Saturday, December 20, 2025

ಕೃಷ್ಣಕರ್ಣಾಮೃತ 86 ನಾನಾಶ್ರಯಿಸುವುದು ಭುವನಾಶ್ರಯನನ್ನೇ!(Krishakarnamrta 86)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ಶ್ರೀಕೃಷ್ಣನನ್ನು ನಾನು ಆಶ್ರಯಿಸುತ್ತೇನೆ - ಎನ್ನುತ್ತಾನೆ ಲೀಲಾಶುಕ. ಏಕೆ ಶ್ರೀಕೃಷ್ಣನನ್ನು ಆಶ್ರಯಿಸಬೇಕು? - ಎನ್ನುವುದನ್ನು ಕಂಠೋಕ್ತವಾಗಿ, ಎಂದರೆ ಬಾಯಿಬಿಟ್ಟು, ಹೇಳಿಲ್ಲ. ಪುಟ್ಟಶ್ಲೋಕದಲ್ಲಿ ಕೃಷ್ಣನಿಗೆ ನಾಲ್ಕು ವಿಶೇಷಣಗಳನ್ನು ಬಳಸಿದ್ದಾನೆ. ಆ ವಿಶೇಷಣಗಳನ್ನು ಪರಿಭಾವಿಸಿದರೆ ನಮಗೇ ಗೊತ್ತಾಗುತ್ತದೆ, ಏಕೆ ಆಶ್ರಯಿಸಬೇಕೆಂದು.

ಅವನು ಕೊಡುವ ವಿಶೇಷಣಗಳಲ್ಲಿ ನಾಲ್ಕನೆಯದನ್ನು, ಎಂದರೆ ಕೊನೆಯದನ್ನೇ, ಮೊದಲು ಗಮನಿಸಬಹುದು. ಅದೆಂದರೆ ಕೃಷ್ಣನು ಭುವನಾಶ್ರಯ - ಎಂಬುದು. ಭುವನಕ್ಕೇ ಆಶ್ರಯನಾದವನು ಭುವನಾಶ್ರಯ.

ಭುವನವೆಂದರೆ ಲೋಕ. ಲೋಕವೇನು ಒಂದೇ ಇರುವುದೆ? ಮೂರು ಲೋಕಗಳುಂಟು - ಸ್ವರ್ಗ, ಮರ್ತ್ಯ, ಪಾತಾಳಗಳೆಂದು. ಕೆಲವೊಮ್ಮೆ ಭೂಃ, ಭುವಃ, ಸುವಃ - ಎಂಬುದನ್ನೇ ಭುವನ-ತ್ರಯ ಎನ್ನುವುದುಂಟು.

ಕೆಲವೊಮ್ಮೆ ಇನ್ನು ನಾಲ್ಕನ್ನು ಸೇರಿಸಿ ಲೋಕಗಳನ್ನು ಏಳೆಂದು ಹೇಳುವುದುಂಟು. ಆ ನಾಲ್ಕೆಂದರೆ ಮಹಃ ಜನಃ ತಪಃ ಮತ್ತು ಸತ್ಯಂ – ಎಂಬುದಾಗಿ. ಕೊನೆಯದನ್ನು ಸತ್ಯಲೋಕವೆನ್ನುವ ಬದಲು ಬ್ರಹ್ಮಲೋಕವೆನ್ನುವುದೂ ಉಂಟು.

ಕೆಲವೊಮ್ಮೆ ಲೋಕಗಳು ಹದಿನಾಲ್ಕೆಂದು ಸಹ ಹೇಳುವುದುಂಟು. ಅದು ಹೇಗೆ? ಮೇಲೆ ಹೇಳಿದವು ಊರ್ಧ್ವಲೋಕಗಳು, ಎಂದರೆ ಮೇಲಿರುವ ಲೋಕಗಳು. ಅಧೋಲೋಕಗಳೂ ಏಳುಂಟು. ಕೆಳಗಣ ಲೋಕಗಳೆಂದರೆ - ಅತಲ, ವಿತಲ, ಸುತಲ, ತಲಾತಲ, ರಸಾತಲ, ಮಹಾತಲ, ಮತ್ತು ಪಾತಾಲಗಳು.

ಇವೆಲ್ಲಾ ಸೇರಿ ಬ್ರಹ್ಮಾಂಡವೆನಿಸುತ್ತದೆ. ಆದರೆ, ಸಾವಿರಾರು ಬ್ರಹ್ಮಾಂಡಗಳೇ ಉಂಟೆನ್ನುವರು! ಸಾವಿರಾರೇನು, ಅನಂತಕೋಟಿ-ಬ್ರಹ್ಮಾಂಡಗಳೇ ಇವೆಯೆಂದೂ ಹೇಳುವುದುಂಟಲ್ಲವೇ? ಇವೆಲ್ಲವೂ ಸೇರಿಯೇ ಭುವನ.

ಹೀಗಾಗಿ, ಇಡೀ ಜಗತ್ತಿನ ಸಮಸ್ತ-ಜೀವಿಗಳಿಗೆ ಕೃಷ್ಣನು ಆಶ್ರಯನೆಂದೇ ಅರ್ಥ. ಹೀಗೆ ಎಲ್ಲರಿಗೂ ಯಾವನು ಆಶ್ರಯನೋ ನನಗೂ ಆತನೇ ಆಶ್ರಯ ಎಂಬ ಅಭಿಪ್ರಾಯವಿಲ್ಲಿದೆ.

ಇದರ ತಾತ್ಪರ್ಯವೆಂದರೆ, ನಾನು ಹಿಡಿದಿರುವ ಸ್ವಾಮಿಯು ಸಾಧಾರಣನಲ್ಲ, ಬದಲಾಗಿ ಸರ್ವ-ಜೀವ-ಕೋಟಿಗೂ ನೆಮ್ಮದಿಯನ್ನು ಕೊಡಬಲ್ಲವನು - ಎಂದು. ಆತನು ಅಷ್ಟು ವಿಶಿಷ್ಟನೆಂಬ ಕಾರಣಕ್ಕೇ ಆತನನ್ನೇ ಆಶ್ರಯಿಸಿರುವುದು.

ಆಶ್ರಯಿಸುವುದೆಂದರೆ ಆಸರೆ ಬೇಡುವುದೆಂಬ ಅರ್ಥ. ವಾಸ್ತವವಾಗಿ, "ಶ್ರಯೇ" ಎಂದರೇ ನೆಲೆಹೊಂದುವೆ – ಎಂದು. "ಆ" ಎಂದರೆ ಚೆನ್ನಾಗಿ. ಆ-ಶ್ರಯೇ ಎಂದರೆ ಚೆನ್ನಾಗಿ ಸೇವಿಸುವೆ – ಎಂದು.

ಆಶ್ರಯಕ್ಕಾಗಿ ಯಾರಾರನ್ನೋ ಬೇಡುವುದಲ್ಲ. ಸರ್ವ-ಸ್ವಾಮಿಯೇ ನನ್ನ ಸ್ವಾಮಿ - ಎಂದು ಹೇಳುವಲ್ಲಿ ಹೆಮ್ಮೆಯಿದೆ. ಎಂದೂ ನೀಚರನ್ನು ಆಶ್ರಯಿಸುವುದಲ್ಲ, ಮಹೋನ್ನತನಾದವನನ್ನೇ ಆಶ್ರಯಿಸತಕ್ಕದ್ದು - ಎಂಬ ಲೆಕ್ಕದ ನೀತಿ ಇಲ್ಲಿದೆ. ಧನಾಢ್ಯರನ್ನೋ, ರಾಜರುಗಳನ್ನೋ ಆಶ್ರಯಿಸುವವರುಂಟು. ಹಾಗೆಯೇ ದೇವತಾಸ್ತೋಮವು ವಿಸ್ತಾರವಾದುದರಿಂದ ಅವರಲ್ಲೊಬ್ಬರಲ್ಲಿ ಆಶ್ರಯ ಪಡೆಯುವವರುಂಟು. ಆದರೆ ನಾನಾಶ್ರಯಿಸುವುದು ಭುವನಾಶ್ರಯನನ್ನೇ!

ಇದಲ್ಲದೆ, ಆತನು ಶೃಂಗಾರರಸ-ಸರ್ವಸ್ವ. ಸರ್ವಸ್ವವೆಂದರೆ ಸಮಸ್ತ-ಸಂಪತ್ತು. ಸ್ವ ಎಂಬುದೇ ಸ್ವತ್ತಾಗಿರುವುದು. ಆಸ್ತಿಗೆ ಸೊತ್ತು ಎನ್ನುವುದಿಲ್ಲವೇ? ಅದೇ ಅದು. ಆಸ್ತಿಯನ್ನು ಸ್ಥಿರ ಮತ್ತು ಚರವೆಂದು ವಿಭಾಗಿಸುವುದುಂಟು. ಹೀಗಾಗಿ ಇಲ್ಲಿ ಸರ್ವ-ಸ್ವವೆಂದರೆ ಎಲ್ಲ ಬಗೆಯ ಸಿರಿ.

ಹಾಗಾದರೆ ಶೃಂಗಾರರಸಕ್ಕೆ "ಆಸ್ತಿ"ಯುಂಟೇ? ಉಂಟು. ಮತ್ತಾವ ರಸಕ್ಕೂ ಇಲ್ಲದಷ್ಟು! ಎಂದೇ ಕಾವ್ಯಗಳಲ್ಲಿ ಶೃಂಗಾರ-ರಸವನ್ನು, ಅಥವಾ ವೀರರಸವನ್ನು, ಮಾತ್ರವೇ ಪ್ರಧಾನ-ರಸವಾಗಿ ನಿರೂಪಿಸುವುದು. ಉಳಿದ ರಸಗಳು ಅಂಗ-ರಸಗಳಾಗಿ ಬಂದು ಹೋಗಬಹುದು. ಆದರೆ ಶೃಂಗಾರವೇ ಅಂಗಿ-ರಸವೆನಿಸುವುದು. ಅಂಗವು ಗೌಣ, ಅಂಗಿಯು ಪ್ರಧಾನ.

ಶೃಂಗಾರವನ್ನೇ "ರಸ-ರಾಜ"ವೆನ್ನುವುದು. ಅದಕ್ಕಿರುವ ವ್ಯಾಪ್ತಿ ಮತ್ತಾವ ರಸಕ್ಕೂ ಇಲ್ಲ. ಶೃಂಗಾರ-ಭಾವವು ಇತ್ತ ಪ್ರಾಣಿಗಳಲ್ಲೂ ಆಡುವುದುಂಟು, ಅತ್ತ ದೇವತೆಗಳಲ್ಲೂ ಉಂಟು. ಮನುಷ್ಯರಲ್ಲಂತೂ ಶೃಂಗಾರಕ್ಕೆ ಎಡೆಗೊಡದವರ ಸಂಖ್ಯೆ ಅತ್ಯಲ್ಪವೇ ಸರಿ. ಕಾವ್ಯ-ನಾಟಕಗಳಲ್ಲೂ ಶೃಂಗಾರರಸದ ಮೆರೆತವೇ ಹೆಚ್ಚು. ಶೃಂಗಾರ-ರಸಾಸ್ವಾದನ-ಸಾಮರ್ಥ್ಯವು ಯೌವನೋದಯವಾಗುತ್ತಲೇ ಉದಯಿಸುವುದಾಗಿದ್ದು, ಜೀವನದ ಕೊನೆಯವರೆಗೂ ಇರಬಲ್ಲದು!

ಇನ್ನು ಶ್ರೀಕೃಷ್ಣನ ಜೀವಿತವೋ, ಯೌವನೋದಯಕ್ಕೆ ಮೊದಲೇ ಗೋಪಿಕೆಯರ ಮನಸ್ಸನ್ನು ಸೂರೆಗೊಂಡದ್ದು. ವಯೋಮಾಧುರ್ಯ, ವರ್ಣ-ಮಾಧುರ್ಯ, ವಚೋಮಾಧುರ್ಯ, ಮನೋಮಾಧುರ್ಯ, ವಿಲಾಸ-ಮಾಧುರ್ಯ - ಇವೆಲ್ಲವೂ ಮಧುರವಾಗಿ ಮೇಳೈಸಿರುವ ಈ ಸುಂದರಾಂಗನನ್ನು ಕಂಡರೆ ಯಾರ ಮನಸ್ಸಿಗೆ ಸೆಳೆತವುಂಟಾಗದು? ಇವೆಲ್ಲಕ್ಕೆ ಕಿರೀಟ-ಪ್ರಾಯವಾಗಿ, ತನ್ನಲ್ಲಿಗೆ ಬಂದ ಪ್ರತಿಯೊಬ್ಬರಿಗೂ ಪ್ರಿಯವನ್ನೂ ಹಿತವನ್ನೂ ಉಂಟುಮಾಡುವ ಸಾಮರ್ಥ್ಯವೂ ಪ್ರವೃತ್ತಿಯೂ ಇತ್ತಾಗಿ, ಎಲ್ಲರ ಮನಸ್ಸೂ ಆತನತ್ತ ದ್ರುತಿಗೊಳ್ಳುತ್ತಿದ್ದದ್ದೇ - ಎಂದರೆ ಕರಗಿ ಹರಿಯುತ್ತಿದ್ದದ್ದೇ. ಹೀಗಾಗಿ ಲೋಕಹಿತ-ಕಾರಿಯೇ ಲೋಕಪ್ರಿಯ-ಕಾರಿಯೂ ಆಗಿ ಬಂದ ಆತನನ್ನು ಕಣ್ಮನಗಳಲ್ಲಿ ತುಂಬಿಕೊಳ್ಳುವ ತವಕ ಯಾರ ಮನಸ್ಸಿಗಿರುತ್ತಿರಲಿಲ್ಲ?

ಯಾವ ವೇಷ-ಭೂಷಣಗಳಿಲ್ಲದಿದ್ದರೂ ಆಕರ್ಷಕ ನಮ್ಮ ಕೃಷ್ಣ. ಆದರೂ ಆತನಿಗೆ ಒಂದು ಭೂಷಾ-ವಿಶೇಷವೇ ಉಂಟು. ಅದೆಂದರೆ ಆತನ ನವಿಲುಗರಿ, ಶಿಖಿ-ಪಿಂಛ.

ಕೃಷ್ಣನು ಮೇಘ-ಶ್ಯಾಮನಲ್ಲವೇ? ಎಂದೇ ಆತನನ್ನು ಕಂಡೊಡನೆ ಮೋಡವನ್ನೇ ಕಂಡಂತಾಗಿ ನವಿಲುಗಳು ನಲಿಯುತ್ತಿದ್ದುವಂತೆ, ಕೆಲ ಗರಿಗಳನ್ನು ಉದುರಿಸುತ್ತಿದ್ದುವಂತೆ - ತಮ್ಮ ಆನಂದಾತಿರೇಕದಿಂದಾಗಿ; ಆತನಲ್ಲಿಯ ಪ್ರೇಮಾತಿಶಯದಿಂದಾಗಿ! ಆ ಗರಿಗಳೇ ಆತನ ಶಿರೋಲಂಕಾರವಾಗುತ್ತಿದ್ದವು.

ನವಿಲಿನ ಗರಿಗಿಂತಲೂ ಸುಂದರತರವೆನಿಸುವ ಗರಿಯು ಮತ್ತಾವ ಹಕ್ಕಿಗಾದರೂ ಉಂಟೇ? ಹೀಗೆ ಸ್ವತಃ ಸುಂದರನಾಗಿರುವವನಿಗೆ ಸುಂದರಾಭೂಷಣವೂ ಸೇರಿಕೊಂಡರೆ ಆ ಸೊಗಸಿಗೆ ಸಮನುಂಟೆ? ಅಂತಹವನನ್ನು ಶೃಂಗಾರರಸ-ಸರ್ವಸ್ವವೆನ್ನಲು ಅಡ್ಡಿಯೆಲ್ಲಿಯದು? ಶೃಂಗಾರವೇ ಮೂರ್ತವಾಗಿ ಬಂದಿರುವವನೇ ಕೃಷ್ಣ - ಎಂದು ಗೀತಗೋವಿಂದವೂ ಹೇಳುವುದಲ್ಲವೇ?

ಮೂರು ವಿಶೇಷಣಗಳಾದವು. ಇನ್ನೊಂದು ಬಾಕಿಯಿದೆ. ಅದೆಂದರೆ ಕೃಷ್ಣನು ನರಾಕಾರನಾಗಿರುವುದು.

ವಾಸ್ತವವಾಗಿ ಪರಬ್ರಹ್ಮಕ್ಕೆ ಯಾವ ರೂಪ, ಯಾವ ಆಕಾರ? ಆದರೆ ಅಚಿಂತ್ಯವಾದ ಅಂತಹ ಸ್ವರೂಪವನ್ನು ಯಾರು ಭಾವಿಸಬಲ್ಲರು? ಎಂದೇ ಆ ಅನೂಹ್ಯ-ಸ್ವರೂಪವು ಭಾವುಕರಿಗೆ ಭಾವ್ಯವಾಗಲೆಂದು ಸುರೂಪವಾಗಿ ಅವತರಿಸಿದೆ.

ನರರನ್ನು ಉದ್ಧಾರಮಾಡಲೆಂದು ಬಂದ ತತ್ತ್ವವು ನರಾಕಾರವಾಗಿಯೇ ಬಂದಿದೆ: ನರರ ಆಕಾರವನ್ನೇ ಅಂಗೀಕರಿಸಿದೆ.


ತಾವು ದೇವಾಧಿಪತಿಗಳೆಂಬ ಅಹಂಕಾರವು ಇಂದ್ರನಿಗೂ ಬ್ರಹ್ಮನಿಗೂ ಬಂದಿತ್ತಾಗಿ, ಸಾಧಾರಣವೆನಿಸುವ ನರರೂಪವನ್ನೇ ಧರಿಸಿ, ಅವರಿಗೆ ತಮ್ಮ ಸ್ಥಾನ-ಮಾನಗಳ ವಿವೇಕವನ್ನು ಮೂಡಿಸಿದವನೇ ಕೃಷ್ಣ. ಕರ್ಮ-ಫಲವಾಗಿ ಬಂದುದಲ್ಲ, ಆತನ ನರಜನ್ಮ. ಸ್ವೇಚ್ಛೆಯಿಂದಲೇ, ತನ್ನ ಲೀಲಾ-ವಿಭೂತಿಯಾಗಿಯೇ, ಸ್ವೀಕಾರಮಾಡಿದ ಆಕಾರವದು.

