Sunday, November 23, 2025

ಕೃಷ್ಣಕರ್ಣಾಮೃತ 83 ರಾಜಸೂಯ ಮಾಡುವ ಬಗ್ಗೆ ಶ್ರೀಕೃಷ್ಣನ ಅಭಿಪ್ರಾಯ (Krishakarnamrta 83)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ರಾಜಸೂಯಯಾಗವನ್ನು ಮಾಡಲು ಸಂಕಲ್ಪಿಸಿದ್ದ ಯುಧಿಷ್ಠಿರನು ಶ್ರೀಕೃಷ್ಣನ ಅಭಿಪ್ರಾಯ-ಮಾರ್ಗ-ದರ್ಶನಗಳನ್ನು ಪಡೆಯಬೇಕೆಂದೆಣಿಸಿ, ಅವನಲ್ಲಿಗೆ ದೂತನೊಬ್ಬನನ್ನು ಕಳುಹಿಸಿದ್ದನು. 

ದೂತನ ಮಾತನ್ನು ಕೇಳಿದ ಯಾದವವೀರನಾದ ಶ್ರೀಕೃಷ್ಣನಾದರೂ ತನ್ನ ದರ್ಶನವನ್ನು ಅಪೇಕ್ಷಿಸುತ್ತಿದ್ದ ಯುಧಿಷ್ಠಿರನನ್ನು ಕಾಣಲೆಂದು, ದೂತನಾದ ಆ ಇಂದ್ರಸೇನನೊಂದಿಗೆ ಯುಧಿಷ್ಠಿರನಿದ್ದ ಇಂದ್ರಪ್ರಸ್ಥಕ್ಕೇ ಸಾಗಿದನು.

ಆಗಮಿಸಿದ ಶ್ರೀಕೃಷ್ಣನನ್ನು ಯುಧಿಷ್ಠಿರನೂ ಭೀಮನೂ ಅರ್ಚಿಸಿದರು. ಆಮೇಲೆ ಕೃಷ್ಣನು ಕುಂತಿಯನ್ನು ಹೋಗಿಕಂಡನು. ಹಾಗೆಯೇ ಅರ್ಜುನ ಮತ್ತು ನಕುಲ-ಸಹದೇವರೂ ಕೃಷ್ಣನನ್ನು ಗುರುವೆಂಬಂತೆ ಸತ್ಕರಿಸಿದರು. 

ಕೃಷ್ಣನು ವಿಶ್ರಾಂತಿಯನ್ನು ತೆಗೆದುಕೊಂಡ ಬಳಿಕ ಧರ್ಮರಾಜನು ಆಗಮಿಸಿ, ತಾನು ಆತನನ್ನು ಬರಮಾಡಿಕೊಂಡುದರ ಉದ್ದೇಶವನ್ನು ಹೀಗೆಂದು ಹೇಳಿದನು.

"ಕೃಷ್ಣಾ, ನನಗೆ ರಾಜಸೂಯಯಾಗವನ್ನು ಮಾಡುವ ಮನಸ್ಸಾಗಿದೆ. ಆದರೆ ಇದು ಕೇವಲ ಅಪೇಕ್ಷೆಯಿಂದಲೇ ನೆರವೇರಿಬಿಡುವುದಲ್ಲ, ಯಾವ ಬಗೆಯಿಂದ ಮಾಡಿದರೆ ಅದು ಪೂರ್ಣವಾಗುವುದು - ಎಂಬುದನ್ನು ನೀನು ತಾನೆ ಸರ್ವಥಾ ಬಲ್ಲೆ?

ಯಾವನು ಎಲ್ಲವನ್ನೂ ಮಾಡಬಲ್ಲನೋ, ಯಾವನು ಎಲ್ಲೆಡೆ ಪೂಜಿತನಾಗುವನೋ, ಯಾವನು ಎಲ್ಲರಿಗೂ ಪ್ರಭುವಾಗಬಲ್ಲನೋ, ಅಂತಹವನು ತಾನೆ ರಾಜಸೂಯವನ್ನು ಸಂಪಾದಿಸಲು ಸಮರ್ಥನೆನಿಸುವುದು? ನನ್ನ ಮಿತ್ರ ರೆಲ್ಲರೂ ಬಂದು ರಾಜಸೂಯವನ್ನು ನೀನು ಮಾಡಬೇಕೆಂದು ನನಗೆ ಹೇಳುತ್ತಿದ್ದಾರೆ. ಆದರೆ ಇದರ ಅಂತಿಮ ನಿಶ್ಚಯವೆಂಬುದು ನಿನ್ನ ಮಾತಿನಿಂದಲೇ ಆಗತಕ್ಕದ್ದು.

ಸ್ನೇಹಿತರಲ್ಲಿ ಕೆಲವರು ಕೇವಲ ಸೌಹಾರ್ದಭಾವದಿಂದಷ್ಟೇ ನನ್ನ ದೋಷಗಳನ್ನು ಹೇಳುವುದಿಲ್ಲ; ಮತ್ತೆ ಕೆಲವರು ಸ್ವಾರ್ಥ-ಬುದ್ಧಿಯಿಂದಾಗಿ ಪ್ರಿಯವಾದುದಷ್ಟನ್ನೇ ಹೇಳುವರು; ಮತ್ತೆ ಕೆಲವರು ತಮಗೆ ಯಾವುದು ಪ್ರಿಯವೋ ಅದಷ್ಟನ್ನೇ ನನಗೆ ಪ್ರಿಯವೂ ಹಿತವೂ ಹೌದೆಂದು ಹೇಳಿಬಿಡುವರು. ಹೀಗೆ ಈ ನಾನಾಪರಿಗಳಲ್ಲಿ ಜನಗಳ ಮಾತುಗಳು ತೋರುತ್ತವೆ.

ಆದರೆ ನೀನು ಹಾಗಲ್ಲ. ನಾನೀಗ ಹೇಳಿದ ಕಾರಣಗಳನ್ನೆಲ್ಲಾ ಬದಿಗಿಟ್ಟು, ಕಾಮಕ್ರೋಧಗಳನ್ನು ತೊಡೆದು, ಏನನ್ನು ಮಾಡಿದರೆ ನನಗೆ ಬಹಳವೇ ಒಳ್ಳೆಯದಾಗುವುದೋ ಅದನ್ನು ಹೇಳಬಲ್ಲೆ. ಆದ್ದರಿಂದ ಅದನ್ನು ಹೇಳುವ ಕೃಪೆ ಮಾಡು" ಎಂದನು.

ಅದಕ್ಕೆ ಶ್ರೀಕೃಷ್ಣನು ಹೇಳಿದನು: 

"ಮಹಾರಾಜನೇ, ಸರ್ವಗುಣಗಳಿಂದಲೂ ಈ ರಾಜಸೂಯವನ್ನು ನೆರವೇರಿಸಲು ನೀನು ಅರ್ಹನಾಗಿದ್ದೀಯೆ. ಎಲ್ಲವನ್ನೂ ನೀನು ಬಲ್ಲವನೇ ಆಗಿದ್ದೀಯೆ ಕೂಡ. ಆದರೂ ನೀನು ಕೇಳಿದೆಯೆಂದು ಒಂದಿಷ್ಟು ತಿಳಿಸುತ್ತೇನೆ. 

ಜಾಮದಗ್ನ್ಯರಾಮನು - ಎಂದರೆ ಜಮದಗ್ನಿ-ಮುನಿಯ ಪುತ್ರನಾದ ಪರಶುರಾಮನು ಕ್ಷತ್ರಿಯ-ಸಂಹಾರವನ್ನು ಮಾಡಿದನಷ್ಟೆ. ಅದೆಲ್ಲಾ ನಡೆದು ಹೋಗಿ ಈಗಿರುವ ಕ್ಷತ್ರಿಯರೆಂದರೆ ಅಳಿದುಳಿದ ಕೆಲವರಷ್ಟೆ. ಆಗಿದ್ದ ಕ್ಷತ್ರಿಯರಷ್ಟು ಉತ್ತಮರೂ ಅಲ್ಲ, ಇವರುಗಳು. 

ರಾಜನೇ, ಇಲ್ಲೊಂದು ಕುಲ-ಸಂಕಲ್ಪವಿದೆ. ಹಾಗೆಂದರೆ ಕ್ಷತ್ರಿಯ-ಕುಲದವರೆಲ್ಲ ತಮ್ಮಲ್ಲೇ ಮಾಡಿಕೊಂಡಿರುವ ಒಂದು ಸಾಮೂಹಿಕ-ನಿಯಮವುಂಟು. ಯಾವನು ಸರ್ವ-ಕ್ಷತ್ರಿಯರನ್ನೂ ಮೀರಿಸುವನೋ ಆತನೇ ಸಮ್ರಾಟ್ ಎನಿಸುವುದು. ಅದು ನಿನಗೂ ತಿಳಿದಿರುವುದೇ. 

ಈಗಿರುವ ರಾಜರುಗಳೆಲ್ಲ ತಾವು ಐಲ (ಎಂದರೆ ಪುರೂರವ)-ವಂಶ ಹಾಗೂ ಇಕ್ಷ್ವಾಕು-ವಂಶಗಳಿಗೆ ಸೇರಿದವರೆಂದೇ ಹೇಳಿಕೊಳ್ಳುತ್ತಾರೆ. ಆ ತೆರನಾದ ನೂರು ಕುಲಗಳು ಈಗ ಉಳಿದಿವೆ. 

ಯಯಾತಿ ಹಾಗೂ ಭೋಜ - ಈ ಮಹಾರಾಜರ ಗುಣಗಾನವೇ ಎಲ್ಲೆಡೆ ನಡೆದಿದೆ. ಭೋಜವಂಶವು ನಾಲ್ಕೂದಿಕ್ಕುಗಳಲ್ಲೂ ಪಸರಿಸಿದೆ. ಆ ವಂಶವೇ ಧನಸಂಪನ್ನವಾಗಿರುವುದು. ಎಂದೇ ಇವರೆಲ್ಲರೂ ಆ ವಂಶವನ್ನೇ ಆಶ್ರಯಿಸಿದ್ದಾರೆ.

ಸೂಚನೆ : 23/11/2025 ರಂದು   ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 40 (Prasnottara Ratnamalike 40)


ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಾಣ ಹೋದರೂ ಯಾರ ಮನಸ್ಸನ್ನು ಗೆಲ್ಲಲು ಅಸಾಧ್ಯ? 

 ಮೂರ್ಖರ, ಸಂಶಯಗ್ರಸ್ತರ, ದುಃಖಿತರ ಮತ್ತು ಕೃತಘ್ನರ . 

ಈ ಪ್ರಶ್ನೋತ್ತರದಲ್ಲಿ ಯಾವ ಬಗೆಯ ವ್ಯಕ್ತಿಯ ಮನಸ್ಸನ್ನು ಪರಿವರ್ತಿಸಲು ಅಸಾಧ್ಯ ಎಂಬುದನ್ನು ಹೇಳಲಾಗಿದೆ. ಅಂದರೆ ಎಷ್ಟೇ ಪ್ರಯತ್ನಪಟ್ಟರು ಈ ಸ್ವಭಾವಕ್ಕೆ ಸೇರಿದ ವ್ಯಕ್ತಿಯನ್ನು ಬದಲಿಸಲು ಸಾಧ್ಯವಾಗದು ಎಂದರ್ಥ. ಅವರಿಗೆ ಯಾವ ಉಪಾಯಗಳನ್ನು ಅಥವಾ ಉಪದೇಶಗಳನ್ನು ಬಳಸಿದರೂ ಎಲ್ಲವೂ ನಿರರ್ಥಕವಾದವುಗಳೇ ಆಗುತ್ತವೆ. ಒಬ್ಬ ವ್ಯಕ್ತಿಯನ್ನು 'ಸರಿಪಡಿಸಬೇಕು' ಎಂಬುದಾಗಿ ನಾವು ಅಂದುಕೊಳ್ಳುತ್ತೇವೆ. ಅದಕ್ಕಾಗಿ ಅನೇಕ ಪ್ರಯತ್ನಗಳನ್ನು ಕೂಡ ಮಾಡುತ್ತೇವೆ. ಆದರೆ ಆ ಎಲ್ಲ ಪ್ರಯತ್ನಗಳು ಇಲ್ಲಿ ಹೇಳುವ ವ್ಯಕ್ತಿಗಳ ಮೇಲೆ ಮಾಡಲ್ಪಟ್ಟಾಗ ವಿಫಲವಾಗುತ್ತವೆ. ಇದಕ್ಕೆ ಕಾರಣಗಳನ್ನು ಇಲ್ಲಿ ಹೇಳಲಾಗಿದೆ. ಮೂರ್ಖತನ, ಸಂಶಯ, ದುಃಖ ಮತ್ತು ಕೃತಘ್ನತೆ ಎಂಬ ಅವಗುಣಗಳು ಮನಸ್ಸನ್ನು ಕಲುಷಿತಗೊಳಿಸಿರುತ್ತವೆ. ಯಾವುದೇ ಉಪದೇಶಗಳೂ ಕೂಡ ಸಾರ್ಥಕವಾಗಬೇಕಾದರೆ ಮನಸ್ಸು ಹದವಾಗಿದ್ದರೆ ಮಾತ್ರ. ಈ ಸಂದರ್ಭಗಳಲ್ಲಿ ಮನುಷ್ಯನ ಮನಸ್ಸು ಮದಗೊಂಡಿರುತ್ತದೆ. ಅದನ್ನು ಮುದಗೊಳಿಸವುದು ಕಷ್ಟಸಾಧ್ಯ ಎಂಬುದಾಗಿ ಈ ಪ್ರಶ್ನೋತ್ತರ ಹೇಳುತ್ತಿದೆ.

ಮೊದಲ ಬಗೆಯ ವ್ಯಕ್ತಿ ಮೂರ್ಖ. ಮೂರ್ಖರನ್ನು ಯಾವಕಾರಣಕ್ಕೂ ಬದಲಿಸಲು ಸಾಧ್ಯವಿಲ್ಲ ಎಂಬುದಕ್ಕೆ ಒಂದು ಸುಭಾಷಿತ ಹೀಗೆ ಹೇಳಿದೆ - "ನ ತು ಪ್ರತಿನಿವಿಷ್ಟಮೂರ್ಖಜನಚಿತ್ತಮಾರಧಯೇತ್" ಎಂದು. ಅಂದರೆ ಮರಳುಗಳನ್ನು ಕಡೆದು ಅಲ್ಲಿ ಎಣ್ಣೆಯನ್ನೂ ಪಡೆಯಲು ಸಾಧ್ಯವಾದೀತು. ಮೃಗ ಮರೀಚಿಕೆಯಲ್ಲಿರುವ ನೀರನ್ನು ಕುಡಿಯಲಾದೀತು. ಮೊಲಕ್ಕೆ ಇರುವ ಕೋಡನ್ನು ಗುರುತಿಸಲಾದೀತು. ಆದರೆ ಮೂರ್ಖ ಜನರ ಮನಸ್ಸನ್ನು ಮಾತ್ರ ಎಂದೂ ಕೂಡ ಪರಿವರ್ತಿಸಲು ಸಾಧ್ಯವಿಲ್ಲ ಎಂಬುದಾಗಿ. ಈ ಸುಭಾಷಿತದಲ್ಲಿ ಹೇಳಿರುವ, ಮರಳುಗಳಿಂದ ಎಣ್ಣೆಯನ್ನು, ಮೃಗಮರೀಚಿಕೆಯಲ್ಲಿ ನೀರನ್ನು, ಮೊಲದಲ್ಲಿ ಕೋಡನ್ನು ಯಾವುದೆ ಕಾರಣಕ್ಕೂ ಕಂಡುಹಿಡಿಯಲು ಸಾಧ್ಯವೇ ಇಲ್ಲ. ಅಸಾಧ್ಯವನ್ನೂ ಒಂದುಪಕ್ಷ ಇಲ್ಲಿ ಸಾಧಿಸಬಹುದೇನೋ! ಆದರೆ ಮೂರ್ಖರ ಮನಃಪರಿವರ್ತನೆಯನ್ನು ಮಾತ್ರ ಯಾವುದೇ ಕಾರಣಕ್ಕೂ ಮಾಡಲು ಸಾಧ್ಯವಿಲ್ಲ; ಬ್ರಹ್ಮನೇ ಬಂದರೂ ಸಾಧ್ಯವಿಲ್ಲ ಎಂಬ ನಿರ್ಣಯವನ್ನು ಈ ಸುಭಾಷಿತ ಕೊಡುತ್ತಿದೆ. 

