Monday, April 7, 2025

ವ್ಯಾಸ ವೀಕ್ಷಿತ 131 ಮಂದಪಾಲನ ಅಗ್ನಿಸ್ತುತಿ, ವರಪ್ರಾಪ್ತಿ (Vyaasa Vikshita 131)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ತನ್ನ ಮಕ್ಕಳಿನ್ನೂ ಎಳೆಯರೆಂಬುದನ್ನು ಮನಗಂಡನು. ಎಂದೇ ಅಗ್ನಿಯ ಸ್ತುತಿಯನ್ನು ಮಾಡಿದನು. ಲೋಕಪಾಲಕನೂ ಮಹಾ ತೇಜಸ್ವಿಯೂ ಅದ ಅಗ್ನಿಯನ್ನು, ತನ್ನ ಮಕ್ಕಳನ್ನುಳಿಸಬೇಕೆಂಬ ಉದ್ದೇಶದಿಂದ ಹೀಗೆ ಸ್ತುತಿಸಿದನು:

"ಓ ಅಗ್ನಿಯೇ, ಎಲ್ಲ ಭೂತಗಳೊಳಗೂ ಸಂಚರಿಸತಕ್ಕವನು ನೀನೇ. ಜ್ಞಾನಿಗಳು ನಿನ್ನನ್ನು 'ಒಬ್ಬನೇ' ಎನ್ನುತ್ತಾರೆ (ಎಂದರೆ ಪರಮಾತ್ಮ-ಸ್ವರೂಪನನ್ನಾಗಿ ಒಬ್ಬನೆನ್ನುತ್ತಾರೆ). ನಿನ್ನನ್ನು ಮೂರೆಂದು ಹೇಳುವುದೂ ಉಂಟು (ಆಕಾಶದಲ್ಲಿ ಸೂರ್ಯರೂಪನಾದ ಅಗ್ನಿ, ಭೂಮಿಯಲ್ಲಿ ಬೆಳಗುವ ಬೆಂಕಿ, ಜಠರದೊಳಗಿನ ಪಾಚಕಾಗ್ನಿ). ನಿನ್ನನ್ನು ಎಂಟಾಗಿ ಸಹ ನೋಡುವರು ( ಪಂಚಭೂತಗಳು, ಸೂರ್ಯಚಂದ್ರರು, ಹಾಗೂ ಯಜಮಾನ - ಎಂಬ ಶಿವನ ಅಷ್ಟಮೂರ್ತಿಗಳೆಂದು ಹೆಸರಾದವುಗಳು).

ನಿನ್ನಿಂದಲೇ ವಿಶ್ವವು ಸೃಷ್ಟಿಯಾಗಿದೆಯೆಂದು ಮಹರ್ಷಿಗಳು ಹೇಳುತ್ತಾರೆ. ನೀನಿಲ್ಲದೆ ಜಗತ್ತೇ ನಾಶಹೊಂದಿಬಿಡುವುದಲ್ಲವೇ? ನಿನಗೆ ನಮಸ್ಕಾರ ಮಾಡಿಯೇ ವಿಪ್ರರು ಪತ್ನೀಪುತ್ರರೊಂದಿಗೆ ಸ್ವಕರ್ಮ-ಸಂಪಾದಿತವಾದ ಶಾಶ್ವತ-ಸ್ಥಾನಗಳನ್ನು ಪಡೆಯುವರು.

ಆಕಾಶದಲ್ಲಿ ಮಿಂಚುಗಳಿಂದ ಕೂಡಿರುವ ಮೋಡಗಳು ಸಹ ನೀನೇ ಎನ್ನುವರು. ಪ್ರಲಯಕಾಲದಲ್ಲಿ ನಿನ್ನಿಂದ ಹೊಮ್ಮಿದ ಆಯುಧಗಳೇ ಸಮಸ್ತಭೂತಗಳನ್ನೂ ಸುಡುವುವು. ಓ ಜಾತವೇದನೇ (ಅಗ್ನಿಯೇ), ಈ ವಿಶ್ವವು ನಿನ್ನಿಂದಲೇ ಸೃಷ್ಟವಾಗಿದೆ. ಎಲ್ಲ ಚರಾಚರ ಪ್ರಾಣಿಗಳ ಕರ್ಮಗಳೂ ನಿನ್ನಿಂದಲೇ ವಿಹಿತವಾಗಲ್ಪಟ್ಟಿವೆ. ಜಗತ್ಸೃಷ್ಟಿಯ ಆದಿಯಲ್ಲಿ ಬಂದ ನೀರೆಂಬುದು ನಿನ್ನಿಂದಲೇ ಆದುದು, ಈ ಜಗತ್ತು ನಿಂತಿರುವುದು ನಿನ್ನಿಂದಲೇ.

ಹವ್ಯ-ಕವ್ಯಗಳು ನಿನ್ನಲ್ಲೇ ನೆಲೆಗೊಂಡಿವೆ. ನೀನೇ ದಾಹಕ, ನೀನೇ ಬ್ರಹ್ಮನೂ ಬೃಹಸ್ಪತಿಯೂ ಆಗಿದ್ದೀಯೆ. ನೀನೇ ಅಶ್ವಿನೀ-ದೇವತೆಗಳಿಬ್ಬರು, ನೀನೇ ಮಿತ್ರ, ನೀನೇ ಸೋಮ, ನೀನೇ ವಾಯುವೂ.

ಈ ರೀತಿ ಮಂದಪಾಲನು ಅಗ್ನಿಯನ್ನು ಸ್ತುತಿಸಿದನು. ಅಮಿತವಾದ ತೇಜಸ್ಸುಳ್ಳ ಆ ಮುನಿಯ ವಿಷಯದಲ್ಲಿ ಅಗ್ನಿಯೂ ಸಂತೋಷಗೊಂಡನು. ಪ್ರಸನ್ನವಾದ ಮನಸ್ಸುಳ್ಳವನಾಗಿ ಆತನನ್ನು ಅಗ್ನಿಯು ಕೇಳಿದನು - "ನಿನಗಿಷ್ಟವಾದ ಯಾವ ಕಾರ್ಯವು ನೆರವೇರುವಂತೆ ಮಾಡಲಿ?"

ಕೈಗಳನ್ನು ಜೋಡಿಸಿದ ಮಂದಪಾಲನು ಅಗ್ನಿದೇವನಿಗೆ ಹೇಳಿದನು: "ನೀನು ಖಾಂಡವವನ್ನು ಸುಡುತ್ತಿರುವ ಈ ಸಂದರ್ಭದಲ್ಲಿ ನನ್ನ ಮಕ್ಕಳನ್ನು ಉಳಿಸು." ಎಂದನು. ಅಗ್ನಿಭಗವಾನನು ಅದಕ್ಕೆ ಹಾಗೇ ಆಗಲೆಂದನು. ಮತ್ತು ಖಾಂಡವವನ್ನು ಸುಡುವ ಬಯಕೆಯಿಂದ ಸರಿಯಾಗಿ ಜ್ವಲಿಸಿದನು.

ಇತ್ತ ಅಗ್ನಿಯು ಪ್ರಜ್ವಲಿಸುತ್ತಿದ್ದಾನೆಂದು ಆ ಶಾರ್ಙ್ಗಕ-ಶಿಶುಗಳು ಬಹಳವೇ ವ್ಯಥೆಗೊಂಡವು. ಬಹಳವೇ ಉದ್ವೇಗಕ್ಕೆ ಒಳಗಾದವು. ಮತ್ತು ತಮಗೆ ರಕ್ಷಕರು ಯಾರು? - ಎಂಬುದನ್ನು ತಿಳಿಯದಾದವು. ತನ್ನ ಶಿಶುಗಳು ಹೀಗಾಗಿರುವುದನ್ನು ಕಂಡ ಅವುಗಳ ತಾಯಿ ಜರಿತೆಯೂ ಬಹಳವೇ ದುಃಖಿತಳೂ ಶೋಚನೀಯಳೂ  ಆಗಿಬಿಟ್ಟಳು.

ಹಾಗೂ ಹೀಗೆ ಹೇಳಿದಳು: ಇದೋ ಕಾಡನ್ನು ಸುಡುತ್ತಿರುವ ಅಗ್ನಿಯು ಇತ್ತಲೇ ಭಯಂಕರನಾಗಿ ಬರುತ್ತಿದ್ದಾನೆ. ಜಗತ್ತನ್ನೇ ಸುಡುವಂತಿರುವ ಈತನು ನನಗೆ ಅತಿಶಯವಾದ ದುಃಖವನ್ನುಂಟುಮಾಡುತ್ತಿದ್ದಾನೆ. ಇನ್ನೂ ಬುದ್ಧಿಯೇ ಬೆಳೆದಿಲ್ಲದ ಈ ಶಿಶುಗಳು ನನ್ನನ್ನು ಸೆಳೆಯುತ್ತಿವೆ. ಅವುಗಳಿಗೆ ಇನ್ನೂ ರೆಕ್ಕೆಯೂ ಮೂಡಿಲ್ಲ, ಕಾಲುಗಳೂ ಸರಿಯಾಗಿ ಬಂದಿಲ್ಲ. ಹೀಗಾಗಿ ಕಷ್ಟಪಡುತ್ತಿವೆ.

ಮರಗಳನ್ನೇ ತನ್ನ ನಾಲಿಗೆಗಳಿಂದ ನೆಕ್ಕುತ್ತಾ ಈ ಅಗ್ನಿಯಂತೂ ನಮ್ಮನ್ನು ಬೆದರಿಸುತ್ತಲೇ ಬರುತ್ತಿದ್ದಾನೆ.

ರೆಕ್ಕೆ ಹುಟ್ಟಿಲ್ಲದ ಈ ಮರಿಗಳು ಚಲಿಸಲೂ ಆರವಾಗಿವೆ. ಅವನ್ನು ಹೊತ್ತುಕೊಂಡು ದಾಟಿಹೋಗಲು ನಾನು ಅಸಮರ್ಥಳಾಗಿದ್ದೇನೆ. ಅವನ್ನು ಇಲ್ಲೇ ಬಿಟ್ಟೂ ಹೋಗಲಾರೆ, ಹೀಗಾಗಿ ನನ್ನ ಹೃದಯವು ಬಹಳವೇ ನೋಯುತ್ತಿದೆ.

ಸೂಚನೆ : 6/4/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 10 (Prasnottara Ratnamalike 10)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೧೦. ಮದಿರದಂತೆ ಮೋಹಜನಕ ಯಾವುದು ?

ಉತ್ತರ - ಶರೀರ, ಸ್ತ್ರೀ, ಪುತ್ರ, ಧನ ಈ ವಿಷಯಗಳಲ್ಲಿ ಮೋಹ.

ಮದಿರಾ ಎಂಬುದು ಒಂದು ಬಗೆಯ ಮಾದಕದ್ರವ್ಯ. ಅದನ್ನು ಸ್ವೀಕರಿಸಿದವನು ತನ್ನ ಮನಸ್ಸಿನ ಸ್ತಿಮಿತತೆಯನ್ನು ಕಳೆದುಕೊಳ್ಳುತ್ತಾನೆ. ಅವನು ಹೇಗೆ ನಡೆಯಬೇಕಿತ್ತೋ ಹಾಗೆ ನಡೆಯಲಾಗದು; ಹೇಗೆ ಯೋಚಿಸಬೇಕೋ ಹಾಗೆ ಯೋಚಿಸಲಾಗದು; ಹೇಗೆ ಮಾತನಾಡಬೇಕೋ ಹಾಗೆ ಮಾತನಾಡಲಾಗದು. ಇವೆಲ್ಲವೂ ವ್ಯತ್ಯಾಸವಾಗುವುದು. ಅಂದರೆ ಅವನ ನಡವಳಿಕೆಯಲ್ಲಿ ಮದಿರೆಯೆಂಬುದು ತೊಂದರೆಯನ್ನು ಉಂಟುಮಾಡುತ್ತದೆ. ಹಾಗೆಯೇ ಇಲ್ಲೂ ಕೂಡ ಅಂಥದ್ದೇ ಮೋಹಜನಕವಾದುದು ಯಾವುದು? ಎಂಬ ಪ್ರಶ್ನೆ ಬಂದಿದೆ. ಅದಕ್ಕೆ ಉತ್ತರವಾಗಿ ಶರೀರ, ಸ್ತ್ರೀ, ಪುತ್ರ, ಧನ ಈ ವಿಷಯಗಳಲ್ಲಿ ಇರುವ ಮೋಹವವೇ ಅಂತಹ ಮದಿರೆ ಎಂಬುದಾಗಿ ಕರೆಯಬೇಕು ಎಂಬ ಉತ್ತರ ಇಲ್ಲಿದೆ. ಅಂದರೆ ಶರೀರ ಸ್ತ್ರೀ ಮೊದಲಾದವುಗಳು ನಮ್ಮ ಸ್ತಿಮಿತತೆಯನ್ನು ಅಥವಾ ನಮ್ಮ ಅಸ್ತಿತ್ವವನ್ನು ಕಳೆಯುವಂತವುಗಳು ಎಂಬುದು ಇದರ ಅರ್ಥ.


ನಮಗೆ ಒಂದು ಸಂದೇಹ ಬರುತ್ತದೆ ಇವು ಮೋಹವನ್ನು ಅಂದರೆ ನಮ್ಮ ಅಸ್ತಿತ್ವವನ್ನು ಕಳೆಯುವಂತಹ ವಿಷಯಗಳಾದರೆ ಇವು ಬೇಡವೇ? ಎಂದರೆ ಹಾಗಲ್ಲ. ಇವುಗಳು ಇಲ್ಲದಿದ್ದರೆ ಯಾವುದೂ ಕೂಡ ನಡೆಯುವುದಿಲ್ಲ. ಶರೀರವಿಲ್ಲದಿದ್ದರೆ ನಾವು ಯಾವ ಕಾರ್ಯವನ್ನು ಕೂಡ ಮಾಡಲಾರೆವು. ಸ್ತ್ರೀ ಇಲ್ಲದಿದ್ದರೆ ಈ ಸಂಸಾರ ಅಥವಾ ವಂಶವೇ ಮುಂದುವರೆಯಲಾರದು. ಪುತ್ರ ಸಂತತಿ ಇಲ್ಲದಿದ್ದರೆ ಅದು ಕೂಡ ಅಷ್ಟೇ. ಇವೆಲ್ಲದಕ್ಕೂ ಕಳಶಪ್ರಾಯದಂತೆ ಇರುವಂತದ್ದು ಧನ. ಅಂದರೆ ನಮ್ಮ ಬಾಹ್ಯವ್ಯವಹಾರ ಸಂಗತವಾಗಿ ನಡೆಯಬೇಕಾದರೆ ಧನ ಬೇಕಷ್ಟೇ. ಹಾಗಾಗಿ ಇವುಗಳು ಇಲ್ಲದಿದ್ದರೆ ನಮ್ಮ ಬದುಕು ಅಸಾಧ್ಯ ಎಂಬುದೇ ವಿಷಯ. ಆದರೆ ಇಲ್ಲಿ ಹೇಳುವ ವಿಷಯ ಯಾವುದು? ಇವುಗಳು ಹೇಗೆ ಮೋಹಕ?


ಶರೀರ ಮೊದಲಾದ ವಿಷಯಗಳು ನಮಗೆ ಬೇಡವೆಂಬ ಅರ್ಥವಲ್ಲ. ಅವುಗಳನ್ನು ಯಾವಾಗ? ಹೇಗೆ? ಎಷ್ಟು ಬಳಸಿಕೊಳ್ಳಬೇಕು? ಎಂಬ ಬಗ್ಗೆ ನಮಗೆ ಒಂದು ಬಗೆಯ ನಿಗಾ ಇರಬೇಕು ಎಂಬುದು ಇದರ ತಾತ್ಪರ್ಯ. ಅದಕ್ಕಾಗಿಯೇ ಶರೀರವನ್ನು ಅಷ್ಟಾಗಿ ಮೋಹಿಸಬಾರದು ಎಂಬುದಾಗಿ ಶ್ರೀಶಂಕರ ಭಗವತ್ಪಾದರು ಮೋಹಮದ್ಗರ ಸ್ತೋತ್ರದಲ್ಲಿ ಹೇಳುತ್ತಾರೆ ಮತ್ತು ದಾರೇಷಣ, ವಿತ್ತೇಷಣ, ಪುತ್ರೇಷಣ ಎಂಬುದಾಗಿ ಈಷಣಾತ್ರಯ ತ್ಯಾಗವೇ ಮುಕ್ತಿಗೆ ಸಾಧನ ಎಂಬುದಾಗಿ ಬಹಳ ವಿವರವಾಗಿ ಈ ಬಗ್ಗೆ ಉಪನಿಷತ್ತುಗಳಲ್ಲಿ ಕಾಣಬಹುದು. ಅಂದರೆ ಇವೆಲ್ಲವೂ ನಮ್ಮ ಮುಕ್ತಿಗೆ ಬಾಧಕಗಳಾಗಬಹುದು ಎಂಬುದು ಅರ್ಥ. ಇಲ್ಲಿ ಸ್ತ್ರೀ ಪುರುಷ ಎಂಬ ಸಂಕೇತದ ವಿಷಯವಲ್ಲ. ಈ ಪ್ರಪಂಚಕ್ಕೆ ಬಂದಂತಹ ಪ್ರತಿಯೊಬ್ಬರೂ ಕೂಡ ಸ್ತ್ರೀಯೇ ಆಗಿರುತ್ತಾನೆ. ಅಲ್ಲಿ ಭಾವಿಸಬೇಕಾದುದೇ ಪುರುಷ. ಹಾಗಾಗಿ ಈ ಪ್ರಪಂಚಕ್ಕೆ ಬಂದವನು ಈ ಶರೀರವೆಂಬ ಪ್ರಕೃತಿಯನ್ನು ಮತ್ತು ಅದರ ವಿಕಾಸ ರೂಪವಾಗಿರುವಂತ ಸಂಸಾರವನ್ನು ಮತ್ತು ಅದಕ್ಕೆ ಬೇಕಾದಂತಹ ಧನ-ಸಂಪತ್ತು ಮೊದಲಾದವುಗಳನ್ನು ಎಷ್ಟಕ್ಕೆ ಬೇಕೋ ಅಷ್ಟರಮಟ್ಟಿಗೆ ಅದನ್ನು ಬಳಸಿಕೊಂಡರೆ ಅವನು ತನ್ನ ಗುರಿಯನ್ನು ಬಹಳ ಸುಲಭವಾಗಿ ಮುಟ್ಟಬಲ್ಲ. ಅದಿಲ್ಲದಿದ್ದರೆ ಅವನಿಗೆ ಗುರಿಯು ಬಹಳ ಕಷ್ಟವಾದೀತು ಎಂಬ ಒಂದು ಸಂದೇಶವನ್ನು ಈ ಪ್ರಶ್ನೋತ್ತರದಲ್ಲಿ ಕೊಟ್ಟಂತೆ ಕಂಡುಬರುತ್ತದೆ.

