ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಲೀಲಾಶುಕನ ಶ್ರೀಕೃಷ್ಣಕರ್ಣಾಮೃತವು ರಸದ ಒಂದು ಬುಗ್ಗೆಯೇ ಸರಿ. ಬಹುಜನ-ಪ್ರಿಯವಾದ ಬೋಧಿವೃಕ್ಷ-ಪತ್ರಿಕೆಯಲ್ಲಿ ೨೦೨೪ರಲ್ಲಿ ಆರಂಭವಾಯಿತು ಇದನ್ನು ಕುರಿತಾದ ಲೇಖನಮಾಲೆ. ಅಲ್ಲಿಯ ಶ್ಲೋಕಗಳ ಆಸ್ವಾದನೆಯು ಅನುಸ್ಯೂತವಾಗಿ ಇಲ್ಲಿಯವರೆಗೆ ೯೯ ಕಂತುಗಳಾಗಿ ಸಾಗಿ ಬಂದಿದೆ. ಈಗಿದು ನೂರನೆಯ ಕಂತು. ಈ ಸರಣಿಯಲ್ಲಿ ಕೊನೆಯದು. ಅಲ್ಲಿಯ ಒಟ್ಟು ೩೧೦ ಶ್ಲೋಕಗಳಲ್ಲಿ ಇದು ೧೭೦ನೆಯದು. ಲೇಖನಮಾಲೆಗೆ ಆಗಾಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ವಾಚಕರಿಗೆ ಕೃತಜ್ಞತೆಗಳು.
ಶ್ರೀಕೃಷ್ಣನು ಮಧುರವಾಗಿ ವೇಣುಗಾನ ಮಾಡುವ ವಿಷಯವು ಹಲವೆಡೆ ಬಂದಿದೆ. ಅದರೆ ಒಂದು ಅತ್ಯಂತ ಸೊಬಗಿನ ಪದ್ಯವೊಂದನ್ನಿಲ್ಲಿ ತೆಗೆದುಕೊಂಡಿದೆ. ಅದು ಕೃಷ್ಣನ ವೇಣು-ವಾದನದ ಬಹುಮುಖ-ಅತಿಶಯತೆಗಳನ್ನು ಒಟ್ಟಿಗೇ ಸಂಗ್ರಹಿಸಿದೆ. ಕೊಳಲುಲಿಯ ದಶವಿಧಪರಿಣಾಮಗಳನ್ನು ಕವಿಯು ಸುಭಗವಾಗಿ ಚಿತ್ರಿಸಿದ್ದಾನೆ. ಮೊಟ್ಟಮೊದಲನೆಯದಾಗಿ ಅದು ಇಡೀ ಲೋಕದ ಮೇಲೆ ಪರಿಣಾಮ ಬೀರಿದೆ. ಪುಟ್ಟ ಹುಡುಗನೊಬ್ಬನು ನುಡಿಸಿದ ಕೊಳಲಿನ ದನಿಯು ಎಷ್ಟುದೂರ ಹೋದೀತು? - ಎಂಬ ಪ್ರಶ್ನೆ ಬರಬೇಕಿಲ್ಲ. ಏಕೆ? ದಿವ್ಯಪುರುಷನೊಬ್ಬನ ವೇಣುಗಾನವಿದು! ಲೋಕಸಾಮಾನ್ಯರ ಪರಿಯ ಗಾನವಲ್ಲ. ಎಂದೇ ಕವಿಯು ಲೋಕಾನ್ ಎಂದು ಬಹುವಚನವನ್ನೇ ಬಳಸಿದ್ದಾನೆ. ಲೋಕಗಳೆಲ್ಲದರ ಮೇಲೂ ಪರಿಣಾಮ ಬೀರುವ ಪರಿಯಿದು.
