Saturday, November 1, 2025

ಕೃಷ್ಣಕರ್ಣಾಮೃತ 80 ಸುಧಾ-ಸಮುದ್ರದಲ್ಲಿ ಈಜಾಡುವ ಸೊಗಸು (Krishakarnamrta 80)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಭಗವಂತನನ್ನು ಒಲಿಸಿಕೊಳ್ಳುವುದು ಹೇಗೆ? - ಎಂಬ ಪ್ರಶ್ನೆಯು ಯಾರನ್ನು ಕಾಡಿಲ್ಲ?

ಭಗವಂತನೆಂತಹವನು? ನಮ್ಮಂತೆಯೋ ಅಲ್ಲವೋ?

ನಮ್ಮಂತೆಯೇ ಆದರೆ ಆತನೂ ಒಬ್ಬ ಪುರುಷ. ಏಕೆ? ಪುರುಷಾರ್ಥ ಎಂಬ ಪದದ ವಿವರಣೆಯಲ್ಲೇ ಗೊತ್ತಾಗುವಂತೆ, ಪುರುಷನೆಂದರೆ ಜೀವನಲ್ಲವೇ? ಆತನೂ ನಮ್ಮಂತೆಯೇ ಆಗಿಬಿಟ್ಟಲ್ಲಿ ಅವನಿಗೂ ನಮಗೂ ವಿಶೇಷವೇನು ಬಂತು?

ಇದಕ್ಕೆ ಪ್ರತಿಯಾಗಿ, ಆತನು ಕಿಂಚಿತ್ತೂ ನಮ್ಮಂತಲ್ಲ - ಎಂದುಬಿಟ್ಟರೂ ಕಷ್ಟವೇ. ಒಂದು ನಂಟು ಏರ್ಪಡಬೇಕಾದರೆ ಅದೇನೋ ಒಂದು ಸಮಾನ-ಧರ್ಮವಿರಬೇಕಲ್ಲವೇ? ಸ್ವಲ್ಪವಾದರೂ.

ಹೌದು. ಸಾಧರ್ಮ್ಯವಿದೆ. ಜೊತೆಗೆ ವೈಧರ್ಮ್ಯವೂ ಇದೆ. ನಾವು ಪುರುಷರಾದರೆ ಆತನು ಪರಮಪುರುಷ. ಹಾಗೋ? ಹಾಗಾದರೆ ಆತನೆಲ್ಲಿರುವನೆಂಬುದನ್ನು ಹೇಳಿ, ಅಲ್ಲಿಗೇ ಹೋಗಿ ಸ್ನೇಹ ಬೆಳೆಸಿದರಾಯ್ತು - ಎಂದೆನಿಸುತ್ತದಲ್ಲವೇ?

ಆತನ ವಿಳಾಸವೂ ಹೇಳಬಹುದಾದದ್ದೇ. ಆತನೊಂದು ಗುಹೆಯಲ್ಲಿದ್ದಾನೆ; ಅಲ್ಲಿ ಅಡಗಿದ್ದಾನೆ. ಯಾವ ಗುಹೆಯದು? ಎಲ್ಲಿದೆ? ಎಷ್ಟು ದೂರ?

ಎಷ್ಟು ದೂರವೂ ಅಲ್ಲ. ನಮ್ಮೊಳಗೇ ಇರುವಂತಹುದು! ಅದು ನಮ್ಮ ಬುದ್ಧಿಯೆಂಬ ಗುಹೆ, ಅಥವಾ ಹೃದಯವೆಂಬ ಗುಹೆ.  ಹೊರಗಿನದ್ದಾದರೆ ಸರಿ, ಅಲ್ಲಿಗೆ ಪ್ರಯಾಣಿಸಬಹುದು - ದೂರವಾದರೂ ಚಿಂತೆಯಿಲ್ಲ. ಆದರೆ ಒಳಗೇ ಇರುವ ಗುಹೆಯೆಂದರೆ ಹುಡುಕುವುದು ಹೇಗೆ? ಅದಕ್ಕೆ ಕ್ರಮವೇನು? ಹಾಗೂ ಅದು ಯಾರಿಗೆ ಸಾಧ್ಯ?

ಆತ್ಮಜ್ಞರಿಗೆ ಮಾತ್ರವೇ ಸಾಧ್ಯವದು. ಸನಕ ಮುಂತಾದ ಪುರಾಣ-ಪುರುಷರಿಗೆ ಮಾತ್ರವೇ ಸಾಧ್ಯವದು. ಎಷ್ಟಾದರೂ ಯೋಗವಿದ್ಯೆಯಲ್ಲಿ ಪಳಗಿದವರಲ್ಲವೇ ಅವರು? ಹೃದಯ-ಗುಹಾ-ನಿಹಿತನಾದ ಪರಮ-ಪುರುಷನ ಉಪಾಸನೆಯನ್ನು ದಹರವಿದ್ಯಾ – ಎಂಬುದರ ಉಪದೇಶದಲ್ಲಿ ಉಪನಿಷತ್ತು ನಿರೂಪಿಸಿದೆಯಲ್ಲವೇ? ಹೀಗಾಗಿ, ಆತ ಯೋಗಿಗಮ್ಯ, ಯೋಗಗಮ್ಯ.

ನಮಗದು ಅಸಾಧ್ಯವೆನಿಸುವುದಲ್ಲಾ? ಹಾಗಾದರೆ ನಾವೇನು ಮಾಡುವುದು? - ಎಂಬ ಪ್ರಶ್ನೆಗೆ ಒಳ್ಳೆಯ ಉತ್ತರವನ್ನೇ ಕೊಟ್ಟಿದ್ದಾನೆ, ಲೀಲಾಶುಕ. ಆತ್ಮಸಾಧನೆಯನ್ನು ಮಾಡಿಲ್ಲದ ಬಡಪಾಯಿಗಳು ನಾವು. ನಾವು ಏನೋ ಆಟವಾಡಿಕೊಂಡಿರಲಷ್ಟೇ ಬಲ್ಲೆವು - ಎನ್ನುವಿರಾ? ಅಂತಹವರಿಗೇ ಸಲ್ಲತಕ್ಕ ಉತ್ತರ, ಆತನದು.

ನಿಮಗೆ ಜಲ-ಕ್ರೀಡೆ ಇಷ್ಟವಷ್ಟೆ? ಬನ್ನಿ, ಆ ಮಾರ್ಗದಲ್ಲೇ ಗುರಿಮುಟ್ಟಬಹುದು! - ಎನ್ನುತ್ತಾನೆ, ಕವಿ.

ಯಶೋದೆಯ ಶಿಶುವೆಂದರೆ ಕೃಷ್ಣ. ಆತನ ಬಾಲಲೀಲೆಗಳು ಯಾರನ್ನೂ ಆಕರ್ಷಿಸುವಂತಹವು. ಆ ಬಾಲಲೀಲೆಗಳಾದರೂ ಒಂದೇ ಎರಡೇ? ಆ ಬಾಲಲೀಲೆಗಳ ಕಥೆಗಳೇ ಒಂದು ಸಮುದ್ರ. ಅಮೃತ-ಸಮುದ್ರವೇ ಅದು.

ನಿಮಗೆ ಉಪ್ಪುನೀರಿನ ಸಮುದ್ರತೀರದ ಜಲದಲ್ಲಾಡುವ ಆಟವು ಗೊತ್ತಿರಬಹುದು. ಆದರೆ ಕೃಷ್ಣಬಾಲಲೀಲೆಯ ಕಥೆಗಳು ಒಂದು ಸುಧಾ-ಸಿಂಧುವೇ ಸರಿ - ಎಂದರೆ ಅಮೃತ-ಸಮುದ್ರವೇ ಸರಿ.

ಲವಣ-ಸಮುದ್ರದಲ್ಲಿ ಮುಳುಗುವುದು ಸೊಗಸೋ, ಸುಧಾ-ಸಾಗರದಲ್ಲಿ ಮೀಯುವುದು ಸೊಗಸೋ? ಹೇಳಿ. ಕೃಷ್ಣನ ಈ ಕಥಾಮೃತದಲ್ಲಿ ಮನಸಾರ ಮಿಂದೆದ್ದು ಈಜಾಡಿ ನಲಿದಾಡಿದರೆ ಸಾಕು; ಗಹನವಾದ ಯೋಗಮಾರ್ಗದ ಕ್ಲಿಷ್ಟ-ಸಾಧನೆಯಿಂದ ಏನನ್ನು ಆ ಆತ್ಮಜ್ಞರು ಪಡೆದರೋ ಅದನ್ನೇ ನಾವೂ ಪಡೆಯಬಹುದು!

ಕಥೆ ಕೇಳುವುದಕ್ಕಿಂತಲೂ ಸುಲಭೋಪಾಯವೇ? ಪರಮ-ಪುರುಷನೇ ಬಾಲ-ಕೃಷ್ಣನಾಗಿ ಬಂದಿರಲು, ಆತನ ಕಥಾಸ್ವಾದವೂ ಕೊನೆಗೆ ಕಥಾನಾಯಕನ ಉಪಾಸನೆಯೇ ಆಗಿ ಪರಿಣಮಿಸುತ್ತದೆ. ತಪೋ-ಲಭ್ಯವಾದುದನ್ನು ಲೀಲಾ-ಲಭ್ಯವನ್ನಾಗಿ ಮಾಡಿಕೊಡುತ್ತದೆ!

ಶ್ಲೋಕದ ಪೂರ್ವಾರ್ಧವು ಪ್ರಾಚೀನವಾದ ಕಷ್ಟೋಪಾಯವನ್ನೂ, ಉತ್ತರಾರ್ಧವು ನೂತನವಾದ ಸುಲಭೋಪಾಯವನ್ನೂ ನಿರೂಪಿಸುತ್ತವೆ.

ಉಪಾಸತಾಂ ಆತ್ಮವಿದಃ ಪುರಾಣಾಃ

ಪರಂ ಪುಮಾಂಸಂ ನಿಹಿತಂ ಗುಹಾಯಾಂ |

ವಯಂ ಯಶೋದಾ-ಶಿಶು-ಬಾಲ-ಲೀಲಾ-

ಕಥಾ-ಸುಧಾ-ಸಿಂಧುಷು ಲೀಲಯಾಮಃ ||

***

ಕೃಷ್ಣನು ಕುಮಾರನಾದರೂ ದೈವವೇ ಸರಿ. ಆತನನ್ನಲ್ಲವೇ ಆಶ್ರಯಿಸಬೇಕಾದುದು? ಈ ಬಾಲಕೃಷ್ಣನು ಹೇಗಿದ್ದಾನೆ? ಎಂಬುದನ್ನು ಶ್ಲೋಕದ ನಾಲ್ಕು ಪಾದಗಳಲ್ಲಿಯ ನಾಲ್ಕು ಚಿತ್ರಣಗಳಿಂದ ತಿಳಿಸುತ್ತಾನೆ, ಲೀಲಾಶುಕ.

ಬಾಲಕೃಷ್ಣನ ಬಾಯಲ್ಲಿ ಸವಿಯೆನಿಸುವ ಸುಗಂಧವಿದೆ. ಯಾವ ಘಮವದು? ಇನ್ನೇನು, ನವನೀತದ ಘಮಲೇ ಆತನ ಬಾಯುಸಿರಲ್ಲಿ ತೋರುವುದು. ನವನವವಾದ ನವನೀತವೆಂದ ಮೇಲೆ ಹೊಸತನದ ಸೊಗಸು ಅದರ ವಾಸನೆಯಲ್ಲಿರದೇ? ಎಲ್ಲೆಡೆ ಬೆಣ್ಣೆ ಗಿಟ್ಟಿಸಿಕೊಳ್ಳುವ ಚಾತುರ್ಯ ಈ ಬಾಲನದು. ಬೆಣ್ಣೆ ಮೆದ್ದ ಬಾಯಲ್ಲಿ ಬರುವ ಮಾತು ಮಾತ್ರ ಕಳ್ಳತನದ್ದೇ. ಪಳಗಿದ ಕಳ್ಳ; ಮಾತಿನ ಮಲ್ಲ. ಚತುರ-ಚೋರರಲ್ಲಿ ಧುರೀಣ, ಅಗ್ರಗಣ್ಯ. ನುಡಿಯೇ ಹೊರಗೆಡಹುವುದು ಆತನ ಚೌರ್ಯ-ಚಾತುರ್ಯವನ್ನು.

ಇನ್ನಾತನ ನೇತ್ರವೋ? ಕಳ್ಳಳುವಿಗೆ ಪ್ರಸಿದ್ಧವಾದದ್ದು! ಬರೀ ಸದ್ದಲ್ಲ, ಕಪಟದ ಕಣ್ಣೀರನ್ನೇ ಕರೆಯಬಲ್ಲ ಕಣ್ಗಳು, ಅವನವು. ರೋದನ ಮಾಡಿ ಕೆಲಸ ಸಾಧಿಸಿಕೊಳ್ಳುವ ಜಾಣ್ಮೆ ಅವಲ್ಲಿದೆ.

ಮುಖದ ಈ ವಿಶೇಷಗಳಲ್ಲದೆ, ಹೆಜ್ಜೆಯಲ್ಲೂ ವಿಶೇಷವಿದೆ. ಕೋಮಲವಾದ ತಾಂಡವವಾಡುವ ಕಾಲುಗಳು, ಆತನವು. ಕಾಳಿಯ-ಮರ್ದನದ ವೇಳೆ ಕಠೋರವಾದ ನರ್ತನವಾದರೂ, ಎಳಸಿನ ಕುಣಿತದಲ್ಲಿ ಕೋಮಲತೆಯೇ.

ಶ್ಲೋಕದ ನಾಲ್ಕು ಪಾದಗಳು ವದನೇ-ವಚನೇ-ನಯನೇ-ಚರಣೇ ಎಂದು ಮೂರುಮೂರಕ್ಷರಗಳಿಂದಲೇ ಆರಂಭವಾಗುತ್ತವೆ. ಮಿತವಾದ ಅನುಪ್ರಾಸದಿಂದ ಶೋಭಿಸುವ ಪದ್ಯವಿದು.

ಮುದ್ದಿನ ಎಳೆವಯಸ್ಸಿನ ಮಗುವೆಂದರೆ ಮುದ್ದಾಡುವವರೇ ಎಲ್ಲರೂ. ಚೂಟಿಯಾದ ಬಾಲ, ಕಪಟದಿಂದಲೂ ಕೆಲಸ ಸಾಧಿಸಿಕೊಳ್ಳಬಲ್ಲ ಕುಮಾರ. ಈತನು ಆಕರ್ಷಕನೂ ಹೌದು. ಆಶ್ರಯಿಸಿ, ಆತನನ್ನೇ – ಎನ್ನುತ್ತಾನೆ, ಕವಿ.

ವದನೇ ನವನೀತ-ಗಂಧವಾಹಂ
ವಚನೇ ತಸ್ಕರ-ಚಾತುರೀ-ಧುರೀಣಮ್ |
ನಯನೇ ಕುಹನಾಶ್ರುಮಾಶ್ರಯೇಥಾಃ
ಚರಣೇ ಕೋಮಲ-ತಾಂಡವ-ಕುಮಾರಮ್ ||

***

ತನ್ನ ಬಾಲ್ಯದಲ್ಲಿಯೇ ಗೋಪರನ್ನು ಕೃಷ್ಣನು ರಕ್ಷಿಸಿದ ಬಗೆ ಒಂದೆರಡಲ್ಲ. ಯಮುನಾನದಿಯ ದಡದಲ್ಲಲ್ಲವೇ ಕೃಷ್ಣನ ನಾನಾ-ಲೀಲೆಗಳು ನಡೆದದ್ದು?

