Sunday, June 1, 2025

ಪ್ರಶ್ನೋತ್ತರ ರತ್ನಮಾಲಿಕೆ 18 (Prasnottara Ratnamalike 18)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೧೮. ಗುರುತ್ವದ ಮೂಲ ಯಾವುದು?

ಉತ್ತರ - ಏನನ್ನೂ ಯಾಚಿಸದಿರುವುದು.

ಈ ಪ್ರಶ್ನೆಯು ಸ್ವಲ್ಪ ವಿಚಾರಣೀಯವಾಗಿದೆ. ಏಕೆಂದರೆ ಗುರುತ್ವಕ್ಕೂ ಬೇಡುವುದಕ್ಕೂ ಏನು ಸಂಬಂಧ? ಎಂಬುದು ಈ ಪ್ರಶ್ನೋತ್ತರದಲ್ಲಿ ಇರುವ ವಿಷಯವಾಗಿದೆ. ಹಾಗಾಗಿ ಯಾಚಿಸದೆ ಇರುವಂತದ್ದು ಗುರುತ್ವ ಮತ್ತು ಅದರ ಮೂಲ ಹೇಗೆ ಆಗುತ್ತದೆ! ಎಂಬುದನ್ನು ನಾವಿಲ್ಲಿ ವಿವೇಚಿಸಬೇಕಾಗಿದೆ. ಗುರುತ್ವ ಎಂದರೆ ಗೌರವ - ಗುರುಭಾವ. ಅಂದರೆ ವ್ಯಕ್ತಿತ್ವದ ಉತ್ಕೃಷ್ಟತೆ ಅಥವಾ ಒಂದು ಪರಿಪೂರ್ಣತೆ. ಗುರು ಎಂದರೆ ಅದಕ್ಕೆ ತುಂಬಾ ವಿಶಾಲವಾದ ಅರ್ಥವಿದೆ. ಯಾವಾಗ ಒಬ್ಬ ಗುರು ಎನಿಸಿಕೊಳ್ಳುತ್ತಾನೆ ಮತ್ತು ಅವನಿಗೆ ಗೌರವ ಎನ್ನುವುದು ಯಾವಾಗ ಸಂದಾಯವಾಗುತ್ತದೆ? ಎಂಬುದು ಇಲ್ಲಿನ ವಿಷಯ. ಇಲ್ಲಿ ಗುರು ಎಂಬ ಶಬ್ದದ ಪ್ರಸಿದ್ಧವಾದ ಅರ್ಥವು ವಿವಕ್ಷಿತವಲ್ಲ. ಸಿರಿತನದ ಅರ್ಥ ಈ ಗೌರವ ಎಂಬ ಶಬ್ದಕ್ಕೆ ಇದೆ ಎಂಬುದಾಗಿ ಭಾವಿಸಬೇಕು. ಅಂದರೆ ಈ ಹಿರಿತನವನ್ನು ನಾವು ಹಾಗೆಯೇ ಇಟ್ಟುಕೊಳ್ಳಬೇಕು ಅಂತಾದರೆ ನಾವು ಯಾರಲ್ಲೂ, ಏನನ್ನೂ ಯಾಚಿಸದೆ ಇರುವಂತಹ ಸ್ಥಿತಿಯನ್ನು ಪಡೆಯಬೇಕು. ಅದಕ್ಕೆ ಪ್ರತಿದಿನ ನಾವು ಪೂಜೆಯನ್ನು ಮಾಡುವಾಗ ಕೊನೆಯಲ್ಲಿ ಪ್ರಾರ್ಥನಾರೂಪವಾಗಿ ಈ ವಾಕ್ಯವನ್ನು ಹೇಳುತ್ತೇವೆ. 'ವಿನಾ ದೈನ್ಯೇನ ಜೀವನಂ ದೇಹಿ ಮೇ ಶಂಭೋ' ಎಂದು. ಬೇಡುವುದನ್ನು ದೈನ್ಯ ಎಂಬುದಾಗಿ ಹೇಳಿದ್ದಾರೆ. ಅಂದರೆ 'ದೈನ್ಯವಿಲ್ಲದ ಜೀವನವನ್ನು ನನಗೆ ಕಟ್ಟಿಕೊಡು!. ಯಾವುದೇ ವಿಷಯದಲ್ಲೂ ಪರಾಧೀನತೆ ಬೇಡ; ತನ್ನ ಕಾಲು ಮೇಲೆ ತಾನು ಸ್ವತಃ ನಿಂತುಕೊಳ್ಳುವ ಸ್ಥಿತಿಯನ್ನು ಕೊಡು ಎಂದು ನಾವು ಪ್ರಾರ್ಥಿಸಿಕೊಳ್ಳುತ್ತೇವೆ. ಹಾಗಾದರೆ ಯಾವಾಗ ಈ ದೈನ್ಯವೆಂಬುದು ಬರುತ್ತದೆ? ಎಂದರೆ ತನಗೆ ಸಾಮರ್ಥ್ಯವಿದೆ, ಅವಕಾಶವಿದೆ, ಪ್ರಕೃತಿಯೂ ಕೂಡ ಅದನ್ನು ಒಪ್ಪಿದೆ. ಆದರೆ ಅದನ್ನು ಬಳಸಿಕೊಳ್ಳದೆ ಬೇರೊಬ್ಬರಲ್ಲಿ ಅವಕಾಶವನ್ನು ಪಡೆಯುವಂತಹದ್ದು ಏನಿದೆಯೋ ಅದುವೇ ದೈನ್ಯ. ಇದೇ ಗೌರವವನ್ನು ಕಳೆಯುವ ಯಾಚನೆ ಎಂಬುದಾಗಿ ಇಲ್ಲಿ ಹೇಳಬಹುದು. ಆದರೆ ಬ್ರಹ್ಮಚಾರಿಯಾದವನು ಅಥವಾ ಸನ್ಯಾಸಿಯಾದವನು ಯಾಚಿಸಬೇಕು; ಅದು ಅವನ ಧರ್ಮ; ಅದರಿಂದಲೇ ಅವನ ಜೀವನಪಥ ಸಾಗಬೇಕಾಗಿದೆ. ಆದ್ದರಿಂದ ಅಲ್ಲಿನ ಯಾಚನೆಯು ಭಿಕ್ಷಾ ಎಂದು ಕರೆಸಿಕೊಳ್ಳುತ್ತದೆ. ಅದು ಅಲ್ಲಿ ದೈನ್ಯಜೀವನವಾಗುವುದಿಲ್ಲ. ಗೌರವಕ್ಕೆ ಯಾವುದೇ ಚ್ಯುತಿಯೂ ಇರುವುದಿಲ್ಲ.


