Sunday, March 1, 2026

ವ್ಯಾಸ ವೀಕ್ಷಿತ 177 ಕೃಷ್ಣಾರ್ಜುನ-ಭೀಮರು ಮಾಗಧಕ್ಕೆ ಪ್ರಯಾಣಿಸಿದುದು ( Vyaasa Vikshita 177)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)





ಜರಾಸಂಧ-ವಧೆಯನ್ನು ಮಾಡುವಲ್ಲಿ ಕೃಷ್ಣನಿತ್ತ ಸಲಹೆ ಅಮೂಲ್ಯವಾದುದೆಂದೂ, ನೀತಿ-ಬಲ-ಕ್ರಿಯೆಗಳ ಸಂಗಮವೇ ಕಾರ್ಯ-ಸಾಧಕವೆಂದೂ ಯುಧಿಷ್ಠಿರನು ಮನಗಂಡನು. ಅರ್ಜುನನ ದಶ-ನಾಮಗಳಲ್ಲಿ ಕೃಷ್ಣನೆಂಬುದೂ ಒಂದಾದ್ದರಿಂದ, ಯುಧಿಷ್ಠಿರನ ಮಾತು ಹೀಗೆ ಸಾಗಿತು:

"ಈ ಇಬ್ಬರು ಕೃಷ್ಣರಿಗೆ, ಎಂದರೆ ಕೃಷ್ಣಾರ್ಜುನರಿಗೆ, ಅಜೇಯನಾದವನೇ ಇಲ್ಲ – ಅರ್ಥಾತ್, ಇವರಿಬ್ಬರಿಗೆ ಸೋಲಿಸಲಾಗದವನೇ ಇಲ್ಲ - ಎಂದೇ ನಾನು ಭಾವಿಸುತ್ತೇನೆ.

ಮತ್ತು ಈ ವೃಕೋದರ-ಭೀಮನಾದರೂ ಬಲಶಾಲಿಗಳಲ್ಲೇ ಶ್ರೇಷ್ಠನಾದವನು. ನಿಮ್ಮಿಬ್ಬರೊಂದಿಗೆ ಸೇರಿದ ಈ ಮಹಾಕೀರ್ತಿ-ಸಂಪನ್ನನಾದ ವೀರನು ಏನನ್ನು ತಾನೆ ಸಾಧಿಸಲಾರ?

ಸೈನ್ಯ-ಸ್ತೋಮವು ಉತ್ತಮ-ಕಾರ್ಯವನ್ನು ಸಾಧಿಸುವುದು ಯಾವಾಗ? ನೇತಾರನಿಂದ  ಸರಿಯಾಗಿ ಸಂಚಾಲಿತವಾದಾಗ. ಬಲವೆಂಬುದು ತನ್ನಷ್ಟಕ್ಕೆ ಕುರುಡೆಂದೂ, ಜಡವೆಂದೂ ಹೇಳುವರು; ಎಂದೇ, ವಿಚಕ್ಷಣರೇ ಅದನ್ನು ಮುನ್ನಡೆಸಬೇಕು.

ಹೀಗೆ, ಕಾರ್ಯವು ಸಿದ್ಧಿಸಬೇಕೆಂದರೆ, ಪ್ರಜ್ಞೆ-ರಾಜ-ನೀತಿಗಳೆಂಬ ಬಲಗಳಿಂದ ಕೂಡಿರುವವನೂ, ಕ್ರಿಯೆಯ ಉಪಾಯವನ್ನು ಹೊಂದಿರುವವನೂ ಆದ ಶ್ರೀಕೃಷ್ಣನನ್ನೇ ಮುಂದಿಟ್ಟುಕೊಂಡು ಹೊರಡಬೇಕು.

ಯದುಶ್ರೇಷ್ಠನಾದ ಕೃಷ್ಣನೇ, ಕಾರ್ಯಸಿದ್ಧಿ-ಪರ್ಯಂತವೂ ಅರ್ಜುನನು ಕೃಷ್ಣನನ್ನು ಅನುಸರಿಸಲಿ, ಹಾಗೂ ಭೀಮನು ಅರ್ಜುನನನ್ನು ಅನುಸರಿಸಲಿ. ನಯ-ಜಯ-ಬಲ - ಇವುಗಳು ಸೇರಿ, ವಿಕ್ರಮದಲ್ಲಿ ತಮ್ಮ ಸಿದ್ಧಿಯನ್ನು ಹೊಂದುವುವು" ಎಂದು ಆತನು ತನ್ನ ಮಾತನ್ನು ಮುಗಿಸಿದನು.

ಯುಧಿಷ್ಠಿರನು ಹೀಗೆಂದು ಹೇಳಲಾಗಿ, ಮಹಾ-ತೇಜಸ್ವಿಗಳೆನಿಸಿದ ಕೃಷ್ಣ-ಅರ್ಜುನ-ಭೀಮಸೇನರು ಜರಾಸಂಧನ ರಾಜಧಾನಿಯತ್ತ ಸಾಗಿದರು. ವರ್ಚಸ್ವಿಗಳಾದ, ಎಂದರೆ ತೇಜಸ್ಸಂಪನ್ನರಾದ, ಸ್ನಾತಕ-ಬ್ರಾಹ್ಮಣರ ಪರಿಚ್ಛದವನ್ನು ,ಎಂದರೆ ವೇಷ-ಭೂಷಣಗಳನ್ನು, ಅವರು ಧರಿಸಿಕೊಂಡರು: ಈ ಮೂಲಕ ತಮ್ಮನ್ನೇ ಮರೆಮಾಚಿಕೊಂಡರು. ಆ ಸಂದರ್ಭದಲ್ಲಿ ಅವರ ಸ್ನೇಹಿತರು ತಮ್ಮ ಮನೋಹರವಾದ ಮಾತುಗಳಿಂದ  ಅವರನ್ನು ಅಭಿನಂದಿಸಿದರು.

