Thursday, March 19, 2026

ನವವರ್ಷಾಚರಣೆಯ ಕುರಿತು ನವಾವಲೋಕನ (Navavarascaraneya Kuritu Navavalokana)

ಲೇಖಕರು : ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)

ಹಲವು ಭಾರತೀಯ ಹಬ್ಬಗಳಿಗೆ ರಾಮಾಯಣದ ನಂಟುಂಟು. ದೀಪಾವಳಿಯು ಶ್ರೀರಾಮಚಂದ್ರನು ರಾವಣನ ಮೇಲೆ ಜಯ ಸಾಧಿಸಿದ ದಿನವಾದರೆ, ಯುಗಾದಿಯು ಶ್ರೀರಾಮನು ವನವಾಸದಿಂದ ಹಿಂದಿರುಗಿದ ದಿನ. ಶ್ರೀರಾಮನ ಪ್ರಜೆಗಳು ಅಂದು ರಾವಣಸಂಹಾರವನ್ನು ಸ್ತುತಿಸುತ್ತಾ, ಪ್ರಭುವಿನ ಹಿಂದಿರುಗುವಿಕೆಯನ್ನು ಉತ್ಸವವಾಗಿ ಆಚರಿಸಲು ಪ್ರಾರಂಭಿಸಿದ ದಿನ. ವಸಂತನವರಾತ್ರದ ಶುಭಾರಂಭ. ಅಲ್ಲದೆ, ಹಿಂದೆ ವೇದಾಪಹಾರವಾದಾಗ, ಭಗವಂತನು ಮತ್ಸ್ಯಾವತಾರ ಮಾಡಿ ವೇದಗಳನ್ನು ಕಾಪಾಡಿದ ದಿನವೇ ಇದು. ಮೇಲಾಗಿ ಈ ಜಗತ್ತಿನ ಸೃಷ್ಟಿಯೇ ಆದ ದಿನವಿಂದು.

ಬ್ರಹ್ಮಪುರಾಣವು ಹೇಳುವಂತೆ:
ಚೈತ್ರೇ ಮಾಸಿ ಜಗದ್ ಬ್ರಹ್ಮಾ ಸಸರ್ಜ ಪ್ರಥಮೇಽಹನಿ |
ಶುಕ್ಲಪಕ್ಷೇ ಸಮಗ್ರಂ ತು ತಥಾ ಸೂರ್ಯೋದಯೇ ಸತಿ ||
ಪ್ರವರ್ತಯಾಮಾಸ ತಥಾ ಕಾಲಸ್ಯ ಗಣನಾಮಪಿ |
- ಎಂದರೆ, ಬ್ರಹ್ಮನು ಚೈತ್ರದ ಶುಕ್ಲಪಕ್ಷದ ಪ್ರಥಮದಿನದಂದು ಸೂರ್ಯೋದಯದ ಸಮಯದಲ್ಲಿ ಜಗತ್ತನ್ನು ಸೃಷ್ಟಿಸಿದನು ಹಾಗೂ ಕಾಲಗಣನೆಯನ್ನು ಪ್ರಾರಂಭಿಸಿದನು.

 

ಹೊಸತನದ ಹಬ್ಬ

ಹೊಸತನವೆಂದರೆ ಯಾರಿಗೆ ಸಂತೋಷವಾಗದು? ಪ್ರತಿದಿನವೂ ಹೊಸ ಪ್ರಾರಂಭವನ್ನಾಗಿ ನೋಡುವುದು ಬಹಳ ಶ್ಲಾಘನೀಯವೇ. Today is the first day of the rest of my life ಎಂಬೊಂದು ಆಂಗ್ಲೋಕ್ತಿಯಿದೆ. ಅದರರ್ಥ "ಇಂದು ಎಂಬುದು ನನ್ನ ಮಿಕ್ಕ ಜೀವನದ ಮೊದಲ ದಿನ". ಈ ಮನೋಭಾವ ಮೆಚ್ಚುವಂಥದ್ದಾದರೂ ಪ್ರಕೃತಿಯೇ ಒಂದು ನವನಾವೀನ್ಯವನ್ನು ತಂದುಕೊಡುತ್ತಿರುವಾಗ, ಅಂದಿನ ದಿನ ಮತ್ತೂ ಸುಭಗವೇ.

ಪ್ರಕೃತಿಯೇ ಸಹಜವಾಗಿ ಕೆಲವು ವಿಶೇಷ ಕಾಲಘಟ್ಟಗಳನ್ನು ತಂದೊದಗಿಸುತ್ತದೆ. ಅಂತಹ ರಸವತ್ತಾದ ಘಟ್ಟಗಳನ್ನು ಗುರುತಿಸಬೇಕು; ಅವನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು; ಅದುವೇ ವಿವೇಕ. ಇಂತಹ ದಿನಗಳನ್ನು ಉತ್ಸವ/ಪರ್ವಗಳನ್ನಾಗಿ ಆಚರಿಸುವುದು ಭಾರತೀಯ ಸಂಸ್ಕೃತಿಯ ಒಂದು ಹಿರಿಮೆ.

ವರ್ಷದ ಆರಂಭವೇ ಅಂತಹ ಒಂದು ಘಟ್ಟ – ಸಂವತ್ಸರದ ಪೀಠಿಕೆಯ ರೂಪದ ಮಹಾಪರ್ವ. ಚಾಂದ್ರಮಾನ ಯುಗಾದಿಯನ್ನು ಚೈತ್ರಶುದ್ಧಪ್ರತಿಪತ್ತಿನಂದು ಆಚರಿಸುತ್ತೇವೆ. ಕರ್ನಾಟಕದಲ್ಲಿ ಚಾಂದ್ರಮಾನದ ಆಚರಣೆಯೇ ಹೆಚ್ಚು. ಸೌರಮಾನಪದ್ಧತಿಯಲ್ಲಿ ಮೇಷಸಂಕ್ರಮಣ ದಿನದಂದು ಯುಗಾದಿಯ ಆಚರಣೆ.

ಈ ಹಬ್ಬವಾದರೂ ಯಾವುದರ ದ್ಯೋತಕ? – ಎಂಬುದನ್ನು ನೋಡಬೇಡವೇ?


ಯುಗಾದಿ ಹಾಗೂ ಸೃಷ್ಟಿ

ಸಂಸ್ಕೃತದಲ್ಲಿ "ಯುಗ"ವೆಂಬುದಕ್ಕೆ ಹಲವರ್ಥಗಳಿವೆ. ಪ್ರಕೃತ ಕಾಲವಿಶೇಷ ಎಂಬ ಅರ್ಥ. ಯುಗದ ಆದಿಯೇ ಈ ಯುಗಾದಿ. ಯಾವ ಯುಗ? ತಾತ್ತ್ವಿಕವಾಗಿ ನೋಡಿದರೆ ಇದು ಸತ್ಯಯುಗದ ಆದಿಯೇ. ಇದರ ಅನ್ವಯ ನಮಗೆ ಹೇಗೆ? ಸತ್ಯಾನುಗುಣವಾಗಿ ಧರ್ಮಮಯ ಜೀವನ ನಡೆಸಲು ಪುನರಾರಂಭಕ್ಕೆ ಯೋಗ್ಯವಾದ ದಿನ.

ಈ ದಿನದ ಕಾಲಸನ್ನಿವೇಶವಾದರೂ ಹೇಗಿದೆ? ಆಗ ತಾನೇ ಬಿಟ್ಟುಹೋಗಿರುವ ಛಳಿ, ಇನ್ನೂ ಪೂರ್ಣ ಬಂದಿರದ ಬಿಸಿಲು, ಇಂತಹ ಶೀತೋಷ್ಣಗಳ ಸಾಮ್ಯವಿರುವ ಕಾಲ. ಇದು ಮೈ-ಮನಗಳಿಗೆ ಹಿತ ಕೊಡುವಂತಹುದು. ಷಡೃತುಗಳಲ್ಲಿ ಮೊದಲ ಮೂರು ಔಷ್ಣ್ಯಪ್ರಧಾನ. ಹಾಗೆಂದರೆ ಬಿಸಿಲ ತಾಪ ಕ್ರಮೇಣ ಹೆಚ್ಚುವಂತಹವು. ಹಾಗಾಗಿ ಅವು ಅಗ್ನಿಯ/ಶಿವನ ಪ್ರತೀಕ. ನಂತರದ ಮೂರು ಋತುಗಳು ಶೈತ್ಯಪ್ರಧಾನ ಹಾಗೂ ಸೋಮ/ಶಕ್ತಿಯ ಪ್ರತೀಕ. ಈ ಶಿವ-ಶಕ್ತಿಯರ ಯೋಗ ಅಥವಾ ಅಗ್ನೀಷೋಮ(ಎಂದರೆ ಅಗ್ನಿ-ಸೋಮಗಳ ಜೋಡಿ)ದಿಂದಲೇ ಜಗತ್ಸೃಷ್ಟಿ. ಬಹಳ ಸುಂದರವಾಗಿ ಇದನ್ನು ವಿವರಿಸಿರುವ ಶ್ರೀಶ್ರೀರಂಗಪ್ರಿಯಸ್ವಾಮಿಗಳು ಹೀಗೆ ಹೇಳುತ್ತಾರೆ: "ಈ ಶಿವಶಕ್ತಿಗಳು ಹೊರಮುಖವಾಗಿ ಸೇರಿದರೆ ಸೃಷ್ಟಿ, ಒಳಮುಖವಾಗಿ ಸೇರಿದರೆ ಸಮಾಧಿ." ಸೃಷ್ಟಿಯ ದ್ಯೋತಕವೇ ಈ ಹಬ್ಬ.

 

ಹಬ್ಬದ ಆಚರಣೆಯ ಅಂಗಗಳು

ಯುಗಾದಿಯಂದು ಏನೇನು ಮಾಡಬೇಕು? ಆಚರಣೆ ಹೇಗಿರಬೇಕು? - ಈ ವಿಷಯವನ್ನು ಸಂಗ್ರಹವಾಗಿ ಈ ಶ್ಲೋಕವು ಹೇಳಿಬಿಡುತ್ತದೆ:

ಪ್ರಾಪ್ತೇ ನೂತನವತ್ಸರೇ ಪ್ರತಿಗೃಹಂ ಕುರ್ಯಾದ್ ಧ್ವಜಾರೋಪಣಂ /
ಸ್ನಾನಂ ಮಂಗಲಮಾಚರೇದ್ ದ್ವಿಜವರೈಃ ಸಾಕಂ ಸುಪೂಜ್ಯೋತ್ಸವೈಃ |
ದೇವಾನಾಂ ಗುರುಯೋಷಿತಾಂ ಚ ಶಿಶವೋಽಲಂಕಾರವಸ್ತ್ರಾದಿಭಿಃ /
ಸಂಪೂಜ್ಯಾ ಗಣಕೈಃ ಫಲಂ ಚ ಶೃಣುಯಾತ್ ತಸ್ಮಾಚ್ಚ ಲಾಭಪ್ರದಂ ||

ಹೊಸವರ್ಷವು ಬಂದಾಗ, ಮನೆಮನೆಗಳಲ್ಲೂ ಧ್ವಜಾರೋಪಣವನ್ನು ಮಾಡಬೇಕು. ಮಂಗಲಸ್ನಾನವನ್ನು ಮಾಡಿ ದ್ವಿಜರೊಂದಿಗೆ ದೇವರಿಗೆ ಪೂಜೆಯನ್ನು ಸಲ್ಲಿಸಬೇಕು. ಉತ್ಸವವನ್ನು ಆಚರಿಸಬೇಕು. ದೇವತೆಗಳು, ಗುರುಗಳು, ಸ್ತ್ರೀಯರು ಮತ್ತು ಮಕ್ಕಳನ್ನು ವಸ್ತ್ರಾಲಂಕಾರಗಳಿಂದ ಗೌರವಪೂರ್ವಕವಾಗಿ ಸತ್ಕರಿಸಬೇಕು. ನಂತರ ಹೊಸ ವರ್ಷದ ಫಲವನ್ನು ಕೇಳಬೇಕು. ಆ ಫಲವನ್ನು ಕೇಳುವುದು ಲಾಭಪ್ರದ.

 

ಅಭ್ಯಂಗಸ್ನಾನ

ಈ ಪರ್ವದ ಆಚರಣೆ ಪ್ರಾರಂಭವಾಗುವುದು ಅಭ್ಯಂಗಸ್ನಾನದಿಂದ. ಅಭ್ಯಂಗಕ್ಕೆ ಎಳ್ಳೆಣ್ಣೆ ಪ್ರಶಸ್ತ. ಆಯುರ್ವೇದೀಯವಾಗಿ ಅಭ್ಯಂಗವು ಆರೋಗ್ಯಕ್ಕೆ ಒಳ್ಳೆಯದೆಂಬುದು ಭೌತಿಕವಾದ ಕಾರಣ. ಅದರೊಂದಿಗೆ ಎಣ್ಣೆಸ್ನಾನದಿಂದ ಉಂಟಾಗುವ ಧಾತುಸಾಮ್ಯವು ಆಧ್ಯಾತ್ಮಿಕವಾದ ಔನ್ನತ್ಯವನ್ನು ತಲುಪಲು ಸಹಾಯಮಾಡುವುದು. ಹಾಗಾಗಿ ಅಭ್ಯಂಗವೆಂಬುದು ಭೋಗಕ್ಕೆ ಮಾತ್ರವಲ್ಲ, ಯೋಗಕ್ಕೂ ಸಹಕಾರಿ.

 

ಮನೆಯ ಸ್ವಚ್ಛತೆ ಮತ್ತು ಅಲಂಕಾರ

ಹಬ್ಬದ ಅಂಗವಾಗಿ ಮನೆಯನ್ನು ತಳಿರುತೋರಣಗಳಿಂದ ರಂಗೋಲೆಗಳಿಂದಲೂ ಅಲಂಕರಿಸುವುದು ಪದ್ಧತಿ. ಮನೆಯನ್ನೆಲ್ಲ ಗುಡಿಸಿ, ಸಾರಿಸಿ, ಸ್ವಚ್ಛ ಮಾಡಿ, ಮಾವಿನ ಎಲೆಗಳ ತೋರಣಗಳನ್ನು ಬಾಗಿಲುಗಳಿಗೆ ಕಟ್ಟುತ್ತೇವೆ. ಅದರೊಂದಿಗೇ ಬೇವಿನ ಎಲೆಗಳ ಗೊಂಚಲುಗಳನ್ನೂ ಕಟ್ಟಿ ಅಲಂಕರಿಸುತ್ತೇವೆ. ಈ ಅಲಂಕಾರದಿಂದ ಕಣ್ಣಿಗೆ ಮಾತ್ರವೇ ಹಬ್ಬವಲ್ಲ, ಶ್ರೀರಂಗಮಹಾಗುರುಗಳು ಹೇಳುವಂತೆ: "ಈ ಸಿಂಗಾರವು ಕೇವಲ ಕಣ್ಣುಗಳ ಚೆಲುವು ಚೆಂದಗಳಲ್ಲಿ ಪರ್ಯವಸಾನವಾಗಬಾರದು. ಆತ್ಮದ ಆಹ್ಲಾದವನ್ನು ಉಂಟುಮಾಡುವ ದಿವ್ಯಭಾವಕ್ಕೆ ಒಯ್ಯುವ ಪದಾರ್ಥಗಳ ಮತ್ತು ಕಲಾಕೃತಿಯ ಸೌಂದರ್ಯದಿಂದಲೂ ಶೋಭಿಸಬೇಕು."