ಆದರೆ ಗೃಹಸ್ಥನಾದವನು ಯಾಚಿಸುವುದು ಸರಿಯಲ್ಲ. ಸ್ವತಃ ತಾನೇ ತನಗೆ ಮತ್ತು ತನ್ನ ಪರಿವಾರವರ್ಗಕ್ಕೆ ಮತ್ತು ಯಾರು ಯಾರು ಅಪೇಕ್ಷಿತರಾಗಿ ಬರುತ್ತಾರೋ ಅವರೆಲ್ಲರನ್ನು ಕೊಟ್ಟು ಸಂತೃಪ್ತಿಪಡಿಸಬೇಕಾದದ್ದು ಅವನ ಕರ್ತವ್ಯವಾಗಿರುತ್ತದೆ. ಆ ಮಟ್ಟದಲ್ಲಿ ಆತ ತನ್ನ ಸಾಮರ್ಥ್ಯವನ್ನು ಪಡೆದು ಹಿಗ್ಗಿಸಿಕೊಳ್ಳಬೇಕಾಗುತ್ತದೆ. ಅದಕ್ಕೆ ಬೇಕಾದ ವಿದ್ಯೆಯನ್ನೂ ಸಂಪಾದಿಸಿ, ಅದರ ಬಲದ ಮೇಲೆ ಇಂತಹ ಧರ್ಮಕಾರ್ಯವನ್ನು ಮಾಡಬೇಕಾಗುತ್ತದೆ. ಹಾಗಲ್ಲದೇ ಸಕಾಲದಲ್ಲಿ ಸರಿಯಾಗಿ ವಿದ್ಯಾರ್ಜನೆಯನ್ನು ಮಾಡದೆ, ಸಕಾಲದಲ್ಲಿ ಧನಸಂಪಾದನೆಯನ್ನೂ ಮಾಡದಿದ್ದರೆ ಆತ ಮುಂದೆ ತನ್ನ ಮತ್ತು ತನ್ನ ಪರಿವರವನ್ನು ರಕ್ಷಿಸಿಕೊಳ್ಳಲು ಬೇಡುವುದು ಅನಿವಾರ್ಯವಾಗುತ್ತದೆ. ಆಗ ಆತ ತನ್ನ ದೀನತೆಯನ್ನು ತೋರಿಕೊಳ್ಳಬೇಕು, ತೋಡಿಕೊಳ್ಳವೇಕು. ಇರುವ ಮಾನವನ್ನೂ ಬದಿಗಿರಿಸಿಕೊಳ್ಳಬೇಕಾಗುತ್ತದೆ. ಇದು ತಾನೆ ಗೌರವವನ್ನು ಕೆಡಿಸಿಕೊಳ್ಳುವ ಸಂದರ್ಭ. 


ಸೂಚನೆ : 1/6/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.