನು ಇದಿರು ನೋಡುತ್ತಾ ಮತ್ತೊಮ್ಮೆ ಜಗದಂಬೆಗೆ ನಮಸ್ಕಾರಗಳನ್ನು ಸಲ್ಲಿಸೋಣ.

ಸೂಚನೆ: 29/9//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.