ಕಾಳಿಯ-ದಮನವಾದ ಬಳಿಕ, ಗೋಪರೂ ಗೋವುಗಳೂ ಹಸಿವು ಬಾಯಾರಿಕೆಗಳಿಂದ ಬಳಲಿದ್ದರಿಂದ, ಯಮುನಾ-ತಟದಲ್ಲೇ ರಾತ್ರಿ ಉಳಿದುಕೊಂಡಿದ್ದರು. ಆಗೊಂದು ಕಾಳ್ಗಿಚ್ಚು ಕಾಣಿಸಿಕೊಂಡಿತು! ಗ್ರೀಷ್ಮದಲ್ಲಿ ದಾವಾಗ್ನಿಯೆಂಬುದು  ಸಾಮಾನ್ಯವೇ ಸರಿ. ಮಲಗಿದ್ದ ಗೋಕುಲವಾಸಿಗಳನ್ನದು ಸುತ್ತುವರಿಯಿತು. ಅವರೆಲ್ಲರನ್ನೂ ಅದು ಸುಟ್ಟುಹಾಕಿಬಿಡುವುದರಲ್ಲಿತ್ತು!

ಥಟ್ಟನೆದ್ದ ಗೋಪರು ಓಡಿಹೋಗಿ ಶ್ರೀಕೃಷ್ಣನಲ್ಲಿ ಶರಣಾದರು. "ಅಮಿತ-ವಿಕ್ರಮನಾದ ಕೃಷ್ಣನೇ, ಈ ಘೋರತಮ-ಕಾಲಾಗ್ನಿಯು ದುಸ್ತರ, ಎಂದರೆ ನಮಗೆ ದಾಟಲಾರದ್ದು. ಕೃಷ್ಣ, ಕೃಷ್ಣ, ಈ ವಹ್ನಿಯು ನಮ್ಮನ್ನು ಸುಡುತ್ತಿದೆ. ನಾವೋ ನಿನ್ನ ಚರಣವನ್ನು ಬಿಟ್ಟುಹೋಗಲಾರೆವು. ಅದೊಂದೇ ನಮಗೆ ಭಯರಹಿತ-ಸ್ಥಾನ. ನಮ್ಮನ್ನು ಕಾಪಾಡು!" - ಎಂದು ಬೇಡಿಕೊಂಡರು. ಆಗ ಅನಂತಶಕ್ತಿ-ಧಾರಿಯಾದ ಆ ಅಗ್ನಿಯನ್ನು ಕೃಷ್ಣನು ಕುಡಿದುಹಾಕಿಬಿಟ್ಟನು. ಹೀಗೆ ಹೇಳುತ್ತದೆ, ಭಾಗವತ ಕಥೆ.

ಗೋಪಾಲಕರ ರಕ್ಷಣೆಗಾಗಿ ಇಂತಹ ಮಹಾಕಾರ್ಯವನ್ನು ಮಾಡಿದ ಕೃಷ್ಣನು ಶರಣಾರ್ಥಿಗಳಿಗೆ ಶರಣ್ಯನಾಗಲಾರನೇ? ಶರಣಾರ್ಥಿಗಳು ಎಂದರೆ ಆಶ್ರಯವನ್ನು ಬೇಡಿ ಬಂದವರು, ನಾವು. ಶರಣ್ಯನೆಂದರೆ ರಕ್ಷಣೆ ಕೊಡುವವ.

ಗೋಪರಿಗಾಗಿ ಅಗ್ನಿಪಾನವನ್ನೇ ಮಾಡಿದವ, ನಮಗೆ ರಕ್ಷಣೆಕೊಡದೆ ಹೋದಾನೇ? ಸಾಧ್ಯವೇ ಇಲ್ಲ, ರಕ್ಷಿಸಿಯೇ ತೀರುವನು.

ನಾಲ್ಕು ಪಾದಗಳ ಆರಂಭದ ದ್ವಿತೀಯಾಕ್ಷರ-ತೃತೀಯಾಕ್ಷರ ಪ್ರಾಸಾಲಂಕಾರವು ಒಂದು ಸೊಗಸು. ಹಾಗೆಯೇ ಗೋಪ-ಗೋಪ, ನಂದ-ನಂದ, ಶರಣ-ಶರಣ್ಯ – ಇವುಗಳಲ್ಲೂ ಅನುಪ್ರಾಸವೇ.

ಅಮುನಾಖಿಲ-ಗೋಪ-ಗೋಪನಾರ್ಥಂ

ಯಮುನಾ-ರೋಧಸಿ ನಂದ-ನಂದನೇನ |

ದಮುನಾ ವನ-ಸಂಭವಃ ಪಪೇ ನಃ

ಕಿಮು ನಾಸೌ ಶರಣಾರ್ಥಿನಾಂ ಶರಣ್ಯಃ ||

ಸೂಚನೆ : 1/11/2025 ರಂದು   ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ. 


Sunday, October 26, 2025

ವ್ಯಾಸ ವೀಕ್ಷಿತ 159 ಹರಿಶ್ಚಂದ್ರನ ಸಾಧನೆಯಿದು (Vyaasa Vikshita 157)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ಸುರಾಜ್ಯಸುವ್ಯವಸ್ಥೆಯೆಂದರೇನೆಂಬುದನ್ನು ನಾರದರು ಯುಧಿಷ್ಠಿರನಿಗೆ ತಿಳಿಸಿಕೊಟ್ಟರಷ್ಟೆ. ಅದಾದ ಮೇಲೆ ಇಂದ್ರಾದಿಗಳ ದಿವ್ಯಸಭೆಗಳ ವೈಭವವನ್ನೂ ತಿಳಿಸಿದರು. ಅದಕ್ಕೆ ಪ್ರತಿಯಾಗಿ ಯುಧಿಷ್ಠಿರನು ತನ್ನ ಕೋರಿಕೆಯೊಂದನ್ನು ಅವರ ಮುಂದಿಟ್ಟನು:

"ಪೂಜ್ಯರೇ, ಯಮನ ಸಭೆಯಲ್ಲಿ ಅನೇಕ ಅರಸರೂ, ವರುಣಸಭೆಯಲ್ಲಿ ಅನೇಕ ನಾಗರೂ, ಕುಬೇರಸಭೆಯಲ್ಲಿ ಯಕ್ಷರಾಕ್ಷಸಾದಿಗಳೂ, ಬ್ರಹ್ಮಸಭೆಯಲ್ಲಿ ಬ್ರಹ್ಮರ್ಷಿಗಳೂ ಪ್ರಧಾನವಾಗಿ ಇರುವರೆಂದು ನಿರೂಪಿಸಿದಿರಿ. ಇಂದ್ರನ ಸಭೆಯಲ್ಲಿ ಅನೇಕ ದೇವತೆಗಳೂ ಗಂಧರ್ವರೂ ಮಹರ್ಷಿಗಳೂ ಇರುವರೆಂದೂ ತಿಳಿಸಿದಿರಿ.

ಆದರೆ ಇಂದ್ರಸಭೆಯನ್ನು ಹೇಳುವಾಗ ಅಲ್ಲಿ ಹರಿಶ್ಚಂದ್ರನಿರುವನೆಂದೂ ಹೇಳಿದಿರಿ. ಅಲ್ಲಿರುವ ರಾಜರ್ಷಿಯೆಂದರೆ ಆತನೊಬ್ಬನೇ. ಇಂದ್ರನೊಂದಿಗೂ ಆತನು ಇರಬಲ್ಲನೆನಿಸುವಂತಹ ಯಾವ ಮಹಾಕಾರ್ಯವನ್ನು ಮಾಡಿದನು, ಅಥವಾ ತಪಸ್ಸನ್ನಾಚರಿಸಿದನು? – ಎಂಬುದನ್ನು ತಾವು ತಿಳಿಸಬೇಕು. ಹಾಗೆಯೇ ಪಿತೃಲೋಕವನ್ನು ಸೇರಿರುವ ನನ್ನ ತಂದೆಯಾದ ಪಾಂಡುವನ್ನು ಸಹ ಯಮಸಭೆಯಲ್ಲಿ ಕಂಡೆನೆಂದಿರಿ. ಕಂಡಾಗ ಆತನು ಏನನ್ನು ಹೇಳಿದನೆಂಬುದನ್ನು ತಿಳಿಸುವಿರಾ, ಮಹಾತ್ಮರೇ? ಅದೆಲ್ಲವನ್ನೂ ತಿಳಿಸುಕೊಳ್ಳಲು ನನಗೆ ಮಹತ್ತಾದ ಕೌತೂಹಲವೇ ಉಂಟಾಗಿದೆ" – ಎಂದನು.

ಆಗ ನಾರದರು, "ನಿನ್ನ ಎರಡೂ ಪ್ರಶ್ನೆಗಳಿಗೆ ಉತ್ತರಕೊಡುವೆ, ಕೇಳು.

ಇಕ್ಷ್ವಾಕುವಂಶದ ತ್ರಿಶಂಕು ಮಹಾರಾಜನಿಗೆ ಸತ್ಯವತಿಯೆಂಬ ಪತ್ನಿಯಿದ್ದಳು. ಅವರ ಪುತ್ರನೇ ಹರಿಶ್ಚಂದ್ರ. ತ್ರಿಶಂಕು ಪುತ್ರನಾದುದರಿಂದಲೇ  ಆತನನ್ನು ತ್ರೈಶಂಕವ ಎಂದೂ ಕರೆಯುತ್ತಾರೆ. ಆತನು ಬಲಶಾಲಿಯಾದ ರಾಜನಾಗಿದ್ದನು. ಎಲ್ಲ ರಾಜರ ಸಮ್ರಾಟ್ ಆತ. ಎಂದೇ ಭೂಮಂಡಲದ ರಾಜರೆಲ್ಲರೂ ಆತನ ಶಾಸನಕ್ಕೆ ತಲೆಬಾಗುವವರೇ.

ಆತನ ರಥದ ಹೆಸರೇ ಜೈತ್ರ. ಎಂದೇ ಅತನು ತನ್ನ ಶಸ್ತ್ರಪ್ರತಾಪದಿಂದ ಸಪ್ತದ್ವೀಪಗಳನ್ನು ಜಯಿಸಿದನು. ಗಿರಿಗಳಿಂದಲೂ ವನಗಳಿಂದಲೂ ತುಂಬಿದ ಭೂಮಿಯನ್ನು ಗೆದ್ದವನಾಗಿ, ಮಹಾಕ್ರತು ಎಂದೆನಿಸುವ ರಾಜಸೂಯ ಯಾಗವನ್ನು ನೆರವೇರಿಸಿದನು.

ಆತನ ಆಜ್ಞೆಯಂತೆ ರಾಜರುಗಳೆಲ್ಲರೂ ಆತನಿಗೆ ಭೂರಿ-ಧನ-ಸಮರ್ಪಣವನ್ನು ಮಾಡಿದರು. ವಿಪ್ರರನ್ನು ಆದರಿಸಿದರು. ಧನಾಪೇಕ್ಷಿಗಳಾದ ಯಾಚಕರಿಗೆ ರಾಜನೂ ಭೂರಿದಾನವನ್ನು - ಅಪೇಕ್ಷಿತವಾದುದಕ್ಕೆ ಐದರಷ್ಟು ದಾನವನ್ನು - ಮಾಡಿದನು. ರಾಜನೂ ವಿಪ್ರರನ್ನು ಸಂತರ್ಪಣದಿಂದಲೂ ರತ್ನರಾಶಿದಾನದಿಂದಲೂ ಸಂತೋಷಗೊಳಿಸಿದನು. ಇತರ ರಾಜರಿಗಿಂತಲೂ ತೇಜಸ್ವಿಯಾಗಿಯೂ ಯಶಸ್ವಿಯಾಗಿಯೂ ವಿರಾಜಿಸಿದನು.

ಈ ಕಾರಣಕ್ಕೇ, ಓ ಯುಧಿಷ್ಠಿರಾ, ಹರಿಶ್ಚಂದ್ರನು ಬೆಳಗಿದನು - ಇನ್ನಿತರ ಸಾವಿರಾರು ರಾಜರುಗಳಿಗಿಂತಲೂ! ಮಹಾಯಜ್ಞವನ್ನು ಹೀಗೆ ಮುಗಿಸಿ, ಪ್ರತಾಪವಂತನಾದ ಹರಿಶ್ಚಂದ್ರನು ಪಟ್ಟಾಭಿಷಿಕ್ತನಾದನು. ಸಹಸ್ರರಾಜರಿಗಿಂತಲೂ ತೇಜಸ್ವಿಯೂ ಯಶಸ್ವಿಯೂ ಆದ್ದರಿಂದಲೇ ಆತನು ಪರಮಶೋಭೆಯಿಂದ ಕೂಡಿದವನಾದನು.

ಮಹಾಯಜ್ಞವನ್ನು ಮುಗಿಸಿದ ಮಹಾಪ್ರತಾಪಿಯಾದ ಆತನಿಗೆ ಸಮ್ರಾಟ್ - ಎಂದು ಪಟ್ಟಾಭಿಷೇಕವನ್ನು ನೆರವೇರಿಸಲಾಯಿತು. ಮಹಾಯಜ್ಞವೆನಿಸುವ ರಾಜಸೂಯವನ್ನು ಯಾರೇ ಆಗಲಿ ಸಾಧಿಸಿದಲ್ಲಿ ಅವರು ಇಂದ್ರನೊಂದಿಗೆ ಸಂತೋಷಪಡತಕ್ಕವರೇ.

ರಣಾಂಗಣದಲ್ಲಿ ಯಾರು ಪಲಾಯನವನ್ನು ಮಾಡದೇ ನಿಧನವನ್ನು ಹೊಂದುವರೋ, ಅವರು ಇಂದ್ರನ ಸದನವನ್ನು ಸೇರುವರು. ಹಾಗೆಯೇ ಯಾರು ತೀವ್ರ-ತಪಸ್ಸನ್ನು ಆಚರಿಸಿ ದೇಹವನ್ನು ತ್ಯಜಿಸುವರೋ, ಅವರೂ ಸಹ ಆತನ ಸ್ಥಾನವನ್ನು ಹೊಂದಿ ತೇಜಸ್ವಿಗಳಾಗಿ ಸದಾ ಬೆಳಗುವರು. ಇದಿಷ್ಟು ಹರಿಶ್ಚಂದ್ರನ ವಿಷಯವಾಯಿತು.

ಇನ್ನು ಪಾಂಡುವಿನ ವಿಷಯವನ್ನು ನೀ ಕೇಳಿದೆಯಲ್ಲವೆ? ಅದನ್ನೂ ಹೇಳುವೆ, ಕೇಳು.

ಹರಿಶ್ಚಂದ್ರನ ಆ ವಿಭವವನ್ನು ಕಂಡ ಪಾಂಡುವು ಆಶ್ಚರ್ಯಚಕಿತನಾಗಿದ್ದನು. ಹಾಗೂ, ನಾನು ಮನುಷ್ಯಲೋಕಕ್ಕೆ ಹೋಗುತ್ತಿರುವೆನೆಂದು ತಿಳಿದವನೇ, ನನಗೊಂದು ಮಾತನ್ನು ಹೇಳಿದನು. ಅದನ್ನು ಹೇಳುವೆ – ಎಂದನು.

ಸೂಚನೆ : 26/10/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ಪ್ರಶ್ನೋತ್ತರ ರತ್ನಮಾಲಿಕೆ 37 (Prasnottara Ratnamalike 37)


ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ ೩೭. ಪ್ರಯತ್ನವನ್ನು ಎಲ್ಲಿ ಮಾಡಬೇಕು?

ವಿದ್ಯಾಭ್ಯಾಸದಲ್ಲಿ, ಒಳ್ಳೆಯ ಔಷಧದಲ್ಲಿ ಮತ್ತು ಸತ್ಪಾತ್ರರಿಗೆ ದಾನಮಾಡುವುದರಲ್ಲಿ.