ಯಾವ ಪರಿಣಾಮ? ಉನ್ಮಾದದ ಪರಿಣಾಮ. ಹಾಗೆಂದರೆ ಏನೋ ಹುಚ್ಚುಹಿಡಿಸುವ ಪರಿಣಾಮವೆಂದೇ? ಒಂದರ್ಥದಲ್ಲಿ ಹುಚ್ಚೇ; ಮತ್ತೊಂದರ್ಥದಲ್ಲಿ ಅದಕ್ಕೆ ವಿರುದ್ಧವಾದದ್ದೇ. ಹೇಗೆ? ಇದು ಯೋಗಶಾಸ್ತ್ರದ ವಿಷಯ. ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳು ಇದನ್ನು ವಿಶದಪಡಿಸಿರುವರು. ಉನ್ಮನೀ ಮನೋನ್ಮನೀ - ಎಂಬ ಎರಡು ಅವಸ್ಥೆಗಳನ್ನು ಯೋಗವಿದ್ಯೆಯು ಬೋಧಿಸುವುದು. ಯೋಗಿಗಳು ಧ್ಯಾನಸ್ಥರಾಗಿದ್ದಾಗ ಅನಾಹತವೆಂಬ ನಾದವು ಒಳಗೇ ಕೇಳಿಬರುವುದು. ಈ ಅಂತರ್ನಾದಶ್ರವಣದ ಸ್ಥಿತಿಯಲ್ಲೇ ಉನ್ಮನ್ಯವಸ್ಥೆಯು ಉಂಟಾಗುವುದು.
ಇಲ್ಲಿ ಕೃಷ್ಣನು ಕೊಳಲಿನಿಂದ ನುಡಿಸುತ್ತಿರುವುದು ಬಾಹ್ಯನಾದ. ಅದು ಆಹತನಾದ. ಹಾಗಿದ್ದರೂ ಸಹ ಒಳಗಣ ನಾದವು ಕೇಳಿಬರುವಾಗ ಚಿತ್ತಕ್ಕೆ ಯಾವ ಅವಸ್ಥೆಯು ಉಂಟಾಗುವುದೋ ಅದನ್ನೇ ಉಂಟುಮಾಡುತ್ತಿದೆ! ಇಂದ್ರಿಯದ ಹೊರಗಣ ನಡೆಗಳೆಲ್ಲವೂ ಕೆಲಕಾಲ ಸ್ತಬ್ಧವಾಗಿಬಿಟ್ಟು, ದಿವ್ಯಭಾವದೊಂದಿಗೆ ಹೊಮ್ಮಿದ ಈ ಮಧುರಧ್ವನಿಯ ಆಸ್ವಾದನೆಯಲ್ಲಿ ಮುಳುಗುವಂತಾಗುತ್ತದೆ. ಹೀಗೆ ಅನಾಹತನಾದದ ಪರಿಣಾಮವನ್ನು ಅನಾಯಾಸವಾಗಿ ಸಾಧಿಸಿಕೊಡುವ ನಾದವಿದು - ಅತ್ತ ಚಿತ್ತವಿತ್ತವರಿಗೆಲ್ಲಾ!
ಎರಡನೆಯದಾಗಿ, ಈ ನಾದವು ಶ್ರುತಿಗಳನ್ನೇ ಪ್ರತಿಧ್ವನಿಸುವಂತಹುದು. ಶ್ರುತಿಗಳೆಂದರೆ ವೇದಗಳು. ವೇದಧ್ವನಿಗೂ ಈ ಧ್ವನಿಗೂ ಸಾಮ್ಯವೆಂತು? – ಎಂಬುದನ್ನು ಒಂದು ಉದಾಹರಣೆಯ ಮೂಲಕ ನೋಡಬಹುದು. ಒಂದೇ ಶ್ರುತಿಗೆ ಜೋಡಿಸಿಟ್ಟ ನಾಲ್ಕು ತಂಬೂರಿಗಳಿದ್ದಾಗ, ಒಂದನ್ನು ಮೀಟುತ್ತಲೇ ಮಿಕ್ಕವೂ ಅದೇ ಧ್ವನಿಯನ್ನೇ ಹೊಮ್ಮಿಸುವುವು! ಹೀಗಾಗಿ ಈ ವೇಣುನಾದವಾಗುತ್ತಲೇ ವೇದಗಳೆಲ್ಲವೂ ಇದು ತಮ್ಮದೇ ದನಿಯೆಂದು ಗುರುತಿಸಿ, ಒಡನೆಯೇ ಅಪ್ರಯತ್ನವಾಗಿ ಮಾರ್ದನಿಗೊಳ್ಳುವಂತಗುವುದು!
