Sunday, November 16, 2025

ಅಷ್ಟಾಕ್ಷರೀ - 79 ಆತ್ಮಾ ಗುಹಾಯಾಂ ನಿಹಿತಃ (Astakshari 79)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಪ್ರಪಂಚದಲ್ಲಿ ನಾನಾ ತೆರನಾದ ಜನರನ್ನು ನೋಡುತ್ತೇವೆ. ಅವರಲ್ಲಿ ಮೊತ್ತಮೊದಲು ತೋರುವುದೇ ವೇಷಭೂಷಣ-ವೈಚಿತ್ರ್ಯ; ಆಮೇಲೆ ಮೈಬಣ್ಣ-ಮೈಕಟ್ಟುಗಳಲ್ಲಿನ ಭೇದ. ಒಂದೇ ದೇಶದಲ್ಲಿಯ ಮಂದಿಯಲ್ಲೇ ಒಬ್ಬರಂತಿನ್ನೊಬ್ಬರಿಲ್ಲ. ಒಬ್ಬರ ರುಚಿ-ಸಾಮರ್ಥ್ಯಗಳು ಮತ್ತೊಬ್ಬರಲ್ಲಿಲ್ಲ. ಹೇಗೆ ಒಂದೇ ಮರದ ಎಲೆಗಳೆಲ್ಲ ಒಂದೇ ತೆರನೋ, ಆದರೂ ಒಂದರ ಅಚ್ಚೇ ಮತ್ತೊಂದಲ್ಲವೋ, ಹಾಗೆಯೇ ಮನುಷ್ಯರಲ್ಲೂ.

ಇಷ್ಟೊಂದು ವೈವಿಧ್ಯವೇ ಕಂಡರೂ ಎಲ್ಲರ ಗುರಿಯೂ ಒಂದೇ - ಎನ್ನಬಹುದು. ಒಬ್ಬೊಬ್ಬರ ದಿಕ್ಕು-ನಡೆ-ವೇಗಗಳೂ ಬೇರೆಬೇರೆಯೆಂದಾದರೂ ಎಲ್ಲರಿಗೂ ಒಂದೇ ಲಕ್ಷ್ಯ: ಸುಖ ಬೇಕು, ದುಃಖ ಬೇಡ - ಎನ್ನುವುದು. ಹೀಗೆ ಎಲ್ಲರೂ ಸುಖಾರ್ಥಿಗಳೇ.

ಹಾಗಾದರೆ ಸುಖವೆಲ್ಲಿರುವುದು? ಕೆಲವರಿಗೆ ಒಳ್ಳೆಯ ಭಕ್ಷ್ಯ-ಭೋಜ್ಯಗಳಲ್ಲಿ, ಕೆಲವರಿಗೆ ಊರೂರು ತಿರುಗುವುದರಲ್ಲಿ, ಮತ್ತೊಬ್ಬರಿಗೆ ತೀವ್ರಧನಾರ್ಜನೆಯಲ್ಲಿ. ಸುಖವೆಂದರೇನೆಂಬುದರ ಕಲ್ಪನೆಗಳೇ ಎಷ್ಟೆಷ್ಟು ಭಿನ್ನ! ಅಂತೆಯೇ ಅದರ ಸಾಧನೆಗಾಗಿನ ಚಟುವಟಿಕೆಗಳೂ ಎಷ್ಟು ಭಿನ್ನ!

ಈ ವಿಷಯದಲ್ಲಿ ನಮ್ಮ ಋಷಿಗಳ ಚಿಂತನದಲ್ಲಿ ಏನಾದರೂ ವಿಶೇಷವಿರುವುದೇ? - ಎಂಬುದಿಲ್ಲಿ ಜಿಜ್ಞಾಸ್ಯವಾದದ್ದು; ಜಿಜ್ಞಾಸ್ಯವೆಂದರೆ ಯಾವುದರ ಬಗ್ಗೆ ಕುತೂಹಲವು ಯೋಗ್ಯವೋ ಅದು; ಅರಿತುಕೊಳ್ಳಲು ಅರ್ಹವಾದದ್ದು. ಬಹುಮಂದಿಗೆ ಖಾನಾ-ಪೀನಾ-ಸೋನಾಗಳಲ್ಲೇ ತೃಪ್ತಿ: ತಿನ್ನು-ಕುಡಿ-ಮಲಗುಗಳೇ ಅವರ ಜೀವನಚಕ್ರ. ಇತರರಿಗೆ ದೇಶ ಸುತ್ತುವುದು, ಕಲೆಗಳನ್ನು ಸಾಧಿಸುವುದು, ಅಥವಾ ಬೌದ್ಧಿಕವಾದ ಸಾಧನೆಗಳಲ್ಲಿ ರುಚಿ.

ಇವೆಲ್ಲವನ್ನೂ ಮಾಡಿದರೂ, ಸ್ವ-ಜೀವನವನ್ನು ಪರೀಕ್ಷಿಸಿಕೊಳ್ಳದಿದ್ದರೆ ಪ್ರಯೋಜನವೇನು? - ಎನ್ನುವವರೂ ಉಂಟು. ಸಾಕ್ರಟೀಸನ ಉದ್ಗಾರವೂ ಅದೇ ಆಗಿತ್ತಲ್ಲವೇ?  ಎಂದೇ ಅತ್ಯಂತ ಮುಖ್ಯವಾದುದು ಆತ್ಮನನ್ನು ಕುರಿತಾದ ಅರಿವು - ಎನ್ನುತ್ತದೆ ಭಾರತ ಪರಂಪರೆ. ಆತ್ಮಜ್ಞಾನವನ್ನು ಸಂಪಾದಿಸಿಕೊಂಡೆವೋ ಜೀವನವು ಧನ್ಯ; ಇಲ್ಲದಿದ್ದರಿಲ್ಲ – ಎಂದು ನಮ್ಮ ಸಂತರ, ಜ್ಞಾನಿಗಳ ಸಾಹಿತ್ಯಗಳೆಲ್ಲಾ ಸಾರಿರುವುವು.

ಹಾಗಾದರೆ ಆತ್ಮನನ್ನು ಎಲ್ಲಿ ಹುಡುಕುವುದು? ಅದಕ್ಕೆ ಉತ್ತರವನ್ನು ನಮ್ಮ ಉಪನಿಷತ್ತುಗಳಿತ್ತಿವೆ: ಆತ್ಮ/ಪರಮಾತ್ಮನಿರುವುದು ಗುಹೆಯಲ್ಲಿ (ಆತ್ಮಾ ಗುಹಾಯಾಂ ನಿಹಿತಃ). ಈ ಮಾತು ಶ್ವೇತಾಶ್ವತರೋಪನಿಷತ್ತಿನಲ್ಲಿ ಬಂದಿದೆಯಾದರೂ ಕಠ-ಮುಂಡಕ-ತೈತ್ತಿರೀಯ-ಮಹಾನಾರಾಯಣಗಳೆಂಬ ಉಪನಿಷತ್ತುಗಳಲ್ಲೂ ಈ ಅಭಿಪ್ರಾಯವು ಬಂದಿರುವುದೇ.

ಅಲ್ಲಿಗೆ ಆತ್ಮನ ವಿಳಾಸ(ಅಡ್ರೆಸ್) ಸಿಕ್ಕಿದಂತಾಯಿತಲ್ಲವೇ? ಹಾಗಾದರೆ ಎಲ್ಲಿಯ ಗುಹೆಯದು? ಹಿಮಾಲಯವೇ? ಅಜಂತ-ಎಲ್ಲೋರಗಳೇ? ಯಾವುದನ್ನಾದರೂ "ಅದು ಗುಹೆಯಲ್ಲಿ ಅಡಗಿದೆ" ಎಂದರೆ, ಅದು ಬಹುಮಂದಿಗೆ ದೊರೆಯದು - ಎಂದೇ ಅರ್ಥ. ಗುಹೆಯಲ್ಲಿರುವುದಿರಲಿ, ಇಲ್ಲೊಂದು ಗುಹೆಯಿರುವುದೆಂಬುದೂ ಎಷ್ಟೋ ವೇಳೆ ಅನೇಕಮಂದಿಯ ಅರಿವಿಗೆ ಸಹ ಬರದೇ ಉಳಿಯಬಹುದು!

ಗುಹಾ ಎಂಬ ಪದವು ಬಂದಿರುವುದು ಗುಹ್ ಎಂಬ ಧಾತುವಿನಿಂದ. ಅದಕ್ಕೆ ಸಂವರಣ ಅಥವಾ ಮುಚ್ಚಿಡುವುದೆಂಬುದೇ ಅರ್ಥ. ಹೀಗಾಗಿ, ಪರವಸ್ತುವನ್ನು ತನ್ನಲ್ಲಿ ಅಡಗಿಸಿಕೊಂಡಿರುವುದೇ ಈ ಗುಹೆ. "ಗುಹಾ-ನಿಹಿತ"ವೆಂದರೆ ಅತಿರಹಸ್ಯವೆಂದೇ ಅರ್ಥ. ಬಹಳ ಬೆಲೆಬಾಳುವ ಪದಾರ್ಥವನ್ನು ಹಿಂದೆ ಹೂತಿಡುವ ಕ್ರಮವಿತ್ತಲ್ಲವೇ? ಅಗೆಯುವಾಗ ನಿ-ಧಿಗಳು ದೊರೆತಿರುವುದುಂಟಲ್ಲವೇ? ಹಾಗೆಯೇ, ನಿ-ಹಿತವೆಂದರೆ ಕೆಳಗೆ/ಒಳಗೆ ಇಟ್ಟಿರುವುದೇ.

ಆದರೆ ನಮ್ಮ ಅದೃಷ್ಟವೆಂದರೆ, ಅದು ಯಾವುದೋ ತಲುಪಲಾಗದ ದೂರದ ಗುಹೆಯಲ್ಲ; ಹತ್ತಿರವೇ ಇರುವ ಗುಹೆ. ಬಹಳ ಹತ್ತಿರವೇ ಇರುವಂತಹುದು. ಇದಕ್ಕಿಂತಲೂ ಹತ್ತಿರವೆಂಬುದೇ ಇರಲು ಸಾಧ್ಯವಿಲ್ಲವೆನ್ನುವಂತಹ ಗುಹೆ: ಹೃದಯ-ಗುಹೆಯೇ ಅದು.

ಯಾರ ಹೃದಯದಲ್ಲಿಯದು? ಎಲ್ಲರ ಹೃದಯದಲ್ಲೂ! ಬ್ರಹ್ಮಾದಿ-ಸ್ತಂಬಪರ್ಯಂತವಾದ (ಎಂದರೆ, ಬ್ರಹ್ಮನಿಂದ ಹುಲ್ಲಿನವರೆಗಿನ) ಸಮಸ್ತ-ಪ್ರಾಣಿಗಳ ಹೃದಯದಲ್ಲೂ ಅದಿರುವುದೇ!

ಸೃಷ್ಟಿ-ಕಾರುಣ್ಯವೆಂದರೆ ಇದೇ ಅಲ್ಲವೇ?: ಅತ್ಯಂತಗಹನವೆನಿಸುವಂತಹುದು ಹೀಗೆ ಅತ್ಯಂತನಿಕಟವಾಗಿಯೇ ಇರುವಂತಹುದು! ಭಗವಂತನೆಂಬ ನಿಧಿಯು ಸರ್ವಪ್ರಾಣಿ-ಹೃದಯಗರ್ಭದಲ್ಲೂ ನೆಲೆಸಿದೆ! ಇಲ್ಲಿ ಉಚ್ಚ-ನೀಚರೆಂಬ ಭೇದಭಾವವಿಲ್ಲ, ಬಡವ-ಬಲ್ಲಿದರೆಂಬ ವಿಭಾಗವೂ ನಡೆಯುವುದಲ್ಲ.

ನಿಧಿಯನ್ನು ಒಳಗೆ ಅಡಗಿಸಿಡುವರಲ್ಲವೆ? ಹಾಗೆಯೇ ನಮ್ಮೆಲ್ಲರ ನಿಧಿಯಾದ ಭಗವಂತನು ಹೀಗೆ ತನ್ನನ್ನೇ ಮುಚ್ಚಿಟ್ಟುಕೊಂಡಿರುವನು.

ಆದರೂ ಎಲ್ಲರೂ ಆತನನ್ನು ಕಂಡುಕೊಳ್ಳಬಹುದು! ಅದಕ್ಕೆ ಸಾಧನವಾದದ್ದು ಅಧ್ಯಾತ್ಮ-ಯೋಗ. ಅರ್ಥಾತ್, ಮನಸ್ಸನ್ನು ಒಳಮುಖವಾಗಿ ಹರಿಸುವುದು.

ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳು ಇಲ್ಲೊಂದು ಮುಖ್ಯ-ಸೂಕ್ಷ್ಮವಿಚಾರವನ್ನೂ ತಿಳಿಸಿರುವರು."ಇಲ್ಲಿ ಗುಹೆಯೆಂದರೆ ಹೃದಯಗುಹೆಯು ಮಾತ್ರವಲ್ಲದೆ ಬುದ್ಧಿಗುಹೆಯೂ ಆಗಬಹುದು. ಬುದ್ಧಿಗುಹೆಯೆಂಬುದು ಮಹಾಮಸ್ತಿಷ್ಕವೆಂದು ಕರೆಸಿಕೊಳ್ಳುವ ಪರಮೋರ್ಧ್ವಸ್ಥಾನವಾಗಿರುವುದು." – ಎಂದು.

ಭಗವಂತನು ಎಲ್ಲೆಡೆ ಇರುವನೆಂದು ಹೇಳುವಲ್ಲಿ, ಈ ಎರಡು ಸ್ಥಾನಗಳನ್ನು ಬೊಟ್ಟುಮಾಡಿ ತೋರಿಸುವುದು, ಭಗವಂತನಿಗೆ ಅಪಚಾರ ಮಾಡಿದಂತಲ್ಲವೇ? – ಎಂದೆನಿಸಬಹುದು. ಇಲ್ಲೇನೂ ವಿರೋಧವಿಲ್ಲ. ಆತ್ಮಸಾಧಕರಿಗೆ ತಮ್ಮಲ್ಲೇ ಈ ಎರಡು ಎಡೆಗಳಲ್ಲಿ ಭಗವದ್ವಸ್ತುವು ವಿಶೇಷವಾಗಿ ಅನುಭವಗೋಚರವಾಗುವ ಕಾರಣ ಹೀಗೆ ಹೇಳಲಾಗುವುದು. ಇದೂ ಯೋಗಜ್ಞರಾದ ಅವರ ಅನುಭವ-ಸಿದ್ಧ-ವಿವರಣೆಯೇ.

ಸೂಚನೆ: 15/11//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.


ಕೃಷ್ಣಕರ್ಣಾಮೃತ 82 ಗೋ-ಗೋಪ-ಗೋಪಿಯರ ನಡುವೆ ನಿಲ್ಲುವ ಪ್ರಭುವು ಪೊರೆಯಲಿ (Krishakarnamrta 82)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಕೃಷ್ಣನು ನಮ್ಮನ್ನು ಕಾಪಾಡಲಿ, ಎನ್ನುತ್ತದೆ ಈ ಶ್ಲೋಕ. ಎಂತಹ ಕೃಷ್ಣನಿವನು? ಗೋಪಿಕೆಯರು ಯಾರನ್ನು ಕುರಿತು ಹಾಡುವರೋ ಅಂತಹ ಕೃಷ್ಣನು.

ಯಾವಾಗ ಹಾಡುವರು ಆ ಗೋಪಿಕೆಯರು? ಹೇಗೆ ಹಾಡುವರು? ಅವರಾದರೂ ಎಂತಹವರು? - ಎಂಬುದನ್ನೆಲ್ಲಾ ಈ ಶ್ಲೋಕವು ಮಧುರವಾಗಿ ಚಿತ್ರಿಸುತ್ತದೆ.

ಕ್ಷಣದಾ ಎಂದರೆ ರಾತ್ರಿ. ಅದರ ಅವಸಾನಸಮಯವೆಂದರೆ ಇರುಳು ಕಳೆಯುವ ವೇಳೆ. ಅರ್ಥಾತ್ ಉಷಃಕಾಲ. ಬೆಳಗಿನ ಜಾವವೆಂದರೆ ಆಗಿನ ಕಾಲದ ನಾರಿಯರು ಮೊಸರು ಕಡೆಯುತ್ತಿದ್ದ ಸಮಯ. ಗೋಕುಲದ ಗೋಪಿಯರೂ ಇಲ್ಲಿ ಅದನ್ನೇ ಮಾಡುತ್ತಿರುವರು.

