Wednesday, January 29, 2025

ಅಹಂಕಾರದಿಂದ ಅಧ:ಪತನ (Ahankaradinda Adhah Patana)

ಲೇಖಕರು; ವಿದುಷಿ ಸೌಮ್ಯಾ ಪ್ರದೀಪ್  ಎ. ಜೆ.

ಪ್ರತಿಕ್ರಿಯಿಸಿರಿ (lekhana@ayvm.in)



ಯಯಾತಿ ಕೃತಯುಗದ ರಾಜರುಗಳಲ್ಲಿ ಪ್ರಮುಖನಾದವನು.  ಉತ್ತಮ ರಾಜನಾಗಿ ಅನೇಕ ವರ್ಷಗಳ ಕಾಲ ರಾಜ್ಯಭಾರವನ್ನು ನಡೆಸಿ ಮಾಡುತ್ತಾನೆ.  ನಂತರ ಮಗನಾದ ಪೂರುವಿಗೆ ರಾಜ್ಯಭಾರವನ್ನು ವಹಿಸಿ ವಾನಪ್ರಸ್ಥನಾಗಿ ತಪಸ್ಯೆಯನ್ನು ಆಚರಿಸುತ್ತಾನೆ. ತಪಸ್ಯೆ ಹಾಗೂ ಸತ್ಕರ್ಮದ ಫಲವಾಗಿ  ಸ್ವರ್ಗಲೋಕದಲ್ಲಿ ಸ್ಥಾನವನ್ನು ಪಡೆಯುತ್ತಾನೆ. ಸ್ವರ್ಗಲೋಕದಲ್ಲಿ ಇಚ್ಛಾನುಸಾರವಾಗಿ ರೂಪಗಳನ್ನು ಹೊಂದಿ, ಬ್ರಹ್ಮಲೋಕದಲ್ಲಿಯೂ ಸಂಚರಿಸುತ್ತಾ, ಅನೇಕ ವರ್ಷಗಳ ಕಾಲ ಸುಖದಿಂದ ವಿಹರಿಸುತ್ತಾನೆ. 


 ಇಂದ್ರನು ಒಮ್ಮೆ ಯಯಾತಿಯೊಡನೆ ಸಂದರ್ಶನ ಮಾಡುವ ಸಂದರ್ಭದಲ್ಲಿ ಹೀಗೊಂದು ಪ್ರಶ್ನೆಯನ್ನು ಕೇಳುತ್ತಾನೆ, ಯಯಾತಿ ನೀನು ಅತಿ ಕಠಿಣವಾದ ತಪಸ್ಸನ್ನು ಮಾಡಿದೆ, ನೀನು ತಪಸ್ಸಿನಲ್ಲಿ ಯಾರಿಗೆ ಸಮನಾಗಿರುವೆ? ಅಥವಾ ನಿನ್ನ ತಪಸ್ಸು ಯಾವ ತಪಸ್ವಿಯ ತಪಸ್ಸನ್ನು ಹೋಲುವುದಾಗಿದೆ ಹೇಳುವೆಯಾ ? ಎಂಬುದಾಗಿ. 


ಅದಕ್ಕೆ ಯಾಯಾತಿಯು ಸ್ವಲ್ಪ ಅಟ್ಟಹಾಸದಿಂದ  ನಗುತ್ತಾ ಉತ್ತರಿಸಿದನು, ನನ್ನ ಹಾಗೆ ತಪಸ್ಸನ್ನು ಮಾಡಿರುವವರನ್ನು ಮಾನವರಲ್ಲಾಗಲೀ, ಗಂಧರ್ವರಲ್ಲಾಗಲೀ ಅಥವಾ ಮಹರ್ಷಿಗಳಲ್ಲೇ ಆಗಲಿ ನಾನು ಕಾಣೆನು. ಹೀಗಿರುವಾಗ ಬೇರೊಬ್ಬರ ತಪಸ್ಸಿಗೆ ನನ್ನ ತಪಸ್ಸನ್ನು ಹೋಲಿಸಲು ಹೇಗೆ ತಾನೇ ಸಾಧ್ಯ ಎಂಬುದಾಗಿ. ಆಗ ದೇವೇಂದ್ರನು ಯಯಾತಿಯನ್ನು ಕುರಿತು ನೀನು ಸದ್ಗುಣ ಸಂಪನ್ನನಾಗಿದ್ದರೂ 'ಅಹಂಕಾರ' ಎಂಬ ಒಂದು ಮಹಾದೋಷವು ನಿನ್ನಲ್ಲಿ ಉಳಿದೇ ಇದೆ. ನೀನು ಹಿರಿಯರನ್ನು, ಸಮಾನರನ್ನು ಮತ್ತು ಕಿರಿಯರನ್ನು ಅವರುಗಳ ತಪಶ್ಶಕ್ತಿ ಎಷ್ಟಿರಬಹುದು ಎಂದು ವಿವೇಚಿಸದೇ ಅಲಕ್ಷಿಸಿ ಮಾತನಾಡಿದೆಯಲ್ಲವೇ, ಇದರಿಂದ ನಿನ್ನ ಸತ್ಕರ್ಮಗಳ ಫಲವು ಇಂದಿಗೇ ಲುಪ್ತವಾಯಿತು. ಸತ್ಕರ್ಮಗಳ ಫಲವು ತೀರಿದ ನಂತರ ನೀನಿಲ್ಲಿರಲು ಸಾಧ್ಯವಾಗಲಾರದು, ನೀನು ಈ ಕೂಡಲೇ ಭೂಲೋಕಕ್ಕೆ ಹೋಗಿ ಬೀಳಬೇಕು ಎಂಬುದಾಗಿ ಆದೇಶಿಸಿದನು. ಆಗ ಯಯಾತಿಗೆ ತನ್ನ ತಪ್ಪಿನ ಅರಿವಾಗಿ, ಬದ್ಧಾಂಜಲಿಯಾಗಿ ಇಂದ್ರನನ್ನು ಹೀಗೆ ಪ್ರಾರ್ಥಿಸುತ್ತಾನೆ.


