ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಜರಾಸಂಧ-ವಧೆಯನ್ನು ಮಾಡುವಲ್ಲಿ ಕೃಷ್ಣನಿತ್ತ ಸಲಹೆ ಅಮೂಲ್ಯವಾದುದೆಂದೂ, ನೀತಿ-ಬಲ-ಕ್ರಿಯೆಗಳ ಸಂಗಮವೇ ಕಾರ್ಯ-ಸಾಧಕವೆಂದೂ ಯುಧಿಷ್ಠಿರನು ಮನಗಂಡನು. ಅರ್ಜುನನ ದಶ-ನಾಮಗಳಲ್ಲಿ ಕೃಷ್ಣನೆಂಬುದೂ ಒಂದಾದ್ದರಿಂದ, ಯುಧಿಷ್ಠಿರನ ಮಾತು ಹೀಗೆ ಸಾಗಿತು:
"ಈ ಇಬ್ಬರು ಕೃಷ್ಣರಿಗೆ, ಎಂದರೆ ಕೃಷ್ಣಾರ್ಜುನರಿಗೆ, ಅಜೇಯನಾದವನೇ ಇಲ್ಲ – ಅರ್ಥಾತ್, ಇವರಿಬ್ಬರಿಗೆ ಸೋಲಿಸಲಾಗದವನೇ ಇಲ್ಲ - ಎಂದೇ ನಾನು ಭಾವಿಸುತ್ತೇನೆ.
ಮತ್ತು ಈ ವೃಕೋದರ-ಭೀಮನಾದರೂ ಬಲಶಾಲಿಗಳಲ್ಲೇ ಶ್ರೇಷ್ಠನಾದವನು. ನಿಮ್ಮಿಬ್ಬರೊಂದಿಗೆ ಸೇರಿದ ಈ ಮಹಾಕೀರ್ತಿ-ಸಂಪನ್ನನಾದ ವೀರನು ಏನನ್ನು ತಾನೆ ಸಾಧಿಸಲಾರ?
ಸೈನ್ಯ-ಸ್ತೋಮವು ಉತ್ತಮ-ಕಾರ್ಯವನ್ನು ಸಾಧಿಸುವುದು ಯಾವಾಗ? ನೇತಾರನಿಂದ ಸರಿಯಾಗಿ ಸಂಚಾಲಿತವಾದಾಗ. ಬಲವೆಂಬುದು ತನ್ನಷ್ಟಕ್ಕೆ ಕುರುಡೆಂದೂ, ಜಡವೆಂದೂ ಹೇಳುವರು; ಎಂದೇ, ವಿಚಕ್ಷಣರೇ ಅದನ್ನು ಮುನ್ನಡೆಸಬೇಕು.
ಹೀಗೆ, ಕಾರ್ಯವು ಸಿದ್ಧಿಸಬೇಕೆಂದರೆ, ಪ್ರಜ್ಞೆ-ರಾಜ-ನೀತಿಗಳೆಂಬ ಬಲಗಳಿಂದ ಕೂಡಿರುವವನೂ, ಕ್ರಿಯೆಯ ಉಪಾಯವನ್ನು ಹೊಂದಿರುವವನೂ ಆದ ಶ್ರೀಕೃಷ್ಣನನ್ನೇ ಮುಂದಿಟ್ಟುಕೊಂಡು ಹೊರಡಬೇಕು.
ಯದುಶ್ರೇಷ್ಠನಾದ ಕೃಷ್ಣನೇ, ಕಾರ್ಯಸಿದ್ಧಿ-ಪರ್ಯಂತವೂ ಅರ್ಜುನನು ಕೃಷ್ಣನನ್ನು ಅನುಸರಿಸಲಿ, ಹಾಗೂ ಭೀಮನು ಅರ್ಜುನನನ್ನು ಅನುಸರಿಸಲಿ. ನಯ-ಜಯ-ಬಲ - ಇವುಗಳು ಸೇರಿ, ವಿಕ್ರಮದಲ್ಲಿ ತಮ್ಮ ಸಿದ್ಧಿಯನ್ನು ಹೊಂದುವುವು" ಎಂದು ಆತನು ತನ್ನ ಮಾತನ್ನು ಮುಗಿಸಿದನು.
ಯುಧಿಷ್ಠಿರನು ಹೀಗೆಂದು ಹೇಳಲಾಗಿ, ಮಹಾ-ತೇಜಸ್ವಿಗಳೆನಿಸಿದ ಕೃಷ್ಣ-ಅರ್ಜುನ-ಭೀಮಸೇನರು ಜರಾಸಂಧನ ರಾಜಧಾನಿಯತ್ತ ಸಾಗಿದರು. ವರ್ಚಸ್ವಿಗಳಾದ, ಎಂದರೆ ತೇಜಸ್ಸಂಪನ್ನರಾದ, ಸ್ನಾತಕ-ಬ್ರಾಹ್ಮಣರ ಪರಿಚ್ಛದವನ್ನು ,ಎಂದರೆ ವೇಷ-ಭೂಷಣಗಳನ್ನು, ಅವರು ಧರಿಸಿಕೊಂಡರು: ಈ ಮೂಲಕ ತಮ್ಮನ್ನೇ ಮರೆಮಾಚಿಕೊಂಡರು. ಆ ಸಂದರ್ಭದಲ್ಲಿ ಅವರ ಸ್ನೇಹಿತರು ತಮ್ಮ ಮನೋಹರವಾದ ಮಾತುಗಳಿಂದ ಅವರನ್ನು ಅಭಿನಂದಿಸಿದರು.
