Saturday, May 17, 2025

ಕೃಷ್ಣಕರ್ಣಾಮೃತ 62 - ಮಾಲೆಯ ರಾಶಿಗೆ ಬೆದರಿದ ಚರಣಕ್ಕೆ ನಮನ (Krishakarnamrta 62)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)

ಘೋಷ-ಯೋಷಿದನುಗೀತ-ಯೌವನಂ
ಕೋಮಲ-ಸ್ತನಿತ-ವೇಣು-ನಿಸ್ಸ್ವನಂ |
ಸಾರಭೂತಂ ಅಭಿರಾಮ-ಸಂಪದಾಂ
ಧಾಮ ತಾಮರಸ-ಲೋಚನಂ ಭಜೇ ||
ರಣ-ಘೋಷ, ವಾದ್ಯ-ಘೋಷ ಮುಂತಾದ ಪದಗಳನ್ನು ಕೇಳಿದ್ದೇವಲ್ಲವೇ? ಅಲ್ಲೆಲ್ಲಾ ಘೋಷವೆಂದರೆ ದೊಡ್ಡದಾದ ಸದ್ದೆಂಬುದೇ ಅರ್ಥ. ಆದರೆ ಅದಕ್ಕೆ ಸಂಸ್ಕೃತದಲ್ಲಿ ಆಭೀರ-ಪಲ್ಲೀ, ಅರ್ಥಾತ್ ಗೊಲ್ಲರ ಹಳ್ಳಿ - ಎಂಬ ಅರ್ಥವೂ ಇದೆ. ಅಲ್ಲಿಯ ರಮಣಿಯರೆಂದರೆ ಗೊಲ್ಲರ ನಾರಿಯರು. ಘೋಷ-ಯೋಷಿತರೆಂದರೆ ಅವರೇ. ಅವರ ಮನಸ್ಸನ್ನು ಸೆಳೆದಿಬಿಟ್ಟಿದೆ ಕೃಷ್ಣನ ಯೌವನ. ಎಂದೇ ಅದರ ಮೇಲೆ ಹಾಡುಕಟ್ಟಿ ಹಾಡುವವರು, ಅವರು. ಅಂತಹ ಯೌವನ ಆತನದು. ಹೀಗಾಗಿ, ಅವರ ಈ ಗಾನದಿಂದ ಅನುಗೀತವೇ ಆಗಿರುವ ಯೌವನವೇ ಕೃಷ್ಣನದು.

ಇನ್ನು ಆತನ ವೇಣು-ನಿಸ್ವನವೂ ಆಸ್ವಾದ್ಯವೇ. ನಿಸ್ವನವೆಂದರೆ ನಾದ. ಅದು ಮಧುರವಾಗಿದೆ. ಹೇಗದು ಮಧುರ? ಸ್ತನಿತದಂತೆ. ಸ್ತನಿತವೆಂದರೆ ಗುಡುಗು. ಗುಡುಗೇನು ಮಧುರವೇ? ಹೌದು, ಕೋಮಲ-ಸ್ತನಿತವು ಆಸ್ವಾದ್ಯ. ಕೋಮಲ-ಸ್ತನಿತವೆಂದರೆ ಮಂದ್ರ-ಧ್ವನಿಯ ಗುಡುಗು – ಅದು ಮಂದ್ರವಾದ ವೇಣುಗಾನದಂತೆ.

ಪ್ರಕೃತ, ಅಂತಹ ವೇಣುಗಾನವೆಂಬುದು ಕೃಷ್ಣನದೇ. ಸುಮ್ಮನೆ ಕೃಷ್ಣನೆಂದರೇನು ಸೊಗಸು? ತಾಮರಸ-ಲೋಚನ – ಎನ್ನಬೇಕು. ತಾಮರಸ - ಎಂದರೆ ಕೆಂಪುಕಮಲ. ಅದರಂತೆಯೇ ಇರುವ ಕಣ್ಣು ಆತನದು. ಆತನು ವ್ಯಕ್ತಿಯಲ್ಲ, ಶಕ್ತಿ; ಕೃಷ್ಣನೆಂದರೆ ಬರೀ ನಾಮವಲ್ಲ, ಧಾಮ. ಧಾಮವೆಂದರೆ ತೇಜಸ್ಸು. ಅಂತಹ ಕೆಂದಾವರೆಯ ನೇತ್ರಗಳುಳ್ಳ ತೇಜೋರಾಶಿಯೇ ನಮ್ಮ ಶ್ರೀಕೃಷ್ಣ.

ಮತ್ತೆಂತಹ ಧಾಮವದು? ಅಭಿರಾಮ-ಸಂಪತ್ತಿನ ಸಾರವದು. ಅಭಿರಾಮ-ಸಂಪತ್ತೆಂದರೆ ಸೌಂದರ್ಯ-ಲಕ್ಷ್ಮಿ. ಒಟ್ಟಿನಲ್ಲಿ ಕಮಲದಂತಿರುವ ಕಣ್ಣುಳ್ಳ ತೇಜಸ್ಸೇ ಕೃಷ್ಣ. ಆ ತೇಜಸ್ಸಿನ ಯೌವನವೇ ಗೊಲ್ಲತಿಯರ ಕೊಂಡಾಟಕ್ಕೆ ವಿಷಯ. ಮಂದ್ರಸ್ವರದ ಗುಡುಗಿನ ಸುಸ್ವರ ಅದರ ಕೊಳಲಿನದು. ಸೊಬಗಿನ ಸಿರಿಯ ಸಾರವದು. ಅದನ್ನೇ ಭಜಿಸುವುದು - ಎನ್ನುತ್ತಾನೆ ಲೀಲಾಶುಕ.

***

ಮತ್ತೊಂದು ಶ್ಲೋಕ:

ಲೀಲಯಾ ಲಲಿತಯಾವಲಂಬಿತಂ
ಮೂಲ-ಗೇಹಮಿವ ಮೂರ್ತಿ-ಸಂಪದಾಮ್ |
ನೀಲ-ನೀರದ-ವಿಕಾಸ-ವಿಭ್ರಮಂ
ಬಾಲಮೇವ ವಯಮಾದ್ರಿಯಾಮಹೇ ||

ನಾವು ಆದರಿಸುವುದು ಬಾಲಕೃಷ್ಣನನ್ನು. ಎಂತಹ ಬಾಲ ಆತ? – ಎಂಬುದನ್ನು ಲೀಲಾಶುಕ ಚಿತ್ರಿಸಿದ್ದಾನೆ. ಲಲಿತ-ಲೀಲೆಯೇ ಯಾವನನ್ನಾಶ್ರಯಿಸಿರುವುದೋ ಅಂತಹವನು. ಲಲಿತ-ಲೀಲೆಯೆಂದರೆ ಸೊಬಗಿನ ವಿಲಾಸ. ಅದು ತಾನಾಗಿ ಬಂದು ಈ ಬಾಲಕನನ್ನು ಅವಲಂಬಿಸಿಕೊಂಡಿದೆ.

ಶರೀರದ ಒಂದೊಂದು ಅವಯವವೂ ಸುಷ್ಠುವಾಗಿದ್ದರೆ ಅದಕ್ಕೆ ಅಂಗ-ಸೌಷ್ಠವವೆನ್ನುತ್ತಾರೆ. ಅವಯವಗಳ ಸೌಷ್ಠವವಿದ್ದರೂ, ಕೆಲವೊಮ್ಮೆ ಒಟ್ಟ್ಟಿನ ಸೌಂದರ್ಯದಲ್ಲಿ ಅದೇನೋ ಕೊರತೆಯು ಇರುವುದುಂಟು. ಸೌಷ್ಠವವೂ ಸೌಂದರ್ಯವೂ ಕೂಡಿಬಂದಿದ್ದಲ್ಲಿ ಅದನ್ನು ಮೂರ್ತಿ-ಸಂಪತ್ತೆನ್ನುವರು. ಮೂರ್ತಿಯೆಂಬ ಪದಕ್ಕೆ ಶರೀರವೆಂದೇ ಅರ್ಥ.

ಅಂತಹ ಮೂರ್ತಿ-ಸಂಪತ್ತಿಗೆ ಬಾಲಕೃಷ್ಣನು ಮೂಲ-ಗೇಹ.  ಮೂಲ-ಗೇಹವೆಂದರೆ ತವರುಮನೆ. ಹೀಗಾಗಿ, ಶರೀರಶ್ರೀಗೆ ಮೂಲ-ಸದನನೇ ಈ ಬಾಲಕ.

ಅಷ್ಟೇ ಅಲ್ಲದೆ, ನೀಲ-ನೀರದದ ಹಾಗೆ - ಎಂದರೆ ನೀಲ-ಮೇಘದ ಹಾಗೆ - ಆತನ ವಿಕಾಸ-ವಿಭ್ರಮವಿದೆ. ವಿಕಾಸ-ವಿಭ್ರಮವೆಂದರೆ ಪ್ರಕಾಶ-ವಿಲಾಸ, ಸೊಬಗಿನಾಟ. ನೀರದ ಅಥವಾ ಜಲದವೆಂಬ ಪದ ಅನ್ವರ್ಥವಾದದ್ದು. ಅದರ ಅರ್ಥ, ಮಳೆಸುರಿಸುವ ಮೋಡ - ಎಂದು.

ನೀರಿನಿಂದ ಭಾರವಾದ ಮೋಡವು ನೋಡಲೇ ಸೊಗಸು. ಅದರ ಆ ಹೊಳಪನ್ನು ಹೊಂದಿರುವನೇ, ಈ ಬಾಲ, ಅರ್ಥಾತ್ ಬಾಲಗೋಪಾಲ. ಅಂತಹ ಬಾಲನನ್ನೇ ನಾವು ಆದರಿಸುವುದು - ಎನ್ನುತ್ತಾನೆ ಲೀಲಾಶುಕ.

ಅಲ್ಲಿಗೆ, ಲಲಿತಲೀಲೆಯೂ, ಮೂರ್ತಿಸಂಪತ್ತೂ, ಮೇಘವಿಭ್ರಮವೂ ತೋರಿರುವುದು ಒಬ್ಬ ಬಾಲನಲ್ಲಿಯೇ. ಆತನೇ ನಮ್ಮ ಬಾಲಕೃಷ್ಣ. ಆತನೇ ನಮ್ಮ ಆದರಕ್ಕೆ ಪಾತ್ರನದವನು, ಉಪಾಸನೆಗೆ ಯೋಗ್ಯನಾದವನು.

***

ಮತ್ತೊಂದು ಪದ್ಯ:

ವಂದೇ ಮುರಾರೇಶ್ಚರಣಾರವಿಂದ-

-ದ್ವಂದ್ವಂ ದಯಾ-ದರ್ಶಿತ-ಶೈಶವಸ್ಯ |

ವಂದಾರು-ಬೃಂದಾರಕ-ವೃಂದ-ಮೌಲಿ-

-ಮಂದಾರಮಾಲಾ-ವಿನಿಮರ್ದ-ಭೀರು ||

 

ಮುರನೆಂಬುವನು ನರಕಾಸುರನ ಪರಿವಾರದ ಒಬ್ಬ ರಾಕ್ಷಸ. ಅತನನ್ನು ಮುಂದೆ ಸಂಹರಿಸಿದವನು ಕೃಷ್ಣ. ಆ ಕಾರಣಕ್ಕಾಗಿಯೇ ಕೃಷ್ಣನಿಗೆ ಮುರಾರಿಯೆಂಬ ಹೆಸರು ಪ್ರಸಿದ್ಧವಾಯಿತು.

ಈ ಶ್ಲೋಕದಲ್ಲಿ ಹೇಳಿರುವ ಕೃಷ್ಣ ಎಳಸಿನವನು. ವಾಸ್ತವವಾಗಿ, ಮುಂದೆಂದೋ ನಡೆದ ಘಟನೆಯಿಂದಾಗಿ ಬಂದ ಹೆಸರನ್ನೋ ವಿಶೇಷಣವನ್ನೋ ಆ ಘಟನೆಗೆ ಮೊದಲೇ ಒಬ್ಬನಿಗೆ ಅನ್ವಯಿಸಲಾಗದು.  ಆ ಘಟನೆಯ ಚಿತ್ರಣವೋ, ಕೊನೆಯ ಪಕ್ಷ ಉಲ್ಲೇಖವೋ ಆದ ಸಮಯದಿಂದಾರಂಭಿಸಿ ಆ ವಿಶೇಷಣವನ್ನು ಆ ವ್ಯಕ್ತಿಗೆ ಬಳಸಬಹುದು.  

ಉದಾಹರಣೆಗೆ "ಭಾರತರತ್ನ ಎಂ. ಎಸ್. ಸುಬ್ಬುಲಕ್ಷ್ಮಿಯವರು ೧೯೧೬ ರಲ್ಲಿ ಜನಿಸಿದರು" ಎಂದು ಹೇಳುವುದು ಔಚಿತ್ಯ-ಪೂರ್ಣವೇನಲ್ಲ. ಅವರೇನೂ ಹುಟ್ಟುವಾಗಲೇ ಭಾರತರತ್ನರಾಗಿರಲಿಲ್ಲ. ೧೯೯೮ರಲ್ಲಿ ಅವರಿಗೆ ಆ ಬಿರುದು ಸಂದಿತು. ಆದರೂ, ಅವರಿಗೆ ಮುಂದೆ ಸಂದ ಬಿರುದನ್ನು ಬಹಳ ಮೊದಲಿಗೂ ಅನ್ವಯಿಸಿ ಹೇಳುವುದು ಏನೋ ದೊಡ್ಡ ಪ್ರಮಾದವೆನಿಸದು. ಇಲ್ಲಿಯೂ ಹಾಗೆಯೇ. ಕವಿಗಳಂತೂ ಆ ಬಗ್ಗೆ ಹೆಚ್ಚು ಲೆಕ್ಕವಿಡುವವರಲ್ಲ.