ಈ ಮೂವರೂ ಜರಾಸಂಧನ ವಿಷಯಕ್ಕೆ ರೋಷದಿಂದ ಕುದಿಯುತ್ತಿದ್ದರು. ಎಂದೇ ಸೂರ್ಯ-ಚಂದ್ರ-ಅಗ್ನಿಗಳಂತೆ ಅವರ ಶರೀರವು ಜ್ವಲಿಸುತ್ತಿತ್ತು. ಯುದ್ಧದಲ್ಲಿ ಎಂದೂ ಸೋಲನ್ನೇ ಕಂಡಿರದ, ಹಾಗೂ ಒಂದೇ ಕಾರ್ಯಕ್ಕಾಗಿಯೇ ಸಮುದ್ಯತರಾಗಿದ್ದ, ಹಾಗೂ ಭೀಮನನ್ನು ಮುಂದಿಟ್ಟುಕೊಂಡು ಹೊರಟಿದ್ದ, ಆ ಕೃಷ್ಣರಿಬ್ಬರನ್ನು ಹಾಗೆ ಕಂಡ ಯುಧಿಷ್ಠಿರನು, ಜರಾಸಂಧನು ಹತನಾದನೆಂದೇ ಭಾವಿಸಿದನು.

ಎಷ್ಟಾದರೂ ಅವರಿಬ್ಬರೂ ಎಂತಹವರು! ಧರ್ಮ-ಕಾಮ-ಅರ್ಥ ಇವುಗಳನ್ನು ಸಾಧಿಸುವ ಲೋಗರನ್ನು ತೊಡಗಿಸುವವರು! ಅವರು ನರ-ನಾರಾಯಣರೇ ಸರಿ!

ಕುರು ಪ್ರದೇಶದಿಂದ ಹೊರಟ ಅವರು, ದಾರಿಯಲ್ಲಿ ನಾನಾ-ಪ್ರದೇಶಗಳನ್ನು ಕಂಡರು. ಕುರು-ಜಾಂಗಲ ಪ್ರದೇಶ, ಅಲ್ಲಿ ರಮಣೀಯವಾದ ಪದ್ಮ-ಸರಸ್ಸು, ಮುಂದಕ್ಕೆ ಕಾಲಕೂಟ-ಪರ್ವತ, ಅದನ್ನೂ ದಾಟಿದ ಮೇಲೆ ಗಂಡಕಿ, ಮಹಾ-ಶೋಣ, ಸದಾ-ನೀರಾ ನದಿಗಳು, ಬಳಿಕ ಏಕಪರ್ವತಕ-ಪ್ರದೇಶದ ನದಿಗಳು - ಇವೆಲ್ಲವನ್ನೂ ಮೀರಿ ನಡೆದರು.

ಆಮೇಲೆ ರಮ್ಯವಾದ ಸರಯೂ-ನದಿ, ಪೂರ್ವಕೋಸಲ-ದೇಶ, ಬಳಿಕ ಮಿಥಿಲೆ. ಅಲ್ಲಿ ವಿಪುಲವಾದ ನದಿಗಳನ್ನು ಕಾಣುತ್ತಾ ಗಂಗೆ-ಶೋಣಭದ್ರಾ-ನದಿಗಳನ್ನು ದಾಟಿದರು. ಮುಂದಕ್ಕೆ ಪೂರ್ವಾಭಿಮುಖವಾಗಿ ಹೊರಟರು. ಕುಶ-ಚೀರವಸ್ತ್ರಗಳನ್ನು ಧರಿಸಿದ್ದ ಅವರು, ಮುಂದೆ ಮಾಗಧ-ಸೀಮೆಯನ್ನು ಸೇರಿದರು. ಅಲ್ಲಿ ಗೋ-ಧನದಿಂದ ತುಂಬಿತುಳುಕಿದ್ದುದೂ, ಜಲಸಮೃದ್ಧಿ-ಸಸ್ಯಸಮೃದ್ಧಿಗಳನ್ನುಳ್ಳದ್ದೂ ಆದ ಗೋರಥ-ಗಿರಿಯನ್ನು ತಲುಪಿ, ಅಲ್ಲಿ ಮಾಗಧ-ಪುರವನ್ನು ಕಂಡರು.

ಆಗ ವಾಸುದೇವನೇ ಮಾಗಧ-ದೇಶವನ್ನು ಪ್ರಶಂಸಿಸಿದನು: ಗೋಸಂಪತ್ತು, ನಿತ್ಯ-ಜಲಸಮೃದ್ಧಿಗಳನ್ನುಳ್ಳ ದೇಶವಿದಲ್ಲವೇ! ಈ ಶುಭ-ಮಾಗಧ-ನಿವೇಶಗಳು ಸೊಗಸಾದವು. ಇಲ್ಲಿನ ಜನಗಳಾದರೂ ವ್ಯಾಧಿಗಳಿಲ್ಲದಿರುವರು. ಮನೆಗಳು ಸೊಗಸಾಗಿವೆ. ಹೀಗಾಗಿ, ಈ ಮಾಗಧ-ದೇಶವೇ ಮನೋಹರವಾಗಿದೆ.

