Showing posts with label author_yogashreehk. Show all posts
Showing posts with label author_yogashreehk. Show all posts

Wednesday, November 25, 2020

ಶರಣಾಗತಿ (Sharanagati)

ಲೇಖಕಿ: ಯೋಗಶ್ರೀ. ಹೆಚ್.ಕೆ
(ಪ್ರತಿಕ್ರಿಯಿಸಿರಿ lekhana@ayvm.in)


ಶ್ರೀಮದ್ವಾಲ್ಮೀಕಿ ರಾಮಾಯಣದಲ್ಲಿನ ವಿಭೀಷಣ ಶರಣಾಗತಿಯ ಸಂದರ್ಭ. ರಾವಣನ ವರ್ತನೆಯಿಂದ ಬೇಸರಗೊಂಡ ವಿಭೀಷಣನು ರಾಮನಲ್ಲಿಗೆ ಶರಣಾರ್ಥಿಯಾಗಿ ಬಂದನು. ಅವನ ಆಗಮನವನ್ನು ಗಮನಿಸಿದ ಸುಗ್ರೀವನು ಇತರ ವಾನರರೊಂದಿಗೆ ರಾಮನ ಬಳಿಯಲ್ಲಿ ಬಂದು ಈ ರೀತಿಯಾಗಿ ಹೇಳುತ್ತಾನೆ "ಲಂಕಾಧಿಪನಾದ ರಾವಣನ ತಮ್ಮನಾದ ವಿಭೀಷಣನು ಆಶ್ರಯ ಕೇಳಿ ಬಂದಿದ್ದಾನೆ. ಶತ್ರುಪಕ್ಷದವನೂ, ಮಾಯಾವಿದ್ಯೆ ಬಲ್ಲವನೂ, ಕಷ್ಟಕಾಲದಲ್ಲಿ ತನ್ನ ಸ್ವಂತ ಅಣ್ಣನನ್ನು ತ್ಯಜಿಸಿ ಬಂದವನಾದ್ದರಿಂದ ನಂಬಿಕೆಗೆ ಅನರ್ಹ". ಈ ಮಾತುಗಳನ್ನು ಕೇಳಿದ ರಾಮನು ಹನುಮಂತ ಹಾಗೂ ಇತರ ವಾನರರ ಅಭಿಪ್ರಾಯಗಳನ್ನು ಕೇಳಿದನು. ಶತ್ರುಪಕ್ಷದವನಾದ ವಿಭೀಷಣನನ್ನು ನಂಬುವುದು ಅನುಚಿತ ಎನ್ನುವ ಅಭಿಪ್ರಾಯವನ್ನು ಎಲ್ಲರೂ ವ್ಯಕ್ತಪಡಿಸುತ್ತಾರೆ. ಹನುಮಂತನು ಎಲ್ಲರ ವಾದವಿವಾದಗಳನ್ನು ಆಲಿಸಿದ ಬಳಿಕ ಈ ರೀತಿಯಾಗಿ ಹೇಳುತ್ತಾನೆ "ವಿಭೀಷಣನು ನಿಮ್ಮನ್ನು ರಾವಣನಿಗಿಂತ ಶ್ರೇಷ್ಠ, ಪರಾಕ್ರಮಿ ಹಾಗೂ ಅರ್ಹನೆಂದು ಅಭಯಾರ್ಥಿಯಾಗಿ ಬಂದಿದ್ದಾನೆ. ಅವನ ನಿರ್ಧಾರ ಸರಿಯಾಗಿದೆ". ಇದನ್ನು ಆಲಿಸಿದ ರಾಮನು    ಸಕೃದೇವ ಪ್ರಪನ್ನಾಯ ತವಾಸ್ಮೀತಿ ಚ ಯಾಚತೇ । ಅಭಯಂ ಸರ್ವಭೂತೇಭ್ಯೋ  ದದಾಮ್ಯೇತತ್ ವ್ರತಂ ಮಮ ॥

(ಒಮ್ಮೆ ನನ್ನಲ್ಲಿ ಶರಣಾಗಿ, ನಾನು ನಿನ್ನವನು ಎಂದು ಯಾಚಿಸುವ ಎಲ್ಲರಿಗೂ ಅಭಯವನ್ನು ಕೊಡುತ್ತೇನೆ; ಇದು ನನ್ನ ವ್ರತ) ಎಂದು ಹೇಳಿ  ವಿಭೀಷಣನಿಗೆ ಅಭಯವನ್ನು ನೀಡಿದನು.

