Sunday, April 27, 2025

ವ್ಯಾಸ ವೀಕ್ಷಿತ 134 ಅಮ್ಮನನ್ನು ಕಳುಹಿ ಅಗ್ನಿಯಲ್ಲಿ ಅರಿಕೆ (Vyaasa Vikshita 134)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ತಾಯಿಗೆ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾ ಮರಿಗಳು ಹೀಗೆ ತಮ್ಮ ಮಾತನ್ನು ಮುಗಿಸಿದವು: "ಪರಿಸ್ಥಿತಿಯು ಹೀಗಿರಲು, ನಾವಾದರೂ ಅಗ್ನಿಯನ್ನು ಪ್ರವೇಶಮಾಡುವೆವು, ಹಾಗೂ ತತ್ಪರಿಣಾಮವಾಗಿ ಶ್ರೇಷ್ಠವಾದ ಲೋಕಗಳನ್ನು ಪಡೆಯುವೆವು. ಇನ್ನು ಅಗ್ನಿಯೇನಾದರೂ ನಮ್ಮನ್ನು ಸುಡದಿದ್ದ ಪಕ್ಷದಲ್ಲಿ ನೀನು ನಮ್ಮಲ್ಲಿಗೆ ಬಂದೇ ಬರುವೆಯಂತೆ. ಅದು ಇದ್ದದ್ದೇ" ಎಂಬುದಾಗಿ. ಈ ಮಾತುಗಳನ್ನು ಕೇಳಿದ ತಾಯಿ ಶಾರ್ಙ್ಗಿಯು ಆ ಮಕ್ಕಳನ್ನು ಖಾಂಡವವನದಲ್ಲೇ ತೊರೆದು ಹೊರಟಿತು. ಯಾವ ಎಡೆಯಲ್ಲಿ ಅಗ್ನಿಯ ಭಯವೆಂಬುದಿರದೋ ಅಂತಹೆಡೆಗೆ ಬೇಗನೆ ಹೊರಟುಹೋಯಿತು. ತೀಕ್ಷ್ಣವಾದ ಜ್ವಾಲೆಯನ್ನು ಹೊಂದಿದ್ದ ಅಗ್ನಿಯು ಆ ಹೊತ್ತಿಗೆ ವೇಗದಿಂದ ಅಲ್ಲಿಗೇ - ಎಂದರೆ ಮಂದಪಾಲನ ಮಕ್ಕಳಾದ ಶಾರ್ಙ್ಗಕಗಳು ಇರುವಲ್ಲಿಗೇ - ಬಂದನು.


ಜ್ವಲಿಸುತ್ತಿದ್ದ ಅಗ್ನಿಯನ್ನು ಕಂಡ ಆ ಪಕ್ಷಿಗಳು ತಮ್ಮಲ್ಲೇ ಮಾತನಾಡಿಕೊಂಡವು. ಅವುಗಳಲ್ಲಿ ಜರಿತಾರಿಯು ಅಗ್ನಿಗೆ ಈ ಮಾತನ್ನು ಹೇಳಿತು: "ಕಷ್ಟಕಾಲವೆಂಬುದು ಇನ್ನೂ ದೂರದಲ್ಲಿರುವಾಗಲೇ, ಧೀಮಂತನಾದ ಪುರುಷನು ಎಚ್ಚರಗೊಂಡಿರುವನು. ಹೀಗಾಗಿ, ಸಂಕಟದ ಕಾಲವು ಬಂದಾಗ ಎಂದೂ ವ್ಯಥೆಯನ್ನು ಆತ ಪಡುವುದೇ ಇಲ್ಲ. ಆದರೆ ಯಾವ ಬುದ್ಧಿಹೀನನು ಕಷ್ಟಕಾಲವು ಬರುತ್ತಿರುವುದರ ಬಗ್ಗೆ ಎಚ್ಚರಗೊಂಡಿರನೋ, ಆತನು ಸಂಕಷ್ಟವು ಬಂದೊದಗಿದಾಗ ವ್ಯಥೆಪಡುವನು, ಹಾಗೂ ಮಹತ್ತಾದ ಶ್ರೇಯಸ್ಸನ್ನು ಪಡೆಯಲಾರನು" ಎಂದು.


ಅದಕ್ಕೆ ಅದರ ತಮ್ಮನಾದ ಸಾರಿಸೃಕ್ಕವು ಹೇಳಿತು "ಅಣ್ಣಾ, ನೀನೇ ಮೇಧಾವಿ. ನಮಗಂತೂ ಇದು ಪ್ರಾಣಸಂಕಟದ ಸಮಯವೇ ಆಗಿದೆ. ಅದರ ದೆಸೆಯಿಂದ ನಮ್ಮನ್ನು ರಕ್ಷಿಸುವುದೆಂದರೆ ಯಾರು ಪ್ರಾಜ್ಞನೋ ಶೂರನೋ ಅಗಿರುವನೋ ಅಂತಹ ಒಬ್ಬನೇ ಸರಿ. ಅದು ನೀನೇ." ಎಂದು.


ಮತ್ತೊಬ್ಬ ತಮ್ಮನಾದ ಸ್ತಂಬಮಿತ್ರವು ಹೇಳಿತು: "ಜ್ಯೇಷ್ಠನು, ಎಂದರೆ ಅಣ್ಣಂದಿರಲ್ಲಿ ಮೊದಲಿಗನು ತಂದೆಯೇ ಸರಿ, ಎಂದರೆ ತಂದೆಗೆ ಸಮಾನನೇ ಸರಿ.. ಜ್ಯೇಷ್ಠನೇ ಕಷ್ಟಗಳ ದೆಸೆಯಿಂದ ಬಿಡಿಸುವವನು. ಜ್ಯೇಷ್ಠನಿಗೇನಾದರೂ ಕಷ್ಟದಿಂದ ಪಾರಾಗುವ ಬಗೆಯು ಗೋಚರವಾಗದಿದ್ದರೆ ಚಿಕ್ಕವನು ಏನನ್ನು ಮಾಡಿಯಾನು?" ಮತ್ತೂ ಒಬ್ಬ ತಮ್ಮನಾದ ದ್ರೋಣವು ಹೇಳಿತು: "ಜ್ವಲಿಸುತ್ತಾ ಬರುತ್ತಿದ್ದಾನೆ ಈ ಅಗ್ನಿಯು – ಇದೋ ನಮ್ಮ ವಸತಿಯತ್ತಲೇ! ಏಳು ನಾಲಿಗೆಗಳುಳ್ಳ ಬಾಯುಳ್ಳವನಾಗಿ ಕ್ರೂರನಾಗಿ ನೆಕ್ಕುತ್ತಾ ಇತ್ತ ಸರಿಯುತ್ತಿದ್ದಾನೆ!


ಈ ಪ್ರಕಾರವಾಗಿ ಮಂದಪಾಲನ ಮಕ್ಕಳು ಪರಸ್ಪರ ಮಾತನಾಡಿಕೊಳ್ಳುತ್ತಿದ್ದವು. ಮತ್ತು ಏಕಾಗ್ರವಾದ ಚಿತ್ತದಿಂದ ಅಗ್ನಿಯನ್ನು ಹೀಗೆ ಪ್ರಾರ್ಥಿಸಿದವು. ಜರಿತಾರಿಯು ಹೇಳಿತು : ಅಗ್ನಿದೇವನೇ, ನೀನು ವಾಯುವಿಗೆ ಆತ್ಮನಾಗಿದ್ದೀಯೇ. ವನಸ್ಪತಿಗಳ ಶರೀರವಾಗಿದ್ದೀಯೇ. ತೃಣಲತೆಗಳ ಮೂಲವೆನಿಸುವ ಪೃಥ್ವಿಯೂ ಜಲವೂ ನಿನ್ನ ಶುಕ್ರವೇ ಆಗಿವೆ. ಅಲ್ಲದೇ ಜಲಕ್ಕೆ ನೀನೇ ಜನ್ಮಸ್ಥಾನವಾಗಿದ್ದೀಯೇ. ಸೂರ್ಯನ ಕಿರಣಗಳು ಹೇಗೋ ಹಾಗೆ ನಿನ್ನ ಜ್ವಾಲೆಗಳು ಸಹ ಮೇಲಕ್ಕೂ ಕೆಳಕ್ಕೂ ಹಿಂದುಮುಂದಕ್ಕೂ ಅಕ್ಕಪಕ್ಕಗಳಿಗೂ ಹರಡಿಕೊಳ್ಳುತ್ತವೆ" ಎಂದು.  ಬಳಿಕ ಸಾರಿಸೃಕ್ಕವು ಹೇಳಿತು: ಓ ಧೂಮಕೇತುವೇ (ಹಾಗೆಂದರೆ ಧೂಮವನ್ನೇ ಧ್ವಜವನ್ನಾಗಿ ಹೊಂದಿರುವ ಅಗ್ನಿದೇವನೇ), ನಮ್ಮ ತಾಯಿ ಎಲ್ಲಿಗೋ ಹೋದಳು, ನಮ್ಮ ತಂದೆ ಎಲ್ಲಿರುವನೋ ನಾವರಿಯೆವು, ನಮಗಿನ್ನೂ ರೆಕ್ಕೆಗಳೇ ಹುಟ್ಟಿಲ್ಲ. ನಿನ್ನನ್ನು ಬಿಟ್ಟರೆ ನಮಗೆ ಮತ್ತಾವ ರಕ್ಷಕರೂ ಇಲ್ಲ. ನಾವಿನ್ನೂ ಎಳೆಯರು. ಆದ್ಧರಿಂದ ನಮ್ಮನ್ನು ಕಾಪಾಡು, ಅಗ್ನಿದೇವನೇ.


ಸೂಚನೆ : 13
/4/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 12 (Prasnottara Ratnamalike 12)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)




ಪ್ರಶ್ನೆ ೧೩. ಶತ್ರು ಯಾರು ?

ಉತ್ತರ - ತನಗೆ ತಾನೆ ಶತ್ರು (ಯಾರು ತನ್ನ ಕಲ್ಯಾಣಕ್ಕಾಗಿ ಪುರುಷಾರ್ಥಗಳನ್ನು ಆಚರಿಸುವುದಿಲ್ಲವೋ ಅವನು) 


ಈ ಮುಂದಿನ ಪ್ರಶ್ನೆ - 'ವೈರಿ ಯಾರು?' ತನಗೆ ತಾನು ಶತ್ರು ಯಾವಾಗ ಆಗಬಹುದು? ಎಂಬುದು ಈ ಪ್ರಶ್ನೆಯ ಆಶಯವಾಗಿದೆ. 'ಯಾರು ಪುರುಷಾರ್ಥಗಳನ್ನು ಸರಿಯಾಗಿ ಅನುಷ್ಠಾನ ಮಾಡುವುದಿಲ್ಲವೋ ಅವನು ತನಗೆ ತಾನೇ ಶತ್ರುವಾದಂತೆ' ಎಂಬುದು ಈ ಉತ್ತರದ ಅಂಶವಾಗಿದೆ. ಇಲ್ಲಿ ನಾವು ವಿಚಾರಿಸಬೇಕಾದ ವಿಷಯ, ಪುರುಷಾರ್ಥಗಳು ಯಾವುವು? ಅವುಗಳನ್ನು ಹೇಗೆ ನಾವು ಆಚರಿಸಬೇಕು? ಹೇಗೆ ಆಚರಿಸದಿದ್ದರೆ ಅವುಗಳು ನಮ್ಮನ್ನು ಶತ್ರುಗಳು ಎಂದು ಕರೆಸಿಕೊಳ್ಳಲು ಅನುವು ಮಾಡಿಕೊಟ್ಟಂತಾಗುತ್ತದೆ? ಎಂಬುದು. 


ಪುರುಷನ ಬಯಕೆಯನ್ನು 'ಪುರುಷಾರ್ಥ' ಎಂಬುದಾಗಿ ಕರೆಯಲಾಗಿದೆ. ಇಲ್ಲಿ ಪುರುಷ ಎಂದರೆ ಸ್ತ್ರೀ ಮತ್ತು ಪುರುಷ ಎಂಬ ವಿಭಾಗದ ವಿಷಯವಲ್ಲ. ಪುರ ಎಂದರೆ ಶರೀರ. ಶರೀರವೆಂಬ ಪುರದಲ್ಲಿ ಯಾರು ವಾಸವಾಗಿರುತ್ತಾರೋ, ಅವನಿಗೆ 'ಪುರುಷ' ಎಂದು ಕರೆಯಲಾಗಿದೆ. 'ಜೀವ' ಎಂದರ್ಥ. ಪುರುಷ ಅಥವಾ ಸ್ತ್ರೀ ಇಬ್ಬರಲ್ಲೂ ಜೀವ ಎಂಬ ವಿಷಯ ಇದ್ದೇ ಇರುತ್ತದೆ. ಇವರಿಬ್ಬರೂ ಪುರುಷರೇ. ಜೀವನಕ್ಕೆ ಅಥವಾ ತನ್ನ ಕಲ್ಯಾಣಕ್ಕಾಗಿ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕು ಪುರುಷಾರ್ಥವನ್ನು ಮಾಡಬೇಕಾಗಿದೆ. ಮೋಕ್ಷವು ಕೊನೆಯ ಪುರುಷಾರ್ಥವಾಗಿದೆ. ವಸ್ತುತಃ ಇದು ಪಡೆಯಬೇಕಾದದ್ದಲ್ಲ, ಪಡೆದಿದ್ದನ್ನು ಉಳಿಸಿಕೊಳ್ಳಬೇಕಾದದ್ದು. ಒಂದಾನೊಂದು ಕಾಲದಲ್ಲಿ ಮೋಕ್ಷವು ಸಹಜಸಿದ್ಧವಾದದ್ದು ಆಗಿತ್ತು. ಆದರೆ ಅದು ಕ್ರಮೇಣ ಕ್ರಮೇಣ ತಪ್ಪಿ ಮೋಕ್ಷವನ್ನು ಪಡೆಯಬೇಕು ಎಂಬ ವಿಷಯ ಸಿದ್ಧವಾಯಿತು. ಉದಾಹರಣೆಗೆ ಚಿಕ್ಕ ಮಕ್ಕಳಿಗೆ ನಿದ್ರೆ ಅನ್ನುವುದು ಅತ್ಯಂತ ಸಹಜವಾಗಿ ಬರುತ್ತದೆ. ನಿದ್ದೆಗಾಗಿ ಯಾವುದನ್ನು ಕೂಡ ಮಾಡುವ ಅವಶ್ಯಕತೆ ಇಲ್ಲ. ನಿದ್ದೆಗೆ ಇರುವ ಪ್ರತಿಬಂಧಕವನ್ನು- ದುರಿತವನ್ನು ಅಥವಾ ತೊಂದರೆಯನ್ನು ನಿವಾರಣೆ ಮಾಡಿಕೊಂಡರೆ ಅಥವಾ ನಿದ್ರೆಗೆ ಬೇಕಾದ ಪೂರಕವಾದ ಸಂಗತಿಗಳನ್ನು ಜೋಡಿಸಿಕೊಂಡರೆ ಆಗ ನಿದ್ರೆಯು ತಾನಾಗಿಯೇ ಬರುತ್ತದೆ, ಹೇಗೋ ಹಾಗೆ ಈ ಮೋಕ್ಷವು ಕೂಡ. ಮೋಕ್ಷ ಎಂದರೆ ಬಿಡುಗಡೆ ಬಂಧನದಿಂದ ಮುಕ್ತವಾಗುವಿಕೆ. ಜೀವಿಯು ಈ ಸಂಸಾರವೆಂಬ ಚಕ್ರದಲ್ಲಿ ಸಿಲುಕಿರುತ್ತಾನೆ. ಇದರಿಂದ ಅವನು ಬಿಡುಗಡೆಯನ್ನು ಹೊಂದಬೇಕು. ಇದಕ್ಕೆ 'ಮೋಕ್ಷ' ಎಂದು ಹೆಸರು. ಹೇಗೆ ನಿದ್ದೆಯು ಬರಬೇಕಾದರೆ ಒಂದು ಸ್ಥಿತಿ ಅಥವಾ ಕಂಡೀಶನ್ ಎಂಬುದು ಅತ್ಯಂತ ಅವಶ್ಯವೋ ಹಾಗೆಯೇ ಮೋಕ್ಷಕ್ಕೂ ಒಂದು ಕಂಡೀಶನ್ ಅಥವಾ ಸ್ಥಿತಿ ಇರಬೇಕಾಗುತ್ತದೆ. ಇದನ್ನೇ 'ಧರ್ಮ' ಎಂಬುದಾಗಿ ಕರೆಯುತ್ತಾರೆ. ಈ ಸ್ಥಿತಿ ಅಥವಾ ಕಂಡೀಶನ್ ಬರಬೇಕಾದರೆ ಅದಕ್ಕೆ ಸೂಕ್ತವಾದ ಬಯಕೆ ಬೇಕು. ಇದನ್ನೇ 'ಕಾಮ' ಎನ್ನುತ್ತಾರೆ. ಕಾಮಕ್ಕೆ ಒಂದು ವಿಷಯ ಬೇಕು. ಉದಾಹರಣೆಗೆ ನಿದ್ದೆಯನ್ನು ಮಾಡುವಾಗ ಹಾಸಿಗೆ ನಿಶ್ಶಬ್ದತೆ ಮೊದಲಾದವುಗಳನ್ನು ಬಯಸುತ್ತೇವೆ. ಹಾಸಿಗೆ ಮೊದಲಾದವುಗಳು ಅಲ್ಲಿ ಅರ್ಥ ಎನಿಸಿಕೊಳ್ಳುತ್ತವೆ. ಅಂತೆಯೇ ಜೀವನದಲ್ಲಿ ಅನೇಕ ಪದಾರ್ಥಗಳನ್ನು ಬಳಸಿಕೊಂಡು ನಮ್ಮ ಬಯಕೆಯನ್ನು ಪೂರ್ತಿ ಮಾಡಿಕೊಂಡು ಒಂದು ಕಂಡೀಶನ್ನು ಏರ್ಪಡಿಸಿಕೊಂಡರೆ ಆಗ ಮೋಕ್ಷ ಎಂಬುದು ಸಿದ್ಧವಾಗುತ್ತದೆ. ಈ ರೀತಿ ಯಾರೋ ಬದುಕುತ್ತಾನೋ ಅದನ್ನೇ ಪುರುಷಾರ್ಥಮಯವಾದ ಬಾಳಾಟ ಎನ್ನುತ್ತಾರೆ. ಹೀಗೆ ಮಾಡದಿದ್ದರೆ ಅವನು ಅವನಿಗೇ ಶತ್ರುವಾಗುತ್ತಾನೆ. ಶ್ರೀರಂಗ ಮಹಾಗುರುಗಳು ಹೇಳಿದಂತೆ ಪೂರ್ಣ ಜೀವನ ಎಂದರೆ "ಭಗವಂತನಿಂದ ಬಂದ ಜೀವ ಮತ್ತೆ ಭಗವಂತನಲ್ಲೇ ಒಂದಾಗುವಿಕೆ". ಇಂತಹ ಪೂರ್ಣ ಜೀವನವನ್ನು ಮಾಡದಿದ್ದರೆ ಅವನಿಗೆ ಅವನೇ ಶತ್ರುವಾಗುತ್ತಾನೆ.