ವಾಮನ-ಕೋದಂಡರಾಮ-ಪರಶುರಾಮರ ಬಾಲ್ಯದ ಬಗ್ಗೆ ನಾವು ಹೆಚ್ಚು ಕೇಳಿಯೇ ಇಲ್ಲವಲ್ಲವೆ? ಆದರೆ ಶೈಶವದ ದರ್ಶನ-ಸುಖವನ್ನು ಪಡೆಯಲು ಅರ್ಹರಾಗಿದ್ದವರು ದೇವಕಿ-ವಸುದೇವರು, ಯಶೋದೆ-ನಂದಗೋಪರು. ತನ್ನ ಶೈಶವವನ್ನು ಅವರಿಗೂ, ಗೊಲ್ಲ-ಗೊಲ್ಲತಿಯರಿಗೂ, ದರ್ಶನ ಮಾಡಿಸಿದವನು ಕೃಷ್ಣ. ಅದೂ ಅವರ ಮೇಲಣ ದಯದಿಂದ. ಎಂದೇ ಆತನನ್ನು "ದಯಾ-ದರ್ಶಿತ-ಶೈಶವ"ವೆನ್ನುವುದು.

ಅಂತಹ ಮುರಾರಿಯ ಚರಣಕಮಲದ ಯುಗಲಕ್ಕೆ ನಮಸ್ಸನ್ನು ಸಲ್ಲಿಸಿದ್ದಾನೆ, ಲೀಲಾಶುಕ. ಯುಗಲವೆಂದರೆ ಜೊತೆ. ಏನದರ ವಿಶೇಷ? ಆ ಚರಣದ್ವಂದ್ವವು ಭೀರುವಂತೆ. ಭೀರುವೆಂದರೆ ಹೇಡಿ, ಹೆದರುವವನು. ಹೇಡಿಯಂತಿದ್ದರೆ ಅದಕ್ಕೇಕೆ ವಂದನೆ?

ಹಿನ್ನೆಲೆ ಪರಿಶೀಲಿಸಿದರೆ ತಿಳಿಯುತ್ತದೆ, ಅದರ ಮರ್ಮ. ಕೃಷ್ಣನಿಗೆ ನಮಸ್ಕರಿಸಲು ದೇವತೆಗಳೆಲ್ಲರೂ ಬರುವರು. ವಂದಾರುಗಳೆಂದರೆ ನಮಸ್ಕಾರ-ಮನಸ್ಕರು. ಬೃಂದಾರಕರೆಂದರೆ ದೇವತೆಗಳು. ಅವರೆಲ್ಲರೂ ತಮ್ಮ ಮೌಲಿಯಲ್ಲಿ, ಎಂದರೆ ಶಿರಸ್ಸಿನಲ್ಲಿ, ಪುಷ್ಪವನ್ನು ಧರಿಸಿರುವರು.

ಗಂಡಸರು ಈಗ ಹೂಮುಡಿಯುತ್ತಿಲ್ಲವಷ್ಟೆ. ಹಿಂದೆ ಅದಿತ್ತು. ದೇವತಾ-ವೃಂದವೇ ಹೂಮಾಲೆ ಮುಡಿದು ಬಂದಿದೆ. ಅದೂ ಯಾವ ಹೂವು? ದೇವಲೋಕಮಾತ್ರ-ಲಭ್ಯವಾದ ಮಂದಾರ. ಮಂದಾರವು ದೇವವೃಕ್ಷ, ಕಲ್ಪವೃಕ್ಷ, ಕೇಳಿದ್ದನ್ನೆಲ್ಲಾ ಕೊಡತಕ್ಕದ್ದು.

ಅವರ ತಲೆಯಲ್ಲಿರುವ ಮಂದಾರ-ಮಾಲೆಗಳೆಲ್ಲ ಕೃಷ್ಣನ ಪಾದದ ಮೇಲೆ ಬಂದಿವೆ. ನಮಸ್ಕರಿಸುವವರ ಮುಡಿ ಶ್ರೀಕೃಷ್ಣನ ಅಡಿಯ ಮೇಲಿರುವುದರಿಂದ ಹಾಗಾಗಿದೆ.

೩೩ ಕೋಟಿ ದೇವತೆಗಳಲ್ಲಿ ಮುಖ್ಯರಾದವರೆಲ್ಲರೂ ಬಂದಿದ್ದರೆಂದರೂ ಅದೆಷ್ಟು ಹೂರಾಶಿಯಾಯಿತು, ಅಲ್ಲಿಗೆ! ಎಂದೇ ಅದರ ಭಾರಕ್ಕೆ ಹೆದರಿತಂತೆ ಕೃಷ್ಣಪಾದದ ಜೋಡಿ! ಹಾಗೆ ಹೆದರಿದ ಚರಣದ್ವಂದ್ವಕ್ಕೆ ನನ್ನ ನಮಃ - ಎಂದು ಆತನ ನುಡಿ.

ಹೂಮಾಲೆಗಳ ಭಾರವನ್ನು ಹೇಳುವುದರ ಉದ್ದೇಶವೇ ಬೇರೆಯಷ್ಟೆ? ಅದೆಷ್ಟು ಮಂದಿ ದೇವತೆಗಳು ಆತನಿಗೆ ಬಂದು ವಂದಿಸುವವರು! – ಎಂಬುದೇ ಅದು.

ಶಿಶುವೇ ಆದರೂ ಈತನ ಪಾದವೂ ಸಹ ಸರ್ವ-ದೇವ-ವಂದ್ಯ - ಎಂಬುದು ಇಲ್ಲಿಯ ತಾತ್ಪರ್ಯ.

ಸರ್ವ-ದೇವವಂದ್ಯನಿಗೆ ನಮ್ಮ ವಂದನೆಗಳೆಂದು ಲೀಲಾಶುಕನು ಹೇಳುವುದು ಸಹಜವಷ್ಟೆ?

ಅಂದವಾದ ಅನುಪ್ರಾಸವಿದೆ ಈ ಶ್ಲೋಕದಲ್ಲಿ್: ವಂದೇ-ವಿಂದ-ದ್ವಂದ್ವ-ವಂದಾ-ಬೃಂದಾ-ವೃಂದ-ಮಂದಾ !

ಸೂಚನೆ : 17/05/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, May 11, 2025

ಪ್ರಶ್ನೋತ್ತರ ರತ್ನಮಾಲಿಕೆ 15 (Prasnottara Ratnamalike 15)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೧೫. ಈ ಸಂಸಾರದಲ್ಲಿ ಶ್ರೇಷ್ಠ ಯಾರು?

ಉತ್ತರ - ವಿರಕ್ತ

ಸಂಸಾರವೆಂಬುದು ಕತ್ತಿಯ ಅಲಗಿನಂತೆ, ಸರಿಯಾಗಿ ತಿಳಿದು ಬಳಸಿದರೆ ಕತ್ತಿಯಿಂದ ನಮಗೆ ಬೇಕಾದುದ್ದನ್ನು ಕತ್ತರಿಸಲು ಸಾಧ್ಯ. ಎಚ್ಚರಿಕೆ ತಪ್ಪಿದರೆ ಅದೇ ನಮಗೆ ಕುತ್ತನ್ನೂ ತರಲು ಸಾಕು. ಅಂತೆಯೇ ಈ ಸಂಸಾರವೂ ಕೂಡ. ಸಾಮಾನ್ಯವಾಗಿ ಈ ಸಂಸಾರವನ್ನು ನಮ್ಮ ಹಿಂದಿನ ಅನುಭಾವಿಕರು ಕತ್ತಿಯ ಅಲಗಿನಂತೆ ಭಾವಿಸಿದ್ದುಂಟು. ಸಂಸಾರವನ್ನು ದಾಟಲಾಗದ ಸಾಗರ ಎಂದು, ಅದೊಂದು ವಿಷದ ಬಾವಿ; ಬಿದ್ದರೆ ಎದ್ದುಬರುವುದು ಅಸಾಧ್ಯ ಎಂದೂ, ಇದೊಂದು ಮಹಾತಿಮಿಂಗಲ ಇದ್ದಂತೆ; ಕಷ್ಟದ ಕೋಟಿ ಕೋಟಿಯ ಕೋಟಲೆ ಎಂದೂ, ಸಂಸಾರವೆಂಬುದು ಗಹನವಾದ ಕಾನನ ಎಂದೂ, ನಾನಾ ಬಗೆಯಲ್ಲಿ ಬಾಧಕಾಂಶಗಳನ್ನು ಎತ್ತಿ ಎಚ್ಚರಿಸಿದ್ದುಂಟು. 


ಸಂಸಾರ ಸಾಗಬೇಕಾದದ್ದೇ. ಆದ್ದರಿಂದ ಸಾರವಿದೆಯೆಂದೇ ಅದನ್ನು ಭಾವಿಸಬೇಕು. ಸಂಸಾರವೆಂಬುದು ಸಾಗರವೇ ಆದರೂ ಸಾಗರದಲ್ಲೇ ಇದ್ದು ಈಜಿ ಜಯಿಸಬೇಕಾದದ್ದು ಎಂಬುದು ಅನೇಕ ಸಾಧುಜನರ ಅಂಬೋಣವಾಗಿದೆ. ಇಂತಹ ಸಾಧಕಾಂಶವೂ ಈ ಸಂಸಾರದಲ್ಲಿದೆ. ಹಾಗಾಗಿ ಸಾಧಕ ಮತ್ತು ಬಾಧಕ ಎಂಬ ಉಭಯಾಂಶ ಪ್ರತಿಯೊಂದರಲ್ಲೂ ಸರ್ವೇಸಾಮಾನ್ಯವಾದುದಷ್ಟೆ! ಹೀಗಿದ್ದಾಗ ಸಂಸಾರವೇನೂ ಇದಕ್ಕೆ ಹೊರತಾದದ್ದಲ್ಲ. ಇಂತಹ ಉಭಯಾಂಶದಿಂದ ಕೂಡಿದ ಈ ಸಂಸಾರದಲ್ಲಿ ಸರ್ವಶ್ರೇಷ್ಠ ವ್ಯಕ್ತಿ ಯಾರು? ಎಂಬುದು ಪ್ರಕೃತ ಪ್ರಶ್ನೆ. ವಿರಕ್ತನಾದವನೇ ಇಂತಹ ಶ್ರೇಷ್ಠವ್ಯಕ್ತಿ ಎಂಬುದು ಉತ್ತರ.


ರಕ್ತಿ, ಅನುರಕ್ತಿ, ಅಂಟು, ಬಂಧ, ರಾಗ ಮೊದಲಾದವು ಸಂಸಾರದಲ್ಲೇ ಇರುವ ವ್ಯಕ್ತಿಯಲ್ಲಿ ಕಂಡುಬರುವ ಸಹಜಗುಣ. ಇದಕ್ಕೆ ವಿರುದ್ಧವಾದವುಗಳೇ ವಿರಕ್ತಿ, ಅನುರಕ್ತಿ, ವಿರಾಗ, ಮುಕ್ತಿ ಮೊದಲಾದವುಗಳು. ಉತ್ತಮ ಉದಾಹರಣೆಯೊಂದಿಗೆ ಈ ವಿಷಯವನ್ನು ಅರ್ಥಮಾಡಿಕೊಳ್ಳಬೇಕು. ಕೆಸರಿನ ಕಮಲ. ಇದು ಇರುವುದು ಕೆಸರಿನಲ್ಲಿ - ಹೇಯವಾದ ಸ್ಥಳದಲ್ಲಿ. ಆದರೆ ಅಲ್ಲೇ ಕಮಲವು  ಪುಷ್ಪರಾಜನಾಗಿ ಭಗವಂತನ ಪೂಜಾ ಯೋಗ್ಯವಾದ ಪುಷ್ಪವಾಗುತ್ತದೆ ತಾನೆ! ಕಮಲಕ್ಕೆ ಕೆಸರು ಅಂಟುವುದಿಲ್ಲ, ಅಥವಾ ಕಮಲಕ್ಕೆ ಕೆಸರನ್ನು ಅಂಟಿಸಿಕೊಳ್ಳುವ ಸ್ವಭಾವವಿಲ್ಲ ಎಂಬುದೇ ನಿಜಸಂಗತಿ. ಅಂತೆಯೇ ಈ ಸಂಸಾರದಲ್ಲೇ ಇದ್ದ ವ್ಯಕ್ತಿಯೊಬ್ಬ ಸಂಸಾರದ ಸಕಲ ಕೆಲಸವನ್ನು ನಿಭಾಯಿಸಿಕೊಂಡು ಸಂಸಾರವನ್ನು ಸಾಗಿಸಿ ತಾನೂ ಸಂಸಾರದಲ್ಲಿ ಸಿಲುಕಿಕೊಳ್ಳದೇ ಪಾರಾಗುವ ಸ್ವಭಾವವನ್ನು ಬೆಳಸಿಕೊಳ್ಳುತ್ತಾನೆ. ಇವನೇ ನಿಜವಾದ ವಿರಕ್ತ, ಮುಕ್ತ. ಇದನ್ನು ಎಚ್ಚರಿಸುವ ಸಲುವಾಗಿ ಶ್ರೀಶಂಕರ ಭಗವತ್ಪಾದರು ಮೋಹಮುದ್ಗರ ಸ್ತೋತ್ರದಲ್ಲಿ ಹೀಗೆ ಹೇಳುತ್ತಾರೆ - "ನಳಿನೀದಲಗತಜಲಮ್ ಅತಿತರಲಂ ತದ್ವತ್ ಜೀವಿತಮ್ ಅತಿಶಯಚಪಲಂ" ಎಂದು. ಸಂಸಾರದಿಂದ ಮೇಲೇಳಲು ಉಪಾಯವನ್ನು ಅಲ್ಲೇ ಹೇಳುತ್ತಾರೆ. ಗೋವಿಂದನನ್ನು ಭಜಿಸು ಎಂದು. ಇಂದ್ರಿಯಗಳಿಗೆ ಆನಂದವನ್ನು ನೀಡುತ್ತಾ ತನ್ನ ಕಡೆ ಸೆಳೆದುಕೊಳ್ಳುವವನೇ ಗೋವಿಂದ. ಗೋವಿಂದವನನ್ನು ನಿತ್ಯಜೀವನದಲ್ಲಿ ನೆನೆಸುತ್ತಾ ಸಾಗುವವನೇ ನಿಜಾರ್ಥದ ಸಂಸಾರದಲ್ಲಿ ವಿರಕ್ತ. ಬಾಹ್ಯ ವ್ಯವಹಾರದಲ್ಲಿ ಆಸಕ್ತನಾಗಿ ಕಾರ್ಯಮಗ್ನನಾಗಿ ಕಂಡುಬಂದರೂ ಆತ ಅಲ್ಲಿ ಕೇವಲ ಕರ್ತವ್ಯರೂಪವಾಗಿ ತನ್ನ ಕರ್ಮವನ್ನು ಮಾಡುತ್ತಾನೆ. ಅವನು ಉಳಿದವರ ಆಚರಣೆಗಾಗಿ ಮಾಡುತ್ತಿರುತ್ತಾನೆ. ಅವನಿಗೆ ಕರ್ಮದ ಲೇಪವೂ ಇಲ್ಲ. ಆದ್ದರಿಂದಲೇ ಲೋಪವೂ ಇರುವುದಿಲ್ಲ. ಇದೇ ಕಾರಣಕ್ಕೆ ಅವನನ್ನು ವಿರಕ್ತ ಎನ್ನುವುದು. ಆದ್ದರಿಂದ ಈ ಸಂಸಾರದಲ್ಲಿ ಆತನೇ ಸರ್ವಶ್ರೇಷ್ಠ ಎಂಬಲ್ಲಿ ಯಾವ ಸಂದೇಹವಿಲ್ಲ.


