Sunday, February 22, 2026

ಪ್ರಶ್ನೋತ್ತರ ರತ್ನಮಾಲಿಕೆ 54 (Prasnottara Ratnamalike 54)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ - ೫೪ - ಮಾತಿಗೆ ಭೂಷಣ ಯಾವುದು ?

ಉ. ಸತ್ಯ.

ಮಾತಿಗೆ ಭೂಷಣವಾದುದು ಯಾವುದು? ಎಂಬುದು ಪ್ರಶ್ನೆ. ಅದಕ್ಕೆ ಉತ್ತರ 'ಸತ್ಯ' ಎಂಬುದು. ಅಂದರೆ ಮಾತು ಮತ್ತು ಸತ್ಯ ಇವೆರಡೂ ಪರಸ್ಪರ ಅನ್ಯೋನ್ಯವಾದವುಗಳು ಎಂಬುದು ಇದರ ತಾತ್ಪರ್ಯವಷ್ಟೇ. ಮಾತು ಯಾವಾಗ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬಲ್ಲದು? ಅಥವಾ ಮಾತು ಯಾವಾಗ ಪರಿಪೂರ್ಣವಾಗಬಲ್ಲದು? ಎಂದರೆ ಆ ಮಾತಿನಲ್ಲಿ ಸತ್ಯ ಹುದುಗಿದಾಗ, ಎಂಬುದು ಇದರ ಹಿಂದಿರುವ ಆಶಯವಷ್ಟೇ. ಮಾತಿನಲ್ಲಿ ಸತ್ಯವಿಲ್ಲದಿದ್ದರೆ ಅದು ಪೂರ್ಣವಾಗಲಾರದು. ಅದಕ್ಕಾಗಿ ಸತ್ಯವನ್ನು ಮಾತಿಗೆ ಭೂಷಣ ಎಂಬುದಾಗಿ ಹೇಳಲಾಗಿದೆ. 'ಭೂಷಣ' ಎಂದರೆ ಅಲಂಕಾರ ಎಂದರ್ಥ. ಅಂದರೆ ಸತ್ಯದಿಂದ ಮಾತ್ರವೇ ಮಾತು ಅಲಂಕೃತವಾಗುತ್ತದೆ. ಮಾತು ಆಡಿದವರನ್ನು ಅಲಂಕರಿಸುತ್ತದೆ. ಅವರನ್ನು ಮಾನ್ಯರನ್ನಾಗಿ ಮಾಡುತ್ತದೆ ಎಂಬುದಷ್ಟೇ ಇಲ್ಲಿನ ವಿಷಯ.

ಮಾತು ಹೇಗಿರಬೇಕು? ಮಾತಿನ ಮೌಲ್ಯವೇನು? ಇತ್ಯಾದಿ ವಿಷಯದ ಬಗ್ಗೆ ವೇದದಿಂದ ಹಿಡಿದು ಎಲ್ಲ ಸಾಹಿತ್ಯಗಳಲ್ಲೂ ವಿಪುಲವಾಗಿ ಹೇಳಿದ್ದನ್ನು ನಾವು ಕಾಣಬಹುದು. ಅಂತೆಯೇ ಮಾತಿಗೂ ಮಿಗಿಲಾಗಿ ಸತ್ಯವನ್ನು ಇನ್ನಷ್ಟು ವಿವರವಾಗಿ ಹೇಳಿದ್ದನ್ನು ಕಾಣಬಹುದು. ಹಾಗಾಗಿ ಮಾತು ಮತ್ತು ಸತ್ಯ ಎರಡು ಒಂದಕ್ಕೊಂದು ಎಡಬಿಡದೆ ಸೇರಿರುವ ಎರಡು ಸಂಗತಿಗಳು ಎಂಬುದನ್ನು ಹೇಳಬಹುದು. ಮಾತಿನಲ್ಲಿ ಸತ್ಯ ಎಂಬುದು ಅತ್ಯಂತ ಅನಿವಾರ್ಯ. ಉಪನಿಷತ್ತು ಈ ಮಾತನ್ನು ಸಾರುತ್ತದೆ - "ಸತ್ಯಂ ವದ" ಎಂಬುದಾಗಿ. ಸತ್ಯವನ್ನು ಮಾತನಾಡಬೇಕು. ಸತ್ಯವನ್ನೇ ಮಾತನಾಡಬೇಕು. ಸತ್ಯವನ್ನು ಬಿಟ್ಟು ಬೇರೆ ಯಾವುದೂ ಕೂಡ ಮಾತಿನಲ್ಲಿ ಇರಬಾರದು. ಅಷ್ಟರಮಟ್ಟಿಗೆ ಮಾತು ಸತ್ಯವನ್ನು ಆವರಿಸಿಕೊಂಡು ಇರಬೇಕು. ಮಾತಾಡಿದರೆ ಅದು ಸತ್ಯವೇ ಆಗಿರಬೇಕು. ಸತ್ಯವಲ್ಲದ ಮಾತನ್ನು ಆಡಬಾರದು ಎಂಬುದು ಇದರ ಅರ್ಥ. ರಘುವಂಶದ ರಾಜರು ಸತ್ಯವನ್ನು ಯಾವ ರೀತಿಯಾಗಿ ಆಚರಿಸುತ್ತಿದ್ದರು? ಎಂಬುದನ್ನು ಕಾಳಿದಾಸ ಹೀಗೆ ಹೇಳುತ್ತಾನೆ - "ಸತ್ಯಾಯ ಮಿತಭಾಷಿಣಾಮ್" ಎಂಬುದಾಗಿ. ಅಂದರೆ ಅವರ ಮಾತುಗಳಲ್ಲಿ ಮಿತಿ ಇರುತ್ತಿತ್ತು. ಅದಕ್ಕೆ ಕಾರಣ ಆ ಮಾತು ಸತ್ಯದಿಂದ ಕೂಡಿತ್ತು. ಯಾವ ಮಾತು ಸತ್ಯದಿಂದ ಕೂಡಿರುತ್ತದೆಯೋ, ಆ ಮಾತು ಹಿತವು ಮಿತವು ಆಗಿಯೇ ಇರಬೇಕು. ಅಂತಹ ಸತ್ಯದ ನಡೆಯನ್ನು ಆ ರಾಜರ ನಡೆಯಲ್ಲಿ ಕಾಣಬಹುದಾಗಿತ್ತು. 

ಸತ್ಯ ಎಂದರೆ ಇದ್ದದ್ದನ್ನು ಇದ್ದಂತೆಯೇ ಹೇಳುವುದು, 'ಯಥಾರ್ಥವಚನಂ' ಎಂಬುದಾಗಿ. ಸತ್ಯವನ್ನು ಹೇಳುವುದರಿಂದ ಯಾವೆಲ್ಲ ಲಾಭಗಳು ಆಗುತ್ತವೆ ಎಂಬುದನ್ನು ವೇದ, ಪುರಾಣ, ಇತಿಹಾಸ ಮೊದಲಾದ ಎಲ್ಲಾ ಗ್ರಂಥಗಳೂ ಸಾರುತ್ತವೆ. ಯೋಗಶಾಸ್ತ್ರವು ಹೀಗೆ ಹೇಳುತ್ತದೆ 'ಯಾರು ಸತ್ಯವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುತ್ತಾರೋ, ಅವರು ಹಾಡಿದ ಮಾತುಗಳು ಯಥಾರ್ಥವಾಗುತ್ತವೆ ಎಂಬುದಾಗಿ. "ಸತ್ಯಪ್ರತಿಷ್ಠಾಯಾಂ ಕ್ರಿಯಾಫಲಾಶ್ರಯತ್ವಮ್" ಅಂದರೆ ಮಾಡದ ಕ್ರಿಯೆಗೆ ಫಲ ದೊರಕಿಸುವ ಸಾಮರ್ಥ್ಯ ಸತ್ಯವಚನಕ್ಕೆ ಇದೆ ಎಂಬಷ್ಟರ ಮಟ್ಟಿಗೆ ಸತ್ಯದ ಸಾಮರ್ಥ್ಯವನ್ನು ಇಲ್ಲಿ ಕೊಂಡಾಡಲಾಗಿದೆ. ಹಾಗಾಗಿ ಸತ್ಯವಿದ್ದರೆ ಮಾತ್ರ ಅದು ಮಾತಾಗುತ್ತದೆ. ಸತ್ಯವಿಲ್ಲದಿದ್ದರೆ ಅದು ಕೇವಲ ಶಬ್ದಾಡಂಬರವಾಗುತ್ತದೆ. ಸತ್ಯವೆಂದರೆ ಭಗವಂತ. ಅವನನ್ನು ಹೊತ್ತ ಮಾತು ಸತ್ಯವೇ ಆಗಿರುತ್ತದೆ. ಯಾವುದೇ ಮಾತನ್ನು ಆಡಬೇಕಾದರೂ ಆ ಮಾತು ಭಗವಂತನ ಅಥವಾ ಅವನ ಸೃಷ್ಟಿಯ ನಡೆಗೆ ವಿರೋಧವಾಗುವಂತೆ ಇರಬಾರದು. ಅಂತಹ ಸತ್ಯ ಮಾತಿಗೆ ಭೂಷಣ ಎಂಬುದು ಈ ಪ್ರಶ್ನೋತ್ತರದ ಆಶಯವಾಗಿದೆ.

ಸೂಚನೆ : 22/2/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ವ್ಯಾಸ ವೀಕ್ಷಿತ 176 ಜರಾಸಂಧನನ್ನು ವಧಿಸಲು ಏಕಾಂತವೇ ಯುಕ್ತ ( Vyaasa Vikshita 176)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಶ್ರೀಕೃಷ್ಣನು ಜರಾಸಂಧನನ್ನು ವಧಿಸಲು ಬೇಕಾದ ಹಿನ್ನೆಲೆಯನ್ನು ಯುಧಿಷ್ಠಿರನಿಗೆ ತಿಳಿಸಿಕೊಡುತ್ತಿದ್ದಾನೆ. ಜರಾಸಂಧನು ತನ್ನ ಮಹಾಗದೆಯನ್ನು ಮಥುರೆಯತ್ತ ಪ್ರಬಲವಾಗಿ ಬೀಸಿದ ಬಳಿಕ ಆದುದನ್ನು ತಿಳಿಸುತ್ತಾನೆ.

ಆಗ ಬಲಶಾಲಿಗಳಾದ ಕುಕ್ಕುರ-ಅಂಧಕ-ವೃಷ್ಣಿ – ಈ ವಂಶಗಳ ವೀರರೂ ಇದ್ದರು. ಆದರೂ ರಾಜನೀತಿಯ ಲೆಕ್ಕದ ಮೇರೆಗೆ ಅವರು ಜರಾಸಂಧನನ್ನು ಉಪೇಕ್ಷಿಸಿದರು. ಹಾಗೆಂದರೆ, ಆ ಕಾರಣಕ್ಕಾಗಿ, ಆತನ ಮೇಲೆ ಸಮರ ಮಾಡಲು ಹೋಗಲಿಲ್ಲ ಎಂದರ್ಥ.

ಒಟ್ಟಾರೆ ಹೇಳುವುದಾದರೆ, ಹಂಸ-ಡಿಂಭಕರು ಮುಳುಗಿ ಸತ್ತರು. ಕಂಸನೂ ಪರಿವಾರ-ಸಮೇತನಾಗಿ ಹತನಾದನು. ಇನ್ನೀಗ ಜರಾಸಂಧನ ಸಾವಿನ ಸಮಯವೊದಗಿದೆ.

ಸುರರಾಗಲಿ ಅಸುರರಾಗಲಿ, ಈ ಜರಾಸಂಧನನ್ನು ಯುದ್ಧದಲ್ಲಿ ಜಯಿಸಲಾರರು. ಈತನನ್ನು ಬಾಹು-ಯುದ್ಧದಿಂದಲೇ ಸೋಲಿಸಬೇಕೆಂಬುದೇ ತೋರುವುದು.

ಯುಧಿಷ್ಠಿರಾ, ನನ್ನಲ್ಲಿ ರಾಜನೀತಿಯ ಜ್ಞಾನವು ಚೆನ್ನಾಗಿದೆ; ಭೀಮನಲ್ಲಿ ಬಲವಿದೆ; ನಮ್ಮಿಬ್ಬರನ್ನೂ ಜಯನು, ಎಂದರೆ ಅರ್ಜುನನು, ರಕ್ಷಿಸುವವನಾಗಿದ್ದಾನೆ. ನಾವು ಮೂವರು ಹೇಗೆಂದರೆ, ಯಜ್ಞ-ಸಾಧನೆಯಲ್ಲಿ ಮೂರು ಅಗ್ನಿಗಳು - ಎಂದರೆ ದಾಕ್ಷಿಣಾತ್ಯ-ಗಾರ್ಹಪತ್ಯ-ಆಹವನೀಯಗಳೆಂಬ ಹೆಸರಿನವು - ಹೇಗೆ ಭಾಗಿಗಳೋ ಹಾಗೆಯೇ. ನಾವು ಮೂವರೂ ಸೇರಿ ಈ ಮಾಗಧನನ್ನು, ಎಂದರೆ ಜರಾಸಂಧನನ್ನು, ಸಾಧಿಸುವುದಾಗಬೇಕಾಗಿದೆ, ಎಂದರೆ ವಧಿಸಬೇಕಾಗಿದೆ.

ನಾವು ಮೂವರು ಆತನನ್ನು ನಿರ್ಜನಪ್ರದೇಶದಲ್ಲಿ, ಎಂದರೆ ರಹಸ್ಯವಾಗಿ, ಎದುರಿಸುವುದೇ ಯುಕ್ತ. ಏಕೆ ಗೊತ್ತೇ? ಹಾಗೆ ಮಾಡಿದಲ್ಲಿ, ಆತನು ಒಬ್ಬರೊಂದಿಗಾದರೂ ಯುದ್ಧಕ್ಕೆ ಬಂದೇ ಬರುವನು; ಇದರಲ್ಲಿ ಸಂಶಯವಿಲ್ಲ.

ಅಷ್ಟೇ ಅಲ್ಲ. ಅವಮಾನವೆನ್ನುವ ಕಾರಣದಿಂದಲೂ, ಲೋಭ-ನಿಮಿತ್ತವಾಗಿಯೂ, ಸ್ವಬಾಹು-ವೀರ್ಯ-ದರ್ಪದಿಂದಲೂ, ಆತನು ಭೀಮಸೇನನೊಂದಿಗೇ ಯುದ್ಧಕ್ಕೆ ಬರುವನು. ಭೀಮಸೇನನು ಮಹಾಬಾಹು ಹಾಗೂ ಮಹಾಬಲ. ಹಾಗಿರುವುದರಿಂದಲೇ, ಸೊಕ್ಕಿದ ಲೋಕದ ವಿನಾಶಕ್ಕೆ ಹೇಗೆ ಯಮರಾಜನೇ ತಕ್ಕವನೋ, ಹಾಗೆಯೇ ಭೀಮಸೇನನೇ ಇಲ್ಲಿ ತಕ್ಕವನು.

ನನ್ನ ಹೃದಯವನ್ನು ನೀನು ಅರಿಯುವೆಯಾದರೆ, ಹಾಗೂ ನನ್ನ ಮೇಲೆ ನಂಬಿಕೆಯಿರುವುದಾದರೆ, ಯುಧಿಷ್ಠಿರಾ, ನೀನು ಒಡನೆಯೇ ಭೀಮಸೇನ-ಅರ್ಜುನರನ್ನು ನನಗೆ ನ್ಯಾಸ-ರೂಪವಾಗಿ ಕೊಡು. (ನ್ಯಾಸವಾಗಿ ಕೊಡುವುದೆಂದರೆ, ಕೊಟ್ಟಿದ್ದನ್ನು ಆಮೇಲೆ ಯಥಾವತ್ತಾಗಿ ಹಿಂದಿರುಗಿಸುವುದು ಇದ್ದೇ ಇದೆ – ಎಂಬ ಭಾವ)."

ಹೀಗೆಂಬುದಾಗಿ ಕೃಷ್ಣನು ಹೇಳಲಾಗಿ, ಯುಧಿಷ್ಠಿರನು ಭೀಮ-ಅರ್ಜುನರತ್ತ ತನ್ನ ದೃಷ್ಟಿಯನ್ನು ಹಾಯಿಸಿದನು. ಅವರಂತೂ ಸಂಪ್ರಹೃಷ್ಟರಾಗಿದ್ದರು - ಎಂದರೆ ಬಹು-ಹರ್ಷದಿಂದ ಅರಳಿದ ಮುಖವುಳ್ಳವರಾಗಿದ್ದರು.

ಆಗ ಯುಧಿಷ್ಠಿರನು ಹೇಳಿದನು:

"ಅಚ್ಯುತ, ಅಚ್ಯುತ, ಬೇಡ, ಹೀಗೆ ಹೇಳಬೇಡ! ಶತ್ರು-ಸಂಹಾರಕನಾದವನು ನೀನು. ಪಾಂಡವರಿಗೆ ನೀನೇ ಒಡೆಯ! ನಿನ್ನನ್ನು ಆಶ್ರಯಿಸಿರತಕ್ಕವರು, ನಾವು.

ಗೋವಿಂದ, ನೀನೇನನ್ನು ಹೇಳುವೆಯೋ ಅದೆಲ್ಲವೂ ಯುಕ್ತಿ-ಯುಕ್ತವೇ ಆಗಿದೆ. ಯಾರಿಗೆ ಲಕ್ಷ್ಮಿಯು ವಿಮುಖಳಾಗಿರುವಳೋ ಅವರಿಗೆ ನೀನು ಸುಮುಖನಾಗುವವನೇನಲ್ಲ.

ಇತ್ತ ನಿನ್ನ ಆಜ್ಞೆಗೆ ಅನುಸಾರವಾಗಿ ಇವರು ನಿಲ್ಲುತ್ತಿರುವಂತೆಯೇ ಅತ್ತ ಜರಾಸಂಧನು ಹತನಾದಂತೆಯೇ ಸರಿ; ರಾಜರು ಬಿಡುಗಡೆ ಹೊಂದಿದಂತೆಯೇ ಸರಿ; ನನಗೆ ರಾಜಸೂಯವು ಪ್ರಾಪ್ತಿಯಾದಂತೆಯೇ ಸರಿ!

