Monday, December 8, 2025

ವ್ಯಾಸ ವೀಕ್ಷಿತ 165 ಜರಾಸಂಧ-ಪ್ರತಾಪ, ಹಂಸ-ಡಿಂಭಕರ ವಿಚಿತ್ರ ಮರಣ! (Vyaasa Vikshita 165)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಯುಧಿಷ್ಠಿರನು ಮಾಡಬೇಕೆಂದಿರುವ ರಾಜಸೂಯ ಯಾಗಕ್ಕೆ ಯಾರು ಹಿತರು, ಯಾರಲ್ಲ? - ಎಂಬುದನ್ನು ಆತನಿಗೆ ತಿಳಿಸಿಕೊಡುತ್ತಾ ಶ್ರೀಕೃಷ್ಣನು ಹೇಳಿದ ಮಾತು: "ಜರಾಸಂಧನ ಭಯದಿಂದಾಗಿಯೇ ಮತ್ಸ್ಯದೇಶದ ರಾಜರು ದಕ್ಷಿಣ ದಿಕ್ಕಿನತ್ತ ಓಡಿಹೋಗಿದ್ದಾರೆ., ಪಂಚಾಲದೇಶದ ರಾಜರಂತೂ ಸ್ವರಾಜ್ಯವನ್ನು ತೊರೆದು ದಿಕ್ಕಾಪಾಲಾಗಿ ಓಡಿಹೋಗಿರುವರು.

ಇದೆಲ್ಲಾ ಆಗಿ ಕೆಲಕಾಲಾನಂತರ, ಕಂಸನು ಯಾದವರನ್ನೆಲ್ಲಾ ಕಂಗೆಡಿಸಿ ಜರಾಸಂಧನ ಇಬ್ಬರು ಪುತ್ರಿಯರನ್ನು ಮದುವೆಯಾದನು. ಒಬ್ಬಳ ಹೆಸರು ಅಸ್ತಿ, ಮತ್ತೊಬ್ಬಳು ಪ್ರಾಪ್ತಿ. ವ್ಯರ್ಥಮತಿಯಾದ ಆ ಕಂಸನು, ಈ ಜರಾಸಂಧನ ಬಲದ ಮೇರೆಗೇ ತನ್ನ ಜ್ಞಾತಿಗಳನ್ನೇ ಪರಾಭವಗೊಳಿಸಿ ಅವರೆಲ್ಲರಿಗಿಂತಲೂ ತಾನೇ ಹೆಚ್ಚೆಂದು ಕುಳಿತನು. ಇದುವೇ ಆತನ ಮಹಾಪಚಾರ.

ಭೋಜರಾಜವಂಶಕ್ಕೆ ಸೇರಿದ ವೃದ್ಧರನೇಕರನ್ನು ದುರಾತ್ಮನಾದ ಕಂಸನು ಬಹಳ ಪೀಡಿಸಿದ್ದ. ಎಂದೇ ಅವರು ಆತಂಕಗೊಂಡು, ತಮ್ಮ ಆತ್ಮೀಯ ಬಂಧುಗಳಿಗೆ ರಕ್ಷಣೆ ಬೇಕೆಂದು ನಮ್ಮಲ್ಲಿಗೆ ಬಂದು ಕೋರಿದರು. ಆಗಲೇ ಬಲರಾಮನೊಂದಿಗೆ ನಾನು ಹೋಗಿ ಜ್ಞಾತಿಕಾರ್ಯವನ್ನು ಮಾಡಿದುದು: ಕಂಸ ಮತ್ತು ಸುನಾಮ - ಇವರಿಬ್ಬರನ್ನು ನಾನೂ ಬಲರಾಮನೂ ಕೊಂದೆವು.

ಕಂಸಭಯವೇನೋ ಹೋಯಿತು. ಆದರೆ ಪ್ರತೀಕಾರ ಮಾಡಬೇಕೆಂದು ಜರಾಸಂಧನು ಸನ್ನದ್ಧನಾಗತೊಡಗಿದನು. ಆಗಲೇ ಆ ಹದಿನೆಂಟು ಮಂದಿ ರಾಜರೊಂದಿಗೆ ಮಂತ್ರಾಲೋಚನೆಯನ್ನು ನಾವು ಮಾಡಿದುದು: "ಶತ್ರುಘಾತಕವಾದ ಮಹಾಸ್ತ್ರಗಳಿಂದ ಯುದ್ಧಮಾಡಿದರೂ, ಮುನ್ನೂರು ವರ್ಷಗಳ ಸತತವಾಗಿ ಸೆಣಸಿದರೂ ಈ ಜರಾಸಂಧನ ಸೈನ್ಯವನ್ನು ನಾವು ನಾಶಮಾಡಲಾರೆವು".

ನಾವು ಹಾಗೆಂದುಕೊಳ್ಳಲು ಕಾರಣವೆಂದರೆ ಜರಾಸಂಧನಿಗೆ ಇಬ್ಬರು ಮಿತ್ರರಿದ್ದರು. ಹಂಸ ಎಂದೊಬ್ಬ, ಡಿಂಭಕ ಎಂದು ಮತ್ತೊಬ್ಬ. ಬಲದಲ್ಲಿ ಇಬ್ಬರೂ ದೇವತೆಗಳಿಗೆ ಸಮಾನರು. ಯಾವುದೇ ಶಸ್ತ್ರದಿಂದಲೂ ಸಾಯಿಸಲಾಗದವರು ಅವರಿಬ್ಬರೂ. ಜರಾಸಂಧನೂ ಸೇರಿದರೆಂದರೆ ಮೂರು ಲೋಕಗಳನ್ನೂ ಗೆಲ್ಲಬಲ್ಲವರೇ ಸರಿ. ಇದು ಕೇವಲ ನನ್ನ ಅಭಿಪ್ರಾಯವಾಗಿರಲಿಲ್ಲ, ಉಳಿದ ರಾಜರ ಅಭಿಪ್ರಾಯವೂ ಆಗಿತ್ತು.

ಈ ಸಂದರ್ಭದಲ್ಲಿ ಅವರಿಬ್ಬರ ಸಾವು ಹೇಗೆ ಇದ್ದಕ್ಕಿದ್ದಂತೆ ನಡೆದುಹೋಯಿತೆಂಬುದನ್ನು ಕೇಳು. ಹಂಸ ಎಂದೇ ಹೆಸರುಳ್ಳ ಮತ್ತೂ ಒಬ್ಬ ರಾಜನಿದ್ದ. ಹದಿನೆಂಟು ದಿನಗಳ ಕಾಲ ಅವನೊಡನೆ ಹೋರಾಡಿ ಬಲರಾಮನು ಆತನನ್ನು ಸಂಹರಿಸಿದ.

"ಹಂಸರಾಜನು ಸತ್ತ" ಎಂಬ ಈ ಸಮಾಚಾರವನ್ನು ಯಾರೋ ಹೇಳಿದರು, ಡಿಂಭಕನಿಗೆ. ಆ ಡಿಂಭಕನೋ, ಸತ್ತದ್ದು ತನ್ನ ಆಪ್ತನಾದ ಹಂಸನೆಂದೇ ಭಾವಿಸಿಕೊಂಡುಬಿಟ್ಟ! ಅದರಿಂದಾಗಿ ಆತನಿಗೆ ಅತೀವ ದುಃಖವಾಯಿತು. ಆ ದುಃಖಭರದಲ್ಲಿ ಆತ ಯಮುನೆಯಲ್ಲಿ ಬಿದ್ದು ಪ್ರಾಣ ಬಿಟ್ಟ, ಹಂಸನಿಲ್ಲದೆ ತಾನು ಬದುಕಿರಲಾರೆ - ಎಂಬ ಖೇದದಿಂದ.

ಡಿಂಭಕನು ಹಾಗೆ ತನಗಾಗಿ ಸತ್ತನೆಂಬುದನ್ನು ಕೇಳಿದ ಹಂಸನಿಗೂ ದುಃಖವು ಉಕ್ಕಿಬಂದಿತು.  ಆ ಖೇದದಲ್ಲಿ ತಾನೂ ಅದೇ ಯಮುನೆಯಲ್ಲೇ ಬಿದ್ದು ಪ್ರಾಣತೊರೆದ. ಹಂಸ-ಡಿಂಭಕರಿಬ್ಬರೂ ಸತ್ತರೆಂಬುದನ್ನು ಕೇಳಿದ ಜರಾಸಂಧನಿಗೂ ಪರಮಖೇದವಾಯಿತು. ನಿರುತ್ಸಾಹನಾಗಿ ತನ್ನ ರಾಜಧಾನಿಗೆ ಹಿಂದಿರುಗಿ ಬಂದ.

ಜರಾಸಂಧನು ಹೀಗೆ ಹಿಂದಿರುಗಿದುದು ನಮಗೆ ಗೊತ್ತಾಯಿತು. ಅದರಿಂದಾಗಿ ನಾವೆಲ್ಲರೂ ಆನಂದಭರಿತರಾಗಿ ಮತ್ತೆ ಮಥುರೆಯಲ್ಲೇ ವಾಸ ಮಾಡತೊಡಗಿದೆವು. ಆದರೆ ಅದು ಬಹುಕಾಲ ನಿಲ್ಲಲಿಲ್ಲ.

ಜರಾಸಂಧನ ಮಗಳು ತನ್ನ ತಂದೆಯ ಬಳಿಗೆ ಹೋಗಿ, ತನ್ನ ಗೋಳನ್ನು ಹೇಳಿಕೊಂಡಳು.

ಸೂಚನೆ : 7/12/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 43 (Prasnottara Ratnamalike 43)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ ೪೩ಈ ಜಗತ್ತು ಯಾರಿಂದ ಗೆಲ್ಲಲ್ಪಟ್ಟಿದೆ

ಸತ್ಯದಲ್ಲಿ ನೆಲೆನಿಂತ ಸಹನಶೀಲ ಪುರುಷನಿಂದ.

ಈ ಪ್ರಶ್ನೆಯು ತುಂಬಾ ಸ್ವಾರಸ್ಯದಿಂದ ಕೂಡಿದೆ. ಏಕೆಂದರೆ ಒಂದು ಜಗತ್ತನ್ನು ಗೆಲ್ಲುವುದು ಎಂದರೇನು? ಮತ್ತು ಅದು ಸಹನಶೀಲ ಪುರುಷನಿಂದ ಗೆಲ್ಲುವುದು ಎಂದರೇನು? ಎಂಬ ಈ ಎರಡು ಪ್ರಧಾನವಾದ ವಿಷಯ ಇದಕ್ಕೆ ಕಾರಣ. ಹಾಗಾಗಿ ಇಲ್ಲಿ ನಾವು ಚಿಂತಿಸಬೇಕಾದ ವಿಷಯ ಇಷ್ಟು - ಒಬ್ಬ ಸತ್ಯದಲ್ಲಿ ನೆಲೆ ನಿಂತ ಪುರುಷ ಎಂದರೆ ಅವನಲ್ಲಿರುವ ಗುಣ ಸ್ವಭಾವಗಳೇನು? ಅವು ಅವನ ನಡವಳಿಕೆಯಲ್ಲಿ ಹೇಗೆ ಪ್ರತಿಫಲಿಸುತ್ತವೆ? ಸತ್ಯದಲ್ಲಿ ನೆಲೆಯಲ್ಲುವಿಕೆಯಿಂದ ಈ ಜಗತ್ತಿಗೆ ಆಗುವ ಪರಿಣಾಮಗಳೇನು? ಇದರಿಂದ ಜಗತ್ತಿಗೆ ಹೇಗೆ ಅನುಕೂಲವಾಗುತ್ತದೆ? ಜಗತ್ತು ಇದರಿಂದ ಹೇಗೆ ನಿಲ್ಲಲು ಸಾಧ್ಯ? ಎಂಬಿತ್ಯಾದಿ ಪೂರಕ ಸಂಗತಿಗಳನ್ನು ಇದರ ಜೊತೆಗೆ ಚಿಂತಿಸಬೇಕಾಗಿದೆ. 

ಸತ್ಯ ಎಂದರೆ ಯಾವುದು ಸರ್ವವಿಧದಲ್ಲೂ, ಸರ್ವಕಾಲದಲ್ಲೂ ಏಕರೂಪವಾಗಿರುತ್ತದೆಯೋ, ವಿಕಾರವನ್ನು ಹೊಂದುವುದೇ ಇಲವೋ ಅಂತಹದ್ದು. ಅಂದರೆ ಪರಬ್ರಹ್ಮ ಮಾತ್ರ ಸತ್ಯ. ಇದು ಎಂದೂ, ಯಾವುದೇ ಕಾರಣಕ್ಕೂ ವಿಕಾರವನ್ನು ಹೊಂದುವುದಿಲ್ಲ. ಆದ್ದರಿಂದ ಇಂತಹ ಸತ್ಯದಲ್ಲಿ ನೆಲೆನಿಲ್ಲುವವನು ಅವನು ಸತ್ಪುರುಷನೇ ಆಗಿರಬೇಕು. ಅಂದರೆ ಅವನು ಸಹನಶೀಲನೇ ಆಗಿರುತ್ತಾನೆ. ಅವನಲ್ಲಿ ಯಾವುದೇ ವಿಧವಾದ ಮಾನಸಿಕ ಕ್ಷೋಭೆಯು ಇರುವುದಿಲ್ಲ ಎಂದರ್ಥ. ಹಾಗಾಗಿ ಅವನು ಎಲ್ಲಿರುವನೋ, ಆ ಸುತ್ತಮುತ್ತಲಿನ ಪರಿಸರವೆಲ್ಲವೂ ಶಾಂತಿ, ನೆಮ್ಮದಿ, ಅಹಿಂಸೆ ಮೊದಲಾದ ಗುಣಗಳಿಂದ ಕೂಡಿರುತ್ತದೆ. ಇವು ತಾನೆ ಸುಖದ ಜೀವನಕ್ಕೆ ಅಗತ್ಯವಾಗಿ ಬೇಕಾಗಿರುವ ಸಹಕಾರಿ ಸಾಮಗ್ರಿಗಳು!. ಇವುಗಳು ಮಾತ್ರ ಆ ವ್ಯಕ್ತಿಯ ಅಥವಾ ಆ ಸಮಾಜದ ಶಾಂತಿಯ ತಾಣಕ್ಕೆ ಕಾರಣೀಭೂತವಾಗುತ್ತವೆ!. ಹಾಗಾಗಿ ಒಬ್ಬ ಸತ್ಪುರುಷನು ಅಥವಾ ಜ್ಞಾನಿಯು ಎಲ್ಲಿರುವನೋ ಅಲ್ಲಿ ಸಹಜವಾಗಿಯೇ ಮಳೆ-ಬೆಳೆಗಳು ಎಲ್ಲವೂ ಸಮೃದ್ಧವಾಗಿ ಆಗುತ್ತವೆ ಎಂಬುದಾಗಿ ನಾವು ಪುರಾಣ, ಇತಿಹಾಸ ಕಥೆಗಳಲ್ಲಿ ನಾವು ಕೇಳುತ್ತೇವೆ. ವಿಭಾಂಡಕ ಮುನಿಯ ಮಗನಾದ ಋಷ್ಯಶೃಂಗನು ಅಂತಹ ಅತ್ಯಂತ ಪ್ರಭಾವಿಯಾದ, ಸತ್ಯನಿಷ್ಠನಾದ ಮಹರ್ಷಿಯಾಗಿದ್ದನು. ಅವನು ಎಲ್ಲೆಲ್ಲಿ ಹೋಗುತ್ತಾನೋ ಅಲ್ಲೆಲ್ಲವೂ ಅತಿವೃಷ್ಟಿ ಅನಾವೃಷ್ಟಿಗಳು ದೂರಸರಿದು ಸುವೃಷ್ಟಿಯಾಗಿ ಆ ದೇಶ ಸುಭಿಕ್ಷೆಯಿಂದ ಕೊಡಿರುತ್ತಿತ್ತು ಎಂಬುದಾಗಿ ರಾಮಾಯಣದಲ್ಲಿ ಆ ಕಥೆಯನ್ನು ನಾವು ನೋಡುತ್ತೇವೆ. ಒಬ್ಬ ರಾಜನಾದವನ ಕರ್ತವ್ಯವೆಂದರೆ ಪ್ರಜೆಗಳು ಸತ್ಯದಲ್ಲಿ ಅಂದರೆ ಭಗವಂತನ ವಿಷಯದಲ್ಲಿ ಶ್ರದ್ಧೆ ಹೊಂದಿದವರಾಗಿರಬೇಕು. ಆಸ್ತಿಕ್ಯಬುದ್ಧಿಯುಳ್ಳವರಾಗಿರಬೇಕು. ಅದಕ್ಕೆ ರಾಜನಾದನು ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡುತ್ತಿದ್ದನು. ಇದಕ್ಕೆ ವಿರೋಧಿಯಾದವರನ್ನು ಹತ್ತಿಕ್ಕುತ್ತಿದ್ದನು. ಸತ್ಯನಿಷ್ಠರಾದ ಮಹಾಪುರುಷರು ತಮಗೆ ಬಂದ ಕಷ್ಟವನ್ನು ಸಹಿಸಿಕೊಂಡು ಜಗತ್ತಿನ ಒಳಿತಿಗೆ ಚಿಂತಿಸುವವರಾಗಿರುತ್ತಿದ್ದರು. ಇಂತಹ ಸತ್ಯನಿಷ್ಠರ ಅನೇಕ ಚರಿತ್ರಗಳನ್ನು ನಾವು ಇತಿಹಾಸ ಪುಟಗಳಲ್ಲಿ ಕಾಣಬಹುದು. ಇಂಥವರು ಇದ್ದಾಗ ತಾನೇ ಮಳೆ ಬೆಳೆಗಳೆಲ್ಲವೂ ಚೆನ್ನಾಗಿ ಆಗಿ ಜೀವಿಗಳಿಗೆ ಬೇಕಾದ ಆಹಾರವು ಸಕಾಲದಲ್ಲಿ ಸಾಕಷ್ಟು ದೊರೆತು, ಭೂತಕೋಟಿಯು ಸಮೃದ್ಧವಾದ ಜೀವನವನ್ನು ಮಾಡಲು ಅನುಕೂಲವಾಗುತ್ತದೆ. ಜಗತ್ತಿನ ಸಮೃದ್ಧಿಯ ಕ್ಷಣ ಅದೇ ತಾನೇ!. ಜಗತ್ತಿನ ಸಮೃದ್ಧಿಯ ಇರುವಿಕೆ ಅಂದರೆ ಇದು. ಆಗ ಜಗತ್ತು ಗೆದ್ದಂತೆ ಎಂಬುದಾಗಿ ನಾವು ಭಾವಿಸಬಹುದು.

