Sunday, November 30, 2025

ಪ್ರಶ್ನೋತ್ತರ ರತ್ನಮಾಲಿಕೆ 41(Prasnottara Ratnamalike 41)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)




ಪ್ರಶ್ನೆ ೪೨.  ಸಾಧು ಜನ ಯಾರು? ಮತ್ತು ಅಧಮರು ಯಾರು?

 ಸದಾಚಾರೀ. ದುರಾಚಾರೀ

ಸತ್ ಅಂದರೆ ಒಳ್ಳೆಯ ಆಚಾರವನ್ನು ಇಟ್ಟುಕೊಂಡವನೇ 'ಸದಾಚಾರಿ' ಎಂದು ಕರೆಸಿಕೊಳ್ಳುತ್ತಾನೆ. ಇದಕ್ಕೆ ವಿರುದ್ಧವಾದ ಆಚಾರ ಉಳ್ಳವನು ದುರಾಚಾರಿ ಎಂದು ಕರೆಸಿಕೊಳ್ಳುತ್ತಾನೆ. ಇಲ್ಲಿ ನಾವು ವಿವೇಚಿಸಬೇಕಾದ ವಿಷಯ ಎರಡು. ಒಂದನೆಯದಾಗಿ ಸತ್ ಎಂದರೆ ಏನು? ಮತ್ತು ಆಚಾರ ಎಂದರೆ ಏನು? ಎಂಬುದಾಗಿ. ಒಟ್ಟಾರೆ 'ಸದಾಚಾರ' ಎಂಬ ಸಂಗತಿಯನ್ನು ಯಾವನು ತನ್ನಲ್ಲಿ ಅಳವಡಿಸಿಕೊಂಡಿರುತ್ತಾನೋ, ಅವನು ಸದಾಚಾರಿಗಳು. ಹಾಗಾಗಿ ನಾವು 'ಸತ್' ಎಂದರೆ ಏನು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕಾಗಿದೆ. 

'ಸತ್' ಎಂದರೆ 'ಅಸ್ತಿ ಇತಿ ಸತ್' ಎಂಬಂತೆ ಯಾವುದು ಇರುತ್ತದೆಯೋ ಅದು. ಅಂದರೆ ಯಾವುದು ನಿನ್ನೆಯ ದಿವವೂ ಇತ್ತು, ಈದಿನವೂ ಇದೆ, ನಾಳೆಯೂ ಇರುತ್ತದೆ ಎಂಬುದಕ್ಕೆ ವಿಷಯವಾಗುತ್ತದೆಯೋ ಅದು ತಾನೆ!. ಯಾವಾಗಲೂ ಅಸ್ತಿತ್ವವು ಇರುವಂತದ್ದು. ಅದು ತಾನೇ ಸತ್ತಾಗಿರುವ ವಿಷಯ! ಇಂತಹ ಮೂರು ಕಾಲದಲ್ಲೂ ತನ್ನ ಅಸ್ಮಿತೆಯನ್ನು ತೋರುವ ವಿಷಯ ಯಾವುದು? ಎಂದರೆ ಅದೇ ಸತ್. ನಾವು ಕಾಣುವ ಯಾವುದೇ ವಿಷಯವು ಇಂದಿರುವುದು ನಾಳೆ ಇರದು, ನಿನ್ನೆ ಕಂಡಿದ್ದು ಇವತ್ತು ಕಾಣದು. ಹೀಗೆ ಇವೆಲ್ಲವೂ ಯಾವುದೋ ಕಾಲದ ಪರಿಮಿತಿಯಲ್ಲಿ ಇದೆ ಮತ್ತು ಇಲ್ಲ ಎಂಬುದಕ್ಕೆ ವಿಷಯವಾಗುತ್ತವೆ. ಸತ್, ಚಿತ್, ಆನಂದ ರೂಪವಾಗಿರುವ ಪರಬ್ರಹ್ಮ ಎಂಬುದಾಗಿ ಉಪನಿಷತ್ತುಗಳೆಲ್ಲವೂ ಯಾವುದನ್ನು ಸಾಗುತ್ತವೆಯೋ ಅದೇ ಸತ್ಯ, ಅದೇ ಸತ್. ಆದುದರಿಂದ ಆ ಪರಬ್ರಹ್ಮ ವಸ್ತು ಮಾತ್ರ ಸತ್ತಾಗಿದೆ. ಆ ಸತ್ಯದ ಬಗ್ಗೆ ಅಥವಾ ಅದನ್ನು ಅರಿಯುವ ಬಗ್ಗೆ ಅಥವಾ ಅದನ್ನು ಸೇರುವ ಬಗೆಯಲ್ಲಿ ಯಾವನು ತನ್ನ ನಡೆ-ನುಡಿ, ಆಚಾರ-ವಿಚಾರಗಳನ್ನು ಇಟ್ಟುಕೊಳ್ಳುತ್ತಾನೋ ಅವನನ್ನು 'ಸದಾಚಾರಿ' ಎಂಬುದಾಗಿ ಕರೆಯಬಹುದು. ಅವನು ಮಾಡುವ ಆಚಾರ ವಿಚಾರಗಳೆಲ್ಲವೂ ಸತ್ಯದ ಕಡೆಗೆ, ಭಗವಂತನ ಕಡೆಗೆ ಅವನನ್ನು ಕರೆದುಕೊಂಡು ಹೋಗುತ್ತದೆ ಎಂಬುದಾಗಿ ತಾತ್ಪರ್ಯ. 

'ಆಚಾರ' ಎಂದರೆ 'ಆ-ಸಮಂತಾತ್' ಸತ್ಯದವರೆಗೆ ಅಂದರೆ ಗುರಿ ಮುಟ್ಟುವ ತನಕ ಯಾವುದು ನಮ್ಮನ್ನು ಕರೆದುಕೊಂಡು ಹೋಗುತ್ತದೆಯೋ ಅದು ತಾನೇ!. ಅಂತಹದನ್ನು ಮಾತ್ರ ಆಚಾರ ಎಂಬುದಾಗಿ ಕರೆಯಲಾಗುತ್ತದೆ. ಅಂತಹ ಆಚಾರವನ್ನು ಇಟ್ಟುಕೊಂಡ ಆಚಾರ್ಯರು ಮಾತ್ರ ಭಗವಂತನ ಕಡೆಗೆ ನಮ್ಮನ್ನು ಕರೆದೊಯ್ಯಲು ಸಾಧ್ಯ. ಇಂತಹ ಆಚಾರ ಇಟ್ಟುಕೊಂಡವನು ಸಜ್ಜನ, ಸತ್ಪುರುಷ ಮೊದಲಾದ ಪದಗಳಿಂದ ಕರೆಸಿಕೊಳ್ಳುತ್ತಾನೆ. ಅವನ ಜೀವನವು ಅದಕ್ಕನುಗುಣವಾಗಿ ಇರುತ್ತದೆ. ಪೂರಕವಾದದ್ದನ್ನು ಬಿಟ್ಟು, ಇನ್ನಾವ ಕ್ರಿಯೆಯೂ ಅವನಲ್ಲಿ ಕಾಣದು. ಹಾಗಾಗಿ ಅವನನ್ನು ನಾವು ಸಜ್ಜನ, ಸತ್ಪುರುಷ ಇತ್ಯಾದಿಯಾಗಿ ಆ ಸತ್ ಎಂಬ ನಿತ್ಯ ಅಸ್ತಿತ್ವದ ಭಗವಂತನ ವಿಶೇಷಣವಾಗಿ ನಾವು ಕರೆಯುತ್ತೇವೆ. ಇಂತಹವನನ್ನೇ ಸಜ್ಜನ ಅಥವಾ ಸಾಧು ಎಂಬುದಾಗಿ ಹೇಳಬಹುದು. 

ಇದಕ್ಕೆ ವಿರುದ್ಧವಾದ ನಡೆಯುಳ್ಳವನನ್ನು ದುರಾಚಾರಿ, ಅಧಮ, ದುಷ್ಟ ಹೀಗೆಲ್ಲ ಹೇಳಬಹುದು. ಆತನ ಜೀವನವ್ಯಾಪಾರವೆಲ್ಲವೂ ಭಗವಂತನ ನಡೆಗೆ ವಿರುದ್ಧವಾಗಿಯೇ ಇರುತ್ತವೆ. ಹಾಗಾಗಿ ಅವೆಲ್ಲವೂ 'ದುರಾಚಾರ' ಎಂಬುದಾಗಿ ಕರೆಸಿಕೊಳ್ಳುತ್ತವೆ. ಆದ್ದರಿಂದ ಅವನನ್ನು 'ದುರ್ಜನ ಅಥವಾ ಅಸಾಧು' ಎಂಬುದಾಗಿ ಕರೆಯಲಾಗುತ್ತದೆ.

ಸೂಚನೆ : 30/11/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 164 ಜರಾಸಂಧನ ಪರವಾಗಿರುವ ಹಲವು ರಾಜರು (Vyaasa Vikshita 164)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ರಾಜಸೂಯಯಾಗವನ್ನು ಮಾಡುವುದರ ಬಗ್ಗೆ ಸಲಹೆಯನ್ನು ಕೇಳಲು ಶ್ರೀಕೃಷ್ಣನನ್ನು ಯುಧಿಷ್ಠಿರನು ಬರಮಾಡಿಕೊಂಡಿದ್ದನಷ್ಟೆ. ಆ ಬಗ್ಗೆ ಮಾರ್ಗದರ್ಶಕವಾದ ಮಾತುಗಳನ್ನು ಆಡುತ್ತಾ ಶ್ರೀಕೃಷ್ಣನು ಯಾರು ಇದಕ್ಕೆ ಸಹಕರಿಸುವವರು, ಯಾರಲ್ಲ – ಎಂಬುದನ್ನು ಸೂಚಿಸುತ್ತಿದ್ದಾನೆ:

"ಈಗಷ್ಟೆ ಜರಾಸಂಧನೆಂಬ ರಾಜನು ದರ್ಪದಿಂದ ಅನೇಕ ರಾಜರುಗಳ ತಲೆಯ ಮೇಲೆ ಕಾಲೂರಿದ್ದಾನೆ. ತನ್ನ ಓಜಸ್ಸಿನಿಂದ ಅವರೆಲ್ಲರನ್ನೂ ಆಕ್ರಮಿಸಿಕೊಂಡಿದ್ದಾನೆ. ತನ್ನ ರಾಜನೀತಿಯ ಯುಕ್ತಿಗಳಿಂದಾಗಿ ತಾನೇ ಸಮ್ರಾಟ್ ಆಗಿ ಕುಳಿತಿದ್ದಾನೆ.

ಆ ಜರಾಸಂಧನನ್ನೇ ಆಶ್ರಯಿಸಿರುವವನು ಪ್ರಧಾನಸೇನಾಪತಿಯದ ಶಿಶುಪಾಲನು. ಆತನಲ್ಲಿಗೆ ಶಿಷ್ಯನೆಂಬಂತೆ ಹೋಗಿ ಸೇರಿದ್ದಾನೆ. ಅಲ್ಲದೆ ಕರೂಷರಾಜನಾದ ದಂತವಕ್ತ್ರನೂ ಅಷ್ಟೆ. ಆತನು ಮಾಯಾಯುದ್ಧ ಮಾಡುವವ; ಜರಾಸಂಧನೊಂದಿಗೆ ಹಾಗೆಯೇ ವರ್ತಿಸುತ್ತಿದ್ದಾನೆ.. ಇನ್ನಿಬ್ಬರು ರಾಜರಿದ್ದಾರೆ ಹಂಸ ಮತ್ತು ಡಿಂಭಕ - ಎಂಬ ಹೆಸರಿನವರು. ಅವರೂ ಜರಾಸಂಧನನ್ನೇ ಆಶ್ರಯಿಸಿರುವವರೇ.

ಅಲ್ಲದೆ, ಭಗದತ್ತನೆಂಬ ವೃದ್ಧ ರಾಜನಿದ್ದಾನೆ. ನಿನ್ನ ತಂದೆಯ ಮಿತ್ರನವನು. ಅವನ ಸೈನ್ಯವು ಅಪರಿಮಿತವಾದದ್ದು. ಅವನು ಯವನರಿಗೆ ಒಡೆಯ. ಅಂತಹವನೂ ತನ್ನ ಮಾತಿನಲ್ಲೂ ಕ್ರಿಯೆಯಲ್ಲೂ ಜರಾಸಂಧನಿಗೆ ಮಣಿದಿರುವವನೇ. ನಿನ್ನ ತಂದೆಯ ವಿಷಯದಲ್ಲಿ ಭಕ್ತಿಯುಳ್ಳವನು; ಏಕೆಂದರೆ ಸ್ನೇಹಪಾಶದಿಂದ ಬದ್ಧನಾಗಿರುವನು: ನಿನ್ನ ವಿಷಯದಲ್ಲೂ ಅಷ್ಟೇ ಭಕ್ತಿ ಅವನಿಗೆ.

ಇನ್ನು ಪುರುಜಿತ್ತನು ನಿನ್ನ ವಿಷಯದಲ್ಲಿ ಸ್ನೇಹಾದರಗಳನ್ನುಳ್ಳವನೇ. ಪಶ್ಚಿಮದಿಂದ ದಕ್ಷಿಣದವರೆಗೆ ಆತನ ಆಳ್ವಿಕೆಯುಂಟು. ನಿನಗಂತೂ ಸೋದರಮಾವನೇ. ಕುಂತಿಭೋಜ ಕುಲಕ್ಕೇ ಆತನು ಭೂಷಣ, ಒಳ್ಳೆಯ ಶತ್ರುಸಂಹಾರಕ.

ಇನ್ನೊಬ್ಬ ರಾಜನಿದ್ದಾನೆ. ಪೌಂಡ್ರಕವಾಸುದೇವನೆಂದೇ ಆತನು ಪ್ರಸಿದ್ಧ. ಆತನು ಜರಾಸಂಧನ ಕಡೆಗೇ. ಹಿಂದೆಯೇ ಆತನನ್ನು ನಾನು ಕೊಲ್ಲಬಹುದಿತ್ತು, ಆದರೆ ಕೊಂದಿಲ್ಲ. ಚೇದಿ-ದೇಶದಲ್ಲಿ ಆತನು ಪುರುಷೋತ್ತಮನೆಂದೇ ಹೆಸರುವಾಸಿಯಾಗಿರುವನು. ತನ್ನನ್ನು ಪುರುಷೋತ್ತಮನೆಂದೇ ಭಾವಿಸಿಕೊಂಡಿದ್ದಾನೆ ಕೂಡ! ಎಂದೇ ನನ್ನ ಚಿಹ್ನವನ್ನು, ಎಂದರೆ ಶಂಖ-ಚಕ್ರಗಳನ್ನು, ಧರಿಸಿಕೊಂಡಿದ್ದಾನೆ! ವಂಗ-ಪುಂಡ್ರ-ಕಿರಾತಗಳೆಂಬ ದೇಶಗಳ ಒಡೆಯನವನು.

ಮತ್ತೊಬ್ಬ ರಾಜನೂ ಜರಾಸಂಧನ ಭಕ್ತನಾಗಿದ್ದಾನೆ. ಭೂಮಿಯ ಕಾಲುಭಾಗಕ್ಕೇ ಆತನೊಡೆಯ. ಇಂದ್ರನ ಮಿತ್ರನೂ ಹೌದು. ತನ್ನ ಅಸ್ತ್ರವಿದ್ಯಾಬಲದಿಂದ ಆತನು ಪಾಂಡ್ಯ-ಕ್ರಥ-ಕೈಶಿಕ-ರಾಜ್ಯಗಳನ್ನು ವಶಪಡಿಸಿಕೊಂಡಿದ್ದಾನೆ. ಆತನೇ ಭೀಷ್ಮಕ.