ಸೂಚನೆ : 11/5/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 136 ಲಪಿತೆಯೂ ಜರಿತೆಯೂ ಜರಿದರು (Vyaasa Vikshita 136)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಈ ರೀತಿಯಲ್ಲಿ ಕಾಡಿನಲ್ಲಿ ವಿಲಪಿಸುತ್ತಿದ್ದ ಆ ಮಂದಪಾಲ ಋಷಿಗೆ ಲಪಿತೆಯು ಈರ್ಷ್ಯೆಯೊಂದಿಗೆ ಹೀಗೆ ಹೇಳಿದಳು:

"ನಿನಗೆ ಮಕ್ಕಳನ್ನು ನೋಡುವ ಚಿಂತೆಯೇನಿಲ್ಲ. ನೀನು ಹೇಳಿದೆಯೆಲ್ಲಾ ಋಷಿಗಳ ಹೆಸರುಗಳನ್ನು, ಅವರೆಲ್ಲರೂ ತೇಜಸ್ವಿಗಳು, ವೀರ್ಯವಂತರು. ಅವರಿಗೆ ಅಗ್ನಿಭಯವೆಂಬುದಿಲ್ಲ. ನನ್ನೆದುರಿಗೇ ನೀನು ಅಗ್ನಿಯನ್ನು ಪ್ರಾರ್ಥಿಸಿಕೊಂಡಿದ್ದೆ. ಹಾಗೂ ಅಗ್ನಿಯೂ ಸಹ ಹಾಗೇ ಆಗಲೆಂದು ಒಪ್ಪಿದನು. ಲೋಕಪಾಲನಾದ ಆತನೂ ಒಮ್ಮೆ ವಚನವಿತ್ತು ಅದನ್ನು ಸುಳ್ಳು ಮಾಡನು.

ನನ್ನ ಶತ್ರುವಾದ ಜರಿತೆಯ ವಿಷಯದಲ್ಲೇ ನಿನಗೆ ಯೋಚನೆಯಿರುವುದು. ಅವಳೊಂದಿಗೆ ಹಿಂದೆ ನಿನಗೆಂತಹ ಸ್ನೇಹವಿತ್ತೋ ಅಂತಹ ಸ್ನೇಹ ನನ್ನ ಬಗ್ಗೆಯಿಲ್ಲ. ಯಾವಳಿಗಾಗಿ ನೀನು ಪರಿತಪಿಸುತ್ತಿರುವೆಯೋ ಅವಳಲ್ಲಿಗೇ ಹೋಗು. ಯಾರೋ ದುಷ್ಟಪುರುಷನನ್ನು ಆಶ್ರಯಿಸಿದವಳು ಹೇಗೋ ಹಾಗೆ ನಾನೂ ಒಂಟಿಯಾಗಿ ಹೊರಟುಹೋಗುತ್ತೇನೆ."

ಅದಕ್ಕೆ ಮಂದಪಾಲನು ಹೇಳಿದನು:

"ನೀನೆಂತು ಭಾವಿಸುವೆಯೋ ಅಂತಹ ನಡತೆಯವನಲ್ಲ ನಾನು. ನನ್ನ ಓಡಾಟವು ಸಂತಾನಹಿತಕ್ಕಾಗಿ. ನನ್ನ ಸಂತಾನವೀಗ ಕಷ್ಟದಲ್ಲಿದೆಯಷ್ಟೆ.

ಹಿಂದಿನದ್ದನ್ನೆಲ್ಲಾ ತೊರೆದು ಕೇವಲ ಮುಂಬರುವ ವಿಷಯಕ್ಕೇ ಯಾವನು ಜೋತುಬೀಳುವನೋ ಅವನು ಮಂದಮತಿಯೇ ಸರಿ (ಭೂತಂ ಹಿತ್ವಾ ಚ ಭಾವ್ಯರ್ಥೇ  ಯೋಽವಲಂಬೇತ್ ಸ ಮಂದಧೀಃ). ಅಂತಹವನನ್ನು ಲೋಕವು ತಿರಸ್ಕರಿಸುತ್ತದೆ. ಸರಿ, ನಿನಗೇನಿಷ್ಟವೋ ಅದರಂತೆ ಮಾಡು. ಇದೋ ಈ ಅಗ್ನಿಯು ಪ್ರಜ್ವಲಿಸುತ್ತಿದೆ. ಮರಗಳನ್ನು ಸುಟ್ಟುಹಾಕುತ್ತಿದೆ. ಮೊದಲೇ ಆವೇಗಕ್ಕೆ ಒಳಗಾಗಿರುವ ನನ್ನ ಹೃದಯದಲ್ಲಿ ಅಮಂಗಳಕರವಾದ ಸಂತಾಪವನ್ನುಂಟುಮಾಡುತ್ತಿದೆ" - ಎಂದನು.

ಅಂತೂ ಅಗ್ನಿಯು ಆ ಎಡೆಯನ್ನು ತೊರೆದು ದೂರಹೋದನು. ಆಗ ಪುತ್ರಲಾಲಸೆಯಿಂದ ಕೂಡಿದ ಜರಿತೆಯು ಮತ್ತೆ ತನ್ನ ಮರಿಗಳತ್ತ ಬೇಗನೇ ಸಾಗಿದಳು. ಆಗವಳು ಕಂಡದ್ದೇನು? ಮರಿಗಳೆಲ್ಲ ಕ್ಷೇಮವಾಗಿದ್ದಾರೆ; ಅಗ್ನಿ ದೂರ ಹೋಗಿದ್ದಾನೆ; ಯಾವುದೇ ತೊಂದರೆಯಿಲ್ಲದೆ ಮಕ್ಕಳು ಗದ್ದಲಮಾಡುತ್ತಿವೆ!

ಅವುಗಳನ್ನು ಕಂಡು ಅವಳಿಗೆ ಮತ್ತೆ ಮತ್ತೆ ಕಣ್ಣೀರುಕ್ಕಿತು. ಅಳುತ್ತಲೇ ಅವಳು ಒಬ್ಬೊಬ್ಬರನ್ನಾಗಿ ಎಲ್ಲರನ್ನೂ ಸಮೀಪಿಸಿದಳು. ಅಷ್ಟರಲ್ಲಿ ಅಲ್ಲಿಗೆ ಮಂದಪಾಲನೂ ಸಹ ಆಗಮಿಸಿದನು. ಆದರೆ ಆತನ ಮಕ್ಕಳಲ್ಲಿ ಯಾರೊಬ್ಬರೂ ಆತನನ್ನು ಅಭಿನಂದಿಸಲಿಲ್ಲ. ಅವರನ್ನೊಬ್ಬೊಬ್ಬರನ್ನೂ ಆತನು ಮಾತನಾಡಿಸಿದನು, ಆ ಜರಿತೆಯನ್ನೂ ಮಾತನಾಡಿಸಿದನು. ಆದರೆ ಅವರಾರೂ ಆ ಋಷಿಯನ್ನು ಕುರಿತಾಗಿ ಒಳ್ಳೆಯ ಮಾತನ್ನಾಗಲಿ ಕೆಟ್ಟಮಾತನ್ನಾಗಲಿ ಆಡಲಿಲ್ಲ.

ಆಗ ಜರಿತೆಯನ್ನು ಕುರಿತು ಮಂದಪಾಲನು ಕೇಳಿದನು:

"ಇವರಲ್ಲಿ ಜ್ಯೇಷ್ಠಪುತ್ರನು ಯಾರು? ಆತನ ತಮ್ಮನಾರು? ಮಧ್ಯಮನಾರು? ಕನಿಷ್ಠನಾರು? ದುಃಖಾರ್ತನಾಗಿ ನಾನು ಮಾತನಾಡುತ್ತಿದ್ದರೂ ನೀನೇಕೆ ಪ್ರತಿಯಾಗಿ ಮಾತನಾಡುತ್ತಿಲ್ಲ? ತ್ಯಾಗವನ್ನು ಮಾಡಿರುವೆನಾದರೂ ಇಲ್ಲಿಗೆ ಬಂದರೆ ನನಗೆ ಶಾಂತಿಯು ದೊರೆಯುತ್ತಿಲ್ಲ" - ಎಂದು.

ಜರಿತೆಯು ಹೇಳಿದಳು:

"ಜ್ಯೇಷ್ಠನಿಂದ ನಿನಗಾಗಬೇಕಾದುದೇನಿದೆ? ಅನಂತರ ಜನಿಸಿದವನಿಂದ ಆಗಬೇಕಾದುದ್ದೇನು? ಮಧ್ಯಮನಿಂದೇನು? ಕನಿಷ್ಠನಿಂದಲಾದರೂ ಆಗಬೇಕಾದುದೇನು? ನನ್ನನ್ನು ಎಲ್ಲರಿಗಿಂತ ಹೀನಳೆಂದು ಭಾವಿಸಿ ತೊರೆದು ಹೋದೆಯೆಲ್ಲಾ, ಈಗಲೂ ಹೋಗು ಅವಳಲ್ಲಿಗೇ, ಆ ಚಾರುಹಾಸಿನಿಯಾದ, ಎಂದರೆ ಮುಗುಳ್ನಗೆಯ ತರುಣಿಯಾದ, ಆ ಲಪಿತೆಯ ಬಳಿಗೇ ಹೋಗು" ಎಂದು.

ಅದಕ್ಕೆ ಮಂದಪಾಲನು ಹೇಳಿದನು: "ಪರಪುರುಷನೊಂದಿಗೆ ಸಂಬಂಧ ಹಾಗೂ ಸವತೀದ್ವೇಷ - ಇವೆರಡಕ್ಕಿಂತ ಪುರುಷಾರ್ಥನಾಶಕವಾದದ್ದು ನಾರಿಗೆ ಪರಲೋಕದಲ್ಲಿ ಇರಲಾರದು. ಅದು ವೈರಾಗ್ನಿಯನ್ನು ಉದ್ದೀಪನಗೊಳಿಸುವಂತಹುದು. ಬಹಳವೇ ಉದ್ವೇಗವನ್ನು ಉಂಟುಮಾಡತಕ್ಕದ್ದು.

ಸೂಚನೆ : 11/5/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ ಕೃ 61 ಮನವು ಮುಳುಗುವುದು ಮಾಧುರ್ಯದ ಮೂಲದಲಿ (Krishakarnamrta 61)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಇಲ್ಲಿರುವ ಮೂರು ಶ್ಲೋಕಗಳೂ "ಮಧುರಿಮಣಿ ಲೀಯೇ" ಎಂದೇ ಕೊನೆಗೊಳ್ಳುತ್ತವೆ. ಮಧುರಿಮೆಯೆಂದರೆ ಮಾಧುರ್ಯ. ಮತ್ತಿನ್ನಾರದು ಅದು? ಶ್ರೀಕೃಷ್ಣನದೇ.

ಶ್ರೀಕೃಷ್ಣನ ಮಾಧುರ್ಯದಲ್ಲಿ ನಾನಿದೋ ಮುಳುಗಿದೆ - ಎನ್ನುತ್ತಾನೆ ಲೀಲಾಶುಕ. ಕೃಷ್ಣನ ವದನಶಶಿ, ಮುಖಕಮಲ, ಅಧರಮಣಿ - ಈ ಮೂರರಲ್ಲೂ ಮಾಧುರ್ಯವು ಚಿಮ್ಮುತ್ತದೆ. ವದನಶಶಿಯೆಂದರೆ ಮುಖಚಂದ್ರ. ಅಧರಮಣಿಯೆಂದರೆ ಮಣಿಯಂತಿರುವ ತುಟಿ, ಎಂದರೆ ಕೆಂಪಾದ ತುಟಿ.

ಯಾರಿಗಾದರೂ ಸುಂದರವಾದ ವದನ, ಅಲ್ಲೂ ಸುಂದರತರವಾದ ಅಧರ - ಎಂಬುದಿದ್ದರೆ ಯಾರ ಮನಸ್ಸು ಸೂರೆಗೊಳ್ಳದು? ನೋಡುತ್ತಿದ್ದರೆ ನೋಡುತ್ತಲೇ ಇರುವಂತಾಗುವುದು, ಅಲ್ಲವೇ?

"ಲೀಯೇ" ಎಂದರೆ ಇದೇ. ಅದರಲ್ಲಿ ಕರಗಿಹೋಗುತ್ತೇನೆ, ಎಂದರ್ಥ. ಬಾಹ್ಯಪ್ರಪಂಚವೇ ಮರೆಯಾಗಿ, ನಮ್ಮತನವು ಸಹ ಪೂರಾ ಕರಗಿಹೋಗಿರುತ್ತದೆ - ಮಾಧುರ್ಯವೆಂಬುದೇ ಮೂರ್ತಿಮತ್ತಾಗಿ ತೋರಿದಲ್ಲಿ, ಎಂದರೆ ಮೈತಾಳಿ ಬಂದಿರುವಲ್ಲಿ. ಅಲ್ಲಿ ಸವಿಯೆಂಬುದೊಂದೇ ಉಳಿದುಕೊಳ್ಳುವುದಲ್ಲವೇ?