ಪತಾಕೆಯನ್ನು, ಎಂದರೆ ಧ್ವಜವನ್ನು, ಎತ್ತರದಲ್ಲಿ ಕಟ್ಟುವುದನ್ನೂ ಹೇಳಲಾಗಿದೆ. ಇದು ಧರ್ಮಪತಾಕೆಯಾಗಿದ್ದು ಪರಮಾತ್ಮನ ಮಹಾಕಾರ್ಯಗಳನ್ನು ನೆನಪಿಸುವಂತಿರಬೇಕು. ಇಲ್ಲೊಂದು ಎಚ್ಚರ ಬೇಕು. ಹೊರಗೆ ಮಾತ್ರ ಧರ್ಮಧ್ವಜವನ್ನು ಕಟ್ಟುವುದಲ್ಲ, ಆ ಧರ್ಮವು ನಮ್ಮ ವ್ಯವಹಾರದಲ್ಲೂ ಕಾಣುವಂತಿರಬೇಕು.

 

ಸಂಕಲ್ಪ ಮತ್ತು ಪೂಜೆ

ಆ ದಿನ, "ಹರಿಃ ಓಂ ತತ್ಸತ್" ಎಂದು ಪ್ರಾರಂಭಿಸಿ, ಯುಗಾದಿಯ ವ್ರತವನ್ನು ಆಚರಿಸುವ ಸಂಕಲ್ಪವನ್ನು ಮಾಡಲಾಗುತ್ತದೆ. ದೇಶಕಾಲಗಳ ಪರಿಮಿತಿಗೆ ಒಳಪಡದವನು ಪರಮಾತ್ಮ. ಆದರೆ ಆತನನ್ನು ಸ್ಮರಿಸಿ, ಆತನ ಶರೀರವೇ ಆಗಿರುವ ದೇಶಕಾಲಗಳ ವಿಶೇಷವನ್ನು ಮನಸ್ಸಿಗೆ ತಂದುಕೊಳ್ಳುವುದಾಗುತ್ತದೆ. ಸಂಕಲ್ಪವನ್ನೂ, ಅದರ ಹಿಂದಿರುವ ನಿರ್ವಿಕಲ್ಪನನ್ನೂ ನೆನೆದು ಮಾಡಿದ ಕಾರ್ಯವೇ ಪ್ರಬಲವಾಗಿ ಫಲಕಾರಿಯಾಗುವುದು. ಆದ್ದರಿಂದ ಹೀಗೆ ಮಾಡಿಯೇ ದೇವರ ಪೂಜೆಯನ್ನು ಮಾಡಬೇಕು. ನಿತ್ಯಕರ್ಮವಾಗಿ ಮಾಡುವ ದೇವತಾರಾಧನೆಯೊಂದಿಗೆ ಬ್ರಹ್ಮ ಹಾಗೂ ಕಾಲಪುರುಷನ ಪೂಜೆಯನ್ನೂ ಮಾಡುವುದು ವಿಧಿಯಾಗಿದೆ. ಈ ಹಿಂದೆ ನೋಡಿದಂತೆ ಸೃಷ್ಟಿಕರ್ತನು ಜಗತ್ತನ್ನು ಸೃಷ್ಟಿಸಲು ಆರಂಭಿಸಿದ ದಿನವಾದ್ದರಿಂದ ಇಂದಿನ ದಿನ ಅವನ ಪೂಜೆಯು ಯುಕ್ತವೇ ಆಗಿದೆ. ಹಾಗೂ ಆ ಸೃಷ್ಟಿಕರ್ತನ ವಿಸ್ತಾರವೂ ರೂಪಾಂತರವೂ ಆದ ಕಾಲಪುರುಷನು ಪೂಜ್ಯನೇ.

 

ಪಂಚಾಂಗಶ್ರವಣ

ಯುಗಾದಿಯ ಪೂಜಾವಿಧಿಯ ಒಂದು ಮುಖ್ಯ ಭಾಗವೆಂದರೆ ಪಂಚಾಂಗಶ್ರವಣ. ಏನು ಪಂಚಾಂಗವೆಂದರೆ? ತಿಥಿ, ವಾರ, ನಕ್ಷತ್ರ, ಯೋಗ ಹಾಗೂ ಕರಣಗಳು. ಈ ಐದನ್ನೂ ತಿಳಿಯದೇ ಯಾವುದೇ ಕರ್ಮಾಚರಣೆಯನ್ನು ವಿಧಿಪೂರ್ವಕವಾಗಿ ಮಾಡುವುದು ಸಾಧ್ಯವಿಲ್ಲ. ಹೀಗಿರುವುದರಿಂದ, ಸಂವತ್ಸರದ ಆದಿಯಲ್ಲಿ ಆದಿಮಂಗಲವಾಗಿ ಅದರ ಪಠನ-ಶ್ರವಣಗಳು ಉಚಿತವೇ. ವಾಸ್ತವವಾಗಿ ಪಂಚಾಂಗಶ್ರವಣವನ್ನು ನಿತ್ಯವೂ ಮಾಡಬೇಕು. ಯುಗಾದಿಯಂದಂತೂ ಮಾಡಲೇಬೇಕಾದದ್ದು. ಪಂಚಾಂಗಪಠನದಲ್ಲಿ ಸಂವತ್ಸರದ ಹೆಸರು, ಗ್ರಹಸ್ಥಿತಿಗಳು, ರಾಜಫಲ, ಪ್ರಜಾಫಲ, ಧಾನ್ಯಫಲ,ವೃಷ್ಟಿಫಲ, ಆರ್ಥಿಕ ಸ್ಥಿತಿ, ರೋಗಭೀತಿ ಇವೇ ಮುಂತಾದುವನ್ನು ತಿಳಿಸುವುದಾಗುತ್ತದೆ.

 

ನೈವೇದ್ಯ

ದೇವರ ಪೂಜೆ ಮಾಡಿ, ನೈವೇದ್ಯವನ್ನು ಅರ್ಪಿಸುವುದು ತಿಳಿದೇ ಇದೆ. ಈ ದಿನದ ನೈವೇದ್ಯದಲ್ಲಿ ವಿಶೇಷವಿದೆ. ಬೇವಿನ ಚಿಗುರು ಹಾಗೂ ಹೂವನ್ನು ಬೆಲ್ಲದೊಂದಿಗೆ ಸೇರಿಸಿ ಕುಟ್ಟಿ ಅದನ್ನು ಅರ್ಪಿಸುವುದು ಪ್ರಸಿದ್ಧವಾಗಿದ್ದರೂ, ಕೇವಲ ಬೇವಿನ ಚಿಗುರು-ಹೂಗಳನ್ನು ಅರ್ಪಿಸುವುದೂ ಉಂಟು. ಏನಿದು, ಹೊಸವರ್ಷವನ್ನು ಪ್ರಾರಂಭಿಸಲು ಕಹಿಯಾದ ನೈವೇದ್ಯವೇ? ಷಡ್ರಸಗಳಲ್ಲಿ ಅದು ಒಂದಾದರೂ, ಸಾಮಾನ್ಯವಾಗಿ ನೈವೇದ್ಯಕ್ಕೆ ಮಧುರರಸವೇ ಸೂಕ್ತವಾದದ್ದು ಅಲ್ಲವೇ? ಅಧಿಭೂತ-ಅಧಿದೈವ-ಅಧ್ಯಾತ್ಮ ಈ ಮೂರೂ ಕ್ಷೇತ್ರಗಳಲ್ಲೂ ಈ ಅದ್ಭುತವಾದ ಸಸ್ಯದ ಪ್ರಯೋಜನಗಳುಂಟು. ಈ ನೈವೇದ್ಯವನ್ನು ಪ್ರಸಾದವಾಗಿ ಸ್ವೀಕರಿಸುವಾಗ ಈ ಪ್ರಾರ್ಥನೆಯೊಂದಿಗೆ ಸೇವಿಸಿದರೆ ಮತ್ತೂ ಫಲಕಾರಿ.

ಶತಾಯುರ್ವಜ್ರದೇಹಾಯ ಸರ್ವ-ಸಂಪತ್ಕರಾಯ ಚ |
ಸರ್ವಾರಿಷ್ಟ-ವಿನಾಶಾಯ ನಿಂಬ-ಕಂದಲ-ಭಕ್ಷಣಂ ||

ಇದರ ಅರ್ಥ: ನೂರ್ಕಾಲದ ಆಯುಸ್ಸಿಗೂ, ವಜ್ರದಂತೆ ಬಲಶಾಲಿಯಾದ ದೇಹಕ್ಕಾಗಿಯೂ, ಎಲ್ಲ ಸಂಪತ್ತಿನ ಪ್ರಾಪ್ತಿಗೂ ಹಾಗೂ ಎಲ್ಲ ಅನಿಷ್ಟಗಳ ನಾಶಕ್ಕಾಗಿಯೂ ಬೇವಿನ ಚಿಗುರನ್ನು (ನಿಂಬ-ಕಂದಲ) ಸೇವಿಸತಕ್ಕದ್ದು.

 

ಬೇವು-ಬೆಲ್ಲದ ಮಹತ್ತ್ವ

ಬೇವೆಂಬುದು ಕಹಿಯಾದರೂ ಆಯುರ್ವೇದದ ದೃಷ್ಟಿಯಿಂದ ಅದು ಮಹೌಷಧ. ಅದರೊಂದಿಗೆ ಬೆಲ್ಲವನ್ನು ಸೇರಿಸಿದಾಗ ಬೇವಿನಲ್ಲಿರುವ ವಾತದೋಷವು ಹೋಗುತ್ತದೆ. ಹಾಗೆಂದು ಚರಕಸಂಹಿತೆಯಲ್ಲಿ ಹೇಳಿದೆ. ಮಾತ್ರವಲ್ಲದೆ, ಬೆಲ್ಲದ ಸವಿ ಬೇವಿನ ಕಹಿಯನ್ನು ಸಹ್ಯವನ್ನಾಗಿಸುತ್ತದೆ. ಇದು ಆಧಿಭೌತಿಕವಾದ ವಿಷಯವಾಯಿತು. ಇನ್ನು ಆಧಿದೈವಿಕವಾಗಿ, ಈ ಬೇವು ಕಾಲಪುರುಷನ ಪ್ರಿಯವಾದ ವಸ್ತುವಾಗಿದೆ. ಹಾಗಾಗಿ ಅಂತರಂಗದಲ್ಲಿ ಆ ದೇವತೆಗೆ ಸಂಬಂಧಸಿದ ಕೇಂದ್ರಗಳು ತೆರೆದುಕೊಳ್ಳಲು ಅನುವಾಗುತ್ತದೆ. ಇಷ್ಟಲ್ಲದೆ ಅದು ಆಧ್ಯಾತ್ಮಿಕಪ್ರಗತಿಗೂ ಸಹಾಯಕವಾಗುತ್ತದೆ.

ಇದಕ್ಕಿಂತ ಹೆಚ್ಚು ಪ್ರಸಿದ್ಧವಾಗಿ, ಯುಗಾದಿಯ ಬೇವು-ಬೆಲ್ಲಗಳು ನಮಗೆ ಜೀವನವನ್ನು ಹೇಗೆ ಸಾಗಿಸಬೇಕೆಂಬುದರ ಬಗ್ಗೆ ಒಂದು ದೊಡ್ಡ ಪಾಠವನ್ನು ಕೊಡುತ್ತವೆ. ಗೀತಾಚಾರ್ಯನು ಹೇಳಿರುವ ಸ್ಥಿತಪ್ರಜ್ಞನ ಲಕ್ಷಣಗಳನ್ನು ಒಮ್ಮೆ ನೆನಪಿಗೆ ಅವು ತರುತ್ತವೆ: ಸುಖ-ದುಃಖಗಳೆರಡನ್ನೂ ಸಮವಾಗಿ ತೆಗೆದುಕೊಳ್ಳಬಲ್ಲ ಸಾಮರ್ಥ್ಯವನ್ನು ನಾವು ವರ್ಷವಿಡೀ ಇಟ್ಟುಕೊಳ್ಳತಕ್ಕದ್ದು - ಎಂಬ ಸ್ಮೃತಿಯನ್ನು ಯುಗಾದಿಯ ದಿನ ಸೇವಿಸುವ ಬೇವು-ಬೆಲ್ಲ ಕೊಡುತ್ತದೆ.

 

ಪ್ರಕೃತಿ ಮೆರೆಸುವ ಒಂದು ನಾವೀನ್ಯ

ಒಂದು ವರ್ಷದ ಕಾಲಾವಧಿಯಾದರೋ ಪ್ರಕೃತಿಯಲ್ಲಿ ಜೀವನದ ಒಂದು ಆವರ್ತನವನ್ನು ತೋರಿಸುವಂಥದ್ದು. ಶಿಶಿರ ಋತುವಿನಲ್ಲಿ ಪೂರ್ಣವಾಗಿ ಜರ್ಜರಿತವಾದ ಮರಗಳು ವಸಂತರ್ತುವಿನಲ್ಲಿ ಹೊಸ ಚಿಗುರುಗಳನ್ನು ತೋರಿ ಬಾಲ್ಯಕ್ಕೆ ಮತ್ತೆ ಮರುಳುವಂತಿರುತ್ತದೆ. ಪಾಶ್ಚಾತ್ತ್ಯರು ಆಚರಿಸುವ "New Year"ಗೂ ನಾವು ಆಚರಿಸುವ ಯುಗಾದಿಗೂ ಇರುವ ವ್ಯತ್ಯಾಸಗಳು ಹಲವೇ. ಮುಖ್ಯವಾದ ಒಂದೆಂದರೆ ಪ್ರಕೃತಿಯ ನಡೆಯೊಂದಿಗೆ ಹೊಂದಿಕೊಂಡಂತಹ ಆಚರಣೆ.

ಮರಗಳಲ್ಲಿ ನಳನಳಿಸುವ ಹೊಸ ಚಿಗುರುಗಳು, ಕೋಗಿಲೆಗಳ ಹಾಗೂ ಇತರ ಪಕ್ಷಿಗಳ ಗಾನ – ಇವೆಲ್ಲ ವಸಂತದಲ್ಲಿ ಪ್ರಕೃತಿಯು ಪುನರುಜ್ಜೀವಗೊಂಡಿರುವ ಗುರುತುಗಳು. ಕಾಳಿದಾಸನು ತನ್ನ ಕುಮಾರಸಂಭವ ಮಹಾಕಾವ್ಯದಲ್ಲಿ ವರ್ಣಿಸಿರುವ ವಸಂತದ ಆಗಮನ ನಮ್ಮ ಕಣ್ಣ ಮುಂದೆ ಅತಿಮೋಹಕವಾದ ಚಿತ್ರವನ್ನೇ ಬಿಡಿಸುತ್ತದೆ. ಕವಿಗಳ ವರ್ಣನೆಗೆ ಬೇಕಾದಷ್ಟು ಗ್ರಾಸವನ್ನು ಕೊಡುವ ವಸಂತ, ಕಣ್ಣಿಗೆ ಬಹಿರಂಗದಲ್ಲಿ ಮಾತ್ರವಷ್ಟೆ ಸೊಬಗುಣಿಸುವುದಿಲ್ಲ; ಆಂತರಂಗಿಕವಾಗಿಯೂ ಈ ಕಾಲಘಟ್ಟವು ವಿಶಿಷ್ಟವಾದದ್ದು.

ಪಂಚಾಂಗಶ್ರವಣದ ಅಂಗವಾಗಿ ಹೊಸವರ್ಷದಲ್ಲಿ ಮಳೆ ಎಷ್ಟಾಗುವ ಸಾಧ್ಯತೆಯಿದೆ, ಬಿಸಿಲು-ಛಳಿಗಳೆಷ್ಟು, ಧರ್ಮಕಾರ್ಯಗಳಿಗೆ ಅನುಕೂಲಕರವಾದ ಕಾಲಗಳಾವುವು - ಇತ್ಯಾದಿಗಳನ್ನು ತಿಳಿಸುವುದಾಗುತ್ತದೆ. ಹಿಂದಿನ ಕಾಲದಲ್ಲಿ, ಕೃಷಿಕಾರ್ಯಗಳ ವರ್ಷಾವಧಿ ಯೋಜನೆ ಹಾಕಿಕೊಳ್ಳಲು ಸಹಾಯವಾಗುತ್ತಿತ್ತು. ಈಗಲೂ ಕೃಷಿಚಟುವಟಿಗೆಗಳು ವಸಂತದಲ್ಲಿ ಪ್ರಾರಂಭವಾಗಿ ಬಿತ್ತನೆಗೆ ಭೂಮಿಯನ್ನು ಸಿದ್ಧಪಡಿಸುವುದಾಗುತ್ತದೆ.  