ಮೊಸರು ಕಡೆಯುವಾಗ ಕೈಗಳ ಚಲನೆಯು ಆಗುತ್ತಿರುವುದಷ್ಟೆ? ಬೆಣ್ಣೆ ಬರುವ ತನಕ ಕಡೆಯುತ್ತಿರಬೇಕಲ್ಲವೆ? ಅದಕ್ಕೊಂದಿಷ್ಟು ಸಮಯ ಹಿಡಿಯುತ್ತದೆ. ಕಡೆಯುವಾಗ ಅವರ ಕೈಗಳು ವೇಗದಿಂದ ಹಿಂದೆಯೂ ಮುಂದೆಯೂ ಹೋಗುತ್ತಿರಲು, ಅವರ ಪಾಣಿ-ಕಂಕಣಗಳ ಝಣತ್ಕಾರವೂ ಆಗುತ್ತಿರುತ್ತದೆ. ಅರ್ಥಾತ್, ಎರಡೂ ಕೈಗಳ ಬಳೆಗಳ ಸದ್ದೂ ಆಗುತ್ತಿರುತ್ತದೆ. ಈ ಜವದ ಸದ್ದಿನಲ್ಲೇ ತಾಳದ ಗತಿಯೂ ಕೂಡಿದ್ದು, ಅವರು ಆನಂದದಿಂದ ಹಾಡುವ ಹಾಡಿಗೆ ಜೊತೆಯಾದ ಲಯವಾಗಿ ಅದು ರೂಪುಗೊಂಡಿರುತ್ತದೆ.

ಮೊಸರು ಕಡೆಯಲು ಎರಡೂ ಕೈಗಳ ಬಳಕೆಯಾಗುವುದಲ್ಲವೆ? ಮಂದಗತಿಯಿಂದ ಕಡೆದರೆ ಬೆಣ್ಣೆ ಬರುವುದಿಲ್ಲವಾಗಿ, ವೇಗದಿಂದಲೇ ಕಡೆಯಬೇಕಾಗುತ್ತದೆ. ಮಧ್ಯೆ ನಿಲ್ಲಿಸುವಂತೆಯೂ ಇಲ್ಲ. ಏಕೆಂದರೆ ಒಂದೇ ಸಮನೆ ಕಡೆದರೆ ಬರುವಂತೆ, ಬಿಟ್ಟು ಬಿಟ್ಟು ಕಡೆದರೆ ಬರುವುದಲ್ಲ, ಬೆಣ್ಣೆ.

ಈ ಪರಿಜ್ಞಾನವಿರುವುದರಿಂದ ಬಿರುಸಾಗಿಯೇ ಕಡೆಯುವಿಕೆಯು ನಡೆಯುತ್ತಿರಲು, ಅವರ ಸೆರಗೂ ಒಂದಿಷ್ಟು ಜಾರಿರುವುದುಂಟು. ಆದರೆ ಇತ್ತ ಕಡೆಯುವುದರಲ್ಲೂ ಅತ್ತ ಗಾನದಲ್ಲೂ ಮೈಮರೆತಿರುವ ಅವರಿಗೆ ಸೆರಗು ಜಾರಿರುವ ಪರಿಜ್ಞಾನವೂ ಇರುವುದಿಲ್ಲ.

ಬೆಳಗಿನ ಜಾವ ಹೀಗೆ ಹಾಡಿಕೊಂಡು ಕೆಲಸಮಾಡಿಕೊಳ್ಳುವಾಗ ಆಗಾಗ ಅವರ ದಂತಗಳೂ ತೋರತಕ್ಕವೇ. ಅವರ ದಂತಕಾಂತಿಯೂ ಕಮನೀಯವೇ. ಎಷ್ಟು ಕಮನೀಯ? ಆಕಾಶದ ಚಂದ್ರನ ಕಾಂತಿಯಲ್ಲವೇ ಹೊಳಪಿಗೆ ಪ್ರಸಿದ್ಧ? ಆ ಇಂದುಪ್ರಭೆಯನ್ನೂ ಮೀರಿಸುವುದು ಇವರ ದಂತಕಾಂತಿಯ ನಿವಹ. ನಿವಹವೆಂದರೆ ಸಮೂಹ.

ಮುಖ್ಯವಾಗಿ ಅವರು ಹಾಡುವುದಾದರೂ ಯಾವುದನ್ನು? ಮತ್ತೇನು, ಶ್ರೀಕೃಷ್ಣನನ್ನು ಕುರಿತಾಗಿಯೇ. ಆತನ ಲೀಲೆಗಳನ್ನು ಕುರಿತಾಗಿಯೇ. ಈ ಪರಿಯಲ್ಲಿ ಯಾರನ್ನು ಕುರಿತಾಗಿ ತಮ್ಮ ಮುಗ್ಧವೂ ಮಧುರವೂ ಆದ ಮನಸ್ಸಿನಿಂದ ಮೈಮರೆತು ಗೋಕುಲದ ಅಂಗನೆಯರು ಸಾನಂದರಾಗಿ ಹಾಡಿಕೊಳ್ಳುವರೋ ಅಂತಹ ಪೀತಾಂಬರನೆನಿಸುವ ಶ್ರೀಕೃಷ್ಣನು ನಮ್ಮನ್ನು ಸದಾ ಪೊರೆಯಲಿ - ಎನ್ನುತ್ತಾನೆ, ಲೀಲಾಶುಕ.

ಗಾಯಂತಿ ಕ್ಷಣದಾವಸಾನ-ಸಮಯೇ ಸಾನಂದಂ ಇಂದುಪ್ರಭಾಃ/
ರುಂಧತ್ಯೋ ನಿಜ-ದಂತ-ಕಾಂತಿ-ನಿವಹೈಃ ಗೋಪಾಂಗನಾಃ ಗೋಕುಲೇ |
ಮಥ್ನತ್ಯೋ ದಧಿ-ಪಾಣಿ-ಕಂಕಣ-ಝಣತ್ಕಾರಾನುಕಾರಂ ಜವಾತ್/
ವ್ಯಾವಲ್ಗದ್-ವಸನಾಂಚಲಾಃ ಯಂ ಅನಿಶಂ ಪೀತಾಂಬರೋಽವ್ಯಾತ್ ಸ ನಃ ||

***

ಕೃಷ್ಣನಲ್ಲೊಂದು ಪ್ರಾರ್ಥನೆ, ಲೀಲಾಶುಕನದು. ನನ್ನ ಮಾತು ಹೀಗಾಗಲಿ, ನನ್ನ ಚಿತ್ತವು ಹೀಗಾಗಲಿ - ಎಂಬುದಾಗಿ. ವಾಙ್ಮನಸಗಳು ಹೇಗಾಗಬೇಕೆಂಬುದಾಗಿ ಲೀಲಾಶುಕನ ಪ್ರಾರ್ಥನೆ? ಎರಡೂ ವೃದ್ಧಿಗೊಳ್ಳಲಿ - ಎಂಬುದಾಗಿ.

ಕೃಷ್ಣನ ವೈಭವವೆಂಬುದು ಅದ್ಭುತವಾದದ್ದು. ಆತನ ರೂಪವೇನು, ಲಾವಣ್ಯವೇನು, ವಿಲಾಸವೇನು!

ಆತನನ್ನು ಮಾತಿನಲ್ಲಿ ಹಿಡಿದಿಡಲಾಗುವುದೇ? ಆದರೂ ನಿನ್ನ ಆ ಎಲ್ಲ ವೈಭವವನ್ನು ವರ್ಣಿಸುವುದರಲ್ಲಿ ನನ್ನ ಮಾತು ವರ್ಧಿಸಲಿ.  ಹೇಗೆ? ಮಾಧುರ್ಯದಿಂದ ವಿಜೃಂಭಿಸಲಿ. ಮಾತು ಸುಮ್ಮನೆ ಅತಿಯಾಗುವುದಲ್ಲ. ಮಾತು ಬೆಳೆಯಲಿ, ಆದರೆ ಅದು ಮಾಧುರ್ಯದಿಂದ ತುಂಬಿ ತುಳುಕಲಿ. ಕೃಷ್ಣನ ಮಾಧುರ್ಯಕ್ಕೆ ಮೋಸವಾಗಬಾರದಲ್ಲವೇ? ಎಂದೇ ಅದಕ್ಕೆ ತಕ್ಕಂತೆ ನನ್ನ ಮಾತಿನಲ್ಲೂ ಮಾಧುರ್ಯವು ತುಂಬಿ ಬರಲಿ.

ಇನ್ನು ಆತನ ಶೈಶವವಾದರೂ ಬಹು ಸೊಗಸಿನಿಂದ ಕೂಡಿರುವುದು. ಯೌವನದ ಎಳಸನ್ನೇ ಇಲ್ಲಿ ಶೈಶವವೆಂದಿರುವುದು. ಆ ಕುರಿತಾಗಿ ನೇತ್ರ-ಚಾಪಲ್ಯವಿರಬೇಕು. ಎಂದರೆ ಮತ್ತೆ ಮತ್ತೆ ಕಾಣುತ್ತಿರುವ ಬಯಕೆಯು ಉಳಿದೇ ಇರಬೇಕು, ಬೆಳೆಯುತ್ತಲೇ ಇರಬೇಕು. ಕೃಷ್ಣನ ಗುಣಗಾನವನ್ನು ಆಲಿಸಲು ಕರ್ಣ-ಚಾಪಲವಿರಬೇಕು. ಚಿತ್ತದಲ್ಲಿ ಆತನನ್ನು ಆಸ್ವಾದಿಸುವ ಚಿತ್ತ-ಚಾಪಲ್ಯವಿರಬೇಕು. ಒಮ್ಮೆ ಆಸ್ವಾದಿಸಿದಾಗ ಬಹಳವೇ ಸಂತೋಷವಾಗಿದ್ದು, ಮತ್ತೂ ಮತ್ತೆ ಮತ್ತೆ ಆಸ್ವಾದಿಸಬೇಕೆನ್ನುವ ಹಂಬಲಿಕೆಯೇ ಚಾಪಲ(ಲ್ಯ).

ನಿನ್ನನ್ನು ಕುರಿತಾದ ಆ ಚಾಪಲ್ಯವು ವರ್ಧಿಸುತ್ತಿರಲಿ - ಎಂದಿಲ್ಲಿ ಪ್ರಾರ್ಥಿಸಿದೆ. ನಿನ್ನ ಆ ರೂಪವನ್ನು ಕುರಿತಾಗಿ ನನ್ನ ಉತ್ಕಂಠೆಯು - ಎಂದು ಪಡೆದೇನೋ ನಿನ್ನ ದರ್ಶನವನ್ನು, ಎನ್ನುವ ಆ ಚಿಂತೆಯು ವರ್ಧಿಸಲಿ.

ಶ್ಲೋಕದ ಎರಡು ಅರ್ಧಗಳ ಪದಗುಂಫನದಲ್ಲಿಯೇ ಒಂದು ವಿಶೇಷವಿದೆ. ೩+೪+೨+ (೨)+೩ ಎಂಬಂತೆ ಅಕ್ಷರಗಳ ಜೋಡಣೆಯಿದೆ. ಪೂರ್ವಾರ್ಧವು ಉತ್ತರಾಧವನ್ನು ಪ್ರತಿಫಲಿಸುವಂತಿದೆ.

ಮಾಧುರ್ಯೇಣ ವಿಜೃಂಭಂತಾಂ/ ವಚೋ ನಸ್ತವ ವೈಭವೇ |
ಚಾಪಲ್ಯೇನ ವಿವರ್ಧಂತಾಂ/ ಚಿಂತಾ ನಸ್ತವ ಶೈಶವೇ ||

ಪೂರ್ವಾರ್ಧ-ಉತ್ತರಾರ್ಧಗಳು ಒಂದಕ್ಕೊಂದು ಪ್ರತಿಬಿಂಬದಂತೆ ಇವೆ. ಮಾತು-ಮನಸ್ಸುಗಳಲ್ಲಿ ಒಂದೇ ಪರತತ್ತ್ವದ ಪ್ರತಿಫಲನವನ್ನು ಬಯಸಿದೆ.

***

ಗೋಪನನ್ನು ಭಜಿಸುತ್ತೇನೆ – ಎನ್ನುತ್ತಾನೆ, ಲೀಲಾಶುಕ. ಎಂತಹವನು ಈ ಗೋಪ? – ಎಂಬುದನ್ನು ನಾಲ್ಕು ಪಾದಗಳಲ್ಲಿಯ ನಾಲ್ಕು ವಿಶೇಷಣಗಳಿಂದ ತಿಳಿಯಪಡಿಸುತ್ತಾನೆ.

ಮೊದಲನೆಯದಾಗಿ, ಆತನಿರುವುದು ಮಂದಾರದ ಬುಡದಲ್ಲಿ. ಮಂದಾರವು ದೇವವೃಕ್ಷವಷ್ಟೆ? ಹೀಗೆ, ಕೇಳಿದ್ದನ್ನೆಲ್ಲಾ ಕೊಡುವ ಕಲ್ಪತರುವಿನ ಕೆಳಗೇ ಶ್ರೀಕೃಷ್ಣನಿರುವುದು. ಜೊತೆಗೆ ಮದನನಂತೆ ಅಭಿರಾಮನಾಗಿದ್ದಾನೆ, ಎಂದರೆ ಆಕರ್ಷಕನಾಗಿದ್ದಾನೆ.

ಎರಡನೆಯದಾಗಿ, ಬಿಂಬವೆಂಬ ಫಲದಂತೆ, ಎಂದರೆ ತೊಂಡೇಹಣ್ಣಿನಂತೆ, ಇರುವ ತುಟಿ ಆತನದು. ಅಲ್ಲಿಟ್ಟಿರುವ ಕೊಳಲಲ್ಲಿ ಆತನ ತುಟಿಯುಸಿರು ತುಂಬಿದೆ, ನಾದವನ್ನು ಹೊಮ್ಮಿಸಿದೆ. ಹೀಗಾಗಿ, ಕೆಂದುಟಿ-ಇನಿದನಿಗಳಿಂದ ಆಕರ್ಷಕನಾಗಿದ್ದಾನೆ – ಕಣ್ಣು-ಕಿವಿಗಳಿಗೆ ಅಚ್ಚುಮೆಚ್ಚಾಗಿದ್ದಾನೆ, ಶ್ರೀಕೃಷ್ಣ.

ಮೂರನೆಯದಾಗಿ, ಆತನ ಸುತ್ತ ಆತನ ಆತ್ಮೀಯರು ನೆರೆದಿದ್ದಾರೆ. ಯಾರವನ ಆತ್ಮೀಯರು?: ಗೋವುಗಳು, ಗೋಪಿಯರು, ಹಾಗೂ ಗೋಪರು. ಹೀಗೆ, ಗೋಕುಲದ ಮಂದಿ, ಗೋಕುಲದ ಮಂದೆ - ಇವುಗಳ ನಡುವಿನಲ್ಲಿ ನಿಂತಿದ್ದಾನೆ, ಕೃಷ್ಣ.

ಕೊನೆಯದಾಗಿ, ಆತನು ಗೋಕುಲಕ್ಕೇ ಪೂರ್ಣಚಂದ್ರನಂತಿದ್ದಾನೆ. ಪೂರ್ಣೇಂದುವಿಗಿಂತಲೂ ಸುಂದರವಾದುದುಂಟೇ? ಹೀಗಾಗಿ, ಎಲ್ಲರಿಗಿಂತಲೂ ಸುಂದರನಾದವನು ಗೊಲ್ಲರ ನಡುವಿನಲ್ಲಿ ನಿಂತಿದ್ದಾನೆ.

ಇಂತಹ ಗೋಪನನ್ನು ಭಜಿಸುತ್ತೇನೆ – ಎನ್ನುತ್ತಾನೆ, ಕವಿ.

ವಾಸ್ತವವಾಗಿ, ಬರೀ ಗೊಲ್ಲನೊಬ್ಬನ ಉಪಾಸನೆಯಲ್ಲ, ಇದು. ಯಾವನು ಕಾಪಾಡುತ್ತಾನೋ ಆತನನ್ನೇ ಗೋಪನೆನ್ನುವುದು. ಗೋಪಾಯತಿ – ಇತಿ ಗೋಪಃ – ಎಂದು ಅದರ ವ್ಯುತ್ಪತ್ತಿ. ಬರೀ ಗೊಲ್ಲನೆನ್ನಲೂ  ಗೋಪನೆನ್ನುವುದುಂಟು. ಹಸುಗಳನ್ನು ಕಾಯುವವನು (ಗಾಃ ಪಾತಿ – ಎಂಬ ವ್ಯುತ್ಪತ್ತಿ, ಈ ಅರ್ಥದಲ್ಲಿ). ಎರಡು ಅರ್ಥಗಳೂ ಯುಕ್ತವೇ.

