Monday, August 11, 2025

ಪ್ರಶ್ನೋತ್ತರ ರತ್ನಮಾಲಿಕೆ 29 (Prasnottara Ratnamalike 29)


ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ ೨೮. ಸುಖ ಯಾವುದು?

ಉತ್ತರ - ಎಲ್ಲದರಿಂದ ದೂರವಿರುವುದು.

ಈ ಪ್ರಶ್ನೆ ಬಹಳ ಉತ್ತಮವಾದದ್ದು. ಏಕೆಂದರೆ ಪ್ರತಿಯೊಂದು ಜೀವವು ಇದನ್ನೇ ಹುಡುಕುತ್ತಿರುತ್ತವೆ. ಮತ್ತು ಇದಕ್ಕಾಗಿ ನಿರಂತರ ಪ್ರಯತ್ನಶೀಲವಾಗಿರುತ್ತವೆ. ಯಾವಯಾವುದನ್ನೋ ಸುಖವೆಂದು ಭ್ರಮಿಸುತ್ತಿರುತ್ತವೆ. ಸುಖಕ್ಕಾಗಿ ಪದಾರ್ಥಗಳ ಸಂಗ್ರಹದಲ್ಲಿ ತೊಡಗಿರುತ್ತವೆ. ಬಯಸುವುದು ಸುಖವನ್ನೇ. ಸುಖ ಬೇಕು, ದುಃಖ ಬೇಡ ಎಂಬುದು ಪ್ರತಿಯೊಂದು ಜೀವವು ಬಯಸುವಂಥದ್ದು - "ಸುಖಂ ಮೇ ಭೂಯಾತ್, ದುಃಖಂ ಮನಾಗಪಿ ಮಾ ಭೂಯಾತ್" ಎಂದು. ಯಾರಿಗೆತಾನೇ ಸುಖ ಬೇಡ! ಸುಖಕ್ಕಾಗಿ ಬದುಕು; ಸುಖವೇ ಬದುಕಿನ ಸಾರ. ಸುಖಕ್ಕಾಗಿಯೇ ಸುಖದ ಸಾಧನಗಳು ಹಾಗು ಅವುಗಳನ್ನು ಅನ್ವೇಷಿಸುವ ಮನಸ್ಸು, ಹೇಗೆ? ಎಲ್ಲಿ? ಯಾವುದರಿಂದ  ಸುಖ ಹೇಗೆ ಸಿಗುತ್ತದೆ? ಎಂಬ ಹುಡುಕಾಟವೇ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಆದರೆ ಇಂದಿಗೂ ಇದು ಬಹಳ ದೊಡ್ಡ ಪ್ರಶ್ನೆಯಾಗಿಯೇ ಕಾಡಿಸುತ್ತಿದೆ "ಸುಖ ಯಾವುದು?" ಎಂದು. ಯಾರಿಗೆ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆಯೋ, ಅವನು ಬದುಕಲ್ಲಿ ಜಯವನ್ನು ಪಡೆದ ಎಂದೇ ಅರ್ಥ. ಇದು ಅರ್ಥವಾಗುವುದೇ ಬಹಳ ಕಷ್ಟ. ಆದರೆ ಇಲ್ಲಿ ಬಹಳ ಸುಲಭವಾದ ಉತ್ತರವನ್ನು ಕೊಟ್ಟಂತೆ ಕಾಣುತ್ತದೆ. ಉತ್ತರ - "ಎಲ್ಲವನ್ನು ಬಿಡುವುದು" ಎಂಬುದಾಗಿ. 


ಎಲ್ಲವನ್ನು ಬಿಡುವುದು ಹೇಗೆ ಸುಖವಾಗುತ್ತದೆ? ಆದರೆ ನಾವಂದು ಅಂದುಕೊಂಡಿದ್ದೇವೆ - ಸುಖ ಎಲ್ಲವನ್ನು ಪಡೆದಾಗ ಅಂತ. ಉದಾಹರಣೆಗೆ ಒಬ್ಬ ವ್ಯಕ್ತಿ ಬದುಕಬೇಕೆಂದರೆ ಅವನಿಗೆ ಆಹಾರ, ಮನೆ, ವಸ್ತು, ವಾಹನಗಳು ಹೀಗೆ ಇನ್ನೂ ಹತ್ತು ಹಲವು ಜೀವನಾವಶ್ಯಕ ಸಾಧನ ಸಲಕರಣೆಗಳು ಬೇಕು. ಇವುಗಳನ್ನು ಅಮಿತವಾಗಿ ಬಯಸುವುದನ್ನು ನಾವು ಕಾಣುತ್ತೇವೆ. ಒಂದು ಮನೆಯನ್ನು ಮಾಡಿದಮೇಲೆ, ಇನ್ನೊಂದು ಮನೆಯನ್ನು ಮಾಡಬೇಕೆಂಬ ಬಯಕೆ; ಏಕೆಂದರೆ ಮನೆಯಿಂದ ಸುಖ ಎಂಬ ಭಾವನೆ. ಒಂದು ವಾಹನವನ್ನು ಖರೀದಿಸಿದರೆ ಇನ್ನೊಂದು ವಾಹನ ಖರೀದಿಸುವ ಆಸೆ. ಏಕೆಂದರೆ ವಾಹನದಿಂದ ಸುಖ ಎಂಬ ಭಾವನೆ. ಸಾಧಾರಣವಾಹನವನ್ನು ಖರೀದಿಸಿದವನಿಗೆ ಇನ್ನೂ ಉನ್ನತಗುಣಮಟ್ಟದ ವಾಹನವನ್ನು ಬಳಸಬೇಕೆಂಬ ಬಯಕೆ. ಹೀಗೆ ಸುಖದ ಸಾಧನದ ಉತ್ಕೃಷ್ಟತೆಯನ್ನು ಹೆಚ್ಚಿಸುತ್ತಾ ಸಾಗುತ್ತೇವೆ. ಅಂದರೆ ಸುಖವು ಸಾಧನದಿಂದ ಸಿಗುತ್ತದೆ ಎಂಬ ಭ್ರಮೆಯಲ್ಲಿ ನಾವಿದ್ದಂತೆ ತೋರುತ್ತದೆ. ಆದರೆ ಇಲ್ಲಿನ ಉತ್ತರ ಇದಕ್ಕೆ ವಿರುದ್ಧವಾದದ್ದು. ಇದೇ ಉತ್ತರದಲ್ಲಿನ ಸೊಬಗು ಅಥವಾ ಆಳ. ಅಂದರೆ ಯಾವುದೇ ವಸ್ತುವಿನಿಂದ ಸುಖ ಸಿಗುವುದಿಲ್ಲ; ಎಲ್ಲದರಿಂದ ದೂರ ಇರುವುದರಿಂದಲೇ ಸುಖ ಸಿಗುತ್ತದೆ ಎಂಬುದಾಗಿ ತಿಳಿಸಲಾಗಿದೆ. ಎಷ್ಟೆಷ್ಟು ಸಾಧನಗಳು ನಮ್ಮ ಜೊತೆಯಲ್ಲಿ ಇರುತ್ತವೆಯೋ, ಅಷ್ಟಷ್ಟು ನಮಗೆ ದುಃಖಗಳು ಬರುತ್ತವೆ ಎಂಬುದು ನಮಗೆ ಅರ್ಥವಾಗಿಲ್ಲ. ವಾಸ್ತವವಾಗಿ ಎಲ್ಲವನ್ನು ಬಿಡುವುದೇ ಸುಖ. ಉದಾಹರಣೆಗೆ ನಿದ್ದೆ ಬರುವಾಗ ಯಾವೆಲ್ಲ ಸಾಧನೆಗಳು ಬೇಕಾಗಿದ್ದರೂ, ನಿದ್ದೆಗೆ ಜಾರಿದ ಮೇಲೆ ಆ ಯಾವ ಸಾಧನೆಗಳೂ ಅವಶ್ಯಕವಲ್ಲ. ನಿದ್ದೆಯೇ ಪರಮಸುಖ. ಆದ್ದರಿಂದ ನಿದ್ದೆಯಲ್ಲಿ ಯಾವ ವಸ್ತುವೂ ಬೇಕಾಗಿಲ್ಲ. ಆದ್ದರಿಂದಲೇ ಅದು ಸುಖ. ಇಂತಹ ಕೋಟಿ ಕೋಟಿ ಸುಖವನ್ನು ಪಡೆಯುವ ಆಸೆ ಮನುಷ್ಯನದ್ದು. ಅಂತಹ ಆಸೆ ಈಡೇರಬೇಕೆಂದರೆ ವಸ್ತುವಿನ ತ್ಯಾಗ, ತ್ಯಾಗಮಯ ಜೀವನ, ಕೊನೆಗೆ ಜೀವವನ್ನೇ ತ್ಯಜಿಸುವುದು, ಹೇಗೆ ತ್ಯಾಗದಿಂದಲೇ ಆತ್ಯಂತಿಕ ಸುಖ ಸಿಗುತ್ತದೆ ಎಂಬುದು ಈ ಪ್ರಶ್ನೋತ್ತರದ ಆಶಯವಾಗಿದೆ.


ಸೂಚನೆ : 10/8/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಜೆಗಳಿಗೆ ಏನೇನನ್ನು ತಿಳಿಸುತ್ತಿರಬೇಕು/ಬಾರದು? 149 (Vyaasa Vikshita 149)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಅಲ್ಲದೆ, ಕರ್ತವ್ಯವಾದ ಕಾರ್ಯಗಳನ್ನು ಕ್ಷಿಪ್ರವಾಗಿ ಆರಂಭಿಸಬೇಕು. ಜೊತೆಗೆ ಒಮ್ಮೆ ಆರಂಭವಾದ ಕಾರ್ಯಕ್ಕೆ ವಿಘ್ನಗಳನ್ನು ನಾವೇ ಒಡ್ಡಿಕೊಳ್ಳುವಂತಿರಬಾರದು. ನೀನು ಈ ಬಗ್ಗೆಯೆಲ್ಲಾ ಎಚ್ಚರವಾಗಿರುವೆ ತಾನೆ?


ಕೃಷಿಕರು, ಕಾರ್ಮಿಕರು ಮುಂತಾದವರು ನಿನ್ನ ಬಳಿ ಸುಳಿಯಲು ಧೈರ್ಯವಿಲ್ಲದೆ ದೂರವುಳಿದುಕೊಂಡುಬಿಟ್ಟಿಲ್ಲ ತಾನೆ? ಎಲ್ಲರೂ ನಿನ್ನೊಂದಿಗೆ ಸಹಭಾವವುಳ್ಳವರಷ್ಟೆ? ಏಕೆಂದರೆ ಎಲ್ಲರೊಂದಿಗಿನ ಸಂಸರ್ಗವೇ ಪ್ರಗತಿಗೆ ಕಾರಣವಾಗತಕ್ಕದ್ದು.

ನಂಬುಗೆಗೆ ಯೋಗ್ಯರಾದವರು ಹಾಗೂ ಲೋಭವಿಲ್ಲದವರು ಮತ್ತು ಕ್ರಮಬದ್ಧವಾಗಿ ಮಾಡತಕ್ಕವರು - ಇಂತಹವರ ಮೂಲಕ ಕೆಲಸಗಳನ್ನು ಮಾಡಿಸುತ್ತಿರುವೆಯಲ್ಲವೇ?

ಕೆಲಸಗಳು ಎರಡು ಬಗೆ. ಕೃತವಾದವು, ಎಂದರೆ ಮಾಡಿಮುಗಿಸಿರುವಂತಹವು, ಮತ್ತು ಕೃತಪ್ರಾಯವಾದವು, ಎಂದರೆ ಇನ್ನೇನು ಮುಗಿಯಲಿರುವಂತಹ ಕ್ರಿಯೆಗಳು. ಇವುಗಳೆಲ್ಲವೂ ಪ್ರಜೆಗಳ ಗಮನಕ್ಕೆ ಬರುತ್ತಿರಬೇಕು. ಇನ್ನು ನೀನು ಇನ್ನೂ ಸಾಧಿಸಲಾಗಿಲ್ಲದವು ಅವರ ಗಮನಕ್ಕೆ ಬರಬಾರದು. (ರಾಜನು ಮಾಡುತ್ತಿರುವ ಸತ್ಕಾರ್ಯಗಳ ಬಗ್ಗೆ ಪ್ರಜೆಗಳಿಗೆ ಆಗಾಗ್ಗೆ ಅರಿವನ್ನು ಉಂಟುಮಾಡುತ್ತಿರಬೇಕು. ಆಗಲೇ ಪ್ರಜೆಗಳಿಗೆ ರಾಜನ ವಿಷಯದಲ್ಲಿ ಅಭಿಮಾನ ಮೂಡುವುದು. ಇವುಗಳ ಬದಲಾಗಿ, ಇನ್ನೂ ಪೂರೈಸದ ಅಥವಾ ಇನ್ನೂ ಆರಂಭಿಸಿಲ್ಲದ ಕೃತ್ಯಗಳೇ ಅವರ ಗಮನಕ್ಕೆ ಬರುತ್ತಿದ್ದಲ್ಲಿ, ಅರಸನ ಕುರಿತಾದ ಆದರವು ಕಡಿಮೆಯಾಗುವುದು). ಹಾಗೆಯೇ ಆಗುತ್ತಿದೆ ತಾನೆ?