ನರೋತ್ತಮ, ಈ ಕಾರ್ಯವು ಬೇಗನೆ ನೆರವೇರುವ ಹಾಗೆ ಎಚ್ಚರಿಕೆಯಿಂದ ನೀ ಮಾಡಿಬಿಡು, ಜಗನ್ನಾಥ! ಧರ್ಮ-ಅರ್ಥ-ಕಾಮಗಳೆಂಬ ಮೂರೂ ಇಲ್ಲದವನೂ ಜೊತೆಗೆ ರೋಗಾರ್ತನೂ ಆದವನು ಹೇಗೆ ದುಃಖಿತನಾಗಿರುವನೋ, ಹಾಗೆ ನೀವು ಮೂವರಿಲ್ಲದೆ ನಾನು ಜೀವಿಸಲೇ ಇಷ್ಟಪಡಲಾರೆ.

ಶೌರಿಯಿಲ್ಲದೆ, ಎಂದರೆ ಕೃಷ್ಣನಿಲ್ಲದೆ, ಪಾರ್ಥನಿಲ್ಲ; ಪಾಂಡವನಿಲ್ಲದೆ ಶೌರಿಯೂ ಇರುವುದಿಲ್ಲ." – ಎಂದನು, ಯುಧಿಷ್ಠಿರ.

ಸೂಚನೆ : 22/2/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ಕೃಷ್ಣಕರ್ಣಾಮೃತ 96 ವಿಬುಧ-ವಂದ್ಯ-ವೃಂದಾವನ-ವಿಹಾರಿಗೂ ವಂದನೆಗಳು! (Krishakarnamrta 96)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ನಾನು ಕೃಷ್ಣನನ್ನು ಭಜಿಸುತ್ತೇನೆ - ಎನ್ನುವುದು ಕೃಷ್ಣಕರ್ಣಾಮೃತದ ಹಲವು ಶ್ಲೋಕಗಳಲ್ಲಿ ಬಂದಿದೆಯಷ್ಟೆ. ಆದರೆ ಈ ಶ್ಲೋಕದಲ್ಲಿ, ವೃಂ(ಬೃಂ)ದಾವನದ ಬಗ್ಗೆಯೂ ಲೀಲಾಶುಕನು ಹೇಳುತ್ತಾನೆ.

ಬೃಂದಾವನ ಎನ್ನುವುದಕ್ಕಿಂತ ಅಲ್ಲಿಯ ಕಾಡನ್ನು ಕುರಿತೇ ಹೇಳುತ್ತಿದ್ದಾನೆ - ಎನ್ನುವುದೇ ಸರಿಯಾದದ್ದು. ಅದೇನು ಬರೀ ಕಾಡೇ? ಅದು ಕಲ್ಪಕ-ದ್ರುಮ-ವನ.

ಕಲ್ಪಕವೆಂದರೂ ಕಲ್ಪವೆಂದರೂ ಒಂದೇ. ಏಕೆ? ಯಾವುದೇ ಪದಕ್ಕೂ "ಸ್ವಾರ್ಥ"ದಲ್ಲಿ 'ಕ' ಎಂಬ ಪ್ರತ್ಯಯವನ್ನು ಸೇರಿಸಬಹುದು – ಎಂಬೊಂದು ನಿಯಮ ಸಂಸ್ಕೃತದಲ್ಲಿದೆ. ಇಲ್ಲಿ ಸ್ವಾರ್ಥ ಎಂದರೆ "ತನ್ನದೇ ಅರ್ಥ" ಎಂದರ್ಥ. ಉದಾಹರಣೆಗೆ, 'ಬಾಲ' ಎಂಬ ಪದಕ್ಕೆ ಏನರ್ಥವೋ, 'ಬಾಲಕ' ಎನ್ನುವುದಕ್ಕೂ ಅದೇ ಅರ್ಥ: ಬಾಲಕ ಎಂಬಲ್ಲಿಯ 'ಕ'ವು ಸ್ವಾರ್ಥಕವಾದುದು. ಆದ್ದರಿಂದ ಕಲ್ಪ ಎಂದರೂ ಕಲ್ಪಕ ಎಂದರೂ ಒಂದೇ.

ದ್ರುಮವೆಂದರೆ ಮರ; ಕಲ್ಪಕ-ದ್ರುಮವೆಂದರೆ ಕಲ್ಪವೃಕ್ಷ ಎಂಬರ್ಥ. ಒಂದು ಕಲ್ಪವೃಕ್ಷವಿದ್ದರೇ ಅದಕ್ಕೆ ಬಹಳವಾದ ಬೆಲೆಯುಂಟು: ಕೇಳಿದ್ದನ್ನೆಲ್ಲಾ ಕೊಡುವುದೇ ಕಲ್ಪವೃಕ್ಷ. ಇದಂತೂ ಕಲ್ಪತರುಗಳ ವನವೇ ಆಗಿದೆಯೆಂದರೆ ಅದರ ಹಿರಿಮೆ ಎಷ್ಟೆಂದು ಬೇರೆ ಹೇಳಬೇಕಿಲ್ಲವಷ್ಟೆ?

ಎಂದೇ ಆ ವನವನ್ನೇ, ಜೊತೆಗೆ ಅಲ್ಲಿಯ ಕಿಶೋರ(ಕೃಷ್ಣ)ನನ್ನೇ, ನಾನು ಭಜಿಸುವುದು – ಎಂಬುದಾಗಿ, ಎರಡೂ ಸಮವೋ ಎಂಬಂತೆ, ಹೇಳುತ್ತಿದ್ದಾನೆ, ಲೀಲಾಶುಕ. ವನವನ್ನೂ ಭಜಿಸುವುದೇ? - ಎಂಬ ಪ್ರಶ್ನೆಯೇ? ಅದಕ್ಕೆ ಮೂರು ಕಾರಣಗಳನ್ನು ಕೊಡುತ್ತಾನೆ.

ಆ ವೃಂದಾವನದ ವನದಲ್ಲಿ ಕೃಷ್ಣನಿಗೆ ಸಂಬಂಧಿಸಿದ ಮೂರು ಚಟುವಟಿಕೆಗಳುಂಟು; ಮೂರೂ ಮಹಾಪ್ರಭಾವವುಳ್ಳವುಗಳು; ಎಂದೇ ವಂದನೆ, ಎರಡಕ್ಕೂ - ಒಟ್ಟಿಗೆಯೇ.

ಕೃಷ್ಣನ ವೇಣು-ನಾದವು ಗೋವೃಂದಕ್ಕೆ ಆನಂದವನ್ನು ತಂದಿತೆಂದೂ ಮೃಗಗಳಿಗೆ ವಿವಶತೆಯನ್ನು ಉಂಟುಮಾಡಿತೆಂದೂ ಕೇಳುವೆವಲ್ಲವೇ? ಆದರೆ ಇಲ್ಲಿ ಕೊಳಲಿನ ಬಗ್ಗೆ ಮಾತನಾಡಿಲ್ಲ.

 ನವಿಲು-ಗೂಳಿ-ಆನೆಗಳ ಮೇಲೆ ಬೇರೆ ಬೇರೆ ಕಾರಣಗಳಿಂದಾಗಿ ಆದ ಪರಿಣಾಮವನ್ನು ಹೇಳಿದೆ. ಅವಾದರೂ ಸಾಧಾರಣವಾದ ಮಯೂರ-ವೃಷಭ-ವಾರಣಗಳಲ್ಲ. ಅವು ದೈವಿಕವಾದವು! ಷಣ್ಮುಖನ ನವಿಲು, ಶಿವನ ನಂದಿ, ಇಂದ್ರನ ವಾರಣಗಳು! ಆ ನವಿಲು ಕುಣಿಯುತ್ತದೆ,  ವೃಷಭವು ಮದಿಸುತ್ತದೆ, ಆನೆಯು ಆಸೆಪಡುತ್ತದೆ - ಎಂಬಿವೇ ಆ ಪರಿಣಾಮಗಳು.

ಇವೆಲ್ಲಾ ಆಗುತ್ತಿರುವುದು ಏತಕ್ಕಾಗಿ ಅಥವಾ ಯಾವುದರಿಂದಾಗಿ? ಒಂದೊಂದಾಗಿ ನೋಡೋಣ.

ಕೃಷ್ಣನು ತನ್ನ ಶೇಖರದಲ್ಲಿ, ಎಂದರೆ ತಲೆಯ ಜುಟ್ಟಿನ ಮೇಲೆ, ನವಿಲುಗರಿಯನ್ನು ಧರಿಸಿದ್ದಾನಲ್ಲವೇ? ಗರಿಯೆಂದರೆ ಒಂದೇ ಗರಿಯೆಂದುಕೊಳ್ಳಬೇಕಿಲ್ಲ. ಎಂದೇ ಕವಿಯು ಶೇಖರ-ಭರೈಃ - ಎಂದು ಬಹುವಚನವನ್ನೇ ಬಳಸಿದ್ದಾನೆ.

ಹೀಗೆ ಅನೇಕ ಮಯೂರ-ಪಿಂಛಗಳನ್ನು ಧರಿಸಿರುವ ಕೃಷ್ಣನನ್ನು ಬೃಂದಾವನದಲ್ಲಿ ಕಂಡೊಡನೆಯೇ, ಸುಬ್ರಹ್ಮಣ್ಯ-ಸ್ವಾಮಿಯ ವಾಹನವಾದ ನವಿಲಿಗೆ ಸಂತೋಷವೋ ಸಂತೋಷ. ಒಂದು ನವಿಲಿಗೆ ಮತ್ತೊಂದು ನವಿಲನ್ನು ಕಂಡರೆ ತೋಷವೇ. ಗರಿಯನ್ನು ಕಂಡೊಡನೆ, "ಇದೋ ಮತ್ತೊಂದು ನವಿಲು!" - ಎಂಬ ಭಾವನೆ ಬಂದಿದೆ, ಅದಕ್ಕೆ. ಅಷ್ಟಕ್ಕೇ ಹರ್ಷ. ಆ ಆನಂದದಿಂದಲೇ ಕುಣಿತ.

ಇಲ್ಲಿ ಸುಬ್ರಹ್ಮಣ್ಯನನ್ನು ಕ್ರೌಂಚ-ದ್ವೇಷಿಯೆಂದಿದೆ. ಕ್ರೌಂಚ-ಪರ್ವತವನ್ನು ತನ್ನ ಶಕ್ತ್ಯಾಯುಧದಿಂದ ಆತನು ಭೇದಿಸಿದನಷ್ಟೆ? "ಕುಮಾರಃ ಕ್ರೌಂಚ-ದಾರಣಃ" ಅಲ್ಲವೇ? ಹಾಗೆಯೇ, ನವಿಲನ್ನು ಚಂದ್ರಕಿಯೆಂದಿದೆ. ಚಂದ್ರಕವನ್ನುಳ್ಳದ್ದು ಚಂದ್ರಕಿ. ಚಂದ್ರಕವೆಂದರೆ ನವಿಲುಗರಿ.

ಎರಡನೆಯದು, ಧೂರ್ಜಟಿಯ ವೃಷಭ, ಎಂದರೆ ಶಿವನ ವಾಹನವಾದ ಭಾರಿ ಎತ್ತು. ಬೃಂದಾವನದಲ್ಲಿಯ ಗೋಸಮೃದ್ಧಿಯನ್ನು ಕೇಳಬೇಕೆ? ಘೋಷ-ಸುರಭಿಗಳು ಅಲ್ಲಿ ಬಹಳವೇ ಉಂಟು. ಗೋಪಾಲಕರ ಹಳ್ಳಿಗೆ ಘೋಷವೆಂದು ಹೆಸರು. ಸುರಭಿಯೆಂದರೆ ದೇವಲೋಕದ ಧೇನು ಎಂದರ್ಥ; ವಸಿಷ್ಠರ ಹೋಮಧೇನುವಾದ ನಂದಿನಿಯ ತಾಯಿಯೆಂದರ್ಥ. ಇವು ಪ್ರಸಿದ್ಧಾರ್ಥಗಳು. ಇವಲ್ಲದೆ,'ಗೋವು' ಎಂಬ ಸಾಮಾನ್ಯಾರ್ಥವೂ ಒಂದುಂಟು. ಅದನ್ನಿಲ್ಲಿ ಬಳಸಿದೆ.

ಸುರಭಿಯೆಂಬ ಪದಕ್ಕೇ "ಒಳ್ಳೇ ಗಂಧವುಳ್ಳದ್ದು" - ಎಂಬ ಅರ್ಥವೂ ಇದೆಯಷ್ಟೆ? ಗೋಸಂಪತ್ತಿಗೆ ಹೆಸರಾದ ವೃಂದಾವನದಲ್ಲಿ ಗೋವುಗಳಿಗೆ ಪುಷ್ಟಿ-ತುಷ್ಟಿಪ್ರದವಾದ ಆಹಾರವೂ ಪ್ರೀತಿಯೂ ಹೇರಳವಾಗಿ ದೊರೆಯುತ್ತಿದ್ದುದರಿಂದಾಗಿ ಬಹಳ ಆರೋಗ್ಯವಾಗಿರುವ ಅವುಗಳನ್ನು ಸಮೀಪಿಸಿದರೇ ಸಾಕು; ಅವುಗಳ ಮೈಯ ಸುಗಂಧವು ಮೂಗಿಗೆ ಮುಟ್ಟುವುದು! 

ಮನುಷ್ಯರಿಗೇ ಗೋಗಂಧವು ಮೆಚ್ಚುಗೆ ತರುವಂತಿರಲು, ಈ ಸುರಭಿ-ಗಂಧವು ಆ ವೃಷಭಕ್ಕೆ ಮುದ ತರುವಲ್ಲಿ ಆಶ್ಚರ್ಯವಿಲ್ಲ. ಮುದವಿದ್ದೆಡೆ ಮದವುಕ್ಕುವುದು. ಇಲ್ಲಿಯ ಉತ್ತಮಜಾತಿಯ ಸುರಭಿಗಳ ಸುಗಂಧವನ್ನು ಆಘ್ರಾಣಿಸಿ, ಎಂದರೆ ಮೂಸಿನೋಡಿ, ಶಿವನ ಎತ್ತಿಗೇ ಮತ್ತು ಹತ್ತುತ್ತಿತ್ತಂತೆ!

ಶಿವನನ್ನು ಇಲ್ಲಿ ಧೂರ್ಜಟಿಯೆಂದಿದೆ. ಏಕೆ ಆ ಹೆಸರು? ಆತನ ಭಾರವಾದ ಜಟೆಯಿಂದಾಗಿ. ಹೀಗೆ ವೃಂದಾವನದಲ್ಲಿರುವ ಕೃಷ್ಣನ ಸುರಭಿಯು ಶಿವವೃಷಭಕ್ಕೇ ಮತ್ತೇರಿಸುವಂತಿದೆ.

ಮತ್ತು ಮೂರನೆಯದು, ಮತ್ತೂ ವಿಶಿಷ್ಟವಾಗಿದೆ. ಕೃಷ್ಣನು ಸಾಕಿದ ಗೋವಿನ ವಿಶೇಷವನ್ನು ಹೇಳಿದ್ದಾಯಿತು, ಕೃಷ್ಣನು ತನ್ನ ಶಿರಸ್ಸಿನಲ್ಲಿ ಧರಿಸಿರುವ ಗರಿಯ ವಿಶೇಷವನ್ನು ಹೇಳಿದ್ದಾಯಿತು. ಈಗ ಮೂರನೆಯದಾಗಿ, ಮತ್ತು ಕೊನೆಯದಾಗಿ, ಶ್ರೀಕೃಷ್ಣನ ಭವ್ಯತೆಯನ್ನೇ ಹೇಳುತ್ತಿದ್ದಾನೆ.

ಶ್ರೀಕೃಷ್ಣನ ನಡೆಯೇ ಅದ್ಭುತವಾದುದು. ಆತನ ನಡೆಯಲ್ಲೇ ಒಂದು ಗಾಂಭೀರ್ಯವಿರುವುದು. ಗಜ-ಗತಿಯೆಂಬುದು ಪುರುಷ-ಶ್ರೇಷ್ಠರ, ರಾಜ-ಶ್ರೇಷ್ಠರ ನಡೆಯೆನ್ನುವರು. ಮಹಾರಾಜನ ನಡೆಯೆಂದರೆ ಮತ್ತ-ಮಾತಂಗಲೀಲೆ - ಎನ್ನುವರು. ಹಾಗಿತ್ತು ಕೃಷ್ಣನ ನಡೆಯೂ. ಅದರಲ್ಲಿ ಗಾಂಭೀರ್ಯ-ಸೌಂದರ್ಯಗಳಿದ್ದುವು. ಆ ವಿಭ್ರಮ-ಗತಿಯು, ಎಂದರೆ ವಿಲಾಸ-ಪೂರ್ಣವಾದ ನಡೆಯು, ಯಾರಾದರೂ ಆಸೆಪಡುವಂತಹುದೇ ಆಗಿತ್ತು. ಅವರಿವರಿರಲಿ, ಯಾವುದನ್ನು ಆದರ್ಶವೆಂದುಕೊಳ್ಳುತ್ತೇವೋ ಅಂತಹ ಇಂದ್ರ-ಗಜಕ್ಕೇ ತನ್ನ ನಡೆಯೂ ಹಾಗಿರಬೇಕೆಂದು ಆಸೆಪಡುವಂತಿತ್ತು! ಎಂದೇ ಇಂದ್ರನ ಆನೆಯೇ ಅದರಲ್ಲಿ ಅಸಕ್ತಿ ತೋರಿಸಿತು! - ಎನ್ನುತ್ತಾನೆ ಲೀಲಾಶುಕ.