ವಿಪುಲ, ವರಾಹ, ವೃಷಭ, ಋಷಿಗಿರಿ ಹಾಗೂ ಚೈತ್ಯಕ – ಎಂಬ ಹೆಸರಿನ ಐದು ವಿಹಾರ-ಯೋಗ್ಯವಾದ ಪರ್ವತಗಳಿಲ್ಲಿವೆ.

ಸೂಚನೆ : 1/3/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 55 (Prasnottara Ratnamalike 55)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ - ೫೫ - ಮಿಂಚಿನಂತೆ ಚಪಲವಾದುದು ಯಾವುದು? 

ಉ. ದುರ್ಜನಸಂಗ ಮತ್ತು ಯುವತಿ.


ಪ್ರಕೃತ ಉತ್ತರದಲ್ಲಿ ಎರಡು ಸಂಗತಿಗಳನ್ನು ಅತ್ಯಂತ ಚಪಲವಾದವುಗಳು ಎಂಬುದಾಗಿ ಗಣಿಸಲಾಗಿದೆ. ಅದಕ್ಕೆ ಒಂದು ಉದಾಹರಣೆಯನ್ನೂ ಇಲ್ಲಿ ಕೊಡಲಾಗಿದೆ. ಉದಾಹರಣೆಯು ಆ ಚಪಲತೆ ಅಥವಾ ಚಂಚಲತೆಗೆ ತುಂಬಾ ಲಗತ್ತಾಗಿ ಹೊಂದಿಕೊಳ್ಳುವ ವಿಷಯವಾಗಿದೆ. ಇದರಿಂದ ಈ ಉತ್ತರದಲ್ಲಿ ಹೇಳಿರುವ ದುರ್ಜನಸಂಗ ಮತ್ತು ಯುವತಿ ಎರಡು ವಿಷಯಗಳು ಎಷ್ಟು ಚಪಲ? ಎಂಬುದನ್ನು ತಿಳಿಯಬಹುದಾಗಿದೆ. ಮಿಂಚು ಎಲ್ಲರಿಗೂ ತಿಳಿದಂತೆ ಒಂದು ಕ್ಷಣ ಆಕಾಶದಲ್ಲಿ ನಮ್ಮ ಕಣ್ಣಿಗೆ ಗೋಚರಿಸಿ ಮರೆಯಾಗುವ ವಿಷಯವಾಗಿದೆ. ಅಂತೆಯೇ ಈ ದುರ್ಜನಸಂಗ ಮತ್ತು ಯುವತಿಯ ಸಂಗವು ಕೂಡ ನಮ್ಮ ಜೀವನದಲ್ಲಿ ಅಷ್ಟು ಕ್ಷಣಿಕವಾದವುಗಳು. ಮಿಂಚು ಹೇಗೆ ಕಣ್ಣಿಗೆ ಕ್ಷಣಿಕ ಆನಂದವನ್ನು ಕೊಟ್ಟು ಮರೆಯಾಗುತ್ತದೆಯೋ ಅಂತೆಯೇ ಈ ಎರಡು ಸಂಗತಿಗಳೂ ಕೂಡ ಎಂಬ ಮಾರ್ಮಿಕ ವಿಷಯವನ್ನು ಈ ಪ್ರಶ್ನೋತ್ತರ ಸಾರುತ್ತದೆ. ಹಾಗಾದರೆ ಇವೆರಡು ಏಕೆ ಅಷ್ಟು ಚಂಚಲ? ಎಂಬುದನ್ನು ನಾವು ವಿಚಾರಿಸಬೇಕಾಗಿದೆ. ದುರ್ಜನರ ಸಂಗ ಮತ್ತು ಯುವತಿಯರ ಸಂಗ ಇವೆರಡೂ ನಮ್ಮನ್ನು ಸನ್ಮಾರ್ಗದಿಂದ ಚ್ಯುತಿಗೊಳಿಸುವ ವಿಧಾನವಾಗಿವೆ. ಹಾಗಾಗಿ ಇವೆರಡೂ ದೂರವಿಡಲು ಯೊಗ್ಯವಾದ ವಿಷಯಗಳು ಎಂಬುದನ್ನು ಅರಿಯಬೇಕಾಗಿದೆ.

ನಮ್ಮ ಜೀವನವು ಹೇಗೆ ಸಾಗಬೇಕಾಗಿದೆ? ಎಂಬುದನ್ನು ತಿಳಿದಾಗ, ಆ ಜೀವನಕ್ಕೆ ಎರಡು ಸಂಗತಿಗಳು ಎಷ್ಟು ವಿರೋಧವಾದವುಗಳು ಎಂಬುದನ್ನು ತಿಳಿಯಬಹುದು. ಅಂದರೆ ದುರ್ಜನರ ಸಂಪರ್ಕ ಮತ್ತು ಯುವತಿಯ ಸಾಂಗತ್ಯವು ಅತ್ಯಂತ ಚಂಚಲವಾಗಿದ್ದು, ಅವು ನಮ್ಮ ಜೀವನದಲ್ಲಿ ಮಿಂಚಿನಂತೆ ಬಂದುಹೋಗುತ್ತವೆ. ಶಾಶ್ವತವಾದವುಗಳಲ್ಲ. ಅವುಗಳನ್ನೇ ನೆಚ್ಚಿ ಕೂತರೆ ಬದುಕು ಅಸಾಧ್ಯ. ಹಾಗಾಗಿ ಇವೆರಡು ಕೂಡ ತ್ಯಾಜ್ಯ ಎಂಬುದು ಇದರ ಅರ್ಥ.