ನಾನಾಶಾಸ್ತ್ರಗಳಲ್ಲಿ ಕೋವಿದರಾದ ಶಿಕ್ಷಕರು ಧರ್ಮ-ಮರ್ಮಜ್ಞರಾಗಿ ಧರ್ಮವನ್ನು ಬೋಧಿಸುವರಷ್ಟೆ? (ಎಂದರೆ, ಕಾರ್ಯಕಾರಣ-ಬದ್ಧವಾಗಿ ಧರ್ಮವನ್ನು ಅರಿಯುವಂತೆ ಮಾಡುತ್ತಿದ್ದಾರಷ್ಟೆ? ಧರ್ಮ-ಬೋಧನವೆಂಬುದು ಬರೀ ಮಾಡಬೇಕು-ಬಾರದುಗಳ ಪಟ್ಟಿಯಾಗಿಬಿಟ್ಟರೆ ಅದು ನೀರಸವಾಗಿಬಿಡುವುದು. ಅದರ ಬಗ್ಗೆ ಆಸ್ಥೆಯು ಕಡಿಮೆಯಾಗಿಬಿಡುವುದು. ಮಾಡಬೇಕು-ಬೇಡಗಳ ಹಿಂದಿರುವ ಕಾರಣಗಳ ಅರಿವು ಬರುವಂತಿರಬೇಕು.  ಇಲ್ಲದಿದ್ದರೆ ಅವುಗಳ ತರ್ಕಬದ್ಧತೆಯು ಗೋಚರಿಸದು. ಅಲ್ಲದೆ, ಇದು ರಾಜಕುಮಾರರ ಹಾಗೂ ಪ್ರಧಾನ-ಯೋಧರ ವಿಷಯಕ್ಕಂತೂ ಬಹುಮುಖ್ಯವಾಗಿ ಅನ್ವಯಿಸುವಂತಹುದು. ಸೈನಿಕರ ಸಭೆಯೊಂದರಲ್ಲಿ ಯುದ್ಧವು ಕೆಟ್ಟದ್ದೆಂದೂ ಶಾಂತಿಯೇ ಮುಖ್ಯವೆಂದೂ ಭಾಷಣ ಮಾಡಿದ ರಾಜಕೀಯವ್ಯಕ್ತಿಯ ಬಗ್ಗೆ ಗುರೂಜಿ ಗೋಳವಲಕರರರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಪ್ರತಿಯೊಬ್ಬರಿಗೂ ಸ್ವಧರ್ಮದ ಪರಿಜ್ಞಾನದ ಅರಿವು ಮೂಡುವಂತಿರಬೇಕು).

ಪ್ರತಿಯೊಬ್ಬರಿಗೂ ಅರ್ಥಕೃಚ್ಛ್ರಗಳು ಬರುವುವು. ಎಂದರೆ ಈಗ ಯಾವ ಗುರಿಸಾಧಿಸಲು ಕೆಲಸಮಾಡಬೇಕು? - ಎಂಬ ಬಗ್ಗೆ ನಿಶ್ಚಯವೇ ಉಂಟಾಗದಿರುವುದು ಎಂದರ್ಥ. ಅಂತಹ ಸಂದರ್ಭಗಳಲ್ಲಿ, ಯಾವುದು ಅತ್ಯಂತಶ್ರೇಯಸ್ಕರವೋ ಅದನ್ನು ಪಂಡಿತನಾದವನೇ ಸಾಧಿಸತಕ್ಕವನು; ಪಂಡಿತನೆಂದರೆ ಆ ವಿಷಯವನ್ನು ಚೆನ್ನಾಗಿ ಬಲ್ಲವನೇ. ಹಾಗಿರುವುದರಿಂದ ಸಾವಿರ ಮೂರ್ಖರನ್ನು ತೊರೆದಾದರೂ ಒಬ್ಬ ಪಂಡಿತನನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಹಾಗಿರುವುದರಿಂದ, ಬಲ್ಲವರನ್ನೇ ನೀನು ಮಾರ್ಗದರ್ಶಕರನ್ನಾಗಿ ಇಟ್ಟುಕೊಂಡಿರುವೆಯಲ್ಲವೆ?

ಸರಿಯಾದ ಕೋಟೆಕೊತ್ತಲಗಳೆಂದರೆ ಧನ-ಧಾನ್ಯ-ಆಯುಧ-ಜಲ ಹಾಗೂ ಯಂತ್ರಗಳು - ಇವುಗಳಿಂದ ಪರಿಪೂರ್ಣವಾಗಿರಬೇಕು. ಜೊತೆಗೆ ಶಿಲ್ಪಿಗಳೂ ಹಾಗೂ ಧನುರ್ಧರರೂ, ಎಂದರೆ ಬಿಲ್ವಿದ್ಯೆಯಲ್ಲಿ ಪಳಗಿದವರೂ, ಇರತಕ್ಕದ್ದು. ನಿನ್ನ ದುರ್ಗಗಳೆಲ್ಲವೂ ಹಾಗಿವೆ ತಾನೆ?

ಮೇಧಾವಿಯೂ ಶೂರನೂ ಸಂಯಮವುಳ್ಳವನೂ ಚತುರನೂ ಆಗಿರುವ ಮಂತ್ರಿಯು ಒಬ್ಬನೇ ಇದ್ದರೂ ಸಾಕು; ರಾಜನಿಗೂ ರಾಜಕುಮಾರನಿಗೂ ಮಹತ್ತಾದ ಸಂಪತ್ತು ಬಂದು ಸೇರುವಂತೆ ಅಂತಹವನು ಮಾಡಬಲ್ಲನು. ಇದು ನಿನಗೆ ತಿಳಿದಿರಲಿ.
ಯುಧಿಷ್ಠಿರಾ, ಶತ್ರುಪಕ್ಷದ ಹದಿನೆಂಟು ಮಂದಿಯ ಮೇಲೂ, ಸ್ವಪಕ್ಷದ ಹದಿನೈದು ಮಂದಿಯಮೇಲೂ ರಾಜನು ಕಣ್ಣಿಟ್ಟಿರತಕ್ಕದ್ದು. ಅವರು ಯಾರಾರೆಂದು ಹೇಳುವೆ, ಕೇಳು.

ಸೂಚನೆ : 10/8/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, August 3, 2025

ವ್ಯಾಸ ವೀಕ್ಷಿತ 147 ನಾರದರ ಆಗಮನ; ಕುಶಲ-ಪ್ರಶ್ನೆಗಳು (Vyaasa Vikshita 147)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಯುಧಿಷ್ಠಿರನ ಸಭಾಗೃಹಪ್ರವೇಶಕ್ಕೆ ಋಷಿವರ್ಯರೂ ಗಣ್ಯಕ್ಷತ್ರಿಯರೂ ಭೂರಿ-ಸಂಖ್ಯೆಯಲ್ಲಿ ಬಂದಿದ್ದರಷ್ಟೆ? ಅವರೆಲ್ಲರ ಸತ್ಕಾರಗಳು, ಸಂತಸ-ಸಂಭ್ರಮಗಳೂ ಭವ್ಯವಾಗಿ ಕೂಡಿಕೊಂಡವಷ್ಟೆ? ಅದೆಲ್ಲ ಮುಗಿಯುವ ಹೊತ್ತಿಗೆ ಅಲ್ಲಿಗೆ ದೇವರ್ಷಿಗಳಾದ ನಾರದರು ಆಗಮಿಸಿದರು. ಅವರಿಗೆ ಅತ್ಯಾದರಪೂರ್ವಕವಾದ ಸತ್ಕಾರವೂ ಆಯಿತು, ಯುಧಿಷ್ಠಿರನಿಂದ.


ಆ ಸತ್ಕಾರದಿಂದ ಸಂತೋಷಗೊಂಡರು, ನಾರದಮಹರ್ಷಿಗಳು. ಉಳಿದ ಪಾಂಡವರೂ ಅವರನ್ನು ಆದರಿಸಿದರು. ವೇದಪಾರಂಗತರಾದ ಆ ಮಹರ್ಷಿಗಳು ಆಗ ಯುಧಿಷ್ಠಿರನನ್ನು ಹತ್ತಾರು ಪ್ರಶ್ನೆಗಳನ್ನು ಕೇಳಿದರು. ಅವೆಲ್ಲದರ ತಾತ್ಪರ್ಯ, "ರಾಜ್ಯಭಾರವನ್ನು ಚೆನ್ನಾಗಿ ನಿರ್ವಹಿಸುತ್ತಿದ್ದಿಯೆ ತಾನೆ?" – ಎಂಬುದೇ.


ಚೆನ್ನಾಗಿ ಎಂದರೇನು? – ಎಂಬುದನ್ನೇ ಅವರ ಪ್ರಶ್ನೆಗಳು ಸ್ಪಷ್ಟಪಡಿಸುತ್ತವೆ. ಅವರ ಪ್ರಶ್ನೆಗಳೆಲ್ಲವೂ ಹೆಚ್ಚುಕಡಿಮೆ ಇಂದಿಗೂ ಅನ್ವಯಿಸುತ್ತವೆ.


ನಾರದರು ಕೇಳಿದ ಪ್ರಶ್ನೆಗಳಿವು:


"ನಿನಗೆ ನಿನ್ನ ಕರ್ತವ್ಯಗಳನ್ನು ನಿರ್ವಹಿಸಲು ಎಷ್ಟು ಅವಶ್ಯವೋ ಅಷ್ಟು ಧನಸಂಪಾದನೆಯು ಆಗುತ್ತಿದೆಯಷ್ಟೆ?


ನಿನ್ನ ಮನಸ್ಸು ಧರ್ಮ(ಕಾರ್ಯ)ದಲ್ಲಿ ಸಂತೋಷಿಸುತ್ತದಷ್ಟೆ? ಸುಖಗಳನ್ನು ಅನುಭವಿಸುತ್ತಿರುವೆಯಷ್ಟೆ?  ಮನಸ್ಸಿಗೆ ಯಾವುದೇ ಆಘಾತವಿಲ್ಲವಲ್ಲವೇ?


ಸಮಾಜದಲ್ಲಿಯ ಎಲ್ಲ ವರ್ಣಗಳ ಜನರನ್ನು ಕುರಿತಾಗಿಯೂ ನಿನ್ನ ಪೂರ್ವಿಕರು ಉದಾರವಾದ ನೀತಿಯನ್ನು ಪಾಲಿಸುತ್ತಿದ್ದರಲ್ಲಾ, ನೀನೂ ಅದನ್ನೇ ಅನುಸರಿಸುತ್ತಿದ್ದೀಯಷ್ಟೆ? ಪುರುಷಾರ್ಥಗಳಲ್ಲಿ ಅರ್ಥದಿಂದ ಧರ್ಮವನ್ನಾಗಲಿ, ಧರ್ಮದಿಂದ ಅರ್ಥವನ್ನಾಗಲಿ, ಬಹುಭೋಗ್ಯವೆನಿಸುವ ಕಾಮದಿಂದ ಇವೆರಡನ್ನಾಗಲಿ ಬಾಧಿಸುತ್ತಿಲ್ಲ ತಾನೆ? (ಎಂದರೆ ಒಂದಕ್ಕೆ ಪ್ರಾಧಾನ್ಯವನ್ನಿತ್ತು ಮತ್ತೊಂದನ್ನು ಅದು ಮೆಟ್ತುವಂತೆ ಆಗುತ್ತಿಲ್ಲ ತಾನೆ?) ಜಯಶಾಲಿಗಳಲ್ಲಿ ಶ್ರೇಷ್ಠನೂ, ವರಗಳನ್ನೂ ಕೊಡತಕ್ಕವನೂ ಆದ ನೀನು ಅರ್ಥ-ಧರ್ಮ-ಕಾಮಗಳಿಗೆ ಯಥೋಚಿತವಾದ ಸಮಯವನ್ನಿತ್ತು, ಕಾಲಜ್ಞನಾಗಿ ಅವು ಮೂರನ್ನೂ ಸೇವಿಸುತ್ತಿರುವೆಯಷ್ಟೆ?


ಅಲ್ಲದೇ, ರಾಜರಿಗೆ ಬೇಕಾದವು ಷಡ್ಗುಣಗಳು, ಸಪ್ತೋಪಾಯಗಳು, ಬಲಾಬಲಜ್ಞಾನ ಹಾಗೂ ಚತುರ್ದಶಪರೀಕ್ಷೆಗಳು.


(ಷಡ್ಗುಣಗಳೆಂದರೆ ಆರು ಗುಣಗಳು. ಅವಿವು - ವಕ್ತೃತ್ವ, ಎಂದರೆ ಯಾರೊಡನೆ ಎಂತಹ ಮಾತನ್ನಾಡಬೇಕೆಂಬ ಪರಿಜ್ಞಾನ; ಪ್ರಗಲ್ಭತೆ, ಎಂದರೆ ಶತ್ರುಗಳನ್ನು ಮೆಟ್ಟುವುದರಲ್ಲಿ ಪ್ರೌಢತೆ; ಮೇಧೆ ಎಂದರೆ ಯುಕ್ತಿಕೌಶಲ; ಸ್ಮೃತಿ, ಎಂದರೆ ಒಳ್ಳೆಯ ಸ್ಮರಣಶಕ್ತಿ; ನಯ, ಎಂದರೆ ರಾಜನೀತಿಜ್ಞಾನ; ಹಾಗೂ ಕವಿತ್ವ, ಎಂದರೆ ಶುಕ್ರಾಚಾರ್ಯರ ಜಾಣ್ಮೆ).


(ಇನ್ನು ಸಪ್ತೋಪಾಯಗಳೆಂದರೆ ಏಳು ಉಪಾಯಗಳು, ಶತ್ರುವನ್ನು ಸೋಲಿಸಲು ಬೇಕಾದವು. ಅವಿವು: ಸಾಮ-ದಾನ-ಭೇದ-ದಂಡಗಳೆಂಬ ನಾಲ್ಕು; ಮತ್ತು ಮಂತ್ರ-ಔಷಧ-ಇಂದ್ರಜಾಲಗಳೆಂಬ ಮೂರು.  


ಇನ್ನು ಬಲಾಬಲ-ಜ್ಞಾನವೆಂಬುದು ಮೂರು ಬಗೆಯದು. ಸ್ವಬಲ-ಶತ್ರುಬಲಗಳು ಸಮವೇ, ಅಥವಾ ಶತ್ರುಬಲವೇ ನಮ್ಮದಕ್ಕಿಂತ ಅಧಿಕವೋ, ಸ್ವಬಲವೇ ಶತ್ರುಬಲಕ್ಕಿಂತ ಅಧಿಕವೋ - ಎಂಬುದಾಗಿ.