ಹರಿಯ ಸಿಂಧುರವೆಂದರೆ ಇಂದ್ರನ ಗಜ. ಹರಿಯೆಂಬುದಕ್ಕೆ ಹಲವಾರು ಅರ್ಥಗಳಿವೆ ಇಂದ್ರನೆಂಬ ಅರ್ಥ, ಇಲ್ಲಿ. ಗಜಾನನನನ್ನು ಸಿಂಧುರಾನನವೆನ್ನಲು ಕಾರಣ, ಸಿಂಧುರವೆಂದರೆ ಗಜ. ಹೀಗೆ, ಇಂದ್ರವಾಹನವಾದ ಐರಾವತಕ್ಕೇ ಇಷ್ಟವಾಗುವ ಸಂನಿವೇಶ ಅಲ್ಲಿದೆಯೆಂದಾಯಿತು.

ತಾತ್ಪರ್ಯವೇನೆಂದರೆ, ಶ್ರೀಕೃಷ್ಣನು ವೃಂದಾವನದಲ್ಲಿ ಗೋ-ಪಾಲನವನ್ನು ಮಾಡುತ್ತಿರುವಾಗ, ದೇವತೆಗಳೆಲ್ಲ ಬಂದು ಅವನ ದರ್ಶನವನ್ನು ಮಾಡಿ, ತಮ್ಮ ಕಣ್ಣುಗಳನ್ನು ತುಂಬಿಕೊಳ್ಳುತ್ತಿದ್ದರು.

ಅಲ್ಲದೆ, ಅವರು ಬರುವಾಗ ಸಹಜವಾಗಿಯೇ ತಮ್ಮ ವಾಹನಗಳೊಂದಿಗೇ ಬರುತ್ತಿದ್ದುದು. ಹೀಗಾಗಿ ಶಿವ-ಸ್ಕಂದ-ಇಂದ್ರರು ಅಲ್ಲಿಗೆ, ಎಂದರೆ, ಕೃಷ್ಣನು ಪಶುಪಾಲನ ಮಾಡುವ ಎಡೆಯಾದ ವೃಂದಾವನಕ್ಕೆ, ಸವಾಹನರಾಗಿಯೇ ಬರುತ್ತಿದ್ದರು. ಅವರೆಲ್ಲ ಬರುತ್ತಿದ್ದುದು ಕೃಷ್ಣ-ದರ್ಶನಾರ್ಥಿಗಳಾಗಿಯೇ – ಎಂಬುದು ತಾತ್ಪರ್ಯ. ದೇವತಾ-ವಾಹನಗಳಿಗೂ ಮೋದ; ದೇವತೆಗಳಿಗೂ ಮಹಾಮೋದವೇ.

ಎಂದೇ, ತನ್ನ ನಮಸ್ಕಾರವೆಂಬುದು ಆ ಬೃಂದಾವನಕ್ಕೂ ಸಲ್ಲುವುದು; ಅಲ್ಲಿಯ ಗೋಸಂಪತ್ತಿನ ಪ್ರಭುವಾದ ಶ್ರೀಕೃಷ್ಣನಿಗೂ ಸಲ್ಲುವುದು - ಎನ್ನುತ್ತಾನೆ, ಲೀಲಾಶುಕ.

ಶ್ಲೋಕ ಹೀಗಿದೆ:

ಯಸ್ಮಿನ್ ನೃತ್ಯತಿ ಯಸ್ಯ ಶೇಖರ-ಭರೈಃ ಕ್ರೌಂಚ-ದ್ವಿಷಃ ಚಂದ್ರಕೀ /

ಯಸ್ಮಿನ್ ದೃಪ್ಯತಿ ಯಸ್ಯ ಘೋಷ-ಸುರಭಿಂ ಜಿಘ್ರನ್ ವೃಷೋ ಧೂರ್ಜಟೇಃ |

ಯಸ್ಮಿನ್ ಸಜ್ಜತಿ ಯಸ್ಯ ವಿಭ್ರಮ-ಗತಿಂ ವಾಂಛನ್ ಹರೇಃ ಸಿಂಧುರಃ /

ತದ್ ವೃಂದಾವನ-ಕಲ್ಪಕ-ದ್ರುಮ-ವನಂ, ತಂ ವಾ ಕಿಶೋರಂ, ಭಜೇ ||

ಸೂಚನೆ : 21/2/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಅಷ್ಟಾಕ್ಷರೀ100 ಜಿಜೀವಿಷೇಚ್ಛತಂ ಸಮಾಃ (Astakshara 100)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 

(ಪ್ರತಿಕ್ರಿಯಿಸಿರಿ lekhana@ayvm.in)




ಅಷ್ಟಾಕ್ಷರದರ್ಶನದ ನೂರನೆಯ ಕಂತು ಇದು! ಎಂದೇ, ನೂರಾಯುಸ್ಸಿನ ಆಸೆಯನ್ನು ಕುರಿತೊಂದು ಜಿಜ್ಞಾಸೆ.

ನೀವೇನನ್ನು ಬಯಸುತ್ತೀರಿ? ಎಲ್ಲಕ್ಕಿಂತಲೂ ಮುಖ್ಯವಾದ ತಮ್ಮ ಆಸೆ ಯಾವುದು? - ಎಂದು ಹತ್ತು ಮಂದಿಯನ್ನು ಕೇಳಿದರೆ ಏನೇನು ಉತ್ತರಗಳು ಬರಬಹುದು? ಅದಿರಲಿ; ಎಲ್ಲರ ಪರವಾಗಿ ಎಲ್ಲರ ಉತ್ತರಗಳಿಗಿಂತ ಮುಖ್ಯವಾದ ಉತ್ತರಗಳನ್ನು ದಾಸರೇ ಕೊಟ್ಟುಬಿಟ್ಟಿದ್ದಾರೆನ್ನಬಹುದು.

ಬಹುಮಂದಿಗೆ ತೋರುವ ಉತ್ತರಗಳೇನು? ತುಂಬಾ ಸಂಪತ್ತಿರಬೇಕು, ವೈಭವದ ಜೀವನವಿರಬೇಕು, ಸುಖ-ಭೋಗಗಳ ಸೊಗಸಿರಬೇಕು, ಇತ್ಯಾದಿ. ಆದರೆ ಇನ್ನೂ ಮುಖ್ಯವಾದುದನ್ನೂ, ಯಾರೂ ಕಡೆಗಾಣಿಸಲಾಗದುದನ್ನೂ, ತಾಳಬದ್ಧವಾಗಿಯೂ ಪ್ರಾಸಬದ್ಧವಾಗಿಯೂ ಚಿಕ್ಕದಾಗಿಯೂ ಚೊಕ್ಕವಾಗಿಯೂ ಹೇಳಿದ್ದಾರೆ, ಕನಕದಾಸರು : "ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ!"

ಅದಕ್ಕೆ ಪ್ರತಿಯಾಗಿ ನಾವು, "ಏನು, ಹೊಟ್ಟೆ-ಬಟ್ಟೆಗಳಿಗಾಗಿಬಿಟ್ಟರಷ್ಟೆ ಸಾಕೆ?" ಎನ್ನಬಹುದು, ಸರಿಯೇ. ಆದರೆ ಅವರ ಮಾತನ್ನು ಕೇವಲ ವಾಚ್ಯಾರ್ಥದಲ್ಲಿ ತಿಳಿದುಕೊಳ್ಳುವುದಲ್ಲ; ಅದರ ತಾತ್ಪರ್ಯವನ್ನು ಹಿಡಿಯಬೇಕು. ಹೊಟ್ಟೆಯೆಂದರೆ ಹೊಟ್ಟೆ ಮಾತ್ರವಲ್ಲ; ಬಟ್ಟೆಯೆಂದರೆ ಬಟ್ಟೆ ಮಾತ್ರವಲ್ಲ. ಹೊಟ್ಟೆಯೆಂಬುದು ಬದುಕುಳಿದಿರುವುದನ್ನು ಸೂಚಿಸುತ್ತದೆ; ಬಟ್ಟೆಯೆಂಬುದು ಮಾನವನ್ನು ಸೂಚಿಸುತ್ತದೆ.

ಬದುಕಿರಬೇಕು, ಸರಿಯೇ. ಎಷ್ಟು ದಿನ ಬದುಕಿರಬೇಕು? ಮಾನವ ಜೀವಮಾನದಲ್ಲಿ ಸಾಧಿಸಬೇಕಾದ ಆ ಮಾನವಾವುದು? ಯಾರದ್ದಾದರೂ ಜೀವಮಾನವು ಚೆನ್ನಾಗಿ ಕಳೆಯಿತು - ಎಂದು ಹೇಳಲು ಮಾನದಂಡವಾವುದು? ಎಲ್ಲವೂ ಯುಕ್ತಪ್ರಶ್ನೆಗಳೇ ಅಲ್ಲವೇ?  

ಎಷ್ಟೋ ಜನಕ್ಕೆ ಜೀವನವೇ 'ಬೋರ್' ಆಗುವುದಲ್ಲವೇ?: ಎಂದರೆ ನೀರಸ-ನಿರರ್ಥಕವಾಗಿ ತೋರಿ ಬೇಸರವನ್ನೇ ತರಿಸೀತಲ್ಲವೆ? ಯಾಕಾಗಿ ಬದುಕಿರಬೇಕೋ? - ಎನಿಸುವ ಪ್ರಸಂಗಗಳು ಯಾರ ಜೀವನದಲ್ಲಾದರೂ ಬಂದಾವೇ.

ಇದಲ್ಲದೆ, ನಮ್ಮ ದೇಶಕ್ಕೇ ವಿಶಿಷ್ಟವಾದ ಸಂಪ್ರದಾಯಗಳು ಕೆಲವಿವೆ. ಯಾರೇ ನಮಸ್ಕರಿಸಿದರೂ, ಹಿರಿಯರು ಮಾಡುವ/ತ್ತಿದ್ದ ಆಶೀರ್ವಾದವೇನು? ಆರೇ ಅಕ್ಷರಗಳ ನುಡಿ - ದೀರ್ಘಾಯುಷ್ಮಾನ್ ಭವ : "ಚಿರಕಾಲ ಬಾಳು!" ಹೆಂಗಸರಿಗೆ ಸಲ್ಲುವ ಆಶೀರ್ವಾದದಲ್ಲೂ ಈ ದೀರ್ಘಾಂಶವಿಲ್ಲದಿಲ್ಲ.

ಹಾಗಾದರೆ ಬಹುವರ್ಷ ಬದುಕಿರುವುದೇ ಹಿರಿದಾದುದೆಂದೇ? ಚಿರಕಾಲ ಬದುಕಿರುವವರೆಲ್ಲ ಮಹತ್ತಾದ ಸಾಧನೆಯನ್ನೇ ಮಾಡಿಬಿಡು/ಟ್ಟಿರುವರೇ? "ಹುಟ್ಟಿದ ಮೇಲೆ ಸಾಯೋ ತನಕ ಗಂಡಾಗುಂಡಿ" - ಎಂದಷ್ಟೇ ಜೀವನವಾದರೆ ಏನು ಬಂದಂತಾಯಿತು?

ಈ ಪ್ರಶ್ನೆಗಳಿಗೆ ನಮ್ಮ ಆರ್ಷ-ಪರಂಪರೆಯಲ್ಲಿ ಏನಾದರೂ ಉತ್ತರ ಸಿಗಬೇಕಲ್ಲವೇ? ಏಕೀ ಪ್ರಶ್ನೆ? ಜಗತ್ತಿನ ಎಷ್ಟೋ ನಾಗರಿಕತೆಗಳು ಅಲ್ಪಾಯುಗಳಾಗಿ ಹೇಳಹೆಸರಿಲ್ಲದಂತೆ ಹಳಸಿ ಅಳಿದುಹೋದವು.  ಋಷಿನಿರ್ಮಿತ-ನಾಗರಿಕತೆಯೊಂದೇ ಸುದೀರ್ಘಕಾಲ ಸುಚೈತನ್ಯದಿಂದ ಸೊಗಯಿಸಿರುವುದು! ಚಿರ-ಸ್ಥಾಯಿಯಾದ ಈ ಸಂಸ್ಕೃತಿಯೇ ಚಿರ-ಜೀವಿತದ ಮರ್ಮವನ್ನೂ ಅರುಹುವುದು.

ಏತಕ್ಕಾಗಿ ಬಾಳಿದರೆ ಜೀವನವು ಸಾರ್ಥಕವಾದೀತು? ಹಾಗೂ ಅದಕ್ಕಾಗಿ ಅದೆಷ್ಟು ಕಾಲ ಬಾಳಬಯಸಬೇಕು – ಎಂಬೆರಡು ಪ್ರಶ್ನೆಗಳಿಗೂ ಒಂದೇ ಮಂತ್ರದಲ್ಲಿ ಉತ್ತರವನ್ನು ಕೊಟ್ಟಿದೆ, ಉಪನಿಷತ್ತುಗಳಲ್ಲಿ ಮೊದಲನೆಯದೂ ಚಿಕ್ಕದೂ ಆದ ಈಶಾವಾಸ್ಯೋಪನಿಷತ್ತು. ಅದರ ಎರಡನೆಯ ಮಂತ್ರದ ಎರಡನೆಯ ಪಾದವೇ "ಜಿಜೀವಿಷೇತ್ ಶತಂ ಸಮಾಃ"! "ನೂರು ವರ್ಷ ಬದುಕಬಯಸಬೇಕು" – ಎಂದು.

ಎಂದೇ, ಯಾವುದೇ ಕಾರಣಕ್ಕೂ ಜೀವನವನ್ನು ಮೊಟಕುಗೊಳಿಸಲು ಪ್ರಯತ್ನಿಸುವುದಿರಲಿ, ಬಯಸಲೂಬಾರದು - ಎಂಬ ಸಂದೇಶವಿಲ್ಲಿದೆ! ಅರ್ಥಾತ್, ಆತ್ಮಹತ್ಯೆಗೆ ಶಾಸ್ತ್ರಗಳಲ್ಲಿ ಅನುಮತಿಯಿಲ್ಲವೇ ಇಲ್ಲ. ಆತ್ಮಹತ್ಯೆ ಮಾಡಿಕೊಂಡವರು ಅಂಧಂತಮಸ್ಸಿನಲ್ಲಿ ನರಳುವರು – ಎಂದೂ ಎಚ್ಚರಿಸಿದೆ, ಅಲ್ಲೇ!

"ಶತಾಯುರ್ವೈ ಪುರುಷಃ" ಎನ್ನುವರಲ್ಲವೇ? ಪೂರ್ಣಾಯುಸ್ಸೆಂದರೆ ಅದೇ: ಪೂರ್ತಿ ನೂರು ವರ್ಷಗಳು ಬಾಳುವುದೇ ಆದರ್ಶ, ಅಪೇಕ್ಷ್ಯ. ಕರ್ಮಗಳನ್ನು ಮಾಡುತ್ತಲೇ ಶತಾಯುಷಿಗಳಾಗಿ ಬಾಳಬೇಕೆಂಬುದನ್ನೂ ಇದೇ ಮಂತ್ರದಲ್ಲೇ ಹೇಳಿದೆ.  

ಇದರಲ್ಲೇನಿದೆ ವಿಶೇಷ? ಏನೂ ಮಾಡದೆ ಸುಮ್ಮನಿದ್ದುಬಿಡಲು ಯಾರಿಂದಲಾದರೂ ಸಾಧ್ಯವೇ? - ಒಂದು ಕ್ಷಣವಾದರೂ? - ಎಂದು ಗೀತೆಯೇ ಕೇಳುವುದಲ್ಲವೇ? ಹಾಗಿರುವಾಗ, "ಕರ್ಮಗಳನ್ನು ಮಾಡುತ್ತಲೇ" - ಎಂದು ಹೇಳುವುದರಲ್ಲಿ ವಿಶೇಷವೇನಿದೆ?

ಇದೆ. "ಯೋಗೀ ಭವ" ಎಂಬುದೇ ಅರ್ಜುನನಿಗೆ ಕೃಷ್ಣನು ಹೇಳಿದ ಮಾತು: ಯೋಗಿಗಳೇ ಆದರ್ಶ-ಪುರುಷರು. ಯೋಗಿಯಾದರೇನು ಕರ್ಮವು ಬೇಡವೆಂದೇ? "ಯೋಗಿಗಳೂ ಕರ್ಮ ಮಾಡತಕ್ಕವರೇ" ಎನ್ನುತ್ತಾನೆ, ಕೃಷ್ಣ. ಹೇಗೆ? ಅಂಟಿಸಿಕೊಳ್ಳದೆ ಆತ್ಮಶುದ್ಧಿಗಾಗಿ ಅದನ್ನು ಮಾಡುತ್ತಾರೆ, ಅವರು. ಕರ್ಮಫಲಕ್ಕಂಟಿಕೊಳ್ಳದೆ, ಮನೋಬುದ್ಧಿಗಳನ್ನು ಭಗವಂತನಿಗರ್ಪಿಸಿ, ವಿಹಿತಕರ್ಮಗಳನ್ನಾಚರಿಸುತ್ತಾರೆ.

ಹಾಗೆ ಮಾಡಿದರೇ ಜೀವನವು ಸಾರ್ಥಕವೆನಿಸುವುದು. ಶ್ರೀರಂಗಮಹಾಗುರುಗಳು ಎಚ್ಚರಿಸುವಂತೆ, "ಸತ್ತು ಹೋಗುವುದಕ್ಕಿಂತ ಮುಂಚೆಯೇ, ಇಲ್ಲಿಯೇ, ಜೀವಂತವಾಗಿ ಮುಕ್ತರಾಗಬೇಕು!" ಗೀತೆಯೂ "ಇಹೈವ", "ಇಲ್ಲಿಯೇ" – ಎನ್ನುತ್ತದಲ್ಲವೇ? ಸತ್ಕರ್ಮದಿಂದಲೇ ಸಂಸಿದ್ಧಿಯನ್ನು ಸಂಪಾದಿಸಿದ ಜನಕ-ಮಹರ್ಷಿಯ ಆದರ್ಶವನ್ನು ಗೀತೋಪನಿಷತ್ತುಗಳು ಎತ್ತಿಹಿಡಿದಿರುವುವಲ್ಲವೇ?