ಸೂಚನೆ : 13/4/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಅಷ್ಟಾಕ್ಷರೀ 80 ಸತ್ತಾಮಾತ್ರಂ ನಿರ್ವಿಶೇಷಂ (Ashtakshari 80)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಮನೆಯಲ್ಲಿ ಮಗುವೊಂದು ಹುಟ್ಟಿತೆಂದರೆ ಸಂಭ್ರಮವೋ ಸಂಭ್ರಮ. ಎಲ್ಲರಿಗೂ ಸುದ್ದಿ ತಿಳಿಸುವುದೇನು, ನಿಕಟಬಂಧುಮಿತ್ರರಿಗೆ ಸಿಹಿ ಹಂಚುವುದೇನು, ಎಲ್ಲವೂ ಸಡಗರವೇ. ಎಲ್ಲರಿಗೂ ನವಶಿಶುವನ್ನು ನೋಡುವ ಆಸೆ, ಮೊಟ್ಟಮೊದಲು. ಆ ಆಸೆಯು ಈಡೇರುತ್ತಲೇ, ಅನತಿಕಾಲದಲ್ಲೇ, ಮಗುವು ತನ್ನತ್ತ, ಅಥವಾ ತನ್ನನ್ನೇ, ನೋಡಬೇಕೆಂಬ ಆಸೆ.

ಮಗುವಿನ ಗಮನ ಸೆಳೆಯಲು ಸರ್ವಪ್ರಯತ್ನಗಳೂ ಸಾಗುವುವು: ಏನಾದರೊಂದು ಸದ್ದು ಮಾಡು, ಕಣ್ಣ ಮುಂದೆ ಏನನ್ನಾದರೂ ಅತ್ತಿತ್ತ ಆಡಿಸು; ಚಪ್ಪಾಳೆಯೋ, ಚಿಟಿಕೆಯೋ,  ಬಣ್ಣ ಬಣ್ಣದ ಗಿಲಕಿಯೋ - ಅಂತೂ ಶಿಶುವಿನ ಕಣ್ಣು-ಕಿವಿಗಳಿಗೆ ತಲುಪುವ ರೂಪ-ಶಬ್ದಗಳನ್ನು ಮುಂದಿಡು!

ಮಗುವಿನ ಆಗಾಗಿನ ಮುಗುಳ್ನಗೆಯೆಂಬುದು ನಿಷ್ಕಾರಣವೆಂಬಂತೆ ಕಂಡರೂ, ಅದು ವಾಸ್ತವವಾಗಿ, ಶ್ರೀರಂಗಮಹಾಗುರುಗಳು ತಿಳಿಸಿರುವಂತೆ, ಅಂತರಂಗದಲ್ಲಿ ಗೋಚರಿಸುವ ಒಳಬೆಳಕಿನಲ್ಲಿ ತಾನೇ ತಾನಾಗಿ ಶಿಶುವು ನಲಿಯುವುದರ ಸೂಚಕ; ಅದಕ್ಕೆ ಸದ್ದು-ನೋಟಗಳ ಹೊರಗಣ ಆಕರ್ಷಣೆಗಳನ್ನು ಒಡ್ಡುತ್ತಿರುವುದು ನಾವು. ಬಹಿರ್ಮುಖತೆಯನ್ನು ಬರಿಸುತ್ತಿರುವುದು ನಾವು, ಅಷ್ಟೇ.

ಆಮೇಲಾಮೇಲೇ, "ನನ್ನನ್ನು ನೋಡಿಯೇ ಮಗು ನಕ್ಕದ್ದು" - ಎಂದು ಹೇಳಿಕೊಳ್ಳುವುದರಲ್ಲಿಯೇ ಧನ್ಯತೆಯೆಂಬುದು ತಂದೆತಾಯಿಗಳಲ್ಲಿ ಶುರುವಾಗುವುದು.

ಮಗುವಿನ ಅಂಗಗಳಲ್ಲಿ ಸ್ಫುಟತೆ-ಸ್ಪಷ್ಟತೆಗಳು ಮೂಡುತ್ತಲೇ, ಅದರ ರೂಪದ ನಿರೂಪಣವು ಆರಂಭವಾಗುತ್ತದೆ: ತಾಯಿಯ ಕಡೆಯವರಿಗೆಲ್ಲ ತಮ್ಮ ಮನೆಯವರ ರೂಪ ಮಗುವಿನಲ್ಲಿ ಕಂಡರೆ, ತಂದೆಯ ಕಡೆಯವರಿಗೆ ತಮ್ಮ ಮಂದಿಯ ಅಚ್ಚೇ ಎದ್ದು ಕಾಣುತ್ತದೆ. ಮಿತ್ರರಂತೂ ಎರಡೂ ಕಡೆಯ ಮುದ್ರೆಗಳನ್ನೂ ಗುರುತಿಸಿಯಾರು.

ಹಾಗೆಯೇ, ಅಪ್ಪಅಮ್ಮಂದಿರಿಗೆ ತಮ್ಮ ತಮ್ಮ ಕಡೆಯವರನ್ನು ಪರಿಚಯ ಮಾಡಿಕೊಡುವ ಉತ್ಸಾಹವೂ ಇಲ್ಲದಿರುವುದಿಲ್ಲ. ಎಂದೇ, ಶ್ರೀರಂಗಮಹಾಗುರುಗಳು ತಿಳಿಹಾಸ್ಯವನ್ನೂ ಅನುಪ್ರಾಸವನ್ನೂ ಬೆರೆಸಿ ಹೇಳುವಂತೆ, "ಮಾವ ನೋಡು, ಭಾವ ನೋಡು" ಇತ್ಯಾದಿಯಾಗಿ ಹೇಳಿ, ಮಗುವಿನ ಗಮನವನ್ನು ಅದರಿದರತ್ತಲೋ ಅವರಿವರತ್ತಲೋ ಸೆಳೆಯುವುದಾಗುತ್ತದೆ.

ಇನ್ನು ಮಕ್ಕಳನ್ನು ತೂಗಿ ನಿದ್ರೆಮಾಡಿಸುವುದರಲ್ಲಿ ನಮ್ಮ ದೇಶದಲ್ಲ್ಲಿಯ ಸಂಪ್ರದಾಯವೇ ವಿಶಿಷ್ಟ. ಮಕ್ಕಳಿಗೆ ಕೆಲವೊಮ್ಮೆ ನಿದ್ದೆ ಬರುತ್ತಿದ್ದರೂ, ಅಥವಾ ಆ ಕಾರಣಕ್ಕಾಗಿಯೇ, ಏನೋ ಹಟ, ಏನೋ ಚಂಡಿ ಹಿಡಿಯುವುದು ಆಗುವುದುಂಟು. ತೊಟ್ಟಿಲನ್ನು ತೂಗುತ್ತಾ ನಾವು ಜೋಗುಳ ಹಾಡುತ್ತಿದ್ದರೆ, ಗಾನವನ್ನಾಲಿಸುತ್ತ ಮಗುವು ನಿದ್ದೆಹೋಗುವುದುಂಟಲ್ಲವೇ?ಹಾಗೆ ಹಾಡಿ ನಿದ್ದೆ ಬರಿಸುವಾಗ, ಮಗುವನ್ನು ದೇವರೆಂಬಂತೆ ಕಂಡು - ಪೂಜ್ಯ ಪುರಂದರದಾಸರು ಹಾಕಿಕೊಟ್ಟ ಮೇಲ್ಪಂಕ್ತಿಯಂತೆ – "ಜಗದೋದ್ಧರನಾ, ಆಡಿಸಿದಳು ಯಶೋದಾ" ಎಂಬ ಪರಿಯಲ್ಲಿ ಹಾಡುವುದುಂಟಲ್ಲವೇ? ಇಲ್ಲೆಲ್ಲಾ ಎಳೆಗೂಸಿನಲ್ಲಿ ದೈವತ್ವದ ಅಚ್ಚನ್ನು ಕಂಡುಕೊಳ್ಳುವುದಾಗಿರುತ್ತದೆಯಲ್ಲವೇ?

ಹೀಗೆ ಮಗುವಿನಲ್ಲಿ ದೈವಭಾವವನ್ನು ಕಾಣುವ ಈ ಹಿಂದೂಸಂಸ್ಕೃತಿಯ ಪರಿ ಇಡೀ ದೇಶದಲ್ಲೇ ಉಂಟು. ತೊಟ್ಟಿಲು ತೂಗುವಾಗ ಮಾತ್ರವಲ್ಲದೆ, ಒಂದು ಆರತಿಯಿರಬಹುದು, ನಾಮಕರಣವಿರಬಹುದು - ಇವೆಲ್ಲ ಸಂದರ್ಭದಲ್ಲೂ ಶಿಶುವಿನಲ್ಲಿಯ ದೈವಭಾವವನ್ನು ಗುರುತಿಸಿ ಆದರಿಸಿ ನಲಿದು, ಸಿಹಿ ಹಂಚಿ ಸಂತೋಷಪಡು(ಡಿಸು)ವ ಬಗೆಯನ್ನು ನಮ್ಮ ಪರಂಪರೆಯಲ್ಲಿ ಉದ್ದಕ್ಕೂ ನೋಡಬಹುದು.

ಇವೆಲ್ಲಕ್ಕಿಂತಲೂ ಮಿಗಿಲಾದುದೆಂದರೆ, ಶ್ರೀಕೃಷ್ಣನು ಹುಟ್ಟಿದಾಕ್ಷಣದಲ್ಲಿ ದೇವಕಿಯು ಆತನನ್ನು ಕಂಡ ರೀತಿ: ಭಾಗವತದಲ್ಲಿ ನಿರೂಪಿತವಾಗಿರುವಂತೆ, ಪರತತ್ತ್ವವು ತೋರಿಕೊಂಡಾಗ ಅದು ಹೇಗಿರುವುದೆಂಬುದನ್ನು ಸಾಕ್ಷಾತ್ ಜ್ಞಾನಿಯೊಬ್ಬನು ಕಾಣುವ ಬಗೆಯೇ ಅದು!

ಕೃಷ್ಣನ ರೂಪವು ಅವ್ಯಕ್ತವೂ ಆದ್ಯವೂ ಆದದ್ದು. ನಿರ್ಗುಣವೂ ನಿರ್ವಿಕಾರವೂ ಆದ ಬ್ರಹ್ಮಜ್ಯೋತಿಸ್ಸದು. ಏಕೆಂದರೆ ಅದಿನ್ನೂ ಸತ್ತಾಮಾತ್ರವೂ ನಿರ್ವಿಶೇಷವೂ ಆಗಿರುವುದು (ಸತ್ತಾಮಾತ್ರಂ ನಿರ್ವಿಶೇಷಂ).  

ಏನು ಹಾಗೆಂದರೆ? ಸತ್ತೆಯೆಂದರೆ ಇರುವಿಕೆ. ಹೀಗಾಗಿ "ಅದು ಇದೆ"ಯೆಂದಷ್ಟನ್ನು ಮಾತ್ರವೇ ಅದರ ಬಗ್ಗೆ ಹೇಳಲಾಗುವುದು. ಅದನ್ನೇ ವಿವರಿಸಿ ಹೇಳೆಂದರೆ, ಆಗದೆನ್ನಬೇಕಾಗುತ್ತದೆ!  ಯಾವುದನ್ನು ಕುರಿತು ವರ್ಣ-ರೂಪ-ಆಕಾರ ಮೊದಲಾದ ವಿಶೇಷಗಳನ್ನೇನನ್ನೂ ಹೇಳಲಾಗದೋ, ಅದುವೇ ನಿರ್ವಿಶೇಷ. ಇದುವೇ ಆತ್ಮತತ್ತ್ವದ ಮೂಲಸ್ಥಿತಿ, ಪರಿಶುದ್ಧಸ್ಥಿತಿ, ಪರಮಾನಂದದ ಸ್ಥಿತಿ.  

ಯಾವಾಗ ಈಹೆಯು, ಎಂದರೆ ಸೃಷ್ಟಿಮಾಡಬೇಕೆಂಬ ಬಯಕೆಯು, ಉಂಟಾಗುತ್ತದೆಯೋ, ಅಲ್ಲಿಂದ ಮುಂದಕ್ಕೇ ಈ ವಿಶೇಷಗಳೇನಿದ್ದರೂ ಮೂಡುವುದು. ಆದ್ದರಿಂದ ಇದು ವಿಷ್ಣುವಿನ ನಿರೀಹ-ಸ್ಥಿತಿಯೂ ಹೌದು. ಸವಿಶೇಷತೆಗಳೇನಿದ್ದರೂ ಆಮೇಲಿನವೇ.