ಸೂಚನೆ : 7/12/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವಿವೇಕಿಯ ಲಕ್ಷಣವೇನು? (Vivekiya Laksanavenu?)

ಲೇಖಕರು : ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)

ನೀನು ಕಾಡಿಗೆ ಹೋಗು - ಎಂಬ ಮಾತನ್ನು ರಾಮನಿಗೆ ಹೇಳಿದ್ದು ಕೈಕೇಯಿ, ದಶರಥನಲ್ಲ! ರಾಮಾಯಣದ ಒಂದು  ದೊಡ್ಡ ದಯನೀಯ ಪರಿಸ್ಥಿತಿಯಿದು. ರಾಮನೋ ಆಗ  ಯುವರಾಜನಾಗಲು ಅನುವಾಗುತ್ತಿದ್ದ.  ಏಕಾಏಕಿ ಬಂದಿತು, ಅರಣ್ಯವಾಸದ ಆದೇಶ!  ಪಟ್ಟೆಪೀತಾಂಬರ ಧರಿಸುವವನಿಗೆ ನಾರುಮಡಿಯ ವಸ್ತ್ರಗಳು. ಹೀಗಿದ್ದಾಗಲೂ ಸ್ವಲ್ಪವೂ ವಿಚಲಿತನಾಗಲಿಲ್ಲ ರಾಮ.

ಆದರೆ ಅಂತಃಪುರದಲ್ಲೇ ಹಾಹಾಕಾರವೆದ್ದಿತು!  ಹೆತ್ತ ತಾಯಿಗಿತ್ತ ಗೌರವವನ್ನೇ ಬೇರೆಲ್ಲರಿಗೂ ಕೊಡುತ್ತಿದ್ದವನಿಗೆ ಹೀಗಾಯಿತಲ್ಲ ! - ಎಂದು  ರಾಜಸ್ತ್ರೀಯರು ಮರುಗಿದರು; ದಶರಥನನ್ನೇ ಹಳಿದರು. ಮೊದಲು ಕೌಸಲ್ಯೆಯನ್ನು ಕಂಡು ವಿಷಯ ತಿಳಿಸಲು ಹೋದ, ರಾಮ. ಅವಳೋ ಅವನ  ಶ್ರೇಯಸ್ಸಿಗಾಗಿ ಹೋಮ-ಪೂಜೆಗಳಲ್ಲಿ ತೊಡಗಿದ್ದಳು.  ಅಭಿಷೇಕವು ನಿಂತಿದೆಯಷ್ಟೇ ಅಲ್ಲ; ದಂಡಕಾರಣ್ಯಕ್ಕೆ ತಾನು ಹೋಗಬೇಕಾಗಿ ಬಂದಿದೆ - ಎಂಬುದಾಗಿ  ಆಜ್ಞೆಯಾಗಿದೆ - ಎಂಬುದನ್ನು ಆಕೆಗೆ ತಿಳಿಸಿದ ರಾಮ. ಅದನ್ನು ಕೇಳಿ ತತ್ತರಿಸಿಹೋದಳು, ಕುಸಿದುಬಿದ್ದಳವಳು. ತನ್ನ ಭಾಗ್ಯವನ್ನು ಹಳಿದುಕೊಂಡು ರೋದಿಸಿದಳು. ದಶರಥನಿಂದ ತಾನನುಭವಿಸಿದ ಅಸಡ್ಡೆಯನ್ನು ನೆನೆದು ಅತ್ತಳು. ತಾನು ಕೈಕೇಯಿಯ ದಾಸಿಯೆಂಬಂತಾಗುತ್ತದೆ - ಎಂದು ಬೇಸರಿಸಿದಳು. ಮಗನ ಮುಖವನ್ನು ನೋಡಿಕೊಂಡಿದ್ದು, ಕೈಕೇಯಿಯ ಸಿಡುಕನ್ನೂ ಸವತಿಯರ ನಿಂದೆಯನ್ನೂ ಸಹಿಸಿಕೊಳ್ಳಬಹುದಾಗಿತ್ತೇನೋ. ಆದರಿದೋ ಈಗ ಅವನೂ ವನವಾಸಕ್ಕೆ ತೆರಳಲಿದ್ದಾನೆ! ತಾನೇಕೆ ಸತ್ತುಹೋಗುವುದಿಲ್ಲವೆಂದು ಗೋಳಿಟ್ಟಳು!

ಅದನ್ನು ಕಂಡ ಲಕ್ಷ್ಮಣನು ತಂದೆಯ ತೀರ್ಮಾನವನ್ನು ಧಿಕ್ಕರಿಸಿದ. ರಾಜ್ಯಾಧಿಕಾರವನ್ನು ಬಲದಿಂದ ನಿನ್ನ ಕೈಗೆ ತೆಗೆದುಕೊಂಡುಬಿಡು - ಎಂದು ಆಕ್ರೋಶದಿಂದ ಹೇಳಿದ, ರಾಮನಿಗೆ! ವಿರೋಧಿಸುವವರನ್ನು ಅಗತ್ಯ ಬಂದಲ್ಲಿ  ತಾನು ಕೊಲ್ಲುವುದಾಗಿಯೂ ಹೇಳಿದ. ಅಣ್ಣನ ಸಾಮರ್ಥ್ಯ-ಗುಣ-ಯೋಗ್ಯತೆಗಳಲ್ಲಿ ಅಂತಹ ನಂಬಿಕೆ ಅವನಿಗೆ! ಕೌಸಲ್ಯೆಯೂ ರಾಮನಿಗೆ ಕಾಡಿಗೆ ಹೋಗದಂತೆ ಕೇಳಿಕೊಂಡಳು. ತನ್ನನ್ನಗಲಿದರೆ ತನಗೆ ಪ್ರಾಣಹೋಗುವುದೆಂದೂ ಹೇಳಿದಳು.

ಪರಿಸ್ಥಿತಿ ಹೀಗೆಲ್ಲ ಇದ್ದರೂ, ರಾಮನ ನಿಲುವೇ ಬೇರೆಯಾಗಿತ್ತು. ಎಷ್ಟಾದರೂ  ಧರ್ಮವನ್ನರಿತವನು ಮತ್ತು ಅನುಪಮವಾದ ಸ್ಪಷ್ಟತೆ ಇದ್ದವನು, ರಾಮ. ತಾನು ಮಾಡಹೊರಟಿರುವ ಪಿತೃವಾಕ್ಯಪರಿಪಾಲನವು ನಿಶ್ಚಯವಾಗಿಯೂ ಧರ್ಮಸಂಮತವಾದದ್ದೇ - ಎಂಬುದನ್ನು ತಾಯಿಗೂ ಲಕ್ಷ್ಮಣನಿಗೂ ತಿಳಿಯಹೇಳಿದ. ಜನರೆಷ್ಟೇ ಬೆಂಕಿಯ ಕೊಳ್ಳಿಗಳಿಂದ ದೂರಸರಿಸಲು ಯತ್ನಿಸಿದರೂ ಅದು ತನ್ನ ಹಾದಿಯನ್ನು ಬಿಡುವುದಿಲ್ಲ! ಅದೇ ರೀತಿಯಲ್ಲಿಯೇ, ರಾಮನೂ ತನ್ನ ನಿರ್ಣಯವನ್ನು ಬದಲಿಸಲಿಲ್ಲ - ಎಂದು ವಾಲ್ಮೀಕಿಗಳು ವರ್ಣಿಸುತ್ತಾರೆ!

ಮನೋವೈಜ್ಞಾನಿಕವಾಗಿ ಇಲ್ಲಿಯ ಸನ್ನಿವೇಶವನ್ನು ವಿಶ್ಲೇಷಿಸೋಣ. ಮೊದಲಿಗೆ ಅಂತಃಪುರದ ರಾಜಸ್ತ್ರೀಯರ ತೀವ್ರ ದುಃಖ. ಅವರಿಗೆ ರಾಮನ ವಿಷಯವಾಗಿ ಇದ್ದ ಪ್ರೀತಿಯೇ ಅದರ ಕಾರಣ.

ಇನ್ನು ಕೌಸಲ್ಯೆ. ಆಕೆಯ ದುಃಖವಂತೂ ಸಹಜವೇ.  ತನ್ನ ಮಗ ಯುವರಾಜನಾಗುವ ಸಂತೋಷ ಅವಳಿಗೆ ಈವರೆಗಿತ್ತು; ಜೊತೆಗೆ ತನಗೂ ಅದರಿಂದಾಗಿ ಹೆಚ್ಚು ಗೌರವದ ನಿರೀಕ್ಷೆಯೂ ಇತ್ತು; ಹಾಗೆಂದು ಅವಳೇ ಹೇಳಿಕೊಂಡಿದ್ದಾಳೆ. ಈಗಾದ ಆಘಾತದಿಂದಾಗಿ ಅವಳೊಳಗಿದ್ದ ನೋವುಗಳು ಹೊರಬಂದವು: ಪಟ್ಟಮಹಿಷಿಯೇ ಆಗಿದ್ದಿರಬಹುದು, ಕೌಸಲ್ಯೆ. ಆದರೆ ಸವತಿಯರಿಂದಾಗಿ, ಮುಖ್ಯವಾಗಿ ಕೈಕೇಯಿಯಿಂದಾಗಿ, ಗಂಡನ ಸ್ನೇಹಾದರಗಳನ್ನು ಕಳೆದುಕೊಂಡಿದ್ದ ಅವಳಿಗೆ, ರಾಮನ ಕಾರಣದಿಂದಾಗಿ ಅವು ಸಿಕ್ಕಂತಾಗಿತ್ತು. ಈಗಂತೂ ಕೈಗೆ ಬಂದದ್ದು ಬಾಯಿಗೆ ಬರದೇ ಹೋದಂತಾಯಿತು. ರಾಮನು ದೂರವಾಗುವನೆಂಬ ಮುಖ್ಯವಾದ ದುಃಖವಿದ್ದರೂ, ಈ ನೋವುಗಳೂ ಜೊತೆಗೇ ಆಕೆಗೆ ಇದ್ದವು.

ಲಕ್ಷ್ಮಣನಿಗೆ ದುಃಖವಲ್ಲ, ರೋಷವೇ ಉಕ್ಕಿತ್ತು. ಮೊದಲೇ ಕ್ಷತ್ತ್ರಿಯ, ಜೊತೆಗೆ ಎಳೆಯ ರಕ್ತ; ತಂದೆಯ ಬಗ್ಗೆಯೇ ಅವನಿಗೆ ಕೋಪ. ಕೈಕೇಯಿಯ ಬಗ್ಗೆಯಂತೂ ಉರಿಗೋಪ; ಭರತನ ಬಗ್ಗೆಯೂ ಸಂದೇಹವೇ! ಕೋಪದ ಮಾತುಗಳನ್ನು ಸ್ವಲ್ಪ ದುಡುಕಿನಿಂದಲೇ ಆಡಿದ ಲಕ್ಷ್ಮಣ.

ಇವಕ್ಕೆಲ್ಲ  ವಿರುದ್ಧವಾದದ್ದು  ರಾಮನ ಪ್ರತಿಕ್ರಿಯೆ: ಯುವರಾಜನಾಗದಿರುವುದರ ಬಗ್ಗೆ ಅವನಿಗೆ ದುಃಖವಾಗುವುದಿರಲಿ, ಮನಸ್ಸು ಕೂಡ ಒಂದಿಷ್ಟೂ ಕಲಕಲಿಲ್ಲ! ತಂದೆ ಕೊಟ್ಟ ಮಾತನ್ನು ಉಳಿಸುವುದೇ ತನ್ನ ಧರ್ಮ - ಎಂಬ ನಿಶ್ಚಿತಮತಿ ಅವನಿಗಿತ್ತು. ತಾಯಿ, ಲಕ್ಷ್ಮಣ, ಸೀತೆ ಮುಂತಾದವರಿಗೆಲ್ಲ ಬಹಳವೇ ದುಃಖವಾಗುವುದು - ಎಂದು ತಿಳಿದೂ, ತನ್ನ ನಿಶ್ಚಯದಿಂದ ಕದಲಲಿಲ್ಲ, ರಾಮ. ರಾಮನಿಗೆ ಈ ಸ್ಪಷ್ಟತೆ ಇದ್ದದ್ದರಿಂದಲೇ ಕೌಸಲ್ಯೆಗೂ ತನ್ನ ದುಃಖವನ್ನು ಮೀರಲು ಸಾಧ್ಯವಾಯಿತು; ಲಕ್ಷ್ಮಣನು ದುಡುಕು-ಕ್ರೋಧಗಳಿಂದ ತಪ್ಪು ಹೆಜ್ಜೆ ಇಡುವುದು ತಪ್ಪಿತು.

ಶ್ರೀರಂಗಮಹಾಗುರುಗಳು ನಚಿಕೇತನ ಬಗ್ಗೆ ಹೇಳಿದ ಮಾತು ಇಲ್ಲಿ ರಾಮನಿಗೆ ಚೆನ್ನಾಗಿ ಅನ್ವಯವಾಗುತ್ತದೆ. "ಎಷ್ಟೇ ಉದ್ವೇಗ, ಆಕ್ರೋಶಗಳಿಂದ ಅವನತ್ತ ಹರಿಹಾಯ್ದರೂ ಶಾಂತಚಿತ್ತದಿಂದಲೇ ಅದನ್ನು ಸ್ವೀಕರಿಸಿ, ವಿಚಾರದೃಷ್ಟಿಯಿಂದಲೇ ಸತ್ಯದತ್ತ ಎದುರಾಳಿಯ ಮನ ಸೆಳೆದು, ಕೊನೆಗೆ ಅವನಲ್ಲಿಯೂ ವಿವೇಕವನ್ನು ಮೂಡಿಸುತ್ತಿದ್ದ ಅವನ ವಿಚಾರನೈಪುಣ್ಯ ಅಸಾಧಾರಣವಾದುದು!" 