ಜೀವನವನ್ನು ಸಂಪನ್ನಗೊಳಿಸಿಕೊಳ್ಳಲು ಸನ್ಮಾರ್ಗ-ದರ್ಶನ ಹಾಗೂ ತದನುಸಾರವಾದ ಸುದೀರ್ಘ-ಸಾಧನೆಗಳು ಸರ್ವಥಾ ಸಂಪಾದ್ಯವಲ್ಲವೇ? ಅವೆಲ್ಲಕ್ಕಾಗಿಯೇ - ಜೀವಿತದ ಸಫಲತೆ-ಸುಫಲತೆಗಳಿಗೋಸ್ಕರವಾಗಿಯೇ - ಶತಾಯುಸ್ಸಿಗಾಗಿ ಹಂಬಲಿಸ(ಲೇ)ಬೇಕಲ್ಲವೇ? ನೂರ್ಕಾಲ ಬಾಳೋಣ!

ಸೂಚನೆ: 21/2//2026 ರಂದು ಈ ಲೇಖನ ವಿಜಯವಾಣಿ ಸುದಿನ ದಲ್ಲಿ ಪ್ರಕಟವಾಗಿದೆ. 

Monday, February 16, 2026

ವ್ಯಾಸ ವೀಕ್ಷಿತ 175 ಜರಾಸಂಧನ ಭವಿಷ್ಯವನ್ನು ಕುರಿತು ಕೌಶಿಕನ ನುಡಿ ( Vyaasa Vikshita 175)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)





ಚಂಡಕೌಶಿಕಮುನಿಯು ಮುಂದೆ ಜರಾಸಂಧನ ಭವಿಷ್ಯವು ಹೇಗಿರುವುದೆಂಬುದನ್ನು ಅವನ ತಂದೆ ಬೃಹದ್ರಥನಿಗೆ ತಿಳಿಸುತ್ತಾ ಹೀಗೆ ಮಾತನ್ನು ಮುಂದುವರೆಸುತ್ತಾನೆ:

"ದೇವತೆಗಳೇ ಪ್ರಯೋಗಿಸಿದ ಶಸ್ತ್ರಗಳೂ ಸಹ ಈ ಜರಾಸಂಧನನನ್ನು ಪೀಡಿಸವು - ನದಿಗಳ ವೇಗಗಳು ಪರ್ವತವನ್ನು ಹೇಗೆ ಪೀಡಿಸಲಾರವೋ ಹಾಗೆ. ಮೂರ್ಧಾಭಿಷಿಕ್ತ ರಾಜರು ಹಲವರಿರಬಹುದು. ಆದರೆ ಅವರೆಲ್ಲರ ತಲೆಯ ಮೇಲೆ ಈತನು ಜ್ವಲಿಸುವನು (ಎಂದರೆ ಉಜ್ಜ್ವಲನಾಗಿ ಬೆಳಗುವನು). ಆಕಾಶದಲ್ಲಿ ಜ್ಯೋತಿಸ್ಸುಗಳುಂಟು. ಆದರೆ ಸೂರ್ಯನು ಅವೆಲ್ಲವನ್ನೂ ಮೀರಿಸುವನು, ಅಲ್ಲವೇ? ಹಾಗೆಯೇ ಈತನೂ ಎದುರಾಳಿಗಳನ್ನು ಮಂಕುಮಾಡುವವನೇ.

ಸುಸಂಪನ್ನವಾದ ಸೈನ್ಯ-ವಾಹನಗಳನ್ನುಳ್ಳ ರಾಜರುಗಳೂ ಈತನತ್ತ ಏನಾದರೂ ಸೆಣಸಲು ಸಮೀಸಿದರೆ, ಮಿಡತೆಗಳು ಬೆಂಕಿಯೊಳಗೆ ನುಗ್ಗಿ ಸಾಯುವ ಹಾಗೆ ಸಾಯುವವರೇ. ರಾಜರೆಲ್ಲರ ಒಟ್ಟಾರೆ ಸಂಪತ್ತನ್ನೂ ಈತನು ಅಪಹರಿಸಿಬಿಡುವನು. ಮಳೆಗಾಲದಲ್ಲಿ ನದಗಳು ಹಾಗೂ ನದಿಗಳು ಉಕ್ಕುವ ನೀರುಳ್ಳವಾಗಿರುತ್ತವೆಯಷ್ಟೆ. ಆದರೆ ಸಮುದ್ರರಾಜನು ಅವೆಲ್ಲವನ್ನೂ ಹೇಗೆ ನುಂಗಿಬಿಡುವನೋ, ಹಾಗೆ.

ನಾಲ್ಕೂ ವರ್ಣಗಳಿಗೂ ಈತನು ಆಸರೆ ಕೊಡುವನು - ಹೇಗೆ ಭೂಮಿಯು ಸರ್ವ-ಸಸ್ಯಗಳನ್ನೂ ಧರಿಸುತ್ತಾ ಶುಭಾಶುಭ-ವಸ್ತುಗಳಿಗೆಲ್ಲಾ ಆಶ್ರಯವೀಯುವುದೋ ಹಾಗೆ. ಈತನ ಆಜ್ಞೆಗೆ ಎಲ್ಲ ರಾಜರೂ ಅಧೀನರಾಗಿರುವರು - ಸಮಸ್ತ್ರಭೂತಗಳಿಗೂ ಆತ್ಮಭೂತನಾದ ವಾಯುವಿಗೆ ಹೇಗೆ ಸರ್ವಪ್ರಾಣಿಗಳೂ ಅಧೀನರಾಗಿರುವರೋ ಹಾಗೆ.

ಅಲ್ಲದೆ, ಎಲ್ಲ ಲೋಕಗಳಲ್ಲೂ ಬಲಶಾಲಿಯಾದ ಈತನು, ತ್ರಿಪುರಸಂಹಾರವನ್ನು ಮಾಡಿದ ರುದ್ರಮಹಾದೇವನನ್ನು ಸಾಕ್ಷಾತ್ಕರಿಸಿಕೊಳ್ಳುವನು."

ಹೀಗೆ ಹೇಳುತ್ತಲೇ ಆ ಮುನಿಯು ತನ್ನ ಸ್ವಕಾರ್ಯ-ಚಿಂತನ-ಮಗ್ನನಾಗಿ ಬೃಹದ್ರಥರಾಜನನ್ನು ಕಳುಹಿಸಿಕೊಟ್ಟನು.

ಆಮೇಲೆ ಮಗಧಾಧಿಪತಿಯಾದ ರಾಜಾ ಬೃಹದ್ರಥನು ತನ್ನ ನಗರಕ್ಕೆ ಹಿಂದಿರುಗಿ, ಜ್ಞಾತಿಗಳಿಂದಲೂ ಸಂಬಂಧಿಗಳಿಂದಲೂ ಸುತ್ತುವರೆಯಲ್ಪಟ್ಟವನಾಗಿ, ಜರಾಸಂಧನಿಗೆ ಪಟ್ಟಾಭಿಷೇಕವನ್ನು ನೆರವೇರಿಸಿ, ಪರಮಸಂತೋಷವನ್ನು ಹೊಂದಿದನು. ಜರಾಸಂಧನಿಗೆ ಅಭಿಷೇಕವನ್ನು ಮಾಡಿದ ಬಳಿಕ ರಾಜಾ ಬೃಹದ್ರಥನು ತನ್ನಿಬ್ಬರೂ ಪತ್ನಿಯರೊಂದಿಗೆ ವಾನಪ್ರಸ್ಥನಾದನು.

ತನ್ನಿಬ್ಬರು ತಾಯಂದಿರೂ ತಂದೆಯೂ ವನಕ್ಕೆ ತೆರಳಿರಲು, ಜರಾಸಂಧನ ರಾಜ್ಯನಿರ್ವಹಣೆಯು ಆರಂಭವಾಯಿತು. ಸ್ವಪರಾಕ್ರಮದಿಂದ ರಾಜರನ್ನು ತನ್ನ ವಶದಲ್ಲಿಟ್ಟುಕೊಂಡನು.

ದೀರ್ಘಕಾಲವು ಹೀಗೇ ಕಳೆಯಿತು. ತಪೋವನದಲ್ಲಿ ತಪಸ್ಸು ಮಾಡಿ ರಾಜಾ ಬೃಹದ್ರಥನು ಪತ್ನೀ-ಸಮೇತನಾಗಿ ಸ್ವರ್ಗಸೇರಿದನು. ಮತ್ತು ಜರಾಸಂಧನಾದರೂ, ಕೌಶಿಕನು ಹೇಳಿದಂತೆಯೇ ಎಲ್ಲ ವರಗಳನ್ನೂ ಪಡೆದವನಾಗಿ ರಾಜ್ಯಪಾಲನೆ ಮಾಡಿದನು.

ಇಷ್ಟರಲ್ಲಿ ವಾಸುದೇವನು ಕಂಸಮಹಾರಾಜನನ್ನು ಸಂಹರಿಸಿದನಷ್ಟೆ. ಇದರಿಂದಾಗಿ ಕೃಷ್ಣನೊಂದಿಗೆ ಆತನ ವೈರವೂ ಉಂಟಾಯಿತು. ಒಂದು ಕಡಿಮೆ ನೂರು ಬಾರಿ - ಎಂದರೆ ತೊಂಭತ್ತೊಂಭತ್ತು ಬಾರಿ - ಗದೆಯನ್ನು ತಿರುಗಿಸಿದವನೇ, ತನ್ನ ಗಿರಿವ್ರಜಸ್ಥಾನದಿಂದ ಮಥುರೆಯಲ್ಲಿ ಅದ್ಭುತಕರ್ಮನಾದ ಕೃಷ್ಣನತ್ತ ಅದನ್ನು ಬೀಸಿ ಎಸೆದನು. ಮತ್ತು ಆ ಉತ್ತಮವಾದ ಗದೆಯೂ ತೊಂಭತ್ತೊಂಭತ್ತು ಯೋಜನಗಳ ದೂರದಲ್ಲಿದ್ದ ಮಥುರೆಯಲ್ಲಿಗೆ ಬಂದು ಬಿದ್ದಿತು.

ಗದೆಯು ಬಂದು ಬಿದ್ದಿರುವುದನ್ನು ಪುರಜನರು ಕೃಷ್ಣನಿಗೆ ತಿಳಿಸಿದರು. ಗದೆ ಬಿದ್ದೆಡೆಗೆ ಒಂದು ಹೆಸರೂ ಬಂದಿತು, ಅಂದಿನಿಂದ - ಗದಾವಸಾನ - ಎಂದು. ಎಂದರೆ ಗದೆಯು ಕೊನೆಗೊಂಡ ಜಾಗ.

ನಾನು ಹಿಂದೆಯೇ ಹೇಳಿದಂತೆ ಜರಾಸಂಧನಿಗೆ ಹಂಸ-ಡಿಂಭಕ ಎಂಬ ಇಬ್ಬರ ಸಹಾಯವಿದ್ದಿತು. ಅವರಿಬ್ಬರೂ ಶಸ್ತ್ರಗಳಿಂದ ಸಾಯಿಸಲಾಗದಂಥವರು. ಧೀಮಂತರು, ನೀತಿಶಾಸ್ತ್ರದಲ್ಲಿ ವಿಶಾರದರಾದವರು. ಅವರು ಮೂವರು ಸೇರಿದರೆ, ಮೂರು ಲೋಕಗಳಲ್ಲೂ ಜಯಿಸಲಾಗದಂತಹವರೇ ಸರಿ.

ಸೂಚನೆ : 15/2/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ಪ್ರಶ್ನೋತ್ತರ ರತ್ನಮಾಲಿಕೆ 53 (Prasnottara Ratnamalike 53)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ - ೫೩ - ಅಲಂಕಾರ ಯಾವುದು ?

ಉ. ಶೀಲ

ಪ್ರಕೃತಪ್ರಶ್ನೋತ್ತರದಲ್ಲಿ ಎರಡು ವಿಷಯದ ಬಗ್ಗೆ ಚಿಂತಿಸಬೇಕಾಗಿದೆ. ಅಲಂಕಾರ ಎಂದರೇನು? ಮತ್ತು ಶೀಲವು ಹೇಗೆ ಅಲಂಕಾರವಾಗುತ್ತದೆ? ಎಂಬುದಾಗಿ. ದೇವರನ್ನು ಅಲಂಕರಿಸುತ್ತೇವೆ, ನಾವು ಅಲಂಕಾರ ಮಾಡಿಕೊಳ್ಳುತ್ತೇವೆ, ಕಾವ್ಯದಲ್ಲಿ ಉಪಮಾಲಂಕಾರ ಎಂದು ಕೇಳುತ್ತೇವೆ. ಈ ಅಲಂಕಾರದ ಅರ್ಥವೇನು? ದೇವರೆಂದರೆ ಮೊದಲೇ ಕಾಂತಿಯಿಂದ ಕೂಡಿದವನು. ಅಲಂಕಾರದಿಂದ ದೇವರು ಇನ್ನಷ್ಟು ನೋಡಲು ಆಕರ್ಷಕನಾಗಿ ಕಾಣುತ್ತಾನೆ. ನಾವು ಚೆನ್ನಾಗಿ ಕಾಣಬೇಕೆಂದು ಅಲಂಕರಿಸಿಕೊಳ್ಳುತ್ತೇವೆ. ಅಂತೆಯೇ ಕಾವ್ಯದಲ್ಲಿ ಬರುವ ಶಬ್ದಾಲಂಕಾರವೋ ಅಥವಾ ಅರ್ಥಾಲಂಕಾರವೋ ಕಾವ್ಯವನ್ನು ಇನ್ನಷ್ಟು ಸೊಬಗಾಗಿ ಮಾಡುತ್ತದೆ, ಶೋಭಿಸುವಂತೆ ಮಾಡುತ್ತದೆ. 'ಕಾವ್ಯಶೋಭಾಕರಾನ್ ಧರ್ಮಾನ್ ಅಲಂಕಾರಾನ್ ಪ್ರಚಕ್ಷತೇ' ಎಂಬುದಾಗಿ ಹೇಳಲಾಗಿದೆ. ಅಲಂಕಾರ- ಅಲಂ- ಸಾಕು, ಪರ್ಯಾಪ್ತಿ ಎಂಬ ಅರ್ಥ. ಯಾವುದನ್ನು ಮಾಡಿದರೆ 'ಇನ್ನೂ ಮಾಡಬೇಕು' ಎಂಬುದಾಗಿ ಇಲ್ಲವೋ, ಮಾಡಬೇಕಾದ ಕಾರ್ಯವು ಯಾವಾಗ ಪರಿಸಮಾಪ್ತಿಯನ್ನು ಪಡೆಯುತ್ತದೆಯೋ, ಅಥವಾ ಮೂಲ ಉದ್ದೇಶವನ್ನು ಈಡೇರಿಸುವಂತೆ ಇರುತ್ತದೆಯೋ, ಆ ವಸ್ತುವಿನ ಸಹಜವಾದ ಸ್ವಭಾವವು ಇನ್ನಷ್ಟು ಶೋಭಿಸುವಂತೆ ಇರುತ್ತದೆಯೋ ಅಂತಹ ಕಾರ್ಯವನ್ನು 'ಅಲಂಕಾರ' ಎಂಬುದಾಗಿ ಕರೆಯಲಾಗುತ್ತದೆ.

