Sunday, June 8, 2025

ವ್ಯಾಸ ವೀಕ್ಷಿತ 140 ಕೃಷ್ಣನನ್ನು ಬೀಳ್ಕೊಟ್ಟರು, ಪಾಂಡವರು (Vyaasa Vikshita 140)


ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಕೃಷ್ಣನನ್ನು ಬೀಳ್ಕೊಟ್ಟರು, ಪಾಂಡವರು

ಖಾಂಡವಪ್ರಸ್ಥದಲ್ಲಿ ಸಾಕಷ್ಟು ಕಾಲ ಕಳೆದಿದ್ದ ಕೃಷ್ಣನಿಗೆ ತನ್ನ ತಂದೆಯನ್ನೊಮ್ಮೆ ಹೋಗಿ ನೋಡಬೇಕೆನಿಸಿತು.

ಹೊರಡುವ ಮುನ್ನ ಕುಂತಿಯನ್ನು ಮೊದಲು ಕಂಡು, ಬಳಿಕ ಭಗಿನಿಯಾದ ಸುಭದ್ರೆಯನ್ನು ಕಂಡನು. ಸುಭದ್ರೆಯೊಂದಿಗೆ ಅವನಾಡಿದ ಮಾತು ಮಿತವಾಗಿತ್ತಾದರೂ ಅದು ತಥ್ಯವೂ ಹಿತವೂ ಆಗಿತ್ತು, ಯುಕ್ತಿ-ಯುಕ್ತವೂ ಆಗಿತ್ತು.

ಸುಭದ್ರೆಯೂ ಭದ್ರವಾದ ಮಾತುಗಳನ್ನಾಡುವವಳೇ. ಭದ್ರವೆಂದರೆ ಮಂಗಳಕರವಾದದ್ದು. ತವರಿನಲ್ಲಿ ತನ್ನವರಿಗೆ ಯಾರು ಯಾರಿಗೆ ಯಾವ ಯಾವ ಮಾತುಗಳನ್ನು ತಿಳಿಸಬೇಕೋ ಅದೆಲ್ಲವನ್ನೂ ತಿಳಿಸಿದಳು. ಅವಳು ಅವನಿಗೆ ಮತ್ತೆ ಮತ್ತೆ ವಂದಿಸಿದಳು. ಶಿರಸಾ ಪ್ರಣಾಮವನ್ನು ಮಾಡಿದಳು.

ಅವಳನ್ನು ಸಂತೋಷಪಡಿಸಿ ಅವಳ ಅನುಮತಿಯನ್ನು ಪಡೆದು ಹೊರಟ ಕೃಷ್ಣನು ಧೌಮ್ಯ-ಋಷಿಯನ್ನು ಹೋಗಿ ಕಂಡನು. ಅವರಿಗೆ ಯಥೋಚಿತವಾಗಿ ವಂದಿಸಿದನು.

ಆಮೇಲೆ ದ್ರೌಪದಿಯಲ್ಲಿಗೆ ಹೋಗಿ, ಅವಳಿಗೆ ಸಾಂತ್ವನದ ಮಾತುಗಳನ್ನು ಹೇಳಿದನು. ಹೊರಡಲು ಅನುಮತಿಯನ್ನು ಅವಳಿಂದ ಪಡೆದುಕೊಂಡನು. ಅರ್ಜುನನನ್ನು ಜೊತೆಮಾಡಿಕೊಂಡು, ಆತನ ಸಹೋದರರನ್ನು ಹೋಗಿ ಕಂಡನು. ಈ ಐದು ಜನ ಸಹೋದರರಿಂದ ಪರಿವೃತನಾದ ಕೃಷ್ಣನು ದೇವತೆಗಳಿಂದ ಸುತ್ತುವರಿಯಲ್ಪಟ್ಟ ಇಂದ್ರನಂತೆ ಕಂಡನು.

ಯಾತ್ರಾಕಾಲಕ್ಕೆ ಯೋಗ್ಯವಾದ ಕೆಲಕರ್ಮಗಳುಂಟು; ಅವನ್ನು ಮಾಡಲೆಂದು ಕೃಷ್ಣನು ಸ್ನಾನಮಾಡಿದನು. ವಸ್ತ್ರ ಹಾಗೂ ಅಲಂಕಾರಗಳನ್ನು ಧರಿಸಿದನು. ಪುಷ್ಪಮಾಲೆ, ಜಪ, ನಮಸ್ಕಾರ, ಚಂದನ ಮುಂತಾದ ಬಗೆಬಗೆಯ ಸಾಧನಗಳಿಂದ ದೇವತೆಗಳನ್ನು ಅರ್ಚಿಸಿದನು.

