Sunday, June 8, 2025

ಪ್ರಶ್ನೋತ್ತರ ರತ್ನಮಾಲಿಕೆ 19 (Prasnottara Ratnamalike 19)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ ೧೯. ದುಃಖ ಯಾವುದು?

ಉತ್ತರ - ಅಸಂತೋಷ


ಅಸಂತೋಷವೇ ದುಃಖ ಎಂಬುದಾಗಿ ಇಲ್ಲಿನ ಉತ್ತರವಾಗಿದೆ. ಸಂತೋಷವಿಲ್ಲದಿರುವಿಕೆ ದುಃಖಕ್ಕೆ ಮೂಲ ಎಂಬುದು ತಾತ್ಪರ್ಯ. ಸಂತೋಷ ಎಂದರೇನು? ಅದು ಹೇಗೆ ಸುಖಕ್ಕೆ ಸಾಧನ? ಮತ್ತು ಸಂತೋಷವಿಲ್ಲದಿರುವುದು ಹೇಗೆ ದುಃಖಕ್ಕೆ ಸಾಧನ? ಎಂಬ ವಿಷಯವನ್ನು ಇಲ್ಲಿ ಚಿಂತಿಸಬೇಕಾಗಿದೆ. ಸುಖ ಮತ್ತು ದುಃಖ ಇವೆರಡು ವಿರುದ್ಧ ಪದಗಳು. ಪ್ರತಿಯೊಂದು ಜೀವವು ಬಯಸುವಂಥದ್ದು ಸುಖ ಬೇಕು, ದುಃಖ ಬೇಡ ಎಂಬುದಾಗಿ. ಸುಖ ಎಂಬುದು ಹಾಗೂ ಹೀಗೂ ಸಿಗುವಂತದ್ದಲ್ಲ ಅಥವಾ ದುಃಖವೂ ಕೂಡ. ಅದಕ್ಕೆ ಒಂದು ಸಾಧನ ಬೇಕು. 

ನಾವು ಪ್ರತಿನಿತ್ಯ ಅನೇಕ ಪದಾರ್ಥಗಳನ್ನು ಬಳಸುತ್ತೇವೆ. ಆ ಪದಾರ್ಥಗಳು ಸುಖಕ್ಕೂ ಕಾರಣವಾಗಬಹುದು, ದುಃಖಕ್ಕೂ ಕಾರಣವಾಗಬಹುದು ಎಂಬುದು ಇದರ ತಾತ್ಪರ್ಯವಾಗಿದೆ. ಪದಾರ್ಥಗಳಿಂದ ಸುಖ ಅಥವಾ ದುಃಖ ಬರುತ್ತದೆ ಎಂದರೆ ಅದು ಹೇಗೆ? ಹಾಗಾದರೆ ಸುಖದುಃಖಗಳು ಪದಾರ್ಥದಲ್ಲಿ ಇವೆಯೋ ಎಂಬುದನ್ನು ನಾವು ವಿವೇಚಿಸಬೇಕಾಗಿದೆ. ಸುಖ ಎನ್ನುವುದು ಒಂದು ಅನುಭವ. ಇದಕ್ಕೆ ವಿರುದ್ಧವಾದ ಅನುಭವ ದುಃಖ. ಹಾಗಾದರೆ ಈ ವೇದನೆಯು ಹೇಗೆ ಬರುತ್ತದೆ? ಒಂದು ಉದಾಹರಣೆ ಮೂಲಕ ಚಿಂತಿಸುವುದಾದರೆ ನಿದ್ದೆಯು ಒಂದು ಬಗೆಯ ಸುಖ. ಇದಕ್ಕೆ ಸಾಧನ ಯಾವುದು? ಎಂದರೆ ವಸ್ತುತಃ ಯಾವುದೂ ಅಲ್ಲ. ನಿದ್ದೆಗೆ ಪೂರಕವಾದ ವಿಷಯಗಳನ್ನು ನಿದ್ದೆ ಬರುವವರೆಗೆ ಇಟ್ಟುಕೊಂಡು, ಆಮೇಲೆ ತ್ಯಾಗ ಮಾಡಬೇಕು. ಆ ತ್ಯಾಗವೇ ಸುಖಕ್ಕೆ ಅಥವಾ ಸುಖವಾದ ನಿದ್ದೆಗೆ ಸಾಧನವಾಗಬಹುದು. ಸಾಮಾನ್ಯವಾದ ಜೀವನದಲ್ಲಿ ಸುಖದ ಅನಂತರ ದುಃಖವು ಬರುತ್ತದೆ. ನಿಜವಾಗಿ ದುಃಖದ ಸ್ಪರ್ಶವಿಲ್ಲದ ಸುಖವನ್ನು ಮಾನವನು ಬಯಸುವಂತಹದ್ದು. ಇದುವೇ ಆತ್ಯಂತಿಕಸುಖ. ಇದಕ್ಕೆ ಹೊರತಾದವುಗಳೆಲ್ಲವೂ ಕೂಡ ಸುಖದುಃಖಗಳೂ ದುಃಖಕ್ಕೆ ಕಾರಣವಾದವುಗಳೇ ಆಗುತ್ತವೆ. ಅಂದರೆ ತೃಪ್ತಜೀವನ ಸುಖಕ್ಕೆ ಕಾರಣ; ಅತೃಪ್ತಜೀವನ ದುಃಖಕ್ಕೆ ಕಾರಣ ಎಂಬ ಅರ್ಥ ಇಲ್ಲಿ ಗರ್ಭಿತವಾಗಿದೆ. 