ಪ್ರಸ್ತುತ 'ಶೀಲ' ಎಂಬುದನ್ನು ಅಲಂಕಾರ ಎಂಬುದಾಗಿ ಉತ್ತರಿಸಲಾಗಿದೆ. ಅಂದರೆ ಶೀಲವು ಹೇಗೆ ಅಲಂಕಾರವಾಗುತ್ತದ? ಹಾಗಾದರೆ ಇದೊಂದು ಅಲಂಕಾರಕ್ಕೆ ಬೇಕಾದ ಆಭರಣವೋ? ಒಂದು ಹಾರವನ್ನೋ, ನೂಪುರವನ್ನೋ ಧರಿಸಿದರೆ ಹೇಗೆ ವ್ಯಕ್ತಿ ಸುಂದರವಾಗಿ ಕಾಣುತ್ತಾನೋ, ಅಂತೆಯೇ ಈ ಶೀಲವೆಂಬುದು ಒಂದು ಆಭರಣವೇ? ಅದೊಂದು ಪದಾರ್ಥವೇ? ಹೌದು. ಅದೊಂದು ವ್ಯಕ್ತಿಯ ಅಂತಃಕರಣದ ಆಭರಣ. ಈ ಆಭರಣವು ಅವನನ್ನು ಶೋಭಿಸುವಂತೆ ಮಾಡುತ್ತದೆ. ಅವನು ಮಾನ್ಯನಾಗುತ್ತಾನೆ. ಎಲ್ಲರಿಂದ ಆಕರ್ಷಿತನಾಗುತ್ತಾನೆ. ಹಾಗಾಗಿ 'ಶೀಲಂ ಸರ್ವಸ್ಯ ಭೂಷಣಂ' ಎಂಬುದಾಗಿ ಒಂದು ಸುಭಾಷಿತ ಶೀಲದ ಮಹತ್ವವನ್ನು ಸಾರುತ್ತದೆ; ಎಲ್ಲಕ್ಕಿಂತಲೂ ಶೀಲವೇ ಉತ್ತಮವಾದ ಆಭರಣ ಎಂಬುದಾಗಿ. ಹಾಗಾದರೆ ಶೀಲ ಎಂದರೇನು? ವ್ಯಕ್ತಿಯಲ್ಲಿ ಸ್ವಭಾವ ಮತ್ತು ಶೀಲಾ ಎಂಬುದಾಗಿ ಎರಡು ರೀತಿಯ ಲಕ್ಷಣವನ್ನು ಕಾಣಬಹುದು. ಯಾವುದು ಜನ್ಮತಃ ಬಂದಿರುತ್ತದೆಯೋ, ಸ್ವ -ಆತ್ಮ, ತನ್ನ ಜೊತೆಯಲ್ಲಿ ಯಾವುದು, ಭಾವ -ಇರುವುದು, ಅದು ಸ್ವಭಾವವಾಗುತ್ತದೆ. ಶೀಲಾ ಎಂಬುದು ಅವನ ಹುಟ್ಟಿನ ಅನಂತರದಲ್ಲಿ ಬದಲಿಸಬಹುದಾದ ಒಂದು ವಿಶೇಷ ಗುಣ. ಅದನ್ನು 'ಶೀಲ' ಎಂಬುದಾಗಿ ಕರೆದಿದ್ದಾರೆ. ಶೀಲವು ಹದಿಮೂರು ಬಗೆ ಎಂಬುದನ್ನು ಹಾರಿತ ಸ್ಮೃತಿಯು ಹೇಳುತ್ತದೆ. ೧.ಬ್ರಹ್ಮಣ್ಯತಾ- ಎಲ್ಲೆಡೆ ಬ್ರಹ್ಮಭಾವವನ್ನು ಕಾಣುವುದು. ೨.ದೇವಪಿತೃ ಭಕ್ತಿತಾ, ೩,ಸೌಮ್ಯತಾ -ಸೌಮ್ಯವಾದ ನಡೆ, ೪.ಅಪರೋಪತಾಪಿತಾ - ಬೇರೆಯವರಿಗೆ ತೊಂದರೆ ಕೊಡದಿರುವುದು, ೫.ಅನಸೂಯತಾ - ಹೊಟ್ಟೆಕಿಚ್ಚು ಇಲ್ಲದಿರುವುದು, ೬.ಮೃದುತಾ - ಮೃದುಸ್ವಭಾವ, ೭.ಅಪಾರುಷ್ಯ - ಕಠಿಣಹೃದಯಿಯಾಗದಿರುವುದು, ೮.ಮೈತ್ರತಾ -ಎಲ್ಲರಲ್ಲೂ ಮಿತ್ರಭಾವದಿಂದ ಇರುವುದು, ೯.ಪ್ರಿಯವಾದಿತ್ವ - ಪ್ರಿಯವೂ ಹಿತವಾಗುವಂತೆ ಮಾತನಾಡುವುದು ೧೦.ಕೃತಜ್ಞತಾ - ಮಾಡಿದ ಉಪಕಾರದ ಸ್ಮರಣೆ, ೧೧.ಶರಣ್ಯತಾ - ನಮಗಿಂತಲೂ ದೊಡ್ಡ ವಿಷಯಕ್ಕೆ ಮಣಿಯುವುದು, ೧೨.ಕಾರುಣ್ಯ - ದಯೆ, ೧೩.ಪ್ರಶಾಂತಿ - ನೆಮ್ಮದಿ ಎಂಬುದಾಗಿ. ಇಂತಹ ಶೀಲವೆಂಬ ವಿಶಿಷ್ಟವಾದ ಗುಣಗಳಿಂದ ಕೂಡಿದ ವ್ಯಕ್ತಿಯು ಎಲ್ಲೆಡೆ ಆಕರ್ಷಿತನಾಗುತ್ತಾನೆ, ಕಾರಣ ಶೋಭಿಸುತ್ತಾನೆ. ಅವನನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ. ಆದ್ದರಿಂದ ಅವನು ಜಗನ್ಮಾನ್ಯನಾಗುತ್ತಾನೆ. ಹಾಗಾಗಿ 'ಶೀಲ'ವನ್ನು 'ಅಲಂಕಾರ' ಎಂಬುದಾಗಿ ವಿವರಿಸಲಾಗಿದೆ.

ಸೂಚನೆ : 15/2/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Sunday, February 15, 2026

ಕೃಷ್ಣಕರ್ಣಾಮೃತ 94 ಉದಯಸಮಯದಲಿ ನೆನೆಯುವುದು ಸರಸಿಜವದನನನು (Krishakarnamrta 94)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)





ಬೆಳಗಾಗೆದ್ದು ನಾವು ಮೊದಲು ಮಾಡುವುದೇ ಭಗವಂತನ ಸ್ಮರಣೆ, ಭಗವನ್ಮೂರ್ತಿಯ ದರ್ಶನ. ಮತ್ತಾರನ್ನೋ ಸ್ಮರಿಸುವುದೂ ಅಲ್ಲ, ದರ್ಶಿಸುವುದೂ ಅಲ್ಲ. ಮಿಕ್ಕವರಲ್ಲಿ ಗುಣ-ದೋಷಗಳ ಮಿಶ್ರಣವಿರುತ್ತದೆ. ಪುಣ್ಯಪಾಪಾತೀತನೂ, ಶುದ್ಧನೂ, ಮಂಗಲಮಯನೂ ಆದ ಭಗವಂತನನ್ನೇ, ಆತನ ಚಿತ್ರವನ್ನೇ, ನಮ್ಮ ಚಿತ್ತದಲ್ಲಿ ಮೊಟ್ಟ ಮೊದಲು ಮುದ್ರಿಸಿಕೊಳ್ಳಬೇಕಾದದ್ದು.

ಇದನ್ನೇ ಲೀಲಾಶುಕನನ್ನು ಕೇಳಿದರೆ, ಅವನು ಕೊಡುವ ಉತ್ತರದಲ್ಲಿ ಏನೋ ವಿಶೇಷವಿರುತ್ತದೆ. ತಾನು ನೆನೆಯುವುದು ಕೃಷ್ಣನನ್ನೇ, ಬಾಲಕೃಷ್ಣನನ್ನೇ - ಎನ್ನುತ್ತಾನೆ, ಅವನು.

ಏಕೆ? ಎಂತಹ ಕೃಷ್ಣನನ್ನು ಸ್ಮರಿಸುತ್ತಾನೆ, ಲೀಲಾಶುಕ? ನಿದ್ರೆಯನ್ನು ಆಗಷ್ಟೆ ಮುಗಿಸಿರುವ ಕೃಷ್ಣನನ್ನೇ. ನಿದ್ದೆಯ ಅವಸಾನವಾದಾಗ ಹೇಗಿರುತ್ತದೆ ಆತನ ಮುಖ? ಅವಸಾನವೆಂದರೆ ಕೊನೆ, ಮುಗಿಯುವುದು. ನಿದ್ದೆ ಮುಗಿಸಿ ಎದ್ದ ಮುದ್ದು ಮಗುವಿನ ಮೊಗವು ರಮಣೀಯವಾಗಿಯೇ ಇರುತ್ತದೆ. ಕಮಲದಂತಿರುತ್ತದೆ. ನಮ್ಮ ಕಣ್ಣುಗಳಿಗೆ ಅಭಿರಾಮವಾಗಿರುತ್ತದೆ, ಎಂದರೆ ಸುಂದರವಾಗಿರುತ್ತದೆ. ಬಾಲಕೃಷ್ಣನ ಮೈ ಹೇಗಿರುತ್ತದೆ? ಹೃದ್ಯವೂ ಅನವದ್ಯವೂ ಆಗಿರುತ್ತದೆ. ಹೃದ್ಯವೆಂದರೆ ಮನೋಹರ. ಅನವದ್ಯವೆಂದರೆ ದೋಷ-ರಹಿತ.

ಕೃಷ್ಣನು ಏಳುವುದೂ ಪ್ರಾತಃಕಾಲದಲ್ಲೇ. ಆತನನ್ನು ಯಾರಾದರೂ ಎಬ್ಬಿಸಿದರೇ? ಇಲ್ಲ. ಆದರೆ ಬೆಳಗಾಗೆದ್ದು ಗೋಪಿಯರು ಮೊಸರು ಕಡೆಯುವರಲ್ಲವೇ? ಆ ದಧಿ-ಘೋಷದಿಂದಲೇ, ಎಂದರೆ ಮೊಸರಿನ ಸದ್ದಿನಿಂದಲೇ, ಆತನಿಗೆ ಎಚ್ಚರವಾಗಿರುವುದು. ಎಂದೇ ಆತನ ಕಣ್ಣುಗಳು ಆಗಷ್ಟೆ ಅರಳಿದ ತಾವರೆಗಳಂತೆ ಇರುವುವು. ಅಂತಹ ಕಮಲಗಳನ್ನು ಉನ್ನಿದ್ರ-ಪದ್ಮವೆನ್ನುತ್ತಾರೆ. "ನಿದ್ರೆ ಮುಗಿಸಿದ ಜಲಜಗಳು" - ಎಂದರ್ಥ, ಅದಕ್ಕೆ.

ಮತ್ತು ಆತನು ಮಾಡುವ ಮೊದಲ ಕೆಲಸವೇ ಬೆಣ್ಣೆಯನ್ನು ಕದಿಯುವುದು! ಅಂತಹ ನವನೀತ-ಚೋರನನ್ನು ಸ್ಮರಿಸುವೆ - ಎನ್ನುತ್ತಾನೆ, ಕವಿ.

ಶ್ಲೋಕವಿದು.

ಪ್ರಾತಃ ಸ್ಮರಾಮಿ ದಧಿ-ಘೋಷ-ವಿಧೂತ-ನಿದ್ರಂ /
ನಿದ್ರಾವಸಾನ-ರಮಣೀಯ-ಮುಖಾರವಿಂದಂ |
ಹೃದ್ಯಾನವದ್ಯ-ವಪುಷಂ ನಯನಾಭಿರಾಮಂ /
ಉನ್ನಿದ್ರ-ಪದ್ಮ-ನಯನಂ ನವನೀತ-ಚೋರಂ ||

ಬೆಳಗ್ಗೆ ಆಗತಾನೆ ಎದ್ದ ನಯನ-ರಮಣೀಯನಾದ ಬಾಲನನ್ನೇ ನಾವು ಬೆಳಗಾಗೆದ್ದು ಸ್ಮರಿಸಿಕೊಳ್ಳುವುದು.

***

ಮತ್ತೊಂದು ಪದ್ಯ:

ತನ್ನ ಕೊಳಲಿನ ನಾದವನ್ನೇ ಆಸ್ವಾದಿಸುತ್ತಿರುವ ಕೃಷ್ಣನನ್ನು ಭಜಿಸುತ್ತೇವೆ - ಎನ್ನುತ್ತಾನೆ, ಲೀಲಾಶುಕ.

ವೇಣುಗಾನ-ವೇಣುನಾದ - ಇವೆರಡರಲ್ಲೂ ಕಿಂಚಿದ್-ಭೇದವಿದೆಯೆಂಬುದನ್ನು ಗಮನಿಸಬಹುದು. ಗಾನವೆಂದರೆ ಹಾಡು. ಹಾಡೆಂದರೆ ಯಾವುದೋ ಭಾವವನ್ನು ಅಭಿವ್ಯಕ್ತಿಗೊಳಿಸುವುದು. ನಾದದಿಂದಲೇ ಗಾನವೆಂಬುದೂ ಯುಕ್ತವಾದದ್ದೇ. ಆದರೆ ಕೆಲವು ವಿಶಿಷ್ಟನಾದಗಳುಂಟು. ಅವುಗಳನ್ನು ಆಲಿಸುವುದರಿಂದ ಆಗುವ ಪರಿಣಾಮವೇ ಬೇರೆ. ಘಂಟಾನಾದ-ವೀಣಾನಾದ-ಮೃದಂಗನಾದ ಮುಂತಾದ ನಾದಗಳು ವಿಶಿಷ್ಟ-ಪರಿಣಾಮಗಳನ್ನು ಉಂಟುಮಾಡಿಸತಕ್ಕವು. ವೀಣಾ-ವೇಣುಗಳು ಒಂದು ಗೀತವನ್ನೇ ಹೊರತರಬಲ್ಲವು. ಭೇರೀನಾದ-ಮೃದಂಗನಾದಗಳು ತಾಲ-ಲಯಗಳ ನಡೆಗಳನ್ನು ಗಾನಗಳೊಂದಿಗೆ ಮೇಳೈಸಿಕೊಡಬಲ್ಲವು. ಹಾಡಿನ ನಡುವೆಯೋ ಸ್ವತಂತ್ರವಾಗಿಯೋ ಕೆಲವು ವೇಣು-ನಾದಗಳು ಉತ್ಕೃಷ್ಟ-ಪ್ರಭಾವವನ್ನು ಬೀರಬಲ್ಲವು. ಲೀಲಾಶುಕನೇ ಮತ್ತೊಂದೆಡೆ ಓಂಕಾರ-ಧ್ವನಿಯನ್ನೇ ಹೊಮ್ಮಿಸುತ್ತಿರುವ ಕೃಷ್ಣನ ಕೊಳಲಿನ ಬಗ್ಗೆ ಹೇಳಿದ್ದಾನೆ. ಆ ವಂಶೀ-ನಿನಾದದ ದಶ-ಪರಿಣಾಮಗಳನ್ನು ಹೇಳಿದ್ದಾನೆ.

ಅಂತೂ ವೇಣು-ನಾದವೆಂಬುದು ಇತ್ತ ಕಿವಿಗೆ ಇಂಪೂ, ಅತ್ತ ಆಧ್ಯಾತ್ಮಿಕವಾಗಿ ತಂಪೂ, ಆದ ಧ್ವನಿ.

ಅದನ್ನೇ ಆಸ್ವಾದಿಸುತ್ತಿದ್ದಾನೆ, ಕೃಷ್ಣ. ಯಾವುದನ್ನು ಸಹೃದಯರಾಗಿ ಆಸ್ವಾದಿಸುವೆವೋ ಅದೇ ರಸ. ರಸವನ್ನು ಆಸ್ವಾದನೆ ಮಾಡುವವನೇ ರಸಿಕ. ತಾನೇ ನುಡಿಸುತ್ತಿರುವ ವೇಣುವಿನ ನಾದಕ್ಕೆ ಕೃಷ್ಣನು ತಾನೇ ರಸಿಕನೂ ಆಗಿದ್ದಾನೆ. ತನ್ನ ವೇಣು-ನಾದವನ್ನು ಆಲಿಸುವ ಭಾಗ್ಯವು ಯಾವ ಯಾವ ಜೀವಿಗಳಿಗುಂಟೋ ಅವುಗಳಿಗೆಲ್ಲ ಒಂದು ಆಧ್ಯಾತ್ಮಿಕೋತ್ಕರ್ಷವೆಂಬುದು ಸಿದ್ಧವೇ ಆಗಿರುವುದು. ಜೀವೋದ್ಧಾರವೆಂಬುದೇ ಭಗವಂತನಿಗೆ ಪ್ರಿಯವಾದ ಕೃತ್ಯ. ಅದು ಕೆಲವು ಸೂಕ್ಷ್ಮ-ನಾದಗಳಿಂದಲೇ ಕೆಲವೊಮ್ಮೆ ಸಿದ್ಧಿಸಿಬಿಡುವಂತಹುದು. ಅಂತಹ ನಾದವು ಕಿವಿಗೆ ಬಿದ್ದಾಗ ಜೀವಿಗಳು ನಲಿಯುವುವು. ಮನುಷ್ಯರು ಮಾತ್ರವಲ್ಲದೆ ಪಶು-ಪ್ರಾಣಿಗಳಿಗೂ ತಣಿಪನ್ನುಣಿಸುವ ನಾದವದು. ಎಂದೇ ಅಂತಹ ನಾದವು ತನ್ನ ವೇಣುವಿನಿಂದ ಹೊಮ್ಮಿದಾಗ, ಕೃಷ್ಣನಿಗೂ ಒಂದು ಕ್ಷಣ ಅದರಲ್ಲೇ ರಮಿಸುವಂತಾಗುತ್ತದೆ. ಹೀಗಾಗಿ ಶ್ರೀಕೃಷ್ಣನು ತಾನೇ ವೇಣುನಾದ-ರಸಿಕನಾಗಿದ್ದಾನೆ.

ಯಾರಾದರೂ ನಾದದಲ್ಲಿ ತನ್ಮಯತೆಯನ್ನು ಹೊಂದಿದರೆ ಹೇಗೆ ತೋರುತ್ತಾರೆ? ಎಂಬುದನ್ನು ಗಮನಿಸಿ ನೋಡಬೇಕಾದುದೇ. ವೇಣುನಾದವನ್ನು ರಸಿಸುತ್ತಿರುವ ಕೃಷ್ಣನು ಹೇಗೆ ತೋರುವನು? - ಎಂಬುದನ್ನು ಲೀಲಾಶುಕನು ಈ ಶ್ಲೋಕದಲ್ಲಿ ಚಿತ್ರಿಸಿದ್ದಾನೆ. ಆಗ ಕೃಷ್ಣನ ಕಣ್ಣುಗಳೆಂತಿರುವುವು, ತುಟಿಯೆಂತಿರುವುದು, ಕೈ ಬೆರಳುಗಳು ಹೇಗಿರುವುವು - ಎಂಬುದನ್ನೆಲ್ಲಾ ಇಲ್ಲಿ ಚಿತ್ರಿಸಿದ್ದಾನೆ.

ಉತ್ಪಲದಂತಿವೆ ಕೃಷ್ಣನ ಕಣ್ಣುಗಳು. ಉತ್ಪಲವೆಂದರೆ ಕನ್ನೈದಿಲೆ. ಲೋಚನೋತ್ಪಲವೆಂದರೆ ಉತ್ಪಲದ ಹಾಗಿರುವ ನಯನ. ಅದು ಸಾಚಿ-ಸಂಚಲಿತವಾಗಿದೆ. ಸಾಚಿಯೆಂದರೆ ಅಡ್ಡಡ್ಡಲಾಗಿ. ಹಾಗೆ ಕೃಷ್ಣನು ತನ್ನ ಬಳಿ ಸಾರಿರುವ, ಸುತ್ತಲೂ ನೆರೆದಿರುವ ಜೀವಿಗಳತ್ತ ಆಗಾಗ್ಗೆ ತನ್ನ ಕರುಣಾಮಯವಾದ ನೋಟವನ್ನು ಬೀರುತ್ತಿದ್ದಾನೆ.