ಸೂಚನೆ : 6/4/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ರಾಮನಾಮ ಮಂತ್ರದ ಮಹಿಮೆ ( Ramanama Mantrada Mahime)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)




ಚೈತ್ರಮಾಸದ ಶುಕ್ಲಪಕ್ಷದ ನವಮಿತಿಥಿಯು ಸನಾತನ ಭಾರತೀಯ ಎಲ್ಲಾ ಆಸ್ತಿಕರಿಗೂ ಅತ್ಯಂತ ಹೆಮ್ಮೆಯ ಮತ್ತು ತೃಪ್ತಿದಾಯಕವಾದ ದಿನ. ಏಕೆಂದರೆ ಅದು ಮರ್ಯಾದಾ ಪುರುಷೋತ್ತಮನಾಗಿ, ದಶರಥನ ನಂದನನಾಗಿ, 'ಶ್ರೀರಾಮಚಂದ್ರ' ಎಂಬ ಪದಭೂಷಿತನಾಗಿ ಭಗವಂತ ಧರೆಗೆ ಅವತರಿಸಿದ ಪಾವನಪರ್ವ. ಈ ದಿನ 'ರಾಮನವಮೀ' ಎಂಬುದಾಗಿ ಅತ್ಯಂತ ಶ್ರದ್ಧೆ ಭಕ್ತಿಯಿಂದ ಆ ದಿನ ರಾಮನನ್ನು ಪೂಜಿಸುತ್ತೇವೆ, ಆರಾಧಿಸುತ್ತೇವೆ, ವಿವಿಧ ಬಗೆಯಲ್ಲಿ ಅವನನ್ನು ಸ್ತುತಿಮಾಡಿ ಸಂತೋಷಪಡುತ್ತೇವೆ. ಈ ದಿನದಲ್ಲಿ ಅನೇಕ ಮಂತ್ರಗಳ ಪುರಶ್ಚರಣೆ ಇರುತ್ತದೆ; ಅನೇಕ ಬಗೆಯ ಪುಷ್ಪಾಲಂಕಾರಗಳಿರುತ್ತವೆ; ಅನೇಕ ಬಗೆಯ ನೈವೇದ್ಯಗಳು ಸಲ್ಲುತ್ತವೆ. ಹೀಗೆ ರಾಮನನ್ನು ಯಾವೆಲ್ಲ ವಿಧಾನಗಳಿಂದ ತೃಪ್ತಿಪಡಿಸಬಹುದೋ, ಆ ಎಲ್ಲ ವಿಧಾನಗಳನ್ನು ಈ ದಿನ ಬಳಸುತ್ತೇವೆ. ಅದರಿಂದ ನಾವು ತೃಪ್ತಿಪಡುತ್ತೇವೆ ಮತ್ತು ಧನ್ಯರಾಗುತ್ತೇವೆ. ಇಂತಹ ಶ್ರೇಷ್ಠವಾದ ದಿನವೇ ಶ್ರೀರಾಮನವಮಿ. ಈ ದಿನ ನಾವು ಅತ್ಯಂತ ಮುಖ್ಯವಾಗಿ ನೆನಪಿಸಿಕೊಳ್ಳಬೇಕಾದ ವಿಷಯವೆಂದರೆ ರಾಮಮಂತ್ರದ ಮಹಿಮೆ. ರಾಮನ ಹೆಸರೇ ಅತ್ಯಂತ ಪವಿತ್ರವಾದದ್ದು. ಅನೇಕ ಪಾಪಗಳನ್ನು ನಾಶಮಾಡುವಂತಹದ್ದು. ರಾ ಮತ್ತು ಮ ಎಂಬ ಎರಡು ಅಕ್ಷರಗಳಿಂದ ಕೂಡಿದ್ದ ಈ ಪದ ಅತ್ಯಂತ ಮಹತ್ವಪೂರ್ಣವಾದು ಏಕೆ? ಎಂಬುದನ್ನು ಸ್ವಲ್ಪ ವಿವರಿಸುವ ಪ್ರಯತ್ನವಿದಾಗಿದೆ.

ಮಂತ್ರ
'ಮನನಾತ್ ತ್ರಾಣನಾತ್ ಮಂತ್ರಃ ಸರ್ವವಾಚಸ್ಯ ವಾಚಕಃ' ಎಂಬುದು ಉಪನಿಷತ್ತಿನ ಮಾತು. ಅಂದರೆ ಮನನಮಾಡಲು ಯೋಗ್ಯವಾದುದು ಮತ್ತು ನಮ್ಮನ್ನು ರಕ್ಷಣೆ ಮಾಡಲು ಸಮರ್ಥವಾದುದು. ಆ ಕಾರಣದಿಂದ ಅದನ್ನು 'ಮಂತ್ರ' ಎಂಬುದಾಗಿ ಕರೆಯುತ್ತಾರೆ. ಮಂತ್ರಗಳೆಲ್ಲವೂ ವಿಶೇಷ ಅರ್ಥವನ್ನು ಕೊಡುವ, ಋಷಿಗಳ ಉಗ್ರ ತಪಸ್ಸಿನ ಫಲವಾಗಿ ಅಂತರಂಗದಲ್ಲಿ ಗೋಚರವಾದ ದಿವ್ಯವಾದ ಶಕ್ತಿಯನ್ನು ಹೊಂದಿರುವ ಅಕ್ಷರಪುಂಜ. ಅವುಗಳಿಗೆ ಉಚ್ಚಾರಣ ಮಾತ್ರದಿಂದಲೇ ಫಲವನ್ನು ಕೊಡುವ ಶಕ್ತಿಯಿದೆ. ಶ್ರದ್ಧಾಪೂರ್ವಕವಾಗಿ ಆ ಮಂತ್ರ ಯಾರನ್ನು ಉದ್ದೇಶವಾಗಿಟ್ಟುಕೊಂಡು ಬಂದಿದೆಯೋ ಆ ದೇವತೆಯನ್ನು ಸಾಕ್ಷಾತ್ಕರಿಸಿಕೊಳ್ಳಲು ಬಳಸುವುದುಂಟು. ಯಾವ ಋಷಿಗಳು ತಮ್ಮ ಅಂತರಂಗದಲ್ಲಿ ರಮಿಸುತ್ತಿರುವ ಯಾವ ಚೈತನ್ಯಶಕ್ತಿಯನ್ನು ಕಂಡು 'ರಾಮ' ಎಂಬುದಾಗಿ ಉದ್ಗಸಿದರೋ, ಅಂತಹ ಶಬ್ದವಿಶೇಷವೇ 'ರಾಮ' ಎಂಬ ಮಂತ್ರವಾಗಿದೆ. ಇದು ಎಂತವರನ್ನು ಉದ್ಧಾರ ಮಾಡಬಲ್ಲ ಮಂತ್ರವಾಗಿದೆ. ಅಷ್ಟೇ ಏಕೆ! ಒಂದು ಮಾತಿದೆ - ಇದನ್ನು ತಿರುಗುಮುರಗಾಗಿ ಹೇಳಿದರೂ ಉದ್ಧಾರಮಾಡುವ ಸಾಮರ್ಥ್ಯವಿದೆ ಎಂಬುದಾಗಿ. ಇದಕ್ಕೆ ಒಂದು ಜಾನಪದ ಕಥೆಯು ಕೂಡ ಇದೆ. ವಾಲ್ಮೀಕಿ ಬೇಡನಾಗಿದ್ದ. ಅವನಿಗೆ ಸರಿಯಾಗಿ ರಾಮ ಎಂದು ಉಚ್ಚರಿಸಲು ಕೂಡ ಗೊತ್ತಿರಲಿಲ್ಲ ಮತ್ತು ಸಾಧ್ಯವಾಗುತ್ತಿರಲಿಲ್ಲ. ನಾರದ ಮಹರ್ಷಿಗಳು ಬಂದು ಅವನಿಗೆ ರಾಮಮಂತ್ರವನ್ನು ಉಪದೇಶಿಸಿದರು. ಆದರೆ ಅದನ್ನು ಹಾಗೆಯೇ ಉಚ್ಚರಿಸಲಾಗದಾಗ 'ಮರ ಮರ' ಎಂಬುದಾಗಿ ಉಚ್ಚರಿಸುವಂತೆ ಹೇಳಿದರು; 'ಮರ ಮರ' ಎಂದು ಉಚ್ಚರಿಸಿದ ವಾಲ್ಮೀಕಿ. ಅದು ಕೊನೆಯಲ್ಲಿ 'ರಾಮ ರಾಮ' ಎಂದಾಯುತು ಎಂದು. ಆದ್ದರಿಂದ ಇಂತಹ ವಿಶೇಷ ಅರ್ಥವನ್ನು ಕೊಡುವಂತಹ ರಾಮಮಂತ್ರ ಎಂಥವರನ್ನೂ ಉದ್ಧರಣ ಮಾಡಬಲ್ಲದು; ಹಾಗಾಗಿ ಈ ರಾಮಮಂತ್ರಕ್ಕೆ ಅಷ್ಟು ವಿಶೇಷ. 

ರಾಮಮಂತ್ರ
ರಾಮಮಂತ್ರಗಳು ಬಹಳ ಇವೆ.'ರಾ' ಎಂದರೆ ವಿಶ್ವ, ಮ ಎಂದರೆ ಈಶ್ವರ. ಅಂತಹ ವಿಶ್ವೇಶ್ವರನೇ ರಾಮ ಎಂದೂ, ರಮಾ ಎಂಬುವಳಿಂದ ರಮಿಸಲ್ಪಡುವವನು ರಾಮ ಎಂದೂ, ರ ಎಂದರೆ ಲಕ್ಷ್ಮೀ, ಮ ಎಂದರೆ ಈಶ್ವರ. ಅಂತಹ ಲಕ್ಷ್ಮೀಪತಿಯೇ ರಾಮ. ಬ್ರಹ್ಮಾದಿ ದೇವತೆಗಳನ್ನು ಸೂಚಿಸುವ ಶಬ್ದ ಎಂಬುದಾಗಿ ಉಪನಿಷತ್ತು ಸಾರುತ್ತದೆ. 'ಬ್ರಹ್ಮಾದಿ ದೇವತಾನಾಂ ವಾಚಕೋ ಮಂತ್ರಃ' - ಅಂದರೆ ಈ ರಾಮ ಎಂಬ ಮಂತ್ರವು. ರಾಮದೇವತೆಯನ್ನೂ ಸೂಚಿಸುವ ಶಬ್ದವಾಗಿದೆ. ಆದ್ದರಿಂದ ರಾಮ ಮಂತ್ರವನ್ನು ಜಪಿಸಿದವನು ರಾಮಭಾವವನ್ನು ಪಡೆಯುತ್ತಾನೆ. ಈ ಮಂತ್ರದಿಂದ ರಾಮನನ್ನು ಚಿಂತಿಸುತ್ತಾ ಚಿಂತಿಸುತ್ತಾ ಹೋದರೆ ಕೊನೆಗೆ ಅವನು ರಾಮನೇ ಆಗುತ್ತಾನೆ. 'ಓಂ ರಾಮಾಯ ನಮಃ, ಓಂ ರಾಮಚಂದ್ರಾಯ ನಮಃ, ಓಂ ರಾಮಭದ್ರಾಯ ನಮಃ, ಶ್ರೀರಾಮ ಜಯ ರಾಮ ಜಯ ಜಯ ರಾಮ' ಇತ್ಯಾದಿ ಮಂತ್ರಗಳಲ್ಲಿ ರಾಮ ಎಂಬ ಶಬ್ದವೇ ಇದೆ. ರಾಮ ಎಂಬ ಶಬ್ದದ ಮಹಿಮೆಯನ್ನು ಹೇಳಲೆಂದೇ ರಾಮತಾಪಿನೀ ಉಪನಿಷತ್ತು ಎಂಬ ಪ್ರಸಿದ್ಧವಾದ ಉಪನಿಷತ್ ಇದೆ. ಇಲ್ಲಿ ಅದರ ಬಗ್ಗೆ ವಿಶೇಷವಾದ ವಿವರಣೆಯು ಸಿಗುತ್ತದೆ. 
ಶ್ರೀರಾಮನು ದಶರಥ ಪುತ್ರರಾದ ಲಕ್ಷ್ಮಣ, ಭರತ, ಶತ್ರುಘ್ನ ಎಂಬುದಾಗಿ ಮೂವರು ತಮ್ಮಂದಿರನ್ನು ಹೊಂದಿದ್ದಾನೆ. ಇವರೆಲ್ಲರೂ ಕೂಡ ದೇವತಾಂಶ ಸಂಭೂತರೇ ಆಗಿದ್ದಾರೆ. ಅದಕ್ಕೆ ಓಂ ಎಂಬ ಅಕ್ಷರದಲ್ಲಿ ನಾಲ್ಕು ಭಾಗಗಳಿವೆ; ಅಕಾರಕ್ಕೆ ಶತ್ರುಘ್ನ, ಉಕಾರಕ್ಕೆ ಭರತ, ಮಕಾರಕ್ಕೆ ಲಕ್ಷ್ಮಣ  ಅರ್ಧಮಾತ್ರಾಕ್ಕೆ ಸ್ವತಃ ಶ್ರೀರಾಮನೇ ಅರ್ಥ ಎಂದು ಆ ನಾಲ್ಕು ಅಕ್ಷರಗಳಿಗೂ ಒಂದೊಂದು ಅರ್ಥವಿದೆ ಎಂದು ಉಪನಿಷತ್ತು ಸಾರುತ್ತದೆ. 

ರಾಮಶಬ್ದದ ಅರ್ಥವಿಸ್ತಾರ
ರಾ ಎಂದರೆ ರಾತಿ, ವಿತರತಿ, ಅವರವರ ಕರ್ಮಾನುಸಾರ ಯಾರು ಫಲವನ್ನು ಕೊಡುತ್ತಾನೋ ಅವನಿಗೆ 'ರಾಮ' ಎಂಬುದಾಗಿ ಕರೆಯುತ್ತಾರೆ. ರಾವಣಾದಿ ರಾಕ್ಷಸರು ಯಾರಿಂದ ಮರಣ ಹೊಂದಿದ್ದಾರೋ ಅವನನ್ನು 'ರಾಮ' ಎಂಬುದಾಗಿ ಕರೆಯುತ್ತಾರೆ. ಹೇಗೆ ರಾಹು ಬಂದಾಗ ಸೂರ್ಯನಿಗೂ ಚಂದ್ರನಿಗೂ ಒಂದು ಗ್ರಹಣ ಏರ್ಪಟ್ಟು ಅವರು ಕಲಾಹೀನರಾಗುತ್ತಾರೋ, ಹಾಗೆ ರಾಮನು ಮನುಷ್ಯರೂಪದಲ್ಲಿ ಬಂದು ರಾವಣಾದಿ ರಾಕ್ಷಸರನ್ನು ತೇಜೋಹಿನರನ್ನಾಗಿ ಮಾಡುತ್ತಾನೆ. ಆದ್ದರಿಂದ ಆತ 'ರಾಮ'. 'ರಮತೇ, ಶೋಭತೇ' - ಜ್ಞಾನ ವೈರಾಗ್ಯ ಐಶ್ವರ್ಯಗಳಿಂದ ಯಾರು ಸಂಪನ್ನನಾಗಿದ್ದಾನೋ ಅಂತವನನ್ನು ರಾಮ ಎಂಬುದಾಗಿ ಕರೆಯಬೇಕು ಎಂಬಿತ್ಯಾದಿ ವಿವರಣೆಗಳು ಕೂಡ ಈ ರಾಮ ಶಬ್ದಕ್ಕೆ ಕಂಡುಬರುತ್ತವೆ.
ಶ್ರೀರಂಗ ಮಹಾಗುರುಗಳು ರಾಮನ ಬಗ್ಗೆ ಒಂದು ವಿವರಣೆಯನ್ನು ನೀಡಿದ್ದನ್ನು ನಾವಿಲ್ಲಿ ಸಂದರ್ಭಕ್ಕೆ ಉಚಿತವಾಗಿ ನೆನಪಿಸಿಕೊಳ್ಳಬಹುದು. "'ರಾಮ' ಎನ್ನುವ ಶಬ್ದವೇ ಜೋಗಿಹೃದಯದಲ್ಲಿ ಜ್ಞಾನಿಗಳ ಹೃದಯದಲ್ಲಿ ರಮಿಸಲು ಯೋಗ್ಯನಾದವನು ಎಂಬ ಅರ್ಥವನ್ನು ಕೊಡುತ್ತದೆ. ರಾಮ ಎಂಬ ಹೆಸರನ್ನು ಪಡೆದ ಸ್ತ್ರೀಯು ಪತಿಯೊಡನೆ ರಮಿಸುವಂತೆ ಜೀವವು ತನ್ನ ದೇವನೊಡನೆ ಒಂದಾಗಿ ಸೇರಿ ಪರಮಾತ್ಮನಲ್ಲಿ ಅಂದರೆ ಪರಮಪುರುಷನಲ್ಲಿ ರಮಿಸುವುದಾದರೆ ಹಾಗೆ ರಮಿಸಲು ಯೋಗ್ಯನಾದ ದೇವನೇ ರಾಮ, ಪರಮಪುರುಷನೇ 'ರಾಮ'ಪ್ಪ" ಎಂಬುದಾಗಿ.