ಅವನ ಭ್ರಾತೃವೊಬ್ಬನಿದ್ದಾನೆ. ಹೆಸರು ಆಕೃತಿ. ಶೌರ್ಯದಲ್ಲಿ ಜಾಮದಗ್ನ್ಯನಿಗೆ, ಎಂದರೆ ಜಮದಗ್ನಿಪುತ್ರನಾದ ಪರಶುರಾಮನಿಗೆ, ಸಮನಾಗಿದ್ದಾನೆ. ಶತ್ರುಸಂಹಾರದಲ್ಲಿ ಸಮರ್ಥ. ಅವನೂ ಜರಾಸಂಧನ ಕಡೆಗೇ. ನಾವೇನೋ ಅವನಿಗೆ ಪ್ರಿಯವನ್ನಾಚರಿಸತಕ್ಕವರಾದರೂ, ನಮ್ರತೆಯಿಂದಲೇ ಇದ್ದರೂ, ಆತನೇನೂ ನಮಗೆ ಹಿತವಾಗಿಲ್ಲ. ಬದಲಾಗಿ, ನಮಗೆ ಅಪ್ರಿಯರಾದವರೊಡನೆಯೇ ಆತನು ಕೈಜೋಡಿಸುತ್ತಿದ್ದಾನೆ. ತನ್ನ ಕುಲವೆಂತಹುದು, ಬಲವೆಂತಹುದು - ಇವುಗಳನ್ನು ಅವನು ಸರಿಯಾಗಿ ತೂಗಿ ಅರಿತುಕೊಂಡಿಲ್ಲ. ಜರಾಸಂಧನದು ದೀಪ್ತ ಯಶಸ್ಸು, ಎಂದರೆ ಬೆಳಗುವ ಕೀರ್ತಿ - ಎಂಬತ್ತಲೇ ದೃಷ್ಟಿಯಿಟ್ಟು ಆತನನ್ನೇ ಆಶ್ರಯಿಸಿರುವನು.

ಇನ್ನು ಉದೀಚ್ಯರಾದ, ಎಂದರೆ ಉತ್ತರದಿಕ್ಕಿನವರಾದ, ಭೋಜರೂ, ಅವರಿಗೇ ಸೇರಿದ ಹದಿನೆಂಟು ಕುಲದವರೂ, ಜರಾಸಂಧನ ಭಯದಿಂದಲೇ ಪಶ್ಚಿಮದಿಕ್ಕಿಗೆ ಓಡಿಹೋಗಿದ್ದಾರೆ.

ಮತ್ತೆ ಕೆಲವರು ದಕ್ಷಿಣಕ್ಕೇ ಓಡಿಹೋಗಿದ್ದಾರೆ. ಅವರೆಂದರೆ ಶೂರಸೇನರು, ಕುಲಿಂದರು ಮುಂತಾದ ಹಲವರು. ತಮ್ಮ ಸೋದರರು ಅನುಚರರು - ಇವರೆಲ್ಲರೊಂದಿಗೆ ಓಡಿಹೋಗಿರುವವರು. ಹಾಗೆಯೇ ಉತ್ತರದಿಕ್ಕನ್ನು ಬಿಟ್ಟು ಓಡಿಹೋಗಿರುವವರೆಂದರೆ ದಕ್ಷಿಣಪಾಂಚಾಲರು, ಕೋಸಲರು ಮುಂತಾದವರು. ಜರಾಸಂಧನಿಂದಾಗಿ ಭಯದಿಂದ ಅವರೆಲ್ಲರೂ ತತ್ತರಿಸಿರುವವರೇ" – ಎಂಬುದಾಗಿ ಹೇಳಿದನು.

ಸೂಚನೆ : 30/11/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಅಷ್ಟಾಕ್ಷರೀ - 80 ಯಾ ನಿಶಾ ಸರ್ವಭೂತಾನಾಂ (Astakshari 80)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ನಮ್ಮ ಜೀವನವು ಹೇಗಿರಬೇಕು? - ಎಂಬ ಪ್ರಶ್ನೆಗೆ ನಮ್ಮ ಪರಂಪರೆಯಲ್ಲಿ ಉತ್ತರವು ಎಲ್ಲಿ ಸಿಗುತ್ತದೆ? ಹೀಗೆಂದು ಯಾರಾದರೂ ಕೇಳಿದರೆ ಹೆಸರಿಸಬಹುದಾದ ಮೊಟ್ಟಮೊದಲ ಅಥವಾ ಅತಿಮುಖ್ಯ-ಗ್ರಂಥವೆಂದರೆ ಭಗವದ್ಗೀತೆಯೇ ಸರಿ. ಲೌಕಿಕಜೀವನ, ಆಧ್ಯಾತ್ಮಿಕಜೀವನ - ಇವೆರಡಕ್ಕೂ ಮಾರ್ಗದರ್ಶಿಯಾದುದು ಈ ಕೃತಿಯೇ.

ಗೀತೆಯು ಯೋಗಶಾಸ್ತ್ರ. ಎಂದೇ ಅದರ ಪ್ರತಿಯೊಂದು ಅಧ್ಯಾಯವೂ ಒಂದೊಂದು ಯೋಗವನ್ನು ಹೇಳುತ್ತದೆ. ಪ್ರಥಮಾಧ್ಯಾಯದಲ್ಲಿ ಅರ್ಜುನನಿಗುಂಟಾದ ಮಹಾಸಂದೇಹವನ್ನು ಹೇಳಿದೆ. ದ್ವಿತೀಯಾಧ್ಯಾಯದಿಂದಲೇ ಶ್ರೀಕೃಷ್ಣನ ಉಪದೇಶ ಆರಂಭವಾಗುವುದು. ಮರಣಸಂಬಂಧವಾದ ಪ್ರಶ್ನೆಯನ್ನು ಅರ್ಜುನನು ಕೇಳಿದನೆಂದೇ ಶ್ರೀಕೃಷ್ಣನ ಮಾತೂ ಜನನ-ಮರಣಗಳ ತತ್ತ್ವವನ್ನು ಬಿಡಿಸಿಹೇಳುವುದು. ಯೋಗವೇ ಯುಕ್ತವಾದ ಮಾರ್ಗವೆಂದು ಶ್ರೀಕೃಷ್ಣನು ಹೀಗೆ ಆರಂಭದಿಂದಲೇ ಹೇಳುವುದು.

ಹಾಗೆ ಯೋಗದಲ್ಲಿ ನೆಲೆಗೊಂಡ ಸ್ಥಿತಪ್ರಜ್ಞನ ಮಾತುಕತೆಗಳೂ ವರ್ತನೆಯೂ ಹೇಗಿರುವುದು? - ಎಂಬ ಅರ್ಜುನನ ಪ್ರಶ್ನೆಗಳಿಗೆ ಹದಿನೆಂಟು ಶ್ಲೋಕಗಳಲ್ಲಿ ಕೃಷ್ಣನುತ್ತರಿಸುವನು. ಇಡೀ ಗೀತೆಯ ಸಾರವೇ ಇವುಗಳಲ್ಲಿ ಮೂಡಿದೆಯೆಂದು ಹೇಳಿದರೂ ತಪ್ಪಾಗಲಾರದು.

ಕಾಮನೆಗಳನ್ನು ತೊರೆದವನು ದುಃಖಗಳಲ್ಲಿ ಕಂಗೆಡನು, ಸುಖಗಳಲ್ಲಿ ನಿಃಸ್ಪೃಹನಾಗಿರುವನು. ಕೂರ್ಮವು ತನ್ನ ಅಂಗಗಳನ್ನು ಒಳಕ್ಕೆ ಸೆಳೆದುಕೊಳ್ಳುವಂತೆ ತನ್ನ ಇಂದ್ರಿಯಗಳನ್ನು ಒಳಕ್ಕಾತನು ಸೆಳೆದುಕೊಳ್ಳಬಲ್ಲನು. ಬಲು ಜೋರು, ಇಂದ್ರಿಯಗಳ ಹೊರಸೆಳೆತ; ಮನಸ್ಸನ್ನೇ ಅವು ಅಪಹರಣಮಾಡಬಲ್ಲವು. ಇಂದ್ರಿಯಸಂಯಮವುಳ್ಳವನ ಪ್ರಜ್ಞೆಯೇ ಪ್ರತಿಷ್ಠಿತವಾಗಿರುವುದು. ಇಂದ್ರಿಯಸುಖಗಳತ್ತ ಮನಸ್ಸು ಹರಿಯುತ್ತಿದ್ದಂತೆ, ಅವುಗಳಲ್ಲಿ ಆಸಕ್ತಿಯೇರಿ, ಅದುವೇ ಊರಿದಾಗ ಕಾಮವಾಗಿ,  ಆಮೇಲೆ ಪರಂಪರೆಯಾಗಿ ಸಂಮೋಹ-ಸ್ಮೃತಿಭ್ರಂಶ-ಬುದ್ಧಿನಾಶ-ಸ್ವನಾಶ - ಇವುಗಳು ಉಂಟಾಗುತ್ತವೆ. ರಾಗದ್ವೇಷಗಳಿಲ್ಲದಾದಾಗ ಪ್ರಸನ್ನತೆ-ದುಃಖರಹಿತತೆ-ಬುದ್ಧಿಸ್ಥಿರತೆಗಳುಂಟಾಗುವುವು. ಇಂದ್ರಿಯನಿಗ್ರಹದಿಂದಲೇ ಸ್ಥಿತಪ್ರಜ್ಞತೆ-ಬ್ರಾಹ್ಮೀಸ್ಥಿತಿಗಳು ಸಿದ್ಧಿಸುವುದು. ಇವೆಲ್ಲವನ್ನೂಅತ್ಯಂತ-ತರ್ಕಬದ್ಧವಾಗಿ ಶ್ರೀಕೃಷ್ಣನು ಹೇಳಿದ್ದಾನೆ. ಇವಕ್ಕೆ ವಿಸ್ತೃತ-ವಿವರಣೆಯೂ ಅಪೇಕ್ಷಿತವೇ. ಅದಕ್ಕಿಲ್ಲಿ ಸ್ಥಳವಿಲ್ಲ.

ಆದರೆ ಈ ಸಂದರ್ಭದಲ್ಲಿ ಶ್ರೀಕೃಷ್ಣನಾಡಿದ ಒಗಟೆಯ ಮಾತೊಂದಿದೆ. ಅದುವೇ ನಮಗಿಲ್ಲಿ ವಿಚಾರಣೀಯವಾಗಿರುವುದು. ಏನದು?

"ಎಲ್ಲ ಭೂತಗಳಿಗೂ ಯಾವುದು ರಾತ್ರಿಯೋ (ಯಾ ನಿಶಾ ಸರ್ವಭೂತಾನಾಂ) ಅಲ್ಲಿ ಯೋಗಿಯು ಎಚ್ಚರವಾಗಿರುತ್ತಾನೆ; ಎಲ್ಲಿ ಪ್ರಾಣಿಗಳೆಲ್ಲವೂ ಎಚ್ಚರವಾಗಿರುವುವೋ ಅದು ಯೋಗಿಗೆ ರಾತ್ರಿಯಾಗಿರುವುದು" – ಎಂಬುದು.

ಇಲ್ಲಿ ಹೇಳಿರುವುದೇನು? ಎಲ್ಲರಿಗೂ ಯಾವಾಗ ನಿದ್ರೆಯೋ ಆಗ ಜ್ಞಾನಿಗೆ ಎಚ್ಚರ; ಎಲ್ಲರಿಗೂ ಯಾವಾಗ ಎಚ್ಚರವೋ, ಆಗ ಆತನಿಗೆ ರಾತ್ರಿ - ಎಂದು ಹೇಳಿದಂತಾಯಿತು. ಏನು ಹಾಗೆಂದರೆ? ಯೋಗಿಯೆಂದರೆ ಗೂಬೆಯಂತೆ - ಎಂದೇ? ನಕ್ತಂಚರವಾದ, ಅರ್ಥಾತ್ ರಾತ್ರಿ-ಸಂಚಾರಮಾಡುವ, ಪ್ರಾಣಿಗಳಂತೆಯೆಂದೇ? ಹಗಲು ಎಲ್ಲರಿಗೂ ಎಚ್ಚರವೆಂದರೆ, ಯೋಗಿಯು ಹಗಲು ನಿದ್ರಿಸುವವನೇ? ಯೋಗಶಾಸ್ತ್ರ-ಆಯುರ್ವೇದ-ಧರ್ಮಶಾಸ್ತ್ರಗಳಲ್ಲಿ ಹಗಲುನಿದ್ದೆಯನ್ನು ನಿಷೇಧಿಸಿದೆಯಲ್ಲವೇ? ಆಧುನಿಕ-ವಿಜ್ಞಾನವೂ ರಾತ್ರಿ-ನಿದ್ರೆಯೇ ಸರಿಯೆನ್ನುವುದಲ್ಲವೇ?

ಹಾಗಲ್ಲ. ಇಲ್ಲಿ ಹೇಳಿರುವುದು ಸಾಕ್ಷಾತ್ ಹಗಲು-ರಾತ್ರಿಗಳಲ್ಲ. ರಾತ್ರಿಯಲ್ಲಿ ಯಾವ ಪದಾರ್ಥಗಳೂ ಕಾಣಿಸವು, ತಮಸ್ಸು ತುಂಬಿರುವುದು, ಅಲ್ಲವೇ? ನಿಶಾ ಎಂಬುದರ ಅರ್ಥ ಇಲ್ಲಿ ಅದೇ.

ಈ ಶ್ಲೋಕಕ್ಕೆ ಯೋಗಿಪುಂಗವರಾದ ಶ್ರೀರಂಗಮಹಾಗುರುಗಳು ಕೊಟ್ಟಿರುವ ವಿವರಣೆಯು ಸುಭಗವಾಗಿರುವುದು. ಜ್ಞಾನಿಯು ನೋಡುತ್ತಿರುವುದು ಒಳಬೆಳಕನ್ನು. ಆ ಬಗ್ಗೆ ಅಜ್ಞಾನಿಗಳಾದ ಇತರರಿಗೆ ಏನೂ ಗೋಚರಿಸದು. ಆದ್ದರಿಂದಲೇ ಅವರಿಗದು ನಿಶೆಯಂತೆ: ಏನೂ ಕಾಣಿಸದಾದುದು.

ಅಲ್ಲದೆ ಯೋಗಿಯ ಇಂದ್ರಿಯಗಳೆಲ್ಲ ಚೆನ್ನಾಗಿಯೇ ಕೆಲಸ ಮಾಡುವುದರಿಂದ ಆತನು ಅಜ್ಞಾನಿಗಳ ಜಾಗ್ರತ್ತಿನ ಅನುಭವವನ್ನೆಲ್ಲಾ ಕಷ್ಟವಿಲ್ಲದೇ ಅರಿಯಬಲ್ಲನೇ ಸರಿ. ಜೊತೆಗೇ ಇಂದ್ರಿಯಗಳನ್ನು ಒಳಸೆಳೆದುಕೊಂಡು ಒಳಗೆ ಪರಮಪ್ರಕಾಶವನ್ನೂ ಆತನು ಅನುಭವಿಸಿರುವನು.

