ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಬೆಳಗಾಗೆದ್ದು ನಾವು ಮೊದಲು ಮಾಡುವುದೇ ಭಗವಂತನ ಸ್ಮರಣೆ, ಭಗವನ್ಮೂರ್ತಿಯ ದರ್ಶನ. ಮತ್ತಾರನ್ನೋ ಸ್ಮರಿಸುವುದೂ ಅಲ್ಲ, ದರ್ಶಿಸುವುದೂ ಅಲ್ಲ. ಮಿಕ್ಕವರಲ್ಲಿ ಗುಣ-ದೋಷಗಳ ಮಿಶ್ರಣವಿರುತ್ತದೆ. ಪುಣ್ಯಪಾಪಾತೀತನೂ, ಶುದ್ಧನೂ, ಮಂಗಲಮಯನೂ ಆದ ಭಗವಂತನನ್ನೇ, ಆತನ ಚಿತ್ರವನ್ನೇ, ನಮ್ಮ ಚಿತ್ತದಲ್ಲಿ ಮೊಟ್ಟ ಮೊದಲು ಮುದ್ರಿಸಿಕೊಳ್ಳಬೇಕಾದದ್ದು.
ಇದನ್ನೇ ಲೀಲಾಶುಕನನ್ನು ಕೇಳಿದರೆ, ಅವನು ಕೊಡುವ ಉತ್ತರದಲ್ಲಿ ಏನೋ ವಿಶೇಷವಿರುತ್ತದೆ. ತಾನು ನೆನೆಯುವುದು ಕೃಷ್ಣನನ್ನೇ, ಬಾಲಕೃಷ್ಣನನ್ನೇ - ಎನ್ನುತ್ತಾನೆ, ಅವನು.
ಏಕೆ? ಎಂತಹ ಕೃಷ್ಣನನ್ನು ಸ್ಮರಿಸುತ್ತಾನೆ, ಲೀಲಾಶುಕ? ನಿದ್ರೆಯನ್ನು ಆಗಷ್ಟೆ ಮುಗಿಸಿರುವ ಕೃಷ್ಣನನ್ನೇ. ನಿದ್ದೆಯ ಅವಸಾನವಾದಾಗ ಹೇಗಿರುತ್ತದೆ ಆತನ ಮುಖ? ಅವಸಾನವೆಂದರೆ ಕೊನೆ, ಮುಗಿಯುವುದು. ನಿದ್ದೆ ಮುಗಿಸಿ ಎದ್ದ ಮುದ್ದು ಮಗುವಿನ ಮೊಗವು ರಮಣೀಯವಾಗಿಯೇ ಇರುತ್ತದೆ. ಕಮಲದಂತಿರುತ್ತದೆ. ನಮ್ಮ ಕಣ್ಣುಗಳಿಗೆ ಅಭಿರಾಮವಾಗಿರುತ್ತದೆ, ಎಂದರೆ ಸುಂದರವಾಗಿರುತ್ತದೆ. ಬಾಲಕೃಷ್ಣನ ಮೈ ಹೇಗಿರುತ್ತದೆ? ಹೃದ್ಯವೂ ಅನವದ್ಯವೂ ಆಗಿರುತ್ತದೆ. ಹೃದ್ಯವೆಂದರೆ ಮನೋಹರ. ಅನವದ್ಯವೆಂದರೆ ದೋಷ-ರಹಿತ.
ಕೃಷ್ಣನು ಏಳುವುದೂ ಪ್ರಾತಃಕಾಲದಲ್ಲೇ. ಆತನನ್ನು ಯಾರಾದರೂ ಎಬ್ಬಿಸಿದರೇ? ಇಲ್ಲ. ಆದರೆ ಬೆಳಗಾಗೆದ್ದು ಗೋಪಿಯರು ಮೊಸರು ಕಡೆಯುವರಲ್ಲವೇ? ಆ ದಧಿ-ಘೋಷದಿಂದಲೇ, ಎಂದರೆ ಮೊಸರಿನ ಸದ್ದಿನಿಂದಲೇ, ಆತನಿಗೆ ಎಚ್ಚರವಾಗಿರುವುದು. ಎಂದೇ ಆತನ ಕಣ್ಣುಗಳು ಆಗಷ್ಟೆ ಅರಳಿದ ತಾವರೆಗಳಂತೆ ಇರುವುವು. ಅಂತಹ ಕಮಲಗಳನ್ನು ಉನ್ನಿದ್ರ-ಪದ್ಮವೆನ್ನುತ್ತಾರೆ. "ನಿದ್ರೆ ಮುಗಿಸಿದ ಜಲಜಗಳು" - ಎಂದರ್ಥ, ಅದಕ್ಕೆ.