ಇನ್ನು ಚತುರ್ದಶ-ಪರೀಕ್ಷೆಗಳೆಂದರೆ ಹದಿನಾಲ್ಕು ಪರೀಕ್ಷೆಗಳು. ಇದು ಹದಿನಾಲ್ಕು ದೋಷಗಳ ಪರಿಜ್ಞಾನವೇ ಸರಿ. ಅವಿವು: ನಾಸ್ತಿಕ್ಯ, ಅನೃತ, ಕ್ರೋಧ, ಪ್ರಮಾದ (ಎಂದರೆ ಎಚ್ಚರವಾಗಿಲ್ಲದಿರುವುದು), ದೀರ್ಘಸೂತ್ರತೆ (ಕೆಲಸಗಳನ್ನು ಮುಂದುಮುಂದಕ್ಕೆ ಹಾಕುವ ಪ್ರವೃತ್ತಿ) ವೃದ್ಧಸೇವೆಯಿಲ್ಲದಿರುವಿಕೆ, ಆಲಸ್ಯ (ಚಟುವಟಿಕೆಯಿಲ್ಲದಿರುವಿಕೆ), ಇಂದ್ರಿಯದಾಸ್ಯ, ಏಕಚಿಂತನ (ಒಬ್ಬನೇ ಒಂದು ವಿಷಯವನ್ನು ಕುರಿತು ಯೋಚಿಸುತ್ತಿರುವುದು, ಅಥವಾ ಒಂದೇ ವಿಷಯವನ್ನು ಕುರಿತೇ ಯೋಚಿಸುತ್ತಿರುವುದು), ಮೂಢ-ಸಮಾಲೋಚನ (ಎಂದರೆ ಅಜ್ಞರೊಡನೆ ಸೇರಿ ವಿಚಾರಮಾಡುವುದು), ಕಾರ್ಯ-ಅನಾರಂಭ (ಮಾಡಬೇಕೆಂದು ತೀರ್ಮಾನಿಸಿದುದನ್ನು ಮಾಡದೆಯೇ ಕುಳಿತಿರುವುದು), ಮಂತ್ರ-ಅರಕ್ಷಣ (ರಹಸ್ಯನಿರ್ಣಯಗಳನ್ನು ಗುಟ್ಟಾಗಿ ಇಟ್ಟುಕೊಳ್ಳಲಾಗದಿರುವಿಕೆ), ಮಂಗಲ-ಅಕರಣ (ಮಂಗಳಕಾರ್ಯಗಳನ್ನು ಮಾಡದಿರುವುದು), ನಾನಾ-ವ್ಯಗ್ರತೆ (ನಾಲ್ಕಾರು ಕೆಲಸಗಳಿಗೆ ಒಟ್ಟಿಗೇ ಕೈಹಾಕಿಬಿಡುವುದು)


ಅಲ್ಲದೆ, ಸ್ವಸಮೀಕ್ಷೆ-ಶತ್ರುಸಮೀಕ್ಷೆಗಳನ್ನು ಮಾಡಿಕೊಳ್ಳುತ್ತಾ, ಅವಶ್ಯವೆನಿಸಿದಾಗ ಸಂಧಿಯನ್ನೂ ಮಾಡಿಕೊಳ್ಳುತ್ತಾ ಇರುವೆಯಷ್ಟೆ?


ಸೂಚನೆ : 27/7/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 26 (Prasnottara Ratnamalike 26)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ ೨೬. ಚಂದಿರನ ಕಿರಣಕ್ಕೆ ತುಲ್ಯರು ಯಾರು?

ಉತ್ತರ - ಸಜ್ಜನರು.

ಚಂದ್ರನ ಕಿರಣಕ್ಕೆ ಸಮಾನರಾದವರು ಯಾರು? ಎಂಬುದು ಇಲ್ಲಿನ ಪ್ರಶ್ನೆ. ಅದಕ್ಕೆ ಉತ್ತರ ಸಜ್ಜನ ಅಥವಾ ಸತ್ಪುರುಷರು ಎಂದು. ಇವರು ಹೇಗೆ ಚಂದ್ರನ ಕಿರಣಕ್ಕೆ ಹೋಲುವಂಥವರಾಗುತ್ತಾರೆ? ಎಂಬುದು ಇಲ್ಲಿನ ವಿಷಯವಾಗಿದೆ.


ಚಂದ್ರನು ಬೆಳದಿಂಗಳನ್ನು ಕೊಡುತ್ತಾನೆ. ಅವನಿಗೆ ಬೆಳಕು ಸೂರ್ಯನಿಂದ ಬರುತ್ತದೆ. ಬೆಳಕು ಅಂದರೆ ಪ್ರಕಾಶ. ಅದು ಅಗ್ನಿಯ ಸ್ವರೂಪ. ಸಾಮಾನ್ಯವಾಗಿ ಅಗ್ನಿ ಸುಡುವ ಲಕ್ಷಣವುಳ್ಳದ್ದು. ಆದರೆ ಈ ಚಂದ್ರನ ಕಿರಣ ಮಾತ್ರ ಸುಡುವ ಲಕ್ಷಣ ಉಳ್ಳದ್ದಲ್ಲ; ಬದಲಾಗಿ ಅದು ತಂಪಾಗಿರುತ್ತದೆ. ಇದು ಹೇಗೆ ಸಾಧ್ಯ? ಎಂಬುದು ನಮ್ಮ ಋಷಿಗಳ ವೈಜ್ಞಾನಿಕವಾದ ವಿಶ್ಲೇಷಣೆಯಿಂದ ಚಿಂತಿಸಬೇಕಾದ ವಿಷಯವಾಗಿದೆ. ಜ್ಯೌತಿಷಶಾಸ್ತ್ರದಲ್ಲಿ ಚಂದ್ರನನ್ನು ಜಲಸಂಬಂಧವಾದ ಗ್ರಹ ಎಂಬುದಾಗಿ ಹೇಳಲಾಗಿದೆ. ಅಂದರೆ ನೀರಿನ ಮೇಲೆ ಬೆಳಕು ಬಿದ್ದಾಗ ಅದು ಪ್ರತಿಫಲನಗೊಳ್ಳುತ್ತದೆ. ಅಂತೆಯೇ ಜಲಗ್ರಹವಾದ ಚಂದ್ರನ ಮೇಲೆ ಬೆಳಕು ಬಿದ್ದಾಗ ಅದು ಪ್ರತಿಫಲಿತವಾಗುತ್ತದೆ. ಅದನ್ನೇ ಚಂದ್ರನ ಕಿರಣ ಎನ್ನಲಾಗುತ್ತದೆ. ಹಾಗಾಗಿ ಅವು ಪ್ರತಿಫಲಿತವಾಗಿ ಬೆಳಕನ್ನು ಕೊಟ್ಟರೂ ತಂಪಾಗುರುತ್ತವೆ; ಆದ್ದರಿಂದ ಚಂದ್ರನ ಕಿರಣ ತಂಪಾಗಿರುತ್ತದೆ ಎಂಬುದಾಗಿ ಹೇಳುತ್ತಾರೆ. ಇದನ್ನೇ ಸಜ್ಜನರಿಗೆ ಹೋಲಿಕೆಯಾಗಿ ಕೊಡಲಾಗಿದೆ. ಸಜ್ಜನರು ಅಷ್ಟೇ ಪ್ರಕಾಶಮಾನರಾಗಿ ತೇಜೋವಂತರಾಗಿ ಇರುವವರು ಆದರೂ ಕೂಡ ಅಷ್ಟೇ ತಂಪನ್ನು ಕೊಡುವವರು ಎಂದರ್ಥ. ಆದರೆ ಹೇಗೆ ಸಜ್ಜನರಲ್ಲಿ ಅಂತಹ ಪ್ರಕಾಶ ಕಂಡು ಬರುತ್ತದೆ? ಎಂಬುದು ಇಲ್ಲಿನ ವಿಷಯ.


ಎಲ್ಲಾ ಪ್ರಕಾಶಕ್ಕೂ ಮೂಲವಾದ ಪ್ರಕಾಶ ಎಂದರೆ ಭಗವಂತ. ಭಗವಂತನಿಂದ ಸೂರ್ಯ, ಚಂದ್ರ, ನಕ್ಷತ್ರ, ಗ್ರಹ ಮತ್ತು ನಾವು ಭೂಮಿಯಲ್ಲಿ ಕಾಣುವಂತಹ ಅಗ್ನಿ, ಇವೆಲ್ಲವೂ ಪ್ರಕಾಶವನ್ನು ಪಡೆಯುತ್ತವೆ. ಆದರೆ ಇವುಗಳಲ್ಲಿ ಚಂದ್ರನನ್ನು ಬಿಟ್ಟು ಉಳಿದವುಗಳು ತಾಪವನ್ನು ಕೊಡುತ್ತವೆ. ಇಲ್ಲಿ ಭಗವಂತನು ಮಾತ್ರ ನಮಗೆ ಕಾಣುವ ಸೂರ್ಯನಿಗಿಂತಲು ಕೋಟಿ ಕೋಟಿ ಪ್ರಕಾಶ ಉಳ್ಳವನು; ಆದರೆ ಅವನು ಅತ್ಯಂತ ತಂಪಾಗಿದ್ದಾನೆ. ಒಮ್ಮೆ ಶ್ರೀರಂಗ ಮಹಾಗುರುಗಳ ಬಳಿ ಒಬ್ಬ ಶಿಷ್ಯ "ಭಗವಂತನನ್ನು ಕೋಟಿಸೂರ್ಯ ಸಮಪ್ರಭ ಎಂಬುದಾಗಿ ಕರೆಯುತ್ತಾರಲ್ಲ, ಹೌದೇ?" ಎಂದು ಕೇಳಿದಾಗ, "ಹೌದಪ್ಪ! ಕೋಟಿಸೂರ್ಯ ಸಮಪ್ರಭ ಮಾತ್ರ ಅಲ್ಲ, ಕೋಟಿ ಕೋಟಿ ಸೂರ್ಯ ಸಮಪ್ರಭ; ಹಾಗೆ ಕೋಟಿಚಂದ್ರಸಮಶೀತಲನೂ ಹೌದಪ್ಪ" ಎಂಬುದಾಗಿ ಹೇಳಿದ್ದರಂತೆ. ಅಂದರೆ ಭಗವಂತನು ತಂಪಾಗಿಯೂ, ತಾಪವಿಲ್ಲದ ಕಿರಣವನ್ನು ಜಗತ್ತಿಗೆಲ್ಲ ಕೊಡುವವ. ಅಂತಹ ಭಗವಂತನನ್ನು ಭಾವಿಸುವ ಸಜ್ಜನರೂ ಅವರ ಒಳಗೆ ಬೆಳಕನ್ನು ತುಂಬಿಕೊಂಡಿರುತ್ತಾರೆ. ಹಾಗಾಗಿಯೇ ಅವರು ತಂಪಾಗಿಯೂ ಇರುತ್ತಾರೆ. ಭಗವಂತನನ್ನು ತಮ್ಮೊಳಗೆ ತುಂಬಿಕೊಂಡು ಪರಿಪೂರ್ಣವಾಗಿ ತಮ್ಮ ಜೀವನದಲ್ಲಿ ಭಗವಂತನನ್ನು ಭಾವಿಸುವುದರಿಂದ ಅವರು ತೇಜೋಮಯರಾಗಿ ಕಾಣುತ್ತಾರೆ. ಆದ್ದರಿಂದ ಚಂದ್ರನ ಕಿರಣಕ್ಕೆ ಇಂತಹ ಸಜ್ಜನರನ್ನು ಹೋಲಿಸಿರುವುದು ಅಷ್ಟು ಸಮರ್ಪಕವಾಗಿದೆ! ಚಂದ್ರನು ಹೇಗೆ ಬೆಳದಿಂಗಳಿನಿಂದ ರಾತ್ರಿಯನ್ನು ತಂಪಾಗಿಸುತ್ತಾ, ಬೆಳಗಿಸುತ್ತಾನೋ, ಅಂತಯೇ ಸಜ್ಜನರು ಕೂಡ ತಾವೂ ತಂಪಾಗಿದ್ದು, ಸಂಸಾರದಲ್ಲಿ ಬೆಂದು ಬಳಲಿ ಬದುಕು ಬೇಡವೆಂಬ ನಿರ್ಧಾರಕ್ಕೆ ಬರುವವರ ಜನರ ಬದುಕಲ್ಲಿ ತಂಪನ್ನು, ಆಶಾಆಶಾಕಿರಣವನ್ನು ಹುಟ್ಟಿಸುವುದರಿಂದ ಚಂದ್ರಕಿರಣಕ್ಕೆ ಹೋಲುತ್ತಾರೆ ಎಂಬುದು ಈ ಪ್ರಶ್ನೋತ್ತರದ ಆಶಯವಾಗಿದೆ.


ಸೂಚನೆ : 27/7/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.


ವ್ಯಾಸ ವೀಕ್ಷಿತ 148 ರಾಜ್ಯಭಾರದ ಬಗ್ಗೆ ನಾರದರ ಪ್ರಶ್ನೆಗಳು (Vyaasa Vikshita 148)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ನಾರದರ ಆಗಮನದಿಂದ ಪಾಂಡವರೆಲ್ಲರಿಗೂ ಸಂತಸವಾಯಿತು. ಅವರನ್ನು ಆದರಿಸಿದ ಬಳಿಕ ಅವರೇ ಕುಶಲಪ್ರಶ್ನೆಯನ್ನು ಮಾಡುತ್ತಾ, ಯುಧಿಷ್ಠಿರನ ರಾಜ್ಯಭಾರ-ವೈಖರಿಯ ಬಗ್ಗೆ ಕೆಲವು ಪ್ರಶ್ನೆಗಳನ್ನಿಟ್ಟರು. ಅಷ್ಟಕರ್ಮಗಳೆಂದರೆ ಕೃಷಿ, ವಾಣಿಜ್ಯ, ದುರ್ಗ, ಗಜಬಂಧನ, ಗಣಿ, ಆಯಕರ, ಪ್ರಾಂತಭೂಮಿಯಲ್ಲಿ ಯುಕ್ತರಾದವರ ನೇಮಕ. ಯುಧಿಷ್ಠಿರಾ, ನೀನು ಈ ಅಷ್ಟಕರ್ಮಗಳನ್ನು ಮಾಡುತ್ತಿರುವೆಯಷ್ಟೆ?

ರಾಜ, ಮಂತ್ರಿ, ಮಿತ್ರ, ಕೋಶ, ರಾಷ್ಟ್ರ, ದುರ್ಗ, ಸೈನ್ಯ - ಇವುಗಳಿಗೆ ಸಪ್ತಪ್ರಕೃತಿಗಳು ಎನ್ನುವರು. ಇವೆಲ್ಲವೂ ಬಲವಾಗಿವೆ ತಾನೆ?