ಮನುಷ್ಯರು ಭಗವಂತನಲ್ಲಿ ಮಹತ್ತಾದ ವಿಶ್ವಾಸವನ್ನು ಇಟ್ಟು ತಮ್ಮದೆಲ್ಲವನ್ನೂ ಪರಿಪೂರ್ಣವಾಗಿ ಅವನ ಪಾದಾರವಿಂದಗಳಲ್ಲಿ ಸಮರ್ಪಿಸಿ ಶರಣುಹೋದಾಗ ಅವನು ಅಭಯವನ್ನಿತ್ತು ಸನ್ಮಾರ್ಗದೆಡೆಗೆ ಕರೆದೊಯ್ಯುತ್ತಾನೆ. ಜ್ಞಾನಯೋಗ, ಭಕ್ತಿಯೋಗಗಳಂತೆ ಶರಣಾಗತಿಯೂ(ಭರನ್ಯಾಸ) ಮೋಕ್ಷೋಪಾಯಗಳಲ್ಲಿ ಒಂದು. ಭರನ್ಯಾಸವೆಂದರೆ ನಮ್ಮ ಭಾರವನ್ನೆಲ್ಲಾ ಭಗವಂತನಲ್ಲಿ ನ್ಯಾಸ(ಸಮರ್ಪಣೆ) ಮಾಡಿ ಅವನನ್ನು ಆಶ್ರಯಿಸುವುದು.

ರಾವಣನುನು ಸ್ವಂತ ಅಣ್ಣನಾದರೂ ಮಹಾ ಅಧರ್ಮಿಯಾದ್ದರಿಂದ ಆತನನ್ನೂ, ರಾಜ್ಯವನ್ನೂ ಬಿಟ್ಟು ಶತ್ರುಪಕ್ಷದವನಾದರೂ ಧರ್ಮಿಷ್ಠನಾದ ಶ್ರೀರಾಮನಲ್ಲಿ ಪರಿಪೂರ್ಣವಾದ ವಿಶ್ವಾಸವನ್ನಿಟ್ಟು ಅವನ ಪದತಲಗಳಲ್ಲಿ ವಿಭೀಷಣನು ಅಭಯವನ್ನು ಅರಸಿ ಬಂದನು. ಭಗವಂತನಾದ ಶ್ರೀರಾಮನು ಆತನನ್ನು ಉದ್ಧರಿಸಿದನು. ಶ್ರೀರಂಗಮಹಾಗುರುಗಳು ತಿಳಿಸಿರುವಂತೆ ಭಗವಂತನ ಪಾದಾವಲಂಬನವೇ ಭಕ್ತಿಯ ಮೂಲ. ಭಗವಂತನ ಪಾದವು ಸುವರ್ಲೋಕದಿಂದ ಭೂಲೋಕದವರೆಗೂ ವ್ಯಾಪಿಸಿದೆ. ಅಂತಹ ಪವಿತ್ರಪಾದವನ್ನು ನಂಬಿ ಶರಣಾದರೆ ನಮ್ಮ ಜೀವನವು ಸಾರ್ಥಕ ಹಾಗು ಪರಿಪೂರ್ಣ.

ಸೂಚನೆ: 25/11/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.

Wednesday, October 14, 2020

ಕೃಷ್ಣನು ಅಹಂಕಾರಿಯೇ? (Krishnanu Ahankariye?)