ಅಲ್ಲದೆ, ನರರೂಪದಲ್ಲೂ ಅತಿಸಾಧಾರಣವೆನಿಸುವ ಗೋಪ-ರೂಪವನ್ನೇ ತಳೆದು, ತನ್ನ ಎಳವಿನಿಂದಲೇ ಮಹಾ-ಮಹಿಮೆಗಳನ್ನು ತೋರಿಸಿದವನು, ಶ್ರೀಕೃಷ್ಣ.

ಭಗವಂತನಿಗೆ ತನ್ನ ಮಹಾವೈಭವವನ್ನು ತೋರಿಸಿಕೊಳ್ಳಲೂ ಗೊತ್ತು, ಮರೆಮಾಚಲೂ ಗೊತ್ತು. ಎಂದೇ ಅತ್ತ ಅರ್ಜುನನಿಗೆ ವಿಶ್ವರೂಪವನ್ನೇ ತೋರಿಸಿದುದು; ಇತ್ತ ಗೊಲ್ಲನ ವೇಷ ಧರಿಸಿ, ಎಲ್ಲರಿಗೂ ಅತಿಸುಲಭನಾಗಿ ಸರಳನಾಗಿಯೂ ಇದ್ದುದು.

ಗೊಲ್ಲರು, ಕಿರಾತರು – ಇವರುಗಳೇ, ಎಂದರೆ ಅತಿಸಾಧಾರಣರೇ, ತಮ್ಮ ಭೂಷಣವಾಗಿ ನವಿಲುಗರಿಯನ್ನು ಧರಿಸುವುದು. ಹೀಗೆ ನರಾಕಾರವನ್ನೇ ತಾಳಿದ್ದರೂ, ಆತನು ಲೋಕಾಶ್ರಯನೇ ಹೌದೆಂಬುದನ್ನು ಬಲ್ಲವರೆಲ್ಲೋ ಕೆಲವರು ಮಾತ್ರವೇ! ಅಂತಹವರಲ್ಲೊಬ್ಬನೇ ಧನ್ಯ-ಲೀಲಾಶುಕನೂ!

ಹೊಟ್ಟೆಪಾಡಿಗೋಸ್ಕರ ಯಾರೋ ಧನಿಕ, ಯಾರೋ ರಾಜ - ಇವರುಗಳನ್ನು ಆಶ್ರಯಿಸುತ್ತೇವೆ. ಅಂತರಂಗದಲ್ಲಿ ಆಶ್ರಯಿಸಬೇಕಾದುದು ಈ ಭುವನಾಶ್ರಯನನ್ನಲ್ಲದೆ ಮತ್ತಾರನ್ನು?

ಶ್ಲೋಕವನ್ನೀಗ ಆಸ್ವಾದಿಸಿ:

ಶೃಂಗಾರ-ರಸ-ಸರ್ವಸ್ವಂ/

ಶಿಖಿಪಿಂಛ-ವಿಭೂಷಣಂ |

ಅಂಗೀಕೃತ-ನರಾಕಾರಂ/

ಆಶ್ರಯೇ ಭುವನಾಶ್ರಯಂ ||

ಸೂಚನೆ : 20/12/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Friday, December 19, 2025

ಪ್ರಶ್ನೋತ್ತರ ರತ್ನಮಾಲಿಕೆ 46

ಲೇಖಕರು : ವಿದ್ವಾನ್ ನರಸಿಂಹ ಭಟ್  

ಸಂಸ್ಕೃತಿ ಚಿಂತಕರು 

ಅಷ್ಟಾಂಗಯೋಗ ವಿಜ್ಞಾನಮಂದಿರಂ

ಪ್ರಶ್ನೆ ೪೫. ಬುದ್ಧಿಮಂತನಾದ ವಿವೇಕಿಯು ಯಾವುದಕ್ಕೆ ಭಯಪಡುತ್ತಾನೆ

ಸಂಸಾರವೆಂಬ ಅರಣ್ಯಕ್ಕೆ.

ಈ ಪ್ರಶ್ನೋತ್ತರದಲ್ಲಿ ಒಂದು ದೃಷ್ಟಾಂತದ ಮೂಲಕ ವಿವರಣೆಯನ್ನು ಕೊಡಲಾಗಿದೆ. ಸಂಸಾರವೆಂಬುದು ಒಂದು ಅರಣ್ಯ ಎಂಬುದಾಗಿ ಭಾವಿಸಲಾಗಿದೆ. ಅರಣ್ಯವು ಪ್ರವೇಶ ಮಾಡುವುದಕ್ಕೆ ಭಯಾನಕವಾಗಿತ್ತದೆ. ಅಲ್ಲಿ ಜೀವಿಸುವುದು ಕಷ್ಟಸಾಧ್ಯವೇ ಸರಿ. ಅಲ್ಲಿನ ಜೀವಿಕೆಗೆ ಅವಧಿ ಇಷ್ಟೇ! ಎಂಬುದು ತೀರ್ಮಾನವಾಗುವುದು ಕಷ್ಟವೇ. ಏಕೆಂದರೆ ಯಾವಾಗ ಜೀವಕ್ಕೆ ಕುತ್ತು ಬರುತ್ತದೆ? ಎಂಬುದನ್ನು ತಿಳಿಯುವುದು ಕಷ್ಟವಾದ್ದರಿಂದ. ಒಂದು ಜೀವವು ಮತ್ತೊಂದು ಜೀವವನ್ನು ಬಳಸಿ ಜೀವಿಸುವ ಅನಿವಾರ್ಯ ಅಲ್ಲಿರುತ್ತದೆ. ಹಾಗಾಗಿ ಭಯವೆಂಬುದು ಅರಣ್ಯದಲ್ಲಿ ಅತ್ಯಂತ ಸಹಜ. ಹಾಗೆಯೇ ಈ ಸಂಸಾರವೂ ಕೂಡ ಅರಣ್ಯದಂತೆ ಭಯಾನಕವಾದದ್ದು ಎಂಬ ದೃಷ್ಟಾಂತದ ವಿವರಣೆ ಇಲ್ಲಿದೆ. ಆದ್ದರಿಂದ 'ವಿವೇಕಿಯಾದವನಿಗೆ ಸಂಸಾರವು ಹೇಗೆ ಅರಣ್ಯಸದೃಶವಾಗಿದೆ?' ಎಂಬುದನ್ನು ನಾವು ಚಿಂತಿಸಬೇಕಾಗಿದೆ.

ಬುದ್ಧಿಮಂತನಾದ ವ್ಯಕ್ತಿ ಏಕೆ ಸಂಸಾರಕ್ಕೆ ಭಯಪಡಬೇಕು? 'ಅದು ಭಯಾನಕ ಅರಣ್ಯದಂತೆ' ಎಂಬುದಾಗಿ ಭಯಪಡಿಸಲು ಕಾರಣವೇನು? ಹಾಗಾದರೆ ಸಂಸಾರವು ಬೇಡವೇ? ಭಗವಂತ ಸಂಸಾರವನ್ನು ಸೃಷ್ಟಿ ಮಾಡಿದ್ದಾದರೂ ಏಕೆ? ಎಂಬಿತ್ಯಾದಿ ಪ್ರಶ್ನೆಗಳು ಸಹಜವಾಗಿ ಉದ್ಭವಿಸುತ್ತವೆ. ವಿವೇಕವು ಹೇಗೆ ನಿಜವಾದ ಬುದ್ಧಮತ್ತೆ ಎಂದು ಪರಿಗಣಿತವಾಗುತ್ತದೆ? ಇದಕ್ಕೆ ಸಂಸಾರವೆಂಬುದು ಹೇಗೆ ವಿರೋಧಿಯಾಗುತ್ತದೆ? ಎಂಬ ಪ್ರಶ್ನೆಗಳೂ ಇದರ ಜೊತೆ ಸೇರಿಕೊಳ್ಳುತ್ತವೆ. ಈ ಕಾರಣಗಳಿಂದ ಈ ಪ್ರಶ್ನೋತ್ತರವು ಕೆಲವೇ ಕೆಲವು ಶಬ್ದಗಳಿಂದ ವಿವರಿಸಲು ಕಷ್ಟ ಸಾಧ್ಯವಾದುದು. ಸಂದರ್ಭಕ್ಕೆ ಅನುಗುಣವಾಗಿ ಸಂಕ್ಷಿಪ್ತವಾಗಿ ವಿವರಿಸುವ ಪ್ರಯತ್ನವಿದಾಗಿದೆ. 

ಶಾಸ್ತ್ರದಲ್ಲಿ 'ಸಂಸಾರ' ಎಂಬುದಕ್ಕೆ ಹೀಗೆ ಒಂದು ವಿವರಣೆ ಇದೆ - "ಮಿಥ್ಯಾಜ್ಞಾನದಿಂದ ಬರುವ ವಾಸನಾರೂಪವಾದ ಸಂಸ್ಕಾರವನ್ನು 'ಸಂಸಾರ' ಎಂಬುದಾಗಿ ಕರೆಯಬೇಕು" ಎಂದು. ಅಂದರೆ ಇದೊಂದು ವಿಪರೀತವಾದ ಅರಿವು ಅಷ್ಟೇ. ಆದರೆ ಈ ಅರಿವೂ ಕೂಡ ಮುಂದಿನ ಅನುಭವಕ್ಕೂ ವಿಷಯವಾಗುತ್ತದೆ ಎಂಬುದೂ ಅಷ್ಟೇ ಸಹಜ. ಏಕೆಂದರೆ ಅನುಭವವೂ ಒಂದು ಅರಿವಷ್ಟೇ. "ಯಾವುದು ಸಂಸರಣ ಶೀಲವಾದದ್ದೋ, ಅಂದರೆ ನಿತ್ಯವೂ ಗತಿಶೀಲವಾದದ್ದೋ ಅದು 'ಸಂಸಾರ' ಎಂಬುದಾಗಿ ಕರೆಸಿಕೊಳ್ಳುತ್ತದೆ" ಎಂಬ ವಿವರಣೆ ಇನ್ನೊಂದು ಕಡೆ ಸಿಗುತ್ತದೆ. ಈ ಸಂಸಾರ ಎಂಬ ಪದಕ್ಕೆ 'ದುಃಖಲೋಕ' ಎಂಬ ಅರ್ಥವಿವರಣೆಯೂ ಇದೆ. ಅದರಿಂದ ನಮಗೆ ತಿಳಿಯುವುದು ಇಷ್ಟೇ - ಸಂಸಾರವು ಸದಾ ದುಃಖಕಾರಿ ಎಂಬುದಾಗಿ. "ಸಂಸಾರವೆಂಬುದು ಅಜ್ಞಾನಮೂಲವಾದುದು. ಆದ್ದರಿಂದ ಇದು ಸರ್ವದಾ ದುಃಖಕಾರಿ" ಎಂಬುದಾಗಿ ಇನ್ನೊಂದು ಕಡೆ ವಿವರಣೆಯನ್ನು ನೋಡಬಹುದು. ಇಷ್ಟೆಲ್ಲಾ ಸಂಸಾರದ ಬಗ್ಗೆ ಹೇಯವಾದ ವಿವರಣೆ ಇರುವುದರಿಂದಲೇ ಒಬ್ಬ ವಿವೇಕಿಯಾದವನು ಈ ಸಂಸಾರವನ್ನು ಭಯದಿಂದ ನೋಡುತ್ತಾನೆ. ಈ ಸಂಸಾರದಲ್ಲಿ ಸಿಲುಕದೆ ಇರುವಂತೆ ಅವನು ಎಚ್ಚರಿಕೆಯನ್ನು ವಹಿಸುತ್ತಾನೆ. ಕೆಲವರು ಈ ಸಂಸಾರದಲ್ಲಿ ಇದ್ದು, ಸಂಸಾರವನ್ನು ಜಯಿಸುವ ಕಾರ್ಯವನ್ನು ಮಾಡುತ್ತಾರೆ. ಇಂತಹವರೇ ನಿಜವಾದ ವಿವೇಕಿಯಾಗುತ್ತಾರೆ. ಇನ್ನು ಕೆಲವೊಮ್ಮೆ ವಿವೇಕಿಯಾದವನು ಸಂಸಾರಿಯಾಗಿ, ಧ್ಯೇಯವಾದುದನ್ನು ನಿಶ್ಚಯಿಸಿ, ಸಂಸಾರವನ್ನು ತ್ಯಜಿಸಿ, ಸಂಸಾರದಿಂದ ಮುಕ್ತಿಯನ್ನು ಪಡೆದು, ಭವವೆಂಬ ಬಂಧನದಿಂದ ಪಾರಾಗುವುದನ್ನು ನೋಡುತ್ತೇವೆ. ಆಶ್ಚರ್ಯವಾದರೂ ಸತ್ಯವಾದ ವಿಷಯವೇನೆಂದರೆ, ಸಂಸಾರವು ಎಷ್ಟೇ ಹೇಯವೆಂದಾದರೂ ಅಲ್ಲೇ ಇದ್ದು, ಅದನ್ನೇ ಬಳಸಿ, ಅದನ್ನು ಪೂರಕವಾಗಿ ಮಾಡಿಕೊಂಡು, ಅದನ್ನು ದಾಟಬೇಕು ಎಂಬುದು ಜ್ಞಾನಿಗಳ ಉಪದೇಶದ ಸಾರವಾಗಿದೆ. ಹಾಗಾಗಿ ಈ ಪ್ರಶ್ನೋತ್ತರದಲ್ಲಿ ಇದರ ಬಗ್ಗೆ ಅಂತಹ ಎಚ್ಚರಿಕೆಯನ್ನು ಕೊಡಲಾಗಿದೆ ಎಂಬುದಾಗಿ ಭಾವಿಸಬೇಕು. ಹಾಗಾದಾಗ ಮಾತ್ರ ಈ ಸಂಸಾರವು ಸಾರವಾಗಿ ಕಾಣುತ್ತದೆ. ಹಾಗಿಲ್ಲದಿದ್ದರೆ ಅದು ಅರಣ್ಯಸದೃಶವೇ ಸರಿ.


Tuesday, December 16, 2025

ಕೃಷ್ಣಕರ್ಣಾಮೃತ 86 ಕಿವಿಗಳೆರಡೂ ಕೊಳಲಿನಮೃತಕ್ಕಾಗಿ ಕಾದು ನಿಂತಿವೆ (Krishakarnamrta 86)


ಲೇಖಕರು : 
ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ನಾನರಿಯೆ - ಎನ್ನುತ್ತಾನೆ, ಲೀಲಾಶುಕ.

ಅರಿತವರ ಮಾತನ್ನಲ್ಲವೆ, ಕೇಳಬೇಕಾದುದು? - ಎಂದು ಮೊದಲು ತೋರಬಹುದು. ಆದರೆ ಏನನ್ನು ಅರಿಯೆನೆಂದು ಕವಿಯು ಹೇಳುತ್ತಿದ್ದಾನೆಂಬುದನ್ನು ಮೊದಲು ತಿಳಿದು ಆಮೇಲೆ ತಮ್ಮ ಪ್ರತಿಕ್ರಿಯೆಯನ್ನು ಕೊಡುವುದೊಳಿತು, ಅಲ್ಲವೆ?

ಏನನ್ನರಿಯೆ, ಲೀಲಾಶುಕ? – ಎಂದು ಕೇಳಿದರೆ, ಕೃಷ್ಣನಿಗಿಂತಲೂ ಮಧುರವೆನಿಸುವ ಮತ್ತಾವುದನ್ನೂ ನಾನರಿಯೆ - ಎನ್ನುತ್ತಾನೆ. ಹಾಗೇಕೆ ಹೇಳುತ್ತಾನೆ ಎಂಬುದನ್ನೊಮ್ಮೆ ಗಮನಿಸಬೇಕಷ್ಟೆ. ಇದೇ ಉತ್ಕೃಷ್ಟ, ಶ್ರೇಷ್ಠ ಎಂಬುದನ್ನು ಯಾರಾದರೂ ಹೇಳಬೇಕಾದರೆ, ಮಿಕ್ಕವುಗಳ ಪರಿಚಯವೂ ಇದ್ದು ಹಾಗೆ ಹೇಳಿದ್ದಲ್ಲಿ ಅದಕ್ಕೆ ಬೆಲೆಯುಂಟು, ಅಲ್ಲವೇ? ಹೌದು, ಅವುಗಳ ಪರಿಚಯದ ಹಿನ್ನೆಲೆಯಲ್ಲೇ ಹೇಳಿರುವ ಮಾತು, ಲೀಲಾಶುಕನದು.

