ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಸತ್ಯಸಂಧನಾದ ಜರಾಸಂಧನು ವೇಷಾಂತರಧಾರಿಗಳಾಗಿದ್ದ ಅವರನ್ನು ಕುರಿತು ಹೇಳಿದನು:
"ಸ್ನಾತಕವ್ರತವನ್ನು ಮುಗಿಸಿ ಬಂದ ವಿಪ್ರರು, ವಿಕಾರವುಳ್ಳವರಾಗಿ - ಎಂದರೆ ವೇಷವಿರೋಧಿಯಾದ ಆಚಾರವುಳ್ಳವರಾಗಿ -ಹೊರಗೆ ತೋರುವಂತೆ ಹೀಗೆ ಮಾಲಾಧಾರಣ-ಚಂದನ-ಲೇಪನಗಳನ್ನು ಮಾಡಿಕೊಳ್ಳುವುದಿಲ್ಲ. ಇದು ಎಲ್ಲರಿಗೂ ತಿಳಿದಿರುವಂತಹುದೇ ಸರಿ. ಆದರೆ ತಾವುಗಳು ಪುಷ್ಪಮಾಲೆಗಳನ್ನು ಧರಿಸಿದ್ದೀರಿ.
ಅಷ್ಟೇ ಅಲ್ಲ. ತಮ್ಮ ತೋಳುಗಳಲ್ಲಿ (ಉತ್ತಮ ಬಿಲ್ಲುಗಾರರ ತೋಳುಗಳಲ್ಲಿ ಕಾಣುವ) ಬಿಲ್ಲಿನ ಹುರಿಯ ಚಿಹ್ನೆಗಳಿವೆ. ಹಾಗಿರಲು ನಿಜವಾಗಿ ನೀವು ಯಾರು? ಕ್ಷತ್ರಿಯರಿಗೆ ಸಲ್ಲುವ ಓಜಸ್ಸನ್ನು ಹೊಂದಿದ್ದೀರಿ. ಆದರೆ ಬ್ರಾಹ್ಮಣರೆಂದು ಹೇಳಿಕೊಳ್ಳುತ್ತಿದ್ದೀರಿ. ವಿಧವಿಧವಾದ ರಾಗಗಳನ್ನುಳ್ಳ, ಎಂದರೆ ಬೇರೆ ಬೇರೆ ಬಣ್ಣಗಳನ್ನು ಹೊಂದಿರುವ, ವಸ್ತ್ರಗಳನ್ನು ಧರಿಸಿರುವಿರಿ. ಹೊರಗೆ ಮಾಲ್ಯಾನುಲೇಪನಗಳನ್ನು - ಎಂದರೆ ಹಾರ-ಚಂದನಗಳನ್ನು – ಧರಿಸಿರುವಿರಿ!
ನೀವು ಯಾರೆಂಬುದನ್ನು ಸತ್ಯವಾಗಿ ಹೇಳಿರಿ. ರಾಜರಿಗೆ ಶೋಭಿಸತಕ್ಕದ್ದು ಸತ್ಯವೇ ಸರಿ: ಸತ್ಯಂ ರಾಜಸು ಶೋಭತೇ.
ಅಷ್ಟೇ ಅಲ್ಲ. ಬರುವಾಗ ಚೈತ್ಯಪರ್ವತದ ಶಿಖರಗಳನ್ನು ಒಡೆದುಹಾಕಿದ್ದೀರಿ. ಅದು ರಾಜಾಪಚಾರವಲ್ಲವೇ? ಅದಕ್ಕಾಗಿ ನಿಮ್ಮಲ್ಲಿ ಭಯವಿರಬೇಡವೇ?
ಛದ್ಮವೇಷವನ್ನು ಧರಿಸಿರುವಿರಲ್ಲದೆ ಅದ್ವಾರದಿಂದ ಪ್ರವೇಶಮಾಡಿದ್ದೀರಿ! ಯಾವ ಕಾರಣಕ್ಕಾಗಿ? ಮಾತನಾಡಿ.
ಬ್ರಾಹ್ಮಣರಾದವರಿಗಂತೂ ತಮ್ಮ ಮಾತಿನಲ್ಲೇ ವೀರ್ಯವೆಂಬುದು ನೆಲೆಗೊಂಡಿರುವುದು. ನಿಮ್ಮ ಕರ್ಮವು ವಿಲಿಂಗಸ್ಥವಾದದ್ದು. ಅರ್ಥಾತ್, ನಿಮ್ಮ ಬಾಹ್ಯ-ಚಿಹ್ನಗಳಿಗೆ ಹೊಂದತಕ್ಕದ್ದಲ್ಲ; ವಾಸ್ತವವಾಗಿ ಅದಕ್ಕೆ ವಿರುದ್ಧವಾದದ್ದೇ ಸರಿ! ಇರಲಿ. ಒಟ್ಟಿನಲ್ಲಿ ನಿಮ್ಮ ಧ್ಯೇಯವೇನು? ನನ್ನ ಬಳಿಗೇನೋ ಬಂದಿದ್ದೀರಿ. ಆದರೆ ವಿಧ್ಯುಕ್ತವಾಗಿ ನಾವು ನಿಮಗೆ ಅರ್ಪಿಸಿದ ಆದರವನ್ನು ಸ್ವೀಕರಿಸದೆಯೇ ನಿಂತಿದ್ದೀರಿ. ಇದಕ್ಕೆ ಕಾರಣವೇನು? ನಮ್ಮಲ್ಲಿಗೆ ನೀವು ಬರುವುದರ ಹಿಂದಿನ ಉದ್ದೇಶವಾದರೂ ಏನಾಗಿದೆ?"