ನಾವು ನಮ್ಮ ಜೀವನವನ್ನು ಒಳ್ಳೆಯದಾಗಿ ಮಾಡಿಕೊಳ್ಳಬೇಕು ಎಂಬುದಾಗಿ ಬಯಸುತ್ತೇವೆ. ಅದಕ್ಕಾಗಿ ಅನೇಕ ಬಗೆಯಲ್ಲಿ ಪ್ರಯತ್ನವನ್ನೂ ಮಾಡುತ್ತಿರುತ್ತೇವೆ. ಆದರೆ ಎಲ್ಲಿ ಪ್ರಯತ್ನ ಮಾಡಬೇಕು? ಯಾವ ವಿಷಯದಲ್ಲಿ ಮಾಡಬೇಕು? ಎಂಬುದರ ಬಗ್ಗೆ ಸ್ಪಷ್ಟನಿರ್ದೇಶನ ನಮಗೆ ಅತ್ಯಂತವಿರಳ. ಆದರೆ ಇಲ್ಲಿ ಅಂತಹ ಸ್ಪಷ್ಟವಾದ ನಿರ್ದೇಶನ ಇದೆ. ಅಂದರೆ ವಿದ್ಯಾಭ್ಯಾಸದಲ್ಲಿ ಮತ್ತು ಒಳ್ಳೆಯ ಔಷಧದಲ್ಲಿ ಹಾಗೂ ಸತ್ಪಾತ್ರರಿಗೆ ದಾನಮಾಡುವುದರಲ್ಲಿ ನಮ್ಮ ವಿಶೇಷ ಪ್ರಯತ್ನವನ್ನು ಮಾಡಿದರೆ, ಆಗ ನಮ್ಮ ಜೀವನ ಸಫಲ ಎಂದೇ ಅರ್ಥ. ಹಾಗಾಗಿ ಈ ಮೂರು ಸಂಗತಿಗಳು ನಮ್ಮ ಜೀವನವನ್ನು ಪೂರ್ಣಜೀವನವನ್ನಾಗಿಸುವುದಕ್ಕೆ ಇರುವ ಶ್ರೇಷ್ಠಸಾಧನಗಳು ಎಂಬ ಆಶಯ ಈ ಪ್ರಶ್ನೋತ್ತರದಲ್ಲಿ ಇದೆ. ಈ ಮೂರು ಸಂಗತಿಗಳು ನಮ್ಮ ಜೀವನವನ್ನು ಹೇಗೆ ಹದಗೊಳಿಸುತ್ತವೆ? ಎಂಬುದನ್ನು ಚಿಂತಿಸಿಸೋಣ. 

ವಿದ್ಯಾಭ್ಯಾಸ - ವಿದ್ಯೆಯನ್ನು ಅಧ್ಯಯನ ಮಾಡುವುದು. ಇಂದು ಯಾವುದು ವಿದ್ಯೆ? ಎಂಬುದೇ ತಿಳಿಯದ ಸ್ಥಿತಿ ಉಂಟಾಗಿದೆ. ಅದಕ್ಕೆ ಶ್ರೀರಂಗ ಮಹಾಗುರುಗಳು ಈ ಮಾತನ್ನು ಹೇಳುತ್ತಿದ್ದರು "ವಿದ್ಯಾಭ್ಯಾಸವಲ್ಲಪ್ಪ ವಿದ್ಯಾಭಾಸವಾಗಿದೆ" ಎಂದು. ಹಾಗಾದರೆ ವಿದ್ಯೆ ಎಂದರೆ ಯಾವುದು ನಮ್ಮನ್ನು ಜ್ಞಾನದ ಕಡೆ ಕೊಂಡೊಯ್ಯುತ್ತದೆಯೋ, ಅದು. ಮೂಲತಃ ಭಗವಂತನನ್ನೇ ವಿದ್ಯೆ ಎಂಬುದಾಗಿ ಕರೆಯಲಾಗುತ್ತದೆ.  ಭಗವಂತನ ಬಳಿಗೆ ಹೋಗಲು ಇರುವ ಅರಿವಿನ ಸಾಧನ ಯಾವುದೋ ಅದೇ ವಿದ್ಯೆ ಎಂದು ಕರೆಸಿಕೊಳ್ಳುತ್ತದೆ. ಅಂತಹ ವಿದ್ಯೆಯನ್ನು ಅಧ್ಯಯನ ಮಾಡುವಂತವಲ್ಲಿ ನಮ್ಮ ಪ್ರಯತ್ನ ಇರಬೇಕು. ಆಗ ನಮ್ಮ ಜೀವನದ ಗುರಿಯಾದ ಭಗವಂತನ ಸಾಕ್ಷಾತ್ಕಾರವನ್ನು ಪಡೆಯಲು ಸುಲಭಸಾಧ್ಯಎಂದು.

ಇನ್ನೊಂದು ವಿಷಯ ಉತ್ತಮ ಔಷಧ. ನಮ್ಮ ಜೀವನ ವ್ಯಾಪಾರವನ್ನು ಮಾಡುವಾಗ ಈ ದೇಹಕ್ಕೆ ಅನೇಕ ರೋಗಗಳು ಬರುವುವು. ಆ ರೋಗಗಳನ್ನು ಪರಿಹರಿಸುವ ಬೇಕಾದುದು ಅಷ್ಟೇ ಅಗತ್ಯ. ಏಕೆಂದರೆ ನಾವು ಸಾಧನೆ ಮಾಡಬೇಕಾದರೆ ಶರೀರವು ನೀರೋಗವಾಗಿರಬೇಕು. ಬಂದ ರೋಗಗಳನ್ನು ಪರಿಹರಿಸಿಕೊಳ್ಳಬೇಕು. ಹಾಗಾಗಿ ರೋಗಕ್ಕೆ ಸರಿಯಾದ ಔಷಧೋಪಚಾರವನ್ನು ಮಾಡಿಕೊಂಡಾಗ ಶರೀರ ಸೌಖ್ಯವಾಗಿರುತ್ತದೆ. ಅಂತಹ ಶರೀರದಿಂದ ಒಳ್ಳೆಯ ಸಾಧನೆಯನ್ನು ಮಾಡಲು ಸಾಧ್ಯ ಎಂಬುದು ಇದರ ಹಿಂದಿರುವ ತಾತ್ಪರ್ಯ.

ಇನ್ನೊಂದು ಸಂಗತಿ ಎಂದರೆ ಸತ್ಪಾತ್ರದಾನ. ಈಗಾಗಲೇ ಈ ಹಿಂದಿನ ಪ್ರಶ್ನೆಯಲ್ಲಿ ಸತ್ಪಾತ್ರದಾನದ ಬಗ್ಗೆ ಅನೇಕ ಮಾರ್ಮಿಕವಾದ ವಿಷಯಗಳನ್ನು ಚರ್ಚಿಸಲಾಗಿತ್ತು. ನಮ್ಮಲ್ಲಿರುವ ವಸ್ತುಗಳು ಸದುಪಯೋಗವಾಗಬೇಕು. ಅಂದರೆ ಯಾವಾಗ ದಾನವು ನಮ್ಮಿಂದ ಆಗುತ್ತದೆಯೋ ಆಗ ನಾವು ಶುದ್ಧರಾಗುತ್ತೇವೆ. ಅದರ ಪರಿಣಾಮವಾಗಿ ನಮ್ಮಲ್ಲಿ ಒಳ್ಳೆಯ ಪದಾರ್ಥಗಳು ಸೇರಿಕೊಳ್ಳುತ್ತವೆ. ಶುದ್ಧವಾದ ಪದಾರ್ಥಗಳು ಈ   ಶರೀರವನ್ನು ಪಡೆದುಕೊಂಡು ತನ್ಮೂಲಕ ವಿದ್ಯೆಯ ಮೂಲವಾದ ಭಗವಂತನನ್ನು ಸೇರಲು ಅತ್ಯಂತ ಉಪಯುಕ್ತವಾಗುತ್ತವೆ. ಹಾಗಾಗಿ ಸತ್ಪಾತ್ರದಾನವು ಅತ್ಯಂತ ಶ್ರೇಷ್ಠವಾದದ್ದು ಎಂಬುದಾಗಿ ಪರಿಗಣಿತವಾಗಿವೆ. ಆದ್ದರಿಂದ ಈ ಮೂರು ವಿಷಯಗಳಲ್ಲಿ ನಮ್ಮ ನಿರಂತರ ಪ್ರಯತ್ನ ಬಹಳ ಮುಖ್ಯ ಎಂಬ ಸಂಗತಿ ಈ ಪ್ರಶ್ನೋತ್ತರದಲ್ಲಿ ಇದೆ.

ಸೂಚನೆ : 26/10/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Saturday, October 25, 2025

ದುಃಖದಲ್ಲೂ ಸುಖದಲ್ಲೂ ಒಂದೇ ರೀತಿಯಿರುವುದೆಂದರೇನು? (Duhkhadallu Sukhadallu Onde Ritiyiruvudendarenu?)

ಲೇಖಕರು : ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)



ಭಗವದ್ಗೀತೆಯ ಸಾಂಖ್ಯಯೋಗದಲ್ಲಿ ಶ್ರೀಕೃಷ್ಣನು ಸ್ಥಿತಪ್ರಜ್ಞನ ಲಕ್ಷಣಗಳನ್ನು ಅರ್ಜುನನ ಪ್ರಶ್ನೆಗೆ ಉತ್ತರವಾಗಿ ಹೇಳುತ್ತಾನೆ. ಅದರಲ್ಲಿ ಹೇಳುವ ಒಂದು ಮುಖ್ಯ ಲಕ್ಷಣವೆಂದರೆ ದುಃಖದಲ್ಲಿ ಮನಸ್ಸು ಉದ್ವೇಗಗೊಳ್ಳದಿರುವುದೂ ಸುಖ ಬಂದಾಗ ಅದಕ್ಕೆ ಅಂಟಿಕೊಳ್ಳದಿರುವುದೂ ಎಂದು. ಇದೇ ಲಕ್ಷಣವನ್ನು ಹಲವು ಮಹಾತ್ಮರ ಜೀವನದಲ್ಲಿ ನೋಡುತ್ತೇವೆ. 

ಕೃಷ್ಣಾವತಾರದ ಹಿಂದಿನ ಅವತಾರವಾದ ರಾಮನ ಜೀವನವನ್ನು ನೋಡೋಣ. ವಾಸ್ತವವಾಗಿ ಭಗವದ್ಗೀತೆಯೊಡನೆ ರಾಮಾಯಣವನ್ನು ಪಾರಾಯಣಮಾಡಬೇಕೆಂದು ಸಂಪ್ರದಾಯವಿದೆ. ಇದರ ನಂಟನ್ನು ತಿಳಿಹೇಳುತ್ತಾ, ಶ್ರೀರಂಗಮಹಾಗುರುಗಳು ಹೇಳಿರುವುದಿದು: "ಗೀತೆಯು ಹೇಳುವುದಾದರೂ ಏನು? ಆ ಪರಮತತ್ತ್ವವನ್ನೇ. ಅದನ್ನುಪದೇಶಿಸುವವನೂ ನರನ ರಥದಲ್ಲಿರುವ ನಾರಾಯಣ...ರಾಮಾಯಣದಲ್ಲಿ ಪರಮಪುರುಷನ ಕಥೆಯೊಡನೆ ಪ್ರಕೃತಿಯ ಕಥೆಯನ್ನೂ ಸೇರಿಸಿ ಹೆಣೆದಿದ್ದಾರೆ."

ರಾಮಾಯಣದಲ್ಲಿ ರಾಮನಿಗೆ "ನಿನಗೀಗ ಯುವರಾಜನಾಗಿ ಅಭಿಷೇಕವಿಲ್ಲ. ನೀನು ಕಾಡಿಗೆ ಹದಿನಾಲ್ಕುವರ್ಷ ಹೋಗಬೇಕು" ಎಂದು ಆಜ್ಞೆಯಾಗುವುದು ಎಲ್ಲರಿಗೂ ತಿಳಿದೇ ಇದೆ. ಆದರೂ ಅದು ಹೇಗಾಯಿತು? ಅಂತಹ ಕಠೋರವಾದ ಸುದ್ದಿಯನ್ನು ಕೇಳಿದಾಗ ರಾಮನ ಸ್ಥಿತಿ ಹೇಗಿತ್ತು? - ಇದನ್ನು ನೋಡಬೇಕಲ್ಲವೇ?


ಕೈಕೇಯಿಯು ತನ್ನ ಎರಡು ವರಗಳನ್ನು ಕೇಳಿಕೊಂಡಾಗ ದಶರಥನು ಇಲ್ಲವೆಂದು ಹೇಳಲಾಗದೆಹೋದ. ಇನ್ನಿಲ್ಲದ ಪ್ರಯತ್ನಪಟ್ಟು ರಾತ್ರಿಯಿಡೀ ಪರಿಪರಿಯಾಗಿ ಅವಳನ್ನು ಬೇಡಿಕೊಂಡ, ಕೋಪದಿಂದ ಅವಳನ್ನು ಬೈದ. ಯಾವುದಕ್ಕೂ ಅವಳು ಜಗ್ಗಲಿಲ್ಲ. ತನ್ನ ಹಠವನ್ನೇ ಸಾಧಿಸಿದಳು. ಅಷ್ಟರಲ್ಲಿ ಬೆಳಕು ಹರಿದಿತ್ತು. ಇನ್ನೇನು ಪಟ್ಟಾಭಿಷೇಕದ ಕಾರ್ಯಕ್ರಮ ಪ್ರಾರಂಭವಾಗಬೇಕು. ಆಗ ಮಹಾರಾಜನ ಸಾರಥಿಯಾದ ಸುಮಂತ್ರ ಸಂತೋಷದಿಂದ, ಕುಲಪುರೋಹಿತರಾದ ವಸಿಷ್ಠರ ಸಂದೇಶವನ್ನು ತೆಗೆದುಕೊಂಡು ಲಗುಬಗೆಯಿಂದ ದಶರಥನಿದ್ದಲ್ಲಿಗೆ ಹೋದನು.

ಸುಮಂತ್ರನು ಸಹಜತೆಯಿಂದಲೇ ಪಟ್ಟಾಭಿಷೇಕಕ್ಕೆ ಅನುಮತಿ ಕೇಳಿದಾಗ, ದಶರಥನಿಗೆ ಶೋಕ ಉಮ್ಮಳಿಸಿತು. ಎರಡು ಮಾತು ಹೇಳಿ ಬಾಯಿ ಕಟ್ಟಿದ ದಶರಥನ ಸ್ಥಾನದಲ್ಲಿ ಕೈಕೇಯಿಯೇ ಮಾತನಾಡಿದಳು. ರಾಮನನ್ನು ಕರೆತರಲು ಹೇಳಿದಳು. ರಾಮನಾದರೋ, ತಂದೆಯು ಹೇಳಿಕಳುಹಿಸಿರುವನೆಂದು ತಿಳಿದು ಸೀತೆಗೆ ಹೇಳಿ ಅಲ್ಲಿಂದ ಹೊರಟನು. ದಾರಿಯಲ್ಲೆಲ್ಲಾ ಪ್ರಜೆಗಳ ಸಂಭ್ರಮವೇ. ಆದರೆ ಕೈಕೇಯಿಯ ಅಂತಃಪುರಕ್ಕೆ ಹೋದರೆ, ಅಲ್ಲಿ ಕಂಡ ದೃಶ್ಯವೇ ಬೇರೆ.


ಕಳೆಗುಂದಿ ದೈನ್ಯದಿಂದ ಕುಳಿತಿರುವ ತಂದೆಯನ್ನು ಕಂಡ ರಾಮನು ತಳಮಳಗೊಂಡನು. ತನ್ನ ಮೇಲೆ ತಂದೆಗೆ ಕೋಪಬಂದಿದೆಯೇನೋ ಎಂದು ಬಗೆದನು. ತಂದೆಗೆ ಏನಾಗಿದೆ ಎಂದು ತಿಳಿಯಬಯಸಿದಾಗ, ಕೈಕೇಯಿಯೇ ಮಾತನಾಡಿದಳು. ರಾಮನಿಗೆ ಅಪ್ಪನ ಮಾತನ್ನು ನಡೆಸಿಕೊಡಬೇಕೆಂದು ಹೇಳಿದಳು. ಮಹಾರಾಜನ ಇಷ್ಟದ ಪ್ರಕಾರವೇ ತಾನು ನಡೆಯುತ್ತೇನೆಂದು ರಾಮನು ಪ್ರತಿಜ್ಞೆ ಮಾಡಿದಾಗ, ಅವಳು ತನ್ನ ಎರಡು ವರಗಳ ಬಗ್ಗೆ ಹೇಳಿದಳು - ಭರತನಿಗೆ ಪಟ್ಟಾಭಿಷೇಕ ಆಗಬೇಕು ಹಾಗೂ, ರಾಮನು ದಂಡಕಾರಣ್ಯಕ್ಕೆ ಅಂದೇ ಹೊರಡಬೇಕು - ಎಂದು.