ಅಂತೆಯೇ ಸಂಶಯದಿಂದ ಕೂಡಿದ ವ್ಯಕ್ತಿ. ಇವನನ್ನೂ ಪರಿವರ್ತಿಸಲು ಸಾಧ್ಯವಿಲ್ಲ. ಗೀತೆಯು ಅಪ್ಪಣೆ ಕೊಡಿಸಿದಂತೆ "ಅಜ್ಞಾನದಿಂದ ಕೂಡಿದವನು, ಶ್ರದ್ಧೆ ಇಲ್ಲದವನು ಮತ್ತು ಸಂಶಯದಿಂದ ಕೂಡಿದವನು ಈ ಮೂವರೂ ಪತಿತರೇ ಆಗುತ್ತಾರೆ", ಅವರು ಉದ್ಧಾರವಾಗಲು ಸಾಧ್ಯವಿಲ್ಲ ಎಂಬುದಾಗಿ.  

ಅಂತಯೇ ಇನ್ನೊಂದು ಬಗೆಯ ಜನರು ದುಃಖಿತರು. ಇವರು ಜೀವನದಲ್ಲಿ ಬಹಳ ಕಷ್ಟವನ್ನು ಅನುಭವಿಸಿರುತ್ತಾರೆ. ಆಗ ಇವರ ಮನಸ್ಸು ಬೇರೆಯವರು ಹೇಳಿದ್ದನ್ನು ಕೇಳುವ ಸಹನೆ ಇರುವುದಿಲ್ಲ. ಅಂದರೆ ಯಾರು, ಎಷ್ಟೇ, ಸಲ್ಲುವ ಮಾತುಗಳನ್ನು ಆಡಿದರೂ ಅದನ್ನು ಅವರು, 'ಇವೆಲ್ಲವೂ ದುಃಖಕ್ಕೆ ಕಾರಣ ಏಕೆ ಕಾರಣವಾಗಬಾರದು' ಎಂದೇ ಭಾವಿಸುತ್ತಾರೆ. ಹಾಗಾಗಿ ದುಃಖಿತರನ್ನು ಬೇಗ ಪರಿವರ್ತಿಸುವುದು ಅಸಾಧ್ಯ. 

ಅಂತಯೇ ಇನ್ನೊಬ್ಬ ವ್ಯಕ್ತಿ ಅಂದರೆ ಕೃತಘ್ನ. ಉಪಕಾರ ಮಾಡಿದವರನ್ನು ಸ್ಮರಿಸದ ಅಥವಾ ಅವರಿಗೆ ಅಪಕಾರ ಮಾಡುವವನೇ ಕೃತಘ್ನ. ಉಪಕಾರ ಮಾಡಿರುವ ಬಗ್ಗೆ ಯಾರಿಗೆ ಕಿಂಚಿತ್ತು ಆದರದ ಭಾವನೆ ಅಥವಾ ಮಾಡಿರುವ ಉಪಕಾರವನ್ನು ಸ್ಮರಿಸಿಕೊಳ್ಳುವುದು ಇರಲಿ, ಅದಕ್ಕೆ ಪ್ರತಿಯಾಗಿ ಅಪಕಾರವನ್ನು ಮಾಡುವ ರೀತಿಯಲ್ಲಿ ಆ ವ್ಯಕ್ತಿಯ ಸ್ವಭಾವವಿದ್ದರೆ ಅಂತಹ ಜನರನ್ನು ಪರಿವರ್ತಿಸುವುದು ಅಸಾಧ್ಯ ಎಂಬುದಾಗಿ ಇಲ್ಲಿ ಹೇಳಲಾಗಿದೆ. ಅಂದರೆ ಮೂರ್ಖರನ್ನು, ಸಂಶಯಗ್ರಸ್ತರನ್ನು, ದುಃಖಿತರನ್ನು ಮತ್ತು ಕೃತಘ್ನನನ್ನು ಹೀಗೆ ಈ ಬಗೆಯ ನಾಲ್ಕು ವ್ಯಕ್ತಿಗಳನ್ನು ಯಾವುದೇ ಬಗೆಯ ಉಪಾಯಗಳಿಂದಲೂ ಪರಿವರ್ತಿಸಲು ಅಥವಾ ಅವನನ್ನು ಸಜ್ಜನರನ್ನಾಗಿ ಮಾಡಲು ಕಷ್ಟಸಾಧ್ಯ ಅಥವಾ ಅಸಾಧ್ಯ ಎಂಬ ಆಶಯ ಈ ಪ್ರಶ್ನೋತ್ತರದಲ್ಲಿದೆ.

ಸೂಚನೆ : 23/11/2025 ರಂದು   ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ 83 ಹುಲಿಯುಗುರಿನ ಭೂಷಣದ ಬಾಲಕನಿಗೆ ನಮಸ್ಕಾರ (Krishakarnamrta 83)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



"ನಮಸ್ತೇ" ಎಂದರೆ "ನಿನಗೆ ನಮಸ್ಕಾರ" ಎಂದರ್ಥ. ಈ ಮಾತನ್ನು ಲೀಲಾಶುಕನು ಕೃಷ್ಣನನ್ನು ಕುರಿತು ಹೇಳುತ್ತಿದ್ದಾನೆ.

ಹೇಗಿರುವ ಇಲ್ಲಿ ಹೇಳಿರುವ ಕೃಷ್ಣ? ಈತನಿನ್ನೂ ಚಿಕ್ಕವಯಸ್ಸಿನವ, ಬಾಲ. ಆತನನ್ನು ಕಂಡೊಡನೆ ಗೋಚರವಾಗಿರುವುದು ಆತನ ಮೈಬಣ್ಣ. ಅದನ್ನೇ ನೀಲವಪುವೆಂದಿರುವುದು. ಕೃಷ್ಣನನ್ನು ನೀಲಮೇಘಶ್ಯಾಮ - ಎನ್ನುವರಲ್ಲ, ಅದೇ ಈ ಬಾಲನ ಶರೀರದ ವರ್ಣ.

ಈ ಎಳೇ ಹುಡುಗನು ವಸ್ತ್ರವನ್ನೇ ಧರಿಸಿಲ್ಲ. ಎಂದೇ ಆತನನ್ನು ದಿಗಂಬರನೆಂದಿರುವುದು. ಏನು ದಿಗಂಬರನೆಂದರೆ? ಯಾರಿಗೆ ದಿಕ್ಕೇ, ಎಂದರೆ ದಿಕ್ಕುಗಳೇ , ಅಂಬರವೋ ಅವನು. ಅಂಬರವೆಂದರೆ ವಸ್ತ್ರ. ಹಳದಿಬಟ್ಟೆ-ನೀಲವಸ್ತ್ರಗಳಿಗೆ ಪೀತಾಂಬರ-ನೀಲಾಂಬರ - ಎಂದು ಹೇಳುವುದಿಲ್ಲವೇ? ದಿಕ್ಕುಗಳನ್ನು ಬಿಟ್ಟರೆ ಬೇರೆ ವಸ್ತ್ರವೇ ಇಲ್ಲ. ಬರಿಮೈಯವ ಎಂಬುದೇ ತಾತ್ಪರ್ಯ.

ಮೈಮೇಲೆ ಬಟ್ಟೆಯಿಲ್ಲದಿದ್ದರೂ ಆಭರಣಗಳಿವೆ. ಅವನ್ನಂತೂ ಯಾವಾಗಲೂ ಹಾಕಿಕೊಂಡಿರುವುದೇ. ಎರಡು ಆಭರಣಗಳು ತೆಗೆದಿಡದವು: ಕತ್ತಿನಲ್ಲೊಂದು, ಸೊಂಟದಲ್ಲೊಂದು.

ಕತ್ತಿಗೆ ಹಾಕಿಕೊಳ್ಳುವ ಸರದ ಪದಕದ ಎಡೆಯಲ್ಲಿ ಬರುವಂತೆ ಹುಲಿಯುಗುರನ್ನು ಕಟ್ಟುವ ಪದ್ಧತಿಯು ಈಚಿನವರೆವಿಗೂ ಇದ್ದಿತು. ಈಗಲೂ ಹಳ್ಳಿಗಳ ಕಡೆ ಉಳಿದಿರಬಹುದು. ಅದನ್ನು ವ್ಯಾಘ್ರ-ನಖವೆಂದೋ ಶಾರ್ದೂಲ-ನಖವೆಂದೋ ಹೇಳುವುದುಂಟು. ಆ ಆಭರಣದಿಂದ ಭೂಷಿತನಾಗಿದ್ದಾನೆ, ಈ ಪುಟ್ಟಕೃಷ್ಣ.

ಕೆಲವು ಆಸುರಶಕ್ತಿಗಳ ಪ್ರಭಾವವನ್ನು ಅದು ತಡೆಗಟ್ಟುವುದರಿಂದ ಅದನ್ನು ದಿವ್ಯ-ನಖವೆಂದು ಹೇಳುವುದೂ ಉಂಟು. ಇದು ಕಂಠಾಭರಣವಾಯಿತು.

ಇನ್ನು ಸೊಂಟದ ಆಭರಣ. ಅಲ್ಲಿ ಕಟ್ಟಿರುವುದು ಕಿಂಕಿಣಿಗಳಿಂದಾದ ಮಾಲೆ. ಕಿಂಕಿಣಿಯೆಂದರೆ ಕಿರುಗಂಟೆ. ಕಿಂಕಿಣೀ-ಜಾಲ ಅಥವಾ ಕಿಂಕಿಣೀಕ-ಜಾಲವೆಂದರೆ ಪುಟ್ಟ ಪುಟ್ಟ ಗಂಟೆಗಳಿಂದಾದ, ಜಘನವನ್ನು ಬಳಸುವ, ಉಡುದಾರ. ಜಘನವೆಂದರೆ ಸೊಂಟವೇ. ಅದು ಈ ಪುಟ್ಟ ಗಂಟೆಗಳ ಜಾಲ ಅಥವಾ ಸರಪಳಿಯಿಂದಾಗಿ ಅಭಿರಾಮವಾಗಿದೆ. ಅರ್ಥಾತ್ ಆ ಪುಟ್ಟ ಮಗುವಿನ ಸೊಂಟದಲ್ಲಿ ಈ ಸಣ್ಣಸಣ್ಣಗಂಟೆಗಳ ಪೋಣಿಕೆಯಿದೆ. ಅಭಿರಾಮವಾಗಿದೆಯೆಂದರೆ ಸುಂದರವಾಗಿದೆಯೆಂದರ್ಥ. ಕಿರುಗಂಟೆಗಳ ಉಡುದಾರ ಹೊಸದು. ಎಂದೇ ಎದ್ದುಕಾಣುವಂತಹುದು.

ಈ ಕಿರಿಯನ ಮೈಯಲ್ಲಿ ಎದ್ದುತೋರುವ ಮತ್ತೂ ಒಂದು ಲಕ್ಷಣವನ್ನು ಹೇಳಬಹುದು. ಅತನ ಕೈಮೇಲೋ ಬಾಯಮೇಲೋ ಇರುವ ಗುರುತುಗಳಿಂದ: ಆತನು ನವನೀತವನ್ನು ಕದ್ದಿರುವುದು ಸುಲಭಗೋಚರ. ಕೈ-ಬಾಯಿಗಳ ಮೇಲಿನ ಚಿಹ್ನಗಳು ಇದಕ್ಕೆ ಸೂಚಕ.

ಹೀಗಿರುವ ಈ ಬಾಲ ನಂದಾತ್ಮಜ. ಆತ್ಮಜನೆಂದರೆ ಮಗ. ಹೀಗಾಗಿ ನಂದಪುತ್ರ ಈತ. ಇಂತಹ ನಂದಪುತ್ರನಾದ ಈ ಕುಮಾರನಿಗೆ ನಮಸ್ಕಾರವನ್ನು ಹೇಳಿದೆ.

ಗೊಲ್ಲರ ಬಾಲನಾದರೂ ಈತ ಭಗವಂತನೇ - ಎಂಬ ಲೆಕ್ಕವಿರುವುದರಿಂದ ನಮಸ್ಕಾರವನ್ನು ಹೇಳಿದೆ.

ಶ್ಲೋಕದಲ್ಲಿ ನಾಲ್ಕೆಡೆಗಳಲ್ಲಿ 'ಲ'ಕಾರದ ಪ್ರಯೋಗವಿದೆ: ಬಾಲ-ನೀಲ-ಜಾಲ-ಶಾರ್ದೂಲಗಳಲ್ಲಿ. ಹಾಗೆಯೇ ಭೂಷಣ-ಭೂಷಿತಗಳಲ್ಲಿಯ ಅನುಪ್ರಾಸಗಳು; ನೀಲವಪುಷೇ-ನವನೀತಮುಷೇ ಎಂಬಲ್ಲಿ ಅಂತ್ಯಾಕ್ಷರದ್ವಯದಲ್ಲಿಯ ಅನುಪ್ರಾಸ - ಇವುಗಳನ್ನೂ ಗಮನಿಸಬಹುದು. ಕೊನೆಯ ಪಾದದಲ್ಲಿ ನಂದಾತ್ಮಜಾಯ ನವನೀತಮುಷೇ - ಎನ್ನುವಾಗ ನಕಾರತ್ರಯವು ಬಂದಿದೆ; ಪ್ರಥಮಪಾದದಲ್ಲೂ ನಕಾರದ್ವಯವಿದೆ.

ಶ್ಲೋಕ ಹೀಗಿದೆ:

ಬಾಲಾಯ ನೀಲ-ವಪುಷೇ ನವ-ಕಿಂಕಿಣೀಕ-

-ಜಾಲಾಭಿರಾಮ-ಜಘನಾಯ ದಿಗಂಬರಾಯ |

ಶಾರ್ದೂಲ-ದಿವ್ಯನಖ-ಭೂಷಣ-ಭೂಷಿತಾಯ

ನಂದಾತ್ಮಜಾಯ ನವನೀತ-ಮುಷೇ ನಮಸ್ತೇ ||

***

ಅದೆಂದು ನಾ ಕಾಣುವೆ ಶ್ರೀಕೃಷ್ಣನನ್ನು? - ಎಂಬುದಾಗಿ ಕೇಳಿಕೊಳ್ಳುತ್ತಿದ್ದಾನೆ, ಕವಿ ಲೀಲಾಶುಕ. "ಕೃಷ್ಣನನ್ನು" ಎಂದು ಬಾಯಿಬಿಟ್ಟೇನೂ ಹೇಳುವುದಿಲ್ಲ. ಬದಲಾಗಿ "ಕಮಪಿ ಬಾಲಂ" ಎನ್ನುತ್ತಾನೆ. ಹಾಗೆಂದರೆ "ವಾಚಾಮಗೋಚರನಾದ ಬಾಲಕನನ್ನು" ಎಂದೇ ಅರ್ಥ. ಯಾವುದು ಮಾತಿಗೆಟುಕದೋ ಅದುವೇ ವಾಚಾಮಗೋಚರ, ಹೀಗೆಂದು ಹೇಳಲಾಗದುದು. ಹಾಗೆಂದು ಹೇಳಿಯೂ ಕೆಲವು ಲಕ್ಷಣಗಳನ್ನಾದರೂ ಹೇಳಬೇಕೆನ್ನುವ ಚಪಲ, ಕವಿಗೆ. ಯಾವುವವು?

