Tuesday, September 16, 2025

ಕೃಷ್ಣಕರ್ಣಾಮೃತ 76 ಮುಂಬರುವ ಹುಟ್ಟಿನಲಿ ಕೊಳಲಾಗುವ ಕನಸೆನಗೆ (Krishakarnamrta 76)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಯಾವುದಕ್ಕಾದರೂ ತೀವ್ರವಾಗಿ ಹಂಬಲಿಸಿ, ಅದು ದೊರೆಯಲಾರದೋ ಏನೋ ಎನ್ನಿಸಿಬಿಟ್ಟಾಗ, ಮನಸ್ಸಿನಲ್ಲಿ ತೋರುವುದೇನು? ಮುಂದಿನ ಜನ್ಮದಲ್ಲಾದರೂ ಆ ಭಾಗ್ಯವೆನಗೆ ದೊರೆಯಲಿ - ಎಂದುಕೊಳ್ಳುತ್ತೇವೆ. ಹಾಗೆಯೇ ತೋರಿದೆ, ಲೀಲಾಶುಕನಿಗೂ.

ಯಾವುದಾ ಆಸೆ? ಕೃಷ್ಣನನ್ನು ಕಾಣುವ ಆಸೆ. ಆತನ ಸಮೀಪ ಸಾಗುವ ಆಸೆ, ಆತನ ಮುಖದ ಬಳಿ ಸುಳಿಯುವ ಆಸೆ, ಆತನ ಅಧರದ ಸ್ಪರ್ಶದ ಆಸೆ. ಇಷ್ಟೂ ಭಾಗ್ಯವೂ ಈಗಾಗಲೇ ದೊರೆತಿರುವುದು ವಂಶ-ನಾಳಕ್ಕೆ - ಎಂದರೆ ಕೊಳಲಿನ ಕೊಳವೆಗೆ. ಎಲ್ಲ ವಂಶನಾಳಗಳಿಗೂ ಅದು ದಕ್ಕಿರುವುದಲ್ಲ, ಕೇವಲ ಯಮುನಾನದಿಯ ದಡದಲ್ಲಿರುವ ಬೊಂಬಿಗಷ್ಟೇ ಸಿಕ್ಕ ಭಾಗ್ಯವದು!

ಎಂತಹ ಧನ್ಯತೆಯದಕ್ಕೆ! ಕೃಷ್ಣನ ಕೆಳದುಟಿಯ ಸನಿಹದಲ್ಲೇ, ಎಂದರೆ ತುಟಿಗೆ ಸ್ಪರ್ಶವಾಗುವಂತೆ ಇಡುವುದುಂಟಲ್ಲಾ, ಅದಕ್ಕಿಂತ ಧನ್ಯವಾದ ಅವಸ್ಥೆಯಿನ್ನೊಂದಿರಲು ಸಾಧ್ಯವೇ? ಎಂತಹ ತುಟಿಯದು! ಮಣಿಯನ್ನು ಹೋಲುವ ತುಟಿ. ಮಣಿಯೆಂದರೆ ಹವಳದ ಮಣಿ. ಪ್ರವಾಳ-ಮಣಿಯ ಕೆಂಪೇ ಕೆಂಪು. ಆ ರಕ್ತವಾದ - ಎಂದರೆ ಕೆಂಪನೆಯ - ತುಟಿಯಲ್ಲಿ ಅನುರಕ್ತವಾದ ಮನಸ್ಸು, ಈ ಕೃಷ್ಣಪ್ರಿಯ-ಕವಿಯದು.

ಯಾರ ತುಟಿಯದು? ಆಭೀರ-ಸೂನುವಿನ ತುಟಿ. ಎಂದರೆ ಗೊಲ್ಲರ ಹುಡುಗನ ತುಟಿ. ಸರಳವಾಗಿ ತೋರುವ ಈತ ಮಹಾಮಹಿಮನೇ ಸರಿ. ತನ್ನ ಮಹಿಮೆಯನ್ನು ಯಾರ ಮುಂದೆಯೂ ತೋರಿಸಿಕೊಳ್ಳದವ. ಎಂದೇ ಅಲ್ಲವೆ, ಜನಿಸಿದ್ದು ಜೈಲಲ್ಲಿ, ಬೆಳದದ್ದು ದನಗಾಹಿಗಳ ನಡುವೆ? ಆದರೂ, "ಬಲ್ಲವನೇ ಬಲ್ಲ ಬೆಲ್ಲದ ಸವಿಯ" ಎನ್ನುವಂತೆ, ಗೊಲ್ಲನಾಗಿ ತೋರಿಕೊಂಡಿರುವವ ಸಾಧಾರಣಮನುಷ್ಯನಲ್ಲ, ಸಾಕ್ಷಾತ್ ಪರಮಪುರುಷನೇ ಅವನು - ಎಂಬುದನ್ನು ಲೀಲಾಶುಕನು ಬಲ್ಲ.

ಎಂದೇ, ಹೇರಳವಾಗಿ ಪುಣ್ಯವನ್ನು ಸಂಪಾದಿಸಿ, ಮತ್ತೊಂದು ಜನ್ಮದಲ್ಲಾದರೂ ಕೃಷ್ಣಾಧರ-ಸಾಮೀಪ್ಯವನ್ನು ಹೊಂದಲು ಬಯಸುತ್ತಾನೆ. 

ವಾಸ್ತವವಾಗಿ, ಯಮುನೆಯ ದಡದಲ್ಲಿ ಬೆಳೆದುಕೊಂಡಿರುವ ಬೊಂಬುಗಳೆಲ್ಲಕ್ಕೂ ಈ ಭಾಗ್ಯವೇನಿಲ್ಲ. ಯಾವುದೋ ಪುಣ್ಯಶಾಲಿಯಾದ ಬೊಂಬಿಗೆ ಮಾತ್ರವೇ ಅದಿರುವುದು. ಅಂತಹ ವೇಣು-ನಾಳವಾಗಿಯೇ ತಾನು ಮುಂದಿನ ಜನ್ಮದಲ್ಲಿ ಜನಿಸಬೇಕೆಂಬ ಬಯಕೆ ಲೀಲಾಶುಕನದು.

ಶ್ಲೋಕ ಹೀಗಿದೆ:

ಅಪಿ ಜನುಷಿ ಪರಸ್ಮಿನ್ ಆತ್ತ-ಪುಣ್ಯೋ ಭವೇಯಂ/

ತಟ-ಭುವಿ ಯಮುನಾಯಾಃ ತಾದೃಶೋ ವಂಶ-ನಾಳಃ |

ಅನುಭವತಿ ಯ ಏಷಃ ಶ್ರೀಮದಾಭೀರ-ಸೂನೋಃ/

ಅಧರಮಣಿ-ಸಮೀಪ-ನ್ಯಾಸ-ಧನ್ಯಾಂ ಅವಸ್ಥಾಮ್ ||

 ***

ಓ ಮನಸ್ಸೇ, ಶ್ರೀಕೃಷ್ಣನನ್ನು ಪರಿಚಯ ಮಾಡಿಕೋ - ಎನ್ನುತ್ತಾನೆ, ಲೀಲಾಶುಕ.  ಪರಿಚಯವೆಂದರೆ ಚೆನ್ನಾಗಿ ತಿಳಿದುಕೊಳ್ಳುವುದು ಎಂದೇ ಅರ್ಥ - ಸಂಸ್ಕೃತದಲ್ಲಿ!

ಹರಿಯನ್ನೇಕೆ ಚೆನ್ನಾಗಿ ಅರಿಯಬೇಕು? ಏಕೆಂದರೆ ಆತನು ಸದಾ ಸ್ಮರಣೀಯ. ಅದರಿಂದೇನು? - ಎಂಬುದನ್ನು ಐದಾರು ವಿಶೇಷಣಗಳಿಂದ ಹೇಳಿದೆ.

ಅತ್ಯಾಕರ್ಷಕನಾಗಿದ್ದಾನೆ ಕೃಷ್ಣ! ಆತನ ಕಣ್ಣೇನು, ಮೈಬಣ್ಣವೇನು, ಭೂಷಣವೇನು! ಪ್ರಾತಃಕಾಲದ ಕಮಲಗಳು ಅದೆಂತು ಸೊಬಗೋ ಅಂತಿವೆ ಆತನ ನೇತ್ರಗಳು. ಮಧ್ಯಾಹ್ನದ ಮೇಲಾದರೆ ಕಮಲಗಳು ಕಳೆಗುಂದುವುವು. ಮುಸ್ಸಂಜೆಯ ಹೊತ್ತಿಗೆ ಮುದುಡಲಾರಂಭಿಸುವುವು. ಹಗಲಾಗುತ್ತಲೇ ಹುರುಪಿನಿಂದ ಹೊಳೆಯುವುವು. ಹೀಗೆ ಪ್ರಾತರಂಭೋಜದಂತಿರುವುವು ಕೃಷ್ಣನ ಕಂಗೊಳಿಸುವ ಕಂಗಳು.

ಇನ್ನು ಆತನ ಕಬರವೋ, ಎಂದರೆ ಕೇಶಪಾಶವೋ, ಅಭಿರಾಮವಾಗಿದೆ. ಅಭಿರಾಮವೆಂದರೆ ರಮಣೀಯ. ಯಾವುದರಿಂದಾಗಿ ರಮಣೀಯತೆ? ಹೊಳೆಯುವ ನವಿಲುಗರಿಗಳ ಮಾಲೆಯಿಂದಾಗಿ: ಆತನ ತಲೆಯ ಮೇಲೆ ನವಿಲುಗರಿಯಿದೆಯೆಂದರೆ ಒಂದೇ ಒಂದು ಗರಿಯೆಂದೇನಲ್ಲ. ಹಲವು ಗರಿಗಳನ್ನಲ್ಲಿ ಪೋಣಿಸಿದೆ. ಇದನ್ನೇ ಪಿಂಛ-ದಾಮವೆಂದಿರುವುದು. ಕಟ್ಟಿರುವ ಗರಿಯ ಗೊಂಚಲಿನಿಂದಾಗಿ ಕಳೆಕಟ್ಟಿದೆ ಆತನ ಜುಟ್ಟು.

ಇನ್ನು ಆತನ ಮೈಬಣ್ಣವೋ? ಇಂದ್ರನೀಲ-ಮಣಿಯಂತಿರುವುದು. ಇಂದ್ರನು ವಲನೆಂಬ ಅಸುರನನ್ನು ಸಂಹರಿಸಿದನು; ಅಂದಿನಿಂದ ಆತನಿಗೆ ವಲಾರಿ ಎಂಬ ಹೆಸರು. ಇಂದ್ರನ ಈ ಹೆಸರಿನಲ್ಲೇ ಒಂದು ಊರೇ ಇದೆ, ಕರ್ಣಾಟಕದಲ್ಲಿ! ವಲಾರಿ ಎಂಬುದೇ ಬಳ್ಳಾರಿಯಾಗಿರುವುದು! ಇದನ್ನು ೧೪ನೇ ಶತಮಾನದ ಅಹೋಬಲ ಕವಿಯ ವಿರೂಪಾಕ್ಷ-ವಸಂತೋತ್ಸವ-ಚಂಪುವಿನಿಂದ ಅರಿಯಬಹುದು. ವಕಾರವು ಬಕಾರವಾಗಿದೆ, ಅಷ್ಟೆ. ವಲನನ್ನು ಸಂಹರಿಸಿದುದರಿಂದಲೇ ಇಂದ್ರನಿಗೆ ಬಲಭಿದ್ ಎಂಬ ಹೆಸರೂ ಸಂದಿದೆ. ಬಲಾಸುರನನ್ನು ಭೇದಿಸಿದವನು, ಎಂದರೆ ಸಂಹರಿಸಿದವನು, ಇಂದ್ರನೇ.

ಇಂದ್ರನ ಹೆಸರನ್ನು ಒಂದು ಉಪಲಕ್ಕೆ, ಎಂದರೆ ಕಲ್ಲಿಗೆ, ಸೇರಿಸಲಾಗುತ್ತದೆ. ಇಂದ್ರನೀಲ-ಮಣಿಯೆಂದರೆ ಇದೇ. ಈ ಇಂದ್ರಮಣಿಯ ನೀಲವರ್ಣವೇನುಂಟೋ ಕೃಷ್ಣನ ನೀಲವರ್ಣವೆಂದರೂ ಅದುವೇ. ಇದು ಆತನ ಮೈಬಣ್ಣವನ್ನು ಹೇಳುತ್ತದೆ.

ಇವಿಷ್ಟು ಗುಣಾಂಶಗಳಿದ್ದರೂ ಆಕರ್ಷಣೆಗಳಿದ್ದರೂ ಅವನ್ನೆಲ್ಲಾ ಆಸ್ವಾದಿಸುವವರೊಬ್ಬರಿಲ್ಲದಿದ್ದರೆ ಏನು ಪ್ರಯೋಜನ? ಆ ವಿಷಯದಲ್ಲಿ ಕೃಷ್ಣನು ಭಾಗ್ಯಶಾಲಿಯೇ. ಏಕೆ? ಏಕೆಂದರೆ ಆತನ ಈ ರೂಪಸಾಮಗ್ರಿಯನ್ನು ಮನಸಾರೆ ಮೆಚ್ಚುವ ಮಂದಿಯಿದ್ದರು. ವಲ್ಲವಿಯರೇ ಆವರು. ಎಂದರೆ ಗೊಲ್ಲತಿಯರು. ಅವರಂತೂ ತಮ್ಮ ಭಾಗ್ಯವೇ ಕೃಷ್ಣನೆಂದು ನೆಚ್ಚಿಕೊಂಡಿದ್ದವರು. ಆದ್ದರಿಂದ ವಲ್ಲವೀ-ಭಾಗ್ಯ-ರೂಪನಾದವನೇ ಕೃಷ್ಣ. ಭಾಗ್ಯವೆನ್ನುವುದರ ಬದಲು, ಈ ಶ್ಲೋಕದಲ್ಲಿ ಅದರ ಪರ್ಯಾಯವಾದ ಭಾಗಧೇಯವೆಂಬ ಪದವನ್ನು ಬಳಸಿದೆ.

ಇವೆಲ್ಲದರ ಜೊತೆಗೆ, ಅಥವಾ ಇವೆಲ್ಲಕ್ಕೂ ಮಕುಟಪ್ರಾಯವಾದುದೆಂದರೆ, ಆತನ ವಾಸ್ತವಸ್ವರೂಪ. ಆತನು ಮುಕುಂದ, ಎಂದರೆ ಮುಕುತಿಯನ್ನು ಕೊಡತಕ್ಕವನು. ಆತನು ಜಗತ್ತಿಗೇ ಕಾರಣನಾದವನು. ವೇದಗಳೆಲ್ಲವೂ ವಿಶ್ವವನ್ನೇ, ವಿಶ್ವದ ಶಕ್ತಿಗಳನ್ನೇ, ಚಿತ್ರಿಸುವುವು, ಕೊಂಡಾಡುವುವು. ನಿಗಮಗಳೆಂದರೆ ವೇದಗಳೇ. ನಿಖಿಲ-ನಿಗಮವನ್ನು, ಎಂದರೆ ಸಮಸ್ತ-ವೇದವನ್ನೂ, ಒಂದು ಬಳ್ಳಿಯೆಂದು ಭಾವಿಸುವುದಾದರೆ, ಆ ವಲ್ಲಿಗೆ ಅಥವಾ ಬಳ್ಳಿಗೆ ಆರಂಭ-ಸ್ಥಾನವಾದ ಮೂಲ-ಕಂದವೆಂಬುದೇನುಂಟೋ, ಎಂದರೆ ಆರಂಭದ ಗೆಡ್ಡೆಯೇನುಂಟೋ, ಆತನೇ ಈ ಮುಕುಂದ ಅಥವಾ ಕೃಷ್ಣ.

ಹೀಗೆ ಸುಂದರವಾದ ಕಣ್ಣುಳ್ಳವನೂ, ಕಪ್ಪನೆಯ ಬಣ್ಣವುಳ್ಳವನೂ, ಸುಭಗವಾದ ಅಲಂಕಾರವನ್ನು ಮಾಡಿಕೊಂಡಿರುವವನೂ, ಗೋಪಿಯರ ಭಾಗ್ಯದೇವತೆಯೂ ಆದವನ ಪರಮ-ಸ್ವರೂಪವೇನೆಂಬುದನ್ನು ಕೊನೆಯ ಪಾದದಲ್ಲಿ ಹೇಳಿದೆ: ವೇದಗಳಿಗೆಲ್ಲ ಮೂಲಸ್ಥಾನವೇ ಆದವನು ಮುಕುಂದ.