ಲೇಖಕರು: ಯೋಗಶ್ರೀ. ಹೆಚ್. ಕೆ
(ಪ್ರತಿಕ್ರಿಯಿಸಿರಿ lekhana@ayvm.in)


ಒಂದು ಊರಿನಲ್ಲಿ ಧನಿಕ ವ್ಯಾಪಾರಿಯೊಬ್ಬನಿದ್ದನು. ಅವನ ಆಪ್ತಸ್ನೇಹಿತನೊಬ್ಬನು ಅವನನ್ನು 'ತುಂಬಾ ಕಷ್ಟದಲ್ಲಿದ್ದೇನೆ, ಸ್ವಲ್ಪ ಧನಸಹಾಯ ಮಾಡು' ಎಂದು ಪ್ರಾರ್ಥಿಸಿದನು. ಆಗ ಧನಿಕನು 'ನಾನು ಹೇಗಪ್ಪಾ ಶ್ರೀಮಂತನಾದೇನು? ನಾನೂ ಬಡವನೇ, ದರಿದ್ರನೇ' ಎಂದು ಹೇಳಿ ಅವನನ್ನು ನಿರಾಶೆಗೊಳಿಸಿದನು. ಸ್ನೇಹಿತನು 'ನಿನ್ನ ಬಳಿಯಲ್ಲಿ ಹೇರಳವಾಗಿ ಧನ-ಕನಕವಿದ್ದರೂ ನೀನೇಕೆ ದರಿದ್ರನೆಂದುಕೊಳ್ಳುವೆ?' ಎಂಬುದಾಗಿ ಆಕ್ಷೇಪಿಸಿದನು. ಅದಕ್ಕೆ ಅವನು, ತಾನು ಶ್ರೀಮಂತನೆಂದು ಹೇಳಿಕೊಳ್ಳುವುದು ಅಹಂಕಾರವಾಗುವುದು. ಆದ್ದರಿಂದ ವಿನಯದಿಂದ ದರಿದ್ರನೆಂದು ಹೇಳಿಕೊಂಡುದುದಾಗಿ ತಿಳಿಸಿದನು. ಇಲ್ಲಿ ಧನಿಕನ ನಡೆಯು ವಿನಯವಲ್ಲ; ಮೂರ್ಖತನ. ಧನವುಳ್ಳವನು   ಕಷ್ಟಕಾಲದಲ್ಲಿರುವವರಿಗೆ ಸಹಾಯ ಮಾಡುವುದು ಮನುಷ್ಯನ ಕರ್ತವ್ಯ. ಮಾಡದಿದ್ದಲ್ಲಿ ಕರ್ತವ್ಯಭ್ರಷ್ಟತೆ. ಇಲ್ಲಿ ಅಹಂಕಾರದ ವಿಷಯವೇ ಬರುವುದಿಲ್ಲ.  

ಮೇಲಿನ ಕಥೆಯ ಮೂಲಕ ಶ್ರೀರಂಗಮಹಾಗುರುಗಳು ಒಬ್ಬ ಜಿಜ್ಞಾಸುವಿನ ಸಂಶಯನಿವಾರಣೆ ಮಾಡಿದರು. ಅವರ ಪ್ರಶ್ನೆ- ರಾಮನು ವಿನಯಶೀಲ, ಸತ್ಪುರುಷ. ತನ್ನ ಮಹಿಮೆಯನ್ನು ಎಂದಿಗೂ ಹೇಳಿಕೊಂಡವನಲ್ಲ. "ಆತ್ಮಾನಂ ಮಾನುಷಂ ಮನ್ಯೇ ರಾಮಂ ದಶರಥಾತ್ಮಜಂ" ಎಂದು ತಾನು ಮನುಷ್ಯಮಾತ್ರ, ದಶರಥಪುತ್ರ, ಧರ್ಮಪರಿಪಾಲಕ ಎನ್ನುತ್ತಿದ್ದನು. ಕೃಷ್ಣನಾದರೋ ಭಗವದ್ಗೀತೆಯಲ್ಲಿ ತಾನೇ ಪರಮಾತ್ಮ, ತನ್ನನ್ನು ಶರಣಾದವರು ಪಾಪಗಳಿಂದ ಮುಕ್ತಿಯನ್ನು ಪಡೆಯುತ್ತಾರೆ ಎನ್ನುತ್ತಾನೆ. ಕೃಷ್ಣನದು ಅನಾದರ್ಶವಾದ ಅಹಂಕಾರವಲ್ಲವೇ? ಎಂದು ತೋರಬಹುದು.