ಇಂದ್ರಿಯಗಳ ಬೆಳಕೂ ಬೆಳಕೇ ಆದರೂ, ಅದು ರಾತ್ರಿಯ ಹೊತ್ತು ನಕ್ಷತ್ರಗಳ ಮಿನುಗಿನಿಂದ ಗೊತ್ತಾಗುವಷ್ಟರದು, ಅಷ್ಟೆ. ಇದಕ್ಕೆ ಪ್ರತಿಯಾಗಿ, ಜ್ಞಾನಿಯು ಕಾಣುವ ಪರಮಾತ್ಮ-ಸೂರ್ಯ-ಪ್ರಕಾಶವು ಜಾಜ್ವಲ್ಯಮಾನವಾದುದು. ಜ್ಞಾನಿಗಳು ಮಾಡುವ ನಿದ್ರೆಯಾದರೂ ಎಚ್ಚರದ ನಿದ್ರೆ, ಯೋಗನಿದ್ರೆ.

ಇತರ ಜೀವಿಗಳಿಗೆ ಇಂದ್ರಿಯಗಳ ಸೆಳೆತವೇ ತೀವ್ರವಾಗಿದ್ದು, ಒಳಬೆಳಕೆಂಬುದೊಂದು ಇರುವುದೆಂದಾದಲಿ, ಅದನ್ನು ಪಡೆಯುವ ಮಾರ್ಗವಾಗಲಿ, ತಿಳಿಯದಾಗಿರುತ್ತದೆ: ಅದೆಲ್ಲ ಅವರ ಪಾಲಿಗೆ ಕತ್ತಲೇ. ಅಜ್ಞಾನಿಗಳ ಹಗಲೆಂದರೆ ಇಂದ್ರಿಯಪ್ರಪಂಚ; ಅದು ಜ್ಞಾನಿಗೆ ಗೊತ್ತಿಲ್ಲವೆಂದೇನಿಲ್ಲ.

ಹೀಗೆ ಜ್ಞಾನಿಯು ಇಂದ್ರಿಯ-ಪ್ರಪಂಚ-ಇಂದ್ರಿಯಾತೀತ-ಪ್ರಪಂಚಗಳೆರಡನ್ನೂ ಬಲ್ಲವನು. ಅಜ್ಞಾನಿಗೆ ಗೊತ್ತಿರುವುದು ಇಂದ್ರಿಯ-ಪ್ರಪಂಚವೊಂದೇ. ಜ್ಞಾನಿಯು ಬ್ರಾಹ್ಮೀಸ್ಥಿತಿಯನ್ನರಿತಿದ್ದಾನೆ. ಬ್ರಾಹ್ಮೀಸ್ಥಿತಿಯನ್ನು ಬಲ್ಲವನು ಮೋಹಕ್ಕೆ ಪಕ್ಕಾಗನು, ಶಾಂತಿಯನ್ನು ಹೊಂದುವನು.

ಹೀಗೆ, ಶೋಕ-ಮೋಹಗಳೆಂಬ ವಿಷಕ್ಕೆ ತುತ್ತಾಗಿರುವ ಅರ್ಜುನನಿಗೆ ಯೋಗೇಶ್ವರನಾದ ಶ್ರೀಕೃಷ್ಣನು ಅಮೃತವೆನಿಸುವ ಅದ್ಭುತ-ಯೋಗೋಪದೇಶವನ್ನೇ ಹೀಗೆ ಮಾಡಿದ್ದಾನೆ.

ಮೇಲ್ನೋಟಕ್ಕೆ ವಿರೋಧದ ನಿರೂಪಣೆ; ಬಿಡಿಸಿ ನೋಡಿದರೆ ಗಹನ-ಯೋಗತತ್ತ್ವದ ವಿವರಣೆ, ಕೃಷ್ಣನ ಈ ಸೂಕ್ತಿ!!

ಸೂಚನೆ: 29/11//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ 84 ನಿರ್ವಾಣ-ಸಾಮ್ರಾಜ್ಯವೇ ಮೈತಾಳಿ ಬಂದಂತೆ (Krishakarnamrta 84)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ನಾನೇನು ಮಾಡಲಿ, ನೀನೇ ಹೇಳು - ಎಂದು ಕೃಷ್ಣನನ್ನೇ ಕೇಳುತ್ತಿದ್ದಾನೆ, ಲೀಲಾಶುಕ. 

ಕೃಷ್ಣಾ, ನಿನ್ನ ಶೈಶವವು ತ್ರಿಲೋಕಾದ್ಭುತ - ಎಂದರೆ ಮೂರು ಲೋಕಗಳಲ್ಲೂ ಆಶ್ಚರ್ಯ-ಜನಕವಾದದ್ದು - ಎಂಬುದನ್ನು ನಾ ಬಲ್ಲೆ. ಹಾಗಿದ್ದರೂ ನಿರ್ವಿವಾದವಾಗಿ ನನ್ನದೊಂದು ಚಾಪಲವೂ ಇದೆಯಲ್ಲ? ನಾನೇನನ್ನು ಮಾಡಬೇಕು? ನೀ ಹೇಳು - ಎಂದು ಕೃಷ್ಣನಲ್ಲೇ ಮೊರೆಯಿಡುತ್ತಿದ್ದಾನೆ.

ಏನನ್ನು ಕುರಿತಾದ ಚಾಪಲ ಈತನದು? "ಕಮಲದಂತಿದೆಯಲ್ಲವೇ ನಿನ್ನ ಮುಖ? ಅದನ್ನು ನನ್ನೆರಡೂ "ಈಕ್ಷಣ"ಗಳಿಂದ ಕಾಣಬೇಕೆಂಬ ಚಾಪಲ. ಸಂಸ್ಕೃತದಲ್ಲಿ "ಈಕ್ಷಣ"ವೆಂದರೆ ನೋಡುವಿಕೆ, ಅಥವಾ ನೋಡಲು ಸಾಧನವಾದದ್ದು. ಅರ್ಥಾತ್ ಕಣ್ಣು. ಅಲ್ಲಿಗೆ ನಿನ್ನ ಮುಖ-ಕಮಲವನ್ನು ಕಣ್ತುಂಬ ನೋಡಬೇಕೆಂಬ ಹಂಬಲವೆನ್ನದು - ಎನ್ನುತ್ತಿದ್ದಾನೆ. 

ಈ ಕೃಷ್ಣ-ಮುಖಾಂಬುಜದಲ್ಲಿಯ ವಿಶೇಷವೇನು? ಅದಕ್ಕೆ ಸೋಕಿಸಿದ ಇನಿದನಿಗೈಯುವ ಕೊಳಲುಂಟಲ್ಲವೇ? ಅದರ ವಿಲಾಸಗಳಿಂದಾಗಿ ಮುಗ್ಧವಾಗಿದೆ, ಎಂದರೆ ಸೊಗಸಾಗಿ, ತೋರುತ್ತದೆ ನಿನ್ನ ಮುಖ-ಪದ್ಮ.

ಹಾಗಿರುವ ಅದನ್ನು ಕಾಣಬೇಕೆಂಬ ಕಾತರತೆ ಎನಗೆ. ತೀವ್ರವಾದ ಕಾತರತೆಯದು. ಇಂತಹ ಒಂದು ವಿಹ್ವಲತೆಗೆ ಒಳಪಟ್ಟಿರುವನು ನಾನು – ಎಂಬುದಾಗಿ ಮೊರೆಯಿಡುತ್ತಾನೆ, ಲೀಲಾಶುಕ.

ಶ್ಲೋಕ ಹೀಗಿದೆ:

ತ್ವಚ್ಛೈಶವಂ ತ್ರಿಭುವನಾದ್ಭುತಂ - ಇತ್ಯವೈಮಿ /

ಯಚ್ಚಾಪಲಂ ಚ ಮಮ ವಾಗವಿವಾದ-ಗಮ್ಯಮ್ |

ತತ್ ಕಿಂ ಕರೋಮಿ, ವಿರಣನ್ಮುರಳೀ-ವಿಲಾಸ-/

ಮುಗ್ಧಂ ಮುಖಾಂಬುಜಂ ಉದೀಕ್ಷಿತುಂ ಈಕ್ಷಣಾಭ್ಯಾಂ || 


***

ನಮ್ಮನ್ನು ಕೃಷ್ಣನು ಕಾಪಾಡಲಿ, ಎನ್ನುತ್ತಾನೆ ಲೀಲಾಶುಕ. ಎಂತಹ ಕೃಷ್ಣನಿವನು? ನಾಲ್ಕು ವಿಶೇಷಣಗಳಿಂದ ಶ್ರೀಕೃಷ್ಣನ ವಿಶೇಷಗಳನ್ನು ಹೇಳುತ್ತಾನೆ.

ಮೊದಲನೆಯದಾಗಿ, ವ್ರಜ-ವಾಸಿಗಳಿಗೆ ದೈವತನಾಗಿರುವನು ಅವನು. 

ದೇವ-ದೇವತಾ-ದೈವತ - ಎಂದು ಮೂರು ಸಂಸ್ಕೃತ- ಪದಗಳಿವೆ. ಮೂರಕ್ಕೂ ಒಂದೇ ಅರ್ಥ. ಹೀಗಾಗಿ, ವ್ರಜ-ವಾಸಿಗಳಿಗೆಲ್ಲರಿಗೂ ಶ್ರೀಕೃಷ್ಣನೇ ನೆಚ್ಚಿನ ದೈವ. ಅವರೆಲ್ಲ ತಮ್ಮ ದೈವವೆಂಬುದಾಗಿ ಯಾರನ್ನು ನೆಚ್ಚಿ ಉದ್ಧಾರವಾಗಿರುವರೋ, ಆತನೇ ನಮಗೂ ಅಧಿದೈವತ.

ಎರಡನೆಯದಾಗಿ, ರಸಾಂತರಗಳನ್ನು ನಿರ್ವಾಸನಮಾಡುವ ದೈವತವಿದು. ನಿರ್ವಾಸನವೆಂದರೆ ಅಟ್ಟುವುದು. ಏನು ರಸಾಂತರಗಳನ್ನು ಅಟ್ಟುವುದೆಂದರೆ? 

ರಸಾಂತರ - ಎಂದರೆ ಬೇರೆ ರಸಗಳು. ರಸಗಳನ್ನು ಷಡ್ರಸಗಳೆಂದೂ ನವರಸಗಳೆಂದೂ ಕಾಣುತ್ತೇವಲ್ಲವೆ? ಮೊದಲನೆಯದು ಪಾಕದಲ್ಲಿ, ಅರ್ಥಾತ್ ಅಡುಗೆಯಲ್ಲಿ; ಎರಡನೆಯದು ಕಾವ್ಯ-ಪ್ರಪಂಚದಲ್ಲಿ. ಯಾವುದನ್ನಿಟ್ಟುಕೊಂಡರೂ ಸರಿಯೇ. ಯಾವುದು ನಮಗೆ ಉತ್ಕಟವಾದ ಆಸ್ವಾದವನ್ನು ಉಂಟುಮಾಡುವುದೋ ಅದೆಲ್ಲವೂ ರಸವೇ ಆಗಿರುವುದು. ರಸಾಸ್ವಾದವೆಂದರೆ ಆನಂದಾನುಭವವೇ. 

ಅಲ್ಲದೆ, ರಸಗಳಲ್ಲಿ ಹೋಲಿಕೆಯೂ ಬರಬಹುದು. ಒಂದು ರಸವೇ ಮುಖ್ಯವಾಗಿ, ಉಳಿದವು ಗೌಣವಾಗಬಹುದು. ಒಂದು ರಸವು ಮತ್ತೊಂದನ್ನು ಮರೆಯಿಸಲೂಬಹುದು.

ಕೃಷ್ಣನು ಅದೆಂತಹ ಆನಂದದ ಚಿಲುಮೆಯೆಂದರೆ, ಆತನ ಮುಂದೆ ಮತ್ತಾವುದರ ಆಕರ್ಷಣವೂ ಉಳಿಯದು. ರಸಾಂತರವೆಂದರೆ ಬೇರೆ ರಸ(ಗಳು). ರಸ-ಪುರುಷನಾದ ಕೃಷ್ಣನ ಮುಂದೆ ಬೇರೊಂದು ರಸವುಂಟೇ?

ಮೂರನೆಯದಾಗಿ ಆತನು ನಿರ್ವಾಣ-ಸಾಮ್ರಾಜ್ಯವೇ ಅವತಾರ ಮಾಡಿರುವಂತಿರುವವನು. ನಿರ್ವಾಣವೆಂದರೆ ಮುಕ್ತಿ. ಹೀಗಾಗಿ ಮುಕ್ತಿ-ಸಾಮ್ರಾಜ್ಯವೇ, ಎಂದರೆ ಮೋಕ್ಷ-ಸರ್ವಸ್ವವೇ, ಅವತಾರಮಾಡಿರುವಂತೆ ಇರುವವನು ಅವನು.

ಮತ್ತು ಕೊನೆಯದಾಗಿ ಆತನಲ್ಲಿರುವುದು ಅವ್ಯಾಜ-ಮಾಧುರ್ಯ. ಎಷ್ಟೋ ಜನರು ಚೆನ್ನಾಗಿರುವಂತೆ ಕಾಣುವಂತಹುದು, ಅವರ ಆಹಾರ್ಯಗಳಿಂದಾಗಿ. ಹಾಗೆಂದರೆ ಅವರು ಮಾಡಿಕೊಂಡಿರುವ ಅಲಂಕಾರಗಳಿಂದಾಗಿ, ಹಾಗೂ ಪೇರಿಸಿಕೊಂಡಿರುವ ಆಭರಣಗಳಿಂದಾಗಿ. ವ್ಯಾಜವೆಂದರೆ ಇಂತಹ ಅಲಂಕರಣ-ಆಭರಣಗಳೇ. ಅ-ವ್ಯಾಜವೆಂದರೆ ಇಂತಹ ಲೇಪನ-ಭೂಷಣಗಳಿಲ್ಲದಿರುವಿಕೆ. ಆದರೂ, ಎಂದರೆ ಆ ವ್ಯಾಜಗಳೇನೊಂದೂ ಇಲ್ಲದಿದ್ದರೂ ಸಹ, ಪರಮ-ಸುಂದರನಾಗಿಯೇ ತೋರಬಲ್ಲವನೇ ಅವ್ಯಾಜ-ಮಾಧುರ್ಯವುಳ್ಳವನು. 

ಇನ್ನು ನಿಧಾನವೆಂದರೆ ಕನ್ನಡದಲ್ಲಿ ಮೆಲ್ಲನೆ ಎಂಬರ್ಥ, ಸಂಸ್ಕೃತದಲ್ಲಿ ನಿಧಿಯೆಂದರ್ಥ. ಮಹಾ-ನಿಧಾನನೆಂದರೆ ಇಲ್ಲಿ ಮಹಾ-ನಿಧಿಯೆಂದರ್ಥ. ಅವ್ಯಾಜ-ಮಾಧುರ್ಯಕ್ಕೆ ದೊಡ್ಡ ನಿಧಿಯೇ ಶ್ರೀಕೃಷ್ಣ.

ಇಂತಹ ವಿಶೇಷಗಳಿಂದ ಕೂಡಿದ ಕೃಷ್ಣನು, ಎಂದರೆ ರಸ-ಸ್ವರೂಪನೂ ಮಧುರ-ಸ್ವರೂಪನೂ ಮೋಕ್ಷ-ಸ್ವರೂಪನೂ ಆದ ವ್ರಜ-ದೈವತವು, ನಮ್ಮನ್ನು ಕಾಪಾಡಲಿ - ಎಂದು ಕೇಳಿಕೊಳ್ಳುತ್ತಿದ್ದಾನೆ, ಕವಿ. 