ಆತನನ್ನು ಚೆನ್ನಾಗಿ ಅರಿತುಕೋ ಮನವೇ! - ಎಂಬುದಾಗಿ ಲೀಲಾಶುಕನು ತನ್ನ ಮನಸ್ಸಿಗೇ ಹಿತೋಪದೇಶವನ್ನು ನೀಡುತ್ತಿದ್ದಾನೆ:

ಅಯಿ ಪರಿಚಿನು ಚೇತಃ! ಪ್ರಾತರಂಭೋಜನೇತ್ರಂ

ಕಬರ-ಕಲಿತ-ಚಂಚತ್- ಪಿಂಛ-ದಾಮಾಭಿರಾಮಂ |

ವಲಭಿದ್-ಉಪಲ-ನೀಲಂ ವಲ್ಲವೀ-ಭಾಗಧೇಯಂ

ನಿಖಿಲ-ನಿಗಮ-ವಲ್ಲೀ-ಮೂಲಕಂದಂ ಮುಕುಂದಂ ||


***

ಪುಟ್ಟಕೃಷ್ಣನ ಪುಟ್ಟ ಚಿತ್ರಣ ಈ ಶ್ಲೋಕದ ವಸ್ತು. ಕೃಷ್ಣನಿನ್ನೂ ಜಾನು-ಚರ, ಎಂದರೆ ಮಂಡಿಯ ಮೇಲೆ ನಡೆಯುವವನು. ಅರ್ಥಾತ್ ಅಂಬೆಗಾಲಿಕ್ಕುವವನು. ಕೃಷ್ಣನೇನೂ ಬಡವರ ಮನೆಯಲ್ಲಿರಲಿಲ್ಲ. ನಂದಗೋಪನೇನು ದರಿದ್ರನೇ? ಆತನ ಮನೆಯ ನೆಲವೇ ಮಣಿ-ಖಚಿತ. ಎಂದೇ ಅದನ್ನು ರತ್ನ-ಸ್ಥಲವೆಂದಿರುವುದು. ಅರ್ಥಾತ್ ಹೊಳೆಯುವ ನೆಲವದು.

ಹೊಳೆಯುವ ನೆಲದಲ್ಲಿ ಮುಖವು ಪ್ರತಿಫಲಿತವಾಗುವುದಿಲ್ಲವೇ? ಹೀಗೆ ರತ್ನಸ್ಥಲದಲ್ಲಿ ಸಂಕ್ರಾಂತವಾಗಿದೆ ಕೃಷ್ಣನ ಮುಖಕಮಲ. ಎಷ್ಟಾದರೂ ಆಕರ್ಷಕ-ಮುಖ, ಅದನ್ನು ಹಿಡಿಯಬೇಕೆನ್ನಿಸಿದೆ, ಮಗುವಾದ ಕೃಷ್ಣನಿಗೆ. ಆದರೆ ಅದೋ ದೊರೆಯಲೊಲ್ಲದು! ಪ್ರತಿಬಿಂಬವನ್ನು ಕೈಗಳಲ್ಲಿ ಹಿಡಿದೆಳೆಯಲಾದೀತೇ? ಬಯಸಿದ್ದು ಸಿಗಲಿಲ್ಲವೆಂಬುದು ಮಗುವಿಗೆ ದುಃಖತರಿಸುವುದಲ್ಲವೇ?

ಎಂದೇ, ಬಳಿಯಿದ್ದ ದಾದಿಯ ಮುಖವನ್ನು ಕಂಡವನೇ ಅಳಲಾರಂಭಿಸಿದ, ಈ ಬಾಲಕೃಷ್ಣ! - ಎನ್ನುತ್ತದೆ ಪದ್ಯ.

ರತ್ನ-ಸ್ಥಲೇ ಜಾನು-ಚರಃ ಕುಮಾರಃ/

ಸಂಕ್ರಾಂತಂ ಆತ್ಮೀಯ-ಮುಖಾರವಿಂದಮ್|

ಆದಾತುಕಾಮಃ ತದಲಾಭ-ಖೇದಾತ್/

ವಿಲೋಕ್ಯ ಧಾತ್ರೀ-ವದನಂ ರುರೋದ ! ||

ಸೂಚನೆ : 13/08/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Sunday, September 7, 2025

ವ್ಯಾಸ ವೀಕ್ಷಿತ 153 ಖಜಾನೆ, ನೌಕರರ ವಜಾ, ಕೃಷಿಕರಿಗೆ ಸಾಲ (Vyaasa Vikshita 153)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ರಾಜ್ಯಾಡಳಿತವು ಹೇಗಿದ್ದರೆ ಚೆನ್ನೆಂಬುದನ್ನು ನಾರದರು ಯುಧಿಷ್ಠಿರನಿಗೆ ತಿಳಿಯಪಡಿಸುತ್ತಿರುವ ಮಾತುಗಳು.

ನಿನ್ನ ಆಯದಲ್ಲಿ ಕಾಲುಭಾಗ, ಅರ್ಧಭಾಗ, ಮುಕ್ಕಾಲುಭಾಗಗಳಷ್ಟೆ ವ್ಯಯವಾಗುತ್ತವೆ ತಾನೆ? - ಎಂದರೆ ಪೂರ್ಣಭಾಗವು ಖರ್ಚಾಗುತ್ತಿಲ್ಲ ತಾನೆ? (ಏಕೆಂದರೆ ಖಜಾನೆಯು ಎಂದೂ ಖಾಲಿಯಾಗಬಾರದು. ಆದಷ್ಟೂ ಕಾಲುಭಾಗ ವ್ಯಯದಲ್ಲೇ ಸರ್ವವನ್ನೂ ನಿರ್ವಹಿಸಬೇಕು. ಉಳಿದುದು ಆಪದ್ಧನವಾಗಿರಬೇಕು. ಪ್ರಜೆಗಳ ರೋಗ-ರುಜಿನಗಳು ತೀವ್ರವಾದಾಗ ಇನ್ನೊಂದು ಕಾಲುಭಾಗವನ್ನು ವ್ಯಯಿಸಬಹುದು. ದೇಶದಲ್ಲಿ ಕ್ಷಾಮವೇನಾದರೂ ಉಂಟಾಗಿಬಿಟ್ಟಲ್ಲಿ ಇನ್ನೊಂದು ಕಾಲು ಭಾಗವನ್ನು ವ್ಯಯಿಸಬಹುದು, ಎಂದರೆ ಮುಕ್ಕಾಲು ಭಾಗವಾಯಿತು. ಅದಕ್ಕಿಂತಲೂ ಮಿಗಿಲಾಗಿ ಖರ್ಚು ಮಾಡುವಂತೆಯೇ ಇಲ್ಲ).

ಜ್ಞಾತಿಗಳು (ಬಾಂಧವರು), ಆಚಾರ್ಯರು, ವೃದ್ಧರು, ವರ್ತಕರು, ಶಿಲ್ಪಿಗಳು, ಆಶ್ರಿತರಾದ ಇತರರು, ಬಡವರು - ಇವರುಗಳನ್ನು ನೀನು ಧನ-ಧಾನ್ಯಗಳನ್ನಿತ್ತು ಸದಾ ಕಾಪಾಡುತ್ತಿರುವೆಯಲ್ಲವೇ?

ದೇಶದ ಆಯ-ವ್ಯಯಗಳನ್ನು ನೋಡಿಕೊಳ್ಳುವುದರಲ್ಲಿ ನಿಯುಕ್ತರಾದ ಗಣಕರೂ-ಲೇಖಕರೂ ನಿತ್ಯವೂ ಆದಾಯ-ವ್ಯಯಗಳನ್ನು ನಿತ್ಯವೂ ಪೂರ್ವಾಹ್ಣದಲ್ಲಿಯೇ ರಾಜನಿಗೆ ತಿಳಿಸಿರತಕ್ಕದ್ದು. ಅವರೆಲ್ಲ ಹಾಗೆಯೇ ಮಾಡುತ್ತಿದ್ದಾರೆ ತಾನೆ?

ಅರ್ಥಶಾಸ್ತ್ರದಲ್ಲಿ ನಿಪುಣರೂ ನಿನ್ನ ಹಿತೈಷಿಗಳೂ ನಿನ್ನಲ್ಲಿ ಪ್ರೀತಿಯುಳ್ಳವರೂ ಆದವರನ್ನು, ಅವರಲ್ಲಿ ಯಾವುದೇ ದೋಷವಿಲ್ಲದಿರುವಾಗ, ಕೆಲಸದಿಂದ ವಜಾ ಮಾಡಲೇಬಾರದು. ಹಾಗೆಲ್ಲಾ ನೀನು ಮಾಡಿಬಿಡುತ್ತಿಲ್ಲ ತಾನೆ?

ಕೆಲಸಕ್ಕಾಗಿ ಬಂದವರಲ್ಲಿ ಉತ್ತಮರೂ ಮಧ್ಯಮರೂ ಅಧಮರೂ ಇರುವುದುಂಟು. ಅವರನ್ನು ಹಾಗೆಂಬುದಾಗಿ ಸರಿಯಾಗಿ ಗುರುತಿಸುವುದು ರಾಜನ ಮೊದಲ ಕೆಲಸ. ಅವರನ್ನು ಅವರವರ ಯೋಗ್ಯತೆಗನುಸಾರವಾಗಿ ತಕ್ಕತಕ್ಕ ಕೆಲಸಗಳಲ್ಲಿ ನಿಯೋಜಿಸಬೇಕು. ನೀನು ಹಾಗೆ ತಾನೆ ಮಾಡುತ್ತಿರುವೆ?

ಲೋಭಿಗಳು, ಕಳ್ಳರು, ವೈರಿಗಳು, ಕೆಲಸದಲ್ಲಿ ಅನುಭವವಿಲ್ಲದವರು - ಇಂತಹವರನ್ನು ನೀನು ಕೆಲಸಕ್ಕೆ ಇಟ್ಟುಕೊಳ್ಳಬಾರದು. ನೀನಿಟ್ಟುಕೊಳ್ಳುತ್ತಿಲ್ಲ ತಾನೆ?

ರಾಷ್ಟ್ರದಲ್ಲಿ ಭಾಗಭಾಗಗಳಲ್ಲೂ ದೊಡ್ಡ ದೊಡ್ಡ ಕೆರೆಗಳೂ ಸರೋವರಗಳೂ ಇರಬೇಕು, ಅವು ಜಲ-ಪರಿಪೂರ್ಣವೂ ಆಗಿರಬೇಕು. ಕೃಷಿಯೆಲ್ಲವೂ ಮಳೆಯೊಂದನ್ನೇ ಅವಲಂಬಿಸಿರುವಂತೆ ಆಗಿಬಿಡಬಾರದು. ನಿನ್ನ ರಾಜ್ಯದಲ್ಲಿ ಇದಕ್ಕನುಗುಣವಾಗಿಯೇ ಎಲ್ಲವೂ ನಡೆಯುತ್ತಿದೆ ತಾನೆ?

ಕೃಷಿಕರ ಬೀಜಗಳಿಗೂ ಧಾನ್ಯಗಳಿಗೂ ಹುಳಹಿಡಿಯಬಾರದು. ಶೇಕಡಾ ೧ರ ಬಡ್ಡಿಯ ಲೆಕ್ಕದ ಮೇರೆಗೆ, ಎಂದರೆ ಬಹಳ ಕಡಿಮೆ ಬಡ್ಡಿಯಂತೆ, ರಾಜನು ಅವರಿಗೆ ಸಾಲವೀಯಬೇಕು. ನೀನು ಹಾಗೆಯೇ ಅನುಕೂಲ ಕಲ್ಪಿಸಿಕೊಡುತ್ತಿರುವೆಯಷ್ಟೆ?

ಕೃಷಿ, ಗೋರಕ್ಷೆ, ಹಾಗೂ ವಾಣಿಜ್ಯ - ಈ ಮೂರಕ್ಕೆ ವಾರ್ತಾ ಎನ್ನುತ್ತಾರೆ. ಜನರು ಸುಖವಾಗಿರಬೇಕೆಂದರೆ ಇವು ಮೂರೂ ಚೆನ್ನಾಗಿಯೇ ಇರಬೇಕಾದವು. ಇವುಗಳ ಮೇಲ್ವಿಚಾರಕರು ಸರಿಯಾದ ಮಂದಿಯಾಗಿರಬೇಕು. ನಿನ್ನ ರಾಜ್ಯದಲ್ಲಿ ವಾರ್ತೆಯು ಹೀಗೆಯೇ ಇರುವುದು ತಾನೆ?

ಶೂರರು, ಧೀಮಂತರು, ಕಾರ್ಯಸಮರ್ಥರು - ಇವರುಗಳು ಒಂದೊಂದು ಹಳ್ಳಿಯಲ್ಲಿಯೂ ಐದೈದು ಮಂದಿ ಇದ್ದು, ಅವರುಗಳೂ ಒಗ್ಗಟ್ಟಾಗಿ ನಿಂತು, ಕೆಲಸ ಮಾಡುವುದಾದರೆ ಗ್ರಾಮಾಭಿವೃದ್ಧಿಯೂ, ತದನುಸಾರಿಯಾಗಿ ದೇಶಾಭಿವೃದ್ಧಿಯೂ ಚೆನ್ನಾಗಿ ಆಗುತ್ತದೆ. ನಿನ್ನ ರಾಜ್ಯದಲ್ಲಿ ಹೀಗೇ ಆಗುತ್ತಿದೆ ತಾನೆ?

ನಗರಗಳ ರಕ್ಷಣೆಗೋಸ್ಕರ ಗ್ರಾಮಗಳನ್ನೂ ನಗರದಂತೆ ಮಾಡಾಲಾಗಿದೆ ತಾನೆ? ಎಂದರೆ ನಗರಗಳಲ್ಲಿಯ ಸೌಕರ್ಯಗಳನ್ನು ಗ್ರಾಮಗಳಲ್ಲೂ ಲಭ್ಯವಾಗಿಸಿದೆ ತಾನೆ? ಅರ್ಥಾತ್, ಎರಡೂ ಕಡೆಯೂ ಅಧಿಕಸಂಖ್ಯೆಯಲ್ಲಿ ಶೂರ-ವೀರರಿದ್ದರೆ ಮಾತ್ರವೇ ಇದು ಸಾಧ್ಯ.

ಅದರಂತೆಯೇ ಪ್ರಾಂತಗಳೂ ಸುರಕ್ಷೆಯನ್ನೂ ಅಭಿವೃದ್ಧಿಯನ್ನೂ ಹೊಂದುವಂತಾಗಬೇಕು.

ಸೂಚನೆ : 7/9/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 31 (Prasnottara Ratnamalike 31)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೩೧. ಅನರ್ಥಫಲವನ್ನು ಕೊಡುವುದು ಯಾವುದು?

ಉತ್ತರ - ಮಾನ

ಈ ಮುಂದಿನ ಪ್ರಶ್ನೆ ಹೀಗಿದೆ - "ಅನರ್ಥವನ್ನು ಕೊಡುವುದು ಯಾವುದು?" ಎಂಬುದಾಗಿ. ಇದಕ್ಕೆ ಉತ್ತರ - "ಮಾನ" ಎಂದು. ಅಂದರೆ ಮಾನವೆಂಬುದು ಸರ್ವ ಅನರ್ಥಕ್ಕೂ ದಾರಿಯನ್ನು ಉಂಟುಮಾಡುತ್ತದೆ ಎಂದರ್ಥ. ಹಾಗಾದರೆ ಮಾನ ಎಂದರೇನು? ಇದು ಹೇಗೆ ಅನರ್ಥಕಾರಿಯಾದುದು? ಎಂಬುದನ್ನು ಚಿಂತಿಸಬೇಕಾಗಿದೆ. 