 

ಭಾರತದೆಲ್ಲೆಡೆಯೂ ಆಚರಣೆ

ಸೌರಮಾನ-ಚಾಂದ್ರಮಾನ ಎಂಬೆರಡು ಕಾಲಗಣನಾಪದ್ಧತಿಗಳು ನಮ್ಮಲ್ಲಿ ಚಾಲ್ತಿಯಲ್ಲಿದೆ.  "ಮಾನ"ವೆಂದರೆ "ಅಳತೆ". ಸೂರ್ಯನ ಚಲನೆಯನ್ನಾಧರಿಸಿ ಕಾಲವನ್ನು ಅಳೆದಾಗ ಅದು ಸೌರಮಾನ. ಅದೇ ರೀತಿ ಚಂದ್ರನ ಆಧಾರದ ಮೇಲೆ ಕಾಲದ ಅಳತೆಯಾದರೆ ಅದು ಚಾಂದ್ರಮಾನ. ಪಾಶ್ಚಾತ್ತ್ಯರು ಮಾಡುವಂತೆ ಯಾವನೋ ಒಬ್ಬ ಮನುಷ್ಯನ ಜೀವಿತವನ್ನೇ ಮಧ್ಯದಲ್ಲಿಟ್ಟು ಅದರ ಸುತ್ತ ಹೆಣೆದಿರುವ ವರ್ಷವಲ್ಲ ನಮ್ಮದು. ಪ್ರಕೃತಿಯಲ್ಲೇ ಹಾಸುಹೊಕ್ಕಾಗಿರುವ ಅಳತೆಯಿದು.

ಭಾರತದ ಉದ್ದಗಲಕ್ಕೂ ಈ ಹೊಸವರ್ಷವನ್ನು ಬೇರೆ ಬೇರೆ ಹೆಸರುಗಳಿಂದ ಆಚರಿಸುತ್ತಾರೆ. ತಮಿಳುನಾಡಿನಲ್ಲಿ ಚಿತ್ರವಿಷುವೆಂದಾದರೆ (ಸೌರಮಾನ ಸಂವತ್ಸರದ ಚೈತ್ರಮಾಸದ ವಿಷುವತ್ ಸಂಕ್ರಮಣದಂದು), ಕರ್ನಾಟಕ-ಆಂಧ್ರಗಳಲ್ಲಿ ಯುಗಾದಿ/ಉಗಾದಿಯೆಂದೂ,  ಉತ್ತರಭಾರತದಲ್ಲಿ ನವವರ್ಷಪ್ರತಿಪದಾ ಎಂದೂ, ವಸಂತನವರಾತ್ರಾರಂಭವೆಂದೂ ಆಚರಿಸಲ್ಪಡುತ್ತದೆ. ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವಾ ಎಂದೂ, ಕಾಶ್ಮೀರದ ಹಿಂದೂಗಳು ನವ್ರೇಹ್ ಎಂದೂ ಈ ಹಬ್ಬವನ್ನು ಆಚರಿಸುತ್ತಾರೆ.

 

ಹಬ್ಬದ ಸಂಭ್ರಮ

ಈ ದಿನದ ಸಂಭ್ರಮವು ಮನೆ-ಮಂದಿಯಲ್ಲೆಲ್ಲ ಪ್ರತಿಫಲಿಸುವುದು ಹೊಸಬಟ್ಟೆ ಹಾಗೂ ಹಬ್ಬದ ಊಟದಲ್ಲಿ. ಮನೆಮಂದಿಯೆಲ್ಲ ನವವಸ್ತ್ರಧಾರಣೆ ಮಾಡಿ, ಅಲಂಕಾರ ಮಾಡಿಕೊಂಡು ನಲಿಯುವ ದಿನವಿದು. ಹೊಸ ಬಟ್ಟೆಗಳು ನಮ್ಮ ಸುತ್ತಲಿನ ಹೊಸತನವನ್ನು ಪ್ರತಿನಿಧಿಸುತ್ತದೆ ಹಾಗೂ ಅವು ಮಂಗಳದ ಪ್ರತೀಕ.

ಷಡ್ರಸಗಳನ್ನೂ ಕೂಡಿದ ಭಕ್ಷ್ಯ-ಭೋಜ್ಯ-ಲೇಹ್ಯ-ಚೋಷ್ಯ-ಪೇಯಗಳನ್ನು ಪ್ರಸಾದವಾಗಿ ಇಂದು ಸ್ವೀಕರಿಸುವುದಾಗುತ್ತದೆ. ಯುಗಾದಿಯಂದು ಕರ್ನಾಟಕದಲ್ಲಿ ವಿಶೇಷವಾಗಿ ಒಬ್ಬಟ್ಟು ಹಾಗೂ ಮಾವಿನಕಾಯನ್ನು ಬಳಸಿ ಚಿತ್ರಾನ್ನ - ಇವು ಹಬ್ಬದೂಟದ ಒಂದು ನಿಯತವಾದ ಅಂಗವಾಗಿದೆ. ಹೀಗಾಗಿ ಇಂದ್ರಿಯಗಳಿಗೂ, ಮನಸ್ಸಿಗೂ, ಆತ್ಮನಿಗೂ ಮುದ ನೀಡುವ ಹಬ್ಬವಿದಾಗಿದೆ.

 

ಇಂದು ಸಮಾಜದಲ್ಲಿ ಆಗುವ ಆಚರಣೆ

ಕೌಟುಂಬಿಕವಾಗಿ ವ್ರತಾನುಷ್ಠಾನ-ಸಂಭ್ರಮಸಡಗರಗಳಲ್ಲದೆ ಸಮಾಜದಲ್ಲಿಂದು ಯುಗಾದಿ ಹಬ್ಬದ ದಿನ ಕವಿಸಮ್ಮೇಳನ, ಪುರಸ್ಕಾರ ಸಮಾರಂಭಗಳು, ಸಂಗೀತಗೋಷ್ಠಿ - ಎಲ್ಲವನ್ನೂ ಹಮ್ಮಿಕೊಳ್ಳುವುದನ್ನು ನಾವು ನೋಡುತ್ತೇವೆ. ಜನರೆಲ್ಲರೂ ಒಗ್ಗೂಡಿ, ಶುಭದಿನದಂದು ಒಳ್ಳೆಯ ಆಶಂಸೆಗಳೊಂದಿಗೆ ಒಳ್ಳೆಯ ಕಾರ್ಯಗಳಲ್ಲಿ ತೊಡಗುವುದು ಬಹಳ ಶ್ಲಾಘ್ಯವೇ.

ಆದರೆ ಅದ್ದೂರಿಯಾಗಿ ಪೂಜೆ ಮಾಡಿ, ಹೊಸಬಟ್ಟೆಗಳನ್ನು ಧರಿಸಿ, ಉಡುಗೊರೆಗಳನ್ನು ಕೊಟ್ಟು, ಪಟ್ಟಾಗಿ ಹಬ್ಬದ ಊಟಕ್ಕೆ ನಾಲಗೆ ಚಪ್ಪರಿಸಿ, ಹೊರಗೆ ಆಗುವ ಕೆಲ ಸಂಭ್ರಮದ ಗೋಷ್ಠಿ-ಸಮ್ಮೇಳನಗಳಲ್ಲಿ ನಲಿಯುವುದು - ಯುಗಾದಿ ಹಬ್ಬದ ಆಚರಣೆ ಇಷ್ಟಕ್ಕೇ ಮುಗಿದುಬಿಡುತ್ತಿದೆಯೇ? ಈ ಪ್ರಶ್ನೆಯನ್ನು ಇಂದು ನಾವು ನಮಗೇ ಹಾಕಿಕೊಳ್ಳಬೇಕಿದೆ. ಬೇರೆಯವರ ವಿವೇಚನೆಗೆ ನಿಲುಕದ ವಿಷಯ ಇದಾಗಿದ್ದು, ನಾವು ಆತ್ಮಾವಲೋಕನ ಮಾಡಿಕೊಂಡೇ ತಿಳಿಯಬೇಕಿದೆ.

ಕುಟುಂಬದವರೊಂದಿಗೆ, ಬಂಧು-ಮಿತ್ರರೊಂದಿಗೆ ಸಂತೋಷವಾಗಿ ಹಬ್ಬವನ್ನು ಆಚರಿಸುವುದು ಸಹಜವೇ. ಸಮಾಜದಲ್ಲೂ ಒಗ್ಗಟ್ಟಿನಿಂದ ಈ ಸಂಭ್ರಮವನ್ನು ಹಂಚಿಕೊಳ್ಳುವುದೂ ಅಷ್ಟೇ ಅಗತ್ಯ. ಈ ಮೇಲೆ ಹೇಳಿದ ಎಲ್ಲವೂ ಮುಖ್ಯವೇ; ಯಾವುದನ್ನೂ ತಪ್ಪಿಸಬೇಕಿಲ್ಲ. ಆದರೆ ಆ ಆಚರಣೆಯು ಅಲ್ಲಿಗೇ ನಿಂತುಬಿಡಬಾರದು. ಅವೆಲ್ಲದರ ಹಿಂದಿರುವ ತತ್ತ್ವವನ್ನು ಅರಿತು ಮಾಡಿದಾಗಲೇ ಅದರ ಪೂರ್ಣಫಲ ಎಲ್ಲ ರೀತಿಗಳಲ್ಲೂ ದೊರೆಯುವಂತಾಗುವುದು - ಕೇವಲ ಭೌತಿಕಕ್ಷೇತ್ರದಲ್ಲಿ ಮಾತ್ರವಲ್ಲ.

 

ನಮ್ಮ ಆಚರಣೆ ಹೀಗಿರಲಿ

ಯುಗಾದಿಯೊಂದು ಉತ್ಸವ. ಕಾಳಿದಾಸನೇ ಹೇಳಿದಂತೆ, ಮನುಷ್ಯರು ಉತ್ಸವಪ್ರಿಯರು - ಉತ್ಸವಪ್ರಿಯಾಃ ಖಲು ಮನುಷ್ಯಾಃ. "ಹಲವು ಜನರು ಸೇರಿ ಸಂಭ್ರಮದಿಂದ ಆಚರಿಸುವಂತಹುದು ಉತ್ಸವ" ಎಂದಾಗಿದೆ ಆ ಪದದ ಪ್ರಚಲಿತವಾದ ಅರ್ಥ. ಆದರೆ ಆ ಪದದ ಒಳಹೊಕ್ಕು ನೋಡಿದರೆ ನಮಗೆ ಅದರ ಮರ್ಮ ಸಿಗುತ್ತದೆ – ಉತ್ ಎಂದರೆ ಮೇಲ್ಮುಖವಾದ, ಸವನ ಎಂದರೆ ಯಜ್ಞ. ಶ್ರೀರಂಗಮಹಾಗುರುಗಳ ವಿವರಣೆಯಂತೆ "ಜೀವನಕ್ಕೆ ಊರ್ಧ್ವಮುಖವಾದ ಗತಿಯನ್ನು ಕೊಡುವ ಒಂದು ಸವನವೇ ಉತ್ಸವ".

ಯುಗಾದಿಯು ರೂಢಿಯಂತೆ ಉತ್ಸವವಾಗುವುದರೊಂದಿಗೆ, ನಮ್ಮ ಜೀವನದ ಅತಿಮುಖ್ಯಧ್ಯೇಯದ ಎಡೆಗೆ ನಮ್ಮನ್ನು ಕರೆದೊಯ್ಯುವಂತೆ ಆಗಬೇಕು. ಈ ಬಾಳಾಟವು ಸಮಚಿತ್ತದಿಂದ ಆಗುವಂತೆ ಆ ಕಾಲಪುರುಷನನ್ನು ಪರಮಪುರುಷನನ್ನು ನೆನಪಿಸುವಂತಾಗಬೇಕು, ಅಲ್ಲವೇ?

ಎಲ್ಲರಿಗೂ ಯುಗಾದಿಯ ಶುಭಾಶಯಗಳು!!

ಸೂಚನೆ : 19/03/2026 ರಂದು ಈ ಲೇಖನವು ವಿಜಯ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Monday, March 16, 2026

ಪ್ರಶ್ನೋತ್ತರ ರತ್ನಮಾಲಿಕೆ 57 (Prasnottara Ratnamalike 57)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)




ಚಿಂತಾಮಣಿಯಂತೆ ದುರ್ಲಭವಾದುದು ಯಾವುದು ?

ಉ. ಚತುರ್ಭದ್ರ.

ಚಿಂತಾಮಣಿ ಎಂದರೆ ಚಿಂತಿಸಿದ್ದನ್ನು, ಯೋಚಿಸಿದ್ದನ್ನು, ಇಚ್ಛಿಸಿದ್ದನ್ನು ಕೊಡುವ ಒಂದು ರತ್ನವಿಶೇಷ. ಅದೊಂದು ಮಣಿರೂಪದಲ್ಲಿ ಇರುವಂತಹ ವಸ್ತು. ಅತ್ಯಂತ ಅಪರೂಪದ ವಸ್ತು. ಅದನ್ನು ಪಡೆದವನು ಆ ಮಣಿಯ ಸಹಾಯದಿಂದ ಅವನು ಏನನ್ನು ಬೇಕಾದರೂ ಪಡೆಯಬಹುದು. ಅಂತಹ ಒಂದು ಅದ್ಭುತವಾದಂತಹ ಮಣಿರತ್ನವೇ 'ಚಿಂತಾಮಣಿ' ಎಂಬುದಾಗಿ. ಈ ಪ್ರಶ್ನೆಯಲ್ಲಿ ಮಣಿಯ ವಿಷಯವನ್ನು ಪ್ರಸ್ತಾಪಿಸಿಲ್ಲ. ಆದರೆ ಚಿಂತಾಮಣಿಯಂತೆ ದುರ್ಲಭವಾದದ್ದು ಯಾವುದು? ಎಂಬ ಪ್ರಶ್ನೆ ಇಲ್ಲಿದೆ. ಅದಕ್ಕೆ 'ಚತುರ್ಭದ್ರ' ಎಂಬ ಉತ್ತರವನ್ನು ನೀಡಲಾಗಿದೆ. ಹಾಗಾದರೆ ಚತುರ್ಭದ್ರವು ಹೇಗೆ ಚಿಂತಾಮಣಿಯಾಗಿದೆ? ಎಂಬುದನ್ನು ಚಿಂತಿಸಬೇಕಾಗಿದೆ.

