Sunday, February 9, 2020

ನಮ್ಮ ವೇದ ಸಾಹಿತ್ಯದ ಮಹಿಮೆ (Namma veda saahithyada mahime)

ಲೇಖಕರು: ಶ್ರೀ. ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ : lekhana@ayvm.in)


ತಪಸ್ಯೆಯಿಂದ ಜ್ಞಾನಿಗಳ ಅಂತರಂಗದಲ್ಲಿ ಶ್ರುತವಾದವುಗಳೇ “ವೇದ”ಗಳು. ಭಗವಂತನ ಮೂಲ ರೂಪವನ್ನೂ ಅವನ ವಿಸ್ತಾರವಾದ ಸೃಷ್ಟಿ ರಹಸ್ಯಗಳನ್ನೂ ಅರುಹುವ ಸಾಹಿತ್ಯವೇ ವೇದಗಳು. ವಿದ್- ಜ್ಞಾನಮ್ ಎಂಬಂತೆ “ವೇದ”ವೆಂದರೆ ಭಗವಂತನಿಗೇ ಸಲ್ಲುವ ಶಬ್ದ. ಅವನ್ನು ಭಗವಂತನನ್ನು ಸಾಕ್ಷಾತ್ಕರಿಸಿಕೊಂಡವರೇ ಉಪದೇಶಿಸಿ ತಿಳಿಸಿ ಕೊಡಬೇಕಾಗಿದೆ.  ಭಗವಂತನನ್ನು ಹೊಂದಿಸಿಕೊಡುವ ಸಾಹಿತ್ಯವಾದ್ದರಿಂದ ಈ ಸಾಹಿತ್ಯಗಳಿಗೂ “ವೇದ” ಎಂದೇ ಹೆಸರಾಯಿತು. ಶ್ರೀರಂಗ ಮಹಾಗುರುಗಳು ಒಂದು ಉದಾಹರಣೆಯನ್ನು ಕೊಡುತ್ತಿದ್ದರು. ಮಟ್ಟೆಸಹಿತವಾದ ತೆಂಗಿನಕಾಯಿ ಇದ್ದಾಗ ನಾವು ತೆಂಗಿನಕಾಯಿ ಯಾವುದು ಎಂದರೆ ಮಟ್ಟೆಯಕಡೆಗೇ ಬೆರಳು ಮಾಡುತ್ತೇವೆ. ನಂತರ  ಮಟ್ಟೆ ತೆಗೆದ ಮೇಲೆ ತೆಂಗಿನಕಾಯಿ ಎಂದಾಗ ನಾವು ಮಟ್ಟೆಯನ್ನು ತೋರಿಸದೇ ಚಿಪ್ಪುಸಹಿತವಾದ ತೆಂಗಿನ ಕಾಯಿಯನ್ನು ತೋರಿಸುತ್ತೇವೆ. ನಂತರ ಚಿಪ್ಪನ್ನೂ ತೆಗೆದ ಮೇಲೆ ತೆಂಗಿನಕಾಯಿ ಎಂದರೆ ತಿರುಳನ್ನೇ ತೋರಿಸುತ್ತೇವೆ. ಎಲ್ಲಿಯ ವರೆಗೆ ಮಟ್ಟೆ, ಚಿಪ್ಪುಗಳು ತೆಂಗು ಎಂಬ ತಿರುಳಿಗೆ ಅಂಟಿಕೊಂಡು ಅದರ ರಕ್ಷಣೆಗೆ ಕಾರಣವಾಗಿದ್ದವೋ ಅಲ್ಲಿಯವರೆಗೆ ಅವೂ ಸಹ ತೆಂಗಿನಕಾಯಿ ಎಂದೇ ಕರೆಸಿಕೊಂಡವು. ತಿರುಳಿನಿಂದ ಬೇರೆಯಾದೊಡನೆಯೇ ಅವುಗಳ ಹೆಸರೂ ಸಹ ಬೇರೆಯಾಯಿತು. ಹೀಗೆ ವೇದ ಸಾಹಿತ್ಯಗಳು ಭಗವಂತನನ್ನು ಹೊತ್ತ ಸಾಹಿತ್ಯಗಳಾಗಿ ಬೆಳೆದುಬಂದಲ್ಲಿ ಅವಕ್ಕೂ ಭಗವಂತನ ಹೆಸರೇ ಸಲ್ಲುತ್ತದೆ. ಯಾವಾಗ ಅವನ್ನು ಭಗವದ್ಭಾವವಿಲ್ಲದೇ ಕೇವಲ ಕಂಠಪಾಠಮಾಡಲಷ್ಟೇ ಬಳಸಿಕೊಂಡಾಗ ಅವು ವೇದ ಎಂದು ಕರೆಯಲು ಯೋಗ್ಯವಾಗುವುದಿಲ್ಲ. ನಮ್ಮ ಸಂಸ್ಕೃತಿಯ ಎಲ್ಲಾ ವಿಷಯಗಳಿಗೂ ಅನ್ವಯಿಸುವ ಮಾತಾಗಿದೆ ಇದು.

