ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಮಂದಪಾಲನ ಕಥೆ
ಅಶ್ವಸೇನ ಹಾಗೂ ಮಯ - ಇವರಿಬ್ಬರನ್ನು ಅಗ್ನಿಯು ಸುಡದಿರಲು ಕಾರಣವನ್ನು ಹೇಳಿದ್ದಾಗಿದೆ. ಈ ಶಾರ್ಙ್ಗಕಗಳನ್ನು ಸುಡದಿರಲು ಕಾರಣವೇನು? ಅದಕ್ಕೊಂದು ಹಿನ್ನೆಲೆಯಿದೆ.
ಧರ್ಮಜ್ಞರಲ್ಲಿ ಅತ್ಯಂತ ಮುಖ್ಯನೂ ಉಗ್ರವ್ರತಗಳನ್ನಾಚರಿಸುವವನೂ ಆದ ಮಹರ್ಷಿಯೊಬ್ಬನಿದ್ದ. ಆತನ ಹೆಸರು ಮಂದಪಾಲ. ಆತನು ಊರ್ಧ್ವರೇತಸ್ಕರಾದ ಋಷಿಗಳ ಮಾರ್ಗವನ್ನು ಹಿಡಿದವನು, ಅರ್ಥಾತ್ ಬ್ರಹ್ಮಚರ್ಯವ್ರತವನ್ನು ಅತ್ಯಂತ ನಿಷ್ಠೆಯಿಂದ ಪಾಲಿಸತಕ್ಕವನು. ಸ್ವಾಧ್ಯಾಯನಿರತನೂ ಇಂದ್ರಿಯಜಯವನ್ನು ಸಂಪಾದಿಸಿರುವವನೂ ಆದವನು. ಧರ್ಮರತನಾದ ಆತ ತನ್ನ ತಪಸ್ಯೆಯನ್ನು ಪೂರೈಸಿದನು.
ತಪಸ್ಸಿನ ಪಾರವನ್ನು ಮುಟ್ಟಿ ಪಿತೃಲೋಕಕ್ಕೆ ಹೋದನು. ಆದರೆ ಮಂದಪಾಲನಿಗೆ ಅದರ ಫಲವೇನೂ ದೊರೆಯಲಿಲ್ಲ. ಆಗ ಯಮಧರ್ಮರಾಜನ ಸಮೀಪದಲ್ಲಿದ್ದ ದೇವತೆಗಳನ್ನು ಆತನು ಕೇಳಿದನು: "ತಪಸ್ಸಿನಿಂದ ನಾನು ಸಂಪಾದಿಸಿರುವ ಈ ಲೋಕಗಳು ಮುಚ್ಚಿರುವುವೇಕೆ? ಮಾಡಬೇಕಾದದ್ದನ್ನು ಏನನ್ನೋ ನಾನು ಮಾಡಿಲ್ಲವೆಂಬ ಕಾರಣದಿಂದಾಗಿ ನನಗೀ ಫಲವೇ? ಯಾವ ಕಾರಣಕ್ಕಾಗಿ ಇವು ನನ್ನ ಪಾಲಿಗೆ ಮುಚ್ಚಿಹೋಗಿವೆಯೋ ಅದಕ್ಕೆ ಪ್ರತಿಯಾಗಿ ನಾನು ಮಾಡಬೇಕಾದದ್ದನ್ನು ಸೂಚಿಸಿರಿ, ನಾ ಮಾಡುವೆ" ಎಂದು.
ಅದಕ್ಕೆ ದೇವತೆಗಳು ಹೇಳಿದರು :
"ಯಾವ ಋಣವನ್ನಿಟ್ಟುಕೊಂಡು ಮನುಷ್ಯರು ಜನಿಸುವರೆಂಬುದನ್ನು ತಿಳಿದುಕೋ. ಯಜ್ಞಕ್ರಿಯೆಗಳು, ಬ್ರಹ್ಮಚರ್ಯ ಹಾಗೂ ಸಂತಾನೋತ್ಪತ್ತಿ - ಈ ಮೂರರ ನಿಮಿತ್ತ ಮನುಷ್ಯರೆಲ್ಲರೂ ಋಣಿಗಳಾಗಿರುತ್ತಾರೆ. ಯಜ್ಞಕಾರ್ಯ, ತಪಸ್ಸು ಹಾಗೂ ವೇದಾಧ್ಯಯನ - ಇವುಗಳಿಂದ ಆ ಋಣಗಳನ್ನು ಪರಿಹರಿಸಿಕೊಳ್ಳುವುದಾಗುತ್ತದೆ. ನೀನು ತಪಸ್ವಿ ಹೌದು, ಯಜ್ಞಗಳನ್ನು ಮಾಡಿರುವೆ ಹೌದು. ಆದರೆ ನಿನಗೆ ಸಂತಾನವಿಲ್ಲ. ಆ ಕಾರಣಕ್ಕಾಗಿಯೇ ಈ ಲೋಕಗಳು ನಿನಗಿಲ್ಲವಾಗಿವೆ. ಆದುದರಿಂದ ಮೊದಲು ಸಂತಾನವನ್ನು ಪಡೆಯುವೆಯಾದರೆ ಈ ಲೋಕಗಳನ್ನು ಯಥೇಚ್ಛವಾಗಿ ಭೋಗಿಸಬಹುದು. 'ಪುತ್' ಎಂಬ ಹೆಸರಿನ ನರಕವುಂಟು. ಅದರ ದೆಸೆಯಿಂದ, ಎಂದರೆ ಅಲ್ಲಿ ಹೋಗದಂತೆ ಆಗಿಸಲೋಸುಗ, ಕಾಪಾಡತಕ್ಕವನು ಯಾರೋ ಆತನನ್ನೇ 'ಪುತ್ರ' (ಪುತ್+ತ್ರ) ಎನ್ನುವುದು - ಎನ್ನುತ್ತದೆ ಶ್ರುತಿ. ಆದ್ದರಿಂದ, ನೀನು ಸಂತಾನಪ್ರಾಪ್ತಿಗಾಗಿ ಯತ್ನಿಸಬೇಕು, ವಿಪ್ರಶ್ರೇಷ್ಠನೇ" - ಎಂದರು.