ಇಂತಹ ಸಮಚಿತ್ತತೆ ಸರ್ವರಿಗೂ ಅನುಕರಣಯೋಗ್ಯವಲ್ಲವೇ?

ಸೂಚನೆ: 4/12//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ 85 ಕನಸಿನಲಿ ಕಂಡೆ ತುಲಸೀ-ಭೂಷಿತನ ಆಲಿಂಗನವನ್ನು! (Krishakarnamrta 85)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

ಕೃಷ್ಣನನ್ನು ಸ್ವಪ್ನದಲ್ಲಿ ಕಂಡಿದ್ದಾನೆ, ಲೀಲಾಶುಕ. ಕೃಷ್ಣನ ಆಭರಣವೇನು, ಅಲಂಕಾರವೇನು, ವಸ್ತ್ರವೇನು, ಶರೀರವೇನು! - ಕಂಡಿದುದೆಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದ್ದಾನೆ.

ಕೃಷ್ಣನಿಗೆ ಭೂಷಣವಾಗಿರುವುದು ತುಲಸೀ, ಎಂದರೆ ತುಳಸೀ-ಮಾಲೆ. ಅದೂ ಎಂತಹುದು? ತರುಣ-ತುಲಸೀ. ಎಂದರೆ ಹೊಸದಾಗಿ ತಂದು ಕಟ್ಟಲಾಗಿರುವಂತಹುದು. ಹಾಗಿರುವ ತುಲಸೀಹಾರ. ಅಲ್ಲಿಯ ತುಲಸೀ-ದಳಗಳಲ್ಲಿ ತೋರುವ ಮಾರ್ದವ-ಹೊಳಪುಗಳು ಅದರಲ್ಲಿ ತುಂಬಿರುವ ಚೈತನ್ಯವನ್ನು ಸೂಚಿಸುತ್ತದೆ.

ಅಲ್ಲದೆ, ತನ್ನ ಅಲಂಕಾರವಾಗಿ ಆತನು ನವಿಲುಗರಿಯನ್ನು ಧರಿಸಿದ್ದಾನೆ. ಹೀಗೆ ನವಿಲಿನ ಪಿಂಛವು ಆತನಿಗೆ ಚೂಡವಾಗಿದೆ. ಚೂಡ ಅಥವಾ ಅವಚೂಡವೆಂದರೆ ತಲೆಯ ಮೇಲಿನ ಆಭರಣ. ಅದು ಸಹ ಘನ-ಶ್ಯಾಮವೇ.

ಘನವೆಂದರೆ ಮೋಡವಾದ್ದರಿಂದ, ಅದರ ಹಾಗಿನ ಶ್ಯಾಮ-ವರ್ಣವೇ ಆ ಆಭರಣಕ್ಕೂ. ಮತ್ತು ಅದನ್ನು ಸಿಕ್ಕಿಸಿರುವುದು ತನ್ನ ವೇಣೀ-ಮೂಲದಲ್ಲಿ, ಎಂದರೆ ಜಡೆಯ ಆರಂಭದೆಡೆಯಲ್ಲಿ. ಜುಟ್ಟಿನ ತುದಿಯಲ್ಲಿ ಸುಮ್ಮನೆ ಸಿಕ್ಕಿಸಿದರೆ ನಿಂತುಬಿಡುವುದೇ ನವಿಲುಗರಿ? ಕುಣಿದರೂ ಉದುರಬಾರದೆಂದರೆ ಕೇಶಾರಂಭದೆಡೆಗೇ ಭದ್ರವಾಗಿ ಸೇರಿಸಿ ಕಟ್ಟಿರಬೇಕು, ಅಲ್ಲವೇ? ಆದುದರಿಂದ ವೇಣಿಯ, ಎಂದರೆ ಜಡೆಯ, ಮೂಲ-ಸ್ಥಾನಕ್ಕೇ ಅದನ್ನು ಸಿಕ್ಕಿಸಿರುವುದು.

ಆಭರಣವಾಯಿತು, ಅಲಂಕಾರವಾಯಿತು. ಇನ್ನು ಆತನ ವಸನವು ಹೇಗಿದೆ? ವಸನವೆಂದರೆ ವಸ್ತ್ರ. ಆತನು ಧರಿಸಿರುವುದು ಸ್ನಿಗ್ಧ-ಪೀತಾಂಬರವನ್ನು. ಸ್ನಿಗ್ಧವೆಂದರೆ ಹೊಳಪಿನಿಂದ ಕೂಡಿರುವುದು. ಆತನ ಮೈಮೇಲೆ ಅದು ಹೇಗೆ ತೋರುತ್ತದೆ? ನೀಲ-ಮೇಘವನ್ನು ಬಳಸಿದ ವಿದ್ಯುಲ್ಲೇಖೆಯ ಹಾಗೆ.

ವಿದ್ಯುತ್ ಎಂಬ ಪದವನ್ನು ಎಲೆಕ್ಟ್ರಿಸಿಟಿ ಎಂಬರ್ಥದಲ್ಲಿ ತಾನೆ ಬಳಸುತ್ತೇವೆ? ಆದರೂ, ವಿದ್ಯುತ್ ಎಂಬುದು ಮೂಲತಃ ಸಂಸ್ಕೃತ-ಪದ. ಮಿಂಚು ಎಂದೇ ಅದರ ಅರ್ಥ. ತಟಿತ್, ಸೌದಾಮನೀ, ವಿದ್ಯುತ್ - ಇವೆಲ್ಲ ಪರ್ಯಾಯ-ವಾಚಿಗಳೇ. ವಿದ್ಯುಲ್ಲೇಖೆಯೆಂದರೆ ಮಿಂಚಿನ ರೇಖೆ. ಲೇಖಾ-ರೇಖಾ-ಪದಗಳಿಗೆ ಒಂದೇ ಅರ್ಥ. "ರ-ಲಯೋರ್ ಅಭೇದಃ".

ಕಪ್ಪುಮೋಡದ ಹಿನ್ನೆಲೆಯಲ್ಲಿ ತೋರುವ ಮಿಂಚು ಹಳದಿಬಣ್ಣವುಳ್ಳದ್ದೆಂಬಂತೆ ತೋರುತ್ತದೆ. ಕರಿಯ ಕೃಷ್ಣನ ಮೈಮೇಲಿನ ಹಳದಿ ಹೊದಿಕೆಗೆ, ಇದಕ್ಕಿಂತಲೂ, ಎಂದರೆ ಮೋಡದ ಮೇಲಿನ ಮಿಂಚಿನ ಬಳ್ಳಿಗಿಂತಲೂ, ಉತ್ತಮವಾದ ಹೋಲಿಕೆಯಿರಲಾರದು.

ಇನ್ನು ಕೃಷ್ಣನ ಮೈಕಟ್ಟೇ ಹೇಗಿದೆಯೆಂದೆಂಬುದನ್ನು ಹೇಳಬೇಕಲ್ಲವೇ? ಅದಕ್ಕೊಂದು ಸೂಚಕವಾಗಿ ಆತನ ತೋಳನ್ನೇ ಚಿತ್ರಿಸಿದ್ದಾನೆ, ಕವಿ. ಮರಕತ-ಮಣಿ ಎಂದರೆ ಪಚ್ಚೆಮಣಿ. ಪಚ್ಚೆಮಣಿಯ ಸ್ತಂಭದಂತೆ ಗಂಭೀರವಾಗಿದೆ, ಎಂದರೆ ಭವ್ಯವಾಗಿದೆ, ಆತನ ತೋಳು. ಆತನ ತೋಳು ಹಾಗಿದೆಯೆಂದರೆ ಆತನ ಇಡೀ ಶರೀರವನ್ನೇ ಉಪಲಕ್ಷಿಸಿದಂತೆ. ಸ್ತಂಭ-ಗಂಭೀರವೆಂಬ ಪದವೇ, ಆ ತೋಳುಗಳಲ್ಲಿ ಕಾಣುವ ಪೌರುಷ, ಮಾಂಸಲತ್ವ, ಹೊಳಪು – ಇವೆಲ್ಲವನ್ನೂ ಸೂಚಿಸುವುದೇ ಸರಿ!

ಈ ಶ್ಲೋಕದಲ್ಲಿ ಲೀಲಾಶುಕನು ತೋಳನ್ನೇ ಏಕೆ ಚಿತ್ರಿಸಿದ? ಕೃಷ್ಣನ ಕ್ರಿಯೆಯನ್ನು ವರ್ಣಿಸಬೇಕಾಗಿತ್ತಲ್ಲವೇ? ಅದಕ್ಕಾಗಿ ತೋಳಿನ ಬಣ್ಣನೆ. ಏನು ಕೆಲಸ ತೋಳಿಗೆ? ಪ್ರೀತಿಯಿಂದ ಮಾಡಿಕೊಳ್ಳುವ ಆಲಿಂಗನವೇ ಕೆಲಸ. ಯಾರನ್ನು ಆಲಿಂಗಿಸಿಕೊಂಡಂತೆ ಬಿದ್ದಿದೆ, ಈತನಿಗೆ ಕನಸು?

ಇಲ್ಲಿಯೇ ಇರುವುದು ಕವಿಯ ಜಾಣ್ಮೆ. "ಮಾಂ" ಎನ್ನುತ್ತಾನೆ, ಕವಿ.

ಮತ್ತೇನು, ಮತ್ತಾರನ್ನು? ಲಕ್ಷ್ಮಿಯನ್ನೇ. 'ಮಾ' ಎಂದರೆ ಇಂದಿರೆಯೇ. "ಇಂದಿರಾ ಲೋಕಮಾತಾ ಮಾ" ಎನ್ನುತ್ತದೆ, ಅಮರಕೋಶ, ಲಕ್ಷ್ಮೀ-ಪರ್ಯಾಯಗಳಲ್ಲಿ.

ವಿಷ್ಣುವು ಮಾ-ಧವನೆಂದರೆ ಲಕ್ಷ್ಮೀ-ಪತಿ. ಹೀಗೆ ಲಕ್ಷ್ಮೀಪತಿಯು ಲಕ್ಷ್ಮಿಯನ್ನು ಆಲಿಂಗಿಸಿಕೊಂಡಿರುವುದನ್ನು ಕಂಡಿದ್ದಾನೆ, ಕವಿ. ಭಗವಂತ-ಭಗವತಿಯವರು ಒಟ್ಟಿಗೇ ಕುಳಿತಿರುವುದನ್ನು ಚಿತ್ರಿಸಿದ್ದಾನೆ.

ಜಗನ್ಮಾತಾ-ಪಿತೃಗಳು ಪತಿ-ಪತ್ನಿಯರ ಪ್ರೇಮಕ್ಕೂ ಆದರ್ಶ-ಭೂತರು. ಆದುದರಿಂದ ಅವರು ಪರಸ್ಪರಾಲಿಂಗನದಲ್ಲಿರುವರೆಂಬ ವರ್ಣನೆಯನ್ನುಕವಿಗಳು ಕಾವ್ಯದಲ್ಲಿ ತಂದಿರುವರು. ತದನುಗುಣವಾಗಿ ಶಿಲ್ಪಿಗಳು ಅದನ್ನೇ ಶಿಲ್ಪದಲ್ಲೂ ತಂದಿರುವರು. ಕವಿ-ಕಲಾವಿದರು ಏಕತತ್ತ್ವವನ್ನು ಏಕರೂಪವಾಗಿಯೇ ತಂದರೆ ಅಚ್ಚರಿಯೇನಿಲ್ಲ.

ಇಂತಹ ಶಿಲ್ಪಗಳ ಆಶಯವನ್ನು ವಿವರಿಸುವ ಸಂದರ್ಭದಲ್ಲಿ ಶ್ರೀರಂಗಮಹಾಗುರುಗಳು ಹೀಗೆ ಸ್ಪಷ್ಟಪಡಿಸಿದ್ದಾರೆ. ತನ್ನ ಮನದನ್ನೆಯು ತನ್ನ ದಿವ್ಯಭಾವದಿಂದ ಜಾರದಿರಲೆಂಬ ಆಶಯವೇ ಆ ಆಲಿಂಗನದಲ್ಲಿದೆ. ಅಂತಹ ದಿವ್ಯಭಾವವನ್ನು ಅಶ್ಲೀಲವೆಂದು ಕಾಣುವುದು ಮೂರ್ಖತನವೇ ಸರಿ. ಎಂದೇ ತನ್ನ ಅರ್ಧವೇ ಆದವಳನ್ನು ಹಾರ್ದವಾಗಿ ಆಲಿಂಗಿಸಿಕೊಂಡಿರುವುದನ್ನು ನೋಡಿದೊಡನೆ ತೋರುವುದೆಂದರೆ ಆತನ ತೋಳೇ. ಎಂದೇ ಅದನ್ನೇ ಕವಿಯು ಚಿತ್ರಿಸಿರುವುದು ಸಹಜವೇ ಆಗಿದೆ.

ಇದಲ್ಲದೆ, "ಮಾಂ" ಎನ್ನುವುದಕ್ಕೆ ಬೇರೊಂದು ಅರ್ಥವೂ ಇದೆ. ಆ ಅರ್ಥವೂ ಯುಕ್ತವೇ. ವ್ಯಾಕರಣ-ದೃಷ್ಟ್ಯಾ "ಅಸ್ಮದ್" ಶಬ್ದದ ದ್ವಿತೀಯಾವಿಭಕ್ತಿಯ ಏಕವಚನದ ರೂಪವೇ "ಮಾಮ್" ಎಂಬುದು. ಅದರ ಅರ್ಥ, "ನನ್ನನ್ನು" ಎಂದು. ಹೀಗೆ ಕೃಷ್ಣನು ತನ್ನನ್ನೇ ಆಲಿಂಗಿಸಿಕೊಂಡಿರುವ ಕನಸನ್ನೇ ಕಂಡಿದ್ದಾನೆ, ಲೀಲಾಶುಕ.

ಇಂತಹ ಅದ್ಭುತವಾದ ಕನಸನ್ನು ಕಂಡಿರುವ ಲೀಲಾಶುಕನೇ ಧನ್ಯ. ಏಕೆಂದರೆ ಇಂತಹ ಕನಸುಗಳು ಎಲ್ಲರಿಗೂ ಬಂದುಬಿಡುವುದಿಲ್ಲ. ಕನಸಿನಲ್ಲಿ ಭಗವಂತ-ಭಗವತಿಯರನ್ನು ಕಾಣುವುದಾಗಲಿ, ಭಗವಂತನು ತನ್ನನ್ನು ಆಲಿಂಗಿಸಿಕೊಂಡಿರುವಂತೆ ಕಾಣುವುದಾಗಲಿ ದುರ್ಲಭವೇ ಸರಿ.

ಯಾರ ಮನಸ್ಸು ಆಧ್ಯಾತ್ಮಿಕವಾಗಿ ಮುಂದುವರೆದಿರುವುದೋ, ಯಾರ ಪ್ರಾಣದಲ್ಲಿ ದಿವ್ಯಸಂಚಾರವು ತಲೆದೋರಿರುವುದೋ, ಅಂತಹವರಿಗೇ ಇಂತಹ ಕನಸುಗಳು ಸಂಭವಿಸುವುದು. ಹೀಗೆ ಇಂತಹ ಸ್ವಪ್ನಗಳು ಆಧ್ಯಾತ್ಮಿಕ-ಪ್ರಗತಿಯ ಸೂಚಕವಾದವುಗಳೂ ಹೌದು.

ಸಂತರು ಹೇಳುವರಲ್ಲವೇ? "ಜಾಗತ ರಾಮ ಸೋವತ ರಾಮ, ಸಪನೇಮೇ ದೇಖೋ ಹಿ ರಾಮ ಹೀ ರಾಮ! " ಎಂದು? ಅಂತಹ ಭಾವಕ್ಕೆ ಇಲ್ಲಿಯ ಮಾತುಗಳು ಸಂವಾದಿಯಾಗಿವೆ.