ಇಂತಹ ಕಠೋರನುಡಿಗಳನ್ನು ಕೇಳಿಯೂ ರಾಮನಿಗೆ ಇಷ್ಟೂ ಶೋಕವಾಗಲಿಲ್ಲ (ನ ಚೈವ ರಾಮಃ ಪ್ರವಿವೇಶ ಶೋಕಮ್). ಆದರೆ ದಶರಥನು ಪುತ್ರನಿಗೊದಗಿದ ಕಷ್ಟದಿಂದಾಗಿ ಬೆಂದುಹೋದನು. ಮಹಾತ್ಮನಾದ ರಾಮನು ತಾನು ಅರಣ್ಯಕ್ಕೆ ಹೋಗುತ್ತೇನೆಂದು ಸಮಾಧಾನದಿಂದಲೇ ಉತ್ತರಿಸಿ, ಭರತನಿಗೆ ಪಟ್ಟಾಭಿಷೇಕವೆಂದು ತಂದೆಯೇ ಹೇಳಬಹುದಿತ್ತಲ್ಲಾ ಎಂದು ವ್ಯಥೆಪಟ್ಟನು. ಹರ್ಷದಿಂದ ಉಬ್ಬಿದ ಕೈಕೇಯಿಯು ಹೇಳಿದ್ದಾದರೂ ಏನು? "ರಾಮ, ನೀನು ಕಾಡಿಗೆ ಹೊರಡುವವರೆಗೆ ನಿನ್ನ ತಂದೆ ಸ್ನಾನ-ಊಟಗಳನ್ನೂ ಮಾಡುವುದಿಲ್ಲ" ಎಂದು! ಈ ಯಾವ ಚುಚ್ಚುಮಾತನ್ನೂ ಲೆಕ್ಕಿಸದೆ, ತಂದೆಯ ಆಜ್ಞೆಯಂತೆ ವರ್ತಿಸಲು ರಾಮನು ಅನುವಾದನು.


ಮೊದಲಿದ್ದ ಪರಿಸ್ಥಿತಿಯನ್ನೂ ಬದಲಾದ ಪರಿಸ್ಥಿತಿಯನ್ನೂ ಸೂಕ್ಷ್ಮವಾಗಿ ಗಮನಿಸಿದರೆ ನಮಗೆ ಇಲ್ಲಿ ಆಗಿರುವ ಆಘಾತದ ಪರಿಮಾಣ ತಿಳಿಯುತ್ತದೆ. ಪಟ್ಟಾಭಿಷೇಕದ ನಿಶ್ಚಯ ಆಗಿದ್ದು, ಈಗ ಅದು ಇಲ್ಲ ಎಂದಾಗಿದ್ದರೇ ಬಿದ್ದ ಪೆಟ್ಟು ದೊಡ್ಡದು. ಇಲ್ಲವೇ, ಸಾಮಾನ್ಯ ಸ್ಥಿತಿಯಿದ್ದು (ಪಟ್ಟಾಭಿಷೇಕದ ಮಾತಿಲ್ಲದಿದ್ದು) ಈಗ ನಾಡನ್ನು ಬಿಟ್ಟು ಕಾಡಿಗೆ ಹೋಗಬೇಕು ಎಂದಾಗಿದ್ದರೂ ಕಷ್ಟವೇ. ಆದರೆ ಇಲ್ಲೋ ಆಗಿರುವುದು +೧೦೦ರಿಂದ ಸೊನ್ನೆಗೆ ಇಳಿದಿರುವುದಲ್ಲ, ಬದಲಿಗೆ -೧೦೦ಕ್ಕೆ ಇಳಿದಂತಾಗಿದೆ. ಮೊದಲ ರ್‍ಯಾಂಕ್ ಬಂದಿರುವ ಬುದ್ಧಿವಂತ ವಿದ್ಯಾರ್ಥಿಗೆ "ನೀನು ಮೊದಲ ರ್‍ಯಾಂಕ್ ಬಂದಿಲ್ಲ, ಬದಲಿಗೆ ಪರೀಕ್ಷೆಯಲ್ಲಿ ನೀನು ನಪಾಸಾಗಿದ್ದೀಯೆ" ಎಂದು ಹೇಳಿದರೆ, ಎಂತಹ ಆಘಾತವಾದೀತು! .


ಆದರೆ ಶ್ರೀರಾಮ ಸಂಪೂರ್ಣವಾಗಿ ಸಮಾಧಾನದಿಂದಿದ್ದ. ಮುಖದಲ್ಲಿ ಮಾತ್ರವಲ್ಲ, ಆತನಿಗೆ ಮನಸಿನಲ್ಲೂ ಒಂದಿಷ್ಟೂ ತಳಮಳವಾಗಲಿಲ್ಲ. ವಯಸ್ಸಾದ ಮೇಲೆ, ಜೀವನಾನುಭವ ಹೆಚ್ಚಿದಮೇಲೆ ಈ ಸ್ಥಿತಪ್ರಜ್ಞತೆ ಬಂದರೆ, ಅದೇ ಶ್ಲಾಘನೀಯವಾದದ್ದು. ಆದರೆ ಇನ್ನೂ ಹರೆಯದ ವಯಸ್ಸಿನ, ಇನ್ನೂ ಅಷ್ಟೇನೂ ಅನುಭವವಾಗಿಲ್ಲದ ವಯಸ್ಸಿನಲ್ಲಿ ಹೇಗೆ ಇಂತಹ ಸಂಯಮ?

ತನ್ನ ಧರ್ಮದ ಬಗ್ಗೆಯೇ ನೆಟ್ಟಮನಸ್ಸುಳ್ಳವನಾದ್ಧರಿಂದಲೇ ರಾಮನಿಗೆ ಇಂತಹ ಸಮಚಿತ್ತತೆ. ಧರ್ಮಿಷ್ಠನಾದ ತಂದೆಯ ಮಾತನ್ನು ನಡೆಸುವುದೇ ತನ್ನ ಧರ್ಮ ಎಂಬ ನಿಷ್ಕರ್ಷ ಅವನ ಮನಸ್ಸಿನಲ್ಲಿತ್ತು. ಇಂತಹ ಕರ್ಮಪರತೆ-ಧರ್ಮಪರತೆಗಳೂ, ಅದರಿಂದ ಬರುವ ಸ್ಥಿತಪ್ರಜ್ಞತೆಯೂ ಮೇಲ್ಪಂಕ್ತಿಯಲ್ಲವೇ?


ಸೂಚನೆ : 25/10/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ 79 ದಿಗಂಬರ ದರೋಡೆಕೋರ, ಈ ಪೋರ! (Krishakarnamrta 79)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಕೃಷ್ಣನೊಬ್ಬ ದರೋಡೆಗಾರನೆನ್ನುತ್ತದೆ, ಈ ಶ್ಲೋಕ!

ಎಂದೇ, ಊರಿಂದೂರಿಗೆ ಹೋಗುವವರಿಗೆ ಒಂದು ಎಚ್ಚರಿಕೆಯನ್ನು ನೀಡುತ್ತದೆ: ಭೀಮರಥೀ-ನದಿಯ ದಾರಿಯಲ್ಲಿ ಮಾತ್ರ ಹೋಗಬೇಡಿ! - ಎಂದಿಲ್ಲಿ ಹೇಳುತ್ತಿದ್ದಾನೆ, ಲೀಲಾಶುಕ. ಇಂದು ಈ ನದಿಗೆ "ಭೀಮಾ" ಎಂದಷ್ಟೇ ಹೇಳುತ್ತಾರೆ. ಅದು ಮಹಾರಾಷ್ಟ್ರ, ಕರ್ಣಾಟಕ, ತೆಲಂಗಾಣಗಳಲ್ಲಿ ಹರಿದು ಕೃಷ್ಣಾ ನದಿಯನ್ನು ಸೇರಿಕೊಳ್ಳುತ್ತದೆ. ಈ ನದಿಗೇ ಪಂಢರಾಪುರದ ಪರಿಸರದಲ್ಲಿ ಚಂದ್ರಭಾಗಾ ಎಂಬ ಹೆಸರಿದೆ. ಹೀಗೆ ಮೊದಲಿನಿಂದಲೂ ಕೃಷ್ಣನೊಂದಿಗೆ ಜೊತೆಗಾರಿಕೆಯಿದೆ, ಈ ನದಿಗೆ.

ಏಕೆ ಹೋಗಬಾರದು, ಭೀಮರಥಿಯತ್ತ? ಏಕೆಂದರೆ ಅಲ್ಲೊಬ್ಬ ಕಳ್ಳನಿದ್ದಾನೆ. ಕಳ್ಳನೆಂದರೂ ಸಾಮಾನ್ಯನಲ್ಲ. ಆತನೊಬ್ಬ ಧೂರ್ತನೇ ಸರಿ. ಆತನೇನು ಮಾಡುತ್ತಾನೆ? ಹೇಗಿದ್ದಾನೆ ಆತ? - ಎಂಬ ಕುತೂಹಲಗಳೇ?

ಸಾಮಾನ್ಯವಾಗಿ ಕಳ್ಳರು ಹೇಗಿರುತ್ತಾರೆ? ಏನೇನೋ ವೇಷ, ಏನೇನೋ ಬಣ್ಣ ಅವರ ಮೈಮೇಲೆ. ಏಕೆ? ತಮ್ಮನ್ನು ಯಾರೂ ಪತ್ತೆಹಚ್ಚಲಾಗಬಾರದಲ್ಲವೇ? ಅದಕ್ಕೇ.

ಆದರೆ ಈ ಕಳ್ಳ ವಿಶಿಷ್ಟನಾದವನು: ಈತ ದಿಗಂಬರ! ಎಂದರೆ ಮೈಮೇಲೆ ಬಟ್ಟೆಯೇ ಇಲ್ಲ. ಯಾರಿಗೆ ದಿಕ್ಕುಗಳೇ ಅಂಬರವೋ, ಎಂದರೆ ದಿಕ್ಕೇ ಬಟ್ಟೆಯೋ, ಆತನೇ ದಿಗಂಬರ. ಅರ್ಥಾತ್ ಮೈಮೇಲೆ ಬಟ್ಟೆಯೆಂಬುದೇ ಇಲ್ಲದವನು! ಅಷ್ಟೇ ಅಲ್ಲ. ಆತ ನೀಲವರ್ಣದವನು. ತಮಾಲದ ಹಾಗೆ, ಎಂದರೆ ಹೊಂಗೆಯ ಹಾಗೆ ಕಪ್ಪಗಿರುವವ. ಕಳ್ಳರು ಸ್ವಲ್ಪ ಕಪ್ಪಾಗಿರುವುದೇ ಹೆಚ್ಚು. ಅಂತೂ ಈ ತೆರನಾದವನನ್ನು ಯಾರೂ ಕಂಡಿಲ್ಲ!

ಸರಿ, ಆತನೇನು ಖಡ್ಗ-ಹಸ್ತನಾಗಿಯೋ ದಂಡ-ಹಸ್ತನಾಗಿಯೋ ನಿಂತಿದ್ದಾನೇನು? ಹೊಡೆದೋ ಬಡಿದೋ ತನ್ನ ಕಾರ್ಯವನ್ನು ಸಾಧಿಸಿಕೊಳ್ಳುತ್ತಾನೇನು? ಇಲ್ಲ, ಅದೆಲ್ಲ ಏನೂ ಇಲ್ಲ. ಅತ ತನ್ನ ನಿತಂಬ-ಬಿಂಬದ ಮೇಲೆ, ಎಂದರೆ ಸೊಂಟದ ಮೇಲೆ, ಕೈಯನ್ನಿಟ್ಟುಕೊಂಡು ನಿಂತಿದ್ದಾನೆ, ಅಷ್ಟೆ.

ಹಾಗಿದ್ದರೆ ಆತನು ಮಾಡುವುದೇನನ್ನು? ಏನೂ ಇಲ್ಲ. ಏನನ್ನೂ ಮಾಡದೆಯೇ, ನಿಮ್ಮ ವಿತ್ತವನ್ನೇ ಕದಿಯುವವ ಆತ! ನಿಮ್ಮ ಚಿತ್ತವೆಂಬ ವಿತ್ತವನ್ನೇ, ಅರ್ಥಾತ್ ಚಿತ್ತವೆಂಬ ಹಣವನ್ನೇ, ಸೆಳೆದುಕೊಂಡು ಬಿಡುವವ ಆತ.

ನಮ್ಮ ಹಣವನ್ನೇ ಕಿತ್ತುಕೊಂಡರಾದರೂ ವಾಸಿ. ಆದರೆ ಚಿತ್ತವನ್ನೇ ಸೂರೆ ಮಾಡಿದರೆ ನಮ್ಮಲ್ಲಿನ್ನು ಉಳಿಯುವುದೇನು? ಏನೂ ಇಲ್ಲ! ಏನನ್ನೂ ಮಾಡದೆಯೇ ಎಲ್ಲವನ್ನೂ ಲೂಟಿ ಮಾಡುವವನಾದ್ದರಿಂದಲೇ ಆತನನ್ನು ಧೂರ್ತನೆಂದಿರುವುದು!

ಲೋಕದಲ್ಲಿ ಬೇರೆ ಕಳ್ಳರ ಬಗೆಯೇ ಬೇರೆ. ಅವರು ಸಾಯುಧರಾಗಿರುತ್ತಾರೆ, ನನ್ನ ಧನವನ್ನು ಅಪಹರಿಸುತ್ತಾರೆ. ಆದರೆ ಈ ಕಳ್ಳ ಹಾಗಲ್ಲ!

ಈ ಶ್ಲೋಕದ ಭಾವವಿದು: ಕೃಷ್ಣನೇ ಆ ಅಪೂರ್ವ-ಚೋರ. ಕಂಡರೆ ಸಾಕು, ನಮ್ಮ ಮನಸ್ಸನ್ನೇ ಸೂರೆಗೊಳ್ಳುತ್ತಾನೆ, ಅವನು. ಆತನ ಭಂಗಿಯೇ ಸಾಕು. ಸೊಂಟದ ಮೇಲೆ ಕೈಯಿಟ್ಟಿರುವ ಬಗೆಯೇ ಆಕರ್ಷಕ. ಪಂಢರಪುರದ ಕೃಷ್ಣನು ನಿಂತಿರುವುದೂ ಈ ಭಂಗಿಯಲ್ಲೇ ಅಲ್ಲವೇ? ಚಂದ್ರಭಾಗಾ-ತೀರದ ವಿಟ್ಠಲನ ಕಥೆಯೇ ಇದಲ್ಲವೇ?

ಎಷ್ಟು ನೋಡಿದರೂ ಕಣ್ತಣಿಯದ ಸೊಬಗಿನ ಈ ಮೂರ್ತಿಯನ್ನು ಕಂಡವರು ಆತನಿಗೆ ಒಡನೆಯೇ ಮನಸೋಲುತ್ತಾರೆ. ಏನೂ ಮಾಡದೆಯೇ ಚಿತ್ತವನ್ನು ತನ್ನತ್ತ ಸೆಳೆದುಕೊಳ್ಳುವವ, ಈತ.