ವಯಸ್ಸಿಗೆ ಬಂದ ಯುವಕನಿಗೆ ಯುವತಿಯ ಸೆಳೆತ, ಹಾಗೆ ಯುವತಿಗೆ ಯುವಕನ ಸೆಳೆತ. ಈ ಎರಡು ಸೆಳೆತಗಳು ಆ ವಯಸ್ಸಿನಲ್ಲಿ ಅತ್ಯಂತ ಸಹಜವಾದವುಗಳು. ಅಕಾಲದಲ್ಲಿ ಬರುವ ಈ ಯುವಕ ಯುವತಿಯರ ಸೆಳೆತವು ಜೀವನದ ಉದ್ದೇಶವನ್ನು ಮರೆಸಬಹುದು. ಮತ್ತು ಯಾವಾಗ? ಯಾವುದು? ಹೇಗೆ? ಇತ್ಯಾದಿ  ವಿವೇಕಪ್ರಜ್ಞೆಯನ್ನೂ ಸಹ ನಷ್ಟವಾಗಿಸಬಹುದು. ಇದನ್ನೇ ಸಾಮಾನ್ಯವಾಗಿ 'ರತಿ, ಪ್ರೀತಿ, ಕಾಮ' ಇತ್ಯಾದಿಯಾಗಿ ಹೇಳುವುದಂಟು. ರತಿ ಅಥವಾ ಪ್ರೀತಿಯಲ್ಲಿ ಮುಳುಗಿದ ವ್ಯಕ್ತಿಗೆ ಯಾವ ಪ್ರಪಂಚವು ಕೂಡ ಕಾಣಿಸದು. ಈ ಕಾರಣವಾಗಿ ತನ್ನ ಜೀವಿತದ ಉತ್ಕೃಷ್ಟ ಉದ್ದಿಶ್ಯವನ್ನು ಅವನು ಮರೆಯುವ ಸಂದರ್ಭ ಬರುತ್ತದೆ. ಹಾಗಾಗಿ ಯುವಕ ಯುವತಿಯರ ಆಕರ್ಷಣೆ ಎಂಬುದು ಮಿತಿಯಲ್ಲಿ ಇರಬೇಕು. ಅಂದರೆ ಯಾವ ಕಾಲದಲ್ಲಿ ಬರಬೇಕು? ಎಂಬುದಕ್ಕೆ ಒಂದು ನಿಯಮ ಇದೆ. ಅವರ ಪರಸ್ಪರ ಆಕರ್ಷಣೆಯು ಕೇವಲ ಸಂತಾನೋತ್ಪತ್ತಿಗೆ ಮಾತ್ರ ಸೀಮಿತವಾಗಿರಬೇಕು. ಹಾಗಿಲ್ಲದ ಆಕರ್ಷಣೆಯು ಅವರ ಮನಸ್ಸಿನ ಏಕಾಗ್ರತೆಯನ್ನು ಭಂಗಗೊಳಿಸಬಹುದು. ಆದ್ದರಿಂದ ಅಕಾಲದ ಆಕರ್ಷಣೆಯು ಅತ್ಯಂತ ಅಪಾಯವಾದುದು. ಅದರಂತೆಯೇ ದುರ್ಜನರ ಸಂಗವೂ ಕೂಡ ಅತ್ಯಂತ ಅಪಾಯಕಾರಿ. ದುರ್ಜನರು ಎಂದರೆ ಧರ್ಮಪ್ರೀತಿ ಇಲ್ಲದ, ಧರ್ಮಕ್ಕೆ ವಿರೋಧವಾದ ನಡೆಯನ್ನು ಉಳ್ಳವರು. ಅವರ ಸಂಗವು ನಮ್ಮನ್ನು ಧರ್ಮದಿಂದ ಚ್ಯುತವಾಗಿಸುತ್ತದೆ. ಮತ್ತು ತತ್ಕಾಲದಲ್ಲಿ ಅದು ಬಹಳ ಅಪ್ಯಾಯಮಾನವಾಗಿ ಕಂಡುಬರುತ್ತದೆ. ಈ ಎರಡು ಸಂಗತಿಗಳು ಕೂಡ ತತ್ಕಾಲದಲ್ಲಿ ಆಕರ್ಷಕವಾಗಿಯೇ ಕಂಡು ಬರುತ್ತವೆ. ಆದರೆ ಪರಿಣಾಮದಲ್ಲಿ ಅವು ವಿಷಮತೆಯನ್ನು ಉಂಟುಮಾಡುತ್ತವೆ. ಆದ್ದರಿಂದ ಇವೆರಡನ್ನು 'ಮಿಂಚಿನಂತೆ ಅತ್ಯಂತ ಚಂಚಲವಾದವುಗಳು' ಎಂಬುದಾಗಿ ಈ ಪ್ರಶ್ನೋತ್ತರ ಸಾರುತ್ತದೆ.