ರಾಮಮಂತ್ರೋಪಾಸನೆಯು ವೈದಿಕವೋ ಅಥವಾ ತಾಂತ್ರಿಕವೋ?
ರಾಮನ ಮಂತ್ರದಿಂದ ಮಾಡುವ ಉಪಾಸನೆಯು ವೈದಿಕವೋ ಅಥವಾ ತಾಂತ್ರಿಕವೋ ಎಂಬ ಸಂಶಯವಿದೆ. ಇದಕ್ಕೆ ಹೀಗೆ ವಿಚಾರ ಮಾಡಬಹುದು, ಮಂತ್ರರಾಮಾಯಣ ಮತ್ತು ರಾಮತಾಪಿನೀ ಉಪನಿಷತ್ತಿನಿಂದ ಉದ್ಧೃತವಾಗಿರುವಂತಹ ವೇದಪ್ರತಿಪಾದಿತವಾಗಿದೆ. ಮತ್ತು ನಾರದತಂತ್ರಪ್ರಪಂಚ, ಶಾರದಾತಿಲಕ ಮೊದಲಾದ ತಂತ್ರಗ್ರಂಥಗಳಲ್ಲಿ ರಾಮನ ಉಪಾಸನೆಯನ್ನು ಕಾಣಬಹುದು. ಆದ್ದರಿಂದ ಇದು ತಾಂತ್ರಿಕವಾದ ಮಂತ್ರವೂ ಕೂಡ ಆಗಿದೆ ಎಂಬುದನ್ನು ನಾವು ಅಲ್ಲಗಳೆಯುವಂತಿಲ್ಲ. ಹಾಗಾಗಿ ಈ ಎರಡು ವಿಧದಿಂದಲೂ ರಾಮನ ಉಪಾಸನೆ ವಿಧ್ಯುಕ್ತವಾದುದೇ ಆಗಿದೆ.
ಅದೇನೆ ಇರಲಿ, ಚೈತ್ರ ಶುಕ್ಲ ನವಮಿಯು ಶ್ರೀರಾಮಚಂದ್ರ ಪ್ರಭುವಿನ ಅವತಾರದ ಪುಣ್ಯಪರ್ವ. ಅದನ್ನು ಯಾವ ರೀತಿಯಲ್ಲಿ ಆರಾಧಿಸಿದರೂ ಅದು ಶ್ರೇಷ್ಠವೇ. ಅದರಲ್ಲೂ ವಿಶೇಷವಾಗಿ ಶ್ರೀರಾಮನ ಮಂತ್ರೋಪಾಸನೆ ಅತ್ಯಂತ ಶೀಘ್ರಫಲವನ್ನು ಕೊಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಪುರಂದರದಾಸರೇ ಮೊದಲಾದ ಜ್ಞಾನಿವರೇಣ್ಯರು "ರಾಮ ಎಂಬ ಎರಡಕ್ಷರದ ಮಹಿಮೆಯನ್ನು ತಾವೇನು ಬಲ್ಲಿರಿ?" ಎಂದು ರಾಮಮಹಿಮೆಯನ್ನು ಕೊಂಡಾಡಿದ್ದಾರೆ. ಇಷ್ಟೆ ಅಲ್ಲ ಎಷ್ಟೋ ಸಾಧುಸಂತರು ರಾಮನನ್ನು ಜಪಿಸಿ, ತಪ್ಪಿಸಿ, ಧ್ಯಾನಿಸಿ, ಪೂಜಿಸಿ ರಾಮಮಯವಾಗಿದ್ದಾರೆ. ಆದ್ದರಿಂದ ಈ ಪರ್ವಕಾಲ ರಾಮಮಂತ್ರದ ಮಹಿಮೆಯನ್ನು ತಿಳಿದು ರಾಮಮಯವಾಗುವುದಕ್ಕೆ ಅತ್ಯಂತ ಶುಭಕಾಲ

ಸೂಚನೆ : 07
/04/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಆದರ್ಶ ಸತಿಯ ದಿಟ್ಟರೀತಿ, ಧರ್ಮಪ್ರೀತಿ (Adarsha Satiya Dittariti, Dharmapreeti)

ಲೇಖಕರು : ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)


ರಾಮಾಯಣವೆಂದರೆ ಸೀತೆಯ ಚರಿತ್ರವೆಂದೇ ವಾಲ್ಮೀಕಿಮಹರ್ಷಿಗಳು ಹೇಳುತ್ತಾರೆ (ಸೀತಾಯಾಃ ಚರಿತಂ ಮಹತ್). ಜನಕಮಹಾರಾಜನ ಜ್ಯೇಷ್ಠಪುತ್ರಿಯೂ ದಶರಥಮಹಾರಾಜನ ಹಿರಿಯ ಸೊಸೆಯೂ ಆಗಿದ್ದ ಸೀತಾದೇವಿ, ರಾಮನ ಪತ್ನಿಯ ರೂಪದಲ್ಲಿ ತನ್ನ ಸತೀತ್ವವನ್ನು ಮೆರೆದಿರುವುದರಲ್ಲಿ ಸಂಶಯವೇ ಇಲ್ಲ. ಇದನ್ನು ಒಂದೇ ಪ್ರಸಂಗದ ಮೂಲಕ ಕಂಡುಕೊಳ್ಳಬಹುದು, ಸ್ಥಾಲೀಪುಲಾಕನ್ಯಾಯದಿಂದ, ಎಂದರೆ ಅಕ್ಕಿ ಬೆಂದಿದೆಯೇ ಇಲ್ಲವೋ ಎಂಬುದನ್ನು ಒಂದೇ ಅಗುಳನ್ನು ಪರೀಕ್ಷಿಸಿ ತಿಳಿದುಕೊಂಡಂತೆ.

ರಾಮನ ಯೌವರಾಜ್ಯಾಭಿಷೇಕ ತಪ್ಪಿಹೋಗಿ, ಅವನಿಗೆ ವನವಾಸದ ಆಜ್ಞೆಯಾಗುವುದು - ಇದು ರಾಮಾಯಣದ ಒಂದು ಮುಖ್ಯ ಘಟ್ಟ. ಆ ಮಹಾತ್ಮನಾದರೋ ಒಂದಿಷ್ಟೂ ಮನೋವಿಕಾರವಿಲ್ಲದೇ ಆ ಆಜ್ಞೆಯನ್ನು ಸ್ವೀಕರಿಸಿದನು. ತನ್ನ ತಾಯಿಯಾದ ಕೌಸಲ್ಯೆಗೆ ವಿಷಯ ತಿಳಿಸಿದಾಗ ಅವಳ ದುಃಖಕ್ಕೆ ಕೊನೆಯೇ ಇಲ್ಲದಾಯಿತು. ಅತ್ತ ಲಕ್ಷ್ಮಣನೂ ಕೋಪಗೊಂಡನು. ಕೊನೆಗೆ ರಾಮನು ಬಂದು ತಿಳಿಸಿದ್ದು ಸೀತೆಗೆ. ಅವಳನ್ನು ನೋಡಿದಾಕ್ಷಣ ರಾಮನಿಗೆ ದುಃಖವು ಉಮ್ಮಳಿಸಿತು - ತನ್ನ ಸಲುವಾಗಿಯಲ್ಲ, ಅವಳ ಸಲುವಾಗಿ! ತನಗೆ ತಂದೆಯಿತ್ತ ಆಜ್ಞೆಯನ್ನು ರಾಮನು ತಿಳಿಸಿದನು. ಸೀತೆಯು ಮುಂದೆ ತನ್ನ ಪತಿಯ ಅನುಪಸ್ಥಿತಿಯಲ್ಲಿ ಯಾರ ಕೋಪಕ್ಕೂ ಸಿಕ್ಕಿಹಾಕಿಕೊಳ್ಳಬಾರದೆಂದರೆ ಅರಮನೆಯಲ್ಲಿ ಹೇಗೆ ನಡೆದುಕೊಳ್ಳಬೇಕು, ಅವಳ ದಿನಚರಿ ಹೇಗಿರಬೇಕು, ಎಂದೆಲ್ಲಾ ಅವಳಿಗೆ ಬುದ್ಧಿವಾದ ಹೇಳಿದನು. ಆಗ ಅವಳ ಮೊದಲ ಪ್ರತಿಕ್ರಿಯೆಯಾದರೂ ಏನು?


ಪ್ರಣಯಕೋಪದಿಂದಲೇ ಅವಳು "ಆರ್ಯಪುತ್ರ, ನೀನು ಹೀಗೆಲ್ಲಾ ಉಪಹಾಸ್ಯ ಮಾಡಬಹುದೇ? ಹೆಂಡತಿಯೊಬ್ಬಳೇ ಗಂಡನ ಭಾಗ್ಯವನ್ನು ಹಂಚಿಕೊಳ್ಳುವವಳು. ಹಾಗಿದ್ದಾಗ, ನಿನಗೆ ವನವಾಸ ಆಜ್ಞೆಯಾಗಿದೆಯೆಂದರೆ, ನನಗೂ ಆಜ್ಞೆಯಾದಂತೆಯೇ! ನಿನಗಿಂತ ಒಂದು ಹೆಜ್ಜೆ ನಾನೇ ಮುಂದೆ ನಡೆಯುತ್ತಾ, ನಿನ್ನ ಹಾದಿಯ ಮುಳ್ಳುಕಡ್ಡಿಗಳನ್ನು ಮೆಟ್ಟುತ್ತಾ ಹೋಗುತ್ತೇನೆ. ನನ್ನ ಮೇಲೆ ಏನಾದರೂ ಕೋಪವಿದ್ದರೆ, ಅದನ್ನೆಲ್ಲ ಮರೆತು ನನ್ನನ್ನು ನಿನ್ನೊಡನೆ ಕರೆದುಕೊಂಡು ಹೋಗು. ಎಂತಹ ಅರಣ್ಯವೇ ಆಗಿರಲಿ, ಸುಖವಾಗಿ ನಿನ್ನ ಸೇವೆ ಮಾಡಿಕೊಂಡು ಅಲ್ಲಿರುತ್ತೇನೆ. ನೀನು ಆಹಾರ ತೆಗೆದುಕೊಂಡಾಗಲೇ ನಾನೂ ತೆಗೆದುಕೊಳ್ಳುತ್ತೇನೆ. ನದಿ-ಪರ್ವತ-ಕೊಳ-ವನ ಎಲ್ಲವನ್ನೂ ನೋಡುವ ಆಸೆ ಇದೆ. ನಿನ್ನಂತಹ ಧೀಮಂತನಿರುವಾಗ ನಿರ್ಭಯವಾಗಿ ಎಲ್ಲವನ್ನೂ ನೋಡುತ್ತೇನೆ" ಎಂದು ಹೇಳಿ, "ನೀನಿಲ್ಲದಿದ್ದರೆ ಸ್ವರ್ಗದಲ್ಲೂ ನಾನು ವಾಸಮಾಡೆ. ನೀನು ಬಿಟ್ಟುಹೋದರೆ ನನ್ನ ಸಾವು ನಿಶ್ಚಿತ" ಎಂದು ತನ್ನ ನಿಶ್ಚಯವನ್ನು ತಿಳಿಸುತ್ತಾಳೆ ತನ್ನ ಪತಿಗೆ. ತನ್ನ ಮೇಲಿನ ಪ್ರೀತಿಯಿಂದ ಸೀತೆ ಹೀಗೆಲ್ಲಾ ಹೇಳುತ್ತಿದ್ದು, ಅವಳಿಗೆ ವನವಾಸದ ಕಷ್ಟಗಳ ಎಣಿಕೆಯೇ ಇಲ್ಲವೆಂದು ಬಗೆದು ಶ್ರೀರಾಮನು ಅದನ್ನೂ ಬಣ್ಣಿಸಿದ್ದಾಯಿತು. ಹೀಗೆ ಬಹಳ ಹೊತ್ತು ರಾಮನ ಕಡೆಯಿಂದ ಅವಳನ್ನು ತಡೆಯಲೂ, ಸೀತೆಯ ಕಡೆಯಿಂದ ಅದನ್ನು ಮೀರಿ ಬರಲೂ ಪ್ರಯತ್ನಗಳು ನಡೆದವು. ಕೊನೆಗೆ, ಸೀತೆಯು, "ನನ್ನ ತಂದೆ ಮಿಥಿಲಾಧಿಪನು ಗಂಡುವೇಷದ ಹೆಣ್ಣನ್ನು ಅಳಿಯನಾಗಿ ಪಡೆದನೆ, ರಾಮ?" ಎಂದು ಮುಂತಾಗಿ ಮೂದಲಿಸಿ, ಕೊನೆಗೆ ಗೋಳಿಟ್ಟಳು. ಸರ್ವವಿಧದಲ್ಲೂ ತಾನು ರಾಮನ ಜೊತೆಗೇ ಹೋಗಬೇಕೆಂಬ ಆಗ್ರಹ ತೋಡಿಕೊಂಡ ನಂತರ, ಕೊನೆಗೆ ರಾಮನೂ ಒಪ್ಪಬೇಕಾಯಿತು. ತದನಂತರದ ಕಥೆಯು ತಿಳಿದೇ ಇದೆ.


ಇಲ್ಲಿ ರಾಮನು ಸೀತೆಯ ಸೌಕುಮಾರ್ಯದ ಬಗ್ಗೆ ಚಿಂತಿಸಿ, ಅಲ್ಲಿಯ ದುಃಖಪರಂಪರೆಯನ್ನು ಬಣ್ಣಿಸುತ್ತಾನೆ. ಕಾಡುಮೇಡುಗಳಲ್ಲಿರುವುದು, ದೇವಪಿತೃಕಾರ್ಯಗಳನ್ನೂ ಅತಿಥಿಸತ್ಕಾರವನ್ನೂ ವಿಧಿಪೂರ್ವಕವಾಗಿ ಮಾಡುವುದು, ಘೋರಸರ್ಪಗಳ ಕಾಡುಪ್ರಾಣಿಗಳ ಕಾಟ ತಡೆಯುವುದು, ದರ್ಭೆಯ ಮೇಲೆ ಮಲಗುವುದು - ಇವೆಲ್ಲ ಸುಲಭವೇ ಅಲ್ಲ ಇತ್ಯಾದಿಯಾಗಿ ರಾಮನ ಯೋಚನೆ. ಸೀತೆಗೆ ಮಾತ್ರ ತನ್ನ ಧರ್ಮವೊಂದರ ಮೇಲೇ ಗಮನ - ಪತಿಯಿದ್ದೆಡೆಯೇ, ಅವನಿಗೆ ಅನುಕೂಲವಾಗುವಂತೆ ತಾನಿರಬೇಕು - ಎಂದು. ರಾಮನು ರಾಜ್ಯಾಭಿಷೇಕ ತಪ್ಪಿದ್ದರ ಬಗ್ಗೆ ದುಃಖಿಸಲಿಲ್ಲವೆಂದರೆ ಸೀತೆಯೂ ದುಃಖಿಸಲಿಲ್ಲ. ಅವಳು ಪಡಬೇಕಾದ ಕಷ್ಟವನ್ನು ಯೋಚಿಸಿ ರಾಮನು ದುಃಖಿತನಾದನೆಂದರೆ ಅವಳೂ ರಾಮನ ಕಷ್ಟದಲ್ಲಿ ತಾನು ಭಾಗಿಯಾಗುವುದನ್ನು ರಾಮ ತಪ್ಪಿಸುತ್ತಿದ್ದಾನಲ್ಲಾ ಎಂದು ದುಃಖಿಸುತ್ತಾಳೆ. ತನ್ನ ಕರ್ತವ್ಯ, ಧರ್ಮಗಳನ್ನಾಚರಿಸಲು ರಾಮನು ಅರಣ್ಯಕ್ಕೆ ಹೊರಟಿದ್ದರೆ ಆಕೆಯೂ ಅಷ್ಟೆ, ತನ್ನ ಧರ್ಮಕ್ಕಾಗಿಯೂ, ಪತಿಯ ಮೇಲಿನ ಪ್ರೀತಿಯಿಂದಲೂ ಅರಣ್ಯಕ್ಕೆ ಹೊರಡಲು ಹಾತೊರೆಯುತ್ತಿದ್ದಾಳೆ. ಇವಳಿಗೆ ಅಲ್ಲಿ ಕಷ್ಟವಾಗಬಹುದೆಂದು ರಾಮನು ಊಹಿಸಿಕೊಂಡರೆ, ತನಗೆ ನದೀ-ವನಗಳನ್ನು ನೋಡುವ ಆಸೆಯಿದೆಯೆಂದೂ ಅವನ ದುಗುಡವನ್ನು ಶಮನ ಮಾಡುವಂತೆ ಹೇಳುತ್ತಾಳೆ. ಇಬ್ಬರಿಗೂ ಪರಸ್ಪರ ಅನುರಕ್ತಿ ಎಷ್ಟಿದೆಯೆಂಬುದು ಇಲ್ಲೇ ತಿಳಿಯುತ್ತದೆ. ಮುಂದೆ ಸುಂದರಕಾಂಡದಲ್ಲಿ ಹನುಮಂತನೇ ಹೇಳುವುದೇನೆಂದರೆ: "ರಾಘವೋಽರ್ಹತಿ ವೈದೇಹೀಂ ತಂ ಚೇಯಮ್ ಅಸಿತೇಕ್ಷಣಾ". ಅರ್ಥಾತ್ "ವೈದೇಹಿಯನ್ನು ಪಡೆಯಲು ರಾಘವನು ಅರ್ಹ, ಅವನನ್ನು ಪಡೆಯಲು ಈ ಕಪ್ಪುಕಣ್ಗಳುಳ್ಳವಳು ಅರ್ಹಳು" - ಎಂದು ಅವರ ಪರಸ್ಪರ ಆನುರೂಪ್ಯವನ್ನು ಆತ ಮೆಚ್ಚಿಕೊಳ್ಳುತ್ತಾನೆ. ಚಂಪೂರಾಮಾಯಣದಲ್ಲಿ ಭೋಜರಾಜನು ವರ್ಣನೆ ಮಾಡಿರುವ ರಾಮ-ಸೀತೆಯರ ಪರಸ್ಪರ ಸಂಬಂಧವೇ ಸೀತೆ ಎಂತಹವಳು ಎಂಬುದರ ಬಗ್ಗೆ ಬೆಳಕು ಹರಿಸುತ್ತದೆ. ಸೀತಾವಿರಹದಿಂದ ಬಳಲಿರುವ ರಾಮ, ಸೀತೆಯು ತನಗೆ ಏನೇನಾಗಿದ್ದಳು ಎಂದು ಹೀಗೆ ಹೇಳಿಕೊಳ್ಳುತ್ತಾನೆ:


