Tuesday, February 3, 2026

ವ್ಯಾಸ ವೀಕ್ಷಿತ 173 ಗೃಹದೇವಿಯೇ ಆದ ಜರಾ ಎಂಬ ರಾಕ್ಷಸಿ! ( Vyaasa Vikshita 173)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಜರಾ ಎಂಬ ರಾಕ್ಷಸಿಯು ಅರ್ಧರ್ಧವಾಗಿ ಜನಿಸಿದ ಆ ಶಿಶುಗಳೆರಡರ ಮೈಗಳನ್ನು ಜೋಡಿಸಿದಳಷ್ಟೆ? ಆ ಮಗುವು ಹೇಗಿತ್ತು?

ಅದರ ಅಂಗೈ ತಾಮ್ರವರ್ಣವುಳ್ಳದ್ದಾಗಿತ್ತು. ಅದನ್ನು ಮುಷ್ಟಿ ಮಾಡಿಕೊಂಡು ಬಾಯಲ್ಲಿಟ್ಟುಕೊಂಡಿತು, ಅದು. ಅತಿರೋಷದಿಂದ ಗೋಳಾಡಿತು! ನೀರುಂಡ ಮೋಡದ ಗರ್ಜಿತದಂತಿತ್ತು ಅದರ ಧ್ವನಿ!

ಅದರ ಆ ಶಬ್ದಕ್ಕೆ ಗಾಬರಿಗೊಂಡರು, ಅಂತಃಪುರದ ಮಂದಿಯೆಲ್ಲಾ! ಹಾಗೂ ರಾಜನೊಂದಿಗೇ ಹೊರಬಂದರು. ಇನ್ನು ಆ ಇಬ್ಬರು ರಾಜಪತ್ನಿಯರೋ, ಬಾಡಿದ ಮುಖವುಳ್ಳವರಾಗಿದ್ದರು. ಆದರೂ ಅವರ ಮೊಲೆಗಳಲ್ಲಿ ಹಾಲು ತುಂಬಿಕೊಂಡಿತ್ತು. ಪುತ್ರಲಾಭವು ತಮಗಾಗದೆಂದು ಕಂಗೆಟ್ಟಿದ್ದ ಅವರು, ಈಗ ಥಟ್ಟನೆ ಹೊರಬಂದು ಆ ಶಿಶುವನ್ನು ಸಮೀಪಿಸಿದರು.

ಇನ್ನು ಆ ರಾಕ್ಷಸಿಯಂತೂ ಆ ರಾಣಿಯರಿಬ್ಬರೂ ಬಂದುದನ್ನು ಕಂಡಳು. ತನ್ನ ಸಂತಾನವನ್ನು ಅಷ್ಟೊಂದು ಇಷ್ಟಪಟ್ಟಿದ್ದ ರಾಜನನ್ನೂ ಕಂಡಳು. ಆ ಬಾಲನಂತೂ ಆಗ ಮಹಾಬಲಶಾಲಿಯಂತೆ ಕಂಡನು.

ಇಷ್ಟನ್ನೂ ಗಮನಿಸಿಕೊಂಡ ಆ ರಾಕ್ಷಸಿಯು ಮನಸ್ಸಿನಲ್ಲಿ ಹೀಗೆಂದು ಹೇಳಿಕೊಂಡಳು: ಧಾರ್ಮಿಕನೂ ಮಹಾತ್ಮನೂ ಆಗಿರುವ ರಾಜನಿವನು. ಈತನ ರಾಜ್ಯದಲ್ಲೇ ವಾಸವಿದ್ದುಕೊಂಡಿರುವ ನಾನು, ಈ ಮಗುವನ್ನು ಕೊಲ್ಲುವುದು ಸರಿಯಲ್ಲ.