ನಿನ್ನ ರಾಜ್ಯದಲ್ಲಿಯ ಧನಿಕರು ಚಟಗಳಿಗೆ ಸಿಲುಕಿಲ್ಲವಷ್ಟೆ? ಮತ್ತು ಅವರು ನಿನ್ನಲ್ಲಿಯೇ ಚೆನ್ನಾಗಿ ನಿಷ್ಠರಾಗಿರುವರಷ್ಟೆ?  (ದೇಶದಲ್ಲಿಯ ಸಿರಿವಂತರು ದುಶ್ಚಟಗಳಲ್ಲಿ ಸಿಲುಕಿದರೂ, ದೇಶನಿಷ್ಠೆ-ಸ್ವಾಮಿನಿಷ್ಠೆಗಳನ್ನು ಕಳೆದುಕೊಂಡಿದ್ದರೂ ರಾಷ್ಟ್ರಕ್ಕೆ ಆಪತ್ತೇ. ಅವರ ಮೇಲೆ ಕಣ್ಣಿಟ್ಟಿರಬೇಕು).
ಸಂಶಯವೇ ಉಂಟಾಗದಂತೆ ನಡೆದುಕೊಳ್ಳುವ ಕೃತಕದೂತರು - ಎಂದರೆ ದೂತರೆಂಬಂತೆ ವರ್ತಿಸುವವರು ಇರುವರು. ಅವರು ಕಪಟಸ್ನೇಹ ತೋರಿ ನಿನ್ನಿಂದಲೋ ಮಂತ್ರಿಗಳ ಮೂಲಕವೋ ಮಂತ್ರಾಲೋಚನೆಗಳನ್ನು ಭೇದಿಸಿಬಿಡುತ್ತಿಲ್ಲ ತಾನೇ? (ನಮ್ಮ ದೇಶಕ್ಕೆ ಹಿತವಾದುದನ್ನೇ ತಾವು ಮಾಡುತ್ತಿದ್ದೇವೆಂದು ತೋರಿಸಿಕೊಂಡು ದೇಶದ್ರೋಹಮಾಡುತ್ತಿರುವ ಇಂದಿನ ವಿದೇಶೀ ಎನ್.ಜಿ.ಓಗಳನ್ನು ಇಲ್ಲಿ ಜ್ಞಾಪಿಸಿಕೊಳ್ಳಬಹುದು. ದೇಶದ ಗೃಹಮಂತ್ರಿಯು ಅವರ ಮೇಲೆ ಕಣ್ಣಿಟ್ಟಿದ್ದು ಕಾಲಕಾಲಕ್ಕೆ ಕಡಿವಾಣಗಳನ್ನು ಹಾಕುತ್ತಿರಬೇಕಾದುದು ಆದ್ಯಕರ್ತವ್ಯ).

ಮೂರು ಬಗೆಯ ಸಂಬಂಧದ ಜನರು ಪ್ರತಿಯೊಬ್ಬರಿಗೂ ಇರುವರು - ಶತ್ರು, ಮಿತ್ರ, ಹಾಗೂ ಉದಾಸೀನ (ಉದಾಸೀನನೆಂದರೆ ತಟಸ್ಥ) - ಎಂದು. ಮೂರೂ ಬಗೆಯ ಮಂದಿಯೂ ಏನೇನನ್ನು ಮಾಡಲು ಉತ್ಸುಕರಾಗಿರುವರೆಂಬುದನ್ನು ನೀನು ಅರಿತುಕೊಳ್ಳುತ್ತಿರುವೆ ತಾನೇ? ಸರಿಯಾದ ಸಮಯಗಳಲ್ಲಿ ಸಂಧಿಯನ್ನೂ ವಿಗ್ರಹವನ್ನೂ ಸಾಧಿಸುತ್ತಿರುವೆಯಲ್ಲವೇ?  (ಸಂಧಾನ ಮಾಡಿಕೊಳ್ಳುವುದು ಸಂಧಿ; ವಿಗ್ರಹವೆಂದರೆ ಕದನ). ಉದಾಸೀನರಾದವರು ಹಾಗೂ ಮಧ್ಯಸ್ಥರಾದವರೊಂದಿಗೆ ಯಾವ ಬಗೆಯ ನೀತಿಯನ್ನಿಟ್ಟುಕೊಂಡಿರುವೆ?

ಮಂತ್ರಿಗಳನ್ನು ಆಯ್ದುಕೊಳ್ಳಬೇಕಾದಾಗ, ಅವರು ಸತ್ಕುಲದವರೇ, ದೇಶಾನುರಾಗಿಗಳೇ? - ಎಂಬುದನ್ನು ಮೊದಲು ಪರೀಕ್ಷಿಸಬೇಕು. ಹಾಗೆ ಮಾಡುತ್ತಿದ್ದೀಯೆ ತಾನೆ?

ವಿಜಯವೆಂಬುದು ಎಷ್ಟಾದರೂ ಮಂತ್ರವನ್ನೇ ಆಧರಿಸಿರುವುದಲ್ಲವೇ? (ವಿಜಯೋ ಮಂತ್ರಮೂಲೋ ಹಿ) - ಎಂದರೆ ಸರಿಯಾದ ಮಂತ್ರಾಲೋಚನೆಯಿಂದಲೇ ವಿಜಯವೆಂಬುದು ಶಕ್ಯ. ಅದಕ್ಕೆ ರಾಜನ ಅಮಾತ್ಯರು, ಎಂದರೆ ಮಂತ್ರಿಗಳು, ಶಾಸ್ತ್ರಕೋವಿದರಾಗಿರಬೇಕು; ಅಷ್ಟು ಮಾತ್ರವಲ್ಲದೆ, ಗುಪ್ತವಾಗಿ ನಡೆದ ಮಂತ್ರಾಲೋಚನೆಗಳನ್ನು ಗುಟ್ಟಾಗಿಯೇ ಇಟ್ಟಿರುವವರಾಗಿರಬೇಕು; ಅವರೆಲ್ಲಾ ಹಾಗಿದ್ದಾರೆ ತಾನೆ? ಏಕೆಂದರೆ, ಹಾಗಿದ್ದರೆ ಮಾತ್ರವೇ ರಾಷ್ಟ್ರವು ಸುರಕ್ಷಿತವಾಗಿರುವುದು, ಹಾಗೂ ಶತ್ರುಗಳಿಂದಾಗಿ ನಾಶಕ್ಕೆ ಈಡಾಗದೆ ಇರುವುದು.

ಅಲ್ಲದೆ, ನೀನು ಅಕಾಲದಲ್ಲಿ ನಿದ್ರಾವಶನಾಗಿಬಿಡುತ್ತಿಲ್ಲವಷ್ಟೆ? ಜೊತೆಗೆ, ಕಾಲಕ್ಕೆ ಸರಿಯಾಗಿ ಏಳುತ್ತಿದ್ದೀಯೆ ತಾನೆ? ಅರ್ಥಜ್ಞನಾಗಿ ಅಪರರಾತ್ರಕಾಲದಲ್ಲಿ, ಎಂದರೆ ರಾತ್ರಿಯ ಕೊನೆಯ ಭಾಗದಲ್ಲಿ, ಅರ್ಥ-ಚಿಂತನೆಯನ್ನು ಮಾಡಬೇಕು. (ಇಲ್ಲಿ ಅರ್ಥವೆಂದರೆ ಮಾಡಬೇಕಾದ ಕರ್ತವ್ಯಗಳು). ನೀನು ಹಾಗೆ ಮಾಡುತ್ತಿರುವೆ ತಾನೆ?

ಮಂತ್ರಾಲೋಚನೆಯನ್ನು ಒಬ್ಬೊಂಟಿಗನಾಗಿಯೇ ಮಾಡಿಬಿಡುವುದಲ್ಲ. ಹಾಗೆಂದು ಬಹುಮಂದಿಯೊಂದಿಗೂ ಮಾಡುವಂತಿಲ್ಲ (ಆರು ಕಿವಿಗಳನ್ನು ತಲುಪಿದರೆ ಗುಟ್ಟು ರಟ್ಟಾಗಿಬಿಡುವುದೆಂಬ ಮಾತಿದೆ). ಹಾಗಿರುವುದರಿಂದ, ನೀನು ಮಾಡಿದ ಮಂತ್ರಾಲೋಚನೆಗಳು, ಶತ್ರುರಾಷ್ಟ್ರಗಳ ಕೈಸೇರಿ ತೊಂದರೆಯಾಗುತ್ತಿಲ್ಲ ತಾನೆ?

ನಾವು ಮಾಡುವ ಕಾರ್ಯಗಳು ಲಘುಮೂಲ-ವಾಗಿರಬೇಕು; ಲಘುಮೂಲವೆಂದರೆ ಅಲ್ಪವಾದ ಪ್ರಯತ್ನ; ಜೊತೆಗೇ ಮಹೋದಯವೂ ಆಗಿರಬೇಕು; ಮಹೋದಯವೆಂದರೆ ಹಿರಿದಾದ ಫಲವುಳ್ಳದ್ದು: ಹಾಗಿರಬೇಕು. ನಿನ್ನ ಕಾರ್ಯಗಳು ಹಾಗಿವೆಯಷ್ಟೆ?

ಸೂಚನೆ : 3/8/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 27 (Prasnottara Ratnamalike 27)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೨೭. ನರಕ ಯಾವುದು?

ಉತ್ತರ - ಪರರ ವಶದಲ್ಲಿ ಇರುವುದು.


ನರಕ ಯಾವುದು? ಎಂಬದು ಈಗಿನ ಪ್ರಶ್ನೆಯಾಗಿದೆ. ಅದಕ್ಕೆ ಉತ್ತರ ಪರರ ವಶದಲ್ಲಿ ಇರುವುದು ಅಂದರೆ ಬೇರೆಯವರ ಅಧೀನವಾಗಿ ಇರುವುದು ಎಂದರ್ಥ. ನರಕವೆಂದರೆ ದುಃಖ - ಸಂಕಟ - ಕಷ್ಟ. ಅದನ್ನು ಅನುಭವಿಸುವುದು. ಇಂತಹ ಸಂಕಟ ಎಲ್ಲಿ ಬರುತ್ತದೆ? ಅಂದರೆ ಪ್ರತಿಯೊಂದು ವಿಷಯದಲ್ಲೂ ಬೇರೆಯವರನ್ನು ಆಶ್ರಯಿಸುವುದರಿಂದ. ಅಂತಹ ನರಕ ಯಾತನೆ ಎಂಬುದು ಪ್ರಶ್ನೋತ್ತರದ ಆಶಯವಾಗಿದೆ. ಈ ಪ್ರಶ್ನೆಯ ಜೊತೆಯಲ್ಲಿ ನಮಗೊಂದು ಪ್ರಶ್ನೆ ಬರುತ್ತದೆ. ಬೇರೆಯವರನ್ನು ಆಶ್ರಯಿಸದೆ ಈ ಪ್ರಪಂಚದಲ್ಲಿ ಬದುಕಲು ಸಾಧ್ಯವೇ? ಎಂದು. ಖಂಡಿತವಾಗಿ ಇಲ್ಲ. ನಾವು ಬದುಕಬೇಕೆಂದರೆ ಇನ್ನೊಬ್ಬರನ್ನು ಅಥವ ಅವರಿಗೆ ಸಂಬಂಧಿಸಿದ ಪದಾರ್ಥವನ್ನು ಆಶ್ರಯಿಸಲೇಬೇಕು; ಆಶ್ರಯಿಸದೆ ಬದುಕಲು ಅಸಾಧ್ಯ. ಹೀಗಿರುವಾಗ ಬೇರೆಯವರನ್ನು ಆಶ್ರಯಿಸುವುದು ನರಕ ಹೇಗಾಗುತ್ತದೆ? ಎಂಬುದು ಇಲ್ಲಿ ಚಿಂತಿಸಬೇಕಾದ ವಿಷಯವಾಗಿದೆ. 