ಲೀಲಾಶುಕನ ಮಾತನ್ನು ಕೇಳಿ, ಯಾರೀ ವಿಲಕ್ಷಣ-ಚೋರನೆಂದು ಆತನನ್ನು ನೋಡಹೋದಿರೋ, ಅವನಿಗೆ ನೀವೇ ಮನಸೋಲುವಿರಿ. ಅಲ್ಲಿ ಮಾತ್ರ ಹೋಗಬೇಡಿರಿ - ಎಂದು ಹೇಳಿದ್ದಕ್ಕೇ ಕೆಲವರು ಹೋಗಿ ನೋಡುವುದುಂಟು. ಹೋಗಿ ನೋಡಿ - ಎಂದು ಹೇಳುವುದೇ ಕವಿಯ ಆಶಯ. ಹೋಗಬೇಡಿ - ಎಂದು ಹೇಳಿ, "ಹೋಗಿ, ಖಂಡಿತಾ ಬಿಡಬೇಡಿ!" - ಎಂದೇ ಸಂದೇಶ ನೀಡುವ ಕವಿಯ ಜಾಣ್ಮೆ ಇಲ್ಲಿ ಆಸ್ವಾದ್ಯ. ಕೆಲವು ಮಕ್ಕಳಿಗೆ ಮಾಡಬೇಡವೆಂದದ್ದನ್ನೇ ಮಾಡುವುವಲ್ಲವೇ? ಹಾಗೇ ಇಲ್ಲೂ.

ಮಾ ಯಾತ ಪಾಂಥಾಃ ಪಥಿ ಭೀಮರಥ್ಯಾ
ದಿಗಂಬರಃ ಕೋಽಪಿ ತಮಾಲನೀಲಃ |
ವಿನ್ಯಸ್ತ-ಹಸ್ತೋಽಪಿ ನಿತಂಬ-ಬಿಂಬೇ
ಧೂರ್ತಃ ಸಮಾಕರ್ಷತಿ ಚಿತ್ತ-ವಿತ್ತಮ್ ||

***

ಗೋಪ-ಕಿಶೋರನೆಂದರೆ ಬಾಲಕೃಷ್ಣನೆಂದೇ ಅರ್ಥ. ಆತನ ಮೂರ್ತಿಯು ನಮ್ಮ ಕಾಮವನ್ನು ಪೂರೈಸಲಿ ಎನ್ನುತ್ತದೆ ಈ ಶ್ಲೋಕ. ಸಣ್ಣಪುಟ್ಟ ಬಯಕೆಗಳೇ ಕಾಮವಲ್ಲ. ಅತ್ಮಕಾಮ - ಎಂದು ಉಪನಿಷತ್ತು ಹೇಳುವ ಉನ್ನತವಾದ ಅಪೇಕ್ಷೆಯೇ ಅದು. ಪರಾತ್ಪರ-ವಸ್ತುವನ್ನು ಬೇಡಿಕೊಳ್ಳುವುದು ಸಣ್ಣಪುಟ್ಟ ಕಾಮನೆಗಳ ಪೂರ್ತಿಗಾಗಿ ಅಲ್ಲ. ಮಹಾರಾಜನು ಪ್ರಸನ್ನನಾಗಿ, ಅರ್ಧರಾಜ್ಯವನ್ನು ಕೊಡಲೂ ಸಿದ್ಧನಿದ್ದು, "ಏನು ಬೇಕು, ಹೇಳು" ಎಂದರೆ, ಅರ್ಧ ಚಟಾಕು ಸಾಸಿವೆ ಬೇಕಿತ್ತು – ಎನ್ನುವಿರಾ? – ಎಂದು ಶ್ರೀರಂಗಮಹಾಗುರುಗಳು ಉದಾಹರಣೆಗಾಗಿ ಕೇಳಿದುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಎಂದೇ ಎಂತಹ ಅದ್ಭುತ ಈ ಬಾಲಕೃಷ್ಣಮೂರ್ತಿಯೆಂಬುದು ಎಂಬುದನ್ನು ಮೊದಲು ಮನಗಾಣಬೇಕು. "ಅಯ್ಯೋ ಅದನ್ನು ಇಂತಹುದೆಂದು ಹೇಳಲೇ ಆಗದು!" - ಎನ್ನುತ್ತಾನೆ, ಕವಿ. ಎಂದರೆ ಅದರ ಸ್ವರೂಪವು ಸುಜ್ಞೇಯವೇ ಅಲ್ಲ. ಎಂದೇ "ಕಾ ಅಪಿ" ಎನ್ನುವುದು.

ಹಾಗೆಂದು ಹೇಳಿಯೂ, ಇಷ್ಟು ಮಾತ್ರ ಹೇಳಬಹುದು, ಅಥವಾ ಹೇಳಲೇಬೇಕು - ಎಂಬಂತೆ ನಾಲ್ಕು ವಿಶೇಷಗಳನ್ನು ಹೇಳಿದ್ದಾನೆ. ಮೊದಲನೆಯದು ಅದು ಇಡೀ ಜಗತ್ತಿಗೇ ಅಭಿರಾಮವಾದುದು ಎಂಬುದು. ಅಭಿರಾಮವೆಂದರೆ ಸುಂದರ. ಅಭಿರಾಮ-ಸೀಮೆಯೆಂದರೆ ಸೌಂದರ್ಯದ ಎಲ್ಲೆ.

ಅಷ್ಟೇ ಅಲ್ಲ. ಮೂರು ಕಡೆ ಲಭ್ಯವಾದುದು ಆ ಮೂರ್ತಿ. ಅದೂ ಒಂದರ್ಥದಲ್ಲಿ ಸುಲಭವಾಗಿಯೇ ದೊರೆಯುವಂತಹುದು. ಎಲ್ಲೆಲ್ಲಿ? ಮೊದಲನೆಯದು ವೇದ-ವಾಕ್ಕುಗಳ ಶಿರಸ್ಸಿನಲ್ಲಿ. ವೇದವಾಙ್ಮಯದ ಶೀರ್ಷ-ಭಾಗವೆಂದರೆ ಉಪನಿಷತ್ತು ಎಂದರ್ಥ.  ತಲೆಯೆಂಬುದೇ ಶರೀರದ ಅತ್ಯುನ್ನತವಾದ ಭಾಗವಲ್ಲವೇ? ಹಾಗೆ ವೇದವಾಣಿಯ ತುತ್ತತುದಿಯೆಂದರೆ ವೇದಾಂತವೇ. ವೇದಾಂತವೆಂದರೆ ಉಪನಿಷತ್ತೇ. ತಲೆಯು ಜ್ಞಾನಭಾಗವೆನಿಸಿಕೊಳ್ಳುವುದಲ್ಲವೇ? ಹಾಗೆಯೇ ಉಪನಿಷತ್ತಿಗಾದರೂ ಜ್ಞಾನಕಾಂಡವೆಂದೇ ಹೆಸರು. ಹೀಗೆ ಉಪನಿಷದ್-ವೇದ್ಯನು ನಮ್ಮ ಕೃಷ್ಣನು – ಎನ್ನುವುದು ಇಲ್ಲಿಯ ಭಾವ. ಇದು ಮೊದಲನೆಯದು.

ಎರಡನೆಯದಾಗಿ ಯೋಗ-ವಿದ್ಯೆಯನ್ನು ಬಲ್ಲವರ ಹೃದಯದಲ್ಲಿ ಕಾಣಿಸಿಕೊಳ್ಳುವವನು, ಶ್ರೀಕೃಷ್ಣ.

ಮೊದಲನೆಯದಕ್ಕೆ ವಿದ್ವತ್ತು ಬೇಕು. ಎರಡನೆಯದಕ್ಕೆ ಯೋಗಜ್ಞನಾದ ಗುರುವಿನ ಮಾರ್ಗದರ್ಶನ ಬೇಕು. ಇದಕ್ಕೂ ಹಿರಿದಾದ ಸಾಧನೆಯೇ ಬೇಕು.

ಮೂರನೆಯದೇ ನಿಜವಾಗಿ ಸುಲಭವೆನ್ನಿಸತಕ್ಕದ್ದು. ವ್ರಜ-ಸ್ತ್ರೀಯರ ಪಾದಾಂಬುಜದಲ್ಲಿ. ಎಂದರೆ ಗೋಪಾಂಗನೆಯರ ಚರಣದಲ್ಲಿ. ಗೋಪಿಕೆಯರ ಭಾಗ್ಯವೆಂದರೆ ಕೃಷ್ಣನ ಸಾಂನಿಧ್ಯ-ಸಲಿಗೆಗಳು. ಸನಿಹವಿರುವೆಡೆಯಲ್ಲಿ ಕಲಹವೂ, ಕಲಹವಿರುವೆಡೆ ಕ್ಷಮಾ-ಯಾಚನವೂ ಇರುವಂತಹುದೇ. ಕ್ಷಮೆ ಕೇಳುವುದೆಂದರೆ ಕಾಲಿಗೆ ಬೀಳುವುದೇ ತಾನೇ? ಗೋಪಿಕೆಯರ ಕಾಲಿಗೆ ಕೃಷ್ಣನೇ ಬೀಳುವ ಪ್ರಸಂಗಗಳೂ ಇಲ್ಲದಿಲ್ಲ!

ಎಂದೇ ಈ ಮೂರೆಡೆಗಳಲ್ಲಿ ಕೃಷ್ಣನನ್ನು ಕಾಣಬಹುದು - ಎನ್ನುತ್ತಾನೆ, ಕವಿ.

ಯಾ ಕಾಪಿ ಸರ್ವ-ಜಗತಾಮ್ ಅಭಿರಾಮ-ಸೀಮಾ

ಕಾಮಾಯ ನೋ ಭವತು ಗೋಪ-ಕಿಶೋರ-ಮೂರ್ತಿಃ |

ಯಾ ಶೇಖರೇ ಶ್ರುತಿ-ಗಿರಾಂ ಹೃದಿ ಯೋಗ-ಭಾಜಾಂ

ಪಾದಾಂಬುಜೇ ಚ ಸುಲಭಾ ವ್ರಜ-ಸುಂದರೀಣಾಮ್|| 

ಸೂಚನೆ : 25/10/2025 ರಂದು   ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Wednesday, October 22, 2025

ವ್ಯಾಸ ವೀಕ್ಷಿತ 158 ಇಂದ್ರ-ಯಮ-ವರುಣ-ಕುಬೇರ-ಬ್ರಹ್ಮರ ಸಭೆಗಳು (Vyaasa Vikshita 158)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ನಾರದರ ಮಾತುಗಳನ್ನು ಆಲಿಸಿದ ಯುಧಿಷ್ಠಿರನಿಗೆ ಸಂತೋಷವಾಯಿತು. ಅವರ ಪ್ರವಚನಕ್ಕೆ ತನ್ನ ಪ್ರಶಂಸೆಯನ್ನು ಸೂಚಿಸಿದನು. ಮುಹೂರ್ತಕಾಲವಾದ ಮೇಲೆ ಮತ್ತೆ ಅವರಲ್ಲಿಗೆ ಹೋದನು. ಶಾಂತರಾಗಿ ಅವರು ಕುಳಿತಿರುವುದನ್ನು ಕಂಡನು. ಮಹಾತೇಜಸ್ವಿಯಾದ ಆತನು ರಾಜರುಗಳ ಸಾಂನಿಧ್ಯದಲ್ಲೇ ಈ ರೀತಿಯಾಗಿ ಅವರನ್ನು ತನ್ನ ಸಭೆಯ ವಿಶೇಷತೆಯನ್ನು ಕುರಿತಾಗಿ ಪ್ರಶ್ನಿಸಿದನು.

"ಮನೋವೇಗದಿಂದ ಸದಾ ಸಂಚರಿಸುತ್ತಿರುವ ತಾವು, ಬ್ರಹ್ಮಸೃಷ್ಟಿಯಲ್ಲಿಯ ಬಹುವಿಧವಾದ ಬಹುದೇಶಗಳನ್ನು ಕಂಡೇ ಇರುತ್ತೀರಿ. ಎಂದೇ ನನಗೆ ಕುತುಕವಿದೆ. ಈ ಪರಿಯ ಸಭೆಯನ್ನು ಯಾವುದನ್ನಾದರೂ ಈ ಮೊದಲು ಕಂಡಿರುವಿರೇ? ಅಥವಾ ಇದಕ್ಕಿಂತಲೂ ಉತ್ಕೃಷ್ಟವಾದ ಸಭೆಯನ್ನೇನಾದರೂ ಕಂಡಿರುವಿರಾ? ಇದನ್ನು ತಿಳಿಯಬೇಕೆಂಬ ಕುತೂಹಲ. ತಾವದನ್ನು ತಿಳಿಸಿಕೊಡಬೇಕು" ಎಂದನು.

ಧರ್ಮರಾಜನ ಆ ನುಡಿಯನ್ನು ಕೇಳಿ, ಮಧುರವಾದ ವಾಣಿಯಿಂದ ಆಗ ನಾರದರು ಮುಗುಳ್ನಗೆಯೊಡನೆ ಹೇಳಿದರು:

"ಪಾಂಡವನೇ, ಮಣಿಮಯವಾದ ಈ ನಿನ್ನ ಸಭೆ ಯಂತಹ ಸಭೆಯನ್ನು ಯಾವ ಮನುಷ್ಯರಲ್ಲೂ ನಾ ಕಂಡಿಲ್ಲ. ಪಿತೃರಾಜನೆನಿಸುವ ಯಮನ ಸಭೆ, ಧೀಮಂತನಾದ ವರುಣನ ಸಭೆ, ಇಂದ್ರನ ಸಭೆ, ಕೈಲಾಸವಾಸಿಯೆನಿಸುವ ಕುಬೇರನ ಸಭೆ - ಇವೆಲ್ಲಾ ಉಂಟು. ಅವೆಲ್ಲವನ್ನೂ ಕಂಡಿದ್ದೇನೆ.

ಹಾಗೆಯೇ ಎಲ್ಲಾ ಆಯಾಸವನ್ನೂ ಕಳೆಯತಕ್ಕ ಬ್ರಹ್ಮನ ಸಭೆಯುಂಟು. ಅದಾದರೋ ದಿವ್ಯ-ಅದಿವ್ಯವೆನಿಸುವ ಭೋಗಗಳನ್ನೆರಡನ್ನೂ ಹೊಂದಿರುವಂತಹುದು. ನಾನಾರೂಪಗಳಿಂದ ಅಲಂಕೃತವಾದದ್ದು, ಅದು. ಅಲ್ಲದೆ, ದೇವತೆಗಳು, ಪಿತೃಗಣಗಳು, ಸಾಧ್ಯರು, ಯಾಜಕರು, ನಿಯತಾತ್ಮರಾದ (ಎಂದರೆ ಮನೋನಿಗ್ರಹವನ್ನು ಸಾಧಿಸಿರತಕ್ಕ) ಮುನಿಗಳ ಗಣಗಳು - ಇವರುಗಳಿಂದ ಸೇವಿಸಲ್ಪಟ್ಟದ್ದು ಅದು. ಉತ್ತಮವಾದ ದಕ್ಷಿಣಾ-ಪ್ರದಾನಗಳಿಂದ ಸಹಿತವಾದ ವೈದಿಕ-ಯಜ್ಞಗಳು ನಡೆಯುವ ಸಭೆಯದು.

ಆ ಬಗ್ಗೆ ಕೇಳಿ ತಿಳಿದುಕೊಳ್ಳುವ ಕುತೂಹಲವು ನಿನಗಿದ್ದರೆ ಹೇಳುವೆ ಕೇಳು" ಎಂಬುದಾಗಿ.