ಸೂಚನೆ : 1/3/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ಕೃಷ್ಣಕರ್ಣಾಮೃತ 95 ಗೋಕುಲಾಲಂಕಾರನಾದ ಯೋಗಿಧ್ಯೇಯ-ತೇಜೋಮೂರ್ತಿಗೆ ನಮಃ (Krishakarnamrta 95)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ರಾಜಯೋಗದಿಂದ ಭಗವಂತನನ್ನು ಹೊಂದಬಹುದು – ಎಂಬುದು ಪ್ರಸಿದ್ಧವಷ್ಟೆ. ಆದರೆ ಭಕ್ತಿಯೋಗಕ್ಕೆ ಆ ತೆರನಾದ ಸಾಮರ್ಥ್ಯವುಂಟೇ? – ಎಂದು ಶಂಕಿಸುವವರಿಗೆ ಇಲ್ಲಿ, ಲೀಲಾಶುಕನ ಈ ಶ್ಲೋಕದಲ್ಲಿ, ಉತ್ತರವಿದೆ.

ಗೋಪಾಲ-ಭೂಪಾಲನೆಂದರೆ ಗೋಪಾಲಕರ ರಾಜನಾದ ನಂದ-ಭೂಪ. ಅತನ ಕುಮಾರನೆಂದರೆ  ಇನ್ನಾರು, ಶ್ರೀಕೃಷ್ಣನೇ. ಆತನ ಮೂರ್ತಿಯೆಂದರೆ ಕೃಷ್ಣನ ಶರೀರವೇ. ಮೈಯನ್ನು ಮೂರ್ತಿಯೆನ್ನುವುದೂ ಉಂಟು.

ಧ್ಯಾನವೆಂದರೇನು? ಭಗವನ್ಮೂರ್ತಿಯನ್ನು ಆ-ಪಾದ-ಮಸ್ತಕ ಧ್ಯಾನಿಸುವುದೇ. ಆ-ಪಾದಂ ಎಂದರೆ "ಚರಣದಿಂದ ಆರಂಭಿಸಿ". ಆ-ಚೂಡಂ ಎಂದರೆ "ಶೀರ್ಷ-ಪರ್ಯಂತ", "ತಲೆಯವರೆಗೆ".

ಹೀಗೆ, "ಆ" ಎನ್ನುವುದಕ್ಕೆ "-ಇಲ್ಲಿಂದ" ಎಂಬ ಅರ್ಥವೂ ಇದೆ; ಹಾಗೆಯೇ, "-ಇಲ್ಲಿಯವರೆಗೆ" ಎಂಬ ಅರ್ಥವೂ ಇದೆ. ಧ್ಯಾನಿಸುವುದೆಂದರೆ ಧ್ಯೇಯ-ವಸ್ತುವನ್ನು ಚಿತ್ತದಲ್ಲಿ ತುಂಬಿಕೊಂಡಿರುವುದೇ.

ಅತಿಪ್ರಸಕ್ತವೆಂದರೆ ಆದರ-ಭರಿತವಾದದ್ದು. ಅತಿಪ್ರಸಕ್ತವಾದ ಮನಸ್ಸಿನಿಂದ ಯಮಿಗಳು, ಎಂದರೆ ಮುನಿಗಳು, "ಕುಡಿದೇಬಿಡು"ತ್ತಾರಂತೆ, ಶ್ರೀಕೃಷ್ಣನ ಮೂರ್ತಿಯನ್ನು! ಎವೆಯಿಕ್ಕದೆ ನೋಡುವುದನ್ನೇ "ಕಣ್ಣಿನಿಂದ ಕುಡಿಯುವುದು" - ಎಂಬುದಾಗಿ ವರ್ಣಿಸುತ್ತಾರೆ. ಹಾಗೆಯೇ, ಎಡೆಬಿಡದೆ ಧ್ಯಾನಿಸುವುದನ್ನು "ಮನಸ್ಸಿನಿಂದ ಕುಡಿಯುವುದು" - ಎನ್ನುತ್ತಾರೆ. ಧ್ಯಾನಕಾರ್ಯವೆಂಬುದು ಯೋಗಿಗಳಿಗೂ ಪರಮ-ಸುಲಭವೆಂದೇನಲ್ಲ. ಅದೂ ಶ್ರಮ-ಸಾಧ್ಯವೇ. ಮನಸ್ಸನ್ನು ಹಿಡಿದಿಡುವುದನ್ನು ಸುಲಭವೆಂದು ಯಾರು ಹೇಳಿಯಾರು?

ಯೋಗಿಗಳು ಅಷ್ಟು ಕಷ್ಟಪಟ್ಟು ಯಾವುದನ್ನು ಸಾಧಿಸುವರೋ ಅದನ್ನು ಗೋಪಿಯರು ಬಹು-ಸುಲಭವಾಗಿಯೇ ಸಾಧಿಸಿಬಿಡುತ್ತಾರೆ! – ಎನ್ನುವಂತಾಗಿದೆ. ಯೋಗಿಗಳು ಶ್ರೀಕೃಷ್ಣಮೂರ್ತಿಯನ್ನು ಹಾಗೆ "ಕುಡಿದರೂ", ನಿಜವಾಗಿ ರಸಾಸ್ವಾದವನ್ನು ಮಾಡಿದವರೆಂದರೆ ಗೋಪಿಯರೇ – ಎನ್ನುತ್ತಾನೆ, ಕವಿ. ಕೃಷ್ಣನ ಮೂರ್ತಿಯ ರಸವನ್ನು ಬಲ್ಲವರು ಭಕ್ತಿ ಉಕ್ಕಿರುವ ಚಿತ್ತದ ಗೋಪಿಕೆಯರೇ ಸರಿ.