ಹೀಗೆ, ಮಾಂ – ಎಂಬುದರ ಬದಲು, ರಮಾಂ – ಎಂದೋ, ಇಂದಿರಾಂ ಎಂದೋ, ಪದವನ್ನು ಬಳಸಿದ್ದಲ್ಲಿ ಛಂದಸ್ಸೂ ಒಪ್ಪುತ್ತಿರಲಿಲ್ಲ, ಈ ಸೊಬಗೂ ಬರುತ್ತಿರಲಿಲ್ಲ, ಈ ಶ್ಲೇಷವೇ ಹೊಮ್ಮುತ್ತಿರಲಿಲ್ಲ.  

ಮಾಂ ಎಂಬ ಪದವನ್ನೇ ಬಳಸಿ, ಅತ್ತ ಲಕ್ಷ್ಮಿಯನ್ನೂ ಇತ್ತ ತನ್ನನ್ನೂ ಸೂಚಿಸುವಂತಾಗಿಸಿರುವುದು ಕವಿಯ ಅಧ್ಯಾತ್ಮ-ಭಾವ-ದರ್ಶಿಯಾದ ಚಮತ್ಕಾರವಾಗಿ ಅತ್ಯಂತ ಶೋಭಾಕರವಾಗಿದೆ.

ಹೀಗೆ ಭಗವಂತನ ಆಶ್ಲೇಷದ ಸಂದರ್ಭದಲ್ಲಿ, ಎಂದರೆ ಆಲಿಂಗನದ ಸಂದರ್ಭದಲ್ಲಿ, ಕವಿಯು ಶ್ಲೇಷವನ್ನು ಪ್ರಯೋಗಿಸಿರುವುದು ಅದ್ಭುತವಾಗಿದೆ.

ಅನೇಕ ಕವಿಗಳು ಒಳ್ಳೆಯ ಶ್ಲೇಷ ತರಿಸಲು ಬಹಳ ಕ್ಲೇಶಪಡುವುದುಂಟು. ಆದರೆ ಇಲ್ಲಿ ಬಂದಿರುವ ಅನಾಯಾಸವಾದ ಶ್ಲೇಷಾಲಂಕಾರವು ಲೀಲಾಶುಕನ ಕವಿತೆಗೇ ಒಂದು ಅಲಂಕಾರವಾಗಿದೆ. ಎಷ್ಟಾದರೂ ಶ್ಲೇಷಕ್ಕೆ ಮೆರುಗು ಬರುವುದು ಅದರ ಸಹಜತೆಯಿಂದ, ಅನಾಯಾಸತೆಯಿಂದ.

ಜೊತೆಗೇ, ಸಹಜವೂ ಸರಲವೂ ಆದ ಅನುಪ್ರಾಸವನ್ನು ಬರಿಸಿರುವುದೂ ಕವಿಯ ಹೆಗ್ಗಳಿಕೆಯೇ. ಹೀಗೆ ಶ್ಲೇಷವನ್ನು ಶ್ರಮವಿಲ್ಲದೆಯೇ, ಮತ್ತು ಸಂದರ್ಭಕ್ಕೆ ಬಲು ಚೆನ್ನಾಗಿ ಹೊಂದಿಕೊಳ್ಳುವಂತಹ ಬಗೆಯಲ್ಲಿಯೇ, ಪ್ರಯೋಗ ಮಾಡಿರುವ ಕವಿಗೆ ಸಹೃದಯರೆಲ್ಲರೂ ವಂದಿಸಬೇಕಾದದ್ದು ಸಹಜವೇ ಆಗಿದೆ. ಇಂತಹ ಅನೇಕ ಶ್ಲೋಕರತ್ನಗಳನ್ನು ರಚಿಸಿಕೊಟ್ಟಿರುವ ಲೀಲಾಶುಕನಿಗೆ ನಮ್ಮ ವಂದನೆಗಳು.

ವೇಣೀ-ಮೂಲೇ ವಿರಚಿತ-ಘನ-ಶ್ಯಾಮ-ಪಿಂಛಾವಚೂಡೋ /

ವಿದ್ಯುಲ್ಲೇಖಾ-ವಲಯಿತ ಇವ ಸ್ನಿಗ್ಧ-ಪೀತಾಂಬರೇಣ |

ಮಾಂ ಆಲಿಂಗನ್ ಮರಕತ-ಮಣಿ-ಸ್ತಂಭ-ಗಂಭೀರ-ಬಾಹುಃ /

ಸ್ವಪ್ನೇ ದೃಷ್ಟಃ ತರುಣ-ತುಲಸೀ-ಭೂಷಣೋ ನೀಲ-ಮೇಘಃ ||

ಸೂಚನೆ : 6/12/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, November 30, 2025

ಪ್ರಶ್ನೋತ್ತರ ರತ್ನಮಾಲಿಕೆ 41(Prasnottara Ratnamalike 41)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)




ಪ್ರಶ್ನೆ ೪೨.  ಸಾಧು ಜನ ಯಾರು? ಮತ್ತು ಅಧಮರು ಯಾರು?

 ಸದಾಚಾರೀ. ದುರಾಚಾರೀ

ಸತ್ ಅಂದರೆ ಒಳ್ಳೆಯ ಆಚಾರವನ್ನು ಇಟ್ಟುಕೊಂಡವನೇ 'ಸದಾಚಾರಿ' ಎಂದು ಕರೆಸಿಕೊಳ್ಳುತ್ತಾನೆ. ಇದಕ್ಕೆ ವಿರುದ್ಧವಾದ ಆಚಾರ ಉಳ್ಳವನು ದುರಾಚಾರಿ ಎಂದು ಕರೆಸಿಕೊಳ್ಳುತ್ತಾನೆ. ಇಲ್ಲಿ ನಾವು ವಿವೇಚಿಸಬೇಕಾದ ವಿಷಯ ಎರಡು. ಒಂದನೆಯದಾಗಿ ಸತ್ ಎಂದರೆ ಏನು? ಮತ್ತು ಆಚಾರ ಎಂದರೆ ಏನು? ಎಂಬುದಾಗಿ. ಒಟ್ಟಾರೆ 'ಸದಾಚಾರ' ಎಂಬ ಸಂಗತಿಯನ್ನು ಯಾವನು ತನ್ನಲ್ಲಿ ಅಳವಡಿಸಿಕೊಂಡಿರುತ್ತಾನೋ, ಅವನು ಸದಾಚಾರಿಗಳು. ಹಾಗಾಗಿ ನಾವು 'ಸತ್' ಎಂದರೆ ಏನು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕಾಗಿದೆ. 

'ಸತ್' ಎಂದರೆ 'ಅಸ್ತಿ ಇತಿ ಸತ್' ಎಂಬಂತೆ ಯಾವುದು ಇರುತ್ತದೆಯೋ ಅದು. ಅಂದರೆ ಯಾವುದು ನಿನ್ನೆಯ ದಿವವೂ ಇತ್ತು, ಈದಿನವೂ ಇದೆ, ನಾಳೆಯೂ ಇರುತ್ತದೆ ಎಂಬುದಕ್ಕೆ ವಿಷಯವಾಗುತ್ತದೆಯೋ ಅದು ತಾನೆ!. ಯಾವಾಗಲೂ ಅಸ್ತಿತ್ವವು ಇರುವಂತದ್ದು. ಅದು ತಾನೇ ಸತ್ತಾಗಿರುವ ವಿಷಯ! ಇಂತಹ ಮೂರು ಕಾಲದಲ್ಲೂ ತನ್ನ ಅಸ್ಮಿತೆಯನ್ನು ತೋರುವ ವಿಷಯ ಯಾವುದು? ಎಂದರೆ ಅದೇ ಸತ್. ನಾವು ಕಾಣುವ ಯಾವುದೇ ವಿಷಯವು ಇಂದಿರುವುದು ನಾಳೆ ಇರದು, ನಿನ್ನೆ ಕಂಡಿದ್ದು ಇವತ್ತು ಕಾಣದು. ಹೀಗೆ ಇವೆಲ್ಲವೂ ಯಾವುದೋ ಕಾಲದ ಪರಿಮಿತಿಯಲ್ಲಿ ಇದೆ ಮತ್ತು ಇಲ್ಲ ಎಂಬುದಕ್ಕೆ ವಿಷಯವಾಗುತ್ತವೆ. ಸತ್, ಚಿತ್, ಆನಂದ ರೂಪವಾಗಿರುವ ಪರಬ್ರಹ್ಮ ಎಂಬುದಾಗಿ ಉಪನಿಷತ್ತುಗಳೆಲ್ಲವೂ ಯಾವುದನ್ನು ಸಾಗುತ್ತವೆಯೋ ಅದೇ ಸತ್ಯ, ಅದೇ ಸತ್. ಆದುದರಿಂದ ಆ ಪರಬ್ರಹ್ಮ ವಸ್ತು ಮಾತ್ರ ಸತ್ತಾಗಿದೆ. ಆ ಸತ್ಯದ ಬಗ್ಗೆ ಅಥವಾ ಅದನ್ನು ಅರಿಯುವ ಬಗ್ಗೆ ಅಥವಾ ಅದನ್ನು ಸೇರುವ ಬಗೆಯಲ್ಲಿ ಯಾವನು ತನ್ನ ನಡೆ-ನುಡಿ, ಆಚಾರ-ವಿಚಾರಗಳನ್ನು ಇಟ್ಟುಕೊಳ್ಳುತ್ತಾನೋ ಅವನನ್ನು 'ಸದಾಚಾರಿ' ಎಂಬುದಾಗಿ ಕರೆಯಬಹುದು. ಅವನು ಮಾಡುವ ಆಚಾರ ವಿಚಾರಗಳೆಲ್ಲವೂ ಸತ್ಯದ ಕಡೆಗೆ, ಭಗವಂತನ ಕಡೆಗೆ ಅವನನ್ನು ಕರೆದುಕೊಂಡು ಹೋಗುತ್ತದೆ ಎಂಬುದಾಗಿ ತಾತ್ಪರ್ಯ. 

'ಆಚಾರ' ಎಂದರೆ 'ಆ-ಸಮಂತಾತ್' ಸತ್ಯದವರೆಗೆ ಅಂದರೆ ಗುರಿ ಮುಟ್ಟುವ ತನಕ ಯಾವುದು ನಮ್ಮನ್ನು ಕರೆದುಕೊಂಡು ಹೋಗುತ್ತದೆಯೋ ಅದು ತಾನೇ!. ಅಂತಹದನ್ನು ಮಾತ್ರ ಆಚಾರ ಎಂಬುದಾಗಿ ಕರೆಯಲಾಗುತ್ತದೆ. ಅಂತಹ ಆಚಾರವನ್ನು ಇಟ್ಟುಕೊಂಡ ಆಚಾರ್ಯರು ಮಾತ್ರ ಭಗವಂತನ ಕಡೆಗೆ ನಮ್ಮನ್ನು ಕರೆದೊಯ್ಯಲು ಸಾಧ್ಯ. ಇಂತಹ ಆಚಾರ ಇಟ್ಟುಕೊಂಡವನು ಸಜ್ಜನ, ಸತ್ಪುರುಷ ಮೊದಲಾದ ಪದಗಳಿಂದ ಕರೆಸಿಕೊಳ್ಳುತ್ತಾನೆ. ಅವನ ಜೀವನವು ಅದಕ್ಕನುಗುಣವಾಗಿ ಇರುತ್ತದೆ. ಪೂರಕವಾದದ್ದನ್ನು ಬಿಟ್ಟು, ಇನ್ನಾವ ಕ್ರಿಯೆಯೂ ಅವನಲ್ಲಿ ಕಾಣದು. ಹಾಗಾಗಿ ಅವನನ್ನು ನಾವು ಸಜ್ಜನ, ಸತ್ಪುರುಷ ಇತ್ಯಾದಿಯಾಗಿ ಆ ಸತ್ ಎಂಬ ನಿತ್ಯ ಅಸ್ತಿತ್ವದ ಭಗವಂತನ ವಿಶೇಷಣವಾಗಿ ನಾವು ಕರೆಯುತ್ತೇವೆ. ಇಂತಹವನನ್ನೇ ಸಜ್ಜನ ಅಥವಾ ಸಾಧು ಎಂಬುದಾಗಿ ಹೇಳಬಹುದು. 

ಇದಕ್ಕೆ ವಿರುದ್ಧವಾದ ನಡೆಯುಳ್ಳವನನ್ನು ದುರಾಚಾರಿ, ಅಧಮ, ದುಷ್ಟ ಹೀಗೆಲ್ಲ ಹೇಳಬಹುದು. ಆತನ ಜೀವನವ್ಯಾಪಾರವೆಲ್ಲವೂ ಭಗವಂತನ ನಡೆಗೆ ವಿರುದ್ಧವಾಗಿಯೇ ಇರುತ್ತವೆ. ಹಾಗಾಗಿ ಅವೆಲ್ಲವೂ 'ದುರಾಚಾರ' ಎಂಬುದಾಗಿ ಕರೆಸಿಕೊಳ್ಳುತ್ತವೆ. ಆದ್ದರಿಂದ ಅವನನ್ನು 'ದುರ್ಜನ ಅಥವಾ ಅಸಾಧು' ಎಂಬುದಾಗಿ ಕರೆಯಲಾಗುತ್ತದೆ.

ಸೂಚನೆ : 30/11/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 164 ಜರಾಸಂಧನ ಪರವಾಗಿರುವ ಹಲವು ರಾಜರು (Vyaasa Vikshita 164)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ರಾಜಸೂಯಯಾಗವನ್ನು ಮಾಡುವುದರ ಬಗ್ಗೆ ಸಲಹೆಯನ್ನು ಕೇಳಲು ಶ್ರೀಕೃಷ್ಣನನ್ನು ಯುಧಿಷ್ಠಿರನು ಬರಮಾಡಿಕೊಂಡಿದ್ದನಷ್ಟೆ. ಆ ಬಗ್ಗೆ ಮಾರ್ಗದರ್ಶಕವಾದ ಮಾತುಗಳನ್ನು ಆಡುತ್ತಾ ಶ್ರೀಕೃಷ್ಣನು ಯಾರು ಇದಕ್ಕೆ ಸಹಕರಿಸುವವರು, ಯಾರಲ್ಲ – ಎಂಬುದನ್ನು ಸೂಚಿಸುತ್ತಿದ್ದಾನೆ:

"ಈಗಷ್ಟೆ ಜರಾಸಂಧನೆಂಬ ರಾಜನು ದರ್ಪದಿಂದ ಅನೇಕ ರಾಜರುಗಳ ತಲೆಯ ಮೇಲೆ ಕಾಲೂರಿದ್ದಾನೆ. ತನ್ನ ಓಜಸ್ಸಿನಿಂದ ಅವರೆಲ್ಲರನ್ನೂ ಆಕ್ರಮಿಸಿಕೊಂಡಿದ್ದಾನೆ. ತನ್ನ ರಾಜನೀತಿಯ ಯುಕ್ತಿಗಳಿಂದಾಗಿ ತಾನೇ ಸಮ್ರಾಟ್ ಆಗಿ ಕುಳಿತಿದ್ದಾನೆ.

ಆ ಜರಾಸಂಧನನ್ನೇ ಆಶ್ರಯಿಸಿರುವವನು ಪ್ರಧಾನಸೇನಾಪತಿಯದ ಶಿಶುಪಾಲನು. ಆತನಲ್ಲಿಗೆ ಶಿಷ್ಯನೆಂಬಂತೆ ಹೋಗಿ ಸೇರಿದ್ದಾನೆ. ಅಲ್ಲದೆ ಕರೂಷರಾಜನಾದ ದಂತವಕ್ತ್ರನೂ ಅಷ್ಟೆ. ಆತನು ಮಾಯಾಯುದ್ಧ ಮಾಡುವವ; ಜರಾಸಂಧನೊಂದಿಗೆ ಹಾಗೆಯೇ ವರ್ತಿಸುತ್ತಿದ್ದಾನೆ.. ಇನ್ನಿಬ್ಬರು ರಾಜರಿದ್ದಾರೆ ಹಂಸ ಮತ್ತು ಡಿಂಭಕ - ಎಂಬ ಹೆಸರಿನವರು. ಅವರೂ ಜರಾಸಂಧನನ್ನೇ ಆಶ್ರಯಿಸಿರುವವರೇ.