ಹೀಗೆಂದುಕೊಂಡವಳೇ, ಆ ಬಾಲಕನನ್ನು ಎತ್ತಿಕೊಂಡಳು. ಮೇಘ-ಲೇಖೆಯು, ಎಂದರೆ ಮೋಡಗಳ ಸಾಲು, ಸೂರ್ಯನನ್ನು ಎತ್ತಿಕೊಳ್ಳುವ ಹಾಗಿತ್ತು, ಅದು. ಅವಳೂ ಮಾನುಷರೂಪವನ್ನು ಆಗ ತಳೆದಳು. ಮತ್ತು ರಾಜನಿಗಿಂತು ನುಡಿದಳು.

"ಬೃಹದ್ರಥನೇ, ನಿನಗೆ ನಾನಿತ್ತ ಮಗನಿವನು. ಇವನನ್ನು ಸ್ವೀಕರಿಸು. ನಿನ್ನ ಇಬ್ಬರು ಪತ್ನಿಯರಿಗೆ ಹುಟ್ಟಿದ ಮಗುವಿದು – ಆ ಬ್ರಾಹ್ಮಣನ ವರದ ಮೇರೆಗೆ. ಆದರೆ ದಾದಿಯಿಂದ ಪರಿತ್ಯಕ್ತವಾದದ್ದು. ನಾನು ರಕ್ಷಿಸಿರುವ ಮಗುವಿದೆಂದು ತಿಳಿ."

ಹೀಗಾದಮೇಲೆ ಆ ರಾಣಿಯರಿಬ್ಬರೂ ಒಡನೆಯೇ ಆ ಮಗುವನ್ನು ಎತ್ತಿಕೊಂಡು ಹಾಲುಣಿಸಿದರು. ಅದೆಲ್ಲವನ್ನೂ ಅರಿತು ರಾಜನಿಗೆ ಆಗ ಬಹಳ ಸಂತೋಷವೇ ಆಯಿತು.

ಸ್ವರ್ಣದ ಕಾಂತಿಯನ್ನು ಹೊಂದಿದ್ದ ಆ ರಾಕ್ಷಸಿಯನ್ನು ರಾಜನು ಕೇಳಿದನು: "ಕಮಲದೊಳಗಣ ಕಾಂತಿಯನ್ನು ಹೊಂದಿರುವವಳೇ! ನನಗೆ ಮಗನನ್ನಿತ್ತವಳೇ! ಯಾರು ನೀನು? ನೀನು ಕಾಮ-ಚಾರಿಣಿಯಾದ, ಎಂದರೆ ಬಯಸಿದಂತೆ ಸಂಚರಿಸುವ, ದೇವತೆಯೇ ಇರಬೇಕೆಂದು ನನಗೆ ತೋರುತ್ತದೆ!" – ಎಂದು.

ಆಗ ಆ ರಾಕ್ಷಸಿಯು ಹೇಳಿದಳು:

"ನಾನು ಜರಾ ಎಂಬ ಹೆಸರಿನ ರಾಕ್ಷಸಿ. ಕಾಮ-ರೂಪಿಣಿಯಾದವಳು, ಎಂದರೆ ಇಚ್ಛೆ ಬಂದಂತೆ ರೂಪವನ್ನು ಧರಿಸಿಕೊಳ್ಳಬಲ್ಲವಳು. ರಾಜನೇ, ನಿನ್ನ ಮನೆಯಲ್ಲಿಯೇ ಪೂಜಿತಳಾಗಿ ಸುಖದಿಂದ ವಾಸಮಾಡುತ್ತಿರುವೆ, ನಾನು. ಮನುಷ್ಯರ ಮನೆಮನೆಗಳಲ್ಲೂ ಸದಾ ವಾಸಿಸುತ್ತಿರುವೆ. ಹಿಂದೆ ಬ್ರಹ್ಮನು ಗೃಹದೇವೀ ಎಂಬ ಹೆಸರಿನಿಂದಲೇ ನನ್ನನ್ನು ಸೃಷ್ಟಿಸಿರುವನು. ದಾನವರ ವಿನಾಶಕ್ಕೆಂದೇ ಸ್ಥಾಪಿಸಲ್ಪಟ್ಟವಳು, ನಾನು. ದಿವ್ಯರೂಪವನ್ನು ಧರಿಸತಕ್ಕವಳು.