ಜ್ಞಾನಿಗಳು "ಅಹಂಕಾರವನ್ನು ಬಿಡಬೇಕು" ಎಂದಾಗ ಮನುಷ್ಯನು ತನ್ನ ದೇಹ-ಬುದ್ಧಿಗಳ "ಅಹಂ"ಅನ್ನು ತ್ಯಜಿಸಬೇಕೆಂದರ್ಥ. ತನ್ನದೇನೂ ಅಲ್ಲ, ಎಲ್ಲವೂ  ಹೃದಯಾಂತರ್ಗತವಾದ ಪರಮಾತ್ಮನದು ಎಂದು ತಿಳಿದಾಗ ಅದು ಅಹಂಕಾರವಾಗುವುದಿಲ್ಲ.

ಕೃಷ್ಣನಲ್ಲಿ ಬಹಳ ನಿಷ್ಠೆ-ನಂಬಿಕೆಗಳನ್ನು ಹೊಂದಿದ್ದ "ಕೃಪಣ"ನಾದ ಅರ್ಜುನನು ಅವನಲ್ಲಿ ಜ್ಞಾನ-ವಿವೇಕಗಳನ್ನು ಉಪದೇಶಮಾಡುವಂತೆ ಪ್ರಾರ್ಥಿಸಿದಾಗ, ಶ್ರೀಕೃಷ್ಣನು 'ನನಗೇನು ಜ್ಞಾನವಿದೆಯಪ್ಪಾ? ನಾನು ನಿನ್ನಂತೆಯೇ ಪಾಮರನು' ಎಂದಿದ್ದರೆ ಅವನೂ ಕಥೆಯಲ್ಲಿನ ಧನಿಕನಂತಾಗಿಬಿಡುತ್ತಿದ್ದ. ಸಕಾಲದಲ್ಲಿ ಸತ್ಯದ ಘೋಷಣೆ ಮಾಡುವುದು  ಅಹಂಕಾರವಾಗುವುದಿಲ್ಲ.

ಅವನು ಜ್ಞಾನನಿಧಿಯೇ ಆಗಿದ್ದನು. ಶರಣಾರ್ಥಿಗಳ ಪಾಪಕರ್ಮಗಳನ್ನು ತೊಳೆದುಹಾಕಿ ಅವರನ್ನು ಉದ್ಧಾರಮಾಡುವ ಸಂಕಲ್ಪದಿಂದ ಕೂಡಿದ್ದನು. ರಣರಂಗದಲ್ಲಿ  ಶೋಕ-ಮೋಹಗಳಿಂದ ಕರ್ತವ್ಯವಿಮುಖನಾದ ಅರ್ಜುನನಿಗೆ ಗೀತೆಯನ್ನು ಉಪದೇಶಿಸಿ ಕರ್ತವ್ಯಪಥದಲ್ಲಿ ನಡೆಸಿದ ಪರಮಾಚಾರ್ಯ. ಹೀಗಿದ್ದುದರಿಂದಲೇ ಇವನಿಂದ ಭಗವದ್ಗೀತೆಯಂತಹ ಮಹದ್ವಾಣಿಯು ಲೋಕಕ್ಕೆ ಅರ್ಪಿತವಾಯಿತು. ಈ ನೇರದಲ್ಲಿ ಚಿಂತನೆ ಮಾಡಿದಾಗ ಶ್ರೀಕೃಷ್ಣನು ಅಹಂಕಾರಿ ಎನ್ನುವ ತಪ್ಪು ಗ್ರಹಿಕೆ ನಮ್ಮನ್ನು ಬಿಟ್ಟು ಹೋಗುತ್ತದೆ.