ಶ್ಲೋಕದ ಪಾದಾರಂಭಗಳಲ್ಲಿ ಕವಿಯು ಅನುಪ್ರಾಸವನ್ನು ತಂದಿದ್ದಾನೆ. ಮೊದಲೆರಡು ಪಾದಗಳು ನಿರ್ವಾ-ನಿರ್ವಾ - ಎಂದೇ ಆರಂಭವಾಗುತ್ತವೆ; ಕೊನೆಯೆರಡು ಪಾದಗಳು ಅವ್ಯಾ-ಅವ್ಯಾ - ಎಂದೇ ಆರಂಭವಾಗುತ್ತವೆ.

ಶ್ಲೋಕ ಹೀಗಿದೆ:

ನಿರ್ವಾಸನಂ ಹಂತ ರಸಾಂತರಾಣಾಂ/

ನಿರ್ವಾಣ-ಸಾಮ್ರಾಜ್ಯಂ ಇವಾವತೀರ್ಣಂ| 

ಅವ್ಯಾಜ-ಮಾಧುರ್ಯ-ಮಹಾನಿಧಾನಂ/ 

ಅವ್ಯಾದ್ ವ್ರಜಾನಾಂ ಅಧಿದೈವತಂ ನಃ||

***

ಬಾಲಕೃಷ್ಣನು ತನ್ನತ್ತಲೇ ಬರುತ್ತಿದ್ದಾನೆಂಬ ಕಾರಣ, ಆತನ ಬರುವಿಕೆಯನ್ನೇ ಕವಿಯು ಚಿತ್ರಿಸುತ್ತಿದ್ದಾನೆ. ಕೃಷ್ಣನು ಬರುತ್ತಿದ್ದಾನೆ - ಎಂದೇ ಹೇಳುವುದಿಲ್ಲ; ಬದಲಾಗಿ, "ನನ್ನ ಜೀವಿತವೇ ಬರುತ್ತಿದೆ" - ಎಂದು ಹೇಳುತ್ತಾನೆ! ಅಲ್ಲಿಗೆ ಕೃಷ್ಣನೆಂದರೆ ಬೇರೆ ಮತ್ತಾರಿಗೆ ಅವನೇನಾದರೂ ಆಗಿರಲಿ; ನನ್ನ ಪಾಲಿಗಂತೂ ಆತನು ಜೀವಿತವೇ ಸರಿ, ನನ್ನ ಉಸಿರೇ ಅವನು. 

ಆತನು ತನ್ನತ್ತ ಆಗಮಿಸುವಲ್ಲಿ ಮೊದಲು ತೋರುವುದೇ ಆತನ ಹೆಜ್ಜೆ. ಹೇಗಿದೆ ಅದು? 'ಬಾಲ'ವಾಗಿದೆ - ಎಂದರೆ ಎಳಸಾಗಿದೆ - ಎಂದರ್ಥ. ಯಾವುದದು? ಪಾದವೆಂಬ ಕಮಲದ ಚಿಗುರು. ಕಮಲವೇ ಕೋಮಲ; ಅದರ ಚಿಗುರೆಂದರೆ ಕೇಳಬೇಕೇ, ಅದರ ಕೋಮಲತೆಯನ್ನು?

ಬಾಲಕೃಷ್ಣನು ಬರುವಾಗ ಅದೇನು "ಡ್ರಿಲ್ ಮಾರ್ಚ್"ನಂತೆ ಇರುವುದೇ? ಅದು 'ಆತ್ತ-ಕೇಳಿ'ಯಾಗಿರುವಂತಹುದು. ಏನು ಹಾಗೆಂದರೆ? 'ಕೇಲಿ'ಯೆಂದರೆ ಆಟ. 'ಆತ್ತ'ವೆಂದರೆ ಆದಾನಮಾಡಿರುವುದು, ಸ್ವೀಕರಿಸಿರುವುದು. ಹೀಗೆ ಹೇಳಿರುವುದರಿಂದ, ಅದರ ಕ್ರೀಡಾಪರತೆಯು ಗೊತ್ತಾಗುತ್ತದೆ. ನರ್ತನ-ಗತಿಗಳೇ ಅದರೊಳಗೆ ಅಡಗಿರುವುದು - ಎಂದಂತಾಯಿತಲ್ಲವೇ?

ಆ ಹೆಜ್ಜೆಗಳ ಆ ಗತಿ-ವಿಶೇಷಕ್ಕೆ ಕಾರಣವೇನು? ಕಾರಣವೆಂದರೆ ತಾನೇ ಆಗಾಗ್ಗೆ ನುಡಿಸುವ ವೇಣುಗೀತದ ಅನುಸ್ಮರಣ. ಆ ಕೊಳಲಿನ ಗಾನವಾದರೂ ಮಂಜುಲವಾದದ್ದು, ಮನೋಹರವಾದದ್ದು. ಯಾವುದರಲ್ಲಿ ಸವಿಯುಂಟೋ, ಅದು ಮತ್ತೆ ಮತ್ತೆ ಸ್ಮೃತವಾಗುತ್ತದೆ. ಹೀಗಾಗುವ ಪುನಃಪುನಃ ಸ್ಮರಣವನ್ನೇ ಅನು-ಸ್ಮರಣವೆನ್ನುವುದು. 

ಒಳ್ಳೆಯ ಭಾವದ ಗಾನವು ಲಯಬದ್ಧವಾಗಿ ಕೇಳಿಬರುತ್ತಿದ್ದರೆ, ಕೇಳುಗರ ಮೈಮನಸ್ಸುಗಳೂ ಅದಕ್ಕೆ ಸ್ಪಂದಿಸುವವಲ್ಲವೇ? ನಡೆದು ಬರುವಾಗ ಮಧುರಗಾನವು ಮೈಯನ್ನೊಂದಿಷ್ಟಾಡಿಸಿದರೆ, ಅದರ ತಾಳವು ಚರಣಕ್ಕೆ ಹರಿದು ರಮ್ಯ-ಗತಿಯನ್ನೀಯುತ್ತದೆ.

ಆ ಗಾನದ ಸ್ಮರಣವಿರುವುದರಿಂದಲೇ ನಡೆಯಲ್ಲಿ ಒಂದು ಮಂಥರತೆಯಿರುವುದು. ಮಂಥರವಾಗಿರುವುದೆಂದರೆ ಮೆಲ್ಲಮೆಲ್ಲನೆ ಬರುತ್ತಿರುವುದು. ಎಂದೇ ಕಾಲಿಗೆ ಕಟ್ಟಿದ ಅಂದುಗೆಯ ಧ್ವನಿಯೂ ಮೃದುವಾಗಿದೆ. ಗೆಜ್ಜೆಯ ಧ್ವನಿಗೆ ಕ್ವಣನವೆನ್ನುವರು. ಹೀಗಾಗಿ ಆತನ ನೂಪುರ-ಕ್ವಣನವು ಮೃದುವಾಗಿದೆ.

ಹೀಗೆ ಈ ಬಾಲಕೃಷ್ಣನ ಕ್ರೀಡಾ-ಪರವಾದ ಆಗಮನದಲ್ಲಿ ವೇಣುಗಾನದ ಅನುಸ್ಮರಣವೆಂಬುದು ಅನುಸ್ಯೂತವಾಗಿ ಬರುತ್ತಲಿದ್ದು, ಅದು ಆತನ ನಡೆಯಲ್ಲಿ ಒಂದು ವಿಶೇಷತೆಯನ್ನು ತಂದಿದೆ. ಮಂಥರ-ಗತಿಯಿಂದಾಗಿ ಅಂದುಗೆಯ ದನಿಯೂ ಇನಿದಾಗಿದೆ. ಎಳಸಿನ ಪಾದದ ಸೊಬಗೂ ಚೇತೋಹಾರಿಯಾಗಿದೆ. ಗಾನ-ಸ್ಮರಣ-ಗರ್ಭವಾದ ನಡೆಯಲ್ಲಿ ನೃತ್ಯ-ಗಂಧವು ತೋರುತ್ತಿದೆ. ಮೆಲ್ಲನೆಯ ಸದ್ದಿನ ಗೆಜ್ಜೆಯುಳ್ಳ ಆ ಹೆಜ್ಜೆಗಳ ಆಟವೇ ನನ್ನ ಜೀವಿತ - ಎನ್ನುತ್ತಾನೆ, ಲೀಲಾಶುಕ.

ಮೃದು-ಕ್ವಣನ್ನೂಪುರ-ಮಂಥರೇಣ /

ಬಾಲೇನ ಪಾದಾಂಬುಜ-ಪಲ್ಲವೇನ |

ಅನುಸ್ಮರನ್ಮಂಜುಲ-ವೇಣು-ಗೀತಂ /

ಆಯಾತಿ ಮೇ ಜೀವಿತಂ ಆತ್ತ-ಕೇಲಿ || 

ಸೂಚನೆ : 29/11/2025 ರಂದು   ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, November 23, 2025

ಕೃಷ್ಣಕರ್ಣಾಮೃತ 83 ರಾಜಸೂಯ ಮಾಡುವ ಬಗ್ಗೆ ಶ್ರೀಕೃಷ್ಣನ ಅಭಿಪ್ರಾಯ (Krishakarnamrta 83)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ರಾಜಸೂಯಯಾಗವನ್ನು ಮಾಡಲು ಸಂಕಲ್ಪಿಸಿದ್ದ ಯುಧಿಷ್ಠಿರನು ಶ್ರೀಕೃಷ್ಣನ ಅಭಿಪ್ರಾಯ-ಮಾರ್ಗ-ದರ್ಶನಗಳನ್ನು ಪಡೆಯಬೇಕೆಂದೆಣಿಸಿ, ಅವನಲ್ಲಿಗೆ ದೂತನೊಬ್ಬನನ್ನು ಕಳುಹಿಸಿದ್ದನು. 

ದೂತನ ಮಾತನ್ನು ಕೇಳಿದ ಯಾದವವೀರನಾದ ಶ್ರೀಕೃಷ್ಣನಾದರೂ ತನ್ನ ದರ್ಶನವನ್ನು ಅಪೇಕ್ಷಿಸುತ್ತಿದ್ದ ಯುಧಿಷ್ಠಿರನನ್ನು ಕಾಣಲೆಂದು, ದೂತನಾದ ಆ ಇಂದ್ರಸೇನನೊಂದಿಗೆ ಯುಧಿಷ್ಠಿರನಿದ್ದ ಇಂದ್ರಪ್ರಸ್ಥಕ್ಕೇ ಸಾಗಿದನು.

ಆಗಮಿಸಿದ ಶ್ರೀಕೃಷ್ಣನನ್ನು ಯುಧಿಷ್ಠಿರನೂ ಭೀಮನೂ ಅರ್ಚಿಸಿದರು. ಆಮೇಲೆ ಕೃಷ್ಣನು ಕುಂತಿಯನ್ನು ಹೋಗಿಕಂಡನು. ಹಾಗೆಯೇ ಅರ್ಜುನ ಮತ್ತು ನಕುಲ-ಸಹದೇವರೂ ಕೃಷ್ಣನನ್ನು ಗುರುವೆಂಬಂತೆ ಸತ್ಕರಿಸಿದರು. 

ಕೃಷ್ಣನು ವಿಶ್ರಾಂತಿಯನ್ನು ತೆಗೆದುಕೊಂಡ ಬಳಿಕ ಧರ್ಮರಾಜನು ಆಗಮಿಸಿ, ತಾನು ಆತನನ್ನು ಬರಮಾಡಿಕೊಂಡುದರ ಉದ್ದೇಶವನ್ನು ಹೀಗೆಂದು ಹೇಳಿದನು.

"ಕೃಷ್ಣಾ, ನನಗೆ ರಾಜಸೂಯಯಾಗವನ್ನು ಮಾಡುವ ಮನಸ್ಸಾಗಿದೆ. ಆದರೆ ಇದು ಕೇವಲ ಅಪೇಕ್ಷೆಯಿಂದಲೇ ನೆರವೇರಿಬಿಡುವುದಲ್ಲ, ಯಾವ ಬಗೆಯಿಂದ ಮಾಡಿದರೆ ಅದು ಪೂರ್ಣವಾಗುವುದು - ಎಂಬುದನ್ನು ನೀನು ತಾನೆ ಸರ್ವಥಾ ಬಲ್ಲೆ?

ಯಾವನು ಎಲ್ಲವನ್ನೂ ಮಾಡಬಲ್ಲನೋ, ಯಾವನು ಎಲ್ಲೆಡೆ ಪೂಜಿತನಾಗುವನೋ, ಯಾವನು ಎಲ್ಲರಿಗೂ ಪ್ರಭುವಾಗಬಲ್ಲನೋ, ಅಂತಹವನು ತಾನೆ ರಾಜಸೂಯವನ್ನು ಸಂಪಾದಿಸಲು ಸಮರ್ಥನೆನಿಸುವುದು? ನನ್ನ ಮಿತ್ರ ರೆಲ್ಲರೂ ಬಂದು ರಾಜಸೂಯವನ್ನು ನೀನು ಮಾಡಬೇಕೆಂದು ನನಗೆ ಹೇಳುತ್ತಿದ್ದಾರೆ. ಆದರೆ ಇದರ ಅಂತಿಮ ನಿಶ್ಚಯವೆಂಬುದು ನಿನ್ನ ಮಾತಿನಿಂದಲೇ ಆಗತಕ್ಕದ್ದು.

ಸ್ನೇಹಿತರಲ್ಲಿ ಕೆಲವರು ಕೇವಲ ಸೌಹಾರ್ದಭಾವದಿಂದಷ್ಟೇ ನನ್ನ ದೋಷಗಳನ್ನು ಹೇಳುವುದಿಲ್ಲ; ಮತ್ತೆ ಕೆಲವರು ಸ್ವಾರ್ಥ-ಬುದ್ಧಿಯಿಂದಾಗಿ ಪ್ರಿಯವಾದುದಷ್ಟನ್ನೇ ಹೇಳುವರು; ಮತ್ತೆ ಕೆಲವರು ತಮಗೆ ಯಾವುದು ಪ್ರಿಯವೋ ಅದಷ್ಟನ್ನೇ ನನಗೆ ಪ್ರಿಯವೂ ಹಿತವೂ ಹೌದೆಂದು ಹೇಳಿಬಿಡುವರು. ಹೀಗೆ ಈ ನಾನಾಪರಿಗಳಲ್ಲಿ ಜನಗಳ ಮಾತುಗಳು ತೋರುತ್ತವೆ.

ಆದರೆ ನೀನು ಹಾಗಲ್ಲ. ನಾನೀಗ ಹೇಳಿದ ಕಾರಣಗಳನ್ನೆಲ್ಲಾ ಬದಿಗಿಟ್ಟು, ಕಾಮಕ್ರೋಧಗಳನ್ನು ತೊಡೆದು, ಏನನ್ನು ಮಾಡಿದರೆ ನನಗೆ ಬಹಳವೇ ಒಳ್ಳೆಯದಾಗುವುದೋ ಅದನ್ನು ಹೇಳಬಲ್ಲೆ. ಆದ್ದರಿಂದ ಅದನ್ನು ಹೇಳುವ ಕೃಪೆ ಮಾಡು" ಎಂದನು.

ಅದಕ್ಕೆ ಶ್ರೀಕೃಷ್ಣನು ಹೇಳಿದನು: 

"ಮಹಾರಾಜನೇ, ಸರ್ವಗುಣಗಳಿಂದಲೂ ಈ ರಾಜಸೂಯವನ್ನು ನೆರವೇರಿಸಲು ನೀನು ಅರ್ಹನಾಗಿದ್ದೀಯೆ. ಎಲ್ಲವನ್ನೂ ನೀನು ಬಲ್ಲವನೇ ಆಗಿದ್ದೀಯೆ ಕೂಡ. ಆದರೂ ನೀನು ಕೇಳಿದೆಯೆಂದು ಒಂದಿಷ್ಟು ತಿಳಿಸುತ್ತೇನೆ. 