ಈ ಬಾಲನು ಕಮಲೇಕ್ಷಣ. ಹಾಗೆಂದರೆ ಪದ್ಮವನ್ನು ಹೋಲುವ ಲೋಚನಗಳನ್ನುಳ್ಳವನು - ಎಂದರ್ಥ. ಏಕೆಂದರೆ ಈಕ್ಷಣವೆಂದರೆ ಕಣ್ಣು.

ಆತನ ಕಣ್ಣುಗಳನ್ನಷ್ಟೇ ಹೇಳಿದರೆ ಸಾಲದು. ಆತನ ಮುದ್ದುಮುಖದ ಬಗ್ಗೆಯೂ ಒಂದೆರಡು ಮಾತುಗಳನ್ನು ಹೇಳಬೇಕು. ಅತನ ಮುಖವು ಅಭಿರಾಮವಾಗಿ, ಎಂದರೆ ಆಕರ್ಷಕವಾಗಿ, ಕಾಣಲು ಕಾರಣವೇ ಆತನ ಸ್ಮಿತ. ಸ್ಮಿತವೆಂದರೆ ಮುಗುಳ್ನಗೆ. ಅದು ಹೇಗಿದೆ? ಅದು ಉದಾರವೂ ಮೃದುಲವೂ ಆಗಿದೆ.

ಕೆಲ ಮಕ್ಕಳಿಗೆ ಸದಾ ಅಳುಮುಖವೋ ಸಪ್ಪೆಮುಖವೋ ಇರುತ್ತದೆ; ಮುಗುಳ್ನಗೆಯು ಮೂಡುವುದೂ ಅಪರೂಪಕ್ಕೇ; ಕೋಪ-ದುಃಖಗಳು ಕ್ಷಣಮಾತ್ರದಲ್ಲಿ ತೋರಿಸಿಕೊಂಡುಬಿಡುತ್ತವೆ.

ಆದರೆ ಕೃಷ್ಣನ ವಿಷಯದಲ್ಲಿ, ಆತನ ಬಾಲ್ಯದಲ್ಲೂ, ಹಾಗಿಲ್ಲ. ನಗೆಯುಕ್ಕಲು ನೆಪವೇ ಸಾಕು. ಮತ್ತು ಆ ನಗುವೂ ಮೆದುವಾದ ನಗು. ಇದನ್ನು ಮೃದುಲ-ಸ್ಮಿತವೆನ್ನುವರು. ಎಳೆಮಕ್ಕಳು ದೊಡ್ಡವರು ನಗುವಂತೆ ಗಹಗಹಿಸಿ ನಕ್ಕರೆ ಅದೇನು ಚೆಂದ?

ಹೀಗೆ ಉದಾರವೂ ಮೃದುಲವೂ ಆದ ಸ್ಮಿತವು ಕೃಷ್ಣನ ಮೊಗದಲ್ಲಿ ಎದ್ದು ಕಾಣುತ್ತದೆ. ಮತ್ತು ಅಂತಹ ಸ್ಮಿತವಾದರೂ ಆಗಾಗ್ಗೆ ಬರುತ್ತಿರುವುದರಿಂದಲೇ ಆತನ ಆನನವು ಅಭಿರಾಮವಾಗಿದೆ.

ಕಣ್ಣಿನ ವರ್ಣನೆಯಾಯಿತು, ಮುಖದ ಚಿತ್ರಣವಾಯಿತು. ಇನ್ನೆರಡು ವಿಷಯಗಳನ್ನು ಹೇಳಬೇಕು. ಮುನಿಗಳು ಆತನನ್ನು ಹೇಗೆ ಭಾವಿಸಿದರು? ಮತ್ತು ಗೋಪಾಂಗನೆಯರು ಹೇಗೆ? - ಎಂಬೀ ವಿಷಯಗಳು.

ಮುನಿಗಳ ಮನಸ್ಸೂ ಒಂದು ಕಮಲದಂತೆ. ತಮ್ಮ ಈ ಮನೋಂಬುಜದಲ್ಲಿ ಆತನನ್ನು ಪುನಃ ಪುನಃ ಅವರು ಭಾವಿಸುತ್ತಾರೆ. ಆರಂಭಾವಸ್ಥೆಯಲ್ಲಿರುವವರಿಗೆ ಧ್ಯಾನವೆಂಬುದು ಬಲು ಕಷ್ಟ; ಆದರೆ ಮುನಿಗಳು ಪದೇ ಪದೇ ಕೃಷ್ಣನನ್ನು ಭಾವಿಸಿಕೊಳ್ಳುತ್ತಾರೆ. ಅದೂ ಸಂತೋಷದಿಂದ ಅವರಿಗಾಗುವುದು. ಆ ಸಂತೋಷವಾದರೂ ಮತ್ತೆ ಮತ್ತೆ ಉಕ್ಕುವಂತಹುದು. ಹೀಗೆ ಪರಮ-ಸಂತೋಷದಲ್ಲಿರುತ್ತಾ ಆತನನ್ನವರು ಪರಿಭಾವಿಸುವರು.

ಇನ್ನುಳಿದಿರುವುದು ಗೋಪಿಕೆಯರು ಆತನನ್ನು ಭಾವಿಸಿದ ಪರಿಯೇನೆಂಬುದು. ಅವರು ತಮ್ಮ ಮುಖದಿಂದ ಕೃಷ್ಣನನ್ನೇ ಆಸ್ವಾದಿಸುವರು. ಹಾಗೆ ಮುಖದಿಂದ ಆಸ್ವಾದಿಸುವುದೆಂದರೆ ಮುತ್ತುಕೊಡುವುದೆಂದೇ ಅರ್ಥ. ಹೀಗೆ ವ್ರಜ-ವಧುಗಳು ತಮ್ಮ ಮುಖದಿಂದ ಕೃಷ್ಣನನ್ನು ಆಸ್ವಾದಿಸಿರುವರು.

ಈ ಸಂದರ್ಭದಲ್ಲಿ ಆ ಗೋಪಾಂಗನೆಯರ ಕಣ್ಣುಗಳು ಎಂತಿದ್ದವೆಂದೂ ಕವಿಯು ಹೇಳುತ್ತಾನೆ. ಅವುಗಳು "ಮದಾಲಸವಾಗಿದ್ದವು".  ಏನು  ಹಾಗೆಂದರೆ? ಮದ್ಯಪಾನ ಮಾಡಿದವರ ಕಣ್ಣುಗಳು ಮದದಿಂದ ಅಲಸವಾಗಿರುತ್ತದೆ. ಪ್ರಕೃತ, ಕೃಷ್ಣನ ಬಳಿ ಬಂದವರಿಗೆ ಮದ್ಯಪಾನದ ಆವಶ್ಯಕತೆಯೇನಿರಲಿಲ್ಲ. ಆದರೂ ಅವರುಗಳು "ಮದಾಲಸ-ವಿಲೋಚನ"ರಾಗಿದ್ದರು, ಎಂದಿದೆ. ಅಂತರಂಗದಲ್ಲಿ ಯಾರಿಗೆ  ಪರಮ-ಸಾತ್ತ್ವಿಕ-ಸಂತೋಷವುಂಟೋ, ಅಂತಹವರೇ ಈ ಬಗೆಯಲ್ಲಿ ಮದಾಲಸ-ನೇತ್ರರಾಗುವರು. ಹೀಗೆ ತಮ್ಮ ಒಳಸುಖದ ಪ್ರತೀಕವಾಗಿ ಅವರ ಕಣ್ಣುಗಳಲ್ಲಿ ಮದಾಲಸತೆಯು ಕಂಡಿದೆ.

ಹಾಗೆ ನೋಡಿದರೆ ಗೋಪಿಕೆಯರ ಮಹಾಭಾಗ್ಯವೇ ಇದೆಂದು ಹೇಳಬೇಕಾಗುತ್ತದೆ. ಯಾವುದನ್ನು ಮುನಿಗಳು ಕಷ್ಟಪಟ್ಟು ಮತ್ತೆ ಮತ್ತೆ ಪಡೆಯುವರೋ ಅದನ್ನೇ ಇವರು ಅನಾಯಾಸವಾಗಿ ಸಾಧಿಸಿಕೊಳ್ಳುವರು. ಹೀಗೆ ಮುನಿಗಳ ಯೋಗಧ್ಯಾನದಿಂದ ಸಾಧಿತವಾಗತಕ್ಕದ್ದು ಯಾವುದೋ, ಅದು ಗೋಪಿಕೆಯರಿಗೆ ಶ್ರಮವಿಲ್ಲದೆಯೇ ದೊರೆತಿದೆ!

ಅಂತೂ ಹೀಗೆಲ್ಲಾ ವಿರೋಧಗಳೋ ವಿಚಿತ್ರಗಳೋ ಇರುವುದರಿಂದಲೇ ಕೃಷ್ಣನನ್ನು ಅನಿರ್ವಚನೀಯ ಎಂದಿರುವುದು.

ಶ್ಲೋಕವಿದು:

ಉದಾರ-ಮೃದುಲ-ಸ್ಮಿತ-ವ್ಯತಿಕರಾಭಿರಾಮಾನನಂ /

ಮುದಾ ಮುಹುರುದೀರ್ಣಯಾ ಮುನಿಮನೋಽಮ್ಬುಜಾಮ್ರೇಡಿತಮ್ |

ಮದಾಲಸ-ವಿಲೋಚನ-ವ್ರಜವಧೂ-ಮುಖಾಸ್ವಾದಿತಂ /

ಕದಾ ನು ಕಮಲೇಕ್ಷಣಂ ಕಮಪಿ ಬಾಲಮಾಲೋಕಯೇ ?||

ಸೂಚನೆ : 22/11/2025 ರಂದು   ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Thursday, November 20, 2025

ಪ್ರಶ್ನೋತ್ತರ ರತ್ನಮಾಲಿಕೆ 39 (Prasnottara Ratnamalike 39)


ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೪೦. ಯಾವಾಗಲೂ ಆನಂದ ಕೊಡುವ ವಿಷಯ ಯಾವುದು? 

 ದೀನ-ದುಃಖಿತರ ಬಗ್ಗೆ ಕರುಣ ಮತ್ತು ಸಜ್ಜನರ ಜೊತೆ ಮೈತ್ರೀ 

ಕೇವಲ ಮಾನವ ಮಾತ್ರ ಅಲ್ಲ, ಪ್ರತಿಯೊಂದು ಜೀವಿಯು ಕೂಡ 'ಸುಖ ಬೇಕು, ದುಃಖ ಬೇಡ' ಎಂಬುದನ್ನು ಬಯಸುತ್ತದೆ. ಅದರಲ್ಲಿ ಮಾನವನ ಸುಖದ ಸ್ವರೂಪ ವಿಭಿನ್ನವಾದದು. ಉಳಿದ ಜೀವಿಗಳ ಸುಖ ಮತ್ತು ದುಃಖ ಎಂದರೆ ಅದು ಕೇವಲ ಉಳಿವಿಗಾಗಿ ಮಾಡುವ ಹೋರಾಟದ ಪ್ರತಿಫಲನ ರೂಪ ಅಷ್ಟೇ. ಅಂದರೆ ಅವುಗಳ ಉಳಿವಿಗೆ ಯಾವುದು ಅನುಕೂಲವೋ, ಅದನ್ನು 'ಸುಖ' ಎಂಬುದಾಗಿಯೂ, ಉಳಿದಿದ್ದನ್ನು 'ದುಃಖ' ಎಂಬುದಾಗಿಯೂ ತಿಳಿಯಲಾಗುತ್ತದೆ. ಆದರೆ ಮನುಷ್ಯಮಾತ್ರ ಹಾಗಲ್ಲ. ಇವನಿಗೆ ಇರುವ ವಿವೇಕವನ್ನು ಕಳೆದುಕೊಂಡಾಗ ದುಃಖವು ಸುಖವಾಗಿ ಕಾಣುವುದುಂಟು, ಸುಖವನ್ನು ಕೊಡುವ ವಿಷಯವು ದುಃಖವಾಗಿ ಕಾಣುವುದುಂಟು. ಹಾಗಾಗಿ ಯಾವುದು ನಮಗೆ ನಿಜವಾಗಿಯೂ ಸುಖವನ್ನು ಅಥವಾ ಆನಂದವನ್ನು ಮಾತ್ರ ಕೊಡುವಂತದ್ದು! ಎಂಬ ಸೂಕ್ಷ್ಮವಾದ ಅರಿವು ಇಲ್ಲವಾಗಿದೆ. ಅದನ್ನು ತಿಳಿಸುವ ಪ್ರಶ್ನೋತ್ತರ ಇದಾಗಿದೆ. ಅಂದರೆ ದುಃಖಿತರಲ್ಲಿ ಕರುಣೆಯನ್ನು ತೋರಿಸುವುದು, ಸಜ್ಜನರ ಜೊತೆ ಮೈತ್ರಿ, ಅವರ ಜೊತೆ ಅತ್ಯಂತ ಹತ್ತಿರದ ಒಡನಾಟ, ಇವು ಯಾವಾಗಲೂ ದುಃಖವನ್ನು ಕೊಡಲು ಸಾಧ್ಯವೇ ಇಲ್ಲ ಎಂಬ ಅಂಶ ಇಲ್ಲಿ ಅಡಕವಾಗಿದೆ. ಇದನ್ನೇ ಹೇಳುವಂತೆ ಯೋಗಸೂತ್ರವು ಹೀಗೆ ವಿಷಯವನ್ನು ನಿರೂಪಣೆ ಮಾಡುತ್ತದೆ. 

