Monday, June 16, 2025

ಕೃಷ್ಣಕರ್ಣಾಮೃತ 68 ಬಾಲಕೃಷ್ಣನ ಬಾಯೊಳಗೆ ಒಟ್ಟಿಗೇ ಹಾಲು-ಬೆಣ್ಣೆ-ಮಣ್ಣುಗಳೇ? (Krishakarnamrta 67)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಇಲ್ಲಿ ಚಿತ್ರಿಸಲಾಗಿರುವ ಶ್ರೀಕೃಷ್ಣನು ವಿಲಾಸಗಳಿಗೆ ನಿಧಿಯಾದ ಬಾಲಕ. ವಿಲಾಸಗಳ ಸಮುದ್ರವೇ ಆತನೆಂದರೂ ನಡೆಯುತ್ತದೆ. ಆತನನ್ನು ನಾನು ಕಾಣುವುದು ಎಂದು? - ಎಂದು ಶ್ಲೋಕಾಂತದಲ್ಲಿ ಕೇಳಿದೆ.

ಯಾವ ತೆರನವು ಆತನ ವಿಲಾಸಗಳು? ಎರಡೆಡೆಗಳಲ್ಲಿ ವೈಪುಲ್ಯ, ಎರಡೆಡೆಗಳಲ್ಲಿ ಮಾರ್ದವ, ಎರಡೆಡೆಗಳಲ್ಲಿ ಮಾಧುರ್ಯ - ಇವುಗಳೇ ಆತನ ವಿಲಾಸಮಯತೆಗೆ ವ್ಯಂಜಕ.

ಆತನ ವಕ್ಷಸ್ಸು ವಿಶಾಲವಾದದ್ದು. ಅಲ್ಲದೆ, ಆತನ ಕಣ್ಣುಗಳೂ ಅಷ್ಟೆ, ಆಯತವಾದವು. ಉತ್ಪಲವನ್ನು, ಎಂದರೆ ಕಮಲವನ್ನು, ಹೋಲುವಂತಹವು ಅವು. ವಿಶಾಲವಾದ ವಕ್ಷಸ್ಸು ಪುರುಷನ ಪುರುಷತ್ವಕ್ಕೆ ಕನ್ನಡಿ. ಅಗಲವಾದ ಅಕ್ಷಿಗಳು ಅಂದ-ಸೌಂದರ್ಯಗಳ ಆಗರಗಳು.

ಆತನ ಮುಖವನ್ನು ಮಂದಸ್ಮಿತವು ಮಂಡಿಸಿದೆ. ಅದರಲ್ಲೇ ಆತನ ಮನಸ್ಸದೆಷ್ಟು ಮೃದುವೆಂಬುದು ಮನದಟ್ಟಾಗುತ್ತದೆ. ಮೃದು-ಮನಸ್ಕರ ಮುಖದಲ್ಲಿ ಮುಗ್ಧ-ಹಸಿತವು ರಾಜಿಸುತ್ತದೆ. ಉದ್ಧತರು ನಕ್ಕರೆಂದರೆ  ಅಟ್ಟಹಾಸವಷ್ಟೆ ಹೊಮ್ಮೀತು.

ಇದಲ್ಲದೆ ಆತನ ಮದ-ಜಲ್ಪಿತವೂ ಮೃದುಲವೇ. ಮದಿಸಿದವರ ಮಾತಲ್ಲಿ ನಯವೆಲ್ಲಿ? - ಎನಿಸಬಹುದು. ಜಲ್ಪಿತವೆಂದರಂತೂ ತೋಚಿದಂತೆ ಮಾತನಾಡುವುದು. ಆದರೆ ಕೃಷ್ಣನ ಮದವು ಬೇರೆಯವರ ಮದದಂತಲ್ಲವಲ್ಲ? ಒಳಗಿನ ಹರ್ಷಾವಸ್ಥೆಯು ಮದಾವಸ್ಥೆಯಂತೆ ತೋರೀತಷ್ಟೆ. ವಿಹಾರ-ಬುದ್ಧಿಯಿಂದ ವಿಲಾಸಕ್ಕಾಡುವ ಮಾತಾದರೂ, ಕೃಷ್ಣನಂತಹ ವಿವೇಕಿಗಳ ಮಾತು ಧರ್ಮದ ಜಾಡಿನಿಂದಂತೂ ಜಾರದು. 

ಎಂದೇ ಒರಟಾದ ಮಾತೇ ಅಂತಹವರ ಬಾಯಿಂದ ಹೊರಡದು. ಮಾತು ಒರಟಾದರೆ ಕೇಳುವವರಿಗೇನು ಹಿತವೇ? ಕೃಷ್ಣನ ಸ್ಮಿತವೂ ಮೃದುಲ, ಭಾಷಿತವೂ ಮೃದುಲ.

ಇನ್ನು ಆತನ ತುಟಿಯಂತೂ ತೊಂಡೇ ಹಣ್ಣಿನಂತೆಯೇ ಇರುವುದು. ಬಿಂಬಫಲ ಅಥವಾ ತೊಂಡೆಯ ಒಳಭಾಗವು ಕಡುಗೆಂಪಾಗಿರುವುದು. ಹಾಗೆ ಸಹಜವಾಗಿ ಕೆಂಪಾಗಿರುವ ತುಟಿಗಳು ರಕ್ತಪುಷ್ಟಿಯನ್ನು ಸೂಚಿಸುವುವು; ಅದಂತೂ ಆರೋಗ್ಯದ ಸುಲಕ್ಷಣವೇ ಸರಿ. ಹೀಗಾಗಿ ಕೃಷ್ಣನ ಬಿಂಬಾಧರವು ಮಾಧುರ್ಯವನ್ನು ಬಿಂಬಿಸುತ್ತದೆ. ಅದು ಮಾತ್ರವಲ್ಲ; ಆತನ ತುಟಿಗೆ ತಗಲುವ ಕೊಳಲೂ ಅಷ್ಟೇ. ಕಿವಿಗಿಂಪಾದ ದನಿಯೇ ಅದರಿಂದ ಚಿಮ್ಮುವುದು. ಹೀಗೆ ಶ್ರವಣಗಳಿಗೆ ರಮಣೀಯವೆನಿಸಿವುದು, ಕೃಷ್ಣನ ಮುರಳೀ-ರವ. ರವವೆಂದರೆ ಧ್ವನಿ.

ಈ ಶ್ಲೋಕವು ಕೃಷ್ಣನಲ್ಲಿ ತೋರುವ ವೈಪುಲ್ಯ-ಮಾರ್ದವ-ಮಾಧುರ್ಯಗಳನ್ನು ತಿಳಿಸುತ್ತದೆ. ಈ ಮೂರನ್ನೇ ಮೊದಲ ಮೂರು ಪಾದಗಳಲ್ಲಿ ತಿಳಿಸಿರುವುದು. ಅವುಗಳಲ್ಲಿಯ ಪದಗಳಲ್ಲಿ ೪+೧+೩+೫+೧ ಎಂಬ ಪರಿಯ ಅಕ್ಷರಗಳ ವಿನ್ಯಾಸವಿದೆ. ಈ ಶ್ಲೋಕದ ರಚನೆಯಲ್ಲೇ ಹೀಗೊಂದು ವಿಶೇಷವಿದೆ.

ಅಲ್ಲದೆ, ಲ-ಲ, ಮ-ಮ, ರ-ರ, ಎಂಬೀ ಅಕ್ಷರಗಳ ಪುನರಾವೃತ್ತಿಯಿಂದಾದ ಅನುಪ್ರಾಸವೂ ಕಿವಿಗೆ ಸವಿಯೇ. ಚ-ಚಗಳು ನಿಯತವಾದ ಸ್ಥಾನಗಳಲ್ಲೇ ಬರುತ್ತಿರುವುದೂ ಒಂದು ಚಮತ್ಕೃತಿಯೇ.

ಶ್ಲೋಕ ಹೀಗಿದೆ:
ವಕ್ಷಃಸ್ಥಲೇ ಚ ವಿಪುಲಂ ನಯನೋತ್ಪಲೇ ಚ
ಮಂದಸ್ಮಿತೇ ಚ ಮೃದುಲಂ ಮದಜಲ್ಪಿತೇ ಚ |
ಬಿಂಬಾಧರೇ ಚ ಮಧುರಂ ಮುರಲೀ-ರವೇ ಚ
ಬಾಲಂ ವಿಲಾಸನಿಧಿಮಾಕಲಯೇ ಕದಾ ನು? ||

ಮತ್ತೊಂದು ಶ್ಲೋಕ:

ಕೃಷ್ಣನು ನಮ್ಮನ್ನು ಕಾಪಾಡಲಿ - ಎಂಬ ಕೇಳ್ಕೆಯೊಂದಿಗೆ ಈ ಶ್ಲೋಕವು ಮುಕ್ತಾಯಗೊಳ್ಳುತ್ತದೆ. ಅದರ ಹಿಂದಿನ ನುಡಿಗಳು ಕೃಷ್ಣಜೀವಿತದ ಒಂದು ಪ್ರಸಂಗವನ್ನು ಹೇಳುತ್ತವೆ. ತಾಯಿ ಯಶೋದೆಗೆ ಮಹಾಗಾಬರಿಯನ್ನೇ ಉಂಟುಮಾಡಿದ ಪ್ರಸಂಗವದು.

ತಾಯಿಯಾದವಳಿಗೆ ತನ್ನ ಶಿಶುವಿನ ಆರೋಗ್ಯದ ಬಗ್ಗೆ ಸದಾ ಕಳಕಳಿಯಿರುವುದಷ್ಟೆ? ಹೆತ್ತ ತಾಯಿಗಿಂತಲೂ ಹೆಚ್ಚು ಕಾಳಜಿಯನ್ನು ಸಾಕುತಾಯಿಯು ತೋರಿಸುವಳು. ಏಕೆ? ಶಿಶುರಕ್ಷಣೆಯು ತನ್ನ ಜವಾಬ್ದಾರಿಯಲ್ಲವೇ? ತಾನು ಸಾಕಷ್ಟು ಜಾಗರೂಕಳಾಗಿರಲಿಲ್ಲವೆಂದು ಯಾರಾದರೂ ಭಾವಿಸುವಂತಾಗಿಬಿಟ್ಟರೆ ಏನು ಗತಿ? - ಎಂಬ ಚಿಂತೆ ಸಹಜವಾದದ್ದೇ.

ಕೃಷ್ಣನ ಬಾಲಲೀಲೆಗಳು ಒಂದೇ ಎರಡೇ? ಒಳ್ಳೆಯ ಮಗುವಾದರೂ ತಾಯಿಗೆ ವ್ಯಾಕುಲತೆಯಿದ್ದೇ ಇರುವುದೇ. ಆದರೆ ತುಂಟಾಟ ಮಾಡುವ ಮಕ್ಕಳು, ಚೇಷ್ಟೆಯ ಮಕ್ಕಳಾದರಂತೂ ಸದಾ ಮಗುವಿನ ಮೇಲೊಂದು ಕಣ್ಣಿಟ್ಟಿರುವುದೇ ತಾಯಿಯ ಕೆಲಸವಾಗಿಬಿಡುತ್ತದೆ. ಅನ್ಯ-ಕರ್ತವ್ಯಗಳು ಗೌಣವೇ ಆದಾವು!

ಮಕ್ಕಳು ಗುಟ್ಟಲ್ಲಿ ಮಣ್ಣುಮುಕ್ಕಿಬಿಡುವುದುಂಟು. ಏನನ್ನು ದೊಡ್ಡವರು ಬೇಡವೆನ್ನುತ್ತಾರೋ ಅದನ್ನು ಗುಟ್ಟಾಗಿ ಮಾಡು - ಇದುವೇ ಮಕ್ಕಳ ವಿಲಾಸ-ವೈಭವ-ವ್ರತ! ಇದು ಸಾಲದೆಂಬಂತೆ ಕೃಷ್ಣನಂತೂ ಅವರಿವರ ಮನೆಗಳಲ್ಲೆಲ್ಲಾ ಬೆಣ್ಣೆ ಕದ್ದು ತಿನ್ನುವುದೂ ಗೊತ್ತಿರುವುದೇ. ಹಾಲು ಕುಡಿಯುವ ಚಪಲವೂ ಕೃಷ್ಣನಿಗಿದ್ದದ್ದೇ. ಅವೇಳೆಯಲ್ಲಿಯೋ ಅತಿಯಾಗಿಯೋ ಹಾಲು ಕುಡಿದರೆ ಅದೂ ಅನಾರೋಗ್ಯಕರವೇ ತಾನೇ?

ಆದರೆ ಒಮ್ಮೆ ಯಶೋದೆಗೆ ಗಾಬರಿಯೇ ಆಗುವಂತಾಗಿದೆ, ಕೃಷ್ಣನ ಬಾಯೊಳಗೆ ಇದ್ದುದನ್ನು ಕಂಡು. ಅಲ್ಲಿ ಒಂದಿಷ್ಟು ಬೆಣ್ಣೆಯಿದೆ. ಜೊತೆಗೇ ಒಂದಿಷ್ಟು ಮಣ್ಣಿನ ಹೆಂಟೆಯೂ ಇದೆ,ಅ ಲ್ಲದೆ, ಒಂದಿಷ್ಟು ಹಾಲೂ ಕೂಡ ಇದೆ! ಅದೆಲ್ಲವೂ ಒಟ್ಟಿಗೆ ಬಾಯಲ್ಲಿ ಇರಲು ಸಾಧ್ಯವೇ? ಹಿಂದೆಂದೂ ಹೀಗಾಗಿಲ್ಲದ ಈ ಸಂನಿವೇಶವನ್ನು ಕಂಡು ಅವಳಿಗೆ ಗಾಬರಿ, ಭಯ, ಆತಂಕ, ಆಶ್ಚರ್ಯಗಳೆಲ್ಲಾ ಒಟ್ಟಿಗೇ ಆಗಿವೆ.

ವಾಸ್ತವವಾಗಿ ಆಗಿರುವುದೇನು? ಕೃಷ್ಣನು ಬಾಯಿಬಿಟ್ಟಾಗ ಜಗವೆಲ್ಲ ಆತನ ಬಾಯಲ್ಲಿ ಕಂಡಿದೆ. ಬೆಣ್ಣೆಯಾಗಿ ತೋರಿದ್ದು ವಾಸ್ತವವಾಗಿ ಕೈಲಾಸಪರ್ವತವೇ! ಪ್ರಾಗ್ಜಗ್ಧವೆಂದರೆ ಮೊದಲು ಜಗಿದದ್ದು. ಅಂತಹ ಮಣ್ಣುಹೆಂಟೆಯಂತೆ ಕಂಡದ್ದು ಭೂಮಿಯೇ! ಇನ್ನು ಕುಡಿದ ಹಾಲಿನಂತೆ ತೋರಿದ್ದು ಕ್ಷೀರಸಮುದ್ರವೇ!

ಹೀಗಾಗಿ ಮುದ್ದುಕೃಷ್ಣನ ಪುಟ್ಟಮುಖದಲ್ಲಿ ಕೈಲಾಸವೇ ನವನೀತವಾಗಿಹೋಯಿತು! ಭೂಮಿಯೇ ಮಣ್ಣಿನ ಮುದ್ದೆಯಾಗಿಹೋಯಿತು! ಕ್ಷೀರಸಾಗರವು ಹಾಲಾಗಿಹೋಯಿತು! ಬಾಲಕನ ಬಾಯೊಳಗೇ ಕೈಲಾಸ- ಭೂಖಂಡ-ಕ್ಷೀರಸಮುದ್ರಗಳನ್ನೆಲ್ಲಾ ಕಂಡಳಾಕೆ!

ಮುಗುಳ್ನಗೆಯಿಂದ ಅರಳಿದ ಮುಖದಲ್ಲಿ, ಬಾಯೊಳಗೆ ಏನೇನೋ ಕಂಡ ತಾಯಿಗೆ ತೋರಿದ್ದೇನು? ತೋರುವುದೇನು, ಏನೋ ಅಜೀರ್ಣವಾಗಿದೆಯೆಂದೇ!

ಸುಮ್ಮಸುಮ್ಮನೆ ಹಾಗೆಲ್ಲಾ ಅಜೀರ್ಣವೂ ಆಗುವುದಿಲ್ಲ, ಆಗಲೂಬಾರದು. ಹಾಗಿದ್ದರೆ ಯಾರದ್ದೋ ದೃಷ್ಟಿಯಾಗಿರಬೇಕು. ಯಾರದ್ದೋ ಎಂದರೆ ಇನ್ನೇನು, ಯಾವಳೋ ಹೆಂಗಸಿನದೇ ದೃಷ್ಟಿ ತಾಗಿರಬೇಕು. ಬರೀ ಅಜೀರ್ಣಕ್ಕೆ ವೈದ್ಯ ಮಾಡಬಹುದೇನೋ? ಆದರೆ ದೃಷ್ಟಿ ಪರಿಹಾರವೆಂಬುದೇನು ಸುಲಭವೇ? ಕೆಟ್ಟೆ ಕೆಟ್ಟೆ! – ಎಂದುಕೊಂಡಳು.

ಎಂದೇ ಆಕೆಯ ಗಾಬರಿಯ ಉದ್ಗಾರ: "ಧೂ ಧೂ!" ಎಂದು; ಜೊತೆಗೆ, "ಮಗುವೇ, ಬಾಳು! ನೂರ್ಕಾಲ ಬಾಳು! ಚಿರಕಾಲ ಬಾಳು!" – ಎಂದು.

ಬಾಯಲ್ಲೇ ವಿಶ್ವರೂಪವನ್ನು ತೋರಿದ ತನ್ನ ಮಹಿಮೆಯನ್ನರಿಯದ ತಾಯಿಯ ಬಾಯಿಂದ ಇಂತಹ ಉದ್ಗಾರ ತರಿಸಿದ ಹರಿಯು ನಮ್ಮನ್ನು ಕಾಪಾಡಲಿ - ಎನ್ನುತ್ತದೆ ಶ್ಲೋಕ.

ನವನೀತದಂತೆ ತೋರು - ಎಂಬುದಕ್ಕೆ ನವನೀತತಿ ಎಂದಷ್ಟೇ ಹೇಳಿದರೂ ಆಯಿತು, ಸಂಸ್ಕೃತದಲ್ಲಿ. ನಾಮಪದಗಳನ್ನೇ ಹೀಗೆ ಧಾತುಗಳನ್ನಾಗಿಸುವ ಬಗೆ ವಿಶಿಷ್ಟವಾದುದು. ಮೂರು ಬಾರಿ ಈ ತೆರನ ನಾಮಧಾತು-ಪ್ರಯೋಗವೆಂಬುದು ಪ್ರಕೃತಶ್ಲೋಕಕ್ಕೊಂದು ಮೆರುಗುಕೊಟ್ಟಿದೆ.

ಶ್ಲೋಕವಿಂತಿದೆ:
ಕೈಲಾಸೇ ನವನೀತತಿ, ಕ್ಷಿತಿತಲೇ ಪ್ರಾಗ್-ಜಗ್ಧ-ಮೃಲ್ಲೋಷ್ಟತಿ, /
ಕ್ಷೀರೋದೇಽಪಿ ನಿಪೀತ-ದುಗ್ಧತಿ ಲಸತ್-ಸ್ಮೇರ-ಪ್ರಫುಲ್ಲೇ ಮುಖೇ, |
ಮಾತ್ರಾಽಜೀರ್ಣ-ಧಿಯಾ ದೃಢಂ ಚಕಿತಯಾ ನಷ್ಟಾಽಸ್ಮಿ! ದೃಷ್ಟಃ ಕಯಾ ?/
ಧೂ ಧೂ ವತ್ಸಕ! ಜೀವ ಜೀವ ಚಿರಮಿತ್ಯುಕ್ತೋಽವತಾದ್ ವೋ ಹರಿಃ ||

ಸೂಚನೆ : 14/06/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.