ಮತ್ತು ಆತನು ಮಾಡುವ ಮೊದಲ ಕೆಲಸವೇ ಬೆಣ್ಣೆಯನ್ನು ಕದಿಯುವುದು! ಅಂತಹ ನವನೀತ-ಚೋರನನ್ನು ಸ್ಮರಿಸುವೆ - ಎನ್ನುತ್ತಾನೆ, ಕವಿ.
ಶ್ಲೋಕವಿದು.
ಪ್ರಾತಃ ಸ್ಮರಾಮಿ ದಧಿ-ಘೋಷ-ವಿಧೂತ-ನಿದ್ರಂ /
ನಿದ್ರಾವಸಾನ-ರಮಣೀಯ-ಮುಖಾರವಿಂದಂ |
ಹೃದ್ಯಾನವದ್ಯ-ವಪುಷಂ ನಯನಾಭಿರಾಮಂ /
ಉನ್ನಿದ್ರ-ಪದ್ಮ-ನಯನಂ ನವನೀತ-ಚೋರಂ ||
ಬೆಳಗ್ಗೆ ಆಗತಾನೆ ಎದ್ದ ನಯನ-ರಮಣೀಯನಾದ ಬಾಲನನ್ನೇ ನಾವು ಬೆಳಗಾಗೆದ್ದು ಸ್ಮರಿಸಿಕೊಳ್ಳುವುದು.
***
ಮತ್ತೊಂದು ಪದ್ಯ:
ತನ್ನ ಕೊಳಲಿನ ನಾದವನ್ನೇ ಆಸ್ವಾದಿಸುತ್ತಿರುವ ಕೃಷ್ಣನನ್ನು ಭಜಿಸುತ್ತೇವೆ - ಎನ್ನುತ್ತಾನೆ, ಲೀಲಾಶುಕ.
ವೇಣುಗಾನ-ವೇಣುನಾದ - ಇವೆರಡರಲ್ಲೂ ಕಿಂಚಿದ್-ಭೇದವಿದೆಯೆಂಬುದನ್ನು ಗಮನಿಸಬಹುದು. ಗಾನವೆಂದರೆ ಹಾಡು. ಹಾಡೆಂದರೆ ಯಾವುದೋ ಭಾವವನ್ನು ಅಭಿವ್ಯಕ್ತಿಗೊಳಿಸುವುದು. ನಾದದಿಂದಲೇ ಗಾನವೆಂಬುದೂ ಯುಕ್ತವಾದದ್ದೇ. ಆದರೆ ಕೆಲವು ವಿಶಿಷ್ಟನಾದಗಳುಂಟು. ಅವುಗಳನ್ನು ಆಲಿಸುವುದರಿಂದ ಆಗುವ ಪರಿಣಾಮವೇ ಬೇರೆ. ಘಂಟಾನಾದ-ವೀಣಾನಾದ-ಮೃದಂಗನಾದ ಮುಂತಾದ ನಾದಗಳು ವಿಶಿಷ್ಟ-ಪರಿಣಾಮಗಳನ್ನು ಉಂಟುಮಾಡಿಸತಕ್ಕವು. ವೀಣಾ-ವೇಣುಗಳು ಒಂದು ಗೀತವನ್ನೇ ಹೊರತರಬಲ್ಲವು. ಭೇರೀನಾದ-ಮೃದಂಗನಾದಗಳು ತಾಲ-ಲಯಗಳ ನಡೆಗಳನ್ನು ಗಾನಗಳೊಂದಿಗೆ ಮೇಳೈಸಿಕೊಡಬಲ್ಲವು. ಹಾಡಿನ ನಡುವೆಯೋ ಸ್ವತಂತ್ರವಾಗಿಯೋ ಕೆಲವು ವೇಣು-ನಾದಗಳು ಉತ್ಕೃಷ್ಟ-ಪ್ರಭಾವವನ್ನು ಬೀರಬಲ್ಲವು. ಲೀಲಾಶುಕನೇ ಮತ್ತೊಂದೆಡೆ ಓಂಕಾರ-ಧ್ವನಿಯನ್ನೇ ಹೊಮ್ಮಿಸುತ್ತಿರುವ ಕೃಷ್ಣನ ಕೊಳಲಿನ ಬಗ್ಗೆ ಹೇಳಿದ್ದಾನೆ. ಆ ವಂಶೀ-ನಿನಾದದ ದಶ-ಪರಿಣಾಮಗಳನ್ನು ಹೇಳಿದ್ದಾನೆ.