ಮೈತ್ರೀ-ಕರುಣ-ಮುದಿತ-ಉಪೇಕ್ಷಾಣಾಂ ಸುಖ-ದುಃಖ-ಪುಣ್ಯ-ಅಪುಣ್ಯ-ವಿಷಯಾಣಾಂ ಭಾವನಾತಃ ಚಿತ್ತಪ್ರಸಾದನಮ್" ಎಂಬುದಾಗಿ. ಅಂದರೆ ಸುಖವನ್ನು ಕೊಡುವ ವಿಷಯದ ಮೇಲೆ ತಮ್ಮ ಮಿತ್ರಭಾವ, ದುಃಖಿತರ ವಿಷಯದಲ್ಲಿ ಕಾರುಣ್ಯಭಾವ, ಪುಣ್ಯ ಮತ್ತು ಅಪುಣ್ಯ ಎಂಬ ವಿಷಯಗಳಲ್ಲಿ ಸಂತೋಷ ಮತ್ತು ಉಪೇಕ್ಷೆ, ಹೀಗೆ ಈ ಭಾವವನ್ನು ಇಟ್ಟುಕೊಳ್ಳಬೇಕು ಎಂಬುದಾಗಿ ಯೋಗಸೂತ್ರ ವಿವರಿಸುತ್ತದೆ. ಈ ಭಾಗವನ್ನು ಇಟ್ಟುಕೊಂಡರೆ ಅವರಿಗೆ ಎಂದೂ ಕೂಡ ದುಃಖವಾಗಲು ಸಾಧ್ಯವಿಲ್ಲ. ಈ ಜೀವನದಲ್ಲಿ ನಾವು ಇನ್ನೊಬ್ಬರ ಜೊತೆ ಸಂಘವನ್ನು ಮಾಡುವುದು ಅನಿವಾರ್ಯ. ಇನ್ನೊಬ್ಬರ ಕಷ್ಟ ದುಃಖಗಳಲ್ಲಿ ಸಂವೇದಿಸುವುದು ಅಷ್ಟೇ ಮುಖ್ಯವಾದ ಅಂಶ. ಹಾಗಾಗಿ ದುಃಖಿತರನ್ನು ಕಂಡಾಗ ಇವರ ದುಃಖವನ್ನು 'ನಾನು ಹೇಗೆ ನಿವಾರಿಸಲಿ?' ಎಂಬ ಕೃಪೆಯು ಅವರ ಮೇಲೆ ಇರಬೇಕೇ ಹೊರತು, ಅಂತಹ ದುಃಖಿತರನ್ನು ಕಂಡು ತಟಸ್ಥವಾಗಿ, ನಿರ್ಲಿಪ್ತವಾಗಿ ಇರುವುದು ಸರಿಯಲ್ಲ. ಅಂತಯೇ ಯಾವುದು ನಿಜವಾಗಿಯೂ ನಮಗೆ ಸುಖವನ್ನು ಅಥವಾ ಪುಣ್ಯವನ್ನು ಕೊಡುವ ವಿಷಯವೋ, ಅದರ ಜೊತೆ ನಮ್ಮ ನಿರಂತರ ಸಂಪರ್ಕವನ್ನು ಇಟ್ಟುಕೊಳ್ಳಬೇಕು. ಇದರ ಜೊತೆಯಲ್ಲಿ ಯಾವುದು ನಮಗೆ ದುಃಖವನ್ನು ಅಥವಾ ಪಾಪವನ್ನು ಕೊಡುವುದು? ಅದನ್ನು ಸದಾ ದ್ವೇಷಿಸುವ ಸ್ವಭಾವ ಉಳ್ಳವನಾಗಿರಬೇಕು. ಹೀಗೆ ಮಾಡುವುದೇ ನಿಜವಾದ ಆನಂದಕ್ಕೆ ಕಾರಣವಾಗುತ್ತದೆ. ಹೀಗೆ ಮಾಡುವುದರಿಂದ ಅವನೆಂದೂ ಮುಂದೆ 'ನಾನು ಇಂಥವರಿಗೆ ಸಹಾಯ ಮಾಡಿ ಮೋಸ ಹೋದೆ' ಎಂದು ಅಂದುಕೊಳ್ಳಲು ಖಂಡಿತ ಸಾಧ್ಯವಿಲ್ಲ. ಹಾಗಾಗಿ ದೀನ ದುಃಖಿತರ ವಿಷಯದಲ್ಲಿ ಕರುಣ ಮತ್ತು ಸಜ್ಜನರ ಜೊತೆ ಮೈತ್ರೀಯಂತಹ ಸ್ಪಂದನೆ ಇರುವುದು ಅತ್ಯಂತ ಮುಖ್ಯ ಎಂಬ ವಿಷಯ ಈ ಪ್ರಶ್ನೋತ್ತರದಲ್ಲಿ ಕಾಣುತ್ತದೆ.

ಸೂಚನೆ : 16/11/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 162 ರಾಜಸೂಯವು ನಡೆಯಬೇಕೆಂಬ ಸಚಿವರ ಅಭಿಪ್ರಾಯ (Vyaasa Vikshita 162)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ತಾನು ರಾಜಸೂಯವನ್ನು ಮಾಡುವುದು ಯುಕ್ತವೇ? – ಎಂಬ ವಿಷಯವಾಗಿ ತನ್ನ ಮಂತ್ರಿಗಳಲ್ಲಿ ವಿಚಾರಿಸಿದಾಗ ಅವರು ತಮ್ಮ ಸಮ್ಮತಿಯನ್ನು ಸೂಚಿಸುತ್ತಾ ಹೀಗೆ ಮಾತನ್ನು ಮುಂದುವರೆಸಿದರು.

"ರಾಜಸೂಯವನ್ನು ಮಾಡುವ ಸಮಯವು ನಿನಗೀಗ ಬಂದಿದೆಯೆಂಬುದಾಗಿಯೇ ನಿನ್ನ ಮಿತ್ರರೆಲ್ಲರೂ ಭಾವಿಸುತ್ತಿದ್ದಾರೆ.

ಇದನ್ನು ಮಾಡುವಲ್ಲಿ ಸಾಮವೇದದ ಆರು ಮಂತ್ರಗಳಿಂದ ಯಾಗಾರ್ಥವಾದ ಆರು ಅಗ್ನಿಗಳನ್ನು ಪ್ರತಿಷ್ಠಾಪಿಸಬೇಕು. ಅದಕ್ಕೆ ಸಮಯವೀಗ ಸಂನಿಹಿತವಾಗಿದೆ. ಈ ಯಜ್ಞಾರಂಭದಲ್ಲಿ ದರ್ವೀಹೋಮವೆಂಬುದಿದೆ. ಅಲ್ಲಿಂದ ಆರಂಭಿಸಿ ಎಲ್ಲ ಯಜ್ಞಗಳ ಫಲಗಳನ್ನೂ ಪಡೆಯುವುದಾಗುತ್ತದೆ. ಯಜ್ಞದ ಕೊನೆಯಲ್ಲಿ ರಾಜನಿಗೆ ಅಭಿಷೇಕವು ನಡೆಯುತ್ತದೆ. ಅಲ್ಲಿಂದ ಆತನಿಗೆ ಸರ್ವಜಿತ್ ಎಂಬ ಬಿರುದು ಸಲ್ಲುತ್ತದೆ.

ಓ ರಾಜನೇ, ಮಹಾಬಾಹುವೇ, ನೀನು ಈ ಯಜ್ಞವನ್ನು ಮಾಡಲು ಸಮರ್ಥನಾಗಿದ್ದೀಯೇ. ಇದೋ, ನಾವೆಲ್ಲರೂ ನಿನಗೆ ಅಧೀನರಾಗಿ ಕೆಲಸವನ್ನು ಮಾಡಲು ಸಿದ್ಧರಿದ್ದೇವೆ. ಶೀಘ್ರದಲ್ಲಿಯೇ ನೀನು ಈ ರಾಜಸೂಯವನ್ನು ಸಾಧಿಸುವವನಾಗುವೆ. ಆದುದರಿಂದ ನೀನು ಇನ್ನೇನೂ ವಿಚಾರ ಮಾಡದೆ ರಾಜಸೂಯವನ್ನಾರಂಭಿಸು" ಎಂದರು.

ಮತ್ತೇನೂ ವಿಚಾರವನ್ನೇ ಮಾಡದೆ ರಾಜಸೂಯವನ್ನು ಮಾಡುವುದರತ್ತ ಮನಸ್ಸು ಕೊಡು - ಹೀಗೆಂಬುದಾಗಿ ಎಲ್ಲರೂ ಬೇರೆ ಬೇರೆಯಾಗಿಯೂ ಒಟ್ಟಿಗೂ ಯುಧಿಷ್ಠಿರನಿಗೆ ಹೇಳಿದರು. ದಿಟ್ಟವೂ ಶ್ರೇಷ್ಠವೂ ಪ್ರಿಯವೂ ಧರ್ಮಸಂಮತವೂ ಆದ ಅವರ ಈ ಮಾತುಗಳನ್ನು ಕೇಳಿದ ಯುಧಿಷ್ಠಿರನು ಆ ಬಗ್ಗೆ ಮನಸ್ಸು ಮಾಡಿದನು. ಮಿತ್ರರ ಮಾತುಗಳನ್ನು ಆಲಿಸಿ, ತನ್ನ ಸಾಮರ್ಥ್ಯವನ್ನೂ ಅರಿತುಕೊಂಡಿದ್ದ ಆತನು ರಾಜಸೂಯವನ್ನು ನಡೆಸಲು ಮನಸ್ಸು ಮಾಡಿದನು.

ತನ್ನ ಭ್ರಾತೃಗಳು, ಮಹಾತ್ಮರಾದ ಋತ್ವಿಕ್ಕುಗಳು, ಮಂತ್ರಿಗಳು, ಹಾಗೂ ಧೌಮ್ಯ ಮತ್ತು ವ್ಯಾಸ -ಇವರೆಲ್ಲರೊಂದಿಗೆ ಧರ್ಮರಾಜನು ಮಂತ್ರಾಲೋಚನವನ್ನು ನಡೆಸಿದನು. ರಾಜಸೂಯವನ್ನು ನಡೆಸಲು ಎಲ್ಲರೂ ಒಮ್ಮತವನ್ನು ಸೂಚಿಸಿದರು. ಇಷ್ಟಾದರೂ, ಈ ಕಾರ್ಯವು ಲೋಕಹಿತವನ್ನು ಸಾಧಿಸುವುದೇ? - ಎಂಬತ್ತ ಮನಸ್ಸು ಹರಿಸಿದನು.

ಯಾರೇ ಆಗಲಿ ಒಂದು ಕೆಲಸವನ್ನು ಸಾಧಿಸಹೊರಟರೆ ಗಮನಿಸಬೇಕಾದ ಅಂಶಗಳಿವು: ತನ್ನ ಶಕ್ತಿಯೇನು, ಹಾಗು ತನ್ನಲ್ಲಿರುವ ಸಾಧನಗಳೇನು? ಕೆಲಸದ ದೇಶ-ಕಾಲಗಳ ಸಂನಿವೇಶವೇನು? ಪ್ರಕೃತಕಾರ್ಯದಲ್ಲಿ ಉಂಟಾಗುವ ವ್ಯಯ-ಆಗಮಗಳು, ಎಂದರೆ ನಷ್ಟ-ಲಾಭಗಳು ಏನೇನು? - ಇವನ್ನೆಲ್ಲ ಚೆನ್ನಾಗಿ ವಿಮರ್ಶೆ ಮಾಡಿ ಯಾವನು ತೊಡಗುವನೋ ಅವನು ಎಂದೂ ಧೃತಿಗೆಡನು.

ಯಜ್ಞವನ್ನು ಮಾಡುವುದೆಂಬುದು ನನ್ನೊಬ್ಬನದೇ ನಿಶ್ಚಯದಿಂದ - ಎಂಬಂತೆ ಆಗಬಾರದು. ಹೀಗೆಂದುಕೊಂಡ ಯುಧಿಷ್ಠಿರನು ಕಾರ್ಯವನ್ನು ಯತ್ನಪೂರ್ವಕವಾಗಿ ಮಾಡುವವನಿದ್ದು, ನಿಶ್ಚಯಕ್ಕೋಸ್ಕರವಾಗಿ ಶ್ರೀಕೃಷ್ಣನನ್ನೇ ಸ್ಮರಿಸಿಕೊಂಡನು. ಶ್ರೀಕೃಷ್ಣನಾದರೂ ಎಲ್ಲರಿಗಿಂತಲೂ ಶ್ರೇಷ್ಠನು, ಅಪ್ರಮೇಯನಾದ ಮಹಾಬಾಹುವು. ಜನ್ಮವೆಂಬುದು ತನಗಿಲ್ಲದಿದ್ದರೂ ತನ್ನ ಸಂಕಲ್ಪದಂತೆ ಅವತರಿಸಿರುವನು. ದೇವತೆಗಳು ಸಹ ಕೃಷ್ಣನ ಕರ್ಮಗಳನ್ನು ಮೆಚ್ಚತಕ್ಕವರೇ. ಆತನಿಗೆ ತಿಳಿಯದುದಿಲ್ಲ. ಅತನು ಸಾಧಿಸಲಾಗದೆಂಬ ಕಾರ್ಯವೂ ಯಾವುದೂ ಇಲ್ಲ.

ಹೀಗೆಂಬುದಾಗಿ ಒಂದು ನಿಶ್ಚಿತವಾದ ಬುದ್ಧಿಯನ್ನು ಮಾಡಿಕೊಂಡನು. ಗುರುವಿನಲ್ಲಿಗೆ ಹೇಗೋ ಹಾಗೆ ಶ್ರೀಕೃಷ್ಣನಲ್ಲಿಗೆ ದೂತನೊಬ್ಬನನ್ನು ಒಡನೆಯೇ ಕಳುಹಿಸಿದನು.

ಆ ದೂತನಾದರೂ ಶೀಘ್ರಗಾಮಿಯದ ರಥವೊಂದರಲ್ಲಿ ಸಾಗಿ ಯಾದವರಲ್ಲಿಗೆ ಹೋದನು. ದ್ವಾರಕಾವಾಸಿಯಾದ ಕೃಷ್ಣನನ್ನು ಭೇಟಿಮಾಡಿದನು. ಕೈಜೋಡಿಸಿ ನಮ್ರನಾಗಿ ಶ್ರೀಕೃಷ್ಣನಲ್ಲಿ ಈ ಪ್ರಕಾರವಾಗಿ ನಿವೇದಿಸಿಕೊಂಡನು: "ಹೃಷೀಕೇಶನೇ, ಧೌಮ್ಯ, ವ್ಯಾಸ ಮುಂತಾದ ಮಹರ್ಷಿಗಳು, ಮತ್ತು ಪಾಂಚಾಲ-ಮಾತ್ಸ್ಯದೇಶಗಳ ರಾಜರುಗಳು, ಎಂದರೆ ದ್ರುಪದ-ವಿರಾಟರಾಜರು, ಹಾಗೂ ತನ್ನ ಭ್ರಾತೃಗಳು - ಇವರುಗಳೊಂದಿಗೆ ಯುಧಿಷ್ಠಿರನು ನಿನ್ನ ದರ್ಶನವನ್ನು ಬಯಸಲು ಇಷ್ಟಪಟ್ಟಿದ್ದಾನೆ."

ಸೂಚನೆ : 16/11/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Monday, November 17, 2025

ಪ್ರಶ್ನೋತ್ತರ ರತ್ನಮಾಲಿಕೆ 40 (Prasnottara Ratnamalike 40)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ ೪೦. ಯಾವಾಗಲೂ ಆನಂದ ಕೊಡುವ ವಿಷಯ ಯಾವುದು? 