ಶ್ರೀಕೃಷ್ಣನನ್ನು ದೇವಕಿಯು ಹೀಗೆ ಅಧ್ಯಾತ್ಮದೀಪವಾಗಿ ಕಂಡುದರ ವಿಶೇಷವನ್ನು ನಿರೂಪಿಸಿ, ಅದರ ಈ ತಾತ್ತ್ವಿಕನೆಲೆಯನ್ನು ಶ್ರೀರಂಗಮಹಾಗುರುಗಳು ತೋರಿಸಿಕೊಟ್ಟಿದ್ದಾರೆ.

ಶ್ರೀಕೃಷ್ಣನನ್ನು ವಸುದೇವಸುತನೆಂದು ಕರೆದರೂ,  ದೇವಕೀಪರಮಾನಂದನೆಂದು ಹೇಳುವುದರಲ್ಲಿಯ ಔಚಿತ್ಯಪೂರ್ಣತೆಯು ಈಗ ಸ್ಫುಟವಾಗುತ್ತದೆಯಲ್ಲವೇ?

ಪರತತ್ತ್ವದ ಒಳಮರ್ಮವನ್ನು ಗುರುತಿಸಿ ತೋಷಿಸಿ ಸಮುಚಿತವಾಗಿ ನುತಿಸುವ ದೇವಕಿಯ ಈ ಭಾಗ್ಯ ಎಷ್ಟು ತಾಯಂದಿರಿಗುಂಟು?

ಸೂಚನೆ: 26/4//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.


ವಿಶಿಷ್ಟಾದ್ವೈತ ಪ್ರವರ್ತಕರು ಭಗವದ್ರಾಮಾನುಜರು

ಲೇಖಕರು : ಡಾ. ಸಿ. ಆರ್. ರಾಮಸ್ವಾಮಿ 

ಎಂ. ಆರ್. ಭಾಷ್ಯಮ್ 

ಪ್ರತಿಕ್ರಿಯಿಸಿರಿ (lekhana@ayvm.in)




ಭಾರತಮಾತೆ ತನ್ನ  ಉದರದಿಂದ ಸನಾತನ ಭಾರತೀಯ ಸಂಸ್ಕೃತಿಯ ಉನ್ನತಿ-ಪುನರುಜ್ಜೀವನಕ್ಕೋಸ್ಕರ  ಆಗಿಂದ್ದಾಗ್ಗೆ ಮಹಾತ್ಮರಿಗೆ ಜನ್ಮವೀಯುತ್ತಲೇ ಇರುತ್ತಾಳೆ.  ಅಂತಹ ಒಬ್ಬ ಮಹಾತ್ಮರು  ಭಗವದ್ರಾಮಾನುಜರು. ಸುಮಾರು ಸಾವಿರ ವರ್ಷಗಳ ಹಿಂದೆ ತಮಿಳುನಾಡಿನಲ್ಲಿರುವ ಶ್ರೀಪೆರುಂಬೂದೂರ್ನಲ್ಲಿ ಭಗವದ್ರಾಮನುಜರ ಜನನ (೧೦೧೭).


ತಂದೆಯವರಿಂದ  ಮೊದಲ ವಿದ್ಯಾಭ್ಯಾಸ ಕಲಿತ  ಅತಿತೀಕ್ಷ್ಣಬುದ್ಧಿಯ  ರಾಮಾನುಜರಿಗೆ   ಚಿಕ್ಕಂದಿನಲ್ಲೇ ವೇದ-ಶಾಸ್ತ್ರಗಳಲ್ಲಿ ಪರಿಣತಿ.   ಭಗವಂತ ಮತ್ತು ಭಕ್ತರಲ್ಲಿ ಅತ್ಯಂತ ಭಕ್ತಿ.  ಭಗವಂತನೊಡನೆ ನೇರವಾಗಿ ಸಂಭಾಷಣೆಯನ್ನು ಮಾಡುತ್ತಾರೆ ಎಂದು ಪ್ರತೀತಿಯಿದ್ದ  ಭಕ್ತಶಿರೋಮಣಿ ಕಂಚೀಪೂರ್ಣರ  ಪರಿಚಯ.  ತಂದೆಯ ಕಾಲಾನಂತರದಲ್ಲಿ ಕಂಚಿಯಲ್ಲಿ ಯಾದವಪ್ರಕಾಶರಹತ್ತಿರ ವಿಧ್ಯಾಭ್ಯಾಸದ ಮುಂದುವರಿಕೆ. ನಂತರ ಯಾಮುನಮುನಿಗಳ ಶಿಷ್ಯರು ಗೋಷ್ಟೀಪೂರ್ಣರಿಂದ  ಮುಕ್ತಿಪ್ರದಾಯಕವಾದ 'ಅಷ್ಟಾಕ್ಷರೀ' ಮಹಾಮಂತ್ರದ  ಉಪದೇಶ.  ಕಂಚೀಪೂರ್ಣರಮೂಲಕ ವರದರಾಜಸ್ವಾಮಿಯಿಂದಲೇ  ಹಲವುಕಾಲ ಕಾಡುತ್ತಿದ್ದ ವಿಶಿಷ್ಟಾದ್ವೈತ ಸಿದ್ಧಾಂತಕ್ಕೆ ಅಡಿಪಾಯಗಳಾದ  ಆಧ್ಯಾತ್ಮಿಕ ಪ್ರಶ್ನೆಗಳಿಗೆ   ಉತ್ತರಗಳನ್ನು ಪಡೆದರು.  ನಂತರ ದಿವ್ಯಪ್ರಬಂಧಗಳ ಅಧ್ಯಯನ. 


ಯಾದವಪ್ರಕಾಶರಲ್ಲಿ ಅಧ್ಯಯನ ಮಾಡುತ್ತಿದ್ದಾಗ ಗುರುಗಳ ಕಿರಿ-ಕಿರಿ ಅಸಹನೆಯಾಗಿ ಪ್ರಕೋಪಕ್ಕೆ ತೆರಳುತ್ತಿತ್ತು. ಒಮ್ಮೆ ಅಭ್ಯಂಗಸ್ನಾನಮಾಡಿಸುತ್ತಾ   ಆಚಾರ್ಯಸೇವೆಯಲ್ಲಿ ನಿರತರಾಗಿದ್ದ ರಾಮಾನುಜರಿಗೆ ಛಾಂದೋಗ್ಯ  ಉಪನಿಷತ್ತಿನಲ್ಲಿ ಬರುವ ವಾಕ್ಯಕ್ಕೆ 'ಭಗವಂತನ  ಕಣ್ಣು ತಾವರೆಯಂತೆ, ಅದರ ಬಣ್ಣ ಕಪಿಯ ಪೃಷ್ಠದಂತೆ ಕೆಂಪಗೆ ' ಎಂದು ಗುರುಗಳು ವಿವರಿಸಿದರು.  ಕೀಳ್ಮಟ್ಟದ ಈ  ಹೋಲಿಕೆಯನ್ನು ಕೇಳಿದ ರಾಮಾನುಜರ ಕಣ್ಣಿನಲ್ಲಿ  ಹರಿದ ಅಶ್ರುಧಾರೆ ಮತ್ತು ಈ ವಾಕ್ಯವನ್ನು 'ಆತನ ಕಣ್ಣು ಆಗತಾನೇ ಸೂರ್ಯಕಿರಣಗಳಿಂದ ಅರಳಿದ ಕೆಂದಾವರೆಯ ದಳದ ವರ್ಣದಂತೆ-ಎಂದು ಸೊಗಸಾಗಿ ಅರ್ಥೈಸಬಹುದಲ್ಲಾ' ಎಂಬ ಉದ್ಗಾರ.  ಸರಿಯೆಂದು ತೋರಿದರೂ ಅಹಂಕಾರಕ್ಕೆ ಬಿದ್ದ ಪೆಟ್ಟಿನಿಂದ ರಾಮಾನುಜರ ಮೇಲೆ ಯಾದವಪ್ರಕಾಶರ ಹಾರಾಟ. ಹೀಗೆ ಮುಂದುವರಿದ ಈರ್ಷೆ, ದ್ವೇಷದಲ್ಲಿ, ಕೊನೆಗೆ  ಹೇಗಾದರೂ ಇವರನ್ನು  ಮುಗಿಸಿಬಿಡಬೇಕೆಂಬುದರಲ್ಲಿ  ಪರ್ಯವಸಾನಗೊಂಡಿತು.  


ಒಮ್ಮೆ ಯಾತ್ರೆಗೆಂದು ಹೊರಟಾಗ  ಮಧ್ಯದಲ್ಲಿ ರಾಮಾನುಜರನ್ನು ಮುಗಿಸುವ ಸಂಚು. ಸಹಪಾಠಿ ಚಿಕ್ಕಮ್ಮನಮಗ ಗೋವಿಂದನಿಂದ   ಪಿತೂರಿಯನ್ನು ಅರಿತ ರಾಮಾನುಜರು, ಕಾಡಿನಲ್ಲಿ ತಪ್ಪಿಸಿಕೊಳ್ಳುತ್ತಾರೆ. ದಾರಿಕಾಣದ ಇವರನ್ನು ಬೇಡದಂಪತಿಗಳು ಕಂಚಿಗೆ ತಲುಪಿಸಿ ಅದೃಶ್ಯರಾಗುತ್ತಾರೆ. ಕಾಪಾಡಿದವರು  ಭಗವಂತ-ಭಾಗವತಿಯರೇ ಎಂದರಿತ ಅವರ ಆನಂದಕ್ಕೆ ಎಲ್ಲೆಯಿಲ್ಲ. 


ಎಂದೂ ಪತಿಧರ್ಮದಲ್ಲಿ ಸರಿಯಾಗಿ ಪಾಲ್ಗೊಳ್ಳದ ರಾಮಾನುಜರ ಪತ್ನಿ,  ಮನೆಗೆ ಬಂದ ಮಹಾಪೂರ್ಣ ದಂಪತಿಗಳನ್ನು,  ಅವಮಾನಿಸುತ್ತಾಳೆ. ಈಗಾಗಲೇಬೇಸತ್ತಿದ್ದ  ರಾಮಾನುಜರು, ವರದರಾಜನ ಸನ್ನಿಧಿಯಲ್ಲಿ ಸಂನ್ಯಾಸ ಸ್ವೀಕರಿಸುತ್ತಾರೆ. ನಂತರ ಪ್ರಯಾಣ ಶ್ರೀರಂಗಂನಗರಿಗೆ, ಯಾಮುನರಿಗೆ ಅವರ ಅವಸಾನಕಾಲದಲ್ಲಿ ತಾನುಕೊಟ್ಟ ವಚನವನ್ನು  ಪಾಲಿಸಲು ಸಂಕಲ್ಪ - ಯಾಮುನರು ಸಂಕಲ್ಪಿಸಿ ಮಾಡಲಾಗದ್ದಿದ್ದ ಬ್ರಹ್ಮಸೂತ್ರಕ್ಕೆ ಭಾಷ್ಯ ಮೊದಲಾದವು.

  

ಬ್ರಹ್ಮಸೂತ್ರಭಾಷ್ಯರಚನೆಯನ್ನು  ಪೂರ್ಣಗೊಳಿಸಲು ಬೋಧಾಯನ ವೃತ್ತಿಯ, ಕೇವಲ ಕಾಶ್ಮೀರದ ಶಾರದಾಪೀಠದಲ್ಲಿ ಲಭ್ಯವಿದ್ದ ಗ್ರಂಥಪಡೆಯಲು  ಕೂರೇಶರೆಂಬ ಶಿಷ್ಯರೊಡನೆ  ಪಯಣ. ಶಾರದೆಯ ಅನುಗ್ರಹದಿಂದ ಕೇವಲ ಒಂದುರಾತ್ರಿ ಸಿಕ್ಕ ಗ್ರಂಥವನ್ನು ಏಕಸಂಧಿಗ್ರಾಹಿ ಕೂರೇಶರು  ಅಕ್ಷರಬಿಡದಂತೆ ಮನನ ಮಾಡುತ್ತಾರೆ. 


ನಂತರ ಶ್ರೀಭಾಷ್ಯ  ರಚನೆ. ಸಂಗ್ರಹವಾಗಿ: ಶ್ರೀಸಹಿತವಾದ ನಾರಾಯಯಣನೇ ಪರದೈವ. ಜೀವ ಮತ್ತು ಪ್ರಕೃತಿ ಆತನ ಒಡಲು.  ಆದ್ದರಿಂದ ಈ ದರ್ಶನ ವಿಶಿಷ್ಟ-ಅದ್ವೈತ. ಶ್ರೀವೈಕುಂಠವೇ ಮುಕ್ತಿಯ ತಾಣ. ಭಕ್ತಿ-ಶರಣಾಗತಿಗಳಿಂದ ಮುಕ್ತಿ. ಭಗವಂತ ಅನಂತಕಲ್ಯಾಣ ಗುಣಗಳಿಂದ ಕೂಡಿದವನಾಗಿ ದೇವಸ್ಥಾನದ ಮೂರ್ತಿಗಳಲ್ಲಿ,   ಸಾಲಿಗ್ರಾಮ ಮೊದಲಾದ ಶಿಲೆಗಳಲ್ಲಿ ಪೂಜೆಗೆ ಸಿಗುತ್ತಾನೆ.


೮೨ ರ ಹರೆಯದಲ್ಲಿ ಅವರು ಶ್ರೀರಂಗಂ ತ್ಯಜಿಸಬೇಕಾಗುತ್ತದೆ.  ಶೈವ ಮತಾಂಧ  ಕುಲೋಥುಂಗರಾಜ , ರಾಮಾನುಜರನ್ನು  'ಶಿವನು ನಾರಾಯಣನಿಗಿಂತ ದೊಡ್ಡವನು' ಎಂದು ಒಪ್ಪದಿದ್ದರೆ ಕೊಲ್ಲುವುದಕ್ಕೆ  ಟೊಂಕ ಕಟ್ಟಿರುತ್ತಾನೆ. ಇದನ್ನರಿತ  ಶಿಷ್ಯ ಕೂರೇಶರು, ರಾಮಾನುಜರ  ಕಾವಿಬಟ್ಟೆಯನ್ನು ತಾವು  ಧರಿಸಿ, ಅವರಿಗೆ ಬಿಳಿಯಬಟ್ಟೆಯನ್ನು ಉಡಿಸಿ,  ರಾತ್ರಿಯಲ್ಲೇ ಹೊರಡಿಸುತ್ತಾರೆ. ಹೇಗೋ ಅವರ ಬಿಡಾರ  ತೊಂಡನೂರಿನಲ್ಲಿ.   ರಾಮಾನುಜರೆಂದೇ ತಿಳಿದು ವಾದದದಲ್ಲಿ ಸೋಲಿಸಲಾಗದ ಕೂರೇಶರ ಕಣ್ಣುಗಳನ್ನು ರಾಜ ಕೀಳಿಸಿರುತ್ತಾನೆ. 