ಅಂತೂ ವೇಣು-ನಾದವೆಂಬುದು ಇತ್ತ ಕಿವಿಗೆ ಇಂಪೂ, ಅತ್ತ ಆಧ್ಯಾತ್ಮಿಕವಾಗಿ ತಂಪೂ, ಆದ ಧ್ವನಿ.
ಅದನ್ನೇ ಆಸ್ವಾದಿಸುತ್ತಿದ್ದಾನೆ, ಕೃಷ್ಣ. ಯಾವುದನ್ನು ಸಹೃದಯರಾಗಿ ಆಸ್ವಾದಿಸುವೆವೋ ಅದೇ ರಸ. ರಸವನ್ನು ಆಸ್ವಾದನೆ ಮಾಡುವವನೇ ರಸಿಕ. ತಾನೇ ನುಡಿಸುತ್ತಿರುವ ವೇಣುವಿನ ನಾದಕ್ಕೆ ಕೃಷ್ಣನು ತಾನೇ ರಸಿಕನೂ ಆಗಿದ್ದಾನೆ. ತನ್ನ ವೇಣು-ನಾದವನ್ನು ಆಲಿಸುವ ಭಾಗ್ಯವು ಯಾವ ಯಾವ ಜೀವಿಗಳಿಗುಂಟೋ ಅವುಗಳಿಗೆಲ್ಲ ಒಂದು ಆಧ್ಯಾತ್ಮಿಕೋತ್ಕರ್ಷವೆಂಬುದು ಸಿದ್ಧವೇ ಆಗಿರುವುದು. ಜೀವೋದ್ಧಾರವೆಂಬುದೇ ಭಗವಂತನಿಗೆ ಪ್ರಿಯವಾದ ಕೃತ್ಯ. ಅದು ಕೆಲವು ಸೂಕ್ಷ್ಮ-ನಾದಗಳಿಂದಲೇ ಕೆಲವೊಮ್ಮೆ ಸಿದ್ಧಿಸಿಬಿಡುವಂತಹುದು. ಅಂತಹ ನಾದವು ಕಿವಿಗೆ ಬಿದ್ದಾಗ ಜೀವಿಗಳು ನಲಿಯುವುವು. ಮನುಷ್ಯರು ಮಾತ್ರವಲ್ಲದೆ ಪಶು-ಪ್ರಾಣಿಗಳಿಗೂ ತಣಿಪನ್ನುಣಿಸುವ ನಾದವದು. ಎಂದೇ ಅಂತಹ ನಾದವು ತನ್ನ ವೇಣುವಿನಿಂದ ಹೊಮ್ಮಿದಾಗ, ಕೃಷ್ಣನಿಗೂ ಒಂದು ಕ್ಷಣ ಅದರಲ್ಲೇ ರಮಿಸುವಂತಾಗುತ್ತದೆ. ಹೀಗಾಗಿ ಶ್ರೀಕೃಷ್ಣನು ತಾನೇ ವೇಣುನಾದ-ರಸಿಕನಾಗಿದ್ದಾನೆ.
ಯಾರಾದರೂ ನಾದದಲ್ಲಿ ತನ್ಮಯತೆಯನ್ನು ಹೊಂದಿದರೆ ಹೇಗೆ ತೋರುತ್ತಾರೆ? ಎಂಬುದನ್ನು ಗಮನಿಸಿ ನೋಡಬೇಕಾದುದೇ. ವೇಣುನಾದವನ್ನು ರಸಿಸುತ್ತಿರುವ ಕೃಷ್ಣನು ಹೇಗೆ ತೋರುವನು? - ಎಂಬುದನ್ನು ಲೀಲಾಶುಕನು ಈ ಶ್ಲೋಕದಲ್ಲಿ ಚಿತ್ರಿಸಿದ್ದಾನೆ. ಆಗ ಕೃಷ್ಣನ ಕಣ್ಣುಗಳೆಂತಿರುವುವು, ತುಟಿಯೆಂತಿರುವುದು, ಕೈ ಬೆರಳುಗಳು ಹೇಗಿರುವುವು - ಎಂಬುದನ್ನೆಲ್ಲಾ ಇಲ್ಲಿ ಚಿತ್ರಿಸಿದ್ದಾನೆ.