ಕಮಲಗಳು ಅರಳಲು ಬಿಸಿಲು ಬೇಕು. ಎಂದೇ ಸೂರ್ಯೋದಯವಾಗುತ್ತಲೇ ನಳಿನಗಳು ಅರಳಲಾರಂಭಿಸುವುದು. ಆದರೆ ಬಿಸಿಲೆಂದರೂ ಅತಿಬಿಸಿಲಾಗಬಾರದು. ಅತ್ಯುಷ್ಣವೆಂದಾದರೆ ಪುಷ್ಪದ ಒಳಗೆ   ಮಕರಂದವಿದ್ದರೂ ದಳಗಳು ಒಣಗಿಬಿಟ್ಟಂತೆ ಆಗಿಬಿಡುವುದು. ಹಾಗಿರುವಲ್ಲಿ ಕಮಲದ ಶೋಭೆಯೆಂಬುದು ಕ್ಷೀಣಿಸುವುದು – ಸ್ವಲ್ಪಮಟ್ಟಿಗಾದರೂ. ಎಂದೇ ಎಳೆಬಿಸಿಲೇ ಮುಖ್ಯ.

ಎಂದೇ ಅಹಿಮಕರ – ಎಂದು ಸೂರ್ಯನನ್ನು ಇಲ್ಲಿ ಬಣ್ಣಿಸಿರುವುದು. ಎಂದರೆ, ಶೀತವಂತೂ ಅಲ್ಲ, ಸರಿಯೇ. ಅದರ ಜೊತೆಗೆ ಅತ್ಯುಷ್ಣವೂ ಅಲ್ಲದ ಬಿಸಿಯ ಕಿರಣಗಳುಳ್ಳ ಸೂರ್ಯನನ್ನೇ ಹೇಳಿರುವುದು. ಆತನ ಕರ-ನಿಕರವೆಂದರೆ ಕಿರಣಸಮೂಹ. ಅದರಿಂದಾಗಿ ಅರಳುತ್ತಾ, ಕೋಮಲವಾಗಿ ಕಂಗೊಳಿಸುತ್ತದೆ, ಕಮಲಪುಷ್ಪ.

ಅಂತೂ ಹೀಗಾಗಿ ಅತಿಸರಸವಾದ ಕಮಲಗಳು ಹೇಗಿರುತ್ತವೆಯೋ ಹಾಗಿವೆ ಕೃಷ್ಣನ ಕಣ್ಣುಗಳು. ಕೃಷ್ಣನು ದೇವ. ದೇವನೆಂದರೆ ಹೊಳೆಯತಕ್ಕವನು – ಎಂಬರ್ಥವೂ ಇದೆ. ಜೊತೆಗೆ ಆತನ ಕಣ್ಣುಗಳೂ ಕಾಂತಿಯುತವಾಗಿರತಕ್ಕವು.

ಇದಲ್ಲದೆ, ಆತನ ನಗೆಮೊಗವೂ ಸುಶೋಭಿತವೇ. ಮುಖಕ್ಕೆ ಶೋಭೆ ಬರುವುದು ಸಂತೋಷವಿದ್ದಾಗ. ಯಾವುದೇ ಆಟದಲ್ಲಿ ಗೆದ್ದಾಗ ಒಂದಿಷ್ಟು ಗರ್ವವು ಮೂಡುವುದಲ್ಲವೇ? ಆ ಗರ್ವದೊಂದಿಗೆ ತೋರಿಕೊಳ್ಳುವ ತೋಷವು ಕೊಡುವ ಕಳೆಯೇ ಬೇರೆ. ವ್ರಜಾಂಗನೆಯರೊಂದಿಗೆ ರತಿಕಲಹದಲ್ಲಿ ವಿಜಯಿಯಾಗಿದ್ದಾನೆ, ಶ್ರೀಕೃಷ್ಣ. ವ್ರಜನಾರಿಯರೊಂದಿಗೆ ಅವರಿಗೆ ತುಷ್ಟಿಕೊಡುವ ಪುಷ್ಪಪ್ರಹಾರವೇ ಮುಂತಾದ ಕ್ರೀಡೆಗಳನ್ನಾಡಲಾಗಿದೆ. ಅವುಗಳಲ್ಲಿ ಮೇಲುಗೈ ಸಾಧಿಸಿದ್ದಾನೆ, ಕೃಷ್ಣ. ಮುಗುಳ್ನಗೆಯು ಆತನ ಮುಖಚಂದ್ರನಲ್ಲಿ ಮೂಡಿದೆ. 

ಅದರ ಸೊಬಗಿನಲ್ಲಿ ನನ್ನ ಮನಸ್ಸು ಲಯವಾಗುತ್ತಿದೆ - ಎನ್ನುತ್ತಾನೆ, ಕವಿ.

ಅಹಿಮಕರ-ಕರನಿಕರ-ಮೃದುಮುದಿತ-ಲಕ್ಷ್ಮೀ-

-ಸರಸತರ-ಸರಸಿರುಹ-ಸದೃಶದೃಶಿ ದೇವೇ |

ವ್ರಜಯುವತಿ-ರತಿಕಲಹ-ವಿಜಯ-ನಿಜಲೀಲಾ-

-ಮದ-ಮುದಿತ-ವದನಶಶಿ-ಮಧುರಿಮಣಿ ಲೀಯೇ ||

 

***

ಮತ್ತೊಂದು ಶ್ಲೋಕ.

ಶ್ರೀಕೃಷ್ಣನ ಕರವೇ ಕಮಲದಂತೆ. ಆ ಕರದಲ್ಲಿರುವ ಬೆರಳುಗಳು ಕಮಲದಲ್ಲಿರುವ ದಳಗಳಂತೆ. ಅವುಗಳಿಂದ ಧರಿಸಿರುವುದು ಅತಿಲಲಿತವಾದ ವಂಶಿಯನ್ನು. "ವಂಶೀ" ಎಂದರೂ "ವಂಶ" ಎಂದರೂ ಕೊಳಲೇ. ಅದರಿಂದ ಹೊಮ್ಮುವುದು ಕಲ-ನಿನದ ಅಥವಾ ಮಧುರ-ಧ್ವನಿ. ಅ ನಿನಾದವು ಸುರಿಸುವುದು ಅಮೃತವನ್ನು. 

ಆ ಅಮೃತದ ಘನ-ಸರಸ್ಸೇ ಶ್ರೀಕೃಷ್ಣ. ಘನ-ಸರಸ್ಸೆಂದರೆ ಸಾಂದ್ರವಾದ ಸರೋವರ. ಅಲ್ಲಿಗೆ, ಅಮೃತವೇ ಮಡುಗಟ್ಟುವುದಾದರೆ, ಅದುವೇ ಶ್ರೀಕೃಷ್ಣ.

 

ಅಲ್ಲಿಗೆ ಕೃಷ್ಣನೇ ಅಮೃತ-ಸರೋವರ, ಆತನ ಕೈಗಳೇ ಅಲ್ಲಿಯ ಕಮಲಗಳು, ವೇಣುನಾದವೇ ಅವುಗಳ ಮಕರಂದವೆಂಬ ಅಮೃತ – ಎಂಬುದಾಗಿ ಸಾರವಾಗಿ ಹೇಳಿದಂತಾಯಿತು.

ಸ್ವಾಭಾವಿಕ-ಮಾಧುರ್ಯವೇ ಸಹಜ-ರಸ. ಅದರಿಂದ ತುಂಬಿದೆ ಆತನ ದರ-ಹಸಿತ. ಅರ್ಥಾತ್, ಕಿರುನಗೆ. ಅದರ ವೀಥಿಯೆಂದರೆ ಸಂತತವಾಗಿ ಹೊಮ್ಮುವಿಕೆ. ಅದರಿಂದ ನಿರಂತರವಾಗಿ ಸ್ಫುರಿಸುತ್ತಿರುವುದು ಆತನ ಅಧರ. ಅದಾದರೂ ಪದ್ಮರಾಗದ ಮಾಧುರ್ಯವನ್ನು ಹೊಂದಿದೆ. ಕೆಂಪಾದ ಮಣಿಯೆಂದರೆ ಪದ್ಮರಾಗವೇ. ಎಂದೇ ಅಧರಮಣಿಯೆನ್ನುವುದು.

ಆ ಮಣಿಮಾಧುರ್ಯದಲ್ಲಿ ನಾನು ಲೀನನಾಗುವೆನೆನ್ನುತ್ತಾನೆ, ಲೀಲಾಶುಕ.

ಕರಕಮಲ-ದಲಕಲಿತ-ಲಲಿತತರ-ವಂಶೀ-

ಕಲನಿನದ-ಗಲದಮೃತ-ಘನಸರಸಿ ದೇವೇ |

ಸಹಜರಸ-ಭರಭರಿತ-ದರಹಸಿತ-ವೀಥೀ-

ಸತತವಹದ್-ಅಧರಮಣಿ-ಮಧುರಿಮಣಿ ಲೀಯೇ ||


***

ಮತ್ತೊಂದು ಶ್ಲೋಕ.

ಕುಸುಮ-ಶರನೆಂದರೆ ಮನ್ಮಥ. ಏಕೆಂದರೆ ಹೂಗಳೇ ಆತನ ಬಾಣಗಳಲ್ಲವೇ? ಇನ್ನು ಆತನ ಶರ-ಸಮರವೆಂದರೆ ಆ ಪುಷ್ಪಗಳಿಂದಾಗುವ ಪ್ರಹಾರಗಳು. ಆ ಸಂದರ್ಭದಲ್ಲಿ ಸೋತು ಕೋಪಗೊಂಡಿದ್ದಾರೆ, ಮದ-ಗೋಪಿಯರು. ಮದವುಳ್ಳವರಿಗೆ ಕೋಪವು ಸುಲಭವೇ ತಾನೆ? 

ಅವರ ಕೋಪಶಮನಕ್ಕೆ ಆಲಿಂಗನವೊಂದು ಮಾರ್ಗ. ಅವರ ವಕ್ಷಃಸ್ಥಲದ ಕುಂಕುಮವು ಕೃಷ್ಣನ ಎದೆಯ ಮೇಲೆ ಗುರುತುಮಾಡಿದೆ. ಹರ್ಷದಿಂದ ಅರಳಿದ ಆತನ ಮಂದಹಾಸವು ಶಶಿಶೋಭೆಯನ್ನೇ, ಎಂದರೆ ಚಂದ್ರಕಾಂತಿಯನ್ನೇ, ಕದ್ದಿದೆ. ಮುಷಿತವೆಂದರೆ ಅಪಹೃತವಾಗಿರುವುದು.ಇದರಿಂದಾಗಿ ಹೆಜ್ಜೆಹೆಜ್ಜೆಗೂ ಅಧಿಕವಾಗಿ ತೋರುತ್ತಿದೆ, ಕೃಷ್ಣನ ವದನಕಮಲದ ಮಾಧುರ್ಯ.

ಆ ಮುಖಮಾಧುರ್ಯದಲ್ಲಿ ನಾ ಮುಳುಗಿಹೋಗುವೆ  - ಎನ್ನುತ್ತಾನೆ, ಲೀಲಾಶುಕ.

ಕುಸುಮಶರ-ಶರಸಮರ-ಕುಪಿತಮದ-ಗೋಪೀ-

ಕುಚಕಲಶ-ಘುಸೃಣರಸ-ಲಸದುರಸಿ ದೇವೇ |

ಮದಮುದಿತ-ಮೃದುಹಸಿತ-ಮುಷಿತಶಶಿ-ಶೋಭಾ-

ಮುಹುರಧಿಕ-ಮುಖಕಮಲ-ಮಧುರಿಮಣಿ ಲೀಯೇ ||

 

ಉದಾತ್ತವಾದ ಭಾವವೊಂದು ತಾನಾಗಿ ವಿರಾಜಿಸುತ್ತಿದ್ದಲ್ಲಿ ಈ ಮೂರು ಶ್ಲೋಕಗಳಲ್ಲಿರುವ ಮಾತುಗಳು ಒಪ್ಪುತ್ತವೆ.

ಯಾರೋ ಅತಿಸುಂದರನಾದ ಪುರುಷನನ್ನೋ ಅತ್ಯಂತಸುಂದರಿಯಾದ ನಾರಿಯನ್ನೋ ಕಂಡಾಗಲೂ ನೋಡುವವರ ಕಣ್ಣೋ ಮನಸ್ಸೋ ಕ್ಷಣಕಾಲವೋ ಹಲವು ಕ್ಷಣಗಳ ಕಾಲವೋ ಅಲ್ಲೇ ಅಂಟಿಕೊಂಡುಬಿಡುವಂತೆ ಆಗಿಬಿಡುವುದಾದರೂ, ಇಲ್ಲಿ ಲೀಲಾಶುಕನ ಮುಂದಿರುವುದು ಆ ಬಗೆಯ ಲೌಕಿಕ-ಸೌಂದರ್ಯವಲ್ಲ. ಇಲ್ಲಿ ಲಭ್ಯವಾಗಿರತಕ್ಕವು ಲೋಕೋತ್ತರವಾದ ಸೌಂದರ್ಯ-ಮಾಧುರ್ಯಗಳು.

ಸಾಕ್ಷಾತ್ ಪರಮಪುರುಷನೇ ಕೃಷ್ಣನಾಗಿ ಬಂದಿರುವುದರಿಂದ, ಈ ಆಕರ್ಷಣೆಯೆಂಬುದು ಕೇವಲ ಲೀಲಾಶುಕನಿಗೆಂದಲ್ಲ. ಹಾಗೆಯೇ, ವಾಸ್ತವವಾಗಿ ಗೋಪಿಕೆಯರ ಅಂತರಂಗಭಾವವನ್ನೇ ಆತನು ನಮ್ಮ ಮುಂದೆ ಬಿಚ್ಚಿಟ್ಟಿದ್ದಾನೆಂದು ನಾವು ಭಾವಿಸುವುದಾದರೂ, ಕೇವಲ ಅವರಿಗೆ ಮಾತ್ರವೇ ಅದು ಸೀಮಿತವಾದುದೂ ಅಲ್ಲ.