ಚತುರ್ಭದ್ರ ಎಂದರೆ ನಾಲ್ಕು ಕಡೆ ಗಟ್ಟಿಯಾಗಿರುವ ಸಂಗತಿ ಎಂದರ್ಥ. ಅಂದರೆ ಒಂದು ವಿಷಯ ಅಥವಾ ಒಂದು ಪದಾರ್ಥ ಅಚಲವಾಗಿ ನೆಲೆ ನಿಲ್ಲಬೇಕಾದರೆ ಅದಕ್ಕೆ ಸುತ್ತಲೂ ರಕ್ಷಣೆ ಅತ್ಯಂತ ಅವಶ್ಯಕ. ಪ್ರಧಾನವಾಗಿ ನಾಲ್ಕು ದಿಕ್ಕುಗಳನ್ನು ಇಟ್ಟುಕೊಂಡು, ಆ ನಾಲ್ಕು ದಿಕ್ಕುಗಳಲ್ಲೂ ಯಾವುದೇ ರೀತಿಯ ಬಾಧೆ ಇಲ್ಲದಿದ್ದರೆ ಅದಕ್ಕೆ 'ಚತುರ್ಭದ್ರ' ಎಂಬುದಾಗಿ ಹೇಳಬಹುದು. ಹಾಗಾದರೆ ಇಲ್ಲಿ ಆ ಚತುರ್ಭದ್ರ ಯಾವುದು? ಎಂದರೆ 'ಪುರುಷಾರ್ಥ'. ಪುರುಷಾರ್ಥಗಳನ್ನೇ 'ಚತುರ್ಭದ್ರ' ಎಂಬ ಇನ್ನೊಂದು ಪದದಿಂದ ಬಳಸಲಾಗಿದೆ. "ಪುರುಷಾರ್ಥವಿದೆ. ಅದಕ್ಕನುಗುಣವಾದ ನಡೆ ನೋಡಿ ನಡೆಸಿದರೆ ಚತುರ್ಭದ್ರಮಯವಾದ ಜೀವನವಾಗುತ್ತದೆ" ಎಂಬುದಾಗಿ ಶ್ರೀರಂಗ ಮಹಾಗುರುಗಳು ಈ ಪುರುಷಾರ್ಥ ಮತ್ತು ಚತುರ್ಭದ್ರ ಎಂಬ ವಿಷಯವನ್ನು ಹೀಗೆ ಸಮೀಕರಿಸಿದ್ದನ್ನು ನಾವು ಇಲ್ಲಿ ಗಮನಿಸಬೇಕು. ಆ ಪುರುಷಾರ್ಥಗಳು ಧರ್ಮ, ಅರ್ಥ, ಕಾಮ, ಮೋಕ್ಷ ಎಂಬುದಾಗಿ.

ಒಬ್ಬ ವ್ಯಕ್ತಿ ಪರಿಪೂರ್ಣವಾಗಿ ಯಾವಾಗ ಆಗಬಲ್ಲ? ಎಂದರೆ ಯಾವಾಗ ಈ ನಾಲ್ಕು ಪುರುಷಾರ್ಥಗಳನ್ನು ಅವನು ಅನುಭವಿಸಬಲ್ಲನೋ ಆಗ. ಅವನು ಯಾವುದೇ ರೀತಿಯ ಅಪೇಕ್ಷಿತವಾದ ಅಥವಾ ಚಿಂತಿತವಾದ ವಿಷಯವನ್ನು ಕ್ಷಣಾರ್ಧದಲ್ಲಿ ಪಡೆಯಬಲ್ಲ ಎಂದು ತಾತ್ಪರ್ಯ. ಅಂದರೆ ಅವನಿಗೆ ಈ ಪ್ರಪಂಚದ ಪ್ರತಿಯೊಂದು ಪದಾರ್ಥದ ಅರಿವು ಆಗಿರುತ್ತದೆ ಮತ್ತು ಆ ಪದಾರ್ಥಗಳ ಸ್ವಾಮ್ಯವೂ ಅವನದ್ದಾಗಿರುತ್ತದೆ. ಪದಾರ್ಥಗಳನ್ನು ಹೇಗೆ ಬಳಸಿಕೊಳ್ಳಬೇಕು? ಹೇಗೆ ಬಳಸಿಕೊಂಡರೆ ಆ ಪದಾರ್ಥವು ಮತ್ತು ಆ ಪದಾರ್ಥದಿಂದ ವ್ಯಕ್ತಿಗೂ ಒಂದು ಸಾರ್ಥಕತೆ ಎಂಬುದು ಉಂಟಾಗುತ್ತದೆ? ಎಂಬುದನ್ನು ಆತ ಅರಿಯಬಲ್ಲವನಾಗಿರುತ್ತಾನೆ. ಹಾಗಾಗಿ ಅವನಿಗೆ ಈ ನಾಲ್ಕು ಪುರುಷಾರ್ಥಗಳು ಚಿಂತಾಮಣಿಯಂತೆ ಕೆಲಸ ಮಾಡುತ್ತವೆ ಎಂಬುದು ಇದರ ತಾತ್ಪರ್ಯ. ಹಾಗಾದರೆ ಈ ನಾಲ್ಕು ಪುರುಷಾರ್ಥಗಳನ್ನು ಪಡೆಯಬೇಕಾದರೆ ಅವನಿಗೆ ಬೇಕಾದ ಮೂಲಭೂತ ಅವಶ್ಯಕತೆ ಏನು? ಎಂಬುದನ್ನು ವಿವೇಕ ಚೂಡಾಮಣಿ ಎಂಬ ಗ್ರಂಥದಲ್ಲಿ ಹೀಗೆ ಹೇಳಲಾಗಿದೆ - "ದುರ್ಲಭಂ ತ್ರಯಮೇವೈತತ್ ದೈವಾನುಗ್ರಹಹೇತುಕಂ। ಮನುಷ್ಯತ್ವಂ ಮುಮುಕ್ಷುತ್ವಂ ಮಹಾಪುರುಷಸಂಶ್ರಯಃ॥" ಎಂಬುದಾಗಿ. ಅಂದರೆ ಒಬ್ಬ ಮಾನವನಾಗಿ ಹುಟ್ಟಿ, ಅವನಿಗೆ ಮೋಕ್ಷ ಪಡೆಯಬೇಕೆಂಬ ಉತ್ಕಟ ಇಚ್ಛೆಯು ಉಂಟಾಗಿ, ಅದನ್ನು ಪೂರೈಸಲು ಒಬ್ಬ ಮಹಾಪುರುಷನ ಸಂಸರ್ಗ ಉಂಟಾದರೆ ಅವನಿಗೆ ಇನ್ನು ಉಳಿದ ಎಲ್ಲವೂ ಸುಲಭ. ಏಕೆಂದರೆ ಈ ಮೂರು ಸಿಗುವುದು ಅತ್ಯಂತ ದುರ್ಲಭ. ಈ ಮೂರನ್ನು ಪಡೆದವನು ಪುರುಷಾರ್ಥ ಸಂಪತ್ತಿಯನ್ನು ಸುಲಭವಾಗಿ ತನ್ನದಾಗಿಸಿಕೊಳ್ಳುತ್ತಾನೆ. ಅಂದರೆ ಆತ ಚತುರ್ಭದ್ರಮಯವಾದ ಬಾಳಾಟವನ್ನು ಮಾಡಿದಂತೆ ಆಗುತ್ತದೆ ಎಂಬುದು ಇದರ ತಾತ್ಪರ್ಯವಾಗಿದೆ. ಇದೇ ಅವನಿಗೆ ಚಿಂತಾಮಣಿಯಂತೆ ಆಗುತ್ತದೆ.  

ಸೂಚನೆ : 15
/3/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 179 ವಿಪ್ರವೇಷದಲ್ಲಿ ಕೃಷ್ಣಭೀಮಾರ್ಜುನರ ಭೇಟಿ – ಜರಾಸಂಧನೊಂದಿಗೆ ( Vyaasa Vikshita 179)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 

(ಪ್ರತಿಕ್ರಿಯಿಸಿರಿ lekhana@ayvm.in)


ಕೃಷ್ಣಾರ್ಜುನ-ಭೀಮಸೇನರು ಜರಾಸಂಧ-ಸಂಹಾರಕ್ಕಾಗಿ ಆಗಮಿಸುತ್ತಿರುವಲ್ಲಿ ಕೆಲವರು ವೇದ-ಪಾರಂಗತ ಬ್ರಾಹ್ಮಣರು ಕೆಲವು ಅಪಶಕುನಗಳನ್ನು ಕಂಡರು.

ಅವನ್ನವರು ಜರಾಸಂಧನ ಗಮನಕ್ಕೆ ತಂದರು. ಮತ್ತು ಅವಕ್ಕೆ ಪ್ರತಿಯಾಗಿ ಆತನ ಪುರೋಹಿತರು ಆತನನ್ನು ಆನೆಯ ಮೇಲೆ ಕೂರಿಸಿದರು; ಪರ್ಯಗ್ನಿ ಮಾಡಿದರು - ಎಂದರೆ ನಾಲ್ಕೂ ಎಡೆಗಳಲ್ಲಿ ಅಗ್ನಿಜ್ವಾಲನ ಮಾಡಿದರು.

ಸಂಭಾವ್ಯವಾದ ಅನಿಷ್ಟಗಳ ಪರಿಹಾರಕ್ಕಾಗಿ ಜರಾಸಂಧನೂ ಕ್ರಮಗಳನ್ನು ಕೈಗೊಂಡನು: ದೀಕ್ಷಿತನಾಗಿ ವ್ರತಿಯಾದನು, ಉಪವಾಸ ಮಾಡಿದನು.

ಇತ್ತ ಸ್ನಾತಕವ್ರತಸ್ಥರಾಗಿ ಬ್ರಾಹ್ಮಣವೇಷದಲ್ಲಿದ್ದ ಈ ಮೂವರು ಆಯುಧಗಳನ್ನು ತೆಗೆದಿಟ್ಟರು. ಅವರಿಗೋ, ಎಷ್ಟಾದರೂ ತಮ್ಮ ಬಾಹುಗಳೇ ಆಯುಧಗಳು! ಜರಾಸಂಧನೊಡನೆ ಯುದ್ಧಾಪೇಕ್ಷಿಗಳಾಗಿ ಅವರು ನಗರಪ್ರವೇಶವನ್ನು ಮಾಡಿದರು.

ಆ ನರೋತ್ತಮರಾದ ಕೃಷ್ಣ-ಭೀಮ-ಧನಂಜಯರು ಅಲ್ಲಿಯ ರಾಜಮಾರ್ಗಗಳಲ್ಲಿ ಕಂಡದ್ದೇನು?: ಭಕ್ಷ್ಯಾಪಣ-ಮಾಲ್ಯಾಪಣಗಳನ್ನು. ಎಂದರೆ, ಬೇಕಾದ್ದನ್ನು ತಿನ್ನಲು ಅಂಗಡಿಗಳು, ಹಾಗೂ ಹೂಮಾಲೆಗಳ ಅಂಗಡಿಗಳು – ಇವು ಅಲ್ಲಿದ್ದವು. ಅವುಗಳ ಸಿರಿಯನ್ನೂ, ಸರ್ವಕಾಮಗಳನ್ನೂ ಪೂರೈಸುವ ಅಲ್ಲಿಯ ಸಮೃದ್ಧಿಯನ್ನೂ ಅವರು ಕಂಡುಕೊಂಡರು.

ಮಹಾಬಲಶಾಲಿಗಳಾದ ಅವರು ಹೂಕಟ್ಟುವವನೊಬ್ಬನಿಂದ ಮಾಲೆಗಳನ್ನು ಬಲಾತ್ಕಾರವಾಗಿ ಸ್ವೀಕರಿಸಿದರು. ಮಾಲಾಧಾರಿಗಳಾದರು. ಅವರ ವಸ್ತ್ರಗಳೂ ನಾನಾವರ್ಣಗಳಿಂದ ಕೂಡಿದ್ದವು. ಹೊಳೆಯುವ ಕುಂಡಲಗಳನ್ನವರು ಧರಿಸಿದ್ದರು. ಜರಾಸಂಧನ ಅರಮನೆಯನ್ನು ಮುಟ್ಟಿದರು.

ಅವರು ನಡೆದು ಬರುತ್ತಿದ್ದ ರೀತಿಯು ಹೇಗಿತ್ತೆಂದರೆ, ಹಸುಗಳು ಎಲ್ಲೆಲ್ಲಿವೆಯೆಂದು ಗೋಶಾಲೆಯನ್ನು ನೋಡಿಕೊಂಡು ನಡೆಯುತ್ತಿರುವ ಹಿಮಾಲಯದ ಸಿಂಹಗಳಂತೆ. ಯುದ್ಧಗಳಲ್ಲಿ ಶೋಭಿಸುವ ಅವರ ತೋಳ್ಗಳು ಈಗ ಹೇಗಿದ್ದವು? ಚಂದನವನ್ನೂ ಅಗುರುವನ್ನೂ ಲೇಪಿಸಿದ್ದ ಅವು ಶಾಲಾ-ಸ್ತಂಭಗಳ ಹಾಗೆ, ಎಂದರೆ ಮಹಾಗೃಹದ ಕಂಭಗಳಂತೆ, ಇದ್ದುವು. ಒಟ್ಟಿನಲ್ಲಿ, ವಿಶಾಲವಕ್ಷಃಸ್ಥಳವುಳ್ಳವರೂ ಆನೆಗಳಂತಿರುವವರೂ ಆದ ಅವರನ್ನು ಕಂಡು ಮಾಗಧರಿಗೆ, ಎಂದರೆ ಮಗಧ-ದೇಶದ ಪ್ರಜೆಗಳಿಗೆ, ವಿಸ್ಮಯವೇ ಉಂಟಾಯಿತು.

ಜನಗಳು ಕಿಕ್ಕಿರಿದಿದ್ದ ಅಲ್ಲಿಯ ಮೂರು ಕಕ್ಷಗಳನ್ನು ದಾಟಿದರು, ಆ ಮೂವರು ಮಹಾಪುರುಷರು. ನಿರ್ಭಯರಾಗಿದ್ದ ಅವರು ಅಭಿಮಾನಿಗಳಾಗಿಯೇ ಜರಾಸಂಧನನ್ನು ಸಮೀಪಿಸಿದರು. ಜರಾಸಂಧನೂ ಅವರನ್ನು ಆದರದೊಂದಿಗೇ ಸತ್ಕರಿಸಿದನು. ಪಾದ್ಯ-ಮಧುಪರ್ಕಗಳಿಗೆ, ಗೋದಾನಕ್ಕೆ, ಅರ್ಹರಾದವರು ಅವರು. ಪ್ರತ್ಯುತ್ಥಾನ ಮಾಡಿ, ಎಂದರೆ ತಾನೇ ಎದ್ದು ಬಂದವನಾಗಿ, ಅವರಿಗೆ ವಿಧ್ಯನುಸಾರವಾದ ಆತಿಥ್ಯವನ್ನು ಸಲ್ಲಿಸಿದನು, ಜರಾಸಂಧ.

"ತಮಗೆ ಸ್ವಾಗತ" ಎಂದನು. ಆದರೆ ಭೀಮಾರ್ಜುನರು ಮೌನದಿಂದಿದ್ದರು. ಅವರಲ್ಲಿ ಕೃಷ್ಣನೇ ಎಷ್ಟಾದರೂ ಮಹಾಬುದ್ಧಿಶಾಲಿಯಲ್ಲವೇ? ಆತನೇ ಮಾತನಾಡಿದನು. "ರಾಜಶ್ರೇಷ್ಠನೇ, ಇವರಿಬ್ಬರೂ ನಿಯಮದಲ್ಲಿರುವವರು, ಎಂದರೆ ಮೌನವ್ರತದಲ್ಲಿರತಕ್ಕವರು. ಮಧ್ಯರಾತ್ರಿಯು ಕಳೆದ ನಂತರವೇ ನಿನ್ನೊಡನೆ ಇವರು ಮಾತನಾಡತಕ್ಕವರು" – ಎಂದನು.

ತದನುಸಾರ ಯಜ್ಞಗೃಹದಲ್ಲುಳಿದುಕೊಳ್ಳಲು ಅವರಿಗೊಂದು ವ್ಯವಸ್ಥೆ ಮಾಡಿ ತನ್ನ ಅಂತಃಪುರಕ್ಕೆ ತೆರಳಿದನು. ಅರ್ಧರಾತ್ರವು ಕಳೆಯಲು, ಆ ದ್ವಿಜರಿದ್ದೆಡೆಗೆ ತೆರಳಿದನು.