ಉತ್ಪಲದಂತಿವೆ ಕೃಷ್ಣನ ಕಣ್ಣುಗಳು. ಉತ್ಪಲವೆಂದರೆ ಕನ್ನೈದಿಲೆ. ಲೋಚನೋತ್ಪಲವೆಂದರೆ ಉತ್ಪಲದ ಹಾಗಿರುವ ನಯನ. ಅದು ಸಾಚಿ-ಸಂಚಲಿತವಾಗಿದೆ. ಸಾಚಿಯೆಂದರೆ ಅಡ್ಡಡ್ಡಲಾಗಿ. ಹಾಗೆ ಕೃಷ್ಣನು ತನ್ನ ಬಳಿ ಸಾರಿರುವ, ಸುತ್ತಲೂ ನೆರೆದಿರುವ ಜೀವಿಗಳತ್ತ ಆಗಾಗ್ಗೆ ತನ್ನ ಕರುಣಾಮಯವಾದ ನೋಟವನ್ನು ಬೀರುತ್ತಿದ್ದಾನೆ.
ಎರಡನೆಯದು ಆತನ ತುಟಿ. ಅದೋ ಅತ್ಯಂತ ಕೋಮಲವಾದುದು. ಮತ್ತು ಕೊಳಲನ್ನು ನುಡಿಸುವಾಗ ಬೇರೆ ಬೇರೆ ಸ್ವರಗಳು ಬರಲೆಂದೋ, ಗಮಕಗಳು ಬರಲೆಂದೋ ಇನ್ನೂ ಬೇರೆ ಬೇರೆ ಪರಿಣಾಮಗಳಿಗೂ ತುಟಿಯ ಆಕಾರವನ್ನು ಬದಲಿಸುತ್ತಿರುವುದುಂಟು.
ಯಾವುದೋ ಒಂದು ವಿಶಿಷ್ಟವಾದ ನಾದವು ಬರುವ ಅದನ್ನು ಸಾಮಿ-ಕುಟ್ಮಲಿತವನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ. ಏನು ಹಾಗೆಂದರೆ? ಕುಟ್ಮಲ ಅಥವಾ ಕುಡ್ಮಲಕ್ಕೆ ಮೊಗ್ಗು ಎಂದರ್ಥ. ಮೊಗ್ಗಿನಾಕಾರವಾಗಿ ಮಾಡಿಕೊಂಡಿರುವುದು ಕುಟ್ಮಲಿತ. ಮೊಗ್ಗೆಂದರೆ ಪೂರ್ತಿ ಅರಳಿಲ್ಲದಿರುವುದು, ಪೂರ್ಣ-ವಿಕಾಸವನ್ನು ಹೊಂದಿಲ್ಲದಿರುವುದು. ಹಾಗೆಂದು ಸಂಪೂರ್ಣವಾಗಿ ಸಂಕೋಚಮಾಡಿಕೊಂಡಂತೆಯೂ ಇಲ್ಲ, ಕೃಷ್ಣನ ತುಟಿ. ಅದು ಸಾಮಿ ಮಾತ್ರ. ಸಾಮಿಯೆಂದರೆ ಅರ್ಧ. ಅಲ್ಲಿಗೆ ಪೂರ್ತಿ ಮೊಗ್ಗೂ ಅಲ್ಲದ ಪೂರ್ಣವಿಕಸಿತವೂ ಅಲ್ಲದ ಬಗೆಯಲ್ಲಿ, ತುಟಿಯನ್ನು ಎಂದರೆ ಮುಖ್ಯವಾಗಿ ಕೆಳದುಟಿಯನ್ನು, ಸ್ವಲ್ಪ ಕಿರಿದಾಗಿಸಿ ನುಡಿಸುತ್ತಿರುವಂತಹ ಸ್ಥಿತಿಯದು.
