Sunday, June 8, 2025

ಅಷ್ಟಾಕ್ಷರೀ 82 ದಿವ್ಯಂ ದದಾಮಿ ತೇ ಚಕ್ಷುಃ (Ashtakshari 82)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ದಿವ್ಯನೇತ್ರದಿಂದಲೇ ಗೋಚರಿಸಬಲ್ಲ ದೇವದೇವನ ಯೋಗೈಶ್ವರ್ಯ


ಕಾಲು ಸರಿಯಿಲ್ಲದೆ ನಡೆಯಲು ಪಾಡುಪಡುವವನನ್ನು ಕುಂಟ ಎನ್ನುತ್ತೇವೆ. ಕೈಸರಿಯಿಲ್ಲದವ ಕುಣಿ. ಕಣ್ಣು-ಕಿವಿಗಳು ಸರಿಯಿಲ್ಲದವರು ಕುರುಡ-ಕಿವುಡರು. ಹೀಗೆ ಯಾವೊಂದು ಅಂಗದಲ್ಲಿ ಊನತೆಯಿದ್ದರೂ ಅಂತಹ ವಿಕಲಾಂಗರು ಶೋಚನೀಯರೇ. ಆದರೆ ಇವರಲ್ಲೆಲ್ಲಾ ಅತ್ಯಂತ-ಶೋಚ್ಯರೆಂದರೆ ಕುರುಡರೇ. ಏಕೆ? ಅವರೇ ಅತ್ಯಂತ-ಪರಾಧೀನರಾಗತಕ್ಕವರು.


ಕಣ್ಣಿನ ಪ್ರಾಧಾನ್ಯವನ್ನು ಹೇಳುವ ನುಡಿಗಟ್ಟುಗಳೂ ಪ್ರಚುರವೇ: ಹೆಣ್ಣು ಕುಟುಂಬದ ಕಣ್ಣು; ರಾಜ್ಯಕ್ಕೆ ರಾಜನೇ ಕಣ್ಣು. ಮಹಾಭಾರತದ ಧೃತರಾಷ್ಟ್ರನು ಹುಟ್ಟುಕುರುಡ. ಅದನ್ನು ಸಾಂಕೇತಿಕವಾಗಿಯೂ ನೋಡುವುದುಂಟಷ್ಟೆ. ವಿವೇಕವೇ ಒಂದು ಕಣ್ಣು- ಎಂದರಿವಾದಾಗ, ಅದನ್ನು ಕಳೆದುಕೊಂಡವನನ್ನು ಕಾಮಾಂಧನೆಂದೋ ಕ್ರೋಧಾಂಧನೆಂದೋ ಮದಾಂಧನೆಂದೋ ಚಿತ್ರಿಸುವುದುಂಟಲ್ಲವೇ?


ವಾಸ್ತವವಾಗಿ ಕಣ್ಣು ಗ್ರಹಿಸುವುದೇನನ್ನು? ಕೇವಲ ಬೆಳಕಿನ ಹೆಚ್ಚು-ಕಡಿಮೆಗಳನ್ನು. ಅದರ ವ್ಯಾಪ್ತಿಯೇನು?  ಎರಡು ಕಣ್ಣುಗಳಿರುವುದರಿಂದ, ಅಡ್ಡಡ್ಡಲಾಗಿ ನೂರೆಂಭತ್ತು ಡಿಗ್ರಿಗಳಿಗಿಂತ ಸ್ವಲ್ಪ ಜಾಸ್ತಿ; ಉದ್ದುದ್ದವಾಗಿ ನೂರೆಂಭತ್ತು ಡಿಗ್ರಿಗಳಿಗಿಂತ ಸಾಕಷ್ಟು ಕಮ್ಮಿ. ಅದು ಪಡೆಯುವುದೇನನ್ನು? ಒಂದು ವಸ್ತುವಿನ ತಲೆಕೆಳಕಾದ ಚಿತ್ರವನ್ನು! ಅದೂ ಆಯಾಮ-ದ್ವಯದ ಪಟದ ಮೇಲೆ (two-dimensional screen)!


ಇದಿಷ್ಟೂ ಭೌತಿಕವಾದ ಕೆಲಸ. ಆಮೇಲೆ ಇದೆಲ್ಲವೂ ವೈದ್ಯುತ ಹಾಗೂ ರಾಸಾಯನಿಕ (electro-chemical) ಕ್ರಿಯೆಗಳಾಗಿ ಶಿರಸ್ಸಿಗೆ ತಲುಪುತ್ತವೆ. ಅಲ್ಲಿ ಅವನ್ನು ಅರ್ಥೈಸುವ ಕೆಲಸವು ನಡೆಯುತ್ತದೆ.