ಅಲ್ಲದೆ, ಭಗದತ್ತನೆಂಬ ವೃದ್ಧ ರಾಜನಿದ್ದಾನೆ. ನಿನ್ನ ತಂದೆಯ ಮಿತ್ರನವನು. ಅವನ ಸೈನ್ಯವು ಅಪರಿಮಿತವಾದದ್ದು. ಅವನು ಯವನರಿಗೆ ಒಡೆಯ. ಅಂತಹವನೂ ತನ್ನ ಮಾತಿನಲ್ಲೂ ಕ್ರಿಯೆಯಲ್ಲೂ ಜರಾಸಂಧನಿಗೆ ಮಣಿದಿರುವವನೇ. ನಿನ್ನ ತಂದೆಯ ವಿಷಯದಲ್ಲಿ ಭಕ್ತಿಯುಳ್ಳವನು; ಏಕೆಂದರೆ ಸ್ನೇಹಪಾಶದಿಂದ ಬದ್ಧನಾಗಿರುವನು: ನಿನ್ನ ವಿಷಯದಲ್ಲೂ ಅಷ್ಟೇ ಭಕ್ತಿ ಅವನಿಗೆ.

ಇನ್ನು ಪುರುಜಿತ್ತನು ನಿನ್ನ ವಿಷಯದಲ್ಲಿ ಸ್ನೇಹಾದರಗಳನ್ನುಳ್ಳವನೇ. ಪಶ್ಚಿಮದಿಂದ ದಕ್ಷಿಣದವರೆಗೆ ಆತನ ಆಳ್ವಿಕೆಯುಂಟು. ನಿನಗಂತೂ ಸೋದರಮಾವನೇ. ಕುಂತಿಭೋಜ ಕುಲಕ್ಕೇ ಆತನು ಭೂಷಣ, ಒಳ್ಳೆಯ ಶತ್ರುಸಂಹಾರಕ.

ಇನ್ನೊಬ್ಬ ರಾಜನಿದ್ದಾನೆ. ಪೌಂಡ್ರಕವಾಸುದೇವನೆಂದೇ ಆತನು ಪ್ರಸಿದ್ಧ. ಆತನು ಜರಾಸಂಧನ ಕಡೆಗೇ. ಹಿಂದೆಯೇ ಆತನನ್ನು ನಾನು ಕೊಲ್ಲಬಹುದಿತ್ತು, ಆದರೆ ಕೊಂದಿಲ್ಲ. ಚೇದಿ-ದೇಶದಲ್ಲಿ ಆತನು ಪುರುಷೋತ್ತಮನೆಂದೇ ಹೆಸರುವಾಸಿಯಾಗಿರುವನು. ತನ್ನನ್ನು ಪುರುಷೋತ್ತಮನೆಂದೇ ಭಾವಿಸಿಕೊಂಡಿದ್ದಾನೆ ಕೂಡ! ಎಂದೇ ನನ್ನ ಚಿಹ್ನವನ್ನು, ಎಂದರೆ ಶಂಖ-ಚಕ್ರಗಳನ್ನು, ಧರಿಸಿಕೊಂಡಿದ್ದಾನೆ! ವಂಗ-ಪುಂಡ್ರ-ಕಿರಾತಗಳೆಂಬ ದೇಶಗಳ ಒಡೆಯನವನು.

ಮತ್ತೊಬ್ಬ ರಾಜನೂ ಜರಾಸಂಧನ ಭಕ್ತನಾಗಿದ್ದಾನೆ. ಭೂಮಿಯ ಕಾಲುಭಾಗಕ್ಕೇ ಆತನೊಡೆಯ. ಇಂದ್ರನ ಮಿತ್ರನೂ ಹೌದು. ತನ್ನ ಅಸ್ತ್ರವಿದ್ಯಾಬಲದಿಂದ ಆತನು ಪಾಂಡ್ಯ-ಕ್ರಥ-ಕೈಶಿಕ-ರಾಜ್ಯಗಳನ್ನು ವಶಪಡಿಸಿಕೊಂಡಿದ್ದಾನೆ. ಆತನೇ ಭೀಷ್ಮಕ.

ಅವನ ಭ್ರಾತೃವೊಬ್ಬನಿದ್ದಾನೆ. ಹೆಸರು ಆಕೃತಿ. ಶೌರ್ಯದಲ್ಲಿ ಜಾಮದಗ್ನ್ಯನಿಗೆ, ಎಂದರೆ ಜಮದಗ್ನಿಪುತ್ರನಾದ ಪರಶುರಾಮನಿಗೆ, ಸಮನಾಗಿದ್ದಾನೆ. ಶತ್ರುಸಂಹಾರದಲ್ಲಿ ಸಮರ್ಥ. ಅವನೂ ಜರಾಸಂಧನ ಕಡೆಗೇ. ನಾವೇನೋ ಅವನಿಗೆ ಪ್ರಿಯವನ್ನಾಚರಿಸತಕ್ಕವರಾದರೂ, ನಮ್ರತೆಯಿಂದಲೇ ಇದ್ದರೂ, ಆತನೇನೂ ನಮಗೆ ಹಿತವಾಗಿಲ್ಲ. ಬದಲಾಗಿ, ನಮಗೆ ಅಪ್ರಿಯರಾದವರೊಡನೆಯೇ ಆತನು ಕೈಜೋಡಿಸುತ್ತಿದ್ದಾನೆ. ತನ್ನ ಕುಲವೆಂತಹುದು, ಬಲವೆಂತಹುದು - ಇವುಗಳನ್ನು ಅವನು ಸರಿಯಾಗಿ ತೂಗಿ ಅರಿತುಕೊಂಡಿಲ್ಲ. ಜರಾಸಂಧನದು ದೀಪ್ತ ಯಶಸ್ಸು, ಎಂದರೆ ಬೆಳಗುವ ಕೀರ್ತಿ - ಎಂಬತ್ತಲೇ ದೃಷ್ಟಿಯಿಟ್ಟು ಆತನನ್ನೇ ಆಶ್ರಯಿಸಿರುವನು.

ಇನ್ನು ಉದೀಚ್ಯರಾದ, ಎಂದರೆ ಉತ್ತರದಿಕ್ಕಿನವರಾದ, ಭೋಜರೂ, ಅವರಿಗೇ ಸೇರಿದ ಹದಿನೆಂಟು ಕುಲದವರೂ, ಜರಾಸಂಧನ ಭಯದಿಂದಲೇ ಪಶ್ಚಿಮದಿಕ್ಕಿಗೆ ಓಡಿಹೋಗಿದ್ದಾರೆ.

ಮತ್ತೆ ಕೆಲವರು ದಕ್ಷಿಣಕ್ಕೇ ಓಡಿಹೋಗಿದ್ದಾರೆ. ಅವರೆಂದರೆ ಶೂರಸೇನರು, ಕುಲಿಂದರು ಮುಂತಾದ ಹಲವರು. ತಮ್ಮ ಸೋದರರು ಅನುಚರರು - ಇವರೆಲ್ಲರೊಂದಿಗೆ ಓಡಿಹೋಗಿರುವವರು. ಹಾಗೆಯೇ ಉತ್ತರದಿಕ್ಕನ್ನು ಬಿಟ್ಟು ಓಡಿಹೋಗಿರುವವರೆಂದರೆ ದಕ್ಷಿಣಪಾಂಚಾಲರು, ಕೋಸಲರು ಮುಂತಾದವರು. ಜರಾಸಂಧನಿಂದಾಗಿ ಭಯದಿಂದ ಅವರೆಲ್ಲರೂ ತತ್ತರಿಸಿರುವವರೇ" – ಎಂಬುದಾಗಿ ಹೇಳಿದನು.

ಸೂಚನೆ : 30/11/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಅಷ್ಟಾಕ್ಷರೀ - 80 ಯಾ ನಿಶಾ ಸರ್ವಭೂತಾನಾಂ (Astakshari 80)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ನಮ್ಮ ಜೀವನವು ಹೇಗಿರಬೇಕು? - ಎಂಬ ಪ್ರಶ್ನೆಗೆ ನಮ್ಮ ಪರಂಪರೆಯಲ್ಲಿ ಉತ್ತರವು ಎಲ್ಲಿ ಸಿಗುತ್ತದೆ? ಹೀಗೆಂದು ಯಾರಾದರೂ ಕೇಳಿದರೆ ಹೆಸರಿಸಬಹುದಾದ ಮೊಟ್ಟಮೊದಲ ಅಥವಾ ಅತಿಮುಖ್ಯ-ಗ್ರಂಥವೆಂದರೆ ಭಗವದ್ಗೀತೆಯೇ ಸರಿ. ಲೌಕಿಕಜೀವನ, ಆಧ್ಯಾತ್ಮಿಕಜೀವನ - ಇವೆರಡಕ್ಕೂ ಮಾರ್ಗದರ್ಶಿಯಾದುದು ಈ ಕೃತಿಯೇ.

ಗೀತೆಯು ಯೋಗಶಾಸ್ತ್ರ. ಎಂದೇ ಅದರ ಪ್ರತಿಯೊಂದು ಅಧ್ಯಾಯವೂ ಒಂದೊಂದು ಯೋಗವನ್ನು ಹೇಳುತ್ತದೆ. ಪ್ರಥಮಾಧ್ಯಾಯದಲ್ಲಿ ಅರ್ಜುನನಿಗುಂಟಾದ ಮಹಾಸಂದೇಹವನ್ನು ಹೇಳಿದೆ. ದ್ವಿತೀಯಾಧ್ಯಾಯದಿಂದಲೇ ಶ್ರೀಕೃಷ್ಣನ ಉಪದೇಶ ಆರಂಭವಾಗುವುದು. ಮರಣಸಂಬಂಧವಾದ ಪ್ರಶ್ನೆಯನ್ನು ಅರ್ಜುನನು ಕೇಳಿದನೆಂದೇ ಶ್ರೀಕೃಷ್ಣನ ಮಾತೂ ಜನನ-ಮರಣಗಳ ತತ್ತ್ವವನ್ನು ಬಿಡಿಸಿಹೇಳುವುದು. ಯೋಗವೇ ಯುಕ್ತವಾದ ಮಾರ್ಗವೆಂದು ಶ್ರೀಕೃಷ್ಣನು ಹೀಗೆ ಆರಂಭದಿಂದಲೇ ಹೇಳುವುದು.

ಹಾಗೆ ಯೋಗದಲ್ಲಿ ನೆಲೆಗೊಂಡ ಸ್ಥಿತಪ್ರಜ್ಞನ ಮಾತುಕತೆಗಳೂ ವರ್ತನೆಯೂ ಹೇಗಿರುವುದು? - ಎಂಬ ಅರ್ಜುನನ ಪ್ರಶ್ನೆಗಳಿಗೆ ಹದಿನೆಂಟು ಶ್ಲೋಕಗಳಲ್ಲಿ ಕೃಷ್ಣನುತ್ತರಿಸುವನು. ಇಡೀ ಗೀತೆಯ ಸಾರವೇ ಇವುಗಳಲ್ಲಿ ಮೂಡಿದೆಯೆಂದು ಹೇಳಿದರೂ ತಪ್ಪಾಗಲಾರದು.

ಕಾಮನೆಗಳನ್ನು ತೊರೆದವನು ದುಃಖಗಳಲ್ಲಿ ಕಂಗೆಡನು, ಸುಖಗಳಲ್ಲಿ ನಿಃಸ್ಪೃಹನಾಗಿರುವನು. ಕೂರ್ಮವು ತನ್ನ ಅಂಗಗಳನ್ನು ಒಳಕ್ಕೆ ಸೆಳೆದುಕೊಳ್ಳುವಂತೆ ತನ್ನ ಇಂದ್ರಿಯಗಳನ್ನು ಒಳಕ್ಕಾತನು ಸೆಳೆದುಕೊಳ್ಳಬಲ್ಲನು. ಬಲು ಜೋರು, ಇಂದ್ರಿಯಗಳ ಹೊರಸೆಳೆತ; ಮನಸ್ಸನ್ನೇ ಅವು ಅಪಹರಣಮಾಡಬಲ್ಲವು. ಇಂದ್ರಿಯಸಂಯಮವುಳ್ಳವನ ಪ್ರಜ್ಞೆಯೇ ಪ್ರತಿಷ್ಠಿತವಾಗಿರುವುದು. ಇಂದ್ರಿಯಸುಖಗಳತ್ತ ಮನಸ್ಸು ಹರಿಯುತ್ತಿದ್ದಂತೆ, ಅವುಗಳಲ್ಲಿ ಆಸಕ್ತಿಯೇರಿ, ಅದುವೇ ಊರಿದಾಗ ಕಾಮವಾಗಿ,  ಆಮೇಲೆ ಪರಂಪರೆಯಾಗಿ ಸಂಮೋಹ-ಸ್ಮೃತಿಭ್ರಂಶ-ಬುದ್ಧಿನಾಶ-ಸ್ವನಾಶ - ಇವುಗಳು ಉಂಟಾಗುತ್ತವೆ. ರಾಗದ್ವೇಷಗಳಿಲ್ಲದಾದಾಗ ಪ್ರಸನ್ನತೆ-ದುಃಖರಹಿತತೆ-ಬುದ್ಧಿಸ್ಥಿರತೆಗಳುಂಟಾಗುವುವು. ಇಂದ್ರಿಯನಿಗ್ರಹದಿಂದಲೇ ಸ್ಥಿತಪ್ರಜ್ಞತೆ-ಬ್ರಾಹ್ಮೀಸ್ಥಿತಿಗಳು ಸಿದ್ಧಿಸುವುದು. ಇವೆಲ್ಲವನ್ನೂಅತ್ಯಂತ-ತರ್ಕಬದ್ಧವಾಗಿ ಶ್ರೀಕೃಷ್ಣನು ಹೇಳಿದ್ದಾನೆ. ಇವಕ್ಕೆ ವಿಸ್ತೃತ-ವಿವರಣೆಯೂ ಅಪೇಕ್ಷಿತವೇ. ಅದಕ್ಕಿಲ್ಲಿ ಸ್ಥಳವಿಲ್ಲ.

ಆದರೆ ಈ ಸಂದರ್ಭದಲ್ಲಿ ಶ್ರೀಕೃಷ್ಣನಾಡಿದ ಒಗಟೆಯ ಮಾತೊಂದಿದೆ. ಅದುವೇ ನಮಗಿಲ್ಲಿ ವಿಚಾರಣೀಯವಾಗಿರುವುದು. ಏನದು?

"ಎಲ್ಲ ಭೂತಗಳಿಗೂ ಯಾವುದು ರಾತ್ರಿಯೋ (ಯಾ ನಿಶಾ ಸರ್ವಭೂತಾನಾಂ) ಅಲ್ಲಿ ಯೋಗಿಯು ಎಚ್ಚರವಾಗಿರುತ್ತಾನೆ; ಎಲ್ಲಿ ಪ್ರಾಣಿಗಳೆಲ್ಲವೂ ಎಚ್ಚರವಾಗಿರುವುವೋ ಅದು ಯೋಗಿಗೆ ರಾತ್ರಿಯಾಗಿರುವುದು" – ಎಂಬುದು.

ಇಲ್ಲಿ ಹೇಳಿರುವುದೇನು? ಎಲ್ಲರಿಗೂ ಯಾವಾಗ ನಿದ್ರೆಯೋ ಆಗ ಜ್ಞಾನಿಗೆ ಎಚ್ಚರ; ಎಲ್ಲರಿಗೂ ಯಾವಾಗ ಎಚ್ಚರವೋ, ಆಗ ಆತನಿಗೆ ರಾತ್ರಿ - ಎಂದು ಹೇಳಿದಂತಾಯಿತು. ಏನು ಹಾಗೆಂದರೆ? ಯೋಗಿಯೆಂದರೆ ಗೂಬೆಯಂತೆ - ಎಂದೇ? ನಕ್ತಂಚರವಾದ, ಅರ್ಥಾತ್ ರಾತ್ರಿ-ಸಂಚಾರಮಾಡುವ, ಪ್ರಾಣಿಗಳಂತೆಯೆಂದೇ? ಹಗಲು ಎಲ್ಲರಿಗೂ ಎಚ್ಚರವೆಂದರೆ, ಯೋಗಿಯು ಹಗಲು ನಿದ್ರಿಸುವವನೇ? ಯೋಗಶಾಸ್ತ್ರ-ಆಯುರ್ವೇದ-ಧರ್ಮಶಾಸ್ತ್ರಗಳಲ್ಲಿ ಹಗಲುನಿದ್ದೆಯನ್ನು ನಿಷೇಧಿಸಿದೆಯಲ್ಲವೇ? ಆಧುನಿಕ-ವಿಜ್ಞಾನವೂ ರಾತ್ರಿ-ನಿದ್ರೆಯೇ ಸರಿಯೆನ್ನುವುದಲ್ಲವೇ?