ಜಾಮದಗ್ನ್ಯರಾಮನು - ಎಂದರೆ ಜಮದಗ್ನಿ-ಮುನಿಯ ಪುತ್ರನಾದ ಪರಶುರಾಮನು ಕ್ಷತ್ರಿಯ-ಸಂಹಾರವನ್ನು ಮಾಡಿದನಷ್ಟೆ. ಅದೆಲ್ಲಾ ನಡೆದು ಹೋಗಿ ಈಗಿರುವ ಕ್ಷತ್ರಿಯರೆಂದರೆ ಅಳಿದುಳಿದ ಕೆಲವರಷ್ಟೆ. ಆಗಿದ್ದ ಕ್ಷತ್ರಿಯರಷ್ಟು ಉತ್ತಮರೂ ಅಲ್ಲ, ಇವರುಗಳು. 

ರಾಜನೇ, ಇಲ್ಲೊಂದು ಕುಲ-ಸಂಕಲ್ಪವಿದೆ. ಹಾಗೆಂದರೆ ಕ್ಷತ್ರಿಯ-ಕುಲದವರೆಲ್ಲ ತಮ್ಮಲ್ಲೇ ಮಾಡಿಕೊಂಡಿರುವ ಒಂದು ಸಾಮೂಹಿಕ-ನಿಯಮವುಂಟು. ಯಾವನು ಸರ್ವ-ಕ್ಷತ್ರಿಯರನ್ನೂ ಮೀರಿಸುವನೋ ಆತನೇ ಸಮ್ರಾಟ್ ಎನಿಸುವುದು. ಅದು ನಿನಗೂ ತಿಳಿದಿರುವುದೇ. 

ಈಗಿರುವ ರಾಜರುಗಳೆಲ್ಲ ತಾವು ಐಲ (ಎಂದರೆ ಪುರೂರವ)-ವಂಶ ಹಾಗೂ ಇಕ್ಷ್ವಾಕು-ವಂಶಗಳಿಗೆ ಸೇರಿದವರೆಂದೇ ಹೇಳಿಕೊಳ್ಳುತ್ತಾರೆ. ಆ ತೆರನಾದ ನೂರು ಕುಲಗಳು ಈಗ ಉಳಿದಿವೆ. 

ಯಯಾತಿ ಹಾಗೂ ಭೋಜ - ಈ ಮಹಾರಾಜರ ಗುಣಗಾನವೇ ಎಲ್ಲೆಡೆ ನಡೆದಿದೆ. ಭೋಜವಂಶವು ನಾಲ್ಕೂದಿಕ್ಕುಗಳಲ್ಲೂ ಪಸರಿಸಿದೆ. ಆ ವಂಶವೇ ಧನಸಂಪನ್ನವಾಗಿರುವುದು. ಎಂದೇ ಇವರೆಲ್ಲರೂ ಆ ವಂಶವನ್ನೇ ಆಶ್ರಯಿಸಿದ್ದಾರೆ.

ಸೂಚನೆ : 23/11/2025 ರಂದು   ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 40 (Prasnottara Ratnamalike 40)


ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಾಣ ಹೋದರೂ ಯಾರ ಮನಸ್ಸನ್ನು ಗೆಲ್ಲಲು ಅಸಾಧ್ಯ? 

 ಮೂರ್ಖರ, ಸಂಶಯಗ್ರಸ್ತರ, ದುಃಖಿತರ ಮತ್ತು ಕೃತಘ್ನರ . 

ಈ ಪ್ರಶ್ನೋತ್ತರದಲ್ಲಿ ಯಾವ ಬಗೆಯ ವ್ಯಕ್ತಿಯ ಮನಸ್ಸನ್ನು ಪರಿವರ್ತಿಸಲು ಅಸಾಧ್ಯ ಎಂಬುದನ್ನು ಹೇಳಲಾಗಿದೆ. ಅಂದರೆ ಎಷ್ಟೇ ಪ್ರಯತ್ನಪಟ್ಟರು ಈ ಸ್ವಭಾವಕ್ಕೆ ಸೇರಿದ ವ್ಯಕ್ತಿಯನ್ನು ಬದಲಿಸಲು ಸಾಧ್ಯವಾಗದು ಎಂದರ್ಥ. ಅವರಿಗೆ ಯಾವ ಉಪಾಯಗಳನ್ನು ಅಥವಾ ಉಪದೇಶಗಳನ್ನು ಬಳಸಿದರೂ ಎಲ್ಲವೂ ನಿರರ್ಥಕವಾದವುಗಳೇ ಆಗುತ್ತವೆ. ಒಬ್ಬ ವ್ಯಕ್ತಿಯನ್ನು 'ಸರಿಪಡಿಸಬೇಕು' ಎಂಬುದಾಗಿ ನಾವು ಅಂದುಕೊಳ್ಳುತ್ತೇವೆ. ಅದಕ್ಕಾಗಿ ಅನೇಕ ಪ್ರಯತ್ನಗಳನ್ನು ಕೂಡ ಮಾಡುತ್ತೇವೆ. ಆದರೆ ಆ ಎಲ್ಲ ಪ್ರಯತ್ನಗಳು ಇಲ್ಲಿ ಹೇಳುವ ವ್ಯಕ್ತಿಗಳ ಮೇಲೆ ಮಾಡಲ್ಪಟ್ಟಾಗ ವಿಫಲವಾಗುತ್ತವೆ. ಇದಕ್ಕೆ ಕಾರಣಗಳನ್ನು ಇಲ್ಲಿ ಹೇಳಲಾಗಿದೆ. ಮೂರ್ಖತನ, ಸಂಶಯ, ದುಃಖ ಮತ್ತು ಕೃತಘ್ನತೆ ಎಂಬ ಅವಗುಣಗಳು ಮನಸ್ಸನ್ನು ಕಲುಷಿತಗೊಳಿಸಿರುತ್ತವೆ. ಯಾವುದೇ ಉಪದೇಶಗಳೂ ಕೂಡ ಸಾರ್ಥಕವಾಗಬೇಕಾದರೆ ಮನಸ್ಸು ಹದವಾಗಿದ್ದರೆ ಮಾತ್ರ. ಈ ಸಂದರ್ಭಗಳಲ್ಲಿ ಮನುಷ್ಯನ ಮನಸ್ಸು ಮದಗೊಂಡಿರುತ್ತದೆ. ಅದನ್ನು ಮುದಗೊಳಿಸವುದು ಕಷ್ಟಸಾಧ್ಯ ಎಂಬುದಾಗಿ ಈ ಪ್ರಶ್ನೋತ್ತರ ಹೇಳುತ್ತಿದೆ.

ಮೊದಲ ಬಗೆಯ ವ್ಯಕ್ತಿ ಮೂರ್ಖ. ಮೂರ್ಖರನ್ನು ಯಾವಕಾರಣಕ್ಕೂ ಬದಲಿಸಲು ಸಾಧ್ಯವಿಲ್ಲ ಎಂಬುದಕ್ಕೆ ಒಂದು ಸುಭಾಷಿತ ಹೀಗೆ ಹೇಳಿದೆ - "ನ ತು ಪ್ರತಿನಿವಿಷ್ಟಮೂರ್ಖಜನಚಿತ್ತಮಾರಧಯೇತ್" ಎಂದು. ಅಂದರೆ ಮರಳುಗಳನ್ನು ಕಡೆದು ಅಲ್ಲಿ ಎಣ್ಣೆಯನ್ನೂ ಪಡೆಯಲು ಸಾಧ್ಯವಾದೀತು. ಮೃಗ ಮರೀಚಿಕೆಯಲ್ಲಿರುವ ನೀರನ್ನು ಕುಡಿಯಲಾದೀತು. ಮೊಲಕ್ಕೆ ಇರುವ ಕೋಡನ್ನು ಗುರುತಿಸಲಾದೀತು. ಆದರೆ ಮೂರ್ಖ ಜನರ ಮನಸ್ಸನ್ನು ಮಾತ್ರ ಎಂದೂ ಕೂಡ ಪರಿವರ್ತಿಸಲು ಸಾಧ್ಯವಿಲ್ಲ ಎಂಬುದಾಗಿ. ಈ ಸುಭಾಷಿತದಲ್ಲಿ ಹೇಳಿರುವ, ಮರಳುಗಳಿಂದ ಎಣ್ಣೆಯನ್ನು, ಮೃಗಮರೀಚಿಕೆಯಲ್ಲಿ ನೀರನ್ನು, ಮೊಲದಲ್ಲಿ ಕೋಡನ್ನು ಯಾವುದೆ ಕಾರಣಕ್ಕೂ ಕಂಡುಹಿಡಿಯಲು ಸಾಧ್ಯವೇ ಇಲ್ಲ. ಅಸಾಧ್ಯವನ್ನೂ ಒಂದುಪಕ್ಷ ಇಲ್ಲಿ ಸಾಧಿಸಬಹುದೇನೋ! ಆದರೆ ಮೂರ್ಖರ ಮನಃಪರಿವರ್ತನೆಯನ್ನು ಮಾತ್ರ ಯಾವುದೇ ಕಾರಣಕ್ಕೂ ಮಾಡಲು ಸಾಧ್ಯವಿಲ್ಲ; ಬ್ರಹ್ಮನೇ ಬಂದರೂ ಸಾಧ್ಯವಿಲ್ಲ ಎಂಬ ನಿರ್ಣಯವನ್ನು ಈ ಸುಭಾಷಿತ ಕೊಡುತ್ತಿದೆ. 

ಅಂತೆಯೇ ಸಂಶಯದಿಂದ ಕೂಡಿದ ವ್ಯಕ್ತಿ. ಇವನನ್ನೂ ಪರಿವರ್ತಿಸಲು ಸಾಧ್ಯವಿಲ್ಲ. ಗೀತೆಯು ಅಪ್ಪಣೆ ಕೊಡಿಸಿದಂತೆ "ಅಜ್ಞಾನದಿಂದ ಕೂಡಿದವನು, ಶ್ರದ್ಧೆ ಇಲ್ಲದವನು ಮತ್ತು ಸಂಶಯದಿಂದ ಕೂಡಿದವನು ಈ ಮೂವರೂ ಪತಿತರೇ ಆಗುತ್ತಾರೆ", ಅವರು ಉದ್ಧಾರವಾಗಲು ಸಾಧ್ಯವಿಲ್ಲ ಎಂಬುದಾಗಿ.  

ಅಂತಯೇ ಇನ್ನೊಂದು ಬಗೆಯ ಜನರು ದುಃಖಿತರು. ಇವರು ಜೀವನದಲ್ಲಿ ಬಹಳ ಕಷ್ಟವನ್ನು ಅನುಭವಿಸಿರುತ್ತಾರೆ. ಆಗ ಇವರ ಮನಸ್ಸು ಬೇರೆಯವರು ಹೇಳಿದ್ದನ್ನು ಕೇಳುವ ಸಹನೆ ಇರುವುದಿಲ್ಲ. ಅಂದರೆ ಯಾರು, ಎಷ್ಟೇ, ಸಲ್ಲುವ ಮಾತುಗಳನ್ನು ಆಡಿದರೂ ಅದನ್ನು ಅವರು, 'ಇವೆಲ್ಲವೂ ದುಃಖಕ್ಕೆ ಕಾರಣ ಏಕೆ ಕಾರಣವಾಗಬಾರದು' ಎಂದೇ ಭಾವಿಸುತ್ತಾರೆ. ಹಾಗಾಗಿ ದುಃಖಿತರನ್ನು ಬೇಗ ಪರಿವರ್ತಿಸುವುದು ಅಸಾಧ್ಯ. 

ಅಂತಯೇ ಇನ್ನೊಬ್ಬ ವ್ಯಕ್ತಿ ಅಂದರೆ ಕೃತಘ್ನ. ಉಪಕಾರ ಮಾಡಿದವರನ್ನು ಸ್ಮರಿಸದ ಅಥವಾ ಅವರಿಗೆ ಅಪಕಾರ ಮಾಡುವವನೇ ಕೃತಘ್ನ. ಉಪಕಾರ ಮಾಡಿರುವ ಬಗ್ಗೆ ಯಾರಿಗೆ ಕಿಂಚಿತ್ತು ಆದರದ ಭಾವನೆ ಅಥವಾ ಮಾಡಿರುವ ಉಪಕಾರವನ್ನು ಸ್ಮರಿಸಿಕೊಳ್ಳುವುದು ಇರಲಿ, ಅದಕ್ಕೆ ಪ್ರತಿಯಾಗಿ ಅಪಕಾರವನ್ನು ಮಾಡುವ ರೀತಿಯಲ್ಲಿ ಆ ವ್ಯಕ್ತಿಯ ಸ್ವಭಾವವಿದ್ದರೆ ಅಂತಹ ಜನರನ್ನು ಪರಿವರ್ತಿಸುವುದು ಅಸಾಧ್ಯ ಎಂಬುದಾಗಿ ಇಲ್ಲಿ ಹೇಳಲಾಗಿದೆ. ಅಂದರೆ ಮೂರ್ಖರನ್ನು, ಸಂಶಯಗ್ರಸ್ತರನ್ನು, ದುಃಖಿತರನ್ನು ಮತ್ತು ಕೃತಘ್ನನನ್ನು ಹೀಗೆ ಈ ಬಗೆಯ ನಾಲ್ಕು ವ್ಯಕ್ತಿಗಳನ್ನು ಯಾವುದೇ ಬಗೆಯ ಉಪಾಯಗಳಿಂದಲೂ ಪರಿವರ್ತಿಸಲು ಅಥವಾ ಅವನನ್ನು ಸಜ್ಜನರನ್ನಾಗಿ ಮಾಡಲು ಕಷ್ಟಸಾಧ್ಯ ಅಥವಾ ಅಸಾಧ್ಯ ಎಂಬ ಆಶಯ ಈ ಪ್ರಶ್ನೋತ್ತರದಲ್ಲಿದೆ.

ಸೂಚನೆ : 23/11/2025 ರಂದು   ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ 83 ಹುಲಿಯುಗುರಿನ ಭೂಷಣದ ಬಾಲಕನಿಗೆ ನಮಸ್ಕಾರ (Krishakarnamrta 83)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



"ನಮಸ್ತೇ" ಎಂದರೆ "ನಿನಗೆ ನಮಸ್ಕಾರ" ಎಂದರ್ಥ. ಈ ಮಾತನ್ನು ಲೀಲಾಶುಕನು ಕೃಷ್ಣನನ್ನು ಕುರಿತು ಹೇಳುತ್ತಿದ್ದಾನೆ.

ಹೇಗಿರುವ ಇಲ್ಲಿ ಹೇಳಿರುವ ಕೃಷ್ಣ? ಈತನಿನ್ನೂ ಚಿಕ್ಕವಯಸ್ಸಿನವ, ಬಾಲ. ಆತನನ್ನು ಕಂಡೊಡನೆ ಗೋಚರವಾಗಿರುವುದು ಆತನ ಮೈಬಣ್ಣ. ಅದನ್ನೇ ನೀಲವಪುವೆಂದಿರುವುದು. ಕೃಷ್ಣನನ್ನು ನೀಲಮೇಘಶ್ಯಾಮ - ಎನ್ನುವರಲ್ಲ, ಅದೇ ಈ ಬಾಲನ ಶರೀರದ ವರ್ಣ.