ಏಕೆಂದರೆ, ಆತನ ಹೃದಯದಲ್ಲಿ ನಾನಾಭಾವಗಳು ಆಡಿವೆ. ಇಡೀ ಜಗತ್ತಿನಲ್ಲಿ ಎಲ್ಲರಿಂದಲೂ ಅಭಿಲಷಿಸಲ್ಪಡುವ ಪ್ರಭಾವವುಳ್ಳ ಭಾವಗಳು ಹಲವುಂಟು. ಅವುಗಳೆಲ್ಲದನ್ನು ಕುರಿತಾಗಿಯೂ ನನ್ನ ಹೃದಯದಲ್ಲಿ ಆಸೆಗಳು ಇದ್ದೇ ಇವೆ - ಎನ್ನುತ್ತಾನೆ, ಕವಿ. ಅದನ್ನೇ, "ಅನೇಕ ತೃಷ್ಣೆಗಳಿಗೆ ನನ್ನ ಹೃದಯವು ಸುಹೃತ್ತಾಗಿದೆ" - ಎಂದಿದ್ದಾನೆ. ಮಕ್ಕಳಾಗಲಿ ಸಂಪತ್ತಾಗಲಿ ಲಭ್ಯವಾದರೆ ಅದರಲ್ಲಿ ಸಂತೋಷವಿಲ್ಲವೆ? ಯಾರ ಹೃದಯದಲ್ಲಿರುವುದಿಲ್ಲ ಇಂತಹ ಪುತ್ರಾಶೆ-ವಿತ್ತಾಶೆಗಳು? ನನ್ನ ಹೃದಯದಲ್ಲಂತೂ ಅಂತಹ ಬಯಕೆಗಳೊಂದಿಗೆ ನಂಟು ಇದ್ದೇ ಇದೆ, ಎಂದೊಪ್ಪಿಕೊಳ್ಳುತ್ತಾನೆ, ಲೀಲಾಶುಕ. ಅಲ್ಲಿಗೆ, ಅವನ್ನೆಲ್ಲಾ ನಾನು ನನ್ನ ಹೃದಯದಿಂದ ತಳ್ಳಲಾಗಿಲ್ಲ. ಹೀಗಾಗಿ ಆ ತೆರನಾದ ಎಷ್ಟೋ ಭಾವಗಳು ನನ್ನ ಹೃದಯದಲ್ಲಿ ಆಗಾಗ ತೋರಿಕೊಳ್ಳುತ್ತಲೇ ಇರುತ್ತವೆ. ಆದರೂ, ಅವೆಷ್ಟಾದರೂ ತೋರಿಕೊಳ್ಳಲಿ, ಪರವಾಯಿಲ್ಲ - ಎನ್ನುತ್ತಾನೆ, ಲೀಲಾಶುಕ.

ಏಕೆ ಹಾಗೆ? ಏಕೆಂದರೆ ಇವೆಲ್ಲಕ್ಕಿಂತಲೂ ಮಿಗಿಲಾದುದೊಂದನ್ನು ನಾ ಕಂಡಿರುವೆ. ಯಾವುದದು? ನಂದನ ಪುಣ್ಯ-ಪ್ರವಾಹವೆನಿಸಿದ ಶ್ರೀಕೃಷ್ಣನ ವಕ್ತ್ರಾರವಿಂದವೇ ಅದು. ವಕ್ತ್ರಾರವಿಂದವೆಂದರೆ ಮುಖ-ಕಮಲ. ವಕ್ತ್ರವೆಂದರೆ ಮುಖವಲ್ಲವೇ? ಎಂತಿರುವ ಮುಖ-ಪದ್ಮವದು? ಸ್ಮೇರವಾದುದು, ಎಂದರೆ ಮಂದಹಾಸದಿಂದ ಕೂಡಿರುವುದು. ಆ ಮಂದಹಾಸವಾದರೂ ಯಾವ ಹಿನ್ನೆಲೆಯಲ್ಲಿ ಮೂಡಿದೆ?

ಕೃಷ್ಣನು ಲೀಲೆಯಿಂದ, ಎಂದರೆ ವಿಶೇಷ-ಯತ್ನವೇ ಇಲ್ಲದೆ, ಲೀಲಾ-ಜಾಲವಾಗಿ ವೇಣುವನ್ನು ನುಡಿಸುತ್ತಿರುವನಲ್ಲವೇ? ತನ್ನೊಂದು ಲೀಲೆಗಾಗಿ ವೇಣುಧ್ವನಿಯನ್ನು ಮಾಡುತ್ತಿರುವನೆಂದರೂ ಸರಿ, ಅಥವಾ ಲೀಲೆಯಾಗಿ ಹಾಗೆ ಮಾಡುತ್ತಿರುವನೆಂದರೂ ಸರಿಯೇ. ಅಂತೂ ಆ ವೇಣುಕ್ವಣಿತದ ಹಿನ್ನೆಲೆಯಲ್ಲಿ ಮೂಡಿರುವ ಮಂದಹಾಸವು ಆತನ ಕಮಲ-ಸದೃಶವಾದ ಮುಖದ ಮೇಲೆ ವಿರಾಜಿಸುತ್ತಿದೆ. ಹೀಗೆ ಮುಗುಳ್ನಗೆಯು ಮೂಡಿರುವ ಮುಖಾರವಿಂದಕ್ಕಿಂತಲೂ ಮಿಗಿಲಾದ ಮಧುರ-ಪದಾರ್ಥವು ಮತ್ತೊಂದಿರಲಾರದು - ಎನ್ನುತ್ತಾನೆ, ಕವಿ.

ಲೀಲಾಶುಕನೇನೂ ವಾನಪ್ರಸ್ಥನೋ ಸಂನ್ಯಾಸಿಯೋ ಆಗಿಬಿಟ್ಟಿಲ್ಲ. ಹಾಗಿರುವುದರಿಂದ ಜನರ ನಡುವಿನಲ್ಲೇ ಇದ್ದು, ಎಲ್ಲರೂ ಯಾವುದನ್ನು ಮಧುರವೆಂದುಕೊಳ್ಳುತ್ತಾರೆ? - ಎಂಬುದನ್ನೂ ಬಲ್ಲವನಾಗಿದ್ದು, ಈ ಮಾತನ್ನು ನುಡಿಯುತ್ತಿದ್ದಾನೆ. "ಯಾವುದೆಂತೇ ಇರಲಿ, ಕೃಷ್ಣ-ವದನ-ಪದ್ಮಕ್ಕಿಂತಲೂ ಹೆಚ್ಚು ಮಾಧುರ್ಯ-ಭರಿತವಾದದ್ದನ್ನು ನಾ ಕಾಣೆ" ಎಂದು ದೃಢವಾಗಿ ಹೇಳುತ್ತಿದ್ದಾನೆ.

ಶ್ಲೋಕ ಹೀಗಿದೆ:
ತೇ ತೇ ಭಾವಾಃ ಸಕಲ-ಜಗತೀ-ಲೋಭನೀಯ-ಪ್ರಭಾವಾಃ / 

ನಾನಾ-ತೃಷ್ಣಾ-ಸುಹೃದಿ ಹೃದಿ ಮೇ ಕಾಮಮ್ ಆವಿರ್ಭವಂತಾಮ್ |

ಲೀಲಾ-ವೇಣು-ಕ್ವಣಿತ-ಲಸಿತ-ಸ್ಮೇರ-ವಕ್ತ್ರಾರವಿಂದಾತ್ /

ನಾಹಂ ಜಾನೇ ಮಧುರಂ ಅಪರಂ ನಂದ-ಪುಣ್ಯಾಂಬುಪೂರಾತ್ ||

***

ಕೃಷ್ಣನು ಇಗೋ ಬರುತ್ತಿದ್ದಾನೆ, ಎನ್ನುತ್ತಿದೆ ಈ ಶ್ಲೋಕ. ಎಂತಹ ಕೃಷ್ಣನಿವನು? ಈತನು ನನ್ನ ನಯನ-ಬಂಧು. ಅಲ್ಲದೆ ಅನನ್ಯ-ಬಂಧುವೂ ಹೌದು.

ಹಾಗೆಂದರೇನು? ಬಂಧುಗಳು ಕಷ್ಟಕ್ಕಾಗುವರು - ಎಂಬ ಮಾತಿದೆಯಲ್ಲವೇ? ಹಾಗೆಂದರೆ, ಕಷ್ಟಗಳು ಬಂದಾಗ ಸಹಾಯಕ್ಕೆ ನಿಲ್ಲುವರು - ಎಂದರ್ಥ. ಕಷ್ಟವನ್ನು ಪರಿಹರಿಸುವವರು, ಸಂತಾಪವನ್ನು ಹೋಗಲಾಡಿಸುವವರು ಯಾರೋ ಅವರೇ ಬಂಧುಗಳು - ಎಂದರ್ಥ. ಕೃಷ್ಣನು ನಯನ-ಬಂಧುವೆಂದರೆ, ನನ್ನ ಕಣ್ಣುಗಳಿಗುಂಟಾಗಿರುವ ನೋವನ್ನು ಪರಿಹರಿಸತಕ್ಕವನು. ಕೃಷ್ಣನನ್ನಿನ್ನೂ ಕಂಡಿಲ್ಲವೆಂಬುದೇ ನನ್ನ ಸಂತಾಪವಾಗಿತ್ತು. ಈಗ ಕಂಡೆನಲ್ಲವೇ? ನನ್ನ ತಾಪ ಕಳೆಯಿತು. ಬಂಧುವೆಂಬ ಪದಕ್ಕೇ ಮತ್ತೊಂದು ಅರ್ಥವೂ ಉಂಟು. ಬಂಧನವನ್ನುಂಟುಮಾಡುವವನೇ ಬಂಧು. ಒಳ್ಳೆಯ ಬಂಧುಗಳಾದರೆ ನಮ್ಮನ್ನು ಪ್ರೇಮಪಾಶದಿಂದ ಕಟ್ಟಿಹಾಕುವವರೇ, ಅಲ್ಲವೇ? ಹಾಗಾಗಿ ನಮ್ಮ ಕಣ್ಣುಗಳನ್ನು ಈತ ಕಟ್ಟಿಹಾಕಿದ್ದಾನೆ. "ಕಣ್ಣಿಗೆ ಕಟ್ಟಿದಂತಿದೆ" ಎಂದೂ ಕನ್ನಡದಲ್ಲಿ ಬಳಕೆಯುಂಟಷ್ಟೆ?

ಪ್ರಕೃತ, ಆತನನ್ನು ಕಂಡರೆ ನಮ್ಮ ದೃಷ್ಟಿಯು ಅಲ್ಲಿಯೇ ಲಗ್ನವಾಗಿಬಿಡುತ್ತದೆ. ಮತ್ತೆಲ್ಲೂ, ಮತ್ತೇನನ್ನೂ ನೋಡಲೇ ಮನಬರದು. ಆತನನ್ನೇ ನೋಡುತ್ತಿರಬೇಕೆನಿಸುತ್ತದೆ. ಹೀಗೆ ಆತನು ನಯನಬಂಧು: ನಮ್ಮ ನೋಟವನ್ನು ತನ್ನಲ್ಲಿಯೇ ಬಂಧಿಸಿರುವವನು. ಯಾವನಿಗೆ ದಿಕ್ಕಾಗಿ ಮತ್ತೊಬ್ಬರಿಲ್ಲವೋ ಅಂತಹವರಿಗೆ ಬಂಧುವಾದವನು ಅನನ್ಯ-ಬಂಧು. "ನನಗಿನ್ನಾರೂ ಇಲ್ಲ; ಅಂತಹ ನನಗೆ ಕೃಷ್ಣನೇ ಬಂಧು; ಹೀಗಾಗಿ ಕೃಷ್ಣನೊಬ್ಬನೇ ನನಗೆ ಬಂಧು" – ಎಂಬುದಾತನ ಭಾವ.

ಕೃಷ್ಣನ ಆಗಮನದಿಂದಾಗಿ ನನ್ನ ಮೇಲೆ ಒಂದು ವಿಶೇಷ-ಪರಿಣಾಮವೂ ಆಗುವುದು. ಆತನು ತನ್ನ ವೇಣುವನ್ನು ನುಡಿಸಿಕೊಂಡು ಬರುವನಲ್ಲವೇ, ವಿಲಾಸ-ಯುತವಾಗಿ? ಎಂದೇ ಅದು ಆತನ ವಿಲಾಸಮುರಳಿ. ಆತನ ವಿಲಾಸಕ್ಕೆ ಆ ಮುರಳಿಯೇ ಕಾರಣವೆಂದಾದರೂ ಭಾವಿಸಬಹುದು. ಹಾಗೂ ಅದು ವಿಲಾಸಮುರಳಿಯೇ. ಅಂತೂ ಆ ವಿಲಾಸ-ಮುರಳಿಯಿಂದ ಹೊಮ್ಮುವ ನಾದವು ಆಪ್ಯಾಯಕವಾಗಿರುತ್ತದೆ, ಅಮೃತದಂತೆ. ಇಂತಹ ಮುರಳಿಯ ಆ ನಿನದಾಮೃತವೇ ನನ್ನ ಮೇಲೆ ವಿಶೇಷ ಪರಿಣಾಮವನ್ನುಂಟುಮಾಡುತ್ತಿರುವುದು.

ಆ ಅಮೃತವು ನನ್ನ ಕಿವಿಗೆ ಸಿಂಚನವಾಗುತ್ತಿದೆ. ನನ್ನ ಎರಡೂ ಕಿವಿಗಳೂ ಅದರ ಅಮೃತ-ಸೇಕವನ್ನು ಹೊಂದಿವೆ. ಸೇಕವೆಂದರೆ ಹುಯ್ಯುವುದು. ಇದರ ಪರಿಣಾಮವಾಗಿ, ಎಂದರೆ ಅಮೃತದಂತಿರುವ ಗಾನದ ಶ್ರವಣದಿಂದಾಗಿ, ನನ್ನ ಎರಡೂ ಕಿವಿಗಳೂ ನಿಮಿರಿ ನಿಂತಿವೆ. ಉದಂಚಿತವೆಂದರೆ ಮೇಲಕ್ಕೆ ನೀಟಿರುವುದು, ನಿಮಿರಿನಿಂತಿರುವುದು. ಹೇಗೆ ಕುದುರೆಯ ಕಿವಿಯು ತನಗಿಷ್ಟವಾದ ದನಿಯು ಕೇಳಿಸಿದೊಡನೆಯೇ, ಆ ಧ್ವನಿಯನ್ನೇ ಲಕ್ಷಿಸಿಕೊಳ್ಳುತ್ತಾ, ನಿಮಿರಿ ನಿಲ್ಲುವುದೋ, ಹಾಗೆ ನನ್ನ ಕಿವಿಗಳೆರಡೂ ಆ ಧ್ವನಿಯನ್ನು ಆಲಿಸುವುದರಲ್ಲೇ ಮಗ್ನವಾಗಿದೆ: ಬಾಲ-ಕೃಷ್ಣನ ಮುರಳೀ-ಗಾನವು ಹೀಗೆ ಕರ್ಣಾಮೃತವಾಗಿದೆ, ಎನಗೆ.

ಆನಂದವು ಚಿಗುರೊಡೆದಿರುವುದು – ಎಂಬುದನ್ನು ಆನಂದ-ಕಂದಳಿತವಾದದ್ದು ಎನ್ನುವರು. ಯಾವುದದು ಹಾಗಾಗಿರುವುದು? ಆತನ ಕೇಲಿ-ಕಟಾಕ್ಷಗಳು, ಎಂದರೆ ವಿಲಾಸ-ದೃಷ್ಟಿಗಳು. ಅವೇ ಆನಂದ-ಕಂದಳಿತವಾಗಿರುವುದು. ಅಂತಹ ಕಟಾಕ್ಷಗಳೂ ಒಂದೆರಡಲ್ಲ, ಹಲವು. ಆ ಲೀಲಾಕಟಾಕ್ಷಗಳು ನನ್ನನ್ನೇ ಲಕ್ಷ್ಯಮಾಡಿಕೊಂಡಿವೆ, ನನ್ನತ್ತಲೇ ಹರಿದಿವೆ. ಒಟ್ಟಿನಲ್ಲಿ, ಕೃಷ್ಣನು ನನ್ನ ನಯನ-ಬಂಧು, ಅನನ್ಯ-ಬಂಧು. ತೋಷವನ್ನು ಅರಳಿಸುವುವು, ಆತನ ಕಟಾಕ್ಷ-ವಿಲಾಸಗಳು. ಅಂತಹ ಕೃಷ್ಣನು ನನ್ನತ್ತ ಬರುತ್ತಲೇ ವಿಲಾಸ-ಮುರಳಿಯ ನಾದಾಮೃತವನ್ನು ಸುರಿಸುತ್ತಿದ್ದಾನೆ. ಆ ಅಮೃತಕ್ಕಾಗಿ ಹಾತೊರೆಯುವ ನನ್ನ ಎರಡೂ ಕಿವಿಗಳು ಆ ಅಮೃತದ ಸೇಕವನ್ನು  ನಿಮಿರಿ ನಿಂತು ಆಸ್ವಾದಿಸುತ್ತಿವೆ. ಸುಖಾಂಕುರವನ್ನು ಹೊರಡಿಸತಕ್ಕವು, ಆತನ ಕೇಲಿಕಟಾಕ್ಷಗಳು. ನನ್ನ ನೇತ್ರ-ಶ್ರೋತ್ರಗಳನ್ನು ಆವರಿಸಿಕೊಂಡಿದ್ದಾನೆ, ಶ್ರೀಕೃಷ್ಣ – ಎಂಬುದು ಒಟ್ಟಿನ ತಾತ್ಪರ್ಯ.

ಶ್ಲೋಕ ಹೀಗಿದೆ:

ಸೋಽಯಂ ವಿಲಾಸ-ಮುರಲೀ-ನಿನದಾಮೃತೇನ/

ಸಿಂಚನ್ ಉದಂಚಿತಂ ಇದಂ ಮಮ ಕರ್ಣಯುಗ್ಮಂ |

ಆಯಾತಿ ಮೇ ನಯನ-ಬಂಧುರ್ ಅನನ್ಯ-ಬಂಧುಃ/

ಆನಂದ-ಕಂದಲಿತ-ಕೇಲಿ-ಕಟಾಕ್ಷ-ಲಕ್ಷ್ಯಃ ||

ಸೂಚನೆ : 14/12/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಭಗವಂತನು ಯೋಗನಿದ್ರೆಯನ್ನೇ ಏಕೆ ಅಲಂಕರಿಸಿದ್ದಾನೆ ? (Bhagavantanu Yoganidreyanne Eke Alaṅkarisiddane?)