ಇಲ್ಲಿ ಹೇಳುತ್ತಿರುವುದು ಅರ್ಥ ವಿಭಿನ್ನವಾದುದು. ಬೇರೆಯವರನ್ನು ಆಶ್ರಯಿಸದೆ ಬದುಕಬೇಕು ಎಂಬ ಅರ್ಥದಲ್ಲಿ ಹೇಳುವ ವಿಷಯವಲ್ಲ. ಮತ್ತೇನು ಹಾಗಾದರೆ? ಸ್ವತಂತ್ರವಾದ ಜೀವನ ಇರಬೇಕು ಎಂದರ್ಥ. ಅಂದರೆ ತನ್ನ ಪರಿಶ್ರಮದಿಂದ ಕಟ್ಟಿಕೊಂಡ ವಿದ್ಯೆ ಸಂಪತ್ತು ಸಾಮರ್ಥ್ಯ ಇವುಗಳ ಮೇಲೆ ಬದುಕನ್ನು ಸಾಗಿಸುವಂಥಾದರೆ ಅದುವೇ ನಿಜವಾಗಿ ಸ್ವಾತಂತ್ರ್ಯ ಎಂದಾಗುತ್ತದೆ. ಅಂತಹ ಸ್ವತಂತ್ರವಾದ ಬದುಕು ಹೇಗಿರಲು ಸಾಧ್ಯ? ಎಂಬುದಕ್ಕೆ ಕಾಳಿದಾಸನು ರಘುವಂಶ ಮಹಾರಾಜರ ಜೀವನವಿಧಾನವನ್ನು ದೃಷ್ಟಾಂತವಾಗಿ ತಿಳಿತ್ತಾನೆ - ಬಾಲ್ಯದಲ್ಲಿ ಚೆನ್ನಾಗಿ ವಿದ್ಯೆಯನ್ನು ಗಳಿಸಬೇಕು; ಇದರ ಬಲದ ಮೇಲೆ ಗೃಹಸ್ಥಜೀವನದಲ್ಲಿ ವಿಷಯದ ಉಪಭೋಗ; ವಿದ್ಯೆ ಮತ್ತು ಉಪಭೋಗದ ಆಧಾರದ ಮೇಲೆ ಬದುಕಿನ ಚರಮಸ್ಥಿತಿಯಾದ ಯೋಗಮಯಜೀವನ. ಈ ಕ್ರಮದಲ್ಲಿ ಜೀವನ ನಡೆಸುವಂತಿದ್ದರೆ ಅದು ನಿಜವಾಗಿ ಸ್ವತಂತ್ರವಾದ ಜೀವನ. ಇದಕ್ಕೆ ಹೊರತಾಗಿದ್ದು ಪರತಂತ್ರ. ಯಾವಾಗ ತನ್ನ ಪರಿಶ್ರಮದಿಂದ ವಿದ್ಯೆ, ಸಂಪತ್ತು, ಸಾಮರ್ಥ್ಯ ಇವುಗಳನ್ನು ಗಳಿಸಿಕೊಳ್ಳುವುದಿಲ್ಲವೋ ಆಗ ಅವನು ಪರಾವಲಂಬಿಯಾಗಿಯೇ ಜೀವಿಸಬೇಕಾಗುತ್ತದೆ. ಜೀವಿಕೆಗೆ ಒಂದಷ್ಟು ವಸ್ತುಗಳು ಬೇಕು. ಅದನ್ನು ಖರೀದಿಸಲು ಅವನಲ್ಲಿ ಕಾಸು ಇಲ್ಲದಾದಾಗ ಬೇರೆಯವರಲ್ಲೇ ಅದನ್ನು ಕೇಳಬೇಕಾಗುತ್ತದೆ. ಇದುತಾನೆ ಪರಾವಲಂಬನೆ. ಮತ್ತು ವಿದ್ಯೆ ಗಳಿಸಲಿದ್ದರೆ ಅಂದರೆ ಅರಿವನ್ನು ಪಡೆಯದಿದ್ದರೆ ಮತ್ತೊಬ್ಬರಿಂದಲೇ ತಿಳಿಯುವ ಪಾರತಂತ್ರ್ಯ ನಮ್ಮದಾಗುತ್ತದೆ. ಅದರಿಂದ ನಾವು ಮೋಸ ಹೋಗುವ ಸಾಧ್ಯತೆ ಇರುತ್ತದೆ. ಇದರ ಫಲ ದುಃಖವಷ್ಟೇ. ದುಃಖವೇ ನರಕ; ಸುಖವೇ ಸ್ವರ್ಗ. ಆದ್ದರಿಂದ ಸಾಮರ್ಥ್ಯವನ್ನು ಗಳಿಸದಿದ್ದರೆ ಆಗ ನಾವು ಇನ್ನೊಬ್ಬರನ್ನು ಆಶ್ರಯಿಸುವುದು ಅತ್ಯಂತ ಅನಿವಾರ್ಯ. ಸಾಮರ್ಥ್ಯವನ್ನು ಗಳಿಸಿಕೊಂಡಾಗ ಇನ್ನೊಬ್ಬರನ್ನು ಆಶ್ರಯಿಸುವುದು ಕಡಿಮೆಯಾಗುತ್ತದೆ. ಸಾಮರ್ಥ್ಯ ಎಂದರೆ ದೈಹಿಕ, ವಾಚಿಕ ಮತ್ತು ಮಾನಸಿಕವಾದ ದೃಢತೆ. ಇವುಗಳು ಇಲ್ಲದಿದ್ದಾಗ ನಾವು ಬೇರೆಯವರನ್ನು ಆಶಯಿಸುವುದು ಅತ್ಯಂತ ಅನಿವಾರ್ಯವಾಗುತ್ತದೆ. ಆಗ ಬೇರೆಯವರು ಹೇಳಿದಂತೆ ನಡೆದುಕೊಳ್ಳುತ್ತಾ ನಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡು ಮುಂದೆ ನರಕಯಾತನೇಯನ್ನೇ ಅನುಭವಿಸಬೇಕಾಗುತ್ತದೆ. ನರಕದಲ್ಲಿ ಅನುಭವಿಸುವಷ್ಟೇ ಯಾತನೆಯನ್ನು ನಾವು ಅನುಭವಿಸುತ್ತಾ ಅನುಭವಿಸುತ್ತಾ ಜೀವಿಸಬೇಕಾಗುತ್ತದೆ. ಹಾಗಾಗಿ ಇವು ಇಲ್ಲದಿರುವಿಕೆಯೇ ವಸ್ತುತಃ ಸ್ವಾತಂತ್ರ್ಯ. ಹಾಗಾಗಿ ಇವುಗಳನ್ನು ನಾವು ಪರಿಶ್ರಮದಿಂದ ಸಂಪಾದಿಸಿಕೊಳ್ಳೋಣ ಎಂಬುದು ಇದರ ತಾತ್ಪರ್ಯವಾಗಿದೆ.


ಸೂಚನೆ : 3
/8/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಅಷ್ಟಾಕ್ಷರೀ 86 ಜೀವೋ ಜಪತಿ ಸರ್ವದಾ (Astaksari 86)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಜೀವವು ಸದಾ ಜಪಿಸುತ್ತಿರುತ್ತದೆ

ಯಾವುದಾದರೂ ಕೆಲಸವು ಬಹಳ ಸರಳವೂ ಸುಲಭವೂ ಆಗಿದ್ದಲ್ಲಿ, ಅದನ್ನು ಹೇಳಲು, "ಓ, ಅದೇನು ಮಹಾ ಕಷ್ಟ? ಅದು ನೀರು ಕುಡಿದಷ್ಟು ಸುಲಭ" ಎನ್ನುವುದುಂಟು. ಆಕಾಶದಲ್ಲಿ ಪಕ್ಷಿಯು ಅನಾಯಾಸವಾಗಿ ಹಾರಬಲ್ಲುದು; ಆದರೆ ಅದರ ಗುರುತುಗಳೇ ಅಲ್ಲಿರವು; ಹಾಗೆಯೇ ನೀರಿನಲ್ಲಿ ಮೀನಿನ  ಈಜೂ: ಗುರುತುಗಳೇ ಉಳಿಯವು!

ಮೇಲೆ ಹೇಳಿದುದು ನೀರಿನ ಸಮಾಚಾರವಾಯಿತು. ಆದರೆ ಅದಕ್ಕಿಂತಲೂ ಕಷ್ಟವಾದುದು ಗಾಳಿಯ ಸಮಾಚಾರ. ನೀರನ್ನಾದರೂ ಕಂಡೇವು, ಗಾಳಿಯನ್ನು ಕಂಡೇವೇ? ಗಾಳಿಗೆ ರೂಪವಿಲ್ಲವಾಗಿ, ಕಣ್ಣದನ್ನು ಗ್ರಹಿಸಲಾಗದು. ಪಂಚೇಂದ್ರಿಯಗಳಲ್ಲಿ ಚರ್ಮಕ್ಕೆ ಮಾತ್ರವೇ ಸಿಗುವಂತಹುದದು.

ಇನ್ನು ಶರೀರದೊಳಗೆ ಸಂಚರಿಸುವ ವಾಯುವನ್ನೇ ಪ್ರಾಣವೆನ್ನುವುದು. ಅದರ ನಡೆಯನ್ನು ಹಿಡಿಯುವುದು ಮತ್ತೂ ಕಷ್ಟವೇ. ಅದು ಒಂದಿಷ್ಟು ಗೋಚರವಾಗುವುದು ಮೂಗಿನೊಳಗೆ. ಇನ್ನೂ ಸೂಕ್ಷ್ಮವಾಗಿ ಗಮನಿಸಿಕೊಂಡರೆ ಗಂಟಲಿನೆಡೆಯಲ್ಲಿ. ಆಮೇಲಿನ್ನೇನಿದ್ದರೂ ಎದೆ/ಹೊಟ್ಟೆಗಳ ಏರಿಳಿತದಲ್ಲಿ. ಅನಾರೋಗ್ಯವಿದ್ದಾಗ ಗುದದ್ವಾರದಿಂದ ಅದರ ನಿರ್ಗಮನದಲ್ಲಿ.

ಯೋಗವಿದ್ಯೆಯಲ್ಲಿ ಪ್ರಾಣದ ಸೂಕ್ಷ್ಮಭೇದಗಳನ್ನೂ ಗಮನಿಸಲಾಗುತ್ತದೆ. ಪ್ರಾಣಕ್ಕೇ ಐದು ಕೆಲಸಗಳೆಂದು ಹೇಳಿ, ತದನುಸಾರ ಪಂಚ-ನಾಮಗಳನ್ನು ಹೇಳಿದೆ: ಪ್ರಾಣ-ಅಪಾನ-ವ್ಯಾನ-ಉದಾನ-ಸಮಾನಗಳೆಂದು.

ಸಾಧಾರಣವಾಗಿ ಯಾರೂ ಗಮನಿಸದ ಒಂದು ಅಂಶವನ್ನು ಯೋಗಶಾಸ್ತ್ರ-ತಂತ್ರಶಾಸ್ತ್ರಗಳು ಗಮನಿಸಿವೆ. ಅದೆಂದರೆ ನಮ್ಮ ಉಸಿರಾಟದಲ್ಲೇ ಒಂದು ವಿಶಿಷ್ಟಬಗೆಯಿರುವುದು. ಉಸಿರು ಹೊರಗೆ ಹೋಗುವಾಗ ಹಕಾರರೂಪವಾಗಿಯೂ, ಮತ್ತೆ ಉಸಿರೆಳೆದುಕೊಳ್ಳುವಾಗ ಸಕಾರರೂಪವಾಗಿಯೂ ಇರುತ್ತದೆ.

ಈ ಎರಡಕ್ಷರಗಳೊಂದಿಗೆ ಕ್ರಮವಾಗಿ ಅನುಸ್ವಾರ-ವಿಸರ್ಗಧ್ವನಿಗಳೂ ಸೇರಿಕೊಳ್ಳುವುದರಿಂದ ಹಂ ಮತ್ತು ಸಃ ಎಂದಾಗುತ್ತದೆ. ಇವುಗಳ ಸೇರ್ಪಡೆಯಿಂದ ನಮ್ಮ ಉಸಿರಾಟವೇ 'ಹಂ-ಸಃ ' ಎಂದಾಗುತ್ತಿರುತ್ತದೆ.

ಮಂತ್ರೋಪದೇಶವಾಗಿರುವವರು ಮಂತ್ರಜಪವನ್ನು ಕಾಲಕಾಲಕ್ಕೆ ಮಾಡುತ್ತಿರುವರಲ್ಲವೇ? ಏನು ಜಪವೆಂದರೆ? ಮಂತ್ರಾಕ್ಷರಗಳನ್ನು ಮತ್ತೆ ಮತ್ತೆ ಉಚ್ಚರಿಸುತ್ತಿರುವುದೇ ಅದು.

ನಮ್ಮ ಉಸಿರಾಟವು ಸದಾ ನಡೆಯುತ್ತಿದ್ದು "ಹಂಸಃ" ಎಂಬ ಉಚ್ಚಾರಣೆಯು ಅನುಸ್ಯೂತವಾಗಿ ನಡೆಯುತ್ತಲೇ ಇರುತ್ತದೆ. ಹೀಗಾಗಿ ಇದೇ ಒಂದು ಜಪ! ಹಂಸಮಂತ್ರದ ಜಪವಿದು. ಇದು ಸರ್ವದಾ ಆಗುತ್ತಿರುವುದನ್ನೇ, "ಜೀವವು ಸದಾ ಜಪಿಸುತ್ತಿರುವುದು" ಎನ್ನುತ್ತಾರೆ (ಜೀವೋ ಜಪತಿ ಸರ್ವದಾ).

ಜಪಮಾಡುತ್ತಿರುವಾಗ ಜಪಾಕ್ಷರಗಳು ಬೇರೆಯವರಿಗೂ ಕೇಳಿಸುವಂತಿದ್ದರೆ ಅದನ್ನು ಉಚ್ಚೈರ್ಜಪವೆನ್ನುವರು. ತುಟಿಗಳು ಅಲುಗಾಡುತ್ತಿರುವಷ್ಟೇ ಗೋಚರವಾಗುತ್ತಿದ್ದರೆ ಅದನ್ನು ಉಪಾಂಶು-ಜಪವೆನ್ನುವರು. ತುಟಿಯೂ ಆಡದೆ ಮನಸ್ಸಿನೊಳಗೇ ಜಪಕ್ರಿಯೆಯು ನಡೆಯುತ್ತಿದ್ದರೆ ಅದನ್ನು ಮಾನಸ-ಜಪವೆಂದು ಹೇಳುತ್ತಾರೆ. ಉಚ್ಚೈರ್ಜಪವು ಸಾಧಾರಣವೆಂದೂ, ಉಪಾಂಶು-ಜಪವು ಪ್ರಶಸ್ತವೆಂದೂ, ಮಾನಸ-ಜಪವೇ ಶ್ರೇಷ್ಠವೆಂದೂ ಪರಿಗಣಿತವಾಗಿವೆ.

ಅಯತ್ನವಾಗಿ ಆಗುತ್ತಿರುವ ಹಂಸಮಂತ್ರವು ಹೀಗೆ ತುಟಿಯ ಅಲ್ಲಾಡುವಿಕೆಯೆಂಬುದಿಲ್ಲದೆಯೂ ನಡೆಯುತ್ತಿರುತ್ತದೆ. ಅಲ್ಲದೆ, ಜಪಕ್ಕೆ ಅವಶ್ಯವಾದವು ಸಂಕಲ್ಪ ಹಾಗೂ ಜಪಸಂಖ್ಯಾ-ಗಣನೆ. ಅವಿಲ್ಲದೆಯೂ ನಡೆಯುವುದೆಂಬ ಕಾರಣಕ್ಕಾಗಿಯೇ ಇದನ್ನು ಅಜಪಾ-ಜಪವೆನ್ನುವುದು – ಎಂಬುದಾಗಿ ಶ್ರೀರಂಗಮಹಾಗುರುಗಳು ವಿವರಿಸಿದ್ದಾರೆ.

ಇತ್ತ ಸಂಸ್ಕೃತದ ಸಂಧಿನಿಯಮವನ್ನು ಗಮನಿಸಿದರೆ ಹಂಸಃ ಹಂಸಃ ಹಂ… ಎಂಬುದು ಹಂಸೋಹಂಸೋಹಂ… ಎಂದಾಗುತ್ತದೆ. ಹೀಗಾಗಿ, ಹಂಸೋ, ಹಂಸೋ ಎನ್ನುತ್ತಿರುವುದು ಸೋಹಂ, ಸೋಹಂ ಎನ್ನುವಂತೆ(ಯೂ) ಕೇಳಿಸುತ್ತದೆ.

ಸೇರಿಸಿದಾಗ ಹೀಗೆ ಕೇಳಿಸುವುದೇ, ಸೇರಿರುವುದನ್ನು ಬಿಡಿಸಿ ನೋಡಿದಾಗ ಮತ್ತೊಂದು ಬಗೆಯಾಗುವುದು! ಸೋಹಂ ಎನ್ನುವುದು ಸಃ ಅಹಂ ಎಂದಾಗುತ್ತದೆ.