ಕೃಷ್ಣನ ತುಟಿಯಲ್ಲಿಯ ಕೋಮಲತೆಯೊಂದಿಗೆ ಅಧರ-ಮಣಿಯೆಂದು ಕವಿಯು ಆಗಾಗ್ಗೆ ಹೇಳುವಂತೆ ಕೆಂಪುಬಣ್ಣವೂ ಸೇರಿ, ತುಟಿಯ ವಿಶಿಷ್ಟ-ಸ್ಥಿತಿಯೂ ಗಮನಸೆಳೆಯುವಂತಹುದೇ ಶ್ರೀಕೃಷ್ಣನ ವೇಣುನಾದಾಸ್ವಾದನದ ಸಮಯದ ವದನ.
ವೇಣು-ವಾದನವನ್ನು ಮಾಡುವಾಗ ಕಂಡೇ ಕಾಣುವುದು ಮತ್ತೊಂದು: ಆತನ ಕೈಬೆರಳುಗಳ ಚಲನಗಳು. ಬೆರಳುಗಳನ್ನು ಮೇಲೆತ್ತುವುದು ಕೆಳಗಿಳಿಸುವುದು - ಇವನ್ನು ಮಾಡುತ್ತಲೇ ಇರುವುದಾಗುತ್ತದೆ. ಜೊತೆಗೆ ಅಲ್ಲೂ, ವೇಣುವಿನ ರಂಧ್ರವೊಂದನ್ನು ಪೂರ್ತಿ ಮುಚ್ಚುವುದು, ಸ್ವಲ್ಪ ತೆಗೆಯುವುದು - ಮುಂತಾದುವೂ ಅವಶ್ಯವಾಗುತ್ತಲೇ ಇರುತ್ತವೆ. ಕೆಲವೊಮ್ಮೆ ಅದನ್ನು ಬೇಗೆಬೇಗನೆ ಮಾಡುವ ಸನ್ನಿವೇಶವೂ ಇರುವುದುಂಟು. ವೇಗ-ವಲ್ಗಿತವೆಂದರೆ ಬೇಗಬೇಗನೆ ಮೇಲೆದ್ದು ಕೆಳಗಿಳಿಯುವುದು; ಬೆರಳುಗಳನ್ನು ವೇಗದಿಂದ ರಂಧ್ರಗಳ ಮೇಲೆ ಮೇಲೂ ಕೆಳಗೂ ಆಡಿಸುವುದು. ವಾಸ್ತವವಾಗಿ ಅಲ್ಲಿ ಹಾಗೆ ಓಡಾಡಿಸಬೇಕಾದುದು ಇಡೀ ಬೆರಳನ್ನೂ ಅಲ್ಲ. ಅಂಗುಲಿಗಳ ಮುಖವನ್ನು, ಎಂದರೆ ಬೆರಳುಗಳ ತುದಿಯನ್ನು. ಅವನ್ನು ಕೃಷ್ಣನು ಹಾಗೆಯೇ ಆಡಿಸುತ್ತಿದ್ದಾನೆ.
ಅಂತೂ ಕವಿಯು ತಾನು ಸಾಕ್ಷಾತ್ತಾಗಿ ಕಂಡಂತೆ ವರ್ಣಿಸಿದ್ದಾನೆ. ಕಣ್ಣು-ತುಟಿ-ಬೆರಳತುದಿ - ಇವುಗಳಲ್ಲಿಯ ಭಂಗೀ-ವಿಶೇಷಗಳು ಯಾವುದೇ ವೇಣುನಾದ-ರಸಿಕನಲ್ಲಿ ಗಮನಿಸಬೇಕಾದ ಅಂಶಗಳು.
ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುವ ಭಕ್ತ-ಕವಿಯೇ ಲೀಲಾಶುಕ.
ಶ್ಲೋಕ ಹೀಗಿದೆ:
ಸಾಚಿ-ಸಂಚಲಿತ-ಲೋಚನೋತ್ಪಲಂ /
ಸಾಮಿ-ಕುಟ್ಮಲಿತ-ಕೋಮಲಾಧರಂ |
ವೇಗ-ವಲ್ಗಿತ-ಕರಾಂಗುಲೀ-ಮುಖಂ /
ವೇಣು-ನಾದ-ರಸಿಕಂ ಭಜಾಮಹೇ ||