ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ತನ್ನ ಮಕ್ಕಳಿನ್ನೂ ಎಳೆಯರೆಂಬುದನ್ನು ಮನಗಂಡನು. ಎಂದೇ ಅಗ್ನಿಯ ಸ್ತುತಿಯನ್ನು ಮಾಡಿದನು. ಲೋಕಪಾಲಕನೂ ಮಹಾ ತೇಜಸ್ವಿಯೂ ಅದ ಅಗ್ನಿಯನ್ನು, ತನ್ನ ಮಕ್ಕಳನ್ನುಳಿಸಬೇಕೆಂಬ ಉದ್ದೇಶದಿಂದ ಹೀಗೆ ಸ್ತುತಿಸಿದನು:
"ಓ ಅಗ್ನಿಯೇ, ಎಲ್ಲ ಭೂತಗಳೊಳಗೂ ಸಂಚರಿಸತಕ್ಕವನು ನೀನೇ. ಜ್ಞಾನಿಗಳು ನಿನ್ನನ್ನು 'ಒಬ್ಬನೇ' ಎನ್ನುತ್ತಾರೆ (ಎಂದರೆ ಪರಮಾತ್ಮ-ಸ್ವರೂಪನನ್ನಾಗಿ ಒಬ್ಬನೆನ್ನುತ್ತಾರೆ). ನಿನ್ನನ್ನು ಮೂರೆಂದು ಹೇಳುವುದೂ ಉಂಟು (ಆಕಾಶದಲ್ಲಿ ಸೂರ್ಯರೂಪನಾದ ಅಗ್ನಿ, ಭೂಮಿಯಲ್ಲಿ ಬೆಳಗುವ ಬೆಂಕಿ, ಜಠರದೊಳಗಿನ ಪಾಚಕಾಗ್ನಿ). ನಿನ್ನನ್ನು ಎಂಟಾಗಿ ಸಹ ನೋಡುವರು ( ಪಂಚಭೂತಗಳು, ಸೂರ್ಯಚಂದ್ರರು, ಹಾಗೂ ಯಜಮಾನ - ಎಂಬ ಶಿವನ ಅಷ್ಟಮೂರ್ತಿಗಳೆಂದು ಹೆಸರಾದವುಗಳು).
ನಿನ್ನಿಂದಲೇ ವಿಶ್ವವು ಸೃಷ್ಟಿಯಾಗಿದೆಯೆಂದು ಮಹರ್ಷಿಗಳು ಹೇಳುತ್ತಾರೆ. ನೀನಿಲ್ಲದೆ ಜಗತ್ತೇ ನಾಶಹೊಂದಿಬಿಡುವುದಲ್ಲವೇ? ನಿನಗೆ ನಮಸ್ಕಾರ ಮಾಡಿಯೇ ವಿಪ್ರರು ಪತ್ನೀಪುತ್ರರೊಂದಿಗೆ ಸ್ವಕರ್ಮ-ಸಂಪಾದಿತವಾದ ಶಾಶ್ವತ-ಸ್ಥಾನಗಳನ್ನು ಪಡೆಯುವರು.
ಆಕಾಶದಲ್ಲಿ ಮಿಂಚುಗಳಿಂದ ಕೂಡಿರುವ ಮೋಡಗಳು ಸಹ ನೀನೇ ಎನ್ನುವರು. ಪ್ರಲಯಕಾಲದಲ್ಲಿ ನಿನ್ನಿಂದ ಹೊಮ್ಮಿದ ಆಯುಧಗಳೇ ಸಮಸ್ತಭೂತಗಳನ್ನೂ ಸುಡುವುವು. ಓ ಜಾತವೇದನೇ (ಅಗ್ನಿಯೇ), ಈ ವಿಶ್ವವು ನಿನ್ನಿಂದಲೇ ಸೃಷ್ಟವಾಗಿದೆ. ಎಲ್ಲ ಚರಾಚರ ಪ್ರಾಣಿಗಳ ಕರ್ಮಗಳೂ ನಿನ್ನಿಂದಲೇ ವಿಹಿತವಾಗಲ್ಪಟ್ಟಿವೆ. ಜಗತ್ಸೃಷ್ಟಿಯ ಆದಿಯಲ್ಲಿ ಬಂದ ನೀರೆಂಬುದು ನಿನ್ನಿಂದಲೇ ಆದುದು, ಈ ಜಗತ್ತು ನಿಂತಿರುವುದು ನಿನ್ನಿಂದಲೇ.
ಹವ್ಯ-ಕವ್ಯಗಳು ನಿನ್ನಲ್ಲೇ ನೆಲೆಗೊಂಡಿವೆ. ನೀನೇ ದಾಹಕ, ನೀನೇ ಬ್ರಹ್ಮನೂ ಬೃಹಸ್ಪತಿಯೂ ಆಗಿದ್ದೀಯೆ. ನೀನೇ ಅಶ್ವಿನೀ-ದೇವತೆಗಳಿಬ್ಬರು, ನೀನೇ ಮಿತ್ರ, ನೀನೇ ಸೋಮ, ನೀನೇ ವಾಯುವೂ.