ಸಂಸ್ಕೃತದಲ್ಲಿ ಸಃ ಎಂದರೆ ಅವನು, ಅಹಂ ಎಂದರೆ ನಾನು. ಇವು ಕ್ರಮವಾಗಿ ದೇವ-ಜೀವರನ್ನು ಸೂಚಿಸುತ್ತವೆ. ಹೀಗಾಗಿ ಈ ಜಪವು ಜೀವದೇವ-ಯೋಗವನ್ನೂ ತಿಳಿಸಿಕೊಡುತ್ತದೆ!

ವ್ಯಾಕರಣ ಪ್ರಕ್ರಿಯೆಯಲ್ಲೂ ಮಂತ್ರಶಾಸ್ತ್ರಪ್ರಕ್ರಿಯೆಯಲ್ಲೂ ಸ್ವರಗಳ ಸ್ವತಂತ್ರತೆಯನ್ನೂ ವ್ಯಂಜನಗಳ ಅಸ್ವತಂತ್ರತೆಯನ್ನೂ ಹೇಳಲಾಗುತ್ತದೆ. ಅಲ್ಲದೆ, ವ್ಯಂಜನಗಳು ಕಣಿಕದಂತೆ, ಸ್ವರಗಳು ಹೂರಣದಂತೆ.

ಪ್ರಕೃತ, ಸಕಾರ-ಹಕಾರಗಳು ವ್ಯಂಜನಗಳು. ವ್ಯಂಜನಗಳನ್ನು ಕಳೆದಾಗ ಸೋ ಮತ್ತು ಹಂ ಎಂಬಲ್ಲಿ ಉಳಿಯುವುವು ಓ ಮತ್ತು ಅಂ ಎಂಬುವಷ್ಟೇ. ಇವುಗಳ ನಡುವೆಯೂ ಪೂರ್ವರೂಪಸಂಧಿಯಾಗಿ ಓಂ ಎಂಬುದಷ್ಟೇ ಉಳಿಯುವುದು. ಸಂಧಿಗಳ ಸೃಷ್ಟಿಸಹಜತೆ-ವೈಜ್ಞಾನಿಕತೆಗಳನ್ನು ಶ್ರೀರಂಗಮಹಾಗುರುಗಳು ಪ್ರಯೋಗಬದ್ಧವಾಗಿ ತೋರಿಸಿಕೊಟ್ಟಿರುವರು.

ಈ ಸೂಕ್ಷ್ಮಗಳು ಯೋಗಿಗಳಿಗಷ್ಟೆ ಗೋಚರವಾಗುವ ವಿಷಯ. ಯೋಗಮಾರ್ಗದಲ್ಲಿ ಅವರ ಆಂತರಂಗಿಕವಾದ ನಡೆಯು ಖಗಗಳ ಖ-ಗತಿಯಂತೆ, ಎಂದರೆ ಪಕ್ಷಿಗಳ ಆಕಾಶ-ಗಮನದಂತೆ; ಮೀನುಗಳ ಜಲ-ಗಮನದಂತೆ: ಅಷ್ಟೇ ಅನಾಯಾಸವಾದುದು; ಹಾಗಿದ್ದೂಏನೂ ಗುರುತೇ ಉಳಿಯದುದೂ!

ಹೀಗಾಗಿ, ಯೋಗಿಗಳು ನಿರೂಪಿಸಿರುವಂತೆ, ನಮ್ಮ ಉಸಿರಾಟದೊಳಗೆ ಓಂಕಾರವೇ ಗರ್ಭೀಕೃತವಾಗಿದೆ! ಎಲ್ಲ ಮಂತ್ರಗಳಿಗೂ ಮಿಗಿಲಾದ ಓಂಕಾರಮಂತ್ರವು ಹೀಗೆ ನಮ್ಮ ಉಸಿರಾಟದ ಸಾರವೇ ಆಗಿರುವುದು ಪರಮಾಶ್ಚರ್ಯವಲ್ಲವೇ?

ಯೋಗಿಗಳ ಉಸಿರಾಟದ ಬಗೆಯಾಗಲಿ, ಅದರ ರಹಸ್ಯಗಳಾಗಲಿ, ಜನಸಾಮಾನ್ಯಕ್ಕೆ ಎಟುಕಿಬಿಡದೆಂಬುದೂ ಅಷ್ಟೇ ನಿಜವಲ್ಲವೇ?

ಸೂಚನೆ: 2/8//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ 72 ತ್ರಿಲೋಕಪ್ರಭುವಿನ ಚರಣದ ಸವಿ-ಸೊಬಗುಗಳು (Krishakarnamrta 72)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಇದೋ ಬರುತ್ತಿದ್ದಾನೆ, ನಮ್ಮ ದೇವ - ಎಂಬುದಾಗಿ ಕೃಷ್ಣನನ್ನು ಕುರಿತಾಗಿ ಹೇಳುತ್ತಾನೆ, ಲೀಲಾಶುಕ. ಯಾರಾದರೂ ಬಂದಾಗ ನಮಗೆ ಬಹಳ ಸಂತೋಷವೇ ಆಗಿಬಿಟ್ಟರೆ, ಆ ಸಂಭ್ರಮವೇ ನಮ್ಮ ಬಾಯಲ್ಲಿ "ಇದೋ ಇದೋ ಬಂದರು" - ಎಂಬ ದ್ವಿರುಕ್ತಿಯನ್ನು ಮೂಡಿಸುತ್ತದೆ. ದ್ವಿರುಕ್ತಿಯೆಂದರೆ ಎರಡೆರಡು ಬಾರಿ ಹೇಳುವುದು. ಎಂದೇ "ಅಯಂ ಅಯಂ" ಎಂದಿಲ್ಲಿ  ಹೇಳಿರುವುದು.

ದೇವನೆಂಬ ಪದವೇ ಎರಡು ಅರ್ಥಗಳನ್ನು ಹೊಂದಿದೆ. ಕಾಂತಿಯಿಂದ ಕೂಡಿರುವವನು ಎಂಬ ಅರ್ಥವೊಂದಿದೆ. ವಿಶೇಷವಾಗಿ ಕ್ರೀಡಿಸುವನೆಂಬ ಅರ್ಥವೂ ಇದೆ. ಕೃಷ್ಣನ ಕ್ರೀಡೆಗಳೇನು ಒಂದೇ ಎರಡೇ? ಎಂದೇ, ದೇವನೆಂದರೆ ಅನೇಕ ಲೀಲೆಗಳಿಂದ ಕೂಡಿದವನೆಂದೂ ಆಗುವುದೇ.

ಹೇಗೆ ಬರುತ್ತಿದ್ದಾನೆ, ನಮ್ಮ ಕೃಷ್ಣದೇವ? ವೇಣುಗಾನವನ್ನು ಮಾಡುತ್ತಾ ಬರುತ್ತಿದ್ದಾನೆ. ನರ್ತನವನ್ನು ಚೆನ್ನಾಗಿ ಬಲ್ಲವರು ಸುಮ್ಮನೆ ನಡೆದುಬರುತ್ತಿದ್ದರೂ, ಅವರ ನಡೆಯಲ್ಲೇ ಒಂದು ತಾಳದ ಬಗೆಯು ತೋರುವುದಲ್ಲವೇ? ಹಾಗೆಯೇ ಶ್ರೀಕೃಷ್ಣನು ಹೆಜ್ಜೆಯಿಡುವುದರಲ್ಲೇ ಒಂದು ಬಗೆಯಿದೆ.

ಆ ಬಗೆಯನ್ನು ಆತನ ಗೆಜ್ಜೆಗಳ ಧ್ವನಿಯೇ ತೋರಿಸಿಕೊಟ್ಟೀತು. ಮತ್ತೆ ಆತನ ವೇಣುಗಾನವಾದರೂ ಅದಕ್ಕೆ ಅನುಸಾರವಾಗಿಯೇ, ಎಂದರೆ ಆ ತಾಳಕ್ಕೆ ಹೊಂದಿಕೊಂಡಂತೆಯೇ, ಇರುವುದು. ಅದನ್ನೇ ಇಲ್ಲಿ ಅನುಕೂಜನವೆಂದಿರುವುದು. ತನ್ನ ನಡೆಯ ಬಗೆಯನ್ನೇ ಅದು ಅನುಸರಿಸಿಬರುತ್ತಿದೆ. ಅಷ್ಟೇ ಅಲ್ಲ. ಅನುಸ್ಯೂತವಾದ ಕೂಜನವೂ ಅನುಕೂಜನವೇ. ಕೂಜನವೆಂದರೆ ಇಂಪಾದ ಧ್ವನಿ. ಕೋಗಿಲೆಯ ಕೂಗಿಗೆ ಕೂಜನವೆನ್ನುವರು. ಈ 'ಕೂಜನ'ವೆಂಬ ಪದವೇ ಕನ್ನಡದಲ್ಲಿ ಕೂಗು – ಎಂದಾಗಿರುವುದು.

ಕೃಷ್ಣನು ಕಾಲ್ನಡಿಗೆಯಿಂದ ಬರುತ್ತಿದ್ದಾನೆ. ಅರ್ಥಾತ್, ಯಾವುದೋ ವಾಹನದಿಂದಲ್ಲ. ಅದುವೇ ನನ್ನ ಭಾಗ್ಯ. ಏಕೆಂದರೆ ಆತನ ಚರಣಗಳ ದರ್ಶನವಾಗಲು ಹೆಚ್ಚು ಅನುಕೂಲವಾಯಿತಲ್ಲವೇ?

ಕೃಷ್ಣನ ಆಗಮನದಲ್ಲಿ ಆತನ ಪಾದಗಳ ನಡೆಯೇ ಕವಿಯನ್ನು ವಿಶೇಷವಾಗಿ ಆಕರ್ಷಿಸಿರುವುದು. ಹೇಗಿವೆ ಆತನ ಪಾದಗಳು? - ಎಂಬುದನ್ನು ಆರು ವಿಶೇಷಣಗಳಿಂದ ತಿಳಿಸುತ್ತಾನೆ.

ತ್ರಿಭುವನವನ್ನೇ ಸರಸವನ್ನಾಗಿಸಿರುವ ಪಾದಗಳು, ಅವು. ಸರಸವೆಂದರೆ ರಸದಿಂದ ಕೂಡಿರತಕ್ಕವು, ಅರ್ಥಾತ್ ಆನಂದದಿಂದ ಕೂಡಿರುವಂತಹವು. ರಸವೆಂದರೇ ಆನಂದ. ಅಥವಾ ರಸದ ಫಲವೇ ಆನಂದ.

ರಸವೆಂದರೆ ಶೃಂಗಾರರಸವೂ ಆಗಬಹುದಲ್ಲವೇ? ಲೋಕಸಾಮಾನ್ಯದಲ್ಲಿ ಶೃಂಗಾರರಸವಿರುವೆಡೆಯಲ್ಲೇ ಅಲ್ಲವೆ, ಸಂತೋಷೋಲ್ಲಾಸಗಳು ಚಿಮ್ಮುವುದು, ಜೀವನದ ಲವಲವಿಕೆಯು ತೋರುವುದು?

ಕೃಷ್ಣನಿಲ್ಲವೋ ನಿಜವಾದ ಮತ್ತು ಪೂರ್ಣವಾದ ಮಧುರರಸವದೆಂತು ಸಾಧ್ಯ? ಆತನು ಹೆಜ್ಜೆಯಿಡುತ್ತಲೇ ಲೋಕಗಳೆಲ್ಲ ನಳನಳಿಸುವಂತಾಗಿರುವುದು. ಹೀಗಾಗಿ ಶ್ರೀಕೃಷ್ಣಚರಣಗಳೇ ತ್ರಿಭುವನ-ಸರಸಗಳು.

ಹಾಗಾಗುವುದೂ ಏಕೆ? ಏಕೆಂದರೆ ಆ ಕೃಷ್ಣಪದಗಳು ದಿವ್ಯಲೀಲಾಕುಲಗಳು. ಎಂದರೆ ದಿವ್ಯಲೀಲೆಗಳಿಂದ ಆಕುಲವಾಗಿರತಕ್ಕವು. ಆಕುಲವೆಂದರೆ ತುಂಬಿಹೋಗಿರುವುದು. ಎಂತಹವು ಕೃಷ್ಣನ ಲೀಲೆಗಳು? ಮದಗಜದ ಲೀಲೆಯನ್ನು ಹೋಲತಕ್ಕವು. ಮತ್ತ-ಮಾತಂಗಗಳ ಲೀಲೆಯನ್ನು ಮೀರಿಸತಕ್ಕವೆಂದರೂ ಅಷ್ಟೇ ಸರಿಯೇ.

ಎಂದೇ, ಮೂರನೆಯದಾಗಿ, ಅವು ದಿಕ್ಕುದಿಕ್ಕುಗಳಲ್ಲಿಯೂ ತರಲವಾದವು. ತರಲವೆಂದರೆ ಚಂಚಲ. ಕೃಷ್ಣನು ವೇಣುಗಾನಕ್ಕೆ ಪ್ರಸಿದ್ಧನಿರಬಹುದು. ಆತನು ನಾಟ್ಯಜ್ಞನೆಂಬುದೂ ಅಷ್ಟೇ ಪ್ರಸಿದ್ಧವೇ. ಕಾಳಿಯಸರ್ಪದ ಫಣೆಯ ಮೇಲೆ ನರ್ತನಗೈಯಲಿಲ್ಲವೇ ಆತ? ನರ್ತಿಸುತ್ತಿರುವವರ ಚರಣಗಳು ನಿಶ್ಚಲವಾಗಿರುವುದೆಂತು? ರಂಗಮಂಚದಲ್ಲೆಲ್ಲಾ ಸುಳಿದಾಡುವುವು ನರ್ತಕರ ಪಾದಗಳು. ಕೃಷ್ಣನರ್ತನಕ್ಕೆ ಮಂಚವೇ ಆದವು ಈ ಫಣಿಯ ಹೆಡೆಗಳು. ಪಟುಗತಿಯ ನಟನೇ ಈ ಕೃಷ್ಣ-ವಟು.

ನಾಲ್ಕನೆಯದಾಗಿ, ಅವು ದೀಪ್ತಭೂಷಾ-ಪರಗಳು. ದೀಪ್ತಭೂಷೆಗಳೆಂದರೆ ಹೊಳೆಯುವ ಭೂಷಣಗಳು. ಪಾದಾಂಗದ, ನೂಪುರ - ಮುಂತಾದುವು ಪಾದಭೂಷಣಗಳು. ಈ ಪಾದಾಭರಣಗಳಿಂದಾಗಿ ಉತ್ಕೃಷ್ಟವೆನಿಸಿರುವ ಪಾದಗಳು, ಶ್ರೀಕೃಷ್ಣನವು. ಪರವೆಂದರೆ ಶ್ರೇಷ್ಠವಲ್ಲವೇ?