ಯೋಗದ ಉನ್ನತಾವಸ್ಥೆಯಲ್ಲಿ ಏನು ಲಭ್ಯವಾಗುವುದೋ ಅದನ್ನೇ ಉತ್ಕಟವಾದ ಭಕ್ತಿಯೂ ದೊರಕಿಸಿಕೊಡುವುದು - ಎಂಬುದಾಗಿ ಶ್ರೀರಂಗಮಹಾಗುರುಗಳು ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.

ಅಂತಹ ನಂದ-ಪುತ್ರನ ಮೂರ್ತಿಯು ನಿಮ್ಮನ್ನು ಪೊರೆಯಲಿ – ಎನ್ನುತ್ತಾನೆ, ಲೀಲಾಶುಕ.

ಆಪಾದಂ ಆಚೂಡಂ ಅತಿಪ್ರಸಕ್ತೈಃ /
ಆಪೀಯಮಾನಾ ಯಮಿನಾಂ ಮನೋಭಿಃ |
ಗೋಪೀಜನ-ಜ್ಞಾತ-ರಸೋವತಾದ್ ವೋ /
ಗೋಪಾಲ-ಭೂಪಾಲ-ಕುಮಾರ-ಮೂರ್ತಿಃ ||


ಮತ್ತೊಂದು ಶ್ಲೋಕ:

ಕೃಷ್ಣನಿಗೆ ನಮಸ್ಕಾರ ಹೇಳುತ್ತಿದ್ದಾನೆ, ಲೀಲಾಶುಕ - ತುಭ್ಯಂ ನಮಃ, ಎಂದು; ಆದರೆ ಕೃಷ್ಣನ ಹೆಸರನ್ನೇ ಹೇಳಹೋಗಿಲ್ಲ! ಏಕೆ? ಕೃಷ್ಣನೊಂದು ಮಹಸ್ಸು. ಮಹಸ್ಸೆಂದರೆ ತೇಜಸ್ಸಲ್ಲವೇ?  ಮಹಸ್ಸಿಗೆ ನಮಸ್ಸನ್ನು ಹೇಳಿದೆ. ಎಂತಹ ಮಹಸ್ಸು ಅದು? ಹೀಗೆಂದು ಹೇಳಲಾಗದುದು! ಎದುರಿಗೆ ತೋರಿದರೂ ವರ್ಣಿಸಲಾಗದುದು.

"ಈ" ತೇಜಸ್ಸಿಗೆ ನಮಃ - ಎಂದರೆ ಎದುರು ತೋರುತ್ತಿರುವ ತೇಜಸ್ಸಿಗೆ ನಮಸ್ಕಾರವೆಂದೇ. "ಅದು"/"ಆ" – ಎಂದರೆ ದೂರದಲ್ಲಿರುವುದು; "ಇದು"/"ಈ" – ಎಂದರೆ ಹತ್ತಿರದಲ್ಲೇ/ಎದುರಿಗೇ ಇರುವುದು.

ನಾಲ್ಕು ವಿಶೇಷಣಗಳು ಆ ತೇಜಸ್ಸಿಗೆ. ಶ್ಲೋಕದ ಇಡೀ ಪೂರ್ವಾರ್ಧವೇ ಒಂದು ವಿಶೇಷಣ. ಮಿಕ್ಕ ಮೂರು ಉತ್ತರಾರ್ಧದಲ್ಲಿ. ಅವಲ್ಲಿ ಒಂದನ್ನು ಹೇಳಿಯಾಯಿತು. ಇನ್ನು ಮೂರಿವೆ.

ಶ್ರೀಕೃಷ್ಣನು ಗೋಕುಲಕ್ಕೇ ಮಂಡನ – ಎಂಬುದು ಎರಡನೆಯದು. ಮಂಡನವೆಂದರೆ ಅಲಂಕಾರ. ಕೃಷ್ಣನು ಗೋಕುಲಾಲಂಕಾರ. ಎಂತಹ ಗೋಕುಲವದು? ಶ್ರೀ-ಮತ್ ಆದ ಗೋಕುಲವದು. ಹಾಗೆಂದರೆ ಸಿರಿ-ಸಂಪತ್ತುಗಳಿಂದ ಕೂಡಿದುದು – ಎಂದರ್ಥ: ಎಷ್ಟಾದರೂ ಗೋ-ಸಮೃದ್ಧಿ, ಗವ್ಯ-ಸಮೃದ್ಧಿಗಳಿಂದ ಕೂಡಿದ ಎಡೆ ತಾನೆ? ಆದ್ದರಿಂದ ಶ್ರೀ-ಮತ್. ಅಲ್ಲದೆ, ಗೋವುಗಳಿರುವೆಡೆಯಲ್ಲಿ ಲಕ್ಷ್ಮಿಯೂ ಇರುವಳು - ಎನ್ನುವರಲ್ಲವೆ? ಹಾಗೂ ಶ್ರೀ-ಮತ್. ಎಂದೇ ಅದು ಬಡಗೋಕುಲವೇನಲ್ಲ.

ಅಂತಹ ಶ್ರೀಮದ್ಗೋಕುಲಕ್ಕೆ ಭೂಷಣ, ನಮ್ಮ ಕೃಷ್ಣ, ಬಡವರ ನಡುವೆ ಬೆಳೆದವನೇನಲ್ಲ. ಅಲ್ಲದೆ, ಮುದ್ದಿನಲ್ಲೂ ಚೂಟಿತನದಲ್ಲೂ ಅತಿಶಯವೆಂದರೆ, ಮನೆಗೇನು, ಕೇರಿಗೇನು, ಇಡೀ ಊರಿಗೇ ಭೂಷಣ, ಕುಲಕ್ಕೇ ಮಂಡನ ವಾಗುವುದೇ.