ಮಾನ ಎಂಬ ಪದವು ಅನೇಕ ಅರ್ಥವನ್ನು ಕೊಡುತ್ತದೆ. ಮಾನ ಎಂದರೆ ಅಳತೆ. ಮಾನ ಎಂದರೆ ಮರ್ಯಾದೆ ಅಥವಾ ಒಂದು ಶಿಸ್ತುಬದ್ಧ ಜೀವನಕ್ರಮ. ಇನ್ನೊಂದು ಮಾನ ಎಂದರೆ ಗೌರವ. ಇನ್ನೊಂದು ಬಗೆಯಲ್ಲಿ ಹೇಳುವುದಾದರೆ ಮಾನ ಎಂದರೆ ಅವಮಾನ ಅಥವಾ ಅಪಮಾನ, ಅಹಂಕಾರ ಇತ್ಯಾದಿ. ಹಾಗಾದರೆ ಇಲ್ಲಿ ಯಾವ ಅರ್ಥವನ್ನು ಇಟ್ಟುಕೊಂಡಾಗ ಈ ಪ್ರಶ್ನೆಗೆ ಉತ್ತರ ಲಭಿಸುತ್ತದೆ? ಅಳತೆ ಎಂಬ ಅರ್ಥವನ್ನು ಕೊಡುವ ಮಾನ ಶಬ್ದವು ಈ ಉತ್ತರ ಕೊಡಲಾರದು. ಒಬ್ಬ ಮರ್ಯಾದೆಯಿಂದ ಗೌರವಯುತವಾಗಿ ಬದುಕಿದಾಗ ಅವನಿಗೆ ಎಲ್ಲಾ ರೀತಿಯಾದ ಅರ್ಥವು, ಪರಮಾರ್ಥವೂ ದೊರಕುತ್ತದೆ. ಇದು ಮಾನ ಎಂಬ ಶಬ್ದದ ಒಂದು ಬಗೆಯ ಅರ್ಥ. ಯಾವುದು ಅಪಮಾನ - ಅವಮಾನವನ್ನು ಉಂಟುಮಾಡುವಂತಹದ್ದೋ, ಅಂತಹ ಮಾನ ಎಂಬ ಶಬ್ದದ ಅರ್ಥವನ್ನು ಇಲ್ಲಿ ನಾವು ತೆಗೆದುಕೊಳ್ಳಬೇಕು. 'ಅವನಿಗೆ ಮಾನವಿಲ್ಲ' ಎಂಬುದಾಗಿ ಹೇಳುತ್ತಾರೆ. ಅಂದರೆ ಇಲ್ಲಿ ಮಾನ ಎಂಬುದು ಅತ್ಯಂತ ಕನಿಷ್ಠ ಗುಣವನ್ನು ಹೊಂದಿದವ ಎಂಬ ಅರ್ಥವನ್ನು ಕೊಡುವ ಸಂದರ್ಭದಲ್ಲಿ ಈ ಪದದ ಬಳಕೆ ಕಂಡುಬರುತ್ತದೆ. ಇರಬೇಕಾದದ್ದು ಇಲ್ಲದಿರುವ ಸಂದರ್ಭ ಇದಾಗಿದೆ. ಮಾನಕ್ಕಾಗಿ ಪ್ರತಿಯೊಬ್ಬರೂ ಕೂಡ ಕಷ್ಟಪಡುತ್ತಾರೆ; ಮಾನವನ್ನು ಉಳಿಸಿಕೊಳ್ಳಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ; ಮಾನ ಹೋದರೆ ಅದು ಮತ್ತೆ ಬರಲಾರದು ಎಂಬಷ್ಟರ ಮಟ್ಟಿಗೆ ಈ ಮಾನವನ್ನು ಉಳಿಸಿಕೊಳ್ಳಲು ಪ್ರಯತ್ನ ಸರ್ವವಿಧವಾಗಿ ನಡೆದೇ ಇರುತ್ತದೆ. ಹಾಗಾಗಿ ಯಾವಾಗ ಈ ಮಾನವೆಂಬುದು ಕೆಡುತ್ತದೆಯೋ, ಆಗ ಸರ್ವ ಅನರ್ಥವೂ ಉಂಟಾಗುತ್ತದೆ ಎಂಬುದು ಪ್ರಶ್ನೋತ್ತರದಲ್ಲಿರುವ ವಿಷಯವಾಗಿದೆ. ಮಾನ ಎಂಬುದು ಅವನ ಉತ್ತಮವಾದ ಜೀವನದ ಪ್ರವೃತ್ತಿಯಾಗಿದೆ. ಅದನ್ನು ಆತ ಕಳೆದುಕೊಂಡರೆ ಆಗ ಅಲ್ಲಿ ಎಲ್ಲ ಬಗೆಯ ಅನರ್ಥಗಳನ್ನೂ ಆತ ಅನುಭವಿಸಬೇಕಾಗುತ್ತದೆ. ಒಬ್ಬ ಮನುಷ್ಯ ಹೇಗೆ ಬದುಕಬೇಕು? ಹೇಗೆ ಬದುಕಿದರೆ ಆ ಮನುಷ್ಯತ್ವವು ಸಾರ್ಥಕವಾಗುತ್ತದೆ ಎಂಬ ವಿಷಯವಿದೆ. ಅಂತೆಯೇ ಬದುಕಬೇಕಾದದ್ದು ಅವನ ಕರ್ತವ್ಯವೂ ಕೂಡ ಆಗಿರುತ್ತದೆ. ಅದೇ ಅವನ ಮಾನ. ಹಾಗಲ್ಲದೆ ವಿರುದ್ಧವಾಗಿ ವರ್ತಿಸಿದಾಗ ಅದು ಅನರ್ಥವೇ ಸರಿ.

 ಭಾರತೀಯ ಸಂಸ್ಕೃತಿಯಲ್ಲಿ ಬದುಕನ್ನು ಕೇವಲ ಭೌತಿಕವಾಗಿ ಕಾಣದೆ, ದೈವಿಕ ಮತ್ತು ಆಧ್ಯಾತ್ಮಿಕ ಎಂದು ಒಟ್ಟು ಮೂರು ಹಂತದ ಬದುಕನ್ನು ಹೇಳಲಾಗಿದೆ. ಈ ಮೂರು ಹಂತಗಳಲ್ಲಿ ಬದುಕನ್ನು ಗೌರವಯುತವಾಗಿ ಸಾಗಿಸಬೇಕು. ಇಹಜೀವನದಲ್ಲಿ ಬದುಕುವಾಗ ನಮ್ಮ ಸುತ್ತು ಮುತ್ತಲು ಇರುವವರ ಜೊತೆ ಅತ್ಯಂತ ಸಹೃದಯತೆಯ ಸಂಬಂಧವನ್ನು ಬೆಳೆಸಿಕೊಳ್ಳಬೇಕು. ಇದು ಭೌತಿಕಜೀವನದ ಮಾನವಾಗಿರುತ್ತದೆ. ಅಂತೆಯೇ ದೇವತೆಗಳು ಪ್ರಸನ್ನರಾಗುವಂತೆ ಬದುಕಿದರೆ ಅದು ದೈವಿಕಪ್ರಪಂಚದ ಮರ್ಯಾದೆ. ಇನ್ನೂ ಒಳಕ್ಕೆ ಸಾಗಿದಾಗ ಅಧ್ಯಾತ್ಮಪ್ರಪಂಚದ ಮರ್ಯಾದೆಗೆ ಅನುಗುಣವಾಗಿ ಬದುಕಬೇಕಾಗುತ್ತದೆ. ಇಷ್ಟು ವಿಸ್ತಾರವಾದ ಬದುಕು ಸಾಧಿಸಿದಾಗ ಮಾತ್ರ ಅವನು ಮಾನದಿಂದ - ಮರ್ಯಾದೆಯಿಂದ ಜೀವನ ನಡೆಸಿದಂತಾಗುತ್ತದೆ. ಒಂದು ವೇಳೆ ಈ ಮಾನ ಹೋದರೆ ಅಲ್ಲಿ, ಎಲ್ಲ ಅನರ್ಥಗಳು ಉಂಟಾಗುವುದರಲ್ಲಿ ಸಂಶಯವಿಲ್ಲ.

ಸೂಚನೆ : 7/9/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Saturday, September 6, 2025

ಅನಂತಪದ್ಮನಾಭ ವ್ರತ ವೈಶಿಷ್ಟ್ಯ - ಆಚರಣೆ (Anantapadmanabha Vrata Vaisisṭya - Acaraṇe)

ಲೇಖಕರು : ವಿದ್ವಾನ್ ಅನಂತ ಬಿ.ಜಿ.

ಪ್ರತಿಕ್ರಿಯಿಸಿರಿ (lekhana@ayvm.in)





ಭಾರತೀಯರು ಬಹು ಶ್ರದ್ಧೆಯಿಂದಲೂ ಆದರದಿಂದಲೂ ಆಚರಿಸುವ ವ್ರತಗಳಲ್ಲಿ ಅನಂತಪದ್ಮನಾಭನ ಚತುರ್ದಶಿ ವ್ರತವೂ ಒಂದು.  ಇದನ್ನು ಸಂಕ್ಷೇಪದಲ್ಲಿ ಅನಂತನ ಚತುರ್ದಶೀ ಅನಂತನ ಹಬ್ಬ ಎಂಬ ಹೆಸರುಗಳಲ್ಲಿಯೂ ಕರೆಯುವುದು ರೂಢಿಯಲ್ಲಿದೆ. ಅನಂತ ಎಂಬ ಪದಕ್ಕೆ ಮಹಾವಿಷ್ಣುವು ಪವಡಿಸಿರುವ ಸರ್ಪರಾಜನಾದ ಆದಿಶೇಷ, ಭೂಮಿಯನ್ನು ತನ್ನ ಹೆಡೆಯ ಮೇಲೆ ಧರಿಸಿರುವ ಶೇಷನಾಗ ಎಂದು ತಾತ್ಪರ್ಯ.ಭಗವಂತನ ಅನಂತ ಶಕ್ತಿಯುಳ್ಳ ಪ್ರಾಣಶಕ್ತಿ ;ಕುಂಡಲಿನೀ ಸ್ವರೂಪನಾದುದರಿಂದ ಆದಿಶೇಷನಿಗೆ ಈ ಹೆಸರು, ಹಾಗೆಯೇ ಈ ಅನಂತನಾದ ಶೇಷನಾಗನಿಗೂ ಆಧಾರಭೂತನಾಗಿ ಆತನನ್ನು ಹಾಸಿಗೆಯನ್ನಾಗಿಯೂ, ಆಸನವನ್ನಾಗಿಯೂ, ಅಲಂಕಾರವನ್ನಾಗಿಯೂ, ಬೆಳ್ಗೊಡೆಯನ್ನಾಗಿಯೂ, ಮಣಿ ದೀಪವನ್ನಾಗಿಯೂ, ಪಾದುಕೆಯನ್ನಾಗಿಯೂ ನೇಮಿಸಿಕೊಂಡಿರುವ ಮಹಾಪ್ರಭುವಾದ ಆದಿನಾರಾಯಣನಿಗೂ ಅನಂತನೆಂಬ ನಾಮಧೇಯವಿದೆ. ನಮೋಸ್ತು ಅನಂತಾಯ ಸಹಸ್ರ ಮೂರ್ತಯೇ ಎಂದು ವಿಷ್ಣು ಸಹಸ್ರನಾಮದಲ್ಲಿ ಬರುತ್ತದೆಯಲ್ಲವೇ ? ಈತನ ರೂಪಗಳು ಗುಣಗಳು ಶಕ್ತಿಗಳು ವಿಭೂತಿಗಳು ಎಲ್ಲವೂ ಅಂತರಹಿತವಾಗಿರುವುದರಿಂದ ಆ ಮಹಾಪ್ರಭುವಿಗೆ ಈ ಹೆಸರು ಬಹಳವಾಗಿ ಒಪ್ಪುತ್ತದೆ.  ಇನ್ನು ಅನಂತನಾಗನನ್ನು ಶಯನವನ್ನಾಗಿ ಹೊಂದಿರುವುದರಿಂದ ಅನಂತಶಯನ ಎಂಬುದಾಗಿಯೂ, ಬ್ರಹ್ಮದೇವರಿಗೆ ಉತ್ಪತ್ತಿ ಸ್ಥಾನವಾಗಿರುವ ಪದ್ಮವನ್ನು ನಾಭಿನ್ನಾಗಿ ಹೊಂದಿರುವುದರಿಂದ ಅನಂತಪದ್ಮನಾಭನೆಂದೂ ಕರೆಯಲ್ಪಡುವ ದೇವನಾದ ನಾರಾಯಣನಿಗೂ ಅನಂತ ಎಂಬುದು ಸಂಕ್ಷಿಪ್ತ ರೂಪದ ಹೆಸರು. 

ಅನಂತಪದ್ಮನಾಭನ ಸ್ವರೂಪ.
ಈ ಮೂರ್ತಿಗೆ ಎರಡು ಬಾಹುಗಳಿವೆ. ಅವುಗಳಲ್ಲಿ ಮೇಲಿರುವ ಎಡಗೈಯಲ್ಲಿ ಕೆಳಮುಖವಾದ ಒಂದು ಕಮಲವನ್ನು ತನ್ನ ಕಂಠದ ನೇರಕ್ಕೆ ಹಿಡಿದುಕೊಂಡಿದ್ದಾನೆ. ಕೆಳಗೆ ಚಾಚಿರುವ ಬಲಗೈಯಿಂದ ಶಿವಲಿಂಗವನ್ನು ಮುಚ್ಚಿಕೊಂಡಂತೆ ಕಾಣುತ್ತದೆ. ಹತ್ತಿರದಲ್ಲಿ ತನಗೆ ಸುಪ್ರಭಾತವನ್ನು ಬಯಸುತ್ತಿರುವ ಋಷಿಗಳನ್ನು ಮತ್ತು ಅನೇಕ ದೇವತೆಗಳನ್ನು ತನ್ನ ಯೋಗ ನಿದ್ರೆಯಿಂದ ಎಚ್ಚರಗೊಂಡಿರುವ ವಿಶಾಲವಾದ ಕಣ್ಣುಗಳಿಂದ ಅನುಗ್ರಹಿಸುತ್ತಿರುವ ಭಂಗಿಯಲ್ಲಿ ಸ್ವಾಮಿಯು ವಿರಾಜಿಸಿದ್ದಾನೆ. ನಾಭಿಯ ಪದ್ಮದಲ್ಲಿ ಚತುರ್ಮುಖ ಬ್ರಹ್ಮನು ಬೆಳಗುತ್ತಿದ್ದಾನೆ.  ಈ ದಿವ್ಯವಾದ ಮೂರ್ತಿಯನ್ನು ಶ್ರೀ ಕ್ಷೇತ್ರ ತಿರುವನಂತಪುರದಲ್ಲಿ ಸಂದರ್ಶಿಸಬಹುದಾಗಿದೆ. 

ವ್ರತದ ಕಾಲ.
ದಕ್ಷಿಣಾಯನದಲ್ಲಿ ಬರುವ ಭಾದ್ರಪದ ಶುದ್ಧ ಚತುರ್ದಶಿಯಂದು ಈ ವ್ರತವನ್ನು ಆಚರಿಸಬೇಕು. ಈ ಬಾರಿ ಇದು ಇದೇ ಸೆಪ್ಟೆಂಬರ್ 6ನೇ ತಾರೀಖಿನಂದು ಒದಗಿ ಬಂದಿದೆ. ಈ ಹಬ್ಬದ ಮಾರನೆಯ ದಿವಸ ಬರುವ ಹುಣ್ಣಿಮೆಯನ್ನು ಅನಂತನ ಹುಣ್ಣಿಮೆ ಎಂಬ ಹೆಸರಿನಿಂದ ಕರೆಯುವುದುಂಟು. 

ಆಚರಣೆಯ ಕ್ರಮ.
ಅಂದು ಬೆಳಿಗ್ಗೆ ಸ್ನಾನ, ನಿತ್ಯಕರ್ಮಗಳ ಅನಂತರ ದಂಪತಿಗಳು ಕೆಂಪು ವಸ್ತ್ರವನ್ನುಟ್ಟು ಆಚಮನವನ್ನು ಮಾಡಿ ಅನಂತ ವ್ರತವನ್ನು ಆಚರಿಸಲು ಸಂಕಲ್ಪ ಮಾಡಬೇಕು. ಈ ವ್ರತದ ಅಂಗವಾಗಿ ಯಮುನಾ ದೇವಿಯ ಪೂಜೆಯನ್ನು ಮಾಡುವುದು ಒಂದು ವಿಶೇಷ. 
ಎರಡು ಕಳಶಗಳನ್ನು ಸ್ಥಾಪಿಸಿ ಎರಡರಲ್ಲಿಯೂ ಅನಂತದೇವನನ್ನು ಆವಾಹನೆ ಮಾಡಿ ಕಲ್ಪೋತ್ತವಾಗಿ ಪೂಜಿಸಬೇಕು. ಕಳಶ ಪೂಜೆ, ಪ್ರಾಣಪ್ರತಿಷ್ಠೆ, ದ್ವಾರಪಾಲಾದಿ ಪರಿವಾರದ ಪೂಜೆ, ದಿಕ್ಪಾಲಕರ ಪೂಜೆ, ಅಂಗಪೂಜೆ, ಪತ್ರ -ಪುಷ್ಪಗಳಿಂದ ಪೂಜೆ, ದರ್ಭೆಯಲ್ಲಿ ಮಾಡಿದ ಐದು ಅಥವಾ ಏಳು ಹೆಡೆಗಳ ಶೇಷನಾಗನ ಪೂಜೆ, ದೋರಗ್ರಂಥಿಗಳ ಪೂಜೆ, ಅನಂತನ ಅಷ್ಟೋತ್ತರ ಶತನಾಮಾವಳಿ ಅಂತೆಯೇ  ಸಹಸ್ರನಾಮಾರ್ಚನೆ, ಧೂಪ ದೀಪ ನೈವೇದ್ಯ, ಪ್ರಾರ್ಥನೆಗಳು ಕ್ರಮವಾಗಿ ನಡೆಯಬೇಕು. 