ತೊಂಡನೂರು  ಜೈನ ರಾಜ್ಯದಲ್ಲಿರುತ್ತದೆ. ರಾಜನ ಮಗಳಿಗೆ ಭೂತದ  ಕಾಟ.  ರಾಮಾನುಜರೇ ಬಂದಿರುವುದನ್ನು ಅರಿತ ರಾಜಬಿಟ್ಟಿದೇವನಿಂದ  ಮಗಳ ಚಿಕಿತ್ಸೆಗಾಗಿ ಬೇಡುವಿಕೆ. 'ನಾರಾಯಣ'  ಮಂತ್ರಪೂತ ಜಲದಿಂದ ಪ್ರೋಕ್ಷಣೆ ಮಾಡಿದೊಡನೆ, ಬಗ್ಗದ ಭೂತ  ಬಿಟ್ಟೋಡುತ್ತದೆ. ಕೃತಜ್ಞ ರಾಜನಿಂದ ಶ್ರೀವೈಷ್ಣವಧರ್ಮದ ಸ್ವೀಕಾರ.  ವಿಷ್ಣುವರ್ಧನನೆಂಬ ನಾಮಧೇಯ. ಆತ ಭಗವಂತನಿಗೆ ಅನೇಕ ಗುಡಿಗಳನ್ನು ಕಟ್ಟಿಸುತ್ತಾನೆ, ಬೇಲೂರಿನ ಚೆನ್ನಕೇಶವ ದೇವಸ್ಥಾನದೊಂದಿಗೆ. ರಾಜನೇ ಶ್ರೀವೈಷ್ಣವಧರ್ಮವನ್ನು ಸ್ವೀಕರಿಸಿದನ್ನು  ಕಂಡ ಜೈನವಿದ್ವಾಂಸರು ರಾಮಾನುಜರಿಗೆ ಒಂದೇ ಸಮಯದಲ್ಲಿ ಉತ್ತರಿಸುವಂತೆ ೧೦೦೦ ಪ್ರಶ್ನೆಗಳನ್ನು ಹಾಕಿದರಂತೆ. ತನ್ನ ಮೂಲ  ಸ್ವರೂಪವಾದ  ಆದಿಶೇಷನನ್ನು ಜ್ಞಾಪಿಸಿಕೊಂಡ ಅವರು, ತನ್ನ ಸಾವಿರಫಣಗಳಿಂದ   ಉತ್ತರಿಸಿದರಂತೆ.


ಈ ಮಧ್ಯೆ ಕನಸಿನಲ್ಲಿ ಹುತ್ತದಲ್ಲಿ ದೇವರಮೂರ್ತಿ ಚೆಲುವ ನಾರಾಯಣನ  ದರ್ಶನ, ಸ್ಥಾಪನ. ಆದರೂ, ಉತ್ಸವ ಮೂರ್ತಿಯನ್ನು ಕಾಣದ ಕೊರತೆ. ಮತ್ತೆ ಕನಸಿನಲ್ಲಿ ಭಗವಂತನ ಸೂಚನೆ, ಅದು  ದೆಹಲಿಯಲ್ಲಿ  ಸುಲ್ತಾನನ ಬಳಿಯಲ್ಲಿರುವುದಾಗಿ.  ಏಕಾಏಕಿ ಬಂದ ರಾಮಾನುಜರ ತೇಜಸ್ಸನ್ನು ಕಂಡು  ಮರ್ಯಾದೆಯಿಂದ ಕಂಡ ಸುಲ್ತಾನ 'ಕರೆದಾಗ  ಅದಾಗಿ ಬಂದರೆ ಕೊಂಡಯ್ಯಬಹುದೆಂದು'  ಇಷ್ಟವಿಲ್ಲದಿದ್ದರೂ ಅನುಮತಿ ಕೊಡುತ್ತಾನೆ. 'ಏನ್ ಸೆಲ್ವಮೇ ವಾ' ಎಂದು ಕರೆದ ರಾಮನುಜರ ಮಡಿಲಿನಲ್ಲಿ ನಡೆದುಬಂದು ವಿಗ್ರಹ ಕುಳಿತಿತು ಎಂಬ ಪ್ರತೀತಿ.  ತಿರುನಾರಾಯಣಪುರವನ್ನು  ಪುನಃ ತಲಪುವವೇಳೆಗೆ, ಮುದ್ದು ವಿಗ್ರಹವನ್ನು ಕಾಣದ ವಿರಹವೇದನೆಯನ್ನು ಅನುಭವಿಸುತ್ತಿದ್ದ  ಸುಲ್ತಾನನ ಕುಮಾರಿ ಬಂದು, ಪ್ರಣಾಮ  ಸಲ್ಲಿಸಿದೊಡನೆ ವಿಗ್ರಹದಲ್ಲೇ ಐಕ್ಯಳಾದಳು ಎಂಬ ಪ್ರತೀತಿ. ಅವಳ ಒಂದು ಪ್ರತೀಕ ಭಗವಂತನ ಅಡಿದಾವರೆಗಳಲ್ಲಿ.


ರಾಮಾನುಜರು ಮೇಲುಕೋಟೆಯಲ್ಲಿದ್ದದ್ದು ಸುಮಾರು ೧೩ ವರ್ಷ.  ಐದು ನಾರಾಯಣ ದೇವಸ್ಥಾನಗಳನ್ನು  ಸ್ಥಾಪಿಸಿರುತ್ತಾರೆ. ಜೊತೆ ಜೊತೆಗೆ ಪಾಂಚರಾತ್ರ ಆಗಮದಂತೆ ಪೂಜಾಪದ್ಧತಿಯನ್ನು ನಿಯೋಜಿಸಿ, ದೇವಸ್ಥಾನಗಳ ಆಡಳಿತಗಳನ್ನು ವ್ಯವಸ್ಥೆ ಗೊಳಿಸಿ, ಅನೇಕರಿಗೆ ಸಮಾಶ್ರಯಣ-ಪ್ರಪತ್ತಿ ದೀಕ್ಷೆಯನ್ನು ಅನುಗ್ರಹಿಸಿ ಶ್ರೀರಂಗಕ್ಕೆ ಹಿಂದಿರುಗುತ್ತಾರೆ. ನಂತರ ದಿಗ್ವಿಜಯವನ್ನು ಸಾಧಿಸಿ, ೧೨೦ ವರ್ಷದ  ತುಂಬು ಜೀವನವನ್ನು ಮಾಡಿ, ಆದಿಶೇಷನ ಅವತಾರವೆಂದೇ ಪ್ರಸಿದ್ಧಿಪಡೆದ ಇವರು ಭಗವಂತನ ಪಾದವನ್ನು ಸೇರುತ್ತಾರೆ. ಅವರ ದೇಹ ಎಷ್ಟು ಪವಿತ್ರವೆಂದರೆ ಈಗಲೂ ಶ್ರೀರಂಗದಲ್ಲಿ ಅದನ್ನು ಕಾಪಿಟ್ಟಿದ್ದಾರೆ.  ಶ್ರೀರಂಗಮಹಾಗುರುಗುಳು ಹೇಳಿದಂತೆ 'ಪರಮಪದಕ್ಕೆ ಸೋಪಾನ ಕಟ್ಟಿದ' ಭಗವದ್ರಾಮಾನುಜರ ಮತ್ತು 'ಪರಮ ಪದಕ್ಕೆ ಹಾರಿದ'  ಶ್ರೀಶಂಕರಭಗವದ್ಪಾದರ ಜಯಂತಿ ಒಂದೇ ದಿನ ಬರುವುದರಲ್ಲಿ ಏನಾಶ್ಚರ್ಯ? 


ಸೂಚನೆ : 26/04/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.


Tuesday, April 22, 2025

ವ್ಯಾಸ ವೀಕ್ಷಿತ 133 ಅಮ್ಮನಿಗೆ ಮರಿಗಳ ಹಿತೋಪದೇಶ! (Vyaasa Vikshita 133)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)





ಪ್ರಾಣಾಪಾಯದಿಂದ ತಮ್ಮನ್ನು ಕಾಪಾಡಿಕೊಳ್ಳುವ ಸಲುವಾಗಿ ಜರಿತೆಯು ಹೇಳಿದ ಉಪಾಯಕ್ಕೆ ಪ್ರತಿಯಾಗಿ ಮರಿ ಶಾರ್ಙ್ಗಕ-ಪಕ್ಷಿಗಳು ಹೇಳಿದವು :


ಗಿಡುಗವು ಇಲಿಯನ್ನು ಹೊತ್ತುಕೊಂಡು ಹೋದುದನ್ನು ನಾವರಿಯೆವು. ಈ ಬಿಲದಲ್ಲಂತೂ ಬೇರೆ ಇಲಿಗಳೂ ಇದ್ದಾವು. ಅವುಗಳಿಂದ ನಮಗೆ ಭಯವು ಇರುವಂತಹುದೇ ಸರಿ. ಇನ್ನು ಅಗ್ನಿಯು ಇಲ್ಲಿಯವರೆಗೆ ಬರುವುದು ಸಹ ಸಂಶಯವೇ. ಏಕೆಂದರೆ ವಾಯುವಿನ ದೆಸೆಯಿಂದಾಗಿ ಅಗ್ನಿಯು ಮತ್ತೊಂದೆಡೆಗೆ ತಿರುಗುತ್ತಿರುವುದನ್ನು  ಕಂಡಿದ್ದೇವೆ. ಆದರೆ ಈ ಬಿಲದೊಳಗೇ ಇರುವುದೆನ್ನುವುದಾದರೆ, ಇಲ್ಲಿಯ ಬಿಲವಾಸಿಗಳಿಂದಾಗಿಯೇ ನಮಗೆ ಸಾವೆಂಬುದು ನಿಶ್ಚಯವೇ ಸರಿ.


ಹೀಗಿರಲು, "ಮೃತ್ಯುವು ನಿಃಸಂಶಯ" - ಎಂದಾಗುವುದಕ್ಕಿಂತ, "ಮೃತ್ಯುವು ಸಂಶಯಾಸ್ಪದ" - ಎಂದಾಗುವುದೇ ನಮಗೆ ವಾಸಿಯೆಂದು ತೋರುತ್ತದೆ.


ಆದುದರಿಂದ ನೀನು ಲೆಕ್ಕಕ್ಕೆ ಅನುಸಾರವಾಗಿ ಆಕಾಶದಲ್ಲಿ ಯಥಾನ್ಯಾಯವಾಗಿ ಸಂಚರಿಸು; [ಮುಂದೆ] ಸುಂದರವಾದ ಮಕ್ಕಳನ್ನು ನೀನು ಪಡೆಯುವೆಯೆಂಬುದೇ ಸರಿ - ಎಂದು.


ಆಗ ಜರಿತೆಯು ಹೇಳಿದಳು:


ಬಿಲದಿಂದ ಇಲಿಯನ್ನು ಒಯ್ಯುತ್ತಾ ವೇಗದಿಂದ ಹೋಗುತ್ತಿದ್ದ ಆ ಪಕ್ಷಿಶ್ರೇಷ್ಠನನ್ನು ನಾನು ಕಂಡೆ. ಮಹಾವೇಗದಿಂದ ಹಾರಿಹೋಗುತ್ತಿದ್ದ ಆ ಗಿಡುಗವನ್ನು ಶೀಘ್ರವಾಗಿ ಹಿಂಬಾಲಿಸಿದೆ. ಬಿಲದಿಂದ ಇಲಿಯನ್ನು ಹೊತ್ತೊಯ್ಯುತ್ತಿದ್ದ ಅದಕ್ಕೆ ಆಶೀರ್ವಾದವನ್ನೂ ಹೇಳಿದೆ:


"ಗಿಡುಗಗಳಿಗೊಡೆಯನೇ, ನನ್ನ ಶತ್ರುವಾದ ಇಲಿಯನ್ನು ತೆಗೆದುಕೊಂಡು ನೀನು ವೇಗವಾಗಿ ಹೋಗುತ್ತಿದ್ದೀಯೆ. ನೀನು ಸ್ವರ್ಗವನ್ನು ಸೇರುವೆಯೆಲ್ಲಾ, ಆಗ ನೀನು ಹಿರಣ್ಮಯನಾಗು, ಎಂದರೆ ಚಿನ್ನದ ಶರೀರವುಳ್ಳವನಾಗು. ಹಾಗೂ ನೀನು ನಿರಮಿತ್ರನಾಗು (ಎಂದರೆ ಶತ್ರುಗಳೇ ಇಲ್ಲದವನಾಗು)." ಎಂದು.


ಆ ಶ್ಯೇನರಾಜನು, ಎಂದರೆ ಗಿಡುಗಗಳ ರಾಜನಾದ ಆ ಪಕ್ಷಿಯು, ಆ ಇಲಿಯನ್ನು ತಿಂದುಹಾಕಿದ ಮೇಲೆ, ನಾನು ಆತನ ಅಪ್ಪಣೆ ಪಡೆದು ಮನೆಗೆ ಹಿಂದಿರುಗಿದೆನು.


ಆದ್ದರಿಂದ, ಮಕ್ಕಳಿರಾ, ಶೀಘ್ರವಾಗಿಯೇ ನೀವು ಬಿಲವನ್ನು ಪ್ರವೇಶಿಸಿ. ನಿಮಗಲ್ಲಿ ಭಯವಿರದು. ಮಹಾತ್ಮನಾದ ಆ ಪಕ್ಷಿರಾಜನು ನಾನು ನೋಡುತ್ತಿದ್ದಂತೆಯೇ ಆ ಇಲಿಯನ್ನು ಅಪಹರಿಸಿರುವನು" ಎಂದು.


ಅದಕ್ಕೆ ಆ ಶಾರ್ಙ್ಗಕಗಳು, "ಆ ಗಿಡುಗವು ಇಲಿಯು ಹೊತ್ತೊಯ್ದುದನ್ನು ನಾವಂತೂ ಅರಿಯೆವು. ಮತ್ತು ಇದನ್ನು ಅರಿಯದೆಯೇ ನಾವು ಬಿಲವನ್ನು ಹೊಗಲಾರೆವು" ಎಂದವು.


ಅದಕ್ಕೆ ಜರಿತೆಯು, "ಆ ಶ್ಯೇನವು ಆ ಮೂಷಿಕವನ್ನು ಹೊತ್ತು ಹೋದುದನ್ನು ನಾ ಬಲ್ಲೆ. ಆದ್ದರಿಂದ ನಿಮಗೆ ಯಾವ ಭಯವೂ ಇಲ್ಲ, ಮಕ್ಕಳೇ, ನನ್ನ ಮಾತಿನಂತೆ ನಡೆಯಿರಿ" ಎಂದಳು.


ಆಗ ಶಾರ್ಙ್ಗಕಗಳು ಹೇಳಿದವು: "ಮಿಥ್ಯೋಪಚಾರದಿಂದ, ಎಂದರೆ ಸುಳ್ಳನ್ನು ಹರಿಬಿಟ್ಟಾದರೂ, ನಮ್ಮನ್ನು ಭಯದ ದೆಸೆಯಿಂದ ಕಾಪಾಡಲು ನೀನೆಳಸುತ್ತಿಲ್ಲವಷ್ಟೆ? ಜ್ಞಾನವು ಸಮಾಕುಲವಾಗಿರಲು, ಎಂದರೆ ಕಾರ್ಯವೊಂದರ ಬಗ್ಗೆ ಇನ್ನೂ ಸ್ಪಷ್ಟತೆಯೆಂಬುದೇ ಮೂಡಿಲ್ಲದಿರಲು, ಕಾರ್ಯಪ್ರವೃತ್ತರಾಗಿಬಿಡುವುದು ಧೀಮಂತರ ಲಕ್ಷಣವಲ್ಲ.


ನಮ್ಮಿಂದ ನಿನಗಾವ ಉಪಕಾರವೂ ಆಗಿಲ್ಲ. ನಾವಾರೆಂಬುದಾಗಿ ನೀನರಿತಿಲ್ಲ. ಹೀಗೆ ಕಷ್ಟಪಟ್ಟಾದರೂ ನಮ್ಮನ್ನು ಕಾಪಾಡುತ್ತಿರುವೆಯೆಲ್ಲಾ, ನೀನು ನಮಗೇನಾಗಬೇಕು, ನಾವಾದರೂ ನಿನಗೇನಾಗಬೇಕು?