ನಾರದರು ಹೀಗೆ ಹೇಳಲು, ತನ್ನ ಸಹೋದರರೊಂದಿಗೂ, ಬ್ರಾಹ್ಮಣ-ಶ್ರೇಷ್ಠರೊಂದಿಗೂ ಕೂಡಿದವನಾಗಿ, ಮಹಾಮನಸ್ಕನಾದ ಯುಧಿಷ್ಠಿರನು ಕೈಜೋಡಿಸಿ ಹೀಗೆ ಹೇಳಿದನು:

"ಪೂಜ್ಯರೇ, ಆ ಸಭೆಗಳೆಲ್ಲವನ್ನೂ ಕುರಿತು  ಹೇಳಿರಿ. ನಾವು ಕೇಳಲು ಆಸೆಯುಳ್ಳವರಾಗಿದ್ದೇವೆ. ಆ ಸಭೆಗಳ ನಿರ್ಮಾಣವು ಯಾವ ದ್ರವ್ಯಗಳಿಂದಾಗಿರುವುದು? ಅವುಗಳ ಉದ್ದವೇನು, ಅಗಲವೇನು? ಆ ಸಭೆಯಲ್ಲಿ ಯಾರು ಯಾರು ಪಿತಾಮಹನೆನಿಸುವ ಆ ಬ್ರಹ್ಮನನ್ನು ಉಪಾಸಿಸುತ್ತಾರೆ? ದೇವರಾಜನಾದ ಇಂದ್ರ, ವೈವಸ್ವತನಾದ (ಎಂದರೆ ವಿವಸ್ವಂತನ ಪುತ್ರನಾದ) ಯಮ, ವರುಣ ಹಾಗೂ ಕುಬೇರ - ಇವರುಗಳ ಸಭೆಯಲ್ಲೂ ಯಾರು ಯಾರು ಅವರನ್ನು ಸೇವಿಸುತ್ತಾರೆ?

ಬ್ರಹ್ಮರ್ಷಿಯೇ, ಇದನ್ನೆಲ್ಲವನ್ನೂ ಯಥೋಚಿತವಾಗಿ ವಿವರಿಸುವುದಾದರೆ ನಾವೆಲ್ಲರೂ ಒಟ್ಟಿಗೇ ಕೇಳಲು ಬಯಸುತ್ತೇವೆ. ನಮಗೆ ಹೆಚ್ಚಾದ ಕುತೂಹಲವೇ ಇದೆ ಈ ಬಗ್ಗೆ" ಎಂದು.

ಯುಧಿಷ್ಠಿರನು ಹೀಗೆ ಹೇಳಲು ನಾರದರು ಹೇಳಿದರು "ರಾಜನೇ ಆ ದಿವ್ಯಸಭೆಗಳೆಲ್ಲವನ್ನೂ ಕುರಿತು ಹೇಳುವೆ, ಕೇಳೋಣವಾಗಲಿ" ಎಂದರು.

ದಿವ್ಯವಾದ ಆ ಎಲ್ಲ ಸಭೆಗಳನ್ನು ಸುವಿಸ್ತೃತವಾಗಿ ವರ್ಣಿಸಿದರು. ನಂಬಲೇ ಅಸಾಧ್ಯವೆನಿಸುವ ಅನೇಕ ವೈಶಿಷ್ಟ್ಯಗಳಿಂದ ಅವು ಕೂಡಿದ್ದವು. ಅವರ ಆ ವರ್ಣನೆಗಳೆಲ್ಲಾ ಮುಗಿದ ಮೇಲೆ ಯುಧಿಷ್ಠಿರನು ಒಂದು ಪ್ರಶ್ನೆಯನ್ನು ನಾರದರ ಮುಂದಿಟ್ಟನು.

ಸೂಚನೆ : 19/10/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ಪ್ರಶ್ನೋತ್ತರ ರತ್ನಮಾಲಿಕೆ 36 (Prasnottara Ratnamalike 36)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೩೬. ಮರಣದ ಪರ್ಯಂತ ಶೂಲದಂತೆ ಚುಚ್ಚುವುದು ಯಾವುದು?

ಉತ್ತರ - ಹುದುಗಿದ ಪಾಪ.

ಈ ಪ್ರಕೃತಪ್ರಶ್ನೆಯಲ್ಲಿ ವಿವೇಚಿಸಬೇಕಾದ ವಿಷಯಗಳು ಇಷ್ಟು - ಪಾಪ ಹೇಗೆ ಮರಣಪರ್ಯಂತವಾಗಿ ನಮ್ಮನ್ನು ದುಃಖಕ್ಕೆ ಈಡಾಗಿಸುತ್ತದೆ? ಎಂಬುದಾಗಿ. ಈ ಪ್ರಶ್ನೆಯಲ್ಲಿ ಬರುವ ಹುದುಗಿದ ಪಾಪ ಅಥವಾ ಪ್ರಚ್ಛನ್ನಪಾಪ ಎಂಬುದು ನಮ್ಮನ್ನು ಚುಚ್ಚುವಂತದ್ದು ಎಂಬುದಾಗಿ ಹೇಳಿದೆ. ಪಾಪ ಎಂಬುದು ಎರಡು ವಿಧ ಎಂದು ಹೇಳಿದಂತಾಯಿತು. ಅವು ಪ್ರಚ್ಛನ್ನಪಾಪ ಮತ್ತು ಪ್ರಕಟಪಾಪ ಎಂಬುದಾಗಿ. ಪಾಪ ಎಂದರೆ ದುಷ್ಟಕರ್ಮದ ಫಲ. ಪಾಪ ಅಥವಾ ಪುಣ್ಯವಾಗಲಿ ನಮ್ಮ ಆತ್ಮದಲ್ಲಿ ಇರುತ್ತದೆ. ಕಾಲ ಬಂದಾಗ ಅದು ತನ್ನ ಕಾರ್ಯವನ್ನು ಆರಂಭಿಸುತ್ತದೆ. ಆ ಆ ಪಾಪದ ಪರಿಣಾಮವಾಗಿ ಆ ವ್ಯಕ್ತಿಯು ದುಷ್ಟ ಕಾರ್ಯಗಳಲ್ಲಿ ಮತ್ತೆ ಪ್ರವರ್ತನಾಗುತ್ತಾನೆ. ಅಂದರೆ ಪಾಪದ ಫಲವು ದುಷ್ಪಲವೇ ಆಗಿರುತ್ತದೆ. ಮಾಡಿದ ಕರ್ಮವು ಫಲವನ್ನು ಅಗತ್ಯವಾಗಿ ನೀಡಲೇಬೇಕಾಗುತ್ತದೆ. ಅದು ಪಾಪಕರ್ಮದ ಪಕ್ವತೆಯನ್ನು ಅವಲಂಬಿಸಿರುತ್ತದೆ. ಯಾವಾಗ ಕಾಲವು ಪಕ್ವವಾಗುತ್ತದೆಯೋ ಆಗ ಅದು ಫಲವನ್ನು ನೀಡುತ್ತದೆ. ಪಕ್ವವಾಗುವ ತನಕ ಅಡಗಿ ಅಥವಾ ಹುದುಗಿ ಇರುತ್ತದೆ. ಅದನ್ನೇ ಪ್ರಚ್ಛನ್ನಪಾಪ ಅಥವಾ ಹುದುಗಿದ ಪಾಪ ಎಂಬುದಾಗಿ ಕರೆಯಬಹುದು. 


ಸಾಮಾನ್ಯವಾಗಿ ಕರ್ಮವನ್ನು ದೃಢಕರ್ಮ, ಅದೃಢಕರ್ಮ ಮತ್ತು ಮಿಶ್ರಕರ್ಮ ಎಂಬುದಾಗಿ ಮೂರಾಗಿ ವಿಭಾಗಿಸಲಾಗುತ್ತದೆ. ಯಾವ ಕರ್ಮದ ಫಲವನ್ನು ನಾವು ಅನುಭವಿಸಿಯೇ ತೀರಬೇಕೋ ಅದು ದೃಢಕರ್ಮ. ಯಾವ ಕರ್ಮದ ಫಲವನ್ನು ಬದಲಿಸಿ ಅಥವಾ ಇಲ್ಲವಾಗಿಸಿ ಅನುಭವಿಸದಂತೆ ಮಾಡಬಹುದೋ ಅದು ಅದೃಢಕರ್ಮ ಎಂದು. ಇನ್ನೊಂದು ಕರ್ಮ ದೃಢಾದೃಢ. ಅದು ಫಲವನ್ನು ಕೊಡಲು ಆರಂಭಿಸಿದ್ದರೂ, ಅನುಭವಿಸಲೂ ಬಹುದು ಅಥವಾ ಅನುಭವಿಸಂತೆ ಮಾಡಲೂಬಹುದು. ಇನ್ನೊಂದು ಬಗೆಯಲ್ಲಿ ಇದನ್ನೇ ಸಂಚಿತಕರ್ಮ ಮತ್ತು ಆಗಾಮಿಕರ್ಮ ಎಂಬುದಾಗಿ ಎರಡಾಗಿಯೂ ವಿಭಾಗಿಸಲಾಗುತ್ತದೆ. ಯಾವುದು ಫಲವನ್ನು ಕೊಡಲು ಆರಂಭವಾಗಿದ್ದು, ಪರಿವರ್ತಿಸಲೂ ಅಸಾಧ್ಯವೋ ಅದು ಸಂಚಿತಕರ್ಮ. ಅಲ್ಲೂ ಸತ್ಕರ್ಮ ಮತ್ತು ಪಾಪಕರ್ಮ ಎಂದೂ ವಿಭಾಗವುಂಟು. ಇನ್ನೂ ಫಲವನ್ನು ಕೊಡಬೇಕಾದದ್ದು ಆಗಮಿ ಕರ್ಮ. ಇಲ್ಲೂ ಸತ್ಕರ್ಮ ಮತ್ತು ಪಾಪಕರ್ಮ ಎಂಬ ವಿಭಾಗ ಉಂಟು. ಇಲ್ಲಿ ಹೇಳಿರುವ ಪಾಪಕರ್ಮವನ್ನೇ ಬದುಕಿನ ಪಾಪ ಎಂಬುದಾಗಿ ಕರೆಯಬಹುದು. ಇವು ನಮ್ಮನ್ನು ಕಾಡಿಸುತ್ತಾ ಇರುತ್ತವೆ. ಅದು ನಮಗೆ ಅರಿವಿಗೆ ಬರದ ರೀತಿಯಲ್ಲಿ ಇರುತ್ತದೆ. ನಾವು ಇರುವ ತನಕ ಇರುತ್ತದೆ. ಕೆಲವೊಮ್ಮೆ ಮರಣ ತನಕ ಅಲ್ಲ, ಮರಣದ ಅನಂತರ ಮುಂದಿನ ಜನ್ಮಕ್ಕೂ ಕಾರಣವಾಗಬಹುದು. ಹಾಗಾಗಿ ಈ ಪಾಪವು ಅತ್ಯಂತ ಭಯಾನಕವಾದದ್ದು ಎಂಬುದಾಗಿ ಪರಿಗಣಿತವಾಗುತ್ತದೆ ಎಂಬ ಅಭಿಪ್ರಾಯವನ್ನು ಈ ಪ್ರಶ್ನೋತ್ತರದಲ್ಲಿ ತಿಳಿಸಲಾಗಿದೆ. ಮರಣ ಪರ್ಯಂತವೂ ನಮ್ಮನ್ನು ಗೊತ್ತಿಲ್ಲದಂತೆ - ಅರಿವಿಗೆ ಬಾರದಂತೆ ಬಾಧಿಸುತ್ತಿರುವ ವಿಷಯ ಯಾವುದುಂಟೋ ಅದನ್ನೇ ಪ್ರಚ್ಛನ್ನಪಾಪ ಎಂಬುದಾಗಿ ಇಲ್ಲಿ ಗುರುತಿಸಲಾಗಿದೆ. ವ್ಯಕ್ತಪಾಪವಾದರೆ ಅದನ್ನು ನಾವು  ಪವಿತ್ರ, ಔಷಧ, ಜಪ, ಪೂಜಾ ಇತ್ಯಾದಿಗಳಿಂದ ಪರಿಹರಿಸಲು ಸಾಧ್ಯ. ಆದರೆ ಹುದುಗಿದ ಕರ್ಮ ಯಾವುದಿದೆಯೋ ಅದು ನಮ್ಮನ್ನು ಗೊತ್ತಿಲ್ಲದಂತೆ ಕಾಡಿಸುತ್ತಾ ಇರುತ್ತದೆ. ಹಾಗಾಗಿ ಇದನ್ನು 'ಶೂಲದಂತೆ' ಎಂದು ಹೇಳಲಾಗಿದೆ. ಇದರ ಪರಿಹಾರ ಅಸಾಧ್ಯ. ಅದರ ಅನುಭವ ಮಾತ್ರ ಸಾಧ್ಯ - ಅನಿವಾರ್ಯ ಎಂಬ ವಿಷಯ ಈ ಪ್ರಶ್ನೋತ್ತರದಲ್ಲಿ ಅಡಕವಾಗಿದೆ.


ಸೂಚನೆ : 19/10/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Sunday, October 19, 2025

ಅಷ್ಟಾಕ್ಷರೀ - 78 ದೀಪಾತ್ ದೀಪಾಂತರಂ ಯಥಾ (Astakshari 78)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಇದೋ ಬಂದಿತು ದೀಪೋತ್ಸವ, ಈ ಬಾರಿಯ ಮಹಾದೀಪೋತ್ಸವ!

೨೦೨೫ರ ಅಯೋಧ್ಯಾದೀಪೋತ್ಸವವು (ಅಕ್ಟೋಬರ್ ೧೯) ಗಿನ್ನಿಸ್ ದಾಖಲೆಗಳಲ್ಲಿ ಸೇರಲಿರುವುದು. ಏಕೆ? 

ನಿಮಗೆ ಹದಿನಾಲ್ಕರ ಮಗ್ಗಿ ಬರುತ್ತದೆಯೇ? ಇದೋ ನೋಡಿ. ರಾವಣ ಸಂಹಾರದೊಂದಿಗೆ ಹದಿನಾಲ್ಕು ವರ್ಷ ವನವಾಸ ಮುಗಿಸಿ ಬಂದರಲ್ಲವೇ ರಾಮ-ಸೀತೆ-ಲಕ್ಷ್ಮಣರು ಅಯೋಧ್ಯೆಗೆ? ಹಿಂದಿರುಗಿ ಬಂದಂದು ಅದೆಷ್ಟು ಸಂಭ್ರಮವಿದ್ದಿತೋ!

ಈ ಬಾರಿ ೨೮ ಲಕ್ಷ ದೀಪಗಳು; ಸರಯೂನದೀತೀರದ ೫೬ ಘಟ್ಟಗಳಲ್ಲಿ (೧೪*೨, ೧೪*೪)! ಈ ಪ್ರಮಾಣದ ಜಗಮಗಾಯಿಸುವ ದೀಪಗಳ ಹಬ್ಬವು ವಿಶ್ವದ ಇತಿಹಾಸದಲ್ಲೇ ಇದ್ದಿರಲಾರದು. ರಾಷ್ಟ್ರವೇ ಸಂಭ್ರಮಿಸುವ ಹಬ್ಬವಿದು. ಅಂದಲ್ಲಿಯ ದೀಪಮಾಲೆಗಳೇನು, ನದಿಯಲ್ಲಿ ಅವುಗಳ ಪ್ರತಿಫಲನವೇನು, ಮಂತ್ರ-ಸ್ತೋತ್ರ-ಘೋಷಗಳೇನು - ಎಲ್ಲವೂ ಕಣ್ಣು-ಕಿವಿಗಳಿಗೆ ಹಬ್ಬವೇ!

ಇಲ್ಲಿರಲಿ, ಅಮೆರಿಕದ ನ್ಯೂಯಾರ್ಕ್-ನ್ಯೂಜರ್ಸಿ-ಪೆನ್ಸಿಲ್ವೇನಿಯಾಗಳಲ್ಲೂ ಇದರಾಚರಣೆಗಾಗಿ ರಜೆಯುಂಟು. ನಮ್ಮ ಸಂಸ್ಕೃತಿಯೊಳಗೇ ಜನಿಸಿದ ಬೌದ್ಧ-ಜೈನ-ಸಿಕ್ಖಮತಗಳಲ್ಲೂ ಇದರ ಆಚರಣೆಯುಂಟು. 