ಲೋಕವನ್ನೇ ಆಕರ್ಷಿಸುವವನೇ ಕೃಷ್ಣನಲ್ಲವೇ? ಅರ್ಥಾತ್, ಮುಗ್ಧ-ಮನಸ್ಸಿನ ಆ ಗೋಪಿಯರ ಉದಾತ್ತ-ಸ್ಥಿತಿಗೆ ಯಾರು ಏರಿದರೂ ಅವರಿಗೆ, ಅಂತಹವರೆಲ್ಲರಿಗೂ ಇಲ್ಲಿ ನಿರೂಪಿತವಾಗಿರುವ ಅನುಭವವು ಉಂಟಾಗುವುದೇ ಸರಿ.

ಈ ಶ್ಲೋಕಗಳಲ್ಲಿಯ ಒಳಸೌಂದರ್ಯವನ್ನು ಕಂಡದ್ದಾಯಿತು. ಅವುಗಳ ಬಾಹ್ಯ-ಸೌಂದರ್ಯದತ್ತಲೂ ಗಮನ ಹರಿಸಬಹುದು. 

ಪ್ರತಿಪಾದದಲ್ಲೂ ೫+೫+೫+೨ ಎಂಬ ಬಗೆಯ ಅಕ್ಷರಸಂಯೋಜನೆ ಈ ಮೂರೂ ಶ್ಲೋಕಗಳಲ್ಲಿದೆ. ಅಲ್ಲಿ ಕೊನೆಯೆರಡಕ್ಷರಗಳು ಛಂದಶ್ಶಾಸ್ತ್ರದಂತೆ "ಗುರು"ಗಳು, ಮಿಕ್ಕ ಹದಿನೈದು ಅಕ್ಷರಗಳೂ "ಲಘು"ಗಳು - ಎಂಬ ಬಗೆಯ ರಚನೆ, ಪ್ರತಿಯೊಂದು ಪಾದದಲ್ಲೂ. ಪ್ರತಿ ಎರಡನೆಯ ಪಾದದ ಕೊನೆಯಲ್ಲಿ "ದೇವೇ" – ಎಂಬ ಪದವಿದೆ; ಅಂತೆಯೇ, ಪ್ರತಿ ನಾಲ್ಕನೆಯ ಪಾದದ ಕೊನೆಯಲ್ಲಿ "ಲೀಯೇ" – ಎಂಬ ಪದವಿದೆ.

ಈ ವೃತ್ತದ ಹೆಸರು "ಶಶಿಶೋಭಾ". ಹೃದ್ಯ-ಲಯಬದ್ಧತೆಯೂ ಸುಶ್ರಾವ್ಯ-ಗೇಯ-ಗುಣವೂ ಈ ಮೂರೂ ಶ್ಲೋಕಗಳಲ್ಲಿದೆ. ಅನುಪ್ರಾಸವಂತೂ ಆದ್ಯಂತವಾಗಿಯೂ ಸಹಜವಾಗಿಯೇ ಮೂಡಿದೆ. ಮೂರೂ ಶ್ಲೋಕಗಳಲ್ಲೂ ಸುದೀರ್ಘ-ಸಮಾಸಗಳೇ ಇವೆಯಾದರೂ, ಶ್ಲೋಕದ ಭಾವಕ್ಕೆ ಯಾವುದೇ ಅಡ್ಡಿಯನ್ನು ಅವು ಒಡ್ಡುವಂತಿಲ್ಲ.

ರಸವೇ ಉಕ್ಕುತ್ತಿರುವಾಗ ಸಮಾಸಗಳ ಉದ್ದವಾಗಲಿ, ಅನುಪ್ರಾಸದ ಧಾರೆಯಾಗಲಿ, ತಾಳಬದ್ಧತೆಯ ಲಯವಾಗಲಿ, ಯಾವುವೂ ಅಡ್ಡಬರವು. ಜಯದೇವಕವಿಯ ಗೀತಗೋವಿಂದಕಾವ್ಯದಲ್ಲಿ ಹೇಗೋ ಹಾಗಿದೆ ಇಲ್ಲಿಯ ರಚನೆ.

ಸೂಚನೆ : 10/05/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಅಷ್ಟಾಕ್ಷರೀ 81 ತದಗ್ರೇ ಸರ್ವತಃ ಶಿವಮ್ (Astaksari 81)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)

ಆ ಅಗ್ರದಲಿ ಎತ್ತಲಿಂದಲೂ ಶುಭವದು


ಮಹಾವಿಷ್ಣುವಿನ ದಶಾವತಾರಗಳನ್ನು ಯಾರು ಕೇಳಿಲ್ಲ? ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ಕೋದಂಡರಾಮ, ಬಲರಾಮ, ಕೃಷ್ಣ, ಕಲ್ಕಿ - ಎಂಬುದಾಗಿ. ಕೆಲವೊಮ್ಮೆ (ಕೃಷ್ಣನಿಗೆ ಮೊದಲಿನ) ಬಲರಾಮನ ಬದಲಾಗಿ (ಕೃಷ್ಣನ ನಂತರದ) ಬುದ್ಧನನ್ನು ಪರಿಗಣಿಸುವುದೂ ಉಂಟು.

ಈ ಎಲ್ಲ ಅವತಾರಗಳ ಮೂರು ಸಮಾನೋದ್ದೇಶಗಳೆಂದರೆ ಸಜ್ಜನರ ರಕ್ಷಣ; ಇದಕ್ಕಾಗಿ ದುಷ್ಟ-ವಿನಾಶ; ಇವೆರಡರಿಂದಾಗಿ ಧರ್ಮಸಂಸ್ಥಾಪನ.

ಈ ಹತ್ತವತಾರಗಳಲ್ಲಿ ಮತ್ಸ್ಯ-ಕೂರ್ಮ-ವರಾಹಗಳೆಂಬ ಮೂರು ಪ್ರಾಣಿಶರೀರಾವತಾರಗಳು. ನರಸಿಂಹಾವತಾರವು ಅರ್ಧ-ಪ್ರಾಣಿ, ಅರ್ಧ-ನರ. ಮುಂದಿನ ಅವತಾರಗಳು ಮಾನುಷರೂಪದವು. ಮಾನವರು ಹೇಗೆ ಜೀವನ ನಡೆಸಬೇಕೆಂದು ತೋರಿಸುವ ನಾಲ್ಕನೆಯ ಉದ್ದೇಶವೂ ಮಾನವರೂಪಾವತಾರಗಳಿಗೆ ಇರುತ್ತದೆ: ಮರ್ತ್ಯಾವತಾರವು ಮರ್ತ್ಯಶಿಕ್ಷಣಕ್ಕಾಗಿ.

ನರಸಿಂಹಜಯಂತಿಯು ಸಂನಿಹಿತವಾಗಿರುವುದರಿಂದ ಈ ಕುರಿತಾಗಿ ಎರಡು ಮಾತುಗಳು.

ಕಂಠದವರೆಗೂ ನರಸಿಂಹನು ಆದಿಪುರುಷನೇ ಸರಿ. ಅಲ್ಲಿಂದ ಮೇಲಕ್ಕೆ ಕಂಠೀರವ, ಎಂದರೆ ಸಿಂಹ, ಮೃಗಗಳಲ್ಲಿ ಶ್ರೇಷ್ಠವೆನಿಸುವುದೆಂದರೆ ಮೃಗೇಂದ್ರ - ಎಂದು ಕರೆಸಿಕೊಳ್ಳುವ ಸಿಂಹವೇ ಸರಿ. ಹಾಗೆಯೇ ಪ್ರಾಣಿವರ್ಗದಲ್ಲೆಲ್ಲಾ ಶ್ರೇಷ್ಠವೆಂದರೆ ಮನುಷ್ಯನೇ ಬುದ್ಧಿಶಾಲಿಗಳಲ್ಲಿ ನರರೇ ಶ್ರೇಷ್ಠರು ಎನ್ನುತ್ತಾನೆ, ಮನು. ಹೀಗೆ ಎರಡು ಶ್ರೇಷ್ಠಾಂಶಗಳ ಸೇರ್ಪಡೆಯಿಂದ ಆಗಿರುವ ರೂಪವಿದು.

ಮೇಲ್ನೋಟಕ್ಕೆ ಎರಡು ಶರೀರಗಳ ಸೇರ್ಪಡೆಯಾದರೂ, ತಾತ್ತ್ವಿಕವಾಗಿ ರೂಪತ್ರಯದ ಸೇರ್ಪಡೆ. ತ್ರಿಮೂರ್ತಿಗಳ ರೂಪಗಳಿಲ್ಲಿವೆ.

ಶರೀರದಲ್ಲಿ ಸಹಜವಾಗಿ ಮೂರು ಭಾಗಗಳಿವೆ. ಹೊಕ್ಕಳು-ಕಂಠಗಳೆಂಬ ಸ್ಥಾನಗಳಿಂದಾಗಿ ಶರೀರವು ತ್ರಿಭಾಗಾತ್ಮಕ. ಪಾದದಿಂದ ನಾಭಿಪರ್ಯಂತವಾಗಿ ನರಸಿಂಹನು ಬ್ರಹ್ಮರೂಪ, ನಾಭಿಯಿಂದಾರಂಭಿಸಿ ಕಂಠಪರ್ಯಂತ ವಿಷ್ಣುರೂಪ, ಕಂಠದಿಂದ ಶಿರಸ್ಸಿನವರೆಗೆ ರುದ್ರರೂಪ.

ಜಗತ್ತಿನ ಮೂಲಶಕ್ತಿಗಳು ಮೂರು: ಸೃಷ್ಟಿಶಕ್ತಿ, ಸ್ಥಿತಿಶಕ್ತಿ, ಲಯಶಕ್ತಿಗಳು. ಅವುಗಳಲ್ಲಿ ಸೃಷ್ಟಿಶಕ್ತಿಯೆಂಬುದು ಕೆಳಗೆ ಕೆಲಸಮಾಡುವಂತಹುದು. ಜನನಾಂಗವೆಂಬುದು ನಾಭಿಯಿಂದ ಕೆಳಕ್ಕೇ ಇರುವುದಷ್ಟೆ. ಹೀಗಾಗಿ ಬ್ರಹ್ಮರೂಪವೆಂಬುದು ನಾಭಿಯವರೆಗಿನದು.

ನಾಭಿಯಿಂದ ಕಂಠದವರೆಗೆ ನರಸಿಂಹನು ವೈಷ್ಣವವಪು. ವಪುವೆಂದರೆ ಶರೀರ. ಹಾಗೆಯೇ ಕಂಠದಿಂದ ಮೇಲಕ್ಕೆ ರುದ್ರಸ್ವರೂಪ. ರುದ್ರನು ಉಗ್ರಸ್ವಭಾವ. ಎಷ್ಟಾದರೂ ಸಂಹಾರಕಾರಕನಲ್ಲವೇ? ಪ್ರಾಣಿಗಳೆಲ್ಲ ಸಿಂಹಕ್ಕೆ ಹೆದರತಕ್ಕವೇ. ರೋಷಾವಿಷ್ಟಸಿಂಹವೆಂದರೆ ಬೇರೆ ಪ್ರಾಣಿಗಳ ಕಥೆ ಮುಗಿಯಿತೆಂದೇ.

ಅಧರ್ಮ-ವಿಧ್ವಂಸನದಲ್ಲಿ, ಅರ್ಥಾತ್ ಅಧರ್ಮಿಷ್ಠರ ಸಂಹಾರಕಾರ್ಯದಲ್ಲಿ, ರೌದ್ರಾವತಾರವು ಸಹಜವಾಗಿಯೇ ಅವಶ್ಯ; ಆ ಸಂಹಾರಕಾರ್ಯವು ಮುಗಿದ ಬಳಿಕ, ಸ್ತುತಿಗಳಿಂದಲೇ ಶ್ರೀಲಕ್ಷ್ಮೀನೃಸಿಂಹನನ್ನು ಒಲಿಸಿಕೊಂಡು ಆತನ ಅನುಗ್ರಹವನ್ನು ಪಡೆದವರುಂಟು. ಆರ್ತತೆಯಿಂದಲೂ ಭಕ್ತಿಯಿಂದಲೂ ಭಕ್ತರು ಮೊರೆಯಿಡುವುದಕ್ಕನುಗುಣವಾಗಿ ಪ್ರೀತಿಯಿಂದಲೂ ವಾತ್ಸಲ್ಯದಿಂದಲೂ ಭಗವಂತನು ತನ್ನ ಹಸ್ತಾವಲಂಬನವನ್ನು ನೀಡುವನು.

ಭಗವಂತನೇ, ನಾನು ಕುರುಡ. ವಿವೇಕವೆಂಬುದೇ ನನ್ನ ದೊಡ್ಡಹಣದ ಗಂಟು. ಇಂದ್ರಿಯಗಳೆಂಬ ಬಲಿಷ್ಠ-ಚೋರರು ಅದನ್ನು ಕದ್ದುಬಿಟ್ಟಿದ್ದಾರೆ. ಸಾಲದೆಂದು, ಮೋಹಾಂಧಕಾರವೆಂಬ ಕಗ್ಗತ್ತಲಿನ ಕೂಪದೊಳಗೆ ನನ್ನನು ಬೀಳಿಸಿ ಹೋಗಿದ್ದಾರೆ. ಆಸರೆಯ ಕೈನೀಡು – ಎಂಬ ಪ್ರಾರ್ಥನೆ.

ಜೀವವು ತನ್ನ ವಾಸ್ತವಾವಸ್ಥೆಯ ತತ್ತ್ವಾವಲೋಕನವನ್ನು ಮಾಡಿಕೊಂಡಾಗ ಗೊತ್ತಾಗುವುದೆಂದರೆ ಸಂಸಾರವೆಂಬುದೊಂದು ವೃಕ್ಷ. ಪಾಪವೇ ಅದರ ಬೀಜ. ಆ ಮರಕ್ಕೆ ಕರ್ಮಗಳೆಂಬ ಕೊಂಬೆಗಳು ಅನಂತ. ಇಂದ್ರಿಯಗಳೇ ಅದರ ಪತ್ರಗಳು, ಎಂದರೆ ಎಲೆಗಳು. ಕಾಮವು ಪುಷ್ಪ, ದುಃಖವೇ ಫಲ. ಆ ಮರದ ಮೇಲಿಂದ ಬಿದ್ದಿದ್ದೇನೆ. ಪತಿತನಾದ ನನ್ನನ್ನು ದಯಾಲುವಾದ ನೀನು ಕೈನೀಡಿ ಕಾಪಾಡು – ಎಂದೂ  ಬೇಡುವುದುಂಟು.