ಅನಂತಪದ್ಮನಾಭನನ್ನು ಕುಂಭಗಳಲ್ಲಿ ಮಾತ್ರವಲ್ಲದೆ ಮಂಡಲದಲ್ಲಿ ಮೂರ್ತಿಯಲ್ಲಿ ಮತ್ತು ಚಿತ್ರಪಟದಲ್ಲೂ ಪೂಜಿಸಬಹುದು. ಅನಂತಪದ್ಮನಾಭನ ವ್ರತದ ವಿಷಯದಲ್ಲಿ ಗಮನಿಸಬೇಕಾದ ಒಂದು ಮುಖ್ಯವಾದ ವಿಷಯ ಎಂದರೆ 14 ಎಂಬ ಸಂಖ್ಯೆ ಆತನ ವ್ರತದ ತಿಥಿಯು ಚತುರ್ದಶೀ ಆತನ ಪೂಜೆಯಲ್ಲಿ ಕೈಗೆ ಕಟ್ಟಿಕೊಳ್ಳುವ ಸೂತ್ರದ ಗ್ರಂಥಿಗಳು 14.  ಆವರಣ ಪೂಜೆಯ ದೇವತೆಗಳು 14. ಆತನಿಗೆ ಸಮರ್ಪಿಸುವ ಪತ್ರಗಳ ಪುಷ್ಪಗಳ ಮತ್ತು ನೈವೇದ್ಯಗಳ ಸಂಖ್ಯೆ 14, ವ್ರತದ ಉದ್ಯಾಪನೆಯನ್ನು 14 ವರ್ಷದ ನಂತರ ಮಾಡಬೇಕು, 14 ಲೋಕಗಳಿಂದ ಕೂಡಿದ ಸಮಸ್ತ ವಿಶ್ವವೂ ಆತನ ಅಖಂಡವಾದ ಆಧಿಪತ್ಯಕ್ಕೆ ಸೇರಿದೆ ಎಂಬ ವಿಷಯಕ್ಕೆ ಈ ವಿಶಿಷ್ಟ ಸಂಖ್ಯೆಯು ಸಂಕೇತವಾಗಿದೆ. 

ಅನಂತನ ದಾರ ಮತ್ತು ಗೋಧಿಯಿಂದ ಮಾಡಿದ ಸಜ್ಜಪ್ಪವೆಂಬ ಸಿಹಿಯಾದ ಭಕ್ಷ್ಯವು ಈ ವ್ರತದ ವಿಶೇಷಗಳಲ್ಲಿ ಸೇರುತ್ತದೆ. ಅಂತೆಯೇ ಅನಂತನಿಗೆ ಪ್ರಿಯವಾದ ವರ್ಣ . ಕೆಂಪು ಬಣ್ಣ, ಆದ್ದರಿಂದಲೇ ಅಂದು ವ್ರತವನ್ನು ಆಚರಿಸುವವರು ಕೆಂಪು ಬಣ್ಣದ ವಸ್ತ್ರಗಳನ್ನು ಧರಿಸಬೇಕು. ಅನಂತನ ದಾರದ ಬಣ್ಣವು ಕೆಂಪು, ರಕ್ತ ಚಂದನದಿಂದ ಅವನಿಗೆ ಲೇಪನ, ಜೊತೆಗೆ ಅನಂತನ ಗೊಂಡೆ ಎಂಬ ಹೆಸರಿನ ಕೆಂಪಾದ ಹೂವುಗಳು ಕೂಡ ಅನಂತನಿಗೆ ಪ್ರಿಯವಾದವು. 
ಅನಂತಪದ್ಮನಾಭ ಮೂರ್ತಿಯ ಮತ್ತೊಂದು ವಿಶೇಷವೆಂದರೆ ಅವನ ಸುತ್ತ ನೆರೆದಿರುವ ಭಕ್ತಗಣण् ಅವರಲ್ಲಿ ಋಷಿಗಳಿದ್ದಾರೆ, ಕಿನ್ನರರಿದ್ದಾರೆ, ಕೆಂಪುರುಷರಿದ್ದಾರೆए ದೇವತೆಗಳೂ ಇದ್ದಾರೆ, ಅವರೆಲ್ಲರೂ ಏತಕ್ಕಾಗಿ ಸೇರಿದ್ದಾರೆ. ಎಂದರೆ ಯೋಗ ನಿದ್ರೆಯಲ್ಲಿ ಮುಳುಗಿ ಕಣ್ಣುಗಳನ್ನು ಮುಚ್ಚಿಕೊಂಡಿರುವ ಸ್ವಾಮಿಯು ಯಾವಾಗ ಲೋಕವನ್ನು ಅನುಗ್ರಹಿಸಲು ಕಣ್ಣುಗಳನ್ನು ತೆರೆಯುತ್ತಾನೆಯೋ, ಯಾವಾಗ ಯೋಗದ ಅನುಭವಗಳಿಂದ ತುಂಬಿದ ಅವನ ಕಮಲದ ಕಣ್ಣುಗಳನ್ನು ನೋಡುತ್ತೇವೆಯೋ, ಯಾವಾಗ ಅವನ ದೃಷ್ಟಿ ಪ್ರಸಾದವನ್ನು ಪಡೆಯುತ್ತೇವೆಯೋ ಎಂದು ಕಾತರದಿಂದ ಕಾದಿದ್ದಾರೆ. 

ಹೀಗೆ ಸೇರಿದ ಗುಂಪಿನಲ್ಲಿ ಸ್ವಾಮಿಯ ಹಾಸಿಗೆ ಯಾಗಿರುವ ಆದಿಶೇಷನೂ ಇದ್ದಾನೆ, ಸ್ವಾಮಿಗೆ ವಾಹನವಾಗಿರುವ ಗರುಡನೂ ಇದ್ದಾನೆ, ಇವರಿಬ್ಬರೂ ಪರಸ್ಪರ ಶತ್ರುಗಳಲ್ಲವೇ ? ಎಂದರೆ, ಪ್ರಸ್ತುತ ಭಗವಂತನ ಸನ್ನಿಧಿಯಲ್ಲಿ ಅವರಿಬ್ಬರೂ ತಮ್ಮ ಸಹಜ ವೈರವನ್ನು ಮರೆತು ಭಗವಂತನಲ್ಲಿಯೇ ನೆಟ್ಟ ಮನಸುಳ್ಳವರಾಗಿದ್ದಾರೆ.  ಭಗವಂತನ ಸನ್ನಿಧಿಯಲ್ಲಿ ನಮ್ಮ ನಮ್ಮ ಪ್ರಕೃತಿಯ ಚೇಷ್ಟೆಗಳಿಗೆ ಅವಕಾಶವಿರುವುದಿಲ್ಲಪ್ಪ ಎಂಬ ರಹಸ್ಯವನ್ನು ಶ್ರೀರಂಗ ಹಾಗುರುಗಳು ತಿಳಿಸಿಕೊಟ್ಟಿರುತ್ತಾರೆ. 

ಯೋಗ ಭೋಗಗಳೆರಡನ್ನೂ ಅನುಗ್ರಹಿಸಿ ಕೊಡುವ ಅನಂತಪದ್ಮನಾಭನ ಚತುರ್ದಶಿಗೆ ಸಿದ್ಧರಾಗೋಣ. 

Monday, September 1, 2025

ಪ್ರಶ್ನೋತ್ತರ ರತ್ನಮಾಲಿಕೆ 30 (Prasnottara Ratnamalike 30)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೩೦. ಪ್ರಿಯ ಯಾವುದು?

ಉತ್ತರ - ಪ್ರಾಣಿಗಳಿಗೆ ಕಲ್ಯಾಣ.


ಈ ಮುಂದಿನ ಪ್ರಶ್ನೆ ಹೀಗಿದೆ - 'ಪ್ರಿಯ ಯಾವುದು?' ಎಂಬುದಾಗಿ. ಅದಕ್ಕೆ ಉತ್ತರ - 'ಪ್ರಾಣಿಗಳಿಗೆ ಕಲ್ಯಾಣವಾದದ್ದು' ಯಾವುದೋ ಅದನ್ನು ಪ್ರಿಯ ಎಂಬುದಾಗಿ ಕರೆಯಲಾಗುತ್ತದೆ. ಅಂದರೆ ಪ್ರಾಣಿಗಳಿಗೆ, ಅಥವಾ ಸೃಷ್ಟಿಯಲ್ಲಿ ಇರುವ ಪ್ರತಿಯೊಂದು ಜೀವಿಗೆ ಪ್ರಿಯವಾಗುವಂತೆ ಇರುವುದು; ಅವುಗಳಿಗೆ ಒಳ್ಳೆಯದಾಗುವಂತೆ ಅಥವಾ ಕಲ್ಯಾಣವಾಗುವಂತೆ ನಡೆದುಕೊಳ್ಳುವಿಕೆಯನ್ನೇ 'ಪ್ರಿಯ' ಎಂಬುದಾಗಿ ಇಲ್ಲಿ ಹೇಳಲಾಗಿದೆ. ಹೀಗೊಂದು ಮಾತಿದೆ - "ನ ಹಿ ಕಸ್ಯ ಪ್ರಿಯಃ ಕೋ ವಾ ವಿಪ್ರಿಯಃ ವಾ ಜಗತ್ತ್ರಯೇ । ಕಾಲೇ ಕಾರ್ಯವಶಾತ್ ಸರ್ವೇ ಭವಂತ್ಯೇವ ಅಪ್ರಿಯಾಃ ಪ್ರಿಯಾಃ ॥" ಯಾರಿಗೆ ಯಾರೂ ಪ್ರಿಯನು ಅಲ್ಲ ಅಪ್ರಿಯನೂ ಅಲ್ಲ. ಯಾವುದೋ ಕಾಲದಲ್ಲಿ, ಯಾವುದೋ ಕಾರ್ಯಕ್ಕೆ ಅನುಗುಣವಾಗಿ ಅವನು ಪ್ರಿಯ ಅಥವಾ ಅಪ್ರಿಯ ಎಂಬುದಾಗಿ ಪರಿಗಣಿತವಾಗುತ್ತಾನೆ ಎಂಬುದಾಗಿ. ಅಂದರೆ ವಸ್ತುವು ಅಥವಾ ಪ್ರಾಣಿಯು ನಮಗೆ ಪ್ರಿಯವಾಗಬೇಕಾದರೆ ಅದೊಂದು ಕಾಲದ ಸನ್ನಿವೇಶದಲ್ಲಿ ನಮಗೆ ಸಂಬಂಧಿಸಿದ್ದಾದಾಗ ಮಾತ್ರ ಆಗುತ್ತದೆ. ಹಾಗಾಗಿ ಆ ಸಂದರ್ಭದಲ್ಲಿ ಆ ಪ್ರಾಣಿಗೆ ನಾವು ಒಳ್ಳೆಯದನ್ನು ಉಂಟುಮಾಡಿದರೆ ಅದನ್ನು 'ಪ್ರಿಯ' ಎಂಬುದಾಗಿ ಕರೆಯಬೇಕು. ಮಾನವನಾದ ನಾವುಗಳು ಅತ್ಯಂತ ವಿವೇಕಿಯಾಗಿ ಎಲ್ಲ ಪ್ರಾಣಿಗಳಿಗೆ ಕಲ್ಯಾಣವಾಗಬೇಕು ಎಂಬುದನ್ನು ಬಯಸಬೇಕು. ಅಂದರೆ ಎಲ್ಲ ಪ್ರಾಣಿಗಳು ಈ ಪ್ರಪಂಚದಲ್ಲಿ ಬದುಕಬೇಕು; ಆ ಬದುಕು ಅವುಗಳಿಗೆ ಸಾರ್ಥಕತೆಯನ್ನು ಕೊಡುವಂತಿರಬೇಕು; ಕೇವಲ ಆಹಾರ ನಿದ್ರಾ ಭಯಗಳಿಂದ ಕೂಡಿದ ಜೀವಿಕೆ ಅವುಗಳದ್ದು. ಆದರೂ ಕೂಡ ಅವುಗಳು ಇವೆಲ್ಲವನ್ನೂ ದಾಟಿ ಮುಂದೆ ಆ ಜೀವವು ಸನ್ಮಾರ್ಗದತ್ತ ನಡೆಯುವಂತಾಗಬೇಕು. ಕರ್ಮಸಿದ್ಧಂತದ ಅನುಗುಣವಾಗಿ ಪ್ರತಿಯೊಂದು ಜೀವವೂ ಅದರ ಕರ್ಮಕ್ಕೆ ಅನುಗುಣವಾಗಿ ಆ ಕರ್ಮಫಲವನ್ನು ಸವೆಸಲು ಆ ಜನ್ಮವನ್ನು ಪಡೆದಿರುತ್ತದೆ. ಅದಕ್ಕೆ ಪ್ರತಿಯೊಬ್ಬರೂ ಕೂಡ ಸಹಕರಿಸಬೇಕಾಗುತ್ತದೆ. ಹಾಗಾಗಿ ಇಂತಹ ಕಲ್ಯಾಣದ ಮನೋಭಾವನೆ ಇರುವಂತಹದ್ದನ್ನು 'ಪ್ರಿಯ' ಎಂಬುದಾಗಿ ಕರೆಯಲಾಗಿದೆ. ಜೀವಕಲ್ಯಾಣವುಂಟಾಗುವಂತೆ ಬದುಕನ್ನು ಸಾಗಿಸಲು ಜ್ಞಾನವನ್ನು ಸಂಪಾದಿಸಬೇಕು. ಅದರ ಹಿನ್ನೆಲೆಯಲ್ಲಿ ಮುಂದಿನ ಹೆಜ್ಜೆಗಳಾದ ಇಚ್ಛೆ ಮತ್ತು ಕ್ರಿಯೆಗಳು ನಡೆಯುವಂತಾಗಬೇಕು. 


ಈ ಹಿಂದಿನ ಲೇಖನದಲ್ಲಿ ಜ್ಞಾಪಿಸಿಕೊಂಡಂತೆ ಹೇಗೆ ಸತ್ಯವು ಕಾಯಿಕ, ವಾಚಿಕ ಮತ್ತು ಮಾನಸಿಕ ಎಂಬುದಾಗಿ ಮೂರು ವಿಧವಿದೆಯೋ, ಅಂತಯೇ ಈ ಪ್ರಿಯವೂ ಕೂಡ ಮೂರು ವಿಧವಾಗಿದೆ. ಜೀವಕ್ಕೆ ಕಲ್ಯಾಣವನ್ನು ಈ ಮೂರು ಬಗೆಯಲ್ಲೂ ಕೂಡ ಮಾಡಲು ಸಾಧ್ಯ. ಸಾಮಾನ್ಯವಾಗಿ ಮನಸ್ಸಿಗೆ ಯಾವುದು ಮುದವನ್ನು ಕೊಡುತ್ತದೆಯೋ ಅದು ಪ್ರಿಯ ಎಂಬುದಾಗಿ ಹೇಳಲಾಗುತ್ತದೆ. ಪ್ರಿಯವಾದದ್ದೆಲ್ಲವೂ ಹಿತವಾಗುವುದಿಲ್ಲ. ಹಿತವಾದದ್ದೆಲ್ಲವೂ ಪ್ರಿಯವಾಗಬೇಕೆಂದು ಇಲ್ಲ ಆದರೆ ಯಾವುದು ಹಿತವೂ ಮತ್ತು ಪ್ರಿಯವೂ ಆಗಿರುತ್ತದೆಯೋ, ಅದುವೇ ಜೀವಕ್ಕೂ ಹಿತ ಮತ್ತು ಪ್ರಿಯ ಎಂಬ ಮಾತನ್ನು ಶ್ರೀರಂಗ ಮಹಾಗುರುಗಳು ಹೇಳಿದ್ದನ್ನು ಜ್ಞಾಪಿಸಿಕೊಳ್ಳಬಹುದು. ಹಾಗಾಗಿ ಪ್ರತಿಯೊಂದು ಜೀವವೂ ಅದರ ಸಹಜತೆಯಲ್ಲಿ ಬದುಕಿದರೆ ಮಾತ್ರ ಆಗ ಎಲ್ಲ ಜೀವಿಗಳಿಗೆ ಶುಭ ಅಥವಾ ಕಲ್ಯಾಣ ಉಂಟಾಗುತ್ತದೆ. ಅದುವೇ ಪ್ರಿಯವಾದ ಬದುಕು. ಹಾಗೆ ಬದುಕ ಸಾಗಿಸಬೇಕು ಎಂಬ ಉಪದೇಶ ಈ ಪ್ರಶ್ನೋತ್ತರದಲ್ಲಿ ಕಾಣುತ್ತದೆ.