ಹಾಗಲ್ಲ. ಇಲ್ಲಿ ಹೇಳಿರುವುದು ಸಾಕ್ಷಾತ್ ಹಗಲು-ರಾತ್ರಿಗಳಲ್ಲ. ರಾತ್ರಿಯಲ್ಲಿ ಯಾವ ಪದಾರ್ಥಗಳೂ ಕಾಣಿಸವು, ತಮಸ್ಸು ತುಂಬಿರುವುದು, ಅಲ್ಲವೇ? ನಿಶಾ ಎಂಬುದರ ಅರ್ಥ ಇಲ್ಲಿ ಅದೇ.

ಈ ಶ್ಲೋಕಕ್ಕೆ ಯೋಗಿಪುಂಗವರಾದ ಶ್ರೀರಂಗಮಹಾಗುರುಗಳು ಕೊಟ್ಟಿರುವ ವಿವರಣೆಯು ಸುಭಗವಾಗಿರುವುದು. ಜ್ಞಾನಿಯು ನೋಡುತ್ತಿರುವುದು ಒಳಬೆಳಕನ್ನು. ಆ ಬಗ್ಗೆ ಅಜ್ಞಾನಿಗಳಾದ ಇತರರಿಗೆ ಏನೂ ಗೋಚರಿಸದು. ಆದ್ದರಿಂದಲೇ ಅವರಿಗದು ನಿಶೆಯಂತೆ: ಏನೂ ಕಾಣಿಸದಾದುದು.

ಅಲ್ಲದೆ ಯೋಗಿಯ ಇಂದ್ರಿಯಗಳೆಲ್ಲ ಚೆನ್ನಾಗಿಯೇ ಕೆಲಸ ಮಾಡುವುದರಿಂದ ಆತನು ಅಜ್ಞಾನಿಗಳ ಜಾಗ್ರತ್ತಿನ ಅನುಭವವನ್ನೆಲ್ಲಾ ಕಷ್ಟವಿಲ್ಲದೇ ಅರಿಯಬಲ್ಲನೇ ಸರಿ. ಜೊತೆಗೇ ಇಂದ್ರಿಯಗಳನ್ನು ಒಳಸೆಳೆದುಕೊಂಡು ಒಳಗೆ ಪರಮಪ್ರಕಾಶವನ್ನೂ ಆತನು ಅನುಭವಿಸಿರುವನು.

ಇಂದ್ರಿಯಗಳ ಬೆಳಕೂ ಬೆಳಕೇ ಆದರೂ, ಅದು ರಾತ್ರಿಯ ಹೊತ್ತು ನಕ್ಷತ್ರಗಳ ಮಿನುಗಿನಿಂದ ಗೊತ್ತಾಗುವಷ್ಟರದು, ಅಷ್ಟೆ. ಇದಕ್ಕೆ ಪ್ರತಿಯಾಗಿ, ಜ್ಞಾನಿಯು ಕಾಣುವ ಪರಮಾತ್ಮ-ಸೂರ್ಯ-ಪ್ರಕಾಶವು ಜಾಜ್ವಲ್ಯಮಾನವಾದುದು. ಜ್ಞಾನಿಗಳು ಮಾಡುವ ನಿದ್ರೆಯಾದರೂ ಎಚ್ಚರದ ನಿದ್ರೆ, ಯೋಗನಿದ್ರೆ.

ಇತರ ಜೀವಿಗಳಿಗೆ ಇಂದ್ರಿಯಗಳ ಸೆಳೆತವೇ ತೀವ್ರವಾಗಿದ್ದು, ಒಳಬೆಳಕೆಂಬುದೊಂದು ಇರುವುದೆಂದಾದಲಿ, ಅದನ್ನು ಪಡೆಯುವ ಮಾರ್ಗವಾಗಲಿ, ತಿಳಿಯದಾಗಿರುತ್ತದೆ: ಅದೆಲ್ಲ ಅವರ ಪಾಲಿಗೆ ಕತ್ತಲೇ. ಅಜ್ಞಾನಿಗಳ ಹಗಲೆಂದರೆ ಇಂದ್ರಿಯಪ್ರಪಂಚ; ಅದು ಜ್ಞಾನಿಗೆ ಗೊತ್ತಿಲ್ಲವೆಂದೇನಿಲ್ಲ.

ಹೀಗೆ ಜ್ಞಾನಿಯು ಇಂದ್ರಿಯ-ಪ್ರಪಂಚ-ಇಂದ್ರಿಯಾತೀತ-ಪ್ರಪಂಚಗಳೆರಡನ್ನೂ ಬಲ್ಲವನು. ಅಜ್ಞಾನಿಗೆ ಗೊತ್ತಿರುವುದು ಇಂದ್ರಿಯ-ಪ್ರಪಂಚವೊಂದೇ. ಜ್ಞಾನಿಯು ಬ್ರಾಹ್ಮೀಸ್ಥಿತಿಯನ್ನರಿತಿದ್ದಾನೆ. ಬ್ರಾಹ್ಮೀಸ್ಥಿತಿಯನ್ನು ಬಲ್ಲವನು ಮೋಹಕ್ಕೆ ಪಕ್ಕಾಗನು, ಶಾಂತಿಯನ್ನು ಹೊಂದುವನು.

ಹೀಗೆ, ಶೋಕ-ಮೋಹಗಳೆಂಬ ವಿಷಕ್ಕೆ ತುತ್ತಾಗಿರುವ ಅರ್ಜುನನಿಗೆ ಯೋಗೇಶ್ವರನಾದ ಶ್ರೀಕೃಷ್ಣನು ಅಮೃತವೆನಿಸುವ ಅದ್ಭುತ-ಯೋಗೋಪದೇಶವನ್ನೇ ಹೀಗೆ ಮಾಡಿದ್ದಾನೆ.

ಮೇಲ್ನೋಟಕ್ಕೆ ವಿರೋಧದ ನಿರೂಪಣೆ; ಬಿಡಿಸಿ ನೋಡಿದರೆ ಗಹನ-ಯೋಗತತ್ತ್ವದ ವಿವರಣೆ, ಕೃಷ್ಣನ ಈ ಸೂಕ್ತಿ!!

ಸೂಚನೆ: 29/11//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ 84 ನಿರ್ವಾಣ-ಸಾಮ್ರಾಜ್ಯವೇ ಮೈತಾಳಿ ಬಂದಂತೆ (Krishakarnamrta 84)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ನಾನೇನು ಮಾಡಲಿ, ನೀನೇ ಹೇಳು - ಎಂದು ಕೃಷ್ಣನನ್ನೇ ಕೇಳುತ್ತಿದ್ದಾನೆ, ಲೀಲಾಶುಕ. 

ಕೃಷ್ಣಾ, ನಿನ್ನ ಶೈಶವವು ತ್ರಿಲೋಕಾದ್ಭುತ - ಎಂದರೆ ಮೂರು ಲೋಕಗಳಲ್ಲೂ ಆಶ್ಚರ್ಯ-ಜನಕವಾದದ್ದು - ಎಂಬುದನ್ನು ನಾ ಬಲ್ಲೆ. ಹಾಗಿದ್ದರೂ ನಿರ್ವಿವಾದವಾಗಿ ನನ್ನದೊಂದು ಚಾಪಲವೂ ಇದೆಯಲ್ಲ? ನಾನೇನನ್ನು ಮಾಡಬೇಕು? ನೀ ಹೇಳು - ಎಂದು ಕೃಷ್ಣನಲ್ಲೇ ಮೊರೆಯಿಡುತ್ತಿದ್ದಾನೆ.

ಏನನ್ನು ಕುರಿತಾದ ಚಾಪಲ ಈತನದು? "ಕಮಲದಂತಿದೆಯಲ್ಲವೇ ನಿನ್ನ ಮುಖ? ಅದನ್ನು ನನ್ನೆರಡೂ "ಈಕ್ಷಣ"ಗಳಿಂದ ಕಾಣಬೇಕೆಂಬ ಚಾಪಲ. ಸಂಸ್ಕೃತದಲ್ಲಿ "ಈಕ್ಷಣ"ವೆಂದರೆ ನೋಡುವಿಕೆ, ಅಥವಾ ನೋಡಲು ಸಾಧನವಾದದ್ದು. ಅರ್ಥಾತ್ ಕಣ್ಣು. ಅಲ್ಲಿಗೆ ನಿನ್ನ ಮುಖ-ಕಮಲವನ್ನು ಕಣ್ತುಂಬ ನೋಡಬೇಕೆಂಬ ಹಂಬಲವೆನ್ನದು - ಎನ್ನುತ್ತಿದ್ದಾನೆ. 

ಈ ಕೃಷ್ಣ-ಮುಖಾಂಬುಜದಲ್ಲಿಯ ವಿಶೇಷವೇನು? ಅದಕ್ಕೆ ಸೋಕಿಸಿದ ಇನಿದನಿಗೈಯುವ ಕೊಳಲುಂಟಲ್ಲವೇ? ಅದರ ವಿಲಾಸಗಳಿಂದಾಗಿ ಮುಗ್ಧವಾಗಿದೆ, ಎಂದರೆ ಸೊಗಸಾಗಿ, ತೋರುತ್ತದೆ ನಿನ್ನ ಮುಖ-ಪದ್ಮ.

ಹಾಗಿರುವ ಅದನ್ನು ಕಾಣಬೇಕೆಂಬ ಕಾತರತೆ ಎನಗೆ. ತೀವ್ರವಾದ ಕಾತರತೆಯದು. ಇಂತಹ ಒಂದು ವಿಹ್ವಲತೆಗೆ ಒಳಪಟ್ಟಿರುವನು ನಾನು – ಎಂಬುದಾಗಿ ಮೊರೆಯಿಡುತ್ತಾನೆ, ಲೀಲಾಶುಕ.

ಶ್ಲೋಕ ಹೀಗಿದೆ:

ತ್ವಚ್ಛೈಶವಂ ತ್ರಿಭುವನಾದ್ಭುತಂ - ಇತ್ಯವೈಮಿ /

ಯಚ್ಚಾಪಲಂ ಚ ಮಮ ವಾಗವಿವಾದ-ಗಮ್ಯಮ್ |

ತತ್ ಕಿಂ ಕರೋಮಿ, ವಿರಣನ್ಮುರಳೀ-ವಿಲಾಸ-/

ಮುಗ್ಧಂ ಮುಖಾಂಬುಜಂ ಉದೀಕ್ಷಿತುಂ ಈಕ್ಷಣಾಭ್ಯಾಂ || 


***

ನಮ್ಮನ್ನು ಕೃಷ್ಣನು ಕಾಪಾಡಲಿ, ಎನ್ನುತ್ತಾನೆ ಲೀಲಾಶುಕ. ಎಂತಹ ಕೃಷ್ಣನಿವನು? ನಾಲ್ಕು ವಿಶೇಷಣಗಳಿಂದ ಶ್ರೀಕೃಷ್ಣನ ವಿಶೇಷಗಳನ್ನು ಹೇಳುತ್ತಾನೆ.

ಮೊದಲನೆಯದಾಗಿ, ವ್ರಜ-ವಾಸಿಗಳಿಗೆ ದೈವತನಾಗಿರುವನು ಅವನು. 

ದೇವ-ದೇವತಾ-ದೈವತ - ಎಂದು ಮೂರು ಸಂಸ್ಕೃತ- ಪದಗಳಿವೆ. ಮೂರಕ್ಕೂ ಒಂದೇ ಅರ್ಥ. ಹೀಗಾಗಿ, ವ್ರಜ-ವಾಸಿಗಳಿಗೆಲ್ಲರಿಗೂ ಶ್ರೀಕೃಷ್ಣನೇ ನೆಚ್ಚಿನ ದೈವ. ಅವರೆಲ್ಲ ತಮ್ಮ ದೈವವೆಂಬುದಾಗಿ ಯಾರನ್ನು ನೆಚ್ಚಿ ಉದ್ಧಾರವಾಗಿರುವರೋ, ಆತನೇ ನಮಗೂ ಅಧಿದೈವತ.

ಎರಡನೆಯದಾಗಿ, ರಸಾಂತರಗಳನ್ನು ನಿರ್ವಾಸನಮಾಡುವ ದೈವತವಿದು. ನಿರ್ವಾಸನವೆಂದರೆ ಅಟ್ಟುವುದು. ಏನು ರಸಾಂತರಗಳನ್ನು ಅಟ್ಟುವುದೆಂದರೆ? 

ರಸಾಂತರ - ಎಂದರೆ ಬೇರೆ ರಸಗಳು. ರಸಗಳನ್ನು ಷಡ್ರಸಗಳೆಂದೂ ನವರಸಗಳೆಂದೂ ಕಾಣುತ್ತೇವಲ್ಲವೆ? ಮೊದಲನೆಯದು ಪಾಕದಲ್ಲಿ, ಅರ್ಥಾತ್ ಅಡುಗೆಯಲ್ಲಿ; ಎರಡನೆಯದು ಕಾವ್ಯ-ಪ್ರಪಂಚದಲ್ಲಿ. ಯಾವುದನ್ನಿಟ್ಟುಕೊಂಡರೂ ಸರಿಯೇ. ಯಾವುದು ನಮಗೆ ಉತ್ಕಟವಾದ ಆಸ್ವಾದವನ್ನು ಉಂಟುಮಾಡುವುದೋ ಅದೆಲ್ಲವೂ ರಸವೇ ಆಗಿರುವುದು. ರಸಾಸ್ವಾದವೆಂದರೆ ಆನಂದಾನುಭವವೇ. 

ಅಲ್ಲದೆ, ರಸಗಳಲ್ಲಿ ಹೋಲಿಕೆಯೂ ಬರಬಹುದು. ಒಂದು ರಸವೇ ಮುಖ್ಯವಾಗಿ, ಉಳಿದವು ಗೌಣವಾಗಬಹುದು. ಒಂದು ರಸವು ಮತ್ತೊಂದನ್ನು ಮರೆಯಿಸಲೂಬಹುದು.

ಕೃಷ್ಣನು ಅದೆಂತಹ ಆನಂದದ ಚಿಲುಮೆಯೆಂದರೆ, ಆತನ ಮುಂದೆ ಮತ್ತಾವುದರ ಆಕರ್ಷಣವೂ ಉಳಿಯದು. ರಸಾಂತರವೆಂದರೆ ಬೇರೆ ರಸ(ಗಳು). ರಸ-ಪುರುಷನಾದ ಕೃಷ್ಣನ ಮುಂದೆ ಬೇರೊಂದು ರಸವುಂಟೇ?

ಮೂರನೆಯದಾಗಿ ಆತನು ನಿರ್ವಾಣ-ಸಾಮ್ರಾಜ್ಯವೇ ಅವತಾರ ಮಾಡಿರುವಂತಿರುವವನು. ನಿರ್ವಾಣವೆಂದರೆ ಮುಕ್ತಿ. ಹೀಗಾಗಿ ಮುಕ್ತಿ-ಸಾಮ್ರಾಜ್ಯವೇ, ಎಂದರೆ ಮೋಕ್ಷ-ಸರ್ವಸ್ವವೇ, ಅವತಾರಮಾಡಿರುವಂತೆ ಇರುವವನು ಅವನು.