ಎರಡನೆಯದು ಆತನ ತುಟಿ. ಅದೋ ಅತ್ಯಂತ ಕೋಮಲವಾದುದು. ಮತ್ತು ಕೊಳಲನ್ನು ನುಡಿಸುವಾಗ ಬೇರೆ ಬೇರೆ ಸ್ವರಗಳು ಬರಲೆಂದೋ, ಗಮಕಗಳು ಬರಲೆಂದೋ ಇನ್ನೂ ಬೇರೆ ಬೇರೆ ಪರಿಣಾಮಗಳಿಗೂ ತುಟಿಯ ಆಕಾರವನ್ನು ಬದಲಿಸುತ್ತಿರುವುದುಂಟು.

ಯಾವುದೋ ಒಂದು ವಿಶಿಷ್ಟವಾದ ನಾದವು ಬರುವ ಅದನ್ನು ಸಾಮಿ-ಕುಟ್ಮಲಿತವನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ. ಏನು ಹಾಗೆಂದರೆ? ಕುಟ್ಮಲ ಅಥವಾ ಕುಡ್ಮಲಕ್ಕೆ ಮೊಗ್ಗು ಎಂದರ್ಥ. ಮೊಗ್ಗಿನಾಕಾರವಾಗಿ ಮಾಡಿಕೊಂಡಿರುವುದು ಕುಟ್ಮಲಿತ. ಮೊಗ್ಗೆಂದರೆ ಪೂರ್ತಿ ಅರಳಿಲ್ಲದಿರುವುದು, ಪೂರ್ಣ-ವಿಕಾಸವನ್ನು ಹೊಂದಿಲ್ಲದಿರುವುದು. ಹಾಗೆಂದು ಸಂಪೂರ್ಣವಾಗಿ ಸಂಕೋಚಮಾಡಿಕೊಂಡಂತೆಯೂ ಇಲ್ಲ, ಕೃಷ್ಣನ ತುಟಿ. ಅದು ಸಾಮಿ ಮಾತ್ರ. ಸಾಮಿಯೆಂದರೆ ಅರ್ಧ. ಅಲ್ಲಿಗೆ ಪೂರ್ತಿ ಮೊಗ್ಗೂ ಅಲ್ಲದ ಪೂರ್ಣವಿಕಸಿತವೂ ಅಲ್ಲದ ಬಗೆಯಲ್ಲಿ, ತುಟಿಯನ್ನು ಎಂದರೆ ಮುಖ್ಯವಾಗಿ ಕೆಳದುಟಿಯನ್ನು, ಸ್ವಲ್ಪ ಕಿರಿದಾಗಿಸಿ ನುಡಿಸುತ್ತಿರುವಂತಹ ಸ್ಥಿತಿಯದು.

ಕೃಷ್ಣನ ತುಟಿಯಲ್ಲಿಯ ಕೋಮಲತೆಯೊಂದಿಗೆ ಅಧರ-ಮಣಿಯೆಂದು ಕವಿಯು ಆಗಾಗ್ಗೆ ಹೇಳುವಂತೆ ಕೆಂಪುಬಣ್ಣವೂ ಸೇರಿ, ತುಟಿಯ ವಿಶಿಷ್ಟ-ಸ್ಥಿತಿಯೂ ಗಮನಸೆಳೆಯುವಂತಹುದೇ ಶ್ರೀಕೃಷ್ಣನ ವೇಣುನಾದಾಸ್ವಾದನದ ಸಮಯದ ವದನ.

ವೇಣು-ವಾದನವನ್ನು ಮಾಡುವಾಗ ಕಂಡೇ ಕಾಣುವುದು ಮತ್ತೊಂದು: ಆತನ ಕೈಬೆರಳುಗಳ ಚಲನಗಳು. ಬೆರಳುಗಳನ್ನು ಮೇಲೆತ್ತುವುದು ಕೆಳಗಿಳಿಸುವುದು - ಇವನ್ನು ಮಾಡುತ್ತಲೇ ಇರುವುದಾಗುತ್ತದೆ. ಜೊತೆಗೆ ಅಲ್ಲೂ, ವೇಣುವಿನ ರಂಧ್ರವೊಂದನ್ನು ಪೂರ್ತಿ ಮುಚ್ಚುವುದು, ಸ್ವಲ್ಪ ತೆಗೆಯುವುದು - ಮುಂತಾದುವೂ ಅವಶ್ಯವಾಗುತ್ತಲೇ ಇರುತ್ತವೆ. ಕೆಲವೊಮ್ಮೆ ಅದನ್ನು ಬೇಗೆಬೇಗನೆ ಮಾಡುವ ಸನ್ನಿವೇಶವೂ ಇರುವುದುಂಟು. ವೇಗ-ವಲ್ಗಿತವೆಂದರೆ ಬೇಗಬೇಗನೆ ಮೇಲೆದ್ದು ಕೆಳಗಿಳಿಯುವುದು; ಬೆರಳುಗಳನ್ನು ವೇಗದಿಂದ ರಂಧ್ರಗಳ ಮೇಲೆ ಮೇಲೂ ಕೆಳಗೂ ಆಡಿಸುವುದು. ವಾಸ್ತವವಾಗಿ ಅಲ್ಲಿ ಹಾಗೆ ಓಡಾಡಿಸಬೇಕಾದುದು ಇಡೀ ಬೆರಳನ್ನೂ ಅಲ್ಲ. ಅಂಗುಲಿಗಳ ಮುಖವನ್ನು, ಎಂದರೆ ಬೆರಳುಗಳ ತುದಿಯನ್ನು. ಅವನ್ನು ಕೃಷ್ಣನು ಹಾಗೆಯೇ ಆಡಿಸುತ್ತಿದ್ದಾನೆ.

ಅಂತೂ ಕವಿಯು ತಾನು ಸಾಕ್ಷಾತ್ತಾಗಿ ಕಂಡಂತೆ ವರ್ಣಿಸಿದ್ದಾನೆ. ಕಣ್ಣು-ತುಟಿ-ಬೆರಳತುದಿ - ಇವುಗಳಲ್ಲಿಯ ಭಂಗೀ-ವಿಶೇಷಗಳು ಯಾವುದೇ ವೇಣುನಾದ-ರಸಿಕನಲ್ಲಿ ಗಮನಿಸಬೇಕಾದ ಅಂಶಗಳು.

ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುವ ಭಕ್ತ-ಕವಿಯೇ ಲೀಲಾಶುಕ.

ಶ್ಲೋಕ ಹೀಗಿದೆ:

ಸಾಚಿ-ಸಂಚಲಿತ-ಲೋಚನೋತ್ಪಲಂ /
ಸಾಮಿ-ಕುಟ್ಮಲಿತ-ಕೋಮಲಾಧರಂ |
ವೇಗ-ವಲ್ಗಿತ-ಕರಾಂಗುಲೀ-ಮುಖಂ /
ವೇಣು-ನಾದ-ರಸಿಕಂ ಭಜಾಮಹೇ ||

ಸೂಚನೆ : 14/2/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Saturday, February 14, 2026

ಮಹಾ ನಟೇಶನಿಗೆ ನಮೋನಮಃ

ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)





ಶಿವ-ನಟರಾಜ
ಶಿವನಿಗೂ ನಾಟ್ಯಕ್ಕೂ ಅವಿನಾಭಾವ ಸಂಬಂಧವಿದೆ. ಶಿವ ಸಹಸ್ರನಾಮದಲ್ಲಿ ಅವನನ್ನು ನಾಟ್ಯಪ್ರಿಯ,ನಿತ್ಯನರ್ತಕ, ನರ್ತಕ, ಮಹಾನಟನಮೂರ್ತಿಎಂದೆಲ್ಲಾ ಸ್ತುತಿಸಲಾಗಿದೆ. ಹಾಗೆಯೇ ನಾಟ್ಯದ ಭಾಗವೇ ಆದ ಸಂಗೀತದ ಸಂಬಂಧವೂ ಶಿವನಿಗೆ ಹೇಳಿದೆ. ಅವನನ್ನು ಮಹಾಗೀತ,ವೇಣವೀ, ತುಂಬವೀಣಾವಾದನ ತತ್ತ್ವಜ್ಞನೆಂದೂ ವರ್ಣಿಸಿದ್ದಾರೆ. ನಮ್ಮ ಸಂಸ್ಕೃತಿಯಲ್ಲಿ ಶಿಲ್ಪಗಳಲ್ಲಿ, ಚಿತ್ರಗಳಲ್ಲಿ, ನಾಟ್ಯಶಾಲೆಗಳಲ್ಲಿ, ದೇವಾಲಯಗಳಲ್ಲಿ ನಟರಾಜನ ನಾಟ್ಯಭಂಗಿಯನ್ನು ಕಾಣಬಹುದಾಗಿದೆ. ಶ್ರೀರಂಗ ಮಹಾಗುರುಗಳನ್ನೊಮ್ಮೆ ಯಾರೋ ಪ್ರಶ್ನಿಸಿದರಂತೆ- ನಟರಾಜನ ನಾಟ್ಯ , ನಾಟ್ಯ ರಸಿಕರಿಗೆ ಮನೋರಂಜಕವಾಗಬಹುದು ಸಾಮಾನ್ಯರಿಗೆ ಅದು ಹೇಗೆ ಸಂಬಂಧಿಸಿದೆ? ಎಂಬುದಾಗಿ. ಶ್ರೀರಂಗ ಮಹಾಗುರುಗಳು ಅವರ ಹೃದಯಭಾಗವನ್ನೊಮ್ಮೆ ಮುಟ್ಟಿಕೊಳ್ಳಲು ಹೇಳಿ, ಅಲ್ಲೇನು ಅನುಭವವಾಗುತ್ತಿದೆ ಎಂದು ಕೇಳಿದರಂತೆ. ಲಬ್-ಡಬ್ ಎಂಬ ಹೃದಯಬಡಿತದ ಶಬ್ದ ಅನುಭವಕ್ಕೆ ಬರುತ್ತಿದೆ ಎಂದು ಅವರು ಹೇಳಿದರು. ಆಗ ಮಹಾಗುರುಗಳು ಹೇಳಿದ ಮಾತು ಅವಿಸ್ಮರಣೀಯ- ಹಾಗೆ ಶಿವ-ಶಿವೆಯರು ನಿಮ್ಮ ಹೃದಯದಲ್ಲಿ ನರ್ತನ ಮಾಡುತ್ತಿರುವುದರಿಂದಲೇ ನಿಮ್ಮ ಅಸ್ತಿತ್ವ ಇರುವುದಪ್ಪಾ, ಅವರು ನಿಮ್ಮ ಹೃದಯದಲ್ಲಿ ತಮ್ಮ ನರ್ತನವನ್ನು ನಿಲ್ಲಿಸಿದರೆ ನಿಮ್ಮ ಬದುಕೂ ನಿಲ್ಲುತ್ತದೆ. ಅದೇ ಸಂಬಂಧ ನಟರಾಜನ ನೃತ್ಯಕ್ಕೂ, ನಿಮಗೂ,ಸಮಸ್ತ ಜೀವಲೋಕಕ್ಕೂ ಇರುವುದು. ಈ ಮಾತಿನಿಂದ ನಾವೆಲ್ಲರೂ ಬದುಕಿರುವುದು ಅವನ ಭಿಕ್ಷೆಯಿಂದಲೇ ಎಂಬುದು ಸ್ಪಷ್ಟವಾಗುತ್ತದೆ.

ಜೀವಲೋಕವೆಲ್ಲವೂ ನಾಟ್ಯಮಯ
ಒಂದು ದೃಷ್ಟಿಯಿಂದ ನೋಡಿದರೆ ಲೋಕದ ಎಲ್ಲ ನಡೆಯೂ, ಭಾವವೂ ನಾಟ್ಯದ ಭಾವಗಳೇ. ನಮಗೆ ಸಂತೋಷವಾದಾಗ ಅದು ಮುಖ ಮೈಗಳಲ್ಲಿ ಪ್ರಕಟವಾಗುತ್ತದೆ, ಹೀಗೆಯೇ ದುಃಖ, ದೈನ್ಯ, ಕಾರುಣ್ಯ, ಹಾಸ್ಯ, ಭಯ ಇತ್ಯಾದಿ ಎಲ್ಲಾ ಭಾವಗಳೂ ನಮ್ಮ ಮೇಲೆ ತಮ್ಮ ಅಚ್ಚೊತ್ತುತ್ತದೆ. ಇವೆಲ್ಲವುಗಳನ್ನೂ, ಇವಕ್ಕೆ ಮೀರಿದ ಅಲೌಕಿಕ ಅನುಭವಗಳನ್ನೂ ಸಕ್ರಮವಾಗಿ ಹೆಣೆದು ಪ್ರದರ್ಶಿಸಿದರೆ ಅದೊಂದು ಕಲೆಯಾಗುತ್ತದೆ. ಸೃಷ್ಟಿಯ ಈ ಎಲ್ಲಾ ಭಾವ ವೈವಿದ್ಯದ ಹಿಂದೆ ಕಲಾನಾಥನಾದ, ಸೃಷ್ಟೀಶನಾದ ಪರಮೇಶ್ವರನ ಆಶಯವಿದೆ. ಅವನ ಚೈತನ್ಯ ಕೆಲಸ ಮಾಡದಿದ್ದರೆ ಎಲ್ಲವೂ ಜಡ. ನಾವು, ನಮ್ಮನ್ನು ಹೊತ್ತ ಈ ಸೃಷ್ಟಿಯೆಲ್ಲವೂ ಜೀವಂತವಾಗಿ ಮೆರೆಯಬೇಕಾದರೆ ಅದರ ಹಿಂದೆ ಆ ನಟೇಶನ ನಿತ್ಯನರ್ತನವಿದೆ ಎಂಬುದು ಈ ದೇಶದ ಮಹರ್ಷಿಗಳ ದರ್ಶನ.
.
ಮಹಾದೇವನ ವಿಶ್ವನಾಟ್ಯ
ನಂದಿಕೇಶ್ವರ ವಿರಚಿತ ಅಭಿನಯ ದರ್ಪಣ ಎಂಬ ಗ್ರಂಥವು ಪರಶಿವನ ನಾಟ್ಯದ ವ್ಯಾಪ್ತಿಯನ್ನು ಹೀಗೆ ಚಿತ್ರಿಸುತ್ತದೆ-
ಆಂಗಿಕಂ ಭುವನಂ ಯಸ್ಯ ವಾಚಿಕಂ ಸರ್ವ ವಾಙ್ಮಯಮ್
ಆಹಾರ್ಯಂ ಚಂದ್ರತಾರಾದಿ ತಂ ನುಮಃ ಸಾತ್ವಿಕಂ ಶಿವಮ್||
ಒಂದು ನಾಟ್ಯದಲ್ಲಿ ನಾಲ್ಕು ಬಗೆಯ ಅಭಿನಯವಿರುತ್ತದೆ- ಆಂಗಿಕ-ಎಂದರೆ ದೇಹದ ಅಂಗಾಂಗಗಳ ಹಾವ, ಚಲನೆ. ವಾಚಿಕ- ಮಾತು, ಸಂಗೀತ ಇತ್ಯಾದಿ ಅಭಿನಯ, ಆಹಾರ್ಯ-ನಟನು ತೊಡುವ ವೇಷಭೂಷಗಳೇ ಮೊದಲಾದ ಅಲಂಕಾರಗಳು. ಸಾತ್ವಿಕ- ಯಾವ ರಸವನ್ನು ಅಭಿವ್ಯಕ್ತಗೊಳಿಸಲು ಈ ಎಲ್ಲಾ ಅಭಿನಯಗಳು ಹೊರಟಿವೆಯೋ ಆ ಪ್ರಧಾನವಾದ ರಸಭಾಗವೇ ಸಾತ್ವಿಕ ಎಂದಿರುವುದು. ಮೇಲಿನ ಶ್ಲೋಕದ ಅಭಿಪ್ರಾಯದಂತೆ- ಇಡೀ ಬ್ರಹ್ಮಾಂಡವೇ ಶಿವನ ಆಂಗಿಕ ಅಭಿನಯವಂತೆ. ಇಡೀ ವಿಶ್ವದ ಎಲ್ಲಾ ಕ್ರಿಯಾಕಲಾಪಗಳೂ ಅವನ ಆಂಗಿಕ ಅಭಿನಯದ ವ್ಯಾಪ್ತಿ. ಶಬ್ದಪ್ರಪಂಚವೆಲ್ಲವೂ ಅವನ ವಾಚಿಕ ಅಭಿನಯವಂತೆ. ಚಂದ್ರ- ನಕ್ಷತ್ರಗಳೆಲ್ಲವೂ ಅವನ ವಿಶ್ವನಾಟ್ಯದ ಅಲಂಕಾರವಂತೆ. ಅಂತಹ ರಸಸ್ವರೂಪಿಯಾದ ಪರಶಿವನಿಗೆ ನಮಸ್ಕಾರ ಎಂದಿದ್ದಾರೆ. ಅಂದರೆ ಅವನ ಆಶಯವೇ ಹೊರಪಡಬೇಕಾದ ಪ್ರಧಾನ ರಸ.

