ನಾನೇನು ಮಾಡಲಿ, ನೀನೇ ಹೇಳು - ಎಂದು ಕೃಷ್ಣನನ್ನೇ ಕೇಳುತ್ತಿದ್ದಾನೆ, ಲೀಲಾಶುಕ.
ಕೃಷ್ಣಾ, ನಿನ್ನ ಶೈಶವವು ತ್ರಿಲೋಕಾದ್ಭುತ - ಎಂದರೆ ಮೂರು ಲೋಕಗಳಲ್ಲೂ ಆಶ್ಚರ್ಯ-ಜನಕವಾದದ್ದು - ಎಂಬುದನ್ನು ನಾ ಬಲ್ಲೆ. ಹಾಗಿದ್ದರೂ ನಿರ್ವಿವಾದವಾಗಿ ನನ್ನದೊಂದು ಚಾಪಲವೂ ಇದೆಯಲ್ಲ? ನಾನೇನನ್ನು ಮಾಡಬೇಕು? ನೀ ಹೇಳು - ಎಂದು ಕೃಷ್ಣನಲ್ಲೇ ಮೊರೆಯಿಡುತ್ತಿದ್ದಾನೆ.
ಏನನ್ನು ಕುರಿತಾದ ಚಾಪಲ ಈತನದು? "ಕಮಲದಂತಿದೆಯಲ್ಲವೇ ನಿನ್ನ ಮುಖ? ಅದನ್ನು ನನ್ನೆರಡೂ "ಈಕ್ಷಣ"ಗಳಿಂದ ಕಾಣಬೇಕೆಂಬ ಚಾಪಲ. ಸಂಸ್ಕೃತದಲ್ಲಿ "ಈಕ್ಷಣ"ವೆಂದರೆ ನೋಡುವಿಕೆ, ಅಥವಾ ನೋಡಲು ಸಾಧನವಾದದ್ದು. ಅರ್ಥಾತ್ ಕಣ್ಣು. ಅಲ್ಲಿಗೆ ನಿನ್ನ ಮುಖ-ಕಮಲವನ್ನು ಕಣ್ತುಂಬ ನೋಡಬೇಕೆಂಬ ಹಂಬಲವೆನ್ನದು - ಎನ್ನುತ್ತಿದ್ದಾನೆ.
ಈ ಕೃಷ್ಣ-ಮುಖಾಂಬುಜದಲ್ಲಿಯ ವಿಶೇಷವೇನು? ಅದಕ್ಕೆ ಸೋಕಿಸಿದ ಇನಿದನಿಗೈಯುವ ಕೊಳಲುಂಟಲ್ಲವೇ? ಅದರ ವಿಲಾಸಗಳಿಂದಾಗಿ ಮುಗ್ಧವಾಗಿದೆ, ಎಂದರೆ ಸೊಗಸಾಗಿ, ತೋರುತ್ತದೆ ನಿನ್ನ ಮುಖ-ಪದ್ಮ.
ಹಾಗಿರುವ ಅದನ್ನು ಕಾಣಬೇಕೆಂಬ ಕಾತರತೆ ಎನಗೆ. ತೀವ್ರವಾದ ಕಾತರತೆಯದು. ಇಂತಹ ಒಂದು ವಿಹ್ವಲತೆಗೆ ಒಳಪಟ್ಟಿರುವನು ನಾನು – ಎಂಬುದಾಗಿ ಮೊರೆಯಿಡುತ್ತಾನೆ, ಲೀಲಾಶುಕ.
ಶ್ಲೋಕ ಹೀಗಿದೆ:
ತ್ವಚ್ಛೈಶವಂ ತ್ರಿಭುವನಾದ್ಭುತಂ - ಇತ್ಯವೈಮಿ /
ಯಚ್ಚಾಪಲಂ ಚ ಮಮ ವಾಗವಿವಾದ-ಗಮ್ಯಮ್ |
ತತ್ ಕಿಂ ಕರೋಮಿ, ವಿರಣನ್ಮುರಳೀ-ವಿಲಾಸ-/
ಮುಗ್ಧಂ ಮುಖಾಂಬುಜಂ ಉದೀಕ್ಷಿತುಂ ಈಕ್ಷಣಾಭ್ಯಾಂ ||
***
ನಮ್ಮನ್ನು ಕೃಷ್ಣನು ಕಾಪಾಡಲಿ, ಎನ್ನುತ್ತಾನೆ ಲೀಲಾಶುಕ. ಎಂತಹ ಕೃಷ್ಣನಿವನು? ನಾಲ್ಕು ವಿಶೇಷಣಗಳಿಂದ ಶ್ರೀಕೃಷ್ಣನ ವಿಶೇಷಗಳನ್ನು ಹೇಳುತ್ತಾನೆ.