ಸುಖ ದುಃಖಗಳು ವಸ್ತುವಿನಲ್ಲಿಲ್ಲ; ವಸ್ತುವನ್ನು ಬಳಸಿಕೊಳ್ಳುವುದರಲ್ಲಿ. ಅಥವಾ ಅದನ್ನು ನಾವು ಅರ್ಥ ಮಾಡಿಕೊಳ್ಳುವುದರಲ್ಲಿ ಇದೆಯೇ ಹೊರತು ಅದೇ ಸುಖಕ್ಕೆ ಸಾಧನವಲ್ಲ; ದುಃಖಕ್ಕೂ ಸಾಧನವಲ್ಲ. ಹೇಗೆಂದರೆ ಅತ್ಯಂತ ಪ್ರಿಯವಾದ ವಸ್ತುವೂ ನಿದ್ದೆಯಲ್ಲಿ ಬೇಡವಾಗುತ್ತದೆ. ವಸ್ತು ಪ್ರಿಯವೆಂದು ಅದನ್ನೇ ಗಟ್ಟಿಯಾಗಿ ಬಿಡದೆ ಹಿಡಿದುಕೊಂಡರೆ ಅದನ್ನು ಬಿಡುವವರೆಗೂ ನಿದ್ದೆ ಬರುವುದೇ ಇಲ್ಲ. ಅತ್ಯಂತ ಪ್ರೀತಿ ಪಾತ್ರವಾದ ಮಗುವೇ ಆಗಿರಬಹುದು; ಹೆಂಡತಿಯೇ ಆಗಿರಬಹುದು, ಹೀಗೆ ಯಾರೇ ಆದರೂ ನಿದ್ದೆಯಲ್ಲಿ ನಾವು ಅದನ್ನು ಬಿಡಲೇಬೇಕು. ಹಾಗಾಗಿ ತ್ಯಾಗಮಯ ಜೀವನವೇ ಸುಖಕ್ಕೆ ಕಾರಣ. ಭೋಗಮಯ ಜೀವನವೇ ಅಥವಾ ತ್ಯಾಗಕ್ಕೆ ವಿರುದ್ಧವಾದ ಭೋಗಮಯ ಜೀವನವೇ ದುಃಖಕ್ಕೆ ಕಾರಣ. ಆದ್ದರಿಂದ ತ್ಯಾಗದಲ್ಲಿ ಸುಖವಿದೆ. ಬೇಕುಗಳಲ್ಲಿ ದುಃಖವಿದೆ. ಬೇಕುಗಳನ್ನು ನಾವು ತೃಪ್ತಿಪಡಿಸುವುದು ಅತ್ಯಂತ ಕಠಿಣ. ಇದನ್ನೇ ಅಸಂತೋಷ ಎಂಬುದಾಗಿ ಇಲ್ಲಿ ಕರೆಯಲಾಗಿದೆ. "ಯಲ್ಲಭಸೇ ನಿಜಕರ್ಮೋಪಾತ್ತಂ ವಿತ್ತಂ, ತೇನ ವಿನೋದಯ ಚಿತ್ತಂ" ಎಂಬ ಶಂಕರಭಗವತ್ಪಾದರ ಮಾತನ್ನು ಶ್ರೀರಂಗಮಹಾಗುರುಗಳು ಪುನಃಪುನಃ ಹೇಳುತ್ತಿದ್ದರು. ಅಂದರೆ ಸತ್ಯನಿಷ್ಠವಾದ ಅಥವಾ ಪ್ರಾಮಾಣಿಕವಾದ ಕರ್ಮದಿಂದ ಸಂಗ್ರಹಿಸಿರುವ ಅರ್ಥ ಅಥವಾ ಪದಾರ್ಥಗಳಿಂದ ಮಾತ್ರವೇ ವಿನೋದವನ್ನು ಪಡಬೇಕು. ಅದು ಸಂತೋಷಕ್ಕೂ ತೃಪ್ತಜೀವನಕ್ಕೂ ಕಾರಣವಾಗುತ್ತದೆ ಎಂದು. 


ಸೂಚನೆ : 08
/6/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.