ಆ ರಾಜನ ಈ ವ್ರತವು ಜಗದ್-ವಿಶ್ರುತವಾಗಿದ್ದಿತು; ಏನೆಂದರೆ, ಸ್ನಾತಕಬ್ರಾಹ್ಮಣರು ಬಂದರೆಂದರೆ - ಅದು ಅರ್ಧರಾತ್ರವೇ ಆಗಿದ್ದರೂ ಸಹ -ಅವರನ್ನು ತಾನೇ ಎದುರ್ಗೊಂಡು  ಸ್ವಾಗತಿಸುತ್ತಿದ್ದನು.

ಬಂದಿದ್ದವರ ವೇಷವೇ ಅಪೂರ್ವವಾಗಿದ್ದರಿಂದ, ಜರಾಸಂಧನು ವಿಸ್ಮಯದಿಂದಲೇ ಅವರ ಬಳಿ ಸಾರಿದನು. ಆತನನ್ನು ಕಾಣುತ್ತಲೇ, "ಸ್ವಸ್ತ್ಯಸ್ತು", "ನಿನಗೆ ಕಲ್ಯಾಣವಾಗಲಿ", ಎಂದು ಅವರೆಂದರು; ಪರಸ್ಪರ ಮುಖ ನೋಡಿಕೊಂಡರು. ಬ್ರಾ ಹ್ಮಣವೇಷದಲ್ಲಿದ್ದ ಆ ಪಾಂಡವ-ಯಾದವರಿಗೆ "ಕುಳಿತುಕೊಳ್ಳಿ" ಎಂದು ಹೇಳಿದನು. 

ಸೂಚನೆ : 15/3/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.


ಕೃಷ್ಣಕರ್ಣಾಮೃತ 98 ಜಗದೊಡೆಯನಾದರೂ ಮುಗ್ಧಜನ-ಸುಲಭ, ಈ ನಂದನಂದನ (Krishakarnamrta 98)


ಲೇಖಕರು :
 ಪ್ರೊ. ಕೆ. ಎಸ್. ಕಣ್ಣನ್ 

(ಪ್ರತಿಕ್ರಿಯಿಸಿರಿ lekhana@ayvm.in)


ನನ್ನ ಚಿತ್ತವು ಇಲ್ಲಿ ವಾಸ ಮಾಡಲಿ - ಎನ್ನುತ್ತಾನೆ, ಲೀಲಾಶುಕ. ಎಲ್ಲಿ? ನಂದಗೋಪನ ಸೂನುವಿನಲ್ಲಿ. ಸೂನುವೆಂದರೆ ಮಗ. ನಂದನಂದನನಲ್ಲಿ ನೆಲೆಸಬೇಕು ನನ್ನ ಮನಸ್ಸು.

ಅದೂ ಹೇಗೆ? ಆತನ ಪದಗಳಿಗೆ ಆಯತ್ತವಾಗಿರಬೇಕು, ಅದರ ವೃತ್ತ; ಆ ಪರಿಯಲ್ಲಿ ನೆಲೆಸಬೇಕು. ವೃತ್ತವೆಂದರೆ ವರ್ತನೆ, ನಡೆ. ಆಯತ್ತವೆಂದರೆ ಅಧೀನ. ಶ್ರೀಕೃಷ್ಣನ ಚರಣಗಳಿಗೆ ಅಧೀನವಾಗಿಯೇ ಇರಬೇಕು ಮನದ ನಡೆ. ಎಂದರೆ ನನ್ನ ಚಿತ್ತದ ವೃತ್ತವು ಶ್ರೀಕೃಷ್ಣಚರಣಗಳ ನಡೆಗೆ ಅನುಸಾರಿಯಾಗಿರಬೇಕು.

ಅದೇನು ವಿಶೇಷ ಕೃಷ್ಣನಲ್ಲಿರುವುದು, ನನ್ನ ಮನಸ್ಸನ್ನೆಲ್ಲ ಸಮರ್ಪಿಸಿಬಿಡಲು ಅರ್ಹವೆನಿಸಲು? ಐದು ಸಾರ್ಥಕವಾದ ವಿಶೇಷಣಗಳಿಂದ ಅದನ್ನು ಹೇಳುತ್ತಾನೆ.

ಮೊದಲನೆಯದಾಗಿ ಆತನು ವ್ರಜಯುವತಿಯರಿಗೆ, ಎಂದರೆ ಗೋಪನಾರಿಯರಿಗೆ, ಸಹಾಯನಾಗಿದ್ದವನು. ಏನು ಹಾಗೆಂದರೆ?

ಕಷ್ಟ-ಸುಖಗಳಲ್ಲಿ ಯಾರು ಜೊತೆಯಾಗಿರುವರೋ ಅವರೇ ನಿಜವಾದ ಸ್ನೇಹಿತರು, ಅಲ್ಲವೇ? ಜೊತೆಗಿರುವವನೆಂದರೆ ಸುಮ್ಮನೆ, ಎಂದರೆ ನಿಷ್ಪ್ರಯೋಜಕವಾಗಿ, ಇದ್ದುಬಿಡುವವನಲ್ಲ. ಒಂದಲ್ಲ ಒಂದು ಬಗೆಯಲ್ಲಿ ಉಪಕಾರಿಯಾಗಿರುವನೆಂದೇ ಅರ್ಥ.

ಅದು ಹೇಗೆ ತೋರಿಕೊಂಡಿದೆ, ಬೇರೆ ಬೇರೆ ಭಾಷೆಗಳಲ್ಲಿ – ಎಂಬುದನ್ನೊಮ್ಮೆ ಗಮನಿಸಬೇಕು. ಸಂಸ್ಕೃತದಲ್ಲಿ ಸಹಾಯನೆಂದರೆ ಜೊತೆಗಾರ. ಕನ್ನಡದಲ್ಲಿ ಸಹಾಯವೆಂದರೆ ಉಪಕಾರ. ಒಂದು ಭಾಷೆ ಕಾರಣದ ಅರ್ಥವನ್ನು ಹೇಳಿತು, ಮತ್ತೊಂದು ಭಾಷೆ ಕಾರ್ಯದ ಅರ್ಥವನ್ನು.

ಸರಿ, ಗೋಪಬಾಲಿಕೆಯರಿಗೆ ಈತನು ಜೊತೆಗಾರನಾಗಿದ್ದನೆಂದಾದರೆ, ಅಷ್ಟು ಮಾತ್ರದಲ್ಲಿ ಹೆಚ್ಚುಗಾರಿಕೆಯೇನಿದೆ? ಇದೆ. ಅದು ಹೀಗೆ: ತಾನು ಕ್ಷತ್ರಿಯನಾಗಿ, ರಾಜವಂಶಕ್ಕೆ ಸೇರಿದವನಾಗಿ, ಕೆಲಕಾಲದಲ್ಲಿ ರಾಜಪದವಿಯನ್ನೇ ಹೊಂದುವವನಿದ್ದನು; ಹಾಗಿದ್ದರೂ ಸರಳತೆ ತುಂಬಿದವನಾಗಿದ್ದನು!

ದನಗಾಹಿಗಳ ಗೊಲ್ಲತಿಯರು ಯಾವ ಲೆಕ್ಕ ತನಗೆ, ತನ್ನ ಅಂತಸ್ತಿಗೆ? - ಎಂದು ಅವರನ್ನು ತಾತ್ಸಾರಮಾಡಲಿಲ್ಲ, ತಿರಸ್ಕರಿಸಲಿಲ್ಲ. ಅವರ ಮುಗ್ಧತೆಗೆ ಮನಸೋತು ಅವರಿಗೆ ಸುಲಭನಾಗಿದ್ದನು.

ರಾಜ-ವಂಶದ ಮಾತೇನು? ತಾನು ಲೋಕ-ಪ್ರಭುವೆಂಬುದನ್ನೂ ಎಳಸಿನಲ್ಲೇ ಅರಿತಿದ್ದವನು ಅವನು. ಹಾಗಿದ್ದೂ ಸಹ ಅತ್ಯಂತ- ಸಾಧಾರಣವೆನಿಸುವವರೊಂದಿಗೂ ಕ್ರೀಡಿಸಿದನು. "ಶುದ್ಧ-ಚಿತ್ತರಿಗೆಲ್ಲರಿಗೂ ತಾನು ಲಭ್ಯ" - ಎನ್ನುವುದನ್ನು ಹೀಗೆ ಎಲ್ಲ ಬಗೆಗಳಿಂದ ತೋರಿಸಿಕೊಟ್ಟನಲ್ಲವೇ?

ಅವರಿಗೆ ಒಲಿದಂತೆ ನನಗೂ ಒಲಿಯಬಾರದೆ? ಶುದ್ಧ-ಮನಸ್ಕರಿಗೆಲ್ಲ ತನ್ನ ಕರಾವಲಂಬವನ್ನಿತ್ತ ಈ ಪರಮ-ಪ್ರಭು ನನ್ನ ವಿಷಯದಲ್ಲೂ ಅನುಗ್ರಹ-ಪರನಾಗಲಿ - ಎಂಬ ಕೋರಿಕೆಯೇ, ಲೀಲಾಶುಕನ ಅರಿಕೆಯೇ, ಇದು.

ಇನ್ನು ಕೃಷ್ಣನ ಮೈಕಟ್ಟು ಹೇಗಿದೆ? ಯೌವನೋಲ್ಲಾಸಿಯಗಿದೆ. ಯೌವನದಲ್ಲಿ ಉಲ್ಲಾಸಿ - ಎಂದರೆ ಯೌವನವು ತುಂಬಿತುಳುಕುವ ವಯಸ್ಸು. ಆಗಲ್ಲವೆ, ಮುಖದಲ್ಲಿ ಗೆಲವು, ಚಲನ-ವಲನಗಳಲ್ಲಿ ಚಿಮ್ಮುವ ಉತ್ಸಾಹ, ಕಣ್ಣಿನಲ್ಲಿ ಕಾಂತಿ ಮುಂತಾದುವು ಇರುವುದು?

ಮೋಸದ ಸೌಂದರ್ಯದವರು ಲೋಕದಲ್ಲಿ ರಬಹುದು. ಆದರಿದೋ ಶುದ್ಧ-ಸ್ವರೂಪನಾದ ಈತನ ಜವ್ವನದ ಸೊಬಗನ್ನು ಕೇಳಬೇಕೇ? ಇಂತಹ ಶರೀರ-ಸೌಷ್ಠವವನ್ನು ತುಂಬಿಕೊಂಡಿರುವ ಮೈಯೆಂದರೆ, ಅದರ ಧ್ಯಾನವು ರಸ-ವರ್ಧಕವೇ ಸರಿ. ಇದು ಎರಡನೆಯ ವಿಶೇಷ.

ಮೂರನೆಯದೆಂದರೆ, ಆತನು ಸಕಲ-ಶುಭಗಳ ವಿಲಾಸ. ಲೋಕದಲ್ಲಿ ಎಷ್ಟೋ ಮಂದಿ ಮಹಾಪುರುಷರಿರಬಹುದು. ಅವರಲ್ಲಿ ಏನೋ ಸಣ್ಣಪುಟ್ಟ ಓರೆಕೋರೆಗಳೂ ಇರಬಹುದು. ಅವು ನಮಗೆ ಅಕಸ್ಮಾತ್ತಾಗಿ ಗೋಚರಿಸಿದರೂ ಅವರ ಬಗ್ಗೆ ನಮ್ಮ ಚಿತ್ತದಲ್ಲಿ ಆದರವು ಕಡಿಮೆಯಾಗುವುದುಂಟು. ಎಂದೇ ಶುಭಗುಣ-ನಿಲಯನಾದವನೇ ಧ್ಯಾನಕ್ಕೆ ಶುಭಾಶ್ರಯನಾಗುವುದು - ಎನ್ನುವುದು.

ನಾಲ್ಕನೆಯದೆಂದರೆ, ಆತನ ಮೊಗದಲ್ಲಿಯ ಮಂದ-ಹಾಸ. ಮಂದ-ಹಾಸದಲ್ಲಿ ಹಲ್ಲುಗಳು ಕಿಂಚಿತ್ತಾಗಿ ಕಾಣಿಸಿಕೊಳ್ಳುವುವಷ್ಟೆ. ಹಲ್ಲುಗಳು ಬೆಳ್ಳಗಿದ್ದರೇ ಶೋಭೆಯಲ್ಲವೇ? ಕೃಷ್ಣನ ಹಲ್ಲುಗಳು ಹೇಗಿವೆ? ಅದಕ್ಕೆ ಎರಡು ಹೋಲಿಕೆಗಳನ್ನು ಕವಿ ಕೊಟ್ಟಿದ್ದಾನೆ: ಕುಂದ-ಮಂದಾರಗಳಂತೆ. ಕುಂದವೆಂದರೆ ಮೊಲ್ಲೆಹೂ. ಅದಕ್ಕೆ ಮನೋಹರ-ಮಹಾಮೋದಗಳೆಂಬ ಹೆಸರುಗಳೂ ಇವೆ. ಎಂದರೆ ನೋಡಲೂ ಚೆಂದ, ಸುಗಂಧವೂ ತುಂಬಿದೆ. ಸರಸ್ವತಿಯನ್ನೂಕುಂದದಂತೆ ಧವಳೆ ಎನ್ನುವರು. ಶುಕ್ರನನ್ನೂ ಅಷ್ಟೆ. ಹಯವದನನ ಹಸಿತಕ್ಕೂ ಅದೇ ಉಪಮೆ.

ಐದನೆಯದೆಂದರೆ ಆತನು ಮುನಿ-ಸರಸಿಜ-ಭಾನು. ಸರಸಿಜವೆಂದರೆ ಕಮಲ. ಮುನಿಗಳನ್ನೇ ಪದ್ಮಗಳೆಂದುಕೊಳ್ಳಿ. ಆ ತಾವರೆಗಳನ್ನು ಅರಳಿಸುವ ಸೂರ್ಯನಿವನು. ಸೂರ್ಯನ ಪ್ರಕಾಶವು ಬಿದ್ದರಲ್ಲವೇ ಕಮಲಗಳು ವಿಕಸಿಸುವುದು? ಅವುಗಳ ಸೌಂದರ್ಯ-ಸೌರಭ್ಯಗಳೂ ಮಧುರಮಕರಂದವೂ ಪ್ರಕಾಶಕ್ಕೆ ಬರುವುದು?

ಎಂತಹ ಮೋಸಗಾರ ನಮ್ಮ ಕೃಷ್ಣ! ಮೇಲ್ನೋಟಕ್ಕೆ ಗೋಪೀಜನರೊಂದಿಗೆ ವಿಹಾರಿ, ವಿಲಾಸಿ; ಒಳನೋಟಕ್ಕೆ ಮುನಿಕಮಲ-ವಿಕಾಸಕ್ಕೆ ಕಾರಣಭೂತನಾದವನು!

ವ್ರಜ-ಯುವತಿ-ಸಹಾಯೇ ಯೌವನೋಲ್ಲಾಸಿ-ಕಾಯೇ/

ಸಕಲ-ಶುಭ-ವಿಲಾಸೇ ಕುಂದ-ಮಂದಾರ-ಹಾಸೇ|

ನಿವಸತು ಮಮ ಚಿತ್ತಂ ತತ್-ಪದಾಯತ್ತ-ವೃತ್ತಂ

ಮುನಿ-ಸರಸಿಜ-ಭಾನೌ ನಂದಗೋಪಸ್ಯ ಸೂನೌ ||

ಈ ಶ್ಲೋಕದಲ್ಲಿ ಯತಿಸ್ಥಾನಗಳಲ್ಲಿಯ ಅನುಪ್ರಾಸವು ಮನೋಹರವಾಗಿದೆ: ಹಾಯೇ-ಕಾಯೇ; ಲಾಸೇ-ಹಾಸೇ; ಚಿತ್ತಂ-ವೃತ್ತಂ; ಭಾನೌ-ಸೂನೌ. ಕುಂದ-ಮಂದಾರದಲ್ಲಿಯೂ ಅದೇ ಇದೆ.