ಐದನೆಯದಾಗಿ, ಅವು ಅಶರಣರಿಗೆ ಶರಣವೆನಿಸತಕ್ಕವು. ಹಾಗೆಂದರೆ, ಆಸರೆಯಿಲ್ಲದವರಿಗೆ ರಕ್ಷಕವಾದಂತಹವು. ಮತ್ತ ಇಷ್ಟೆಲ್ಲ ಕಾರಣಗಳಿಂದಾಗಿಯೇ ಅವು, ಆರನೆಯದಾಗಿ, ಅದ್ಭುತಗಳು.

ಇಂತಹ ಅದ್ಭುತಪಾದಗಳಿಂದ ಹೆಜ್ಜೆಯಿಟ್ಟು ಬರುತ್ತಿರುವ ಕೃಷ್ಣದೇವನು ಕಣ್ಣಿಗೆ ಹಬ್ಬವಾಗಿದ್ದಾನೆ.

ತ್ರಿಭುವನ-ಸರಸಾಭ್ಯಾಂ, ದಿವ್ಯ-ಲೀಲಾಕುಲಾಭ್ಯಾಂ
ದಿಶಿ ದಿಶಿ ತರಲಾಭ್ಯಾಂ ದೀಪ್ತ-ಭೂಷಾ-ಪರಾಭ್ಯಾಮ್ |
ಅಶರಣ-ಶರಣಾಭ್ಯಾಂ ಅದ್ಭುತಾಭ್ಯಾಂ ಪದಾಭ್ಯಾಂ
ಅಯಂ ಅಯಂ ಅನುಕೂಜದ್-ವೇಣುರಾಯಾತಿ ದೇವಃ ||


***

ಜಗತ್-ಪ್ರಳಯವಾದಾಗ ಭಗವಂತನೇನು ಮಾಡುತ್ತಿರುತ್ತಾನೆ? - ಎಂಬ ಪ್ರಶ್ನೆ ಒಮ್ಮೊಮ್ಮೆ ಬರುವುದಲ್ಲವೇ? ಆ ಪ್ರಶ್ನೆಗೆ ಉತ್ತರ ಈ ಶ್ಲೋಕದಲ್ಲಿದೆ.

ಆಗಲೇ ಕೃಷ್ಣನು ಎಳೆಯ ಶಿಶುವಾಗಿ ಆಲದೆಲೆಯ ಮೇಲೆ ಮಲಗಿರುವುದು. ಎಲೆಯ ಮೇಲೆ ಶಯಿಸಿರುವ ಮಗುವನ್ನು ಪುರಂದರದಾಸರೂ ಕೊಂಡಾಡಿರುವರಲ್ಲವೇ? "ಪಾಲಗಡಲೊಳು ಪವಡಿಸಿದವನೆ/ಆಲದೆಲೆಯ ಮೇಲೆ ಮಲಗಿದ ಶಿಶುವೇ/ಶ್ರೀಲತಾಂಗಿಯರ ಚಿತ್ತವಲ್ಲಭನೆ/ಬಾಲ ನಿನ್ನನು ಪಾಡಿ ತೂಗುವೆನಯ್ಯಾ" ಎಂಬುದು ಆ ನುಡಿ. "ಜೋ ಜೋ ಜೋ ಕೃಷ್ಣ ಪರಮಾನಂದ" – ಎಂಬ ಅವರ ಹಾಡಿನ ಒಂದು ಚರಣವದು.

ಆಗ ಆ ಬಾಲಮುಕುಂದನು ಏನು ಮಾಡುತ್ತಿರುವನು? ಎಲ್ಲಾಎಳೆಯ ಮಕ್ಕಳು ಮಾಡುವುದನ್ನೇ ಆತನೂ ಮಾಡುವನು. ಏನದು? ಕಾಲನ್ನೋ ಕಾಲ್ಬೆರಳನ್ನೋ ಹಿಡಿದು ಬಾಯಲ್ಲಿಟ್ಟುಕೊಂಡು ಚೀಪುವುದು.

ಈ ಬಾಲಕೃಷ್ಣನ ಕೈಗಳು ಕಮಲದಂತೆ. ಎಂದರೆ ಅದರಂತೆ ಕೋಮಲ, ಅದರಂತೆ ಸುಂದರ. ಎಂದೇ ಅದನ್ನು ಕರಕಮಲ ಅಥವಾ ಕರಾರವಿಂದ ಎನ್ನುವುದು. ಬರೀ ಕೈಗಳೇನು, ಕಾಲ್ಗಳೂ ಹಾಗೆಯೇ. ಆದುದರಿಂದ ಅದು ಪದಾರವಿಂದವಾಯಿತು. ಕೈಕಾಲುಗಳೇ ಕಮಲದಂತಿರುವುದಾದರೆ ವದನದ ಬಗ್ಗೆ ಹೇಳುವುದೇನು? ಮುಖವಂತೂ ಮತ್ತೂ ಮೃದುಲವೂ ಮತ್ತೂ ಮಧುರವೂ ಆಗಿದ್ದು ಅದೂ ಕಮಲವನ್ನು ಮತ್ತೂ ಹೋಲುವುದೇ ಸರಿ. ಅಲ್ಲಿಗೆ ತನ್ನ ಕೈಯೆಂಬ ಕಮಲದಿಂದ ಕಾಲೆಂಬ ಕಮಲವನ್ನು ಬಾಯೆಂಬ ಕಮಲದೊಳಗೆ ಇಡುತ್ತಿದ್ದಾನೆ, ಮುದ್ದು ಕೃಷ್ಣ.

ಪುರಾಣಗಳು ಹೇಳುವಂತೆ, ಇದು ಮಾರ್ಕಂಡೇಯನಿಗಾದ ದರ್ಶನವಂತೆ. ಆತನು ಭಗವಂತನನ್ನು ಕುರಿತು ತಪಸ್ಸು ಮಾಡಿ ಆತನ ಮಾಯೆಯನ್ನು ತೋರಬೇಕೆಂದು ಕೇಳಿಕೊಂಡಿದ್ದನಂತೆ. ಒಮ್ಮೆ ನದೀತೀರದಲ್ಲಿ ಆತನಿದ್ದಾಗ ಭಾರಿ ಗಾಳಿಮಳೆಗಳು ಬಂದು ಸಾಕ್ಷಾತ್ ಪ್ರಳಯದ ಅನುಭವವಾಯಿತಂತೆ. ಆಗಿನ ಕತ್ತಲಲ್ಲಿ ಬಳಲಿ ಮಾರ್ಕಂಡೇಯನು ತತ್ತರಿಸುತ್ತಿದ್ದಾಗ ವಟಪತ್ರಶಾಯಿಯಾಗಿ ಕಾಲ್ಬೆರಳನ್ನು ಚೀಪುತ್ತಿದ್ದ ಸುಂದರಶಿಶುವೊಂದರ ದರ್ಶನವಾಗಿ ಒಡನೆಯೇ ಸರ್ವಾಯಾಸಪರಿಹಾರವೂ ಆಗಿ ಮಹಾನಂದವಾಯಿತಂತೆ. ಆ ಶಿಶುವೇ ಈ ಬಾಲಕೃಷ್ಣ.

ಇದರ ತತ್ತ್ವಾರ್ಥವನ್ನು ಶ್ರೀರಂಗಮಹಾಗುರುಗಳು ವಿವರಿಸಿದ್ದಾರೆ. ತನ್ನ ಸೃಷ್ಟಿಯು ಹೇಗಿದೆಯೆಂಬುದನ್ನು ದೇವನು ಆಸ್ವಾದನೆ ಮಾಡುವ ಪರಿಯಿದು - ಎಂದು. ಆತನ ಪಾದವೇ ಜಗತ್ತಾಗಿರುವುದು – ಎಂಬುದಾಗಿ ಪುರುಷಸೂಕ್ತವು ಹೇಳುತ್ತದಲ್ಲವೇ? ಸೃಷ್ಟೀಶನೇ ಸ್ವ-ಸೃಷ್ಟಿಯ ಸವಿಗಾಣುವ ಸೊಗಸಿನ ಸಂದರ್ಭವಿದು.

ಕಿರಿದಾದ ಶ್ಲೋಕ, ಸಾಕಷ್ಟು ಪ್ರಸಿದ್ಧವಾದದ್ದೇ.

ಕರಾರವಿಂದೇನ ಪದಾರವಿಂದಂ / 

ಮುಖಾರವಿಂದೇ ವಿನಿವೇಶಯಂತಂ |

ವಟಸ್ಯ ಪತ್ರಸ್ಯ ಪುಟೇ ಶಯಾನಂ / 

ಬಾಲಂ ಮುಕುಂದಂ ಮನಸಾ ಸ್ಮರಾಮಿ ||

ಸೂಚನೆ : 2/08/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, July 20, 2025

ವ್ಯಾಸ ವೀಕ್ಷಿತ 146 ಬಹುಶ್ರುತರಾದ ನಾರದರಿಗೆ ಯುಧಿಷ್ಠಿರನು ಸಲ್ಲಿಸಿದ ಆದರಾತಿಥ್ಯ (Vyaasa Vikshita 146)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ತಾರ್ಕಿಕವಾಗಿ ಮಾತನಾಡುವಾಗ, ಆಡುವ ಮಾತಿನಲ್ಲಿ ಒಂದು ಕ್ರಮಬದ್ಧತೆಯಿರಬೇಕೆನ್ನುತ್ತದೆ, ತರ್ಕಶಾಸ್ತ್ರ. ಏನದು? ವಾಕ್ಯದಲ್ಲಿ ಐದು ಅವಯವಗಳಿರಬೇಕೆಂಬ ಕ್ರಮ.

ಆ ಐದು ಇವು: "ನಾನು ಹೇಳುವುದಿದು" – ಎಂಬ ಮಾತಿಗೆ ಪ್ರತಿಜ್ಞೆಯೆಂಬ ಹೆಸರಿದೆ. ಅದಕ್ಕೆ ಸಮ್ಮತಿ ಬರುವಂತೆ ಕೊಡತಕ್ಕ ಕಾರಣವೇ ಹೇತು. ಅದನ್ನು ಸಮರ್ಥಿಸಿಕೊಳ್ಳಲು ಕೊಡುವ ನಿದರ್ಶನವೇ ಉದಾಹರಣ. ಕಾರ್ಯ-ಕಾರಣ-ಸಂಬಂಧವನ್ನು ಹೇಳುವ ಮಾತೇ ವ್ಯಾಪ್ತಿ. ಉಪಸಂಹಾರದ ನುಡಿಯೇ ನಿಗಮನ. ಈ ಐದೇ, ಎಂದರೆ ಪ್ರತಿಜ್ಞಾ-ಹೇತು-ಉದಾಹರಣ-ನಿಗಮನಗಳೇ, ಪಂಚಾವಯವಗಳು.

ಈ ರೀತಿಯ ಪಂಚಾವಯವ-ವಾಕ್ಯಗಳಲ್ಲಿಯ ಗುಣ-ದೋಷಗಳನ್ನು ಬಲ್ಲವರು, ನಾರದರು. ಅಲ್ಲದೆ, ಬೃಹಸ್ಪತಿಯೇ ಮಾತನಾಡುತ್ತಿದ್ದರೂ ಉತ್ತರೋತ್ತರ ಮಾತನಾಡಬಲ್ಲವರು (ಎಂದರೆ ಅವರ ಉಕ್ತಿಗಳಿಗೂ ಪ್ರತ್ಯುಕ್ತಿಗಳನ್ನು ಹೇಳಲು ಸಮರ್ಥರು), ಅವರು.

ಇಷ್ಟೇ ಅಲ್ಲದೆ, ಧರ್ಮ-ಅರ್ಥ-ಕಾಮ-ಮೋಕ್ಷ - ಇವುಗಳ ಬಗ್ಗೆ ಯಥಾವತ್ತಾಗಿ ನಿರ್ಣಯಗಳಿಗೆ ಬಂದಿರುವವರು. ಈ ಭುವನಕೋಶವನ್ನೆಲ್ಲಾ ಪ್ರತ್ಯಕ್ಷವಾಗಿ ಕಂಡರಿತ ಮಹಾಮತಿಗಳು; ಅಡ್ಡಡ್ಡಲಾಗಿಯೂ ಮೇಲ್ಕೆಳಗೂ ಇರುವ ಲೋಕಗಳ ಪ್ರತ್ಯಕ್ಷದರ್ಶಿಗಳು. ಸಾಂಖ್ಯ-ಯೋಗಗಳ ವಿಭಾಗವನ್ನು ಅರಿತವರು. ಸುರರಲ್ಲಿಯೂ ಅಸುರರಲ್ಲಿಯೂ ನಿರ್ವೇದವನ್ನು- ಎಂದರೆ ವೈರಾಗ್ಯವನ್ನು- ಉಂಟುಮಾಡಲಪೇಕ್ಷಿಸುವವರು

ಸಂಧಿ-ವಿಗ್ರಹಗಳ ತತ್ತ್ವವನ್ನು ಬಲ್ಲವರು. (ಇಬ್ಬರು ರಾಜರಲ್ಲಿ ವಿಮತಿಯುಂಟಾದಾಗ ಯುದ್ಧಮಾಡುವುದು ವಿಗ್ರಹ. ರಾಜಿಮಾಡಿಕೊಳ್ಳುವುದು ಸಂಧಿ. ಇವೆರಡರಲ್ಲೂ ನುರಿತವರವರು). ಅನುಮಾನದ ವಿಭಾಗಗಳನ್ನು ಅರಿತವರು. (ಅನುಮಾನವೆಂದರೆ ಸಂಶಯವೆಂಬ ಅರ್ಥ ಕನ್ನಡದಲ್ಲಿ ಪ್ರಚುರ. ಆದರೆ ಭಾರತೀಯರ ನ್ಯಾಯ-ವೈಶೇಷಿಕಗಳಲ್ಲಿ ತರ್ಕಬದ್ಧವಾಗಿ ನಿರ್ಣಯ ಮಾಡುವುದೆಂಬ ಅರ್ಥವೇ ಪ್ರಸಿದ್ಧವಾದದ್ದು. ಇಲ್ಲಿಯೂ ಅದೇ ಅರ್ಥವೇ.)