ಉಪಸಂಹಾರ:

ಮೊದಲೇ ತಿಳಿಸಿದಂತೆ ದಿಗ್ದರ್ಶನ ರೂಪವಾಗಿ ಕೆಲವೇ ಉದಾಹರಣೆಗಳನ್ನು ತೆಗೆದುಕೊಂಡಿದ್ದೇವೆ. ಹೀಗೆ ಭಾರತೀಯ ಸಂಸ್ಕೃತಿಯೆಂದರೆ ಅದು ಬರಿಯ ಮೌಢ್ಯದಿಂದ ಬಂದ ಕೆಲವು ಆಚರಣೆಗಳ ಕಂತೆಯಲ್ಲ. ಅದರ ನಿಜವಾದ ಅರಿವಿನ ನ್ಯೂನತೆಯೇ ಅದನ್ನು ಹೀಯಾಳಿಸುವವರ ಮೌಡ್ಯಕ್ಕೆಕಾರಣ. ಅದು ವೈಜ್ಞಾನಿಕವಾಗಿ ಮಹರ್ಷಿಗಳು ಜೀವಿಗಳ ಉದ್ಧಾರಕ್ಕಾಗಿ ಹಾಕಿಕೊಟ್ಟ ಉಪಾಯಗಳು. ಒಳಬೆಳಕಿನಲ್ಲಿ ರಮಿಸುವವರೇ ಭಾ-ರತರು. ಅಂತಹ ಜೀವನವನ್ನು ಬೆಳಗುವ ಮೂಲವನ್ನು ನೆನಪಿಸಿ ಆ ಮೂಲದ ಆಶಯದಂತೆಯೇ ಬೆಳೆಯುವಂತೆ, ಬೆಳಗುವಂತೆ ಕೃಷಿಮಾಡಿ ಸೊಂಪಾಗಿ ಬೆಳೆಸಿದ ಮಹರ್ಷಿ ಮನೋರಮವಾದ ಜೀವನ ವೃಕ್ಷವೇ ಭಾರತೀಯ ಸಂಸ್ಕೃತಿ. ಇಂತಹ ಭಾರತೀಯ ಸಂಸ್ಕೃತಿಯನ್ನು ಅದರ ವಾರಸುದಾರರಾದ ನಾವು ಹೆಜ್ಜೆಹೆಜ್ಜೆಗೂ ಅರ್ಥಮಾಡಿಕೊಳ್ಳುವುದೇ ಸಂಸ್ಕೃತಿ-ಸೇವೆ. ಹಾಗೆ ಅರ್ಥಮಾಡಿಕೊಂಡು ಒಳಗೆ ಬೆಳಗುವ ಭಗವಂತನ ಆಶಯದಂತೆ ಸಹಜ ಆನಂದದಿಂದ ಬಾಳುವ ಮನೋಧರ್ಮವನ್ನು ಬೆಳೆಸಿಕೊಳ್ಳುವುದೇ ನಾವೆಲ್ಲರೂ ಭಾರತೀಯರಾಗಿ ಮಾಡಬೇಕಾದ ಕರ್ತವ್ಯವೂ ಸಹ. ನಮ್ಮಲ್ಲಿನ ಅರಿಷಡ್ವರ್ಗರೂಪವಾದ ದೋಷಗಳೆಲ್ಲವನ್ನೂ ತೊಡೆದುಹಾಕಿ, ಹರಿಷಡ್ವರ್ಗಗಳನ್ನು ಬೆಳೆಸಿಕೊಳ್ಳೋಣ. ಈ ವೈಭವದ ಸಂಸ್ಕೃತಿಯ ನಿರ್ಮಾಪಕರಾದ ಜ್ಞಾನಿಗಳೂ ವಿಜ್ಞಾನಿಗಳೂ ಆದ ನಮ್ಮೆಲ್ಲ ಪೂಜ್ಯ ಪೂರ್ವಜರನ್ನು ಹೆಮ್ಮೆಯಿಂದ ಸ್ಮರಿಸುವವರಾಗೋಣ. ಆ ಅಂತಃಪ್ರಕಾಶದಿಂದ ಬೆಳಗುವ ಅನಂತವಾದ ಸಂಸ್ಕೃತಿಯನ್ನು ಮತ್ತೆ ನಾವೆಲ್ಲರೂ ಕಾಣುವಂತಾಗಲಿ ಎಂದು ಸರ್ವೇಶನನ್ನು ಪ್ರಾರ್ಥಿಸೋಣ.        


ಸೂಚನೆ: 08/02/2020 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