 

*****
ಮತ್ತೊಂದು ಶ್ಲೋಕ.

ಆ ಕೇಶವನು ನಮ್ಮನ್ನು ಕಾಪಾಡಲಿ - ಎಂದು ಪ್ರಾರ್ಥಿಸುತ್ತಾನೆ, ಲೀಲಾಶುಕ. ಕೇಶವನ ಹಿರಿಮೆಯು ಎಂತಹುದು? – ಎಂಬುದನ್ನು ಅದಕ್ಕಾಗಿ ಐದು ಬಗೆಗಳಲ್ಲಿ ನಿರೂಪಿಸುತ್ತಾನೆ.

ನಾರಾಯಣನ ನಾಭಿಯಿಂದ ಬ್ರಹ್ಮನು ಜನಿಸಿದನಷ್ಟೆ? ಅದನ್ನೇ ಕವಿಯು ಕಾವ್ಯಾತ್ಮಕವಾಗಿ ಹೇಳುತ್ತಾನೆ: ವಿಷ್ಣುವಿನ ನಾಭಿಯೇ ಒಂದು ಸರಸೀರುಹ, ಎಂದರೆ ಕಮಲ; ಮತ್ತು ಅದರ ಪುಟದೊಳಗೆ ವಿಧಿಯು ಭೃಂಗದಂತಿದ್ದಾನೆ. ಭೃಂಗವೆಂದರೆ ದುಂಬಿ. ಪುಟವೆಂದರೆ ಪೊಳ್ಳಾಗಿರುವ ಭಾಗ, ಕುಳಿಯಂತಹ ಎಡೆ; ಇಲ್ಲಿ ಕಮಲದ ಕೋಶ. ಬ್ರಹ್ಮನು ವಿಷ್ಣುವಿನ ನಾಭಿಕಮಲದೊಳಗಣ ಕೋಶದಲ್ಲಿ ಒಂದು ದುಂಬಿಯಂತೆ.

ಎರಡನೆಯದಾಗಿ, ವಿಷ್ಣುವಿನ ವಕ್ಷಸ್ಸು ಕಮಲೆಗೆ, ಎಂದರೆ ಲಕ್ಷ್ಮಿಗೆ, ವಿಲಾಸ-ಸದನ. ಎಂದರೆ ಕೇಲಿ-ಗೃಹ, ಅರ್ಥಾತ್ ಕ್ರೀಡಾ-ಮಂದಿರ.

ಮೂರನೆಯದಾಗಿ, ಆ ವಿಷ್ಣುವಿನ ಎರಡು ಕಣ್ಣುಗಳೇ ಇಂದು ಮತ್ತು ಇನಗಳು. ಇಂದುವೆಂದರೆ ಚಂದ್ರ; ಇನನೆಂದರೆ ಸೂರ್ಯ. ಸೂರ್ಯ-ಚಂದ್ರರೇ ವಿಷ್ಣುವಿನ ಕಣ್ಣುಗಳು - ಎಂದು ವಿಷ್ಣು-ಸಹಸ್ರನಾಮವೂ ಹೇಳುವುದಲ್ಲವೇ? ಸೂರ್ಯ-ಚಂದ್ರರಿಂದಲೇ ಜಗತ್ತಿಗೆ ಬೆಳಕು. ಕಾಲ-ಚಕ್ರದ ಹಗಲು-ರಾತ್ರಿಗಳು ಇವರಿಂದಲೇ ತಾನೆ?

ನಾಲ್ಕನೆಯದಾಗಿ, ವಿಷ್ಣುವಿನ ಪಾದಾರವಿಂದದಿಂದಲೇ ಗಂಗೆಯು ಹೊರಡುವುದು; ಅದುವೇ ಶಂಭುವಿಗೆ ಶಿರೋಭೂಷಣವೂ ಆಗಿರುವುದು. ಎಂದರೆ ತಲೆಗೆ ಅಲಂಕಾರ. ವಿಷ್ಣು-ಪಾದವು ಎಷ್ಟು ಶ್ರೇಷ್ಠವಾದುದೆಂದರೆ ಅಲ್ಲಿಂದ ಸ್ರವಿಸಿದ ಗಂಗೆಯು ಜಗತ್ಪಾವನಿಯೇ ಆದಳು. ಗಂಗೆಯ ಪಾವಿತ್ರ್ಯವೆಷ್ಟೆಂದರೆ ಶಿವ-ಶಿರಸ್ಸಿಗೂ ಅದು ಶೋಭೆಯನ್ನು ತಂದಿತು.

ಐದನೆಯದಾಗಿ, ಕೇಶವನಿರಲಿ, ಕೇಶವ-ನಾಮದ ಸ್ಮರಣೆಯೇ, ನಮ್ಮ ದುರಿತಗಳನ್ನು, ಎಂದರೆ ಪಾಪಗಳನ್ನು, ತೊಡೆದುಹಾಕಿಬಿಡುವುದು!

ಸಾರಾಂಶವಾಗಿ, ತ್ರಿಮೂರ್ತಿಗಳಲ್ಲಿ ಬ್ರಹ್ಮ-ಶಂಭುಗಳು ಅಸ್ತಿತ್ವ-ಶೋಭೆಗಳನ್ನು ಕೇಶವನಿಂದಲೇ ಪಡೆದರು. ಲಕ್ಷ್ಮೀ-ದೇವತೆಯು ಕೇಶವ-ವಕ್ಷೋವಿಹಾರಿಣಿ. ಕಾಲ-ತತ್ತ್ವದ ಎರಡು ರೂಪಗಳಾದ ಸೂರ್ಯ-ಚಂದ್ರರೇ ಕೇಶವನ ನೇತ್ರ-ದ್ವಯ. "ನಿನ್ನ ನಾಮದ ಬಲವೊಂದಿದ್ದರೆ ಸಾಕೋ!" ಎನ್ನಿಸಿಕೊಳ್ಳುವಂತಹ ದಿವ್ಯ-ನಾಮ ಕೇಶವನದು.

ಇಷ್ಟೊಂದೆಲ್ಲಾ ಮಹಿಮೆಗಳನ್ನು ಹೊಂದಿರುವವನನ್ನು "ಕಾಪಾಡು!" - ಎಂದು ಕೇಳಿಕೊಳ್ಳುವುದು ಸಹಜವೇ ತಾನೆ?

ಶ್ಲೋಕ ಹೀಗಿದೆ:

ಯನ್ನಾಭೀ-ಸರಸೀರುಹಾಂತರ-ಪುಟೇ ಭೃಂಗಾಯಮಾಣೋ ವಿಧಿಃ /
ಯದ್-ವಕ್ಷಃ ಕಮಲಾ-ವಿಲಾಸ-ಸದನಂ ಯಚ್ಚಕ್ಷುಷೀ ಚೇಂದ್ವಿನೌ |
ಯತ್-ಪಾದಾಬ್ಜ-ವಿನಿಃಸೃತಾ ಸುರ-ನದೀ ಶಂಭೋಃ ಶಿರೋಭೂಷಣಂ /
ಯನ್ನಾಮ-ಸ್ಮರಣಂ ಧುನೋತಿ ದುರಿತಂ ಪಾಯಾತ್ ಸ ನಃ ಕೇಶವಃ ||

ಸೂಚನೆ :14/3/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.  

Sunday, March 8, 2026

ಪ್ರಶ್ನೋತ್ತರ ರತ್ನಮಾಲಿಕೆ 56 (Prasnottara Ratnamalike 56)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಕಲಿಕಾಲದಲ್ಲೂ ಕುಲ ಮತ್ತು ಶೀಲದಲ್ಲೂ ಸದಾ ಅಚಲನಾದವನು ಯಾರು ?

ಉ. ಸಜ್ಜನ ಮಹಾಪುರುಷ

ಈ ಪ್ರಶ್ನೆಯು ಬಹಳ ವಿಶಿಷ್ಟವಾದದ್ದು. ಏಕೆಂದರೆ ಕಾಲ ಮತ್ತು ವ್ಯಕ್ತಿಯ ನಡುವೆ ಇರುವ ಸಂಬಂಧವನ್ನು ವಿವರಿಸುವ ಪ್ರಶ್ನೋತ್ತರ ಇದಾಗಿದೆ. ಕಾಲವೆಂಬುದು ಹೇಗೆ ವ್ಯಕ್ತಿಯ ಮೇಲೆ ಪ್ರಭಾವವನ್ನು ಬೀರಬಲ್ಲದು? ಎಂಬುದು ಇಲ್ಲಿದೆ. ಪುರುಷನೊಬ್ಬನು ತನ್ನ ಶೀಲ ಮೊದಲಾದ ಗುಣಗಳನ್ನು ಅನೇಕ ಕಾರಣಗಳಿಂದ ಬದಲಿಸುತ್ತಾನೆ. ಎಲ್ಲವೂ ಇದ್ದಂತೆ ಇರುವುದಿಲ್ಲ. ವ್ಯಕ್ತಿಯ ಕುಲ ಮತ್ತು ಶೀಲಾ ಎಂಬುದನ್ನು ಬದಲಿಸಬಹುದು. ಅಂತಹ ಶಕ್ತಿ ಯಾವುದಕ್ಕೆ ಇದೆ? ಎಂದರೆ ಕಾಲಕ್ಕೆ ಇದೆ ಎಂಬುದು ಇಲ್ಲಿನ ಆಶಯ. ಹಾಗಾಗಿ ಅಂತಹ ಕಾಲ ಮತ್ತು ವ್ಯಕ್ತಿ ನಡುವೆ ಸಂಬಂಧ ಹೇಗಿದೆ? ಎಂಬುದನ್ನು ಇಲ್ಲಿ ತಿಳಿಯಬಹುದಾಗಿದೆ

ಕೃತ ಪ್ರೇತ ದ್ವಾಪರ ಮತ್ತು ಕಲಿ ಎಂಬುದಾಗಿ ಕಾಲ ನಾಲ್ಕು ಬಗೆ. ಈ ನಾಲ್ಕರ ಹಿಂದಿರುವ ವಿಷಯವಾದರೂ ಏನು? ಈ ನಾಲ್ಕರ ಪ್ರಭೇದಕ್ಕೆ ಕಾರಣವೇನು? ಈ ಪ್ರಭೇದವು ಹೇಗೆ ವ್ಯಕ್ತಿಯ ಮೇಲೆ ಪ್ರಭಾವವನ್ನು ಬೀರುತ್ತದೆ? ಅತ್ಯಂತ ಪ್ರಧಾನವಾಗಿ ಯುಗ ಎಂಬ ಭೇದವು ಧರ್ಮದ ಹಿನ್ನೆಲೆಯಲ್ಲಿ ಬಂದಿದೆ. ಕೃತಯುಗದಲ್ಲಿ ಧರ್ಮವು ಪೂರ್ಣವಾಗಿ ಇರುತ್ತದೆ. ಪ್ರೇತಾಯುಗದಲ್ಲಿ ಅದೇ ಧರ್ಮವು ಕಾಲು ಭಾಗ ನಷ್ಟವಾಗುತ್ತದೆ. ಅಂದರೆ ಮುಕ್ಕಾಲು ಭಾಗ ಧರ್ಮ ಕಾಲು ಭಾಗ ಅಧರ್ಮ. ದ್ವಾಪರಯುಗದಲ್ಲಿ ಅರ್ಧ ಧರ್ಮ ಮತ್ತು ಅರ್ಧ ಅಧರ್ಮ. ಕಲಿಯುಗದಲ್ಲಿ ಮುಕ್ಕಾಲು ಭಾಗ ಅಧರ್ಮ ಕಾಲುಭಾಗ ಧರ್ಮ ಎಂಬುದಾಗಿ ಈ ಯುಗದ ಸ್ವಭಾವವನ್ನು ಧರ್ಮದ ಆಧಾರದ ಮೇಲೆ ಹೇಳಲಾಗಿದೆ. ಸೃಷ್ಟಿಯಲ್ಲಿ ಧರ್ಮದ ಕಾರಣದಿಂದ ಈ ವ್ಯತ್ಯಾಸವನ್ನು ಕಾಣಬಹುದು. ಆದರೆ ಈ ಪ್ರಶ್ನೆಯಲ್ಲಿ ಹೇಳಲಾದ ಸಜ್ಜನ ಅಥವಾ ಮಹಾಪುರುಷನ ಕುಲದಲ್ಲಾಗಲಿ ಅಥವಾ ಶೀಲದಲ್ಲಾಗಲಿ ಈ ಯುಗದ ಪರಿಣಾಮವಾಗಿ ಅಥವಾ ಕಾಲದ ಪರಿಣಾಮವಾಗಿ ಅವನಲ್ಲಿ ಯಾವ ವ್ಯತ್ಯಾಸನ್ನೂ ಕಾಣಲಾಗದು. ಕುಲ ಮತ್ತು ಶೀಲ ಇವೆರಡೂ ಪರಿವರ್ತಿತವಾಗುವುದು ಸಾಮಾನ್ಯವಾಗಿ ಬಹಳ ಕಷ್ಟ ಸಾಧ್ಯ. ಅಂದರೆ ಒಬ್ಬ ವ್ಯಕ್ತಿಯ ಪರಿವರ್ತನೆಯನ್ನು ಅವನ ಕುಲಶೀಲದಲ್ಲಿ ನೋಡಬಹುದು. ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಈ ಎರಡು ಮಾನದಂಡಗಳಿಂದಲೇ ಅಳೆಯುವುದುಂಟು. ವ್ಯಕ್ತಿ ಹೇಗಿದ್ದಾನೆ? ಎಂದರೆ ಅವನ ಕುಲವನ್ನು ಮತ್ತು ಶೀಲವನ್ನು ಪ್ರಶ್ನಿಸುವುದುಂಟು. ಮಹಾಪುರುಷನು ತನ್ನ ಕುಲಕ್ಕೆ ಕಳಂಕ ಬಾರದ ರೀತಿಯಲ್ಲಿ ವರ್ತಿಸುತಾನೆ.  ಕಾಲದಲ್ಲಿ ಎಷ್ಟೇ ವೈಷಮ್ಯ ಕಂಡುಬಂದರೂ ಆತ ಕುಲದಲ್ಲೂ ಮತ್ತು ಶೀಲದಲ್ಲೂ ಆವಿಚಲಿತನಾಗಿಯೇ ಇರುತ್ತಾನೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಶ್ರೀರಾಮಚಂದ್ರ. ಆತ ತನ್ನ ಕುಲಕ್ಕೆ ಬರುವ ಕಳಂಕವನ್ನು ತಪ್ಪಿಸುವುದಕೋಸ್ಕರ ಸೀತಾಪರಿತ್ಯಾಗದಂತಹ ಕಾರ್ಯಗಳನ್ನು ತನ್ನ ಜೀವನದಲ್ಲಿ ಮಾಡುತ್ತಾನೆ. ಚಿಕ್ಕ ಸಂಗತಿಯನ್ನು ಅವಗಣಿಸದೆ ಪ್ರತಿಯೊಂದುಕ್ಕೂ ಮಾನ್ಯತೆಯನ್ನು ಕೊಡುವುದನ್ನು ಕಾಣಬಹುದು. ಅಂದರೆ ಯಾವುದೇ ನಿಮಿತ್ತವೂ ಮಹಪುರುಷನನ್ನು ಕದಲಿಸುವುದಿಲ್ಲ ಎಂದರ್ಥ. ಮಹಾಪುರುಷನ ಲಕ್ಷಣವಿದಲ್ಲವೇ?