ನೀನಿನ್ನೂ ತರುಣಿಯೂ ಸುಂದರಿಯೂ ಆಗಿದ್ದೀಯೇ. ಪತಿಯ ಅನ್ವೇಷಣದಲ್ಲಿ ಸಮರ್ಥಳೂ ಆಗಿದ್ದೀಯೇ. ಪತಿಯನ್ನು ಅನುಸರಿಸು, ತಾಯೇ, ನೀನು ಮತ್ತೆ ಮುದ್ದಾದ ಮಕ್ಕಳನ್ನು ಪಡೆಯುವೆ."


ಸೂಚನೆ : 20
/4/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 12 (Prasnottara Ratnamalike 12)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)




ಪ್ರಶ್ನೆ ೧೨. ಸಂಸಾರವಲ್ಲಿ (ಬಳ್ಳಿ) ಯಾವುದು ?

ಉತ್ತರ - ತೃಷ್ಣಾ.


ಈ ಮುಂದಿನ ಪ್ರಶ್ನೆ ಹೀಗಿದೆ - ಸಂಸಾರ ಎಂಬ ಬಳ್ಳಿ ಯಾವುದು ? ಎಂದು. ಅದಕ್ಕೆ ಉತ್ತರ ತೃಷ್ಣಾ ಅಥವಾ ಆಶೆ. ಆಶೆ ಎಂಬುದು ಸಂಸಾರವನ್ನು ಬೆಳೆಸುತ್ತದೆ ಎಂಬುದು ಈ ಪ್ರಶ್ನೋತ್ತರದ ಒಟ್ಟಾರೆ ಅಭಿಪ್ರಾಯವಾಗಿದೆ. ಸಂಸಾರವನ್ನು ಆಶೆಯು ಹೇಗೆ ಬೇಳೆಸುತ್ತದೆ? ಎಂಬುದನ್ನು ನಾವಿಲ್ಲಿ ನೋಡಬೇಕಾಗಿದೆ. ಪ್ರಶ್ನೆಯು ಬಹಳ ಜಟಿಲವಾಗಿದೆ. ಭಾಷೆಯ ದೃಷ್ಟಿಯಿಂದ ಪ್ರಶ್ನೋತ್ತರ ಬಹಳ ಸುಲಭವಾಗಿರುವಂತೆ ಕಂಡರೂ ಅರ್ಥೈಸುವಾಗ ಅದರ ಕಾಠಿನ್ಯ ಅಥವಾ ಅದನ್ನು ಅನುಭವಿಸುವಾಗ ತಿಳಿಯುತ್ತದೆ. ಇಂತಹ ಗಂಭೀರವಾದ ವಿಷಯವನ್ನು ಪ್ರಶ್ನೋತ್ತರರೂಪದಲ್ಲಿ ಚಿಂತಿಸೋಣ. 


ಸಂಸ್ಕೃತ ಭಾಷೆಯ ವಲ್ಲಿ ಎಂಬ ಪದವೇ ಕನ್ನಡದಲ್ಲಿ ಬಳ್ಳಿಯಾಗಿದೆ. ವಕಾರಕ್ಕೆ ಬಕಾರ ಬಂದಿದೆ. ಲಕಾರವು ಳಕಾರವಾಗಿದೆ ಅಷ್ಟೆ. ಬಳ್ಳಿಯು ಹಬ್ಬುವ ಸಭಾವ ಉಳ್ಳದ್ದು. ಎಲ್ಲಿಯವರೆಗೆ ಅದಕ್ಕೆ ಬೇಕಾದ ಪೋಷಕವಾದ ಅಂಶ ದೊರಕುತ್ತದೆಯೋ ಅಲ್ಲಿಯವರೆಗೆ ಅದು ಹಬ್ಬುತ್ತದೆ. ಅದು ವಲ್ಲಿಯಾದ್ದರಿಂದ ಸ್ವತಂತ್ರವಾಗಿ ಬೆಳೆಯದು ಎಂಬುದನ್ನೂ ನಾವಿಲ್ಲಿ ತಿಳಿಯಲೇ ಬೇಕು. ವಲ್ಲಿಯ ಮೂಲ ಭದ್ರವಾಗಿ ಬೇರೂರಿದ ಒಂದು ವೃಕ್ಷ. ಅದನ್ನು ಆಶ್ರಯಿಸಿ ವಲ್ಲಿಯು ತನ್ನ ವಿಸ್ತಾರವನ್ನು ಮಾಡಿಕೊಳ್ಳುತ್ತದೆ. ವಲ್ಲಿಯ ಬೆಳವಣಿಗೆಗೆ ವಸ್ತುತತಃ ಬೇರೆಯದಾದ ಪೋಷಕಾಂಶದ ಅಗತ್ಯವಿಲ್ಲ. ವೃಕ್ಷಕ್ಕೆ ಹಾಕಿದ ನೀರು ಗೊಬ್ಬರವೇ ವಲ್ಲಿಗೂ ಸಾಕಾಗುತ್ತದೆ. ಕೆಲವೊಮ್ಮೆ ವಲ್ಲಿಯು ತಾನು ಆಶ್ರಯಿಸಿದ ಮರವನ್ನು ಬೆಳೆಯಲು ಕೊಡುವುದಿಲ್ಲ. ಮರಕ್ಕೆ ಹಾಕಿದ ಗೊಬ್ಬರವನ್ನೆಲ್ಲಾ ತಾನೇ ಹೀರುತ್ತದೆ. 


ಇಲ್ಲಿ ಬಹಳ ಅದ್ಭುತವಾದ ರೂಪಕ ಅಲಂಕಾರವಿದೆ. ಎರಡು ವಸ್ತುಗಳಿಗೆ ಅಭೇದವನ್ನು ಹೇಳುವಾಗ ರೂಪಕಾಲಂಕಾರವನ್ನು ಬಳಸಲಾಗುತ್ತದೆ.  ಇಲ್ಲಿ ವೃಕ್ಷವೆಂದರೆ ಸಮಸ್ತ ಪ್ರಪಂಚಕ್ಕೂ ಆಧಾರಭೂತವಾದ ಪರಬ್ರಹ್ಮ. ಅದನ್ನು ಆಶ್ರಯಿಸಿಕೊಂಡಿರುವುದು ಈ ಸಂಸಾರವೆಂಬ ವಲ್ಲಿ. ಹೇಗೆ ನೀರು ಗೊಬ್ಬರಗಳು ವೃಕ್ಷವನ್ನು ಮತ್ತು ವಲ್ಲಿಯನ್ನೂ ಬೆಳೆಸುತ್ತದೆಯೋ ಅಂತೆಯೇ ಆಶೆಯು ಪರಬ್ರಹ್ಮವನ್ನು ಮತ್ತು ಸಂಸಾರವನ್ನು ಎರಡನ್ನೂ ಬೆಳೆಸುತ್ತದೆ. ಆಶಾ ಎಂಬುದಕ್ಕೆ ಕಾಮ ಎಂದು ಇನ್ನೊಂದು ಪದದಿಂದ ಹೇಳುವ ರೂಢಿಯಿದೆ. ವಲ್ಲಿಯು ವೃಕ್ಷವನ್ನು ಆಶ್ರಯಿಸಿಕೊಂಡು ಬೆಳೆದರೆ ಒಳ್ಳೆಯದು. ತಾನು ಮಾತ್ರ ಬೆಳೆದು ವೃಕ್ಷವನ್ನೇ ಸಾಯಿಸುವಂತಾಗಬಾರದಷ್ಟೆ. ಅಂತೆಯೇ ಕಾಮವು ಸಂಸಾರವನ್ನು ಬೆಳೆಸುವುದರ ಜೊತೆ ಜೊತೆ ಸಂಸಾರ ಮೂಲವಾದ ಪರಬ್ರಹ್ಮವನ್ನು ಮೆರೆಸುವಂತೆ ಇರಬೇಕು; ಮರೆಸುವಂತಲ್ಲ. ಬಳ್ಳಿಯು ಮಿತಿಮೀರಿ ಬೆಳೆದರೆ ವೃಕ್ಷವೇ ಕಾಣದಂತಾಗುವ ಸಂದರ್ಭವಿರುತ್ತದೆ. ಅಂತೆಯೇ ಕಾಮವು ಅಧಿಕವಾಗಿ ಸಂಸಾರ ಮಾತ್ರ ಬೆಳೆಯುತ್ತದೆ. ಈ ಸಂಸಾರಕ್ಕೆ ಯಾವುದು ಆರಂಭವೋ ಅದೇ ಅಂತ್ಯವೂ ಹೌದು. ಪರಬ್ರಹ್ಮವೇ ಈ ಸಂಸಾರಕ್ಕೆ ಆರಂಭ, ಅದೇ ಅಂತ್ಯವೂ ಆಗಿದೆ.  ಶ್ರೀರಂಗ ಮಹಾಗುರುಗಳು ಹೇಳಿದ ಕಾಮದ ವಿವರಣೆ ಈ ವಿಷಯಕ್ಕೆ ಹೆಚ್ಚು ಸೂಕ್ತವಾಗಿದೆ - "ಅರ್ಥ-ಕಾಮಗಳು ತುಂಟಹಸುವಿನಂತೆ: ಹಾಲು ಕರೆಯಲು ಹೋದರೆ, ಕೊಂಬಿನಿಂದ ತಿವಿಯುವುವು, ಕಾಲಿನಿಂದ ಒದೆಯುವುವು. ಅಂತಹ ಹಸುಗಳನ್ನು ಹಿಂದೊಂದು ಮುಂದೊಂದು ಕಂಬಗಳಿಗೆ ಕಟ್ಟಿಹಾಕಿ ಹಾಲು ಕರೆಯಬೇಕು: ಧರ್ಮ-ಮೋಕ್ಷಗಳೆಂಬ ಎರಡು ಕಂಬಗಳಿಗೆ ಕಟ್ಟಿಹಾಕಿದಾಗ ಅಮೃತದ ಧಾರೆಯನ್ನೇ ಅವು ಕರೆಯಬಲ್ಲವು!" ಎಂದು. ಅಂತೆಯೇ ಆಶೆಯು ಸಂಸಾರವನ್ನು ಬೆಳೆಸಿ ಸಂಸಾರಮೂಲವಾದ ಪರಂಜ್ಯೋತಿಯನ್ನು ದರ್ಶನಮಾಡಿಸುವಂತಿರಬೇಕೆಂಬುದೇ ಈ ಪ್ರಶ್ನೋತ್ತರದ ಸಾರವಾಗಿದೆ.


ಸೂಚನೆ : 20/4/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Monday, April 21, 2025

ಕೃಷ್ಣಕರ್ಣಾಮೃತ ಕೃ 60 ಷ್ಣಾವತಾರದ ವೈಶಿಷ್ಟ್ಯ: ಸರ್ವಪುರುಷಾರ್ಥಸಿದ್ಧಿ (Krishakarnamrta 60)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಭಗವಂತನ ಅವತಾರಗಳು ಹಲವುಂಟು. ತಾನು ಶೈವನಾದರೂ ವಿಷ್ಣುವಿನ ಅವತಾರಗಳೇ ಲೀಲಾಶುಕನಿಗೆ ಅತ್ಯಂತವಾಗಿ ಇಷ್ಟವೆನಿಸುವಂತಹವು. ಅಷ್ಟೇ ಅಲ್ಲ. ವಿಷ್ಣುವಿನ ಅವತಾರಗಳೂ ಹಲವಿವೆಯಲ್ಲವೇ? ಅವೆಲ್ಲ ಇರುವುವಾದರೂ ಕೃಷ್ಣಾವತಾರವೇ ಆತನಿಗೆ ಪ್ರಿಯವಾದದ್ದು.

ವಿಷ್ಣುವಿನ ಮಿಕ್ಕ ಅವತಾರಗಳೆಂತಹವು? ಮತ್ತು ಕೃಷ್ಣಾವತಾರದ ವಿಶೇಷವೇನು? ಯಾವ ಅಂಶಗಳಲ್ಲಿ ಈ ಅವತಾರವು ಮಿಕ್ಕ ಅವತಾರಗಳಿಗಿಂತ ಆದರಣೀಯವೆಂಬುದಾಗಿ ಲೀಲಾಶುಕನಿಗೆ ತೋರಿದೆ?  - ಎಂಬೀ ವಿಷಯಗಳನ್ನು ಕವಿಯು ಈ ಶ್ಲೋಕದಲ್ಲಿ ತಿಳಿಸಿದ್ದಾನೆ.

ಸರಸಿಜ-ನಯನನೆಂದರೆ ಕಮಲದಂತಿರುವ ಕಣ್ಣುಗಳುಳ್ಳವನು. ಪುಂಡರೀಕನೇತ್ರನೆಂಬ ಪ್ರಸಿದ್ಧಿಯಿರುವುದು ವಿಷ್ಣುವಿಗೇ ಅಲ್ಲವೇ? ವಿಷ್ಣುವಿನ ಅವತಾರಗಳು ಹಲವು. ಅವೆಲ್ಲವೂ ಸರ್ವತೋಭದ್ರಗಳೇ. ಎಂದರೆ ಎಲ್ಲ ಪ್ರಕಾರಗಳಲ್ಲಿಯೂ ಮಂಗಳಕರಗಳೇ. ಕನ್ನಡದಲ್ಲಿ ಭದ್ರವೆಂಬ ಪದಕ್ಕೆ ಬೇರೆ ಅರ್ಥವೇ ವಿದಿತ.

ಹಾಗಿದ್ದ ಮೇಲೆ ಯಾವ ಅವತಾರವಾದರೇನು? ಎಲ್ಲವೂ ಅನುಗ್ರಹ-ಕಾರಕಗಳೇ ಆಯಿತಲ್ಲವೇ? - ಎಂಬ ಪ್ರಶ್ನೆಗೆ ಉತ್ತರವನ್ನು ಶ್ಲೋಕದ ಉತ್ತರಾರ್ಧದಲ್ಲಿ ಕೊಟ್ಟಿದ್ದಾನೆ, ಕವಿ.

ಉತ್ಕಟವಾದ ಉಪಾಸನೆಯನ್ನು ಮಾಡಿದವರಿಗೆ ಫಲಪ್ರದವಾಗತಕ್ಕವು, ಉಳಿದ ಅವತಾರಗಳು. ಆದರೆ ಗೋಪಾಲಕರಿಗೆ, ಎಂದರೆ ಗೊಲ್ಲರಿಗೆ ಸಹ ಮೋಕ್ಷವನ್ನು ಕೊಟ್ಟದ್ದು ಈ ಅವತಾರದಲ್ಲಿಯೇ. ಬರೀ ಗೊಲ್ಲರಿಗೆ ಮಾತ್ರವಲ್ಲ, ಎಂದರೆ ಗಂಡಸರಿಗೆ ಮಾತ್ರವಲ್ಲ, ಸ್ತ್ರೀಯರಿಗೂ, ಎಂದರೆ ಗೊಲ್ಲತಿಯರಿಗೂ, ಮೋಕ್ಷವಿತ್ತವನು ಕೃಷ್ಣನೇ. ಗೊಲ್ಲರಾಗಲಿ ಗೊಲ್ಲತಿಯರಾಗಲಿ, ಶಾಸ್ತ್ರವನ್ನೇನು ಬಲ್ಲವರೇ? ಏನೂ ಅರಿಯದ ಗೊಲ್ಲಗೊಲ್ಲತಿಯರಿಗೆ ಮಾತ್ರವೇ ಅಲ್ಲ, ಗೋವುಗಳಿಗೆ ಸಹ ಮುಕ್ತಿಯನ್ನಿತ್ತವನು ಶ್ರೀಕೃಷ್ಣ!

ಹೀಗೆ ಪಶುಗಳಿಗೆ ಸಹ ಮುಕ್ತಿಯಿತ್ತವನು ಮನುಷ್ಯರಿಗೆ ಕೊಡಲಾರನೇ?