ಆ ದಯಾಮಯವಾದ ಹೃದಯ ವಿಷ್ಣುವಿನದು. ದಯೆಯೇ ಮೈತಾಳಿದಂತಹ ಲಕ್ಷ್ಮಿಯೇ ಜೊತೆಗಿರುವ ನೃಸಿಂಹನೇ ಕಾಪಾಡತಕ್ಕವನು. ಆ ದಯಾಮಯನ ಸ್ಥಾನವೇ ಹೃದಯ. ನಾಭಿ-ಕಂಠಗಳ ನಡುಭಾಗವಲ್ಲವೇ ಹೃದಯವೆಂಬುದು?

ಈವರೆಗೆ ಹೇಳಿದ ಮೂರುಭಾಗಗಳಲ್ಲದೆ ನಾಲ್ಕನೆಯ ಭಾಗವೂ ಒಂದುಂಟು. ಅದು ಶೀರ್ಷಾಗ್ರಸ್ಥಾನ. ಅದನ್ನೇ "ತದಗ್ರೇ ಸರ್ವತಃ ಶಿವಮ್" ಎನ್ನುವುದು. (ಅದರ ತುದಿಯಲ್ಲಿ ಎತ್ತಲಿಂದಲೂ ಅದು ಮಂಗಳಕರವಾದುದು). ಯೋಗದ ಪರಾಕಾಷ್ಠೆಯ ಸ್ಥಾನವದು.ಯೋಗದಲ್ಲಿ ನೆಲೆಗೊಂಡ ಪರತತ್ತ್ವವದು, ಪರಬ್ರಹ್ಮಸ್ಥಾನವದು. ಸಭಾಸ್ತಂಭವೆಂಬುದು ಮೇರುಸ್ಥಾನ. ಅದರಿಂದ ಆವಿರ್ಭವಿಸಿದ ಯೋಗಮೂರ್ತಿಯೇ ಮೋಕ್ಷಲಕ್ಷ್ಮೀ-ಸಮೇತನಾದ ನರಸಿಂಹ – ಎಂಬ ತಾತ್ತ್ವಿಕವಾದ ವಿವರಣೆಯನ್ನು ಶ್ರೀರಂಗಮಹಾಗುರುಗಳು ಕೊಟ್ಟಿರುವರು.

ಮರುದ್ಗಣಗಳನ್ನು - ಎಂದರೆ ದೇವತೆಗಳನ್ನು, ಅಥವಾ ತನ್ನ ಪ್ರಾಣಶಕ್ತಿಗಳನ್ನು - ಸ್ವ-ಸ್ವ-ಸ್ಥಾನಗಳಲ್ಲಿ ನಿಯಮನ ಮಾಡಿರುವ, ಎಂದರೆ ವಶದಲ್ಲಿಟ್ಟುಕೊಂಡಿರುವ, ಯೋಗಾನರಸಿಂಹನ ಮೂರ್ತಿಯದು.

ಹೀಗೆ ಹಗಲು-ರಾತ್ರಿಗಳ ಸಂಗಮ-ಸ್ಥಾನದಲ್ಲಿ, ಒಳ-ಹೊರಗುಗಳ ಸಂಗಮ-ಸ್ಥಾನವಾದ ಹೊಸ್ತಿಲಿನಲ್ಲಿ, ಹಾಗೂ ಯೋಗ-ಭೋಗಗಳ, ರೌದ್ರ-ಕಾರುಣ್ಯಗಳ, ತ್ರಿಮೂರ್ತಿಶಕ್ತಿಗಳ ಸಂಗಮಸ್ಥಾನವಾಗಿ ಯೋಗಿದೃಶ್ಯನಾದ ನರಸಿಂಹನಿಗೆ ನಮ್ಮ ಪ್ರಾಣಪ್ರಣಾಮಗಳು. 

ಸೂಚನೆ: 10/5//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

Monday, May 5, 2025

ವ್ಯಾಸ ವೀಕ್ಷಿತ 135 ಪಕ್ಷಿಗಳ ಪ್ರಾರ್ಥನೆ, ಅಗ್ನಿಯ ಅನುಗ್ರಹ (Vyaasa Vikshita 135)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಖಾಂಡವವನವನ್ನು ಸುಡುತ್ತಿರುವ ಅಗ್ನಿಯನ್ನು ಪ್ರಾಣಭಿಕ್ಷೆಗಾಗಿ ಪಕ್ಷಿಗಳು ಬೇಡಿಕೊಳ್ಳುತ್ತಿವೆ.  ಆ ನಾಲ್ಕು ಪಕ್ಷಿಗಳಲ್ಲೊಂದಾದ ಸಾರಿಸೃಕ್ಕವು ಅಗ್ನಿಯನ್ನು ಕುರಿತು ಹೀಗೆ ಮುಂದುವರೆಸಿ ಹೇಳಿತು: "ಅಗ್ನಿಯೇ ನಿನ್ನ ರೂಪವು ಮಂಗಳಕರವಾದದ್ದು. ನಿನಗೆ ಏಳು ಆಯುಧಗಳಿವೆ (ಜ್ವಾಲೆಗಳ ರೂಪದಲ್ಲಿ), ನಾವು ಆರ್ತರು, ಶರಣಾರ್ಥಿಗಳು, ನಮ್ಮನ್ನು ಆ ಕಾರಣಕ್ಕೂ ನೀನು ಕಾಪಾಡಬೇಕು. ಅಲ್ಲದೇ, ನಾವು ಬಾಲಕ ಋಷಿಗಳು. ನಮ್ಮನ್ನು ಕಾಪಾಡು, ದೂರ ಒಯ್ದು ಬಿಡು" - ಎಂದು.

ಬಳಿಕ ಸ್ತಂಬಮಿತ್ರವು ಹೇಳಿತು: ಓ ಅಗ್ನಿಯೇ, ಈ ಜಗತ್ತನ್ನೆಲ್ಲವನ್ನೂ ನೀನೇ ಧರಿಸಿದ್ದೀಯೇ. ನೀನೇ ಕಾಪಾಡುವವನೂ. ಈ ಮೂರೂ ಲೋಕಗಳನ್ನೂ ಸೃಷ್ಟಿಸಿ ಕೊನೆಗೆ ಪ್ರಳಯಸಮಯದಲ್ಲಿ ನೀನೇ ಎಲ್ಲವನ್ನೂ ಸಂಹರಿಸತಕ್ಕವನು" - ಎಂದು.

ಆಮೇಲೆ ದ್ರೋಣವು ಹೇಳಿತು:

"ಓ ಜಗತ್ಪತಿಯೇ, ಪ್ರಾಣಿಗಳ ಶರೀರದೊಳಗೆ ಇರುವವನಾಗಿದ್ದು, ನೀನೇ ಅವುಗಳು ತಿಂದ ಆಹಾರವನ್ನು ಪಚನ ಮಾಡತಕ್ಕವನು. ನೀನೇ ಸೂರ್ಯನಾಗಿ ನಿನ್ನ ಕಿರಣಗಳಿಂದ ಭೂಮಿಯಿಂದ ನೀರನ್ನೆಲ್ಲಾ ಹೀರಿ, ನೀನೇ ಅದನ್ನೆಲ್ಲಾ ಮಳೆಯಾಗಿ ಸುರಿಸುವೆ. ನೀನು ನಮ್ಮ ಪಾಲಿಗೆ ಕಲ್ಯಾಣಮಯನಾಗು, ನಮ್ಮನ್ನು ನಾಶಪಡಿಸಬೇಡ, ಕಾಪಾಡು - ಎಂದು.

ದ್ರೋಣವು ಮಾಡಿದ ಈ ಪ್ರಾರ್ಥನೆಯಿಂದ ಅಗ್ನಿಯು ಪ್ರಸನ್ನನಾದನು. ಅದೇ ಹೊತ್ತಿಗೆ ಮಂದಪಾಲನಿಗೆ ತಾನಿತ್ತಿರುವ ಮಾತೂ ಆತನ ಸ್ಮರಣೆಗೆ ಬಂದಿತು.

ಆಗ ಅಗ್ನಿಯು ಹೇಳಿದನು:

"ನೀನು ದ್ರೋಣನೆಂಬ ಋಷಿ - ಎಂಬುದನ್ನು ಅರಿತುಕೊಂಡಿದ್ದೇನೆ. ನೀನು ಮಾಡಿರುವ ಸ್ತುತಿಯು ಬ್ರಹ್ಮವನ್ನು ಕುರಿತಾಗಿ - ಎಂಬುದನ್ನೂ ನಾ ಬಲ್ಲೆ. ನಿನ್ನ ಅಪೇಕ್ಷೆಯನ್ನು ಇದೋ ಪೂರೈಸುವೆ. ನಿನಗಾವ ಭಯವೂ ಇರದು. ನಿಮ್ಮ ವಿಷಯವಾಗಿ ಮಂದಪಾಲಮುನಿಯು ಹಿಂದೆಯೇ ಹೇಳಿದ್ದನು. ಖಾಂಡವವನವನ್ನು ಸುಡುವಾಗ ನನ್ನ ಮರಿಗಳನ್ನು ಸುಟ್ಟುಬಿಡಬೇಡ - ಎಂಬುದಾಗಿ. ಆತನ ಆ ಮಾತು, ಹಾಗೂ ನಿನ್ನ ಈಗಿನ ಈ ಮಾತು - ಎರಡೂ ನನಗೆ ಆದರಕ್ಕೆ ಪಾತ್ರವಾದದ್ದೇ. ನಿನ್ನ ವಿಷಯದಲ್ಲಿ ನಾನು ಸುಪ್ರೀತನಾಗಿದ್ದೇನೆ. ನಿನಗಾಗಿ ಏನನ್ನು ಮಾಡಲಿ ಹೇಳು - ಎಂದು.

ಅದಕ್ಕೆ ದ್ರೋಣವು ಹೇಳಿತು:

"ಅಗ್ನಿಯೇ, ಈ ಬೆಕ್ಕುಗಳು ನನಗೆ ಪ್ರತಿದಿನವೂ ಉದ್ವೇಗವುಂಟುಮಾಡುತ್ತಿವೆ. ಇದನ್ನು ಅದರ ಪರಿವಾರದೊಂದಿಗೆ ಸುಟ್ಟುಹಾಕು." ಅಗ್ನಿಯು ಅಂತೆಯೇ ಮಾಡಿದನು. ಹಾಗೂ ಜಾಜ್ವಲ್ಯಮಾನನಾಗಿ ಬೆಳಗುತ್ತ ಖಾಂಡವವನವನ್ನು ದಹಿಸಿದನು. ಇತ್ತ ಮಂದಪಾಲನೂ ಸಹ ತನ್ನ ಮಕ್ಕಳ ಬಗ್ಗೆ ಚಿಂತಿಸಿದನು. ಅಗ್ನಿದೇವನಲ್ಲಿ ಪ್ರಾರ್ಥನೆ ಸಲ್ಲಿಸಿದ್ದರೂ ಮನಸ್ಸಿಗೆ ನೆಮ್ಮದಿಯೊದಗಿರಲಿಲ್ಲ. ಮಕ್ಕಳ ವಿಷಯವಾಗಿ ಚಿಂತಿಸುತ್ತಾ ಆತನು ಲಪಿತೆಯೊಂದಿಗೆ ಹೇಳಿದನು:

"ಲಪಿತೇ, ನನ್ನ ಮಕ್ಕಳು ತಮ್ಮ ಸದನದಲ್ಲಿ ಹೇಗೆ ಬದುಕುಳಿದಾರು? ಅಗ್ನಿಯು ಹೆಚ್ಚಾಗುತ್ತಿರಲು, ವಾಯುವೂ ವೇಗದಿಂದ ಬೀಸುತ್ತಿರಲು, ಅಗ್ನಿಪ್ರಭಾವದಿಂದ ಬಿಡಿಸಿಕೊಳ್ಳುವುದರಲ್ಲಿ ನನ್ನ ಮಕ್ಕಳು ಅಸಮರ್ಥರೇ ಆಗಿಬಿಡುವರು.

ಅವುಗಳ ತಾಯಿಯಂತೂ ಬಡಪಾಯಿಯೇ. ಮಕ್ಕಳನ್ನು ಕಾಪಾಡುವುದೆಂತೆಂದು ತೋಚದೆ ನನ್ನ ಮಕ್ಕಳು ಹಾರಲು ಅಶಕ್ತರು, ರೆಕ್ಕೆ ಬಡಿಯಲೂ ಸಮರ್ಥರಲ್ಲ - ಎಂಬೀ ಸಂತಾಪದಿಂದಾಗಿ ಅದೆಷ್ಟು ಗೋಳಿಡುತ್ತಿರುತ್ತಾಳೋ ಓಡಲೆಳಸುತ್ತಿರುತ್ತಾಳೋ ನಾನರಿಯೆ. ನನ್ನ ಪುತ್ರನಾದ ಜರಿತಾರಿಯು ಹೇಗಿರುವನೋ? ಸಾರಿಸೃಕ್ಕನು ಹೇಗಿರುವನೋ? ಸ್ತಂಬಮಿತ್ರನು ಎಂತೋ? ದ್ರೋಣನು ಹೇಗೋ? ಮತ್ತು ಪಾಪ, ಬಡಪಾಯಿ ಜರಿತೆಯು ಎಂತಿರುವಳೋ?" – ಎಂದು.

ಸೂಚನೆ : 04/05/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 14 (Prasnottara Ratnamalike 14)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೧೪. ಭಯ ಯಾರಿಂದ ?