ಆಧೌ ಸಿದ್ಧೌಷಧಿರಿವ ಹಿತಾ, ಕೇಲಿಕಾಲೇ ವಯಸ್ಯಾ,

ಪತ್ನೀ ತ್ರೇತಾಯಜನ-ಸಮಯೇ, ಕ್ಷತ್ರಿಯಾಣ್ಯೇವ ಯುದ್ಧೇ, |

ಶಿಷ್ಯಾ ದೇವ-ದ್ವಿಜ-ಪಿತೃ-ಸಮಾರಾಧನೇ, ಬಂಧುರಾರ್ತೌ,

- ಸೀತಾ ಸಾ ಮೇ ಶಿಶಿರಿತ-ಮಹಾಕಾನನೇ ಕಾ ನ ಜಾತಾ?! ||


ಅರ್ಥಾತ್ - "ಮನೋವೇದನೆಗಳಿದ್ದಾಗ ಸಿದ್ಧೌಷಧಿಯಂತೆ ಹಿತಳಾದವಳು. ಕ್ರೀಡಾಕಾಲದಲ್ಲಿ ಸ್ನೇಹಿತೆ. ಯಜ್ಞ ಮಾಡುವ ಕಾಲದಲ್ಲಿ ಅವಳು ಪತ್ನೀ. ಯುದ್ಧಕಾಲದಲ್ಲಿ ಕ್ಷತ್ರಿಯಾಣೀ (ಎಂದರೆ ಕ್ಷತ್ರಿಯಸ್ತ್ರೀ). ದೇವಕಾರ್ಯ, ಪಿತೃಕಾರ್ಯ ಇತ್ಯಾದಿಗಳಲ್ಲಿ ಶಿಷ್ಯೆ. ದುಃಖದಲ್ಲಿ ಬಂಧು. ಆ ಸೀತೆ ನನಗೆ ದೊಡ್ಡ ಕಾಡಿನಲ್ಲಿ ಏನು ತಾನೇ ಆಗಲಿಲ್ಲ!" ಲೌಕಿಕವಾಗಿ ಕಂಡರೆ ಆತನಿಗೆ ಎಲ್ಲ ರೀತಿಯಲ್ಲೂ ಹಿತಳೂ ಅನುಕೂಲಳೂ ಆಗಿದ್ದವಳು ಅವಳು. ಪಾರಮಾರ್ಥಿಕವಾಗಿ ಕಂಡರೆ, ಶ್ರೀರಂಗಮಹಾಗುರುಗಳ ಮಾತಿನಲ್ಲಿ, ಸೀತೆಯಾದರೋ ಪುರುಷನ ಸಂಕಲ್ಪಕ್ಕೆ ಹೊಂದಿಕೊಂಡ ಪರಾಪ್ರಕೃತಿ, ಮತ್ತು ಹಾಗಾಗಿಯೇ ಸ್ತ್ರೀಯರಿಗೆ ಆದರ್ಶ.  ಪ್ರಿಯ ನುಡಿವ ಸಖಿಯಾಗಿಯೂ, ಹಿತ ನುಡಿವ ಮಂತ್ರಿಯಾಗಿಯೂ ಔಚಿತ್ಯಪೂರ್ಣವಾಗಿ ತನ್ನ ಧರ್ಮದಲ್ಲಿ ನಡೆಯುತ್ತಿದ್ದ ಸೀತೆಯು ನಿಜಕ್ಕೂ ರಾಮನ ಸಹಧರ್ಮಚಾರಿಣಿಯೇ ಸರಿ. ಪತಿಯೊಂದಿಗೆ ಧರ್ಮದ ಹಾದಿಯಲ್ಲಿ ನಡೆಯುವುದೆಂದೇ ಆ ಪದದ ಅರ್ಥ. ಕಾಲದ ಎಲ್ಲೆಗಳಿಗೆ ಸಿಲುಕದ ಆದರ್ಶವು ಇದೇ ಅಲ್ಲವೇ?


ಸೂಚನೆ : 07/04/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವಾಲ್ಮೀಕಿರಾಮಾಯಣದ ಸಂಕ್ಷಿಪ್ತ ಪಕ್ಷಿನೋಟ (Valmikiramayaṇada Sanksipta Paksinota)

ಲೇಖಕರು:ವಾದಿರಾಜ್ ಪ್ರಸನ್ನ

(ಪ್ರತಿಕ್ರಿಯಿಸಿರಿ lekhana@ayvm.in)



ಆದಿಕವಿ ವಾಲ್ಮೀಕಿ ರಾಮಾಯಣ ಮಹಾಕಾವ್ಯದಲ್ಲಿ 24,000 ಶ್ಲೋಕಗಳು, ಏಳು ಕಾಂಡಗಳಿವೆ. ಈ ಕಾಂಡಗಳಲ್ಲಿ ರಾಮಾಯಣದ ಕಥೆ ಸಂಪೂರ್ಣ ಮಾನವಾದರ್ಶವಾಗಿ ನೈತಿಕ, ಧಾರ್ಮಿಕ, ರಾಜಕಾರಣ, ಸತ್ಯನಿಷ್ಠೆ, ಪಿತೃವಾಕ್ಯಪರಿಪಾಲನೆ ಇತ್ಯಾದಿ ಹಲವಾರು  ವಿಷಯಗಳಲ್ಲಿ ಹರಿದಿದೆ. ಈ ಲೇಖನದಲ್ಲಿ ಪ್ರತಿಯೊಂದು ಕಾಂಡದ ಸಂಕ್ಷಿಪ್ತ ವಿಷಯಗಳನ್ನು ಸ್ಮರಿಸಿಕೊಳ್ಳಲಾಗಿದೆ. 


ತಪಸ್ಸು ಸ್ವಾಧ್ಯಾಯಗಳಲ್ಲಿ ನಿರತರಾದ ಶಾಸ್ತ್ರಾಧ್ಯಯನದಲ್ಲಿ ಶ್ರೇಷ್ಠರೆನಿಸಿದ ನಾರದ ಮಹರ್ಷಿಗಳನ್ನು ಮಹಾ ತಪಸ್ವಿಯಾದ ವಾಲ್ಮೀಕಿ ಮುನಿಗಳು ಪ್ರಶ್ನಿಸಿದರು-ಈ ಕಾಲದಲ್ಲಿ ಸಮಸ್ತ ಸದ್ಗುಣ ಸಂಪನ್ನನಾದವನು,ವೀರ್ಯವಂತ, ಧರ್ಮ-ಅಧರ್ಮಗಳನ್ನು ತಿಳಿದವನು,ಇತರರ ಉಪಕಾರಗಳನ್ನು ಬೆಟ್ಟದಷ್ಟು ಭಾವಿಸಿ, ಅವರು ಎಷ್ಟೇ ಅಪಕಾರಗಳನ್ನು ಮಾಡಿದರೂ ಮನಸ್ಸಿನಲ್ಲಿಟ್ಟುಕೊಳ್ಳದವನು, ಸುಳ್ಳಾಡದವನು, ಧೃಡಪ್ರತಿಜ್ಞನು, ಕುಲಾಚಾರವಂತನು, ಸಮಸ್ತ ಪ್ರಾಣಿಗಳ ಹಿತವನ್ನೇ ಬಯಸುವವನು, ಶಾಸ್ತ್ರವೇತ್ತನು, ಅಪ್ರತಿಮ ಸಾಹಸಿಯು, ನೋಡಿದವರಿಗೆಲ್ಲ ಸಮಾನ ಪ್ರೀತಿಯುಂಟುಮಾಡುವವನು, ಧೈರ್ಯವಂತ, ಕೋಪವನ್ನು ವಶದಲ್ಲಿಟ್ಟುಕೊಂಡವನು, ಅದ್ಭುತ ದೆಹಕಾಂತಿಯುಳ್ಳವನು, ಇತರರ ಗುಣಗ್ರಾಹಿ, ಇತ್ಯಾದಿ ಗುಣ ವಿಶೇಷವುಳ್ಳ ಮನುಷ್ಯನು ಯಾರಾದರೂ ಇದ್ದಾನೆಯೇ ಎಂಬ ಪ್ರಶ್ನೆ. ಇದಕ್ಕೆ ನಾರದರು- ಇಷ್ಟು  ಗುಣಗಳೂ ಸೇರಿದ ಒಬ್ಬ ವ್ಯಕ್ತಿ ಇದ್ದಾನೆ ಎಂದು ಮೊದಲುಮಾಡಿ ಶ್ರೀರಾಮನ ಚರಿತ್ರೆಯನ್ನು ಸಂಕ್ಷೇಪವಾಗಿ ಹೇಳಿ, ಶ್ರೀ ರಾಮಾಯಣ ಮಹಾ ಕಾವ್ಯವನ್ನು ರಚಿಸಲು ವಾಲ್ಮೀಕಿ ಮುನಿಯನ್ನು ಪ್ರೇರಿಸುತ್ತಾರೆ.


1. ಬಾಲಕಾಂಡ 

ಈ ಕಾಂಡದ ಶೀರ್ಷಿಕೆಯಂತೆ  ಶ್ರೀರಾಮನ ಜನನ ಮತ್ತು ಬಾಲ್ಯದ ಕಥೆಯನ್ನು ವಿವರಿಸುತ್ತದೆ. ರಾಮನ ಜನನಕ್ಕೆ ಮುಂಚಿನ ಸನ್ನಿವೇಶಗಳನ್ನು ವಿವರಿಸಲಾಗಿದೆ. ಅಂದರೆ ಅಯೋಧ್ಯಾ ಪಟ್ಟಣದ ಇಕ್ಷ್ವಾಕು ವಂಶದ ಚಕ್ರವರ್ತಿ ದಶರಥನ ಸಂತಾನ ವಿಹೀನತೆಯ ದುಃಖ, ಋಷ್ಯಶೃಂಗ ಮುನಿಗಳ ನೇತೃತ್ವದಲ್ಲಿ ಪುತ್ರಕಾಮೇಷ್ಟಿ ಯಜ್ಞ, ನಂತರ, ದಶರಥನಿಗೆ– ರಾಮ, ಲಕ್ಷ್ಮಣ, ಭರತ ಮತ್ತು ಶತ್ರುಘ್ನ ನಾಲ್ಕು ಶ್ರೇಷ್ಠ ಪುತ್ರರ ಜನನ. ಕೆಲಕಾಲದ ನಂತರ ವಿಶ್ವಾಮಿತ್ರ ಮುನಿಯು ರಾಮ ಮತ್ತು ಲಕ್ಷ್ಮಣರನ್ನು ತನ್ನೊಂದಿಗೆ ಯಜ್ಞರಕ್ಷಣೆಗಾಗಿ ಕೊಂಡೊಯ್ದು, ಅಲ್ಲಿನ ರಾಕ್ಷಸರನ್ನು ಸಂಹಾರಮಾಡಿಸಿ

ವರು. ನಂತರ, ರಾಮನು ಸೀತಾಸ್ವಯಂವರದಲ್ಲಿ ಶಿವಧನುಸ್ಸನ್ನು ಮುರಿದು ಸೀತೆಯನ್ನು ವರಿಸುತ್ತಾನೆ.


2. ಅಯೋಧ್ಯಾಕಾಂಡ 

ಇದು ರಾಮನು ಅಯೋಧ್ಯೆಯಲ್ಲಿ ಹೇಗೆ ಜನಾನುರಾಗಿಯಾಗಿದ್ದನು ಎಂಬುದನ್ನು ವಿವರಿಸುತ್ತದೆ. ದಶರಥನು ರಾಮನ ರಾಜ್ಯಾಭಿಷೇಕವನ್ನು ಘೋಷಿಸುತ್ತಾನೆ. ಆದರೆ, ಕೈಕೆಯಿ ತನ್ನ ಎರಡು ವರಗಳನ್ನು ಪ್ರಯೋಗಿಸಿ, ರಾಮನನ್ನು 14 ವರ್ಷಗಳ ಅರಣ್ಯವಾಸಕ್ಕೆ ಕಳುಹಿಸುತ್ತಾಳೆ ಮತ್ತು ಭರತನನ್ನು ರಾಜನನ್ನಾಗಿ ಮಾಡಲು ಒತ್ತಾಯಿಸುತ್ತಾಳೆ. ಶ್ರೀರಾಮನು ತನ್ನ ತಂದೆಯ ಮಾತನ್ನು ಪಾಲಿಸಿ, ಸೀತಾ ಮತ್ತು ಲಕ್ಷ್ಮಣರೊಂದಿಗೆ ಅರಣ್ಯಕ್ಕೆ ತೆರಳುತ್ತಾನೆ.  ಭರತನು ರಾಮನ ರಾಜ್ಯಭಾರವನ್ನು ಸ್ವೀಕರಿಸಲು ನಿರಾಕರಿಸಿ, ರಾಮನ ಶ್ರೀ ಪಾದುಕೆಗಳನ್ನು ಪಡೆದು ಅಯೋಧ್ಯೆಗೆ ಹಿಂದಿರುಗುತ್ತಾನೆ.


3. ಅರಣ್ಯಕಾಂಡ 

ದಂಡಕಾರಣ್ಯದಲ್ಲಿ ಶೂರ್ಪನಖಿಯು ರಾಮನನ್ನು ವಿವಾಹಕ್ಕೆ ಒತ್ತಾಯಿಸಿದಾಗ , ಲಕ್ಷ್ಮಣನು ಆಕೆಯ ಮೂಗನ್ನು ವಿರೂಪಗೊಳಿಸುತ್ತಾನೆ. ಈ ಘಟನೆಯ ನಂತರ, ಶೂರ್ಪನಖಿಯ ಸಹೋದರರಾದ ಖರ, ದೂಷಣ ಮತ್ತು ತ್ರಿಶಿರ ಅವರು ರಾಮನೊಂದಿಗೆ ಯುದ್ಧ ಮಾಡಲಾಗಿ ರಾಮನು ಅವರನ್ನೆಲ್ಲ ಸಂಹರಿಸುತ್ತಾನೆ. ಶೂರ್ಪನಖಿಯ ಪ್ರೇರಣೆಯಿಂದ ರಾವಣನು ಸೀತೆಯನ್ನು ಅಪಹರಿಸಲು ಮಾರೀಚನನ್ನು ಕಳುಹಿಸುತ್ತಾನೆ. ಅವನ ಆಕರ್ಷಕ ಬಂಗಾರದ ಜಿಂಕೆಯ ರೂಪಕ್ಕೆ ಮೋಹಿತಳಾದ ಸೀತೆ ಅದನ್ನು ಬಯಸುತ್ತಾಳೆ. ಇದರ ಬೆನ್ನಟ್ಟಿ ರಾಮ ಹೋದಾಗ ರಾವಣನಿಂದ ಸೀತಾಪಹರಣವಾಗುತ್ತದೆ. ರಾಮ-ಲಕ್ಷ್ಮಣರು ಸೀತೆಯನ್ನು ಹುಡುಕಲು ಪ್ರಯತ್ನಿಸುತ್ತಿರುವಾಗ ಹನುಮಂತನ ಸಹಾಯದಿಂದ ವಾನರರಾಜ ಸುಗ್ರೀವನೊಂದಿಗೆ ಸ್ನೇಹ ಮಾಡುತ್ತಾನೆ. ಹೀಗೆ ಅರಣ್ಯಕಾಂಡದಲ್ಲಿ ರಾಮ, ಸೀತಾ ಮತ್ತು ಲಕ್ಷ್ಮಣರು ಅರಣ್ಯದಲ್ಲಿ 14 ವರ್ಷಗಳ ಕಾಲ ಹೇಗೆ ಕಾಲ ಕಳೆಯುತ್ತಾರೆ ಎಂಬುದನ್ನು ವಿವರಿಸಲಾಗಿದೆ.


4. ಕಿಷ್ಕಿಂಧಾಕಾಂಡ 

ರಾಮನು ಕಿಷ್ಕಿಂಧೆಯಲ್ಲಿ ಸುಗ್ರೀವನ ಅಣ್ಣ ವಾಲಿಯನ್ನು ವಧೆ ಮಾಡಿ ಸುಗ್ರೀವನಿಗೆ ರಾಜ್ಯಾಭಿಷೇಕ ಮಾಡಿಸುತ್ತಾನೆ. ಜಾಂಬವಂತನು,  ಹನುಮಂತನಲ್ಲಿ ಅಡಗಿದ್ದ ಶಕ್ತಿಯನ್ನು ಜ್ಞಾಪಿಸುತ್ತಾನೆ. ಧೀರ, ವೀರ, ಶೂರ ಹನುಮಂತನು ಲಂಕೆಗೆ ಹೋಗಿ, ಸೀತೆಯ ಸ್ಥಳವನ್ನು ಪತ್ತೆಹಚ್ಚಲು ಸಿದ್ಧತೆ ಮಾಡಿಕೊಳ್ಳುತ್ತಾನೆ.ವಾನರಸೇನೆಗೆ ಮುಂದಿನ ಕಾರ್ಯವಿಧಾನ ರೂಪಿಸಲು ಸುಗ್ರೀವನೊಂದಿಗೆ ರಾಮನು ನಿರ್ಧಾರ ಮಾಡುತ್ತಾನೆ.


5. ಸುಂದರಕಾಂಡ 

ಸಮುದ್ರ ಲಂಘನ: ಹನುಮಂತನು ಮಹಾಸಮುದ್ರವನ್ನು ಹಾರಿ ಲಂಕೆಗೆ ಪ್ರವೇಶಿಸುತ್ತಾನೆ. ಮಾರ್ಗಮಧ್ಯೆ, ಮೈನಾಕನ ಆತಿಥ್ಯವನ್ನು ವಿನಮ್ರವಾಗಿ ತಿರಸ್ಕರಿಸಿ, ಸುರಸೆಯ ಪರೀಕ್ಷೆಯಲ್ಲಿ ಗೆದ್ದು, ಸಿಂಹಿಕೆ ಎಂಬ ರಾಕ್ಷಸಿಯರನ್ನು ಸಂಹರಿಸುತ್ತಾನೆ. ಹನುಮಂತನು ಲಂಕೆಗೆ ತೆರಳಿ, ಅಶೋಕವಾಟಿಕೆಯಲ್ಲಿ ಸೀತೆಯನ್ನು ಪತ್ತೆ ಮಾಡುತ್ತಾನೆ. ಸೀತಾದೇವಿಯ ಸಂದರ್ಶನ: ಅಶೋಕವನದಲ್ಲಿ, ಸೀತಾದೇವಿ ದುಃಖಿತರಾಗಿರುವುದನ್ನು ಕಂಡು, ಹನುಮಂತನು ರಾಮನ ಸಂದೇಶವನ್ನು ಅವಳಿಗೆ ನೀಡುತ್ತಾನೆ. ರಾವಣನನ್ನು ಎಚ್ಚರಿಸುತ್ತಾನೆ. ಲಂಕೆಯನ್ನು ಧ್ವಂಸ: ರಾವಣನ ದಂಡನಾಯಕರನ್ನು ಹನುಮಂತನು ಸೋಲಿಸುತ್ತಾನೆ, ಲಂಕೆಯನ್ನು ಸುಡುತ್ತಾನೆ ಮತ್ತು ರಾಮನ ಉಂಗುರ ಕೊಟ್ಟು , ಸೀತೆಯ ಚೂಡಾಮಣಿಯೊಂದಿಗೆ ಆ ಸ್ಥಳದ ಮಾಹಿತಿ ತರುತ್ತಾನೆ. ಈ ರೀತಿಯಾದ ಅನೇಕ ಹನುಮಂತನ ಸಾಹಸ ಮತ್ತು ಭಕ್ತಿಯ ವಿವರಣೆ ಸುಂದರಕಾಂಡದಲ್ಲಿದೆ. 