ಈ ಎಳೇ ಹುಡುಗನು ವಸ್ತ್ರವನ್ನೇ ಧರಿಸಿಲ್ಲ. ಎಂದೇ ಆತನನ್ನು ದಿಗಂಬರನೆಂದಿರುವುದು. ಏನು ದಿಗಂಬರನೆಂದರೆ? ಯಾರಿಗೆ ದಿಕ್ಕೇ, ಎಂದರೆ ದಿಕ್ಕುಗಳೇ , ಅಂಬರವೋ ಅವನು. ಅಂಬರವೆಂದರೆ ವಸ್ತ್ರ. ಹಳದಿಬಟ್ಟೆ-ನೀಲವಸ್ತ್ರಗಳಿಗೆ ಪೀತಾಂಬರ-ನೀಲಾಂಬರ - ಎಂದು ಹೇಳುವುದಿಲ್ಲವೇ? ದಿಕ್ಕುಗಳನ್ನು ಬಿಟ್ಟರೆ ಬೇರೆ ವಸ್ತ್ರವೇ ಇಲ್ಲ. ಬರಿಮೈಯವ ಎಂಬುದೇ ತಾತ್ಪರ್ಯ.

ಮೈಮೇಲೆ ಬಟ್ಟೆಯಿಲ್ಲದಿದ್ದರೂ ಆಭರಣಗಳಿವೆ. ಅವನ್ನಂತೂ ಯಾವಾಗಲೂ ಹಾಕಿಕೊಂಡಿರುವುದೇ. ಎರಡು ಆಭರಣಗಳು ತೆಗೆದಿಡದವು: ಕತ್ತಿನಲ್ಲೊಂದು, ಸೊಂಟದಲ್ಲೊಂದು.

ಕತ್ತಿಗೆ ಹಾಕಿಕೊಳ್ಳುವ ಸರದ ಪದಕದ ಎಡೆಯಲ್ಲಿ ಬರುವಂತೆ ಹುಲಿಯುಗುರನ್ನು ಕಟ್ಟುವ ಪದ್ಧತಿಯು ಈಚಿನವರೆವಿಗೂ ಇದ್ದಿತು. ಈಗಲೂ ಹಳ್ಳಿಗಳ ಕಡೆ ಉಳಿದಿರಬಹುದು. ಅದನ್ನು ವ್ಯಾಘ್ರ-ನಖವೆಂದೋ ಶಾರ್ದೂಲ-ನಖವೆಂದೋ ಹೇಳುವುದುಂಟು. ಆ ಆಭರಣದಿಂದ ಭೂಷಿತನಾಗಿದ್ದಾನೆ, ಈ ಪುಟ್ಟಕೃಷ್ಣ.

ಕೆಲವು ಆಸುರಶಕ್ತಿಗಳ ಪ್ರಭಾವವನ್ನು ಅದು ತಡೆಗಟ್ಟುವುದರಿಂದ ಅದನ್ನು ದಿವ್ಯ-ನಖವೆಂದು ಹೇಳುವುದೂ ಉಂಟು. ಇದು ಕಂಠಾಭರಣವಾಯಿತು.

ಇನ್ನು ಸೊಂಟದ ಆಭರಣ. ಅಲ್ಲಿ ಕಟ್ಟಿರುವುದು ಕಿಂಕಿಣಿಗಳಿಂದಾದ ಮಾಲೆ. ಕಿಂಕಿಣಿಯೆಂದರೆ ಕಿರುಗಂಟೆ. ಕಿಂಕಿಣೀ-ಜಾಲ ಅಥವಾ ಕಿಂಕಿಣೀಕ-ಜಾಲವೆಂದರೆ ಪುಟ್ಟ ಪುಟ್ಟ ಗಂಟೆಗಳಿಂದಾದ, ಜಘನವನ್ನು ಬಳಸುವ, ಉಡುದಾರ. ಜಘನವೆಂದರೆ ಸೊಂಟವೇ. ಅದು ಈ ಪುಟ್ಟ ಗಂಟೆಗಳ ಜಾಲ ಅಥವಾ ಸರಪಳಿಯಿಂದಾಗಿ ಅಭಿರಾಮವಾಗಿದೆ. ಅರ್ಥಾತ್ ಆ ಪುಟ್ಟ ಮಗುವಿನ ಸೊಂಟದಲ್ಲಿ ಈ ಸಣ್ಣಸಣ್ಣಗಂಟೆಗಳ ಪೋಣಿಕೆಯಿದೆ. ಅಭಿರಾಮವಾಗಿದೆಯೆಂದರೆ ಸುಂದರವಾಗಿದೆಯೆಂದರ್ಥ. ಕಿರುಗಂಟೆಗಳ ಉಡುದಾರ ಹೊಸದು. ಎಂದೇ ಎದ್ದುಕಾಣುವಂತಹುದು.

ಈ ಕಿರಿಯನ ಮೈಯಲ್ಲಿ ಎದ್ದುತೋರುವ ಮತ್ತೂ ಒಂದು ಲಕ್ಷಣವನ್ನು ಹೇಳಬಹುದು. ಅತನ ಕೈಮೇಲೋ ಬಾಯಮೇಲೋ ಇರುವ ಗುರುತುಗಳಿಂದ: ಆತನು ನವನೀತವನ್ನು ಕದ್ದಿರುವುದು ಸುಲಭಗೋಚರ. ಕೈ-ಬಾಯಿಗಳ ಮೇಲಿನ ಚಿಹ್ನಗಳು ಇದಕ್ಕೆ ಸೂಚಕ.

ಹೀಗಿರುವ ಈ ಬಾಲ ನಂದಾತ್ಮಜ. ಆತ್ಮಜನೆಂದರೆ ಮಗ. ಹೀಗಾಗಿ ನಂದಪುತ್ರ ಈತ. ಇಂತಹ ನಂದಪುತ್ರನಾದ ಈ ಕುಮಾರನಿಗೆ ನಮಸ್ಕಾರವನ್ನು ಹೇಳಿದೆ.

ಗೊಲ್ಲರ ಬಾಲನಾದರೂ ಈತ ಭಗವಂತನೇ - ಎಂಬ ಲೆಕ್ಕವಿರುವುದರಿಂದ ನಮಸ್ಕಾರವನ್ನು ಹೇಳಿದೆ.

ಶ್ಲೋಕದಲ್ಲಿ ನಾಲ್ಕೆಡೆಗಳಲ್ಲಿ 'ಲ'ಕಾರದ ಪ್ರಯೋಗವಿದೆ: ಬಾಲ-ನೀಲ-ಜಾಲ-ಶಾರ್ದೂಲಗಳಲ್ಲಿ. ಹಾಗೆಯೇ ಭೂಷಣ-ಭೂಷಿತಗಳಲ್ಲಿಯ ಅನುಪ್ರಾಸಗಳು; ನೀಲವಪುಷೇ-ನವನೀತಮುಷೇ ಎಂಬಲ್ಲಿ ಅಂತ್ಯಾಕ್ಷರದ್ವಯದಲ್ಲಿಯ ಅನುಪ್ರಾಸ - ಇವುಗಳನ್ನೂ ಗಮನಿಸಬಹುದು. ಕೊನೆಯ ಪಾದದಲ್ಲಿ ನಂದಾತ್ಮಜಾಯ ನವನೀತಮುಷೇ - ಎನ್ನುವಾಗ ನಕಾರತ್ರಯವು ಬಂದಿದೆ; ಪ್ರಥಮಪಾದದಲ್ಲೂ ನಕಾರದ್ವಯವಿದೆ.

ಶ್ಲೋಕ ಹೀಗಿದೆ:

ಬಾಲಾಯ ನೀಲ-ವಪುಷೇ ನವ-ಕಿಂಕಿಣೀಕ-

-ಜಾಲಾಭಿರಾಮ-ಜಘನಾಯ ದಿಗಂಬರಾಯ |

ಶಾರ್ದೂಲ-ದಿವ್ಯನಖ-ಭೂಷಣ-ಭೂಷಿತಾಯ

ನಂದಾತ್ಮಜಾಯ ನವನೀತ-ಮುಷೇ ನಮಸ್ತೇ ||

***

ಅದೆಂದು ನಾ ಕಾಣುವೆ ಶ್ರೀಕೃಷ್ಣನನ್ನು? - ಎಂಬುದಾಗಿ ಕೇಳಿಕೊಳ್ಳುತ್ತಿದ್ದಾನೆ, ಕವಿ ಲೀಲಾಶುಕ. "ಕೃಷ್ಣನನ್ನು" ಎಂದು ಬಾಯಿಬಿಟ್ಟೇನೂ ಹೇಳುವುದಿಲ್ಲ. ಬದಲಾಗಿ "ಕಮಪಿ ಬಾಲಂ" ಎನ್ನುತ್ತಾನೆ. ಹಾಗೆಂದರೆ "ವಾಚಾಮಗೋಚರನಾದ ಬಾಲಕನನ್ನು" ಎಂದೇ ಅರ್ಥ. ಯಾವುದು ಮಾತಿಗೆಟುಕದೋ ಅದುವೇ ವಾಚಾಮಗೋಚರ, ಹೀಗೆಂದು ಹೇಳಲಾಗದುದು. ಹಾಗೆಂದು ಹೇಳಿಯೂ ಕೆಲವು ಲಕ್ಷಣಗಳನ್ನಾದರೂ ಹೇಳಬೇಕೆನ್ನುವ ಚಪಲ, ಕವಿಗೆ. ಯಾವುವವು?

ಈ ಬಾಲನು ಕಮಲೇಕ್ಷಣ. ಹಾಗೆಂದರೆ ಪದ್ಮವನ್ನು ಹೋಲುವ ಲೋಚನಗಳನ್ನುಳ್ಳವನು - ಎಂದರ್ಥ. ಏಕೆಂದರೆ ಈಕ್ಷಣವೆಂದರೆ ಕಣ್ಣು.

ಆತನ ಕಣ್ಣುಗಳನ್ನಷ್ಟೇ ಹೇಳಿದರೆ ಸಾಲದು. ಆತನ ಮುದ್ದುಮುಖದ ಬಗ್ಗೆಯೂ ಒಂದೆರಡು ಮಾತುಗಳನ್ನು ಹೇಳಬೇಕು. ಅತನ ಮುಖವು ಅಭಿರಾಮವಾಗಿ, ಎಂದರೆ ಆಕರ್ಷಕವಾಗಿ, ಕಾಣಲು ಕಾರಣವೇ ಆತನ ಸ್ಮಿತ. ಸ್ಮಿತವೆಂದರೆ ಮುಗುಳ್ನಗೆ. ಅದು ಹೇಗಿದೆ? ಅದು ಉದಾರವೂ ಮೃದುಲವೂ ಆಗಿದೆ.

ಕೆಲ ಮಕ್ಕಳಿಗೆ ಸದಾ ಅಳುಮುಖವೋ ಸಪ್ಪೆಮುಖವೋ ಇರುತ್ತದೆ; ಮುಗುಳ್ನಗೆಯು ಮೂಡುವುದೂ ಅಪರೂಪಕ್ಕೇ; ಕೋಪ-ದುಃಖಗಳು ಕ್ಷಣಮಾತ್ರದಲ್ಲಿ ತೋರಿಸಿಕೊಂಡುಬಿಡುತ್ತವೆ.

ಆದರೆ ಕೃಷ್ಣನ ವಿಷಯದಲ್ಲಿ, ಆತನ ಬಾಲ್ಯದಲ್ಲೂ, ಹಾಗಿಲ್ಲ. ನಗೆಯುಕ್ಕಲು ನೆಪವೇ ಸಾಕು. ಮತ್ತು ಆ ನಗುವೂ ಮೆದುವಾದ ನಗು. ಇದನ್ನು ಮೃದುಲ-ಸ್ಮಿತವೆನ್ನುವರು. ಎಳೆಮಕ್ಕಳು ದೊಡ್ಡವರು ನಗುವಂತೆ ಗಹಗಹಿಸಿ ನಕ್ಕರೆ ಅದೇನು ಚೆಂದ?

ಹೀಗೆ ಉದಾರವೂ ಮೃದುಲವೂ ಆದ ಸ್ಮಿತವು ಕೃಷ್ಣನ ಮೊಗದಲ್ಲಿ ಎದ್ದು ಕಾಣುತ್ತದೆ. ಮತ್ತು ಅಂತಹ ಸ್ಮಿತವಾದರೂ ಆಗಾಗ್ಗೆ ಬರುತ್ತಿರುವುದರಿಂದಲೇ ಆತನ ಆನನವು ಅಭಿರಾಮವಾಗಿದೆ.

ಕಣ್ಣಿನ ವರ್ಣನೆಯಾಯಿತು, ಮುಖದ ಚಿತ್ರಣವಾಯಿತು. ಇನ್ನೆರಡು ವಿಷಯಗಳನ್ನು ಹೇಳಬೇಕು. ಮುನಿಗಳು ಆತನನ್ನು ಹೇಗೆ ಭಾವಿಸಿದರು? ಮತ್ತು ಗೋಪಾಂಗನೆಯರು ಹೇಗೆ? - ಎಂಬೀ ವಿಷಯಗಳು.

ಮುನಿಗಳ ಮನಸ್ಸೂ ಒಂದು ಕಮಲದಂತೆ. ತಮ್ಮ ಈ ಮನೋಂಬುಜದಲ್ಲಿ ಆತನನ್ನು ಪುನಃ ಪುನಃ ಅವರು ಭಾವಿಸುತ್ತಾರೆ. ಆರಂಭಾವಸ್ಥೆಯಲ್ಲಿರುವವರಿಗೆ ಧ್ಯಾನವೆಂಬುದು ಬಲು ಕಷ್ಟ; ಆದರೆ ಮುನಿಗಳು ಪದೇ ಪದೇ ಕೃಷ್ಣನನ್ನು ಭಾವಿಸಿಕೊಳ್ಳುತ್ತಾರೆ. ಅದೂ ಸಂತೋಷದಿಂದ ಅವರಿಗಾಗುವುದು. ಆ ಸಂತೋಷವಾದರೂ ಮತ್ತೆ ಮತ್ತೆ ಉಕ್ಕುವಂತಹುದು. ಹೀಗೆ ಪರಮ-ಸಂತೋಷದಲ್ಲಿರುತ್ತಾ ಆತನನ್ನವರು ಪರಿಭಾವಿಸುವರು.

ಇನ್ನುಳಿದಿರುವುದು ಗೋಪಿಕೆಯರು ಆತನನ್ನು ಭಾವಿಸಿದ ಪರಿಯೇನೆಂಬುದು. ಅವರು ತಮ್ಮ ಮುಖದಿಂದ ಕೃಷ್ಣನನ್ನೇ ಆಸ್ವಾದಿಸುವರು. ಹಾಗೆ ಮುಖದಿಂದ ಆಸ್ವಾದಿಸುವುದೆಂದರೆ ಮುತ್ತುಕೊಡುವುದೆಂದೇ ಅರ್ಥ. ಹೀಗೆ ವ್ರಜ-ವಧುಗಳು ತಮ್ಮ ಮುಖದಿಂದ ಕೃಷ್ಣನನ್ನು ಆಸ್ವಾದಿಸಿರುವರು.