ಸೂಚನೆ : 31/8/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 152 ಯುದ್ಧಕ್ಕೆ ಮೊದಲಿರಬೇಕಾದ ಸಿದ್ಧತೆಗಳೇನು? (Vyaasa Vikshita 152)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಯುದ್ಧಕ್ಕೆ ಮುನ್ನಾ ಸಿದ್ಧತೆಗಳೇನು?


ರಾಜನು ತನ್ನ ದೇಶವನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬುದನ್ನು ನಾರದರು ಯುಧಿಷ್ಠಿರನಿಗೆ ವಿವರಿಸಿ ಹೇಳುತ್ತಿದ್ದಾರೆ.

ಶತ್ರುರಾಷ್ಟ್ರದ ಸೇನಾಮುಖ್ಯಾಧಿಕಾರಿಗಳಿಗೆ ಗುಟ್ಟಾಗಿ ಯೋಗ್ಯತಾನುಸಾರಿಯಾಗಿ ರತ್ನಗಳನ್ನು ಕೊಟ್ಟು ವಶದಲ್ಲಿಟ್ಟುಕೊಂಡಿರಬೇಕು. ಹಾಗೆ ಮಾಡುತ್ತಿದ್ದೇಯೆ ತಾನೆ?

ರಾಜನು ಮೊಟ್ಟಮೊದಲು ತನ್ನನ್ನು ತಾನೇ ಜಯಿಸಿಕೊಂಡಿರಬೇಕು. ಅದನ್ನು ಸಾಧಿಸಿ ಜಿತೇಂದ್ರಿಯನಾಗಿರಬೇಕು. ಪ್ರಮತ್ತರಾಗಿರುವ ಹಾಗೂ ಗರ್ವಭರಿತರಾದ ಶತ್ರುಗಳನ್ನು ಜಯಿಸಲು ಆಗಲೇ ಸಾಧ್ಯವಾಗುವುದು. ನೀನು ಹಾಗೆ ಮಾಡುತ್ತಿರುವೆ ತಾನೆ?

ಶತ್ರುವಿನ ಮೇಲೆ ದಂಡೆತ್ತಿಹೋಗುವುದೆಂದರೆ ಮೊಟ್ಟಮೊದಲು ಸಾಮ-ದಾನ-ಭೇದಗಳನ್ನು ಪ್ರಯೋಗಿಸಿ ನೋಡಿಯಾಗಿರಬೇಕು. ಹಾಗೆ ಅವನ್ನು ಪ್ರಯೋಗಿಸಿದ ಬಳಿಕವೇ ಯುದ್ದಮಾಡಬಹುದು, ಮುಂಚೆ ಅಲ್ಲ.

ಶತ್ರುಗಳ ಮೇಲೆ ದಂಡೆತ್ತಿ ಹೋಗುವ ಮೊದಲು ಮಾಡಬೇಕಾದ ಕೆಲಸವೊಂದಿದೆ. ಅದೆಂದರೆ ಮೂಲವನ್ನು ದೃಢಪಡಿಸಿಕೊಳ್ಳುವುದು - ಅರ್ಥಾತ್ ನಿನ್ನ ರಾಜ್ಯವೇ ಗಟ್ಟಿಯಾಗಿ ಉಳಿದಿದೆಯೇ? - ಎಂದು ಪರೀಕ್ಷಿಸಿಕೊಳ್ಳುವುದು; ಆನಂತರವೇ ಶತ್ರುಗಳ ಮೇಲೇರಿಹೋಗತಕ್ಕದ್ದು; ಹಾಗೂ ಗೆದ್ದದ್ದನ್ನು ರಕ್ಷಿಸಿಕೊಳ್ಳಲಾಗುವುದು. ರಾಜನೇ, ನೀನು ಹಾಗೆ ಮಾಡುತ್ತಿರುವೆ ತಾನೆ?

ಸೈನ್ಯಕ್ಕೆ ಎಂಟು ಅಂಗಗಳಿರುವುವು: ಧನ-ರಕ್ಷಕ, ದ್ರವ್ಯ-ಸಂಗ್ರಾಹಕ, ಚಿಕಿತ್ಸಕ, ಗುಪ್ತಚರ, ಪಾಚಕ, ಸೇವಕ, ಲೇಖಕ ಹಾಗೂ ಪ್ರಹರೀ - ಎಂಬುದಾಗಿ. ಹಾಗೆಯೇ ಅದಕ್ಕೆ ನಾಲ್ಕು ಬಲಗಳುಂಟು - ಹಸ್ತಿ(ಗಜ), ಅಶ್ವ, ರಥ, ಪದಾತಿ - ಎಂಬುದಾಗಿ. ಹೀಗೆ ಅಷ್ಟಾಂಗಗಳಿಂದಲೂ ಚತುರ್ಬಲಗಳಿಂದಲೂ ಕೂಡಿರುವ ಸೈನ್ಯಕ್ಕಿರುವ ಅಧಿಪತಿಗಳು ಸೈನ್ಯವನ್ನು ಚೆನ್ನಾಗಿ ಮುನ್ನಡೆಸಬಲ್ಲವರಾಗಿರಬೇಕು, ಹಾಗೂ ಶತ್ರುಗಳನ್ನು ಕೆಡವಲು ಸಮರ್ಥರಾಗಿರಬೇಕು. ನಿನ್ನ ಸೈನ್ಯ-ಸೇನಾಧಿಪತಿಗಳು ಹೀಗೇ ಇರುವುದಲ್ಲವೆ?

ಶತ್ರುರಾಜ್ಯದಲ್ಲಿ ಕ್ಷಾಮ ಬಂದಿರುವ ಸಮಯ, ಪೈರುಗಳ ಕೊಯಿಲಿನ ಕಾಲ - ಇವುಗಳನ್ನು ಗಣಿಸದೇ ಶತ್ರುಗಳನ್ನು ಸಂಹರಿಸತಕ್ಕದ್ದು. ನೀನು ಹಾಗೆ ಮಾಡುತ್ತಿರುವೆಯಷ್ಟೆ?

ಅನ್ಯರಾಷ್ಟ್ರಗಳನ್ನು ಗೆದ್ದಾಗ ಅಲ್ಲಿ ತನ್ನ ಅಧಿಕಾರಿಗಳನ್ನು ರಾಜನು ನೇಮಿಸುವವಷ್ಟೆ? ಅವರೂ, ಸ್ವರಾಷ್ಟ್ರದಲ್ಲಿಯೇ ನೇಮಕಗೊಂಡ ಅಧಿಕಾರಿಗಳೂ, ರಾಜಾದಾಯವನ್ನು ಸಂಗ್ರಹಿಸುತ್ತಾ ಇದ್ದು, ಪರಸ್ಪರ ಹೊಂದಿಕೊಂಡಿದ್ದು ರಾಜ್ಯರಕ್ಷಣೆಯನ್ನು ಮಾಡುತ್ತಿರಬೇಕು. ನಿನ್ನ ಅಧಿಕಾರಿವರ್ಗದವರೆಲ್ಲ ಹಾಗಿರುವರು ತಾನೆ?

ರಾಜನು ಸೇವಿಸುವ ಆಹಾರ-ಪದಾರ್ಥ, ಧರಿಸುವ ವಸ್ತ್ರಗಳು, ಸುಗಂಧ-ದ್ರವ್ಯಗಳು - ಇವನ್ನು ರಾಜನು ನೆಚ್ಚುವ ಅಧಿಕಾರಿಗಳೇ ರಕ್ಷಿಸತಕ್ಕದ್ದು. ನಿನ್ನ ರಾಜ್ಯದಲ್ಲಿ ಈ ಪ್ರಕಾರವಾಗಿಯೇ ನಡೆಯುತ್ತಿದೆಯಷ್ಟೆ? (ಭಾರತದ ಹಿಂದಿನ ಪ್ರಧಾನಿಯೊಬ್ಬರು ವಿದೇಶದಲ್ಲಿ ಮರಣಹೊಂದಿದಾಗ ಅವರ ಆಹಾರದಲ್ಲೇ ವಿಷ-ಮಿಶ್ರಣವಾಗಿದ್ದರೂ, ಅವರ ಆಹಾರ-ಪರಿಚಾರಕನ ಮೇಲೆಯೇ ಸಂಶಯವು ಪ್ರಬಲವಾಗಿದ್ದರೂ, ಅದನ್ನೆಲ್ಲ ಮುಚ್ಚಿಹಾಕಲಾಯಿತಷ್ಟೆ?).

ರಾಜನ ಬೊಕ್ಕಸ, ವಾಸ-ಸ್ಥಳ, ವಾಹನ (ಗಜಶಾಲೆ-ಅಶ್ವಶಾಲೆಗಳು), ದ್ವಾರಗಳು, ಆಯುಧಾಗಾರ - ಇವೆಲ್ಲೆಡೆ ನಿನ್ನ ಕ್ಷೇಮವನ್ನೇ ಸಾಧಿಸತಕ್ಕವರೂ ನಿನ್ನಲ್ಲಿಯೇ ಭಕ್ತಿಯುಳ್ಳವರೂ ಆದವರೇ ಮೇಲ್ವಿಚಾರಕರಾಗಿರುವರಷ್ಟೆ?

ಅರಮನೆಯ ಒಳನೆಲೆಗಳಲ್ಲಿ ಕೆಲಸಮಾಡುವ ಪಾಚಕರೇ ಮೊದಲಾದವರೂ, ಹತ್ತಿರದ ನೆಲೆಗಳಲ್ಲಿರುವ ಮಂತ್ರಿ-ಸೇನಾಪತಿ-ರಾಜಪುತ್ರ ಮೊದಲಾದವರೂ ಸುರಕ್ಷಿತರಾಗಿರತಕ್ಕದ್ದು. ಇವರುಗಳಿಂದ ತನ್ನ ರಕ್ಷಣೆಯನ್ನು ಸಾಧಿಸುವುದು, ಹಾಗೂ ಇವರುಗಳಿಗೆ ತಾನು ರಕ್ಷಣೆಯನ್ನು ಸಾಧಿಸುವುದು - ಹೀಗೆ ಪಾರಸ್ಪರಿಕ-ರಕ್ಷಣವೆಂಬುದು ಮುಖ್ಯ. ಅದೆಲ್ಲವೂ ಹಾಗೆ ಆಗುತ್ತಿದೆ ತಾನೆ, ನಿನ್ನ ರಾಜ್ಯದಲ್ಲಿ?

ಪಾನ-ದ್ಯೂತಗಳು, ಎಂದರೆ ಕುಡಿತ-ಜೂಜುಗಳು, ಹಾಗೂ ಕ್ರೀಡೆ-ಸ್ತ್ರೀಸಂಗ- ಇವುಗಳು, ರಾಜರಿಗಂಟತಕ್ಕ ವ್ಯಸನಗಳು (ಚಟಗಳು). ಪೂರ್ವಾಹ್ಣದ ಕಾಲದಲ್ಲಿ ಇಂತಹ ವಿಷಯಗಳನ್ನೊಡ್ಡಿ ನಿನ್ನ ಹಣ-ಸಮಯ ಗಳನ್ನು ಸೇವಕರು ಹಾಳುಮಾಡುತಿಲ್ಲ ತಾನೆ?

ಸೂಚನೆ : 31/8/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.


Saturday, August 30, 2025

ಅಷ್ಟಾಕ್ಷರೀ 88 ಮೂಷಕವಾಹನಮ್ (Astaksari 88)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಗಣಪನ ಹೊರುವವ ಇಲಿಯೇ ಏಕೆ?

ಈಗಷ್ಟೇ ಗೌರಿ-ಗಣೇಶ ಹಬ್ಬಗಳು ಮುಗಿದಿವೆ. ಅವುಗಳತ್ತ ಒಂದು ಹಿನ್ನೋಟವು ಅನುಚಿತವೇನಾಗಲಾರದು.

"ಗಣಪನಿಲ್ಲದ ಗ್ರಾಮವಿಲ್ಲ" ಎಂಬ ಗಾದೆಯೇನೋ ಕನ್ನಡದಲ್ಲಿದೆ. ಇತರ-ದೇವತೆಗಳ ಪೂಜೆಯಂತೆ ಗಣಪತಿ-ಪೂಜೆಯೂ ಮನೆಮನೆಗಳಲ್ಲಷ್ಟೆ ನಡೆಯುತ್ತಿದ್ದದ್ದು. ಅದನ್ನೊಂದು ರಾಷ್ಟ್ರೀಯ ಹಬ್ಬವನ್ನಾಗಿಸಿದವರು ಬಾಲಗಂಗಾಧರತಿಲಕರು. ಆಗ ಹೇಗಿತ್ತು?: ಆಂಗ್ಲರ ದಬ್ಬಾಳಿಕೆ ಮಿತಿಮೀರಿತ್ತು; ಜನರಲ್ಲಿ ದೇಶಭಕ್ತಿ ಕ್ಷೀಣಿಸಿತ್ತು; ಸ್ವಸಂಸ್ಕೃತಿಯ ಅಭಿಮಾನ ನಷ್ಟವಾಗಿತ್ತು; ಆಗ ಗಣೇಶೋತ್ಸವವನ್ನೇ ಬಳಸಿಕೊಂಡು ಜನಜಾಗರಣವನ್ನುಂಟುಮಾಡಿ, ಸ್ವಾತಂತ್ರ್ಯಾಂದೋಳನದ ಕೆಚ್ಚನ್ನು ಹೆಚ್ಚಿಸಿದವರೇ ಲೋಕಮಾನ್ಯರು. 

ಬ್ರಿಟಿಷರನ್ನು ಒದ್ದೋಡಿಸಿದ್ದೇನೋ ಆಯಿತು. ಆದರೆ ಪಾಶ್ಚಾತ್ತ್ಯರನ್ನು ನಾವು ಸಂಪೂರ್ಣವಾಗಿ ತೊಲಗಿಸಲಾಗಿಲ್ಲ. ಹೇಗೆ? ನಮ್ಮ ಪ್ರಾಚೀನ-ಸಾಹಿತ್ಯಗಳಿಗಾಗಲಿ, ಕಲೆ-ಶಿಲ್ಪಗಳಿಗಾಗಲಿ, ಅವರಿತ್ತ ವ್ಯಾಖ್ಯಾನಗಳೇ ಇನ್ನೂ ನಮ್ಮ ತಲೆ ತಿನ್ನುತ್ತಿವೆ. ಅಲ್ಲಿಗೆ, ಭೌತಿಕವಾಗಿ ಅವರನ್ನು ಓಡಿಸಿದ್ದಾಯಿತು, ಬೌದ್ಧಿಕವಾಗಿ ಓಡಿಸಲಾಗಿಲ್ಲ. ಪಾಶ್ಚಾತ್ಯರ ಮಾನಸ-ಪುತ್ರರೇ ಇಂದು ನಮ್ಮ ವಿಶ್ವವಿದ್ಯಾಲಯಗಳಲ್ಲೆಲ್ಲಾ ತುಂಬಿಹೋಗಿದ್ದಾರೆ!

ನಮ್ಮಲ್ಲಿಯ ಪಂಚಾಯತನ-ಪೂಜೆಯಲ್ಲಿ ಒಂದನ್ನು ಪ್ರಧಾನದೇವತೆಯನ್ನಾಗಿಯೂ ಉಳಿದವನ್ನು ಗೌಣದೇವತೆಗಳನ್ನಾಗಿಯೂ ಭಾವಿಸುವುದಿದೆ. ಅಲ್ಲಿಯ ಐದು ದೇವತೆಗಳೆಂದರೆ ಆದಿತ್ಯ, ಅಂಬಿಕೆ, ವಿಷ್ಣು, ಗಣನಾಥ, ಹಾಗೂ ಮಹೇಶ್ವರ. ಸ್ವ-ಸ್ವ-ಸಂಪ್ರದಾಯಾನುಸಾರ ಗೌಣ-ಪ್ರಧಾನಗಳನ್ನು ಗುರುತಿಸಲಾಗುತ್ತದೆ. ಹೀಗೆ ಪೂಜಾಸಂಪ್ರದಾಯದಲ್ಲಿ ಗಣಾಧಿಪನಿಗೆ ಸ್ಥಾನವು ಸ್ಪಷ್ಟವಾಗಿದೆ.

ಈ ವಿಘ್ನರಾಜನ ಸ್ವರೂಪ-ಉಪಾಸನಾಕ್ರಮಫಲಗಳನ್ನು ಪುರಾಣಗಳಲ್ಲಿ ಹೇಳಿದೆ. ಉಪನಿಷತ್ತುಗಳಲ್ಲಿ ಗಜಾನನನ ಗರಿಮೆಯ ಚಿತ್ರಣವಿದೆ. ವೇದಗಳಲ್ಲಿ ಗಣಪತಿಯೆಂಬುದನ್ನು ವಿಶೇಷಣವಾಗಿಯೂ ನಾಮವಾಗಿಯೂ ಬಳಸಿದೆ. ಗೃಹ್ಯಸೂತ್ರ-ಧರ್ಮಸೂತ್ರಗಳಲ್ಲೂ ಗಣೇಶ್ವರನ ವಿಘ್ನಕಾರಿತ್ವವನ್ನೋ ವಿಘ್ನಹಾರಿತ್ವವನ್ನೋ ಹೇಳಿದೆ. ಜೈನ-ಬೌದ್ಧ-ಸಾಹಿತ್ಯಗಳಲ್ಲೂ ವಿನಾಯಕ-ಪೂಜಾ-ಸಂಪ್ರದಾಯದ ಚಿತ್ರಣವಿದೆ.