ಸೂಚನೆ: 14/10/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ. 

Wednesday, September 16, 2020

ಮಾನವ ಜನ್ಮ ಬಲು ದೊಡ್ಡದು (Manava Janma Balu Doddadu)

ಲೇಖಕರು: ಯೋಗಶ್ರೀ. ಹೆಚ್. ಕೆ
(ಪ್ರತಿಕ್ರಿಯಿಸಿರಿ lekhana@ayvm.in)


ಒಮ್ಮೆ ದೇವರ್ಷಿ ನಾರದರು ಮಹಾವಿಷ್ಣುವಿನಲ್ಲಿ ನಾರಾಯಣಮಂತ್ರ-ಜಪದ  ಹಿರಿಮೆಯ ಬಗೆಗೆ ಪ್ರಶ್ನಿಸಿದರು. ಅದಕ್ಕೆ ಭಗವಂತನು ಒಂದು ಚಿಕ್ಕ ಹುಳುವನ್ನು ತೋರಿಸಿ  ಅದರ ಕಿವಿಯಲ್ಲಿ ಮಂತ್ರ-ಪಠಣ ಮಾಡುವಂತೆ ಹೇಳಿದನು. ಹಾಗೆ ಮಾಡಿದಾಗ ಆ ಹುಳು ತಕ್ಷಣವೇ ಮೃತಪಟ್ಟಿತು. ದುಃಖಿತರಾದ ನಾರದರು ಭಗವಂತನಿಗೆ ವಿಷಯವನ್ನು ತಿಳಿಸಿದರು. ಹೀಗೆ ಕ್ರಮಕ್ರಮವಾಗಿ ಒಂದು ಚಿಟ್ಟೆ, ಜಿಂಕೆ-ಮರಿ  ಹಾಗೂ ಒಂದು ನವಜಾತ-ಕರು ಇವುಗಳ  ಕಿವಿಯಲ್ಲಿ ಮಂತ್ರಪಠಣ ಮಾಡುವಂತೆ ಹೇಳಿದರು. ಹಿಂದಿನಂತೆ ಅವೂ ಮೃತವಾದವು. ಇದರಿಂದ ಬಹಳ ಖಿನ್ನರಾದ ನಾರದರು ವಿಷ್ಣುವಿನಲ್ಲಿ ತಿಳಿಸಿದರು. ಮಂದಸ್ಮಿತನಾದ ಭಗವಂತನು, ತನ್ನಲ್ಲಿ ಇಷ್ಟು ಬೇಗನೆ ನಂಬಿಕೆಯನ್ನು ಕಳೆದುಕೊಳ್ಳದೆ, ವಾರಣಾಸಿಯ ರಾಜನ ನವಜಾತ ಶಿಶುವಿನ ಕಿವಿಯಲ್ಲಿ ಕೊನೆಯ ಬಾರಿ ಮಂತ್ರೋಚ್ಚಾರವನ್ನು ಮಾಡುವಂತೆ ಹೇಳಿದನು. ಹಿಂಜರಿಕೆಯಿಂದಲೇ ಅವರು ಆ ಮಗುವಿನ ಕಿವಿಯಲ್ಲಿ ಮಂತ್ರವನ್ನು ಪಠಿಸಿದರು. ಆಶ್ಚರ್ಯವೆಂಬಂತೆ, ಆ ಮಗುವು ಕಣ್ತೆರೆದು ನೋಡಿ ನಾರದರಿಗೆ ನಮಿಸಿ "ನನ್ನ ಹಿಂದಿನ ಜನ್ಮಗಳಲ್ಲಿ ತಾವು ಕಿವಿಯಲ್ಲಿ ಮಂತ್ರಪಠಣವನ್ನು ಮಾಡಿದ್ದರ ಫಲವಾಗಿ ಹಂತ-ಹಂತವಾಗಿ ಉನ್ನತ ಜನ್ಮವನ್ನು ತಳೆದೆ. ಕೊನೆಯಲ್ಲಿ ಶ್ರೇಷ್ಠವಾದ ಮಾನವಜನ್ಮವನ್ನು ಹೊಂದಿರುವೆ. ಇದರಿಂದ  ಸಾಧನೆಯನ್ನು ಮಾಡಿ ಮೋಕ್ಷವನ್ನು ಪಡೆಯುವೆ"ನೆಂದಿತು.