ಯಾರು ಭಕ್ತಿ-ಪೂರ್ವಕವಾಗಿ ನನ್ನ ಚಿತ್ರವನ್ನು - ನಾನು ಯೌವನದಲ್ಲಿರುವಂತೆಯೂ ಪುತ್ರಸಹಿತಳಾದಂತೆಯೂ – ತಮ್ಮ ಮನೆಯ ಗೋಡೆಯ ಮೇಲೆ ಬರೆಯುವರೋ, ಅವರ ಮನೆಯಲ್ಲಿ ವೃದ್ಧಿ(ಏಳ್ಗೆ)ಯುಂಟಾಗುವುದು. ಇಲ್ಲವಾದಲ್ಲಿ ವಿನಾಶವೇ ಉಂಟಾಗುವುದು.

ನಿನ್ನ ಗೃಹದಲ್ಲಿಯೂ, ಎಂದರೆ ಅರಮನೆಯಲ್ಲಿಯೂ, ನಾನು ವಾಸವಾಗಿದ್ದು ಸದಾ ಪೂಜೆ ಕೈಗೊಳ್ಳುತ್ತಿದ್ದೇನೆ! ನಿನ್ನ ಮನೆಯ ಗೋಡೆಗಳ ಮೇಲೆ ನಾನು ಬಹುಪುತ್ರರಿಂದ ಸುತ್ತುವರಿಯಲ್ಪಟ್ಟವಳಾಗಿ ಚಿತ್ರಿಸಲ್ಪಟ್ಟಿದ್ದೇನೆ. ಹಾಗೆಯೇ ಗಂಧ-ಪುಷ್ಪ-ಧೂಪಗಳಿಂದಲೂ ಭಕ್ಷ್ಯ-ಭೋಜ್ಯಗಳಿಂದಲೂ ನಾನು ಅರ್ಚಿಸಲ್ಪಟ್ಟಿದ್ದೇನೆ. ಎಂದೇ ನಿನಗೆ ಪ್ರತ್ಯುಪಕಾರಕ್ಕೋಸ್ಕರವಾಗಿ ನಾನು ಸದಾ ಚಿಂತಿಸುತ್ತಿರುತ್ತೇನೆ."

ಸೂಚನೆ : 1/2/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.  

ಪ್ರಶ್ನೋತ್ತರ ರತ್ನಮಾಲಿಕೆ 51 (Prasnottara Ratnamalike 51)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ - ೫೧ - ಯಾವುದು ದಾನ ?

ಉ. ಯಾವುದರಿಂದ ಪ್ರತ್ಯುಪಕಾರವನ್ನು ಅಪೇಕ್ಷೆಪಡದಿರುವುದು.

ಪ್ರಕೃತ ಈ ಉತ್ತರದಲ್ಲಿ, 'ಯಾವ ದಾನವು ಅತ್ಯಂತ ಶ್ರೇಷ್ಠವಾಗುತ್ತದೆ' ಎಂಬ ವಿವರಣೆ ಇಲ್ಲಿದೆ. ಅಂದರೆ ದಾನವನ್ನು ಮಾಡಬೇಕು; ಆದರೆ ನಾವು ಯಾರಿಗೆ ದಾನವನ್ನು ಮಾಡುತ್ತೇವೆಯೋ, ಅವರಿಂದ ಯಾವುದೇ ಬಗೆಯ ಪ್ರತ್ಯುಪಕಾರವನ್ನು ಬಯಸಬಾರದು. ಬಯಸಿದರೆ ಅದು ದಾನವಾಗುವುದಿಲ್ಲ ಎಂಬ ಅರ್ಥ ಇಲ್ಲಿದೆ. ದಾನ ಮಾಡುವಾಗ ಯಾವ ಭಾವದಿಂದ ದಾನ ಮಾಡಬೇಕು ಎಂಬ ವಿಷಯ ಇಲ್ಲಿದೆ.