ಹೀಗೆ ಸೌಂದರ್ಯವೇ ಸಕಲರೀತಿಗಳಲ್ಲೂ ಸಾಕಾರವಾಗಿರುವ ಮೂರ್ತಿಯೇ ಶ್ರೀಕೃಷ್ಣ. ಆತನನ್ನು ನಾ ಭಜಿಸುವೆ :

ಮಂದಾರಮೂಲೇ ಮದನಾಭಿರಾಮಂ

ಬಿಂಬಾಧರಾಪೂರಿತವೇಣುನಾದಮ್|

ಗೋ-ಗೋಪ-ಗೋಪೀ-ಜನ-ಮಧ್ಯ-ಸಂಸ್ಥಂ

ಗೋಪಂ ಭಜೇ ಗೋಕುಲ-ಪೂರ್ಣ-ಚಂದ್ರಮ್||

ಸೂಚನೆ : 15/11/2025 ರಂದು   ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Monday, November 10, 2025

ವ್ಯಾಸ ವೀಕ್ಷಿತ 161 (Vyaasa Vikshita 161)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ರಾಜಸೂಯವನ್ನು ತಾನು ಮಾಡುವುದು ಯುಕ್ತವೇ? – ಎಂಬ ಪ್ರಶ್ನೆಯು ಯುಧಿಷ್ಠಿರನಿಗೆ ಆಗಾಗ್ಗೆ ಬರುತ್ತಿತ್ತು. ತಾನಂತೂ ಕೋಪಾಹಂಕಾರಗಳನ್ನು ಬದಿಗೊತ್ತಿ ಔದಾರ್ಯದಿಂದ ದಾನಪರನಾಗಿದ್ದನು.

"ದಾನ ಕೊಡಲು ಯೋಗ್ಯವಾದ ವಸ್ತುಗಳೇನಿದ್ದರೂ ಅವೆಲ್ಲವನ್ನೂ ಅರ್ಹರಾದವರಿಗೆ ಕೊಟ್ಟುಬಿಡಿ" - ಎಂದು ತನ್ನ ಕೈಕೆಳಗಿನವರಿಗೆ ಅವನು ಅಪ್ಪಣೆ ಮಾಡಿದನು. ಆತನ ಪ್ರವೃತ್ತಿಯನ್ನು ಮೆಚ್ಚಿ, ಎಲ್ಲರೂ, "ಭಲೇ ಧರ್ಮ, ಭಲೇ ಧರ್ಮರಾಜ" – ಎಂದು ಆತನನ್ನು ಕೊಂಡಾಡಿದರು.

ಈ ಸಂನಿವೇಶದಲ್ಲಿ ಆತನ ವಿಷಯದಲ್ಲಿ ಜನರು ತಮ್ಮ ತಂದೆಯಲ್ಲಿ ಹೇಗೋ ಹಾಗೆ ನೆಚ್ಚಿಕೆಯನ್ನಿಟ್ಟುಕೊಂಡರು; ಆತನನ್ನು ದ್ವೇಷಿಸುವಂತಹವನು ಒಬ್ಬನೂ ಇರಲಿಲ್ಲ: ಆ ಕಾರಣಕ್ಕೇ ಆತನಿಗೆ "ಅಜಾತಶತ್ರು"ವೆಂಬ ಹೆಸರಾದದ್ದು. ಯಾವನಿಗೆ ಶತ್ರುವೇ ಹುಟ್ಟಿಲ್ಲವೋ ಆತನೇ "ಅ-ಜಾತ-ಶತ್ರು".

ಎಲ್ಲರನ್ನೂ ಯುಧಿಷ್ಠಿರನು ತನ್ನವರೆಂಬಂತೆ ನೋಡಿಕೊಂಡನು. ಭೀಮನು ಎಲ್ಲರಿಗೂ ರಕ್ಷೆಯಿತ್ತನು. ಸವ್ಯಸಾಚಿಯಾದ ಅರ್ಜುನನು ಶತ್ರುಗಳನ್ನು ಸಂಹಾರಮಾಡಿದನು. ಧೀಮಂತನಾದ ಸಹದೇವನು ಧರ್ಮಗಳ ಅನುಶಾಸನವನ್ನು ನೆರವೇರಿಸಿದನು. ಎಲ್ಲರ ವಿಷಯದಲ್ಲೂ ವಿನಯದಿಂದ ನಕುಲನು ವರ್ತಿಸಿದನು.

ಇವಿಷ್ಟೂ ಕಾರಣಗಳಿಂದಾಗಿ ಜನರೆಲ್ಲರೂ ಕಲಹರಹಿತರೂ, ಭಯವೇ ಇಲ್ಲದವರೂ ಸದಾ ಸ್ವಧರ್ಮನಿರತರೂ ಆದರು. ಕಾಲಕಾಲಕ್ಕೆ ಮಳೆಯೂ ಆಗುತ್ತಿರಲು ಬಹುಸಮೃದ್ಧಿಯುತರೂ ಆದರು. ಯಜ್ಞಸಾಮಗ್ರಿ, ಗೋರಕ್ಷೆ, ಉಳುಮೆ, ವಾಣಿಜ್ಯ - ಇವಿಷ್ಟರಲ್ಲೂ ವಿಶೇಷವಾದ ಪ್ರಗತಿಯು ತಲೆದೋರಿತು.

ಯುಧಿಷ್ಠಿರನು ಧರ್ಮನಿತ್ಯನಾಗಿ ಆಳುತ್ತಿರುವ ಆ ಸಮಯದಲ್ಲಿ ಅನುಕರ್ಷ-ನಿಕರ್ಷಗಳಿರಲಿಲ್ಲ: ಎಂದರೆ ಕಳೆದ ವರ್ಷದ ಕರದ ಬಾಕಿ, ಈ ವರ್ಷದ ಬಾಕಿ - ಎಂಬಿವು ಉಳಿದುಕೊಂಡಿರಲಿಲ್ಲ. ಹಾಗೆಯೇ ವ್ಯಾಧಿ-ಅಗ್ನಿಗಳಿಂದಾಗಿ ಉಂಟಾಗುವ ಪ್ರಜಾಪೀಡನವೆಂಬುದು ಯಾವುದೂ ಇರಲಿಲ್ಲ. ದಸ್ಯುಗಳು, ಎಂದರೆ ಲೂಟಿಕೋರರು, ವಂಚಕರು - ಇವರುಗಳಿಂದಾಗಲಿ ರಾಜವಲ್ಲಭರುಗಳಿಂದಾಗಲಿ, ಎಂದರೆ ರಾಜನಿಗೆ ಅಚ್ಚುಮೆಚ್ಚಾದವರಿಂದಾಗಲಿ, ಪ್ರಜಾಪೀಡನವಾಗುತ್ತಿರಲಿಲ್ಲ. ಪ್ರಜೆಗಳೂ ಸಹ ಪರಸ್ಪರ ಮೋಸ ಮಾಡುತ್ತಿರಲಿಲ್ಲ.

ಯುಧಿಷ್ಠಿರನಿಗೆ ಪ್ರಿಯವನ್ನುಂಟುಮಾಡುವುದು, ತಮ್ಮ ವಾಣಿಜ್ಯವ್ಯಾಪಾರಗಳಿಂದಾಗಿ ಸಲ್ಲಬೇಕಾದ ಕರವನ್ನು ಕೊಡುವುದು, ಸಂಧಿ-ವಿಗ್ರಹ ಮುಂತಾದ ರಾಜಕಾರ್ಯಗಳಲ್ಲಿ ಯುಧಿಷ್ಠಿರನಿಗೆ ಸಹಕಾರವನ್ನು ಕೊಡುವುದು - ಇವುಗಳಿಗಾಗಿ ಬೇರೆ ಬೇರೆ ರಾಜರು ಆತನಲ್ಲಿಗೆ ಬರುತ್ತಿದ್ದರು. ಅವರಲ್ಲಿ ಅನೇಕರು ರಾಜಸ ಸ್ವಭಾವದವರಾಗಿದ್ದರು, ಎಂದೇ ಲೋಭಿಗಳೂ ಆಗಿದ್ದರು; ಹೀಗಾಗಿ ತಮ್ಮ ತಮ್ಮ ಇಚ್ಛೆಯಂತೆ ಧನೋಪಭೋಗವನ್ನು ಅವರು ಮಾಡುತ್ತಿದ್ದರು.

ಆದರೆ ಸಹನಶೀಲನಾದ ಯುಧಿಷ್ಠಿರನು ಮಾತ್ರ ಧರ್ಮನಿತ್ಯನಾಗಿಯೇ ಇರುತ್ತಿದ್ದನು. ಆತನ ರಾಜ್ಯವು ಹೆಚ್ಚು ಹೆಚ್ಚು ಉನ್ನತಿಯನ್ನೇ ಹೊಂದುತ್ತಿತ್ತು. ಯುಧಿಷ್ಠಿರನ ಖ್ಯಾತಿಯು ಎಲ್ಲೆಡೆ ವರ್ಧಿಸುತ್ತಿತ್ತು. ಆತನು ಸರ್ವಸದ್ಗುಣಗಳಿಂದಲೂ ಕೂಡಿದವನಾಗಿದ್ದನು. ಅಪಾರವಾದ ಸಹನೆಯುಳ್ಳವನಾಗಿದ್ದನು. ಎಲ್ಲರನ್ನೂ ಆಳಬಲ್ಲವನಾಗಿದ್ದನು.

ದಶದಿಶೆಗಳಲ್ಲಿಯೂ ಆತನ ಮಹಾಯಶಸ್ಸು ವ್ಯಾಪಿಸುತ್ತಿತ್ತು. ಅವನು ಯಾವ ದೇಶವನ್ನು ಗೆದ್ದರೂ ಅಲ್ಲಿಯ ಪ್ರಜೆಗಳೆಲ್ಲರೂ ಆತನ ವಿಷಯದಲ್ಲಿ ತಾಯಿ-ತಂದೆಯರಿಗೆ ತೋರಿಸುವಂತಹ ಆದರವನ್ನೇ ತೋರಿಸುತ್ತಿದ್ದರು.

ಮಂತ್ರಿಗಳನ್ನೂ ತನ್ನ ಸೋದರರನ್ನೂ ಆಗಾಗ್ಗೆ ಕರೆಸಿ, ರಾಜಸೂಯವನ್ನು ಕುರಿತಾಗಿ ಅವರೊಂದಿಗೆ ಸಮಾಲೋಚನೆಯನ್ನು ನಡೆಸುತ್ತಿದ್ದನು. ಯುಧಿಷ್ಠಿರನು ಆ ಯಜ್ಞ ಮಾಡುವ ಇಚ್ಛೆಯಿಂದ ಕೇಳಲಾಗಿ, ಆತನ ಮಂತ್ರಿಗಳೆಲ್ಲರೂ ಅದಕ್ಕೆ ತಮ್ಮ ಸಮ್ಮತಿಯನ್ನು ಸೂಚಿಸಿ ಹೇಳಿದರು.

"ವರುಣನು ಜಲಾಧಿಪತಿಯಗುವಂತೆ ರಾಜನು ಸಮ್ರಾಟ್ ಎನಿಸಿಕೊಳ್ಳಲು ಅಪೇಕ್ಷಿಸುವುದು ಸಹಜವಾಗಿಯೇ ಇದೆ. ಆ ಸ್ಥಾನಕ್ಕೆ ಅರ್ಹನೆನಿಸಿಕೊಳ್ಳಲು ಬೇಕಾದ ಗುಣಗಳನ್ನು ಹೊಂದಿರುವ ನಿನಗೆ ರಾಜಸೂಯವನ್ನು ನೆರವೇರಿಸುವ ಸಮಯವು ಒದಗಿ ಬಂದಿದೆ."

ಸೂಚನೆ : 9/11/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 39 (Prasnottara Ratnamalike 39)


ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೩೯.  ಹಗಲಿರುಳು ಮಾಡುವ ಚಿಂತನ ಯಾವುದು? 

 ಈ ಸಂಸಾರವು ಸಾರರಹಿತವಾದದು ಎಂದು. 

ಈ ಪ್ರಶ್ನೋತ್ತರವನ್ನು ಗಮನಿಸಿದಾಗ ಒಂದು ಮಾತು ಸ್ಮರಣೆಗೆ ಬರುತ್ತದೆ - "ಸಂಸಾರೇ ಕಿಂ ಸಾರಂ ಕಂಸಾರೇಃ ಪದಕಮಲಂ ಸಾರಂ" ಎಂಬುದಾಗಿ. ಈ ಸಂಸಾರದಲ್ಲಿ ಸಾರಭೂತವಾದದ್ದು ಯಾವುದು? ಅಂದರೆ ಕಂಸನ ಅರಿ -  ಶತ್ರುವಾದ ಕೃಷ್ಣನ ಪದಕಮಲವನ್ನು ಭಜಿಸುವುದೇ ಆಗಿದೆ ಎಂದು. ಇದೇ ಅರ್ಥವನ್ನು ಇನ್ನೊಂದು ರೀತಿಯಲ್ಲಿ ಇಲ್ಲಿ ಹೇಳಲಾಗಿದೆ. ಸಾಮಾನ್ಯವಾಗಿ ಇಲ್ಲಿ ನಾವು ತಿಳಿಯಬೇಕಾದ ವಿಷಯ ಇಷ್ಟು - ಸಂಸಾರ ಎಂದರೇನು? ಈ ಸಂಸಾರವು ಇಷ್ಟು ಹೇಯ ಏಕೆ? ಎಂದು. ಇದನ್ನು ಅಸಾರ ಅಂದರೆ ಸಾರವಿಲ್ಲದ್ದು, ಸತ್ವವಿಲ್ಲದ್ದು, ಇದು ಉಳಿಯಬೇಕಾದದ್ದಲ್ಲ, ಅಳಿಯಬೇಕಾದದ್ದು ಎಂದು. ಸಂಸಾರದ ವಿಷಯದಲ್ಲಿ ಇಷ್ಟು ತಿರಸ್ಕಾರ ಅಥವಾ ಉಪೇಕ್ಷೆ ಏಕೆ? ಎಂದರೆ ಹೇಯವೆಂಬುದಾಗಿ ಅನವರತವೂ ನೆನಪಿನಲ್ಲಿ ಇಡಬೇಕಾದ ವಿಷಯ ಎಂಬುದನ್ನು ಈ ಪ್ರಶ್ನೋತ್ತರ ಸಾರುತ್ತಿದೆ. ಹಾಗಾದರೆ ಈ ಸಂಸಾರವು ಅದೇಕೆ ಇಷ್ಟು ಹೇಯ? ಎಂಬುದು ಇಲ್ಲಿ ಚಿಂತಿಸಬೇಕಾದ ವಿಷಯವಾಗಿದೆ. 