ಮತ್ತು ಕೊನೆಯದಾಗಿ ಆತನಲ್ಲಿರುವುದು ಅವ್ಯಾಜ-ಮಾಧುರ್ಯ. ಎಷ್ಟೋ ಜನರು ಚೆನ್ನಾಗಿರುವಂತೆ ಕಾಣುವಂತಹುದು, ಅವರ ಆಹಾರ್ಯಗಳಿಂದಾಗಿ. ಹಾಗೆಂದರೆ ಅವರು ಮಾಡಿಕೊಂಡಿರುವ ಅಲಂಕಾರಗಳಿಂದಾಗಿ, ಹಾಗೂ ಪೇರಿಸಿಕೊಂಡಿರುವ ಆಭರಣಗಳಿಂದಾಗಿ. ವ್ಯಾಜವೆಂದರೆ ಇಂತಹ ಅಲಂಕರಣ-ಆಭರಣಗಳೇ. ಅ-ವ್ಯಾಜವೆಂದರೆ ಇಂತಹ ಲೇಪನ-ಭೂಷಣಗಳಿಲ್ಲದಿರುವಿಕೆ. ಆದರೂ, ಎಂದರೆ ಆ ವ್ಯಾಜಗಳೇನೊಂದೂ ಇಲ್ಲದಿದ್ದರೂ ಸಹ, ಪರಮ-ಸುಂದರನಾಗಿಯೇ ತೋರಬಲ್ಲವನೇ ಅವ್ಯಾಜ-ಮಾಧುರ್ಯವುಳ್ಳವನು. 

ಇನ್ನು ನಿಧಾನವೆಂದರೆ ಕನ್ನಡದಲ್ಲಿ ಮೆಲ್ಲನೆ ಎಂಬರ್ಥ, ಸಂಸ್ಕೃತದಲ್ಲಿ ನಿಧಿಯೆಂದರ್ಥ. ಮಹಾ-ನಿಧಾನನೆಂದರೆ ಇಲ್ಲಿ ಮಹಾ-ನಿಧಿಯೆಂದರ್ಥ. ಅವ್ಯಾಜ-ಮಾಧುರ್ಯಕ್ಕೆ ದೊಡ್ಡ ನಿಧಿಯೇ ಶ್ರೀಕೃಷ್ಣ.

ಇಂತಹ ವಿಶೇಷಗಳಿಂದ ಕೂಡಿದ ಕೃಷ್ಣನು, ಎಂದರೆ ರಸ-ಸ್ವರೂಪನೂ ಮಧುರ-ಸ್ವರೂಪನೂ ಮೋಕ್ಷ-ಸ್ವರೂಪನೂ ಆದ ವ್ರಜ-ದೈವತವು, ನಮ್ಮನ್ನು ಕಾಪಾಡಲಿ - ಎಂದು ಕೇಳಿಕೊಳ್ಳುತ್ತಿದ್ದಾನೆ, ಕವಿ. 

ಶ್ಲೋಕದ ಪಾದಾರಂಭಗಳಲ್ಲಿ ಕವಿಯು ಅನುಪ್ರಾಸವನ್ನು ತಂದಿದ್ದಾನೆ. ಮೊದಲೆರಡು ಪಾದಗಳು ನಿರ್ವಾ-ನಿರ್ವಾ - ಎಂದೇ ಆರಂಭವಾಗುತ್ತವೆ; ಕೊನೆಯೆರಡು ಪಾದಗಳು ಅವ್ಯಾ-ಅವ್ಯಾ - ಎಂದೇ ಆರಂಭವಾಗುತ್ತವೆ.

ಶ್ಲೋಕ ಹೀಗಿದೆ:

ನಿರ್ವಾಸನಂ ಹಂತ ರಸಾಂತರಾಣಾಂ/

ನಿರ್ವಾಣ-ಸಾಮ್ರಾಜ್ಯಂ ಇವಾವತೀರ್ಣಂ| 

ಅವ್ಯಾಜ-ಮಾಧುರ್ಯ-ಮಹಾನಿಧಾನಂ/ 

ಅವ್ಯಾದ್ ವ್ರಜಾನಾಂ ಅಧಿದೈವತಂ ನಃ||

***

ಬಾಲಕೃಷ್ಣನು ತನ್ನತ್ತಲೇ ಬರುತ್ತಿದ್ದಾನೆಂಬ ಕಾರಣ, ಆತನ ಬರುವಿಕೆಯನ್ನೇ ಕವಿಯು ಚಿತ್ರಿಸುತ್ತಿದ್ದಾನೆ. ಕೃಷ್ಣನು ಬರುತ್ತಿದ್ದಾನೆ - ಎಂದೇ ಹೇಳುವುದಿಲ್ಲ; ಬದಲಾಗಿ, "ನನ್ನ ಜೀವಿತವೇ ಬರುತ್ತಿದೆ" - ಎಂದು ಹೇಳುತ್ತಾನೆ! ಅಲ್ಲಿಗೆ ಕೃಷ್ಣನೆಂದರೆ ಬೇರೆ ಮತ್ತಾರಿಗೆ ಅವನೇನಾದರೂ ಆಗಿರಲಿ; ನನ್ನ ಪಾಲಿಗಂತೂ ಆತನು ಜೀವಿತವೇ ಸರಿ, ನನ್ನ ಉಸಿರೇ ಅವನು. 

ಆತನು ತನ್ನತ್ತ ಆಗಮಿಸುವಲ್ಲಿ ಮೊದಲು ತೋರುವುದೇ ಆತನ ಹೆಜ್ಜೆ. ಹೇಗಿದೆ ಅದು? 'ಬಾಲ'ವಾಗಿದೆ - ಎಂದರೆ ಎಳಸಾಗಿದೆ - ಎಂದರ್ಥ. ಯಾವುದದು? ಪಾದವೆಂಬ ಕಮಲದ ಚಿಗುರು. ಕಮಲವೇ ಕೋಮಲ; ಅದರ ಚಿಗುರೆಂದರೆ ಕೇಳಬೇಕೇ, ಅದರ ಕೋಮಲತೆಯನ್ನು?

ಬಾಲಕೃಷ್ಣನು ಬರುವಾಗ ಅದೇನು "ಡ್ರಿಲ್ ಮಾರ್ಚ್"ನಂತೆ ಇರುವುದೇ? ಅದು 'ಆತ್ತ-ಕೇಳಿ'ಯಾಗಿರುವಂತಹುದು. ಏನು ಹಾಗೆಂದರೆ? 'ಕೇಲಿ'ಯೆಂದರೆ ಆಟ. 'ಆತ್ತ'ವೆಂದರೆ ಆದಾನಮಾಡಿರುವುದು, ಸ್ವೀಕರಿಸಿರುವುದು. ಹೀಗೆ ಹೇಳಿರುವುದರಿಂದ, ಅದರ ಕ್ರೀಡಾಪರತೆಯು ಗೊತ್ತಾಗುತ್ತದೆ. ನರ್ತನ-ಗತಿಗಳೇ ಅದರೊಳಗೆ ಅಡಗಿರುವುದು - ಎಂದಂತಾಯಿತಲ್ಲವೇ?

ಆ ಹೆಜ್ಜೆಗಳ ಆ ಗತಿ-ವಿಶೇಷಕ್ಕೆ ಕಾರಣವೇನು? ಕಾರಣವೆಂದರೆ ತಾನೇ ಆಗಾಗ್ಗೆ ನುಡಿಸುವ ವೇಣುಗೀತದ ಅನುಸ್ಮರಣ. ಆ ಕೊಳಲಿನ ಗಾನವಾದರೂ ಮಂಜುಲವಾದದ್ದು, ಮನೋಹರವಾದದ್ದು. ಯಾವುದರಲ್ಲಿ ಸವಿಯುಂಟೋ, ಅದು ಮತ್ತೆ ಮತ್ತೆ ಸ್ಮೃತವಾಗುತ್ತದೆ. ಹೀಗಾಗುವ ಪುನಃಪುನಃ ಸ್ಮರಣವನ್ನೇ ಅನು-ಸ್ಮರಣವೆನ್ನುವುದು. 

ಒಳ್ಳೆಯ ಭಾವದ ಗಾನವು ಲಯಬದ್ಧವಾಗಿ ಕೇಳಿಬರುತ್ತಿದ್ದರೆ, ಕೇಳುಗರ ಮೈಮನಸ್ಸುಗಳೂ ಅದಕ್ಕೆ ಸ್ಪಂದಿಸುವವಲ್ಲವೇ? ನಡೆದು ಬರುವಾಗ ಮಧುರಗಾನವು ಮೈಯನ್ನೊಂದಿಷ್ಟಾಡಿಸಿದರೆ, ಅದರ ತಾಳವು ಚರಣಕ್ಕೆ ಹರಿದು ರಮ್ಯ-ಗತಿಯನ್ನೀಯುತ್ತದೆ.

ಆ ಗಾನದ ಸ್ಮರಣವಿರುವುದರಿಂದಲೇ ನಡೆಯಲ್ಲಿ ಒಂದು ಮಂಥರತೆಯಿರುವುದು. ಮಂಥರವಾಗಿರುವುದೆಂದರೆ ಮೆಲ್ಲಮೆಲ್ಲನೆ ಬರುತ್ತಿರುವುದು. ಎಂದೇ ಕಾಲಿಗೆ ಕಟ್ಟಿದ ಅಂದುಗೆಯ ಧ್ವನಿಯೂ ಮೃದುವಾಗಿದೆ. ಗೆಜ್ಜೆಯ ಧ್ವನಿಗೆ ಕ್ವಣನವೆನ್ನುವರು. ಹೀಗಾಗಿ ಆತನ ನೂಪುರ-ಕ್ವಣನವು ಮೃದುವಾಗಿದೆ.

ಹೀಗೆ ಈ ಬಾಲಕೃಷ್ಣನ ಕ್ರೀಡಾ-ಪರವಾದ ಆಗಮನದಲ್ಲಿ ವೇಣುಗಾನದ ಅನುಸ್ಮರಣವೆಂಬುದು ಅನುಸ್ಯೂತವಾಗಿ ಬರುತ್ತಲಿದ್ದು, ಅದು ಆತನ ನಡೆಯಲ್ಲಿ ಒಂದು ವಿಶೇಷತೆಯನ್ನು ತಂದಿದೆ. ಮಂಥರ-ಗತಿಯಿಂದಾಗಿ ಅಂದುಗೆಯ ದನಿಯೂ ಇನಿದಾಗಿದೆ. ಎಳಸಿನ ಪಾದದ ಸೊಬಗೂ ಚೇತೋಹಾರಿಯಾಗಿದೆ. ಗಾನ-ಸ್ಮರಣ-ಗರ್ಭವಾದ ನಡೆಯಲ್ಲಿ ನೃತ್ಯ-ಗಂಧವು ತೋರುತ್ತಿದೆ. ಮೆಲ್ಲನೆಯ ಸದ್ದಿನ ಗೆಜ್ಜೆಯುಳ್ಳ ಆ ಹೆಜ್ಜೆಗಳ ಆಟವೇ ನನ್ನ ಜೀವಿತ - ಎನ್ನುತ್ತಾನೆ, ಲೀಲಾಶುಕ.

ಮೃದು-ಕ್ವಣನ್ನೂಪುರ-ಮಂಥರೇಣ /

ಬಾಲೇನ ಪಾದಾಂಬುಜ-ಪಲ್ಲವೇನ |

ಅನುಸ್ಮರನ್ಮಂಜುಲ-ವೇಣು-ಗೀತಂ /

ಆಯಾತಿ ಮೇ ಜೀವಿತಂ ಆತ್ತ-ಕೇಲಿ || 

ಸೂಚನೆ : 29/11/2025 ರಂದು   ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, November 23, 2025

ಕೃಷ್ಣಕರ್ಣಾಮೃತ 83 ರಾಜಸೂಯ ಮಾಡುವ ಬಗ್ಗೆ ಶ್ರೀಕೃಷ್ಣನ ಅಭಿಪ್ರಾಯ (Krishakarnamrta 83)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ರಾಜಸೂಯಯಾಗವನ್ನು ಮಾಡಲು ಸಂಕಲ್ಪಿಸಿದ್ದ ಯುಧಿಷ್ಠಿರನು ಶ್ರೀಕೃಷ್ಣನ ಅಭಿಪ್ರಾಯ-ಮಾರ್ಗ-ದರ್ಶನಗಳನ್ನು ಪಡೆಯಬೇಕೆಂದೆಣಿಸಿ, ಅವನಲ್ಲಿಗೆ ದೂತನೊಬ್ಬನನ್ನು ಕಳುಹಿಸಿದ್ದನು. 

ದೂತನ ಮಾತನ್ನು ಕೇಳಿದ ಯಾದವವೀರನಾದ ಶ್ರೀಕೃಷ್ಣನಾದರೂ ತನ್ನ ದರ್ಶನವನ್ನು ಅಪೇಕ್ಷಿಸುತ್ತಿದ್ದ ಯುಧಿಷ್ಠಿರನನ್ನು ಕಾಣಲೆಂದು, ದೂತನಾದ ಆ ಇಂದ್ರಸೇನನೊಂದಿಗೆ ಯುಧಿಷ್ಠಿರನಿದ್ದ ಇಂದ್ರಪ್ರಸ್ಥಕ್ಕೇ ಸಾಗಿದನು.

ಆಗಮಿಸಿದ ಶ್ರೀಕೃಷ್ಣನನ್ನು ಯುಧಿಷ್ಠಿರನೂ ಭೀಮನೂ ಅರ್ಚಿಸಿದರು. ಆಮೇಲೆ ಕೃಷ್ಣನು ಕುಂತಿಯನ್ನು ಹೋಗಿಕಂಡನು. ಹಾಗೆಯೇ ಅರ್ಜುನ ಮತ್ತು ನಕುಲ-ಸಹದೇವರೂ ಕೃಷ್ಣನನ್ನು ಗುರುವೆಂಬಂತೆ ಸತ್ಕರಿಸಿದರು. 

ಕೃಷ್ಣನು ವಿಶ್ರಾಂತಿಯನ್ನು ತೆಗೆದುಕೊಂಡ ಬಳಿಕ ಧರ್ಮರಾಜನು ಆಗಮಿಸಿ, ತಾನು ಆತನನ್ನು ಬರಮಾಡಿಕೊಂಡುದರ ಉದ್ದೇಶವನ್ನು ಹೀಗೆಂದು ಹೇಳಿದನು.

"ಕೃಷ್ಣಾ, ನನಗೆ ರಾಜಸೂಯಯಾಗವನ್ನು ಮಾಡುವ ಮನಸ್ಸಾಗಿದೆ. ಆದರೆ ಇದು ಕೇವಲ ಅಪೇಕ್ಷೆಯಿಂದಲೇ ನೆರವೇರಿಬಿಡುವುದಲ್ಲ, ಯಾವ ಬಗೆಯಿಂದ ಮಾಡಿದರೆ ಅದು ಪೂರ್ಣವಾಗುವುದು - ಎಂಬುದನ್ನು ನೀನು ತಾನೆ ಸರ್ವಥಾ ಬಲ್ಲೆ?

ಯಾವನು ಎಲ್ಲವನ್ನೂ ಮಾಡಬಲ್ಲನೋ, ಯಾವನು ಎಲ್ಲೆಡೆ ಪೂಜಿತನಾಗುವನೋ, ಯಾವನು ಎಲ್ಲರಿಗೂ ಪ್ರಭುವಾಗಬಲ್ಲನೋ, ಅಂತಹವನು ತಾನೆ ರಾಜಸೂಯವನ್ನು ಸಂಪಾದಿಸಲು ಸಮರ್ಥನೆನಿಸುವುದು? ನನ್ನ ಮಿತ್ರ ರೆಲ್ಲರೂ ಬಂದು ರಾಜಸೂಯವನ್ನು ನೀನು ಮಾಡಬೇಕೆಂದು ನನಗೆ ಹೇಳುತ್ತಿದ್ದಾರೆ. ಆದರೆ ಇದರ ಅಂತಿಮ ನಿಶ್ಚಯವೆಂಬುದು ನಿನ್ನ ಮಾತಿನಿಂದಲೇ ಆಗತಕ್ಕದ್ದು.

ಸ್ನೇಹಿತರಲ್ಲಿ ಕೆಲವರು ಕೇವಲ ಸೌಹಾರ್ದಭಾವದಿಂದಷ್ಟೇ ನನ್ನ ದೋಷಗಳನ್ನು ಹೇಳುವುದಿಲ್ಲ; ಮತ್ತೆ ಕೆಲವರು ಸ್ವಾರ್ಥ-ಬುದ್ಧಿಯಿಂದಾಗಿ ಪ್ರಿಯವಾದುದಷ್ಟನ್ನೇ ಹೇಳುವರು; ಮತ್ತೆ ಕೆಲವರು ತಮಗೆ ಯಾವುದು ಪ್ರಿಯವೋ ಅದಷ್ಟನ್ನೇ ನನಗೆ ಪ್ರಿಯವೂ ಹಿತವೂ ಹೌದೆಂದು ಹೇಳಿಬಿಡುವರು. ಹೀಗೆ ಈ ನಾನಾಪರಿಗಳಲ್ಲಿ ಜನಗಳ ಮಾತುಗಳು ತೋರುತ್ತವೆ.

ಆದರೆ ನೀನು ಹಾಗಲ್ಲ. ನಾನೀಗ ಹೇಳಿದ ಕಾರಣಗಳನ್ನೆಲ್ಲಾ ಬದಿಗಿಟ್ಟು, ಕಾಮಕ್ರೋಧಗಳನ್ನು ತೊಡೆದು, ಏನನ್ನು ಮಾಡಿದರೆ ನನಗೆ ಬಹಳವೇ ಒಳ್ಳೆಯದಾಗುವುದೋ ಅದನ್ನು ಹೇಳಬಲ್ಲೆ. ಆದ್ದರಿಂದ ಅದನ್ನು ಹೇಳುವ ಕೃಪೆ ಮಾಡು" ಎಂದನು.

ಅದಕ್ಕೆ ಶ್ರೀಕೃಷ್ಣನು ಹೇಳಿದನು: 

"ಮಹಾರಾಜನೇ, ಸರ್ವಗುಣಗಳಿಂದಲೂ ಈ ರಾಜಸೂಯವನ್ನು ನೆರವೇರಿಸಲು ನೀನು ಅರ್ಹನಾಗಿದ್ದೀಯೆ. ಎಲ್ಲವನ್ನೂ ನೀನು ಬಲ್ಲವನೇ ಆಗಿದ್ದೀಯೆ ಕೂಡ. ಆದರೂ ನೀನು ಕೇಳಿದೆಯೆಂದು ಒಂದಿಷ್ಟು ತಿಳಿಸುತ್ತೇನೆ. 

ಜಾಮದಗ್ನ್ಯರಾಮನು - ಎಂದರೆ ಜಮದಗ್ನಿ-ಮುನಿಯ ಪುತ್ರನಾದ ಪರಶುರಾಮನು ಕ್ಷತ್ರಿಯ-ಸಂಹಾರವನ್ನು ಮಾಡಿದನಷ್ಟೆ. ಅದೆಲ್ಲಾ ನಡೆದು ಹೋಗಿ ಈಗಿರುವ ಕ್ಷತ್ರಿಯರೆಂದರೆ ಅಳಿದುಳಿದ ಕೆಲವರಷ್ಟೆ. ಆಗಿದ್ದ ಕ್ಷತ್ರಿಯರಷ್ಟು ಉತ್ತಮರೂ ಅಲ್ಲ, ಇವರುಗಳು. 

ರಾಜನೇ, ಇಲ್ಲೊಂದು ಕುಲ-ಸಂಕಲ್ಪವಿದೆ. ಹಾಗೆಂದರೆ ಕ್ಷತ್ರಿಯ-ಕುಲದವರೆಲ್ಲ ತಮ್ಮಲ್ಲೇ ಮಾಡಿಕೊಂಡಿರುವ ಒಂದು ಸಾಮೂಹಿಕ-ನಿಯಮವುಂಟು. ಯಾವನು ಸರ್ವ-ಕ್ಷತ್ರಿಯರನ್ನೂ ಮೀರಿಸುವನೋ ಆತನೇ ಸಮ್ರಾಟ್ ಎನಿಸುವುದು. ಅದು ನಿನಗೂ ತಿಳಿದಿರುವುದೇ. 

ಈಗಿರುವ ರಾಜರುಗಳೆಲ್ಲ ತಾವು ಐಲ (ಎಂದರೆ ಪುರೂರವ)-ವಂಶ ಹಾಗೂ ಇಕ್ಷ್ವಾಕು-ವಂಶಗಳಿಗೆ ಸೇರಿದವರೆಂದೇ ಹೇಳಿಕೊಳ್ಳುತ್ತಾರೆ. ಆ ತೆರನಾದ ನೂರು ಕುಲಗಳು ಈಗ ಉಳಿದಿವೆ. 

ಯಯಾತಿ ಹಾಗೂ ಭೋಜ - ಈ ಮಹಾರಾಜರ ಗುಣಗಾನವೇ ಎಲ್ಲೆಡೆ ನಡೆದಿದೆ. ಭೋಜವಂಶವು ನಾಲ್ಕೂದಿಕ್ಕುಗಳಲ್ಲೂ ಪಸರಿಸಿದೆ. ಆ ವಂಶವೇ ಧನಸಂಪನ್ನವಾಗಿರುವುದು. ಎಂದೇ ಇವರೆಲ್ಲರೂ ಆ ವಂಶವನ್ನೇ ಆಶ್ರಯಿಸಿದ್ದಾರೆ.

ಸೂಚನೆ : 23/11/2025 ರಂದು   ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 40 (Prasnottara Ratnamalike 40)


ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಾಣ ಹೋದರೂ ಯಾರ ಮನಸ್ಸನ್ನು ಗೆಲ್ಲಲು ಅಸಾಧ್ಯ? 

 ಮೂರ್ಖರ, ಸಂಶಯಗ್ರಸ್ತರ, ದುಃಖಿತರ ಮತ್ತು ಕೃತಘ್ನರ . 

ಈ ಪ್ರಶ್ನೋತ್ತರದಲ್ಲಿ ಯಾವ ಬಗೆಯ ವ್ಯಕ್ತಿಯ ಮನಸ್ಸನ್ನು ಪರಿವರ್ತಿಸಲು ಅಸಾಧ್ಯ ಎಂಬುದನ್ನು ಹೇಳಲಾಗಿದೆ. ಅಂದರೆ ಎಷ್ಟೇ ಪ್ರಯತ್ನಪಟ್ಟರು ಈ ಸ್ವಭಾವಕ್ಕೆ ಸೇರಿದ ವ್ಯಕ್ತಿಯನ್ನು ಬದಲಿಸಲು ಸಾಧ್ಯವಾಗದು ಎಂದರ್ಥ. ಅವರಿಗೆ ಯಾವ ಉಪಾಯಗಳನ್ನು ಅಥವಾ ಉಪದೇಶಗಳನ್ನು ಬಳಸಿದರೂ ಎಲ್ಲವೂ ನಿರರ್ಥಕವಾದವುಗಳೇ ಆಗುತ್ತವೆ. ಒಬ್ಬ ವ್ಯಕ್ತಿಯನ್ನು 'ಸರಿಪಡಿಸಬೇಕು' ಎಂಬುದಾಗಿ ನಾವು ಅಂದುಕೊಳ್ಳುತ್ತೇವೆ. ಅದಕ್ಕಾಗಿ ಅನೇಕ ಪ್ರಯತ್ನಗಳನ್ನು ಕೂಡ ಮಾಡುತ್ತೇವೆ. ಆದರೆ ಆ ಎಲ್ಲ ಪ್ರಯತ್ನಗಳು ಇಲ್ಲಿ ಹೇಳುವ ವ್ಯಕ್ತಿಗಳ ಮೇಲೆ ಮಾಡಲ್ಪಟ್ಟಾಗ ವಿಫಲವಾಗುತ್ತವೆ. ಇದಕ್ಕೆ ಕಾರಣಗಳನ್ನು ಇಲ್ಲಿ ಹೇಳಲಾಗಿದೆ. ಮೂರ್ಖತನ, ಸಂಶಯ, ದುಃಖ ಮತ್ತು ಕೃತಘ್ನತೆ ಎಂಬ ಅವಗುಣಗಳು ಮನಸ್ಸನ್ನು ಕಲುಷಿತಗೊಳಿಸಿರುತ್ತವೆ. ಯಾವುದೇ ಉಪದೇಶಗಳೂ ಕೂಡ ಸಾರ್ಥಕವಾಗಬೇಕಾದರೆ ಮನಸ್ಸು ಹದವಾಗಿದ್ದರೆ ಮಾತ್ರ. ಈ ಸಂದರ್ಭಗಳಲ್ಲಿ ಮನುಷ್ಯನ ಮನಸ್ಸು ಮದಗೊಂಡಿರುತ್ತದೆ. ಅದನ್ನು ಮುದಗೊಳಿಸವುದು ಕಷ್ಟಸಾಧ್ಯ ಎಂಬುದಾಗಿ ಈ ಪ್ರಶ್ನೋತ್ತರ ಹೇಳುತ್ತಿದೆ.

ಮೊದಲ ಬಗೆಯ ವ್ಯಕ್ತಿ ಮೂರ್ಖ. ಮೂರ್ಖರನ್ನು ಯಾವಕಾರಣಕ್ಕೂ ಬದಲಿಸಲು ಸಾಧ್ಯವಿಲ್ಲ ಎಂಬುದಕ್ಕೆ ಒಂದು ಸುಭಾಷಿತ ಹೀಗೆ ಹೇಳಿದೆ - "ನ ತು ಪ್ರತಿನಿವಿಷ್ಟಮೂರ್ಖಜನಚಿತ್ತಮಾರಧಯೇತ್" ಎಂದು. ಅಂದರೆ ಮರಳುಗಳನ್ನು ಕಡೆದು ಅಲ್ಲಿ ಎಣ್ಣೆಯನ್ನೂ ಪಡೆಯಲು ಸಾಧ್ಯವಾದೀತು. ಮೃಗ ಮರೀಚಿಕೆಯಲ್ಲಿರುವ ನೀರನ್ನು ಕುಡಿಯಲಾದೀತು. ಮೊಲಕ್ಕೆ ಇರುವ ಕೋಡನ್ನು ಗುರುತಿಸಲಾದೀತು. ಆದರೆ ಮೂರ್ಖ ಜನರ ಮನಸ್ಸನ್ನು ಮಾತ್ರ ಎಂದೂ ಕೂಡ ಪರಿವರ್ತಿಸಲು ಸಾಧ್ಯವಿಲ್ಲ ಎಂಬುದಾಗಿ. ಈ ಸುಭಾಷಿತದಲ್ಲಿ ಹೇಳಿರುವ, ಮರಳುಗಳಿಂದ ಎಣ್ಣೆಯನ್ನು, ಮೃಗಮರೀಚಿಕೆಯಲ್ಲಿ ನೀರನ್ನು, ಮೊಲದಲ್ಲಿ ಕೋಡನ್ನು ಯಾವುದೆ ಕಾರಣಕ್ಕೂ ಕಂಡುಹಿಡಿಯಲು ಸಾಧ್ಯವೇ ಇಲ್ಲ. ಅಸಾಧ್ಯವನ್ನೂ ಒಂದುಪಕ್ಷ ಇಲ್ಲಿ ಸಾಧಿಸಬಹುದೇನೋ! ಆದರೆ ಮೂರ್ಖರ ಮನಃಪರಿವರ್ತನೆಯನ್ನು ಮಾತ್ರ ಯಾವುದೇ ಕಾರಣಕ್ಕೂ ಮಾಡಲು ಸಾಧ್ಯವಿಲ್ಲ; ಬ್ರಹ್ಮನೇ ಬಂದರೂ ಸಾಧ್ಯವಿಲ್ಲ ಎಂಬ ನಿರ್ಣಯವನ್ನು ಈ ಸುಭಾಷಿತ ಕೊಡುತ್ತಿದೆ. 

ಅಂತೆಯೇ ಸಂಶಯದಿಂದ ಕೂಡಿದ ವ್ಯಕ್ತಿ. ಇವನನ್ನೂ ಪರಿವರ್ತಿಸಲು ಸಾಧ್ಯವಿಲ್ಲ. ಗೀತೆಯು ಅಪ್ಪಣೆ ಕೊಡಿಸಿದಂತೆ "ಅಜ್ಞಾನದಿಂದ ಕೂಡಿದವನು, ಶ್ರದ್ಧೆ ಇಲ್ಲದವನು ಮತ್ತು ಸಂಶಯದಿಂದ ಕೂಡಿದವನು ಈ ಮೂವರೂ ಪತಿತರೇ ಆಗುತ್ತಾರೆ", ಅವರು ಉದ್ಧಾರವಾಗಲು ಸಾಧ್ಯವಿಲ್ಲ ಎಂಬುದಾಗಿ.  

ಅಂತಯೇ ಇನ್ನೊಂದು ಬಗೆಯ ಜನರು ದುಃಖಿತರು. ಇವರು ಜೀವನದಲ್ಲಿ ಬಹಳ ಕಷ್ಟವನ್ನು ಅನುಭವಿಸಿರುತ್ತಾರೆ. ಆಗ ಇವರ ಮನಸ್ಸು ಬೇರೆಯವರು ಹೇಳಿದ್ದನ್ನು ಕೇಳುವ ಸಹನೆ ಇರುವುದಿಲ್ಲ. ಅಂದರೆ ಯಾರು, ಎಷ್ಟೇ, ಸಲ್ಲುವ ಮಾತುಗಳನ್ನು ಆಡಿದರೂ ಅದನ್ನು ಅವರು, 'ಇವೆಲ್ಲವೂ ದುಃಖಕ್ಕೆ ಕಾರಣ ಏಕೆ ಕಾರಣವಾಗಬಾರದು' ಎಂದೇ ಭಾವಿಸುತ್ತಾರೆ. ಹಾಗಾಗಿ ದುಃಖಿತರನ್ನು ಬೇಗ ಪರಿವರ್ತಿಸುವುದು ಅಸಾಧ್ಯ. 

ಅಂತಯೇ ಇನ್ನೊಬ್ಬ ವ್ಯಕ್ತಿ ಅಂದರೆ ಕೃತಘ್ನ. ಉಪಕಾರ ಮಾಡಿದವರನ್ನು ಸ್ಮರಿಸದ ಅಥವಾ ಅವರಿಗೆ ಅಪಕಾರ ಮಾಡುವವನೇ ಕೃತಘ್ನ. ಉಪಕಾರ ಮಾಡಿರುವ ಬಗ್ಗೆ ಯಾರಿಗೆ ಕಿಂಚಿತ್ತು ಆದರದ ಭಾವನೆ ಅಥವಾ ಮಾಡಿರುವ ಉಪಕಾರವನ್ನು ಸ್ಮರಿಸಿಕೊಳ್ಳುವುದು ಇರಲಿ, ಅದಕ್ಕೆ ಪ್ರತಿಯಾಗಿ ಅಪಕಾರವನ್ನು ಮಾಡುವ ರೀತಿಯಲ್ಲಿ ಆ ವ್ಯಕ್ತಿಯ ಸ್ವಭಾವವಿದ್ದರೆ ಅಂತಹ ಜನರನ್ನು ಪರಿವರ್ತಿಸುವುದು ಅಸಾಧ್ಯ ಎಂಬುದಾಗಿ ಇಲ್ಲಿ ಹೇಳಲಾಗಿದೆ. ಅಂದರೆ ಮೂರ್ಖರನ್ನು, ಸಂಶಯಗ್ರಸ್ತರನ್ನು, ದುಃಖಿತರನ್ನು ಮತ್ತು ಕೃತಘ್ನನನ್ನು ಹೀಗೆ ಈ ಬಗೆಯ ನಾಲ್ಕು ವ್ಯಕ್ತಿಗಳನ್ನು ಯಾವುದೇ ಬಗೆಯ ಉಪಾಯಗಳಿಂದಲೂ ಪರಿವರ್ತಿಸಲು ಅಥವಾ ಅವನನ್ನು ಸಜ್ಜನರನ್ನಾಗಿ ಮಾಡಲು ಕಷ್ಟಸಾಧ್ಯ ಅಥವಾ ಅಸಾಧ್ಯ ಎಂಬ ಆಶಯ ಈ ಪ್ರಶ್ನೋತ್ತರದಲ್ಲಿದೆ.

ಸೂಚನೆ : 23/11/2025 ರಂದು   ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.