ಹೀಗಿದ್ದರೂ, ನಮ್ಮ ಲಂಬೋದರನು ಒಬ್ಬ ದ್ರಾವಿಡದೇವತೆಯೆಂದೂ, ಮುಂದೆ ಆರ್ಯಜನಾಂಗದಿಂದ ಸ್ವೀಕೃತನಾದನೆಂದೂ ಪಾಶ್ಚಾತ್ತ್ಯರ ವಾದವಾಗಿದೆ.

ಗಣೇಶನು ಗಣಗಳಿಗೊಡೆಯ. ಗಣಗಳು ವಿಘ್ನಕಾರಿಗಳೋ ವಿಘ್ನಹಾರಿಗಳೋ? - ಎಂಬ ಪ್ರಶ್ನೆಗೆ ಶ್ರೀರಂಗಮಹಾಗುರುಗಳು ಕೊಟ್ಟಿರುವ ಉತ್ತರವು ಸಮಂಜಸವಾಗಿದೆ. "ರುದ್ರನು ಸಂಹಾರಕ್ಕೆ ಅಧಿದೇವತೆ. ಬೇರೆ ಬೇರೆ ಸಮಯಗಳಲ್ಲಿ ಪ್ರಾಣಿಗಳನ್ನು ರಕ್ಷಿಸುವ ಸಾಮರ್ಥ್ಯವೂ ಭಕ್ಷಿಸುವ ಸಾಮರ್ಥ್ಯವೂ ಗಣಗಳಿಗುಂಟು."

ಗಣೇಶನಿಗೆ ಆನೆಯ ತಲೆಯೇ ಏಕೆ? ಮೂಷಕವೇ ವಾಹನವೇಕೆ? – ಎಂಬ ಪ್ರಶ್ನೆಗಳ ಉತ್ತರವು ಲೌಕಿಕವಾದ ಊಹೆಗಳಿಂದ ದಕ್ಕುವುದಲ್ಲ.

ಇಲಿಯು ದವಸ-ಧಾನ್ಯಗಳನ್ನು ತಿಂದುಬಿಡುವುದು; ಆನೆಗಳು ಹೊಲ-ಗದ್ದೆಗಳಿಗೆ ನುಗ್ಗಿ ಸಸ್ಯರಾಶಿಯನ್ನು ಹಾಳುಮಾಡುವುವು.  ಈ ತೊಂದರೆಗಳನ್ನು ಕೊನೆಗಾಣಿಸಲೆಂದೇ ಗಜಮುಖವನ್ನೂ ಮೂಷಕವಾಹನವನ್ನೂ ಉಳ್ಳ ದೇವರನ್ನು ರೈತರು ಸೃಷ್ಟಿಸಿಕೊಂಡರು - ಎಂದು ವಿವರಿಸುವವರುಂಟು.

ಹಾಗೆಯೇ, ಆನೆಯು ಬೃಹತ್ತಾದ ಪ್ರಾಣಿ, ಇಲಿಯು ಕಿರಿದಾದದ್ದು - ಎರಡು ಬಗೆಗಳಿಂದಲೂ ನುಗ್ಗಲೋ ನುಸುಳಲೋ ಆಗುವಿಕೆಯನ್ನು ಮೇಲೂ ಕೆಳಗೂ ಇರುವ ಈ ಪ್ರಾಣ್ಯಂಗಗಳು ಸೂಚಿಸುತ್ತವೆ - ಎಂದೂ ವಿವರಿಸಲು ಯತ್ನಿಸುವವರುಂಟು.

ಇವುಗಳೆಲ್ಲವೂ ಸ್ವಕಪೋಲಕಲ್ಪಿತಗಳೇ - ಎಂದರೆ ಬರೀ ಊಹೆಗಳೇ. ಹಾಗಾದರೆ ಸೊಳ್ಳೆ-ತಿಗಣೆಗಳ ಕಾಟಕ್ಕೋ ಜಿಂಕೆ-ಜಿರಲೆಗಳ ಕಾಟಕ್ಕೋ ಒಂದೊಂದು ದೇವರನ್ನೋ ದೇವರ ಆಯುಧ/ವಾಹನಗಳನ್ನೋ ಕಲ್ಪಿಸಬಹುದಿತ್ತಲ್ಲ? ಅವೇಕಿಲ್ಲ?

ಪ್ರಕೃತ, ಗಣೇಶನು ಮೂಷಿಕವನ್ನು ವಾಹನವನ್ನಾಗಿಸಿಕೊಂಡಿರುವುದರ ತತ್ತ್ವವನ್ನು ಮಾತ್ರ ಇಲ್ಲಿ ಪರಿಶೀಲಿಸಿದೆ.  ಇಲಿಗೆ ಮೂಷಕ/ಮೂಷಿಕ ಎಂಬ ಹೆಸರಿದೆಯಷ್ಟೆ? ಇದು ಬಂದಿರುವುದು ಸಂಸ್ಕೃತದ ಮುಷ್ ಎಂಬ ಧಾತುವಿನಿಂದ. ಅದಕ್ಕೆ ಕದಿಯುವುದೆಂಬ ಅರ್ಥ. ಇಂಗ್ಲೀಷಿನ mouse ಎಂಬ ಪದವು ಸಂಸ್ಕೃತಪದಕ್ಕೆ ಜ್ಞಾತಿಪದವೇ ಆಗಿದೆ.

ಮೂಷಕನೊಬ್ಬ ಅಸುರ; ವಿಘ್ನೇಶ್ವರನ ಮೇಲೇ ಯುದ್ಧಮಾಡಿದ; ಸೋತು ಶರಣಾದ; ವಾಹನರೂಪವಾಗಿದ್ದುಕೊಂಡು ನನಗೆ ಸೇವೆಯನ್ನು ಸಲ್ಲಿಸು - ಎಂಬುದಾಗಿ ಅನುಗ್ರಹವನ್ನಾತನಿಗೆ  ಗಣೇಶನು ಮಾಡಿದ - ಎಂಬುದಾಗಿ ಪುರಾಣ-ಕಥೆಯಿದೆ. ನಟರಾಜನು ಅಪಸ್ಮಾರನನ್ನು ಮೆಟ್ಟಿರುವಂತೆಯೇ ಇದೂ.

ಇದರ ವಿವರಣೆಯನ್ನು ಮಹಾಯೋಗಿಗಳಾದ ಶ್ರೀರಂಗಮಹಾಗುರುಗಳು ಹೀಗೆ ಕೊಟ್ಟಿರುವರು:

"ಯಜ್ಞ-ಯಾಗಾದಿಗಳನ್ನು ಆಚರಿಸುವಾಗ ಆಸುರೀಶಕ್ತಿಗಳು ಅಡ್ಡಿಮಾಡಿ ದೇವತೆಗಳಿಗೆ ಸಲ್ಲಬೇಕಾದದ್ದು ಸಲ್ಲದಂತೆ ಮಾಡುವುದುಂಟು. ಯೋಗಮಾರ್ಗದಲ್ಲಿ ಸಾಗುವಾಗ ಚಿತ್ತಚಾಂಚಲ್ಯವೇ ಮುಂತಾದ ಯೋಗವಿಘ್ನಗಳು ಬರುವುದುಂಟು. ಹೀಗೆ ಧ್ಯಾನೋಪಾಸನೆಗಳಲ್ಲಿ ಅಡ್ಡಿಯೊಡ್ಡುವ ದುಷ್ಟಶಕ್ತಿಗಳ ಮೂಲಮೂರ್ತಿಯೇ ಗಣೇಶ-ವಾಹನವಾದ ಈ ಮೂಷಕವೆಂಬುದು. ಅದನ್ನೇ ದಮನ ಮಾಡಿ ತನ್ನನ್ನು ಹೊರುವ ಸೇವೆಗದನ್ನು ನೇಮಿಸಿಕೊಂಡಿರುವವನೇ ಗಣೇಶ. ಆರಂಭದಲ್ಲಿಯೇ ಆತನ ಅನುಗ್ರಹವು ಸಂಪಾದ್ಯ. ಅದಿಲ್ಲದೆ ಯೋಗವಿಘ್ನಗಳನ್ನು ಹತ್ತಿಕ್ಕುವುದು ಮಹಾಕಷ್ಟವೇ ಸರಿ." 

ಎಂದೇ "ನೌಮಿ ಮೂಷಕವಾಹನಮ್" (ಮೂಷಕವಾಹನನನ್ನು ಸ್ತುತಿಸುವೆ) – ಎಂಬ ನುಡಿಯಿರುವುದು.

ಹೀಗೆ, ಉಪಾಸನೆಗೆ ಸಂಬಂಧಪಟ್ಟ ಯೋಗಗಮ್ಯ-ವಿಷಯಗಳ ನೆಲೆಯನ್ನು ತತ್ತ್ವದರ್ಶಿಗಳಾದ ಜ್ಞಾನಿಗಳಿಂದ ಪಡೆಯತಕ್ಕದ್ದೇ ವಿನಾ, ಪೊಳ್ಳಾದ ಟೊಳ್ಳಾದ ಊಹಾಪೋಹಗಳಲ್ಲಿ ನಿರತರಾದವರಿಂದ ಅಲ್ಲ.

ಸೂಚನೆ: 30/8//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ 75 ಎದುರಿಗೆ ಬಂದಿರುವ ಬಾಲಗೋಪಾಲನನ್ನು ಅವಲಂಬಿಸು.(Krishakarnamrta 75)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಶ್ರೀಕೃಷ್ಣನನ್ನು ಕಾಪಾಡೆಂದು ಪ್ರಾರ್ಥಿಸುವ ಈ ಶ್ಲೋಕ ಪ್ರಸಿದ್ಧವಾದದ್ದು. ಶ್ರೀಕೃಷ್ಣಕರ್ಣಾಮೃತದಲ್ಲಿರುವ ಈ ಶ್ಲೋಕವು ಕೆಲವೊಮ್ಮೆ ಬೇರೆ ಸ್ತೋತ್ರಗಳಲ್ಲೂ ಸೇರಿಕೊಂಡಿರುವುದುಂಟು. ಉದಾಹರಣೆಗೆ ಮುಕುಂದಮಾಲಾ-ಸ್ತೋತ್ರದಲ್ಲೂ ಇದು ಕಂಡುಬರುತ್ತದೆ. ಪ್ರಾಚೀನ-ಸ್ತೋತ್ರ-ಸಂಗ್ರಹಗಳಲ್ಲಿ ಕೆಲವೊಮ್ಮೆ ಒಂದೇ ಶ್ಲೋಕವು ಎರಡೋ ಮೂರೋ ಸ್ತೋತ್ರಗಳಲ್ಲಿ ಕಾಣಸಿಗುತ್ತದೆ. ಮತ್ತು ಅದಕ್ಕೆ ಕಾರಣವಾದರೂ, ಬಹಳಷ್ಟು ಸ್ತೋತ್ರಗಳು ಮೌಖಿಕವಾಗಿ ಪ್ರಚಾರದಲ್ಲಿದ್ದುದೇ. ಲಿಖಿತ-ರೂಪದಲ್ಲಿ ಹಸ್ತ-ಪ್ರತಿಗಳಲ್ಲಿ ಸೇರಿಕೊಂಡಾದ ಮೇಲೆ ಒಂದಿಷ್ಟು ಖಚಿತತೆ-ಸ್ಪಷ್ಟತೆಗಳು ಮೂಡುವುವು, ನಿಜವೇ. ಆದರೂ, ಇತಿಹಾಸದಲ್ಲಿ ಸುದೀರ್ಘ-ಕಾಲ ಮೌಖಿಕ-ಪರಂಪರೆಯಲ್ಲಿದ್ದ ಸ್ತೋತ್ರಗಳಲ್ಲಿ ಹೀಗಾಗುವುದಾದರೂ ಸಹಜವೇ ಸರಿ.

ಕೃಷ್ಣನೇ, ನಿನ್ನನ್ನು ಬಿಟ್ಟರೆ ಮತ್ತೊಬ್ಬನನ್ನು ನಾ ಕಾಣೆ - ಎಂದು ಈ ಶ್ಲೋಕದ ಕೊನೆಯ ಸಾಲಿನ ಅರ್ಥ. ಅದರ ಅರ್ಥವನ್ನು ಬೇರೆ ಬಗೆಯಲ್ಲಿಯೂ ಹೇಳಬಹುದು. ಕೃಷ್ಣನೇ, ನಿನಗಿಂತಲೂ ಶ್ರೇಷ್ಠನಾದ ಮತ್ತೊಬ್ಬನನ್ನು ನಾ ಕಾಣೆ - ಎಂದು. ಏಕೆ ಹೀಗೆ ಎರಡರ್ಥಗಳು? ಅದಕ್ಕೆ ಕಾರಣ, 'ಪರ' - ಎಂಬ ಪದಕ್ಕೆ ಇರುವ ಎರಡರ್ಥಗಳು. ಅದಕ್ಕಿರುವ ಎರಡು ವಿರುದ್ಧಾರ್ಥಕ-ಪದಗಳನ್ನು ನೋಡಿದರೆ ಇದು ಗೊತ್ತಾಗುತ್ತದೆ. ಸ್ವ ಎಂದರೆ ತನ್ನ; ಪರ ಎಂದರೆ ಅನ್ಯ. ಅಪರ ಎಂದರೆ ಕೆಳಗಿನದು, ಪರ ಎಂದರೆ ಮೇಲಿನದು.

ಪರತತ್ತ್ವ-ಪರಬ್ರಹ್ಮ-ಪರಭಕ್ತಿ-ಪರಜ್ಞಾನ - ಎಂಬಲ್ಲೆಲ್ಲಾ 'ಪರ' ಎಂಬುದಕ್ಕೆ ಶ್ರೇಷ್ಠ ಎಂಬ ಅರ್ಥ. ಆದರೆ ಪರಪುರುಷ, ಪರಜನ, ಪರಗ್ರಾಮ, ಪರದೇಶ - ಎಂಬಲ್ಲೆಲ್ಲಾ 'ಪರ' ಎಂಬುದಕ್ಕೆ 'ಬೇರೆಯ' ಎಂಬರ್ಥ. ಈ ಶ್ಲೋಕದಲ್ಲಿ ಎರಡೂ ಅರ್ಥಗಳೂ ಸೊಗಯಿಸುತ್ತವೆ. ನಿನ್ನನ್ನಲ್ಲದೆ ಕಾಪಾಡುವವರೆಂಬುದಾಗಿ ಅನ್ಯರನ್ನು ನಾನರಿಯೆ - ಎನ್ನುವಾಗ, ಅನ್ಯನನ್ನು - ಎಂಬ ಅರ್ಥವು ಹೊಂದುತ್ತದೆ. ಹಾಗೆಯೇ, ನಿನಗಿಂತಲೂ ಶ್ರೇಷ್ಠ – ಎಂಬ ಅರ್ಥವೂ ಹೊಂದುವುದೇ. ಕೃಷ್ಣನು ಎಂತಹವನು? - ಎಂಬುದನ್ನು ಹತ್ತು ವಿಶೇಷಣಗಳಿಂದ ತಿಳಿಸಿದೆ. ಆ ಹತ್ತನ್ನೂ ಸಂಬೋಧನೆಯಾಗಿಯೇ ಬಳಸಿದೆ. ಎಂದೇ ಅವಷ್ಟೂ ಪದಗಳೂ ಹೇ ಎಂಬುದರೊಂದಿಗೇ ಬಂದಿವೆ. ಇವುಗಳಲ್ಲಿ ಬಹುತೇಕ ಪ್ರಸಿದ್ಧ-ಪದಗಳೇ. ಎಂದೇ, ಅವುಗಳ ಅರ್ಥದತ್ತ ಒಂದು ಸಂಕ್ಷಿಪ್ತವಾದ ನೋಟವಷ್ಟೇ ಸಾಕು. ಕೃಷ್ಣನು ಗೋ-ಪಾಲಕನೆಂಬುದು ಪ್ರಸಿದ್ಧವೇ. ಜಲನಿಧಿಯೆಂದರೆ ಸಮುದ್ರವಾದ್ದರಿಂದ ಕೃಪಾ-ಜಲನಿಧಿಯೆಂದರೆ ದಯಾ-ಸಾಗರ - ಎಂದರ್ಥ. ಸಮುದ್ರ-ಪುತ್ರಿಯಾದ ಲಕ್ಷ್ಮಿಯನ್ನೇ ಸಿಂಧು-ಕನ್ಯೆಯೆನ್ನುವುದರಿಂದ, ಮತ್ತು ವಿಷ್ಣುವನ್ನು ಅವಳು ವರಿಸಿದುದರಿಂದ, ಸಿಂಧುಕನ್ಯಾ-ಪತಿಯೆಂದರೆ ವಿಷ್ಣುವೇ.