ಸಮ್ ಎಂಬ ಉಪಸರ್ಗದಿಂದ ಕೂಡಿದ ಸೃ - ಗತೌ ಎಂಬ ಧಾತುವಿನಿಂದ ಉತ್ಪನ್ನವಾದ 'ಸಂಸಾರ' ಎಂಬ ಶಬ್ದವು ಸಂಸ್ಕೃತಭಾಷೆಯ ಶಬ್ದವಾಗಿದೆ. ಯಾವುದು ನಿರಂತರ ಚಲನಶೀಲವಾದದ್ದೋ, ಅದಕ್ಕೆ ಸಂಸಾರ ಎಂದು ಕರೆಯಲಾಗುತ್ತದೆ. ಗತಿಶೀಲವಾದದ್ದು, ಒಂದು ಕಡೆ ನಿಲ್ಲದಿರುವುದು, ಇದಕ್ಕೆ ಆದಿ ಇದೆ, ಅಂತ್ಯವಿಲ್ಲ ಇತ್ಯಾದಿಯಾಗಿ ಸಂಸಾರ ಎಂಬ ಶಬ್ದವನ್ನು ಈ ಬಗೆಯಲ್ಲಿ ನಿರೂಪಿಸಲಾಗಿದೆ. ಈ ಬದುಕುಗೆ ಒಂದು ಧ್ರುವ ಅಥವಾ ಸ್ಥಿರವಾದ ತಾಣಬೇಕು; ಬದುಕಿಗೊಂದು ಸ್ಥಿರತೆ ಬೇಕು ಎಂದು ಬಯಸುವವನು, ಈ ಅಸ್ಥಿರವಾದ ಸಂಸಾರವನ್ನು ದೂರವಿಡಬೇಕು. ಆದರೆ ಈ ಸಂಸಾರದಲ್ಲೂ ಒಂದು ಸ್ಥಿರವಾದ ಬದುಕನ್ನು ಕಾಣಬೇಕು. ಸಂಸಾರವೇ ಸ್ಥಿರವಲ್ಲ; ಸಂಸಾರದಲ್ಲಿ ಸ್ಥಿರವಾದದ್ದನ್ನು ಹುಡುಕು ಎಂಬ ಉಪದೇಶ ಇದರಲ್ಲಿ ಎದ್ದು ತೋರುತ್ತದೆ. ಬದುಕಿಗೊಂದು ಶಾಶ್ವತವಾದ ನೆಲೆಬೇಕು; ಬದುಕು ನಿರಂತರವಾಗಿ ಸುತ್ತುವಂತಿರಬಾರದು, ಬದುಕು ಅನಿಶ್ಚಿತವಾಗಬಾರದು ಎಂಬಿತ್ಯಾದಿ ಸಂಗತಿಗಳನ್ನು ಸಂಸಾರವೆಂಬುದು ಸೂಚಿಸುತ್ತಿದೆ. ಹಾಗಾಗಿ ಸಂಸಾರವನ್ನು ನಾವು ಎಷ್ಟು ನೆಚ್ಚಿಕೊಳ್ಳಬೇಕು? ಎಂಬುದಕ್ಕೆ ದಾಸರ ಈ ಮಾತು ನಮಗೆ ತುಂಬಾ ಸೂಕ್ತವೆನಿಸುತ್ತದೆ. "ಈಸಬೇಕು, ಇದ್ದು ಜಯಸಬೇಕು" ಎಂಬುದಾಗಿ. ಅಂದರೆ ಶಾಶ್ವತ ಬದುಕನ್ನು ಈ ಬದುಕಿನಲ್ಲಿ ಕಾಣಬೇಕಾದರೆ ಸಂಸಾರವನ್ನ ಬಿಟ್ಟು ಕಾಣಲು ಸಾಧ್ಯವಾಗದು. ಹಾಗಾಗಿ ಸಂಸಾರದಲ್ಲೇ ಇದ್ದು, ಸಂಸಾರವನ್ನು ದಾಟಿ, ಈ ಸಂಸಾರವು ಅಸಾರವಾದದ್ದು, ಇದಕ್ಕಿಂತಲೂ ಸಾರವಾದದ್ದು ಯಾವುದು? ಎಂಬುದನ್ನು ನಿಶ್ಚಯ ಮಾಡಿಕೊಳ್ಳಬೇಕು ಎಂದು. ಅಂದರೆ ಭಗವಂತ ಮಾತ್ರ ಸಾರ, ಉಳಿದಿದ್ದೆಲ್ಲವೂ ಅಸಾರ ಎಂಬ ನಿಶ್ಚಿತಮತಿ ಉಳ್ಳವನಾಗಬೇಕು. " 'ಅಚಲೋ ಅಯಂ ಸನಾತನಃ' ಈ ಸನಾತನವಾದ ವಸ್ತು ಅಚಲವಾಗಿಯೇ ಇದೆ, ತಾನು ಪ್ರಕೃತಿಯೆಂಬ ರೈಲಿನಲ್ಲಿ ಕುಳಿತು ಅದರ ಚಲನೆಯನ್ನು ತನ್ನ ಚಲನೆಯಲ್ಲಿ ಆರೋಪ ಮಾಡಿಕೊಂಡು ಒದ್ದಾಡುತ್ತಾನೆ ಈ ಜೀವ. ಆದರೆ ತನ್ನ ಕಡೆಗೆ ತಾನು ನೋಡಿಕೊಂಡು ಅಚಲನೆಂದು ನಿರ್ಧರಿಸಿಕೊಂಡಾಗ ನಿರ್ಭಯನಾಗಿರಬಹುದು" ಎಂಬ ಶ್ರೀರಂಗ ಮಹಾಗುರುವಿನ ಈ ಅಮೃತವಚನವನ್ನು ಆಲಿಸಿದರೆ ಸಂಸಾರಕ್ಕಿಂತಲೂ ಇನ್ನೊಂದು ಸನಾತನ ವಸ್ತುವೇ ಸಾರಭೂತವಾದದ್ದು ಎಂಬ ವಿಷಯ ನಿಶ್ಚಯವಾಗುತ್ತದೆ  ಎಂಬುದೇ ಈ ಪ್ರಶ್ನೋತ್ತರದ ಸಾರವಾಗಿದೆ.

ಸೂಚನೆ : 9/11/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, November 9, 2025

ಬೆನ್ನು ಮೂಳೆಯಲ್ಲಿ ಆಯುಧವೇ? (Bennu Muleyalli Ayudhave?)

ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)





ದೇವಾಸುರ ಸಂಗ್ರಾಮ

ದೇವ-ದಾನವರ ಪರಸ್ಪರ ಘರ್ಷಣೆ ಆರಂಭವಾಯಿತು. ಇದು ಸೃಷ್ಟಿಯಲ್ಲಿ ಎಂದೆಂದಿಗೂ ಆಗುವಂತಹುದು. ಒಂದೆಡೆ ಸತ್ವ ಪ್ರಧಾನರಾದ ದೇವತೆಗಳು ಹುಟ್ಟಿಕೊಂಡರೆ ಇನ್ನೊಂದೆಡೆ ರಜಸ್ಸು ತಮಸ್ಸುಗಳೇ ಪ್ರಧಾನವಾದ ಅಸುರೀ ಶಕ್ತಿಗಳು ಹುಟ್ಟಿಕೊಳ್ಳುತ್ತವೆ. ಒಬ್ಬರಲ್ಲಿ ಆತ್ಮ ಗುಣ ಸಂಪತ್ತು ವಿಶೇಷವಾಗಿ ಬೆಳೆದರೆ ಇನ್ನೊಂದೆಡೆ ಅನಾತ್ಮ ಗುಣಗಳು ಬೆಳೆಯುತ್ತವೆ. ಇವೆರಡಕ್ಕೂ ಘರ್ಷಣೆ ನಿರಂತರವಾಗಿ ನಡೆಯುವಂತಹದೇ. ಇದು ಅಂತ:ಪ್ರಪಂಚದ ಸಮಾಚಾರವಾಗಿದೆ.

ದದೀಚಿ ಮಹರ್ಷಿಗಳ ಬೆನ್ನುಮೂಳೆಯಿಂದ ಶಸ್ತ್ರ

 ಹಾಗೆ ಭೀಕರವಾದ ವಿರೋಧ ಹುಟ್ಟಿಕೊಂಡಿತು. ಎಲ್ಲರೂ ಇಂದ್ರನನ್ನು ಶರಣು ಹೋದರು. ಇಂದ್ರನು ದಾನವರ ಸಮಸ್ತ ಬಲವನ್ನು ಬಡಿದು ಹಾಕಲು ಬೇಕಾದ ಶಸ್ತ್ರಗಳೆಲ್ಲವನ್ನೂ ಅವಲೋಕಿಸಿದಾಗ ಅವನಿಗೆ ಅವು ಯಾವುವೂ ಸಾಕಾಗದು ಎನ್ನಿಸಿತು. ಆಗ ಭಗವಂತನಾದ ಶ್ರೀಹರಿಯ ಸಲಹೆಯ ಮೇರೆಗೆ  ಇಂದ್ರನು ದೇವತೆಗಳನ್ನು ಕುರಿತು ಹೇಳಿದನು ಈಗ ಇರುವುದು ಒಂದೇ ಮಾರ್ಗ. ದದೀಚಿ ಮಹರ್ಷಿಗಳನ್ನು ಪ್ರಾರ್ಥನೆ ಮಾಡಿ ಅವರ ಮೂಳೆಗಳನ್ನು ತರುವುದಾದರೆ ಅದರಿಂದ ಮಾಡಿದ ಶಸ್ತ್ರದಿಂದ ಮಾತ್ರವೇ ಸಮಸ್ತ ದಾನವರನ್ನು ಬಡಿದು ಹಾಕಲು ಸಾಧ್ಯ. ನೀವೆಲ್ಲರೂ ಅನನ್ಯವಾದ ಭಕ್ತಿಯಿಂದ ದದೀಚಿ ಮಹರ್ಷಿಗಳನ್ನು ಪ್ರಾರ್ಥನೆ ಮಾಡಿ. ಲೋಕಕಲ್ಯಾಣಾರ್ಥವಾಗಿ ಅವರ ಮೂಳೆಗಳನ್ನು ಅವರು ಕೊಡುವುದಿಲ್ಲ ಎನ್ನರು. ದಾನವರ ನಾಶವಾದಲ್ಲಿ ಭೌತಿಕ ಪ್ರಪಂಚದಲ್ಲಿಯೂ ನೆಮ್ಮದಿ ನೆಲೆಸುತ್ತದೆ. ಈ ಕಾರಣದಿಂದ ಮಹರ್ಷಿಗಳನ್ನು ಪ್ರಾರ್ಥನೆ ಮಾಡುವುದು ಒಂದೇ ದಾರಿ ಎಂದನು. ಎಲ್ಲಾ ದೇವತೆಗಳು ದದೀಚಿ ಮಹರ್ಷಿಯನ್ನು ಪ್ರಾರ್ಥನೆ ಮಾಡಲು ಹೊರಟರು.

ದೇಹತ್ಯಾಗ ಮಾಡಿಸುವುದು ಸರಿಯೇ?

 ಮೂಳೆಗಳನ್ನು ಕೊಡುವುದೆಂದರೆ ತನ್ನ ದೇಹವನ್ನು ತ್ಯಾಗ ಮಾಡಿ ಕೊಡಬೇಕು. ಹೀಗೆ ಕೇಳುವುದು ಧರ್ಮ ಸಮ್ಮತವೇ ಎಂದರೆ, ಲೋಕಕಲ್ಯಾಣಕ್ಕಾಗಿ ಹೀಗೆ ಕೇಳುವುದೂ ಉಂಟು. ಮಹರ್ಷಿಗಳು ಸದಾ ಲೋಕ ಕಲ್ಯಾಣವನ್ನು ಚಿಂತಿಸುವುದರಿಂದ ಅವರು ಈ ಬೇಡಿಕೆಯನ್ನು ತಿರಸ್ಕರಿಸಲಿಲ್ಲ. ಮಹರ್ಷಿಗಳು ಮೃತ್ಯುವನ್ನು ಪ್ರಿಯನಾದ ಅತಿಥಿಯಂತೆ ಸ್ವಾಗತಿಸುತ್ತಾರೆ ಎಂಬ ಮಾತಿದೆ. ಎಂದೇ ಮಹರ್ಷಿಯು ತನ್ನ ಅಹೋಭಾಗ್ಯ ಇದು ಎಂದು ಸಂತೋಷವಾಗಿ ದೇಹವನ್ನು ತ್ಯಾಗ ಮಾಡಿ ಮೂಳೆಗಳನ್ನು ದಾನ ಮಾಡುತ್ತಾನೆ. ಇಂದ್ರನು ಮೂಳೆಗಳನ್ನು ಸ್ವೀಕರಿಸಿ ದಂಡ,ಚಕ್ರಾಯುಧವಜ್ರಾಯುಧ,ಇಂತಹ ಆಯುಧಗಳನ್ನು ಸಿದ್ಧಪಡಿಸಿಕೊಳ್ಳುತ್ತಾನೆ.

ದದೀಚಿ ಮಹರ್ಷಿಗಳ ಮಹಿಮೆ

 ದದೀಚಿ ಮಹರ್ಷಿಗಳ ಮೂಳೆಗಳನ್ನು ಇಂದ್ರನು ಏಕೆ ದಾನವರ ನಾಶಮಾಡಲು ಕೇಳಿದಆ ದದೀಚಿ ಮಹರ್ಷಿಗಳ ವೈಶಿಷ್ಟ್ಯ ವಾದರೂ ಏನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಬ್ರಹ್ಮನ ಮಾನಸ ಪುತ್ರರಾದ ಭೃಗು ಮಹರ್ಷಿಗಳ ದೀರ್ಘಕಾಲದ ತಪಸ್ಸಿನ ಫಲವಾಗಿ ಹುಟ್ಟಿದ ಸುಪುತ್ರ  ದದೀಚಿ ಮಹರ್ಷಿ.  ದೇಹವನ್ನು ಶುದ್ಧವಾಗಿ ಇರಿಸಿಕೊಳ್ಳಲು ಬೇಕಾದ ಆಹಾರ ನಿಯಮಗಳನ್ನು ವಿಜ್ಞಾನಯುತವಾಗಿ ತಿಳಿದು ಅದರಂತೆ ಆಹಾರದ ಕ್ರಮಗಳನ್ನು ತನ್ನಲ್ಲಿ ಅಳವಡಿಸಿಕೊಂಡು ಶುದ್ಧವಾದ ಜೀವನವನ್ನು ನಡೆಸಿಕೊಂಡು ಬಂದ ಶ್ರೇಷ್ಠನಾದ ಮಹರ್ಷಿ. ಹಿತಮಿತವಾದ ಆಹಾರ ಕ್ರಮವನ್ನು ಇಟ್ಟುಕೊಂಡು ತನ್ನ ಜೀವನವನ್ನು ನಡೆಸುತ್ತಿದ್ದರೆ ಅದನ್ನೇ ತಪಸ್ಸು ಎಂದು ಕರೆಯುತ್ತಾರೆ.  ಯಾವ ಯಾವ ಬಗೆಯಲ್ಲಿ ಪ್ರಕೃತಿಯ ಶೋಧನೆ ಆಗಬೇಕಾಗಿದೆಯೋ ಅಂತಹ ತಪಸ್ಸನ್ನು ಇಟ್ಟುಕೊಂಡಂತಹ ಮಹರ್ಷಿ ದದೀಚಿ. ಅವನಲ್ಲಿ ತಪಸ್ಸಿನ ಬಲದ ಜೊತೆಗೆ ಸೃಷ್ಟಿಯಲ್ಲೇ ಬಂದಂತಹ ಧೀ -ಅಂದರೆ ಬುದ್ಧಿ ನೆಲೆಗೊಂಡಿತ್ತು. ಅದು ಕೇವಲ ಭೌತಿಕವಾದ ಧೀ -ಬುದ್ಧಿಯಲ್ಲ. ದಿವ್ಯವಾದ ಸೂಕ್ಷ್ಮಾತಿ ಸೂಕ್ಷ್ಮವಾದ ತತ್ವಗಳನ್ನು ಅರ್ಥಮಾಡಿಕೊಳ್ಳಲು ಬೇಕಾದಂತಹ ಬುದ್ಧಿ. ಶ್ರೀರಂಗ ಮಹಾಗುರುಗಳ ಈ ಮಾತು ಇಲ್ಲಿ ಸ್ಮರಣೀಯ-ಜೀವನದ ಸ್ಥಿತಿ ಏನು? ಎನ್ನುವುದನ್ನರಿತು ನೆಲೆಮುಟ್ಟಿ ನಡೆಸುವ ಜೀವನವೇ ಮಹರ್ಷಿಜೀವನ. ಅಲ್ಲಿ ಪೂರ್ಣ ಶಾಂತಿಯನ್ನು ಕಾಣಬಹುದು.ಅಂತಹ ಜೀವನ, ಬಂಧ ರಹಿತವಾದ ಜೀವನ" ಅಂತಹ ಮಹರ್ಷಿಗಳು ದದೀಚಿ. ಇಂದ್ರಿಯ ಸಂಯಮ ಇವನಿಗೆ ಜನ್ಮಜಾತವಾಗಿ ಹಾಗೂ ತಪಸ್ಸಿನ ಕಾರಣದಿಂದ ಚೆನ್ನಾಗಿ ಬೆಳೆದು ಬಂದಿದೆ. ಎಂದೇ ಅವರ ಮೂಳೆಯ ಸಾಮರ್ಥ್ಯ ಅಸಾಮಾನ್ಯ.