ಮಾನವ ಜನ್ಮವೇಕೆ ಶ್ರೇಷ್ಠ? ಆಧುನಿಕರ ಪ್ರಕಾರ, ಮನುಷ್ಯ, ತನ್ನ ಮೇಧೆ, ಚಿಂತನೆಗಳಿಂದಾಗಿ ಇತರ ಪ್ರಾಣಿಗಳಿಗಿಂತಲೂ ಶ್ರೇಷ್ಠನೆನಿಸಿಕೊಳ್ಳುತ್ತಾನೆ. ಆದರೆ ನಮ್ಮ ಸನಾತನಮಹರ್ಷಿಗಳ ಪ್ರಕಾರ-ಅತ್ಯದ್ಭುತವಾದ ಈ ಶರೀರ-ರಚನೆಯಿಂದ ಮಾತ್ರವೇ ಯೋಗ-ಭೋಗಗಳೆರಡನ್ನು ಪಡೆಯಬಹುದಾದ್ದರಿಂದಲೇ ಶ್ರೇಷ್ಠತೆ. ಮಹಾಕವಿ ಕಾಳಿದಾಸನು ಹೇಳಿರುವಂತೆ("ಶರೀರಮಾದ್ಯಂಖಲು ಧರ್ಮ ಸಾಧನಮ್") ಧರ್ಮಮಯ ಜೀವನಕ್ಕೆ  ಶರೀರ ಅತ್ಯಾವಶ್ಯಕ. ಅದರ ಮೂಲಕವೇ ಪರಮಾತ್ಮದರ್ಶನ ಸಾಧ್ಯ. ಪುಣ್ಯಫಲವಾಗಿ ಸ್ವರ್ಗ ಪ್ರಾಪ್ತಿಯಾದರೂ, ಪುಣ್ಯಕ್ಷಯದ ನಂತರ ಮಾನವಜನ್ಮ ತಾಳಿ ತಪಸ್ಸು-ಸಾಧನೆಗಳ ಮೂಲಕವೇ ಮೋಕ್ಷವನ್ನು ಪಡೆಯಬೇಕು. "ಮಾನವ ಜನ್ಮ ಬಲು ದೊಡ್ಡದು" ಎನ್ನುವ ದಾಸವಾಣಿ ಸ್ಮರಣೀಯ. ಶರೀರ ನೌಕೆಯ ಸಹಾಯದಿಂದ ಜೀವನವೆಂಬ ಭವಸಾಗರವನ್ನು ದಾಟಬಹುದು. ಈ ದೇಹವನ್ನು ಬರೀ ದೇಹವಾಗಿ ಮಾತ್ರ ನೋಡದೇ ಒಳಗಿರುವ ದೇಹಿಯ(ದೇವನ) ಗೇಹವಾಗಿ(ಮನೆಯಾಗಿ), ದೇವಾಲಯವಾಗಿ ನೋಡಬೇಕೆಂಬ ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ.

ಸೂಚನೆ: 16/09/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.  



Wednesday, July 29, 2020

ಮೋಹವು ಧರ್ಮಕ್ಕೆ ತೆರೆಯಾಗಬಾರದು (Mohavu Dharmakke Tereyagabaradu)

ಲೇಖಕರು: ಯೋಗಶ್ರೀ. ಹೆಚ್. ಕೆ
(ಪ್ರತಿಕ್ರಿಯಿಸಿರಿ lekhana@ayvm.in)