ಮೂರನೆಯದಾಗಿ, ಆತನು ಮಾಧುರ್ಯವೊಂದೇ ತುಂಬಿರುವ ಅರ್ಣವ. ಅರ್ಣವವೆಂದರೆ ಸಾಗರ. ನಾವು ನೋಡಿರುವ ಸಮುದ್ರವೆಲ್ಲಾ ಬರೀ ಉಪ್ಪುನೀರಿನದು. ಆದರಿವನು ಮಾಧುರ್ಯದ ವಾರಿಧಿ. ಮಗು ಕಡುಮುದ್ದಾಗಿದ್ದರೆ ಅದುವೇ ಮಾಧುರ್ಯ. ಮಾಧುರ್ಯವೊಂದೇ ಇರುವ ದೊಡ್ಡಸಮುದ್ರವೇ ಆದರೆ ಮಾಧುರ್ಯೈಕ-ಮಹಾರ್ಣವ – ಎಂದು ತಾನೆ ಹೇಳಬೇಕು?

ಎಂತಹ ಮಾಧುರ್ಯವದು? - ಎಂದು ಸ್ವಲ್ಪ ಹೇಳುವಿರಾ? – ಎಂದರೆ, ಹೇಳಲಾಗದು. ಏಕೆ? ಆ ಮಾಧುರ್ಯವು ಮಾತಿಗೆಟುಕದು. ಸಕ್ಕರೆಯನ್ನು ಸವಿದಿಲ್ಲದವನಿಗೆ, ಏನೆಂದು ಹೇಳಿ ಅದರ ಸವಿಯನ್ನು ಅರ್ಥಮಾಡಿಸಬಹುದು? ನಾಲಿಗೆಯೇ, ಸಕ್ಕರೆಯನ್ನು ಸವಿದಿರುವೆಯೆಲ್ಲಾ, ಅದರ ರುಚಿಯನ್ನೊಮ್ಮೆ ಬಣ್ಣಿಸು – ಎಂದರೆ ಏನು ಹೇಳೀತು? ಎಷ್ಟು ಹೇಳಿದರೆ ಅರ್ಥಮಾಡಿಸಲಾದೀತು? ಮಾತಿನಿಂದ ಪ್ರಯೋಜನವಿಲ್ಲ; ಸುಮ್ಮನೆ ಒಮ್ಮೆ ಸವಿಯಬೇಕು, ಅಷ್ಟೆ. ಅರಿಯುವ ವಿಷಯವದು, ಅರುಹುವ ವಿಷಯವಲ್ಲ. ಹೀಗೆ ಲೌಕಿಕವಾದ ಮಾಧುರ್ಯವನ್ನೇ ವಿವರಿಸಿ ತಿಳಿಸಲಾಗದೆನ್ನುವಾಗ, ಇನ್ನು ಕೃಷ್ಣ-ಮಾಧುರ್ಯವನ್ನು ವಾಕ್ಕಿನ ದ್ವಾರಾ ವಿಶದಪಡಿಸಲಾದೀತೇ?

ಹೋಗಲಿ, ಮನಸ್ಸಿಗಾದರೂ ಗೋಚರವಾಗುವುದೇ ಅದು? - ಎಂದರೆ ಮನಸ್ಸಿಗೂ ನಿಲುಕದು, ಅದು! ಮನಸ್ಸಿಗೂ ವಾಕ್ಕಿಗೂ ದೂರದಲ್ಲೇ ಸ್ಫುರಿಸುವ ವಿಶಿಷ್ಟವಾದ ಮಾಧುರ್ಯವದು! ಸರ್ವ-ವಿಲಕ್ಷಣವಾದದ್ದರಿಂದಲೇ, ಎಂದರೆ ಮಿಕ್ಕೆಲ್ಲಕ್ಕಿಂತಲೂ ವಿಭಿನ್ನವಾಗಿರುವುದರಿಂದಲೇ, ಅದನ್ನು "ಇದರಂತೆ/ಅದರಂತೆ" ಎಂದೇನನ್ನೂ ಹೇಳಲಾಗದುದು. ಅನುಭವೈಕಗೋಚರವದು! ಪರಬ್ರಹ್ಮವು ವಚೋದೂರ-ಮನೋದೂರವೆಂದು, ವಸ್ತುತಃ ವಾಗತೀತ-ಮನೋತೀತವೆಂದೇ, ಉಪನಿಷತ್ತೇ ಉದ್ಗರಿಸುವುದಲ್ಲವೇ?

ಕೊನೆಯದಾಗಿ, ಅದು ಸುಕೃತಿಗಳ ಭಾವಗಳಲ್ಲಿ ಚೆನ್ನಾಗಿ ಬೆಳಗುವುದು. ಪ್ರಕಾಶಮಾನವಾಗಿ ಹೊಳೆಯುವುದನ್ನೇ ಇಲ್ಲಿ ನಿರ್ಭಾಸಿಯೆಂದಿರುವುದು. ನಿರಂತರವಾಗಿ ಯಾವುದು ಭಾಸಿಸುವುದೋ, ಎಂದರೆ ಪ್ರಕಾಶಿಸುವುದೋ, ಅಂತಹುದೇ ನಿರ್ಭಾಸಿ.

