ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಚಂಡಕೌಶಿಕಮುನಿಯು ಮುಂದೆ ಜರಾಸಂಧನ ಭವಿಷ್ಯವು ಹೇಗಿರುವುದೆಂಬುದನ್ನು ಅವನ ತಂದೆ ಬೃಹದ್ರಥನಿಗೆ ತಿಳಿಸುತ್ತಾ ಹೀಗೆ ಮಾತನ್ನು ಮುಂದುವರೆಸುತ್ತಾನೆ:
"ದೇವತೆಗಳೇ ಪ್ರಯೋಗಿಸಿದ ಶಸ್ತ್ರಗಳೂ ಸಹ ಈ ಜರಾಸಂಧನನನ್ನು ಪೀಡಿಸವು - ನದಿಗಳ ವೇಗಗಳು ಪರ್ವತವನ್ನು ಹೇಗೆ ಪೀಡಿಸಲಾರವೋ ಹಾಗೆ. ಮೂರ್ಧಾಭಿಷಿಕ್ತ ರಾಜರು ಹಲವರಿರಬಹುದು. ಆದರೆ ಅವರೆಲ್ಲರ ತಲೆಯ ಮೇಲೆ ಈತನು ಜ್ವಲಿಸುವನು (ಎಂದರೆ ಉಜ್ಜ್ವಲನಾಗಿ ಬೆಳಗುವನು). ಆಕಾಶದಲ್ಲಿ ಜ್ಯೋತಿಸ್ಸುಗಳುಂಟು. ಆದರೆ ಸೂರ್ಯನು ಅವೆಲ್ಲವನ್ನೂ ಮೀರಿಸುವನು, ಅಲ್ಲವೇ? ಹಾಗೆಯೇ ಈತನೂ ಎದುರಾಳಿಗಳನ್ನು ಮಂಕುಮಾಡುವವನೇ.
ಸುಸಂಪನ್ನವಾದ ಸೈನ್ಯ-ವಾಹನಗಳನ್ನುಳ್ಳ ರಾಜರುಗಳೂ ಈತನತ್ತ ಏನಾದರೂ ಸೆಣಸಲು ಸಮೀಸಿದರೆ, ಮಿಡತೆಗಳು ಬೆಂಕಿಯೊಳಗೆ ನುಗ್ಗಿ ಸಾಯುವ ಹಾಗೆ ಸಾಯುವವರೇ. ರಾಜರೆಲ್ಲರ ಒಟ್ಟಾರೆ ಸಂಪತ್ತನ್ನೂ ಈತನು ಅಪಹರಿಸಿಬಿಡುವನು. ಮಳೆಗಾಲದಲ್ಲಿ ನದಗಳು ಹಾಗೂ ನದಿಗಳು ಉಕ್ಕುವ ನೀರುಳ್ಳವಾಗಿರುತ್ತವೆಯಷ್ಟೆ. ಆದರೆ ಸಮುದ್ರರಾಜನು ಅವೆಲ್ಲವನ್ನೂ ಹೇಗೆ ನುಂಗಿಬಿಡುವನೋ, ಹಾಗೆ.
ನಾಲ್ಕೂ ವರ್ಣಗಳಿಗೂ ಈತನು ಆಸರೆ ಕೊಡುವನು - ಹೇಗೆ ಭೂಮಿಯು ಸರ್ವ-ಸಸ್ಯಗಳನ್ನೂ ಧರಿಸುತ್ತಾ ಶುಭಾಶುಭ-ವಸ್ತುಗಳಿಗೆಲ್ಲಾ ಆಶ್ರಯವೀಯುವುದೋ ಹಾಗೆ. ಈತನ ಆಜ್ಞೆಗೆ ಎಲ್ಲ ರಾಜರೂ ಅಧೀನರಾಗಿರುವರು - ಸಮಸ್ತ್ರಭೂತಗಳಿಗೂ ಆತ್ಮಭೂತನಾದ ವಾಯುವಿಗೆ ಹೇಗೆ ಸರ್ವಪ್ರಾಣಿಗಳೂ ಅಧೀನರಾಗಿರುವರೋ ಹಾಗೆ.
ಅಲ್ಲದೆ, ಎಲ್ಲ ಲೋಕಗಳಲ್ಲೂ ಬಲಶಾಲಿಯಾದ ಈತನು, ತ್ರಿಪುರಸಂಹಾರವನ್ನು ಮಾಡಿದ ರುದ್ರಮಹಾದೇವನನ್ನು ಸಾಕ್ಷಾತ್ಕರಿಸಿಕೊಳ್ಳುವನು."
ಹೀಗೆ ಹೇಳುತ್ತಲೇ ಆ ಮುನಿಯು ತನ್ನ ಸ್ವಕಾರ್ಯ-ಚಿಂತನ-ಮಗ್ನನಾಗಿ ಬೃಹದ್ರಥರಾಜನನ್ನು ಕಳುಹಿಸಿಕೊಟ್ಟನು.