ಲೇಖಕರು: ಡಾ. ರಾಮಮೂರ್ತಿ  ಟಿ.ವಿ. 
(ಪ್ರತಿಕ್ರಿಯಿಸಿರಿ lekhana@ayvm.in)



ಬಲಿಚಕ್ರವರ್ತಿಯಕಥೆ, ವಾಮನನ ಅವತಾರ, ಚಾತುರ್ಮಾಸ್ಯದ ವಿವರಗಳು ಪುರಾಣಗಳಲ್ಲಿ ಲಭ್ಯವಿದೆ. ಅಸುರನಾದ ಬಲಿರಾಜನು ಮೂರೂ ಲೋಕಗಳನ್ನು ಗೆದ್ದು ಇಂದ್ರಾದಿ ದೇವತೆಗಳನ್ನು ಪಲ್ಲಟಗೊಳಿಸಿದ್ದ. ದೇವತೆಗಳ ಪ್ರಾರ್ಥನೆಯಂತೆ ಮಹಾವಿಷ್ಣುವು ವಾಮನನಾಗಿ ಅವತರಿಸಿದ್ದ. ಬಲಿಯು ಯಜ್ಞಮಾಡುವಾಗ ವಾಮನ ಆತನ ಬಳಿ ಮೂರು ಹೆಜ್ಜೆ ಭೂಮಿಗಾಗಿ ಯಾಚಿಸಿದ. ಬಲಿಯು ತಾನೇ ಮೂಜಗದ ಒಡೆಯನೆಂದು ಅಹಂಕಾರದಿಂದ ನಕ್ಕು , ಅವನ ಗುರುಗಳ ಎಚ್ಚರಿಕೆಯ ಮಾತನ್ನು ತಿರಸ್ಕರಿಸಿ, ಅವನಿಗೆ ದಾನ ಮಾಡಲು ಒಪ್ಪಿಕೊಂಡ. ವಾಮನ ತ್ರಿವಿಕ್ರಮನಾಗಿ ಬೆಳೆದು, ತನ್ನ ಮೊದಲೆರಡು ಹೆಜ್ಜೆಯಿಂದ ಭೂಮಿ, ಆಕಾಶವನ್ನು ಅಳೆದು ಮೂರನೆಯ ಹೆಜ್ಜೆ ಎಲ್ಲಿಡಲಿ ಎಂದಾಗ, ಬಲಿಯು ಶರಣಾಗಿ ತನ್ನ ತಲೆಯ ಮೇಲಿಡಲು ಪ್ರಾರ್ಥಿಸಿದ. ಬಲಿಯ ತ್ಯಾಗವನ್ನು ಮೆಚ್ಚಿ ವಿಷ್ಣುವು ಅವನಿಗೆ ಸ್ವರ್ಗಲೋಕಕ್ಕೆಣೆಯಾದ , ಈತಿಬಾದೆಗಳಿಲ್ಲದ, ಸುಖಸಂಪತ್ತಿನಿಂದ ಕೂಡಿದ, ತನ್ನ ಸಾನ್ನಿಧ್ಯಸಮೇತ, ಸುದರ್ಶನಚಕ್ರದ ರಕ್ಷಣೆಯೊಂದಿಗೆ ಬಲಿಯ ಬಂಧುಮಿತ್ರರೊಂದಿಗೆ ಪಾತಾಳಲೋಕದ ಅಧಿಪತ್ಯವನ್ನು ಕೊಟ್ಟನು. ಬಲಿಚಕ್ರವರ್ತಿಗೆ ಮುಂದೆ ಬರುವ ಸಾವರ್ಣಿಕ ಮನ್ವನ್ತತರದಲ್ಲಿ ಇಂದ್ರಪದವಿಯ ವರವನ್ನೂಅನುಗ್ರಹಿಸಿದ. ಇನ್ನೊಂದು ಪುರಾಣದ ಕಥೆ- ಶ್ರಾವಣ ಹುಣ್ಣಿಮೆಯ ರಕ್ಷಾಬಂಧನದ ಪ್ರಕರಣ. ಮಹಾಲಕ್ಶ್ಮಿಯು , ವಿಷ್ಣುವಿಗಾಗಿ ಬಲಿಯ ಸಹೋದರಿಯೆಂದು ಬಂದು ಅವನ ಕೈಗೆ ರಕ್ಷಾಬಂಧನದ ಕುರುಹಾಗಿ ಪವಿತ್ರ ದಾರವನ್ನು (ರಾಖಿ) ಕಟ್ಟಲು, ಬಲಿಯು ಅವಳಿಗೆ ವರವನ್ನಿತ್ತನು. ಬಲಿಚಕ್ರವರ್ತಿಯ ಸೋದರಿಯಾಗಿ ಬಂದ ಮಹಾಲಕ್ಷ್ಮಿಯು, ತನ್ನ ಪತಿಯಾದ ವಿಷ್ಣುವು ಪ್ರತಿವರ್ಷ ನಾಲಕ್ಕು ತಿಂಗಳು ಬಲಿಯ ಲೋಕದಲ್ಲಿರಲಿ, ಉಳಿದ ಎಂಟು ತಿಂಗಳು ವೈಕುಂಠದಲ್ಲಿರಲಿ ಎಂದು ವರವಾಗಿ ಕೇಳಿದಳು. ಈ ನಾಲಕ್ಕು ತಿಂಗಳು- ಆಷಾಡ ಶುದ್ಧ ದೇವಶಯನಿ ಏಕಾದಶಿಯಿಂದ ಕಾರ್ತಿಕಶುದ್ಧ ಪ್ರಬೋಧಿನಿ ಏಕಾದಶಿವರೆಗೆ ಮಹಾವಿಷ್ಣುವು ಯೋಗನಿದ್ರೆಯಲ್ಲಿ ಶೇಷಶಾಯಿಯಾಗಿರುತ್ತಾನೆ. ಈ ನಾಲಕ್ಕು ತಿಂಗಳು ಚಾತುರ್ಮಾಸ್ಯವೆಂದು ಭಕ್ತರು ವಿಶೇಷ ಭಗವತ್ಸ್ಮರಣೆ, ಉಪವಾಸ, ಸ್ತೋತ್ರಪಠಣ, ಅನ್ನಾಹಾರಗಳಲ್ಲಿ ಶಿಸ್ತು ಇತ್ಯಾದಿ ನಿವೃತ್ತಿಮಾರ್ಗವನ್ನು ಪಾಲಿಸುತ್ತಾರೆ. ಈ ನಾಲಕ್ಕು ತಿಂಗಳು ಹೊರಪ್ರಪಂಚದ ಮಳೆಗಾಲವಾಗಿರುತ್ತದೆ ಎಂಬುದನ್ನು ಗಮನಿಸಬೇಕು.

ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಇಡೀ ಬ್ರಹ್ಮಾಂಡದ ಸೃಷ್ಟಿ, ಸ್ಥಿತಿ ಮತ್ತು ಲಯ(ಸಂಹಾರ) ಕಾರ್ಯಗಳನ್ನು ನಿರ್ವಹಿಸುತ್ತಾರೆ. ಸ್ಥಿತಿಕಾರನಾಗಿರುವ ಮಹಾವಿಷ್ಣುವು ಯೋಗನಿದ್ರೆಯಲ್ಲಿರುವ ನಾಲಕ್ಕು ತಿಂಗಳು, ಅವನ ಆಜ್ಞೆ ಮತ್ತು ಶಕ್ತಿಯನ್ನು ಹೊಂದಿ, ಶಿವ ಮತ್ತು ಇತರ ದೇವತೆಗಳು ಜಗತ್ಪಾಲನೆಯ ಕಾರ್ಯವನ್ನು ನಿರ್ವಹಿಸುತ್ತಾರೆ ಎಂಬುದಾಗಿ ಪುರಾಣಗಳು ತಿಳಿಸುತ್ತವೆ. ಯೋಗನಿದ್ರಾ ಎಂಬ ಪದಕ್ಕೆ ಅಜಾಢ್ಯನಿದ್ರಾ, ತುರೀಯ ಎಂಬ ಪದಗಳನ್ನು ಪರ್ಯಾಯಪದಗಳಂತೆ ಆರ್ಷಸಾಹಿತ್ಯದಲ್ಲಿ ಉಪಯೋಗಿಸಿದ್ದಾರೆ. ಕೆಲವೆಡೆ ಬಹಳ ನಿಕಟವಾದ ಆಂತರಿಕ ಸ್ಥಿತಿಗಳ ಅರ್ಥದಲ್ಲಿ ಬಳಸಲ್ಪಿಟ್ಟಿದೆ. ಈ ಪದಗಳು ಕೇವಲ ದೇಹ, ಮನಸ್ಸಿನ ವಿಶ್ರಾಂತಿಯ ಅರ್ಥದಲ್ಲಿ ಉಪಯೋಗಿಸಿಲ್ಲ. ಈ ಯೋಗನಿದ್ರೆಯು ಪ್ರಾಕೃತರ ನಿದ್ದೆಯಂತಲ್ಲ. ಯೋಗನಿದ್ರೆಯಲ್ಲಿರುವ ಭಗವಂತನು ಅತಿಶಯವಾದ ಸೌಂದರ್ಯ ಲಾವಣ್ಯದಿಂದ ಕಂಗೊಳಿಸುತ್ತಾನೆ.

ನಿದ್ರೆಯಾಭಿಮಾನಿ ದೇವತೆಗಳು ಅವನಿಗೆ ವಶವೇ ಹೊರತು ಅವನು ಅವರಿಗೆ ವಶನಲ್ಲ. ಪುರಾಣದಕಥೆಯ ಪ್ರಕಾರ ಈ ವಿಶಿಷ್ಟನಿದ್ರೆಯೂ ಯೋಗನಿದ್ರಾದೇವಿಗೆ ಕೊಟ್ಟ ವರವಂತೆ. ಭಗವಂತನು ಯೋಗನಿದ್ರೆಯನ್ನೇ ಏಕೆ ಅಲಂಕರಿಸಿದ್ದಾನೆ ಎಂಬ ಪ್ರಶ್ನೆ ಮೂಡುವುದು ಸಹಜ. . ಚೇತನನಿಗೆ ನಾಲಕ್ಕು ಅವಸ್ಥೆಗಳಿವೆ. ಸಾಮಾನ್ಯರು ಕೇವಲ ಮೂರು ಸ್ಥಿತಿಗಳನ್ನು ಅನುಭವಿಸುತ್ತಾರೆ. ಋಷಿ, ಮುನಿಗಳು, ಜ್ಞಾನಿಗಳು ನಾಲಕ್ಕೂ ಸ್ಥಿತಿಗಳನ್ನು ಅನುಭವಿಸುತ್ತಾರೆಂದು ಮಾಂಡೂಕ್ಯ ಉಪನಿಷತ್ತು ತಿಳಿಸುತ್ತದೆ. ಈ ಸ್ಥಿತಿಗಳು-ಜಾಗ್ರತ್ತು, ಸ್ವಪ್ನ,ಸುಷುಪ್ತಿ (ಗಾಢ ನಿದ್ರೆ) ಮತ್ತು ತುರೀಯ. ಜಾಗ್ರತ್ತಿನಲ್ಲಿ , ಮನುಜ ತನ್ನ ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯ ಮೂಲಕ ಎಚ್ಚರದಿಂದ ಪ್ರಪಂಚದ ಸಂಬ೦ಧವನ್ನಿಟ್ಟುಕೊಂಡಿರುತ್ತಾನೆ. ಸ್ವಪ್ನಾವಸ್ಥೆಯಲ್ಲಿ ಜೀವಕ್ಕೆ ಹೊರಪ್ರಪಂಚದ ಅರಿವೇ ಇಲ್ಲದೆ ಕಾಲ್ಪನಿಕವಾದ ಚಿತ್ರ, ದೃಶ್ಯ,ಸಂಭಾಷಣೆ, ಪರಿಣಾಮ , ಆಸೆಗಳ ಅನುಭವಗಳು ಉಂಟಾಗುತ್ತದೆ. ಸುಷುಪ್ತಿಯಲ್ಲಿ ಯಾವುದೇ ಒಳ, ಹೊರ ಪ್ರಪಂಚದ ಅನುಭವವಿಲ್ಲದೆ ವಿಶ್ರಾಂತಿಯ ಆದರೆ ಅಂಧಕಾರದಿಂದ ಕೂಡಿದ ಸ್ಥಿತಿಯಿರುತ್ತದೆ. ಅವಿದ್ಯೆಯಿಂದ ಜೀವನು ತನ್ನನ್ನು ಶರೀರ, ಇಂದ್ರಿಯ ಮತ್ತು ಮನಸ್ಸೇ ತಾನೆಂದು ತಪ್ಪಾಗಿ ಗ್ರಹಿಸುತ್ತಾನೆ. ಈ ಮೂರೂ ಸ್ಥಿತಿಗಳು ಮಿಥ್ಯೆ ಮತ್ತು ಅಶಾಶ್ವತ ಎಂಬುದು ನಾಲ್ಕೂ ಸ್ಥಿತಿಗಳನ್ನು ಅನುಭವಿಸಿದ ಮುನಿಜನರ ಮಾತು. ನಾಲ್ಕನೆಯ ತುರೀಯಾ ಸ್ಥಿತಿಯೇ ಜೀವಿಯ ಸಹಜಾವಸ್ಥಾ ಎಂಬುದು ಜ್ಞಾನಿಗಳ ನಿಷ್ಕರ್ಷೆ. ಭಗವಂತನ ಯೋಗನಿದ್ರೆಯಲ್ಲಿ ಅಜ್ಞಾನ, ಮೋಹ, ಜಾಡ್ಯ ಮುಂತಾದ ವಿಕಾರಗಳಿರುವುದಿಲ್ಲ. ಈ ನಿದ್ರೆಯಲ್ಲಿ ಸಾಮಾನ್ಯ ಜೀವಿಗಳ ನಿದ್ರೆಯಲ್ಲಾಗುವ ದೇಹದ ಕಾಂತಿಯು ಕುಂದುವುದಾಗಲಿ, ಜೋತುಬೀಳುವುದಾಗಲಿ ಇರುವುದಿಲ್ಲ. ಜಾಗ್ರದವಸ್ಥೆಯಂತೆ ಭಕ್ತರನ್ನು ಪೊರೆಯುವದರಲ್ಲಿ ಎಚ್ಚರವಿರುತ್ತದೆ. ಸ್ವಪ್ನಾವಸ್ಥೆಯಂತೆ ಇಲ್ಲೂ ಅತಿಂದ್ರೀಯ ದರ್ಶನ-ಶ್ರವಣಗಳಾಗಬಹುದು ಮತ್ತು ಸುಷುಪ್ತಿಯ ಹಾಗೆ ಕಣ್ಮುಚ್ಚಿರುತ್ತದೆ. ಎಚ್ಚರದಲ್ಲಿ ಕಣ್ಣು ಬಿಟ್ಟಿದ್ದರೆ ತುರೀಯದಲ್ಲಿ ಕಣ್ಣು ಮುಚ್ಚಿರುತ್ತದೆ. ಸ್ವಪ್ನ ಮತ್ತು ಸುಷುಪ್ತಿಯಲ್ಲಿ ಶರೀರವು ಜಾಢ್ಯತೆಯಿಂದ ಕೂಡಿದ್ದರೆ, ತುರೀಯದಲ್ಲಿ ಕಾಂತಿಯುಕ್ತಿಯಿಂದ ಕೂಡಿರುತ್ತದೆ. ತುರೀಯಸ್ಥಿತಿ ದ್ವಂದಾತೀತ , ಸಚ್ಚಿದಾನಂದ ಸ್ವರೂಪ. ತಾನೇ ತಾನಾಗಿ ಬೆಳಗುವ ಅಂತಿಮಸತ್ಯದರ್ಶನವಾಗುತ್ತದೆ. ಈ ಸ್ಥಿತಿಯನ್ನು ಅನುಭವಿಸಿದಾತನಿಗೆ ಇದಕ್ಕಿಂತ ಮಿಗಿಲಾದ ಭಾಗ್ಯ ಅಥವಾ ಲಾಭ ಬೇಕಾಗಿರುವುದಿಲ್ಲ ಮತ್ತು ಆತ ಆ ಸ್ಥಿತಿಯನ್ನು ತನ್ನಿಚ್ಛೆಗೆ ಬಂದಾಗ ಏರಬಲ್ಲ ಎಂಬುದೆಲ್ಲ ಅನುಭವಿಗಳ ಮಾತು. ಶ್ರೀರಂಗಸದ್ಗುರುಗಳ ವಾಣೀ ಸ್ಮರಣೀಯ. ";ಜೀವವು ದೇವನಲ್ಲಿ ಹೋಗಿ ಸೇರಿ, ಅವನು ಒಪ್ಪಿಕೊಳ್ಳುವಂತೆ ಅಪ್ಪಿ, ಅವನ ಯೋಗನಿದ್ರೆಯಲ್ಲಿ, ಮನೋಹರವಾದ ಮೂರ್ತಿಯಲ್ಲಿ ಒಂದಾಗಿ ಹೋಗುವ ವಿಷಯಯವುಂಟಪ್ಪ, ಇದೇ ಅನುಗ್ರಹದ ಅಂತಿಮ ಫಲ" ಅಂತಹ ಯೋಗನಿದ್ರೆಯಿಂದ ಹೊರಬಂದು ಅರಳಿದ ಭಗವಂತನ ಅನುಗ್ರಹದ ದೃಷ್ಟಿಪ್ರಸಾದ ನಮ್ಮೆಲ್ಲರನ್ನೂ ಸನ್ಮಾರ್ಗದಲ್ಲಿ ನಡೆಯಲು ಪ್ರೇರಿಸಲಿ ಎಂದು ಪ್ರಾರ್ಥಿಸೋಣ.

ಸೂಚನೆ : 14/12/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 166 ಉಗ್ರತಪಸ್ವಿ ಜರಾಸಂಧನ ಭೀಕರ ಆಂತರ್ಯ (Vyaasa Vikshita 166)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಯುಧಿಷ್ಠಿರನು ಮಾಡಬೇಕೆಂದುಕೊಂಡಿರುವ ರಾಜಸೂಯಯಾಗಕ್ಕೆ ಯಾರು ಅನುಕೂಲ, ಯಾರು ಪ್ರತಿಕೂಲ – ಎಂಬುದನ್ನು ಶ್ರೀಕೃಷ್ಣನು ತಿಳಿಸುತ್ತಾ, ಜರಾಸಂಧನ ಬಗ್ಗೆ ಹೇಳುತ್ತಿದ್ದಾನೆ. ಜರಾಸಂಧನ ಮಗಳು ತನ್ನ ಪತಿಯು ಗತಿಸಿದುದರಿಂದಾದ ದುಃಖಕ್ಕೆ ಪ್ರತೀಕಾರವಾಗಿ "ನನ್ನ ಪತಿಯನ್ನು ಕೊಂದವರನ್ನು ಕೊಲ್ಲು" - ಎಂಬುದಾಗಿ ಮತ್ತೆ ಮತ್ತೆ ಜರಾಸಂಧನನ್ನು ಪೀಡಿಸಿದಳು.