 ದೀನ-ದುಃಖಿತರ ಬಗ್ಗೆ ಕರುಣ ಮತ್ತು ಸಜ್ಜನರ ಜೊತೆ ಮೈತ್ರೀ 

ಕೇವಲ ಮಾನವ ಮಾತ್ರ ಅಲ್ಲ, ಪ್ರತಿಯೊಂದು ಜೀವಿಯು ಕೂಡ 'ಸುಖ ಬೇಕು, ದುಃಖ ಬೇಡ' ಎಂಬುದನ್ನು ಬಯಸುತ್ತದೆ. ಅದರಲ್ಲಿ ಮಾನವನ ಸುಖದ ಸ್ವರೂಪ ವಿಭಿನ್ನವಾದದು. ಉಳಿದ ಜೀವಿಗಳ ಸುಖ ಮತ್ತು ದುಃಖ ಎಂದರೆ ಅದು ಕೇವಲ ಉಳಿವಿಗಾಗಿ ಮಾಡುವ ಹೋರಾಟದ ಪ್ರತಿಫಲನ ರೂಪ ಅಷ್ಟೇ. ಅಂದರೆ ಅವುಗಳ ಉಳಿವಿಗೆ ಯಾವುದು ಅನುಕೂಲವೋ, ಅದನ್ನು 'ಸುಖ' ಎಂಬುದಾಗಿಯೂ, ಉಳಿದಿದ್ದನ್ನು 'ದುಃಖ' ಎಂಬುದಾಗಿಯೂ ತಿಳಿಯಲಾಗುತ್ತದೆ. ಆದರೆ ಮನುಷ್ಯಮಾತ್ರ ಹಾಗಲ್ಲ. ಇವನಿಗೆ ಇರುವ ವಿವೇಕವನ್ನು ಕಳೆದುಕೊಂಡಾಗ ದುಃಖವು ಸುಖವಾಗಿ ಕಾಣುವುದುಂಟು, ಸುಖವನ್ನು ಕೊಡುವ ವಿಷಯವು ದುಃಖವಾಗಿ ಕಾಣುವುದುಂಟು. ಹಾಗಾಗಿ ಯಾವುದು ನಮಗೆ ನಿಜವಾಗಿಯೂ ಸುಖವನ್ನು ಅಥವಾ ಆನಂದವನ್ನು ಮಾತ್ರ ಕೊಡುವಂತದ್ದು! ಎಂಬ ಸೂಕ್ಷ್ಮವಾದ ಅರಿವು ಇಲ್ಲವಾಗಿದೆ. ಅದನ್ನು ತಿಳಿಸುವ ಪ್ರಶ್ನೋತ್ತರ ಇದಾಗಿದೆ. ಅಂದರೆ ದುಃಖಿತರಲ್ಲಿ ಕರುಣೆಯನ್ನು ತೋರಿಸುವುದು, ಸಜ್ಜನರ ಜೊತೆ ಮೈತ್ರಿ, ಅವರ ಜೊತೆ ಅತ್ಯಂತ ಹತ್ತಿರದ ಒಡನಾಟ, ಇವು ಯಾವಾಗಲೂ ದುಃಖವನ್ನು ಕೊಡಲು ಸಾಧ್ಯವೇ ಇಲ್ಲ ಎಂಬ ಅಂಶ ಇಲ್ಲಿ ಅಡಕವಾಗಿದೆ. ಇದನ್ನೇ ಹೇಳುವಂತೆ ಯೋಗಸೂತ್ರವು ಹೀಗೆ ವಿಷಯವನ್ನು ನಿರೂಪಣೆ ಮಾಡುತ್ತದೆ. 

ಮೈತ್ರೀ-ಕರುಣ-ಮುದಿತ-ಉಪೇಕ್ಷಾಣಾಂ ಸುಖ-ದುಃಖ-ಪುಣ್ಯ-ಅಪುಣ್ಯ-ವಿಷಯಾಣಾಂ ಭಾವನಾತಃ ಚಿತ್ತಪ್ರಸಾದನಮ್" ಎಂಬುದಾಗಿ. ಅಂದರೆ ಸುಖವನ್ನು ಕೊಡುವ ವಿಷಯದ ಮೇಲೆ ತಮ್ಮ ಮಿತ್ರಭಾವ, ದುಃಖಿತರ ವಿಷಯದಲ್ಲಿ ಕಾರುಣ್ಯಭಾವ, ಪುಣ್ಯ ಮತ್ತು ಅಪುಣ್ಯ ಎಂಬ ವಿಷಯಗಳಲ್ಲಿ ಸಂತೋಷ ಮತ್ತು ಉಪೇಕ್ಷೆ, ಹೀಗೆ ಈ ಭಾವವನ್ನು ಇಟ್ಟುಕೊಳ್ಳಬೇಕು ಎಂಬುದಾಗಿ ಯೋಗಸೂತ್ರ ವಿವರಿಸುತ್ತದೆ. ಈ ಭಾಗವನ್ನು ಇಟ್ಟುಕೊಂಡರೆ ಅವರಿಗೆ ಎಂದೂ ಕೂಡ ದುಃಖವಾಗಲು ಸಾಧ್ಯವಿಲ್ಲ. ಈ ಜೀವನದಲ್ಲಿ ನಾವು ಇನ್ನೊಬ್ಬರ ಜೊತೆ ಸಂಘವನ್ನು ಮಾಡುವುದು ಅನಿವಾರ್ಯ. ಇನ್ನೊಬ್ಬರ ಕಷ್ಟ ದುಃಖಗಳಲ್ಲಿ ಸಂವೇದಿಸುವುದು ಅಷ್ಟೇ ಮುಖ್ಯವಾದ ಅಂಶ. ಹಾಗಾಗಿ ದುಃಖಿತರನ್ನು ಕಂಡಾಗ ಇವರ ದುಃಖವನ್ನು 'ನಾನು ಹೇಗೆ ನಿವಾರಿಸಲಿ?' ಎಂಬ ಕೃಪೆಯು ಅವರ ಮೇಲೆ ಇರಬೇಕೇ ಹೊರತು, ಅಂತಹ ದುಃಖಿತರನ್ನು ಕಂಡು ತಟಸ್ಥವಾಗಿ, ನಿರ್ಲಿಪ್ತವಾಗಿ ಇರುವುದು ಸರಿಯಲ್ಲ. ಅಂತಯೇ ಯಾವುದು ನಿಜವಾಗಿಯೂ ನಮಗೆ ಸುಖವನ್ನು ಅಥವಾ ಪುಣ್ಯವನ್ನು ಕೊಡುವ ವಿಷಯವೋ, ಅದರ ಜೊತೆ ನಮ್ಮ ನಿರಂತರ ಸಂಪರ್ಕವನ್ನು ಇಟ್ಟುಕೊಳ್ಳಬೇಕು. ಇದರ ಜೊತೆಯಲ್ಲಿ ಯಾವುದು ನಮಗೆ ದುಃಖವನ್ನು ಅಥವಾ ಪಾಪವನ್ನು ಕೊಡುವುದು? ಅದನ್ನು ಸದಾ ದ್ವೇಷಿಸುವ ಸ್ವಭಾವ ಉಳ್ಳವನಾಗಿರಬೇಕು. ಹೀಗೆ ಮಾಡುವುದೇ ನಿಜವಾದ ಆನಂದಕ್ಕೆ ಕಾರಣವಾಗುತ್ತದೆ. ಹೀಗೆ ಮಾಡುವುದರಿಂದ ಅವನೆಂದೂ ಮುಂದೆ 'ನಾನು ಇಂಥವರಿಗೆ ಸಹಾಯ ಮಾಡಿ ಮೋಸ ಹೋದೆ' ಎಂದು ಅಂದುಕೊಳ್ಳಲು ಖಂಡಿತ ಸಾಧ್ಯವಿಲ್ಲ. ಹಾಗಾಗಿ ದೀನ ದುಃಖಿತರ ವಿಷಯದಲ್ಲಿ ಕರುಣ ಮತ್ತು ಸಜ್ಜನರ ಜೊತೆ ಮೈತ್ರೀಯಂತಹ ಸ್ಪಂದನೆ ಇರುವುದು ಅತ್ಯಂತ ಮುಖ್ಯ ಎಂಬ ವಿಷಯ ಈ ಪ್ರಶ್ನೋತ್ತರದಲ್ಲಿ ಕಾಣುತ್ತದೆ.

ಸೂಚನೆ : 16
/11/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 162 (Vyaasa Vikshita 162)ರಾಜಸೂಯವು ನಡೆಯಬೇಕೆಂಬ ಸಚಿವರ ಅಭಿಪ್ರಾಯ

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ತಾನು ರಾಜಸೂಯವನ್ನು ಮಾಡುವುದು ಯುಕ್ತವೇ? – ಎಂಬ ವಿಷಯವಾಗಿ ತನ್ನ ಮಂತ್ರಿಗಳಲ್ಲಿ ವಿಚಾರಿಸಿದಾಗ ಅವರು ತಮ್ಮ ಸಮ್ಮತಿಯನ್ನು ಸೂಚಿಸುತ್ತಾ ಹೀಗೆ ಮಾತನ್ನು ಮುಂದುವರೆಸಿದರು.

"ರಾಜಸೂಯವನ್ನು ಮಾಡುವ ಸಮಯವು ನಿನಗೀಗ ಬಂದಿದೆಯೆಂಬುದಾಗಿಯೇ ನಿನ್ನ ಮಿತ್ರರೆಲ್ಲರೂ ಭಾವಿಸುತ್ತಿದ್ದಾರೆ.

ಇದನ್ನು ಮಾಡುವಲ್ಲಿ ಸಾಮವೇದದ ಆರು ಮಂತ್ರಗಳಿಂದ ಯಾಗಾರ್ಥವಾದ ಆರು ಅಗ್ನಿಗಳನ್ನು ಪ್ರತಿಷ್ಠಾಪಿಸಬೇಕು. ಅದಕ್ಕೆ ಸಮಯವೀಗ ಸಂನಿಹಿತವಾಗಿದೆ. ಈ ಯಜ್ಞಾರಂಭದಲ್ಲಿ ದರ್ವೀಹೋಮವೆಂಬುದಿದೆ. ಅಲ್ಲಿಂದ ಆರಂಭಿಸಿ ಎಲ್ಲ ಯಜ್ಞಗಳ ಫಲಗಳನ್ನೂ ಪಡೆಯುವುದಾಗುತ್ತದೆ. ಯಜ್ಞದ ಕೊನೆಯಲ್ಲಿ ರಾಜನಿಗೆ ಅಭಿಷೇಕವು ನಡೆಯುತ್ತದೆ. ಅಲ್ಲಿಂದ ಆತನಿಗೆ ಸರ್ವಜಿತ್ ಎಂಬ ಬಿರುದು ಸಲ್ಲುತ್ತದೆ.

ಓ ರಾಜನೇ, ಮಹಾಬಾಹುವೇ, ನೀನು ಈ ಯಜ್ಞವನ್ನು ಮಾಡಲು ಸಮರ್ಥನಾಗಿದ್ದೀಯೇ. ಇದೋ, ನಾವೆಲ್ಲರೂ ನಿನಗೆ ಅಧೀನರಾಗಿ ಕೆಲಸವನ್ನು ಮಾಡಲು ಸಿದ್ಧರಿದ್ದೇವೆ. ಶೀಘ್ರದಲ್ಲಿಯೇ ನೀನು ಈ ರಾಜಸೂಯವನ್ನು ಸಾಧಿಸುವವನಾಗುವೆ. ಆದುದರಿಂದ ನೀನು ಇನ್ನೇನೂ ವಿಚಾರ ಮಾಡದೆ ರಾಜಸೂಯವನ್ನಾರಂಭಿಸು" ಎಂದರು.

ಮತ್ತೇನೂ ವಿಚಾರವನ್ನೇ ಮಾಡದೆ ರಾಜಸೂಯವನ್ನು ಮಾಡುವುದರತ್ತ ಮನಸ್ಸು ಕೊಡು - ಹೀಗೆಂಬುದಾಗಿ ಎಲ್ಲರೂ ಬೇರೆ ಬೇರೆಯಾಗಿಯೂ ಒಟ್ಟಿಗೂ ಯುಧಿಷ್ಠಿರನಿಗೆ ಹೇಳಿದರು. ದಿಟ್ಟವೂ ಶ್ರೇಷ್ಠವೂ ಪ್ರಿಯವೂ ಧರ್ಮಸಂಮತವೂ ಆದ ಅವರ ಈ ಮಾತುಗಳನ್ನು ಕೇಳಿದ ಯುಧಿಷ್ಠಿರನು ಆ ಬಗ್ಗೆ ಮನಸ್ಸು ಮಾಡಿದನು. ಮಿತ್ರರ ಮಾತುಗಳನ್ನು ಆಲಿಸಿ, ತನ್ನ ಸಾಮರ್ಥ್ಯವನ್ನೂ ಅರಿತುಕೊಂಡಿದ್ದ ಆತನು ರಾಜಸೂಯವನ್ನು ನಡೆಸಲು ಮನಸ್ಸು ಮಾಡಿದನು.

ತನ್ನ ಭ್ರಾತೃಗಳು, ಮಹಾತ್ಮರಾದ ಋತ್ವಿಕ್ಕುಗಳು, ಮಂತ್ರಿಗಳು, ಹಾಗೂ ಧೌಮ್ಯ ಮತ್ತು ವ್ಯಾಸ -ಇವರೆಲ್ಲರೊಂದಿಗೆ ಧರ್ಮರಾಜನು ಮಂತ್ರಾಲೋಚನವನ್ನು ನಡೆಸಿದನು. ರಾಜಸೂಯವನ್ನು ನಡೆಸಲು ಎಲ್ಲರೂ ಒಮ್ಮತವನ್ನು ಸೂಚಿಸಿದರು. ಇಷ್ಟಾದರೂ, ಈ ಕಾರ್ಯವು ಲೋಕಹಿತವನ್ನು ಸಾಧಿಸುವುದೇ? - ಎಂಬತ್ತ ಮನಸ್ಸು ಹರಿಸಿದನು.

ಯಾರೇ ಆಗಲಿ ಒಂದು ಕೆಲಸವನ್ನು ಸಾಧಿಸಹೊರಟರೆ ಗಮನಿಸಬೇಕಾದ ಅಂಶಗಳಿವು: ತನ್ನ ಶಕ್ತಿಯೇನು, ಹಾಗು ತನ್ನಲ್ಲಿರುವ ಸಾಧನಗಳೇನು? ಕೆಲಸದ ದೇಶ-ಕಾಲಗಳ ಸಂನಿವೇಶವೇನು? ಪ್ರಕೃತಕಾರ್ಯದಲ್ಲಿ ಉಂಟಾಗುವ ವ್ಯಯ-ಆಗಮಗಳು, ಎಂದರೆ ನಷ್ಟ-ಲಾಭಗಳು ಏನೇನು? - ಇವನ್ನೆಲ್ಲ ಚೆನ್ನಾಗಿ ವಿಮರ್ಶೆ ಮಾಡಿ ಯಾವನು ತೊಡಗುವನೋ ಅವನು ಎಂದೂ ಧೃತಿಗೆಡನು.

ಯಜ್ಞವನ್ನು ಮಾಡುವುದೆಂಬುದು ನನ್ನೊಬ್ಬನದೇ ನಿಶ್ಚಯದಿಂದ - ಎಂಬಂತೆ ಆಗಬಾರದು. ಹೀಗೆಂದುಕೊಂಡ ಯುಧಿಷ್ಠಿರನು ಕಾರ್ಯವನ್ನು ಯತ್ನಪೂರ್ವಕವಾಗಿ ಮಾಡುವವನಿದ್ದು, ನಿಶ್ಚಯಕ್ಕೋಸ್ಕರವಾಗಿ ಶ್ರೀಕೃಷ್ಣನನ್ನೇ ಸ್ಮರಿಸಿಕೊಂಡನು. ಶ್ರೀಕೃಷ್ಣನಾದರೂ ಎಲ್ಲರಿಗಿಂತಲೂ ಶ್ರೇಷ್ಠನು, ಅಪ್ರಮೇಯನಾದ ಮಹಾಬಾಹುವು. ಜನ್ಮವೆಂಬುದು ತನಗಿಲ್ಲದಿದ್ದರೂ ತನ್ನ ಸಂಕಲ್ಪದಂತೆ ಅವತರಿಸಿರುವನು. ದೇವತೆಗಳು ಸಹ ಕೃಷ್ಣನ ಕರ್ಮಗಳನ್ನು ಮೆಚ್ಚತಕ್ಕವರೇ. ಆತನಿಗೆ ತಿಳಿಯದುದಿಲ್ಲ. ಅತನು ಸಾಧಿಸಲಾಗದೆಂಬ ಕಾರ್ಯವೂ ಯಾವುದೂ ಇಲ್ಲ.

ಹೀಗೆಂಬುದಾಗಿ ಒಂದು ನಿಶ್ಚಿತವಾದ ಬುದ್ಧಿಯನ್ನು ಮಾಡಿಕೊಂಡನು. ಗುರುವಿನಲ್ಲಿಗೆ ಹೇಗೋ ಹಾಗೆ ಶ್ರೀಕೃಷ್ಣನಲ್ಲಿಗೆ ದೂತನೊಬ್ಬನನ್ನು ಒಡನೆಯೇ ಕಳುಹಿಸಿದನು.