ಸೂಚನೆ : 8/3/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 178 ರಾಕ್ಷಸನ ಚರ್ಮದಿಂದಾದ ನಗಾರಿ ( Vyaasa Vikshita 178)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 

(ಪ್ರತಿಕ್ರಿಯಿಸಿರಿ lekhana@ayvm.in)



ಜರಾಸಂಧವಧೆಗಾಗಿ ಕೃಷ್ಣಾರ್ಜುನ-ಭೀಮಸೇನರು ಮಗಧ-ದೇಶಕ್ಕೆ ಪ್ರಯಾಣಿಸಿದರಷ್ಟೆ. ಮಗಧವನ್ನು  ಸಮೀಪಿಸುತ್ತಲೇ ಕೃಷ್ಣನು ಅದರ ಸೊಬಗನ್ನು ತಾನೇ ವರ್ಣಿಸಿದನು:

"ಈ ಪಂಚ-ಪರ್ವತಗಳು ಹೇಗಿವೆ! ಮಹಾ-ಶಿಖರಗಳನ್ನುಳ್ಳ ಇವು ತಂಪನೆಯ ನೆರಳುಳ್ಳ ಮರಗಳಿಂದ ತುಂಬಿವೆ. ಇವೈದೂ ಒಟ್ಟಿಗೆ ಸೇರಿ, ಪರಸ್ಪರ ಅಂಟಿಕೊಂಡಿದ್ದು, ಈ ಗಿರಿವ್ರಜ-ನಗರವನ್ನು ಕಾಪಾಡುತ್ತಿರುವಂತಿದೆಯಲ್ಲವೇ? ಮರದ ಕೊಂಬೆಗಳ ಕೊನೆಗಳನ್ನು ಹೂಗಳು ದಟ್ಟವಾಗಿ ಸುತ್ತುವರೆದಿವೆ. ಮತ್ತು ಆ ಹೂಗಳಾದರೂ ಮನೋಹರವೂ ಸುಗಂಧಭರಿತವೂ ಆಗಿವೆ; ಕಾಮಿಜನರಿಗೆ ಪ್ರಿಯವೆನಿಸುವ ಲೋಧ್ರಗಿಡಗಳ ಕಾಡುಗಳಿಂದ ತುಂಬಿವೆ.

ಕಠೋರವ್ರತ-ಪಾಲಕರಾದ ಗೌತಮ-ಮಹರ್ಷಿಗಳು ಶೂದ್ರ-ಸ್ತ್ರೀಯಾದ ಔಶೀನರಿಯಲ್ಲಿ ಕಾಕ್ಷೀವಂತ ಮೊದಲಾದ ಮಕ್ಕಳನ್ನು ಪಡೆದದ್ದು ಈ ಎಡೆಯಲ್ಲಿಯೇ. ಅದೇ ಕಾರಣಕ್ಕೇ ಅವರು ಇಲ್ಲೇ ಇದ್ದು ಮಗಧ-ದೇಶದ ರಾಜರನ್ನು ಅನುಗ್ರಹಿಸುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಅಂಗದೇಶ, ವಂಗದೇಶ ಮುಂತಾದ ದೇಶಗಳ ಮಹಾಬಲಶಾಲಿಗಳಾದ ರಾಜರುಗಳು ಇಲ್ಲಿಗೆ ಬಂದು ಸಂತೋಷವಾಗಿ ಇರುತ್ತಿದರು.

ಅರ್ಜುನ, ನೋಡು ಈ ಆಕರ್ಷಕವಾದ ಪಿಪ್ಪಲಗಳ ಕಾಡುಗಳನ್ನು ಹಾಗೂ ಶುಭವಾದ ಲೋಧ್ರಗಳ ಕಾಡುಗಳನ್ನು. ಇವೆಲ್ಲವೂ ಗೌತಮರ ವಾಸಸ್ಥಾನಕ್ಕೆ ಸಮೀಪದಲ್ಲೇ ಹುಟ್ಟಿ ಬೆಳೆದುಕೊಂಡಿವೆ. ಈ ಸ್ಥಾನಕ್ಕೆ ಮನುವಿನ ಅನುಗ್ರಹವಾಗಿದೆ. ಎಂದೇ ಇಲ್ಲಿ ಎಂದೂ ಕ್ಷಾಮವಿಲ್ಲ. ಬೇರೆ ಅನುಗ್ರಹಗಳೂ ಈ ಎಡೆಗೆ ಉಂಟು.

ಹೀಗೆ ಈ ನಗರವು ರಮಣೀಯವಾಗಿರುವುದಲ್ಲದೆ ದುರಾಧರ್ಷವೂ ಆಗಿದೆ – ಅರ್ಥಾತ್, ಯಾರೂ ಇದನ್ನು ಧ್ವಂಸಮಾಡಲಾಗದು. ಇಂತಹ ಜಾಗದಲ್ಲಿ ಅರ್ಥ-ಸಿದ್ಧಿಗಾಗಿ, ಎಂದರೆ ಅಪಾರವಾದ ಸಂಪತ್ತಿನ ಗಳಿಕೆಗಾಗಿ, ಜರಾಸಂಧನು ನೆಲೆಯೂರಿದ್ದಾನೆ.

ಇಂತಹವನ ಮನೆಗೇ ಹೋಗಿ ನಾವಿಂದು ಆತನ ದರ್ಪವನ್ನು ಅಡಗಿಸಲಿದ್ದೇವೆ" – ಎಂದನು.

ಹೀಗೆ ಮಾತುಕತೆಯಾದ ಮೇಲೆ ಕೃಷ್ಣಾರ್ಜುನ-ಭೀಮಸೇನರು ಮಗಧ-ರಾಜಧಾನಿಯತ್ತ ಸಾಗಿದರು. ಅಲ್ಲಿ ನಾಲ್ಕುವರ್ಣದ ಜನಗಳೂ ಇದ್ದರು. ಜನರೆಲ್ಲರೂ ಹೃಷ್ಟ-ಪುಷ್ಟರಾಗಿದ್ದರು - ಎಂದರೆ ಸಂತೋಷಭರಿತರೂ ಒಳ್ಳೆಯ ಪೋಷಣೆಯನ್ನು ಹೊಂದಿದ್ದವರೂ ಆಗಿದ್ದರು.

ಅನೇಕವಾದ ಉತ್ಸವಗಳಿಂದ ಕೂಡಿದ್ದ ಗಿರಿ-ವ್ರಜವನ್ನು ಅವರು ತಲುಪಿದರು. ಆದರೆ ಅವರು ನಗರದ್ವಾರದ ಮೂಲಕ ಅದನ್ನು ಪ್ರವೇಶಿಸಲಿಲ್ಲ. ಬದಲಾಗಿ ಚೈತ್ಯಕ-ಪರ್ವತವನ್ನು ಹತ್ತಿದರು. ಅದಾದರೂ ನಗರವಾಸಿಗಳಿಂದ ಪೂಜಿತವಾದದ್ದು, ಜನರಿಗೆ ಪ್ರಿಯವಾದದ್ದು.

ಹಿಂದೆ ಅಲ್ಲೊಬ್ಬ ರಾಕ್ಷಸನಿದ್ದ. ಆತನ ಹೆಸರು ಋಷಭ. ಆತ ಮಾಂಸಭಕ್ಷಕ. ಜರಾಸಂಧನ ತಂದೆಯಾದ ಬೃಹದ್ರಥ ಅಲ್ಲಿಗೆ ಹೋಗಿ ಆತನನ್ನು ಸಂಹರಿಸಿದ. ಆತನ ಚರ್ಮವನ್ನು ಸುಲಿಸಿದ. ಮೂರು ಭೇರಿಗಳನ್ನು ಮಾಡಿಸಿ, ಆ ಭೇರಿಗಳಿಗೆ ಆ ರಾಕ್ಷಸನ ಚರ್ಮವನ್ನು ಬಳಸಿದ. ಆ ಭೇರಿಗಳು ಹೇಗಿದ್ದುವೆಂದರೆ, ಒಮ್ಮೆ ಸದ್ದು ಮಾಡಿದರೆ ಸಾಕು, ಅವುಗಳ ಮೇಲೆ ದಿವ್ಯ-ಪುಷ್ಪಗಳ ವರ್ಷವಾಗುತ್ತಿತ್ತು. ಹಾಗಿದ್ದ ಆ ಮೂರೂ ನಗಾರಿಗಳನ್ನು ಭೀಮಾರ್ಜುನರು ಧ್ವಂಸ ಮಾಡಿದರು. ಅದಂತೂ ಜರಾಸಂಧನ ಶಿರಸ್ಸನ್ನು ಮೆಟ್ಟಿದ ಹಾಗೆಯೇ ಭಾಸವಾಯಿತು.

ಆ ಬಳಿಕ ಆ ಪರ್ವತದ ಶೃಂಗವನ್ನು ಹತ್ತಿದರು. ಆ ಶೃಂಗವು ಸ್ಥಿರವಾಗಿತ್ತು, ಸುವಿಪುಲವಾಗಿತ್ತು. ಗಂಧಗಳಿಂದಲೂ ಮಾಲೆಗಳಿಂದಲೂ ಅದನ್ನು ಅರ್ಚಿಸುವುದು ಅಲ್ಲಿಯ ಜನರ ಸಂಪ್ರದಾಯವಾಗಿತ್ತು. ಹಾಗೆ ಸುಪ್ರತಿಷ್ಠಿತವಾದ ಆ ಪರ್ವತ-ಶಿಖರವನ್ನು ತಮ್ಮ ವಿಪುಲವಾದ ಬಾಹುಗಳಿಂದಲೇ ಹೊಡೆದುರುಳಿಸಿದರು, ಆ ಮೂವರು ವೀರರು. ಬಳಿಕ ಹರ್ಷದಿಂದ ಕೂಡಿದವರಾಗಿ ಪುರ-ಪ್ರವೇಶವನ್ನು ಮಾಡಿದರು.


ಸೂಚನೆ : 8/3/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ 97 ಮುದ್ದಿನ ಮೊಗದವನ ಮುರಲಿಯ ಮಧುರಿಮೆ (Krishakarnamrta 97)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 

(ಪ್ರತಿಕ್ರಿಯಿಸಿರಿ lekhana@ayvm.in)




ಅದೆಂದು ಕಾಣುವೆ ಕೃಷ್ಣನನ್ನು? - ಎಂದು ಕೇಳುತ್ತಿದ್ದಾನೆ ಲೀಲಾಶುಕ. ಹೇಗಿದ್ದಾನೆ, ಈ ಕೃಷ್ಣ? ವೇಣುನಾದವನ್ನು ಮಾಡುತ್ತಿರುವ ಬಾಲಕೃಷ್ಣನಿವನು.

ಎಂತಹ ಬಾಲಕ? ಮಧುರಾಕೃತಿಗಳಲ್ಲಿ, ಎಂದರೆ  ಮಧುರವಾದ ಆಕಾರವನ್ನು ಹೊಂದಿರುವವರಲ್ಲಿ,  ಮೂರ್ಧಾಭಿಷಿಕ್ತನಾದವನು. ಬಾಲಕೃಷ್ಣನಿಗಿಂತಲೂ ಮಧುರವೇ? ಎಂದೇ ಆತನನ್ನು ಮಧುರಾಕೃತಿಯುಳ್ಳವರ ರಾಜನೆನ್ನುವುದು.

ಯಾರೂ ತನ್ನನ್ನೇ ತಾನು ಸುಮ್ಮನೆ "ರಾಜ" ಎಂದು ಕರೆದುಕೊಂಡುಬಿಡುವುದಲ್ಲ. ಕಿರೀಟಧರಿಸಿದವನೇ ರಾಜ ಅಲ್ಲವೇ? ಅದೂ ಅಲ್ಲ. ಯಾರಿಗೆ ಪಟ್ಟಾಭಿಷೇಕವಾಗಿದೆಯೋ ಆತನನ್ನೇ ರಾಜನೆನ್ನುವುದು. ಅಭಿಷೇಕವೆಂದರೆ ನೀರು ಸುರಿಯುವುದು. ಮಹಾರಾಜನಿಗೆ ಮೂರ್ಧಾಭಿಷೇಕವೇ ಸಲ್ಲುವುದು. ಎಂದರೆ, ಅಭಿಷೇಕದ ದಿನದಂದು ಎಲ್ಲ ಪುಣ್ಯನದಿಗಳಿಂದಲೂ ತೀರ್ಥವನ್ನು ತಂದು ಆತನ ತಲೆಯ ಮೇಲೆ ಮಂತ್ರಪೂರ್ವಕವಾಗಿ ಸುರಿಯುವುದಾಗಿರುತ್ತದೆ. ಮೂರ್ಧಾ ಎಂದರೆ ಶಿರಸ್ಸು. ಸಾರಾಂಶವಾಗಿ, ಮುದ್ದಾದ ಮಕ್ಕಳ ಅರಸನೆಂದರೆ, ಎಂದರೆ ಅಲ್ಲೂ ಮೂರ್ಧಾಭಿಷಿಕ್ತನೆಂದರೆ, ಈ ಬಾಲಮುಕುಂದನೇ ಸರಿ!

ಮಧುರವಾದ ಮುಖವುಳ್ಳವರೆಷ್ಟೋ ಮಂದಿಯಿರಬಹುದು. ಆದರೆ ಬಾಲಕೃಷ್ಣನ ಸೊಗಸೇ ಬೇರೆ ತೆರನಾದುದು. ಹೇಗೆ? ಕೃಷ್ಣನ ವಿಶಿಷ್ಟ-ಲಕ್ಷಣವೇ ಆತನ ಕೊಳಲಲ್ಲವೇ? ಕೊಳಲೆಂದರೆ ಸುಮ್ಮನೆ ಆ ವಾದ್ಯವನ್ನು ಕೈಯಲ್ಲಿ ಹಿಡಿದುಕೊಂಡಿರುವುದಲ್ಲ; ಕೊಳಲನ್ನು ನುಡಿಸುವುದು: ಅದರಿಂದ ಆಗ ಹೊರಡುವ ನಿನಾದಗಳೇ ವಿಶಿಷ್ಟವಾದವು.

ಅವು ಹೇಗಿವೆಯೆಂದು ಹೇಳಲು ಮೂರು ವಿಶೇಷಣಗಳನ್ನು ಬಳಸುತ್ತಾನೆ, ಕವಿ. ಆ ನಾದಗಳು ಸಮೃದ್ಧವಾಗಿವೆ. ಹೇಗೆ? ಅವಲ್ಲಿ ಆಕರ್ಷಕತ್ವವೆಂಬುದಿದೆ. ಅಷ್ಟೇ ಅಲ್ಲ. ಭಾವ-ರಾಗ-ತಾಳಗಳಿಂದ ಅವು ಕೂಡಿವೆ. ಭಾವ-ರಾಗ-ತಾಳ-ಸಮೇತವಾಗಿ ಅನೇಕರು ಕೊಳಲನ್ನು ನುಡಿಸಬಹುದು. ಆದರೆ ಈ ಬಾಲನ ಮುರಲೀ-ನಿನಾದದಲ್ಲಿ ಭಾವದ ಸಮೃದ್ಧಿಯೇ ಇದೆ, ಹಾಗೆಯೇ ರಾಗ-ಸಮೃದ್ಧಿಯೂ ಇದೆ, ಬಹುವಿಧ ತಾಳಗಳ ಯೋಜನೆಯಿದೆ. ಅಲ್ಲದೆ, ಭಾವಕ್ಕೆ ಹೊಂದುವ ರಾಗ, ಗಾನಕ್ಕೆ ಹೊಂದುವ ತಾಳ - ಇವುಗಳಲ್ಲಿ ವೈವಿಧ್ಯ-ಬಾಹುಲ್ಯಗಳೇ ನಾದಗಳು ಸಮೃದ್ಧವಾದವೆಂದು ತೋರಿಸುವುವು. ಜೊತೆಗೆ, ಸ್ವರವಿನ್ಯಾಸ-ವಿಶೇಷಗಳು, ಗಮಕಗಳು, ಉರುಟುಗಳು - ಇವುಗಳ ಸಮೃದ್ಧಿಯೂ ಸೇರಿವೆ. ಈ ವೈಶಿಷ್ಟ್ಯಗಳಲ್ಲದೆ, ಕೃಷ್ಣ-ಗಾನದ ಮತ್ತೂ ವಿಶೇಷವೆಂದರೆ, ಯೋಗ-ವೇದ್ಯವಾದ ಅಂತರ್ನಾದಗಳ ಪರಿಗಳೂ ಅದರಲ್ಲಿ ಮಿಳಿತವಾಗಿರುವುವು. ಹೀಗೆ ಸರ್ವಾರ್ಥದಲ್ಲೂ ಸಮೃದ್ಧವಾಗಿದೆ, ವೇಣು-ನಾದ.

