ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ತನ್ನ ಪ್ರಾಣವುಳಿಸಿದವರಿಗೆ ತಾನೇನಾದರೂ ಸೇವೆಮಾಡಬೇಕೆಂಬುದು ಮಯನ ಕಳಕಳಿ. ಎಂದೇ ಮಯನ ಬಿನ್ನಹಕ್ಕೆ ಬೆಲೆಯೇ ಇಲ್ಲವೆಂಬಂತೆ ಆಗಬಾರದೆಂದೆಣಿಸಿ, ಅರ್ಜುನನು ಹೀಗೂ ಹೇಳಿದನು:
"ನಿನ್ನ ಸಂಕಲ್ಪವು ವ್ಯರ್ಥವಾಗುವುದನ್ನೂ ನಾನು ಇಷ್ಟಪಡೆ. ಆದ್ದರಿಂದ ನೀನು ಕೃಷ್ಣನಿಗಾಗಿ ಏನನ್ನಾದರೂ ಮಾಡಿಕೊಡು. ಅಲ್ಲಿಗೆ ನೀನು ನನಗೇ ಪ್ರತ್ಯುಪಕಾರ ಮಾಡಿರುವೆಯೆಂದು ನಾ ಭಾವಿಸುವೆ" - ಎಂದನು.
ಮಯನಿಂದ ಪ್ರೇರಿತನಾದ ಕೃಷ್ಣನು, "ಈತನಿಂದ ಯಾವ ಕೆಲಸವನ್ನು ಮಾಡಿಸಬಹುದು?" ಎಂಬುದಾಗಿ ಕ್ಷಣಕಾಲ ಯೋಚನೆ ಮಾಡಿದನು. ಜನನಾಥನೂ ಲೋಕನಾಥನೂ ಆದ ಆತನು ಮಯನಿಗೆ ಹೀಗೆಂದನು: "ಸಭೆಯೊಂದನ್ನು ನಿರ್ಮಿಸು, ಶಿಲ್ಪಜ್ಞರಲ್ಲಿ ಶ್ರೇಷ್ಠನಾದ ಮಯನೇ. ಎಂತಹ ಸಭೆಯು ಧರ್ಮರಾಜನಿಗೆ ಯುಕ್ತವೆನಿಸುವುದೋ ಅಂತಹುದೊಂದನ್ನು ಮಾಡಿಕೊಡು. ಎಂತಹ ಸಭೆಯನ್ನು ಮಾಡಿದರೆ ಅದನ್ನು ಕಂಡು ಮಾನವರೆಲ್ಲರೂ ವಿಸ್ಮಿತರಾಗುವರೋ, ಆದರೆ ಇಡೀ ಮನುಷ್ಯಲೋಕದಲ್ಲಿ ಅದನ್ನು ಅನುಕರಿಸಲು ಯಾರೂ ಸಮರ್ಥರಾಗರೋ, ಅಂತಹೊಂದು ಸಭೆಯನ್ನು ನಿರ್ಮಿಸು. ದಿವ್ಯವೂ ಆಸುರವೂ ಮಾನುಷವೂ ಆದ ಭಾವಗಳನ್ನು ಬಿಂಬಿಸುವಂತೆ ನೀನು ನಿರ್ಮಿಸಿರುವುದನ್ನು ನಾವು ಎಲ್ಲಿ ಕಾಣಬಹುದೋ ಅಂತಹ ಸಭೆಯೊಂದನ್ನು ಮಾಡು, ಮಯನೇ" - ಎಂಬುದಾಗಿ.
ಆತನ ಆ ವಾಕ್ಯವನ್ನು ಕೇಳಿ ಮಯನು ಬಹಳವೇ ಸಂತೋಷಗೊಂಡನು. ವಿಮಾನದ ಹಾಗಿರುವ ಶುಭವಾದ ಸಭೆಯೊಂದನ್ನು ಯುಧಿಷ್ಠಿರನಿಗಾಗಿ ಸಂಕಲ್ಪಿಸಿದನು. ಆಮೇಲೆ ಕೃಷ್ಣನೂ ಅರ್ಜುನನೂ ಯುಧಿಷ್ಠಿರನಿಗೆ ಎಲ್ಲವನ್ನೂ ತಿಳಿಸಿ ಮಯನನ್ನು ಆತನೊಂದಿಗೆ ಭೇಟಿ ಮಾಡಿಸಿದರು. ಯುಧಿಷ್ಠಿರನು ಆತನಿಗೆ ಯಥಾರ್ಹವಾದ ಸತ್ಕಾರವನ್ನು ಮಾಡಿದನು. ಆ ಸತ್ಕಾರವನ್ನು ಮಯನೂ ಆದರದಿಂದ ಸ್ವೀಕರಿಸಿದನು. ಆ ಸಂದರ್ಭದಲ್ಲಿ "ದೈತ್ಯರ ಅದ್ಭುತವಾದ ಚರಿತಗಳೇನೇನು?" ಎಂಬುದನ್ನು ಪಾಂಡವರೆಲ್ಲರಿಗೂ ಮಯನು ವಿವರಿಸಿದನು.