ಅಂತಕನೆಂದರೆ ಯಮ, ಕೊನೆಗಾಣಿಸುವವನು. ಕೃಷ್ಣನನ್ನು ಕಂಸಾಂತಕ - ಎಂದಿದೆ. ಕಂಸನ ಪಾಲಿಗೆ ಯಮನಾದವನು ಕೃಷ್ಣ. ಕಂಸನು ದುರ್ಮಾರ್ಗ-ಚರ, ಅಸುರಾಂಶದಿಂದ ಜನಿಸಿದವನು. ದುಷ್ಟರು ರಾಜರಾದರೆ ಪ್ರಜೆಗಳಿಗೆ ಪಾಡೋ ಪಾಡು. ಎಂದೇ ಅಂತಹವನನ್ನು ಕೊಂದರಷ್ಟೇ ಪ್ರಜೆಗಳಿಗೆ ಕ್ಷೇಮ: ಆಗಲೇ ಧರ್ಮವು ಪ್ರತಿಷ್ಠಿತವಾಗುವುದು. ಕಂಸನ ವಿಷಯದಲ್ಲಿ ಕ್ರೌರ್ಯಕ್ಕೆ ಕಾರಣ ಆತನ ಅಧರ್ಮ-ಪರಾಯಣತೆ. ಆದರೆ ಪರಮ-ಕಾರುಣ್ಯವೇ ಭಗವಂತನಲ್ಲುಂಟು. ಕರುಣೆಯ ಕಡಲಿನ ಆಚೆಯ ದಡವನ್ನು ಮುಟ್ಟಿದವನು ಶ್ರೀಕೃಷ್ಣ. ಅದು ಎಲ್ಲಿ ಗೊತ್ತಾಗುವುದು? - ಎಂದರೆ ಗಜೇಂದ್ರಮೋಕ್ಷ-ಪ್ರಸಂಗದಲ್ಲಿ. "ಕರಿರಾಜ ಕಷ್ಟದಲಿ ಆದಿಮೂಲಾ ಎಂದು ಕರೆಯಲಾಕ್ಷಣ ಬಂದು" ಸಲಹಿದನಲ್ಲವೆ ಆತ?

ಇನ್ನು ಲಕ್ಷ್ಮೀ-ಪತಿಯಾದ್ದರಿಂದ ವಿಷ್ಣುವನ್ನು ಮಾ-ಧವ - ಎನ್ನುವುದುಂಟು. ಏಕೆಂದರೆ ಮಾ ಎಂದರೆ ಲಕ್ಷ್ಮಿ, ಧವನೆಂದರೆ ಗಂಡ. ಕೃಷ್ಣನು ರಾಮನ ತಮ್ಮನೆಂದಾಗ ಬಲರಾಮನ ತಮ್ಮನೆಂಬುದು ಸ್ಪಷ್ಟವೇ. ರಾಘವೇಂದ್ರ-ರಾಮಾನುಜ - ಎಂಬ ಹೆಸರಿನ ಐತಿಹಾಸಿಕ ವ್ಯಕ್ತಿಗಳು ಪ್ರಸಿದ್ಧರಾಗಿದ್ದರೂ ಅವರ ಹೆಸರಿನ ಅರ್ಥಗಳೆಂದರೆ ಮೂಲತಃ (ಕ್ರಮಶಃ) ರಾಮ-ಕೃಷ್ಣ ಎಂದೇ. ಮೂರುಲೋಕಗಳಿಗೂ ಗುರುವೆಂದರೆ ಕೃಷ್ಣನೇ - ಎಂದೇ ಆತನನ್ನೇ ಜಗದ್ಗುರುವೆನ್ನುವುದು. ಕಮಲಗಳನ್ನು ಹೋಲುವ ಕಣ್ಣುಳ್ಳವನು ಪುಂಡರೀಕಾಕ್ಷ . ಮತ್ತು ಕೊನೆಯದಾಗಿ, ಆತನು ವಿಹರಿಸಿದುದು ಗೋ-ಗೋಪ-ಗೋಪೀಜನರ ನಡುವೆ. ಗೋಪಿಯರ ಮನೋವಲ್ಲಭನೆಂದರೆ ಆತನೇ. ಹೀಗೆ ಗೋಪಾಲಕ ಎಂದು ಆರಂಭವಾಗಿ ಗೋಪೀಜನ-ನಾಥ ಎಂದು ಮುಗಿದಿರುವ ಈ ವಿಶೇಷಣಗಳು ಕೃಷ್ಣನ ನಾನಾಮುಖಗಳಿಗೆ ಕನ್ನಡಿ ಹಿಡಿಯುತ್ತವೆ. ಮಾಧವ-ಸಿಂಧುಕನ್ಯಾಪತಿಗಳು ಒಂದೇ ತತ್ತ್ವವನ್ನೇ ಸೂಚಿಸುತ್ತವೆ. ಕೃಪಾಜಲನಿಧಿಯೆಂಬುದರ ನಿರ್ದೇಶನವಾಗಿ ಗಜೇಂದ್ರ-ಪ್ರಸಂಗವಿದೆ. ಆತನ ಸೌಂದರ್ಯ-ಪಾರಮ್ಯ-ಕಾರುಣ್ಯ-ಸೌಲಭ್ಯ - ಮುಂತಾದ ಎಲ್ಲಾ ಕಲ್ಯಾಣ-ಗುಣಗಳನ್ನೂ ಸಂಬೋಧನೆಗಳ ಮೂಲಕವೇ ತಿಳಿಸುವ ಶ್ಲೋಕವಿದು.

ಹೇ ಗೋಪಾಲಕ! ಹೇ ಕೃಪಾ-ಜಲನಿಧೇ! ಹೇ ಸಿಂಧುಕನ್ಯಾ-ಪತೇ!

ಹೇ ಕಂಸಾಂತಕ! ಹೇ ಗಜೇಂದ್ರ-ಕರುಣಾ-ಪಾರೀಣ! ಹೇ ಮಾಧವ! |

ಹೇ ರಾಮಾನುಜ! ಹೇ ಜಗತ್ತ್ರಯ-ಗುರೋ! ಹೇ ಪುಂಡರೀಕಾಕ್ಷ! ಮಾಂ

ಹೇ ಗೋಪೀಜನ-ನಾಥ! ಪಾಲಯ, ಪರಂ ಜಾನಾಮಿ ನ ತ್ವಾಂ ವಿನಾ! ||


ಮತ್ತೊಂದು ಶ್ಲೋಕ:

ಬಾಲಗೋಪಾಲನನ್ನು ನಾನು ಸಂತತವಾಗಿಯೂ ಅವಲಂಬಿಸುವೆ - ಎನ್ನುತ್ತಾನೆ, ಲೀಲಾಶುಕ. ಹೇಗಿರುವ ಬಾಲಗೋಪಾಲ ಹೀಗೆ ಸದಾ ಅವಲಂಬ್ಯ? ಮೂರು ವಿಶೇಷಣಗಳು ಅದನ್ನು ಹೇಳುತ್ತವೆ. ಆತನ ತಲೆಯ ಮೇಲೆ ನವಿಲುಗರಿಯುಂಟು. ಎದ್ದು ಕಾಣುವ ಸುಂದರವಾದ ಆ ಗರಿಯಿರುವುದರಿಂದಲೇ, ದೂರದಿಂದಲೂ ನಾವು ಕೃಷ್ಣನನ್ನು ಗುರುತಿಸಬಲ್ಲೆವು. ಇನ್ನು, ಆತನತ್ತ ಸಾರುತ್ತಲೇ ಕಂಡುಬರುವುದು, ಆತನನ್ನು ಸುತ್ತಿರುವ ವಲ್ಲವೀ-ವಲಯ. ಹಾಗೆಂದರೆ ಗೋಪಿಕೆಯರ ಮಂಡಲ. ಅವರೂ ಎಂತಹವರು? ಸಂಚಿತ-ಸೌಜನ್ಯರು, ಎಂದರೆ ಸುಜನತೆಯನ್ನು ತುಂಬಿಕೊಂಡವರು. ಸುಜನತೆಯೆಂದರೆ ಒಳ್ಳೆಯ ನಡವಳಿಕೆ, ಮಧುರವಾದ ವರ್ತನೆ, ಯಾರೇ ಆದರೂ ಇಷ್ಟಪಡುವಂತಹ ನಡೆ. ಮತ್ತೂ ಹತ್ತಿರ ಸುಳಿಯುತ್ತಿದ್ದಂತೆ  ಗೋಚರವಾಗುವುದು ಆತನ ಕೆಂಪುತುಟಿ, ಮತ್ತು ಅದರ ಮೇಲಿಟ್ಟಿರುವ ಕೊಳಲು. ಆತನ ಕೆಳದುಟಿಯು ಕೆಂಪನೆಯ ಹವಳದ ಹಾಗೆ ಹೊಳೆಯುತ್ತದೆ. ಎಂದೇ ಅದನ್ನು ಅಧರ-ಮಣಿಯೆನ್ನುವುದು. ಹೀಗೆ, ತನ್ನ ಕೆಂದುಟಿಯ ಮೇಲೆ ಕೊಳಲಿಟ್ಟವನು ಬಾಲನವನು. ಇಂತಿರುವ ಗೋಪ-ಬಾಲನೇ ನನ್ನ ಜೀವಿತಕ್ಕೆ ಅವಲಂಬನ. ಅವಲಂಬನವೆಂದರೆ ಆಧಾರ, ಊರುಗೋಲು.

ಅಂಚಿತ-ಪಿಂಛಾ-ಚೂಡಂ/

ಸಂಚಿತಸೌಜನ್ಯ-ವಲ್ಲವೀ-ವಲಯಂ|

ಅಧರ-ಮಣಿ-ನಿಹಿತ-ವೇಣುಂ/

ಬಾಲಂ ಗೋಪಾಲಂ ಅನಿಶಂ ಅವಲಂಬೇ ||


ಮತ್ತೊಂದು ಶ್ಲೋಕ:

ಎಲೆ ಮನಸ್ಸೇ, ಎಚ್ಚರಗೊಳ್ಳು, ಎಚ್ಚರಗೊಳ್ಳು - ಎಂದು ತನ್ನ ಮನಸ್ಸನ್ನೇ ಎಬ್ಬಿಸುತ್ತಿದ್ದಾನೆ, ಲೀಲಾಶುಕ. ಏಕೆ? ಈಗೇನು ವಿಶೇಷ? ವಿಶೇಷವೇ? ಇದೋ, ಚಿರಕಾಲದ ಬಳಿಕ, ಎಂದರೆ ಬಹಳ ಕಾಲದ ಮೇಲೆ, ನಿನಗೆ ಕೃತಾರ್ಥತೆಯುಂಟಾಗುತ್ತಿದೆ. ಕೃತಾರ್ಥತೆಯೆಂದರೆ ಧನ್ಯತೆ. ಯಾವ ತೆರನು ಈ ಧನ್ಯತೆ? ಅದೆಂದರೆ, ಕೃಷ್ಣನ ರೂಪದಲ್ಲಿ ಎದುರಿಗೆ ನಿಂತಿರುವಂತಹುದು. ಯಾವುದದು? ಪೂರ್ಣ-ನಿರ್ವಾಣವೇ ಅದು. ನಿರ್ವಾಣವೆಂದರೆ ಸುಖ. ಪೂರ್ಣ-ನಿರ್ವಾಣವೆಂದರೆ ಪರಮ-ಸುಖವೆಂದರ್ಥ. ಅದು ಕೃಷ್ಣನ ರೂಪದಲ್ಲಿಎದುರಿಗೇ ನಿಂತಿದೆ. ನಿನ್ನ ಕೆಲಸ ಈಗೊಂದೇ, ಓ ಮನಸ್ಸೇ. ಯಾವುದಕ್ಕಾಗಿ ಬಹು-ದೀರ್ಘ-ಕಾಲ ಹಂಬಲಿಸುತ್ತಿದ್ದೆಯೋ, ಅದುವೇ ಇದೋ ಇದೋ ಎದುರಿಗೇ ಸಾಕ್ಷಾತ್ತಾಗಿ ಬಂದು ನಿಂತಿದೆ. ಕೈಗೆ ಸಿಕ್ಕದ್ದನ್ನು ಕಳೆದುಕೊಳ್ಳಬೇಡ. ಎದುರಿಗೇ ಬಂದು ನಿಂತಿರುವ, ಪೂರ್ಣಾನಂದವೇ ಮೈತಾಳಿರುವ ಪರವಸ್ತುವನ್ನು ಕಣ್ತುಂಬ ತುಂಬಿಕೋ, ಪೂರ್ಣವಾಗಿ ಅನುಭವಿಸು, ಚೆನ್ನಾಗಿ ಆಸ್ವಾದಿಸು.

ಜಾಗೃಹಿ ಜಾಗೃಹಿ ಚೇತಃ/

ಚಿರಾಯ ಚರಿತಾರ್ಥತಾ ಭವತಃ|

ಅನುಭೂಯತಾಂ ಇದಂ ಇದಂ/

ಪುರಃ ಸ್ಥಿತಂ ಪೂರ್ಣ-ನಿರ್ವಾಣಂ||

ಸೂಚನೆ : 30/08/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Tuesday, August 26, 2025

ಪ್ರಶ್ನೋತ್ತರ ರತ್ನಮಾಲಿಕೆ 29 (Prasnottara Ratnamalike 29)


ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೨೯. ಸತ್ಯ ಯಾವುದು?

ಉತ್ತರ - ಭೂತಹಿತ.