ಈ ಸಂದರ್ಭದಲ್ಲಿ ಆ ಗೋಪಾಂಗನೆಯರ ಕಣ್ಣುಗಳು ಎಂತಿದ್ದವೆಂದೂ ಕವಿಯು ಹೇಳುತ್ತಾನೆ. ಅವುಗಳು "ಮದಾಲಸವಾಗಿದ್ದವು".  ಏನು  ಹಾಗೆಂದರೆ? ಮದ್ಯಪಾನ ಮಾಡಿದವರ ಕಣ್ಣುಗಳು ಮದದಿಂದ ಅಲಸವಾಗಿರುತ್ತದೆ. ಪ್ರಕೃತ, ಕೃಷ್ಣನ ಬಳಿ ಬಂದವರಿಗೆ ಮದ್ಯಪಾನದ ಆವಶ್ಯಕತೆಯೇನಿರಲಿಲ್ಲ. ಆದರೂ ಅವರುಗಳು "ಮದಾಲಸ-ವಿಲೋಚನ"ರಾಗಿದ್ದರು, ಎಂದಿದೆ. ಅಂತರಂಗದಲ್ಲಿ ಯಾರಿಗೆ  ಪರಮ-ಸಾತ್ತ್ವಿಕ-ಸಂತೋಷವುಂಟೋ, ಅಂತಹವರೇ ಈ ಬಗೆಯಲ್ಲಿ ಮದಾಲಸ-ನೇತ್ರರಾಗುವರು. ಹೀಗೆ ತಮ್ಮ ಒಳಸುಖದ ಪ್ರತೀಕವಾಗಿ ಅವರ ಕಣ್ಣುಗಳಲ್ಲಿ ಮದಾಲಸತೆಯು ಕಂಡಿದೆ.

ಹಾಗೆ ನೋಡಿದರೆ ಗೋಪಿಕೆಯರ ಮಹಾಭಾಗ್ಯವೇ ಇದೆಂದು ಹೇಳಬೇಕಾಗುತ್ತದೆ. ಯಾವುದನ್ನು ಮುನಿಗಳು ಕಷ್ಟಪಟ್ಟು ಮತ್ತೆ ಮತ್ತೆ ಪಡೆಯುವರೋ ಅದನ್ನೇ ಇವರು ಅನಾಯಾಸವಾಗಿ ಸಾಧಿಸಿಕೊಳ್ಳುವರು. ಹೀಗೆ ಮುನಿಗಳ ಯೋಗಧ್ಯಾನದಿಂದ ಸಾಧಿತವಾಗತಕ್ಕದ್ದು ಯಾವುದೋ, ಅದು ಗೋಪಿಕೆಯರಿಗೆ ಶ್ರಮವಿಲ್ಲದೆಯೇ ದೊರೆತಿದೆ!

ಅಂತೂ ಹೀಗೆಲ್ಲಾ ವಿರೋಧಗಳೋ ವಿಚಿತ್ರಗಳೋ ಇರುವುದರಿಂದಲೇ ಕೃಷ್ಣನನ್ನು ಅನಿರ್ವಚನೀಯ ಎಂದಿರುವುದು.

ಶ್ಲೋಕವಿದು:

ಉದಾರ-ಮೃದುಲ-ಸ್ಮಿತ-ವ್ಯತಿಕರಾಭಿರಾಮಾನನಂ /

ಮುದಾ ಮುಹುರುದೀರ್ಣಯಾ ಮುನಿಮನೋಽಮ್ಬುಜಾಮ್ರೇಡಿತಮ್ |

ಮದಾಲಸ-ವಿಲೋಚನ-ವ್ರಜವಧೂ-ಮುಖಾಸ್ವಾದಿತಂ /

ಕದಾ ನು ಕಮಲೇಕ್ಷಣಂ ಕಮಪಿ ಬಾಲಮಾಲೋಕಯೇ ?||

ಸೂಚನೆ : 22/11/2025 ರಂದು   ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Thursday, November 20, 2025

ಪ್ರಶ್ನೋತ್ತರ ರತ್ನಮಾಲಿಕೆ 39 (Prasnottara Ratnamalike 39)


ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೪೦. ಯಾವಾಗಲೂ ಆನಂದ ಕೊಡುವ ವಿಷಯ ಯಾವುದು? 

 ದೀನ-ದುಃಖಿತರ ಬಗ್ಗೆ ಕರುಣ ಮತ್ತು ಸಜ್ಜನರ ಜೊತೆ ಮೈತ್ರೀ 

ಕೇವಲ ಮಾನವ ಮಾತ್ರ ಅಲ್ಲ, ಪ್ರತಿಯೊಂದು ಜೀವಿಯು ಕೂಡ 'ಸುಖ ಬೇಕು, ದುಃಖ ಬೇಡ' ಎಂಬುದನ್ನು ಬಯಸುತ್ತದೆ. ಅದರಲ್ಲಿ ಮಾನವನ ಸುಖದ ಸ್ವರೂಪ ವಿಭಿನ್ನವಾದದು. ಉಳಿದ ಜೀವಿಗಳ ಸುಖ ಮತ್ತು ದುಃಖ ಎಂದರೆ ಅದು ಕೇವಲ ಉಳಿವಿಗಾಗಿ ಮಾಡುವ ಹೋರಾಟದ ಪ್ರತಿಫಲನ ರೂಪ ಅಷ್ಟೇ. ಅಂದರೆ ಅವುಗಳ ಉಳಿವಿಗೆ ಯಾವುದು ಅನುಕೂಲವೋ, ಅದನ್ನು 'ಸುಖ' ಎಂಬುದಾಗಿಯೂ, ಉಳಿದಿದ್ದನ್ನು 'ದುಃಖ' ಎಂಬುದಾಗಿಯೂ ತಿಳಿಯಲಾಗುತ್ತದೆ. ಆದರೆ ಮನುಷ್ಯಮಾತ್ರ ಹಾಗಲ್ಲ. ಇವನಿಗೆ ಇರುವ ವಿವೇಕವನ್ನು ಕಳೆದುಕೊಂಡಾಗ ದುಃಖವು ಸುಖವಾಗಿ ಕಾಣುವುದುಂಟು, ಸುಖವನ್ನು ಕೊಡುವ ವಿಷಯವು ದುಃಖವಾಗಿ ಕಾಣುವುದುಂಟು. ಹಾಗಾಗಿ ಯಾವುದು ನಮಗೆ ನಿಜವಾಗಿಯೂ ಸುಖವನ್ನು ಅಥವಾ ಆನಂದವನ್ನು ಮಾತ್ರ ಕೊಡುವಂತದ್ದು! ಎಂಬ ಸೂಕ್ಷ್ಮವಾದ ಅರಿವು ಇಲ್ಲವಾಗಿದೆ. ಅದನ್ನು ತಿಳಿಸುವ ಪ್ರಶ್ನೋತ್ತರ ಇದಾಗಿದೆ. ಅಂದರೆ ದುಃಖಿತರಲ್ಲಿ ಕರುಣೆಯನ್ನು ತೋರಿಸುವುದು, ಸಜ್ಜನರ ಜೊತೆ ಮೈತ್ರಿ, ಅವರ ಜೊತೆ ಅತ್ಯಂತ ಹತ್ತಿರದ ಒಡನಾಟ, ಇವು ಯಾವಾಗಲೂ ದುಃಖವನ್ನು ಕೊಡಲು ಸಾಧ್ಯವೇ ಇಲ್ಲ ಎಂಬ ಅಂಶ ಇಲ್ಲಿ ಅಡಕವಾಗಿದೆ. ಇದನ್ನೇ ಹೇಳುವಂತೆ ಯೋಗಸೂತ್ರವು ಹೀಗೆ ವಿಷಯವನ್ನು ನಿರೂಪಣೆ ಮಾಡುತ್ತದೆ. 

ಮೈತ್ರೀ-ಕರುಣ-ಮುದಿತ-ಉಪೇಕ್ಷಾಣಾಂ ಸುಖ-ದುಃಖ-ಪುಣ್ಯ-ಅಪುಣ್ಯ-ವಿಷಯಾಣಾಂ ಭಾವನಾತಃ ಚಿತ್ತಪ್ರಸಾದನಮ್" ಎಂಬುದಾಗಿ. ಅಂದರೆ ಸುಖವನ್ನು ಕೊಡುವ ವಿಷಯದ ಮೇಲೆ ತಮ್ಮ ಮಿತ್ರಭಾವ, ದುಃಖಿತರ ವಿಷಯದಲ್ಲಿ ಕಾರುಣ್ಯಭಾವ, ಪುಣ್ಯ ಮತ್ತು ಅಪುಣ್ಯ ಎಂಬ ವಿಷಯಗಳಲ್ಲಿ ಸಂತೋಷ ಮತ್ತು ಉಪೇಕ್ಷೆ, ಹೀಗೆ ಈ ಭಾವವನ್ನು ಇಟ್ಟುಕೊಳ್ಳಬೇಕು ಎಂಬುದಾಗಿ ಯೋಗಸೂತ್ರ ವಿವರಿಸುತ್ತದೆ. ಈ ಭಾಗವನ್ನು ಇಟ್ಟುಕೊಂಡರೆ ಅವರಿಗೆ ಎಂದೂ ಕೂಡ ದುಃಖವಾಗಲು ಸಾಧ್ಯವಿಲ್ಲ. ಈ ಜೀವನದಲ್ಲಿ ನಾವು ಇನ್ನೊಬ್ಬರ ಜೊತೆ ಸಂಘವನ್ನು ಮಾಡುವುದು ಅನಿವಾರ್ಯ. ಇನ್ನೊಬ್ಬರ ಕಷ್ಟ ದುಃಖಗಳಲ್ಲಿ ಸಂವೇದಿಸುವುದು ಅಷ್ಟೇ ಮುಖ್ಯವಾದ ಅಂಶ. ಹಾಗಾಗಿ ದುಃಖಿತರನ್ನು ಕಂಡಾಗ ಇವರ ದುಃಖವನ್ನು 'ನಾನು ಹೇಗೆ ನಿವಾರಿಸಲಿ?' ಎಂಬ ಕೃಪೆಯು ಅವರ ಮೇಲೆ ಇರಬೇಕೇ ಹೊರತು, ಅಂತಹ ದುಃಖಿತರನ್ನು ಕಂಡು ತಟಸ್ಥವಾಗಿ, ನಿರ್ಲಿಪ್ತವಾಗಿ ಇರುವುದು ಸರಿಯಲ್ಲ. ಅಂತಯೇ ಯಾವುದು ನಿಜವಾಗಿಯೂ ನಮಗೆ ಸುಖವನ್ನು ಅಥವಾ ಪುಣ್ಯವನ್ನು ಕೊಡುವ ವಿಷಯವೋ, ಅದರ ಜೊತೆ ನಮ್ಮ ನಿರಂತರ ಸಂಪರ್ಕವನ್ನು ಇಟ್ಟುಕೊಳ್ಳಬೇಕು. ಇದರ ಜೊತೆಯಲ್ಲಿ ಯಾವುದು ನಮಗೆ ದುಃಖವನ್ನು ಅಥವಾ ಪಾಪವನ್ನು ಕೊಡುವುದು? ಅದನ್ನು ಸದಾ ದ್ವೇಷಿಸುವ ಸ್ವಭಾವ ಉಳ್ಳವನಾಗಿರಬೇಕು. ಹೀಗೆ ಮಾಡುವುದೇ ನಿಜವಾದ ಆನಂದಕ್ಕೆ ಕಾರಣವಾಗುತ್ತದೆ. ಹೀಗೆ ಮಾಡುವುದರಿಂದ ಅವನೆಂದೂ ಮುಂದೆ 'ನಾನು ಇಂಥವರಿಗೆ ಸಹಾಯ ಮಾಡಿ ಮೋಸ ಹೋದೆ' ಎಂದು ಅಂದುಕೊಳ್ಳಲು ಖಂಡಿತ ಸಾಧ್ಯವಿಲ್ಲ. ಹಾಗಾಗಿ ದೀನ ದುಃಖಿತರ ವಿಷಯದಲ್ಲಿ ಕರುಣ ಮತ್ತು ಸಜ್ಜನರ ಜೊತೆ ಮೈತ್ರೀಯಂತಹ ಸ್ಪಂದನೆ ಇರುವುದು ಅತ್ಯಂತ ಮುಖ್ಯ ಎಂಬ ವಿಷಯ ಈ ಪ್ರಶ್ನೋತ್ತರದಲ್ಲಿ ಕಾಣುತ್ತದೆ.

ಸೂಚನೆ : 16/11/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 162 ರಾಜಸೂಯವು ನಡೆಯಬೇಕೆಂಬ ಸಚಿವರ ಅಭಿಪ್ರಾಯ (Vyaasa Vikshita 162)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ತಾನು ರಾಜಸೂಯವನ್ನು ಮಾಡುವುದು ಯುಕ್ತವೇ? – ಎಂಬ ವಿಷಯವಾಗಿ ತನ್ನ ಮಂತ್ರಿಗಳಲ್ಲಿ ವಿಚಾರಿಸಿದಾಗ ಅವರು ತಮ್ಮ ಸಮ್ಮತಿಯನ್ನು ಸೂಚಿಸುತ್ತಾ ಹೀಗೆ ಮಾತನ್ನು ಮುಂದುವರೆಸಿದರು.

"ರಾಜಸೂಯವನ್ನು ಮಾಡುವ ಸಮಯವು ನಿನಗೀಗ ಬಂದಿದೆಯೆಂಬುದಾಗಿಯೇ ನಿನ್ನ ಮಿತ್ರರೆಲ್ಲರೂ ಭಾವಿಸುತ್ತಿದ್ದಾರೆ.

ಇದನ್ನು ಮಾಡುವಲ್ಲಿ ಸಾಮವೇದದ ಆರು ಮಂತ್ರಗಳಿಂದ ಯಾಗಾರ್ಥವಾದ ಆರು ಅಗ್ನಿಗಳನ್ನು ಪ್ರತಿಷ್ಠಾಪಿಸಬೇಕು. ಅದಕ್ಕೆ ಸಮಯವೀಗ ಸಂನಿಹಿತವಾಗಿದೆ. ಈ ಯಜ್ಞಾರಂಭದಲ್ಲಿ ದರ್ವೀಹೋಮವೆಂಬುದಿದೆ. ಅಲ್ಲಿಂದ ಆರಂಭಿಸಿ ಎಲ್ಲ ಯಜ್ಞಗಳ ಫಲಗಳನ್ನೂ ಪಡೆಯುವುದಾಗುತ್ತದೆ. ಯಜ್ಞದ ಕೊನೆಯಲ್ಲಿ ರಾಜನಿಗೆ ಅಭಿಷೇಕವು ನಡೆಯುತ್ತದೆ. ಅಲ್ಲಿಂದ ಆತನಿಗೆ ಸರ್ವಜಿತ್ ಎಂಬ ಬಿರುದು ಸಲ್ಲುತ್ತದೆ.

ಓ ರಾಜನೇ, ಮಹಾಬಾಹುವೇ, ನೀನು ಈ ಯಜ್ಞವನ್ನು ಮಾಡಲು ಸಮರ್ಥನಾಗಿದ್ದೀಯೇ. ಇದೋ, ನಾವೆಲ್ಲರೂ ನಿನಗೆ ಅಧೀನರಾಗಿ ಕೆಲಸವನ್ನು ಮಾಡಲು ಸಿದ್ಧರಿದ್ದೇವೆ. ಶೀಘ್ರದಲ್ಲಿಯೇ ನೀನು ಈ ರಾಜಸೂಯವನ್ನು ಸಾಧಿಸುವವನಾಗುವೆ. ಆದುದರಿಂದ ನೀನು ಇನ್ನೇನೂ ವಿಚಾರ ಮಾಡದೆ ರಾಜಸೂಯವನ್ನಾರಂಭಿಸು" ಎಂದರು.