ಆ ದೂತನಾದರೂ ಶೀಘ್ರಗಾಮಿಯದ ರಥವೊಂದರಲ್ಲಿ ಸಾಗಿ ಯಾದವರಲ್ಲಿಗೆ ಹೋದನು. ದ್ವಾರಕಾವಾಸಿಯಾದ ಕೃಷ್ಣನನ್ನು ಭೇಟಿಮಾಡಿದನು. ಕೈಜೋಡಿಸಿ ನಮ್ರನಾಗಿ ಶ್ರೀಕೃಷ್ಣನಲ್ಲಿ ಈ ಪ್ರಕಾರವಾಗಿ ನಿವೇದಿಸಿಕೊಂಡನು: "ಹೃಷೀಕೇಶನೇ, ಧೌಮ್ಯ, ವ್ಯಾಸ ಮುಂತಾದ ಮಹರ್ಷಿಗಳು, ಮತ್ತು ಪಾಂಚಾಲ-ಮಾತ್ಸ್ಯದೇಶಗಳ ರಾಜರುಗಳು, ಎಂದರೆ ದ್ರುಪದ-ವಿರಾಟರಾಜರು, ಹಾಗೂ ತನ್ನ ಭ್ರಾತೃಗಳು - ಇವರುಗಳೊಂದಿಗೆ ಯುಧಿಷ್ಠಿರನು ನಿನ್ನ ದರ್ಶನವನ್ನು ಬಯಸಲು ಇಷ್ಟಪಟ್ಟಿದ್ದಾನೆ."

ಸೂಚನೆ : 16/11/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.


Sunday, November 16, 2025

ಅಷ್ಟಾಕ್ಷರೀ - 79 ಆತ್ಮಾ ಗುಹಾಯಾಂ ನಿಹಿತಃ (Astakshari 79)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಪ್ರಪಂಚದಲ್ಲಿ ನಾನಾ ತೆರನಾದ ಜನರನ್ನು ನೋಡುತ್ತೇವೆ. ಅವರಲ್ಲಿ ಮೊತ್ತಮೊದಲು ತೋರುವುದೇ ವೇಷಭೂಷಣ-ವೈಚಿತ್ರ್ಯ; ಆಮೇಲೆ ಮೈಬಣ್ಣ-ಮೈಕಟ್ಟುಗಳಲ್ಲಿನ ಭೇದ. ಒಂದೇ ದೇಶದಲ್ಲಿಯ ಮಂದಿಯಲ್ಲೇ ಒಬ್ಬರಂತಿನ್ನೊಬ್ಬರಿಲ್ಲ. ಒಬ್ಬರ ರುಚಿ-ಸಾಮರ್ಥ್ಯಗಳು ಮತ್ತೊಬ್ಬರಲ್ಲಿಲ್ಲ. ಹೇಗೆ ಒಂದೇ ಮರದ ಎಲೆಗಳೆಲ್ಲ ಒಂದೇ ತೆರನೋ, ಆದರೂ ಒಂದರ ಅಚ್ಚೇ ಮತ್ತೊಂದಲ್ಲವೋ, ಹಾಗೆಯೇ ಮನುಷ್ಯರಲ್ಲೂ.

ಇಷ್ಟೊಂದು ವೈವಿಧ್ಯವೇ ಕಂಡರೂ ಎಲ್ಲರ ಗುರಿಯೂ ಒಂದೇ - ಎನ್ನಬಹುದು. ಒಬ್ಬೊಬ್ಬರ ದಿಕ್ಕು-ನಡೆ-ವೇಗಗಳೂ ಬೇರೆಬೇರೆಯೆಂದಾದರೂ ಎಲ್ಲರಿಗೂ ಒಂದೇ ಲಕ್ಷ್ಯ: ಸುಖ ಬೇಕು, ದುಃಖ ಬೇಡ - ಎನ್ನುವುದು. ಹೀಗೆ ಎಲ್ಲರೂ ಸುಖಾರ್ಥಿಗಳೇ.

ಹಾಗಾದರೆ ಸುಖವೆಲ್ಲಿರುವುದು? ಕೆಲವರಿಗೆ ಒಳ್ಳೆಯ ಭಕ್ಷ್ಯ-ಭೋಜ್ಯಗಳಲ್ಲಿ, ಕೆಲವರಿಗೆ ಊರೂರು ತಿರುಗುವುದರಲ್ಲಿ, ಮತ್ತೊಬ್ಬರಿಗೆ ತೀವ್ರಧನಾರ್ಜನೆಯಲ್ಲಿ. ಸುಖವೆಂದರೇನೆಂಬುದರ ಕಲ್ಪನೆಗಳೇ ಎಷ್ಟೆಷ್ಟು ಭಿನ್ನ! ಅಂತೆಯೇ ಅದರ ಸಾಧನೆಗಾಗಿನ ಚಟುವಟಿಕೆಗಳೂ ಎಷ್ಟು ಭಿನ್ನ!

ಈ ವಿಷಯದಲ್ಲಿ ನಮ್ಮ ಋಷಿಗಳ ಚಿಂತನದಲ್ಲಿ ಏನಾದರೂ ವಿಶೇಷವಿರುವುದೇ? - ಎಂಬುದಿಲ್ಲಿ ಜಿಜ್ಞಾಸ್ಯವಾದದ್ದು; ಜಿಜ್ಞಾಸ್ಯವೆಂದರೆ ಯಾವುದರ ಬಗ್ಗೆ ಕುತೂಹಲವು ಯೋಗ್ಯವೋ ಅದು; ಅರಿತುಕೊಳ್ಳಲು ಅರ್ಹವಾದದ್ದು. ಬಹುಮಂದಿಗೆ ಖಾನಾ-ಪೀನಾ-ಸೋನಾಗಳಲ್ಲೇ ತೃಪ್ತಿ: ತಿನ್ನು-ಕುಡಿ-ಮಲಗುಗಳೇ ಅವರ ಜೀವನಚಕ್ರ. ಇತರರಿಗೆ ದೇಶ ಸುತ್ತುವುದು, ಕಲೆಗಳನ್ನು ಸಾಧಿಸುವುದು, ಅಥವಾ ಬೌದ್ಧಿಕವಾದ ಸಾಧನೆಗಳಲ್ಲಿ ರುಚಿ.

ಇವೆಲ್ಲವನ್ನೂ ಮಾಡಿದರೂ, ಸ್ವ-ಜೀವನವನ್ನು ಪರೀಕ್ಷಿಸಿಕೊಳ್ಳದಿದ್ದರೆ ಪ್ರಯೋಜನವೇನು? - ಎನ್ನುವವರೂ ಉಂಟು. ಸಾಕ್ರಟೀಸನ ಉದ್ಗಾರವೂ ಅದೇ ಆಗಿತ್ತಲ್ಲವೇ?  ಎಂದೇ ಅತ್ಯಂತ ಮುಖ್ಯವಾದುದು ಆತ್ಮನನ್ನು ಕುರಿತಾದ ಅರಿವು - ಎನ್ನುತ್ತದೆ ಭಾರತ ಪರಂಪರೆ. ಆತ್ಮಜ್ಞಾನವನ್ನು ಸಂಪಾದಿಸಿಕೊಂಡೆವೋ ಜೀವನವು ಧನ್ಯ; ಇಲ್ಲದಿದ್ದರಿಲ್ಲ – ಎಂದು ನಮ್ಮ ಸಂತರ, ಜ್ಞಾನಿಗಳ ಸಾಹಿತ್ಯಗಳೆಲ್ಲಾ ಸಾರಿರುವುವು.

ಹಾಗಾದರೆ ಆತ್ಮನನ್ನು ಎಲ್ಲಿ ಹುಡುಕುವುದು? ಅದಕ್ಕೆ ಉತ್ತರವನ್ನು ನಮ್ಮ ಉಪನಿಷತ್ತುಗಳಿತ್ತಿವೆ: ಆತ್ಮ/ಪರಮಾತ್ಮನಿರುವುದು ಗುಹೆಯಲ್ಲಿ (ಆತ್ಮಾ ಗುಹಾಯಾಂ ನಿಹಿತಃ). ಈ ಮಾತು ಶ್ವೇತಾಶ್ವತರೋಪನಿಷತ್ತಿನಲ್ಲಿ ಬಂದಿದೆಯಾದರೂ ಕಠ-ಮುಂಡಕ-ತೈತ್ತಿರೀಯ-ಮಹಾನಾರಾಯಣಗಳೆಂಬ ಉಪನಿಷತ್ತುಗಳಲ್ಲೂ ಈ ಅಭಿಪ್ರಾಯವು ಬಂದಿರುವುದೇ.

ಅಲ್ಲಿಗೆ ಆತ್ಮನ ವಿಳಾಸ(ಅಡ್ರೆಸ್) ಸಿಕ್ಕಿದಂತಾಯಿತಲ್ಲವೇ? ಹಾಗಾದರೆ ಎಲ್ಲಿಯ ಗುಹೆಯದು? ಹಿಮಾಲಯವೇ? ಅಜಂತ-ಎಲ್ಲೋರಗಳೇ? ಯಾವುದನ್ನಾದರೂ "ಅದು ಗುಹೆಯಲ್ಲಿ ಅಡಗಿದೆ" ಎಂದರೆ, ಅದು ಬಹುಮಂದಿಗೆ ದೊರೆಯದು - ಎಂದೇ ಅರ್ಥ. ಗುಹೆಯಲ್ಲಿರುವುದಿರಲಿ, ಇಲ್ಲೊಂದು ಗುಹೆಯಿರುವುದೆಂಬುದೂ ಎಷ್ಟೋ ವೇಳೆ ಅನೇಕಮಂದಿಯ ಅರಿವಿಗೆ ಸಹ ಬರದೇ ಉಳಿಯಬಹುದು!

ಗುಹಾ ಎಂಬ ಪದವು ಬಂದಿರುವುದು ಗುಹ್ ಎಂಬ ಧಾತುವಿನಿಂದ. ಅದಕ್ಕೆ ಸಂವರಣ ಅಥವಾ ಮುಚ್ಚಿಡುವುದೆಂಬುದೇ ಅರ್ಥ. ಹೀಗಾಗಿ, ಪರವಸ್ತುವನ್ನು ತನ್ನಲ್ಲಿ ಅಡಗಿಸಿಕೊಂಡಿರುವುದೇ ಈ ಗುಹೆ. "ಗುಹಾ-ನಿಹಿತ"ವೆಂದರೆ ಅತಿರಹಸ್ಯವೆಂದೇ ಅರ್ಥ. ಬಹಳ ಬೆಲೆಬಾಳುವ ಪದಾರ್ಥವನ್ನು ಹಿಂದೆ ಹೂತಿಡುವ ಕ್ರಮವಿತ್ತಲ್ಲವೇ? ಅಗೆಯುವಾಗ ನಿ-ಧಿಗಳು ದೊರೆತಿರುವುದುಂಟಲ್ಲವೇ? ಹಾಗೆಯೇ, ನಿ-ಹಿತವೆಂದರೆ ಕೆಳಗೆ/ಒಳಗೆ ಇಟ್ಟಿರುವುದೇ.

ಆದರೆ ನಮ್ಮ ಅದೃಷ್ಟವೆಂದರೆ, ಅದು ಯಾವುದೋ ತಲುಪಲಾಗದ ದೂರದ ಗುಹೆಯಲ್ಲ; ಹತ್ತಿರವೇ ಇರುವ ಗುಹೆ. ಬಹಳ ಹತ್ತಿರವೇ ಇರುವಂತಹುದು. ಇದಕ್ಕಿಂತಲೂ ಹತ್ತಿರವೆಂಬುದೇ ಇರಲು ಸಾಧ್ಯವಿಲ್ಲವೆನ್ನುವಂತಹ ಗುಹೆ: ಹೃದಯ-ಗುಹೆಯೇ ಅದು.

ಯಾರ ಹೃದಯದಲ್ಲಿಯದು? ಎಲ್ಲರ ಹೃದಯದಲ್ಲೂ! ಬ್ರಹ್ಮಾದಿ-ಸ್ತಂಬಪರ್ಯಂತವಾದ (ಎಂದರೆ, ಬ್ರಹ್ಮನಿಂದ ಹುಲ್ಲಿನವರೆಗಿನ) ಸಮಸ್ತ-ಪ್ರಾಣಿಗಳ ಹೃದಯದಲ್ಲೂ ಅದಿರುವುದೇ!

ಸೃಷ್ಟಿ-ಕಾರುಣ್ಯವೆಂದರೆ ಇದೇ ಅಲ್ಲವೇ?: ಅತ್ಯಂತಗಹನವೆನಿಸುವಂತಹುದು ಹೀಗೆ ಅತ್ಯಂತನಿಕಟವಾಗಿಯೇ ಇರುವಂತಹುದು! ಭಗವಂತನೆಂಬ ನಿಧಿಯು ಸರ್ವಪ್ರಾಣಿ-ಹೃದಯಗರ್ಭದಲ್ಲೂ ನೆಲೆಸಿದೆ! ಇಲ್ಲಿ ಉಚ್ಚ-ನೀಚರೆಂಬ ಭೇದಭಾವವಿಲ್ಲ, ಬಡವ-ಬಲ್ಲಿದರೆಂಬ ವಿಭಾಗವೂ ನಡೆಯುವುದಲ್ಲ.

ನಿಧಿಯನ್ನು ಒಳಗೆ ಅಡಗಿಸಿಡುವರಲ್ಲವೆ? ಹಾಗೆಯೇ ನಮ್ಮೆಲ್ಲರ ನಿಧಿಯಾದ ಭಗವಂತನು ಹೀಗೆ ತನ್ನನ್ನೇ ಮುಚ್ಚಿಟ್ಟುಕೊಂಡಿರುವನು.

ಆದರೂ ಎಲ್ಲರೂ ಆತನನ್ನು ಕಂಡುಕೊಳ್ಳಬಹುದು! ಅದಕ್ಕೆ ಸಾಧನವಾದದ್ದು ಅಧ್ಯಾತ್ಮ-ಯೋಗ. ಅರ್ಥಾತ್, ಮನಸ್ಸನ್ನು ಒಳಮುಖವಾಗಿ ಹರಿಸುವುದು.

ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳು ಇಲ್ಲೊಂದು ಮುಖ್ಯ-ಸೂಕ್ಷ್ಮವಿಚಾರವನ್ನೂ ತಿಳಿಸಿರುವರು."ಇಲ್ಲಿ ಗುಹೆಯೆಂದರೆ ಹೃದಯಗುಹೆಯು ಮಾತ್ರವಲ್ಲದೆ ಬುದ್ಧಿಗುಹೆಯೂ ಆಗಬಹುದು. ಬುದ್ಧಿಗುಹೆಯೆಂಬುದು ಮಹಾಮಸ್ತಿಷ್ಕವೆಂದು ಕರೆಸಿಕೊಳ್ಳುವ ಪರಮೋರ್ಧ್ವಸ್ಥಾನವಾಗಿರುವುದು." – ಎಂದು.