ಹೀಗಾಗಿ, ಸಾಧಾರಣರಿಗೂ ಅತ್ಯಂತ ಸುಲಭನೆನಿಸಿದ ಶ್ರೀಕೃಷ್ಣನೇ ನನಗೆ ಅಚ್ಚುಮೆಚ್ಚು ಎನ್ನುತ್ತಾನೆ, ಲೀಲಾಶುಕ.

ಅವತಾರಾಃ ಸಂತ್ವನ್ಯೇ/

ಸರಸಿಜನಯನಸ್ಯ ಸರ್ವತೋಭದ್ರಾಃ |

ಕೃಷ್ಣಾದ್ ಅನ್ಯಃ ಕೋ ವಾ/

ಪ್ರಭವತಿ ಗೋ-ಗೋಪ-ಗೋಪಿಕಾ-ಮುಕ್ತ್ಯೈ? ||

ಈ ಮುಂದಿನ ಪುಟ್ಟ ಶ್ಲೋಕದಲ್ಲಿ ಕೃಷ್ಣನ ವೇಣುಗಾನವನ್ನು ಕವಿಯು ಚಿತ್ರಿಸಿದ್ದಾನೆ. ಶ್ರೀಕೃಷ್ಣನು ವೃಕ್ಷವೊಂದರ ಬುಡದಲ್ಲಿ ನಿಂತು ವೇಣುವಾದನ ಮಾಡುವ ಕೃಷ್ಣನ ಚಿತ್ರ ಸುಪ್ರಸಿದ್ಧ. ಅದನ್ನು ಎಲ್ಲರೂ ನೋಡಿರುವವರೇ.

ಆದರೆ ಇಲ್ಲಿ ಚಿತ್ರಿಸಿರುವುದು ಶ್ರೀಕೃಷ್ಣನ ವಾಸ-ಕ್ರೀಡೆಗಳನ್ನು, ಆತನ ಆಸನ-ಕ್ರಿಯೆಗಳನ್ನು. ವೃಂದಾವನದಲ್ಲಿ ವಾಸಮಾಡತಕ್ಕವನಲ್ಲವೇ ನಮ್ಮ ಕೃಷ್ಣ? ಎಂದೇ ಆತನನ್ನು ವೃಂದಾವನ-ನಿವೇಶಿತನೆಂದು ಕವಿಯು ಹೇಳಿರುವುದು.

ಇಡೀ ವೃಂದಾವನವೇ ಕೃಷ್ಣನ ಕ್ರೀಡಾಂಗಣ, ಹೌದು. ಆದರೆ ಪ್ರಕೃತ, ಕದಂಬ-ವೃಕ್ಷದ ಮೂಲದಲ್ಲಿ ಖೇಲಿಸುತ್ತಿದ್ದಾನೆ. ಮೂಲವೆಂದರೆ ಬೇರು ಎಂಬ ಅರ್ಥವು ಪ್ರಸಿದ್ಧವಾದರೂ, ವೃಕ್ಷಮೂಲವೆಂದರೆ ಈ ಸಂದರ್ಭದಲ್ಲಿ ಮರದ ಬುಡ.

ಈಗಷ್ಟೆ ಆಟವಾಡುತ್ತಿದ್ದರೂ ಮತ್ತೊಂದು ಕ್ಷಣದಲ್ಲಿ ಎಲ್ಲೋ ಒಂದು ಕಡೆ ನೆಮ್ಮದಿಯಾಗಿ ಕುಳಿತಿದ್ದಾನೆ. ಕೃಷ್ಣನು ಎಷ್ಟಾದರೂ ಯೋಗಿಯಲ್ಲವೇ? ಯೋಗಿಗಳು ಕುಳಿತುಕೊಳ್ಳುವ ಬಗೆಯೇ ಬೇರೆ, ಭಂಗಿಯೇ ಭಿನ್ನ. ಉನ್ನತಯೋಗಸ್ಥಿತಿಗಳಿಗೆ ಹೊಂದುವ/ಸಲ್ಲುವ ಪರಿಯಲ್ಲೇ ಅವರ ನಡೆಯೂ ನಡತೆಯೂ.

ಎಂದೇ ಆತನು ಕುಳಿತಿರುವುದು ಪದ್ಮಾಸನದಲ್ಲಿ. ಆ ಆಸನದಲ್ಲಿ ಕುಳಿತೇ ಕೊಳಲನ್ನೂದುತ್ತಿದ್ದಾನೆ. ಹಾಗೆ ವೇಣುಗಾನಮಾಡುತ್ತಿರುವ ಅಚ್ಯುತನನ್ನು ನಾನು ವಂದಿಸುತ್ತೇನೆ - ಎನ್ನುತ್ತಾನೆ, ಕವಿ. ವಂದಿಸುವುದೆಂದರೆ ನಮಸ್ಕರಿಸುವುದೆಂಬುದು ಪ್ರಸಿದ್ಧಾರ್ಥ. ಸ್ತುತಿಸುವುದೆಂಬರ್ಥವೂ ಅದಕ್ಕಿರುವುದು.

ಕದಂಬ-ಮೂಲೇ ಕ್ರೀಡಂತಂ/

ವೃಂದಾವನ-ನಿವೇಶಿತಂ |

ಪದ್ಮಾಸನ-ಸ್ಥಿತಂ ವಂದೇ

ವೇಣುಂ ಗಾಯಂತಮ್ ಅಚ್ಯುತಮ್ ||

ದೇವರಲ್ಲಿ ಭಕ್ತಿಯಿರಬೇಕೆಂಬ ಮಾತನ್ನು ಯಾರು ಕೇಳಿರುವುದಿಲ್ಲ? ಅಷ್ಟೇ ಅಲ್ಲ, ಭಗವಂತನಲ್ಲಿ ತಮಗಿರುವುದು ನಿಜವಾದ ಭಕ್ತಿಯೇ ಎಂದು ಎಷ್ಟು ಮಂದಿ ಭಾವಿಸಿರುವುದಿಲ್ಲ?

ಹಾಗೆಂದು ಆ ಬಗ್ಗೆ ಆಗೊಮ್ಮೆ ಈಗೊಮ್ಮೆ ಸಂಶಯಗಳೂ ನಮ್ಮೊಳಗೇ ಬರದೇ ಏನಿಲ್ಲ. ಹಾಗಿದ್ದರೆ ಭಗವದ್ಭಕ್ತಿಯೆಂಬುದು ತನ್ನಲ್ಲಿ ಊರಿದೆ - ಎಂಬುದಕ್ಕೆ ನಿಶ್ಚಯವು ದೊರಕುವುದೆಂತು? ಯಾವುದಾದರೂ ಗಿಡವು ಚೆನ್ನಾಗಿ ಬೆಳೆದಿದೆಯೆಂದು ನಾವು ಹೇಗೆ ತೀರ್ಮಾನಿಸುವೆವು? ಅದು ಗೊತ್ತಾಗುವುದು ಅದು ಫಲ ಬಿಟ್ಟಾಗಲೇ, ಅಲ್ಲವೇ? ಹಾಗೆಯೇ ಇಲ್ಲೂ.

"ಭಗವಂತನೇ, ನಿನ್ನಲ್ಲಿ ಭಕ್ತಿಯು ದೃಢವಾದರೆ" - ಎಂದು ಶ್ಲೋಕವನ್ನು ಆರಂಭಿಸುತ್ತಾನೆ, ಲೀಲಾಶುಕ. ಏಕೆ? ಭಕ್ತಿಯು ಕೆಲವೊಮ್ಮೆ ಉಕ್ಕಿ ಹರಿಯುವುದು. ಅದು ಎಂದೋ ಒಮ್ಮೊಮ್ಮೆ ಎಂಬಂತಾದರೆ ಸಾಲದು. ಅದು ದೃಢವಾಗಬೇಕು. ಭಕ್ತಿಯಲ್ಲಿ ಸ್ಥೈರ್ಯವಿರಬೇಕು. ಸ್ಥೈರ್ಯವೆಂದರೆ ಸ್ಥಿರತೆ. ಅದು ಕೂಡ ತೃಪ್ತಿ ತರದು. ಎಂದೇ ಅದು ಸ್ಥಿರತರವಾಗಿರಬೇಕು. ಅತಿಶಯವಾಗಿ ಸ್ಥಿರವಾಗಿದ್ದರೆ ಅದನ್ನು ಸ್ಥಿರತರ ಎನ್ನುತ್ತಾರೆ.

ಅದು ಹಾಗಾಗುವುದು ದೈವದಿಂದ. ದೈವವೆಂದರೆ ಭಾಗ್ಯ. ಹೀಗಾಗಿ ದೈವದಿಂದ ಎಂದರೆ ಸುದೈವದಿಂದ, ಒಳ್ಳೆಯ ಅದೃಷ್ಟದಿಂದ - ಎಂದೇ. ಉತ್ಕೃಷ್ಟವಾದ ಮನುಷ್ಯಪ್ರಯತ್ನದಿಂದ ದೈವವು ಒಲಿಯುವುದು. ಕೆಲವೊಮ್ಮೆ ಅದರೊಂದಿಗೆ ಕಾಲವೂ ಕೂಡಿಬರಬೇಕು, ದೇವತಾನುಗ್ರಹವೂ ಬೇಕು.

ಭಗವಂತನ ಮೂರ್ತಿಗಳು ಹಲವಿದ್ದರೂ, ಕೃಷ್ಣನ ಬಗೆಯೇ ಸೆಳೆತ, ಲೀಲಾಶುಕನಿಗೆ. ಕೃಷ್ಣನ ಮೂರ್ತಿಗಳೂ ಹಲವಿರಬಹುದು. ಆದರೆ ಆತನ ದಿವ್ಯಕಿಶೋರಮೂರ್ತಿಯೇ ಲೀಲಾಶುಕನಿಗೆ ಅತಿಪ್ರಿಯವಾದುದು.

ಅದರಲ್ಲಿ ಭಕ್ತಿ ನೆಲೆಗೊಂಡರೆ ಏನು ಫಲವೆಂಬುದನ್ನು ಶ್ಲೋಕದ ಉತ್ತರಾರ್ಧವು ಹೇಳುತ್ತದೆ. ನಾಲ್ಕು ಪುರುಷಾರ್ಥಗಳೂ ದೊರಕುವುವು. ಅವಲ್ಲಿ ಅತ್ಯಂತ ಮುಖ್ಯವಾದುದೇ ಮೋಕ್ಷ ಅಥವಾ ಮುಕ್ತಿ. ಅದುವೇ ಅತ್ಯಂತ ಕಷ್ಟಸಾಧ್ಯವಾದುದೂ. ಮುಕ್ತಿಯೆಂಬುದನ್ನೇ ಒಬ್ಬ ಸ್ತ್ರೀಯೆಂದುಕೊಳ್ಳಿ. ಅವಳೇ ದಾಸಿಯಾಗಿಬಿಡುತ್ತಾಳೆ ಎನ್ನುತ್ತಾನೆ! ದಾಸಿಯ ವರ್ತನೆ ಹೇಗಿರುತ್ತದೆ? ಕೈಜೋಡಿಸಿ ನಿಂತು ಸೇವೆ ಸಲ್ಲಿಸುವುದು. ಹಾಗೆ ಸಾಕ್ಷಾತ್ ಮುಕ್ತಿಯೇ ಮುಕುಲಿತಾಂಜಲಿಯಾಗಿ ನಮ್ಮನ್ನು ಸ್ವಯಂ ಸೇವಿಸುವುದು. ಅಂಜಲಿಯೆಂದರೆ ಬೊಗಸೆ. ಅದನ್ನು ಮುಕುಲದಂತೆ ಎಂದರೆ ಮೊಗ್ಗಿನಂತೆ ಮಾಡಿಕೊಳ್ಳುವುದು.

ಮುಕ್ತಿಯೆಂಬುದೇ ಸೇವಕಿಯಂತೆ ನಿಂತಮೇಲೆ, ಧರ್ಮ-ಅರ್ಥ-ಕಾಮಗಳ ಬಗ್ಗೆ ಹೇಳಬೇಕಾದುದೇ ಇಲ್ಲ.

ಬಳಿಯೇ ಇದ್ದು ಸೇವೆಸಲ್ಲಿಸುವ ಭಾಗ್ಯವೂ ಇಲ್ಲದವರು ದ್ವಾರಪಾಲಕ ಮುಂತಾದ ಆಳುಕಾಳುಗಳು. ಕರೆದೊಡನೆ ಬರತಕ್ಕವರು - ಎಂದಷ್ಟೇ ಅಲ್ಲ. ಕರೆದು ಕೆಲಸ ಹೇಳಿದರೆ ಅದನ್ನೇ ಭಾಗ್ಯವೆಂದುಕೊಳ್ಳತಕ್ಕವರು. ಒಡೆಯನು ತಮ್ಮನ್ನು ಕರೆದಾನೇ? ಆತನಿಗೆ ಸೇವೆ ಸಲ್ಲಿಸುವ ಭಾಗ್ಯ ದೊರೆತೀತೇ? - ಎಂದು ಎದುರುನೋಡುತ್ತಿರುವವರು ಸಮಯಪ್ರತೀಕ್ಷರು. ಧರ್ಮಾದಿಗಳು ಹಾಗಿರುವರು.

ಹೀಗೆ ಶ್ರೀಕೃಷ್ಣನ ಕಿರ್ಶೋರಮೂರ್ತಿಯಲ್ಲಿ ಭಕ್ತಿಯು ಸುಸ್ಥಿರವಾದರೆ ಅದರ ಫಲವಾದ ನಾಲ್ಕೂ ಪುರುಷಾರ್ಥಗಳು ಹೇಗೆ ಕರಗತವಾಗುವುವೆಂಬುದನ್ನು ಅವುಗಳಲ್ಲಿಯ ತಾರತಮ್ಯನಿರೂಪಣೆಯೊಂದಿಗೆ ಲೀಲಾಶುಕನು ತಿಳಿಸಿದ್ದಾನೆ.

ಭಕ್ತಿಃ ತ್ವಯಿ ಸ್ಥಿರತರಾ ಭಗವನ್ ಯದಿ ಸ್ಯಾತ್/

ದೈವೇನ ನಃ ಫಲಿತ-ದಿವ್ಯ-ಕಿಶೋರ-ವೇಷೇ |

ಮುಕ್ತಿಃ ಸ್ವಯಂ ಮುಕುಲಿತಾಂಜಲಿ ಸೇವತೇಽಸ್ಮಾನ್/

ಧರ್ಮಾರ್ಥಕಾಮಗತಯಃ ಸಮಯಪ್ರತೀಕ್ಷಾಃ ||

ಸೂಚನೆ : 21/04/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Monday, April 14, 2025

ಪ್ರಶ್ನೋತ್ತರ ರತ್ನಮಾಲಿಕೆ 11 (Prasnottara Ratnamalike 11)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ ೧೧. ಕಳ್ಳರು ಯಾರು ?

ಉತ್ತರ - ವಿಷಯಗಳು.