ಮತ್ತಾವುದೇ ಇಂದ್ರಿಯಕ್ಕಿಂತಲೂ ಹೆಚ್ಚಾಗಿ ಕಣ್ಣಿಗೆ ಸಂಬಂಧಿಸಿದ ನರಗಳೇ ಅತಿಹೆಚ್ಚಿನ ಸಂಖ್ಯೆಯಲ್ಲಿರುವುವೆಂಬುದೂ ಗಮನಾರ್ಹ: ಹಲವು ಲಕ್ಷ. (ಕಿವಿಗೆ ಸಂಬಂಧಿಸಿದವು ಕೆಲವು ಸಹಸ್ರ ಮಾತ್ರ). ಒಟ್ಟಿನಲ್ಲಿ ಜಗತ್ತನ್ನು ನಾವು ಅರಿತುಕೊಳ್ಳುವಲ್ಲಿ ಕಣ್ಣಿನಷ್ಟು ಪ್ರಭೂತವಾಗಿ ಮತ್ತು ಮೌಲಿಕವಾಗಿ ಕೆಲಸಮಾಡುವ ಇಂದ್ರಿಯವು ಮತ್ತೊಂದಿಲ್ಲ.


ಇಷ್ಟಾಗಿಯೂ ಕಣ್ಣು ಗುರುತಿಸುವುದು ಹೊರಮೈಯ್ಯನ್ನಷ್ಟೆ. ಶ್ರೀರಂಗಮಹಾಗುರುಗಳು ಕೊಡುವ ನಿದರ್ಶನವು "ಕಣ್ಣುತೆರೆಸು"ವಂತಹುದು: "ಬರೀ ಮೇಲ್ನೋಟದಿಂದ ಹೇಳಿದರೆ ಮೈಯಲ್ಲಿ ಮೂಳೆಯಿಲ್ಲವೆಂದು ಹೇಳಬಹುದು. ಆದರೆ ಎಕ್ಸ್-ರೇ ಮೂಲಕ ನೋಡಿದಾಗಿ ಮೈಯ ಒಳಪದರಗಳನ್ನು ನೋಡಬಹುದು."


ಹಾಗೆ ನೋಡಿದರೆ ಮೂಳೆಯೆಂಬುದು ಗಟ್ಟಿಯಾದ ವಸ್ತು, ಬೆಳ್ಳಗಿರುವಂತಹುದು. ಹೀಗಾಗಿ ಇದೊಂದು ಸ್ಥೂಲ-ಪದಾರ್ಥವೇ. ಆದರೆ ಈ ಶರೀರಾಂತರ್ಗತನಾದ ಜೀವನು ಸೂಕ್ಷ್ಮ-ಪದಾರ್ಥ. ಈ ಕಣ್ಣು ಅದನ್ನೆಂತು ಕಾಣುವುದು? ಹೀಗಿರಲು, ಜೀವಾತ್ಮನಿಗೂ ಅಂತರ್ಯಾಮಿಯಾಗಿರುವ ಪರಮಾತ್ಮನನ್ನು ಕಾಣುವುದೆಂತು? ಪರಮಾತ್ಮನು ಸೂಕ್ಷ್ಮತಮ-ಪದಾರ್ಥ: "ಪರ"-ವಸ್ತು. ಹೀಗಾಗಿ ಕಣ್ಣು ಕಾಣುವುದು ಸ್ಥೂಲವನ್ನು; ಸೂಕ್ಷ್ಮವನ್ನಲ್ಲ; ಪರವನ್ನಂತೂ ಅಲ್ಲವೇ ಅಲ್ಲ.


ಪರಮಾತ್ಮನನ್ನು ಕಾಣಲು ಜ್ಞಾನ-ಚಕ್ಷುಸ್, ತಪಶ್ಚಕ್ಷುಸ್ಸುಗಳು ಬೇಕೆಂದು ಆಯುರ್ವೇದ-ಗ್ರಂಥಗಳು ಸಹ ಹೇಳುವುವು - ಎಂಬುದನ್ನು ಶ್ರೀರಂಗಮಹಾಗುರುಗಳು ಜ್ಞಾಪಿಸುತ್ತಿದ್ದರು. ಚಕ್ಷುಸ್ ಎಂದರೆ ಕಣ್ಣು.


ಭಗವದ್ಗೀತೆಯ ಸಂನಿವೇಶವನ್ನು ನೋಡೋಣ. ಕೃಷ್ಣನ ಮಾತುಗಳಿಂದಾಗಿ ತನ್ನ ಮೋಹವು ಕಳೆಯಿತೆಂದು ಅರ್ಜುನನೇನೋ ಹೇಳುತ್ತಾನೆ. ಕೃಷ್ಣನನ್ನು ಪರಮೇಶ್ವರನೆಂದು ಸಂಬೋಧಿಸಿದ ಅರ್ಜುನನು, ಆತನ ಐಶ್ವರ-ರೂಪವನ್ನು ಕಾಣಬಯಸುತ್ತಾನೆ. (ಐಶ್ವರ್ಯವೆಂಬುದು ಬೇರೆ: ಒಡೆತನ, ಸಿರಿ). 


