Showing posts with label 1190_ayvmarticle. Show all posts
Showing posts with label 1190_ayvmarticle. Show all posts

Tuesday, November 28, 2023

ಮಹರ್ಷಿನೋಟದಲ್ಲಿ ಒಂದು ಧರ್ಮಸೂಕ್ಷ್ಮ (Maharsinotadalli Ondu Dharmasuksma)

ಡಾ. ಹೆಚ್. ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in) 




ಶ್ರೀಮದ್ರಾಮಾಯಣದ ಬಾಲಕಾಂಡದಲ್ಲಿ ತಾಟಕಾವಧಪ್ರಸಂಗ ಬರುವುದಷ್ಟೆತಮ್ಮ ಯಜ್ಞರಕ್ಷಣೆಗಾಗಿ ವಿಶ್ವಾಮಿತ್ರರು ಶ್ರೀರಾಮ-ಲಕ್ಷ್ಮಣರನ್ನು ಕರೆದೊಯ್ಯುತ್ತಿದ್ದಾರೆ.  ದಾರಿಯಲ್ಲಿ ಗಂಗಾನದಿಯ ದಕ್ಷಿಣಭಾಗದಲ್ಲಿಯ ತಾಟಕಾವನವು ಒಂದು ಭಯಾನಕ ಅರಣ್ಯವೇ ಸರಿ. ಅದನ್ನು ಪ್ರವೇಶಿಸುತ್ತಲೇ, ಶ್ರೀರಾಮನಿಗೆ ಆ ಬಗ್ಗೆ ಕೌತುಕ.  ಅದರ ಕಥೆಯನ್ನು ವಿಶ್ವಾಮಿತ್ರರು ಹೇಳಿದರು.

 

ಹಿಂದೆ ಮಲದಕರೂಷ ಎಂಬ ಎರಡು ಸುಂದರ ಹಾಗೂ ಸಮೃದ್ಧವಾಗಿದ್ದ ಸ್ಥಳಗಳಿದ್ದವು. ಅಲ್ಲೊಬ್ಬ ನರಭಕ್ಷಕಿ ರಾಕ್ಷಸಿ. ಹೆಸರು ತಾಟಕೆ. ಎಲ್ಲರಿಗೂ ಅವಳು ಕೊಡುತ್ತಿದ್ದ ತೊಂದರೆ ಅಪಾರ. ಅವಳ ವಧೆ ಮಾಡುವುದು ಧರ್ಮ್ಯವಾದ (ಎಂದರೆ ಧರ್ಮಮಾರ್ಗಕ್ಕೆ ಹೊಂದುವಂತಹಪ್ರಜಾರಕ್ಷಣೆಯ ಕಾರ್ಯವೆಂದು ವಿಶ್ವಾಮಿತ್ರರು ರಾಮನಿಗೆ ಹೇಳಿದರು. ಅವಳು ಹೆಂಗಸೆಂದು ಹಿಂಜರಿಯಬೇಕಿಲ್ಲವೆಂದೂ ಸೂಚಿಸಿದರು.

ಅವರ ಆಜ್ಞೆಯಂತೆ ಅವಳನ್ನು ಸಂಹಾರಮಾಡಲು ಉದ್ಯುಕ್ತನಾದ, ರಾಮಅವಳು ದುಷ್ಟೆ, ಬಲಶಾಲಿನಿ; ಆದರೂ ಎಷ್ಟಾದರೂ ಹೆಂಗಸಲ್ಲವೇ? ಎಂಬ ಅಳುಕು  ಶ್ರೀರಾಮನದು. ಅವಳನ್ನು ಕೊಲ್ಲುವುದು ಬೇಡ, ಅವಳ ಸಂಚಾರಶಕ್ತಿಯನ್ನೂ ಪರಾಕ್ರಮವನ್ನೂ ಉಡುಗಿಸಿದರಾಯಿತೆನ್ನಿಸಿತು, ಅವನಿಗೆ. ಹಾಗೆ ಅವನು ಮಾಡಿದಾಗಲೂ ಅವಳು ತನ್ನ ಮಾಯಾಶಕ್ತಿಯಿಂದ ಅವರನ್ನು ಪೀಡಿಸತೊಡಗಿದಳುಆಗಲೂ ಅವಳನ್ನು ಕೊಲ್ಲಲು ಮನಸ್ಸು ಬರಲಿಲ್ಲ, ಆ ವೀರನಿಗೆ.

 

ವಿಶ್ವಾಮಿತ್ರರು ಎಚ್ಚರಿಸಿದರು: "ಸ್ತ್ರೀ ಎಂಬ ಮರುಕ ಇವಳಲ್ಲಿ ಬೇಡಇವಳು ಪಾಪಿಷ್ಠೆಇದೋ ಸಾಯಂಕಾಲವಾಗುತ್ತಿದೆಇನ್ನವಳ ಶಕ್ತಿ ಹೆಚ್ಚಿಬಿಡುವುದು. ಅದಕ್ಕೆ ಮುನ್ನವೇ ಅವಳನ್ನು ಕೊಂದುಬಿಡುಎಂದು ತಿಳಿಹೇಳಿದರುಆಗ ಅವಳ ಎದೆಗೆ ಗುರಿಯಿಟ್ಟು ಒಂದು ಬಾಣದಿಂದ ಅವಳನ್ನು ಕೊಂದುರುಳಿಸಿದ, ಶ್ರೀರಾಮಆಗ ಅಲ್ಲಿ ನೆರೆದಿದ್ದ ದೇವತೆಗಳೂ "ಭಲಾಎಂದು ಉದ್ಗರಿಸಿದರು.