ಅದು ತಿಳಿಯುತ್ತಲೇ ನಾವುಗಳು ಇನ್ನು ಕಷ್ಟವೆಂದು ನಿಶ್ಚಯಿಸಿದೆವು. "ಇಲ್ಲಿಯ ಮಹತ್ತಾದ ಸಂಪತ್ತನ್ನು ಬೇರೆಬೇರೆಯಾಗಿ ಹೊತ್ತುಕೊಂಡು, ಮಕ್ಕಳು-ಮರಿ-ಬಂಧುಗಳೊಂದಿಗೆ ಓಡಿಹೋಗಿಬಿಡೋಣ" - ಎಂದು ಮಾತನಾಡಿಕೊಂಡು, ಮಕ್ಕಳು-ಜ್ಞಾತಿಗಳು-ಬಂಧುಗಳೊಂದಿಗೆ ಪಶ್ಚಿಮದಿಕ್ಕಿಗೆ ಸಾಗಿದೆವು. ಅಲ್ಲಿ ಕುಶಸ್ಥಲೀ - ಎಂಬ ಹೆಸರಿನ ನಗರಿಗೆ ಪಲಾಯನ ಮಾಡಿದೆವು.

ಅಲ್ಲಿಗೆ ಹೋದ ನಾವು ಎಂತಹ ಕೋಟೆಯನ್ನು ಕಟ್ಟಿಕೊಂಡೆವು ಗೊತ್ತೇ, ಯುಧಿಷ್ಠಿರಾ? ದೇವತೆಗಳಿಗೆ ಸಹ ಅದರೊಳಗೆ ಪ್ರವೇಶ ಮಾಡುವುದು ಸಾಧ್ಯವಿಲ್ಲ. ಅದರೊಳಗೆ ನಿಂತು ಸ್ತ್ರೀಯರು ಸಹ ಯುದ್ಧವನ್ನು ಮಾಡಬಹುದು, ಹಾಗಿರಲು ವೃಷ್ಣಿವಂಶದ ಮಹಾರಥರ ಬಗ್ಗೆ ಹೇಳುವುದೇನಿದೆ? ಅದರೊಳಗೆ ಇದ್ದುಕೊಂಡೇ ನಾವು ನಿರ್ಭಯರಾಗಿರುವುದು. ಈ ರೈವತಕಪರ್ವತವು ಅದೆಷ್ಟು ದುರ್ಗಮವೆಂದರೆ, ಜರಾಸಂಧನ ಭಯವು ಇನ್ನಿಲ್ಲವೆಂದು ಬಗೆದು, ನಾವುಗಳೆಲ್ಲರೂ ಆನಂದವಾಗಿದ್ದೇವೆ.

ಶಕ್ತಿಶಾಲಿಗಳಾಗಿದ್ದರೂ ಗೋಮಂತ(ಅಥವಾ ರೈವತಕ)ವನ್ನು ಆಶ್ರಯಿಸಿಕೊಂಡಿದ್ದೇವೆ. ಆ ರೈವತಕದಲ್ಲಿಯ ಅಳತೆಗಳನ್ನು ನೀ ಕೇಳಬೇಕು. ಮೂರು ಯೋಜನಗಳಷ್ಟು ಅಗಲವದು, ಒಂದೊಂದು ಯೋಜನಕ್ಕೂ ಸೇನೆಗಳ ಮೂರು ಮೂರು ದಳಗಳಿವೆ. ಯೋಜನದ ಕೊನೆಗೆ ಶತದ್ವಾರಗಳು. ಅಲ್ಲೆಲ್ಲ ಪರಾಕ್ರಮಿ ಸೈನಿಕರ ರಕ್ಷೆಯಿದೆ. ಹದಿನೆಂಟಕ್ಕೆ ಕಡಿಮೆಯಿಲ್ಲದ ವೀರಯೋಧರು ಸಂನದ್ಧರಾಗಿರುವರು, ಪ್ರತಿಘಟ್ಟದಲ್ಲಿಯೂ. ನಮ್ಮ ಕುಲದಲ್ಲಿ ಹದಿನೆಂಟು ಸಾವಿರ ಯೋಧರಿದ್ದಾರೆ. ಸಾತ್ಯಕಿ, ನನ್ನಣ್ಣನಾದ ಬಲರಾಮ, ನನ್ನಿಬ್ಬರು ಮಕ್ಕಳು - ಇವರೇ ಅಲ್ಲದೆ ಹಲವು ಮಹಾರಥರಿದ್ದಾರೆ. ನಾವೆಲ್ಲರೂ ಹೀಗಿರಬೇಕೆಂದರೆ ಜರಾಸಂಧನ ಶೌರ್ಯವಿನ್ನೆಷ್ಟಿರಬೇಕೆಂಬುದನ್ನು ನೀನು ಊಹಿಸಬಹುದು.

ಯುಧಿಷ್ಠಿರನೇ, ಸಮ್ರಾಟನಾಗುವವನ ಗುಣಗಳು ನಿನ್ನಲ್ಲಿವೆ. ಹೀಗಾಗಿ ನೀನು ನಿನ್ನನ್ನು ಕ್ಷತ್ರಿಯರಲ್ಲಿ ಸಮ್ರಾಟನನ್ನಾಗಿ ಆಗಿಸಿಕೊಳ್ಳಬೇಕಾದದ್ದು ಇದೆ. ಜರಾಸಂಧನು ಎಲ್ಲಿಯವರೆಗೂ ಜೀವಿಸಿರುವನೋ ಅಲ್ಲಿಯವರೆವಿಗೂ ನೀನು ರಾಜಸೂಯವನ್ನು ಮಾಡಲಾರೆ - ಎಂಬುದೇ ನನ್ನ ಅಭಿಪ್ರಾಯ. ಅನೇಕ ರಾಜರನ್ನು ಸೆರೆಹಿಡಿದು ಆತನು ಗಿರಿವ್ರಜದಲ್ಲಿ ಕೈದಿಗಳನ್ನಾಗಿಸಿದ್ದಾನೆ - ಸಿಂಹವು ಗಜರಾಜಗಳನ್ನು ಗುಹೆಯೊಳಗೆ ಹೇಗೆ ಅಡಗಿಸಿಡುವುದೋ ಹಾಗೆ.

ಉಮಾಪತಿಯಾದ ಮಹಾದೇವನನ್ನು ಕುರಿತು ಉಗ್ರತಪಸ್ಸನ್ನು ಮಾಡಿದ್ದಾನೆ, ಈ ಜರಾಸಂಧ. ಆತನನ್ನು ಆರಾಧಿಸಿರುವುದರಿಂದಲೇ ಬಲಗೊಂಡು ರಾಜರುಗಳನ್ನೆಲ್ಲ ವಶಪಡಿಸಿಕೊಂಡಿದ್ದಾನೆ. ಅವರನ್ನೆಲ್ಲ ಬಲಿಗೊಡುವ ಉದ್ದೇಶವೂ ಆತನಿಗಿದೆ. ಒಬ್ಬೊಬ್ಬರನ್ನಾಗಿ ರಾಜರನ್ನು ಗೆದ್ದು ಗೆದ್ದು ತನ್ನ ನಗರಕ್ಕೆ ಸೆರೆಯಾಳುಗಳನ್ನಾಗಿ ತಂದಿರಿಸಿದ್ದಾನೆ. ಜರಾಸಂಧ-ಭಯದಿಂದಲೇ ನಾವೂ ಮಥುರೆಯನ್ನು ತೊರೆದು ದ್ವಾರವತೀಪುರಿಗೆ ಬಂದಿರುವುದು.

ಯುಧಿಷ್ಠಿರನೇ, ಈ ಯಜ್ಞವನ್ನು ನೆರವೇರಿಸಲು ನೀನು ಬಯಸುವೆಯಾದರೆ, ಅವರೆಲ್ಲರನ್ನೂ ಬಿಡಿಸಲು ಯತ್ನಿಸು, ಹಾಗೂ ಜರಾಸಂಧನ ಸಂಹಾರಕ್ಕಾಗಿಯೂ ಪ್ರಯತ್ನಿಸು. ಇದನ್ನು ಮೊದಲು ಸಾಧಿಸದಿದ್ದರೆ ರಾಜಸೂಯವನ್ನು ಸಮಗ್ರವಾಗಿ ನೀ ನೆರವೇರಿಸಲಾರೆ.

ಜರಾಸಂಧನನ್ನು ವಧಿಸುವ ಮಾರ್ಗವನ್ನು ಮೊದಲು ಹುಡುಕು, ಯುಧಿಷ್ಠಿರ. ಆತನೊಬ್ಬನನ್ನು ಸೋಲಿಸಿದಲ್ಲಿ ಎಲ್ಲರನ್ನೂ ಸೋಲಿಸಿದಂತೆಯೇ ಸರಿ.

ಇದಿಷ್ಟು ನನ್ನ ಮತಿಗೆ ತೋರುವ ವಿಚಾರ. ನಿನಗೆ ಏನು ತೋರುತ್ತದೆಂಬುದನ್ನು ಕಾರಣಸಹಿತವಾಗಿ ನಿಶ್ಚಯಿಸಿ ನನಗೆ ಹೇಳು, ಯುಧಿಷ್ಠಿರಾ" – ಎಂದು ತನ್ನ ಮಾತನ್ನು ಮುಗಿಸಿದನು.

ಸೂಚನೆ : 14/12/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 44 (Prasnottara Ratnamalike 44)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ ೪೪. ಯಾರಿಗೆ ದೇವತೆಗಳು ನಮಸ್ಕರಿಸುತ್ತಾರೆ 

ದಯೆ ಉಳ್ಳವನಿಗೆ.

ಈ ಪ್ರಶ್ನೆಯಲ್ಲಿ ನಮಸ್ಕಾರಕ್ಕೆ ಅರ್ಹನಾದ ವ್ಯಕ್ತಿ ಯಾರು? ಎಂಬುದನ್ನು ವಿವರಿಸಲಾಗಿದೆ. ದೇವತೆಗಳು ಕೂಡ ನಮಸ್ಕಾರ ಮಾಡಲು ಯೋಗ್ಯನಾದ ವ್ಯಕ್ತಿಯಾಗಿರಬೇಕಾದರೆ ಅವನ ವ್ಯಕ್ತಿತ್ವ ಎಂತಹದ್ದಾಗಿರಬೇಕು!? ಮತ್ತು ಅಂತಹ ವ್ಯಕ್ತಿತ್ವವು ದಯೆ ಎಂಬ ಗುಣದಿಂದ ಹೇಗೆ ಬರಲು ಸಾಧ್ಯ? ಎಂಬ ಎರಡು ಅಂಶಗಳನ್ನು ಪ್ರಧಾನವಾಗಿ ಈ ಉತ್ತರದಲ್ಲಿ ನಾವು ಚಿಂತಿಸಬೇಕಾಗಿದೆ. ಆದ್ದರಿಂದ ಅದಕ್ಕೂ ಮೊದಲು 'ದಯೆ ಎಂದರೇನು?' ಎಂಬುದನ್ನು ಮೊದಲು ಚಿಂತಿಸಬೇಕಾಗಿದೆ.

'ದಯೆ' ಎಂಬುದಕ್ಕೆ ಪದ್ಮಪುರಾಣವು ಹೀಗೆ ವಿವರಿಸುತ್ತದೆ - "ಪ್ರಯತ್ನಪಟ್ಟು- ಕಷ್ಟಪಟ್ಟು ಯಾರು ಬೇರೆಯವರ ಕಷ್ಟವನ್ನು ಪರಿಹರಿಸಲು ಬಯಸುವನೋ, ಅವನಲ್ಲಿರುವ ಗುಣವನ್ನೇ 'ದಯೆ' ಎಂಬುದಾಗಿ ಕರೆಯಬೇಕು" ಎಂದು. ಈ ವ್ಯಕ್ತಿ ತನಗೆ ಆಗುವ ಕಷ್ಟವನ್ನು ಪರಿಗಣಿಸದೆ, ಬೇರೆಯವರ ಕಷ್ಟವನ್ನು ಪರಿಹರಿಸುವುದರಲ್ಲಿ ಸುಖವನ್ನು ಕಾಣುತ್ತಾನೆ ಎಂದರ್ಥ. ಇದೇ ರೀತಿಯಲ್ಲಿ ಮತ್ಸ್ಯಪುರಾಣವು ದಯೆ ಎಂಬುದನ್ನು ಈ ಬಗೆಯಲ್ಲಿ ವಿವರಿಸುತ್ತದೆ - "ಯಾರು ತನ್ನಂತೆ ಎಲ್ಲಾ ಭೂತ ಕೋಟಿಗಳನ್ನು ಭಾವಿಸಿ, ಎಲ್ಲರ ಹಿತವನ್ನು ಮತ್ತು ಶುಭವನ್ನು ಬಯಸುತ್ತಾನೋ ಆ ವ್ಯಕ್ತಿಯ ಗುಣಕ್ಕೆ 'ದಯೆ' ಎಂಬುದಾಗಿ ಕರೆಯಬೇಕು" ಎಂದು. ಇನ್ನೊಂದು ಕಡೆ ಈ 'ದಯೆ' ಎಂಬುದಕ್ಕೆ ಹೀಗೆ ವಿವರಣೆ ಇದೆ - "ಶತ್ರುವಾಗಲಿ, ಬಂಧುವಾಗಲಿ, ಮಿತ್ರನಾಗಲಿ ಅಥವಾ ತನ್ನನ್ನು ದ್ವೇಷಿಸುವನೇ ಆಗಲಿ ಯಾರೇ ಆಗಲಿ ಅಂತಹವನನ್ನು ತನ್ನಂತೆ ಭಾವಿಸುತ್ತಾನೆ, ಆ ಗುಣವನ್ನು 'ದಯೆ' ಎಂಬುದಾಗಿ ಕರೆಯಬೇಕು" ಎಂದು. ಅಂದರೆ ಈ ಎಲ್ಲಾ ವಿವರಣೆಗಳಿಂದ ನಾವು ತಿಳಿಯುವ ವಿಷಯವೇನೆಂದರೆ ಪ್ರಪಂಚದಲ್ಲಿರುವ ಪ್ರಾಣಿ, ಪಶು, ಪಕ್ಷಿ ಎಲ್ಲರಿಗೂ, ಯಾರು ಹಿತವನ್ನೇ ಬಯಸುತ್ತಾನೋ, ಯಾವುದೇ ಕಾರಣಕ್ಕೂ ಅಹಿತವು ಆಗಬಾರದು, ದುಃಖ-ದುಮ್ಮಾನ ಯಾರಿಗೂ ಬರಬಾರದು ಎಂಬುದಾಗಿ ಆತ್ಮಸಾಕ್ಷಿಯಾಗಿ ಬಯಸುತ್ತಾನೋ, ಅವನೇ ದಯಾಪರನಾದ ವ್ಯಕ್ತಿ ಎನಿಸಿಕೊಳ್ಳುತ್ತಾನೆ. ಇಂಥವನು ಈ ಪ್ರಪಂಚದಲ್ಲಿ ಅದ್ವಿತೀಯನಾಗಿ ಕಾಣಿಸಿಕೊಳ್ಳುತ್ತಾನೆ. ಅಂದರೆ ಎಲ್ಲಾ ಭೂತಕೋಟಿಗಳನ್ನು ಒಂದಾಗಿ ಕಾಣುವ ಮಹಾಪುರುಷನಾಗಿ ಆತ ಆಗುತ್ತಾನೆ. ಇಂತಹ ವ್ಯಕ್ತಿಯು ಈ ಭೂಮಿಯಲ್ಲಿ ಇರುವ ಪರಮಾತ್ಮನ ಪರಿಪೂರ್ಣ ವ್ಯಕ್ತ ರೂಪ ಎಂಬುದಾಗಿ ಭಾವಿಸಬಹುದು. ಪರಿಪೂರ್ಣನಾದ ಭಗವಂತನಿಗೆ ಯಾವ ದೇವತೆಗಳು ತಾನೇ ನತಮಸ್ತಕರಾಗುವುದಿಲ್ಲ? ಎಲ್ಲರೂ ಆ ಪರಬ್ರಹ್ಮನಿಗೆ - ಪರಿಪೂರ್ಣನಿಗೆ ನಮಸ್ಕರಿಸಲೇ ಬೇಕಲ್ಲವೇ? ನಮಸ್ಕಾರ ಎಂಬುದು ಯಾರು ತನಗಿಂತಲೂ ಗುಣ ಸ್ವಭಾವಗಳಿಂದ ಶ್ರೇಷ್ಠನಾಗುತ್ತಾನೋ ಅಂತವನಿಗೇ ಸಲ್ಲಿಸಬೇಕಾಗುವ ಪ್ರಕ್ರಿಯೆ. ಆಗ ಈ ಅತಿಶಯನಾದ ಪರಮ ಪವಿತ್ರನಾದ ಸರ್ವಸದ್ಗುಣಗಣಿಯಾದ ಮಹಾಪುರುಷನಿಗೆ,  ಪರಮಪುರುಷನಿಗೆ ಸಲ್ಲಬೇಕಾದ ನಮಸ್ಕಾರ ಸಲ್ಲುವಂತಾಗುತ್ತದೆ. ಹಾಗಾಗಿ ಇಂತಹ ಪುರುಷನಿಗೆ ಮಾತ್ರ ದೇವತೆಗಳು ನಮಸ್ಕಾರವನ್ನು ಮಾಡುತ್ತಾರೆ. ಪುರಾಣಗಳಲ್ಲಿ ಇಂತಹ ಪುಣ್ಯಚರಿತ್ರೆಯನ್ನು ಕಾಣುತ್ತೇವೆ. ಮಹರ್ಷಿಗಳು ಭೂತಕೋಟಿಗೆ ಉಂಟಾದ ಸಂಕಷ್ಟವನ್ನು ನಿವಾರಿಸುತ್ತಾರೆ. ದಯೆಯಿಂದ ತಮ್ಮ ಪ್ರಾಣವನ್ನು ಕೊಟ್ಟು ಕೇವಲ ತಪೋಧನರಾಗದೇ, ದಯಾಪ್ರಧಾನರೂ ಆದರು ಎಂಬ ಕಥೆಯನ್ನು ಕೇಳುತ್ತೇವೆ. ದಧೀಚಿ ಮೊದಲಾದಮರ್ಷಿಗಳು ತಮ್ಮ ದಯೆ ಎಂಬ ಗುಣದಿಂದ ದೇವತೆಗಳಿಂದಲೂ ಸ್ತುತ್ಯರಾಗಿದ್ದರು ಎಂಬ ಅನೇಕ ಉದಾಹರಣೆಗಳನ್ನು ನಾವು ನೋಡಬಹುದು. ಹಾಗಾಗಿ ದೇವತೆಗಳೇ ನಮಸ್ಕರಿಸುವಂತಹ ಇಂತಹ ಮಹಾಪುರುಷರಿಗೆ ನಾವು ನಮ್ಮ ನಮಸ್ಕಾರವನ್ನು ಸಲ್ಲಿಸೋಣ ಅಲ್ಲವೇ?.