ಜರಾಸಂಧನು ಹೀಗೆ ನುಡಿಯಲಾಗಿ, ಮಹಮನಸ್ಕನಾದ ಕೃಷ್ಣನು ಉತ್ತರವಿತ್ತನು. ವಾಕ್ಯವಿಶಾರದನಾದ ಆತನ ಮಾತು ಸ್ನಿಗ್ಧವೂ ಗಂಭೀರವೂ ಆಗಿದ್ದಿತು. ಕೃಷ್ಣನು ಹೀಗೆ ಹೇಳಿದನು:
"ರಾಜನೇ, ನಮ್ಮನ್ನು ನೀನು ಸ್ನಾತಕ-ಬ್ರಾಹ್ಮಣರೆಂದೇ ಭಾವಿಸಿಕೋ, ಪರವಾಯಿಲ್ಲ. ಆದರೆ ಸ್ನಾತಕ-ವ್ರತಿಗಳೆಂದರೆ ಬ್ರಾಹ್ಮಣರು ಮಾತ್ರವಲ್ಲದೆ, ಕ್ಷತ್ರಿಯರೂ ವೈಶ್ಯರೂ ಆಗಬಹುದಷ್ಟೆ.
ಸ್ನಾತಕರೆನಿಸಿಕೊಂಡವರಿಗೆಲ್ಲಾ ಅನ್ವಯಿಸುವ ಸಾಮಾನ್ಯ-ನಿಯಮಗಳೂ ಇವೆ, ಜೊತೆಗೆ ವಿಶೇಷ-ನಿಯಮಗಳೂ ಇರುತ್ತವೆಯಷ್ಟೆ?
ವಿಶೇಷ-ನಿಯಮಗಳನ್ನು ಸತತವಾಗಿ ಅನುಸರಿಸತಕ್ಕ ಕ್ಷತ್ರಿಯನು ಯಾರುಂಟೋ ಆತನು ಲಕ್ಷ್ಮಿಯನ್ನು ಹೊಂದುವನೇ ಸರಿ. ಯಾರು ಪುಷ್ಪ-ಧಾರಣೆಯನ್ನು ಮಾಡುವರೋ ಅವರಲ್ಲಿ ಲಕ್ಷ್ಮಿಯು ನೆಲಸುವಳು. ಆ ಕಾರಣಕ್ಕಾಗಿಯೇ ನಾವು ಪುಷ್ಪವಂತರಾಗಿದ್ದೇವೆ, ಎಂದರೆ ಮಾಲಾಧಾರಿಗಳಾಗಿದ್ದೇವೆ.
ಕ್ಷತ್ರಿಯನೆಂದರೆ ಬಾಹುವೀರ್ಯವುಳ್ಳವನು. ಕ್ಷತ್ರಿಯನು ಅದೆಷ್ಟು ಬಾಹುವೀರ್ಯವುಳ್ಳವನೋ ಅಷ್ಟೊಂದು ವಾಕ್ಯವೀರ್ಯವುಳ್ಳವನಲ್ಲ. ಎಂದೇ ಓ ಬೃಹದ್ರಥಪುತ್ರನಾದ ಜರಾಸಂಧನೇ, ಕ್ಷತ್ರಿಯನ ಮಾತಿನಲ್ಲಿ ಧಾರ್ಷ್ಟ್ಯವು ಹೆಚ್ಚಿರುವುದಿಲ್ಲ. ಸೃಷ್ಟಿಮಾಡುವಾಗ ಬ್ರಹ್ಮನು ಕ್ಷತ್ರಿಯರ ಬಲವೆಂಬುದನ್ನು ಅವರ ತೋಳುಗಳಲ್ಲಿಯೇ ತುಂಬಿಸಿಟ್ಟಿರುವನು. ಅದನ್ನು ನೀ ನೋಡಬಯಸುವೆಯಾದರೆ, ಓ ರಾಜನೇ, ಇಂದು ನಿಸ್ಸಂಶಯವಾಗಿಯೂ ನೋಡುವೆ. ಇದರಲ್ಲಿ ಸಂಶಯವೇ ಇಲ್ಲ.
ಮಿತ್ರಗೃಹವನ್ನು ಪ್ರವೇಶಿಸುವಾಗ ದ್ವಾರದ ಮೂಲಕ ಪ್ರವೇಶಿಸತಕ್ಕದ್ದು; ಆದರೆ ಶತ್ರುಗೃಹವನ್ನು ಪ್ರವೇಶಿಸುವಾಗ ಅದ್ವಾರದ ಮೂಲಕವೇ ಪ್ರವೇಶಿಸತಕ್ಕದ್ದು. ಇದು ಧೀರರ ನಡೆ. ಹೀಗಿರುವುವು ಶತ್ರು-ಮಿತ್ರರುಗಳ ದ್ವಾರಗಳು – ಎಂಬುದಾಗಿ ಧರ್ಮ-ದೃಷ್ಟಿಯಿಂದ ಹೇಳಲಾಗಿದೆ.
ನಮ್ಮ ಕೆಲಸದ ಮೇರೆಗೇ ನಾವು ನಿನ್ನ ಮನೆಗೆ ಬಂದಿರುವುದು. ಶತ್ರುವಿನಿಂದ ನಾವು ಆದರ-ಸತ್ಕಾರಗಳನ್ನು ಸ್ವೀಕರಿಸುವವರಲ್ಲ. ಇದುವೇ ನಮ್ಮ ಶಾಶ್ವತ-ವ್ರತವಾಗಿದೆ" – ಎಂದನು, ಶ್ರೀಕೃಷ್ಣ.