ವಸ್ತುತಃ ದಾನವನ್ನು 'ನ ಮಮ' ಎಂಬ ಬುದ್ಧಿಯಿಂದ ಮಾಡಬೇಕಾಗುತ್ತದೆ. ದಾನ ಮಾಡುವ ವಸ್ತುವು ದಾನ ಮಾಡುವ ಪೂರ್ವದಲ್ಲಿ ನಮ್ಮ ಸ್ವಾಮಿತ್ವವನ್ನು ಪಡೆದಿರುತ್ತದೆ. ಆ ವಸ್ತುವು ನಮ್ಮ ಪ್ರಾಮಾಣಿಕವಾದ ಧನಾರ್ಜನೆಯಿಂದ ಪಡೆದಿದ್ದಾಗಿರಬೇಕು. ಆಗ ಆ ಸ್ವತ್ತಿಗೆ ಅಥವಾ ಆ ಪದಾರ್ಥಕ್ಕೆ ನಾವು ಸ್ವಾಮಿಯಾಗುತ್ತೇವೆ. ಆಗ ಅದು ನಮ್ಮ ಪ್ರಯೋಜನಕ್ಕೆ ಬಳಸಲು ಅನುಕೂಲವಾಗುತ್ತದೆ. ಅದರ ಬಳಕೆಯಿಂದ ಶರೀರದ ಧಾತುಸಾಮ್ಯವನ್ನು ಉಂಟುಮಾಡುತ್ತದೆ. ಆ ಪದಾರ್ಥವನ್ನು ಮತ್ತೊಬ್ಬರಿಗೆ ದಾಟಿಸುವಾಗ ಅದರಲ್ಲಿರುವ ನಮ್ಮತನವನ್ನು ಪರಿಪೂರ್ಣವಾಗಿ ಕಳೆದುಕೊಳ್ಳಬೇಕು. ಆ ಪದಾರ್ಥದಿಂದ ಯಾವುದೇ ಬಗೆಯ ಪ್ರಯೋಜನವನ್ನು ಬಯಸಿರಬಾರದು. ಹಾಗೆ 'ಇದು ನನ್ನದಲ್ಲ' ಎಂಬ ಭಾವನೆಯಿಂದ ಮತ್ತೊಬ್ಬರಿಗೆ ದಾನವಾಗಿ ಕೊಡಬೇಕು. ಇದು 'ಅತ್ಯಂತ ಶ್ರೇಷ್ಠವಾದ ದಾನ' ಎಂಬುದಾಗಿ ಪರಿಗಣಿಸಲ್ಪಡುತ್ತದೆ. ಇದನ್ನೇ ಭಗವದ್ಗೀತೆಯಲ್ಲಿ ಹೀಗೆ ಹೇಳಲಾಗಿದೆ  "ದಾತವ್ಯಮ್ ಇತಿ ಯದ್ದಾನಂ ದೀಯತೇ ಅನುಪಕಾರಣೇ। ದೇಶೇ ಕಾಲೇ ಚ ಪಾತ್ರೇ ಚ ತದ್ದಾನಂ ಸಾತ್ತ್ವಿಕಂ ಸ್ಮೃತಮ್" ಎಂಬುದಾಗಿ. ಅಂದರೆ 'ಕೊಡಬೇಕು' ಎಂಬ ಮನಸ್ಸನ್ನು ಮಾಡಿ, ಯಾರು ತಾನು ಮಾಡಿರುವ ದಾನಕ್ಕೆ ಪ್ರತ್ಯುಪಕಾರವನ್ನು ಮಾಡಲು ಸಾಧ್ಯವೇ ಇಲ್ಲ ಎಂಬುದನ್ನು ನಿಶ್ಚಯಿಸಿ, ಅಂತಹ ವ್ಯಕ್ತಿಯನ್ನು ಗುರುತಿಸಿ ದಾನವನ್ನು ಮಾಡಬೇಕು ಎಂಬುದಾಗಿ ಶ್ರೀಶಂಕರಭಗವತ್ಪಾದರು ಅವರ ಗೀತಾಭಾಷ್ಯದಲ್ಲಿ 'ಅನುಪಕಾರಿಣೇ' ಎಂಬ ಪದಕ್ಕೆ 'ಪ್ರತ್ಯುಪಕಾರ - ಅಸಮರ್ಥಾಯ, ಸಮರ್ಥಾಯ ಅಪಿ ನಿರಪೇಕ್ಷಿತಾಯ' ಎಂಬುದಾಗಿ ಅರ್ಥಮಾಡಿದ್ದಾರೆ. ಅಂದರೆ ಪ್ರತ್ಯುಪಕಾರಕ್ಕೆ ಸಮರ್ಥನಾಗಿದ್ದರು ಅಂತಹವನಲ್ಲೂ ನಿರಪೇಕ್ಷಿತನಾಗಿ ದಾನವನ್ನು ಮಾಡಬೇಕು. ಹಾಗೆ ಮಾಡಿದ ದಾನವು ಸಾತ್ತ್ವಿಕ ದಾನವಾಗುತ್ತದೆ ಎಂಬುದಾಗಿ ಹೇಳಲಾಗಿದೆ. ಈ ಬಗೆಯ ದಾನಕ್ಕೆ ಅತ್ಯಂತ ಮಹತ್ವವನ್ನು ನೀಡಲಾಗಿದೆ. ಏಕೆಂದರೆ ಪ್ರತ್ಯುಪಕಾರವನ್ನು ಬಯಸಿ ಅಥವಾ ಫಲವನ್ನು ಬಯಸಿ ಮಾಡುವ ದಾನವು 'ರಾಜಸದಾನ' ಎಂಬುದಾಗಿ ಹೇಳಲಾಗಿದೆ. ಸಾತ್ತ್ವಿಕ, ರಾಜಸಿಕ ಮತ್ತು ತಾಮಸಿಕ ಎಂಬ ಮೂರು ಬಗೆಯ ದಾನದಲ್ಲಿ ಸಾತ್ತ್ವಿಕದಾನವು ಶ್ರೇಷ್ಠವಾದದ್ದು ತಾನೆ! ಈ ಸಾತ್ತ್ವಿಕ ದಾನದಲ್ಲಿ ಅಪೇಕ್ಷೆ ಇಲ್ಲವಾಗಿದೆ. ಕೇವಲ ದಾನವನ್ನು ಮಾತ್ರ ಮಾಡುವ 'ಕರ್ಮ'ವಿದಾಗಿದೆ. ಆದ್ದರಿಂದ ಇದೊಂದು 'ನಿಷ್ಕಾಮಕರ್ಮ' ಎಂಬುದಾಗಿ ಹೇಳಬಹುದಾಗಿದೆ. ಇಂತಹ ದಾನವು ಪ್ರಶಂಸಿಸಲ್ಪಟ್ಟಿದೆ. ದಾನ ಎಂಬ ಶಬ್ದಕ್ಕೆ 'ಯಥಾಶಕ್ತಿ - ಸಂವಿಭಾಗಃ - ಸಾಧ್ಯವಾದಷ್ಟು ಪದಾರ್ಥಗಳ ಸಂಬಂಧವನ್ನು ಕಡಿದುಕೊಳ್ಳುವಿಕೆ ಎಂಬ ಅರ್ಥವನ್ನು ಗೀತಾಭಾಷ್ಯದಲ್ಲಿ ಶ್ರೀಶಂಕರ ಭಗವತ್ಪಾದರು ತಿಳಿಸಿದ್ದಾರೆ. ದ್ರವ್ಯತ್ಯಾಗವನ್ನು ಮಾಡಿದಷ್ಟು ನಾವು ಈ ಸಂಸಾರವೆಂಬ ಬಂಧನದಿಂದ ಬಿಡುಗಡೆ ಹೊಂದಲು ಸಾಧ್ಯವಲ್ಲವೇ! ಹೀಗಿದ್ದರೆ ಮಾತ್ರ ಅದು ಪರಿಪೂರ್ಣ ದಾನದ ಫಲವನ್ನು ಪಡೆಯುತ್ತದೆ ಎಂಬುದಾಗಿ ಈ ಉತ್ತರದ ಅರ್ಥವಾಗಿದೆ.

ಸೂಚನೆ : 1/2/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.