Tuesday, April 23, 2024

ಯಕ್ಷ ಪ್ರಶ್ನೆ 86 (Yaksha prashne 86)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ – 85 ಶಮ ಎಂದರೆ ಯಾವುದು ?

ಉತ್ತರ - ಮನಃಶಾಂತಿ  

ಪ್ರತಿಯೊಬ್ಬರೂ ಬಯಸುವುದು ಸುಖವನ್ನು. ದುಃಖವು ಯಾವುದೇ ಕಾರಣಕ್ಕೂ ಬೇಡವೇ ಬೇಡ ಎಂಬುದು ನಿಶ್ಚಯ. ಅದಕ್ಕಾಗಿ ನಿರಂತರಪ್ರಯತ್ನವೂ ಕಂಡುಬರುತ್ತದೆ. ಇದನ್ನೇ 'ಮನಃಶಾಂತಿ' ಎಂದು ಕರೆಯುತ್ತಾರೆ. ಏಕೆಂದರೆ ಮನಸ್ಸೇ ' ಇದು ಸುಖ, ಇದು ದುಃಖ' ಎಂದು ತಿಳಿಸುವ ಸಾಧನವಾಗಿದೆ. ಅಥವಾ ' ಇದು ಸುಖಕ್ಕೆ ಕಾರಣ, ಇದು ದುಃಖಕ್ಕೆ ಕಾರಣ' ಎಂದು ಗುರುತಿಸುವುದು ಕೂಡಾ ಮನಸ್ಸೇ ಆಗಿದೆ. ಏಕೆಂದರೆ ಮನಸ್ಸು ಒಂದು ಇಂದ್ರಿಯವಾಗಿದೆ. ಇಂದ್ರಿಯವು ವಸ್ತುವನ್ನೂ ಮತ್ತು ವಸ್ತುವಿನ ಜ್ಞಾನವನ್ನೂ ತಿಳಿಸಲು ಸಾಧನವಾಗಿದೆಯಷ್ಟೇ. ಹಾಗಾಗಿ ಮನಸ್ಸು ಸರಿಯಾಗಿದ್ದಾಗ ಮಾತ್ರವೇ ಸುಖಕ್ಕೆ ಕಾರಣವನ್ನಾಗಲಿ ಅಥವಾ ಸುಖವನ್ನಾಗಲಿ ತಿಳಿಯಲು ಸಾಧ್ಯ. ಸುಖವನ್ನು ಅಪೇಕ್ಷೆ ಪಡುವುದು ಇದೇ ಮನಸ್ಸಿನಿಂದ. ಮತ್ತು ದುಃಖವನ್ನು ದೂರೀಕರಿಸುವುದೂ ಇದೇ ಮನಸ್ಸಿನಿಂದ. ಈ ಸಾಮರ್ಥ್ಯವನ್ನೇ 'ಮನಃಶಾಂತಿ' ಎನ್ನಬಹುದು. ಈ ಮನಃಶಾಂತಿಯನ್ನೇ 'ಶಮ' ಎನ್ನಬಹುದು ಎಂಬುದು ಇಲ್ಲಿನ ಪ್ರಶ್ನೋತ್ತರದ ಸಾರವಾಗಿದೆ. 

'ಶಮ' ಎಂದರೇನು? ಇದನ್ನು ಸಾಧಿಸುವ ಬಗೆ ಹೇಗೆ? ಎಂಬ ಎರಡು ವಿಷಯವನ್ನು ತಿಳಿದುಕೊಂಡಾಗ ಮಾತ್ರ ಮನಃಶಾಂತಿಯು ಅರ್ಥವಾಗುತ್ತದೆ. ಶಮ ಎಂಬದಕ್ಕೆ ಶಾಂತಿ ಎಂದರ್ಥ. 'ಚಿತ್ತ' ಎಂಬ ಸಮುದ್ರವನ್ನು 'ವಿರಾಗ' ಎಂಬ ಪರ್ವತದಿಂದ ಕಡೆದಾಗ 'ಪ್ರಕೋಪ' ಎಂಬ ಕಾಲಕೂಟ ಉದಿಸಿದ ಅನಂತರ ಬರುವುದೇ 'ಶಮ' ಎಂಬ ಅಮೃತ ಲಭಿಸುತ್ತದೆ ಎಂಬುದಾಗಿ ರಾಜತರಂಗಿಣಿ ಎಂಬ ಗ್ರಂಥಕಾರ ಕಲ್ಹಣ ಶಮದ ವಿವರಣೆಯನ್ನು ಕಾವ್ಯಮಯವಾಗಿ ನೀಡಿದ್ದನ್ನು ಕಾಣಬಹುದು. ಶಮಕ್ಕೆ ಮೋಕ್ಷ, ಅಂತರಿಂದ್ರಿಯನಿಗ್ರಹ ಎಂಬೆಲ್ಲಾ ಅರ್ಥಗಳಿವೆ. ಭಗವದ್ಗೀತೆಯಲ್ಲಿ "ಯೋಗಾರೂಢಸ್ಯ ತಸ್ಯೈವ ಶಮಃ ಕಾರಣಮುಚ್ಯತೇ"- ಎಲ್ಲಾ ಬಗೆಯ ಕರ್ಮಗಳಿಂದ ನಿವೃತ್ತವಾಗುವುದೇ 'ಶಮ' ಎಂಬುದಾಗಿ ಹೇಳಲಾಗಿದೆ. 'ಶಮ' ಎಂಬುದು ನವರಸಗಳಲ್ಲಿ ಒಂದಾದ ಮತ್ತು ಅದೇ ಅಂತಿಮ ರಸವಾದ 'ಶಾಂತ' ಎಂಬ ರಸಕ್ಕೆ ಸ್ಥಾಯೀಭಾವ ಎಂಬುದಾಗಿ ನಾಟ್ಯಶಾಸ್ತ್ರ, ಅಲಂಕಾರ ಮೊದಲಾದ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಒಟ್ಟಾರೆ ಶಮವೇ ಶಾಂತಿ ಎಂಬುದು.  