ಮೊದಲನೆಯದಾಗಿ, ವ್ರಜ-ವಾಸಿಗಳಿಗೆ ದೈವತನಾಗಿರುವನು ಅವನು.
ದೇವ-ದೇವತಾ-ದೈವತ - ಎಂದು ಮೂರು ಸಂಸ್ಕೃತ- ಪದಗಳಿವೆ. ಮೂರಕ್ಕೂ ಒಂದೇ ಅರ್ಥ. ಹೀಗಾಗಿ, ವ್ರಜ-ವಾಸಿಗಳಿಗೆಲ್ಲರಿಗೂ ಶ್ರೀಕೃಷ್ಣನೇ ನೆಚ್ಚಿನ ದೈವ. ಅವರೆಲ್ಲ ತಮ್ಮ ದೈವವೆಂಬುದಾಗಿ ಯಾರನ್ನು ನೆಚ್ಚಿ ಉದ್ಧಾರವಾಗಿರುವರೋ, ಆತನೇ ನಮಗೂ ಅಧಿದೈವತ.
ಎರಡನೆಯದಾಗಿ, ರಸಾಂತರಗಳನ್ನು ನಿರ್ವಾಸನಮಾಡುವ ದೈವತವಿದು. ನಿರ್ವಾಸನವೆಂದರೆ ಅಟ್ಟುವುದು. ಏನು ರಸಾಂತರಗಳನ್ನು ಅಟ್ಟುವುದೆಂದರೆ?
ರಸಾಂತರ - ಎಂದರೆ ಬೇರೆ ರಸಗಳು. ರಸಗಳನ್ನು ಷಡ್ರಸಗಳೆಂದೂ ನವರಸಗಳೆಂದೂ ಕಾಣುತ್ತೇವಲ್ಲವೆ? ಮೊದಲನೆಯದು ಪಾಕದಲ್ಲಿ, ಅರ್ಥಾತ್ ಅಡುಗೆಯಲ್ಲಿ; ಎರಡನೆಯದು ಕಾವ್ಯ-ಪ್ರಪಂಚದಲ್ಲಿ. ಯಾವುದನ್ನಿಟ್ಟುಕೊಂಡರೂ ಸರಿಯೇ. ಯಾವುದು ನಮಗೆ ಉತ್ಕಟವಾದ ಆಸ್ವಾದವನ್ನು ಉಂಟುಮಾಡುವುದೋ ಅದೆಲ್ಲವೂ ರಸವೇ ಆಗಿರುವುದು. ರಸಾಸ್ವಾದವೆಂದರೆ ಆನಂದಾನುಭವವೇ.
ಅಲ್ಲದೆ, ರಸಗಳಲ್ಲಿ ಹೋಲಿಕೆಯೂ ಬರಬಹುದು. ಒಂದು ರಸವೇ ಮುಖ್ಯವಾಗಿ, ಉಳಿದವು ಗೌಣವಾಗಬಹುದು. ಒಂದು ರಸವು ಮತ್ತೊಂದನ್ನು ಮರೆಯಿಸಲೂಬಹುದು.
ಕೃಷ್ಣನು ಅದೆಂತಹ ಆನಂದದ ಚಿಲುಮೆಯೆಂದರೆ, ಆತನ ಮುಂದೆ ಮತ್ತಾವುದರ ಆಕರ್ಷಣವೂ ಉಳಿಯದು. ರಸಾಂತರವೆಂದರೆ ಬೇರೆ ರಸ(ಗಳು). ರಸ-ಪುರುಷನಾದ ಕೃಷ್ಣನ ಮುಂದೆ ಬೇರೊಂದು ರಸವುಂಟೇ?