ಸೂಚನೆ : 14/12/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Monday, December 8, 2025

ವ್ಯಾಸ ವೀಕ್ಷಿತ 165 ಜರಾಸಂಧ-ಪ್ರತಾಪ, ಹಂಸ-ಡಿಂಭಕರ ವಿಚಿತ್ರ ಮರಣ! (Vyaasa Vikshita 165)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಯುಧಿಷ್ಠಿರನು ಮಾಡಬೇಕೆಂದಿರುವ ರಾಜಸೂಯ ಯಾಗಕ್ಕೆ ಯಾರು ಹಿತರು, ಯಾರಲ್ಲ? - ಎಂಬುದನ್ನು ಆತನಿಗೆ ತಿಳಿಸಿಕೊಡುತ್ತಾ ಶ್ರೀಕೃಷ್ಣನು ಹೇಳಿದ ಮಾತು: "ಜರಾಸಂಧನ ಭಯದಿಂದಾಗಿಯೇ ಮತ್ಸ್ಯದೇಶದ ರಾಜರು ದಕ್ಷಿಣ ದಿಕ್ಕಿನತ್ತ ಓಡಿಹೋಗಿದ್ದಾರೆ., ಪಂಚಾಲದೇಶದ ರಾಜರಂತೂ ಸ್ವರಾಜ್ಯವನ್ನು ತೊರೆದು ದಿಕ್ಕಾಪಾಲಾಗಿ ಓಡಿಹೋಗಿರುವರು.

ಇದೆಲ್ಲಾ ಆಗಿ ಕೆಲಕಾಲಾನಂತರ, ಕಂಸನು ಯಾದವರನ್ನೆಲ್ಲಾ ಕಂಗೆಡಿಸಿ ಜರಾಸಂಧನ ಇಬ್ಬರು ಪುತ್ರಿಯರನ್ನು ಮದುವೆಯಾದನು. ಒಬ್ಬಳ ಹೆಸರು ಅಸ್ತಿ, ಮತ್ತೊಬ್ಬಳು ಪ್ರಾಪ್ತಿ. ವ್ಯರ್ಥಮತಿಯಾದ ಆ ಕಂಸನು, ಈ ಜರಾಸಂಧನ ಬಲದ ಮೇರೆಗೇ ತನ್ನ ಜ್ಞಾತಿಗಳನ್ನೇ ಪರಾಭವಗೊಳಿಸಿ ಅವರೆಲ್ಲರಿಗಿಂತಲೂ ತಾನೇ ಹೆಚ್ಚೆಂದು ಕುಳಿತನು. ಇದುವೇ ಆತನ ಮಹಾಪಚಾರ.

ಭೋಜರಾಜವಂಶಕ್ಕೆ ಸೇರಿದ ವೃದ್ಧರನೇಕರನ್ನು ದುರಾತ್ಮನಾದ ಕಂಸನು ಬಹಳ ಪೀಡಿಸಿದ್ದ. ಎಂದೇ ಅವರು ಆತಂಕಗೊಂಡು, ತಮ್ಮ ಆತ್ಮೀಯ ಬಂಧುಗಳಿಗೆ ರಕ್ಷಣೆ ಬೇಕೆಂದು ನಮ್ಮಲ್ಲಿಗೆ ಬಂದು ಕೋರಿದರು. ಆಗಲೇ ಬಲರಾಮನೊಂದಿಗೆ ನಾನು ಹೋಗಿ ಜ್ಞಾತಿಕಾರ್ಯವನ್ನು ಮಾಡಿದುದು: ಕಂಸ ಮತ್ತು ಸುನಾಮ - ಇವರಿಬ್ಬರನ್ನು ನಾನೂ ಬಲರಾಮನೂ ಕೊಂದೆವು.

ಕಂಸಭಯವೇನೋ ಹೋಯಿತು. ಆದರೆ ಪ್ರತೀಕಾರ ಮಾಡಬೇಕೆಂದು ಜರಾಸಂಧನು ಸನ್ನದ್ಧನಾಗತೊಡಗಿದನು. ಆಗಲೇ ಆ ಹದಿನೆಂಟು ಮಂದಿ ರಾಜರೊಂದಿಗೆ ಮಂತ್ರಾಲೋಚನೆಯನ್ನು ನಾವು ಮಾಡಿದುದು: "ಶತ್ರುಘಾತಕವಾದ ಮಹಾಸ್ತ್ರಗಳಿಂದ ಯುದ್ಧಮಾಡಿದರೂ, ಮುನ್ನೂರು ವರ್ಷಗಳ ಸತತವಾಗಿ ಸೆಣಸಿದರೂ ಈ ಜರಾಸಂಧನ ಸೈನ್ಯವನ್ನು ನಾವು ನಾಶಮಾಡಲಾರೆವು".

ನಾವು ಹಾಗೆಂದುಕೊಳ್ಳಲು ಕಾರಣವೆಂದರೆ ಜರಾಸಂಧನಿಗೆ ಇಬ್ಬರು ಮಿತ್ರರಿದ್ದರು. ಹಂಸ ಎಂದೊಬ್ಬ, ಡಿಂಭಕ ಎಂದು ಮತ್ತೊಬ್ಬ. ಬಲದಲ್ಲಿ ಇಬ್ಬರೂ ದೇವತೆಗಳಿಗೆ ಸಮಾನರು. ಯಾವುದೇ ಶಸ್ತ್ರದಿಂದಲೂ ಸಾಯಿಸಲಾಗದವರು ಅವರಿಬ್ಬರೂ. ಜರಾಸಂಧನೂ ಸೇರಿದರೆಂದರೆ ಮೂರು ಲೋಕಗಳನ್ನೂ ಗೆಲ್ಲಬಲ್ಲವರೇ ಸರಿ. ಇದು ಕೇವಲ ನನ್ನ ಅಭಿಪ್ರಾಯವಾಗಿರಲಿಲ್ಲ, ಉಳಿದ ರಾಜರ ಅಭಿಪ್ರಾಯವೂ ಆಗಿತ್ತು.

ಈ ಸಂದರ್ಭದಲ್ಲಿ ಅವರಿಬ್ಬರ ಸಾವು ಹೇಗೆ ಇದ್ದಕ್ಕಿದ್ದಂತೆ ನಡೆದುಹೋಯಿತೆಂಬುದನ್ನು ಕೇಳು. ಹಂಸ ಎಂದೇ ಹೆಸರುಳ್ಳ ಮತ್ತೂ ಒಬ್ಬ ರಾಜನಿದ್ದ. ಹದಿನೆಂಟು ದಿನಗಳ ಕಾಲ ಅವನೊಡನೆ ಹೋರಾಡಿ ಬಲರಾಮನು ಆತನನ್ನು ಸಂಹರಿಸಿದ.

"ಹಂಸರಾಜನು ಸತ್ತ" ಎಂಬ ಈ ಸಮಾಚಾರವನ್ನು ಯಾರೋ ಹೇಳಿದರು, ಡಿಂಭಕನಿಗೆ. ಆ ಡಿಂಭಕನೋ, ಸತ್ತದ್ದು ತನ್ನ ಆಪ್ತನಾದ ಹಂಸನೆಂದೇ ಭಾವಿಸಿಕೊಂಡುಬಿಟ್ಟ! ಅದರಿಂದಾಗಿ ಆತನಿಗೆ ಅತೀವ ದುಃಖವಾಯಿತು. ಆ ದುಃಖಭರದಲ್ಲಿ ಆತ ಯಮುನೆಯಲ್ಲಿ ಬಿದ್ದು ಪ್ರಾಣ ಬಿಟ್ಟ, ಹಂಸನಿಲ್ಲದೆ ತಾನು ಬದುಕಿರಲಾರೆ - ಎಂಬ ಖೇದದಿಂದ.

ಡಿಂಭಕನು ಹಾಗೆ ತನಗಾಗಿ ಸತ್ತನೆಂಬುದನ್ನು ಕೇಳಿದ ಹಂಸನಿಗೂ ದುಃಖವು ಉಕ್ಕಿಬಂದಿತು.  ಆ ಖೇದದಲ್ಲಿ ತಾನೂ ಅದೇ ಯಮುನೆಯಲ್ಲೇ ಬಿದ್ದು ಪ್ರಾಣತೊರೆದ. ಹಂಸ-ಡಿಂಭಕರಿಬ್ಬರೂ ಸತ್ತರೆಂಬುದನ್ನು ಕೇಳಿದ ಜರಾಸಂಧನಿಗೂ ಪರಮಖೇದವಾಯಿತು. ನಿರುತ್ಸಾಹನಾಗಿ ತನ್ನ ರಾಜಧಾನಿಗೆ ಹಿಂದಿರುಗಿ ಬಂದ.

ಜರಾಸಂಧನು ಹೀಗೆ ಹಿಂದಿರುಗಿದುದು ನಮಗೆ ಗೊತ್ತಾಯಿತು. ಅದರಿಂದಾಗಿ ನಾವೆಲ್ಲರೂ ಆನಂದಭರಿತರಾಗಿ ಮತ್ತೆ ಮಥುರೆಯಲ್ಲೇ ವಾಸ ಮಾಡತೊಡಗಿದೆವು. ಆದರೆ ಅದು ಬಹುಕಾಲ ನಿಲ್ಲಲಿಲ್ಲ.

ಜರಾಸಂಧನ ಮಗಳು ತನ್ನ ತಂದೆಯ ಬಳಿಗೆ ಹೋಗಿ, ತನ್ನ ಗೋಳನ್ನು ಹೇಳಿಕೊಂಡಳು.

ಸೂಚನೆ : 7/12/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 43 (Prasnottara Ratnamalike 43)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ ೪೩ಈ ಜಗತ್ತು ಯಾರಿಂದ ಗೆಲ್ಲಲ್ಪಟ್ಟಿದೆ

ಸತ್ಯದಲ್ಲಿ ನೆಲೆನಿಂತ ಸಹನಶೀಲ ಪುರುಷನಿಂದ.

ಈ ಪ್ರಶ್ನೆಯು ತುಂಬಾ ಸ್ವಾರಸ್ಯದಿಂದ ಕೂಡಿದೆ. ಏಕೆಂದರೆ ಒಂದು ಜಗತ್ತನ್ನು ಗೆಲ್ಲುವುದು ಎಂದರೇನು? ಮತ್ತು ಅದು ಸಹನಶೀಲ ಪುರುಷನಿಂದ ಗೆಲ್ಲುವುದು ಎಂದರೇನು? ಎಂಬ ಈ ಎರಡು ಪ್ರಧಾನವಾದ ವಿಷಯ ಇದಕ್ಕೆ ಕಾರಣ. ಹಾಗಾಗಿ ಇಲ್ಲಿ ನಾವು ಚಿಂತಿಸಬೇಕಾದ ವಿಷಯ ಇಷ್ಟು - ಒಬ್ಬ ಸತ್ಯದಲ್ಲಿ ನೆಲೆ ನಿಂತ ಪುರುಷ ಎಂದರೆ ಅವನಲ್ಲಿರುವ ಗುಣ ಸ್ವಭಾವಗಳೇನು? ಅವು ಅವನ ನಡವಳಿಕೆಯಲ್ಲಿ ಹೇಗೆ ಪ್ರತಿಫಲಿಸುತ್ತವೆ? ಸತ್ಯದಲ್ಲಿ ನೆಲೆಯಲ್ಲುವಿಕೆಯಿಂದ ಈ ಜಗತ್ತಿಗೆ ಆಗುವ ಪರಿಣಾಮಗಳೇನು? ಇದರಿಂದ ಜಗತ್ತಿಗೆ ಹೇಗೆ ಅನುಕೂಲವಾಗುತ್ತದೆ? ಜಗತ್ತು ಇದರಿಂದ ಹೇಗೆ ನಿಲ್ಲಲು ಸಾಧ್ಯ? ಎಂಬಿತ್ಯಾದಿ ಪೂರಕ ಸಂಗತಿಗಳನ್ನು ಇದರ ಜೊತೆಗೆ ಚಿಂತಿಸಬೇಕಾಗಿದೆ. 

ಸತ್ಯ ಎಂದರೆ ಯಾವುದು ಸರ್ವವಿಧದಲ್ಲೂ, ಸರ್ವಕಾಲದಲ್ಲೂ ಏಕರೂಪವಾಗಿರುತ್ತದೆಯೋ, ವಿಕಾರವನ್ನು ಹೊಂದುವುದೇ ಇಲವೋ ಅಂತಹದ್ದು. ಅಂದರೆ ಪರಬ್ರಹ್ಮ ಮಾತ್ರ ಸತ್ಯ. ಇದು ಎಂದೂ, ಯಾವುದೇ ಕಾರಣಕ್ಕೂ ವಿಕಾರವನ್ನು ಹೊಂದುವುದಿಲ್ಲ. ಆದ್ದರಿಂದ ಇಂತಹ ಸತ್ಯದಲ್ಲಿ ನೆಲೆನಿಲ್ಲುವವನು ಅವನು ಸತ್ಪುರುಷನೇ ಆಗಿರಬೇಕು. ಅಂದರೆ ಅವನು ಸಹನಶೀಲನೇ ಆಗಿರುತ್ತಾನೆ. ಅವನಲ್ಲಿ ಯಾವುದೇ ವಿಧವಾದ ಮಾನಸಿಕ ಕ್ಷೋಭೆಯು ಇರುವುದಿಲ್ಲ ಎಂದರ್ಥ. ಹಾಗಾಗಿ ಅವನು ಎಲ್ಲಿರುವನೋ, ಆ ಸುತ್ತಮುತ್ತಲಿನ ಪರಿಸರವೆಲ್ಲವೂ ಶಾಂತಿ, ನೆಮ್ಮದಿ, ಅಹಿಂಸೆ ಮೊದಲಾದ ಗುಣಗಳಿಂದ ಕೂಡಿರುತ್ತದೆ. ಇವು ತಾನೆ ಸುಖದ ಜೀವನಕ್ಕೆ ಅಗತ್ಯವಾಗಿ ಬೇಕಾಗಿರುವ ಸಹಕಾರಿ ಸಾಮಗ್ರಿಗಳು!. ಇವುಗಳು ಮಾತ್ರ ಆ ವ್ಯಕ್ತಿಯ ಅಥವಾ ಆ ಸಮಾಜದ ಶಾಂತಿಯ ತಾಣಕ್ಕೆ ಕಾರಣೀಭೂತವಾಗುತ್ತವೆ!. ಹಾಗಾಗಿ ಒಬ್ಬ ಸತ್ಪುರುಷನು ಅಥವಾ ಜ್ಞಾನಿಯು ಎಲ್ಲಿರುವನೋ ಅಲ್ಲಿ ಸಹಜವಾಗಿಯೇ ಮಳೆ-ಬೆಳೆಗಳು ಎಲ್ಲವೂ ಸಮೃದ್ಧವಾಗಿ ಆಗುತ್ತವೆ ಎಂಬುದಾಗಿ ನಾವು ಪುರಾಣ, ಇತಿಹಾಸ ಕಥೆಗಳಲ್ಲಿ ನಾವು ಕೇಳುತ್ತೇವೆ. ವಿಭಾಂಡಕ ಮುನಿಯ ಮಗನಾದ ಋಷ್ಯಶೃಂಗನು ಅಂತಹ ಅತ್ಯಂತ ಪ್ರಭಾವಿಯಾದ, ಸತ್ಯನಿಷ್ಠನಾದ ಮಹರ್ಷಿಯಾಗಿದ್ದನು. ಅವನು ಎಲ್ಲೆಲ್ಲಿ ಹೋಗುತ್ತಾನೋ ಅಲ್ಲೆಲ್ಲವೂ ಅತಿವೃಷ್ಟಿ ಅನಾವೃಷ್ಟಿಗಳು ದೂರಸರಿದು ಸುವೃಷ್ಟಿಯಾಗಿ ಆ ದೇಶ ಸುಭಿಕ್ಷೆಯಿಂದ ಕೊಡಿರುತ್ತಿತ್ತು ಎಂಬುದಾಗಿ ರಾಮಾಯಣದಲ್ಲಿ ಆ ಕಥೆಯನ್ನು ನಾವು ನೋಡುತ್ತೇವೆ. ಒಬ್ಬ ರಾಜನಾದವನ ಕರ್ತವ್ಯವೆಂದರೆ ಪ್ರಜೆಗಳು ಸತ್ಯದಲ್ಲಿ ಅಂದರೆ ಭಗವಂತನ ವಿಷಯದಲ್ಲಿ ಶ್ರದ್ಧೆ ಹೊಂದಿದವರಾಗಿರಬೇಕು. ಆಸ್ತಿಕ್ಯಬುದ್ಧಿಯುಳ್ಳವರಾಗಿರಬೇಕು. ಅದಕ್ಕೆ ರಾಜನಾದನು ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡುತ್ತಿದ್ದನು. ಇದಕ್ಕೆ ವಿರೋಧಿಯಾದವರನ್ನು ಹತ್ತಿಕ್ಕುತ್ತಿದ್ದನು. ಸತ್ಯನಿಷ್ಠರಾದ ಮಹಾಪುರುಷರು ತಮಗೆ ಬಂದ ಕಷ್ಟವನ್ನು ಸಹಿಸಿಕೊಂಡು ಜಗತ್ತಿನ ಒಳಿತಿಗೆ ಚಿಂತಿಸುವವರಾಗಿರುತ್ತಿದ್ದರು. ಇಂತಹ ಸತ್ಯನಿಷ್ಠರ ಅನೇಕ ಚರಿತ್ರಗಳನ್ನು ನಾವು ಇತಿಹಾಸ ಪುಟಗಳಲ್ಲಿ ಕಾಣಬಹುದು. ಇಂಥವರು ಇದ್ದಾಗ ತಾನೇ ಮಳೆ ಬೆಳೆಗಳೆಲ್ಲವೂ ಚೆನ್ನಾಗಿ ಆಗಿ ಜೀವಿಗಳಿಗೆ ಬೇಕಾದ ಆಹಾರವು ಸಕಾಲದಲ್ಲಿ ಸಾಕಷ್ಟು ದೊರೆತು, ಭೂತಕೋಟಿಯು ಸಮೃದ್ಧವಾದ ಜೀವನವನ್ನು ಮಾಡಲು ಅನುಕೂಲವಾಗುತ್ತದೆ. ಜಗತ್ತಿನ ಸಮೃದ್ಧಿಯ ಕ್ಷಣ ಅದೇ ತಾನೇ!. ಜಗತ್ತಿನ ಸಮೃದ್ಧಿಯ ಇರುವಿಕೆ ಅಂದರೆ ಇದು. ಆಗ ಜಗತ್ತು ಗೆದ್ದಂತೆ ಎಂಬುದಾಗಿ ನಾವು ಭಾವಿಸಬಹುದು.