ಎರಡನೆಯದಾಗಿ, ಆ ನಿನಾದಗಳು ಅಮೃತಾಯಮಾನವಾಗಿವೆ. ನಾದಗಳ ಸಮೃದ್ಧಿಯೇ ಇದಕ್ಕೆ ಕಾರಣವೆನ್ನಬಹುದು. ಏಕೆ? ಬೇರೆಬೇರೆಯವರಿಗೆ ಬೇರೆಬೇರೆ ರಾಗಗಳು ಇಷ್ಟವಾಗುವುವು. ತಾಳ-ವೈಚಿತ್ರ್ಯವೂ ನಾನಾಜನ-ರಂಜಕ. ಕೆಲವು ಭಾವಗಳನ್ನು ಯುಕ್ತವಾಗಿ ಬಿಂಬಿಸಿದಾಗ ಹಾರ್ದವಾಗಿ ಮೆಚ್ಚುವಂತಾಗುವುದು.

ಯೋಗಿಗಳಂತೂ ತಮ್ಮ ಉನ್ನತವಾದ ಯೋಗಾವಸ್ಥೆಗಳಲ್ಲಿ ಯಥಾರ್ಥವಾಗಿಯೇ ಅಮೃತಪಾನವನ್ನು ಮಾಡುವರು; ಅಂತಹವರ ಆ ಸ್ಥಿತಿಗಳಿಗೆ ಪೋಷಕವಾದ ನಾದ-ವಿಶೇಷಗಳೂ ಗಾನ-ವಿಶೇಷಗಳೂ ಇಲ್ಲಿ ಹೊಮ್ಮುವುವಾಗಿದ್ದು, ಎಲ್ಲರಿಗೂ ತಮ್ಮ ತಮ್ಮ ಸ್ತರಗಳಿಗನುಸಾರವಾಗಿ ಈ ವೇಣುನಾದಗಳು ಅಮೃತಮಯವಾಗಿ ತೊರುತ್ತವೆ.

ಮೂರನೆಯದಾಗಿ, ಈ ನಾದಗಳು ಆತಾಯಮಾನವಾಗಿವೆ, ಎಂದರೆ ವಿಸ್ತಾರಹೊಂದುತ್ತಿರುವಂತಹವಾಗಿವೆ. ಸ್ವರ-ಪ್ರಸ್ತಾರಗಳು, ಆಲಾಪನಗಳು, ತಾನಗಳು, ಪಲ್ಲವಿಗಳು - ಎಂದು ನಾನಾ-ಪ್ರಕಾರವಾಗಿ ಅವುಗಳ ವಿಸ್ತಾರ. ಮನುಷ್ಯರು ಮಾತ್ರವಲ್ಲದೆ ಪ್ರಾಣಿ-ಪಕ್ಷಿಗಳಿಗೂ ಆಕರ್ಷಣವಾಗುವ ಪರಿಗಳಲ್ಲಿ ವಿಸ್ತಾರಹೊಂದತಕ್ಕವು, ಅವು. ಕೃಷ್ಣನನ್ನು ಮನಸಾ ಯಾರು ಯಾರು ಮೆಚ್ಚುವರೋ ಅವರಿಗೆಲ್ಲಾ ಇಷ್ಟವಾಗುವಂತಿದೆ, ಈ ನಾದ-ವಿಸ್ತಾರ. ಕೃಷ್ಣನೇ ಯಾರನ್ನು ಉದ್ಧರಿಸಬೇಕೆಂದು ಬಯಸುವನೋ, ಅವರಿಗೆಲ್ಲ ರುಚಿಸುವಂತಾಗುವ ಸಂಚಾರಗಳನ್ನುಳ್ಳವು, ಅವು. ವಾಸ್ತವವಾಗಿ, ತ್ರಿಲೋಕಗಳ ಮೇಲೂ ಪರಿಣಾಮ ಬೀರುವಂತೆ ವಿಸ್ತಾರವಾಗತಕ್ಕವು. ಹೀಗೆ ನಾನಾಪ್ರಕಾರವಾಗಿದೆ ಆ ನಾದಗಳ ವಿಸ್ತಾರ.

ಅಂತಹ ಮುರಲೀ-ನಿನಾದಗಳಿಂದ ಲಕ್ಷಿತನಾದ ಬಾಲಕನಿವನು. ಹೀಗೆ ತನ್ನ ರೂಪಾಮೃತ-ನಾದಾಮೃತಗಳಿಂದ ಎಲ್ಲರನ್ನೂ ಬೆರಗುಗೊಳಿಸುವ ಈ ಬಾಲನನ್ನು ನಾನದೆಂದು ಕಾಣುವೆ? - ಎಂದು ಲೀಲಾಶುಕನು ಹಂಬಲಿಸುವುದರಲ್ಲಿ ಆಶ್ಚರ್ಯವಾದರೂ ಏನಿದೆ?

ಶ್ಲೋಕ ಹೀಗಿದೆ:
ಸಾರ್ಧಂ ಸಮೃದ್ಧೈಃ ಅಮೃತಾಯಮಾನೈಃ /
ಆತಾಯಮಾನೈಃ ಮುರಲೀ-ನಿನಾದೈಃ |
ಮೂರ್ಧಾಭಿಷಿಕ್ತಂ ಮಧುರಾಕೃತೀನಾಂ /
ಬಾಲಂ ಕದಾ ನಾಮ ವಿಲೋಕಯಿಷ್ಯೇ ||

***

ನನ್ನ ಹೃದಯದಲ್ಲಿ ಕೃಷ್ಣನು ಕ್ರೀಡಿಸಲಿ - ಎಂದು ಈ ಶ್ಲೋಕದಲ್ಲಿ ಲೀಲಾಶುಕನು ಪ್ರಾರ್ಥಿಸುತ್ತಾನೆ.

ಎಂತಹುದು ನನ್ನ ಹೃದಯ? ಅದು ಕಠಿನವಾಗಿದ್ದರೆ ಅತನ ಮೃದು-ಪಾದಗಳು ನೋಯವೇ? - ಎಂಬ ಪ್ರಶ್ನೆಯು ಬರಬಹುದಲ್ಲವೇ? ಎಂದೇ, ಹಾಗಲ್ಲವೆಂದು ಮೊದಲೇ ಸ್ಪಷ್ಟಪಡಿಸುತ್ತಾನೆ: ನನ್ನ ಹೃದಯವು ಆರ್ದ್ರವಾದುದು - ಎಂದು. ಆರ್ದ್ರವೆಂದರೆ ಒದ್ದೆ, ಅಥವಾ ಮೃದು. ತನ್ನ ಹೃದಯವು ಒಣಕಲಾದರೂ ಆತನ(ಲ್ಲಿಯ) ಪ್ರೇಮರಸದಿಂದ ಮಾರ್ದವವನ್ನು ಹೊಂದಿದೆ. ಆತನ ಮೇಲಣ ಪ್ರೇಮದಿಂದಾಗಿ ಸ್ನಿಗ್ಧವಾಗಿದೆ, ಎಂದರೆ ಸ್ನೇಹ-ಭಾವದಿಂದ ಕೂಡಿದೆ. ವಿಯೋಗದಿಂದ ತಾಪಗೊಂಡಿರುವ ಹೃದಯವು ಆತನ ಚರಣ-ಸ್ಪರ್ಶವಾಗುತ್ತಲೇ ಸ್ನಿಗ್ಧತೆಯನ್ನು, ಅರ್ಥಾತ್ ಸ್ನೇಹಭಾವವನ್ನು, ಹೊಂದುವುದಲ್ಲವೇ?

ತನ್ನ ಹೃದಯದಲ್ಲಿ ಚೆನ್ನಾಗಿ ಆಡಲಿ ಎನ್ನುವುದನ್ನು ಆಕ್ರೀಡತಾಂ - ಎಂದಿದ್ದಾನೆ. ಇಲ್ಲಿ "ಆ" ಎಂಬ ಉಪಸರ್ಗಕ್ಕೆ "ಚೆನ್ನಾಗಿ" ಎಂದರ್ಥ.

ಕೃಷ್ಣನು ಆಡಲಿ - ಎಂದು ಹೇಳುವುದರ ಬದಲು, ಕವಿಯು "ಆ ಓಜಸ್ಸು ಆಡಲಿ" - ಎನ್ನುತ್ತಾನೆ. ಓಜಸ್ಸೆಂದರೆ ತೇಜಸ್ಸೇ. ಕೃಷ್ಣನು ತೇಜೋರಾಶಿಯಲ್ಲವೇ? ಎಂತಹ ಓಜಸ್ಸದು? ಭುವನಾರ್ದ್ರವಾದದ್ದು - ಎಂದರೆ ಭುವನವನ್ನೇ ಆರ್ದ್ರಮಾಡುವಂತಹುದು. ಅರ್ಥಾತ್ ಜಗತ್ತನ್ನೇ ತನ್ನ ಪ್ರೇಮರಸದಿಂದ ತೋಯಿಸುವಂತಹುದು. ಒಳ್ಳೆಯ ಸಂಗೀತವನ್ನು ಕೇಳಿದರೆ ಎಲ್ಲರ ಮನಸ್ಸೂ ಕರಗುವುದು. ಬೆಟ್ಟಗಳೂ ಕರಗುವುವು - ಎಂದು ಕೂಡ ಲೀಲಾಶುಕನೇ ಬೇರೆಡೆ ಹೇಳಿರುವನಲ್ಲವೆ? ಹೀಗಾಗಿ ಜಗತ್ತೆಲ್ಲವೂ ಕರಗುವಂತಾಗಿರುವುದು ಯಾವುದರಿಂದಲೋ ಅಂತಹ ಓಜಸ್ಸದು.

ಕೃಷ್ಣನ ಆಟವೆಂಬುದಾದರೂ ಹೇಗಿರುವುದು? ಆತನ ಪಾದಕಮಲಗಳು ಅರುಣ-ವರ್ಣವನ್ನು ಹೊಂದಿರುವುದು. ಅಂತಹ ಕೆಂದಾವರೆಯ ಪರಿಯ ಕಾಲುಗಳು ಕ್ರೀಡಿಸಲಿ - ಎಂಬ ಭಾವ.

ಶ್ರೀಕೃಷ್ಣನು ತನ್ನದೇ ವೇಣುನಾದವನ್ನು ಆಸ್ವಾದಿಸುತ್ತಿದ್ದಾನೆ - ಎಂದೂ ಹೇಳುತ್ತಾನೆ, ಕವಿ. ಏಕೆ? ಆ ವೇಣುನಾದದಲ್ಲೇ ಒಂದು ವಿನೋದವಿದೆ. ವಿನೋದವೆಂಬುದಕ್ಕೆ ಪ್ರೇರಣೆಯೆಂಬ ಅರ್ಥ ಇಲ್ಲಿ. ಮಧ್ಯದಲ್ಲಿ ಆಗಾಗ ಮೃದುವಾದ ಹಾಸವೋ ಬೇರೆಬೇರೆ ಭಾವಗಳ ತೋರುವಿಕೆಯೋ - ಇವೆಲ್ಲವೂ ವಿನೋದವೆಂದು ಪರಿಗಣಿಸಲ್ಪಡುವುವು. ತಾನ-ಆಲಾಪಗಳೂ ವಿನೋದವೇ. ವಿನೋದವೆಂಬುದು ಸಂಸ್ಕೃತಪದ; ಕನ್ನಡದಲ್ಲಿಲ್ಲದ ಕೆಲವು ಅರ್ಥಗಳು ಈ ಪದಕ್ಕಿವೆ.

ಕೃಷ್ಣನ ಮುಖದಲ್ಲೇ ನಾನಾಭಾವಗಳು ತೋರುವುದನ್ನೂ ಹೇಳಿದೆ. ಆತನ ಮುಖಾಂಬುಜ ಅಥವಾ ವದನ-ಕಮಲವು ಅವ್ಯಾಜ-ಮಂಜುಲವಾದುದು.

ವ್ಯಾಜವೆಂದರೆ ನೆಪ, ಕಾರಣ; ಅವ್ಯಾಜವೆಂದರೆ ಯಾವುದೇ ನಿಮಿತ್ತವಿಲ್ಲದಿರುವುದು. ಮಂಜುಲವೆಂದರೆ ಮನೋಹರ. ಅಲ್ಲಿಗೆ, ಯಾವುದೇ ಅಲಂಕಾರ-ಆಭರಣಗಳೆಂದಿಲ್ಲದಿದ್ದರೂ, ಅಂದರೆ ನಿರ್ವ್ಯಾಜವಾಗಿಯೂ, ಮನೋಹರವಾದ ಮುಖ-ಕಮಲ ಅವನದು. ಅದರಲ್ಲಿ ಹಲವು ಮುಗ್ಧ-ಭಾವಗಳು ತೋರುತ್ತಿರುತ್ತವೆ. ಅಂತಹ ಭಾವಗಳಿಂದ ಶೋಭಿಸುವ ತೇಜಸ್ಸು, ಕೃಷ್ಣನೆಂದರೆ.

ಜಗವನ್ನೇ ಮುದಗೊಳಿಸುವ ಮೃದುಗೊಳಿಸುವ ಓಜಸ್ಸೇ ಕೃಷ್ಣ. ಆತನು ನನ್ನ ಹೃದಯದಲ್ಲಿ ತನ್ನ ಕೆಂಪಾದ ಪಾದಗಳಿಂದ ಆಡಲಿ - ಎಂಬ ಕೋರಿಕೆ ಲೀಲಾಶುಕನದು.

ಶ್ಲೋಕ ಹೀಗಿದೆ:

ಅವ್ಯಾಜ-ಮಂಜುಲ-ಮುಖಾಂಬುಜ-ಮುಗ್ಧ-ಭಾವೈಃ /
ಆಸ್ವಾದ್ಯಮಾನ-ನಿಜ-ವೇಣು-ವಿನೋದ-ನಾದಂ |
ಆಕ್ರೀಡತಾಂ ಅರುಣ-ಪಾದ-ಸರೋರುಹಾಭ್ಯಾಂ /
ಆರ್ದ್ರೇ ಮದೀಯ-ಹೃದಯೇ ಭುವನಾದ್ರಂ ಓಜಃ ||

ಶ್ಲೋಕದ ನಾಲ್ಕೂ ಪಾದಗಳೂ 'ಆ'ಕಾರದಿಂದಲೇ ಆರಂಭಗೊಂಡಿವೆ. ಪ್ರಥಮಪಾದದಲ್ಲಿ ಜಕಾರ-ಮಕಾರಗಳು, ದ್ವಿತೀಯದಲ್ಲಿ ನಕಾರ-ದಕಾರಗಳು ವಿಲಸಿಸಿವೆ. ತೃತೀಯದಲ್ಲಿ ರೇಫಗಳು, ತುರೀಯದಲ್ಲಿ ಯಕಾರ-ದಕಾರಗಳು.

ಸೂಚನೆ : 7/3/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.