ಧರ್ಮಭ್ರಷ್ಟೆಯೂ ಸರ್ವೋಪದ್ರವಕಾರಿಣಿಯೂ ಆಗಿದ್ದ ಅವಳನ್ನು ಸಂಹರಿಸಿದುದು ಲೋಕೋಪಕಾರವೇ. ಆದರೊಂದು ಪ್ರಶ್ನೆ: ಕ್ಷತ್ರಿಯನಾದವನು ಸ್ತ್ರೀಯೊಬ್ಬಳ ವಧೆ ಮಾಡಬಹುದೇ ಧರ್ಮಸೂಕ್ಷ್ಮದ ಇಂತಹ ಪ್ರಶ್ನೆಗೆ ಪರಿಹಾರ  ಶ್ರೀರಂಗಮಹಾಗುರುಗಳ ಸೂತ್ರಪ್ರಾಯವಾದ ಈ ಮಾತಿನಲ್ಲಿದೆ: "ಎರಡು ಧರ್ಮಗಳ ನಡುವೆ ವಿರೋಧ ಬಂದಲ್ಲಿಹಿರಿದಾದ ಧರ್ಮಕ್ಕಾಗಿ ಕಿರಿದಾದ ಧರ್ಮವನ್ನು ಬದಿಗಿಡತಕ್ಕದ್ದು." ವಿಶ್ವಾಮಿತ್ರರಿತ್ತ ಉತ್ತರವೂ ಈ ಪರಿಯಾದದ್ದೇ. ಧರ್ಮದ ಉಳಿವಿನ ಪ್ರಶ್ನೆ  ಬಂದಾಗ ಮನುಷ್ಯರಲ್ಲಿ ಸ್ತ್ರೀ-ಪುರುಷವೃದ್ಧ-ಬಾಲಮೇಲು-ಕೀಳು ಎಂಬ ಭೇದವನ್ನು ನೋಡುವಂತಿಲ್ಲಅಧರ್ಮಿಗಳ ವಧೆ ಅನಿವಾರ್ಯ.

ಇದೇ ಪ್ರಶ್ನೆಯ ಮತ್ತೊಂದು ಮುಖವನ್ನು ಕಾಳಿದಾಸನ ಕುಮಾರಸಂಭವ-ಮಹಾಕಾವ್ಯದಲ್ಲಿ ಕಾಣಬಹುದು. ಶಿವನನ್ನು ಒಲಿಸಿಕೊಳ್ಳಬೇಕೆಂಬ ಏಕೋದ್ದೇಶದಿಂದ ಪಾರ್ವತಿಯು ತಪಸ್ಸನ್ನು ಮಾಡುತ್ತಿದ್ದಳಲ್ಲವೇಅವಳ ತಪಸ್ಸು ಉತ್ಕಟವಾಗಿತ್ತು; ಎಷ್ಟೆಂದರೆ, ಅವಳಿಗಿಂತ ಹಿರಿಯರಾದ ಮುನಿಗಳೂ ಅವಳ ದರ್ಶನ ಮಾಡಲು ಅವಳಿದ್ದೆಡೆಗೇ ಬರುತ್ತಿದ್ದರಂತೆ! ಕಿರಿಯರ ದರ್ಶನಕ್ಕಾಗಿ ಹಿರಿಯರು ಬರುವುದೇ? – ಎಂಬ ಪ್ರಶ್ನೆ ಬರುವುದಲ್ಲವೇ? ಅದಕ್ಕೆ ಕಾಳಿದಾಸನ ಉತ್ತರ ಸ್ಪಷ್ಟ"ಧರ್ಮವೃದ್ಧರಲ್ಲಿ ವಯಸ್ಸಿನ ಪರಿಗಣನೆಯಿಲ್ಲ." ತನ್ನ ತಪಸ್ಸಿನ ಮೂಲಕ ಗಳಿಸಿದ ಧರ್ಮದಲ್ಲಿ ಪಾರ್ವತಿಯು ಹಿರಿಯಳು; ಎಂದೇ, ಅವಳು ವಯಸ್ಸಿನಲ್ಲಿ ಕಿರಿಯವಳಾಗಿದ್ದರೂಸ್ತ್ರೀಯಾಗಿದ್ದರೂವಯೋವೃದ್ಧರಾದ ಮುನಿಗಳು ಅವಳ ದರ್ಶನಕ್ಕಾಗಿ ಬರುವುದೂಅವಳನ್ನಾದರಿಸುವುದೂ ಉಚಿತವೇ.

ಇವೆಲ್ಲದರ ಸಾರ: ಅಧರ್ಮ್ಯವಾದದ್ದು ತ್ಯಾಜ್ಯದಂಡನಾರ್ಹ; ಧರ್ಮ್ಯವಾದದ್ದು ಪೂಜ್ಯಮಂಡನಾರ್ಹ

.

ಸೂಚನೆ: 27/11/2023 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.