ಉತ್ತರ - ಮರಣದಿಂದ, ಈಶ್ವರದಿಂದ

ಈ ಮುಂದಿನ ಪ್ರಶ್ನೆ - ಭಯ ಯಾರಿಂದ? ಎಂಬುದಾಗಿ. ಅದಕ್ಕೆ ಉತ್ತರ 'ಮರಣದಿಂದ' ಅಥವಾ 'ಈಶ್ವರನಿಂದ' ಎಂಬುದು ಕೇವಲ ಮಾನವನಿಗೆ ಮಾತ್ರವಲ್ಲ; ಸಕಲ ಜಂತುಗಳಿಗೂ ಭಯ ಎಂಬುದು ಬಿಟ್ಟಿದ್ದಲ್ಲ. ಭಯದಿಂದಲೇ ಅವನು ಜೀವನವನ್ನು ಮಾಡುತ್ತಿರುತ್ತಾನೆ. ಭಯದ ರಕ್ಷಣೆಯನ್ನು ಮಾಡಿಕೊಳ್ಳುವುದಕ್ಕೋಸ್ಕರವೇ ಜೀವನವನ್ನು ಮಾಡಿಕೊಳ್ಳುತ್ತಿರುತ್ತಾರೆ. ಭಯದಿಂದ ನಿವೃತ್ತಿ ಹೇಗೆ ಸಾಧ್ಯ? ಎಂಬುದು ಪ್ರತಿಯೊಬ್ಬರ ಚಿಂತನೆಯಾಗಿರುತ್ತದೆ. ಹಾಗಾಗಿ ಈ ಭಯ ಎಂಬುದು ನಮ್ಮನ್ನು ಯಾವಾಗಲೂ ಕಾಡುವಂತಹದ್ದು. ಹಾಗಾದರೆ ಮರಣವೆಂಬುದು ಅದೇಕೆ ನಮಗೆ ಇಷ್ಟು ಭಯ? ಎಂಬುದು ಬಹಳ ವಿಚಾರಣೀಯ.


ಭಾರತೀಯ ಸಂಸ್ಕೃತಿ ಇಷ್ಟು ಗಟ್ಟಿಯಾಗಿ ನಿಂತಿದೆ ಎನ್ನುವುದಾದರೆ ಅದಕ್ಕೆ ಕಾರಣವೇ ಈ ಮರಣಭಯ. ಅದೊಂದು ಇಲ್ಲವಾದರೆ ಈ ಸಂಸ್ಕೃತಿಗೆ ಅಸ್ತಿತ್ವವೇ ಇಲ್ಲ ಎನ್ನಬಹುದು; ಅಷ್ಟರಮಟ್ಟಿಗೆ ಈ ಮರಣಭಯಕ್ಕೆ ವಿಶೇಷತೆ ಇದೆ. ಮರಣ ಎಂಬುದು ನಮಗೆ ಯಾವಾಗ ಅನುಭವಕ್ಕೆ ಬಂದಿರುವುದು? ಎಂಬುದು ಇಲ್ಲಿನ ವಿಷಯವಾಗಿದೆ.  ಯಾವುದಾದರೂ ಜೀವದಿಂದಲೋ ತೊಂದರೆಯಾದರೆ ಅಥವಾ ನಮ್ಮ ಜೀವಕ್ಕೆ ಕುತ್ತುಬರುವಂತಾದರೆ ಆಗ ನಮಗೆ ಭಯವಾಗುವುದುಂಟು. ಏಕೆಂದರೆ ಅಲ್ಲಿ ಮರಣಭೀತಿ. ನಾವು ಹಿಂದೆ ಅನುಭವಿಸಿದ್ದರೆ ಮಾತ್ರ ಅದನ್ನು ಕಂಡರೆ ಭಯವೆಂಬುದು ಬರುತ್ತದೆ. ಅದರ ಬಗ್ಗೆ ಅರಿವು ಅಷ್ಟು ಬಂದಾಗ ಮಾತ್ರ ಮರಣದ ಬಗ್ಗೆ ನಮಗೆ ಭಯವಿರುವಿರಲು ಸಾಧ್ಯ. ಹಾಗಾದರೆ ಈ ಮರಣವು ಹೇಗೆ ನಮಗೆ ಭಯವಾಗಿ ಪರಿಣಾಮ ಪರಿಣಾಮವಾಗುತ್ತದೆ?


ಭಾರತೀಯ ಸಂಸ್ಕೃತಿಯಲ್ಲಿ ಅನೇಕ ಹುಟ್ಟು ಸಾವುಗಳನ್ನು ಹೇಳಲಾಗಿದೆ. ಒಂದು ಜೀವಕ್ಕೆ ಒಂದೇ ಜನನ ಒಂದೇ ಮರಣವೆಂದರ್ಥವಲ್ಲ. ಅನೇಕ ಜನನ ಮರಣಗಳನ್ನು ಅನುಭವಿಸುತ್ತದೆ. ಅವನ ಪುಣ್ಯ ಪಾಪಕರ್ಮಗಳ ಮಿಶ್ರಣದಿಂದ ಜನ್ಮ ಎಂಬುದು ಪ್ರಾಪ್ತವಾಗುತ್ತದೆ. ಕಾಲ ಪಕ್ವವಾದಂತೆ ಆ ವ್ಯಕ್ತಿ ತನ್ನ ಜೀವಿತವನ್ನು ಮುಗಿಸುವುದು ಅಂದರೆ ಮರಣವನ್ನು ಪಡೆಯುತ್ತಾನೆ. ಇಂತಹ ಮರಣಗಳು ಅನೇಕ ಸಂಭವಿಸಿರುವುದರಿಂದ ಮರಣವೆಂದರೆ ಅವನಿಗೆ ಭಯ ಎಂಬುದಾಗಿ ಹೇಳಲಾಗಿದೆ. ಯೋಗಶಾಸ್ತ್ರದಲ್ಲಿ ಇದಕ್ಕೆ 'ಅಭಿನಿವೇಶ' ಎಂಬುದಾಗಿ ಹೇಳಲಾಗಿದೆ. ಐದು ವಿಧವಾದ ಜೀವ ಅನುಭವಿಸುವ ಕ್ಲೇಶಗಳಲ್ಲಿ ಇದು ಒಂದು ಕ್ಲೇಶ ಎಂಬುದಾಗಿ ಅಲ್ಲಿ ಹೇಳಲ್ಪಟ್ಟಿದೆ. ಅಂದರೆ ಜನ್ಮಜನ್ಮಾಂತರಗಳಲ್ಲಿ ಅನುಭವಿಸಿದ ಯಾವ ಮರಣ ಅನುಭವ ಉಂಟೋ ಅದೇ ಇಂದೂ ಕೂಡ ನಮ್ಮನ್ನು ಕಾಡುತ್ತಿರುತ್ತದೆ. ಸಂಸಾರ, ಜನನ. ಮರಣ ಇವುಗಳ ಆಳವಾದ ಅರಿವನ್ನು ಪಡೆದ ವಿದ್ವಾಂಸನಿಗೂ ಈ ಭಯ ಬಿಡುವುದಿಲ್ಲವಂತೆ. ಹಾಗಾಗಿ ಬದುಕಬೇಕು; ನಮ್ಮನ್ನು ಉಳಿಸಿಕೊಳ್ಳಬೇಕು; ಮರಣದಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕು ಎಂಬ ಪ್ರಯತ್ನ ನಿರಂತರವಾಗಿ ಸಾಗುತ್ತಿರುತ್ತದೆ. ಇದರ ಜೊತೆಯಲ್ಲಿ ಇನ್ನೊಂದು ವಿಷಯ - ನಾವು ಈ ಮರಣಭಯದಿಂದ ರಕ್ಷಿಸಿಕೊಳ್ಳಬೇಕಾದರೆ ಈಶ್ವರನ ಮೊರೆ ಹೋಗುವುದು ಅತ್ಯಂತ ಸೂಕ್ತ. ಅವನ ಅಭಯವಿಲ್ಲದಿದ್ದರೆ ಭಯ ನಿಶ್ಚಿತ. ಹಾಗಾಗಿ ಅವನಿಂದಲೂ ಭಯವಿರದ ರೀತಿಯಲ್ಲಿ ಅವನ ಅಭಯವನ್ನು ಪಡೆಯುವ ರೀತಿಯಲ್ಲಿ ನಮ್ಮ ಜೀವನ ಸಾಗಬೇಕು ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.


ಸೂಚನೆ : 04/05/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Saturday, May 3, 2025

ಕೃಷ್ಣಕರ್ಣಾಮೃತ ಕೃ 61 ಮಧುರಮುಖದ ಮುರಾರಿಯಲ್ಲಿ ಮಗ್ನವಾದ ಮಾನಸ (Krishakarnamrta 61)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಕೃಷ್ಣನನ್ನು ಬಿಟ್ಟು ಮತ್ತಾರನ್ನೂ ನಾವು ಹುಡುಕೆವು - ಎನ್ನುತ್ತಾನೆ, ಕವಿ. ಏಕೆ? ಎಂತಹವನು ಕೃಷ್ಣ? ಅದಕ್ಕೊಂದು ಪುಟ್ಟಪದ್ಯವಿದೆ, ಕೃಷ್ಣಕರ್ಣಾಮೃತದಲ್ಲಿ. ನನ್ನನು ರಕ್ಷಿಸು - ಎಂಬುದಾಗಿ ಹೇಳಿಕೊಂಡು ಬಳಿ ಬಂದವರು ಶರಣಾಗತರು. ಹಾಗೆ ಬಂದವರಿಗೆ ಸಂಪೂರ್ಣರಕ್ಷಣೆಯನ್ನು ಕೊಡುವವನು ಶ್ರೀಕೃಷ್ಣ. ಈ ಮಾತನ್ನು ಕೇವಲ ನೇರವಾಗಿ ಹೇಳಿದರೆ ಮನಸ್ಸಿಗೆ ಸ್ಪಷ್ಟವಾಗುವುದಿಲ್ಲ. ಹೇಳುವ ವಿಷಯವನ್ನೇ ಉಪಮೆಯ ಮೂಲಕವೋ ರೂಪಕದ ಮೂಲಕವೋ ಹೇಳಬಲ್ಲವನೇ ಕವಿ. ಕಾವ್ಯಭಂಗಿಯಿಂದ ಹೇಳಿದಾಗಲೇ ಮನಸ್ಸಿಗೆ ಚೆನ್ನಾಗಿ ನಾಟುವುದು, ಅಲ್ಲವೇ?

ಎಂದೇ "ಸುರಕ್ಷೆಯ ವ್ಯವಸ್ಥೆ"- ಎಂಬುದನ್ನು ಇಲ್ಲಿ  "ವಜ್ರಪಂಜರ"ವೆಂದಿರುವುದು. ಪಂಜರದೊಳಗೆ ಇರಿಸಿರುವ ಗಿಳಿಗೆ ಏನೂ ಅಪಾಯ ಬರದು. ಯಾರೂ ಇಲ್ಲದ ಸಮಯದಲ್ಲಿ ಬೆಕ್ಕು ಬಂದರೂ ಅದನ್ನು ಆಕ್ರಮಿಸಿಬಿಡಲಾರದು, ಕೊಲ್ಲಲಾರದು. ಇನ್ನು ವಜ್ರದಿಂದ ಮಾಡಿರುವ ಪಂಜರವೆಂದರೆ ಹೇಳಲೇಬೇಕಿಲ್ಲ. ವಜ್ರವು ಅಭೇದ್ಯ. ಅಲ್ಲಿಗೆ, ಶ್ರೀಕೃಷ್ಣನು ಶರಣಾಗತರಾಗಿ ಬಂದವರಿಗೆ ವಜ್ರಪಂಜರದಂತೆ ಇರುವವನೆಂದರೆ, ಇನ್ನು ಮುಂದಕ್ಕೆ ಅವರಿಗೆ ಯಾರಿಂದಲೂ ಏನೂ ಭಯವಿಲ್ಲವೆಂಬುದೇ. ಇದಕ್ಕೋಸ್ಕರವಾಗಿಯೇ ಆತನು ಸುಲಭನೂ ಆಗಿದ್ದಾನೆ. ಹೇಗೆ? ಗೋಪ-ವಿಗ್ರಹವನ್ನು, ಎಂದರೆ ಗೋಪಾಲಕನ ಶರೀರವನ್ನು, ಧರಿಸಿಬಂದಿದ್ದಾನಲ್ಲವೇ? ಯಾವ ರೂಪವನ್ನಾದರೂ ಧರಿಸಿ ಬರಬಲ್ಲವನು ಭಗವಂತ. ರಾಜವಂಶವನ್ನೇ ಅಲಂಕರಿಸಿದ್ದರೂ ಗೊಲ್ಲರ ನಡುವೆಯೇ ಕಾಣಿಸಿಕೊಂಡಿದ್ದಾನೆ. ರಾಜನೆಂದರೆ ಬಳಿ ಸುಳಿಯುವುದು ಸುಲಭವಲ್ಲ; ಗೊಲ್ಲ ಹಾಗಲ್ಲ.

ಕೊಂಬು, ಕಹಳೆ ಎಂಬ ವಾದ್ಯಗಳ ಹೆಸರನ್ನು ಕೇಳಿರುವೆವಲ್ಲವೇ? ಕೊಂಬನ್ನು ವಾದ್ಯಕ್ಕಾಗಿಯಲ್ಲದೆ ಬಿಲ್ಲುಮಾಡಲು ಬಳಸುವುದೂ ಉಂಟು. ಶೃಂಗವೆಂದರೆ ಕೊಂಬು. ಶೃಂಗದಿಂದ ಮಾಡಿದ ಬಿಲ್ಲಿಗೆ ಶಾರ್ಙ್ಗವೆನ್ನುವರು. ಶಿವನ ಬಿಲ್ಲಿಗೆ ಪಿನಾಕವೆಂದು ಹೆಸರಾದರೆ, ವಿಷ್ಣುವಿನ ಬಿಲ್ಲಿಗೆ ಶಾರ್ಙ್ಗವೆಂದು ಹೆಸರು. ಎಂದೇ ವಿಷ್ಣುವನ್ನು ಶಾರ್ಙ್ಗಧರನೆನ್ನುವುದು. ಆತನ ವೈಭವವೆಂತು ಎಂಬುದನ್ನು ಕಾಣಬೇಕಾದರೆ ಕೃಷ್ಣನನ್ನು ಕಂಡರಾಯಿತು. ಆತನೇ ನಮಗೆ ಶರಣ. ಶರಣ ಎಂದರೆ ರಕ್ಷಕ. ಇಂತಹ ಕೃಷ್ಣನೇ ನಮಗೆ ರಕ್ಷೆಯಾಗಿ ದೊರೆತಿರಲು, ಮತ್ತಿನ್ನಾವ ದೈವವನ್ನು ನಾವು ಹುಡುಕಬೇಕು? - ಎಂದು ಕೇಳುತ್ತಾನೆ, ಕವಿ. ಕೃಷ್ಣನು ಸಿಕ್ಕಮೇಲೆ ಮತ್ತಿನ್ನಾರ ಹಂಗೂ ಇಲ್ಲ. ಪೂರ್ಣ-ರಕ್ಷಣ-ಪ್ರದನೇ ಕೃಷ್ಣ. ಆತನಲ್ಲೇ ನಾವು ಸಂಪೂರ್ಣವಾಗಿ ಶರಣಾಗಿದ್ದೇವೆ - ಎಂಬುದು ಇಲ್ಲಿಯ ಭಾವ.