6. ಯುದ್ಧಕಾಂಡ 

ರಾಮನು ವಾನರ ಸೇನೆಯೊಂದಿಗೆ ಸೇತುವೆಕಟ್ಟಿ ಸಮುದ್ರದಾಟಿ ಲಂಕೆಗೆ ಪ್ರಯಾಣ. ರಾಮ- ರಾವಣ ಯುದ್ಧ ಆರಂಭವಾಗುತ್ತದೆ.  ಇಂದ್ರಜಿತ್, ಕುಂಭಕರ್ಣ ಸಂಹಾರ. ಇತ್ತ ರಾವಣನನ್ನು ಶ್ರೀರಾಮನು ಸಂಹಾರ ಮಾಡುತ್ತಾನೆ. ರಾಮನು ಸೀತೆಯನ್ನು ಮುಕ್ತಗೊಳಿಸುತ್ತಾನೆ, ಆದರೆ ಜನರ ಸಂಶಯ ನಿವಾರಿಸಲು ಅಗ್ನಿ ಪರೀಕ್ಷೆ ಮಾಡಿಸುತ್ತಾನೆ. ರಾಮನು ಅಯೋಧ್ಯೆಗೆ ಮರಳಿದ ಮೇಲೆ ಪಟ್ಟಾಭಿಷೇಕವಾಗುತ್ತದೆ . ಧರ್ಮಯುದ್ಧ ಮತ್ತು ವಿಜಯದ ವಿವರಣೆ ಈ ಯುದ್ಧಕಾಂಡದಲ್ಲಿದೆ.


7. ಉತ್ತರಕಾಂಡ 

ಸೀತಾಪರಿತ್ಯಾಗ: ಶ್ರೀರಾಮನು ಸೀತೆಯನ್ನು ವಾಲ್ಮೀಕಿಮುನಿಯ ಆಶ್ರಮಕ್ಕೆ ಕಳುಹಿಸುತ್ತಾನೆ, ಅಲ್ಲಿ ಅವಳಿಗೆ ಲವಕುಶರು ಜನಿಸುತ್ತಾರೆ. ಲವಕುಶರು ರಾಮನ ಬಗ್ಗೆ ಅರಿವಿಲ್ಲದಂತೆ ವಾಲ್ಮೀಕಿಮುನಿಯ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸ ಪಡೆಯುತ್ತಾರೆ. ಲವಕುಶರು ರಾಮನ ಮುಂದೆ ರಾಮಾಯಣವನ್ನು ಹಾಡುತ್ತಾರೆ, ಆಗ ರಾಮನಿಗೆ ಅವರ ಕುರಿತಾದ ಸತ್ಯ ತಿಳಿದು ಬರುತ್ತದೆ. ಸೀತಾ ಭೂಮಾತೆಯ ಒಡಲೊಳಗೆ ಸೇರುತ್ತಾಳೆ. ಕೊನೆಗೆ, ಶ್ರೀರಾಮರು ಸರಯೂ ನದಿಯಲ್ಲಿ ತನ್ನ ಭಕ್ತರೊಂದಿಗೆ ಲೀನವಾಗಿ,  ರಾಮನು ತನ್ನ ಮೂಲ ಧಾಮ ವೈಕುಂಠವನ್ನು ತಲುಪುತ್ತಾನೆ.


ಶ್ರೀಮದ್ರಾಮಾಯಣದಲ್ಲಿನ ಕೇಂದ್ರಬಿಂದು ಶ್ರೀರಾಮ. ಶ್ರೀರಾಮ ನಿಜಕ್ಕೂ ಯಾರು ಎಂಬ ಜಿಜ್ಞಾಸೆಗೆ ಶ್ರೀರಂಗಮಹಾಗುರುಗಳ ಮಾತು ಸ್ಮರಣೀಯ. ಅವರ ವಾಣಿಯಂತೆ, "ಶ್ರೀ ರಾಮನು ಸ್ಥೂಲ ದೃಷ್ಟಿಗೆ ಮನುಷ್ಯ, ಸೂಕ್ಷ್ಮ ದೃಷ್ಟಿಗೆ ದೇವತೆ ಮತ್ತು ಪರಾ ದೃಷ್ಟಿಗೆ ಪರಂಜ್ಯೋತಿ";. ಪರಂಜ್ಯೋತಿಯೇ ಲೋಕಹಿತಕ್ಕಾಗಿ ಅವತರಿಸಿ ಬರುವುದಿದೆ. "ಅವತಾರ ಎಂದರೆ ಇಳಿದುಬರುವುದು.ತನ್ನ ಮೂಲರೂಪದ ನೆನಪಿನೋಡನೆಯೇ, ತನ್ನ ಸ್ವಸ್ವರೂಪಜ್ಞಾನದೊಡನೆಯೇ ಇಳಿದು ಬರುವುದು". ಹಾಗೆ ಅವತರಿಸಿದ ಶ್ರೀರಾಮ ಲೋಕದಲ್ಲಿ , ಪರಮಾದರ್ಶಸ್ಥಾಪಿಸಿರುವುದನ್ನು ಪುಜ್ಯರಾದ ವಾಲ್ಮೀಕಿ ಮಹರ್ಷಿಗಳು ಯಥಾವತ್ತಾಗಿ, ರಮಣೀಯವಾಗಿ ಚಿತ್ರಿಸಿದ್ದಾರೆ. ವಾಲ್ಮೀಕಿ ರಾಮಾಯಣವು ಧರ್ಮ, ನೈತಿಕತೆ, ಭಕ್ತಿ, ರಾಜಕೀಯನೀತಿ, ತ್ಯಾಗ, ಪ್ರೀತಿಯಂತಹ ಮಹತ್ವದ ತತ್ವಗಳನ್ನು ಬೋಧಿಸುತ್ತದೆ. ಈ ಮಹಾಕಾವ್ಯವು ಸಮಸ್ತಹಿತಕ್ಕಾಗಿ ಸ್ವಂತ ಹಿತಾಸಕ್ತಿಗಳನ್ನು ಬದಿಗಿಡುವ ಪಾಠವನ್ನು ಸಾರುತ್ತಿದೆ. ಧರ್ಮಶ್ರದ್ಧೆ, ಮತ್ತು ಸಮಾಜದ ಯೋಗ್ಯ ಜೀವನಶೈಲಿಯನ್ನು ಸಾರುತ್ತದೆ. ರಾಮನ ಜೀವನದ ಆದರ್ಶ, ಪರೋಪಕಾರ, ಹೀಗೆ ಅಗಣಿತವಾದ ಗುಣಗಳು ಅವಿಸ್ಮರಣೀಯ. ಎಂದೆಂದಿಗೂ ಲೋಕದ ಆದರ್ಶ. ಶ್ರೀ ರಾಮಾಯಣದ ಕಥಾ ಶ್ರವಣ ನಮ್ಮೆಲ್ಲರ ಜೀವನಕ್ಕೆ ಸ್ಫೂರ್ತಿಯನ್ನು ಕೊಟ್ಟು ಸನ್ಮಾರ್ಗದಲ್ಲಿ ನಾವೆಲ್ಲಾ ನಡೆಯಲು ಪ್ರೇರಿಸಲಿ ಎಂದು ಆ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಪ್ರಭುವನ್ನು ಪ್ರಾರ್ಥಿಸಿ ಅವನ ಅಡಿದಾವರೆಗಳಿಗೆ ಈ ಕಿರುಬರಹವನ್ನು ಸಮರ್ಪಿಸುತ್ತೇನೆ.


ಸೂಚನೆ : 07/04/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ 58 ಕೃಷ್ಣನೇ ನನ್ನ ಸರ್ವಸ್ವ! (Krishakarnamrta 58)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಮೋಸಗಾರನೊಬ್ಬನನ್ನು ಹುಡುಕುತ್ತಿದ್ದೇವೆ - ಎನ್ನುತ್ತಾನೆ, ಲೀಲಾಶುಕ. ಏನೋ ರಾಜಭಟರಿಗೆ, ಎಂದರೆ ಪೋಲೀಸರಿಗೆ, ಹಿಡಿದುಕೊಡಲೇನೋ ಎಂದು ಭಾವಿಸಬೇಡಿ. ಏಕೆಂದರೆ ಬಹಳ ವಿಭಿನ್ನವಾದ ಬಗೆಯ ಕಿತವ ಈತ. ಕಿತವನೆಂದರೆ ಕಪಟಿ, ವಂಚಕ.

ಇಂದಿನ ಕಾಲದಲ್ಲಿ ಹಾದಿಯಲ್ಲೇ ಸಿಸಿಟಿವಿ ಕ್ಯಾಮರಾಗಳುಂಟು, ಅನೇಕರ ಕೈಯಲ್ಲಿ ಮೊಬೈಲುಂಟು. ಈಗ ಒಂದೈವತ್ತು ವರ್ಷಗಳ ಹಿಂದೆ ಕೂಡ ಇವು ಅಲಭ್ಯವಾಗಿದ್ದವಷ್ಟೆ? ಹಾಗಿದ್ದಾಗ ಯಾರಾದರೂ ಕಳ್ಳನನ್ನೋ ವಂಚಕನನ್ನೋ ಹಿಡಿಯಬೇಕೆಂದಿದ್ದರೆ ಏನು ಮಾಡುತ್ತಿದ್ದರು, ಪೋಲೀಸರು? ಯಾರ ಬಳಿ ಆತ ಸುಳಿದಿದ್ದನೋ ಅವರಲ್ಲಿಗೆ ಹೋಗಿ, ಆ ವಂಚಕನ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಿದ್ದರು. ಮೊಟ್ಟಮೊದಲು ಆತನು ಹೇಗಿದ್ದಾನೆಂದು ಕೇಳಿತಿಳಿದುಕೊಳ್ಳಬೇಕಷ್ಟೆ? ಅದಕ್ಕಾಗಿ ಆತನ ವರ್ಣನೆಯನ್ನು ಅವರು ಮಾಡಬೇಕಾಗುವುದು. ಆತ ಹೇಗಿದ್ದಾನೆ? ಎಂದರೆ ಆತನ ಆಕೃತಿ ಯಾವ ತೆರನು? ಆತನ ಜೊತೆಯಲ್ಲಿ ಯಾರಿದ್ದರು? ಅವರು ಹೇಗಿದ್ದಾರೆ? ಆತನ ವೇಷಭೂಷಣಗಳಲ್ಲಿ ವಿಶೇಷಗಳೇನಾದರೂ ಉಂಟೇ? ಮುಖ್ಯವಾಗಿ ಆತನ ಮುಖ ಹೇಗಿದೆ? - ಎಂದೆಲ್ಲ ಕೇಳುವರಲ್ಲವೇ?

ಅದನ್ನೆಲ್ಲಾ ವಿವರವಾಗಿ ಕೊಟ್ಟಿದ್ದಾನೆ, ಲೀಲಾಶುಕ. ಆ ವಂಚಕನ ಕೈಯಲ್ಲಿ ಕೊಳಲಿದೆ. ಆತನ ಆಕೃತಿ ಪ್ರಕೃತಿ-ಸುಕುಮಾರವಾದದ್ದು ಎಂದರೆ ಸಹಜ--ಕೋಮಲವಾದದ್ದು. ಅದರಲ್ಲೂ ಎದ್ದು ತೋರುವುದೆಂದರೆ ಆತನ ಬಾಲ್ಯ-ಲಕ್ಷ್ಮೀ. ಲಕ್ಷ್ಮಿಯೆಂದರೆ ಕಳೆ, ಕಾಂತಿ, ಹೊಳಪು. ಬಾಲ್ಯವೆಂದರೆ ಬಾಲಭಾವ. ಹುಡುಗುತನದ ಕಳೆ ಆತನ ಆಕೃತಿಯಲ್ಲಿ ಎದ್ದುಕಾಣುವಂತಹುದು.

ಇನ್ನು ಆತನ ಜೊತೆಗಾರರಾಗಿರುವವರು ಹೆಂಗೆಳೆಯರು. ಆ ಬಾಲೆಯರಲ್ಲಿ ಸ್ಫುಟವಾಗಿ ತೋರುವುದೆಂದರೆ ಅವರ ಲೀಲೆಗಳೇ. ಲೀಲೆಯೆಂದರೂ ಏನೋ ನರ್ತನ-ವರ್ತನಗಳೆಂದೇ ಅಲ್ಲ. ಅವರ ಅಪಾಂಗಗಳ ಲೀಲೆಗಳೆಂದರೆ ಆಯಿತು. ಅಪಾಂಗವೆಂದರೆ ಕುಡಿಗಣ್ಣೋಟ. ಆ ನೋಟದಲ್ಲಿ ಸಹ ತೋರುವುದೆಂದರೆ ಸರಸತೆ. ಸರಸವೆಂದರೆ ರಸವಿರಬೇಕಲ್ಲ? ಆ ರಸವು ಎಲ್ಲಿಂದ ಬಂದದ್ದು? ಅವರಿಗೆ ಅವನಲ್ಲಿರುವ ಪ್ರಣಯದಿಂದ ಬಂದದ್ದು. ಪ್ರೇಮರಸಕ್ಕಿಂತಲೂ ರಸವೇ? ಆ ರಸದೊಂದಿಗೆ ಬಂದ ಆಲೋಕಿತಗಳ ಸೊಗಸಿಗೆ ಸಮವುಂಟೇ?

ಇನ್ನು ಆತನ ತಲೆಯ ಮೇಲೆ ಒಂದು ವಿಶಿಷ್ಟವಾದ ಅಲಂಕಾರವಿದೆ. ನವಿಲುಗರಿಯೊಂದನ್ನು ತನ್ನ ಶಿಖೆಗೆ ಆತ ಸಿಕ್ಕಿಸ್ಕೊಂಡಿರುತ್ತಾನೆ. ಇನ್ನು ಆತನ ಮುಖವೇ? ಮುಖ-ಮುದ್ರೆಯೇ? - ಎರಡನ್ನೂ ಹೇಳುವುದಾಗುತ್ತದೆ. ಮಧುರವಾದ ವದನ-ಕಮಲ, ಎಂದರೆ ಮುಖ-ಪದ್ಮ, ಆತನದು. ಅದರ ಮೇಲೆ ಅಚ್ಚೊತ್ತಿರುವುದು ಆತನ ಮುಗ್ಧತೆ. ಈ ಮೌಗ್ಧ್ಯ-ಮುದ್ರೆ ಪ್ರಾಯಃ ಇನ್ನೆಲ್ಲೂ ಇರಲಾರದು.

ಹೀಗೆ, ಎಂದರೆ ಈ ಪರಿಯಲ್ಲಿ, ಅಥವಾ ಇಷ್ಟೂ ಕಾರಣಗಳಿಂದಾಗಿ, ಆರ್ದ್ರಾಕಾರವಾಗಿರುವ ಕಳ್ಳ ಆತ. ಆರ್ದ್ರವೆಂದರೆ ಒದ್ದೆ, ಸರಸ. ರಸರಸವಾಗಿ ತೋರುವ ಮೈಯುಳ್ಳವ, ಆತ. ಇಷ್ಟೆಲ್ಲಾ ಹೇಳಿದರೂ ಆತನನ್ನು ಚಿತ್ರಿಸಿದಂತಾಗಲಿಲ್ಲ, ವರ್ಣಿಸಿದಂತಾಗುವುದಿಲ್ಲ. ಏಕೆಂದರೆ ಆತ ವಸ್ತುತಃ ಅವರ್ಣನೀಯ. ಕತ್ತಲಲ್ಲಿ ಕಾಣಿಸದವನು ಎಂದು ಸಹ ಅಲ್ಲ. ಏಕೆಂದರೆ ಆತನು ಜ್ಯೋತೀರೂಪ.

ಇಷ್ಟಾಗಿಯೂ ಆತನು ಕಳ್ಳನೇ. ಚಿಕ್ಕಂದಿನಿಂದಲೂ ಬೆಣ್ಣೆ ಕದಿಯುವುದು, ಅವರಿವರ ಮನೆಯಲ್ಲಿ - ಅಲ್ಲಿಲ್ಲೇನು, ಎಲ್ಲರ ಮನೆಯಲ್ಲಿಯೂ - ಎನ್ನಬಹುದೇನೋ. ಅಂತೂ ಹೀಗೆಲ್ಲ ಇರುವ ವಿಶಿಷ್ಟ-ವಿಚಿತ್ರ- ಚೋರನೀತ. ಆತನನ್ನೇ ನಾವು ಹುಡುಕುತ್ತಿರುವುದು - ಎನ್ನುತ್ತಾನೆ, ಲೀಲಾಶುಕ.

ಇಷ್ಟೆಲ್ಲಾ ಲಕ್ಷಣಗಳು ಯಾರಲ್ಲಿರುವುವು? ಮತ್ತಿನ್ನಾರು, ಸಾಕ್ಷಾತ್ ನಮ್ಮ ಕೃಷ್ಣನೇ. ಪ್ರೇಮರಸ-ಭರಿತರಾಗಿ ಆತನನ್ನೇ ಹಿಂಬಾಲಿಸುವ ಕಣ್ಣೋಟವುಳ್ಳವರಾಗಿ, ಮತ್ತೆಲ್ಲ ಸಂಗವನ್ನು ಬಿಟ್ಟು ಆತನ ಸಂಗಕ್ಕೇ ಅಂಟಿಕೊಂಡವರಾದ ಗೋಪಿಕೆಯರು - ಆತನ ಸುತ್ತ ಸರ್ವದಾ ಇರುವರು.

ತನ್ನ ಮೌಳಿಯಲ್ಲಿ ಎಂದರೆ ಶಿರಸ್ಸಿನ ಶಿಖೆಯ ಮೇಲೆ ನವಿಲುಗರಿ ಧರಿಸಿರುವವ, ಬಾಲ್ಯ-ಮೌಗ್ಧ್ಯಗಳ ಅಚ್ಚೊತ್ತಿರುವ ಆತ. ಕಪಟನಾಟಕ ಮಾಡುವವನಾದರೂ ಪರಂಜ್ಯೋತಿಸ್ಸ್ವರೂಪ. ಅತನಿಗಾಗಿಯೇ ನಮ್ಮ ಹುಡುಕಾಟ.