ಅಂತೂ, ಇತ್ತ ಈ ದಿವ್ಯಶಿಶುವು ಲೀಲೆಗಾಗಿ ಹೊರತಂದ ನಾದವು, ಅತ್ತ ಮಹರ್ಷಿಗಳಿಗೆ ತಪೋಲಭ್ಯವಾದ ಸುಸ್ವರದಿಂದ ಹೊಮ್ಮುವ ಸಾಹಿತ್ಯದ ಸಾರವೇ ಆಗಿದೆ! ಅಲ್ಲಿಯ ಉದಾತ್ತಭಾವದ ಸಾರವನ್ನೇ ಬಿಂಬಿಸಿದೆ. ಮೂರನೆಯದಾಗಿ ಮರಗಳಿಗೆ ಸಹ ಹರ್ಷವುಂಟಾಗಿದೆ! ಮರಗಳೂ ಜೀವಿಗಳೇ. ಸಸ್ಯಜಾತಿಗೂ ಇಂದ್ರಿಯಗಳುಂಟು - ಎಂಬುದನ್ನು ಮಹಾಭಾರತವು ಪ್ರತಿಪಾದಿಸಿದೆ. ಈಚಿನ ವೈಜ್ಞಾನಿಕ-ಪ್ರಯೋಗ-ಫಲಿತಾಂಶಗಳೂ ಇದಕ್ಕೆ ಸಂವಾದಿಯಾಗಿವೆ. ಭಗವಂತನ ನಡೆನುಡಿಗಳೂ ಕೊನೆಗೆ ಶ್ವಾಸೋಚ್ಛ್ವಾಸಗಳೂ ಜೀವಹಿತಕ್ಕಾಗಿಯೇ ಇರುವುವಾಗಿ, ಅಂತಸ್ಸಂಜ್ಞವೆನಿಸುವ ಗಿಡಮರಗಳೆಂಬ ಜೀವಗಳಿಗೂ ಇಲ್ಲಿಯ ಆಪ್ಯಾಯಕತೆಯು ಗೋಚರವಾಗಿ, ಹರ್ಷೋಲ್ಲಾಸಗಳೇ ಹರಿದಿವೆ!
ನಾಲ್ಕನೆಯದಾಗಿ ಪರ್ವತಗಳನ್ನೂ ಕರಗಿಸುವ ಧ್ವನಿಯಿದು.”ಕಗ್ಗಲ್ಲಿನಂತೆ ಕಠಿಣವಾದ ಎಂತಹ ಕಲ್ಲೆದೆಯಾದರೂ ಆ ಮಹಾ ವೇಣುಗಾನಲೋಲನಾದ ಕೃಷ್ಣರೂಪಿಯಾದ ಭಗವಂತನ ನಾದದಿಂದ ಜಿನುಗಿ ಕರಗಿ ಆ ನಾದದಲ್ಲಿ ಲೀನವಾಗಿಬಿಡುತ್ತದೆ” - ಎಂಬುದು ಶ್ರೀರಂಗಮಹಾಗುರುಗಳ ವಾಣಿ. ಬೆಟ್ಟಗಳೂ ಕರಗುವುದನ್ನು ನಾರದ-ಹನುಮತ್-ಸಂವಾದ-ರೂಪದ ಪುರಾಣಕಥೆಗಳು ತೋರಿಸುತ್ತವೆ. ಐದನೆಯದಾಗಿ ಮೃಗಗಳ ಮೇಲಾದ ಪರಿಣಾಮ. ಮೃಗಗಳೆಂದರೆ ವಿಶೇಷವಾಗಿ ಜಿಂಕೆಗಳೇ. ಅವುಗಳಲ್ಲಿ ಒಂದು ವಿವಶತೆಯುಂಟಾಗಿದೆ. ಗಿಡಮರಗಳ ಮೇಲೇ ಅಷ್ಟು ಪರಿಣಾಮವುಂಟೆಂದಮೇಲೆ, ಪ್ರಾಣಿಗಳ ಮೇಲೆ ಮತ್ತೂ ವಿಶೇಷವಾದ ಪರಿಣಾಮವು ನಿರೀಕ್ಷ್ಯವೇ. ಸಸ್ಯಜಾತಿಗಿಂತಲೂ ಅಧಿಕವಾದ ಇಂದ್ರಿಯಪಾಟವ ಮೃಗಗಳದ್ದು. ಎಂದೇ, ಅವುಗಳ ಆಸ್ವಾದನ-ಸಾಮರ್ಥ್ಯವೂ ಅಧಿಕವೇ. ಹೀಗಾಗಿ ಪ್ರಾಣಿಗಳು ಪರವಶವಾಗಿವೆ. ಕೆಲವು ರಾಗಗಳನ್ನು ನುಡಿಸಿ, ಜಿಂಕೆಗಳಿರಲಿ, ಆನೆಗಳ ಮನಸ್ಸನ್ನೂ ಮುಗ್ಧವಾಗಿಸಲು ಶಕ್ಯವೆಂಬುದನ್ನು ನಮ್ಮ ಪ್ರಾಚೀನಸಾಹಿತ್ಯವು ತಿಳಿಸುತ್ತದೆಯಷ್ಟೆ. ಶ್ರೀರಂಗಮಹಾಗುರುಗಳು ಹೇಳುವಂತೆ “ಮೃಗಗಳೆಲ್ಲವೂ ತಮ್ಮ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ತಮ್ಮನ್ನು ವೇಣುಗಾನಕ್ಕೆ ಕೊಟ್ಟುಕೊಂಡು ಮೈಮರೆತು ಆನಂದದಿಂದ ಆ ನಾದವನ್ನು ಕೇಳುತ್ತಿವೆ. ನಿಂತಲ್ಲಿ ಚಿತ್ರಪ್ರತಿಮೆಗಳಂತೆ ಹಾಗೆಯೇ ನಿಂತು, ನಾದದಿಂದ ಮೈಮರೆತಿವೆ.”