ಮೂರನೆಯದಾಗಿ ಆತನು ನಿರ್ವಾಣ-ಸಾಮ್ರಾಜ್ಯವೇ ಅವತಾರ ಮಾಡಿರುವಂತಿರುವವನು. ನಿರ್ವಾಣವೆಂದರೆ ಮುಕ್ತಿ. ಹೀಗಾಗಿ ಮುಕ್ತಿ-ಸಾಮ್ರಾಜ್ಯವೇ, ಎಂದರೆ ಮೋಕ್ಷ-ಸರ್ವಸ್ವವೇ, ಅವತಾರಮಾಡಿರುವಂತೆ ಇರುವವನು ಅವನು.
ಮತ್ತು ಕೊನೆಯದಾಗಿ ಆತನಲ್ಲಿರುವುದು ಅವ್ಯಾಜ-ಮಾಧುರ್ಯ. ಎಷ್ಟೋ ಜನರು ಚೆನ್ನಾಗಿರುವಂತೆ ಕಾಣುವಂತಹುದು, ಅವರ ಆಹಾರ್ಯಗಳಿಂದಾಗಿ. ಹಾಗೆಂದರೆ ಅವರು ಮಾಡಿಕೊಂಡಿರುವ ಅಲಂಕಾರಗಳಿಂದಾಗಿ, ಹಾಗೂ ಪೇರಿಸಿಕೊಂಡಿರುವ ಆಭರಣಗಳಿಂದಾಗಿ. ವ್ಯಾಜವೆಂದರೆ ಇಂತಹ ಅಲಂಕರಣ-ಆಭರಣಗಳೇ. ಅ-ವ್ಯಾಜವೆಂದರೆ ಇಂತಹ ಲೇಪನ-ಭೂಷಣಗಳಿಲ್ಲದಿರುವಿಕೆ. ಆದರೂ, ಎಂದರೆ ಆ ವ್ಯಾಜಗಳೇನೊಂದೂ ಇಲ್ಲದಿದ್ದರೂ ಸಹ, ಪರಮ-ಸುಂದರನಾಗಿಯೇ ತೋರಬಲ್ಲವನೇ ಅವ್ಯಾಜ-ಮಾಧುರ್ಯವುಳ್ಳವನು.
ಇನ್ನು ನಿಧಾನವೆಂದರೆ ಕನ್ನಡದಲ್ಲಿ ಮೆಲ್ಲನೆ ಎಂಬರ್ಥ, ಸಂಸ್ಕೃತದಲ್ಲಿ ನಿಧಿಯೆಂದರ್ಥ. ಮಹಾ-ನಿಧಾನನೆಂದರೆ ಇಲ್ಲಿ ಮಹಾ-ನಿಧಿಯೆಂದರ್ಥ. ಅವ್ಯಾಜ-ಮಾಧುರ್ಯಕ್ಕೆ ದೊಡ್ಡ ನಿಧಿಯೇ ಶ್ರೀಕೃಷ್ಣ.
ಇಂತಹ ವಿಶೇಷಗಳಿಂದ ಕೂಡಿದ ಕೃಷ್ಣನು, ಎಂದರೆ ರಸ-ಸ್ವರೂಪನೂ ಮಧುರ-ಸ್ವರೂಪನೂ ಮೋಕ್ಷ-ಸ್ವರೂಪನೂ ಆದ ವ್ರಜ-ದೈವತವು, ನಮ್ಮನ್ನು ಕಾಪಾಡಲಿ - ಎಂದು ಕೇಳಿಕೊಳ್ಳುತ್ತಿದ್ದಾನೆ, ಕವಿ.
ಶ್ಲೋಕದ ಪಾದಾರಂಭಗಳಲ್ಲಿ ಕವಿಯು ಅನುಪ್ರಾಸವನ್ನು ತಂದಿದ್ದಾನೆ. ಮೊದಲೆರಡು ಪಾದಗಳು ನಿರ್ವಾ-ನಿರ್ವಾ - ಎಂದೇ ಆರಂಭವಾಗುತ್ತವೆ; ಕೊನೆಯೆರಡು ಪಾದಗಳು ಅವ್ಯಾ-ಅವ್ಯಾ - ಎಂದೇ ಆರಂಭವಾಗುತ್ತವೆ.