ಆತ ಸಿಕ್ಕರೆ ಅದು ನಮ್ಮ ಪುಣ್ಯ. ಆತನು ಸಿಕ್ಕ ದಿನ ಧನ್ಯ. ಆತನನ್ನು ಕಂಡ ಕಂಗಳು ಪಾವನ. ಅತನನ್ನು ಹುಡುಕುತ್ತಿದ್ದೇವೆ.

ಶ್ಲೋಕ ಹೀಗಿದೆ:

ಪಾಣೌ ವೇಣುಃ, ಪ್ರಕೃತಿ-ಸುಕುಮಾರಾಕೃತೌ ಬಾಲ್ಯ-ಲಕ್ಷ್ಮೀಃ /

ಪಾರ್ಶ್ವೇ ಬಾಲಾಃ, ಪ್ರಣಯ-ಸರಸಾಲೋಕಿತಾಪಾಂಗ-ಲೀಲಾಃ |

ಮೌಳೌ ಬರ್ಹಂ, ಮಧುರ-ವದನಾಂಭೋರುಹೇ ಮೌಗ್ಧ್ಯ-ಮುದ್ರೇ-/

-ತ್ಯಾರ್ದ್ರಾಕಾರಂ ಕಿಮಪಿ ಕಿತವಂ ಜ್ಯೋತಿರನ್ವೇಷಯಾಮಃ ||


ಕೃಷ್ಣಾ, ನೀನೇ ನನಗೆಲ್ಲವೂ, ನಿನ್ನ ಬಿಟ್ಟ್ಟರೆ ಮತ್ತಾರೂ ಇಲ್ಲ - ಎನ್ನುತ್ತಾನೆ ಲೀಲಾಶುಕ, ಮತ್ತೊಂದು  ಶ್ಲೋಕದಲ್ಲಿ. ಏಕೆ? ನನ್ನ ಪಾಲಿಗೆ ನೀನೇನೇನು? - ಎನ್ನುವುದನ್ನು ಇಲ್ಲಿ ಪಟ್ಟಿಮಾಡಿದ್ದಾನೆ. ಎಲ್ಲರೂ ಬಯಸಬಹುದಾದ ಏಳು ಅಂಶಗಳೂ ಕೃಷ್ಣನೇ - ಎನ್ನುತ್ತಾನೆ. ಜೊತೆಗೆ, ಇವಲ್ಲದೆ ಇನ್ನೂ ಏನಾದರೂ ಇರುವುದಾದರೂ, ಅದೂ ಸಹ ನೀನೇ ಎಂಬ ಧ್ವನಿಯು ಬರಲೆಂದು ಏಳು ಬಾರಿ 'ಚ'ಕಾರವನ್ನು ಬಳಸಿದ್ದಾನೆ.

ಶ್ರೀಕೃಷ್ಣನು ನನಗೆ ಪ್ರೇಮದನೂ ಹೌದು, ಕಾಮದನೂ ಹೌದು. ಆತನ ಪ್ರೇಮವೆಂದರೆ ವಿಶುದ್ಧ-ಮಧುರವಾದದ್ದು. ಅಂತಹ ಪ್ರೇಮವನ್ನು ಮತ್ತಿನ್ನಾರಿತ್ತಾರು? ಪ್ರೇಮಪ್ರದತ್ವವು ಕಾಮಪ್ರದತ್ವವಾಗಿಯೂ ಪರಿಣಮಿಸುತ್ತದೆ. ಎಲ್ಲಿ ಪ್ರೇಮವುಂಟೋ ಅಲ್ಲಿ ಕಾಮಪೂರ್ತಿಯೂ ಉಂಟು. ಕಾಮವೆಂದರೆ ಬಯಕೆಗಳು, ಅಪೇಕ್ಷೆಗಳು. ತಮಗೆ ಇಷ್ಟವಾದವರಿಗೆ ಇಷ್ಟವಾದುದನ್ನು ತಂದು ಕೊಡುವ ಆಸೆ ಯಾರಿಗಿರುವುದಿಲ್ಲ? ಎಲ್ಲರೂ ಬಯಸುವ ಕಾಮವೆಂದರೆ ಆನಂದವೇ ಸರಿ. ಅದನ್ನು ಕೊಡುವವನೂ ಕೃಷ್ಣನೇ.

ಕೃಷ್ಣಾ, ನೀನು ನನ್ನ ವೇದನವೂ ಆಗಿದ್ದೀಯೇ, ವೈಭವವೂ ಆಗಿದ್ದೀಯೇ. ವೇದನೆಯೆಂದರೆ ನೋವು; ಅದನ್ನಲ್ಲ ಇಲ್ಲಿ ಹೇಳುತ್ತಿರುವುದು. ವೇದನವೆಂದರೆ ಅರಿವು, ಜ್ಞಾನ, ನಿಶ್ಚಯಜ್ಞಾನ. ಹೀಗೆ ನೀನೇ ಜ್ಞಾನಪ್ರದನೂ ಹೌದು. ಶಿಕ್ಷಾಗುರುವು ನೀನು ಎಂದು ಆರಂಭದಲ್ಲೇ ಲೀಲಾಶುಕನು ತಿಳಿಸಿದ್ದಾನೆ. ನೀನಲ್ಲದೆ ಮತ್ತಾರು ಜ್ಞಾನದಾತರು? ಜೊತೆಗೆ ನೀನೇ ನನ್ನ ವೈಭವ. ಸಿರಿಸಂಪತ್ತುಗಳನ್ನು ವೈಭವ ಎನ್ನುವರು. ನೀನೇ ನನ್ನ ಸಮಸ್ತ ಸಂಪತ್ತು.

ಇವೇ ಅಲ್ಲದೆ ನನ್ನ ಜೀವನವೂ ನೀನೇ, ಜೀವಿತವೂ ನೀನೇ. ಯಾವುದರಿಂದಾಗಿ ಜೀವಿಸುತ್ತೇವೆಯೋ ಅದುವೇ ಜೀವನ. ಯಾವ ವೈಭವವಿಲ್ಲದಿದ್ದರೂ ಜೀವಿಸಿಯೇವು. ಯಾವನು ಜೀವ ತುಂಬುವನೋ ಆತನೇ ಜೀವನಹೇತು. ಇದೇ ಅಲ್ಲದೆ, ಜೀವತವೆಂದರೆ ಪ್ರಾಣಧಾರಣವೆಂಬುದಾಗಿ. ಅದೂ ನೀನೇ.

ಮತ್ತು ಕೊನೆಯದಾಗಿ, ನೀನೇ ದೈವತವೂ ಹೌದು. ದೇವತೆಯನ್ನೇ ದೈವತವೆನ್ನುವುದು. ದೇವ-ಸ್ತೋಮಕ್ಕೂ ದೈವತವೆನ್ನುವುದುಂಟು. ಹೀಗೆ ನನ್ನ ಪಾಲಿನ ಎಲ್ಲ ದೇವತೆಗಳೂ ನೀನೇ.

ನಾನು ನಿನ್ನನ್ನು ಇಷ್ಟೆಲ್ಲ ಪ್ರಕಾರಗಳಲ್ಲಿ ಭಾವಿಸಿದರೂ ನೀನೇಕೆ ಇನ್ನೂ ತೋರುತ್ತಿಲ್ಲ? - ಎಂದು ಅಂಗಲಾಚಿ ಕೇಳಿಕೊಳ್ಳುವ ದೈನ್ಯಭಾವ ಈ ಶ್ಲೋಕದಲ್ಲಿದೆ.

ಪ್ರೇಮದಂ ಚ ಮೇ ಕಾಮದಂ ಚ ಮೇ

ವೇದನಂ  ಚ ಮೇ ವೈಭವಂ ಚ ಮೇ |

ಜೀವನಂ ಚ ಮೇ ಜೀವಿತಂ ಚ ಮೇ

ದೈವತಂ ಚ ಮೇ ದೇವ ನಾಪರಮ್ ||

ಸೂಚನೆ : 07/04/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.


Thursday, April 3, 2025

ರಾಮಸಾಗರದತ್ತ ನಮ್ಮ ಮನಸ್ಸುಗಳು ಹರಿಯಲಿ (Ramasagaradatta Namma Manassugalu Hariyali)

ಲೇಖಕರು : ಭಾಷ್ಯಮ್ ರಾಮಚಂದ್ರಾಚಾರ್

ಪ್ರತಿಕ್ರಿಯಿಸಿರಿ (lekhana@ayvm.in)




ಮುಂಜಾನೆಯ  ನಸುಕು. ವಾಲ್ಮೀಕಿ ಮಹರ್ಷಿಗಳು ತಮ್ಮ ಶಿಷ್ಯ ಭರದ್ವಾಜನೊಂದಿಗೆ ಅಹ್ನಿಕಕ್ಕೋಸ್ಕರ ತಮಸಾ ನದಿಯತ್ತ ನಡೆದಿದ್ದಾರೆ. ಆಗತಾನೇ ಮಹರ್ಷಿ ನಾರದರಿಂದ ಕೇಳಿದ ಶ್ರೀರಾಮಗಾಥೆಯ  ಗುಂಗು. ಪ್ರಶಾಂತ  ವಾತಾರಣದಲ್ಲಿ ಸನ್ಮನುಷ್ಯರ ಮನಸ್ಸಿನಂತೆ   ಶಾಂತವಾಗಿ ಹರಿಯುತ್ತಿದ್ದ ತಮಸಾನದಿ. ಆ ವಾತಾವರಣವನ್ನು ಭೇದಿಸಿಕೊಂಡು  ಬೇಡನ ಕ್ರೂರ ಬಾಣಕ್ಕೆ ತುತ್ತಾಗಿ ನೆಲದ ಮೇಲೆ ಬಿದ್ದು ಅವಸಾನ ವೇದನೆಯಿಂದ  ಹೊರಳಾಡುತ್ತಿದ್ದ ಪುಂಸ  ಕ್ರೌ೦ಚಪಕ್ಷಿಯ ನರಳುವಿಕೆ, ಅದರ ಪಕ್ಕದಲ್ಲೇ  ಅದರ ಪ್ರೇಯಸಿಯ ಆಕ್ರಂದ. ಇದನ್ನು ಕಂಡ ಆತ್ಮಗುಣಸಂಪನ್ನರಾದ   ವಾಲ್ಮೀಕಿ ಮಹರ್ಷಿಗಳಿಂದ ಶೋಕಭರಿತ ಶಾಪದಿಂದೊಡಗೂಡಿದ ಉದ್ಗಾರ, ರಾಮಾಯಣ ಮಹಾಕಾವ್ಯಕ್ಕೆ ನಾಂದಿಸ್ಲೋಕ 'ಮಾ  ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀ ಸಮಾಃ | ಯತ್ಕ್ರೌ೦ಚಮಿಥುನಾದೇಕಮವಧೀಃ  ಕಾಮಮೋಹಿತಮ್ || - ಎಲೆ  ನಿಷಾದ,  ನೀನು ಬಹಳಕಾಲ ಬದುಕಬಾರದು. ಈ ಕಾಮಮೋಹಿತವಾಗಿದ್ದ ಕ್ರೌ೦ಚಪಕ್ಷಿಗಳ ಜೋಡಿಯಲ್ಲಿ ನೀನು ಗಂಡನ್ನು ಕೊಂದಿದ್ದೀಯೆ' . ಪಾದಬದ್ಧವಾಗಿ, ತಂತ್ರೀಲಯ ಸಮನ್ವಿತವಾಗಿ ಹೊರಟ 'ವಾಕ್' ಅನ್ನು  ಗಮನಿಸಿದ ಮಹರ್ಷಿಗಳಿಗೂ ಸೋಜಿಗ, ಇದು ಸ್ಲೋಕವಾಗಿಯೇ ಉಳಿಯಲಿ, ಬೇರೆ ಆಗದಿರಲಿ ಎಂಬ ವರ. ಆಶ್ರಮಕ್ಕೆ ಹಿಂತಿರುಗಿದಾಗ ಅಲ್ಲಿ ಬ್ರಹ್ಮದೇವರ ಆಗಮನ. "ನಿನ್ನ ಮುಖದಿಂದ ಹೊರಬಿದ್ದ ಸ್ಲೋಕ ನನ್ನ ಸಂಕಲ್ಪದಿಂದಲೇ. ನೀನು ರಾಮನ ಕಥೆಯನ್ನು ರಚಿಸು. ನಡೆದಿದ್ದೆಲ್ಲ ನಿನಗೆ ಅಂಗೈಯಿನ ನೆಲ್ಲಿಯಂತೆ ಕಾಣುತ್ತದೆ" ಎಂಬ ಅಣತಿ. ಪೂರ್ವಾಗ್ರದ ದರ್ಭೆಯ ಮೇಲೆ ಕುಳಿತು ಧ್ಯಾನಾರೂಢರಾದ ಮಹರ್ಷಿಗಳಿಗೆ ರಾಮಾಯಣ ಒಂದು  ಚಲನಚಿತ್ರದಂತೆ ಸರಿಯಿತು. ನಂತರ ೬ ಕಾಂಡಗಳ, ೫೩೪ ಸರ್ಗಗಳ, ೨೪೦೦೦ ಸುಂದರ ಸುಲಲಿತ ಸ್ಲೋಕಗಳುಳ್ಳ ಮಹಾಕಾವ್ಯ ರಾಮಾಯಣದ ಓತ -ಪ್ರೋತ.

ತಾನೇ ಸಂಕಲ್ಪಿಸಿ ರಚಿಸಿದ ವಿಶ್ವವೇ ಭಗವಂತನ ಕಾವ್ಯ. ಆತನೇ ಆದಿಕವಿ. ಶ್ರೀರಂಗಮಹಾಗುರುಗಳು  ಹೇಳುತ್ತಾರೆ "ಆತನ ಆಶಯವನ್ನರಿತು ಅದರಂತೆಯೇ, ವೇದಗಳಲ್ಲರಿಹಿರುವ ಸಾಮಾನ್ಯರಿಗೆಟುಕದ ತತ್ತ್ವಗಳನ್ನು ಅವರಿಗೂ ಮನಮುಟ್ಟುವಂತೆ ನವರಸಗಳಾಗಿ ಉಣಬಡಿಸಿ  ಕೊನೆಗೆ ಶಾಂತರಸದಲ್ಲಿಯೇ ನಿಲ್ಲಿಸುವ ರಚೆನೆಗಳು ಕಾವ್ಯಗಳು." ಆದ್ದರಿಂದಲೇ 'ಋಷಿ ಅಲ್ಲದವನು ಕವಿಯಾಗಲಾರ.' ಶೃಂಗಾರ, ವೀರ, ಕರುಣಾ, ಅದ್ಭುತ, ಹಾಸ್ಯ, ಭಯಾನಕ,  ಭೀಭತ್ಸ, ರೌದ್ರ, ಶಾಂತರಸಗಳ ನಾಯಕ, ಧರ್ಮವೇ ಮೂರ್ತಿವೆತ್ತ ರೂಪ, ಶ್ರೀರಾಮಚಂದ್ರ. ಧರ್ಮಪತ್ನಿ - ಪ್ರೇಯಸಿ ಸೀತೆ. ಹೊರಗಿನ ಮತ್ತೊಂದು ಪ್ರಾಣವೇ ಲಕ್ಷ್ಮಣ. ಧರ್ಮಾಚರಣೆಯಲ್ಲಿ  ರಾಮನಿಗಿಂತ ಒಂದು ಕೈ ಮಿಗಿಲೋ  ಎಂಬಂತಿನ ಭರತ. ರಾಮ ಭಗವಂತನೆಂದೇ ಅರಿತ ಸುಮಿತ್ರೆ;  ಹೆತ್ತ ಕೌಸಲ್ಯೆ;  ಕೊಟ್ಟಮಾತನ್ನು ಮೀರಲಾರದ ತಂದೆ ದಶರಥ. ಗುಹ, ಜಟಾಯು,  ಸುಗ್ರೀವ, ವಿಭೀಷಣ ಮೊದಲಾದ ಸ್ನೇಹಿತರು;  ಎಷ್ಟೆಲ್ಲ ಅಣಿಮಾದಿ ಸಿದ್ಧಿಗಳಿದ್ದರೂ ಏನೂ ಅರಿಯದಂತಿದ್ದು ರಾಮನ ಆಲಿಂಗನಕ್ಕೆ, ಸೀತೆಯ ವಾತ್ಸಲ್ಯ ಪೂರಿತ ನೋಟಕ್ಕೆ ಅರ್ಹನಾದ ಏನೆಲ್ಲ  ಸಾಧಿಸಿದ ಭಂಟ,  ಅಂಜನಾಸುತ. ರಾಕ್ಷಸರಾದರೂ ಧರ್ಮವನ್ನರಿತ ವಿಭೀಷಣ, ಕುಂಭಕರ್ಣ.  ಸೀತೆ, ಅನಸೂಯೆ, ಅಹಲ್ಯೆ, ತಾರೆ, ಮಂಡೋದರಿ ಮೊದಲಾದ ಕನ್ಯಾಮಣಿಗಳು. ವಸಿಷ್ಠ, ಗೌತಮ, ಭಾರದ್ವಾಜ, ಋಷಿ ಶೃಂಗರ, ಅನೇಕ  ಋಷಿಮುನಿಗಳ, ಋಷ್ಯಾಶ್ರಮಗಳ, ಗಂಗಾವತರಣದ, ಕೌಶಿಕ   ವಿಶ್ವಾಮಿತ್ರರಾದ ಬಗೆಯ, ರಘುರಾಜರ, ಸಾಮಾನ್ಯ ಜನತೆಯ, ಪಟ್ಟಣ- ಜನಪ್ರದೇಶಗಳ, ಗಿರಿ-ವನಗಳ, ನದ-ನದಿಗಳ,  ಋತುಗಳ, ಅಂದಿನ ವಿಶಾಲ  ಭಾರತದ ವರ್ಣನೆಯ, ಮತ್ತೇನೆಲ್ಲವನ್ನೂ ಒಳಗೊಂಡು ವಾಲ್ಮೀಕಿ ಎಂಬ ಗಿರಿಯಲ್ಲಿ ಜನಿಸಿ, ರಾಮಸಾಗರದತ್ತ ಹೊರಟು, ಹರಿದಕಡೆಗಳೆಲ್ಲಾ, ಹರಿದಮನಗಳೆನ್ನೆಲ್ಲಾ  ಪಾವನಗೊಳಿಸುವ ಮಹಾನದಿ, ಸುಂದರ ಸುಲಲಿತ ಕಾವ್ಯ ರಾಮಾಯಣ. ಇದು ಪ್ರಭುಸಮ್ಮಿತೆ -  ಹೀಗೆಯೇ  ಮಾಡಬೇಕೆಂದು ವಿಧಿಸುತ್ತದೆ; ಮಿತ್ರಸಮ್ಮಿತೆ - ಮಿತ್ರನಂತೆ ತಿಳಿಯಹೇಳುತ್ತದೆ; ಕಾಂತಾಸಮ್ಮಿತೆ  - ಮಾಡು - ಬೇಡಗಳನ್ನು ಮನದನ್ನೆಯಂತೆ ಪ್ರ್ರೀತಿಯಿಂದ ಉಣಬಡಿಸುತ್ತದೆ. ರಾಮ ಒಬ್ಬ ಕಾಲ್ಪನಿಕ ವ್ಯಕ್ತಿಯೇ ಎಂಬ ಪ್ರಶ್ನೆಗೆ ಶ್ರೀರಂಗಮಹಾಗುರುಗಳ ಉತ್ತರ " ರಾಮ ಸಾಮಾನ್ಯನೋಟಕ್ಕೆ  ಒಬ್ಬ ಆದರ್ಶ ಪುರುಷ, ದೈವೀ  ನೋಟಕ್ಕೆ ದೇವತೆ, ಆಧ್ಯಾತ್ಮ ನೋಟಕ್ಕೆ ಪರಂಜ್ಯೋತಿ; ಇಂದಿಗೂ ಪರಿವಾರದೊಂದಿಗೆ ಅಂತರಂಗದಲ್ಲಿ ಕಾಣಬಹುದು; ಉಪನಿಷದ್ವಾಣಿಯಂತೆ ಅಷ್ಟಚಕ್ರ - ನವದ್ವಾರಗಳಿರುವ ಈ ದೇಹವೇ ಅಯೋಧ್ಯೆ." ಮಿಗಿಲಾಗಿ, ಗಾಂಧರ್ವಾಸ್ತ್ರವನ್ನು  ಪ್ರಯೋಗಿಸಿ 'ಇವನಿಗೆ ಅವ ರಾಮ - ಅವನಿಗೆ ಇವರಾಮ - ಇರುವುದೆಲ್ಲದರಲ್ಲೂ ತಾನೇ' ಎಂದು ತನ್ನ ಸರ್ವಾಂತರ್ಯಾಮಿತ್ವವನ್ನು ತೋರಗೊಟ್ಟು ರಾವಣನ ಮೂಲಬಲವನ್ನು ನಾಶಗೊಳಿಸಿದನಂತರ ಅವಾಕ್ಕಾದ ಪರಿವಾರಕ್ಕೆ ಶ್ರೀರಾಮನೇ ಹೇಳುತ್ತಾನೆ 'ಈ ಅಸ್ತ್ರ ನನಗೆ  ಮತ್ತು ಮುಕ್ಕಣ್ಣನಿಗೆ ಮಾತ್ರ ಉಂಟು' ಎಂದು. ಪರಮಪುರಷ ಶ್ರೀರಾಮಚಂದ್ರನಿಗೂ ಆತನ ಪರಿವಾರಕ್ಕೂ, ಮಹರ್ಷಿ ವಾಲ್ಮೀಕಿಗಳಿಗೂ ನಮೋನಮಃ.