ಸೂಚನೆ : 7/12/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವಿವೇಕಿಯ ಲಕ್ಷಣವೇನು? (Vivekiya Laksanavenu?)

ಲೇಖಕರು : ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)

ನೀನು ಕಾಡಿಗೆ ಹೋಗು - ಎಂಬ ಮಾತನ್ನು ರಾಮನಿಗೆ ಹೇಳಿದ್ದು ಕೈಕೇಯಿ, ದಶರಥನಲ್ಲ! ರಾಮಾಯಣದ ಒಂದು  ದೊಡ್ಡ ದಯನೀಯ ಪರಿಸ್ಥಿತಿಯಿದು. ರಾಮನೋ ಆಗ  ಯುವರಾಜನಾಗಲು ಅನುವಾಗುತ್ತಿದ್ದ.  ಏಕಾಏಕಿ ಬಂದಿತು, ಅರಣ್ಯವಾಸದ ಆದೇಶ!  ಪಟ್ಟೆಪೀತಾಂಬರ ಧರಿಸುವವನಿಗೆ ನಾರುಮಡಿಯ ವಸ್ತ್ರಗಳು. ಹೀಗಿದ್ದಾಗಲೂ ಸ್ವಲ್ಪವೂ ವಿಚಲಿತನಾಗಲಿಲ್ಲ ರಾಮ.

ಆದರೆ ಅಂತಃಪುರದಲ್ಲೇ ಹಾಹಾಕಾರವೆದ್ದಿತು!  ಹೆತ್ತ ತಾಯಿಗಿತ್ತ ಗೌರವವನ್ನೇ ಬೇರೆಲ್ಲರಿಗೂ ಕೊಡುತ್ತಿದ್ದವನಿಗೆ ಹೀಗಾಯಿತಲ್ಲ ! - ಎಂದು  ರಾಜಸ್ತ್ರೀಯರು ಮರುಗಿದರು; ದಶರಥನನ್ನೇ ಹಳಿದರು. ಮೊದಲು ಕೌಸಲ್ಯೆಯನ್ನು ಕಂಡು ವಿಷಯ ತಿಳಿಸಲು ಹೋದ, ರಾಮ. ಅವಳೋ ಅವನ  ಶ್ರೇಯಸ್ಸಿಗಾಗಿ ಹೋಮ-ಪೂಜೆಗಳಲ್ಲಿ ತೊಡಗಿದ್ದಳು.  ಅಭಿಷೇಕವು ನಿಂತಿದೆಯಷ್ಟೇ ಅಲ್ಲ; ದಂಡಕಾರಣ್ಯಕ್ಕೆ ತಾನು ಹೋಗಬೇಕಾಗಿ ಬಂದಿದೆ - ಎಂಬುದಾಗಿ  ಆಜ್ಞೆಯಾಗಿದೆ - ಎಂಬುದನ್ನು ಆಕೆಗೆ ತಿಳಿಸಿದ ರಾಮ. ಅದನ್ನು ಕೇಳಿ ತತ್ತರಿಸಿಹೋದಳು, ಕುಸಿದುಬಿದ್ದಳವಳು. ತನ್ನ ಭಾಗ್ಯವನ್ನು ಹಳಿದುಕೊಂಡು ರೋದಿಸಿದಳು. ದಶರಥನಿಂದ ತಾನನುಭವಿಸಿದ ಅಸಡ್ಡೆಯನ್ನು ನೆನೆದು ಅತ್ತಳು. ತಾನು ಕೈಕೇಯಿಯ ದಾಸಿಯೆಂಬಂತಾಗುತ್ತದೆ - ಎಂದು ಬೇಸರಿಸಿದಳು. ಮಗನ ಮುಖವನ್ನು ನೋಡಿಕೊಂಡಿದ್ದು, ಕೈಕೇಯಿಯ ಸಿಡುಕನ್ನೂ ಸವತಿಯರ ನಿಂದೆಯನ್ನೂ ಸಹಿಸಿಕೊಳ್ಳಬಹುದಾಗಿತ್ತೇನೋ. ಆದರಿದೋ ಈಗ ಅವನೂ ವನವಾಸಕ್ಕೆ ತೆರಳಲಿದ್ದಾನೆ! ತಾನೇಕೆ ಸತ್ತುಹೋಗುವುದಿಲ್ಲವೆಂದು ಗೋಳಿಟ್ಟಳು!

ಅದನ್ನು ಕಂಡ ಲಕ್ಷ್ಮಣನು ತಂದೆಯ ತೀರ್ಮಾನವನ್ನು ಧಿಕ್ಕರಿಸಿದ. ರಾಜ್ಯಾಧಿಕಾರವನ್ನು ಬಲದಿಂದ ನಿನ್ನ ಕೈಗೆ ತೆಗೆದುಕೊಂಡುಬಿಡು - ಎಂದು ಆಕ್ರೋಶದಿಂದ ಹೇಳಿದ, ರಾಮನಿಗೆ! ವಿರೋಧಿಸುವವರನ್ನು ಅಗತ್ಯ ಬಂದಲ್ಲಿ  ತಾನು ಕೊಲ್ಲುವುದಾಗಿಯೂ ಹೇಳಿದ. ಅಣ್ಣನ ಸಾಮರ್ಥ್ಯ-ಗುಣ-ಯೋಗ್ಯತೆಗಳಲ್ಲಿ ಅಂತಹ ನಂಬಿಕೆ ಅವನಿಗೆ! ಕೌಸಲ್ಯೆಯೂ ರಾಮನಿಗೆ ಕಾಡಿಗೆ ಹೋಗದಂತೆ ಕೇಳಿಕೊಂಡಳು. ತನ್ನನ್ನಗಲಿದರೆ ತನಗೆ ಪ್ರಾಣಹೋಗುವುದೆಂದೂ ಹೇಳಿದಳು.

ಪರಿಸ್ಥಿತಿ ಹೀಗೆಲ್ಲ ಇದ್ದರೂ, ರಾಮನ ನಿಲುವೇ ಬೇರೆಯಾಗಿತ್ತು. ಎಷ್ಟಾದರೂ  ಧರ್ಮವನ್ನರಿತವನು ಮತ್ತು ಅನುಪಮವಾದ ಸ್ಪಷ್ಟತೆ ಇದ್ದವನು, ರಾಮ. ತಾನು ಮಾಡಹೊರಟಿರುವ ಪಿತೃವಾಕ್ಯಪರಿಪಾಲನವು ನಿಶ್ಚಯವಾಗಿಯೂ ಧರ್ಮಸಂಮತವಾದದ್ದೇ - ಎಂಬುದನ್ನು ತಾಯಿಗೂ ಲಕ್ಷ್ಮಣನಿಗೂ ತಿಳಿಯಹೇಳಿದ. ಜನರೆಷ್ಟೇ ಬೆಂಕಿಯ ಕೊಳ್ಳಿಗಳಿಂದ ದೂರಸರಿಸಲು ಯತ್ನಿಸಿದರೂ ಅದು ತನ್ನ ಹಾದಿಯನ್ನು ಬಿಡುವುದಿಲ್ಲ! ಅದೇ ರೀತಿಯಲ್ಲಿಯೇ, ರಾಮನೂ ತನ್ನ ನಿರ್ಣಯವನ್ನು ಬದಲಿಸಲಿಲ್ಲ - ಎಂದು ವಾಲ್ಮೀಕಿಗಳು ವರ್ಣಿಸುತ್ತಾರೆ!

ಮನೋವೈಜ್ಞಾನಿಕವಾಗಿ ಇಲ್ಲಿಯ ಸನ್ನಿವೇಶವನ್ನು ವಿಶ್ಲೇಷಿಸೋಣ. ಮೊದಲಿಗೆ ಅಂತಃಪುರದ ರಾಜಸ್ತ್ರೀಯರ ತೀವ್ರ ದುಃಖ. ಅವರಿಗೆ ರಾಮನ ವಿಷಯವಾಗಿ ಇದ್ದ ಪ್ರೀತಿಯೇ ಅದರ ಕಾರಣ.

ಇನ್ನು ಕೌಸಲ್ಯೆ. ಆಕೆಯ ದುಃಖವಂತೂ ಸಹಜವೇ.  ತನ್ನ ಮಗ ಯುವರಾಜನಾಗುವ ಸಂತೋಷ ಅವಳಿಗೆ ಈವರೆಗಿತ್ತು; ಜೊತೆಗೆ ತನಗೂ ಅದರಿಂದಾಗಿ ಹೆಚ್ಚು ಗೌರವದ ನಿರೀಕ್ಷೆಯೂ ಇತ್ತು; ಹಾಗೆಂದು ಅವಳೇ ಹೇಳಿಕೊಂಡಿದ್ದಾಳೆ. ಈಗಾದ ಆಘಾತದಿಂದಾಗಿ ಅವಳೊಳಗಿದ್ದ ನೋವುಗಳು ಹೊರಬಂದವು: ಪಟ್ಟಮಹಿಷಿಯೇ ಆಗಿದ್ದಿರಬಹುದು, ಕೌಸಲ್ಯೆ. ಆದರೆ ಸವತಿಯರಿಂದಾಗಿ, ಮುಖ್ಯವಾಗಿ ಕೈಕೇಯಿಯಿಂದಾಗಿ, ಗಂಡನ ಸ್ನೇಹಾದರಗಳನ್ನು ಕಳೆದುಕೊಂಡಿದ್ದ ಅವಳಿಗೆ, ರಾಮನ ಕಾರಣದಿಂದಾಗಿ ಅವು ಸಿಕ್ಕಂತಾಗಿತ್ತು. ಈಗಂತೂ ಕೈಗೆ ಬಂದದ್ದು ಬಾಯಿಗೆ ಬರದೇ ಹೋದಂತಾಯಿತು. ರಾಮನು ದೂರವಾಗುವನೆಂಬ ಮುಖ್ಯವಾದ ದುಃಖವಿದ್ದರೂ, ಈ ನೋವುಗಳೂ ಜೊತೆಗೇ ಆಕೆಗೆ ಇದ್ದವು.

ಲಕ್ಷ್ಮಣನಿಗೆ ದುಃಖವಲ್ಲ, ರೋಷವೇ ಉಕ್ಕಿತ್ತು. ಮೊದಲೇ ಕ್ಷತ್ತ್ರಿಯ, ಜೊತೆಗೆ ಎಳೆಯ ರಕ್ತ; ತಂದೆಯ ಬಗ್ಗೆಯೇ ಅವನಿಗೆ ಕೋಪ. ಕೈಕೇಯಿಯ ಬಗ್ಗೆಯಂತೂ ಉರಿಗೋಪ; ಭರತನ ಬಗ್ಗೆಯೂ ಸಂದೇಹವೇ! ಕೋಪದ ಮಾತುಗಳನ್ನು ಸ್ವಲ್ಪ ದುಡುಕಿನಿಂದಲೇ ಆಡಿದ ಲಕ್ಷ್ಮಣ.

ಇವಕ್ಕೆಲ್ಲ  ವಿರುದ್ಧವಾದದ್ದು  ರಾಮನ ಪ್ರತಿಕ್ರಿಯೆ: ಯುವರಾಜನಾಗದಿರುವುದರ ಬಗ್ಗೆ ಅವನಿಗೆ ದುಃಖವಾಗುವುದಿರಲಿ, ಮನಸ್ಸು ಕೂಡ ಒಂದಿಷ್ಟೂ ಕಲಕಲಿಲ್ಲ! ತಂದೆ ಕೊಟ್ಟ ಮಾತನ್ನು ಉಳಿಸುವುದೇ ತನ್ನ ಧರ್ಮ - ಎಂಬ ನಿಶ್ಚಿತಮತಿ ಅವನಿಗಿತ್ತು. ತಾಯಿ, ಲಕ್ಷ್ಮಣ, ಸೀತೆ ಮುಂತಾದವರಿಗೆಲ್ಲ ಬಹಳವೇ ದುಃಖವಾಗುವುದು - ಎಂದು ತಿಳಿದೂ, ತನ್ನ ನಿಶ್ಚಯದಿಂದ ಕದಲಲಿಲ್ಲ, ರಾಮ. ರಾಮನಿಗೆ ಈ ಸ್ಪಷ್ಟತೆ ಇದ್ದದ್ದರಿಂದಲೇ ಕೌಸಲ್ಯೆಗೂ ತನ್ನ ದುಃಖವನ್ನು ಮೀರಲು ಸಾಧ್ಯವಾಯಿತು; ಲಕ್ಷ್ಮಣನು ದುಡುಕು-ಕ್ರೋಧಗಳಿಂದ ತಪ್ಪು ಹೆಜ್ಜೆ ಇಡುವುದು ತಪ್ಪಿತು.

ಶ್ರೀರಂಗಮಹಾಗುರುಗಳು ನಚಿಕೇತನ ಬಗ್ಗೆ ಹೇಳಿದ ಮಾತು ಇಲ್ಲಿ ರಾಮನಿಗೆ ಚೆನ್ನಾಗಿ ಅನ್ವಯವಾಗುತ್ತದೆ. "ಎಷ್ಟೇ ಉದ್ವೇಗ, ಆಕ್ರೋಶಗಳಿಂದ ಅವನತ್ತ ಹರಿಹಾಯ್ದರೂ ಶಾಂತಚಿತ್ತದಿಂದಲೇ ಅದನ್ನು ಸ್ವೀಕರಿಸಿ, ವಿಚಾರದೃಷ್ಟಿಯಿಂದಲೇ ಸತ್ಯದತ್ತ ಎದುರಾಳಿಯ ಮನ ಸೆಳೆದು, ಕೊನೆಗೆ ಅವನಲ್ಲಿಯೂ ವಿವೇಕವನ್ನು ಮೂಡಿಸುತ್ತಿದ್ದ ಅವನ ವಿಚಾರನೈಪುಣ್ಯ ಅಸಾಧಾರಣವಾದುದು!" 

ಇಂತಹ ಸಮಚಿತ್ತತೆ ಸರ್ವರಿಗೂ ಅನುಕರಣಯೋಗ್ಯವಲ್ಲವೇ?

ಸೂಚನೆ: 4/12//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ 85 ಕನಸಿನಲಿ ಕಂಡೆ ತುಲಸೀ-ಭೂಷಿತನ ಆಲಿಂಗನವನ್ನು! (Krishakarnamrta 85)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

ಕೃಷ್ಣನನ್ನು ಸ್ವಪ್ನದಲ್ಲಿ ಕಂಡಿದ್ದಾನೆ, ಲೀಲಾಶುಕ. ಕೃಷ್ಣನ ಆಭರಣವೇನು, ಅಲಂಕಾರವೇನು, ವಸ್ತ್ರವೇನು, ಶರೀರವೇನು! - ಕಂಡಿದುದೆಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದ್ದಾನೆ.

ಕೃಷ್ಣನಿಗೆ ಭೂಷಣವಾಗಿರುವುದು ತುಲಸೀ, ಎಂದರೆ ತುಳಸೀ-ಮಾಲೆ. ಅದೂ ಎಂತಹುದು? ತರುಣ-ತುಲಸೀ. ಎಂದರೆ ಹೊಸದಾಗಿ ತಂದು ಕಟ್ಟಲಾಗಿರುವಂತಹುದು. ಹಾಗಿರುವ ತುಲಸೀಹಾರ. ಅಲ್ಲಿಯ ತುಲಸೀ-ದಳಗಳಲ್ಲಿ ತೋರುವ ಮಾರ್ದವ-ಹೊಳಪುಗಳು ಅದರಲ್ಲಿ ತುಂಬಿರುವ ಚೈತನ್ಯವನ್ನು ಸೂಚಿಸುತ್ತದೆ.

ಅಲ್ಲದೆ, ತನ್ನ ಅಲಂಕಾರವಾಗಿ ಆತನು ನವಿಲುಗರಿಯನ್ನು ಧರಿಸಿದ್ದಾನೆ. ಹೀಗೆ ನವಿಲಿನ ಪಿಂಛವು ಆತನಿಗೆ ಚೂಡವಾಗಿದೆ. ಚೂಡ ಅಥವಾ ಅವಚೂಡವೆಂದರೆ ತಲೆಯ ಮೇಲಿನ ಆಭರಣ. ಅದು ಸಹ ಘನ-ಶ್ಯಾಮವೇ.