ಮತ್ತೇನೂ ವಿಚಾರವನ್ನೇ ಮಾಡದೆ ರಾಜಸೂಯವನ್ನು ಮಾಡುವುದರತ್ತ ಮನಸ್ಸು ಕೊಡು - ಹೀಗೆಂಬುದಾಗಿ ಎಲ್ಲರೂ ಬೇರೆ ಬೇರೆಯಾಗಿಯೂ ಒಟ್ಟಿಗೂ ಯುಧಿಷ್ಠಿರನಿಗೆ ಹೇಳಿದರು. ದಿಟ್ಟವೂ ಶ್ರೇಷ್ಠವೂ ಪ್ರಿಯವೂ ಧರ್ಮಸಂಮತವೂ ಆದ ಅವರ ಈ ಮಾತುಗಳನ್ನು ಕೇಳಿದ ಯುಧಿಷ್ಠಿರನು ಆ ಬಗ್ಗೆ ಮನಸ್ಸು ಮಾಡಿದನು. ಮಿತ್ರರ ಮಾತುಗಳನ್ನು ಆಲಿಸಿ, ತನ್ನ ಸಾಮರ್ಥ್ಯವನ್ನೂ ಅರಿತುಕೊಂಡಿದ್ದ ಆತನು ರಾಜಸೂಯವನ್ನು ನಡೆಸಲು ಮನಸ್ಸು ಮಾಡಿದನು.

ತನ್ನ ಭ್ರಾತೃಗಳು, ಮಹಾತ್ಮರಾದ ಋತ್ವಿಕ್ಕುಗಳು, ಮಂತ್ರಿಗಳು, ಹಾಗೂ ಧೌಮ್ಯ ಮತ್ತು ವ್ಯಾಸ -ಇವರೆಲ್ಲರೊಂದಿಗೆ ಧರ್ಮರಾಜನು ಮಂತ್ರಾಲೋಚನವನ್ನು ನಡೆಸಿದನು. ರಾಜಸೂಯವನ್ನು ನಡೆಸಲು ಎಲ್ಲರೂ ಒಮ್ಮತವನ್ನು ಸೂಚಿಸಿದರು. ಇಷ್ಟಾದರೂ, ಈ ಕಾರ್ಯವು ಲೋಕಹಿತವನ್ನು ಸಾಧಿಸುವುದೇ? - ಎಂಬತ್ತ ಮನಸ್ಸು ಹರಿಸಿದನು.

ಯಾರೇ ಆಗಲಿ ಒಂದು ಕೆಲಸವನ್ನು ಸಾಧಿಸಹೊರಟರೆ ಗಮನಿಸಬೇಕಾದ ಅಂಶಗಳಿವು: ತನ್ನ ಶಕ್ತಿಯೇನು, ಹಾಗು ತನ್ನಲ್ಲಿರುವ ಸಾಧನಗಳೇನು? ಕೆಲಸದ ದೇಶ-ಕಾಲಗಳ ಸಂನಿವೇಶವೇನು? ಪ್ರಕೃತಕಾರ್ಯದಲ್ಲಿ ಉಂಟಾಗುವ ವ್ಯಯ-ಆಗಮಗಳು, ಎಂದರೆ ನಷ್ಟ-ಲಾಭಗಳು ಏನೇನು? - ಇವನ್ನೆಲ್ಲ ಚೆನ್ನಾಗಿ ವಿಮರ್ಶೆ ಮಾಡಿ ಯಾವನು ತೊಡಗುವನೋ ಅವನು ಎಂದೂ ಧೃತಿಗೆಡನು.

ಯಜ್ಞವನ್ನು ಮಾಡುವುದೆಂಬುದು ನನ್ನೊಬ್ಬನದೇ ನಿಶ್ಚಯದಿಂದ - ಎಂಬಂತೆ ಆಗಬಾರದು. ಹೀಗೆಂದುಕೊಂಡ ಯುಧಿಷ್ಠಿರನು ಕಾರ್ಯವನ್ನು ಯತ್ನಪೂರ್ವಕವಾಗಿ ಮಾಡುವವನಿದ್ದು, ನಿಶ್ಚಯಕ್ಕೋಸ್ಕರವಾಗಿ ಶ್ರೀಕೃಷ್ಣನನ್ನೇ ಸ್ಮರಿಸಿಕೊಂಡನು. ಶ್ರೀಕೃಷ್ಣನಾದರೂ ಎಲ್ಲರಿಗಿಂತಲೂ ಶ್ರೇಷ್ಠನು, ಅಪ್ರಮೇಯನಾದ ಮಹಾಬಾಹುವು. ಜನ್ಮವೆಂಬುದು ತನಗಿಲ್ಲದಿದ್ದರೂ ತನ್ನ ಸಂಕಲ್ಪದಂತೆ ಅವತರಿಸಿರುವನು. ದೇವತೆಗಳು ಸಹ ಕೃಷ್ಣನ ಕರ್ಮಗಳನ್ನು ಮೆಚ್ಚತಕ್ಕವರೇ. ಆತನಿಗೆ ತಿಳಿಯದುದಿಲ್ಲ. ಅತನು ಸಾಧಿಸಲಾಗದೆಂಬ ಕಾರ್ಯವೂ ಯಾವುದೂ ಇಲ್ಲ.

ಹೀಗೆಂಬುದಾಗಿ ಒಂದು ನಿಶ್ಚಿತವಾದ ಬುದ್ಧಿಯನ್ನು ಮಾಡಿಕೊಂಡನು. ಗುರುವಿನಲ್ಲಿಗೆ ಹೇಗೋ ಹಾಗೆ ಶ್ರೀಕೃಷ್ಣನಲ್ಲಿಗೆ ದೂತನೊಬ್ಬನನ್ನು ಒಡನೆಯೇ ಕಳುಹಿಸಿದನು.

ಆ ದೂತನಾದರೂ ಶೀಘ್ರಗಾಮಿಯದ ರಥವೊಂದರಲ್ಲಿ ಸಾಗಿ ಯಾದವರಲ್ಲಿಗೆ ಹೋದನು. ದ್ವಾರಕಾವಾಸಿಯಾದ ಕೃಷ್ಣನನ್ನು ಭೇಟಿಮಾಡಿದನು. ಕೈಜೋಡಿಸಿ ನಮ್ರನಾಗಿ ಶ್ರೀಕೃಷ್ಣನಲ್ಲಿ ಈ ಪ್ರಕಾರವಾಗಿ ನಿವೇದಿಸಿಕೊಂಡನು: "ಹೃಷೀಕೇಶನೇ, ಧೌಮ್ಯ, ವ್ಯಾಸ ಮುಂತಾದ ಮಹರ್ಷಿಗಳು, ಮತ್ತು ಪಾಂಚಾಲ-ಮಾತ್ಸ್ಯದೇಶಗಳ ರಾಜರುಗಳು, ಎಂದರೆ ದ್ರುಪದ-ವಿರಾಟರಾಜರು, ಹಾಗೂ ತನ್ನ ಭ್ರಾತೃಗಳು - ಇವರುಗಳೊಂದಿಗೆ ಯುಧಿಷ್ಠಿರನು ನಿನ್ನ ದರ್ಶನವನ್ನು ಬಯಸಲು ಇಷ್ಟಪಟ್ಟಿದ್ದಾನೆ."

ಸೂಚನೆ : 16/11/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Monday, November 17, 2025

ಪ್ರಶ್ನೋತ್ತರ ರತ್ನಮಾಲಿಕೆ 40 (Prasnottara Ratnamalike 40)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ ೪೦. ಯಾವಾಗಲೂ ಆನಂದ ಕೊಡುವ ವಿಷಯ ಯಾವುದು? 

 ದೀನ-ದುಃಖಿತರ ಬಗ್ಗೆ ಕರುಣ ಮತ್ತು ಸಜ್ಜನರ ಜೊತೆ ಮೈತ್ರೀ 

ಕೇವಲ ಮಾನವ ಮಾತ್ರ ಅಲ್ಲ, ಪ್ರತಿಯೊಂದು ಜೀವಿಯು ಕೂಡ 'ಸುಖ ಬೇಕು, ದುಃಖ ಬೇಡ' ಎಂಬುದನ್ನು ಬಯಸುತ್ತದೆ. ಅದರಲ್ಲಿ ಮಾನವನ ಸುಖದ ಸ್ವರೂಪ ವಿಭಿನ್ನವಾದದು. ಉಳಿದ ಜೀವಿಗಳ ಸುಖ ಮತ್ತು ದುಃಖ ಎಂದರೆ ಅದು ಕೇವಲ ಉಳಿವಿಗಾಗಿ ಮಾಡುವ ಹೋರಾಟದ ಪ್ರತಿಫಲನ ರೂಪ ಅಷ್ಟೇ. ಅಂದರೆ ಅವುಗಳ ಉಳಿವಿಗೆ ಯಾವುದು ಅನುಕೂಲವೋ, ಅದನ್ನು 'ಸುಖ' ಎಂಬುದಾಗಿಯೂ, ಉಳಿದಿದ್ದನ್ನು 'ದುಃಖ' ಎಂಬುದಾಗಿಯೂ ತಿಳಿಯಲಾಗುತ್ತದೆ. ಆದರೆ ಮನುಷ್ಯಮಾತ್ರ ಹಾಗಲ್ಲ. ಇವನಿಗೆ ಇರುವ ವಿವೇಕವನ್ನು ಕಳೆದುಕೊಂಡಾಗ ದುಃಖವು ಸುಖವಾಗಿ ಕಾಣುವುದುಂಟು, ಸುಖವನ್ನು ಕೊಡುವ ವಿಷಯವು ದುಃಖವಾಗಿ ಕಾಣುವುದುಂಟು. ಹಾಗಾಗಿ ಯಾವುದು ನಮಗೆ ನಿಜವಾಗಿಯೂ ಸುಖವನ್ನು ಅಥವಾ ಆನಂದವನ್ನು ಮಾತ್ರ ಕೊಡುವಂತದ್ದು! ಎಂಬ ಸೂಕ್ಷ್ಮವಾದ ಅರಿವು ಇಲ್ಲವಾಗಿದೆ. ಅದನ್ನು ತಿಳಿಸುವ ಪ್ರಶ್ನೋತ್ತರ ಇದಾಗಿದೆ. ಅಂದರೆ ದುಃಖಿತರಲ್ಲಿ ಕರುಣೆಯನ್ನು ತೋರಿಸುವುದು, ಸಜ್ಜನರ ಜೊತೆ ಮೈತ್ರಿ, ಅವರ ಜೊತೆ ಅತ್ಯಂತ ಹತ್ತಿರದ ಒಡನಾಟ, ಇವು ಯಾವಾಗಲೂ ದುಃಖವನ್ನು ಕೊಡಲು ಸಾಧ್ಯವೇ ಇಲ್ಲ ಎಂಬ ಅಂಶ ಇಲ್ಲಿ ಅಡಕವಾಗಿದೆ. ಇದನ್ನೇ ಹೇಳುವಂತೆ ಯೋಗಸೂತ್ರವು ಹೀಗೆ ವಿಷಯವನ್ನು ನಿರೂಪಣೆ ಮಾಡುತ್ತದೆ. 

ಮೈತ್ರೀ-ಕರುಣ-ಮುದಿತ-ಉಪೇಕ್ಷಾಣಾಂ ಸುಖ-ದುಃಖ-ಪುಣ್ಯ-ಅಪುಣ್ಯ-ವಿಷಯಾಣಾಂ ಭಾವನಾತಃ ಚಿತ್ತಪ್ರಸಾದನಮ್" ಎಂಬುದಾಗಿ. ಅಂದರೆ ಸುಖವನ್ನು ಕೊಡುವ ವಿಷಯದ ಮೇಲೆ ತಮ್ಮ ಮಿತ್ರಭಾವ, ದುಃಖಿತರ ವಿಷಯದಲ್ಲಿ ಕಾರುಣ್ಯಭಾವ, ಪುಣ್ಯ ಮತ್ತು ಅಪುಣ್ಯ ಎಂಬ ವಿಷಯಗಳಲ್ಲಿ ಸಂತೋಷ ಮತ್ತು ಉಪೇಕ್ಷೆ, ಹೀಗೆ ಈ ಭಾವವನ್ನು ಇಟ್ಟುಕೊಳ್ಳಬೇಕು ಎಂಬುದಾಗಿ ಯೋಗಸೂತ್ರ ವಿವರಿಸುತ್ತದೆ. ಈ ಭಾಗವನ್ನು ಇಟ್ಟುಕೊಂಡರೆ ಅವರಿಗೆ ಎಂದೂ ಕೂಡ ದುಃಖವಾಗಲು ಸಾಧ್ಯವಿಲ್ಲ. ಈ ಜೀವನದಲ್ಲಿ ನಾವು ಇನ್ನೊಬ್ಬರ ಜೊತೆ ಸಂಘವನ್ನು ಮಾಡುವುದು ಅನಿವಾರ್ಯ. ಇನ್ನೊಬ್ಬರ ಕಷ್ಟ ದುಃಖಗಳಲ್ಲಿ ಸಂವೇದಿಸುವುದು ಅಷ್ಟೇ ಮುಖ್ಯವಾದ ಅಂಶ. ಹಾಗಾಗಿ ದುಃಖಿತರನ್ನು ಕಂಡಾಗ ಇವರ ದುಃಖವನ್ನು 'ನಾನು ಹೇಗೆ ನಿವಾರಿಸಲಿ?' ಎಂಬ ಕೃಪೆಯು ಅವರ ಮೇಲೆ ಇರಬೇಕೇ ಹೊರತು, ಅಂತಹ ದುಃಖಿತರನ್ನು ಕಂಡು ತಟಸ್ಥವಾಗಿ, ನಿರ್ಲಿಪ್ತವಾಗಿ ಇರುವುದು ಸರಿಯಲ್ಲ. ಅಂತಯೇ ಯಾವುದು ನಿಜವಾಗಿಯೂ ನಮಗೆ ಸುಖವನ್ನು ಅಥವಾ ಪುಣ್ಯವನ್ನು ಕೊಡುವ ವಿಷಯವೋ, ಅದರ ಜೊತೆ ನಮ್ಮ ನಿರಂತರ ಸಂಪರ್ಕವನ್ನು ಇಟ್ಟುಕೊಳ್ಳಬೇಕು. ಇದರ ಜೊತೆಯಲ್ಲಿ ಯಾವುದು ನಮಗೆ ದುಃಖವನ್ನು ಅಥವಾ ಪಾಪವನ್ನು ಕೊಡುವುದು? ಅದನ್ನು ಸದಾ ದ್ವೇಷಿಸುವ ಸ್ವಭಾವ ಉಳ್ಳವನಾಗಿರಬೇಕು. ಹೀಗೆ ಮಾಡುವುದೇ ನಿಜವಾದ ಆನಂದಕ್ಕೆ ಕಾರಣವಾಗುತ್ತದೆ. ಹೀಗೆ ಮಾಡುವುದರಿಂದ ಅವನೆಂದೂ ಮುಂದೆ 'ನಾನು ಇಂಥವರಿಗೆ ಸಹಾಯ ಮಾಡಿ ಮೋಸ ಹೋದೆ' ಎಂದು ಅಂದುಕೊಳ್ಳಲು ಖಂಡಿತ ಸಾಧ್ಯವಿಲ್ಲ. ಹಾಗಾಗಿ ದೀನ ದುಃಖಿತರ ವಿಷಯದಲ್ಲಿ ಕರುಣ ಮತ್ತು ಸಜ್ಜನರ ಜೊತೆ ಮೈತ್ರೀಯಂತಹ ಸ್ಪಂದನೆ ಇರುವುದು ಅತ್ಯಂತ ಮುಖ್ಯ ಎಂಬ ವಿಷಯ ಈ ಪ್ರಶ್ನೋತ್ತರದಲ್ಲಿ ಕಾಣುತ್ತದೆ.

ಸೂಚನೆ : 16
/11/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.