ಇಂತಹ ಶಮವನ್ನು ಅಥವಾ ಶಾಂತಿಯನ್ನು ಸಾಧಿಸುವ ಬಗೆಯನ್ನು ಗೀತೆಯಲ್ಲಿ ಶ್ರೀಕೃಷ್ಣನು ಸಾರುವ ಮಾತಿನಿಂದ ತಿಳಿಯಬಹುದು. ಎಲ್ಲಾ ಬಗೆಯ ಕರ್ಮಗಳಿಂದ ನಿವೃತ್ತಿಯನ್ನು ಪಡೆಯುವುದು ಶಮ. ಅಂದರೆ ಯಾವುದೇ ಕರ್ಮವನ್ನು ಮಾಡದ ಸ್ಥಿತಿ. ಅದನ್ನೇ 'ಅಕರ್ಮಸ್ಥಿತಿ' ಎನ್ನಲಾಗಿದೆ. ಅಲ್ಲೇ 'ಸುಕರ್ಮ' ಮತ್ತು 'ವಿಕರ್ಮ' ಎಂಬ ಇನ್ನೆರಡು ಬಗೆಯ ಕರ್ಮವನ್ನು ಹೇಳಲಾಗಿದೆ. ಯಾವುದು ಅಕರ್ಮಸ್ಥಿತಿಗೆ ಕಾರಣವಾಗಿದೆಯೋ ಅದನ್ನು 'ಸುಕರ್ಮ' ಎನ್ನುವುದಾದರೆ; ಯಾವುದು ಅಂತಹ ಸ್ಥಿತಿಗೆ ವಿರೋಧವಾಗುವುದೋ ಅದನ್ನು 'ವಿಕರ್ಮ' - ವಿರುದ್ಧಕರ್ಮ ಎನ್ನಬಹುದು. ಸುಕರ್ಮವನ್ನು ಮಾಡಬೇಕು. ವಿರುದ್ಧಕರ್ಮವನ್ನು ಬಿಡಬೇಕು ಎಂಬುದೇ ಶಮಕ್ಕೆ ಅಥವಾ ಶಾಂತಿಗೆ ಕಾರಣ. ಶಾಸ್ತ್ರ ಅಥವಾ ವೇದವಿಹಿತವಾದ ಕರ್ಮಾನುಷ್ಠಾನವನ್ನು ಮಾಡುತ್ತಾ ಹೋದರೆ ಅದು ನಮ್ಮನ್ನು ಅಕರ್ಮಸ್ಥಿತಿಗೇ ಕೊಂಡೊಯ್ಯುತ್ತದೆ. ಅದರಿಂದ ವೈರಾಗ್ಯವೂ ಸಿದ್ಧವಾಗುತ್ತದೆ. ರಾಗದಿಂದ ಮಾನವನು ಸಹಜವಾಗಿಯೇ ವಿರುದ್ಧಕರ್ಮವನ್ನು ಆಚರಿಸುತ್ತಾ ಹೋಗುತ್ತಾನೆ. ವಿರಾಗದಿಂದಲೇ ಸುಕರ್ಮವನ್ನು ಆಚರಿಸುತ್ತಾ ಹೋಗುತ್ತಾನೆ. ಕರ್ಮವನ್ನು ಮಾಡದ ರೀತಿಯಲ್ಲಿ, ಕುಶಲತೆಯಿಂದ ಕರ್ಮವನ್ನು ಮಾಡುತ್ತಾ, ಕೊನೆಗೆ ಕರ್ಮವನ್ನು ಬಿಡುವ ಸ್ಥಿತಿಗೆ ಬರುತ್ತಾನೆ.  ಇದೇ ಮನಃಶಾಂತಿ, ಇದೇ ಶಮ.  

ಸೂಚನೆ : 21/4/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.