ಇಕ್ಷ್ವಾಕುವಂಶದರಸನಾದ  ದಿಲೀಪನು ಮಹಾಪರಾಕ್ರಮ, ದಕ್ಷತೆಗಳಿಂದ ಆಳುತ್ತಾ, ಪ್ರಜೆಗಳನ್ನು ಸ್ವಂತಮಕ್ಕಳಂತೆ ನೋಡಿಕೊಳ್ಳುತ್ತಿದ್ದನು. ಇಷ್ಟಾದರೂ, ದಿಲೀಪ-ಸುದಕ್ಷಿಣೆಯರಿಗೆ ಸಂತಾನ ಭಾಗ್ಯವಿಲ್ಲವಾದ್ದರಿಂದ   ಚಿಂತೆ ಕಾಡುತ್ತಿತ್ತು. . ಕುಲಗುರುಗಳಾದ ಬ್ರಹ್ಮರ್ಷಿ-ವಸಿಷ್ಠರಲ್ಲಿ  ಸಮಸ್ಯೆಯನ್ನು ಬಿನ್ನೈಸಿಕೊಳ್ಳಲಾಗಿ, ಅವರು ದಿವ್ಯದೃಷ್ಟಿಯಿಂದ ರಾಜನ ಪೂರ್ವವೃತ್ತಾಂತವನ್ನು ತಿಳಿದು ಹೀಗೆಂದರು: "ಹಿಂದೊಮ್ಮೆ ದೇವಾಸುರಸಂಗ್ರಾಮದಲ್ಲಿ, ದೇವತೆಗಳಿಗೆ ಸಹಾಯಮಾಡಿ, ನಿನ್ನ ರಾಣಿಯನ್ನು ಸ್ಮರಿಸುತ್ತಾ ಹಿಂದಿರುಗುವಾಗ, ಕಲ್ಪವೃಕ್ಷದ ನೆರಳಿನಲ್ಲಿ ವಿಶ್ರಮಿಸುತ್ತಿದ್ದ ಕಾಮಧೇನುವನ್ನು ನಮಸ್ಕರಿಸದೆ ಬಂದುಬಿಟ್ಟೆ; ಕೋಪಗೊಂಡ ಕಾಮಧೇನುವು,  ಸಂತಾನ ಪ್ರಾಪ್ತಿಯಾಗದಿರುವಂತೆ ಶಪಿಸಿತು". ತಿಳಿಯದೆ ಮಾಡಿದ ತಪ್ಪಿಗೆ ಪರಿಹಾರವೇನೆಂದು ಕೇಳಲು,  ಕಾಮಧೇನುವಿನ ಮಗಳಾದ ನಂದಿನಿಯನ್ನು ಸ್ವಂತಮಗುವಿನ ಹಾಗೆ ಸೇವಿಸಬೇಕೆಂದರು. ದಂಪತಿಗಳು ಆನಂದದಿಂದ ಸಮ್ಮತಿಸಿ ಋಷ್ಯಾಶ್ರಮದಲ್ಲಿಯೇ ನಂದಿನಿಯ ಸೇವೆ ಮಾಡತೊಡಗಿದರು. ರಾಜನು ಗೋವನ್ನು ನಿತ್ಯವೂ ಮೇಯಲು ಕರೆದುಕೊಂಡು ಹೋಗುತ್ತಿದ್ದನು. ಹೀಗೆ ೨೧ ದಿನಗಳು ಕಳೆದವು. ಮರುದಿನ,ಗೋವು, ಕಾಡಿನಲ್ಲಿ ಮೇಯುತ್ತಿರಲು, ಸಿಂಹವೊಂದು ಹೊಂಚುಹಾಕುತ್ತಿತ್ತು. ಶಸ್ತ್ರವನ್ನೆತ್ತಿದ ದಿಲೀಪನು ಶಿವಕಿಂಕರನಾಗಿದ್ದ ಸಿಂಹದ ಮಾಯಾಪ್ರಭಾವದಿಂದ  ನಿಶ್ಚಲನಾದನು. ಕರ್ತವ್ಯಪರಾಯಣನಾದ ದಿಲೀಪನು ಹಸುವನ್ನು ಬಿಟ್ಟುಬಿಡುವಂತೆ ಸಿಂಹವನ್ನು ಪರಿಪರಿಯಾಗಿ ಬೇಡಿಕೊಂಡನು. ಆದರೆ ಸಿಂಹವು ಒಪ್ಪಲಿಲ್ಲ. ಆಗ ರಾಜನು, ಗೋವಿನ ಬದಲು ತನ್ನನ್ನೇ ಭಕ್ಷಿಸುವಂತೆ ಪ್ರಾರ್ಥಿಸಿದನು.  ಆಶ್ಚರ್ಯವೆಂದರೆ, ಅವನ ಮೇಲೆ ಪುಷ್ಪವೃಷ್ಟಿಯಾಯಿತು. ನಂದಿನಿಯು ರಾಜನ ಕರ್ತವ್ಯ ನಿಷ್ಠೆಯನ್ನು ಪರೀಕ್ಷಿಸಲು, ತಾನೇ ಹೀಗೆ ಮಾಡಿದುದಾಗಿ ತಿಳಿಸಿತು. ರಾಜನನ್ನು ಶಾಪವಿಮುಕ್ತನನ್ನಾಗಿಸಿ  ತನ್ನ ದಿವ್ಯಕ್ಷೀರವನ್ನು ಸ್ವೀಕರಿಸಿ ಸತ್-ಸಂತಾನವನ್ನು ಪಡೆಯುವಂತೆ ಆಶೀರ್ವದಿಸಿತು. 