ಪಂಚಭೂತ ಪ್ರಭವೇ ನಮಃ
ಪಂಚಭೂತಗಳಿಂದ ಈ ಸೃಷ್ಟಿಯಾದುದು ಎಂಬುದು ನಮಗೆಲ್ಲರಿಗೂ ಗೊತ್ತಿರುವ ವಿಷಯ. ಇದು ಮೇಲ್ನೋಟದ ವಿಷಯ.ಈ ಪಂಚಭೂತ ತತ್ತ್ವಗಳು ವಾಸ್ತವವಾಗಿ ಜಡವೇ. ಜೀವನದ ಮೂಲದಲ್ಲಿ ಬೆಳಗುತ್ತಿರುವ ದೇವ ದೇವನಿಂದಲೇ ಇವು ಚೈತನ್ಯವನ್ನು ಪಡೆದು ಕ್ರಿಯಾಶೀಲಗೊಳ್ಳುತ್ತವೆ. ಆ ಪಂಚ ಭೂತಗಳ ಹಿಂಬದಿಯ ಚೈತನ್ಯವೇ ನಟರಾಜ. ಅವನು ಪಂಚಭೂತಗಳ ಪ್ರಭುವಾಗಿ ಅವುಗಳಲ್ಲಿ ಅನುಪ್ರವೇಶ ಮಾಡಿದಾಗಲೇ ವಿಶ್ವವೆಲ್ಲವೂ ಚೈತನ್ಯಮಯ. ಅವನು ಅರ್ಧನಾರೀಶ್ವರನಾಗಿ ತನ್ನ ದೇಹದ ಎಡಪಾರ್ಶ್ವದಲ್ಲಿ ಪಾರ್ವತಿಯನ್ನು ಧರಿಸಿ ಅವಳಲ್ಲಿ ಒಂದಾಗಿ ಜಗತ್ತಿನ ಸೃಷ್ಟಿಯನ್ನೂ, ತನ್ನಲ್ಲಿ ಅವಳನ್ನೂ ಒಂದಾಗಿಸಿ ಜಗತ್ತಿನ ಲಯವನ್ನೂ ಮಾಡುತ್ತಿರುವ ದೇವನಾಗಿ ನಮ್ಮೆಲ್ಲರಲ್ಲೂ ಬೆಳಗುತ್ತಿರುವ ನಿತ್ಯಶಾಶ್ವತನಾದ ಪರಮಾತ್ಮಜ್ಯೋತಿಯೇ ಪರಮಶಿವ ನಟರಾಜಸ್ವಾಮಿ.

ಚಿದಂಬರ ನಟರಾಜ
ನಮ್ಮ ಶರೀರದಲ್ಲಿ ಹೃದಯಮಧ್ಯ ಸ್ಥಾನವನ್ನು ಚಿದಂಬರ ಎಂದು ಜ್ಞಾನಿಗಳು ಗುರುತಿಸಿದ್ದಾರೆ- ಚಿದಂಬರಂತು ಹೃನ್ಮಧ್ಯಂ ಎಂಬುದಾಗಿ. ಆ ಪ್ರದೇಶದಲ್ಲಿ ಪರಶಿವನು ನಟರಾಜನಾಗಿ ಶುದ್ಧಜ್ಞಾನಮಯವಾದ ಬೆಳಕಿನ ರೂಪವನ್ನು ತಳೆದು ನವ ವಿಧವಾದ ತಾಂಡವ ನೃತ್ಯವನ್ನು ಮಾಡುತ್ತಾ ಮಧ್ಯನಾಡಿಯಲ್ಲಿ ಪ್ರಕಾಶಮಯನಾಗಿ ಬೆಳಗುತ್ತಾನೆ ಎಂದು ಅವನನ್ನು ನಿತ್ಯದಲ್ಲೂ ದರ್ಶನ ಮಾಡುತ್ತಿರುವ ಯೋಗಿಗಳು ಸಾರುತ್ತಾರೆ. ಅಲ್ಲಿ ಪಂಚ ಸಭೆಯಲ್ಲಿ ಅವನ ನರ್ತನವು ನಡೆಯುತ್ತದೆ ಎಂದೂ ಆ ಪಂಚ ಸಭೆಯನ್ನು- ಚಿತ್ಸಭಾ, ದೇವಸಭಾ,ನಾಟ್ಯಸಭಾ, ಕನಕ ಸಭಾ ಮತ್ತು ರಾಜಸಭಾ ಎಂದು ಗುರುತಿಸಿದ್ದಾರೆ. ಅವನ ನವ ತಾಂಡವಗಳು ಕ್ರಮವಾಗಿ ಹೀಗಿವೆಯಂತೆ- ಆನಂದ ತಾಂಡವ, ಕಾಲೀ ನೃತ್ತ, ಗೌರೀ ತಾಂಡವ, ಮುನಿ ನೃತ್ತ, ಸಂಧ್ಯಾತಾಂಡವ, ಸಂಹಾರತಾಂಡವ,ತ್ರಿಪುರ ತಾಂಡವ, ಭುಜಂಗಲಲಿತ ತಾಂಡವ, ಭಿಕ್ಷಾಟನ ತಾಂಡವ. ಈ ಎಲ್ಲಾ ತಾಂಡವಗಳೂ ಭಕ್ತ ಜೀವಿಗಳ ಅನುಗ್ರಹಕ್ಕಾಗಿಯೇ ಸ್ವಾಮಿಯು ನಿತ್ಯನಿರಂತರವಾಗಿ ಮಾಡುತ್ತಿರುವನು. ಜೈಮಿನಿಯೇ ಮುಂತಾದ ಮಹರ್ಷಿಗಳು ತಮ್ಮ ಅಂತರಂಗದಲ್ಲಿ ಶಂಭುವಿನ ಆ ನವ ತಾಂಡವಗಳನ್ನೂ ನೋಡುತ್ತಾ ತಮ್ಮ ಅಸ್ತಿತ್ವವನ್ನೇ ಮರೆತು ಕೇವಲ ಆನಂದರಸದಲ್ಲಿ ತನ್ಮಯರಾದರು ಎಂದು ಜ್ಞಾನಿಗಳು ಆ ತಾಂಡವಗಳನ್ನು ಕೊಂಡಾಡುತ್ತಾರೆ.

ಸ್ವರೂಪಜ್ಞಾನ ಮೂಡಿಸುವ ಮೂರ್ತಿ
ಪ್ರಸಿದ್ಧವಾದ ನಟರಾಜ ಮೂರ್ತಿಯಲ್ಲಿ ನಾವು ಕಾಣುವ ಚಿತ್ರ ಹೀಗಿದೆ- ತನ್ನ ಸ್ವ ಸ್ವರೂಪವನ್ನು ಮರೆತು ಅಸುರನಾಗಿರುವ ಆಪಸ್ಮಾರನನ್ನು ತನ್ನ ಬಲಪಾದದಿಂದ ಮೆಟ್ಟಿದ್ದಾನೆ. ಮೆಟ್ಟಿರುವುದು ಮೂಲಾಧಾರ ಚಕ್ರದಿಂದ ಕಂಠಪರ್ಯಂತವಾದ ಪ್ರಕೃತಿಯ ಸ್ಥಾನವನ್ನು. ಮರೆವಿನ ಜಾಗವನ್ನು. ಆ ಜಾಗವನ್ನು ಮೆಟ್ಟಿದಾಗ ಆ ಅಸುರನಿಗೆ ತನ್ನ ಸ್ವರೂಪದ ಸ್ಮರಣೆ ಉಂಟಾಗಿ ಸಂತೋಷದಿಂದ ನಟರಾಜನನ್ನೇ ನೋಡುತ್ತಿದ್ದಾನೆ. ಈ ಚಿತ್ರವನ್ನು ನಟರಾಜಸ್ವಾಮಿಯ ಆನಂದ ತಾಂಡವದ ಚಿತ್ರಗಳಲ್ಲಿ ನಾವು ನೋಡಿ ಆನಂದಿಸಬಹುದು. ಒಂದು ದೃಷ್ಟಿಯಿಂದ ನಾವೆಲ್ಲರೂ ಅವನನ್ನು ಮರೆತ ಆಪಸ್ಮಾರರೇ. ಅವನ ಪಾವನಪಾದವು ನಮ್ಮಮೇಲೂ ಸೊಂಕಲಿ, ನಮ್ಮ ವಿಸ್ಮರಣೆಯೂ ನೀಗಿ ನಮ್ಮೆಲ್ಲರಲ್ಲೂ ಬೆಳಗುತ್ತಿರುವ ಆ ಸ್ವಾಮಿಯ ಸ್ಮರಣೆ ಉಂಟಾಗುವಂತೆ ಆಗಲಿ ಎಂದು ಈ ಮಹಾಶಿವರಾತ್ರಿಯ ಮಂಗಳ ಪರ್ವದಂದು ಅವನನ್ನು ಪ್ರಾರ್ಥಿಸೋಣ.

ಸೂಚನೆ : 14/2/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಶಿವರಾತ್ರಿಯಂದು ಜಾಗರಣೆಯೇಕೆ?

ಲೇಖಕರು : ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)



ಒಂದೇ ಪರತತ್ತ್ವವು ಮೂರಾಗಿ ತನ್ನನ್ನು ವಿಭಜಿಸಿಕೊಂಡು ಬ್ರಹ್ಮ-ವಿಷ್ಣು-ಮಹೇಶ್ವರರಾಯಿತು. ಈ ತ್ರಿಮೂರ್ತಿಗಳಲ್ಲಿ ಒಂದೊಂದು ಸಂದರ್ಭದಲ್ಲಿ ಒಬ್ಬೊಬ್ಬರಿಗೆ ಪ್ರಾಧಾನ್ಯ ಬರುವ ವಿಷಯವನ್ನು ಕಾಳಿದಾಸನು ತನ್ನ "ಕುಮಾರಸಂಭವ" ಮಹಾಕಾವ್ಯದಲ್ಲಿ ಹೇಳಿರುವನು. ಬ್ರಹ್ಮ-ವಿಷ್ಣುಗಳು ಶಿವನನ್ನು ಅರುಣಾಚಲದಲ್ಲಿ ಪೂಜಿಸಿದ ದಿನವೇ ಈ ಮಹಾಶಿವರಾತ್ರಿ. ಇಂದಿನ ರಾತ್ರಿ ಜಾಗರಣೆ ಮಾಡಿ ಶಿವನನ್ನು ಹೃತ್ಪೂರ್ವಕವಾಗಿ ಪೂಜಿಸುವವರಿಗೆ ಇಡೀ ವರ್ಷ ಶಿವಪೂಜೆ ಮಾಡಿದ ಫಲವು ದೊರೆಯುವುದೆಂದು ಮಹಾಶಿವನೇ ವರ ಕೊಟ್ಟಿದ್ದಾನೆಂದಿದೆ.

ಭಾರತೀಯರ ಮಹಾಪರ್ವಗಳಲ್ಲಿ ಒಂದಾದ ಮಹಾಶಿವರಾತ್ರಿಯನ್ನು ಮಾಘ ಕೃಷ್ಣಚತುರ್ದಶಿಯಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ, ದೇವತಾಸಂಬಂಧಿಯಾದ ಪೂಜಾದಿಗಳು ರಾತ್ರಿಯ ಹೊತ್ತು ನಿಷಿದ್ಧವಾಗಿದ್ದರೂ, ಶಿವರಾತ್ರಿ ಮಾತ್ರ ರಾತ್ರಿಯೇ ಆಚರಿಸಲ್ಪಡುವಂತಹುದು - ಎಂಬುದು ವಿಶೇಷ.

ಬೇರೆ ಬೇರೆ ವಿಶೇಷ ಹಬ್ಬಗಳಲ್ಲಿ ಆಯಾ ದೇವತೆಗಳಿಗೆ ಪ್ರಿಯವಾದ ತಿಂಡಿ ತಿನಿಸುಗಳನ್ನು ನೈವೇದ್ಯ ಮಾಡಿ ನಾವುಗಳು ಅವನ್ನು ಸ್ವೀಕರಿಸುವುದಾಗುತ್ತದೆ. ಆದರೆ ಶಿವರಾತ್ರಿಯಾದರೋ - ಏಕಾದಶಿಯಂತೆ - ಉಪವಾಸದ ಹಬ್ಬ. ಉಪವಾಸ-ಜಾಗರಣೆ – ಈ ಎರಡು ಶಿವರಾತ್ರಿಯನ್ನು ಶಿವಮಯವಾಗಿಸುವ ಸಾಧನಗಳು.

ಹಬ್ಬವೋ ವ್ರತವೋ? 

"ಶಾಸ್ತ್ರೋದಿತೋ ಹಿ ನಿಯಮೋ ವ್ರತಂ ತಚ್ಚ ತಪೋ ಮತಮ್" – ಎಂಬುದು ವ್ರತದ ಶಾಸ್ತ್ರೀಯವಾದ ಲಕ್ಷಣ. ವ್ರತವೆಂಬುದು ನಿಯಮಬದ್ಧವಾಗಿಯೂ ತಪೋರೂಪವಾಗಿಯೂ ಆಗಿದ್ದು, ನಮ್ಮನ್ನು ಪಾವನಗೊಳಿಸುತ್ತವೆ. ಹಬ್ಬಗಳಿಗೂ ನಿಯಮಗಳು ಅನ್ವಯವಾಗುತ್ತವಾದರೂ, ವ್ರತದಲ್ಲಿ ಉಪವಾಸ, ಕ್ರಿಯಾಕಲಾಪಗಳು, ನಿಯಮಗಳು ಹೆಚ್ಚಾಗಿರುತ್ತವೆ. ಶಿವರಾತ್ರಿಯಲ್ಲಿ ಉಪವಾಸ-ಜಾಗರಣೆ-ಪೂಜಾಧ್ಯಾನಾದಿಗಳು ಬಹು ಮುಖ್ಯವಾದ್ದರಿಂದ, ಇದೊಂದು ವ್ರತವೇ ಸರಿ. "ವ್ರತರಾಜ" ಎಂದೂ ಇದಕ್ಕೆ ಹೆಸರು.

ಶಿವರಾತ್ರಿಯ ಮಾಹಾತ್ಮ್ಯವನ್ನು ಹೇಳುವ ಪ್ರಸಿದ್ಧಕಥೆಯೆಂದರೆ ಬೇಡರ ಕಣ್ಣಪ್ಪನದು. ಶಿವರಾತ್ರಿಯಂದು ತಿಳಿದೋ ತಿಳಿಯದೆಯೋ ಶಿವನಿಗೆ ಬಿಲ್ವಪತ್ರವನ್ನರ್ಪಿಸುವುದು, ಜಲಾಭಿಷೇಕ ಮಾಡುವುದು, ಜಾಗರಣೆ ಮಾಡುವುದು – ಇವೆಲ್ಲ ಆದಲ್ಲಿ ಅದಕ್ಕೆ ಮಹಾಫಲವುಂಟು, ಎಂದು ಈ ಸನ್ನಿವೇಶದಲ್ಲಿ ವರ್ಣಿಸಿದೆ. ಶಂಕರಭಗವತ್ಪಾದರ ಶಿವಾನಂದಲಹರಿಯಲ್ಲಿರುವ "ಮಾರ್ಗಾವರ್ತಿತ-ಪಾದುಕಾ" ಎಂಬ ಶ್ಲೋಕವು ಇದನ್ನು ಬಣ್ಣಿಸುತ್ತದೆ: ಹಾದಿಯಲ್ಲಿ ನಡೆದು ನಡೆದು ಸವೆದ ಪಾದುಕೆಯೇ ಶಿವನ ದೇಹದ ಕೂರ್ಚ(ಎಂದರೆ ಒರೆಸಲು ಬಳಸುವ ಒಂದು ಸಾಧನ)ವಾಯಿತು! ಬಾಯಿಮುಕ್ಕಳಿಸಿದ ನೀರು ಪಶುಪತಿಯ ಅಭಿಷೇಕಜಲವಾಯಿತು! ಕೊಂಚ ಜಗಿದ ಮಾಂಸದ ತುತ್ತೇ ನಿವೇದನವಾಗಿಹೋಯಿತು! ಭಕ್ತಿಯೆಂಬುದು ಬಲವಾಗಿದ್ದರೆ, ವನಚರನೂ ಭಕ್ತೋತ್ತಮನಾಗಿಬಿಡುವನು! – ಎಂಬುದು ಈ ಶ್ಲೋಕದ ತಾತ್ಪರ್ಯ.

ಇಂತಹ ಪರಮಭಾಗವತರ ಕಥೆಯನ್ನು ಕೇಳಿಕೊಂಡು, "ಶಾಸ್ತ್ರವಿಹಿತವಾದ ಆಚರಣೆಗಳನ್ನು ಮಾಡದಿದ್ದರೂ ಆಯಿತು" - ಎಂದು ನಾವು ಎಣಿಸಬಾರದು! ಭಕ್ತೋತ್ತಮರಲ್ಲಿ ಗೂಢವಾಗಿ ಕೂಡಿಟ್ಟಿರುವ ಗಾಢವಾದ ತಪೋಧನಕ್ಕೆ ಒಂದು ಸಣ್ಣ ಪ್ರೇರಣೆ ಸಾಕು, ಅವರನ್ನು ಆಧ್ಯಾತ್ಮಿಕ ಔನ್ನತ್ಯಕ್ಕೆ ಕರೆದೊಯ್ಯಲು! ಆದರೆ ನಮ್ಮಂತಹ ಸಾಧಾರಣರಿಗೆ ಕಟ್ಟುಕಟ್ಟಳೆಗಳೂ ಸಾಧನೆಯೂ ಅವಶ್ಯ.  


ಶಿವರಾತ್ರಿಯಂದು ನಾವು ಏನೇನು ಮಾಡಬೇಕು? 

ಎಷ್ಟೇ ಆಗಲಿ, ಶಿವನು ಯೋಗಿರಾಜ, ಧ್ಯಾನಪ್ರಿಯ. ಆದುದರಿಂದಲೇ ಅವನನ್ನು ಕುರಿತು ಧ್ಯಾನ ಮಾಡುವುದು ಪ್ರಶಸ್ತ. ಆತ್ಮಗುಣಗಳೊಂದಿಗೆ, ಎಲ್ಲ ವ್ರತಗಳಿಗೆ ಸಲ್ಲುವ ನಿಯಮಗಳನ್ನು ಪಾಲಿಸುತ್ತಾ ಮಾನಸಪೂಜೆಯನ್ನು ಮಾಡುವಂಥದ್ದು ಉತ್ತಮ. ಆ ಅಂತರಂಗಪೂಜೆಯ ಅಭಿವ್ಯಕ್ತಿಯೇ ಬಾಹ್ಯಪೂಜೆ. ಅದನ್ನು ಸಾಂಗವಾಗಿ ಮಾಡುವ ಪೂಜಾಕಲ್ಪದಲ್ಲಿ ಗೋಶೃಂಗದಿಂದ ಅಭಿಷೇಕಪ್ರಿಯನಾದ ಶಿವನಿಗೆ ಅಭಿಷೇಕಮಾಡಿ, ಬಿಲ್ವಪತ್ರೆ, ತುಂಬೇಹೂಗಳಿಂದ ಪೂಜಿಸುವುದರಿಂದ ಅವನನ್ನು ವಿಶೇಷವಾಗಿ ಸಂಪ್ರೀತಿಗೊಳಿಸಬಹುದು. "ಜಪಾಕುಸುಮ, ಎಂದರೆ ಕೆಂಪುದಾಸವಾಳ, ಕೂಡ ಅವನಿಗೆ ಅತ್ಯಂತ ಪ್ರಿಯವಾದದ್ದು" - ಎಂದು ಶ್ರೀರಂಗಮಹಾಗುರುಗಳು ಹೇಳಿದ್ದರು.