ಶರಣಾಗತ-ವಜ್ರಪಂಜರೇ

ಶರಣೇ ಶಾರ್ಙ್ಗಧರಸ್ಯ ವೈಭವೇ |

ಕೃಪಯಾ ಧೃತ-ಗೋಪ-ವಿಗ್ರಹೇ

ಕಿಯದನ್ಯನ್ಮೃಗಯಾಮಹೇ ವಯಮ್? ||

*****

ಮತ್ತೊಂದು ಶ್ಲೋಕ. ನನ್ನ ಮನಸ್ಸು ಮುಳುಗುವುದು ಕೃಷ್ಣನಲ್ಲೇ – ಎನ್ನುತ್ತಾನೆ, ಕವಿ. ಏಕೆ? ಪ್ರೀತಿಯೆಂದರೆ ಪ್ರೇಮವೆಂಬ ಅರ್ಥ ಪ್ರಸಿದ್ಧವೇ. ಆದರೆ ಸಂಸ್ಕೃತದಲ್ಲಿ ಅದಕ್ಕೆ ಸಂತೋಷವೆಂಬ ಅರ್ಥವೇ ಪ್ರಚುರ. ಎಂದೇ ಪ್ರೀತನೆಂದರೆ ಸಂತುಷ್ಟನಾದವನು. ಯಾವುದರಿಂದ ಕೃಷ್ಣನು ಅಧಿಕಪ್ರೀತನಾಗುವನು? ಗೋಪಿಯರ ಲೀಲಾ-ಭರಿತವಾದ ಕಟಾಕ್ಷಗಳಿಂದ. ಹಾಗೂ, ಅವರ ನಿರ್ಭರ-ಪರಿಷ್ವಂಗಗಳಿಂದ, ಎಂದರೆ ಗಾಢಾಲಿಂಗನಗಳಿಂದ. ಇಂತಹವುಗಳಿಂದಲೇ ಅಧಿಕವಾದ ಮೋದ, ಶ್ರೀಕೃಷ್ಣನಿಗೆ. ಇನ್ನು ಆತನ ವೇಣುನಾದವೋ, ಅದು ಅಮೃತದಂತೆ. ನಾದವು ಉತ್ಕೃಷ್ಟವೆನಿಸಿದಾಗ ಅದನ್ನು ಪ್ರಣಾದವೆನ್ನುವರು. ಹೀಗಾಗಿ ಅದು ಪ್ರಣಾದಾಮೃತವೇ. ಒಬ್ಬೊಬ್ಬರಿಗೆ ಒಂದೊಂದು ರಾಗವೋ ರಚನೆಯೋ ರುಚಿಸುವುದಲ್ಲವೇ? ಹಾಗೆ ಇಲ್ಲಿ ರೀತಿ-ವಿಭಾಗಗಳೆಂದರೆ ಗಾನಭೇದಗಳ ರಚನೆಗಳೆಂದರ್ಥ. ಗಾನ-ಪಾಠ್ಯಗಳನ್ನು ಕುರಿತು ಇಲ್ಲಿ ಹೇಳಿದೆ.

ಆದರೆ ಅವುಗಳಲ್ಲೇ ಸಂಗರವಂತೆ! ಸಂಗರವೆಂದರೆ ಜಗಳ. ಅವಲ್ಲೇಕೆ ಪೈಪೋಟಿ? ಪುಂಖಾನುಪುಂಖವಾಗಿ ಹರಿದುಬರುತ್ತಿರುವ ನಾನಾ ರಾಗಲಹರಿಗಳು, ಅನ್ಯಾನ್ಯ ಭಾವಲಹರಿಯ ಸಾಹಿತ್ಯಗಳು - ಇವಲ್ಲಿ ಒಂದಕ್ಕಿಂತ ಒಂದು ರಂಜಕ. ಹೀಗೆ ಸಮಾನ-ಲಕ್ಷ್ಯ-ಸಾಧಕರಲ್ಲಿ ನಾ ಹೆಚ್ಚು-ತಾ ಹೆಚ್ಚು – ಎನ್ನುವುದು ಇದ್ದದ್ದೇ. ಈ ಗಾನ-ಗೇಯಗಳು ಆಹ್ಲಾದಕತೆಯಲ್ಲಿ ಒಂದನ್ನೊಂದು ಮೀರಿಸುತ್ತವೆ! ಇವುಗಳ ಒಟ್ಟಿನ ವಿಲಾಸವೇ ಆತನ ವೇಣು-ಪ್ರಣಾದದಲ್ಲಿದೆ. ಮಕ್ಕಳನ್ನು ಮುದ್ದಿಸುವುದೆಂದರೆ ಕೈಗಳಿಂದಲೇ ಹೆಚ್ಚಾಗಿ, ಅಲ್ಲವೇ? ಆದರೆ ಕೃಷ್ಣನ ಮುಖವನ್ನು ರಾಧೆಯು ತನ್ನ ಲೋಚನಗಳಿಂದಲೇ ಲಾಲಿಸುವಳಂತೆ. ಯಾರಾದರೂ ಮುದ್ದಿಸಿದಾಗ ಮುಖದ ಮೇಲೊಂದು ಮುಗ್ಧವಾದ ಮುಗುಳ್ನಗೆಯು ಮೂಡುವುದು ಸ್ವಾಭಾವಿಕವಲ್ಲವೇ? ಹಾಗೆ ಲಲಿತವಾದ ಸ್ಮೇರ-ಮುಖ ಕೃಷ್ಣನದು. ಸ್ಮಿತವುಳ್ಳದ್ದು ಸ್ಮೇರ.

ಎಂದೇ ನನ್ನ ಮನಸ್ಸು ಮಗ್ನವಾಗಿದೆ, ಶ್ರೀಕೃಷ್ಣನ ಮುಖೇಂದುಕಮಲದಲ್ಲಿ - ಎನ್ನುತ್ತಾನೆ ಕವಿ. ಮುಖವೆಂಬುದೇ ಒಂದು ಚಂದ್ರ, ಮತ್ತು ಅದುವೇ ಒಂದು ಕಮಲದಂತೆಯೂ ಇರುವುದು! ಎಂದೇ ಮಾಧುರ್ಯವೆಂಬ ಒಂದೇ ರಸವೇ ಅಚ್ಚೊತ್ತಿದೆ, ಆತನ ಮೊಗದಲ್ಲಿ. ಹೀಗೆ ಗೋಪೀ-ಕಟಾಕ್ಷಗಳಿಂದ, ಗೋಪಿಕಾ-ಪರಿರಂಭಗಳಿಂದ ಪ್ರೀತವಾದುದು, ಕೃಷ್ಣನ ಮುಖ; ವೇಣುನಾದಾಮೃತವನ್ನು ಹರಿಸುವ ಮುಖವದು; ರಾಧಾ-ಲೋಚನಗಳಿಂದ ಲಾಲಿತವಾದ ಮುಖ; ಮುಗುಳ್ನಗೆಯು ಶೋಭೆ ತಂದ ಮುಖ; ಮಧುರರಸಕ್ಕೆ ನೆಲೆವೀಡಾದ ಮುಖ - ಹೀಗೆಲ್ಲ ಇದ್ದು, ಚಂದ್ರನ ಆಹ್ಲಾದಕತ್ವ, ಕಮಲದ ಕಮನೀಯತೆ - ಇವುಗಳಿಂದ ಕಂಗೊಳಿಸುವ ಮುಖವದು! ಅದರಲ್ಲಿ ನನ್ನ ಮನಸ್ಸು ಮಗ್ನ - ಎನ್ನುತ್ಟಾನೆ, ಕವಿ. ಮಗ್ನವೆಂದರೆ ಮುಳುಗಿರುವುದು. ಎಲ್ಲಿ ಆಸ್ವಾದನೆಯುಂಟೋ ಅಲ್ಲೇ ಮನಸ್ಸು ಮುಳುಗುವುದು. ಮತ್ತು ಹಾಗೆ ಮುಳುಗಿರುವುದೆಂದರೆ ಅದು ಧ್ಯಾನಾವಸ್ಥೆಯೇ ಸರಿ!

ಲೀಲಾಟೋಪ-ಕಟಾಕ್ಷ-ನಿರ್ಭರ-ಪರಿಷ್ವಂಗ-ಪ್ರಸಂಗಾಧಿಕ-/

ಪ್ರೀತೇ ಗೀತಿ-ವಿಭಂಗ-ಸಂಗರ-ಲಸದ್-ವೇಣು-ಪ್ರಣಾದಾಮೃತೇ |

ರಾಧಾಲೋಚನ-ಲಾಲಿತಸ್ಯ ಲಲಿತ-ಸ್ಮೇರೇ ಮುರಾರೇರ್ಮುದಾ/

ಮಾಧುರ್ಯೈಕರಸೇ ಮುಖೇಂದು-ಕಮಲೇ ಮಗ್ನಂ ಮದೀಯಂ ಮನಃ ||

***

ಅಷ್ಟಬಾಹುಗಳುಳ್ಳ ಹರಿಯ ಧ್ಯಾನವನ್ನು ಈ ಶ್ಲೋಕವು ಹೇಳುತ್ತದೆ.

ಎರಡು ಕೈಗಳಲ್ಲಿ ಬಿಲ್ಲುಬಾಣಗಳನ್ನು ಹಿಡಿದಿದ್ದಾನೆ, ಹರಿ. ಐಕ್ಷವವೆಂದರೆ ಕಬ್ಬಿನಿಂದಾದುದು. ಕಬ್ಬಿನ ಜಲ್ಲೆಯಿಂದಾದ ಬಿಲ್ಲು.ಅದೂ ಅಖಂಡವಾದದ್ದು, ಎಂದರೆ ದೃಢವಾದದ್ದು. ಅದಕ್ಕೆ ಜೋಡಿಸುವುದು ಪುಷ್ಪದಿಂದಾದ ಇಷುವನ್ನು- ಎಂದರೆ ಹೂಗಳಿಂದಾದ ಬಾಣವನ್ನು. ಇನ್ನೆರಡು ಕೈಗಳಲ್ಲಿ ಚಕ್ರಾಬ್ಜಗಳಿವೆ. ಅಬ್ಜವೆಂದರೆ ಜಲಜ.  ಶಂಖವೂ ಜಲ-ಜವೇ. ಹೀಗೆ ಸುದರ್ಶನಚಕ್ರವನ್ನೂ ಶಂಖವನ್ನೂ ಮತ್ತೆರಡು ಕೈಗಳಲ್ಲಿ ಹಿಡಿದಿದ್ದಾನೆ. ಹಾಗೆಯೇ ಪಾಶ-ಸೃಣಿಗಳನ್ನು ಧರಿಸಿದ್ದಾನೆ. ಸೃಣಿಯೆಂದರೆ ಅಂಕುಶ. ಹೀಗೆ ಮತ್ತೆರಡು ಕೈಗಳಿಂದ ಪಾಶಾಂಕುಶಧಾರಿಯಾಗಿದ್ದಾನೆ ಶ್ರೀಕೃಷ್ಣ.

ಕೊಳಲನ್ನೇ ಹೇಳದಿದ್ದರೆ ಆತ ಕೃಷ್ಣನಾಗಬಲ್ಲನೇ? ಕಾಂಚನ-ವಂಶನಾಳವೆಂದರೆ ಚಿನ್ನದ ಕೊಳಲಿನ ನಳಿಕೆ. ಅದನ್ನು ನುಡಿಸುವುದೆಂದರೆ ಎರಡು ಕೈಗಳಿಗೂ ಕೆಲಸವುಂಟು. ಹೀಗಾಗಿ ಮತ್ತೆರಡು ಕೈಗಳಲ್ಲಿ ಕಾಂಚನದ ಕೊಳಲನ್ನು ಹಿಡಿದಿದ್ದಾನೆ. ಹೀಗೆ ಎರಡೆರಡು ಕೈಗಳಿಂದ ಬಿಲ್ಲುಬಾಣಗಳನ್ನು, ಶಂಖಚಕ್ರಗಳನ್ನು, ಪಾಶಾಂಕುಶಗಳನ್ನು, ಹಾಗೂ ಸ್ವರ್ಣವೇಣುವನ್ನು ಧರಿಸಿರುವ ಈ ಹರಿ ಅರ್ಕವರ್ಣವುಳ್ಳವನು, ಎಂದರೆ ಸೂರ್ಯನ ಬಣ್ಣವನ್ನು ಹೊಂದಿರುವವನು. ಮದನನೇ ಗೋಪವಿಲಾಸವೇಷವನ್ನು ಧರಿಸಿ ಬಂದಂತಿರುವ ಈ ಹರಿಯನ್ನು ಧ್ಯಾನಿಸಬೇಕೆಂದು ಲೀಲಾಶುಕನು ಹೇಳುತ್ತಾನೆ. ಇದು ತ್ರೈಲೋಕ್ಯ-ಮೋಹನವೆಂಬ ಕೃಷ್ಣರೂಪದ ಧ್ಯಾನಶ್ಲೋಕವೆಂದು ಹೇಳುತ್ತಾರೆ.

ಕೋದಂಡಂ ಐಕ್ಷವಂ ಅಖಂಡಂ, ಇಷುಂ ಚ ಪೌಷ್ಪಂ /

ಚಕ್ರಾಬ್ಜ-ಪಾಶ-ಸೃಣಿ-ಕಾಂಚನವಂಶನಾಳಂ|

ಬಿಭ್ರಾಣಂ ಅಷ್ಟವಿಧಬಾಹುಭಿರರ್ಕವರ್ಣಂ / 

ಧ್ಯಾಯೇತ್ ಹರಿಂ ಮದನ-ಗೋಪ-ವಿಲಾಸ-ವೇಷಮ್ ||

ಸೂಚನೆ : 03/05/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.