 

ತತ್ತ್ವ ದರ್ಶನದ ಕಥೆ

ಇದೊಂದು ತತ್ತ್ವದರ್ಶನ ಮಾಡಿಸುವ ಕಥೆ. ದೇವತೆಗಳಿಗೆ-ಅಸುರರಿಗೆ ನಿರಂತರ ಯುದ್ಧ ನಡೆಯುತ್ತಲೇ ಇರುತ್ತದೆ. ಬ್ರಹ್ಮಾನ್ದದಲ್ಲೂ ಈ ಯುದ್ಧವನ್ನು ನಾವು ನೋಡುತ್ತೇವೆ. ಹಾಗೆಯೇ ವಿಶೇಷವಾಗಿ ಈ ಪಿಂಡಾಂಡದಲ್ಲೂ ಇದು ತಪ್ಪಿದ್ದಲ್ಲ. ಒಳ್ಳೆಯದಕ್ಕೆ ಕೆಟ್ಟದ್ದಕ್ಕೆ ಯುದ್ಧ. ಆರೋಗ್ಯದ-ಅನಾರೋಗ್ಯದ ಕ್ರಿಮಿಗಳಿಗೆ ಯುದ್ಧ. ಇಂದ್ರಿಯಗಳ ರಾಜ ಇಂದ್ರ. ದೇವತಾ ಶಕ್ತಿಗಳೇ ಇಂದ್ರಿಯಗಳು. ಅವನು ಆಸುರೀ ಶಕ್ತಿಯನ್ನು ಮೆಟ್ಟುವ ಉಪಾಯ ಮಾಡಬೇಕು. ಅದಕ್ಕೆ ಶಸ್ತ್ರವೆಂದರೆ ನಮ್ಮ ಬೆನ್ನು ಮೂಳೆಯ ಮಧ್ಯಭಾಗದಲ್ಲಿನ ಜ್ಞಾನರಜ್ಜು ಎಂದು ಕರೆಸಿಕೊಳ್ಳುವ ಸುಷುಮ್ನಾ ನಾಡಿಯಲ್ಲಿ ನಮ್ಮ ಮನಸ್ಸು ಸಂಚರಿಸಬೇಕು. ಆಗಲೇ ಆಸುರೀ ಶಕ್ತಿಗಳ ದಮನ. ದೇವತಾ ಶಕ್ತಿಗಳ ವೈಭವದ ಸಂಚಲನ. ಜೀವನವನ್ನು ತಾಳಿನಿಂದ ತುದಿಯವರೆಗೆ ಬೆಳಗಿಸುವ ಪರಮೋನ್ನತವಾದ ಸ್ಥಿತಿ ಉಂಟಾಗುವುದು. ಅಂತಹ ಸ್ಥಿತಿ ಬರಬೇಕಾದರೆ ದದೀಚಿಯಂತಹ ಬ್ರಹ್ಮ ನಿಷ್ಠ, ತಪೋ ನಿಷ್ಠರಾಗಬೇಕು. ಅಂತಹ ದೇಹದ ಬೆನ್ನುಮೂಳೆ ದುಷ್ಟ ನಿಗ್ರಹದ ಶಸ್ತ್ರವಾಗಬಲ್ಲದು. ಶ್ರೀರಂಗ ಮಹಾಗುರುಗಳ ಮಾತಿನಂತೆ-ಆತ್ಮ ಬೀಜವು ಪ್ರಕೃತಿಕ್ಷೇತ್ರದಲ್ಲಿ ಬಿದ್ದಾಗ ಮಾನವ ವೃಕ್ಷವು ಬೆಳೆದರೂ ಇದು ಮತ್ತೆ ಆತ್ಮಬೀಜದಲ್ಲೇ ನಿಲ್ಲಲನುಗುಣವಾಗಿ ವಿಕಾಸ ಹೊಂದುವಂತೆ ಕೃಷಿ ಮಾಡುವವನೇ ಋಷಿ." ಅವನೇ ದದೀಚಿ. ಅವನ ಮೂಳೆಯೇ ಸರ್ವ ಶಕ್ತ. ಅದೇ ಆಸುರೀ ಶಕ್ತಿಗಳನ್ನು ಧ್ವಂಸ ಮಾಡುವುದು. ಅವನೇ ನಮ್ಮ ಆದರ್ಶವಾಗಬೇಕು. ಭಾರತೀಯರ ಸಂಸ್ಕೃತಿಯಲ್ಲಿ ಮಾತ್ರವೇ ಜೀವನವನ್ನು ಅದರ ನೆಲೆದಾಣಕ್ಕೆ ತಲುಪಿಸುವ ಆವಿಷ್ಕಾರ ನಡೆದಿರುವುದು. ಅಂತಹ ಸಾವಿರಾರು ಆದರ್ಶ ಪುರುಷರು ಹುಟ್ಟಿರುವುದೂ ಇಲ್ಲಿಯೇ. ಇದರ ವಾರಸುದಾರರು ನಾವು. ದದೀಚಿ ಮಹರ್ಷಿಗಳ ಆದರ್ಶ ನಮ್ಮ ಜೀವನಗಳಿಗೆ ಪಾಠವಾಗಲಿ.


ಸೂಚನೆ : 8
/11/2025 ರಂದು   ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ಕೃಷ್ಣಕರ್ಣಾಮೃತ 81 ಚಿನ್ನದ ಕೊಳಲಿನ ಒಡೆಯನ ಕಂಡೆ ! (Krishakarnamrta 81)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ಶ್ರೀಕೃಷ್ಣನ ನಾಲ್ಕು ಅಂಗಗಳನ್ನು ಇಲ್ಲಿ ಉಲ್ಲೇಖಿಸಿದೆ. ನಾಲ್ಕಕ್ಕೂ ಕಮಲದ ಹೋಲಿಕೆಯೇ. ಹೀಗಾಗಿ ಶ್ಲೋಕದ ನಾಲ್ಕು ಪಾದಗಳಲ್ಲಿ ಪ್ರಥಮಪದವಾಗಿ ನಯನಾಂಬುಜ-ಹೃದಯಾಂಬುಜ-ಚರಣಾಂಬುಜ-ವದನಾಂಬುಜಗಳನ್ನು ಹೇಳಿದೆ. ನಮಗಿಷ್ಟವಾಗುವ ಕೆಂಬಣ್ಣ-ಕೋಮಲತೆಗಳು ಕಮಲದಲ್ಲಿವೆ. ಕೃಷ್ಣನ ಕಣ್ಣು-ಹೃದಯ-ಪಾದ-ಮುಖಗಳಲ್ಲೆಲ್ಲವಲ್ಲೂ ಈ ಸೊಗಸುಗಳು ಇವೆ. ಇವೆಲ್ಲವನ್ನೂ ಭಜಿಸಿ – ಎನ್ನುತ್ತದೆ, ಶ್ಲೋಕ.

ಏಕೆ ಭಜಿಸಬೇಕು? ನಾಲ್ಕರಲ್ಲೂ ಗುಣವಿಶೇಷಗಳಿವೆ. ನಮಗೆ ಹಿತವನ್ನೋ ಪ್ರಿಯವನ್ನೋ ವರ್ಷಿಸುವ ಸಾಮರ್ಥ್ಯವೋ ಸ್ವಭಾವವೋ ಇವಲ್ಲಿವೆ.

ಬಯಸಿದ್ದನ್ನೆಲ್ಲಾ ಕರುಣಿಸುವ ಪ್ರವೃತ್ತಿ ಆತನ ನೇತ್ರ-ಕಮಲದಲ್ಲಿದೆ. ಆದ್ದರಿಂದ ಅದನ್ನು ಭಜಿಸಿ. ಪರಮದಯಾಳುತೆಯು ಹೃದಯ-ಪದ್ಮದಲ್ಲಿದೆ. ಅದಕ್ಕಾಗಿ ಅದನ್ನು ಸೇವಿಸಿ.

ಋಷಿ-ಸ್ತೋಮದ ಏಕೈಕ-ಧನವೆನ್ನಿಸುವಂತಹುದು ಪಾದಾಂಬುಜದಲ್ಲಿದೆ. ಆ ಕಾರಣಕ್ಕಾಗಿ ಅದನ್ನು ಉಪಾಸಿಸಿ. ವ್ರಜಾಂಗನೆಯರ ಸಂಪತ್ತೆಲ್ಲವೂ ಆ ಮುಖ-ಕಮಲದಲ್ಲಿದೆ. ಆ ಕಾರಣಕ್ಕೆ ಅದನ್ನು ಆರಾಧಿಸಿ.

ಭಜಿಸಿ, ಆರಾಧಿಸಿ – ಎಂದೆಲ್ಲಾ ಕವಿಯು ಹೇಳುತ್ತಿರುವುದು ಯಾರಿಗೆ? ತನ್ನ ಇಂದ್ರಿಯಗಳಿಗೇ! ಅಷ್ಟೇ ಏನು? ನಮಗೂ, ನಮ್ಮ ಇಂದ್ರಿಯಗಳಿಗೂ!

ಶ್ಲೋಕ ಹೀಗಿದೆ:
ನಯನಾಂಬುಜೇ ಭಜತ ಕಾಮ-ದುಘಂ
ಹೃದಯಾಂಬುಜೇ ಕಿಮಪಿ ಕಾರುಣಿಕಂ |
ಚರಣಾಂಬುಜೇ ಮುನಿ-ಕುಲೈಕ-ಧನಂ
ವದನಾಂಬುಜೇ ವ್ರಜ-ವಧೂ-ವಿಭವಮ್ ||

***

ನಾನು ಕೃಷ್ಣನನ್ನು ಭಜಿಸಿದ್ದೇನೆ - ಎನ್ನುತ್ತಾನೆ, ಲೀಲಾಶುಕ. ಕೃಷ್ಣನು ಎಂತಹವನು, ಹೇಗಿದ್ದಾನೆ, ಯಾರೊಂದಿಗಿದ್ದಾನೆ, ಅವನ ಸಾಧನಗಳೇನು, ಅವಿದ್ದು ಸಾಧಿಸುವುದೇನು – ಎಂಬೀ ವಿಷಯಗಳನ್ನೀ ಶ್ಲೋಕವು ತಿಳಿಸುತ್ತದೆ. ಸನತ್ಕುಮಾರಸಂಹಿತೆಯಲ್ಲಿ ಬಂದಿರುವ ವಿಶಿಷ್ಟವಾದ ಶ್ರೀಕೃಷ್ಣವರ್ಣನೆಯನ್ನು ಈ ಶ್ಲೋಕವು ಅನುಸರಿಸಿದೆ. ಇಲ್ಲಿಯ ಕೃಷ್ಣ ದ್ವಿಭುಜನಲ್ಲ, ಶ್ಯಾಮವರ್ಣನೂ ಅಲ್ಲ.

ಈ ಕೃಷ್ಣನು ಧನುರ್ಧಾರಿ. ಧನುಸ್ಸು ಮಸೃಣವಾಗಿದೆ, ಎಂದರೆ ಹೊಳಪಿನಿಂದ ಕೂಡಿದೆ. ಅದು ಕಬ್ಬಿನ ಜಲ್ಲೆಯಿಂದಾಗಿರುವ ಬಿಲ್ಲು. ಹಾಗೆಯೇ ಆತನ ಹಸ್ತದಲ್ಲಿ ಬಾಣವೂ ಇದೆ. ಅದೋ ಹೂವಿನಿಂದಾದುದು. ಎಂದೇ ಸುಗಂಧಿಯಾಗಿದೆ, ಎಂದರೆ ಒಳ್ಳೆಯ ಗಂಧದಿಂದ ಕೂಡಿದೆ. ಇವುಗಳೇ ಅಲ್ಲದೆ, ತನ್ನಿತರ ಹಸ್ತಗಳಲ್ಲಿ ಸುದರ್ಶನವೆಂಬ ಚಕ್ರವನ್ನೂ, ಅಬ್ಜವೆಂದರೆ ಶಂಖವನ್ನೂ, ಪಾಶ-ಅಂಕುಶಗಳನ್ನೂ ಧರಿಸಿದ್ದಾನೆ. ಅಬ್ಜವೆಂದರೆ ಕಮಲವೆಂಬುದು ಪ್ರಸಿದ್ಧಾರ್ಥ. ಶಂಖವೂ ಜಲ-ಜಾತವಾದ್ದರಿಂದ ಅಪ್-ಜವೇ.

ಇವೆಲ್ಲವನ್ನು ಧರಿಸಿದ್ದರೂ, ಕೊಳಲನ್ನು ಹಿಡಿದಿಲ್ಲವೆಂದರೆ ಅದು ಕೃಷ್ಣನಾದೀತೇ? ಬಳ್ಳಿಯಂತಿರುವ ವೇಣುವದು, ಚಿನ್ನದಿಂದಾದುದು. ಶ್ಲೋಕದಲ್ಲಿ ಹೇಳಿಲ್ಲದಿರುವ ಪದ್ಮ-ಗದೆಗಳನ್ನೂ ನಾವು ಜೊತೆಗೆ ಊಹಿಸಿಕೊಳ್ಳಬಹುದು. ಇವಿಷ್ಟನ್ನೂ ತನ್ನ ಕರಗಳಿಂದ ಹಿಡಿದಿದ್ದಾನೆ, ಶ್ರೀಕೃಷ್ಣ.

ಅವನ ಕೈಗಳನ್ನು ಅಲಂಕರಿಸುವ ನಾನಾ ದಿವ್ಯ-ಸಾಧನಗಳನ್ನು ಹೇಳಿದ್ದಾಯಿತು. ಇನ್ನು ಸಾಕ್ಷಾತ್ ಕೃಷ್ಣನೇ ಹೇಗಿದ್ದಾನೆಂದು ತಿಳಿದುಕೊಳ್ಳಬೇಕಲ್ಲವೇ? ಇಲ್ಲಿಯ ಕೃಷ್ಣ ಅರುಣ-ವರ್ಣದಿಂದ ಕೂಡಿರತಕ್ಕವನು. ಅರುಣವೆಂದರೆ ಕೆಂಬಣ್ಣ. ಕೆಂಪೆಂದರೆ ಯಾವ ಕೆಂಪು? ಎಂದೇ ಸಿಂದೂರ-ಪುಂಜದಂತಿರುವುದು – ಎಂದಿರುವುದು. ಉತ್ತರದೇಶದ ನಾರಿಯರು ತಮ್ಮ ಸೀಮಂತ ಅಥವಾ ಬೈತಲೆಯ ಸ್ಥಾನದಲ್ಲಿ ಇಟ್ಟುಕೊಳ್ಳುವ ಕುಂಕುಮವದು;. ಹಣೆಯ ಶೋಭೆಯನ್ನೇ ವರ್ಧಿಸುವಂತಹುದು; ಉಳಿದೆಲ್ಲ ಆಭರಣಗಳಿಗೂ ಪೂರಕವಾದದ್ದು. ಸಿಂದೂರ-ಪುಂಜದ ಅರುಣ-ವರ್ಣದವನೆಂದು ಇಲ್ಲಿ ಚಿತ್ರಿಸಿದೆ.

ಕಬ್ಬಿನ ಜಲ್ಲೆಯಿಂದಾದ ಬಿಲ್ಲು, ಪುಷ್ಪಮಯವಾದ ಬಾಣ - ಇವುಗಳನ್ನು ಸಾಮಾನ್ಯವಾಗಿ ಮನ್ಮಥನ ವರ್ಣನೆಯಲ್ಲಿ ಕೇಳುತ್ತೇವೆ. ಹಾಗಾದರೆ ಶ್ರೀಕೃಷ್ಣನು ಮನ್ಮಥನನ್ನು ಹೋಲುತ್ತಾನಲ್ಲವೇ? - ಎಂದರೆ, ಆತನಿಗಿಂತಲೂ ಅತ್ಯಾಕರ್ಷಕನಿವನು, ಎನ್ನಲಿಕ್ಕಾಗಿಯೇ ಕಂದರ್ಪಾಧಿಕ-ಸುಂದರ - ನೆಂದಿರುವುದು. ಕಂದರ್ಪನೆಂದರೆ ಮನ್ಮಥ. ಅಷ್ಟೇ ಅಲ್ಲ, ಶ್ರೀಕೃಷ್ಣನು ಮದನಾಧಿಪನೂ ಹೌದು. ಮನ್ಮಥನು ಎಷ್ಟಾದರೂ ಕೃಷ್ಣನ ಮಗನೇ. ಅಪ್ಪನ ವಶದಲ್ಲಿರುವ ಮಗ.

ಇವಿಷ್ಟೇ ಅಲ್ಲದೆ, ಶ್ರೀಕೃಷ್ಣನು ಗೋಪಾಂಗನೆಯರಿಂದ, ಎಂದರೆ ಗೋಕುಲದ ನಾರಿಯರಿಂದ, ವೇಷ್ಟಿತನಾಗಿರುವನು, ಸುತ್ತುವರಿಯಲ್ಪಟ್ಟಿರುವನು. ಇಷ್ಟರಿಂದಲೇ ಲಕ್ಷ್ಮೀ-ಸಮೇತನೂ ಹೌದೆಂದು ನಾವು ಊಹಿಸಿಕೊಳ್ಳಬಹುದು.