ಪ್ರತಿಷ್ಠಿತವ್ಯಕ್ತಿಗಳಲ್ಲಿ ಶ್ರೇಷ್ಠನೆನಿಸಿದ ಕೃಷ್ಣನು ಹೀಗೆ ತನ್ನ ಕೆಲಸಗಳನ್ನೆಲ್ಲವನ್ನೂ ಮುಗಿಸಿಕೊಂಡು, ಗೃಹದ ಬಾಹ್ಯಕಕ್ಷೆಯಿಂದ ಹೊರಕ್ಕೆ ಹೊರಟನು. ವಿಪ್ರರು ಆತನಿಗೆ ಆಗ ಸ್ವಸ್ತಿವಾಚನವನ್ನು ಮಾಡಿದರು. ಮೊಸರು ತುಂಬಿದ ಪಾತ್ರೆ, ಫಲಗಳು, ಅಕ್ಷತಗಳು - ಇವುಗಳನ್ನೂ ಧನವನ್ನೂ ಆ ವಿಪ್ರರಿಗಿತ್ತು ಅವರಿಗೆ ಕೃಷ್ಣನು ಪ್ರದಕ್ಷಿಣವನ್ನು ಮಾಡಿದನು.

ಆಮೇಲೆ ತನ್ನ ಚಿನ್ನದ ರಥವನ್ನು ಹತ್ತಿದನು. ಅದರ ಧ್ವಜದಲ್ಲಿ ಗರುಡನಿರುವನು. ಗದೆ, ಚಕ್ರ, ಖಡ್ಗ, ಶಾರ್ಙ್ಗವೆಂಬ ಧನುಸ್ಸು - ಮುಂತಾದ ಆಯುಧಗಳಿಂದ ಆವೃತವಾದ ರಥವದು. ಶೈಬ್ಯ, ಸುಗ್ರೀವ ಮುಂತಾದ ಕುದುರೆಗಳಿಂದ ಕೂಡಿದುದು. ಶುಭತಿಥಿ, ಶುಭನಕ್ಷತ್ರ, ಶುಭಮುಹೂರ್ತಗಳೆಂಬ ಗುಣಗಳಿಂದ ಕೂಡಿದ ಸಮಯದಲ್ಲಿ ಕೃಷ್ಣನು ಆ ರಥವನ್ನು ಹತ್ತಿ ಹೊರಟನು.

ಸಾರಥಿಗಳಲ್ಲಿ ಶ್ರೇಷ್ಠನಾದವನು ದಾರುಕ. ಅತನನ್ನು ಕಳುಹಿಸಿ, ರಾಜಾ ಯುಧಿಷ್ಠಿರನು ಪ್ರೇಮದಿಂದ ತಾನೂ ಕೃಷ್ಣನ ರಥವನ್ನು ಆ ಬಳಿಕ ಹತ್ತಿದನು. ತಾನೇ ಕುದುರೆಗಳ ಲಗಾಮನ್ನು ಹಿಡಿದನು. ಬಳಿಕ ಅರ್ಜುನನೂ ರಥವನ್ನು ಹತ್ತಿದನು. ಚಿನ್ನದಿಂದಾದ ದಂಡವುಳ್ಳ ಶ್ವೇತಚಾಮರ, ವ್ಯಜನ (ಬೀಸಣಿಗೆ) - ಇವುಗಳನ್ನು ಕೈಯಲ್ಲಿ ಹಿಡಿದನು. ಮತ್ತವನ್ನಾದರೂ ಪ್ರದಕ್ಷಿಣವಾಗಿ ಬೀಸಿದನು.

ಮಹಾಪರಾಕ್ರಮಿಯಾದ ಕೃಷ್ಣನು ಈ ಸಹೋದರರೆಲ್ಲರಿಂದಲೂ ಅನುಸರಿಸಲ್ಪಟ್ಟವನಾಗಿ, ಪ್ರಿಯಶಿಷ್ಯರಿಂದ ಗುರುವೊಬ್ಬನು ಅನುಸರಿಸಲ್ಪಟ್ಟಾಗ ಹೇಗೆ ತೋರುವನೋ ಹಾಗೆ ತೋರುತ್ತಿದ್ದನು.

ಬಹಳವಾಗಿಯೇ ಖಿನ್ನನಾಗಿದ್ದ ಅರ್ಜುನನನ್ನು ಕೃಷ್ಣನು ಆಲಿಂಗಿಸಿಕೊಂಡನು.  ಯುಧಿಷ್ಠಿರನನ್ನೂ ಭೀಮನನ್ನೂ ಹಾಗೂ ಯಮಳರನ್ನೂ - ಎಂದರೆ ನಕುಲಸಹದೇವರನ್ನೂ - ಆದರಿಸಿದನು. ಅವರುಗಳೂ ಕೃಷ್ಣನನ್ನು ಗಾಢವಾಗಿ ಆಲಿಂಗಿಸಿಕೊಂಡರು. ಯಮಳರು ಅವನಿಗೆ ಅಭಿವಾದನವನ್ನು ಮಾಡಿದರು.

ಸೂಚನೆ : 08/6/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.