ಶ್ಲೋಕ ಹೀಗಿದೆ:
ನಿರ್ವಾಸನಂ ಹಂತ ರಸಾಂತರಾಣಾಂ/
ನಿರ್ವಾಣ-ಸಾಮ್ರಾಜ್ಯಂ ಇವಾವತೀರ್ಣಂ|
ಅವ್ಯಾಜ-ಮಾಧುರ್ಯ-ಮಹಾನಿಧಾನಂ/
ಅವ್ಯಾದ್ ವ್ರಜಾನಾಂ ಅಧಿದೈವತಂ ನಃ||
***
ಬಾಲಕೃಷ್ಣನು ತನ್ನತ್ತಲೇ ಬರುತ್ತಿದ್ದಾನೆಂಬ ಕಾರಣ, ಆತನ ಬರುವಿಕೆಯನ್ನೇ ಕವಿಯು ಚಿತ್ರಿಸುತ್ತಿದ್ದಾನೆ. ಕೃಷ್ಣನು ಬರುತ್ತಿದ್ದಾನೆ - ಎಂದೇ ಹೇಳುವುದಿಲ್ಲ; ಬದಲಾಗಿ, "ನನ್ನ ಜೀವಿತವೇ ಬರುತ್ತಿದೆ" - ಎಂದು ಹೇಳುತ್ತಾನೆ! ಅಲ್ಲಿಗೆ ಕೃಷ್ಣನೆಂದರೆ ಬೇರೆ ಮತ್ತಾರಿಗೆ ಅವನೇನಾದರೂ ಆಗಿರಲಿ; ನನ್ನ ಪಾಲಿಗಂತೂ ಆತನು ಜೀವಿತವೇ ಸರಿ, ನನ್ನ ಉಸಿರೇ ಅವನು.
ಆತನು ತನ್ನತ್ತ ಆಗಮಿಸುವಲ್ಲಿ ಮೊದಲು ತೋರುವುದೇ ಆತನ ಹೆಜ್ಜೆ. ಹೇಗಿದೆ ಅದು? 'ಬಾಲ'ವಾಗಿದೆ - ಎಂದರೆ ಎಳಸಾಗಿದೆ - ಎಂದರ್ಥ. ಯಾವುದದು? ಪಾದವೆಂಬ ಕಮಲದ ಚಿಗುರು. ಕಮಲವೇ ಕೋಮಲ; ಅದರ ಚಿಗುರೆಂದರೆ ಕೇಳಬೇಕೇ, ಅದರ ಕೋಮಲತೆಯನ್ನು?
ಬಾಲಕೃಷ್ಣನು ಬರುವಾಗ ಅದೇನು "ಡ್ರಿಲ್ ಮಾರ್ಚ್"ನಂತೆ ಇರುವುದೇ? ಅದು 'ಆತ್ತ-ಕೇಳಿ'ಯಾಗಿರುವಂತಹುದು. ಏನು ಹಾಗೆಂದರೆ? 'ಕೇಲಿ'ಯೆಂದರೆ ಆಟ. 'ಆತ್ತ'ವೆಂದರೆ ಆದಾನಮಾಡಿರುವುದು, ಸ್ವೀಕರಿಸಿರುವುದು. ಹೀಗೆ ಹೇಳಿರುವುದರಿಂದ, ಅದರ ಕ್ರೀಡಾಪರತೆಯು ಗೊತ್ತಾಗುತ್ತದೆ. ನರ್ತನ-ಗತಿಗಳೇ ಅದರೊಳಗೆ ಅಡಗಿರುವುದು - ಎಂದಂತಾಯಿತಲ್ಲವೇ?