ಹೀಗಿರುವ ಈತನು ಗೋಪಾಲನಾದರೂ ತ್ರೈಲೋಕ್ಯ-ರಕ್ಷಾಮಣಿಯೂ ಹೌದು. ರಕ್ಷಕರಲ್ಲಿ ಶ್ರೇಷ್ಠನಾದವನನ್ನು "ರಕ್ಷಾ-ಮಣಿ"ಯೆನ್ನುತ್ತಾರೆ. ಮೂರು ಲೋಕಗಳಿಗೂ ರಕ್ಷೆಯನ್ನು ಕೊಡುವ ಮೂರ್ತಿಯೇ ಶ್ರೀಕೃಷ್ಣ.

ಹೀಗೆ ವಿಶಿಷ್ಟಾಯುಧ-ಸಂಪನ್ನನೂ ಸರ್ವಾಂಗ-ಸುಂದರನೂ ಸರ್ವಲೋಕ-ರಕ್ಷಕನೂ ಆದ ಕೃಷ್ಣನನ್ನು ನಾನು ಭಜಿಸಿದ್ದೇನೆ - ಎನ್ನುತ್ತಾನೆ, ಲೀಲಾಶುಕ. ಅಂತಹವರಿಗೆ ಮುಕ್ತಿಯು ಸಿದ್ಧವೇ!

ಕೋದಂಡಂ ಮಸೃಣಂ ಸುಗಂಧಿ ವಿಶಿಖಂ ಚಕ್ರಾಬ್ಜ-ಪಾಶಾಂಕುಶಂ

ಹೈಮೀಂ ವೇಣುಲತಾಂ ಕರೈಶ್ಚ ದಧತಂ, ಸಿಂದೂರ-ಪುಂಜಾರುಣಮ್ |

ಕಂದರ್ಪಾಧಿಕ-ಸುಂದರಂ ಸ್ಮಿತ-ಮುಖಂ ಗೋಪಾಂಗನಾವೇಷ್ಟಿತಂ

ಗೋಪಾಲಂ ಮದನಾಧಿಪಂ ತಮ್ ಅಭಜಂ ತ್ರೈಲೋಕ್ಯ-ರಕ್ಷಾಮಣಿಂ ||

ಒಂದೆರಡು ಪದಗಳನ್ನು ಬಿಟ್ಟರೆ ಉಳಿದವೆಲ್ಲವೂ ಅನುಸ್ವಾರದಲ್ಲಿ ಕೊನೆಗೊಂಡಿರುವುದೇ ಶ್ಲೋಕಕ್ಕೊಂದು ಮೆರುಗನ್ನು ಕೊಡುತ್ತದೆ, ಅದರ ಗೇಯತಾ-ಗುಣವನ್ನು ಹೆಚ್ಚಿಸುತ್ತದೆ.

***

ಕೃಷ್ಣನ ಚರಣವನ್ನು ಭಜಿಸು - ಎನ್ನುತ್ತಾನೆ, ಲೀಲಾಶುಕ. ಯಾರನ್ನು ಕುರಿತು ಈ ಮಾತು? ಮನುಜರನ್ನು ಕುರಿತು - ಎಂದಾದರೂ ಭಾವಿಸಬಹುದು; ತನ್ನ ಮನಸ್ಸನ್ನೇ ಕುರಿತು - ಎಂದಾದರೂ ಭಾವಿಸಬಹುದು. ವಿಷ್ಣುವೇನು, ಕೃಷ್ಣನೇನು? ಎಂದೇ 'ಕೃಷ್ಣ' ಎನ್ನುವುದರ ಬದಲು ಶಾರ್ಙ್ಗಿ ಎಂದಿದೆ.

ಶಾರ್ಙ್ಗವೆಂಬುದು ವಿಷ್ಣುವಿನ ಬಿಲ್ಲಿನ ಹೆಸರು. ಶಾರ್ಙ್ಗಿ ಎಂದರೆ ವಿಷ್ಣು. ಎಂದೇ ಶಾರ್ಙ್ಗಿಯ ಚರಣಾಂಭೋಜವನ್ನು, ಎಂದರೆ ಪದ-ಕಮಲವನ್ನು, ಉಪಾಸಿಸು - ಎಂದಿದೆ.

ಹೇಗಿದೆ ಅದು? - ವ್ರಜದಲ್ಲಿ, ಎಂದರೆ ನಂದ-ಗೋಕುಲದಲ್ಲಿ, ಅದು ಧ್ವನಿಗೈಯುತ್ತಿದೆ. ಕಾಲಿಗೆ ಗೆಜ್ಜೆ ಕಟ್ಟಿದ್ದಾರೆ, ಬಾಲಕೃಷ್ಣನಿಗೆ. ಅದೂ ಮಣಿಖಚಿತವಾದ ನೂಪುರ. ಹಾಗಿರುವುದರಿಂದ ಅದು ವಿಶೇಷವಾದ ರಣನವನ್ನು ಉಂಟುಮಾಡುತ್ತಿದೆ. ರಣನವೆಂದರೆ ಸದ್ದು.

ಚರಣವನ್ನು ಕಮಲವೆಂದು ಹೇಳಿತಲ್ಲಾ, ಏನದರ ವಿಶೇಷ? ಸರಸವಾದ ಸರಸ್ಸಿನಲ್ಲಿ, ಎಂದರೆ ನೀರುತುಂಬಿರುವ ಜಲಾಶಯದಲ್ಲಿ, ಕಾಂತಿಯಿಂದ ಕೂಡಿರುವ ಕಮಲದ ಹಾಗಿರುವಂತಹುದು, ಈ ಕಮಲ.

ಸರೋವರದಿಂದ ಕಿತ್ತು ತಂದು ಹಲಕಾಲವಾದ ಮೇಲೆ ಅಲ್ಪ-ಸ್ವಲ್ಪದ ಕಾಂತಿ ಉಳಿದಿರಬಹುದು, ಕಮಲದಲ್ಲಿ. ಹಾಗಿರುವುದಲ್ಲ, ಇಲ್ಲಿದರ ಕಾಂತಿ. ತುಂಬು ನೀರಿನ ಕೊಳದಲ್ಲೇ ಕಂಗೊಳಿಸುವ ಕಮಲದ ಪರಿ ಇದರದು.

ಕಮಲಗಳೆಂದರೆ ಹಂಸಗಳಿಗೂ ಇಷ್ಟವೇ. ಕಮಲಗಳ ಅಂದ-ಮಕರಂದಗಳು ಮರಾಳಗಳಿಗೆ ಮೆಚ್ಚೇ. ಹಂಸ-ನಾದವೂ ನೂಪುರ-ನಾದವೂ ಸಂವಾದಿಯಾದಂತಹವು, ಪರಸ್ಪರ ಹೋಲುವಂತಹವು.

ಎಂದೇ ಈಗ ಉಪಮೆಯು ಇನ್ನೂ ಸಾರ್ಥಕವಾಯಿತು. ಕೃಷ್ಣನ ಚರಣ-ಕಮಲವೂ ಮನೋಜ್ಞವಾಗಿದೆ, ಹಾಗೂ ಇಂಪಾದ ಧ್ವನಿಗೈಯುತ್ತಿದೆ. ಹೋಲಿಕೆಯಾಗಿ ಕೊಟ್ಟಿರುವ ಕಮಲವೂ ಮನೋಹರವಾಗಿದೆ, ಬಳಿ ಬಂದ ಹಂಸಗಳ ಧ್ವನಿಯಿಂದ ಕೂಡಿದೆ. ಕಲ-ಹಂಸವೆಂದರೇನು? ಅವ್ಯಕ್ತವಾದರೂ ಮಧುರವಾದ ದನಿಯನ್ನು ಕಲವೆನ್ನುವರು. ಎಂದೇ ಕಲಹಂಸವೆಂದರೆ ಮಧುರ-ಧ್ವನಿಮಾಡುವ ಹಂಸ. ಪಕ್ಷಿಗಳ ಕಲರವ ಕಿವಿಗಿಂಪಲ್ಲವೇ?

ಹೀಗೆ ಕಣ್ಣು-ಕಿವಿಗಳಿಗೆ ಪ್ರಿಯವೆನಿಸುವ ರೂಪ-ಶಬ್ದಗಳಿಂದ ಕೂಡಿದೆ, ಬಾಲಕೃಷ್ಣನ ಪಾದ. ಅದರ ಉಪಾಸನೆಯನ್ನು ಮಾಡು, ಮನವೇ - ಎಂಬುದು ಶ್ಲೋಕದ ಭಾವ. ಶ್ಲೋಕ ಹೀಗಿದೆ:

ವಿರಣನ್ಮಣಿ-ನೂಪುರಂ ವ್ರಜೇ
ಚರಣಾಂಭೋಜಂ ಉಪಾಸ್ಸ್ವ ಶಾರ್ಙ್ಗಿಣಃ |
ಸರಸೇ ಸರಸಿ ಶ್ರಿಯಾಶ್ರಿತಂ
ಕಮಲಂ ವಾ ಕಲಹಂಸ-ನಾದಿತಂ ||

ಈ ಶ್ಲೋಕದಲ್ಲಿಯ ಅನುಪ್ರಾಸವು ಹೃದ್ಯವಾಗಿದೆ: ಪೂರ್ವಾರ್ಧದಲ್ಲಿ ಹಲವು ರ/ಣ-ಧ್ವನಿಗಳು, ಉತ್ತರಾರ್ಧದಲ್ಲಿ ರ/ಸ-ಗಳು, ಕ/ಲ-ಗಳು.

ಸೂಚನೆ : 8/11/2025 ರಂದು   ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.


Tuesday, November 4, 2025

ಪ್ರಶ್ನೋತ್ತರ ರತ್ನಮಾಲಿಕೆ 38 (Prasnottara Ratnamalike 38)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೩೮. ಯಾವ ವಿಷಯದಲ್ಲಿ ಉಪೇಕ್ಷೆ ಇರಬೇಕು? 

ದುಷ್ಟ ಮನುಷ್ಯರಲ್ಲಿ, ಪರಸ್ತ್ರೀಯಲ್ಲಿ ಮತ್ತು ಪರರ ಧನದಲ್ಲಿ. 

ಈ ಪ್ರಶ್ನೋತ್ತರದಲ್ಲಿ ಒಂದು ಪ್ರಶ್ನೆಗೆ ಮೂರು ಉತ್ತರಗಳಿವೆ. ಉಪೇಕ್ಷೆ ಎಂದರೆ ತಿರಸ್ಕಾರ, ದ್ವೇಷಿಸುವುದು ಅಥವಾ ಯಾವುದೇ ಕಾರಣಕ್ಕೂ ಅಪೇಕ್ಷೆ ಪಡದಿರುವುದು ಎಂದರ್ಥ. ನಾವು ಉತ್ತಮರಾಗಬೇಕಾದರೆ ಇಲ್ಲಿ ಹೇಳಿರುವ ಮೂರು ವಿಷಯಗಳ ಬಗ್ಗೆ ಉದಾಸೀನತೆಯನ್ನು ಇಟ್ಟುಕೊಳ್ಳಬೇಕು ಎಂಬ ಉಪದೇಶ ಇಲ್ಲಿದೆ. ಪ್ರತಿಯೊಬ್ಬ ಮಾನವನು ಕೂಡ ಒಳ್ಳೆಯವನಾಗಬೇಕು ಎಂದೇ ಅಪೇಕ್ಷೆಪಡುತ್ತಾನೆ. ಅದಕ್ಕಾಗಿ ಈ ಅಪೇಕ್ಷೆಗೆ ಯಾವುದು ಉಪೇಕ್ಷೆ ಮಾಡುವಂಥದ್ದು? ಎಂಬ ಉತ್ತರ ಇಲ್ಲಿದೆ. ಈ ಮೂರು ಸಂಗತಿಗಳು ನಮಗೆ ಸರ್ವಥಾ ಅನಿಷ್ಟಪ್ರದವಾದವುಗಳು ಎಂಬುದು ತಾತ್ಪರ್ಯ. 

ದುಷ್ಟರ ವಿಷಯದಲ್ಲಿ ನಮಗೆ ಸಂದೇಹ ಬರುವುದು - ಯಾರು ದುಷ್ಟರು? ಎಂಬುದನ್ನು ತಿಳಿದುಕೊಳ್ಳುವುದರಲ್ಲಿ. ತಿಳಿಯಲು ಬಹಳ ಕಷ್ಟಸಾಧ್ಯವೂ ಹೌದು. ಏಕೆಂದರೆ ಶಿಷ್ಟರಂತೆ ಇದ್ದು, ದುಷ್ಟರು ತಮ್ಮ ಕಾರ್ಯವನ್ನು ಮಾಡುತ್ತಿರುತ್ತಾರೆ. ಹಾಗಾಗಿ ದುಷ್ಟತನವನ್ನು ತಿಳಿಯಲು ಸೂಕ್ಷ್ಮತೆ ಇರಬೇಕಾಗುತ್ತದೆ. ಸರಿ-ತಪ್ಪುಗಳ ಬಗ್ಗೆ ಅರಿವು ಬೇಕು. ಸರಿಯಾದ ಕಡೆ ನಮ್ಮನ್ನು ಸರಿಸುವುದು ಸರಿ. ಸರಿಯಾದದ್ದನ್ನು ತಪ್ಪಿಸುವುದು ತಪ್ಪು ಎಂಬ ನಿರ್ಣಯ ಬೇಕು. ಯಾವುದು ಸರಿ? ಎಂದರೆ ನಿತ್ಯ, ಸತ್ಯವಾದ ಪರಬ್ರಹ್ಮ ಮಾತ್ರ ಸರಿ. ಉಳಿದವುಗಳು ಸರಿಯ ಕಡೆ ತಲುಪಿಸುವ ಸಾಧನಗಳು. ಯಾರಿಗೆ ಈ ಅರಿವು ಇರುವುದೋ ಅವನು ಸರಿಯ ಕಡೆ ಸರಿಯುತ್ತಿರುತ್ತಾನೆ. ಆ ಕಡೆಗೆ ಗಮನದ ಅಪೇಕ್ಷೆ ಉಳ್ಳವನು ಸತ್ಪುರುಷ ಅಥವಾ ಶಿಷ್ಟ. ಹಾಗಿಲ್ಲದವನು ದುಷ್ಟ ತಾನೆ ಆಗುತ್ತಾನೆ!  ಭಯ, ದಯೆ, ಲಜ್ಜೆ ಈ ಮೂರು ಗುಣಗಳು ಇಲ್ಲದವನಾಗುತ್ತಾನೆ ಆತ. ಆತನಿಗೆ ಕೆಟ್ಟಕಾರ್ಯದ ಬಗ್ಗೆ ಭಯವಿರದು. ದೀನ, ದರಿದ್ರ, ದುರ್ಬಲರ ಬಗ್ಗೆ ದಯೆ ದೂರವೇ. ಮತ್ತು ಕುಕಾರ್ಯ ಮಾಡಿದಲ್ಲಿ ಅವನಿಗೆ ಲಜ್ಜೆ ಕಿಂಚಿತ್ತೂ ಇರುವುದೇ ಇಲ್ಲ. ಇವನಿಂದ ಕರ್ತವ್ಯ ಮತ್ತು ಅಕರ್ತವ್ಯದ ಪ್ರಜ್ಞೆ ಎಂಬುದು ದೂರವಾಗುತ್ತದೆ. ಹಾಗಾಗಿ ಅವನು ಮುಂದೆ ದುಷ್ಟ ಎಂದೇ ಪರಿಗಣಿತನಾಗುತ್ತಾನೆ. ಇಂತಹ ದುಷ್ಟರ ವಿಷಯದಲ್ಲಿ ದೂರವಿರಬೇಕು ಎಂಬುದು ಮೊದಲನೆಯ ಸಂಗತಿ. 