"ಅದನ್ನು ಕಾಣುವುದು ನನಗೆ ಶಕ್ಯವೆಂದು ನೀ ಭಾವಿಸುವೆಯಾದರೆ, ಓ ಯೋಗೇಶ್ವರಾ, ಅದನ್ನು ತೋರಿಸು" - ಎನ್ನುತ್ತಾನೆ. ಅದಕ್ಕೆ ಆ ಮಹಾಯೋಗೇಶ್ವರನು, "ಯಾರೂ ಕಾಣದ ಆಶ್ಚರ್ಯಮಯವಾದ ರೂಪವನ್ನು ನನ್ನೀ ದೇಹದಲ್ಲಿಲ್ಲಿಯೇ ನೋಡು. ನಿನ್ನ ಸ್ವ-ಚಕ್ಷುವಿನಿಂದ ಇದನ್ನು ನೀ ನೋಡಲಾರೆಯಾಗಿ, ದಿವ್ಯಚಕ್ಷುಸ್ಸನ್ನಿದೋ ನಿನಗೆ ಕೊಡುತ್ತೇನೆ (ದಿವ್ಯಂ ದದಾಮಿ ತೇ ಚಕ್ಷುಃ)" - ಎನ್ನುತ್ತಾನೆ.


ದುರ್ಯೋಧನನ ಸಭೆಯಲ್ಲಿಯೂ ತನ್ನ ದಿವ್ಯರೂಪವನ್ನು ತೋರಿಸಿದಾಗ ದಿವ್ಯದೃಷ್ಟಿಯಿರದವರಾರೂ ಅದನ್ನು ನೋಡಲಾಗದೆ ಕಣ್ಮುಚ್ಚಿಕೊಂಡರು; ಭೀಷ್ಮ-ದ್ರೋಣ-ವಿದುರರು ಹಾಗೂ ಧೃತರಾಷ್ಟ್ರ - ಇವರಿಗೆ ಮಾತ್ರ ಕೃಷ್ಣದಯೆಯಿಂದ ನೋಡಲಾಯಿತು - ಎಂಬುದು ಮಹಾಭಾರತದಲ್ಲಿ ನಿರೂಪಿತವಾಗಿದೆ.


ಇಲ್ಲಿ ದಿವ್ಯಚಕ್ಷುಸ್ಸೆಂದರೆ ಅದೇನೋ ಒಂದು ಕನ್ನಡಕದಂತಿರುವ ಭೌತಿಕವಸ್ತುವೆಂದುಕೊಳ್ಳುವುದಲ್ಲ! ಅದು ಅ-ಪ್ರಾಕೃತವಾದದ್ದು.


ಗೀತೆಯ ಈ ಅಧ್ಯಾಯದ ಹೆಸರೇ ವಿಶ್ವರೂಪದರ್ಶನ-ಯೋಗ - ಎಂಬುದಾಗಿ.

ಕಣ್ಣು ತಾನಾಗಿ ನೋಡಬಲ್ಲ ವಸ್ತುಗಳು ಸ್ಥೂಲ, ಸೀಮಿತ. ಎಂದೇ ಈ ನೇತ್ರವನ್ನು ಕೇವಲ ಚರ್ಮ-ಚಕ್ಷುಸ್, ಮಾಂಸ-ಚಕ್ಷುಸ್ - ಎನ್ನುತ್ತಾರೆ. ಭಗವಂತನ ವಿಶ್ವರೂಪ-ಯೋಗೈಶ್ವರ್ಯವನ್ನು ಕಾಣಲು ಬೇಕಾದುದು ದಿವ್ಯ-ಚಕ್ಷುಸ್, ಅರ್ಥಾತ್ ಜ್ಞಾನ-ನೇತ್ರ.


ಭಗವಂತನ ರೂಪ-ಸ್ವರೂಪಗಳನ್ನು ಊಹಿಸಲೂ ನಮಗಾಗದು.  ದೇವತೆಗಳಿಗೂ ಎಟುಕಿಸಿಕೊಳ್ಳಲಾಗದದು! ಶ್ರೀರಂಗಸದ್ಗುರುಗಳು ಹೇಳುವಂತೆ, "ನರರಥದಲ್ಲೇ ಕುಳಿತಿರುವ ನಾರಾಯಣನು ಆ ಮತ್ತೊಂದು ದೃಷ್ಟಿಯನ್ನು ಕರುಣಿಸಬೇಕು." ಅರ್ಥಾತ್, ಆತನೆಲ್ಲೋ ದೂರದಲ್ಲಿರುವವನೆಂದೇನಲ್ಲ. ನಮ್ಮಲ್ಲೇ ಇರುವ ಆತನಲ್ಲಿಯ ಅನನ್ಯ-ಭಕ್ತಿಯಿಂದಲೇ ಶಕ್ಯವದು.


 ದೇವದೇವನೂ ಯೋಗೇಶ್ವರನೂ ಆದ ಹೃದಿಸ್ಥನ ಯೋಗೈಶ್ವರ್ಯವನ್ನು ಕಂಡು ಆನಂದಿಸಲು ದಿವ್ಯಚಕ್ಷುಸ್ಸಿನ ಯೋಗಕ್ಕಾಗಿ ನಾವು ಹಂಬಲಿಸಬೇಕಲ್ಲವೇ?


ಸೂಚನೆ: 7/6//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.