ಆಮೇಲೆ ಮಗಧಾಧಿಪತಿಯಾದ ರಾಜಾ ಬೃಹದ್ರಥನು ತನ್ನ ನಗರಕ್ಕೆ ಹಿಂದಿರುಗಿ, ಜ್ಞಾತಿಗಳಿಂದಲೂ ಸಂಬಂಧಿಗಳಿಂದಲೂ ಸುತ್ತುವರೆಯಲ್ಪಟ್ಟವನಾಗಿ, ಜರಾಸಂಧನಿಗೆ ಪಟ್ಟಾಭಿಷೇಕವನ್ನು ನೆರವೇರಿಸಿ, ಪರಮಸಂತೋಷವನ್ನು ಹೊಂದಿದನು. ಜರಾಸಂಧನಿಗೆ ಅಭಿಷೇಕವನ್ನು ಮಾಡಿದ ಬಳಿಕ ರಾಜಾ ಬೃಹದ್ರಥನು ತನ್ನಿಬ್ಬರೂ ಪತ್ನಿಯರೊಂದಿಗೆ ವಾನಪ್ರಸ್ಥನಾದನು.
ತನ್ನಿಬ್ಬರು ತಾಯಂದಿರೂ ತಂದೆಯೂ ವನಕ್ಕೆ ತೆರಳಿರಲು, ಜರಾಸಂಧನ ರಾಜ್ಯನಿರ್ವಹಣೆಯು ಆರಂಭವಾಯಿತು. ಸ್ವಪರಾಕ್ರಮದಿಂದ ರಾಜರನ್ನು ತನ್ನ ವಶದಲ್ಲಿಟ್ಟುಕೊಂಡನು.
ದೀರ್ಘಕಾಲವು ಹೀಗೇ ಕಳೆಯಿತು. ತಪೋವನದಲ್ಲಿ ತಪಸ್ಸು ಮಾಡಿ ರಾಜಾ ಬೃಹದ್ರಥನು ಪತ್ನೀ-ಸಮೇತನಾಗಿ ಸ್ವರ್ಗಸೇರಿದನು. ಮತ್ತು ಜರಾಸಂಧನಾದರೂ, ಕೌಶಿಕನು ಹೇಳಿದಂತೆಯೇ ಎಲ್ಲ ವರಗಳನ್ನೂ ಪಡೆದವನಾಗಿ ರಾಜ್ಯಪಾಲನೆ ಮಾಡಿದನು.
ಇಷ್ಟರಲ್ಲಿ ವಾಸುದೇವನು ಕಂಸಮಹಾರಾಜನನ್ನು ಸಂಹರಿಸಿದನಷ್ಟೆ. ಇದರಿಂದಾಗಿ ಕೃಷ್ಣನೊಂದಿಗೆ ಆತನ ವೈರವೂ ಉಂಟಾಯಿತು. ಒಂದು ಕಡಿಮೆ ನೂರು ಬಾರಿ - ಎಂದರೆ ತೊಂಭತ್ತೊಂಭತ್ತು ಬಾರಿ - ಗದೆಯನ್ನು ತಿರುಗಿಸಿದವನೇ, ತನ್ನ ಗಿರಿವ್ರಜಸ್ಥಾನದಿಂದ ಮಥುರೆಯಲ್ಲಿ ಅದ್ಭುತಕರ್ಮನಾದ ಕೃಷ್ಣನತ್ತ ಅದನ್ನು ಬೀಸಿ ಎಸೆದನು. ಮತ್ತು ಆ ಉತ್ತಮವಾದ ಗದೆಯೂ ತೊಂಭತ್ತೊಂಭತ್ತು ಯೋಜನಗಳ ದೂರದಲ್ಲಿದ್ದ ಮಥುರೆಯಲ್ಲಿಗೆ ಬಂದು ಬಿದ್ದಿತು.
ಗದೆಯು ಬಂದು ಬಿದ್ದಿರುವುದನ್ನು ಪುರಜನರು ಕೃಷ್ಣನಿಗೆ ತಿಳಿಸಿದರು. ಗದೆ ಬಿದ್ದೆಡೆಗೆ ಒಂದು ಹೆಸರೂ ಬಂದಿತು, ಅಂದಿನಿಂದ - ಗದಾವಸಾನ - ಎಂದು. ಎಂದರೆ ಗದೆಯು ಕೊನೆಗೊಂಡ ಜಾಗ.
ನಾನು ಹಿಂದೆಯೇ ಹೇಳಿದಂತೆ ಜರಾಸಂಧನಿಗೆ ಹಂಸ-ಡಿಂಭಕ ಎಂಬ ಇಬ್ಬರ ಸಹಾಯವಿದ್ದಿತು. ಅವರಿಬ್ಬರೂ ಶಸ್ತ್ರಗಳಿಂದ ಸಾಯಿಸಲಾಗದಂಥವರು. ಧೀಮಂತರು, ನೀತಿಶಾಸ್ತ್ರದಲ್ಲಿ ವಿಶಾರದರಾದವರು. ಅವರು ಮೂವರು ಸೇರಿದರೆ, ಮೂರು ಲೋಕಗಳಲ್ಲೂ ಜಯಿಸಲಾಗದಂತಹವರೇ ಸರಿ.
ಸೂಚನೆ : 15/2/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.