ಸೃಷ್ಟಿಕಾರ್ಯವನ್ನು ಮುಂದುವರಿಸಲು ಸ್ತ್ರೀ ಬೇಕೇಬೇಕು. ಸನಾತನಧರ್ಮದಲ್ಲಿ ವಿವಾಹ ಎಂಬ ಉತ್ಕೃಷ್ಟ ವ್ಯವಸ್ಥೆಯ ಮೂಲಕ ಗುರುಹಿರಿಯರ ಅನುಮತಿಯನ್ನು ಪಡೆದು ಪುರುಷನು ಸ್ತ್ರೀಯಿಂದ ಸಂತತಿಯನ್ನು ಪಡೆಯುತ್ತಾನೆ. ಆ ಸ್ತ್ರೀಯಿಂದ ಧರ್ಮಕಾರ್ಯವನ್ನು ಮಾಡುತ್ತಾನೆ. ಆದಕಾರಣ ಬೇರೆಯವರ ಪತ್ನಿಯನ್ನು ತನ್ನ ತಾಯಿಯ ಸ್ಥಾನದಲ್ಲಿಟ್ಟು ನೋಡಬೇಕು ಎಂಬುದಾಗಿ ನಮ್ಮ ಪರಂಪರೆ ಸಾರುತ್ತದೆ. ಇಷ್ಟು ನಿರ್ಮಲತೆಯ ಭಾವವನ್ನು ಇಟ್ಟುಕೊಂಡು ಪರಸ್ತ್ರೀವಿಷಯವನ್ನು ಕಾಣಬೇಕು. ಅದನ್ನು ಬಿಟ್ಟು ಹಿರಿಯರ ಅನುಮತಿಯನ್ನು ಬಿಟ್ಟು ಕೇವಲ ಕಾಮನೆಗಾಗಿ ಪರಸ್ತ್ರೀಯನ್ನು ಬಳಲಿಸಿಕೊಳ್ಳುವುದು ಅಧರ್ಮಕ್ಕೆ ಕಾರಣವಾಗುತ್ತದೆ. ಇಂತಹ ಅನಿಷ್ಟಕಾರ್ಯ ಸರ್ವಥಾ ಮಾಡುವಂತಹದ್ದಲ್ಲ. 

ಮತೊಬ್ಬರ ಸಂಪತ್ತನ್ನು ಬಯಸಬಾರದು. ನಮ್ಮ ಸಹಜವಾದ ಕರ್ಮದಿಂದ ಯಾವುದು ಲಭ್ಯವಾಗುತ್ತದೆಯೋ ಅದರಿಂದ 'ಹಾಸಿಗೆ ಇದ್ದಷ್ಟು ಕಾಲು ಚಾಚು' ಎಂಬಂತೆ ನಮ್ಮ ಜೀವನ ನಿರ್ವಹಣೆಯನ್ನು ಮಾಡಬೇಕು. ಹಾಗಿಲ್ಲದೆ, ಮಿತಿಮೀರಿ  ಜೀವನವನ್ನು ನಡೆಸಲು ಬಯಸುವ ಸಂಪತ್ತನ್ನು 'ಪರಧನ' ಎಂದು ಪರಿಗಣಿಸಲಾಗುತ್ತದೆ. ಇದೂ ಕೂಡ ಅನಿಷ್ಟಸಾಧನವೇ ಆಗುತ್ತದೆ. ಆದ್ದರಿಂದ ಈ ಮೂರರ ವಿಷಯದಲ್ಲಿ ಉಪೇಕ್ಷೆ ಅಪೇಕ್ಷಿತ.

ಸೂಚನೆ : 2/11/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 160 ನಾರದರ ದ್ವಾರಾ ಯುಧಿಷ್ಠಿರನಿಗೆ ಪಾಂಡು-ಸಂದೇಶ (Vyaasa Vikshita 160)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ಪಾಂಡುಮಹಾರಾಜನನ್ನು ಕಂಡಿದ್ದನ್ನು ನಾರದರು ಯುಧಿಷ್ಠಿರನಿಗೆ ತಿಳಿಸಿದ್ದರಷ್ಟೆ. ಅದನ್ನು ಈಗ ವಿವರಿಸಿ ಹೇಳಿದರು.

"ನಾರದರೇ, ತಾವು ನನ್ನ ಪುತ್ರನಾದ ಯುಧಿಷ್ಠಿರನನ್ನು ಕಂಡು ನನ್ನೀ ಮಾತನ್ನು ತಿಳಿಸಬೇಕು" – ಎಂಬುದಾಗಿ ಹೇಳಿದ ಪಾಂಡುವು ಹೀಗೆ ನುಡಿದನು:

"ಯುಧಿಷ್ಠಿರನೇ, ನಿನ್ನ ಸೋದರರೆಲ್ಲರೂ ನಿನಗೆ ಅನುಕೂಲರಾಗಿದ್ದಾರೆ. ನೀನು ಭೂಮಿಜಯವನ್ನು ಮಾಡಲು ಸಮರ್ಥನಾಗಿರುವೆ. ಯಜ್ಞಗಳಲ್ಲಿ ಶ್ರೇಷ್ಠವೆನಿಸುವ ರಾಜಸೂಯ-ಯಜ್ಞವನ್ನು ನೀನೂ ನಡೆಸು. ಆ ಯಜ್ಞವನ್ನು ನೀನು ಮಾಡುವೆಯಾದಲ್ಲಿ ನಾನೂ ಸಹ ಹರಿಶ್ಚಂದ್ರನ ಹಾಗೆಯೇ ಇಂದ್ರನ ಆಸ್ಥಾನದಲ್ಲಿ ಬಹುವರ್ಷಗಳ ಕಾಲ ಸಂತೋಷಪಡಬಹುದು" - ಎಂಬುದಾಗಿ.

ಯುಧಿಷ್ಠಿರನೇ, ತನ್ನಿಮಿತ್ತವಾಗಿ ನಿನಗೆ ನಾನು ಹೇಳುವುದಿದು: "ಪಾಂಡವನೇ, ಪಾಂಡುವಿನ ಸಂಕಲ್ಪವನ್ನು ನೀನು ನೆರವೇರಿಸು. ನೀನೂ ಸಹ ನಿನ್ನ ಪೂರ್ವಜರೊಂದಿಗೆ ಇಂದ್ರಲೋಕವನ್ನು ಸೇರಬಹುದು.

ಆದರೊಂದು ಮಾತು. ಈ ಯಜ್ಞವನ್ನು ಮಾಡುವಲ್ಲಿ ಅನೇಕ ವಿಘ್ನಗಳು ಬಂದೊದಗತಕ್ಕವೇ. ಏಕೆಂದರೆ, ಯಜ್ಞ-ನಾಶಕರಾದ ಬ್ರಹ್ಮರಾಕ್ಷಸರು ಇದರಲ್ಲಿ ಅನೇಕ ಛಿದ್ರಗಳನ್ನು ಹುಡುಕತಕ್ಕವರೇ. ಅಲ್ಲದೆ, ಈ ಸಂನಿವೇಶದಲ್ಲಿ ಯುದ್ಧವು ಸಹ ಘಟಿಸುವುದೇ. ಯುದ್ಧವೆಂಬುದು ಭೂಮಿಯ ಮೇಲೆ ವಿನಾಶವನ್ನುಂಟುಮಾಡತಕ್ಕದ್ದು; ಕ್ಷತ್ರಿಯರ ಸಂಹಾರಕ್ಕೆ ಕಾರಣವಾಗತಕ್ಕದ್ದು.

ಇದನ್ನೆಲ್ಲ ಯೋಚನೆ ಮಾಡಿ, ಯಾವುದು ಕ್ಷೇಮವೋ ಅದನ್ನು ನಡೆಸು, ಮಹಾರಾಜ. ಚಾತುರ್ವರ್ಣ್ಯದ ರಕ್ಷಣೆಯಲ್ಲಿ ಸದಾ ಜಾಗರೂಕನಾಗಿರು. ನೀನು ಬಾಳು, ಏಳ್ಗೆ ಹೊಂದು, ಸಂತೋಷಪಡು. ಸಂಪಾದಿಸಿದ ಸಂಪತ್ತಿನಿಂದ ದ್ವಿಜರನ್ನು ತೃಪ್ತಿಗೊಳಿಸು.

ನೀನು ಕೇಳಿದೆಯಾಗಿಯೇ ನಾನು ವಿಸ್ತರವಾಗಿ ಹೇಳಿದುದು. ನಾನಿನ್ನು ಹೊರಡಬಯಸುವೆ, ಯುಧಿಷ್ಠಿರ. ನಾನು ದ್ವಾರಕೆಗೆ ಹೋಗಬೇಕಾಗಿದೆ. ನೀನು ಅನುಮತಿಯಿತ್ತರೆ ಹೊರಡುವೆ - ಎಂದು ಹೇಳಿದರು, ನಾರದರು.

ಪಾರ್ಥರಿಗೆ, ಎಂದರೆ ಕುಂತೀಪುತ್ರರಿಗೆ, ಈ ರೀತಿಯಾಗಿ ಹೇಳಿದವರೇ, ಯಾವ ಋಷಿಗಳೊಂದಿಗೆ ತಾವು ಬಂದಿದ್ದರೋ ಅವರೊಂದಿಗೆ ನಾರದರು ಹೊರಟುಬಂದರು.

ನಾರದರ ಮಾತನ್ನು ಕೇಳಿದ ಬಳಿಕ ಯುಧಿಷ್ಠಿರನು ನಿಟ್ಟುಸಿರಿಟ್ಟನು. ರಾಜಸೂಯ-ಯಜ್ಞವನ್ನು ಕುರಿತಾಗಿ ಚಿಂತನಗಳು ಉಕ್ಕಿ, ಶಾಂತಿಯನ್ನೇ ಆತನು ಕಾಣದಾದನು.

ತನ್ನ ಒಡಹುಟ್ಟಿದವರನ್ನು ಕರೆದು, ಶ್ರೇಷ್ಠಯಜ್ಞವೆನಿಸುವ ಆ ಯಾಗದ ಬಗ್ಗೆ ಚಿಂತನವನ್ನು ಅವರೊಂದಿಗೆ ನಡೆಸಿದನು.

ರಾಜಸೂಯಯಾಗವನ್ನು ಮಾಡಿದ ಅನೇಕ ರಾಜರ್ಷಿಗಳ ಮಹಿಮೆಯನ್ನು ಕೇಳಿದ್ದನಷ್ಟೆ. ಆ ಪುಣ್ಯಕರ್ಮದಿಂದಾಗಿ ಬಳಿಕ ಅವರಿಗೊದಗಿದ ಪುಣ್ಯಲೋಕಪ್ರಾಪ್ತಿಯನ್ನೂ ಅರಿತುಕೊಂಡಿದ್ದನಷ್ಟೆ. ಅದರಲ್ಲೂ ರಾಜರ್ಷಿಯಾದ ಹರಿಶ್ಚಂದ್ರನು ಅಷ್ಟು ಜಾಜ್ವಲ್ಯಮಾನನಾದುದನ್ನೂ ಪರಿಭಾವಿಸಿದ್ದನು. ಇವೆಲ್ಲ ಆದ ಬಳಿಕ, ರಾಜಸೂಯಯಾಗವನ್ನು ತಾನೂ ಮಾಡಬೇಕೆಂಬ ಆಸೆಯು ಆತನಲ್ಲಿ ಕುದುರಿತು.

ಆ ಯಜ್ಞಕಾರ್ಯಕ್ಕಾಗಿ ಮನಸ್ಸು ಮಾಡುತ್ತಾ, ಸಭಾಸದರನ್ನೆಲ್ಲರನ್ನೂ ಯುಧಿಷ್ಠಿರನು ಸತ್ಕರಿಸಿದನು. ಅವರೂ ಪ್ರತಿಯಾಗಿ ಆತನನ್ನು ಆದರಿಸಿದರು. ಆ ಯಾಗದ ಅನುಷ್ಠಾನದ ಬಗ್ಗೆ ಮತ್ತೆ ಮತ್ತೆ ಆತನು ಪರ್ಯಾಲೋಚಿಸಿದನು. ಅದ್ಭುತವಾದ ಬಲ-ಪರಾಕ್ರಮಗಳನ್ನು ಹೊಂದಿದ್ದ ಆತನು ಪ್ರಜೆಗಳೆಲ್ಲರಿಗೂ ಹಿತವಾಗುವುದು ಯಾವುದು? - ಎಂಬುದರ ಬಗ್ಗೆ ಮನಸ್ಸಿತ್ತನು.

ಸಮಸ್ತಧರ್ಮಾತ್ಮರಲ್ಲೂ ಶ್ರೇಷ್ಠನೆನಿಸಿದ ಆ ಯುಧಿಷ್ಠಿರನು ಯಾವುದೇ ಭೇದಭಾವವಿಲ್ಲದೆ ಸರ್ವಪ್ರಜೆಗಳ ಹಿತವನ್ನೇ ಸಾಧಿಸಹೊರಟನು. ಕೋಪವನ್ನೂ ಮದವನ್ನೂ ತೊರೆದನು. ತನ್ನ ಕಾರ್ಯವನ್ನು ಹೀಗೆ ಆರಂಭಿಸಿದನು.

ಸೂಚನೆ : 2/11/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Saturday, November 1, 2025

ಕೃಷ್ಣಕರ್ಣಾಮೃತ 80 ಸುಧಾ-ಸಮುದ್ರದಲ್ಲಿ ಈಜಾಡುವ ಸೊಗಸು (Krishakarnamrta 80)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಭಗವಂತನನ್ನು ಒಲಿಸಿಕೊಳ್ಳುವುದು ಹೇಗೆ? - ಎಂಬ ಪ್ರಶ್ನೆಯು ಯಾರನ್ನು ಕಾಡಿಲ್ಲ?

ಭಗವಂತನೆಂತಹವನು? ನಮ್ಮಂತೆಯೋ ಅಲ್ಲವೋ?

ನಮ್ಮಂತೆಯೇ ಆದರೆ ಆತನೂ ಒಬ್ಬ ಪುರುಷ. ಏಕೆ? ಪುರುಷಾರ್ಥ ಎಂಬ ಪದದ ವಿವರಣೆಯಲ್ಲೇ ಗೊತ್ತಾಗುವಂತೆ, ಪುರುಷನೆಂದರೆ ಜೀವನಲ್ಲವೇ? ಆತನೂ ನಮ್ಮಂತೆಯೇ ಆಗಿಬಿಟ್ಟಲ್ಲಿ ಅವನಿಗೂ ನಮಗೂ ವಿಶೇಷವೇನು ಬಂತು?

ಇದಕ್ಕೆ ಪ್ರತಿಯಾಗಿ, ಆತನು ಕಿಂಚಿತ್ತೂ ನಮ್ಮಂತಲ್ಲ - ಎಂದುಬಿಟ್ಟರೂ ಕಷ್ಟವೇ. ಒಂದು ನಂಟು ಏರ್ಪಡಬೇಕಾದರೆ ಅದೇನೋ ಒಂದು ಸಮಾನ-ಧರ್ಮವಿರಬೇಕಲ್ಲವೇ? ಸ್ವಲ್ಪವಾದರೂ.

ಹೌದು. ಸಾಧರ್ಮ್ಯವಿದೆ. ಜೊತೆಗೆ ವೈಧರ್ಮ್ಯವೂ ಇದೆ. ನಾವು ಪುರುಷರಾದರೆ ಆತನು ಪರಮಪುರುಷ. ಹಾಗೋ? ಹಾಗಾದರೆ ಆತನೆಲ್ಲಿರುವನೆಂಬುದನ್ನು ಹೇಳಿ, ಅಲ್ಲಿಗೇ ಹೋಗಿ ಸ್ನೇಹ ಬೆಳೆಸಿದರಾಯ್ತು - ಎಂದೆನಿಸುತ್ತದಲ್ಲವೇ?

ಆತನ ವಿಳಾಸವೂ ಹೇಳಬಹುದಾದದ್ದೇ. ಆತನೊಂದು ಗುಹೆಯಲ್ಲಿದ್ದಾನೆ; ಅಲ್ಲಿ ಅಡಗಿದ್ದಾನೆ. ಯಾವ ಗುಹೆಯದು? ಎಲ್ಲಿದೆ? ಎಷ್ಟು ದೂರ?

ಎಷ್ಟು ದೂರವೂ ಅಲ್ಲ. ನಮ್ಮೊಳಗೇ ಇರುವಂತಹುದು! ಅದು ನಮ್ಮ ಬುದ್ಧಿಯೆಂಬ ಗುಹೆ, ಅಥವಾ ಹೃದಯವೆಂಬ ಗುಹೆ.  ಹೊರಗಿನದ್ದಾದರೆ ಸರಿ, ಅಲ್ಲಿಗೆ ಪ್ರಯಾಣಿಸಬಹುದು - ದೂರವಾದರೂ ಚಿಂತೆಯಿಲ್ಲ. ಆದರೆ ಒಳಗೇ ಇರುವ ಗುಹೆಯೆಂದರೆ ಹುಡುಕುವುದು ಹೇಗೆ? ಅದಕ್ಕೆ ಕ್ರಮವೇನು? ಹಾಗೂ ಅದು ಯಾರಿಗೆ ಸಾಧ್ಯ?