ಸುಕೃತಿಗಳ ಭಾವಗಳೆಂದರೆ ಎಂತಹ ಭಾವಗಳು ಅವು? ಅವು ಚಾಪಲ-ಭೂಷಿತವೆನಿಸತಕ್ಕವು. ಕೃಷ್ಣನನ್ನು ನೋಡಬೇಕೆಂಬ ಆಸೆಯೇನುಂಟೋ, ಆ ಆಸೆಯೇ ಚಾಪಲ. ಅವರ ಭಾವಗಳಿಗೆ ಈ ಚಾಪಲವೇ ಭೂಷಿತ. ಭೂಷಣ ಅಥವಾ ಭೂಷಿತವೆಂದರೆ ಅಲಂಕಾರ.

ಇನ್ನು ಅವರ ಚಾಪಲವಾದರೂ ಅಲ್ಪವಾದುದಲ್ಲ, ಭೂಯಸ್ಸಾದುದು. ಎಂದರೆ ಅತ್ಯಧಿಕವಾದುದು.

ಚಾಪಲವು ಉಂಟಾದರೂ ಎಷ್ಟೋ ವೇಳೆ ಅದನ್ನು ಮುಚ್ಚಿಟ್ಟುಕೊಳ್ಳುವುದಾಗುತ್ತದೆ. ಆದರೆ ಅದು ಉಕ್ಕಿ ಬರುವ ವೇಳೆ ಸ್ಫುಟವಾಗಿ ಆವಿರ್ಭಾವಗೊಂಡುಬಿಡುತ್ತದೆ.

ಕೃಷ್ಣನನ್ನು ಕಂಡರೆ ಆಗುವುದು ಹರ್ಷ-ವರ್ಷವೇ. ವರ್ಷವೆಂದರೆ ಮಳೆ, ಅಥವಾ ಮಳೆಸುರಿಯುವಂತೆ ಸುರಿಯುವುದು. ಕೃಷ್ಣನನ್ನು ಕಂಡವರಲ್ಲಿ ಸಂತೋಷದ ಧಾರೆಯೇ ಸುರಿಯುವುದಷ್ಟೆ? ಆ ಅತಿಶಯವನ್ನೇ ನಿರ್ಭರವೆಂದಿರುವುದು. ಅವರ ಮನಸ್ಸು ಅದಕ್ಕೆ ಸೋತಿದೆ. ಆ ವಿವಶತೆಯ ಓಘವೆಂತಹುದು! ವಿವಶಾವೇಶವೆಂದರೆ ಅದೇ. ಆ ಕಾರಣಕ್ಕೇ ಅದು ಸ್ಫುಟವಾಗಿ ಪ್ರಕಟಗೊಂಡಿರುವುದು ಕೂಡ.

ಒಟ್ಟಿನಲ್ಲಿ ಹೇಳುವುದಾದರೆ, ಹರ್ಷಾತಿರೇಕದಿಂದ ಕೂಡಿರುವ ಸಜ್ಜನರು ಶ್ರೀಕೃಷ್ಣನ ವಿಷಯದಲ್ಲಿ ಭಾವ-ಭರಿತರಾಗಿದ್ದಾರೆ. ಕೃಷ್ಣನನ್ನು ವಿಶೇಷವಾಗಿ ನೋಡಬೇಕೆಂಬ ಅವರ ಚಾಪಲವು ಎದ್ದು ಕಾಣುತ್ತಿದೆ. ಕೃಷ್ಣನಾದರೂ ಶ್ರೀಗೋಕುಲಕ್ಕೆ ಭೂಷಣನಾಗಿದ್ದಾನೆ. ಮನೋವಾಗತೀತನಾಗಿದ್ದಾನೆ, ಕೃಷ್ಣ. ಮಧುರತೆಯದೇ ಮಹಾಸಾಗರ ಅವನು.

ಹೀಗೆಲ್ಲ ಇರುವ ಅವರ್ಣನೀಯ-ತೇಜಸ್ಸಾದ ಕೃಷ್ಣನೇ, ನಿನಗೆ ನಮಸ್ಕಾರ - ಎನ್ನುತ್ತಾನೆ, ಲೀಲಾಶುಕ.

ತುಭ್ಯಂ ನಿರ್ಭರ-ಹರ್ಷ-ವರ್ಷ-ವಿವಶಾವೇಶ-ಸ್ಫುಟಾವಿರ್ಭವದ್-/

ಭೂಯಶ್ಚಾಪಲ-ಭೂಷಿತೇಷು ಸುಕೃತಾಂ ಭಾವೇಷು ನಿರ್ಭಾಸಿನೇ |

ಶ್ರೀಮದ್-ಗೋಕುಲ-ಮಂಡನಾಯ ಮನಸಾಂ ವಾಚಾಂ ಚ ದೂರ-ಸ್ಫುರನ್-/

ಮಾಧುರ್ಯೈಕ-ಮಹಾರ್ಣವಾಯ ಮಹಸೇ ಕಸ್ಮೈಚಿದಸ್ಮೈ ನಮಃ ||

ಶ್ಲೋಕದಲ್ಲಿ ಅನುಪ್ರಾಸಾಲಂಕಾರವಿದೆ – ವಿಶೇಷವಾಗಿ ಕೊನೆಯ ಪಾದದಲ್ಲಿ.

ಸೂಚನೆ : 14/2/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.