ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಅರ್ಧಯೋಜನದಷ್ಟು ದೂರ ಹೋದ ಬಳಿಕ ಶತ್ರುಜಯನಾದ ಕೃಷ್ಣನು ಯುಧಿಷ್ಠಿರನ ಅನುಮತಿಯನ್ನು ಪಡೆದುಕೊಂಡು ಆತನನ್ನು ಬೀಳ್ಕೊಟ್ಟನು. ಇನ್ನು ಹಿಂದಿರುಗೆಂದು ಆತನಿಗೆ ಹೇಳಿದನು. ತನ್ನನ್ನು ಕಳುಹಿಸಿಕೊಡಲು ಅಷ್ಟು ದೂರ ಸಾಗಿಬಂದ ಉಳಿದವರನ್ನೂ ಹಾಗೆಯೇ ಬೀಳ್ಕೊಟ್ಟನು. ಧರ್ಮಜ್ಞನಾದ ಕೃಷ್ಣನು ಆ ಬಳಿಕ ಅಭಿವಾದನ ಮಾಡಿ ಯುಧಿಷ್ಠಿರನ ಪಾದಗಳನ್ನು ಹಿಡಿದನು. ಧರ್ಮರಾಜನಾದ ಯುಧಿಷ್ಠಿರನು ಕೇಶವನನ್ನು ಎಬ್ಬಿಸಿದನು, ಆತನ ಶಿರಸ್ಸನ್ನು ಆಘ್ರಾಣಿಸಿದನು. ಯಾದವಶ್ರೇಷ್ಠನೂ ಹಾಗೂ ಕಮಲನೇತ್ರನೂ ಆದ ಕೃಷ್ಣನನ್ನು ಯುಧಿಷ್ಠಿರನು "ಹೋಗಿ ಬಾ" ಎಂದು ಹರಸಿದನು. ಆಮೇಲೆ ಆತನಿಗೆ ಮತ್ತೆ ಹಿಂದಿರುಗಿ ಬರುವುದಾಗಿ ಮಾತಿತ್ತು, ಕೃಷ್ಣನು ತನ್ನನ್ನನುಸರಿಸುತ್ತಿದ್ದ ಪಾಂಡವರನ್ನು ಹಿಂದಕ್ಕೆ ಕಳುಹಿಸಿದನು. ಬಳಿಕ ಸಂತೋಷಗೊಂಡವನಾಗಿ, ಸ್ವಪುರಿಯತ್ತ ಪ್ರಯಾಣ ಬೆಳೆಸಿದನು. ಇಂದ್ರನು ಅಮರಾವತಿಯನ್ನು ಸೇರಿಕೊಳ್ಳುವಂತೆ ಅದಿತ್ತು. ಮತ್ತು ಆ ಪಾಂಡವರಾದರೂ, ಎಷ್ಟು ದೂರ ತಮ್ಮ ದೃಷ್ಟಿಗೆ ಕಾಣುತ್ತಾನೋ ಅಷ್ಟು ದೂರವೂ ಕೃಷ್ಣನನ್ನು ತಮ್ಮ ಕಣ್ಣುಗಳಿಂದ ಅನುಸರಿಸಿದರು. ಕೃಷ್ಣನ ಮೇಲೆ ಅತಿಶಯವಾದ ಪ್ರೀತಿಯ ಕಾರಣದಿಂದ ಮನಸ್ಸಿನಿಂದಲೂ ಆತನನ್ನು ಹಿಂಬಾಲಿಸಿದರು.
ತನ್ನನ್ನು ಎಷ್ಟು ನೋಡಿದರೂ ತೃಪ್ತಿಯಾಗದ ಮನಸ್ಸುಳ್ಳ ಅವರ ದೃಷ್ಟಿಯಿಂದ ಬೇಗನೆ ಮರೆಯಾದನು, ನೇತ್ರಗಳಿಗೆ ಅಭಿರಾಮನೆನಿಸುವ ಶ್ರೀಕೃಷ್ಣನು. ಪಾಂಡವರೆಲ್ಲರ ಮನಸ್ಸೂ ಗೋವಿಂದನಲ್ಲಿಯೇ ನೆಲೆಗೊಂಡಿತ್ತು. ಕೃಷ್ಣನನ್ನು ಬೀಳ್ಕೊಟ್ಟಾದ ಬಳಿಕ ಹಿಂದಿರುಗಿ ತಮ್ಮ ಪುರವನ್ನು ಪಾಂಡವರು ಬೇಗನೇ ಸೇರಿಕೊಂಡರು. ಇತ್ತ ಕೃಷ್ಣನೂ ರಥದಲ್ಲಿ ಸಾಗಿ ತ್ವರಿತವಾಗಿಯೇ ದ್ವಾರಕೆಯನ್ನು ಸೇರಿಕೊಂಡನು. ಸಾತ್ತ್ವತವಂಶದ ವೀರನಾದ ಸಾತ್ಯಕಿಯು ಕೃಷ್ಣನ ಹಿಂದೆ ಕುಳಿತು ಪ್ರಯಾಣಿಸುತ್ತಿದ್ದನು. ಸಾರಥಿಯಾದ ದಾರುಕನು ಮುಂದೆ ಕುಳಿತಿದ್ದನು. ಅವರಿಬ್ಬರೊಂದಿಗೆ, ವೇಗಸಂಪನ್ನನಾಗಿ ಗರುಡನು ಹೇಗೋ ಹಾಗೆ ದ್ವಾರಕೆಯನ್ನು ಕೃಷ್ಣನು ಸೇರಿಕೊಂಡನು.
ಇತ್ತ, ಸೋದರರೊಡಗೂಡಿದ ಧರ್ಮರಾಜನು ಸ್ನೇಹಿತರಿಂದ ಸುತ್ತುವರೆಯಲ್ಪಟ್ಟವನಾಗಿ ತನ್ನ ಶ್ರೇಷ್ಠಪುರವನ್ನು ಹೋಗಿ ಸೇರಿದನು. ಮಿತ್ರರು, ಎಲ್ಲ ಭ್ರಾತೃಗಳು ಹಾಗೂ ಪುತ್ರರು - ಇವರೆಲ್ಲರನ್ನೂ ಕಳುಹಿಸಿಕೊಟ್ಟು, ಆ ಪುರುಷವ್ಯಾಘ್ರನಾದ ಯುಧಿಷ್ಠಿರನು ದ್ರೌಪದಿಯೊಂದಿಗೆ ಸಂತೋಷವಾಗಿದ್ದನು. ಇತ್ತ ಕೇಶವನೂ ಸಂತೋಷದಿಂದ ತನ್ನ ಶ್ರೇಷ್ಠನಗರಿಯನ್ನು ಸೇರಿಕೊಂಡನು. ಉಗ್ರಸೇನ ಮೊದಲಾದ ಯದುವೀರರು ಆತನನ್ನು ಸಂಮಾನಿಸಿದರು. ಉಗ್ರಸೇನ, ವೃದ್ಧನಾದ ತಂದೆ ವಸುದೇವ, ಯಶಸ್ವಿನಿಯಾದ ತಾಯಿ ದೇವಕಿ ಹಾಗೂ ಅಣ್ಣ ಬಲರಾಮ - ಇವರುಗಳಿಗೆಲ್ಲ ಶ್ರೀಕೃಷ್ಣನು ನಮಸ್ಕಾರಗಳನ್ನು ಸಲ್ಲಿಸಿದನು. ಬಳಿಕ ಪ್ರದ್ಯುಮ್ನ, ಸಾಂಬ ಮುಂತಾದವರನ್ನು ಕೃಷ್ಣನು ಆಲಿಂಗಿಸಿಕೊಂಡನು. ಹಿರಿಯರ ಅನುಮತಿ ಪಡೆದು ರುಕ್ಮಿಣಿಯ ಭವನಕ್ಕೆ ಹೋದನು.
ಅಷ್ಟರಲ್ಲಿ ಇತ್ತ ಮಯನೂ ಸರ್ವರತ್ನಗಳಿಂದಲೂ ಕಂಗೊಳಿಸುವ ಸಭೆಯೊಂದನ್ನು ಧರ್ಮರಾಜನಿಗೆ ಕಟ್ಟಿಕೊಡುವ ಸಂಕಲ್ಪಮಾಡಿದನು. ಜಯಶಾಲಿಗಳಾದವರಲ್ಲಿ ಶ್ರೇಷ್ಠನೆನಿಸುವ ಅರ್ಜುನನನ್ನು ಕುರಿತು ಮಯನು ಹೇಳಿದನು, "ಹೊರಡಲು ಅನುಮತಿ ಕೊಡಿ, ನಾ ಮತ್ತೆ ಬರುವೆ. ಕೈಲಾಸಕ್ಕೆ ಉತ್ತರದಲ್ಲಿರುವ ಮೈನಾಕಪರ್ವತದ ಮೇಲೆ ದಾನವರು ಒಂದು ಯಜ್ಞವನ್ನು ಮಾಡುವವರಾಗಿದ್ದರು. ಆಗ ಮಣಿಮಯಭಾಂಡವೊಂದನ್ನು ನಾನು ನಿರ್ಮಿಸಿದೆ. ಬಿಂದುಸರದ ಸಮೀಪದಲ್ಲಿಯ ರಾಜ ವೃಷಪರ್ವನ ಸಭೆಯಲ್ಲಿ ಅದನ್ನಿಡಲಾಯಿತು. ಆ ರಾಜನು ಸತ್ಯಸಂಧ - ಎಂದರೆ ಸತ್ಯವಾದ ಪ್ರತಿಜ್ಞೆಯುಳ್ಳವನು. ಅದಿನ್ನೂ ಹಾಗೆಯೇ ಉಳಿದಿರುವುದಾದರೆ ಅದನ್ನು ಇಲ್ಲಿಗೆ ತೆಗೆದುಕೊಂಡುಬರುವೆ. ಆ ಬಳಿಕವೇ ಪಾಂಡವರಿಗೆ ಕೀರ್ತಿಯನ್ನು ತರುವ ಸಭೆಯೊಂದನ್ನು ನಿರ್ಮಿಸುವೆ" - ಎಂದು.
ಸೂಚನೆ : 15/6/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.