ಆತ್ಮಜ್ಞರಿಗೆ ಮಾತ್ರವೇ ಸಾಧ್ಯವದು. ಸನಕ ಮುಂತಾದ ಪುರಾಣ-ಪುರುಷರಿಗೆ ಮಾತ್ರವೇ ಸಾಧ್ಯವದು. ಎಷ್ಟಾದರೂ ಯೋಗವಿದ್ಯೆಯಲ್ಲಿ ಪಳಗಿದವರಲ್ಲವೇ ಅವರು? ಹೃದಯ-ಗುಹಾ-ನಿಹಿತನಾದ ಪರಮ-ಪುರುಷನ ಉಪಾಸನೆಯನ್ನು ದಹರವಿದ್ಯಾ – ಎಂಬುದರ ಉಪದೇಶದಲ್ಲಿ ಉಪನಿಷತ್ತು ನಿರೂಪಿಸಿದೆಯಲ್ಲವೇ? ಹೀಗಾಗಿ, ಆತ ಯೋಗಿಗಮ್ಯ, ಯೋಗಗಮ್ಯ.

ನಮಗದು ಅಸಾಧ್ಯವೆನಿಸುವುದಲ್ಲಾ? ಹಾಗಾದರೆ ನಾವೇನು ಮಾಡುವುದು? - ಎಂಬ ಪ್ರಶ್ನೆಗೆ ಒಳ್ಳೆಯ ಉತ್ತರವನ್ನೇ ಕೊಟ್ಟಿದ್ದಾನೆ, ಲೀಲಾಶುಕ. ಆತ್ಮಸಾಧನೆಯನ್ನು ಮಾಡಿಲ್ಲದ ಬಡಪಾಯಿಗಳು ನಾವು. ನಾವು ಏನೋ ಆಟವಾಡಿಕೊಂಡಿರಲಷ್ಟೇ ಬಲ್ಲೆವು - ಎನ್ನುವಿರಾ? ಅಂತಹವರಿಗೇ ಸಲ್ಲತಕ್ಕ ಉತ್ತರ, ಆತನದು.

ನಿಮಗೆ ಜಲ-ಕ್ರೀಡೆ ಇಷ್ಟವಷ್ಟೆ? ಬನ್ನಿ, ಆ ಮಾರ್ಗದಲ್ಲೇ ಗುರಿಮುಟ್ಟಬಹುದು! - ಎನ್ನುತ್ತಾನೆ, ಕವಿ.

ಯಶೋದೆಯ ಶಿಶುವೆಂದರೆ ಕೃಷ್ಣ. ಆತನ ಬಾಲಲೀಲೆಗಳು ಯಾರನ್ನೂ ಆಕರ್ಷಿಸುವಂತಹವು. ಆ ಬಾಲಲೀಲೆಗಳಾದರೂ ಒಂದೇ ಎರಡೇ? ಆ ಬಾಲಲೀಲೆಗಳ ಕಥೆಗಳೇ ಒಂದು ಸಮುದ್ರ. ಅಮೃತ-ಸಮುದ್ರವೇ ಅದು.

ನಿಮಗೆ ಉಪ್ಪುನೀರಿನ ಸಮುದ್ರತೀರದ ಜಲದಲ್ಲಾಡುವ ಆಟವು ಗೊತ್ತಿರಬಹುದು. ಆದರೆ ಕೃಷ್ಣಬಾಲಲೀಲೆಯ ಕಥೆಗಳು ಒಂದು ಸುಧಾ-ಸಿಂಧುವೇ ಸರಿ - ಎಂದರೆ ಅಮೃತ-ಸಮುದ್ರವೇ ಸರಿ.

ಲವಣ-ಸಮುದ್ರದಲ್ಲಿ ಮುಳುಗುವುದು ಸೊಗಸೋ, ಸುಧಾ-ಸಾಗರದಲ್ಲಿ ಮೀಯುವುದು ಸೊಗಸೋ? ಹೇಳಿ. ಕೃಷ್ಣನ ಈ ಕಥಾಮೃತದಲ್ಲಿ ಮನಸಾರ ಮಿಂದೆದ್ದು ಈಜಾಡಿ ನಲಿದಾಡಿದರೆ ಸಾಕು; ಗಹನವಾದ ಯೋಗಮಾರ್ಗದ ಕ್ಲಿಷ್ಟ-ಸಾಧನೆಯಿಂದ ಏನನ್ನು ಆ ಆತ್ಮಜ್ಞರು ಪಡೆದರೋ ಅದನ್ನೇ ನಾವೂ ಪಡೆಯಬಹುದು!

ಕಥೆ ಕೇಳುವುದಕ್ಕಿಂತಲೂ ಸುಲಭೋಪಾಯವೇ? ಪರಮ-ಪುರುಷನೇ ಬಾಲ-ಕೃಷ್ಣನಾಗಿ ಬಂದಿರಲು, ಆತನ ಕಥಾಸ್ವಾದವೂ ಕೊನೆಗೆ ಕಥಾನಾಯಕನ ಉಪಾಸನೆಯೇ ಆಗಿ ಪರಿಣಮಿಸುತ್ತದೆ. ತಪೋ-ಲಭ್ಯವಾದುದನ್ನು ಲೀಲಾ-ಲಭ್ಯವನ್ನಾಗಿ ಮಾಡಿಕೊಡುತ್ತದೆ!

ಶ್ಲೋಕದ ಪೂರ್ವಾರ್ಧವು ಪ್ರಾಚೀನವಾದ ಕಷ್ಟೋಪಾಯವನ್ನೂ, ಉತ್ತರಾರ್ಧವು ನೂತನವಾದ ಸುಲಭೋಪಾಯವನ್ನೂ ನಿರೂಪಿಸುತ್ತವೆ.

ಉಪಾಸತಾಂ ಆತ್ಮವಿದಃ ಪುರಾಣಾಃ

ಪರಂ ಪುಮಾಂಸಂ ನಿಹಿತಂ ಗುಹಾಯಾಂ |

ವಯಂ ಯಶೋದಾ-ಶಿಶು-ಬಾಲ-ಲೀಲಾ-

ಕಥಾ-ಸುಧಾ-ಸಿಂಧುಷು ಲೀಲಯಾಮಃ ||

***

ಕೃಷ್ಣನು ಕುಮಾರನಾದರೂ ದೈವವೇ ಸರಿ. ಆತನನ್ನಲ್ಲವೇ ಆಶ್ರಯಿಸಬೇಕಾದುದು? ಈ ಬಾಲಕೃಷ್ಣನು ಹೇಗಿದ್ದಾನೆ? ಎಂಬುದನ್ನು ಶ್ಲೋಕದ ನಾಲ್ಕು ಪಾದಗಳಲ್ಲಿಯ ನಾಲ್ಕು ಚಿತ್ರಣಗಳಿಂದ ತಿಳಿಸುತ್ತಾನೆ, ಲೀಲಾಶುಕ.

ಬಾಲಕೃಷ್ಣನ ಬಾಯಲ್ಲಿ ಸವಿಯೆನಿಸುವ ಸುಗಂಧವಿದೆ. ಯಾವ ಘಮವದು? ಇನ್ನೇನು, ನವನೀತದ ಘಮಲೇ ಆತನ ಬಾಯುಸಿರಲ್ಲಿ ತೋರುವುದು. ನವನವವಾದ ನವನೀತವೆಂದ ಮೇಲೆ ಹೊಸತನದ ಸೊಗಸು ಅದರ ವಾಸನೆಯಲ್ಲಿರದೇ? ಎಲ್ಲೆಡೆ ಬೆಣ್ಣೆ ಗಿಟ್ಟಿಸಿಕೊಳ್ಳುವ ಚಾತುರ್ಯ ಈ ಬಾಲನದು. ಬೆಣ್ಣೆ ಮೆದ್ದ ಬಾಯಲ್ಲಿ ಬರುವ ಮಾತು ಮಾತ್ರ ಕಳ್ಳತನದ್ದೇ. ಪಳಗಿದ ಕಳ್ಳ; ಮಾತಿನ ಮಲ್ಲ. ಚತುರ-ಚೋರರಲ್ಲಿ ಧುರೀಣ, ಅಗ್ರಗಣ್ಯ. ನುಡಿಯೇ ಹೊರಗೆಡಹುವುದು ಆತನ ಚೌರ್ಯ-ಚಾತುರ್ಯವನ್ನು.

ಇನ್ನಾತನ ನೇತ್ರವೋ? ಕಳ್ಳಳುವಿಗೆ ಪ್ರಸಿದ್ಧವಾದದ್ದು! ಬರೀ ಸದ್ದಲ್ಲ, ಕಪಟದ ಕಣ್ಣೀರನ್ನೇ ಕರೆಯಬಲ್ಲ ಕಣ್ಗಳು, ಅವನವು. ರೋದನ ಮಾಡಿ ಕೆಲಸ ಸಾಧಿಸಿಕೊಳ್ಳುವ ಜಾಣ್ಮೆ ಅವಲ್ಲಿದೆ.

ಮುಖದ ಈ ವಿಶೇಷಗಳಲ್ಲದೆ, ಹೆಜ್ಜೆಯಲ್ಲೂ ವಿಶೇಷವಿದೆ. ಕೋಮಲವಾದ ತಾಂಡವವಾಡುವ ಕಾಲುಗಳು, ಆತನವು. ಕಾಳಿಯ-ಮರ್ದನದ ವೇಳೆ ಕಠೋರವಾದ ನರ್ತನವಾದರೂ, ಎಳಸಿನ ಕುಣಿತದಲ್ಲಿ ಕೋಮಲತೆಯೇ.

ಶ್ಲೋಕದ ನಾಲ್ಕು ಪಾದಗಳು ವದನೇ-ವಚನೇ-ನಯನೇ-ಚರಣೇ ಎಂದು ಮೂರುಮೂರಕ್ಷರಗಳಿಂದಲೇ ಆರಂಭವಾಗುತ್ತವೆ. ಮಿತವಾದ ಅನುಪ್ರಾಸದಿಂದ ಶೋಭಿಸುವ ಪದ್ಯವಿದು.

ಮುದ್ದಿನ ಎಳೆವಯಸ್ಸಿನ ಮಗುವೆಂದರೆ ಮುದ್ದಾಡುವವರೇ ಎಲ್ಲರೂ. ಚೂಟಿಯಾದ ಬಾಲ, ಕಪಟದಿಂದಲೂ ಕೆಲಸ ಸಾಧಿಸಿಕೊಳ್ಳಬಲ್ಲ ಕುಮಾರ. ಈತನು ಆಕರ್ಷಕನೂ ಹೌದು. ಆಶ್ರಯಿಸಿ, ಆತನನ್ನೇ – ಎನ್ನುತ್ತಾನೆ, ಕವಿ.

ವದನೇ ನವನೀತ-ಗಂಧವಾಹಂ
ವಚನೇ ತಸ್ಕರ-ಚಾತುರೀ-ಧುರೀಣಮ್ |
ನಯನೇ ಕುಹನಾಶ್ರುಮಾಶ್ರಯೇಥಾಃ
ಚರಣೇ ಕೋಮಲ-ತಾಂಡವ-ಕುಮಾರಮ್ ||

***

ತನ್ನ ಬಾಲ್ಯದಲ್ಲಿಯೇ ಗೋಪರನ್ನು ಕೃಷ್ಣನು ರಕ್ಷಿಸಿದ ಬಗೆ ಒಂದೆರಡಲ್ಲ. ಯಮುನಾನದಿಯ ದಡದಲ್ಲಲ್ಲವೇ ಕೃಷ್ಣನ ನಾನಾ-ಲೀಲೆಗಳು ನಡೆದದ್ದು?

ಕಾಳಿಯ-ದಮನವಾದ ಬಳಿಕ, ಗೋಪರೂ ಗೋವುಗಳೂ ಹಸಿವು ಬಾಯಾರಿಕೆಗಳಿಂದ ಬಳಲಿದ್ದರಿಂದ, ಯಮುನಾ-ತಟದಲ್ಲೇ ರಾತ್ರಿ ಉಳಿದುಕೊಂಡಿದ್ದರು. ಆಗೊಂದು ಕಾಳ್ಗಿಚ್ಚು ಕಾಣಿಸಿಕೊಂಡಿತು! ಗ್ರೀಷ್ಮದಲ್ಲಿ ದಾವಾಗ್ನಿಯೆಂಬುದು  ಸಾಮಾನ್ಯವೇ ಸರಿ. ಮಲಗಿದ್ದ ಗೋಕುಲವಾಸಿಗಳನ್ನದು ಸುತ್ತುವರಿಯಿತು. ಅವರೆಲ್ಲರನ್ನೂ ಅದು ಸುಟ್ಟುಹಾಕಿಬಿಡುವುದರಲ್ಲಿತ್ತು!

ಥಟ್ಟನೆದ್ದ ಗೋಪರು ಓಡಿಹೋಗಿ ಶ್ರೀಕೃಷ್ಣನಲ್ಲಿ ಶರಣಾದರು. "ಅಮಿತ-ವಿಕ್ರಮನಾದ ಕೃಷ್ಣನೇ, ಈ ಘೋರತಮ-ಕಾಲಾಗ್ನಿಯು ದುಸ್ತರ, ಎಂದರೆ ನಮಗೆ ದಾಟಲಾರದ್ದು. ಕೃಷ್ಣ, ಕೃಷ್ಣ, ಈ ವಹ್ನಿಯು ನಮ್ಮನ್ನು ಸುಡುತ್ತಿದೆ. ನಾವೋ ನಿನ್ನ ಚರಣವನ್ನು ಬಿಟ್ಟುಹೋಗಲಾರೆವು. ಅದೊಂದೇ ನಮಗೆ ಭಯರಹಿತ-ಸ್ಥಾನ. ನಮ್ಮನ್ನು ಕಾಪಾಡು!" - ಎಂದು ಬೇಡಿಕೊಂಡರು. ಆಗ ಅನಂತಶಕ್ತಿ-ಧಾರಿಯಾದ ಆ ಅಗ್ನಿಯನ್ನು ಕೃಷ್ಣನು ಕುಡಿದುಹಾಕಿಬಿಟ್ಟನು. ಹೀಗೆ ಹೇಳುತ್ತದೆ, ಭಾಗವತ ಕಥೆ.

ಗೋಪಾಲಕರ ರಕ್ಷಣೆಗಾಗಿ ಇಂತಹ ಮಹಾಕಾರ್ಯವನ್ನು ಮಾಡಿದ ಕೃಷ್ಣನು ಶರಣಾರ್ಥಿಗಳಿಗೆ ಶರಣ್ಯನಾಗಲಾರನೇ? ಶರಣಾರ್ಥಿಗಳು ಎಂದರೆ ಆಶ್ರಯವನ್ನು ಬೇಡಿ ಬಂದವರು, ನಾವು. ಶರಣ್ಯನೆಂದರೆ ರಕ್ಷಣೆ ಕೊಡುವವ.

ಗೋಪರಿಗಾಗಿ ಅಗ್ನಿಪಾನವನ್ನೇ ಮಾಡಿದವ, ನಮಗೆ ರಕ್ಷಣೆಕೊಡದೆ ಹೋದಾನೇ? ಸಾಧ್ಯವೇ ಇಲ್ಲ, ರಕ್ಷಿಸಿಯೇ ತೀರುವನು.

ನಾಲ್ಕು ಪಾದಗಳ ಆರಂಭದ ದ್ವಿತೀಯಾಕ್ಷರ-ತೃತೀಯಾಕ್ಷರ ಪ್ರಾಸಾಲಂಕಾರವು ಒಂದು ಸೊಗಸು. ಹಾಗೆಯೇ ಗೋಪ-ಗೋಪ, ನಂದ-ನಂದ, ಶರಣ-ಶರಣ್ಯ – ಇವುಗಳಲ್ಲೂ ಅನುಪ್ರಾಸವೇ.

ಅಮುನಾಖಿಲ-ಗೋಪ-ಗೋಪನಾರ್ಥಂ

ಯಮುನಾ-ರೋಧಸಿ ನಂದ-ನಂದನೇನ |

ದಮುನಾ ವನ-ಸಂಭವಃ ಪಪೇ ನಃ

ಕಿಮು ನಾಸೌ ಶರಣಾರ್ಥಿನಾಂ ಶರಣ್ಯಃ ||

ಸೂಚನೆ : 1/11/2025 ರಂದು   ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.