ಈ ರೀತಿ ಮಂದಪಾಲನು ಅಗ್ನಿಯನ್ನು ಸ್ತುತಿಸಿದನು. ಅಮಿತವಾದ ತೇಜಸ್ಸುಳ್ಳ ಆ ಮುನಿಯ ವಿಷಯದಲ್ಲಿ ಅಗ್ನಿಯೂ ಸಂತೋಷಗೊಂಡನು. ಪ್ರಸನ್ನವಾದ ಮನಸ್ಸುಳ್ಳವನಾಗಿ ಆತನನ್ನು ಅಗ್ನಿಯು ಕೇಳಿದನು - "ನಿನಗಿಷ್ಟವಾದ ಯಾವ ಕಾರ್ಯವು ನೆರವೇರುವಂತೆ ಮಾಡಲಿ?"
ಕೈಗಳನ್ನು ಜೋಡಿಸಿದ ಮಂದಪಾಲನು ಅಗ್ನಿದೇವನಿಗೆ ಹೇಳಿದನು: "ನೀನು ಖಾಂಡವವನ್ನು ಸುಡುತ್ತಿರುವ ಈ ಸಂದರ್ಭದಲ್ಲಿ ನನ್ನ ಮಕ್ಕಳನ್ನು ಉಳಿಸು." ಎಂದನು. ಅಗ್ನಿಭಗವಾನನು ಅದಕ್ಕೆ ಹಾಗೇ ಆಗಲೆಂದನು. ಮತ್ತು ಖಾಂಡವವನ್ನು ಸುಡುವ ಬಯಕೆಯಿಂದ ಸರಿಯಾಗಿ ಜ್ವಲಿಸಿದನು.
ಇತ್ತ ಅಗ್ನಿಯು ಪ್ರಜ್ವಲಿಸುತ್ತಿದ್ದಾನೆಂದು ಆ ಶಾರ್ಙ್ಗಕ-ಶಿಶುಗಳು ಬಹಳವೇ ವ್ಯಥೆಗೊಂಡವು. ಬಹಳವೇ ಉದ್ವೇಗಕ್ಕೆ ಒಳಗಾದವು. ಮತ್ತು ತಮಗೆ ರಕ್ಷಕರು ಯಾರು? - ಎಂಬುದನ್ನು ತಿಳಿಯದಾದವು. ತನ್ನ ಶಿಶುಗಳು ಹೀಗಾಗಿರುವುದನ್ನು ಕಂಡ ಅವುಗಳ ತಾಯಿ ಜರಿತೆಯೂ ಬಹಳವೇ ದುಃಖಿತಳೂ ಶೋಚನೀಯಳೂ ಆಗಿಬಿಟ್ಟಳು.
ಹಾಗೂ ಹೀಗೆ ಹೇಳಿದಳು: ಇದೋ ಕಾಡನ್ನು ಸುಡುತ್ತಿರುವ ಅಗ್ನಿಯು ಇತ್ತಲೇ ಭಯಂಕರನಾಗಿ ಬರುತ್ತಿದ್ದಾನೆ. ಜಗತ್ತನ್ನೇ ಸುಡುವಂತಿರುವ ಈತನು ನನಗೆ ಅತಿಶಯವಾದ ದುಃಖವನ್ನುಂಟುಮಾಡುತ್ತಿದ್ದಾನೆ. ಇನ್ನೂ ಬುದ್ಧಿಯೇ ಬೆಳೆದಿಲ್ಲದ ಈ ಶಿಶುಗಳು ನನ್ನನ್ನು ಸೆಳೆಯುತ್ತಿವೆ. ಅವುಗಳಿಗೆ ಇನ್ನೂ ರೆಕ್ಕೆಯೂ ಮೂಡಿಲ್ಲ, ಕಾಲುಗಳೂ ಸರಿಯಾಗಿ ಬಂದಿಲ್ಲ. ಹೀಗಾಗಿ ಕಷ್ಟಪಡುತ್ತಿವೆ.
ಮರಗಳನ್ನೇ ತನ್ನ ನಾಲಿಗೆಗಳಿಂದ ನೆಕ್ಕುತ್ತಾ ಈ ಅಗ್ನಿಯಂತೂ ನಮ್ಮನ್ನು ಬೆದರಿಸುತ್ತಲೇ ಬರುತ್ತಿದ್ದಾನೆ.
ರೆಕ್ಕೆ ಹುಟ್ಟಿಲ್ಲದ ಈ ಮರಿಗಳು ಚಲಿಸಲೂ ಆರವಾಗಿವೆ. ಅವನ್ನು ಹೊತ್ತುಕೊಂಡು ದಾಟಿಹೋಗಲು ನಾನು ಅಸಮರ್ಥಳಾಗಿದ್ದೇನೆ. ಅವನ್ನು ಇಲ್ಲೇ ಬಿಟ್ಟೂ ಹೋಗಲಾರೆ, ಹೀಗಾಗಿ ನನ್ನ ಹೃದಯವು ಬಹಳವೇ ನೋಯುತ್ತಿದೆ.