ಆ ಹೆಜ್ಜೆಗಳ ಆ ಗತಿ-ವಿಶೇಷಕ್ಕೆ ಕಾರಣವೇನು? ಕಾರಣವೆಂದರೆ ತಾನೇ ಆಗಾಗ್ಗೆ ನುಡಿಸುವ ವೇಣುಗೀತದ ಅನುಸ್ಮರಣ. ಆ ಕೊಳಲಿನ ಗಾನವಾದರೂ ಮಂಜುಲವಾದದ್ದು, ಮನೋಹರವಾದದ್ದು. ಯಾವುದರಲ್ಲಿ ಸವಿಯುಂಟೋ, ಅದು ಮತ್ತೆ ಮತ್ತೆ ಸ್ಮೃತವಾಗುತ್ತದೆ. ಹೀಗಾಗುವ ಪುನಃಪುನಃ ಸ್ಮರಣವನ್ನೇ ಅನು-ಸ್ಮರಣವೆನ್ನುವುದು.
ಒಳ್ಳೆಯ ಭಾವದ ಗಾನವು ಲಯಬದ್ಧವಾಗಿ ಕೇಳಿಬರುತ್ತಿದ್ದರೆ, ಕೇಳುಗರ ಮೈಮನಸ್ಸುಗಳೂ ಅದಕ್ಕೆ ಸ್ಪಂದಿಸುವವಲ್ಲವೇ? ನಡೆದು ಬರುವಾಗ ಮಧುರಗಾನವು ಮೈಯನ್ನೊಂದಿಷ್ಟಾಡಿಸಿದರೆ, ಅದರ ತಾಳವು ಚರಣಕ್ಕೆ ಹರಿದು ರಮ್ಯ-ಗತಿಯನ್ನೀಯುತ್ತದೆ.
ಆ ಗಾನದ ಸ್ಮರಣವಿರುವುದರಿಂದಲೇ ನಡೆಯಲ್ಲಿ ಒಂದು ಮಂಥರತೆಯಿರುವುದು. ಮಂಥರವಾಗಿರುವುದೆಂದರೆ ಮೆಲ್ಲಮೆಲ್ಲನೆ ಬರುತ್ತಿರುವುದು. ಎಂದೇ ಕಾಲಿಗೆ ಕಟ್ಟಿದ ಅಂದುಗೆಯ ಧ್ವನಿಯೂ ಮೃದುವಾಗಿದೆ. ಗೆಜ್ಜೆಯ ಧ್ವನಿಗೆ ಕ್ವಣನವೆನ್ನುವರು. ಹೀಗಾಗಿ ಆತನ ನೂಪುರ-ಕ್ವಣನವು ಮೃದುವಾಗಿದೆ.
ಹೀಗೆ ಈ ಬಾಲಕೃಷ್ಣನ ಕ್ರೀಡಾ-ಪರವಾದ ಆಗಮನದಲ್ಲಿ ವೇಣುಗಾನದ ಅನುಸ್ಮರಣವೆಂಬುದು ಅನುಸ್ಯೂತವಾಗಿ ಬರುತ್ತಲಿದ್ದು, ಅದು ಆತನ ನಡೆಯಲ್ಲಿ ಒಂದು ವಿಶೇಷತೆಯನ್ನು ತಂದಿದೆ. ಮಂಥರ-ಗತಿಯಿಂದಾಗಿ ಅಂದುಗೆಯ ದನಿಯೂ ಇನಿದಾಗಿದೆ. ಎಳಸಿನ ಪಾದದ ಸೊಬಗೂ ಚೇತೋಹಾರಿಯಾಗಿದೆ. ಗಾನ-ಸ್ಮರಣ-ಗರ್ಭವಾದ ನಡೆಯಲ್ಲಿ ನೃತ್ಯ-ಗಂಧವು ತೋರುತ್ತಿದೆ. ಮೆಲ್ಲನೆಯ ಸದ್ದಿನ ಗೆಜ್ಜೆಯುಳ್ಳ ಆ ಹೆಜ್ಜೆಗಳ ಆಟವೇ ನನ್ನ ಜೀವಿತ - ಎನ್ನುತ್ತಾನೆ, ಲೀಲಾಶುಕ.
ಮೃದು-ಕ್ವಣನ್ನೂಪುರ-ಮಂಥರೇಣ /
ಬಾಲೇನ ಪಾದಾಂಬುಜ-ಪಲ್ಲವೇನ |
ಅನುಸ್ಮರನ್ಮಂಜುಲ-ವೇಣು-ಗೀತಂ /
ಆಯಾತಿ ಮೇ ಜೀವಿತಂ ಆತ್ತ-ಕೇಲಿ ||