ಏನು ದೀಪಾವಲಿಯೆಂದರೆ? ಆವಲಿಯೆಂದರೆ ಸಾಲು. ದೀಪಗಳ ಸಾಲೇ ದೀಪಾವಲಿ. ಕಾರ್ತಿಕಮಾಸವೇ ದೀಪಗಳನ್ನು ಬೆಳಗಿಸುವ ಮಾಸ. ಮಾಸದ ಕೊನೆಯಲ್ಲಿ ಶಿವದೀಪೋತ್ಸವ/ವಿಷ್ಣುದೀಪೋತ್ಸವಗಳು. ದೀಪಾವಲಿಯು ನಾಲ್ಕೈದು ದಿನಗಳ ಹಬ್ಬ. ವಿಷ್ಣು-ಲಕ್ಷ್ಮೀ-ಶಿವ-ಯಮ-ಕುಬೇರ ಮುಂತಾದವರಿಗಿಲ್ಲಿ ಬೆಳಕಿನಾರತಿಯುಂಟು. ಮದ್ದಿನ ಪಟಾಕಿಗಳ ಬಾಣ-ಬಿರುಸುಗಳ ಬೆಳಕು-ಸದ್ದುಗಳ ಸಡಗರವೆಲ್ಲೆಡೆಯುಂಟು. 

ತ್ರಯೋದಶಿಯಂದು ಯಮಪ್ರೀತಿಗಾಗಿ ಮನೆಯಾಚೆ ಹಚ್ಚುವ ದೀಪಗಳು ಅಪಮೃತ್ಯುನಿವಾರಕ. ಚತುರ್ದಶಿ-ಅಮಾವಾಸ್ಯೆಗಳ ರಾತ್ರಿ ಉರಿಯುವ ದೀಪಿಕೆ(ಕೊಳ್ಳಿ)ಗಳ ಉಜ್ಜ್ವಲಜ್ಯೋತಿಸ್ಸಿನಿಂದ ಪಿತೃಗಳಿಗೆ ಸದ್ಗತಿಪ್ರಾಪ್ತಿ .ಅಮಾವಾಸ್ಯೆಯಂದಂತೂ ಮನೆತುಂಬ ದೀಪಗಳು. ಪಾಡ್ಯಮಿಯಂದು ಬಲೀಂದ್ರಪೂಜೆಯಲ್ಲಿ ಧೂಪ-ದೀಪ-ನೈವೇದ್ಯಗಳು. ಅಮಾವಾಸ್ಯೆಯ ಕಗ್ಗತ್ತಲ ರಾತ್ರಿಯಲ್ಲಿ ಬೆಳಗುವ ಬೆಳಕುಗಳ ಸಾಲು ನಯನೋತ್ಸವವೇ ಸರಿ. 

ನಿತ್ಯಗಟ್ಟಲೆಯಲ್ಲೂ ಭಾರತೀಯರಲ್ಲಿ ದೀಪ ಹಚ್ಚದ ಮನೆಯುಂಟೇ? ಪೀಡಾಪರಿಹಾರಕ್ಕಾಗಿ ಎಳ್ಳೆಣ್ಣೆಯ ದೀಪ; ಅಭ್ಯುದಯ-ನಿಃಶ್ರೇಯಸಗಳಿಗಾಗಿ ತುಪ್ಪದ ದೀಪ. 

ದೀಪವು ಜ್ಞಾನದ ಪ್ರತೀಕ. ಇದರ ವಿರುದ್ಧವಾದ ತಮಸ್ಸೆಂದರೆ ಕತ್ತಲೆಯೂ ಅಜ್ಞಾನವೂ ಆಗುವುದು. ತಮಸ್ಸಿನಿಂದ ಜ್ಯೋತಿಸ್ಸಿನತ್ತ ಒಯ್ಯೆಂಬುದೇ ಭಾರತೀಯರೆಲ್ಲರ ನಿತ್ಯಪ್ರಾರ್ಥನೆ. ತಮಸ್ಸನ್ನೇ ಪ್ರೀತಿಸುವವರೆಂದರೆ ಭೂತ-ಪ್ರೇತಗಳು, ಗೂಬೆ-ಜಿರಲೆಗಳು, ಕಳ್ಳ-ಕಾಕರುಗಳು. ಹಚ್ಚಿದ ದೀಪವನ್ನು ಆರಿಸುವುದಂತೂ ಅತ್ಯಂತ ಅಸಂಸ್ಕೃತರ ಲಕ್ಷಣವೇ ಸರಿ. 

ಭಗವಂತನೇ ಮೊಟ್ಟಮೊದಲ ದೀಪ. ಜ್ಯೋತಿಸ್ಸುಗಳಿಗೂ ಆತನು ಜ್ಯೋತಿಸ್ಸು – ಎನ್ನುತ್ತದೆ ಗೀತೆ. ಭಗವಂತನಿಗೆ ಬೆಳಗುವ ದೀಪವು ಅಂಗುಷ್ಠ-ಪರ್ವದಷ್ಟಿರಬೇಕು, ಮಲ್ಲಿಗೆಯ ಮೊಗ್ಗಿನಂತಿರಬೇಕು – ಎಂದು ಶ್ರೀರಂಗಮಹಾಗುರುಗಳು ತಿಳಿಸಿರುವರು.

ಈಚೆಗೆ ದೇವಸ್ಥಾನಗಳಲ್ಲಿ ಹಾಗೂ ಮನೆಗಳಲ್ಲೂ ಪುಳಕ್-ಪುಳಕ್ ಎಂದು ಹತ್ತಿ-ಆರಿ-ಹತ್ತಿ-ಆರುವ ವಿದ್ಯುದ್ದೀಪಗಳನ್ನು ಹಚ್ಚುವುದುಂಟು. ಅದಾಗಲಿ, ಕಣ್ಣುಕೋರೈಸುವ ದೀಪವಾಗಲಿ, ಪ್ರಶಸ್ತವಲ್ಲ; ಮೊದಲನೆಯದು ಚಾಂಚಲ್ಯವರ್ಧಕ; ಎರಡನೆಯದು ನೇತ್ರ-ಚಿತ್ತಗಳಿಗೆ ಶಮವನ್ನು ತರುವುದಲ್ಲ - ಎಂಬ ಮರ್ಮಗಳನ್ನೂ ಅವರು ತಿಳಿಸಿದ್ದರು.

ದೇವದೇವನಾದ ಜಗತ್ಪತಿಯೊಬ್ಬನೇ ಜ್ಯೋತಿರ್ಮಯನೆಂದಲ್ಲ. ಎಲ್ಲ ದೇವತೆಗಳೂ ಬೆಳಗುವವರೇ. ದೇವ ಎಂಬ ಪದದ ಮೂಲ ಸಂಸ್ಕೃತದ ದಿವ್-ಧಾತು. ಬೆಳಗುವುದು ಎಂದದರರ್ಥ. ದೇವರೆನ್ನಲು ಗ್ರೀಕ್-ಲ್ಯಾಟಿನ್-ಗಳಲ್ಲಿರುವ ಥಿಯೋಸ್(theos) ಹಾಗೂ ಡೇಯುಸ್ (deus) ಎಂಬ ಪದಗಳು ಸಹ ಸಂಸ್ಕೃತಜನ್ಯಗಳೇ! 

ಬೈಬಲ್ಲಿನಲ್ಲೂ ದೇವರನ್ನು ಬೆಳಕೆಂದು ಕರೆದಿದೆ, ಸರಿಯೇ. ಮ್ಯಾಕ್‍ಡೋನೆಲ್ ಎಂಬ ಸಂಸ್ಕೃತ-ವಿದ್ವಾಂಸನು ಹೇಳಿರುವಂತೆ, ಭಗವಂತನನ್ನು ಬೆಳಕೆಂದು ಜಗತ್ತಿನ ಇತಿಹಾಸದಲ್ಲೇ ಮೊಟ್ಟಮೊದಲು ಸಾರಿರುವುದು ಹಿಂದೂಗಳ ವೇದಗಳೇ.

ನರಕಚತುರ್ದಶಿಯಂದು ಆಚರಿಸುವ ಹಬ್ಬವೂ ಅಂತರ್ಜ್ಯೋತಿಯನ್ನು ಆರಾಧಿಸುವ ಹಬ್ಬವೇ. ನರಕಾಸುರನ ನಗರವು ಪ್ರಾಗ್‍-ಜ್ಯೋತಿಷ. ಪ್ರಾಗ್‍ಜ್ಯೋತಿಷವೆಂದರೆ ಹೊರಬೆಳಕು, ಅರ್ಥಾತ್ ಇಂದ್ರಿಯಗಳ ಬೆಳಕು; ಶ್ರೀಕೃಷ್ಣನು ಪ್ರತ್ಯಗ್‍-ಜ್ಯೋತಿಸ್ಸು - ಎಂದರೆ ಒಳಬೆಳಕು. ಇಂದ್ರಿಯಗಳ ಬೆಳಕಿನಲ್ಲಿ/ಇಂದ್ರಿಯ-ಸುಖಗಳಲ್ಲಿ ಮಾತ್ರವೇ ರಮಿಸುವವರು ತುಚ್ಛರು; ಕುತ್ಸಿತ ನರನನ್ನೇ "ನರಕ"ನೆನ್ನುವುದು; ಮಾನವನ ಮಾನವತ್ವವಿರುವುದಾದರೂ, ಮನುಷ್ಯಜನ್ಮಕ್ಕೇ ಮೀಸಲಾಗಿರುವ ಅಂತರ್ಜ್ಯೋತಿಯ ದರ್ಶನದ ಪರಮಸುಖವನ್ನು ಅನುಭವಿಸುವುದರಲ್ಲೇ - ಎಂಬಿವೆಲ್ಲವನ್ನೂ ಶ್ರೀರಂಗಮಹಾಗುರುಗಳು ವಿವರಿಸಿರುವರು.

ದೀಪವನ್ನು ಹಚ್ಚುವುದು ದೇವರಿಗೇನೋ ಉಪಕಾರವಾಗಲೆಂದಲ್ಲ. ಭಗವಂತನೇ ದೀಪ-ಸ್ವರೂಪನೆಂಬ ತತ್ತ್ವವನ್ನು ನಾವು ಜ್ಞಾಪಿಸಿಕೊಳ್ಳುವಂತೆ ನಮ್ಮ ಮೂಲದ ಸ್ಮರಣೆಯುಂಟುಮಾಡಿಸುವ ಅಭಿಜ್ಞಾನವದು. ಬೆಳಗುವ ಅಗ್ನಿಯಿಂದ ಬೆಳಕಿನ ಕಿಡಿಗಳು ಹೊಮ್ಮುವಂತೆ, ಭಗವಂತನಿಂದಲೇ ಹೊಮ್ಮಿದ ಜೀವಗಳು ನಾವು. ಹೀಗೆ ನಾವು ನಮ್ಮ ಮೂಲದತ್ತ ಸಾಗುವಂತಾಗಿಸುವ ದೀಪಗಳು ಹೀಗೆ ಜ್ಞಾಪಕಗಳೂ ಕಾರಕಗಳೂ ಹೌದು.

ಭಗವಂತನಿಗಾಗಿ ಹಚ್ಚಿದ ಆ ಒಂದು ಮೂಲದೀಪದಿಂದಲೇ ಉಳಿದೆಲ್ಲ ದೀಪಗಳನ್ನೂ ಹಚ್ಚಿಕೊಳ್ಳುವುದು: ಇದನ್ನೇ ದೀಪಾದ್ ದೀಪಾಂತರಂ ಯಥಾ - ಎನ್ನುವುದು. ಎಲ್ಲರ ಮನೆಗಳೂ ಮನಗಳೂ ಹೊರಗೆ ಹರ್ಷೋಲ್ಲಾಸಗಳಿಂದಲೂ, ಮತ್ತೂ ಮಿಗಿಲಾಗಿ ಒಳಗೆ ಆತ್ಮಜ್ಯೋತಿಯ ಪ್ರಕಾಶದಿಂದಲೂ, ಬೆಳಗಲೆಂದು ಪ್ರಾರ್ಥಿಸೋಣವೇ?

ಸೂಚನೆ: 18/10//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ 78 ಕತ್ತಲಾಗಿಸಿ ಬೆಣ್ಣೆ ಕದ್ದವನೆಮ್ಮ ಕತ್ತಲ ಕಳೆಯಲಿ (Krishakarnamrta 78)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಗೋಪಾಲಬಾಲನು ಕಾಪಾಡಲಿ. ಎಂತಹವನು ಈ ಬಾಲಗೋಪಾಲ? ಅದನ್ನು ಒಂದು ಪ್ರಸಂಗದ ಮೂಲಕ ಕವಿ ಹೇಳಿದ್ದಾನೆ. ಬೆಳಗ್ಗೆ ಬೇಗನೇಳುತ್ತಲೇ ಕೃಷ್ಣನ ಚೇಷ್ಟಿತವೇನೆಂಬುದನ್ನೂ ಚಿತ್ರಿಸಿದ್ದಾನೆ.

ಹಿಂದೆಯೆಲ್ಲಾ ಹಳ್ಳಿಗಳಲ್ಲಿ - ಪಟ್ಟಣಗಳಲ್ಲಿ ಸಹ - ಬೆಳಗಾಗುತ್ತಲೇ ಮೊಸರನ್ನು ಗಡಿಗೆಗೆ ಹಾಕಿಕೊಂಡು, ಕಡೆಗೋಲಿಗೆ ಹಗ್ಗವನ್ನು ಕಟ್ಟಿ ಮೊಸರನ್ನು ಕಡೆಯುತ್ತಿದ್ದರು. ಎಡಗೈಲೊಮ್ಮೆ ಬಲಗೈಲೊಮ್ಮೆ ಹಗ್ಗವನ್ನು ಸೆಳೆದು ಹೀಗೆ ಮಥನ ಮಾಡುತ್ತಿದ್ದಾಗ ಗೇರ್ ಗೇರ್ ಎಂಬ ಸದ್ದು ಬರುತ್ತಿತ್ತು.

ಮಕ್ಕಳು ಮಲಗಲು ಲಾಲಿ ಹೇಳುವುದುಂಟಲ್ಲವೇ? ಮಲಗಲೊಂದು ದನಿಯಾದರೆ ಏಳಲೂ ಒಂದು ದನಿ! ಬೆಣ್ಣೆಯೆಂದರೆ ಹಾತೊರೆವ ಪುಟ್ಟಕೃಷ್ಣನಿಗೆ ಹೀಗೆ ದಧಿಯನ್ನು, ಎಂದರೆ ಮೊಸರನ್ನು, ಕಡೆಯುವ ಧ್ವನಿಗೇ ಎಚ್ಚರವಾಗಿಬಿಡುತ್ತಿತ್ತು!

ನವವಾಗಿ, ಎಂದರೆ ಹೊಸತಾಗಿ, ತೆಗೆದ ಬೆಣ್ಣೆಗೆ ತಾನೆ ನವ-ನೀತವೆನ್ನುವುದು? ಹೀಗೆ ದಧಿ-ಮಥನದ ಈ ನಿನಾದದಿಂದಲೇ, ಎಂದರೆ ಸದ್ದಿನಿಂದಲೇ, ಕೃಷ್ಣನಿಗೆ ಎಚ್ಚರವಾಗುತ್ತಿದ್ದುದು.

ಹೀಗೆ ನಿದ್ದೆ ಕಳೆದ ಕೃಷ್ಣನು ಮಾಡುತ್ತಿದ್ದುದೇನು? ನಿಭೃತವಾದ - ಅರ್ಥಾತ್ ಸದ್ದೇ ಇಲ್ಲದ - ಹೆಜ್ಜೆಗಳಿಂದ ನಡೆಯುತ್ತ ಪ್ರವೇಶಿಸುತ್ತಿದ್ದನು - ವಲ್ಲವಿಯರ ಅಗಾರಗಳನ್ನು, ಎಂದರೆ ಗೊಲ್ಲತಿಯರ ಮನೆಗಳನ್ನು.