ಹಾಗೆಯೇ ಅವರು ಷಾಡ್ಗುಣ್ಯ-ವಿಧಿಯ ಪ್ರಯೋಗದಲ್ಲಿ ಸಮರ್ಥರು. (ರಾಜ್ಯ-ರಕ್ಷಣೆಗೆ ಷಾಡ್ಗುಣ್ಯವು ಬೇಕಾಗುತ್ತದೆ. ಸಂಧಿ-ವಿಗ್ರಹಗಳು ಬಹುಮುಖ್ಯವೆಂದು ಅವನ್ನೇ ಮೊದಲು ಹೇಳಿದ್ದಾಗಿದೆ. ಅವೆರಡಲ್ಲದೆ, ಯಾನ-ಆಸನ-ದ್ವೈಧೀಭಾವ-ಸಮಾಶ್ರಯಗಳೆಂಬ ನಾಲ್ಕು ಸೇರಿದರೆ ಷಾಡ್ಗುಣ್ಯ. ರಾಜನೀತ್ಯ ಪಾರಿಭಾಷಿಕ-ಪದಗಳು ಇವು). ಅವರು ಸರ್ವ-ಶಾಸ್ತ್ರ-ವಿಶಾರದರು. ಯುದ್ಧದ ವಿಷಯವಾಗಲಿ, ಗಾಂಧರ್ವದ – ಎಂದರೆ ಸಂಗೀತಶಾಸ್ತ್ರದ – ವಿಷಯವಾಗಲಿ, ಅವುಗಳಲ್ಲಿ ಸಮುತ್ಸುಕರೂ ಎಲ್ಲೆಡೆ ಅಪ್ರತಿಹತವಾದ ಸಂಚಾರವುಳ್ಳವರೂ ಆಗಿರತಕ್ಕವರು. ಇವಿಷ್ಟೇ ಅಲ್ಲದೆ ಇನ್ನೂ ಅನೇಕ ಗುಣಗಣಗಳಿಂದಲೇ ಅವರು ಕೂಡಿರತಕ್ಕವರು, ನಾರದರು.

ಹಾಗಿರುವ ನಾರದರು ನಾನಾಲೋಕಗಳನ್ನು ಸಂಚಾರಮಾಡುತ್ತಾ, ಯುಧಿಷ್ಠಿರನ ಆ ಸಭೆಗೂ ಈಗ ಬಂದರು. ಮಹಾತೇಜಸ್ವಿಗಳಾದ ಆ ದೇವರ್ಷಿ ನಾರದರು ಅಲ್ಲಿಯ ಋಷಿಗಳೊಂದಿಗೆ ಸೇರಲೆಂದು ಅಲ್ಲಿಗೆ ಆಗಮಿಸಿದರು. ಧೀಮಂತನಾದ ಸೌಮ್ಯನೆಂಬ ಋಷಿ, ಹಾಗೆಯೇ ಸುಮುಖ, ಪಾರಿಜಾತರೆಂಬ ಋಷಿಗಳು, ಇನ್ನೂ ಹಲವು ಋಷಿಗಳೆಲ್ಲ ಇದ್ದರೆಂಬ ಕಾರಣಕ್ಕೆ, ಮಹಾದ್ಯುತಿಗಳಾದ ನಾರದರು ಅಲ್ಲಿಗೆ ಬಂದದ್ದು. ಮನೋವೇಗದಲ್ಲಿ ಚಲಿಸುವ ಆ ನಾರದರು ಸಭೆಯಲ್ಲಿದ್ದ ಪಾಂಡವರನ್ನು ಕಾಣಲೆಂದೇ ಆಗಮಿಸಿದುದು.

ಬಂದವರೇ, ಜಯವನ್ನು ಅನುಗ್ರಹಿಸುವ ಆಶೀರ್ವಾದ ಮಂತ್ರಗಳೊಂದಿಗೆ ಧರ್ಮರಾಜನನ್ನು ಅನುಗ್ರಹಿಸಿದರು.

ಬಂದ ನಾರದ ಮಹರ್ಷಿಗಳನ್ನು ಕಂಡ ಧರ್ಮಜ್ಞನಾದ ಯುಧಿಷ್ಠಿರನಾದರೂ, ತನ್ನ ತಮ್ಮಂದಿರೊಡಗೂಡಿ ಅವರನ್ನು ಎದುರ್ಗೊಂಡನು. ವಿನಯದಿಂದ ಬಗ್ಗಿದವನಾಗಿ ಪ್ರೀತಿಯಿಂದ ಅವರಿಗೆ ಅಭಿವಾದನವನ್ನು ಮಾಡಿದನು. ಆ ನಾರದರಿಗೆ ವಿಧ್ಯನುಸಾರ ಯೋಗ್ಯವಾದ ಆಸನವನ್ನಿತ್ತನು. ಗೋವನ್ನೂ ಮಧುಪರ್ಕವನ್ನೂ ಸಲ್ಲಿಸಿದನು. ಅರ್ಘ್ಯವನ್ನಿತ್ತು ರತ್ನಗಳೊಂದಿಗೆ ಅವರನ್ನು ಆದರಿಸಿದನು. ಅವರ ಎಲ್ಲ ಅಪೇಕ್ಷೆಗಳನ್ನೂ ಪೂರೈಸಿದನು.

ಸೂಚನೆ : 20/7/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 25 (Prasnottara Ratnamalike 25)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೨೫ ಕಮಲದ ಎಲೆಯ ಮೇಲಿನ ಜಲದ ಕಣದಂತೆ ಚಲನಶೀಲವಾದುದು ಯಾವುದು?

ಉತ್ತರ - ಯೌವನ, ಧನ ಮತ್ತು ಆಯುಸ್ಸು


ಈ ಪ್ರಶ್ನೆಯು ಉದಾಹರಣೆಯಿಂದ ಕೂಡಿದೆ. ಹೇಗೆಂದರೆ, ಅತ್ಯಂತ ಚಂಚಲವಾದುದು ಯಾವುದು? ಎಂಬುದಕ್ಕೆ ಒಂದು ಉದಾಹರಣೆ ಎಂದರೆ ಕಮಲದ ಎಲೆಯ ಮೇಲೆ ಇರುವ ನೀರಿನ ಕಣ. ಕಮಲದ ಎಲೆಯ ಮೇಲೆ ಇರುವ ನೀರಿನ ಹನಿಯು ಕಮಲಕ್ಕೆ ಅಂಟಿಕೊಳ್ಳುವುದಿಲ್ಲ. ಅದು ಯಾವಾಗ ಕಮಲದಿಂದ ಜಾರುತ್ತದೆ? ಎಂಬುದು ತಿಳಿಯದಂತಿರುತ್ತದೆ. ಅಷ್ಟು ಕ್ಷಣಿಕ ಎಂಬುದು ಅರ್ಥ. ಯಾವುದೇ ಕಾರಣಕ್ಕೂ ಆ ನೀರಿನಿಂದ ಕಮಲದ ಎಲೆಗೆ ಪ್ರಯೋಜನವಿರುವುದಿಲ್ಲ. ಹಾಗೆ ಇರುವಂತದ್ದು ಕಮಲದ ಎಲೆಯ ಮೇಲಿನ ನೀರಿನ ಹನಿ. ಇಲ್ಲಿ ಕೇಳುವಂತಹ ಪ್ರಶ್ನೆಯೂ ಅದೇ ರೀತಿಯಲ್ಲಿ ಇದೆ. ಅಂದರೆ ಅತ್ಯಂತ ಚಂಚಲವಾದದ್ದು ಯಾವುದು? ಎಂಬುದು. ಅದಕ್ಕೆ ಉತ್ತರವಾಗಿ ಯೌವನ, ಧನ ಮತ್ತು ಆಯುಸ್ಸು ಎಂಬ ಮೂರೂ ಸಂಗತಿಗಳು ಬಹಳ ಚಂಚಲವಾದವುಗಳು. ಕ್ಷಣ ಕ್ಷಣಕ್ಕೂ ರೂಪಾಂತರವನ್ನು ಹೊಂದುವ ಸ್ವಭಾವದವುಗಳು ಎಂಬುದು ಇದರ ಅರ್ಥ. ಯಾವುದು ಚಂಚಲವಾಗಿರುತ್ತದೆಯೋ ಅದಕ್ಕೆ ಒಂದೇ ರೂಪ, ಒಂದೇ ಆಕಾರ, ಒಂದೇ ಕಾಲಕ್ಕೆ ಸಂಬಂಧ ಅಥವಾ ಒಂದೇ ದೇಶಕ್ಕೆ ಸಂಬಂಧಪಟ್ಟಿದ್ದು ಎಂಬುದನ್ನು ನಾವು ಎಣಿಸುವಷ್ಟರಲ್ಲಿ ಅದು ಎಲ್ಲ ಸಂಬಂಧಗಳಿಂದ ಜಾರುವುದನ್ನು ಕಾಣುತ್ತೇವೆ. ಹೀಗೆ ಇಂತಹ ಜಾರುವ ಲಕ್ಷಣದಿಂದ ಕೂಡಿರುವ ಸಂಗತಿಗಳನ್ನು ಕ್ಷಣಿಕ ಅಥವಾ ಚಂಚಲ ಎಂಬುದಾಗಿ ಕರೆಯಬಹುದಾಗಿದೆ. ಆದ್ದರಿಂದ ಯೌವನ, ಧನ ಮತ್ತು ಆಯುಸ್ಸು ಮೂರೂ ಒಂದೇ ವರ್ಗಕ್ಕೆ ಸೇರುತ್ತವೆ ಎಂಬುದು ಈ ಪ್ರಶ್ನೋತ್ತರದ ಆಶಯವಾಗಿದೆ. ಹಾಗಾದರೆ ಅವು ಹೇಗೆ ಕ್ಷಣಿಕ? ಎಂಬುದನ್ನು ಇಲ್ಲಿ ಚಿಂತಿಸಬೇಕಾಗಿದೆ. 


ಚಂಚಲ ಎಂದರೆ ಒಂದೇ ವಿಷಯದ ಮೇಲೆ ನಿರಂತರವಾಗಿ ಮನಸ್ಸನ್ನು ನೆಲೆನಿಲ್ಲಿಸಲು ಸಾಧ್ಯವಾಗದ ಸ್ವಭಾವ.  ಯೌವನ ಇರುವವನಿಗೆ ಜಗತ್ತೆಲ್ಲವೂ ಕೂಡ ಅವನ ಎದುರುಗಡೆ ನಶ್ವರವಾದಂತೆ, ಬೆಲೆ ಇಲ್ಲದಿರುವಂತೆ ಕಾಣುತ್ತದೆ. ಅಂದರೆ ತಾನು ಇವುಗಳೆಲ್ಲವನ್ನು ಕೂಡ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಲ್ಲೆ, ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಇವೆಲ್ಲವೂ ಇರಲಿವೆ ಎಂಬ ದರ್ಪ ಆತನದ್ದಾಗಿರುತ್ತದೆ. ಅಂತಯೇ ಧನದಿಂದ ಕೂಡಿದವನು ಕೂಡ ಈ ಎಲ್ಲ ಸ್ವಭಾವದಿಂದ ಕೂಡಿರುತ್ತಾನೆ ಮತ್ತು ಇದೇ ರೀತಿಯಾಗಿ ಕ್ಷಣ ಚಿತ್ತ ಕ್ಷಣಪಿತ್ತ ಎಂಬಂತೆ ಇರುತಾನೆ. ಆಯಸ್ಸನ್ನು ನೆಚ್ಚಿಕೊಂಡು ಯಾವುದನ್ನು ಕೂಡ ಸಾಧಿಸಲು ಆಗದು. ಕ್ಷಣವು ಉರುಳುತ್ತಿರುವುದರಿಂದ ಆಯಸ್ಸು ಕೂಡ ಆ ಕ್ಷಣಪರಿಣಾಮವನ್ನೇ ಹೇಳುವುದಾದ್ದರಿಂದ ಅದು ಕೂಡ ಅಷ್ಟೇ ಉರುಳುವ ಸ್ವಭಾವವುಳ್ಳದ್ದಾಗಿರುತ್ತದೆ. ಹಾಗಾಗಿ ಈ ಮೂರನ್ನು ನಂಬಿಕೊಂಡು ಯಾವುದನ್ನು ಕೂಡ ಮಾಡಲಿಕ್ಕೆ ಸಾಧ್ಯವಿಲ್ಲ. ಈ ಸಮಯದಲ್ಲಿ ಒಂದು ನಿರ್ದಿಷ್ಟವಾದ ವಿಷಯವನ್ನು ಅರ್ಥ ಮಾಡಿಕೊಳ್ಳುವುದು ಅಥವಾ ಸಾಧಿಸುವುದು ಎಲ್ಲವೂ ಕಷ್ಟ ಸಾಧ್ಯ ಎಂಬುದು ಇದರ ಅರ್ಥವಾಗಿದೆ. ಇದನ್ನೇ ಪುಷ್ಟೀಕರಿಸುವಂತೆ ಒಂದು ಸುಭಾಷಿತ ಹೀಗಿದೆ- ಯೌವನ, ಧನ, ಅಧಿಕಾರ ಮತ್ತು ಅವಿವೇಕ ಇವು ಒಂದೊಂದೂ ಅನರ್ಥಕ್ಕೆ ಸಾಧನ. ಈ ನಾಲ್ಕು ಒಟ್ಟಿಗೆ ಇರುವ ಕಡೆ ಎಂತಹ ಅನರ್ಥಗಳು ಸಂಭವಿಸಬಹುದು! ಎಂಬ ಆಶ್ಚರ್ಯ ಇಲ್ಲಿ ಕಾಣುತ್ತದೆ. ಇದೇ ಅರ್ಥವನ್ನು ಕೊಡುವ ಈ ಪ್ರಶ್ನೋತ್ತರವು ಯೌವನ, ಧನ ಆಯುಸ್ಸು ಇವೆಲ್ಲವೂ ಕೂಡ ಕ್ಷಣಿಕ. ಇವುಗಳು ಬಂದಾಗ ಶಾಶ್ವತವಾದ ಬದುಕಿನ ಬಗ್ಗೆ ನಮಗೆ ಅರಿವು ಮೂಡುವುದು ಕಷ್ಟಸಾಧ್ಯ ಎಂಬ ಮಾರ್ಮಿಕವಾದ ಉತ್ತರ ಇಲ್ಲಿ ಕಂಡುಬರುತ್ತದೆ.


ಸೂಚನೆ : 20/7/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.