ದೇವತೆಗಳ ಆ ಮಾತನ್ನು ಮಂದಪಾಲನು ಆಲಿಸಿದನು. ಹಾಗಿದ್ದರೆ ನನಗೆ ಬೇಗನೆ ಬಹುಮಂದಿ ಮಕ್ಕಳಾಗಬೇಕು, ಎಲ್ಲಿ ನನಗಿದು ಸಾಧ್ಯ? - ಎಂಬುದಾಗಿ ಆಲೋಚಿಸಿದನು. ಹಾಗೆ ಯೋಚಿಸುತ್ತಾ ನಡೆದು ಕಂಡದ್ದು ಅನೇಕ ಸಂತಾನಗಳನ್ನು ಹೊಂದಿದ್ದ ಪಕ್ಷಿಗಳನ್ನು. ಅವುಗಳಂತೆಯೇ ತಾನೂ ಒಂದು ಶಾರ್ಙ್ಗಕಪಕ್ಷಿಯಾದನು. "ಜರಿತಾ" ಎಂಬ ಹೆಸರಿನ ಶಾರ್ಙ್ಗಿಕಾಪಕ್ಷಿಯೊಂದರೊಂದಿಗೆ ಸಂಬಂಧವನ್ನು ಬೆಳೆಸಿದನು. ಅವಳಲ್ಲಿ ಬ್ರಹ್ಮವಾದಿಗಳಾಗುವ ನಾಲ್ಕು ಮಕ್ಕಳನ್ನು ಪಡೆದನು. ಇನ್ನೂ ಮೊಟ್ಟೆಯೊಳಗೇ ಇದ್ದ ಅವರೆಲ್ಲರನ್ನೂ, ಜೊತೆಗೆ ಅವರ ತಾಯಿಯನ್ನೂ, ತೊರೆದು ಆತನು ಮುಂದಕ್ಕೆ ಸಾಗಿ, ಲಪಿತಾ ಎಂಬುವಳಲ್ಲಿಗೆ ಹೋದನು.
ಲಪಿತೆಯ ಬಳಿ ಸಾಗಿದ ಬಳಿಕ, ತನ್ನ ಸಂತಾನದ ಬಗ್ಗೆ ಅತ್ಯಂತ ವಾತ್ಸಲ್ಯಭಾವದಿಂದ ಕೂಡಿದ್ದ ಜರಿತೆಯು ಬಹಳವೇ ಚಿಂತೆಗೀಡಾದಳು. ಋಷಿಗಳಾದ ಆ ಮಕ್ಕಳು ತ್ಯಾಜ್ಯರಾಗಿರಲಿಲ್ಲವಾದರೂ ಅವನ್ನು ಮಂದಪಾಲನು ತೊರೆದಿದ್ದನಾದರೂ ತಾಯಿಯಾದ ಜರಿತೆಯು ತೊರೆಯಲಿಲ್ಲ. ಆ ಖಾಂಡವದಲ್ಲಿಯೇ ಇದ್ದುಕೊಂಡು, ಸಂಜಾತರಾದ ಆ ಮಕ್ಕಳನ್ನು ಸ್ನೇಹ ತುಂಬಿದ್ದ ಆಕೆಯು ತಾನೇ ಪಾಲಿಸಿ ಪೋಷಿಸಿದಳು.
ಲಪಿತೆಯೊಡನೆ ಸಂಚರಿಸುತ್ತಿದ್ದ ಆ ಮಂದಪಾಲ ಮುನಿಯು, ಖಾಂಡವವನ್ನು ಸುಡಲೆಂದು ಬರುತ್ತಿದ್ದ ಅಗ್ನಿಯನ್ನು ಕಂಡನು. ಅಗ್ನಿಯ ಸಂಕಲ್ಪವನ್ನು ಅರಿತುಕೊಂಡನು.
ಸೂಚನೆ : 30/3/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.
AYVM - Articles
Sunday, March 30, 2025
ವ್ಯಾಸ ವೀಕ್ಷಿತ 130 ಮಂದಪಾಲನ ಕಥೆ (Vyaasa Vikshita 130)
Subscribe to:
Posts (Atom)