ವಾಸ್ತವವಾಗಿ ಆಗಿನ್ನೂ ಬೆಳಗಿನ ಜಾವ. ಆ ಪ್ರಭಾತಸಮಯದಲ್ಲಿ ಇನ್ನೂ ಒಂದಿಷ್ಟು ಕತ್ತಲೆಯೇ. ಎಂದೇ ವಲ್ಲವಿಯರು ದೀಪಗಳನ್ನು ಅಲ್ಲಲ್ಲಿ ಹಚ್ಚಿಟ್ಟುಕೊಂಡಿದ್ದು ತಮ್ಮಕೆಲಸಗಳನ್ನು ಮಾಡಿಕೊಳ್ಳುತ್ತಿರುವರು. ಮೊಸರು ಕಡೆಯುವಾಗಲೂ ದೀಪಗಳು ಜೊತೆಗಿರತಕ್ಕವೇ. ಕೃಷ್ಣನು ಸ್ವಲ್ಪ ಕಪ್ಪೇ ಆದರೂ, ಆ ಬೆಳಕುಗಳಿರುವಾಗ ಕಾಣುವುದೇ ಇಲ್ಲವೆಂದೇನಲ್ಲವಲ್ಲ? ಅವಿದ್ದರೆ ತಾನು ಸಿಕ್ಕಿಹಾಕಿಕೊಳ್ಳಬಹುದೇನೋ? – ಎಂಬ ಎಚ್ಚರ ಈ ಪೋರನಿಗಿರದೇ? ಎಳೆಯವನಾದರೂ ಅಷ್ಟು ಜಾಣತನಕ್ಕೇನೂ ಕಡಿಮೆಯಿಲ್ಲ, ಈ ಕಳ್ಳಹೆಜ್ಜೆಯ ಕೃಷ್ಣನಿಗೆ.

ಎಲ್ಲ ಕಳ್ಳರಿಗೂ ತಮ್ಮ ಕೆಲಸವನ್ನು ಅರಂಭಿಸುವ ಮುಂಚೆ ಎರಡು ಎಚ್ಚರಗಳು ಇದ್ದೇ ಇರುತ್ತವೆ. ತಾನು ಹೇಗೆ ಯಾರ ಕಣ್ಣಿಗೂ ಬೀಳಬಾರದು, ಹಾಗೂ ಸಿಕ್ಕಿಕೊಳ್ಳಲೇಬಾರದು - ಎಂಬುದೊಂದು. ಮತ್ತು ಎರಡನೆಯದು, ತಾನು ಸಿಕ್ಕಿಬೀಳುವಂತಾದರೂ ಥಟ್ಟನೆ ತಪ್ಪಿಸಿಕೊಂಡು ಓಡಿಹೋಗುವುದು ಹೇಗೆ? - ಎಂಬುದು. ಎಂದೇ ಈ ಅತಿಜಾಣ ಕೃಷ್ಣನೇನು ಮಾಡಿದ್ದಾನೆ? ಉಫ್- ಎಂದು ದೀಪಗಳನ್ನು ಊದಿ ಆರಿಸಿದ್ದಾನೆ. ತನ್ನ ಬಾಯುಸಿರಿನಿಂದ ಬೇಗಬೇಗನೆ ನಂದಿಸಿದ್ದಾನೆ, ದೀಪಗಳನ್ನು.

ಎಷ್ಟಾದರೂ ಬಂದ ಕೆಲಸ ಬೇಗನೆ ಆಗಬೇಕಲ್ಲವೇ? ಇನ್ನೂ ಎಷ್ಟೆಷ್ಟು ಕಡೆ ಹೋಗಿ ಮಾಡಬೇಕಾದ ಇಂತಹವೇ ಮುಖ್ಯಕೆಲಸಗಳಿವೆಯೋ! ವಿಳಂಬವಾಗಿಬಿಟ್ಟಲ್ಲಿ, ಬೆಳಕು ಹರಿದಷ್ಟೂ ಸಿಕ್ಕಿಕೊಳ್ಳುವ ಸಂಭವವೂ ಹೆಚ್ಚೇ ಆಗುವುದಲ್ಲವೇ ಎಷ್ಟಾದರೂ?

ಈ ಸಂದರ್ಭದಲ್ಲೂ ಕವಿಯ ಮನಶ್ಚಕ್ಷುಸ್ಸಿಗೆ - ಎಂದರೆ ಮನಸ್ಸೆಂಬ ಕಣ್ಣಿಗೆ - ಮುದ್ದು ಬಾಲನ ಮುದ್ದು ಮುಖ ಗೋಚರವಾಗಿದೆ. ಹೇಗಿದೆ ಅದು? ಕಮಲದಂತಿರುವ ಮುಖವದು! ಅದರಿಂದ ಹೊಮ್ಮಿದ ಸಮೀರದಿಂದ ದೀಪವನ್ನಾರಿಸಿದ್ದಾನೆ. ಸಮೀರವೆಂದರೆ ವಾಯು.

ಆಮೇಲಿನ್ನೇನು? ದೀಪ ನಂದಿಸಿ ನವನೀತವನ್ನು ಕಬಳಿಸಿದ್ದಾನೆ.

ಹಾಗೆ ಗಬಗಬನೆ ಬೆಣ್ಣೆ ಮುಕ್ಕಿರುವ ಈ ಮುದ್ದುಮೊಗದ ಗೋಪಾಲಬಾಲನು ಕಾಪಾಡಲಿ - ಎಂದು ಶ್ಲೋಕವನ್ನು ಮುಗಿಸಿದ್ದಾನೆ, ಲೀಲಾಶುಕ.

ಶ್ಲೋಕ ಹೀಗಿದೆ:
ದಧಿ-ಮಥನ-ನಿನಾದೈಃ ತ್ಯಕ್ತ-ನಿದ್ರಃ ಪ್ರಭಾತೇ /
ನಿಭೃತ-ಪದಂ ಅಗಾರಂ ವಲ್ಲವೀನಾಂ ಪ್ರವಿಷ್ಟಃ |
ಮುಖಕಮಲ-ಸಮೀರೈಃ ಆಶು ನಿರ್ವಾಪ್ಯ ದೀಪಾನ್ /
ಕವಳಿತ-ನವನೀತಃ ಪಾತು ಗೋಪಾಲಬಾಲಃ ||

*****

ಕೃಷ್ಣನ ಆಟ ನಮ್ಮನ್ನು ಪೋಷಿಸಲಿ - ಎಂದು ಕೇಳಿಕೊಳ್ಳುತ್ತಾನೆ, ಕವಿ ಲೀಲಾಶುಕ. ಯಾವ ಆಟವದು? ಅದು ಕಟಾಕ್ಷ-ಕೇಲಿ, ಓರೆಗಣ್ಣಿನ ಆಟ. ಆ ಕಟಾಕ್ಷದ ಹಿಂದಿರುವುದು ಆತನ ಕಾರುಣ್ಯ. ಆತನ ಕರುಣಾ-ಕಟಾಕ್ಷವು ರಕ್ಷಕವು ಮಾತ್ರವಲ್ಲ, ಪೋಷಕವೂ ಹೌದು.

ಎಂತಹವನು ನಮ್ಮ ಕೃಷ್ಣ? ಆತನು ದಯಾರಾಶಿ. ರಾಶಿಯೇನು, ಸಮುದ್ರವೇ. ದಯೆಯೊಂದೇ ಆತನಲ್ಲಿರುವುದು. ಎಂದೇ ದಯೈಕಸಿಂಧು ಅವನು. ಸಿಂಧುವೆಂಬ ನದಿಯುಂಟು. ಸಿಂಧುವೆಂದರೆ ಸಮುದ್ರವೂ ಹೌದಲ್ಲವೇ? ಇಲ್ಲಿ ಎರಡನೆಯದೇ, ಸಾಗರವೆಂಬ ಅರ್ಥವೇ, ಅನ್ವಿತ. ಹಾಗಾಗಿ, ಪುಣ್ಯಶಾಲಿಗಳ ಮಟ್ಟಿಗೆ ಆತನು ದಯಾಮಾತ್ರಸಾಗರನೇ.

ಆದರೆ ಅಯ್ಯೋ, ಅತನು ನಮ್ಮ ಮನಸ್ಸಿನ ಮೇಲೆ ಹೇಗೆ ತಾನೆ ಕೆಲಸಮಾಡಿಯಾನು? ಸಾಧ್ಯವಾಗದು. ಏಕೆ? ನಮ್ಮ ಚಿತ್ತವು ತೃಷ್ಣೆಯಿಂದ ಆತುರವಾಗಿದೆ. ಆತುರವೆಂದರೆ ಬೇಗಬೇಗನೆ - ಎಂಬ ಅರ್ಥ, ಕನ್ನಡದಲ್ಲಿ. ಸಂಸ್ಕೃತದಲ್ಲಿಯ ಅರ್ಥವೇ ಬೇರೆ. ಅತುರವೆಂದರೆ ರುಗ್ಣ, ರೋಗಕ್ಕೆ ತುತ್ತಾಗಿರುವಂತಹುದು, ಪೀಡಿತವಾಗಿರುವುದು. ಆಸೆಯೆಂಬುದೇ ರೋಗ. ಹೀಗೆ ತೃಷ್ಣೆಯಿಂದ ಆತುರವಾಗಿದೆ, ನಮ್ಮ ಚಿತ್ತ. ಆಸೆಗಳೆಂಬ ರೋಗಗಳು ಬೇರುಬಿಟ್ಟಿವೆ ಚಿತ್ತದಲ್ಲಿ. "ಇಷ್ಟು ಸಿಕ್ಕರೆ ಮತ್ತಷ್ಟು ಬೇಕೆಂಬಾಸೆ" – ಎಂದು ದಾಸರು ಚಿತ್ರಿಸಿದ್ದಾರಲ್ಲವೇ? ಆಸೆಗೇನು ಅಂತವುಂಟೇ? ಆಸೆಯಿಲ್ಲದ ಕ್ಷಣವುಂಟೇ?

ಅಂತಹ ಚಿತ್ತದಲ್ಲಿ ಏನು ವಿಜೃಂಭಿಸುವುದು? ಮತ್ತೇನು, ಅಂಧಕಾರವೇ ಸರಿ. ಅದೇನು ಕಡಿಮೆ ಕತ್ತಲೆಯೇ? ಅದು ಮಹಾಂಧಕಾರವೇ ಹೌದು, ಕಗ್ಗತ್ತಲೇ ಅದು.

ಚಿತ್ತದಲ್ಲಿ ಕತ್ತಲೆಂದರೆ ಅದೊಂದು ರೂಪಕವಷ್ಟೆ. ಯಾವುದಾ ಕತ್ತಲೆ? ಮೋಹವೇ ಮಹಾಂಧಕಾರ. ತೃಷ್ಣೆಯೆಲ್ಲಿಯ ತನಕ ಇರುವುದೋ ಮೋಹವೂ ಅಲ್ಲಿಯ ತನಕ ಇರುವುದೇ. ಯಾವುದರ ಬಗ್ಗೆ ಆಸೆಯೋ ಅದರ ಬಗೆಗಿನ ಸೆಳೆತವೂ ಬಿಗಿಯೇ. ಶಿಶುಮೋಹ, ಸತಿಮೋಹ – ಎಂದು ಮುಂತಾಗಿ ಅಷ್ಟಮೋಹಗಳನ್ನು ಪಟ್ಟಿಮಾಡುವುದುಂಟಲ್ಲವೇ? ಎಂದೇ, ಅದನ್ನು ಆಗಾಗ ಸರಿಪಡಿಸಲೆಳಸಿದರೂ ಮತ್ತೆ ಮತ್ತೆ ವಿಜೃಂಭಿಸುವುದೇ ಅದು. ಹೇಗೆ ಕತ್ತರಿಸಿದರೂ ವರ್ಧಿಸುತ್ತಿರುವಂತಹುದು, ಈ ಮೋಹ. ಜೃಂಭಮಾಣವೆಂದರೆ ಬೆಳೆಯುತ್ತಿರುವುದೇ, ತಿಂದುಹಾಕಲು ಬಾಯ್ಬಿಡುತ್ತಿರುವುದೇ, ಕಬಳಿಸಲು ಹೊಂಚುತ್ತಿರುವುದೇ.

ಆ ಮೋಹವನ್ನು ಕಿತ್ತೆಸೆದರೆ, ಪರಿಣಾಮವಾಗಿ ಆಶಾಪೀಡೆಯು ತೊಲಗಿದರೆ, ಆತನ ಅಪಾಂಗಲೀಲೆಯು ಆಗ ಕೆಲಸ ಮಾಡೀತು. ಹಾಗೆಂದು ತೋರುವುದೇನೋ ಸರಿಯೇ. ಅದಕ್ಕಾಗಿ ಯತ್ನಿಸಿ ಯತ್ನಿಸಿ ಸೋಲುವುದಷ್ಟೆ ನಮ್ಮ ಪಾಡು! ಆತನೇ ಅದನ್ನು ಕೀಳಬೇಕು. ಅತನೇ ಈ ಮೋಹವೆಂಬ ಕಗ್ಗತ್ತಲನ್ನು ಕಿತ್ತು ಬಿಸಾಡಬೇಕು.

ಕದಿಯುವ ಕಲೆ ಕರಗತವಾಗಿದೆಯಲ್ಲವೇ, ಕೃಷ್ಣನಿಗೆ? ನಮಗೆ ತಿಳಿಯದಂತೆಯೇ ಅದನ್ನು ತಾನೇ ಹೊರಸಾಗಿಸಿ ತನ್ನ ಕಟಾಕ್ಷವನ್ನು ಬೀರಲಿ - ಎಂದಿಲ್ಲಿ ಬೇಡಿಕೊಂಡಿದೆ.

ಒಟ್ಟಿನಲ್ಲಿ, ಲೋಭ-ಮೋಹಗಳು ನಮ್ಮನ್ನು ಕಾಡಿಸುವುವಲ್ಲವೇ? ಅರಿ-ಷಡ್ವರ್ಗದಲ್ಲಿ ಮೂರನೆಯ ಮತ್ತು ನಾಲ್ಕನೆಯವು ಅವು. ಅವೆರಡನ್ನೂ ಮೊದಲೆರಡು ಪಾದಗಳಲ್ಲಿ ಸೂಚಿಸಿದೆ. ಅವನ್ನು ಹೋಗಲಾಡಿಸಿ ತನ್ನ ಕಡೆಗಣ್ಣೋಟವನ್ನು ಬೀರಲಿ - ಎಂಬ ಕೇಳ್ಕೆಯಿಲ್ಲಿದೆ.

ಶ್ಲೋಕದ ದ್ವಿತೀಯಾಕ್ಷರಪ್ರಾಸ ಸುವೇದ್ಯವಾಗಿದೆ. ಪ್ರಥಮಪಾದ-ತೃತೀಯಪಾದಗಳಲ್ಲಿಯ ತೃಷ್ಣಾ/ಪುಷ್ಣಾ-ಪದಗಳೂ ದ್ವಿತೀಯಪಾದ-ಚತುರ್ಥಪಾದಗಳಲ್ಲಿಯ ಮುಷ್ಣ/ಕೃಷ್ಣಗಳೂ ಅನುಪ್ರಾಸಾರ್ಥವಾಗಿಯೇ.

ಶ್ಲೋಕ ಹೀಗಿದೆ:

ತೃಷ್ಣಾತುರೇ ಚೇತಸಿ ಜೃಂಭಮಾಣಂ /
ಮುಷ್ಣನ್ ಮುಹುಃ ಮೋಹ-ಮಹಾಂಧಕಾರಂ |
ಪುಷ್ಣಾತು ನಃ ಪುಣ್ಯ-ದಯೈಕ-ಸಿಂಧೋಃ /
ಕೃಷ್ಣಸ್ಯ ಕಾರುಣ್ಯ-ಕಟಾಕ್ಷ-ಕೇಲಿಃ ||

ಸೂಚನೆ : 18/10/2025 ರಂದು   ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.