ಈ ಮುಂದಿನ ಪ್ರಶ್ನೆ ಕಳ್ಳರು ಯಾರು? ಎಂಬುದಾಗಿ. ಅದಕ್ಕೆ ಉತ್ತರ ವಿಷಯ. ಕಳ್ಳರು ವಸ್ತುವನ್ನು ಕದಿಯುವವರು. ಪ್ರತಿಯೊಂದು ವಸ್ತುವಿಗೂ ಒಂದು ಸ್ವಾಮೀ ಅಂದರೆ ಆ ವಸ್ತುವಿಗೆ ಆ ವ್ಯಕ್ತಿಯ ಅಧಿಕಾರ ಎಂಬುದು ಇರುತ್ತದೆ. ಆ ವಸ್ತುವಿನ ಸ್ವಾಮಿಯ ಅನುಮತಿ ಪಡೆದು ಆ ವಸ್ತುವನ್ನು ಸ್ವೀಕರಿಸುವುದು ಸರಿಯಾದ ಕ್ರಮ. ಆದರೆ ವಸ್ತುವಿನ ಸ್ವಾಮಿಯ ಅನುಮತಿಯನ್ನು ಪಡೆಯದೆ ಆ ವಸ್ತುವನ್ನು ಬಳಸಿದರೆ ಅದನ್ನು ಕಳ್ಳತನ ಅಥವಾ ಚೌರ್ಯ ಎಂಬುದಾಗಿ ಕರೆಯಲಾಗುತ್ತದೆ. ಆ ವಸ್ತುವು ಆತನ ಭೋಗದ ವಿಷಯವಾಗಿರುತ್ತದೆ. ಅದನ್ನು ಅನುಭವಿಸಲು ಆತನಿಗೆ ಮಾತ್ರ ಅವಕಾಶವಿರುತ್ತದೆ. ಅವನನ್ನು ಬಿಟ್ಟು ಉಳಿದವರು ಆ ವಸ್ತುವನ್ನು ಬಳಸಬೇಕಾದರೆ ಆ ಪದಾರ್ಥದ ಸ್ವಾಮಿಯ ಅನುಜ್ಞೆ ಅತ್ಯಂತ ಅವಶ್ಯ. ಪ್ರಸ್ತುತ ಪ್ರಶ್ನೆಯಲ್ಲಿ ವಿಷಯಗಳು ಆ ಚೋರರು ಎಂಬುದಾಗಿ ಹೇಳಲಾಗಿದೆ. ಅಂದರೆ ಈ ವಿಷಯಗಳು ಯಾವ ರೀತಿಯಾಗಿ ಸ್ವಾಮಿಯ ಅನುಮತಿ ಇಲ್ಲದೆ ಆ ವಸ್ತುವನ್ನು ಕದಿಯುವರು ಎಂಬುದು ಇಲ್ಲಿ ವಿವೇಚಿಸಬೇಕಾದ ವಿಷಯ.


ವಿಷಯ ಎಂದರೆ ವಿಷಿಣೋತಿ- ಬಧ್ನಾತಿ ಯಾವುದು ನಮ್ಮನ್ನು ಕಟ್ಟಿ ಹಾಕುತ್ತದೆಯೋ ಅದಕ್ಕೆ 'ವಿಷಯ' ಎಂಬುದಾಗಿ ಕರೆಯಲಾಗಿದೆ. ಶಬ್ದ, ಸ್ಪರ್ಶ, ರೂಪ, ರಸ, ಗಂಧ ಈ ಐದು ವಿಷಯಗಳಾಗಿವೆ. ರೂಪವು ಕಣ್ಣನ್ನು, ಗ್ರಂಧವು ಮೂಗನ್ನು, ರಸವು ನಾಲಿಗೆಯನ್ನು, ಸ್ಪರ್ಶವು ಚರ್ಮವನ್ನು, ಶಬ್ದವು ಕಿವಿಯನ್ನು ಬಂಧಿಸುತ್ತದೆ. ಅಂದರೆ ಈ ಕಣ್ಣಿನ ಎದುರುಗಡೆ ಯಾವುದಾದರೂ ಒಂದು ವಸ್ತು ಇದೆ ಅಂತಾದರೆ ಕಣ್ಣು ಆ ವಸ್ತುವಿನಿಂದ ಆಚೆಗೆ ಹೋಗದೆ ಇರುವಂತೆ ತಡೆಯುತ್ತದೆ. ಅದಕ್ಕೆ ಕಾರಣ ಎದುರುಗಡೆ ಇರುವಂತಹ ಆ ವಸ್ತುವಿನ ರೂಪ. ಅದು ನಮ್ಮ ಕಣ್ಣನ್ನು ಬಂಧಿಸುತ್ತದೆ ಎಂಬುದಾಗಿ ಹೇಳಬಹುದು. ಆತ್ಮವು ಅಥವಾ ಜೀವವು ಈ ಇಂದ್ರಿಯಗಳನ್ನು ಬಳಸಿಕೊಂಡು ಶಬ್ದಸ್ಪರ್ಶಾದಿ ವಿಷಯಗಳನ್ನು ಅನುಭವಿಸಬೇಕು. ಈ ಇಂದ್ರಿಯಗಳು ಆತ್ಮದ ಅಪ್ಪಣೆಯನ್ನು ಪಡೆದು ವಿಷಯವನ್ನು ಅನುಭವಿಸಬೇಕಾಗುತ್ತದೆ. ಇವೆಲ್ಲವೂ  ಜೀವದ ಅಧಿಕಾರದಲ್ಲಿಯೇ ಇರಬೇಕಾದದ್ದು ಸಹಜವಾದದ್ದು. ಆದರೆ ಈ ವಿಷಯಗಳು ಜೀವದ ಅಂದರೆ ಸ್ವಾಮಿಯ ಅನುಮತಿ ಇಲ್ಲದೆ ಅವು ಬೇರೆ ಬೇರೆ ವಸ್ತುವನ್ನು - ವಿಷಯವನ್ನು ಇಷ್ಟಪಡುವಂತಾಗುತ್ತದೆ. ಹಾಗಾಗಿ ಅವು ನಮ್ಮ ಜೀವದ ಅರಿವನ್ನು ಅದರ ವಿಷಯವನ್ನು ಅನುಭವಿಸದೆ ಇರುವಂತೆ ಮಾಡುತ್ತದೆ. ಯಾವಾಗ? ಎಷ್ಟು ವಿಷಯವನ್ನು ಅನುಭವಿಸಬೇಕು? ಎಂಬ ನಿಯಂತ್ರಣ ಈ ಇಂದ್ರಿಯಗಳಿಗೆ ಇರುವುದಿಲ್ಲ. ಈ ಇಂದ್ರಿಯಗಳನ್ನು ಆತ್ಮದ ಅರಿವಿಲ್ಲದಂತೆ ರೂಪಾದಿ ವಿಷಯಗಳು ಇಂದ್ರಿಯಗಳ ದಿಕ್ಕನ್ನೇ ಬದಲಿಸುತ್ತದೆ. ವಿಷಯಗಳ ದಾಸರಂತೆ ವರ್ತಿಸುತ್ತವೆ. ಆಗ ಶರೀರವು ಅನಾರೋಗ್ಯಪೀಡಿವಾಗುತ್ತದೆ. ಅಷ್ಟೇ ಅಲ್ಲ ಮನಸ್ಸು ಕೂಡ ನೆಮ್ಮದಿಯನ್ನು ಕಳೆದುಕೊಳ್ಳುದೆ. ಇದೆಲ್ಲದಕ್ಕೂ ಕಾರಣ ರೂಪಾದಿ ವಿಷಯಗಳು ಆತ್ಮದ ಅನುವಭವಕ್ಕೆ ಕಾರಣವಾಗದೆ ಆತ್ಮವನ್ನು ಮರೆಸಿ ಇಂದ್ರಿಯಾರಾಮರಾಗುವಂತೆ ಮಾಡುತ್ತವೆ. ಆದ್ದರಿಂದ ಈ ವಿಷಯಗಳನ್ನು ಕಳ್ಳರು, ಚೋರರು ಎಂಬುದಾಗಿ ಅಧ್ಯಾತ್ಮದ ಭಾಷೆಯಲ್ಲಿ ಹೇಳುವ ಅಭ್ಯಾಸ ಬಂದಿದೆ. 


ಸೂಚನೆ : 13/4/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 132 (Vyaasa Vikshita 132)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಯಾವ ಸಾವು ವಾಸಿ? ಇಲಿಯಿಂದಲೋ, ಅಗ್ನಿಯಿಂದಲೋ?


ಖಾಂಡವವನದಲ್ಲಿ ಹೀಗೆ ಅಗ್ನಿಯು ಆವರಿಸುತ್ತಾ ಬರುತ್ತಿರಲು, ತನ್ನ ಮಕ್ಕಳನ್ನು ಈ ಅಗ್ನಿಯ ದೆಸೆಯಿಂದ ಬಿಡಿಸುವ ಬಗೆ ಹೇಗೆ? - ಎಂಬುದನ್ನು ಅರಿಯಲಾರದೆ ನೊಂದಳು, ಜರಿತೆ. ಹೀಗೆಲ್ಲ ತನ್ನ ದುಃಖವನ್ನು ಹೇಳಿಕೊಳ್ಳುತ್ತಿದ್ದ ತಾಯಿ ಜರಿತೆಯನ್ನು ಕುರಿತು, ಆ ಶಾರ್ಙ್ಗಕಗಳು ಹೇಳಿದವು: "ಅಮ್ಮ, ನಮ್ಮ ಮೇಲಣ ಈ ಪುತ್ರಸ್ನೇಹವನ್ನು ತೊರೆ; ಈ ಅಗ್ನಿಯು ಎಲ್ಲಿಲ್ಲವೋ ಅಲ್ಲಿಗೆ ನೀ ಹಾರಿಕೋ! ಏಕೆನ್ನುವೆಯಾ? ಒಂದು ವೇಳೆ ನಾವುಗಳು ಸತ್ತರೆ, ನಿನಗೆ ಮುಂದೆ ಮಕ್ಕಳಾಗುವರು. ಆದರೆ ತಾಯಿ, ನೀನೇ ಇಲ್ಲವಾದರೆ, ನಮ್ಮ ಕುಲಸಂತತಿಯೆಂಬುದೇ ಇರದು.


ಇವೆರಡೂ ಅಂಶಗಳನ್ನು ಗಮನಿಸಿಕೊಂಡು ನಮ್ಮ ಕುಲಕ್ಕೆ ಯಾವುದು ಕ್ಷೇಮವಾದೀತೋ ಅದನ್ನು ಮಾಡಲು ಇದುವೇ ಶ್ರೇಷ್ಠವಾದ ಕಾಲವಾಗಿದೆ, ಅಮ್ಮಾ. ಸರ್ವರಿಗೂ ವಿನಾಶವನ್ನು ತರತಕ್ಕಂತಹುದು, ನಮ್ಮಗಳ ಮೇಲಣ ಪ್ರೀತಿ; ಅದೀಗ ಬೇಡ. ನಮ್ಮ ತಂದೆಗೆ ಉತ್ತಮವಾದ ಲೋಕಗಳು ಬೇಕಾಗಿವೆ. ಆದುದರಿಂದ ಆತನ ಈ ಕರ್ಮವು ವ್ಯರ್ಥವಾಗುವುದು ಬೇಡ." - ಎಂದು. ಆಗ ಜರಿತೆಯು ಹೇಳಿದಳು:


ಇದೋ ಈ ಮರದ ಬುಡದಲ್ಲಿ ನೆಲದಲ್ಲೊಂದು ಇಲಿಬಿಲವಿದೆ. ಅದರೊಳಗೆ ಬೇಗನೆ ನೀವು ನುಗ್ಗಿರಿ. ಬೆಂಕಿಯ ದೆಸೆಯಿಂದ ನಿಮಗಲ್ಲಿ ಭಯವಿರದು.

ಆ ಬಳಿಕ ನಾನು ಈ ಬಿಲದ ಬಾಯನ್ನು ಧೂಳಿನಿಂದ ಮುಚ್ಚಿಬಿಡುತ್ತೇನೆ, ಮಕ್ಕಳಿರಾ. ಹೀಗೆ ಮಾಡಿದಲ್ಲಿ ಅಗ್ನಿಗೆ ತಕ್ಕ ಪ್ರತೀಕಾರವನ್ನೇ ನಾವು ಮಾಡಿದಂತಾಗುತ್ತದೆ. ಆಮೇಲೆ, ಎಂದರೆ ಬೆಂಕಿಯಾರಿದ ನಂತರ, ನಾನು ಬರುವೆ, ಈ ಧೂಳಿನ ರಾಶಿಯನ್ನು ತೆಗೆದುಹಾಕುವುದಕ್ಕೋಸ್ಕರ. ಅಗ್ನಿಯ ದೆಸೆಯಿಂದ ನೀವುಗಳು ಬಿಡುಗಡೆಹೊಂದಲಿಕ್ಕಾಗಿ ನನ್ನೀ ಮಾತು. ಅದು ನಿಮಗೆ ರುಚಿಸುವುದೆಂದುಕೊಳ್ಳುತ್ತೇನೆ – ಎಂದು.


ಆಗ ಆ ಶಾರ್ಙ್ಗಕಗಳು ಹೇಳಿದವು: "ರೆಕ್ಕೆಯಿನ್ನೂ ಬಂದಿಲ್ಲದ ನಾವು ಇನ್ನೂ ಮಾಂಸದ ಮುದ್ದೆಗಳಂತಿದ್ದೇವೆ, ಅಲ್ಲವೇ? ಹಾಗಿರುವ ನಮ್ಮನ್ನು ಇಲಿಯು ತಿಂದೇ ಹಾಕೀತು - ಏಕೆಂದರೆ ಇಲಿಯು ಹಸೀಮಾಂಸವನ್ನು ತಿನ್ನುವ ಪ್ರಾಣಿ. ಈ ಭಯವನ್ನು ಎದುರುನೋಡುತ್ತಿರುವ ನಾವು ಇಲ್ಲಿ ಪ್ರವೇಶಿಸಲಾರೆವು. ಬದಲಾಗಿ, ಹೀಗೆ ಯೋಚಿಸೋಣ: ಅಗ್ನಿಯು ನಮ್ಮನ್ನು ಸುಡದಿರುವುದೆಂತು? ಇಲಿಯು ನಮ್ಮನ್ನು ನಾಶಪಡಿಸದಿರುವುದೆಂತು? ನಮ್ಮ ತಂದೆಯು ತಂದೆಯೆಂದಾಗಿರುವುದು - ಎಂದರೆ ನಮಗೆ ಜನ್ಮವಿತ್ತಿರುವುದು - ವ್ಯರ್ಥವಾಗದಿರುವುದೆಂತು? ನಮ್ಮ ತಾಯಿಯೂ ಉಳಿದಾಳು ಹೇಗೆ? – ಇದಕ್ಕೆ ಮಾರ್ಗವನ್ನು ಹುಡುಕಬೇಕಾಗಿದೆ.


ಬಿಲದೊಳಗೆಂದರೆ ಇಲಿಯ ದೆಸೆಯಿಂದಾಗಿ ನಾಶ ನಿಶ್ಚಿತ; ಆಕಾಶದಲ್ಲಿ ಸಂಚರಿಸುವ ಪಕ್ಷಿಯೆಂದರೆ ಅಗ್ನಿಯಿಂದಾಗಿ ನಾಶ ನಿಶ್ಚಿತ; ಎರಡನ್ನೂ ತೋಲನೆ ಮಾಡಿದರೆ, ಅಗ್ನಿಯಲ್ಲಿ ನಾವು ಸುಟ್ಟುಹೋಗುವುದೇ ವಾಸಿ, ಇಲಿಗೆ ಆಹಾರವಾಗಿಬಿಡುವುದಲ್ಲ. ಬಿಲದೊಳಗೆ ಇಲಿಯು ನಮ್ಮನ್ನು ತಿಂದುಹಾಕಿತೆಂದರೆ ಅದು ಗರ್ಹಿತವಾದ ಮರಣ. ಶಿಷ್ಟರ ಮಾತಿನಂತೆ ಶರೀರಕ್ಕೆ ಅಗ್ನಿಯಿಂದ ದಹನವಾಗುವುದೆಂಬುದೇ ಲೇಸು" - ಎಂದು. ಆಗ ಜರಿತೆ ಹೇಳಿದಳು: "ಈ ಬಿಲದಿಂದ ಹೊರಬಂದ ಇಲಿಯನ್ನು ಗಿಡುಗವೊಂದು ಹಾರಿಸಿಕೊಂಡು ಹೋಯಿತು. ಅದನ್ನು ನಾನೇ ಕಂಡೆ. ಅದು ಈ ಇಲಿಮರಿಯನ್ನು ತನ್ನ ಕಾಲುಗಳಲ್ಲಿ ಹಿಡಿದುಕೊಂಡು ಹೊರಟುಹೋಯಿತು. ಎಂದೇ ಈ ಬಿಲದಲ್ಲಿ ನಿಮಗೆ ಭಯವಿಲ್ಲವೆಂದು ನಾ ಹೇಳಿದುದು" - ಎಂದು.