ಈ ವೃತ್ತಾಂತವನ್ನು ಗಮನಿಸಿದಾಗ ಇಷ್ಟು ಸಣ್ಣ ತಪ್ಪಿಗೆ ಇಂತಹ ಶಿಕ್ಷೆಯೇ? ಎನ್ನಿಸಬಹುದು. ಧರ್ಮದ ನಡೆ ಸೂಕ್ಷ್ಮವಾದದ್ದು. ರಾಣಿಯಲ್ಲಿ  ಮೋಹಪರವಶನಾಗಿದ್ದ  ದಿಲೀಪನು ಅವಳನ್ನು ಶೀಘ್ರವಾಗಿ ಕಾಣಬೇಕೆಂಬ ತವಕದಲ್ಲಿ ಧರ್ಮಮೂರ್ತಿಯಾದ ಕಾಮಧೇನುವನ್ನು ನಿರ್ಲಕ್ಷಿಸಿದ್ದನು. ಸದ್ಧರ್ಮದ ನಡೆಯಿಂದ ಜಾರಿದ್ದರಿಂದಾಗಿ ಶಾಪಗ್ರಸ್ತನಾಗಿ  ಪ್ರಜೋತ್ಪತ್ತಿಯ ಧರ್ಮವನ್ನು ಕಳೆದುಕೊಂಡನು. ವಸಿಷ್ಠರ ಅನುಗ್ರಹ-ದೇವತಾಸಾನ್ನಿಧ್ಯದಿಂದ  ಕೂಡಿದ ಗೋಸೇವೆಯಿಂದ  ಪ್ರಾಯಶ್ಚಿತ್ತವಾಯಿತು. "ಯಥಾ ರಾಜಾ ತಥಾ ಪ್ರಜಾ"-ಪ್ರಜೆಗಳೂ ರಾಜನಂತೆಯೇ ಆಗಿಬಿಡುವರು. ರಾಜನು ಯಾವುದೇ ಕಾರ್ಯವನ್ನು ಮಾಡಿದರೂ, ಅದು ತನ್ನ ಪ್ರಜೆಗಳಿಗೆ ಆದರ್ಶವಾಗಿರಬೇಕು. "ಅರ್ಥ-ಕಾಮಗಳು ಧರ್ಮದ ಚೌಕಟ್ಟನ್ನು  ಮೀರಬಾರದು" ಎನ್ನುವ ಶ್ರೀರಂಗಮಹಾಗುರುಗಳ ಆಶಯ ಇಲ್ಲಿ ಸ್ಮರಣೀಯ.

ಸೂಚನೆ: 28/07/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.