ಭಗವಂತನು ಎಲ್ಲೆಡೆ ಇರುವನೆಂದು ಹೇಳುವಲ್ಲಿ, ಈ ಎರಡು ಸ್ಥಾನಗಳನ್ನು ಬೊಟ್ಟುಮಾಡಿ ತೋರಿಸುವುದು, ಭಗವಂತನಿಗೆ ಅಪಚಾರ ಮಾಡಿದಂತಲ್ಲವೇ? – ಎಂದೆನಿಸಬಹುದು. ಇಲ್ಲೇನೂ ವಿರೋಧವಿಲ್ಲ. ಆತ್ಮಸಾಧಕರಿಗೆ ತಮ್ಮಲ್ಲೇ ಈ ಎರಡು ಎಡೆಗಳಲ್ಲಿ ಭಗವದ್ವಸ್ತುವು ವಿಶೇಷವಾಗಿ ಅನುಭವಗೋಚರವಾಗುವ ಕಾರಣ ಹೀಗೆ ಹೇಳಲಾಗುವುದು. ಇದೂ ಯೋಗಜ್ಞರಾದ ಅವರ ಅನುಭವ-ಸಿದ್ಧ-ವಿವರಣೆಯೇ.

ಸೂಚನೆ: 15/11//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.


ಕೃಷ್ಣಕರ್ಣಾಮೃತ 82 ಗೋ-ಗೋಪ-ಗೋಪಿಯರ ನಡುವೆ ನಿಲ್ಲುವ ಪ್ರಭುವು ಪೊರೆಯಲಿ (Krishakarnamrta 82)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಕೃಷ್ಣನು ನಮ್ಮನ್ನು ಕಾಪಾಡಲಿ, ಎನ್ನುತ್ತದೆ ಈ ಶ್ಲೋಕ. ಎಂತಹ ಕೃಷ್ಣನಿವನು? ಗೋಪಿಕೆಯರು ಯಾರನ್ನು ಕುರಿತು ಹಾಡುವರೋ ಅಂತಹ ಕೃಷ್ಣನು.

ಯಾವಾಗ ಹಾಡುವರು ಆ ಗೋಪಿಕೆಯರು? ಹೇಗೆ ಹಾಡುವರು? ಅವರಾದರೂ ಎಂತಹವರು? - ಎಂಬುದನ್ನೆಲ್ಲಾ ಈ ಶ್ಲೋಕವು ಮಧುರವಾಗಿ ಚಿತ್ರಿಸುತ್ತದೆ.

ಕ್ಷಣದಾ ಎಂದರೆ ರಾತ್ರಿ. ಅದರ ಅವಸಾನಸಮಯವೆಂದರೆ ಇರುಳು ಕಳೆಯುವ ವೇಳೆ. ಅರ್ಥಾತ್ ಉಷಃಕಾಲ. ಬೆಳಗಿನ ಜಾವವೆಂದರೆ ಆಗಿನ ಕಾಲದ ನಾರಿಯರು ಮೊಸರು ಕಡೆಯುತ್ತಿದ್ದ ಸಮಯ. ಗೋಕುಲದ ಗೋಪಿಯರೂ ಇಲ್ಲಿ ಅದನ್ನೇ ಮಾಡುತ್ತಿರುವರು.

ಮೊಸರು ಕಡೆಯುವಾಗ ಕೈಗಳ ಚಲನೆಯು ಆಗುತ್ತಿರುವುದಷ್ಟೆ? ಬೆಣ್ಣೆ ಬರುವ ತನಕ ಕಡೆಯುತ್ತಿರಬೇಕಲ್ಲವೆ? ಅದಕ್ಕೊಂದಿಷ್ಟು ಸಮಯ ಹಿಡಿಯುತ್ತದೆ. ಕಡೆಯುವಾಗ ಅವರ ಕೈಗಳು ವೇಗದಿಂದ ಹಿಂದೆಯೂ ಮುಂದೆಯೂ ಹೋಗುತ್ತಿರಲು, ಅವರ ಪಾಣಿ-ಕಂಕಣಗಳ ಝಣತ್ಕಾರವೂ ಆಗುತ್ತಿರುತ್ತದೆ. ಅರ್ಥಾತ್, ಎರಡೂ ಕೈಗಳ ಬಳೆಗಳ ಸದ್ದೂ ಆಗುತ್ತಿರುತ್ತದೆ. ಈ ಜವದ ಸದ್ದಿನಲ್ಲೇ ತಾಳದ ಗತಿಯೂ ಕೂಡಿದ್ದು, ಅವರು ಆನಂದದಿಂದ ಹಾಡುವ ಹಾಡಿಗೆ ಜೊತೆಯಾದ ಲಯವಾಗಿ ಅದು ರೂಪುಗೊಂಡಿರುತ್ತದೆ.

ಮೊಸರು ಕಡೆಯಲು ಎರಡೂ ಕೈಗಳ ಬಳಕೆಯಾಗುವುದಲ್ಲವೆ? ಮಂದಗತಿಯಿಂದ ಕಡೆದರೆ ಬೆಣ್ಣೆ ಬರುವುದಿಲ್ಲವಾಗಿ, ವೇಗದಿಂದಲೇ ಕಡೆಯಬೇಕಾಗುತ್ತದೆ. ಮಧ್ಯೆ ನಿಲ್ಲಿಸುವಂತೆಯೂ ಇಲ್ಲ. ಏಕೆಂದರೆ ಒಂದೇ ಸಮನೆ ಕಡೆದರೆ ಬರುವಂತೆ, ಬಿಟ್ಟು ಬಿಟ್ಟು ಕಡೆದರೆ ಬರುವುದಲ್ಲ, ಬೆಣ್ಣೆ.

ಈ ಪರಿಜ್ಞಾನವಿರುವುದರಿಂದ ಬಿರುಸಾಗಿಯೇ ಕಡೆಯುವಿಕೆಯು ನಡೆಯುತ್ತಿರಲು, ಅವರ ಸೆರಗೂ ಒಂದಿಷ್ಟು ಜಾರಿರುವುದುಂಟು. ಆದರೆ ಇತ್ತ ಕಡೆಯುವುದರಲ್ಲೂ ಅತ್ತ ಗಾನದಲ್ಲೂ ಮೈಮರೆತಿರುವ ಅವರಿಗೆ ಸೆರಗು ಜಾರಿರುವ ಪರಿಜ್ಞಾನವೂ ಇರುವುದಿಲ್ಲ.

ಬೆಳಗಿನ ಜಾವ ಹೀಗೆ ಹಾಡಿಕೊಂಡು ಕೆಲಸಮಾಡಿಕೊಳ್ಳುವಾಗ ಆಗಾಗ ಅವರ ದಂತಗಳೂ ತೋರತಕ್ಕವೇ. ಅವರ ದಂತಕಾಂತಿಯೂ ಕಮನೀಯವೇ. ಎಷ್ಟು ಕಮನೀಯ? ಆಕಾಶದ ಚಂದ್ರನ ಕಾಂತಿಯಲ್ಲವೇ ಹೊಳಪಿಗೆ ಪ್ರಸಿದ್ಧ? ಆ ಇಂದುಪ್ರಭೆಯನ್ನೂ ಮೀರಿಸುವುದು ಇವರ ದಂತಕಾಂತಿಯ ನಿವಹ. ನಿವಹವೆಂದರೆ ಸಮೂಹ.

ಮುಖ್ಯವಾಗಿ ಅವರು ಹಾಡುವುದಾದರೂ ಯಾವುದನ್ನು? ಮತ್ತೇನು, ಶ್ರೀಕೃಷ್ಣನನ್ನು ಕುರಿತಾಗಿಯೇ. ಆತನ ಲೀಲೆಗಳನ್ನು ಕುರಿತಾಗಿಯೇ. ಈ ಪರಿಯಲ್ಲಿ ಯಾರನ್ನು ಕುರಿತಾಗಿ ತಮ್ಮ ಮುಗ್ಧವೂ ಮಧುರವೂ ಆದ ಮನಸ್ಸಿನಿಂದ ಮೈಮರೆತು ಗೋಕುಲದ ಅಂಗನೆಯರು ಸಾನಂದರಾಗಿ ಹಾಡಿಕೊಳ್ಳುವರೋ ಅಂತಹ ಪೀತಾಂಬರನೆನಿಸುವ ಶ್ರೀಕೃಷ್ಣನು ನಮ್ಮನ್ನು ಸದಾ ಪೊರೆಯಲಿ - ಎನ್ನುತ್ತಾನೆ, ಲೀಲಾಶುಕ.

ಗಾಯಂತಿ ಕ್ಷಣದಾವಸಾನ-ಸಮಯೇ ಸಾನಂದಂ ಇಂದುಪ್ರಭಾಃ/
ರುಂಧತ್ಯೋ ನಿಜ-ದಂತ-ಕಾಂತಿ-ನಿವಹೈಃ ಗೋಪಾಂಗನಾಃ ಗೋಕುಲೇ |
ಮಥ್ನತ್ಯೋ ದಧಿ-ಪಾಣಿ-ಕಂಕಣ-ಝಣತ್ಕಾರಾನುಕಾರಂ ಜವಾತ್/
ವ್ಯಾವಲ್ಗದ್-ವಸನಾಂಚಲಾಃ ಯಂ ಅನಿಶಂ ಪೀತಾಂಬರೋಽವ್ಯಾತ್ ಸ ನಃ ||

***

ಕೃಷ್ಣನಲ್ಲೊಂದು ಪ್ರಾರ್ಥನೆ, ಲೀಲಾಶುಕನದು. ನನ್ನ ಮಾತು ಹೀಗಾಗಲಿ, ನನ್ನ ಚಿತ್ತವು ಹೀಗಾಗಲಿ - ಎಂಬುದಾಗಿ. ವಾಙ್ಮನಸಗಳು ಹೇಗಾಗಬೇಕೆಂಬುದಾಗಿ ಲೀಲಾಶುಕನ ಪ್ರಾರ್ಥನೆ? ಎರಡೂ ವೃದ್ಧಿಗೊಳ್ಳಲಿ - ಎಂಬುದಾಗಿ.

ಕೃಷ್ಣನ ವೈಭವವೆಂಬುದು ಅದ್ಭುತವಾದದ್ದು. ಆತನ ರೂಪವೇನು, ಲಾವಣ್ಯವೇನು, ವಿಲಾಸವೇನು!

ಆತನನ್ನು ಮಾತಿನಲ್ಲಿ ಹಿಡಿದಿಡಲಾಗುವುದೇ? ಆದರೂ ನಿನ್ನ ಆ ಎಲ್ಲ ವೈಭವವನ್ನು ವರ್ಣಿಸುವುದರಲ್ಲಿ ನನ್ನ ಮಾತು ವರ್ಧಿಸಲಿ.  ಹೇಗೆ? ಮಾಧುರ್ಯದಿಂದ ವಿಜೃಂಭಿಸಲಿ. ಮಾತು ಸುಮ್ಮನೆ ಅತಿಯಾಗುವುದಲ್ಲ. ಮಾತು ಬೆಳೆಯಲಿ, ಆದರೆ ಅದು ಮಾಧುರ್ಯದಿಂದ ತುಂಬಿ ತುಳುಕಲಿ. ಕೃಷ್ಣನ ಮಾಧುರ್ಯಕ್ಕೆ ಮೋಸವಾಗಬಾರದಲ್ಲವೇ? ಎಂದೇ ಅದಕ್ಕೆ ತಕ್ಕಂತೆ ನನ್ನ ಮಾತಿನಲ್ಲೂ ಮಾಧುರ್ಯವು ತುಂಬಿ ಬರಲಿ.

ಇನ್ನು ಆತನ ಶೈಶವವಾದರೂ ಬಹು ಸೊಗಸಿನಿಂದ ಕೂಡಿರುವುದು. ಯೌವನದ ಎಳಸನ್ನೇ ಇಲ್ಲಿ ಶೈಶವವೆಂದಿರುವುದು. ಆ ಕುರಿತಾಗಿ ನೇತ್ರ-ಚಾಪಲ್ಯವಿರಬೇಕು. ಎಂದರೆ ಮತ್ತೆ ಮತ್ತೆ ಕಾಣುತ್ತಿರುವ ಬಯಕೆಯು ಉಳಿದೇ ಇರಬೇಕು, ಬೆಳೆಯುತ್ತಲೇ ಇರಬೇಕು. ಕೃಷ್ಣನ ಗುಣಗಾನವನ್ನು ಆಲಿಸಲು ಕರ್ಣ-ಚಾಪಲವಿರಬೇಕು. ಚಿತ್ತದಲ್ಲಿ ಆತನನ್ನು ಆಸ್ವಾದಿಸುವ ಚಿತ್ತ-ಚಾಪಲ್ಯವಿರಬೇಕು. ಒಮ್ಮೆ ಆಸ್ವಾದಿಸಿದಾಗ ಬಹಳವೇ ಸಂತೋಷವಾಗಿದ್ದು, ಮತ್ತೂ ಮತ್ತೆ ಮತ್ತೆ ಆಸ್ವಾದಿಸಬೇಕೆನ್ನುವ ಹಂಬಲಿಕೆಯೇ ಚಾಪಲ(ಲ್ಯ).

ನಿನ್ನನ್ನು ಕುರಿತಾದ ಆ ಚಾಪಲ್ಯವು ವರ್ಧಿಸುತ್ತಿರಲಿ - ಎಂದಿಲ್ಲಿ ಪ್ರಾರ್ಥಿಸಿದೆ. ನಿನ್ನ ಆ ರೂಪವನ್ನು ಕುರಿತಾಗಿ ನನ್ನ ಉತ್ಕಂಠೆಯು - ಎಂದು ಪಡೆದೇನೋ ನಿನ್ನ ದರ್ಶನವನ್ನು, ಎನ್ನುವ ಆ ಚಿಂತೆಯು ವರ್ಧಿಸಲಿ.

ಶ್ಲೋಕದ ಎರಡು ಅರ್ಧಗಳ ಪದಗುಂಫನದಲ್ಲಿಯೇ ಒಂದು ವಿಶೇಷವಿದೆ. ೩+೪+೨+ (೨)+೩ ಎಂಬಂತೆ ಅಕ್ಷರಗಳ ಜೋಡಣೆಯಿದೆ. ಪೂರ್ವಾರ್ಧವು ಉತ್ತರಾಧವನ್ನು ಪ್ರತಿಫಲಿಸುವಂತಿದೆ.

ಮಾಧುರ್ಯೇಣ ವಿಜೃಂಭಂತಾಂ/ ವಚೋ ನಸ್ತವ ವೈಭವೇ |
ಚಾಪಲ್ಯೇನ ವಿವರ್ಧಂತಾಂ/ ಚಿಂತಾ ನಸ್ತವ ಶೈಶವೇ ||

ಪೂರ್ವಾರ್ಧ-ಉತ್ತರಾರ್ಧಗಳು ಒಂದಕ್ಕೊಂದು ಪ್ರತಿಬಿಂಬದಂತೆ ಇವೆ. ಮಾತು-ಮನಸ್ಸುಗಳಲ್ಲಿ ಒಂದೇ ಪರತತ್ತ್ವದ ಪ್ರತಿಫಲನವನ್ನು ಬಯಸಿದೆ.

***

ಗೋಪನನ್ನು ಭಜಿಸುತ್ತೇನೆ – ಎನ್ನುತ್ತಾನೆ, ಲೀಲಾಶುಕ. ಎಂತಹವನು ಈ ಗೋಪ? – ಎಂಬುದನ್ನು ನಾಲ್ಕು ಪಾದಗಳಲ್ಲಿಯ ನಾಲ್ಕು ವಿಶೇಷಣಗಳಿಂದ ತಿಳಿಯಪಡಿಸುತ್ತಾನೆ.