ಇನ್ನು ಇದನ್ನಾಚರಿಸಲು, ದೇಹ-ಮನಸ್ಸುಗಳು ಹೇಗಿರಬೇಕು? ಚೆನ್ನಾಗಿ ತಿಂದು, ಹೊಟ್ಟೆಭಾರವಾದರೆ ಧ್ಯಾನ-ಪೂಜೆಗಳು ಸಾಧ್ಯವಾಗುವುವಲ್ಲ. ಆ ಕಾರಣಕ್ಕೇ ಉಪವಾಸವನ್ನು ಉತ್ತಮಕಲ್ಪವಾಗಿ ವಿಧಿಸಿರುವುದು. ಪೂರ್ಣ ಉಪವಾಸ ಸಾಧ್ಯವಿಲ್ಲದಿದ್ದರೆ, ಒಪ್ಪೊತ್ತಾದರೂ ಉಪವಾಸ ಮಾಡುವುದು, ಅದೂ ಸಾಧ್ಯವಿಲ್ಲದಿದ್ದರೆ ಗುರುವಾದ, ಎಂದರೆ ಭಾರವೆನಿಸುವ, ಆಹಾರವನ್ನು (ಎಂದರೆ ಕರಿದ ಪದಾರ್ಥಗಳು ಇತ್ಯಾದಿ) ವರ್ಜ್ಯಮಾಡಿ, ಲಘುವಾದ ಆಹಾರವನ್ನು ಸೇವಿಸುವುದು ವಿಹಿತವಾಗಿದೆ.

ಇನ್ನು ಜಾಗರಣೆಯ ವಿಷಯ. "ಶಿವದರುಶನ ನಮಗಾಯಿತು, ಕೇಳೇ, ಶಿವರಾತ್ರಿಯ ಜಾಗರಣೆ" – ಎಂದು ದಾಸಶ್ರೇಷ್ಠರೂ ಭಾಗವತೋತ್ತಮರೂ ಆದ ಪುರಂದರದಾಸರು ಕೊಂಡಾಡಿದ್ದಾರೆ. ಈ ಪರ್ವದಲ್ಲಿ ಧ್ಯಾನಾದಿಗಳಿಗೆ ಅತ್ಯಂತ ಪ್ರಶಸ್ತವಾದ ಕಾಲವೆಂದರೆ ರಾತ್ರಿಯೇ. ಅಮೂಲ್ಯವಾದ ಈ ಕಾಲವು ನಿದ್ರೆಯಿಂದಾಗಿ ಪೋಲಾಗದಿರಲೆಂದೇ ಜಾಗರಣೆಯ ಸಾಧನವನ್ನು ವಿಧಿಸಿರುವುದು. ಭಗವಂತನ ಧ್ಯಾನ-ಆರಾಧನೆ-ಸ್ಮರಣೆ ಮಾಡಿಕೊಳ್ಳುವುದನ್ನೇ ಜಾಗರಣೆ ಎನ್ನುವುದು.

ದೈವಭಕ್ತಿಯನ್ನು ಈಗ ಕಂಡುಕೊಳ್ಳುತ್ತಿರುವ ಕೆಲವರು, "ಜಾಗರಣೆ ಮಾಡಿದರೆ ಪುಣ್ಯ" ಎನ್ನುವುದನ್ನು "ರಾತ್ರಿಯಿಡೀ ಎಚ್ಚರವಾಗಿದ್ದರೆ ಪುಣ್ಯ" ಎಂದು ತಿಳಿಯುವ ತಪ್ಪು ಮಾಡುವುದುಂಟು. ಕೋಸಂಬರಿ-ಪಾನಕ ಇತ್ಯಾದಿಗಳನ್ನೇ ಹೊಟ್ಟೆ ತುಂಬ ತಿಂದು, ಸಂಗೀತವನ್ನು ಜೋರಾಗಿ ಹಾಕಿಕೊಂಡಿದ್ದು, ಇಸ್ಪೀಟು, ಇತ್ಯಾದಿಗಳನ್ನು ಆಡುತ್ತಾ ರಾತ್ರಿಯಿಡೀ ಎದ್ದಿರುವರು: ಇದನ್ನು ಜಾಗರಣೆಯೆನ್ನಲಾಗದು. ರಾತ್ರಿಯಿಡೀ ಎದ್ದಿರಲು ಸಾಧ್ಯವಾಗದಿದ್ದರೂ, ರಾತ್ರಿಯ ಒಂದೆರಡು ಯಾಮಗಳಾದರೂ ಭಗವಂತನನ್ನು ಕೇಂದ್ರದಲ್ಲಿಟ್ಟು, ಪೂಜೆ-ಧ್ಯಾನಗಳನ್ನು ಮಾಡುವುದು, ಸ್ತ್ರೋತ್ರಗಳನ್ನು ಹೇಳಿಕೊಳ್ಳುವುದು – ಇಂಥದ್ದನ್ನು ಮಾಡುವುದು ಉತ್ತಮ.

"ಗಾಳಿ ಬಂದಾಗ ತೂರಿಕೋ" ಎಂಬ ಗಾದೆಯನ್ನು ನೀವು ಕೇಳಿರಬಹುದು. ಏನು ಹಾಗೆಂದರೆ? ಧಾನ್ಯಗಳನ್ನು ಕಟಾವು ಮಾಡಿ ಶುದ್ಧೀಕರಣ ಮಾಡುತ್ತಾರಷ್ಟೆ? ಹೊಟ್ಟು, ಕಸ-ಕಡ್ಡಿಗಳನ್ನು ಧಾನ್ಯದಿಂದ ಬೇರ್ಪಡಿಸಲು ಮೇಲಿನಿಂದ ಮೊರದಲ್ಲಿ ಅವನ್ನು ನಿಧಾನವಾಗಿ ಕೆಳಗೆ ತೂರುತ್ತಾರೆ. ಆಗ ಗಾಳಿಯೂ ಬೀಸಿದರೆ ಕಸ-ಕಡ್ಡಿ ಸುಲಭವಾಗಿ ಬೇರ್ಪಡುತ್ತದೆ. ಗಾಳಿ ಬೀಸುತ್ತಿದ್ದಾಗ ತೂರಿಕೊಂಡರೆ, ಕಡಿಮೆ ಪ್ರಯತ್ನದಿಂದಲೇ ಹೆಚ್ಚು ಫಲ ದೊರೆಯುತ್ತದೆ. ಇದೇ ರೀತಿ "ಧ್ಯಾನಕ್ಕೆ ಪೋಷಕವಾದ ಇಂತಹ ಸಂಧಿಕಾಲಗಳನ್ನು ಸರಿಯಾಗಿ ಬಳಸಿಕೊಂಡಲ್ಲಿ ನಮ್ಮ ಆಧ್ಯಾತ್ಮಿಕ ಪ್ರಗತಿಯು ಸುಲಭವಾಗಿಯೂ ಹೆಚ್ಚಾಗಿಯೂ ಆಗುತ್ತದೆ", ಎಂಬುದನ್ನು ಶ್ರೀರಂಗಮಹಾಗುರುಗಳು ಒತ್ತಿ ಹೇಳಿದ್ದರು.  

ಸಂಭ್ರಮದ ಉತ್ಸವ ಎನ್ನುವುದಕ್ಕಿಂತಲೂ, ಈ ಪರ್ವ ಆಂತರಂಗಿಕವಾದ ಉತ್-ಸವ ("ಮೇಲ್ಮುಖವಾದ ಯಜ್ಞ"): ಒಳಗೆ ಉನ್ನತವಾದ ಸ್ಥಿತಿಗೆ ಏರಿಸುವಂಥದ್ದು. ಇದನ್ನು ತಿಳಿದು ಆಚರಿಸಿದಾಗ, ಅಮೂಲ್ಯವಾದ ಈ ಕಾಲ ಅಮೋಘವಾಗುತ್ತದಲ್ಲವೇ?

ಸೂಚನೆ : 14/2/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Tuesday, February 10, 2026

ಪ್ರಶ್ನೋತ್ತರ ರತ್ನಮಾಲಿಕೆ 52 (Prasnottara Ratnamalike 52)


ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ - ೫೨ - ಮಿತ್ರನಾರು ?

ಉ. ಪಾಪವನ್ನು ನಿವಾರಿಸುವವ

ಈ ಪ್ರಶ್ನೋತ್ತರದಲ್ಲಿ 'ಪಾಪ ಎಂದರೇನು?' ಎಂಬ ವಿಷಯವನ್ನು ವಿಶೇಷವಾಗಿ ಚಿಂತಿಸಬೇಕಾದ ಅಗತ್ಯ ಇದೆ. ಆಗ ಅಂತಹ ಪಾಪವನ್ನು ನಿವಾರಿಸುವವನು ಹೇಗೆ ಮಿತ್ರನಾಗುತ್ತಾನೆ? ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ ಆ ಚಿಂತನೆಗೆ ಈ ಉತ್ತರ ಮೀಸಲಾಗಿದೆ.

ಪಾಪ- ಪುಣ್ಯ, ಸತ್ಯ- ಅಸತ್ಯ, ಋತ-ಅನೃತ ಹೀಗೆ ನಾವು ಈ ವಿರುದ್ಧ ಪದಗಳನ್ನು ಗಮನಿಸಿದ್ದೇವೆ. ಇಲ್ಲಿ ಒಂದು ಅನುಕೂಲಕರವಾದ ಸಂಗತಿಯನ್ನು ಹೇಳುವ ಪದವಾದರೆ, ಇನ್ನೊಂದು ಅದಕ್ಕೆ ವಿರೋಧವಾದ ಸಂಗತಿಯನ್ನು ಹೇಳುವ ಪದವಾಗಿದೆ. ಪುಣ್ಯ ಎಂದರೆ ಅನುಕೂಲಕರವಾದರೆ ಪಾಪ ಎಂಬುದು ಪ್ರತಿಕೂಲಸಂಗತಿ ಎಂದರ್ಥ. ನಾವಿಲ್ಲಿ ವಿಚಾರಿಸಬೇಕಾಗಿದ್ದು ಯಾವುದು ನಿಜವಾಗಿಯೂ ಪುಣ್ಯ? ಯಾವುದು ನಿಜವಾಗಿಯೂ ಪಾಪ? ಎಂದು. ಅದಕ್ಕೆ ಮೊದಲು, ಅದು ಹೇಗೆ ಪುಣ್ಯ? ಹೇಗೆ ಪಾಪ? ಎಂಬುದನ್ನೂ ತಿಳಿಯಬೇಕು. ಉದಾಹರಣೆಗೆ 'ಪುಣ್ಯ-ಅಪುಣ್ಯ-ವಿವರ್ಜಿತ-ಪಂಥಃ' ಎಂಬುದಾಗಿ ಶ್ರೀಶಂಕರ ಭಗವತ್ಪಾದರು ತಮ್ಮ ಮೋಹಮುದ್ಗರ ಸ್ತೋತ್ರದಲ್ಲಿ ಹೀಗೆ ಹೇಳುತ್ತಾರೆ. ಅಂದರೆ ನಮ್ಮ ನಡೆ ಪುಣ್ಯವಾಗಿಯೂ ಅಪುಣ್ಯವಾಗಿಯೂ ಇರಬಾರದು. ಸಾಮಾನ್ಯವಾಗಿ ಲೋಕದಲ್ಲಿ ಪುಣ್ಯಕ್ಕಾಗಿಯೇ ಎಲ್ಲಾ ಕಾರ್ಯವನ್ನು ಮಾಡುವುದನ್ನು ಕಾಣುತ್ತೇವೆ.  ಪುಣ್ಯ ಬೇಡವೇ? ಪಾಪು ಬೇಡ ಎಂಬ ಸಂಗತಿ ನಿಜ. ಆದರೆ ಪುಣ್ಯವೂ ಬೇಡ ಎಂಬ ಸಂಗತಿ ಅತ್ಯಂತ ವಿಸ್ಮಯ ಎಂಬುದಾಗಿ ತಿಳಿಯಬೇಕಾಗುತ್ತದೆ. ಯಾವುದಕ್ಕೂ ಅಂಟಿಕೊಳ್ಳದ ಜೀವನ ನಮ್ಮದಾಗಬೇಕು ಎಂಬುದನ್ನು ನಾವು ತಿಳಿಯಬೇಕಾಗಿದೆ. ಅಂದರೆ ನಮ್ಮ ಜೀವನದ ಉದ್ದೇಶ ಹೇಗಿದ್ದಾಗ? ಇವು ಹೇಯವಾಗುತ್ತವೆ ಎಂಬುದು.

'ಪಾತಿ ರಕ್ಷತಿ ಅಸ್ಮಾತ್ ಆತ್ಮಾನಮ್ ಇತಿ' ಆತ್ಮನನ್ನು ಯಾವುದರಿಂದ ರಕ್ಷಿಸಿಕೊಳ್ಳಬೇಕಾಗುತ್ತದೆಯೋ ಅದನ್ನು 'ಪಾಪ' ಎಂದು ಕರೆಯುತ್ತಾರೆ. ಅಂದರೆ ನಿಷಿದ್ಧವಾದುದನ್ನು ಮಾಡುವುದರಿಂದ, ವಿಹಿತವಾದುದನ್ನು ಬಿಡುವುದರಿಂದ ಮನುಷ್ಯನು ಯಾವುದರಿಂದ ಕ್ಲೇಶವನ್ನು ಅನುಭವಿಸುತ್ತಾನೋ ಅದನ್ನು ಪಾಪ ಎನ್ನುತ್ತಾರೆ. ಯಾವುದರಿಂದ ನರಕವು ನಿಶ್ಚಿತವೋ ಅದೇ ಪಾಪ ಎನ್ನಬಹುದು. ಮಾನವನ ಜೀವನವು ಮೋಕ್ಷಕ್ಕೆ ಇರುವಂತಹದ್ದು ಎಂಬುದು ಎಲ್ಲರಿಗೂ ತಿಳಿದ ವಿಷಯ. ಅದಕ್ಕೆ ಆತ್ಮೋನ್ನತಿ ಎಂದೂ ಕರೆಯುತ್ತಾರೆ. ಇಂತಹ ಆತ್ಮೋನ್ನತಿಯನ್ನು ಹಾಳುಗೆಡಹುವುದೇ ಪಾಪ. ಈ ಪಾಪದ ಬಗೆಗೆ ಶ್ರೀರಂಗ ಮಹಾಗುರುಗಳು ಹೇಳಿದ ಮಾತು ಹೀಗಿದೆ - "ಪ್ರತಿಯೊಂದು ಪದವೂ ಹುಟ್ಟುವಾಗ ಅರ್ಥದೊಡನೆ ಕೂಡಿತ್ತು. ಆದರೆ ಕೈದಾಟಿ ಬಂದಾಗ ಅದರ ಅರ್ಥ ಮರೆಯಾಯಿತು. ಅದರ ಮೂಲದೊಡನೆ ಉಳಿಯಲಿಲ್ಲ. ಸನ್ಮಾರ್ಗದಿಂದ ಜಾರಿತು. ಮಹರ್ಷಿಗಳು ಅಂತರಂಗದ ಮನೋಭೂಮಿಕೆಯಲ್ಲಿ ಕಂಡ ಋತ-ಸತ್ಯಕ್ಕೆ ಅವಿರೋಧವಾಗಿ ನಡೆಯುವ ಮಾರ್ಗವೇ ಸನ್ಮಾರ್ಗ. ಇದಕ್ಕೆ ಹೊಂದುವ ರೀತಿಯಲ್ಲಿ ನಡೆದರೆ ಅದೇ ಸತ್ಕೃತ. ಇದಕ್ಕೆ ವಿರೋಧವಾಗಿದ್ದರೆ ದುಷ್ಕೃತ. ಪಾಪಕ್ಕೆ ಪರ್ಯಾಯಪದಗಳೇ ಇವುಗಳು 'ಅಂಹೋ-ದುರಿತ-ದುಷ್ಕೃತಂ' ದುಷ್ಕೃತ ಎಂದರೆ ಮಾಡಬಾರದ್ದು, ಹೇಳಬಾರದ್ದು. ಹೇಳಬೇಕಾದ್ದನ್ನೇ ಹೇಳಲು ಹೊರಟು ಹೇಳಬೇಕಾದದ್ದು ಹಿಂದೆ ಉಳಿಯಿತು. ಹೇಳಬಾರದ್ದು ಹೊರಗೆ ಬಂದಿತು. ಒಳಗಿರುವ ರಾಗ ಬೇರೆ. ಹೊರಗೆ ಬರುವಾಗ ವಿರಾಗವಾಯಿತು. ಆತ್ಮದಲ್ಲಿದ್ದಂತೆ ವ್ಯವಹರಿಸಬೇಕು" ಎಂದು. ಇಂತಹ ಪಾಪವನ್ನು ಮಾಡದಂತೆ ಎಚ್ಚರಿಸುವವನೇ 'ಮಿತ್ರ' ಎಂದು ಕರೆಯಬೇಕು ಎಂಬುದು ಈ ಉತ್ತರದಲ್ಲಿದೆ.

ಸೂಚನೆ : 8/2/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.