ಈ ಮೂವರೂ ಜರಾಸಂಧನ ವಿಷಯಕ್ಕೆ ರೋಷದಿಂದ ಕುದಿಯುತ್ತಿದ್ದರು. ಎಂದೇ ಸೂರ್ಯ-ಚಂದ್ರ-ಅಗ್ನಿಗಳಂತೆ ಅವರ ಶರೀರವು ಜ್ವಲಿಸುತ್ತಿತ್ತು. ಯುದ್ಧದಲ್ಲಿ ಎಂದೂ ಸೋಲನ್ನೇ ಕಂಡಿರದ, ಹಾಗೂ ಒಂದೇ ಕಾರ್ಯಕ್ಕಾಗಿಯೇ ಸಮುದ್ಯತರಾಗಿದ್ದ, ಹಾಗೂ ಭೀಮನನ್ನು ಮುಂದಿಟ್ಟುಕೊಂಡು ಹೊರಟಿದ್ದ, ಆ ಕೃಷ್ಣರಿಬ್ಬರನ್ನು ಹಾಗೆ ಕಂಡ ಯುಧಿಷ್ಠಿರನು, ಜರಾಸಂಧನು ಹತನಾದನೆಂದೇ ಭಾವಿಸಿದನು.
ಎಷ್ಟಾದರೂ ಅವರಿಬ್ಬರೂ ಎಂತಹವರು! ಧರ್ಮ-ಕಾಮ-ಅರ್ಥ ಇವುಗಳನ್ನು ಸಾಧಿಸುವ ಲೋಗರನ್ನು ತೊಡಗಿಸುವವರು! ಅವರು ನರ-ನಾರಾಯಣರೇ ಸರಿ!
ಕುರು ಪ್ರದೇಶದಿಂದ ಹೊರಟ ಅವರು, ದಾರಿಯಲ್ಲಿ ನಾನಾ-ಪ್ರದೇಶಗಳನ್ನು ಕಂಡರು. ಕುರು-ಜಾಂಗಲ ಪ್ರದೇಶ, ಅಲ್ಲಿ ರಮಣೀಯವಾದ ಪದ್ಮ-ಸರಸ್ಸು, ಮುಂದಕ್ಕೆ ಕಾಲಕೂಟ-ಪರ್ವತ, ಅದನ್ನೂ ದಾಟಿದ ಮೇಲೆ ಗಂಡಕಿ, ಮಹಾ-ಶೋಣ, ಸದಾ-ನೀರಾ ನದಿಗಳು, ಬಳಿಕ ಏಕಪರ್ವತಕ-ಪ್ರದೇಶದ ನದಿಗಳು - ಇವೆಲ್ಲವನ್ನೂ ಮೀರಿ ನಡೆದರು.
ಆಮೇಲೆ ರಮ್ಯವಾದ ಸರಯೂ-ನದಿ, ಪೂರ್ವಕೋಸಲ-ದೇಶ, ಬಳಿಕ ಮಿಥಿಲೆ. ಅಲ್ಲಿ ವಿಪುಲವಾದ ನದಿಗಳನ್ನು ಕಾಣುತ್ತಾ ಗಂಗೆ-ಶೋಣಭದ್ರಾ-ನದಿಗಳನ್ನು ದಾಟಿದರು. ಮುಂದಕ್ಕೆ ಪೂರ್ವಾಭಿಮುಖವಾಗಿ ಹೊರಟರು. ಕುಶ-ಚೀರವಸ್ತ್ರಗಳನ್ನು ಧರಿಸಿದ್ದ ಅವರು, ಮುಂದೆ ಮಾಗಧ-ಸೀಮೆಯನ್ನು ಸೇರಿದರು. ಅಲ್ಲಿ ಗೋ-ಧನದಿಂದ ತುಂಬಿತುಳುಕಿದ್ದುದೂ, ಜಲಸಮೃದ್ಧಿ-ಸಸ್ಯಸಮೃದ್ಧಿಗಳನ್ನುಳ್ಳದ್ದೂ ಆದ ಗೋರಥ-ಗಿರಿಯನ್ನು ತಲುಪಿ, ಅಲ್ಲಿ ಮಾಗಧ-ಪುರವನ್ನು ಕಂಡರು.
ಆಗ ವಾಸುದೇವನೇ ಮಾಗಧ-ದೇಶವನ್ನು ಪ್ರಶಂಸಿಸಿದನು: ಗೋಸಂಪತ್ತು, ನಿತ್ಯ-ಜಲಸಮೃದ್ಧಿಗಳನ್ನುಳ್ಳ ದೇಶವಿದಲ್ಲವೇ! ಈ ಶುಭ-ಮಾಗಧ-ನಿವೇಶಗಳು ಸೊಗಸಾದವು. ಇಲ್ಲಿನ ಜನಗಳಾದರೂ ವ್ಯಾಧಿಗಳಿಲ್ಲದಿರುವರು. ಮನೆಗಳು ಸೊಗಸಾಗಿವೆ. ಹೀಗಾಗಿ, ಈ ಮಾಗಧ-ದೇಶವೇ ಮನೋಹರವಾಗಿದೆ.
ವಿಪುಲ, ವರಾಹ, ವೃಷಭ, ಋಷಿಗಿರಿ ಹಾಗೂ ಚೈತ್ಯಕ – ಎಂಬ ಹೆಸರಿನ ಐದು ವಿಹಾರ-ಯೋಗ್ಯವಾದ ಪರ್ವತಗಳಿಲ್ಲಿವೆ.
ಸೂಚನೆ : 1/3/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.