ಇನ್ನು ಆರನೆಯದಾಗಿ, ಗೋಸಮೂಹದ ಮೇಲಿನ ಪರಿಣಾಮ. ಅದನ್ನಂತೂ ಹೇಳಲೇಬೇಕಿಲ್ಲ. ಅವಕ್ಕೆಲ್ಲ ಆನಂದವಾಗಿದೆಯೆಂದು ಹೇಳಿದರೆ ಸಾಕು! ಏಳನೆಯ ಪರಿಣಾಮ ಗೋಪರ ಮೇಲೆ. ಗೊಲ್ಲರಿಗೆ ಗೊತ್ತಾಗದೇ, ವೇಣುಗಾನದ ಇನಿದನಿ? ಅವರಿಗೆಲ್ಲ ಉಂಟಾದುದು ಏನೋ ಸಂಭ್ರಮ. ಆ ಧ್ವನಿವಿಶೇಷದ ಏನು-ಎತ್ತಗಳು ಗೊತ್ತಾಗದಿದ್ದರೂ ಏನೋ ಉಕ್ಕುವ ಉಲ್ಲಾಸದ ಅನುಭವ! ಎಂಟನೆಯ ಪರಿಣಾಮ ಮುನಿಗಳ ಮೇಲಾದುದು. ಗೋಪರ ಸಂಭ್ರಮ ಹೊರಗೆ ಗೋಚರವಾಗಬಹುದು. ಆದರೆ ಮುನಿಗಳು ಮತ್ತೂ ಮುಕುಳಿತರಾಗುತ್ತಿದ್ದಾರೆ. ಮುಕುಳವೆಂದರೆ ಮೊಗ್ಗು. ಮೊಗ್ಗು ಅರಳಿದಾಗ ಬಹಿರ್ಮುಖ. ಮುನಿಗಳು ಶ್ರಮಪಡುವುದೇ ಮನಸ್ಸನ್ನು ಅಂತರ್ಮುಖವಾಗಿಸಲು. ಆದರಿದೋ, ಈಗದು ಸುಲಭವಾಗುತ್ತಿದೆ, ಅಥವಾ ತಾನಾಗಿಯೇ ಉಂಟಾಗುತ್ತಿದೆ! ಭಗವದನುಭವವಾಗುವುದು ಮನಸ್ಸಿನ ಮುಕುಳೀಭಾವದಿಂದಲೇ. ಹೀಗೆ ಮುನಿಗಳಿಗೆ ಯೋಗಮಾರ್ಗದಲ್ಲಿ ಪ್ರಗತಿಯಾಗುತ್ತಿದೆ. ಒಂಭತ್ತನೆಯದಾಗಿ ಇಲ್ಲಿ ಸಪ್ತಸ್ವರಗಳೂ ಜೃಂಭಿಸುತ್ತಿವೆ. ನಾನಾಸ್ವರಾಲಾಪಗಳಿಂದಾಗಿ ನಾನಾರಸಗಳನ್ನು ಉದ್ಬೋಧಗೊಳಿಸಬಹುದು - ಎಂಬುದಾಗಿ ಸಂಗೀತಶಾಸ್ತ್ರವು ಹೇಳುವುದಲ್ಲವೇ? ಆದರಿಲ್ಲಿ, ