Monday, June 16, 2025

ಪ್ರಶ್ನೋತ್ತರ ರತ್ನಮಾಲಿಕೆ 20 (Prasnottara Ratnamalike 20)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)





ಪ್ರಶ್ನೆ ೨೦. ಲಾಘವ ಯಾವುದು?

ಉತ್ತರ - ನೀಚರಲ್ಲಿ ಬೇಡುವುದು.

ಈ ಮುಂದಿನ ಪ್ರಶ್ನೆ 'ಲಾಘವ ಯಾವುದು?' ಎಂಬುದು. ಉತ್ತರ 'ನೀಚರಲ್ಲಿ ಬೇಡುವುದು'. ಉತ್ತರ ಬಹಳ ಹಗುರವಾಗಿದೆ; ತಿಳಿದುಕೊಳ್ಳಲು ಸುಲಭವಾಗಿದೆ ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಆದರೆ ನಮಗೆ ಇಲ್ಲಿ ಬರುವ ಸವಾಲು ಎಂದರೆ ಯಾರು ನೀಚರು? ಎಂಬುದನ್ನು ತಿಳಿದುಕೊಳ್ಳುವುದರಲ್ಲಿ. ಇದು ಬಹಳ ಕಠಿಣವಾದದ್ದು. ಏಕೆಂದರೆ ಹೇಗೆ ನೀಚರನ್ನು ಗುರುತಿಸುವುದು? ಮಾನದಂಡ ಉಂಟೆ? ಅಥವಾ ನೀಚರಿಗೆ ಏನಾದರೂ ಸರಿಯಾದ ಲಕ್ಷಣವುಂಟೇ? ಹೀಗೆಲ್ಲ ನಮಗೆ ಪ್ರಶ್ನೆ ಬರುತ್ತದೆ. ಹಾಗಾಗಿ ನೀಚರು ಯಾರು? ಎಂದು ತಿಳಿದರೆ ಅವರಲ್ಲಿ ಬೇಡುವುದು ಸರಿಯಲ್ಲ ಎಂಬ ವಿಷಯವನ್ನು ತಿಳಿದಂತೆ ಆಗುತ್ತದೆ. ಇದಕ್ಕೂ ಮೊದಲು ಕಾಳಿದಾಸನು ಋತು ಸಂಹಾರ ಎಂಬ ಕಾವ್ಯದಲ್ಲಿ ಒಂದು ಮಾತನ್ನು ಹೇಳುತ್ತಾನೆ "ಯಾಚ್ನಾ ಮೋಘಾ ವರಮಧಿಗುಣೇ ನಾಧಮೇ ಲಬ್ಧಕಾಮಾ - ಒಳ್ಳೆಯವರಲ್ಲಿ ಬೇಡಿದ್ದು ಸಿಗದಿರುವುದು, ಅಧಮರಲ್ಲಿ ಬೇಡಿ ಸಿಗುವುದಕ್ಕಿಂತ ಉತ್ತಮ" ಎಂಬುದಾಗಿ. ಬೇಡುವುದು ಹೇಗೆ ತಪ್ಪು? ಎಂಬುದನ್ನು ಈ ಹಿಂದಿನ ಲೇಖನದಲ್ಲಿ ಚಿಂತಿಸಲಾಗಿದೆ. ಅದರಲ್ಲೂ ನೀಚರಲ್ಲಿ ಬೇಡುವುದೆಂದರೆ ಅದು ತಪ್ಪೇ ತಪ್ಪು. ಆದ್ದರಿಂದರೆ ನೀಚರು ಯಾರು? ಎಂಬುದನ್ನು ಈ ಪ್ರಶ್ನೋತ್ತರದಲ್ಲಿ ಗಮನಿಸುವುದು ಉಚಿತ ಎಂಬುದು ಭಾವನೆಯಾಗಿದೆ.


ಇಲ್ಲೊಂದು ಸುಭಾಷಿತವು ಇದರ ಬಗ್ಗೆ ಹೀಗೆ ವಿವರಣೆಯನ್ನು ನೀಡುತ್ತಿದೆ - "ಕರ್ಮಣ್ಯೇಕಂ ವಚಸ್ಯೇಕಂ ಮನಸ್ಯೇಕಂ ಮಹಾತ್ಮನಾಮ್। ಕರ್ಮಣ್ಯತ್ ವಚಸ್ಯನ್ಯತ್ ಮನಸ್ಯತ್ ದುರಾತ್ಮನಾಮ್ ಎಂಬುದಾಗಿ. ಅಂದರೆ ಯಾರ ಮಾಡುವ ಕರ್ಮ, ಆಡುವ ಮಾತು ಮತ್ತು ಯೋಚಿವ ಮನಸ್ಸು ಒಂದೇ ಆಗಿರುತ್ತದೆಯೋ ಅವರು ಮಹಾತ್ಮ ಅಥವಾ ಉತ್ತಮ ಎನಿಸಿಕೊಳ್ಳುತ್ತಾನೆ. ಇದಕ್ಕೆ ವಿರುದ್ಧ ಸ್ವಭಾವುಳ್ಳವನು ದುರಾತ್ಮ ಅಥವಾ ನೀಚನೆನಿಸಿಕೊಳ್ಳುತ್ತಾನೆ. ಅಂದರೆ ಮಾಡುವುದಕ್ಕೂ ಹೇಳುವುದಕ್ಕೂ ಯೋಚಿಸುವುದಕ್ಕೂ ಒಂದಕ್ಕೊಂದು ಸಂಬಂಧವೇ ಇರುವುದಿಲ್ಲ ಎಂದರ್ಥ. ಮನನಸ್ಸು, ಮಾತು ಮತ್ತು ಕೆಲಸ ಈ ಮೂರು ಒಂದೇ ಸರಳರೇಖೆಯಲ್ಲಿ ಬರುವಂತಿರಬೇಕು. ಇವೆಲ್ಲವೂ ರುಜುರೇಖೆಯಲ್ಲಿ ಬರುವಂತೆ ಇದ್ದರೆ ವ್ಯವಸ್ಥೆ ಸರಿಯಾಗಿರುತ್ತದೆ. ಇವು ಮೂರು ಜೀವಾತ್ಮನ ಆಣಂತಿಯಂತೆ ನಡೆಯುವಂತಿರಬೇಕು ಎಂದರ್ಥ. 'ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳಿಯಿತು' ಎಂಬ ಗಾದೆಮಾತಿನಂತೆ ಆಗಬಾರದು. ಒಬ್ಬನು ತನ್ನ ಚಕ್ಕಡಿಗಾಡಿಗೆ ಒಂದುಕಡೆ ಕೋಣವನ್ನು, ಇನ್ನೊಂದುಕಡೆ ಎತ್ತನ್ನು ಕಟ್ಟಿದರೆ ಆ ಗಾಡಿಯು ಚಾಲಕನ ನಿಯಂತ್ರಣದಲ್ಲಿ ಇರದು. ಏಕೆಂದರೆ ನೀರು ಕಂಡೀತೆಂದರೆ ಕೋಣಕ್ಕೆ ನೀರಿನ ಕಡೆ ಹೋಗಿ ಅಲ್ಲಿ ಆಡುವ ಆಸೆ. ಆದರೆ ಎತ್ತಿಗೆ ನೀರಾಗದು. ಅದು ನೀರಿನ ಕಡೆ ಹೋಗದು. ಹೀಗೆ ಅಲ್ಲೇ ಎಳೆದಾಟ ಆಗಿ ಗಾಡಿ ಎಲ್ಲಿಗೂ ಹೋಗದು. ಅಂತೆಯೇ ನೀಚರು ತಮ್ಮ ಶರೀರ ಮಾತು ಮನಸ್ಸುಗಳನ್ನು ಜೀವದ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದಿಲ್ಲ. ಪರಿಣಾಮವಾಗಿ ಅವರು ಮಾಡಬಾರದ್ದನ್ನೇ ಮಾಡುತ್ತಾರೆ. ಆಡಬಾರದ್ದನ್ನೇ ಆಡುತ್ತಾರೆ. ಅಂತವರ ಬಳಿ ಕೇಳುವುದು ಅಥವಾ ಬೇಡುವುದು ಕಠಿಣವೇ ಸರಿ. ಅವರು ಒಮ್ಮೆ ಕೊಡುತ್ತೇನೆಂದರೆ, ಕೆಲವೇ ಕ್ಷಣದಲ್ಲಿ ಕೋಡುವುದಿಲ್ಲ ಎಂದೂ ಹೇಳಬಹುದು. 'ಕ್ಷಣಚಿತ್ತ ಕ್ಷಣಪಿತ್ತ' ಎಂಬಂತೆ ಅವರು ಒಂದೇ ರೀತಿ ಇರುತ್ತಾರೆ ಎಂದು ಎಣಿಸುವುದು ಕಷ್ಟವೇ ಸರಿ. ಹಾಗಾಗಿ ಇಂತವರ ಬಳಿ ಬೇಡಿದರೆ ಕೇಳಿದ ವ್ಯಕ್ತಿಯೇ ಲಘುವಾಗುತ್ತಾನೆ. ಅಂದರೆ ಅವನ ವ್ಯಕ್ತಿತ್ವಕ್ಕೇ ಅದು ಕುಂದು ತಂದೀತು!


ಸೂಚನೆ : 15/6/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.