ಘನವೆಂದರೆ ಮೋಡವಾದ್ದರಿಂದ, ಅದರ ಹಾಗಿನ ಶ್ಯಾಮ-ವರ್ಣವೇ ಆ ಆಭರಣಕ್ಕೂ. ಮತ್ತು ಅದನ್ನು ಸಿಕ್ಕಿಸಿರುವುದು ತನ್ನ ವೇಣೀ-ಮೂಲದಲ್ಲಿ, ಎಂದರೆ ಜಡೆಯ ಆರಂಭದೆಡೆಯಲ್ಲಿ. ಜುಟ್ಟಿನ ತುದಿಯಲ್ಲಿ ಸುಮ್ಮನೆ ಸಿಕ್ಕಿಸಿದರೆ ನಿಂತುಬಿಡುವುದೇ ನವಿಲುಗರಿ? ಕುಣಿದರೂ ಉದುರಬಾರದೆಂದರೆ ಕೇಶಾರಂಭದೆಡೆಗೇ ಭದ್ರವಾಗಿ ಸೇರಿಸಿ ಕಟ್ಟಿರಬೇಕು, ಅಲ್ಲವೇ? ಆದುದರಿಂದ ವೇಣಿಯ, ಎಂದರೆ ಜಡೆಯ, ಮೂಲ-ಸ್ಥಾನಕ್ಕೇ ಅದನ್ನು ಸಿಕ್ಕಿಸಿರುವುದು.

ಆಭರಣವಾಯಿತು, ಅಲಂಕಾರವಾಯಿತು. ಇನ್ನು ಆತನ ವಸನವು ಹೇಗಿದೆ? ವಸನವೆಂದರೆ ವಸ್ತ್ರ. ಆತನು ಧರಿಸಿರುವುದು ಸ್ನಿಗ್ಧ-ಪೀತಾಂಬರವನ್ನು. ಸ್ನಿಗ್ಧವೆಂದರೆ ಹೊಳಪಿನಿಂದ ಕೂಡಿರುವುದು. ಆತನ ಮೈಮೇಲೆ ಅದು ಹೇಗೆ ತೋರುತ್ತದೆ? ನೀಲ-ಮೇಘವನ್ನು ಬಳಸಿದ ವಿದ್ಯುಲ್ಲೇಖೆಯ ಹಾಗೆ.

ವಿದ್ಯುತ್ ಎಂಬ ಪದವನ್ನು ಎಲೆಕ್ಟ್ರಿಸಿಟಿ ಎಂಬರ್ಥದಲ್ಲಿ ತಾನೆ ಬಳಸುತ್ತೇವೆ? ಆದರೂ, ವಿದ್ಯುತ್ ಎಂಬುದು ಮೂಲತಃ ಸಂಸ್ಕೃತ-ಪದ. ಮಿಂಚು ಎಂದೇ ಅದರ ಅರ್ಥ. ತಟಿತ್, ಸೌದಾಮನೀ, ವಿದ್ಯುತ್ - ಇವೆಲ್ಲ ಪರ್ಯಾಯ-ವಾಚಿಗಳೇ. ವಿದ್ಯುಲ್ಲೇಖೆಯೆಂದರೆ ಮಿಂಚಿನ ರೇಖೆ. ಲೇಖಾ-ರೇಖಾ-ಪದಗಳಿಗೆ ಒಂದೇ ಅರ್ಥ. "ರ-ಲಯೋರ್ ಅಭೇದಃ".

ಕಪ್ಪುಮೋಡದ ಹಿನ್ನೆಲೆಯಲ್ಲಿ ತೋರುವ ಮಿಂಚು ಹಳದಿಬಣ್ಣವುಳ್ಳದ್ದೆಂಬಂತೆ ತೋರುತ್ತದೆ. ಕರಿಯ ಕೃಷ್ಣನ ಮೈಮೇಲಿನ ಹಳದಿ ಹೊದಿಕೆಗೆ, ಇದಕ್ಕಿಂತಲೂ, ಎಂದರೆ ಮೋಡದ ಮೇಲಿನ ಮಿಂಚಿನ ಬಳ್ಳಿಗಿಂತಲೂ, ಉತ್ತಮವಾದ ಹೋಲಿಕೆಯಿರಲಾರದು.

ಇನ್ನು ಕೃಷ್ಣನ ಮೈಕಟ್ಟೇ ಹೇಗಿದೆಯೆಂದೆಂಬುದನ್ನು ಹೇಳಬೇಕಲ್ಲವೇ? ಅದಕ್ಕೊಂದು ಸೂಚಕವಾಗಿ ಆತನ ತೋಳನ್ನೇ ಚಿತ್ರಿಸಿದ್ದಾನೆ, ಕವಿ. ಮರಕತ-ಮಣಿ ಎಂದರೆ ಪಚ್ಚೆಮಣಿ. ಪಚ್ಚೆಮಣಿಯ ಸ್ತಂಭದಂತೆ ಗಂಭೀರವಾಗಿದೆ, ಎಂದರೆ ಭವ್ಯವಾಗಿದೆ, ಆತನ ತೋಳು. ಆತನ ತೋಳು ಹಾಗಿದೆಯೆಂದರೆ ಆತನ ಇಡೀ ಶರೀರವನ್ನೇ ಉಪಲಕ್ಷಿಸಿದಂತೆ. ಸ್ತಂಭ-ಗಂಭೀರವೆಂಬ ಪದವೇ, ಆ ತೋಳುಗಳಲ್ಲಿ ಕಾಣುವ ಪೌರುಷ, ಮಾಂಸಲತ್ವ, ಹೊಳಪು – ಇವೆಲ್ಲವನ್ನೂ ಸೂಚಿಸುವುದೇ ಸರಿ!

ಈ ಶ್ಲೋಕದಲ್ಲಿ ಲೀಲಾಶುಕನು ತೋಳನ್ನೇ ಏಕೆ ಚಿತ್ರಿಸಿದ? ಕೃಷ್ಣನ ಕ್ರಿಯೆಯನ್ನು ವರ್ಣಿಸಬೇಕಾಗಿತ್ತಲ್ಲವೇ? ಅದಕ್ಕಾಗಿ ತೋಳಿನ ಬಣ್ಣನೆ. ಏನು ಕೆಲಸ ತೋಳಿಗೆ? ಪ್ರೀತಿಯಿಂದ ಮಾಡಿಕೊಳ್ಳುವ ಆಲಿಂಗನವೇ ಕೆಲಸ. ಯಾರನ್ನು ಆಲಿಂಗಿಸಿಕೊಂಡಂತೆ ಬಿದ್ದಿದೆ, ಈತನಿಗೆ ಕನಸು?

ಇಲ್ಲಿಯೇ ಇರುವುದು ಕವಿಯ ಜಾಣ್ಮೆ. "ಮಾಂ" ಎನ್ನುತ್ತಾನೆ, ಕವಿ.

ಮತ್ತೇನು, ಮತ್ತಾರನ್ನು? ಲಕ್ಷ್ಮಿಯನ್ನೇ. 'ಮಾ' ಎಂದರೆ ಇಂದಿರೆಯೇ. "ಇಂದಿರಾ ಲೋಕಮಾತಾ ಮಾ" ಎನ್ನುತ್ತದೆ, ಅಮರಕೋಶ, ಲಕ್ಷ್ಮೀ-ಪರ್ಯಾಯಗಳಲ್ಲಿ.

ವಿಷ್ಣುವು ಮಾ-ಧವನೆಂದರೆ ಲಕ್ಷ್ಮೀ-ಪತಿ. ಹೀಗೆ ಲಕ್ಷ್ಮೀಪತಿಯು ಲಕ್ಷ್ಮಿಯನ್ನು ಆಲಿಂಗಿಸಿಕೊಂಡಿರುವುದನ್ನು ಕಂಡಿದ್ದಾನೆ, ಕವಿ. ಭಗವಂತ-ಭಗವತಿಯವರು ಒಟ್ಟಿಗೇ ಕುಳಿತಿರುವುದನ್ನು ಚಿತ್ರಿಸಿದ್ದಾನೆ.

ಜಗನ್ಮಾತಾ-ಪಿತೃಗಳು ಪತಿ-ಪತ್ನಿಯರ ಪ್ರೇಮಕ್ಕೂ ಆದರ್ಶ-ಭೂತರು. ಆದುದರಿಂದ ಅವರು ಪರಸ್ಪರಾಲಿಂಗನದಲ್ಲಿರುವರೆಂಬ ವರ್ಣನೆಯನ್ನುಕವಿಗಳು ಕಾವ್ಯದಲ್ಲಿ ತಂದಿರುವರು. ತದನುಗುಣವಾಗಿ ಶಿಲ್ಪಿಗಳು ಅದನ್ನೇ ಶಿಲ್ಪದಲ್ಲೂ ತಂದಿರುವರು. ಕವಿ-ಕಲಾವಿದರು ಏಕತತ್ತ್ವವನ್ನು ಏಕರೂಪವಾಗಿಯೇ ತಂದರೆ ಅಚ್ಚರಿಯೇನಿಲ್ಲ.

ಇಂತಹ ಶಿಲ್ಪಗಳ ಆಶಯವನ್ನು ವಿವರಿಸುವ ಸಂದರ್ಭದಲ್ಲಿ ಶ್ರೀರಂಗಮಹಾಗುರುಗಳು ಹೀಗೆ ಸ್ಪಷ್ಟಪಡಿಸಿದ್ದಾರೆ. ತನ್ನ ಮನದನ್ನೆಯು ತನ್ನ ದಿವ್ಯಭಾವದಿಂದ ಜಾರದಿರಲೆಂಬ ಆಶಯವೇ ಆ ಆಲಿಂಗನದಲ್ಲಿದೆ. ಅಂತಹ ದಿವ್ಯಭಾವವನ್ನು ಅಶ್ಲೀಲವೆಂದು ಕಾಣುವುದು ಮೂರ್ಖತನವೇ ಸರಿ. ಎಂದೇ ತನ್ನ ಅರ್ಧವೇ ಆದವಳನ್ನು ಹಾರ್ದವಾಗಿ ಆಲಿಂಗಿಸಿಕೊಂಡಿರುವುದನ್ನು ನೋಡಿದೊಡನೆ ತೋರುವುದೆಂದರೆ ಆತನ ತೋಳೇ. ಎಂದೇ ಅದನ್ನೇ ಕವಿಯು ಚಿತ್ರಿಸಿರುವುದು ಸಹಜವೇ ಆಗಿದೆ.

ಇದಲ್ಲದೆ, "ಮಾಂ" ಎನ್ನುವುದಕ್ಕೆ ಬೇರೊಂದು ಅರ್ಥವೂ ಇದೆ. ಆ ಅರ್ಥವೂ ಯುಕ್ತವೇ. ವ್ಯಾಕರಣ-ದೃಷ್ಟ್ಯಾ "ಅಸ್ಮದ್" ಶಬ್ದದ ದ್ವಿತೀಯಾವಿಭಕ್ತಿಯ ಏಕವಚನದ ರೂಪವೇ "ಮಾಮ್" ಎಂಬುದು. ಅದರ ಅರ್ಥ, "ನನ್ನನ್ನು" ಎಂದು. ಹೀಗೆ ಕೃಷ್ಣನು ತನ್ನನ್ನೇ ಆಲಿಂಗಿಸಿಕೊಂಡಿರುವ ಕನಸನ್ನೇ ಕಂಡಿದ್ದಾನೆ, ಲೀಲಾಶುಕ.

ಇಂತಹ ಅದ್ಭುತವಾದ ಕನಸನ್ನು ಕಂಡಿರುವ ಲೀಲಾಶುಕನೇ ಧನ್ಯ. ಏಕೆಂದರೆ ಇಂತಹ ಕನಸುಗಳು ಎಲ್ಲರಿಗೂ ಬಂದುಬಿಡುವುದಿಲ್ಲ. ಕನಸಿನಲ್ಲಿ ಭಗವಂತ-ಭಗವತಿಯರನ್ನು ಕಾಣುವುದಾಗಲಿ, ಭಗವಂತನು ತನ್ನನ್ನು ಆಲಿಂಗಿಸಿಕೊಂಡಿರುವಂತೆ ಕಾಣುವುದಾಗಲಿ ದುರ್ಲಭವೇ ಸರಿ.

ಯಾರ ಮನಸ್ಸು ಆಧ್ಯಾತ್ಮಿಕವಾಗಿ ಮುಂದುವರೆದಿರುವುದೋ, ಯಾರ ಪ್ರಾಣದಲ್ಲಿ ದಿವ್ಯಸಂಚಾರವು ತಲೆದೋರಿರುವುದೋ, ಅಂತಹವರಿಗೇ ಇಂತಹ ಕನಸುಗಳು ಸಂಭವಿಸುವುದು. ಹೀಗೆ ಇಂತಹ ಸ್ವಪ್ನಗಳು ಆಧ್ಯಾತ್ಮಿಕ-ಪ್ರಗತಿಯ ಸೂಚಕವಾದವುಗಳೂ ಹೌದು.

ಸಂತರು ಹೇಳುವರಲ್ಲವೇ? "ಜಾಗತ ರಾಮ ಸೋವತ ರಾಮ, ಸಪನೇಮೇ ದೇಖೋ ಹಿ ರಾಮ ಹೀ ರಾಮ! " ಎಂದು? ಅಂತಹ ಭಾವಕ್ಕೆ ಇಲ್ಲಿಯ ಮಾತುಗಳು ಸಂವಾದಿಯಾಗಿವೆ.

ಹೀಗೆ, ಮಾಂ – ಎಂಬುದರ ಬದಲು, ರಮಾಂ – ಎಂದೋ, ಇಂದಿರಾಂ ಎಂದೋ, ಪದವನ್ನು ಬಳಸಿದ್ದಲ್ಲಿ ಛಂದಸ್ಸೂ ಒಪ್ಪುತ್ತಿರಲಿಲ್ಲ, ಈ ಸೊಬಗೂ ಬರುತ್ತಿರಲಿಲ್ಲ, ಈ ಶ್ಲೇಷವೇ ಹೊಮ್ಮುತ್ತಿರಲಿಲ್ಲ.  

ಮಾಂ ಎಂಬ ಪದವನ್ನೇ ಬಳಸಿ, ಅತ್ತ ಲಕ್ಷ್ಮಿಯನ್ನೂ ಇತ್ತ ತನ್ನನ್ನೂ ಸೂಚಿಸುವಂತಾಗಿಸಿರುವುದು ಕವಿಯ ಅಧ್ಯಾತ್ಮ-ಭಾವ-ದರ್ಶಿಯಾದ ಚಮತ್ಕಾರವಾಗಿ ಅತ್ಯಂತ ಶೋಭಾಕರವಾಗಿದೆ.

ಹೀಗೆ ಭಗವಂತನ ಆಶ್ಲೇಷದ ಸಂದರ್ಭದಲ್ಲಿ, ಎಂದರೆ ಆಲಿಂಗನದ ಸಂದರ್ಭದಲ್ಲಿ, ಕವಿಯು ಶ್ಲೇಷವನ್ನು ಪ್ರಯೋಗಿಸಿರುವುದು ಅದ್ಭುತವಾಗಿದೆ.

ಅನೇಕ ಕವಿಗಳು ಒಳ್ಳೆಯ ಶ್ಲೇಷ ತರಿಸಲು ಬಹಳ ಕ್ಲೇಶಪಡುವುದುಂಟು. ಆದರೆ ಇಲ್ಲಿ ಬಂದಿರುವ ಅನಾಯಾಸವಾದ ಶ್ಲೇಷಾಲಂಕಾರವು ಲೀಲಾಶುಕನ ಕವಿತೆಗೇ ಒಂದು ಅಲಂಕಾರವಾಗಿದೆ. ಎಷ್ಟಾದರೂ ಶ್ಲೇಷಕ್ಕೆ ಮೆರುಗು ಬರುವುದು ಅದರ ಸಹಜತೆಯಿಂದ, ಅನಾಯಾಸತೆಯಿಂದ.

ಜೊತೆಗೇ, ಸಹಜವೂ ಸರಲವೂ ಆದ ಅನುಪ್ರಾಸವನ್ನು ಬರಿಸಿರುವುದೂ ಕವಿಯ ಹೆಗ್ಗಳಿಕೆಯೇ. ಹೀಗೆ ಶ್ಲೇಷವನ್ನು ಶ್ರಮವಿಲ್ಲದೆಯೇ, ಮತ್ತು ಸಂದರ್ಭಕ್ಕೆ ಬಲು ಚೆನ್ನಾಗಿ ಹೊಂದಿಕೊಳ್ಳುವಂತಹ ಬಗೆಯಲ್ಲಿಯೇ, ಪ್ರಯೋಗ ಮಾಡಿರುವ ಕವಿಗೆ ಸಹೃದಯರೆಲ್ಲರೂ ವಂದಿಸಬೇಕಾದದ್ದು ಸಹಜವೇ ಆಗಿದೆ. ಇಂತಹ ಅನೇಕ ಶ್ಲೋಕರತ್ನಗಳನ್ನು ರಚಿಸಿಕೊಟ್ಟಿರುವ ಲೀಲಾಶುಕನಿಗೆ ನಮ್ಮ ವಂದನೆಗಳು.

ವೇಣೀ-ಮೂಲೇ ವಿರಚಿತ-ಘನ-ಶ್ಯಾಮ-ಪಿಂಛಾವಚೂಡೋ /

ವಿದ್ಯುಲ್ಲೇಖಾ-ವಲಯಿತ ಇವ ಸ್ನಿಗ್ಧ-ಪೀತಾಂಬರೇಣ |

ಮಾಂ ಆಲಿಂಗನ್ ಮರಕತ-ಮಣಿ-ಸ್ತಂಭ-ಗಂಭೀರ-ಬಾಹುಃ /

ಸ್ವಪ್ನೇ ದೃಷ್ಟಃ ತರುಣ-ತುಲಸೀ-ಭೂಷಣೋ ನೀಲ-ಮೇಘಃ ||

ಸೂಚನೆ : 6/12/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.