ಕೆಲಕಾಲ ವಿಶ್ರಾಂತಿ ಪಡೆದು, ಚೆನ್ನಾಗಿ ಆಲೋಚನೆ ಮಾಡಿ, ಪಾಂಡವರಿಗಾಗಿ ಸಭೆಯೊಂದನ್ನು ನಿರ್ಮಿಸಲು ಸಿದ್ಧತೆಗಳನ್ನು ಮಯನು ಮಾಡಿಕೊಂಡನು. ಪಾಂಡವರ ಅಭಿಪ್ರಾಯ, ಮಹಾತ್ಮನಾದ ಕೃಷ್ಣನ ಅಭಿಪ್ರಾಯ - ಇವೆರಡನ್ನೂ ಗ್ರಹಿಸಿ, ಮಹಾತೇಜಸ್ವಿಯಾದ ಮಯನು ಪುಣ್ಯದಿನವೊಂದರಲ್ಲಿ ಕೌತುಕಮಂಗಳವನ್ನು ನೆರವೇರಿಸಿದನು: ದ್ವಿಜಶ್ರೇಷ್ಠರಿಗೆ ಪಾಯಸವರ್ಪಿಸಿ ಸಂತೋಷವುಂಟುಮಾಡಿದನು; ಅವರಿಗೆ ಬಹುವಿಧವಾದ ಧನವಿತ್ತನು.
ಬಳಿಕ, ಹತ್ತು ಸಹಸ್ರ ಕಿಷ್ಕುಗಳಷ್ಟು ಉದ್ದವೂ (ಕಿಷ್ಕುವೆಂದರೆ ಮೊಳ), ಅಷ್ಟೇ ಅಗಲವೂ, ಆದ ಭೂಮಿಯನ್ನು ಅಳತೆಮಾಡಿಸಿದನು. ಆ ಭೂಮಿಯಾದರೂ, ದಿವ್ಯರೂಪವುಳ್ಳದ್ದೂ ಮನೋಹರವಾದುದೂ ಸರ್ವಋತುಗಳ ಗುಣಗಳಿಂದಲೂ ಕೂಡಿರುವುದೂ ಆಗಿತ್ತು.
ಖಾಂಡವಪ್ರಸ್ಥದಲ್ಲಿ ಶ್ರೀಕೃಷ್ಣನು ಸುಖವಾಗಿ ವಾಸಿಸಿದನು. ಪ್ರೀತಿಯುಕ್ತರಾದ ಪಾಂಡವರಿಂದ ಪೂಜ್ಯನಾದ ಕೃಷ್ಣನಿಗೆ ಅಲ್ಲಿ ಸತ್ಕಾರವು ನಡೆಯುತ್ತಿತ್ತು.
ಕೆಲಕಾಲಾನಂತರ, ಕೃಷ್ಣನಿಗೆ ತನ್ನ ತಂದೆಯನ್ನು ನೋಡುವ ಮನಸ್ಸಾಗಿ, ಖಾಂಡವದಿಂದ ಹೊರಟುಬರಬೇಕೆಂಬ ಆಲೋಚನೆಯನ್ನು ಮಾಡಿದನು. ಯುಧಿಷ್ಠಿರ ಹಾಗೂ ಕುಂತಿ - ಇವರುಗಳ ಅನುಮತಿಯನ್ನು ಪಡೆದು ಹೊರಡಲನುವಾದನು. ಜಗದ್ವಂದ್ಯನಾದ ಕೃಷ್ಣನು ತನ್ನ ಸೋದರತ್ತೆಯಾದ ಕುಂತಿಯ ಚರಣಗಳಿಗೆ ಶಿರಸಾ ನಮಸ್ಕರಿಸಿದನು. ಆಕೆಯೂ ಆತನ ಶಿರಸ್ಸನ್ನು ಆಘ್ರಾಣಿಸಿ ಆತನನ್ನು ಆಲಿಂಗಿಸಿಕೊಂಡಳು.
ಆ ಬಳಿಕ ಕೃಷ್ಣನು ತನ್ನ ಸೋದರಿಯಾದ ಸುಭದ್ರೆಯನ್ನು ಹೋಗಿ ಕಂಡನು. ಪ್ರೀತಿಯ ಕಣ್ಣೀರಿನಿಂದ ಕೂಡಿದವನಾಗಿ ಅವಳೊಂದಿಗೆ ಒಂದೆರಡು ಮಾತುಗಳನ್ನಾಡಿದನು.
ತಥ್ಯವೂ ಹಿತವೂ ಲಘುವೂ ಯುಕ್ತಿಯುಕ್ತವೂ ಆದ ಮಾತು ಕೃಷ್ಣನದು.