ಸೂಚನೆ: 03/4//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

Sunday, March 30, 2025

ವ್ಯಾಸ ವೀಕ್ಷಿತ 130 ಮಂದಪಾಲನ ಕಥೆ (Vyaasa Vikshita 130)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಮಂದಪಾಲನ ಕಥೆ

ಅಶ್ವಸೇನ ಹಾಗೂ ಮಯ - ಇವರಿಬ್ಬರನ್ನು ಅಗ್ನಿಯು ಸುಡದಿರಲು ಕಾರಣವನ್ನು ಹೇಳಿದ್ದಾಗಿದೆ. ಈ ಶಾರ್ಙ್ಗಕಗಳನ್ನು ಸುಡದಿರಲು ಕಾರಣವೇನು? ಅದಕ್ಕೊಂದು ಹಿನ್ನೆಲೆಯಿದೆ.

ಧರ್ಮಜ್ಞರಲ್ಲಿ ಅತ್ಯಂತ ಮುಖ್ಯನೂ ಉಗ್ರವ್ರತಗಳನ್ನಾಚರಿಸುವವನೂ ಆದ ಮಹರ್ಷಿಯೊಬ್ಬನಿದ್ದ. ಆತನ ಹೆಸರು ಮಂದಪಾಲ. ಆತನು ಊರ್ಧ್ವರೇತಸ್ಕರಾದ ಋಷಿಗಳ ಮಾರ್ಗವನ್ನು ಹಿಡಿದವನು, ಅರ್ಥಾತ್ ಬ್ರಹ್ಮಚರ್ಯವ್ರತವನ್ನು ಅತ್ಯಂತ ನಿಷ್ಠೆಯಿಂದ ಪಾಲಿಸತಕ್ಕವನು. ಸ್ವಾಧ್ಯಾಯನಿರತನೂ ಇಂದ್ರಿಯಜಯವನ್ನು ಸಂಪಾದಿಸಿರುವವನೂ ಆದವನು. ಧರ್ಮರತನಾದ ಆತ ತನ್ನ ತಪಸ್ಯೆಯನ್ನು ಪೂರೈಸಿದನು.

ತಪಸ್ಸಿನ ಪಾರವನ್ನು ಮುಟ್ಟಿ ಪಿತೃಲೋಕಕ್ಕೆ ಹೋದನು. ಆದರೆ ಮಂದಪಾಲನಿಗೆ ಅದರ ಫಲವೇನೂ ದೊರೆಯಲಿಲ್ಲ. ಆಗ ಯಮಧರ್ಮರಾಜನ ಸಮೀಪದಲ್ಲಿದ್ದ ದೇವತೆಗಳನ್ನು ಆತನು ಕೇಳಿದನು: "ತಪಸ್ಸಿನಿಂದ ನಾನು ಸಂಪಾದಿಸಿರುವ ಈ ಲೋಕಗಳು ಮುಚ್ಚಿರುವುವೇಕೆ? ಮಾಡಬೇಕಾದದ್ದನ್ನು ಏನನ್ನೋ ನಾನು ಮಾಡಿಲ್ಲವೆಂಬ ಕಾರಣದಿಂದಾಗಿ ನನಗೀ ಫಲವೇ? ಯಾವ ಕಾರಣಕ್ಕಾಗಿ ಇವು ನನ್ನ ಪಾಲಿಗೆ ಮುಚ್ಚಿಹೋಗಿವೆಯೋ ಅದಕ್ಕೆ ಪ್ರತಿಯಾಗಿ ನಾನು ಮಾಡಬೇಕಾದದ್ದನ್ನು ಸೂಚಿಸಿರಿ, ನಾ ಮಾಡುವೆ" ಎಂದು.

ಅದಕ್ಕೆ ದೇವತೆಗಳು ಹೇಳಿದರು :

"ಯಾವ ಋಣವನ್ನಿಟ್ಟುಕೊಂಡು ಮನುಷ್ಯರು ಜನಿಸುವರೆಂಬುದನ್ನು ತಿಳಿದುಕೋ. ಯಜ್ಞಕ್ರಿಯೆಗಳು, ಬ್ರಹ್ಮಚರ್ಯ ಹಾಗೂ ಸಂತಾನೋತ್ಪತ್ತಿ - ಈ ಮೂರರ ನಿಮಿತ್ತ ಮನುಷ್ಯರೆಲ್ಲರೂ ಋಣಿಗಳಾಗಿರುತ್ತಾರೆ. ಯಜ್ಞಕಾರ್ಯ, ತಪಸ್ಸು ಹಾಗೂ ವೇದಾಧ್ಯಯನ - ಇವುಗಳಿಂದ ಆ ಋಣಗಳನ್ನು ಪರಿಹರಿಸಿಕೊಳ್ಳುವುದಾಗುತ್ತದೆ. ನೀನು ತಪಸ್ವಿ ಹೌದು, ಯಜ್ಞಗಳನ್ನು ಮಾಡಿರುವೆ ಹೌದು. ಆದರೆ ನಿನಗೆ ಸಂತಾನವಿಲ್ಲ. ಆ ಕಾರಣಕ್ಕಾಗಿಯೇ ಈ ಲೋಕಗಳು ನಿನಗಿಲ್ಲವಾಗಿವೆ. ಆದುದರಿಂದ ಮೊದಲು ಸಂತಾನವನ್ನು ಪಡೆಯುವೆಯಾದರೆ ಈ ಲೋಕಗಳನ್ನು ಯಥೇಚ್ಛವಾಗಿ ಭೋಗಿಸಬಹುದು. 'ಪುತ್' ಎಂಬ ಹೆಸರಿನ ನರಕವುಂಟು. ಅದರ ದೆಸೆಯಿಂದ, ಎಂದರೆ ಅಲ್ಲಿ ಹೋಗದಂತೆ ಆಗಿಸಲೋಸುಗ, ಕಾಪಾಡತಕ್ಕವನು ಯಾರೋ ಆತನನ್ನೇ 'ಪುತ್ರ' (ಪುತ್+ತ್ರ) ಎನ್ನುವುದು - ಎನ್ನುತ್ತದೆ ಶ್ರುತಿ. ಆದ್ದರಿಂದ, ನೀನು ಸಂತಾನಪ್ರಾಪ್ತಿಗಾಗಿ ಯತ್ನಿಸಬೇಕು, ವಿಪ್ರಶ್ರೇಷ್ಠನೇ" - ಎಂದರು.

ದೇವತೆಗಳ ಆ ಮಾತನ್ನು ಮಂದಪಾಲನು ಆಲಿಸಿದನು. ಹಾಗಿದ್ದರೆ ನನಗೆ ಬೇಗನೆ ಬಹುಮಂದಿ ಮಕ್ಕಳಾಗಬೇಕು, ಎಲ್ಲಿ ನನಗಿದು ಸಾಧ್ಯ? - ಎಂಬುದಾಗಿ ಆಲೋಚಿಸಿದನು. ಹಾಗೆ ಯೋಚಿಸುತ್ತಾ ನಡೆದು ಕಂಡದ್ದು ಅನೇಕ ಸಂತಾನಗಳನ್ನು ಹೊಂದಿದ್ದ ಪಕ್ಷಿಗಳನ್ನು. ಅವುಗಳಂತೆಯೇ ತಾನೂ ಒಂದು ಶಾರ್ಙ್ಗಕಪಕ್ಷಿಯಾದನು. "ಜರಿತಾ" ಎಂಬ ಹೆಸರಿನ ಶಾರ್ಙ್ಗಿಕಾಪಕ್ಷಿಯೊಂದರೊಂದಿಗೆ ಸಂಬಂಧವನ್ನು ಬೆಳೆಸಿದನು. ಅವಳಲ್ಲಿ ಬ್ರಹ್ಮವಾದಿಗಳಾಗುವ ನಾಲ್ಕು ಮಕ್ಕಳನ್ನು ಪಡೆದನು. ಇನ್ನೂ ಮೊಟ್ಟೆಯೊಳಗೇ ಇದ್ದ ಅವರೆಲ್ಲರನ್ನೂ, ಜೊತೆಗೆ ಅವರ ತಾಯಿಯನ್ನೂ, ತೊರೆದು ಆತನು ಮುಂದಕ್ಕೆ ಸಾಗಿ, ಲಪಿತಾ ಎಂಬುವಳಲ್ಲಿಗೆ ಹೋದನು.

ಲಪಿತೆಯ ಬಳಿ ಸಾಗಿದ ಬಳಿಕ, ತನ್ನ ಸಂತಾನದ ಬಗ್ಗೆ ಅತ್ಯಂತ ವಾತ್ಸಲ್ಯಭಾವದಿಂದ ಕೂಡಿದ್ದ ಜರಿತೆಯು ಬಹಳವೇ ಚಿಂತೆಗೀಡಾದಳು. ಋಷಿಗಳಾದ ಆ ಮಕ್ಕಳು ತ್ಯಾಜ್ಯರಾಗಿರಲಿಲ್ಲವಾದರೂ ಅವನ್ನು ಮಂದಪಾಲನು ತೊರೆದಿದ್ದನಾದರೂ ತಾಯಿಯಾದ ಜರಿತೆಯು ತೊರೆಯಲಿಲ್ಲ. ಆ ಖಾಂಡವದಲ್ಲಿಯೇ ಇದ್ದುಕೊಂಡು, ಸಂಜಾತರಾದ ಆ ಮಕ್ಕಳನ್ನು ಸ್ನೇಹ ತುಂಬಿದ್ದ ಆಕೆಯು ತಾನೇ ಪಾಲಿಸಿ ಪೋಷಿಸಿದಳು.

ಲಪಿತೆಯೊಡನೆ ಸಂಚರಿಸುತ್ತಿದ್ದ ಆ ಮಂದಪಾಲ ಮುನಿಯು, ಖಾಂಡವವನ್ನು ಸುಡಲೆಂದು ಬರುತ್ತಿದ್ದ ಅಗ್ನಿಯನ್ನು ಕಂಡನು. ಅಗ್ನಿಯ ಸಂಕಲ್ಪವನ್ನು ಅರಿತುಕೊಂಡನು.

ಸೂಚನೆ : 30/3/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 9 (Prasnottara Ratnamalike 9)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)




ಪ್ರಶ್ನೆ ೯. ಯಾವುದು ವಿಷ ?

ಉತ್ತರ - ಗುರುಜನರ ಬಗ್ಗೆ ತಿರಸ್ಕಾರ.

ಪ್ರಸ್ತುತ ಪ್ರಶ್ನೆ ಇದಾಗಿದೆ - ಯಾವುದು ವಿಷ? ಎಂಬುದು? ಪ್ರಶ್ನೆಯ ಅರ್ಥ ಹೀಗಿದೆ ಎಂಬುದಾಗಿ ಭಾವಿಸ ಬಹುದು. ವಿಷ ಎಂದರೆ ವಿಷಮ. ಅಥವಾ ಫಲಸಾಧನೆಗೆ ಯಾವುದು ವಿಘ್ನವನ್ನು ಉಂಟುಮಾಡುವ ವಿಷಯವಾಗಿದೆಯೋ ಅಥವಾ ಉದಿಷ್ಟವಾದ ಪ್ರಯೋಜನಕ್ಕೆ ಯಾವುದು ಪ್ರತಿಬಂಧಕವೋ ಸಾಮಾನ್ಯವಾಗಿ ಅದನ್ನು 'ವಿಷ ಎಂಬುದಾಗಿ ಕರೆಯಬಹುದು ವಿಷವು ವಿಷಮತೆಯನ್ನು ಉಂಟುಮಾಡುತ್ತದೆ. ಯಾವುದೋ ಒಂದು ಇರುವ ಸ್ಥಿತಿಯನ್ನು ಕೆಡಿಸುತ್ತದೆ. ಧರ್ಮವನ್ನು ಕೆಡಿಸುತ್ತದೆ. ಹೀಗೆ ಕೆಡಿಸುವ ಸ್ವಭಾವವುಳ್ಳದ್ದು ವಿಷ ಎಂದರ್ಥ. ವಿಷವನ್ನು ಪಡೆದವನು ಸ್ವಸ್ಥವಾಗಿ ಇರಲು ಸಾಧ್ಯವೇ? ವಿಷವನ್ನು ಸೇವಿಸುತ್ತಾ ಸೇವಿಸುತ್ತಾ ವ್ಯಕ್ತಿಯ ಬಾಳೇ ನಾಶದತ್ತ ಸಾಗುತ್ತದೆ. ಪ್ರಗತಿ ಅಲ್ಲಿ ಸಾಧ್ಯವಾಗುವುದಿಲ್ಲವಷ್ಟೆ. 


ಪ್ರಸ್ತುತ ಪ್ರಶ್ನೆಯು ಬಾಳಿನ ವಿಷಮತೆಗೆ ಕಾರಣವನ್ನು ಕೇಳುತ್ತಿದೆ. ವಿಷ ಯಾವುದು ಎಂಬುದಕ್ಕೆ ಪ್ರಶ್ನೆಗೆ, ಗುರುಜನರ ಬಗ್ಗೆ ತಿರಸ್ಕಾರ, ಅಂದರೆ ಗುರು ಜನರ ವಿಷಯದಲ್ಲಿ ತೋರಿಸಲೇಬೇಕಾದ ಗೌರವ, ಆದರ, ಸತ್ಕಾರ, ಪ್ರೀತಿ, ಶ್ರದ್ಧೆ ಇತ್ಯಾದಿ ಸಂಗತಿಗಳನ್ನು ತೋರಿಸದಿರುವಿಕೆ ಎಂದರ್ಥ. ಇಲ್ಲಿ ಗುರುಜನ ಎಂದರೆ ತಂದೆ, ತಾಯಿ, ಕಲಸಿದ ಗುರು, ಶಿಕ್ಷಕ, ಅತಿಥಿ,  ಜ್ಞಾನವೃದ್ಧರು ಅಥವಾ ವಯೋವೃದ್ಧರು, ದುಃಖಿತರು, ದೀನಜನರು ದಯೆಗೆ - ಕಾರುಣ್ಯಕ್ಕೆ ಯೋಗ್ಯರಾದವರು, ಅನುಭವದಲ್ಲಿ ಮತ್ತು ವಿದ್ಯೆಯಲ್ಲಿ ನಮಗಿಂತ ದೊಡ್ಡವರು ಇವರೆಲ್ಲರನ್ನು ಸತ್ಕರಿಸುವುದು, ಆದರಿಸುವುದು ಅತ್ಯಂತ ಅವಶ್ಯಕ ಮತ್ತು ಆದ್ಯಕರ್ತವ್ಯ. ತಂದೆತಾಯಿ ವೃದ್ಧರಾಗಿದ್ದಾಗ ಅವರಿಗೆ ನೋವುಂಟಾಗದಂತೆ ವರ್ತಿಸುವುದು, ವಿದ್ಯೆಯನ್ನು ಪಡೆದ ಗುರುವಿನಲ್ಲಿ ಕೃತಜ್ಞತಾಭಾವವನ್ನು ಇಟ್ಟುಕೊಳ್ಳುವುದು, ವೃದ್ಧರಲ್ಲಿ ಸಂದರ್ಭವನ್ನು ಅರಿತು ವರ್ತಿಸುವುದು, ವೃದ್ಧರನ್ನು, ರೋಗಿಗಳ ಶುಶ್ರೂಷೆ ಮಾಡುವುದು. ಇಂತಹ ಅನೇಕ ನಡವಳಿಕೆಗಳಿಂದ ಗುರುಹಿರಿಯರ ಪ್ರೀತಿಗೆ ಆತ ಪಾತ್ರನಾಗುತ್ತಾನೆ. ಇದನ್ನು ಮಾಡದಿರುವವನು ಅವನ ಜೀವನಕ್ಕೆ ವಿಷಮತೆಯನ್ನು ತಂದುಕೊಳ್ಳುತ್ತಾನೆ ಎಂಬುದು ಈ ಪ್ರಶ್ನೋತ್ತರದ ತಾತ್ಪರ್ಯವಾಗಿದೆ. 