'ಯಾವುದು ಸತ್ಯ' ? ಎಂಬ ಪ್ರಶ್ನೆ. ಇದಕ್ಕೆ ಉತ್ತರ - 'ಭೂತಹಿತವಾದದ್ದು ಯಾವುದೋ ಅದು ಸತ್ಯ' ಎಂಬುದು. ಅಂದರೆ ಯಾವ ವಿಷಯ ಎಲ್ಲ ಭೂತಕೋಟಿಗಳಿಗೂ ಒಳ್ಳೆಯದನ್ನು ಉಂಟುಮಾಡುತ್ತದೆಯೋ ಅದನ್ನೇ 'ಸತ್ಯ' ಎಂಬುದಾಗಿ ಕರೆಯಲಾಗಿದೆ. ಇಲ್ಲಿ ಹೇಳುತ್ತಿರುವಂತಹ ವಿಷಯಕ್ಕೆ ಭೂತಹಿತವಾಗುವಂತೆ ವರ್ತಿಸುವುದು ಎಂಬುದು ಅರ್ಥವಿದೆ. ಈ ವರ್ತನೆ ಮೂರು ವಿಧದಲ್ಲಿ ಇರುತ್ತದೆ. ಕಾಯಿಕವಾದ ವರ್ತನೆ, ವಾಚಿಕವಾದ ವರ್ತನೆ ಮತ್ತು ಮಾನಸಿಕವಾದ ವರ್ತನೆ ಎಂಬುದಾಗಿ. ಅಂದರೆ ಭೂತಗಳಿಗೆ - ಜೀವಿಗಳಿಗೆ ಈ ಮೂರು ವಿಧದಲ್ಲಿ ಹಿತವನ್ನು ಉಂಟುಮಾಡಲು ಸಾಧ್ಯ ಎಂದರ್ಥ. ಇದೇ ಮೂರು ಸಾಧನಗಳಿಂದ ಜೀವಿಗಳಿಗೆ ಅಹಿತವನ್ನೂ ಉಂಟುಮಾಡಲು ಸಾಧ್ಯ ಎಂಬುದು ಇದರ ಅಭಿಪ್ರಾಯ. ಆದ್ದರಿಂದ ಪ್ರಧಾನವಾದ ಈ ಮೂರು ಸಾಧನೆಗಳಿಂದ ಭೂತಕೋಟಿಗೆ ಸುಖವನ್ನು, ಸುಖಸಂಪತ್ತನ್ನು ಉಂಟುಮಾಡಬೇಕು ಎಂಬ ಬೋಧನೆ ಇಲ್ಲಿದೆ. ಅದಕ್ಕೆ ಒಂದು ಮಾತು ಹೀಗಿದೆ 'ಯದ್ಭೂತಹಿತಂ ತತ್ಸತ್ಯಂ' ಎಂಬುದಾಗಿ. ಸಾಮಾನ್ಯವಾಗಿ ಸತ್ಯ ಎಂಬುದಕ್ಕೆ ಮಾತು ಎಂಬ ಅರ್ಥ ಇದೆ. 'ಸತ್ಯಂ ವದ, ಧರ್ಮಂ ಚರ' ಎಂಬ ಉಪನಿಷತ್ತಿನ ಮಾತು ಮಾತಿನ ಸತ್ಯದ ವಿಚಾರವನ್ನು ಸಾರುತ್ತದೆ. ವಸ್ತುತಃ ಸತ್ಯ ಎಂಬ ಶಬ್ದಕ್ಕೆ ಪರಮಾತ್ಮ ಎಂಬ ಅರ್ಥವಿದೆ. ಮಾತು ಸತ್ಯವಾಗಲು ಮೂಲತಃ ಸತ್ಯಸ್ವರೂಪೀ ಭಗವಂತ ಆ ಮಾತಿನ ಹಿಂದೆ ಇದ್ದಾಗ ಮಾತ್ರ ಸಾಧ್ಯವಾಗುತ್ತದೆ. ಯಾವ ಸತ್ಯವು ಈ ಬ್ರಹ್ಮಾಂಡದಲ್ಲಿ ಅಥವಾ ಪ್ರಪಂಚದಲ್ಲಿ ವಿಸ್ತಾರವಾಗಿದೆಯೋ, ಅದನ್ನೇ ಸತ್ಯ ಎಂಬುದಾಗಿ ಕರೆಯಲಾಗಿದೆ. ಅಂದರೆ ಈ ಸೃಷ್ಟಿಯಲ್ಲಿ ಸತ್ಯವು ಎಲ್ಲೆಲ್ಲೂ ಅಡಗಿದೆ. ಅದನ್ನು ಕಂಡವನು ಮಾತ್ರ ಆ ಸತ್ಯವಾದ ಭಗವಂತನ ಅಂಶವನ್ನು ಎಲ್ಲ ಜೀವಿಗಳಲ್ಲೂ ಕಾಣುತ್ತಾನೆ. ಎಲ್ಲ ಭೂತಗಳಿಗೆ ಹಿತವಾಗುವಂತೆ ಆತ ವರ್ತಿಸುತ್ತಾನೆ. ಹಾಗೆ ವರ್ತಿಸಬೇಕಾದದ್ದು ಪ್ರತಿಯೊಬ್ಬನ ಕರ್ತವ್ಯ ಎಂಬುದನ್ನು ಈ ಪ್ರಶ್ನೋತ್ತರ ಸೂಚಿಸುತ್ತಿದೆ. ಹಾಗಾಗಿ ಯಾರು ಕೂಡ ಇನ್ನೊಂದು ಜೀವಿಯ ಬದುಕಿನಲ್ಲಿ ಅಹಿತವಾಗುವಂತೆ ನಡೆದುಕೊಳ್ಳಬಾರದು. ಅವನು ಮಾತಿನಿಂದ ಕ್ರಿಯೆಯಿಂದ ಅಥವಾ ಮನಸ್ಸಿನ ಆಲೋಚನೆಯಿಂದ ಹೀಗೆ ಮೂರು ರೀತಿಯಿಂದಲೂ ಎಲ್ಲರಿಗೂ ಒಳ್ಳೆಯದನ್ನೇ ಮಾಡಬೇಕು, ಒಳ್ಳೆಯದನ್ನೇ ಮಾತನಾಡಬೇಕು, ಒಳ್ಳೆಯದನ್ನೇ ಆಲೋಚಿಸಬೇಕು. ಈ ರೀತಿಯಾಗಿ ಇದ್ದಾಗ ಮಾತ್ರ ಅದು ಜೀವಹಿತವನ್ನು ಉಂಟುಮಾಡುತ್ತದೆ ಎಂದರ್ಥ.


 ಈ ಪ್ರಪಂಚದಲ್ಲಿ 84 ಲಕ್ಷ ಜೀವಜಾತಿಗಳು ಇವೆ ಎಂಬುದಾಗಿ ನಮ್ಮ ವೇದಾತಿ ಸಾಹಿತ್ಯಗಳು ಸಾರುತ್ತವೆ. ಎಲ್ಲದರಲ್ಲೂ ಭಗವಂತನ ಅಂಶವೆಂಬುದು ಹಾಸುಹೊಕ್ಕಾಗಿ ಇದೆ. ಹಾಗಾಗಿ ಭಗವಂತನನ್ನು ಕಾಣುವ ಅಭಿಲಾಷೆಯುಳ್ಳ ಯಾವುದೇ ವ್ಯಕ್ತಿಯು ಕೂಡ ಇನ್ನೊಂದು ಜೀವಿಯಲ್ಲಿಯೂ ಆ ಸತ್ಯವನ್ನೇ ಕಾಣುತ್ತಾನೆ. ಅವನು ಯಾವುದೇ ಕಾರಣಕ್ಕೂ ಸತ್ಯವಲ್ಲದ್ದನ್ನು ಕಾಣಲಾರನು, ಭಾವಿಸಲಾರನು. ಆಗ ಅವನಿಂದ ಹಿತವೇ ಘಟಿಸುತ್ತದೆ; ಅಹಿತವು ಘಟಿಸಲಾರದು. ಅಂತಹ ಜೀವಹಿತಕ್ಕೋಸ್ಕರ ಜೀವನ ಮಾಡುವಂತಿದ್ದರೆ ಅದುವೇ ಸತ್ಯಜೀವನ. ಅದೇ ಜೀವನದ ಸತ್ಯವಾದ ವಿಷಯ.


ಸೂಚನೆ : 24/8/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 151 ಸೈನ್ಯಪೋಷಣೆ-ಯುದ್ಧಘೋಷಣೆಗಳು – ಏನು, ಎಂತು? ( Vyaasa Vikshita 151)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ರಾಜ್ಯಭಾರದ ಸ್ವರೂಪವನ್ನು ನಾರದರು ಯುಧಿಷ್ಠಿರನಿಗೆ ವಿವರಿಸುತ್ತಿದ್ದಾರೆ.

ಸೇನಾಪತಿಯೆಂದರೆ ಸತ್ಕುಲಜಾತನೂ ಸ್ವಾಮಿಭಕ್ತಿಯುಳ್ಳವನೂ ದಕ್ಷನೂ ಆಗಿರಬೇಕು. ನಿನ್ನ ಸೇನಾಪತಿಗಳು ಹಾಗಿರುವರಷ್ಟೆ? 

ಸೈನ್ಯದ ಮುಖ್ಯಸ್ಥರು (ದಳಪತಿಗಳು) ಸರ್ವಪ್ರಕಾರದ ಯುದ್ಧಗಳಲ್ಲೂ ವಿಶಾರದರಾಗಿರಬೇಕು. ಜೊತೆಗೆ ಧೃಷ್ಟರೂ (ದಿಟ್ಟತನವುಳ್ಳವರೂ), ಶುದ್ಧಚಾರಿತ್ರರೂ, ಪರಾಕ್ರಮಸಂಪನ್ನರೂ ಆಗಿರಬೇಕು. ಹಾಗೂ ಅಂತಹವರನ್ನು ರಾಜನು ಸಂಮಾನಿಸಬೇಕು. ನೀನು ಹಾಗೆ ಮಾಡುತ್ತಿದ್ದೀಯೆ ತಾನೆ?

ಸೈನ್ಯದ ವಿಷಯದಲ್ಲಿ ರಾಜನು ಎರಡು ಎಚ್ಚರಗಳನ್ನು ತೆಗೆದುಕೊಳ್ಳಬೇಕು – ಅವರಿಗೆ ಆಹಾರವನ್ನೂ ವೇತನ(ಸಂಬಳ)ವನ್ನೂ ಯಥೋಚಿತವಾಗಿ ಮತ್ತು ಸರಿಯಾದ ಸಮಯಕ್ಕೆ ನೀಡಬೇಕು. ಅದನ್ನು ನೀನು ಮಾಡುತ್ತಿದ್ದೀಯಷ್ಟೆ? ಎಂದರೆ ವಿಲಂಬ ಮಾಡುತ್ತಿಲ್ಲವಷ್ಟೆ? ಭೋಜನದ ವಿಷಯದಲ್ಲಿ ಹಾಗೂ ಸಂಬಳದ ವಿಷಯದಲ್ಲಿ ಕಾಲಾತಿಕ್ರಮವನ್ನು ಮಾಡಿದರೆ ಭೃತ್ಯರು ಭರ್ತೃ(ಒಡೆಯನ)ವಿನ ಬಗ್ಗೆ ಕೋಪಗೊಳ್ಳುತ್ತಾರೆ. ಹಾಗಾದಲ್ಲಿ ಅದು ಒಂದು ದೊಡ್ಡ ಅನರ್ಥವೇ ಸರಿ.

ಇನ್ನು ಉತ್ತಮಕುಲಗಳಲ್ಲಿ ಜನಿಸಿದ ಕುಲಪುತ್ರರು ಪ್ರಧಾನವಾಗಿ ನಿನ್ನ ವಿಷಯದಲ್ಲಿ ಅನುರಾಗವುಳ್ಳವರು ತಾನೆ? ಎಷ್ಟೆಂದರೆ ಯುದ್ಧಸಂದರ್ಭಗಳಲ್ಲಿ ನಿನಗಾಗಿ ಪ್ರಾಣತ್ಯಾಗ ಮಾಡಲೂ ಅವರು ತಯಾರಿರುವರು ತಾನೆ?

ಯುದ್ಧಕ್ಕೆ ಸಂಬಂಧಿಸಿದಂತೆ ನಾಲ್ಕು ವಿಭಾಗಗಳಿರುವುವಲ್ಲವೆ? ಹಸ್ತಿ-ಅಶ್ವ-ರಥ-ಪಾದಾತ ಎಂಬುದಾಗಿ. ಈ ನಾಲ್ಕಕ್ಕೆ ನಾಲ್ಕು ಮಂದಿ ಅಧಿಪತಿಗಳಿರಬೇಕು. ಎಲ್ಲಕ್ಕೂ ಒಬ್ಬನೇ ಅಧಿಪತಿಯೆಂದಾದರೆ ಅಪಾಯ: ಆತನು ಮನಸ್ಸಿಗೆ ತೋರುವಂತೆಲ್ಲ ವರ್ತಿಸಿಯಾನು; ಶಾಸನಗಳನ್ನು ಉಲ್ಲಂಘಿಸಿಯಾನು. ಹಾಗೆ ಒಬ್ಬನಲ್ಲೇ ಎಲ್ಲವೂ ಕೇಂದ್ರೀಕೃತವಾಗಿಲ್ಲ ತಾನೆ? 

ಕೆಲವು ಅಧಿಕಾರಿಗಳು ಸ್ವಪ್ರಯತ್ನವನ್ನು ವಿಶೇಷವಾಗಿ ಬಳಸಿ ಕೆಲಸವು ಕಳೆಕಟ್ಟುವಂತೆ ಮಾಡುವುದುಂಟು. ಅಂತಹವರಿಗೆ ಅಧಿಕವಾದ ಸಂಮಾನವನ್ನು ಮಾಡತಕ್ಕದ್ದು, ಅಥವಾ ಸಂಬಳವನ್ನು ಹೆಚ್ಚಿಸತಕ್ಕದ್ದು ಯುಕ್ತವಾಗುತ್ತದೆ. ನೀನು ಹಾಗೆ ಮಾಡುತ್ತಿರುವೆ ತಾನೆ? 

ಕೆಲವರು ವಿದ್ಯಾವಿನಯಸಂಪನ್ನರಾಗಿರುತ್ತಾರೆ, ಜ್ಞಾನನಿಪುಣರಾಗಿರುತ್ತಾರೆ: ಅವರ ಗುಣಗಳನ್ನೂ ಗಮನಿಸಿಕೊಳ್ಳಬೇಕು, ಮತ್ತು ಅದಕ್ಕನುಗುಣವಾಗಿ ದಾನವಿತ್ತು ಆದರಿಸಬೇಕು. ನೀನು ಹಾಗೆ ಮಾಡುತ್ತಿರುವೆಯಷ್ಟೆ?

ನಿನಗೋಸ್ಕರವಾಗಿ ಪ್ರಾಣ ತೆತ್ತವರು ಕೆಲವರಿರುತ್ತಾರೆ, ಅಥವಾ ನಿನಗಾಗಿ ಶ್ರಮಿಸಿದ್ದು ಬಳಿಕ ಭಾರೀ ಕಷ್ಟದಲ್ಲಿರುತ್ತಾರೆ. ಅಂತಹವರ ಹೆಂಡತಿ ಮಕ್ಕಳನ್ನು ನೀನು ರಕ್ಷಿಸಿ ಪೋಷಿಸುತ್ತಿರುವೆಯಲ್ಲವೆ?

ಕೆಲವು ಶತ್ರುಗಳು ಭಯಭೀತರಾಗಿ ನಿನ್ನಲ್ಲಿ ಶರಣಾಗತರಾಗಿ ಬಂದಿರುತ್ತಾರೆ. ಅಥವಾ ದಾರಿದ್ರ್ಯದಲ್ಲಿರುತ್ತಾರೆ. ಇಲ್ಲವೇ ಯುದ್ಧದಲ್ಲಿ ಪರಾಜಿತರಾಗಿರುತ್ತಾರೆ. ಅವರನ್ನೆಲ್ಲಾ ನೀನು ಮಕ್ಕಳಂತೆಯೇ ನೋಡಿಕೊಳ್ಳುತ್ತಿರುವೆಯಲ್ಲವೆ?

ಭೂಮಂಡಲದ ಪ್ರಜೆಗಳೆಲ್ಲರೂ ನಿನ್ನನ್ನು ತಾಯಿಯಂತೆಯೂ ತಂದೆಯಂತೆಯೂ ಕಾಣಬೇಕು. ಎಲ್ಲರಿಗೂ ನೀನು ಸಮನಾಗಿರಬೇಕು ಹಾಗೂ ವಿಶ್ವಸನೀಯನಾಗಿರಬೇಕು. ಹಾಗಿರುವೆ ತಾನೆ?

ಶತ್ರುವು ಕೆಲವೊಮ್ಮೆ ಕೆಲವು ವ್ಯಸನಗಳಲ್ಲಿ ಮುಳುಗಿರುತ್ತಾನೆ. (ವ್ಯಸನಗಳೆಂದರೆ ಸ್ತ್ರೀವಿಷಯಕ-ಚಾಪಲ್ಯ, ಜೂಜು, ಮದ್ಯ ಇತ್ಯಾದಿ). ಆತನು ಹಾಗಿರುವನೆಂದು ತಿಳಿದೊಡನೆ ತ್ರಿವಿಧ-ಬಲದೊಂದಿಗೆ ಆತನ ಮೇಲೇರಿ ಹೋಗಬೇಕು (ತ್ರಿಬಲಗಳೆಂದರೆ ಮಂತ್ರಬಲ-ಕೋಷಬಲ-ಹಾಗೂ ಭೃತ್ಯಬಲ). ಅವನ್ನೆಲ್ಲಾ ಕೂಡಿಸಿಕೊಂಡು ಶತ್ರುವಿನ ಮೇಲೆ ದಂಡೆತ್ತಿಹೋಗುವುದು ಒಡನೆಯೇ ಮಾಡಬೇಕಾದ ಕರ್ತವ್ಯ. ನೀನು ಹಾಗೇ ಮಾಡುತ್ತಿದ್ದೀಯಷ್ಟೆ?

ಸರಿಯಾದ ಸಮಯವು ಬಂದೊಡನೆಯೇ ಶತ್ರುವಿನ ಮೇಲೇರಿ ಹೋಗುವುದು ಮುಖ್ಯ. ಇತ್ತ ಶತ್ರುವು ಯಾವುದೋ ಚಟಕ್ಕೆ ಬಿದ್ದಿರುವ ಸಮಯ, ತನ್ನವರು ಅವಕ್ಕೆ ಬಲಿಯಾಗಿಲ್ಲದಿರುವ ಸಮಯ, ಜ್ಯೌತಿಷ್ಕರು ಸೂಚಿಸುವ ಸಮಯ – ಇವುಗಳೆಲ್ಲವುಗಳನ್ನು ಮೇಳೈಸಿಕೊಂಡು ಯುದ್ಧಕ್ಕೆ ಹೋಗಬೇಕು. ಹೊರಡುವ ಮುನ್ನ ಸೈನಿಕರಿಗೂ ಸೇನಾಧಿಕಾರಿಗಳಿಗೂ ಮೊದಲೇ ವೇತನವನ್ನು ಕೊಟ್ಟಿರತಕ್ಕದ್ದು. ಹಾಗೆ ತಾನೆ ಮಾಡುತ್ತಿದ್ದೀಯೆ?

ಸೂಚನೆ : 24/8/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.