ಸೂಚನೆ : 13/4/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.


Sunday, April 13, 2025

ಅಷ್ಟಾಕ್ಷರೀ 79 ಯಸ್ಮಿನ್ ದೇಶೇ ಮೃಗಃ ಕೃಷ್ಣಃ (Ashtakshari 79)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


 ಕೃಷ್ಣಮೃಗವು ವಿಹರಿಸುವೆಡೆಯೇ ಪವಿತ್ರವಾದದ್ದು

ಭಾರತೀಯಸಾಹಿತ್ಯದಲ್ಲಿ ಮೊದಲಿನಿಂದಲೂ  ಸಿಂಹಕ್ಕೇ ಮೃಗರಾಜನೆಂಬ ಪಟ್ಟ. ರಾಣಾಪ್ರತಾಪ ಸಿಂಗ್, ಭಗತ್ ಸಿಂಗ್ - ಮುಂತಾದವರ ಹೆಸರಿಗೂ ಶೋಭೆಕೊಡಬಲ್ಲ, ಠೀವಿಯ ನಡೆಯ ನಿರ್ಭಯಪ್ರಾಣಿಯೇ ಈ ಕಂಠೀರವ. ಆದರೂ ಭಾರತದ ರಾಷ್ಟ್ರಿಯಪ್ರಾಣಿಯೆಂದು ಘೋಷಿಸಿದುದು ವ್ಯಾಘ್ರವನ್ನೇ. ಎಲ್ಲಾ ರಾಜ್ಯಗಳಲ್ಲೂ ಅದರ ಅಸ್ತಿತ್ವ, ವಿಶಿಷ್ಟಬಲ-ಪರಾಕ್ರಮಗಳು, ಮುಂತಾದುವನ್ನಾಧರಿಸಿ ಅದಕ್ಕೀ ಪದವಿಯು ದಕ್ಕಿತು- ೧೯೭೩ರಲ್ಲಿ. ಇನ್ನು ಆನೆಯೋ? ಸಸ್ಯಾಹಾರಿಯಾದರೂ ಬೃಹದಾಕಾರದ ಪ್ರಾಣಿ. ಬಲಶಾಲಿಯಾದರೂ ಪಳಗಿಸಬಹುದಾದದ್ದು. ಅರಸರಿಗೆ ಅಚ್ಚುಮೆಚ್ಚಾಗಿದ್ದು,ಮೆರವಣಿಗೆ-ಉತ್ಸವಗಳಿಗೆ ಮೆರುಗು ತರುವುದೆಂಬ ಕಾರಣಕ್ಕೆ, ರಾಷ್ಟ್ರಿಯಸಾಂಸ್ಕೃತಿಕ-ಪ್ರಾಣಿಯೆಂಬ ಬಿರುದನ್ನು ಪಡೆಯಿತು - ೨೦೧೦ರಲ್ಲಿ . ಸರ್ವವಂದ್ಯವಾದ ಗೋವಿಗೆ ಸಹ ಇವಕ್ಕೆ ಸರಿಸಮವೆನಿಸುವ ಸ್ಥಾನಗಳು ಸಲ್ಲಲಿಲ್ಲ! 

ಭಾರತದೇಶದ ಪ್ರಾಜ್ಞರು ಪೃಥಿವಿಯಲ್ಲಿರುವ ಮಾನವರೆಲ್ಲರಿಗೂ ಮಾರ್ಗದರ್ಶಕರಾಗಬಲ್ಲರು - ಎಂದು ಮನುಸ್ಮೃತಿಯು ಭಾರತದ ವಿಶ್ವಗುರುತ್ವವನ್ನು ಸಾರಿದೆಯಷ್ಟೆ. ಆ ಸಂದರ್ಭದಲ್ಲಿಯೇ ಬ್ರಹ್ಮಾವರ್ತ, ಬ್ರಹ್ಮರ್ಷಿದೇಶ, ಆರ್ಯಾವರ್ತಗಳನ್ನು ಕುರಿತು ಅದು ಹೇಳುತ್ತದೆ. ಹಾಗೆ ಹೇಳುವಾಗ ಯಾವುದು ಶ್ರೇಷ್ಠದೇಶ, ಯಾವುದಲ್ಲವೆಂಬ ವಿಂಗಡಣೆಯನ್ನದು ಮಾಡುತ್ತದೆ. ಯಾಜ್ಞವಲ್ಕ್ಯಸ್ಮೃತಿಯು ಸಹ, ಪವಿತ್ರವೆನಿಸುವ ದೇಶವನ್ನು ಆರಂಭದಲ್ಲೇ ಗುರುತಿಸಿ, ಅಲ್ಲಿ ಆಚರಿಸಿ ಸಾಧಿಸಬೇಕಾದುದನ್ನು ಹೇಳಹೊರಡುತ್ತದೆ. 

ಈ ಎರಡು ಸ್ಮೃತಿಗಳೂ ಈ ಪುಣ್ಯಭೂಮಿಗೆ ಕೊಡುವ ಒಂದು ವಿಶಿಷ್ಟಲಕ್ಷಣವಿದೆ. ಯಾವ ದೇಶದಲ್ಲಿ "ಸ್ವಭಾವತಃ" ಕೃಷ್ಣಮೃಗದ ವಾಸವಿರುತ್ತದೋ (ಯಸ್ಮಿನ್ ದೇಶೇ ಮೃಗಃ ಕೃಷ್ಣಃ), ವಿಹಾರವಿರುತ್ತದೋ, ಅದುವೇ ಶ್ರೇಷ್ಠಭೂಮಿ - ಎಂದು. ಯಾಜ್ಞವಲ್ಕ್ಯಸ್ಮೃತಿಗೆ ಕರ್ಣಾಟಕದ ವಿಜ್ಞಾನೇಶ್ವರನು ಬರೆದಿರುವ "ಮಿತಾಕ್ಷರಾ" ವ್ಯಾಖ್ಯೆಯೂ ಕೃಷ್ಣಸಾರಮೃಗವು "ಸ್ವಚ್ಛಂದವಾಗಿ" ಎಲ್ಲಿ ಸಂಚರಿಸುತ್ತದೆಯೋ ಅದು ಎನ್ನುತ್ತದೆ. ಸ್ವಭಾವತಃ ವಾಸಮಾಡುವುದೆಂದರೇನೆಂದು ವಿವರಿಸುತ್ತಾ, ಮನುಸ್ಮೃತಿವ್ಯಾಖ್ಯಾನಕಾರರಾದ ಮೇಧಾತಿಥಿ-ಕುಲ್ಲೂಕಭಟ್ಟರು, "ದೇಶಾಂತರದಿಂದ ಏನೋ ಉಪಾಯಮಾಡಿಯೋ, ಮತ್ತಾವುದೋ ಉದ್ದೇಶಕ್ಕೆಂದೋ ತರಲಾದ ಮೃಗವಾಗಿರಬಾರದು ಅದು", ಎನ್ನುತ್ತಾರೆ.  ಹೀಗೆ ಅನ್ವಯಮುಖವಾಗಿ ಹೇಳಿದ್ದನ್ನು ವ್ಯತಿರೇಕಮುಖವಾಗಿಯೂ ದೃಢಪಡಿಸಿ ಹೇಳಿದೆ. ಅನ್ವಯಮುಖವಾಗಿ ಎಂದರೆ, "ಇದು ಹೀಗಿದ್ದರೆ ಅದು ಹಾಗಾಗುತ್ತದೆ" - ಎಂಬ ಲೆಕ್ಕ. ವ್ಯತಿರೇಕಮುಖವಾಗಿ ಎಂದರೆ, "ಇದು ಹೀಗಿಲ್ಲದಿದ್ದರೆ ಅದು ಹಾಗಾಗದು" - ಎಂಬ ಲೆಕ್ಕ. 

ಈ ಲೆಕ್ಕದ ಮೇರೆಗೆ, ಕೃಷ್ಣಸಾರಮೃಗದ ಸಹಜವಾದ ಇರುವಿಕೆ, ಸ್ವಚ್ಛಂದವಾದ ಸಂಚಾರಗಳು ಇದ್ದಲ್ಲಿ ಅದು ಶ್ರೇಷ್ಠವಾದ ದೇಶ, ಹಾಗಿಲ್ಲದಿದ್ದಲ್ಲಿ ಅದು ಮ್ಲೇಚ್ಛದೇಶ - ಎಂದಿದೆ. ಶ್ರೇಷ್ಠವಾದ ದೇಶವೆಂಬುದನ್ನು ಸೂಚಿಸಲು "ಅದು ಯಜ್ಞಿಯದೇಶ" - ಎಂದೂ ಈ ಸ್ಮೃತಿಗಳು ಹೇಳಿವೆ.  ಆದರೆ ಇಲ್ಲಿ ಬರಬಹುದಾದ ಪ್ರಶ್ನೆಯೆಂದರೆ, ಮೇಲೆ ಹೇಳಿದ ಬಗೆಬಗೆಯ ಹೆಗ್ಗಳಿಕೆಗಳುಳ್ಳ ಗೋ-ಗಜ-ಸಿಂಹ-ವ್ಯಾಘ್ರಗಳನ್ನು ಬಿಟ್ಟು ಕೃಷ್ಣಸಾರಮೃಗಕ್ಕೆ ಕೊಟ್ಟಿರುವ ಈ ವಿಶಿಷ್ಟಸ್ಥಾನಕ್ಕೆ ಕಾರಣವೇನೆಂಬುದು.   ಈ ಪ್ರಶ್ನೆಯನ್ನು ತಾವೇ ಎತ್ತಿ ಇದಕ್ಕೊಂದು ಸಮರ್ಪಕವಾದ ಉತ್ತರವನ್ನು ಶ್ರೀರಂಗಮಹಾಗುರುಗಳು ಬಹಳ ಹಿಂದೆಯೇ ಕೊಟ್ಟಿರುವರು. ಅವರ ಮಾತಿನ ಕೆಲಮುಖ್ಯಾಂಶಗಳು ಹೀಗಿವೆ. 

"ಕೃಷ್ಣಸಾರಮೃಗವು ಯಜ್ಞಿಯವಾದ ಮೃಗ. ಎಷ್ಟೆಂದರೆ, ಈ ಮೃಗದ ಪ್ರತಿಯೊಂದು ಭಾಗವೂ ಯಜ್ಞದಲ್ಲಿ ಉಪಯೋಗಕ್ಕೆ ಬರತಕ್ಕದ್ದಾಗಿದೆ. ಇದರ ಚರ್ಮವೂ ಶೃಂಗಗಳೂ ಯಜ್ಞೀಯ ಸಾಮಗ್ರಿಗಳು. ಅಲ್ಲದೆ, ಇದರ ಚಲನ-ವಲನಗಳು ಮಾನವನ ಪ್ರಜ್ಞಾಕೇಂದ್ರದ ಕೆಲವು ಗ್ರಂಥಿಗಳ ಮೇಲೆ ಕೆಲಸ ಮಾಡುತ್ತವೆ. ಋಷಿಗಳಿಗೆ ಬೇಕಾದ ನೀವಾರ-ದರ್ಭೆಗಳು ಇರುವ ಪ್ರದೇಶಗಳಲ್ಲಿ ಇವು ವಾಸಿಸುವುವು."  ಎಲ್ಲಿ ಕ್ರೂರಪ್ರಾಣಿಗಳಿರುವುವೋ ಅಲ್ಲಿ ಕೃಷ್ಣಸಾರಗಳಿರ(ಲಾರ)ವು. ಬದಲಾಗಿ, ಎಲ್ಲಿ ದರ್ಭಸಮೃದ್ಧಿಯಿರುವುದೋ ಅಲ್ಲಿಯೇ ಕೃಷ್ಣಸಾರಗಳಿರುವುದೂ. ಎಲ್ಲಿ ಹಿಂಸ್ರಪ್ರಾಣಿಗಳಿರವೋ,ಹಾಗೂ ದರ್ಭೆಯು ಪುಷ್ಕಳವಾಗಿ ದೊರೆಯುವುದೋ,  ಅಲ್ಲಿಯೇ ತಪೋವನಗಳು ಏಳುವುದು. ಎಲ್ಲಿ ತಪೋವನಗಳಿರುವುವೋ ಅಲ್ಲಿಯೇ ಯಜ್ಞಯಾಗಾದಿಗಳು ನೆರವೇರುವುವು. ಎಲ್ಲಿ ತಪೋ-ಯಜ್ಞಗಳು ಸಂಪನ್ನವಾಗುವುವೋ ಅಲ್ಲಿ ಧರ್ಮವು ಸುಪ್ರತಿಷ್ಠಿತವಾಗುವುದು. ಋಷಿಗಳು ನಡೆಸುತ್ತಿದ್ದ ಯಜ್ಞಗಳು ಧರ್ಮಸಾರವಾದ ಲೋಕಕಲ್ಯಾಣಾರ್ಥವಾಗಿಯೇ ಇರುತ್ತಿದ್ದವು. ಎಲ್ಲಿ ಧರ್ಮವು ನೆಲೆಗೊಂಡಿರುವುದೋ ಅಲ್ಲೇ ಪ್ರಜೆಗಳು ಪರಸ್ಪರ-ಹಿತಚಿಂತಕರಾಗಿದ್ದು ನೆಮ್ಮದಿಯನ್ನು ಕಾಣುವುದು. 

ಈ ಕಾರಣಕ್ಕಾಗಿಯೇ, "ತಪಸ್ವಿಗಳ ಯಜ್ಞ-ತಪಸ್ಸುಗಳು ನಿರ್ವಿಘ್ನವಾಗಿ ನಡೆಯುತ್ತಿವೆ ತಾನೆ?" – ಎಂಬ ಕಾಳಜಿಯನ್ನು ರಾಜರುಗಳು ವಹಿಸುತ್ತಿದ್ದುದು. ಹಾಗೂ, ಪ್ರಜೆಗಳ ಸುಖವನ್ನು ಲೆಕ್ಕಿಸದೆ ತಮ್ಮ ಅಧಿಕಾರ-ಐಶ್ವರ್ಯಗಳಲ್ಲಿ ಮೆರೆಯುತ್ತಾ ಲೋಕಕಂಟಕರಾಗಿದ್ದ ರಾಕ್ಷಸರಾದರೂ ಯಜ್ಞಕಾರ್ಯಗಳಿಗೇ ಧ್ವಂಸವನ್ನು ಉಂಟುಮಾಡುತ್ತಿದ್ದುದು. ಹೀಗಾಗಿ, ದೇಶದ ಸಲ್ಲಕ್ಷಣವನ್ನು ಮನು-ಯಾಜ್ಞವಲ್ಕ್ಯರು ಕೊಟ್ಟಿರುವುದು ಅತ್ಯಂತಸಾರ್ಥಕವಾಗಿದೆ. ಸ್ವಾರ್ಥ-ರಹಿತರಾಗಿ ಲೋಕಹಿತಕ್ಕಾಗಿಯೇ ಶ್ರಮಿಸುತ್ತಿದ್ದ ಋಷಿಗಳ ಮಾರ್ಗದರ್ಶನದಲ್ಲಿದ್ದ ನಾಡು ವಿಶ್ವಗುರುವಾದದ್ದರಲ್ಲಿ ಆಶ್ಚರ್ಯವಾದರೂ ಏನು?  ಮತ್ತದೇ ಸ್ಥಾನವು ಮರುಕಳಿಸಲಾ(ಬಾ)ರದೇನು? 

ಸೂಚನೆ: 12/4//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.