ಒಬ್ಬ ವ್ಯಕ್ತಿ ಯಾವ ಉತ್ತಮವಾದ ಜೀವನವನ್ನು ಸಾಗಿಸಬೇಕಾಗಿದೆಯೋ, ಅದಕ್ಕೆ ಅನೇಕ ರೀತಿಯ ಸಾಧನಸಾಮಗ್ರಿಗಳು, ಪೋಷಕ ಅಂಶಗಳು ಬೇಕಾಗುತ್ತವೆ. ಆ ಎಲ್ಲಾ ಅಂಶಗಳು ವೃದ್ಧರ, ಹಿರಿಯರ, ಗೌರವಕ್ಕೆ ಅರ್ಹರಾದವರನ್ನು ಪುರಸ್ಕರಿಸುವುದರಿಂದ ಪಡೆಯಬಹುದು. ಅವರನ್ನು ತಿರಸ್ಕರಿಸುವುದರಿಂದ ಅವರಿಂದ ನಮ್ಮ ಬಾಳಿಗೆ ಸಿಗಬೇಕಾದ ಪೋಷಕ ವಿಚಾರಗಳು ಅಲಭ್ಯವಾಗುವವು. ಅವರನ್ನು ಹೇಗೆ ನೋಡಿಕೊಳ್ಳಬೇಕು? ಎಂಬುದರ ಬಗ್ಗೆ ವಿವೇಕದ ಅವಶ್ಯಕತೆ ಇದೆ; ಒಂದು ಸಾಮಾನ್ಯಜ್ಞಾನದ ಅವಶ್ಯಕತೆ ಇದೆ;. ಸತ್ಕರಿಸುವುದು ಪೂಜಿಸುವುದು ಎಂದರೆ ದೇವರ ಪೂಜೆಯನ್ನು ಮಾಡಿದಂತೆ ಗಂಧ ಪುಷ್ಪ ಅಕ್ಷತಾ ಇವುಗಳನ್ನು ಸಮರ್ಪಿಸುವುದು ಎಂದರ್ಥವಲ್ಲ. ಯಾರನ್ನು ಹೇಗೆ ನೋಡಿಕೊಳ್ಳಬೇಕು ಹಾಗೆ ನೋಡಿಕೊಳ್ಳುವುದು. ಅದೇ ಅವರಿಗೆ ಸಲ್ಲಿಸುವ ಗೌರವ ಅಥವಾ ಪುರಸ್ಕಾರವಾಗಿರುತ್ತದೆ. "ಜ್ಞಾನದ ಕಡೆಗೆ ಒಯ್ಯುವ ಜಾಗಕ್ಕೆ ಬಗ್ಗಬೇಕು" ಎಂಬ ಶ್ರೀರಂಗಮಹಾಗುರುಗಳ ಮಾತು ಸ್ಮರಣೀಯ. ಹಾಗೆ ಅಂತಹ ಸ್ಥಾನಕ್ಕೆ ಗೌರವವನ್ನು ಸಲ್ಲಿಸದಿದ್ದರೆ ಅದೇ ತಿರಸ್ಕಾರವಾಗುತ್ತದೆ. ಹಾಗಾದಾಗ ಜೀವನವು ವಿಷಮತೆಗೆ ಸಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಮಾನವನೂ ಗುರುಹಿರಿಯರಿಗೆ ಗೌರವಾದರಗಳನ್ನು ಸಮರ್ಪಿಸಬೇಕು ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.


ಸೂಚನೆ : 30/3/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಅಷ್ಟಾಕ್ಷರೀ 78 ನಷ್ಟೋ ಮೋಹಃ ಸ್ಮೃತಿರ್ಲಬ್ಧಾ Ashtakshari 78

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಮೋಹ ಕಳೆಯಿತು, ಸ್ಮರಣೆ ಒದಗಿತು

ಗೀತೆಯು ಕೃಷ್ಣ-ಅರ್ಜುನರ ಸಂವಾದದ ರೂಪದಲ್ಲಿದೆ  - ಎಂಬುದನ್ನು ಎಲ್ಲರೂ ಬಲ್ಲರೇ. ಅವರಿಬ್ಬರಲ್ಲಿ ಅರ್ಜುನನು ಪ್ರಚ್ಛಕ - ಎಂದರೆ ಪ್ರಶ್ನೆಯನ್ನು ಕೇಳುವವನು. ಮತ್ತು ಕೃಷ್ಣನು ಬೋಧಕ - ಎಂದರೆ ಬೋಧವನ್ನು ಉಂಟುಮಾಡತಕ್ಕವನಷ್ಟೆ?

ಎರಡನೆಯ ಅಧ್ಯಾಯದ ಆರಂಭದಲ್ಲಿ ಕೃಷ್ಣನೇ ಪ್ರಶ್ನೆ ಕೇಳಿದನಲ್ಲವೇ - "ಎಲ್ಲಿಂದ ಬಂದೊದಗಿತಯ್ಯಾ ಅರ್ಜುನಾ, ನಿನಗೀ ಕಶ್ಮಲ? - ಅದೂ ಈ ವಿಷಮ-ಪರಿಸ್ಥಿತಿಯಲ್ಲಿ!" - ಎಂದು? ಉತ್ತರಕ್ಕೋಸ್ಕರವಾಗಿ ಕೇಳಿದ ಪ್ರಶ್ನೆಯಲ್ಲ ಅದು; ಅರ್ಜುನನ ಮನಃಸ್ಥಿತಿಗೆ ಮರುಗಿದ ಮನೋವೈದ್ಯನ ಮಾತದು.

ಕಶ್ಮಲ ಅಥವಾ ಕಲ್ಮಷವೆಂದರೆ ಕೊಳಕು. ದೈಹಿಕವಾದ ಕೊಳಕು ಮಾತ್ರವೇ ಕಶ್ಮಲವೇ? ಮನೋಬುದ್ಧಿಗಳ ಕೊಳಕೂ ಕಶ್ಮಲವೇ.

ಇನ್ನು ವಿಷಮವೆಂದರೆ ಇಕ್ಕಟ್ಟಿನ ಘಟ್ಟ: ಪಾಂಡವರಿಗೆ ಕೌರವರೆಸಗಿದ ವರ್ಷಗಟ್ಟಲೆಯ ಅಪಕಾರ-ಅಧರ್ಮಗಳು ತೀರ್ಮಾನವಾಗುವ ಮುಖ್ಯಘಟ್ಟ. ಪ್ರಾಣತ್ಯಾಗಕ್ಕೂ ಸಿದ್ಧರಾಗಿರುವ ಸಹಸ್ರಾರು ಮಂದಿಯ ಅಳಿವು-ಉಳಿವುಗಳ ಘಟ್ಟ. ಇಂತಹ ಘಟ್ಟದಲ್ಲಿರಬೇಕಾದದ್ದೇ ಕಾರ್ಯ-ಸ್ಪಷ್ಟತೆ, ಬುದ್ಧಿಯ ತಿಳಿ.

ತಿಳಿವಿನಿಂದ ಕೂಡಿದ ಅಳಕೆಯೇ ತಿಳಿವಳಕೆ - ಎಂಬ ನೂತನ-ಶಬ್ದವನ್ನೂ ಹಾಗೂ ಅದರ ಸುಂದರ-ವ್ಯುತ್ಪತ್ತಿಯನ್ನೂ ಶ್ರೀರಂಗಮಹಾಗುರುಗಳು ಕೊಟ್ಟಿದ್ದಾರೆ. ರೂಢಿಯಲ್ಲಿರುವ ಪದ ತಿಳುವಳಿಕೆ ಎಂಬುದು. ಆದರೆ ಅರಿವನ್ನು ಆಧರಿಸಿದ ಅಳತೆ - ಎಂಬ ಭಾವವೇ ಇಂತಹೆಡೆಗಳಲ್ಲಿ ಸುಸಂಗತವೆನಿಸುವುದರಿಂದ, ತಿಳುವಳಿಕೆ ಎಂಬುದಕ್ಕಿಂತ, ತಿಳಿವಳಕೆಯೆಂಬ ಪದವೇ ಹೆಚ್ಚು ಸಮಂಜಸ. ರೂಢವಾದ ಪದಗಳಿದ್ದರೂ ಅನ್ವರ್ಥವಾದ ಪದಗಳೇ ಭಾಷೆಗೆ ಭೂಷಣವೆನಿಸುವುದು. ಇರಲಿ.
ಅರ್ಜುನನಿಗೆ ಬಂದಿರುವ ಕಶ್ಮಲವೇನು? ಮತ್ತು ಅದು ಕಶ್ಮಲವೇ - ಎಂಬ ತೀರ್ಮಾನವು ಹೇಗೆ? - ಎಂಬುದನ್ನರಿತುಕೊಳ್ಳಬೇಕು. ಅದರ ಫಲದಿಂದಲೇ ಅದನ್ನು ಅಳೆದುಕೊಳ್ಳಬಹುದು - ಎಂಬ ಸೂಚನೆಯೂ ಕೃಷ್ಣನ ಮಾತಿನಲ್ಲೇ ಇದೆ.

ಯಾವುದು ಅಕೀರ್ತಿಕರವೋ, ಎಂದರೆ ಅಪಕೀರ್ತಿಯನ್ನು ಉಂಟುಮಾಡುವುದೋ ಅದು ಕಶ್ಮಲವೇ ಸರಿ. ಯಾವುದು ಅಸ್ವರ್ಗ್ಯವೋ, ಎಂದರೆ ಸ್ವರ್ಗಪ್ರಾಪ್ತಿಗೆ ಯಾವುದು ಪ್ರತಿಕೂಲ(ವಿರುದ್ಧ)ವೋ, ಅದೂ ಕಶ್ಮಲವೇ.

ಕ್ಷತ್ರಿಯರಿಗೆ ಬೇಕಾದುದು ಇವೆರಡೇ. ಯುದ್ಧದಲ್ಲಿ ಜಯಸಿಕ್ಕರೊದಗುವ ಕೀರ್ತಿ, ಸತ್ತರೆ ವೀರಸ್ವರ್ಗ.

ಅರ್ಜುನನಿಗುಂಟಾಗಿರುವ ಚಿತ್ತಕಲ್ಮಷವು ಹೀಗೆ ಇಹಕ್ಕೂ ಪರಕ್ಕೂ ಘಾತಕವಾದದ್ದು, ಎಂದರೆ ಹೊಡೆತಕೊಡುವಂತಹುದು, ಹಾಳುಗೆಡವುವಂತಹುದು. ("ಘಾತುಕ"ವಲ್ಲ.) ಯಾವುದರಿಂದ ಇಹದಲ್ಲಿ ಅಭ್ಯುದಯವೂ ಪರದಲ್ಲಿ ನಿಃಶ್ರೇಯಸವೂ ಲಭಿಸುವುದೋ ಅದನ್ನೇ ಆರ್ಯರು ಮಾಡುವುದು. ಅದನ್ನೇ ಆರ್ಯಜುಷ್ಟವೆನ್ನುವುದು. ಇಹಪರಗಳಿಗೊದಗದ್ದು ಅನಾರ್ಯಜುಷ್ಟ. ಕರ್ತವ್ಯವನ್ನು ಮಾಡತಕ್ಕವನು ಆರ್ಯ; ಅಕಾರ್ಯವನ್ನು ಮಾಡದಿರುವವನು ಆರ್ಯ. ಎರಡಕ್ಕೂ ವಿರೋಧವಾಯಿತು ಅರ್ಜುನನ ನಡೆ.

ಇದು ಕಶ್ಮಲ - ಎಂಬುದನ್ನು ಮತ್ತೊಂದು ರೀತಿಯಿಂದಲೂ ಅರಿಯಬಹುದು. ಬುದ್ಧಿಯಲ್ಲಿ ಒಳ್ಳೆಯ ತಿಳಿವಳಕೆಯಿದ್ದಾಗ ಮನಸ್ಸು ಪ್ರಸನ್ನವಾಗಿರುವುದು. ಉತ್ಸಾಹವೂ ತುಂಬಿರುವುದು. ಆದರೆ ಈಗ ಅರ್ಜುನನಿಗೆ ಆಗಿರುವುದೇನು? ಕ್ಲೈಬ್ಯ-ಹೃದಯದೌರ್ಬಲ್ಯಗಳು. ಕ್ಲೈಬ್ಯವೆಂದರೆ ಷಂಡತನ. ರಣಾಂಗಣಸಂದರ್ಭದಲ್ಲಿ ಕ್ಲೈಬ್ಯವೆಂದರೆ ಹೇಡಿತನ.

ಇನ್ನು ಹೃದಯ-ದೌರ್ಬಲ್ಯವೆಂದರೇನು? ಅರ್ಜುನನೇ ಬಿಡಿಸಿ ಹೇಳಿಕೊಂಡುಬಿಟ್ಟಿದ್ದಾನೆ, ಅದನ್ನು: ನನ್ನ ಬಾಯೊಣಗುತ್ತಿದೆ. ಮೈ ನಡುಗುತ್ತಿದೆ. ಬಿಲ್ಲು ಜಾರುತ್ತಿದೆ. ಚರ್ಮ ಸುಡುತ್ತಿದೆ. ಬುದ್ಧಿಭ್ರಮಣೆಯಾದಂತಾಗುತ್ತಿದೆ - ಇತ್ಯಾದಿಯಾಗಿ.

ಶೂರ-ವೀರನೆನಿಸಿದ್ದ ಅರ್ಜುನನಿಗೆ ಜ್ವರ ಬಂದಿರುವುದು ಮೈಗೂ, ಮನೋಬುದ್ಧಿಗಳಿಗೂ.

ಈ ಹಿಂದೆಯೂ ಕೌರವರೊಂದಿಗೆ ಯುದ್ಧವನ್ನಾತ ಮಾಡಿರಲಿಲ್ಲವೇ? "ಇವರನ್ನೆಲ್ಲಾ ಕೊಲ್ಲಬಹುದೇ?" - ಎಂಬ ಪ್ರಶ್ನೆಯು ಆವಾಗಲೂ ಬರಬಹುದಾಗಿತ್ತಲ್ಲವೇ?

ಬುದ್ಧಿಗೆ ಮಂಕು ಕವಿದಾಗ ಹೀಗಾಗುವುದುಂಟು. ಇದನ್ನೇ ಮೋಹವೆನ್ನುವುದು. ಸತ್ತ್ವದಿಂದ ಹರ್ಷೋಲ್ಲಾಸಗಳೂ, ರಜಸ್ಸಿನಿಂದ ರಾಗ-ದ್ವೇಷಗಳೂ, ತಮಸ್ಸಿನಿಂದ ಮೋಹ-ಜಾಡ್ಯಗಳೂ ಉಂಟಾಗುವುವು. ಮೋಹವಾವರಿಸಿತೆಂದರೆ ಮುಖ್ಯೋದ್ದೇಶವೂ ಮರೆಯಾದಂತೆಯೇ.

ಮೋಹಕ್ಕೆ ಮದ್ದು ಅರಿವು. ಅದುವೇ ಸಾಂಖ್ಯಜ್ಞಾನ. ಮರೆವಿಗೆ ಮದ್ದು ಯೋಗವಿದ್ಯೆ. ಅರ್ಜುನನಿಗೆ ಅವೆರಡನ್ನೂ ಕೃಷ್ಣನುಂಟುಮಾಡಿದಾಗಲೇ ಆತನ ಬುದ್ಧಿಯು ಬೆಳಕಾಗುವುದು. ಚಿತ್ತದಲ್ಲಿ ಸ್ಫೂರ್ತಿಯುಕ್ಕುವುದು. ಆಗ ಆತ ಹೇಳಿದುದೇ "ನಷ್ಟೋ ಮೋಹಃ ಸ್ಮೃತಿರ್ಲಬ್ಧಾ" : ಮಂಕಳಿಯಿತು, ನೆನಪೊದಗಿತು – ಎಂದು.

ಶ್ರೀರಂಗಮಹಾಗುರುಗಳು ಹೇಳುವಂತೆ, "ಜ್ಞಾನರೂಪವಾದ ದಿವ್ಯದೃಷ್ಟಿಯನ್ನು ಕೃಷ್ಣನು ಅನುಗ್ರಹಿಸಿದಾಗಲೇ ಅರ್ಜುನನ ಮೋಹವು ಕಳೆದು ಗುಟ್ಟೊಡೆಯಿತು. ಜ್ಞಾನದೀಪದ ನೆನಪುಂಟಾಯಿತು. ಹೀಗಾದಾಗಲೇ ಸಂದೇಹಗಳು ಕಳೆದು, "ನಿನ್ನ ನಿರ್ದೇಶದಂತೆ ವರ್ತಿಸುತ್ತೇನೆ" - ಎಂದು ಅರ್ಜುನನು ಹೇಳುವುದು."

ಅರ್ಜುನನ ಮೋಹನಾಶ-ಸ್ಮೃತಿಪ್ರಾಪ್ತಿಗಳೆರಡಕ್ಕೂ ಶ್ರೀಕೃಷ್ಣಪ್ರಸಾದವೇ ಕಾರಣವಷ್ಟೆ? "ಗೀತೆಯ ಮೊದಲನೆಯ ಅಧ್ಯಾಯವು ವಿಷಾದಯೋಗವಾದರೆ, ಉಳಿದೆಲ್ಲ ಅಧ್ಯಾಯಗಳೂ ಪ್ರಸಾದಯೋಗವೇ!" - ಎಂಬುದಾಗಿ ಶ್ರೀರಂಗಮಹಾಗುರುಗಳು ಹೇಳಿರುವುದೂ ಅತ್ಯಂತ ಔಚಿತ್ಯಪೂರ್ಣವಾಗಿದೆಯಲ್ಲವೇ?

ಸೂಚನೆ: 30/3//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.