ಮೊದಲನೆಯದಾಗಿ, ಆತನಿರುವುದು ಮಂದಾರದ ಬುಡದಲ್ಲಿ. ಮಂದಾರವು ದೇವವೃಕ್ಷವಷ್ಟೆ? ಹೀಗೆ, ಕೇಳಿದ್ದನ್ನೆಲ್ಲಾ ಕೊಡುವ ಕಲ್ಪತರುವಿನ ಕೆಳಗೇ ಶ್ರೀಕೃಷ್ಣನಿರುವುದು. ಜೊತೆಗೆ ಮದನನಂತೆ ಅಭಿರಾಮನಾಗಿದ್ದಾನೆ, ಎಂದರೆ ಆಕರ್ಷಕನಾಗಿದ್ದಾನೆ.

ಎರಡನೆಯದಾಗಿ, ಬಿಂಬವೆಂಬ ಫಲದಂತೆ, ಎಂದರೆ ತೊಂಡೇಹಣ್ಣಿನಂತೆ, ಇರುವ ತುಟಿ ಆತನದು. ಅಲ್ಲಿಟ್ಟಿರುವ ಕೊಳಲಲ್ಲಿ ಆತನ ತುಟಿಯುಸಿರು ತುಂಬಿದೆ, ನಾದವನ್ನು ಹೊಮ್ಮಿಸಿದೆ. ಹೀಗಾಗಿ, ಕೆಂದುಟಿ-ಇನಿದನಿಗಳಿಂದ ಆಕರ್ಷಕನಾಗಿದ್ದಾನೆ – ಕಣ್ಣು-ಕಿವಿಗಳಿಗೆ ಅಚ್ಚುಮೆಚ್ಚಾಗಿದ್ದಾನೆ, ಶ್ರೀಕೃಷ್ಣ.

ಮೂರನೆಯದಾಗಿ, ಆತನ ಸುತ್ತ ಆತನ ಆತ್ಮೀಯರು ನೆರೆದಿದ್ದಾರೆ. ಯಾರವನ ಆತ್ಮೀಯರು?: ಗೋವುಗಳು, ಗೋಪಿಯರು, ಹಾಗೂ ಗೋಪರು. ಹೀಗೆ, ಗೋಕುಲದ ಮಂದಿ, ಗೋಕುಲದ ಮಂದೆ - ಇವುಗಳ ನಡುವಿನಲ್ಲಿ ನಿಂತಿದ್ದಾನೆ, ಕೃಷ್ಣ.

ಕೊನೆಯದಾಗಿ, ಆತನು ಗೋಕುಲಕ್ಕೇ ಪೂರ್ಣಚಂದ್ರನಂತಿದ್ದಾನೆ. ಪೂರ್ಣೇಂದುವಿಗಿಂತಲೂ ಸುಂದರವಾದುದುಂಟೇ? ಹೀಗಾಗಿ, ಎಲ್ಲರಿಗಿಂತಲೂ ಸುಂದರನಾದವನು ಗೊಲ್ಲರ ನಡುವಿನಲ್ಲಿ ನಿಂತಿದ್ದಾನೆ.

ಇಂತಹ ಗೋಪನನ್ನು ಭಜಿಸುತ್ತೇನೆ – ಎನ್ನುತ್ತಾನೆ, ಕವಿ.

ವಾಸ್ತವವಾಗಿ, ಬರೀ ಗೊಲ್ಲನೊಬ್ಬನ ಉಪಾಸನೆಯಲ್ಲ, ಇದು. ಯಾವನು ಕಾಪಾಡುತ್ತಾನೋ ಆತನನ್ನೇ ಗೋಪನೆನ್ನುವುದು. ಗೋಪಾಯತಿ – ಇತಿ ಗೋಪಃ – ಎಂದು ಅದರ ವ್ಯುತ್ಪತ್ತಿ. ಬರೀ ಗೊಲ್ಲನೆನ್ನಲೂ  ಗೋಪನೆನ್ನುವುದುಂಟು. ಹಸುಗಳನ್ನು ಕಾಯುವವನು (ಗಾಃ ಪಾತಿ – ಎಂಬ ವ್ಯುತ್ಪತ್ತಿ, ಈ ಅರ್ಥದಲ್ಲಿ). ಎರಡು ಅರ್ಥಗಳೂ ಯುಕ್ತವೇ.

ಹೀಗೆ ಸೌಂದರ್ಯವೇ ಸಕಲರೀತಿಗಳಲ್ಲೂ ಸಾಕಾರವಾಗಿರುವ ಮೂರ್ತಿಯೇ ಶ್ರೀಕೃಷ್ಣ. ಆತನನ್ನು ನಾ ಭಜಿಸುವೆ :

ಮಂದಾರಮೂಲೇ ಮದನಾಭಿರಾಮಂ

ಬಿಂಬಾಧರಾಪೂರಿತವೇಣುನಾದಮ್|

ಗೋ-ಗೋಪ-ಗೋಪೀ-ಜನ-ಮಧ್ಯ-ಸಂಸ್ಥಂ

ಗೋಪಂ ಭಜೇ ಗೋಕುಲ-ಪೂರ್ಣ-ಚಂದ್ರಮ್||

ಸೂಚನೆ : 15/11/2025 ರಂದು   ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Monday, November 10, 2025

ವ್ಯಾಸ ವೀಕ್ಷಿತ 161 (Vyaasa Vikshita 161)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ರಾಜಸೂಯವನ್ನು ತಾನು ಮಾಡುವುದು ಯುಕ್ತವೇ? – ಎಂಬ ಪ್ರಶ್ನೆಯು ಯುಧಿಷ್ಠಿರನಿಗೆ ಆಗಾಗ್ಗೆ ಬರುತ್ತಿತ್ತು. ತಾನಂತೂ ಕೋಪಾಹಂಕಾರಗಳನ್ನು ಬದಿಗೊತ್ತಿ ಔದಾರ್ಯದಿಂದ ದಾನಪರನಾಗಿದ್ದನು.

"ದಾನ ಕೊಡಲು ಯೋಗ್ಯವಾದ ವಸ್ತುಗಳೇನಿದ್ದರೂ ಅವೆಲ್ಲವನ್ನೂ ಅರ್ಹರಾದವರಿಗೆ ಕೊಟ್ಟುಬಿಡಿ" - ಎಂದು ತನ್ನ ಕೈಕೆಳಗಿನವರಿಗೆ ಅವನು ಅಪ್ಪಣೆ ಮಾಡಿದನು. ಆತನ ಪ್ರವೃತ್ತಿಯನ್ನು ಮೆಚ್ಚಿ, ಎಲ್ಲರೂ, "ಭಲೇ ಧರ್ಮ, ಭಲೇ ಧರ್ಮರಾಜ" – ಎಂದು ಆತನನ್ನು ಕೊಂಡಾಡಿದರು.

ಈ ಸಂನಿವೇಶದಲ್ಲಿ ಆತನ ವಿಷಯದಲ್ಲಿ ಜನರು ತಮ್ಮ ತಂದೆಯಲ್ಲಿ ಹೇಗೋ ಹಾಗೆ ನೆಚ್ಚಿಕೆಯನ್ನಿಟ್ಟುಕೊಂಡರು; ಆತನನ್ನು ದ್ವೇಷಿಸುವಂತಹವನು ಒಬ್ಬನೂ ಇರಲಿಲ್ಲ: ಆ ಕಾರಣಕ್ಕೇ ಆತನಿಗೆ "ಅಜಾತಶತ್ರು"ವೆಂಬ ಹೆಸರಾದದ್ದು. ಯಾವನಿಗೆ ಶತ್ರುವೇ ಹುಟ್ಟಿಲ್ಲವೋ ಆತನೇ "ಅ-ಜಾತ-ಶತ್ರು".

ಎಲ್ಲರನ್ನೂ ಯುಧಿಷ್ಠಿರನು ತನ್ನವರೆಂಬಂತೆ ನೋಡಿಕೊಂಡನು. ಭೀಮನು ಎಲ್ಲರಿಗೂ ರಕ್ಷೆಯಿತ್ತನು. ಸವ್ಯಸಾಚಿಯಾದ ಅರ್ಜುನನು ಶತ್ರುಗಳನ್ನು ಸಂಹಾರಮಾಡಿದನು. ಧೀಮಂತನಾದ ಸಹದೇವನು ಧರ್ಮಗಳ ಅನುಶಾಸನವನ್ನು ನೆರವೇರಿಸಿದನು. ಎಲ್ಲರ ವಿಷಯದಲ್ಲೂ ವಿನಯದಿಂದ ನಕುಲನು ವರ್ತಿಸಿದನು.

ಇವಿಷ್ಟೂ ಕಾರಣಗಳಿಂದಾಗಿ ಜನರೆಲ್ಲರೂ ಕಲಹರಹಿತರೂ, ಭಯವೇ ಇಲ್ಲದವರೂ ಸದಾ ಸ್ವಧರ್ಮನಿರತರೂ ಆದರು. ಕಾಲಕಾಲಕ್ಕೆ ಮಳೆಯೂ ಆಗುತ್ತಿರಲು ಬಹುಸಮೃದ್ಧಿಯುತರೂ ಆದರು. ಯಜ್ಞಸಾಮಗ್ರಿ, ಗೋರಕ್ಷೆ, ಉಳುಮೆ, ವಾಣಿಜ್ಯ - ಇವಿಷ್ಟರಲ್ಲೂ ವಿಶೇಷವಾದ ಪ್ರಗತಿಯು ತಲೆದೋರಿತು.

ಯುಧಿಷ್ಠಿರನು ಧರ್ಮನಿತ್ಯನಾಗಿ ಆಳುತ್ತಿರುವ ಆ ಸಮಯದಲ್ಲಿ ಅನುಕರ್ಷ-ನಿಕರ್ಷಗಳಿರಲಿಲ್ಲ: ಎಂದರೆ ಕಳೆದ ವರ್ಷದ ಕರದ ಬಾಕಿ, ಈ ವರ್ಷದ ಬಾಕಿ - ಎಂಬಿವು ಉಳಿದುಕೊಂಡಿರಲಿಲ್ಲ. ಹಾಗೆಯೇ ವ್ಯಾಧಿ-ಅಗ್ನಿಗಳಿಂದಾಗಿ ಉಂಟಾಗುವ ಪ್ರಜಾಪೀಡನವೆಂಬುದು ಯಾವುದೂ ಇರಲಿಲ್ಲ. ದಸ್ಯುಗಳು, ಎಂದರೆ ಲೂಟಿಕೋರರು, ವಂಚಕರು - ಇವರುಗಳಿಂದಾಗಲಿ ರಾಜವಲ್ಲಭರುಗಳಿಂದಾಗಲಿ, ಎಂದರೆ ರಾಜನಿಗೆ ಅಚ್ಚುಮೆಚ್ಚಾದವರಿಂದಾಗಲಿ, ಪ್ರಜಾಪೀಡನವಾಗುತ್ತಿರಲಿಲ್ಲ. ಪ್ರಜೆಗಳೂ ಸಹ ಪರಸ್ಪರ ಮೋಸ ಮಾಡುತ್ತಿರಲಿಲ್ಲ.

ಯುಧಿಷ್ಠಿರನಿಗೆ ಪ್ರಿಯವನ್ನುಂಟುಮಾಡುವುದು, ತಮ್ಮ ವಾಣಿಜ್ಯವ್ಯಾಪಾರಗಳಿಂದಾಗಿ ಸಲ್ಲಬೇಕಾದ ಕರವನ್ನು ಕೊಡುವುದು, ಸಂಧಿ-ವಿಗ್ರಹ ಮುಂತಾದ ರಾಜಕಾರ್ಯಗಳಲ್ಲಿ ಯುಧಿಷ್ಠಿರನಿಗೆ ಸಹಕಾರವನ್ನು ಕೊಡುವುದು - ಇವುಗಳಿಗಾಗಿ ಬೇರೆ ಬೇರೆ ರಾಜರು ಆತನಲ್ಲಿಗೆ ಬರುತ್ತಿದ್ದರು. ಅವರಲ್ಲಿ ಅನೇಕರು ರಾಜಸ ಸ್ವಭಾವದವರಾಗಿದ್ದರು, ಎಂದೇ ಲೋಭಿಗಳೂ ಆಗಿದ್ದರು; ಹೀಗಾಗಿ ತಮ್ಮ ತಮ್ಮ ಇಚ್ಛೆಯಂತೆ ಧನೋಪಭೋಗವನ್ನು ಅವರು ಮಾಡುತ್ತಿದ್ದರು.

ಆದರೆ ಸಹನಶೀಲನಾದ ಯುಧಿಷ್ಠಿರನು ಮಾತ್ರ ಧರ್ಮನಿತ್ಯನಾಗಿಯೇ ಇರುತ್ತಿದ್ದನು. ಆತನ ರಾಜ್ಯವು ಹೆಚ್ಚು ಹೆಚ್ಚು ಉನ್ನತಿಯನ್ನೇ ಹೊಂದುತ್ತಿತ್ತು. ಯುಧಿಷ್ಠಿರನ ಖ್ಯಾತಿಯು ಎಲ್ಲೆಡೆ ವರ್ಧಿಸುತ್ತಿತ್ತು. ಆತನು ಸರ್ವಸದ್ಗುಣಗಳಿಂದಲೂ ಕೂಡಿದವನಾಗಿದ್ದನು. ಅಪಾರವಾದ ಸಹನೆಯುಳ್ಳವನಾಗಿದ್ದನು. ಎಲ್ಲರನ್ನೂ ಆಳಬಲ್ಲವನಾಗಿದ್ದನು.

ದಶದಿಶೆಗಳಲ್ಲಿಯೂ ಆತನ ಮಹಾಯಶಸ್ಸು ವ್ಯಾಪಿಸುತ್ತಿತ್ತು. ಅವನು ಯಾವ ದೇಶವನ್ನು ಗೆದ್ದರೂ ಅಲ್ಲಿಯ ಪ್ರಜೆಗಳೆಲ್ಲರೂ ಆತನ ವಿಷಯದಲ್ಲಿ ತಾಯಿ-ತಂದೆಯರಿಗೆ ತೋರಿಸುವಂತಹ ಆದರವನ್ನೇ ತೋರಿಸುತ್ತಿದ್ದರು.

ಮಂತ್ರಿಗಳನ್ನೂ ತನ್ನ ಸೋದರರನ್ನೂ ಆಗಾಗ್ಗೆ ಕರೆಸಿ, ರಾಜಸೂಯವನ್ನು ಕುರಿತಾಗಿ ಅವರೊಂದಿಗೆ ಸಮಾಲೋಚನೆಯನ್ನು ನಡೆಸುತ್ತಿದ್ದನು. ಯುಧಿಷ್ಠಿರನು ಆ ಯಜ್ಞ ಮಾಡುವ ಇಚ್ಛೆಯಿಂದ ಕೇಳಲಾಗಿ, ಆತನ ಮಂತ್ರಿಗಳೆಲ್ಲರೂ ಅದಕ್ಕೆ ತಮ್ಮ ಸಮ್ಮತಿಯನ್ನು ಸೂಚಿಸಿ ಹೇಳಿದರು.

"ವರುಣನು ಜಲಾಧಿಪತಿಯಗುವಂತೆ ರಾಜನು ಸಮ್ರಾಟ್ ಎನಿಸಿಕೊಳ್ಳಲು ಅಪೇಕ್ಷಿಸುವುದು ಸಹಜವಾಗಿಯೇ ಇದೆ. ಆ ಸ್ಥಾನಕ್ಕೆ ಅರ್ಹನೆನಿಸಿಕೊಳ್ಳಲು ಬೇಕಾದ ಗುಣಗಳನ್ನು ಹೊಂದಿರುವ ನಿನಗೆ ರಾಜಸೂಯವನ್ನು ನೆರವೇರಿಸುವ ಸಮಯವು ಒದಗಿ ಬಂದಿದೆ."

ಸೂಚನೆ : 9/11/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.