 ಯಯಾತಿ ಅತ್ಯಂತ ಮೇಧಾವಿ, ತಪಸ್ವಿ, ಧರ್ಮಿಷ್ಠನಾದ ರಾಜ. ತನ್ನ ಈ ಎಲ್ಲಾ ಗುಣಗಳಿಂದ ಸ್ವರ್ಗಲೋಕದಲ್ಲಿ ಸ್ಥಾನವನ್ನು ಪಡೆದಿದ್ದ, ಬ್ರಹ್ಮಲೋಕಕ್ಕೂ ಹೋಗಿಬರುತ್ತಿದ್ದ. ಅಲ್ಲಿ ಅತ್ಯಂತ ಸುಖವಾಗಿ ಕಾಲವನ್ನು ಕಳೆಯುತ್ತಿದ್ದ. ಆದರೆ ಅಹಂಕಾರವೆಂಬ ದೋಷ ಅವನನ್ನು ಆವರಿಸಿ, ನಾನೇ ಎಲ್ಲರಿಗಿಂತಲೂ ಶ್ರೇಷ್ಠ ಎಂಬ ಭಾವನೆ ಅವನಲ್ಲಿ ಮೂಡಿತು. ಅಹಂಕಾರವೆಂಬ ದೋಷ ಅವನನ್ನು ಈ ಎಲ್ಲಾ ಸುಖಗಳಿಂದ ವಂಚಿತನಾಗುವಂತೆ ಮಾಡಿತು. ಅವನ ಅಧ:ಪತನಕ್ಕೆ ಕಾರಣವಾಯಿತು. ಅವನು ಸಂಪಾದಿಸಿದ ಪುಣ್ಯರಾಶಿ ಎಲ್ಲವೂ ಕ್ಷಣಮಾತ್ರದಲ್ಲಿ ಭಸ್ಮವಾಗಿ ಹೋಯಿತು. ಅಹಂಕಾರ ಪಟ್ಟರೆ ಸತ್ಕರ್ಮದ ಫಲವು ಹೇಗೆ ನಾಶವಾಗುವುದೆಂಬುದಕ್ಕೆ ಯಯಾತಿಯೇ ಉದಾಹರಣೆಯಾಗುತ್ತಾನೆ. 


 ಅಹಂಕಾರ ಎಂಬುದು ನಮ್ಮ ಏಳಿಗೆಯನ್ನು ಕುಂಠಿತಗೊಳಿಸುವ ಮಹಾಶತ್ರು. ಎಷ್ಟೇ ಸಾಧನೆ ಮಾಡಿದರೂ  ಅದೆಲ್ಲರ ಹಿಂದೆ ಭಗವತ್ ಶಕ್ತಿಯ ಹರಿವು, ಗುರು ಹಿರಿಯರ ಆಶೀರ್ವಾದ ಕೆಲಸ ಮಾಡುತ್ತಲೇ ಇರುತ್ತದೆ ಎಂಬುದನ್ನು ಮರೆತು ಅಹಂಕಾರದಿಂದ ವರ್ತಿಸಿದರೆ ಅಧ:ಪತನ ನಿಶ್ಚಿತ ಎಂಬುದನ್ನು ಈ  ಕಥೆಯಿಂದ ಅರಿಯಬಹುದು. 'ಜೀವನ ವಿಕಾಸ ನಡೆಯುತ್ತಿರುವಾಗ ದೇವನಿಂದ ಶಕ್ತಿ ಸಪ್ಲೈ ಆಗುವುದು ಅದು ನಿಂತರೆ ಯಾವ ಕೆಲಸವೂ ಇಲ್ಲ. ಕರೆಂಟ್ ನಿಂತರೆ ರೇಡಿಯೋ ಫ್ಯಾನ್ ಎಲ್ಲಾ ನಿಲ್ಲುತ್ತದೆ',ಎಂಬ ಶ್ರೀರಂಗಮಹಾಗುರುಗಳ ವಾಣಿಯು ಸ್ಮರಣೀಯವಾಗಿದೆ. ಅಹಂಕಾರ ವರ್ಜಿತರಾಗಿ  ನಮ್ಮ ಏಳಿಗೆಗೆ ಕಾರಣೀಭೂತವಾದ ಆ ಎಲ್ಲಾ ಶಕ್ತಿಗಳಿಗೆ ತಲೆಬಾಗಿದಾಗ ಮಾತ್ರ ನಮ್ಮ ಸರ್ವತೋಮುಖ ಅಭಿವೃದ್ಧಿ ಸಾಧ್ಯ.


ಸೂಚನೆ: 29/01/2025 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.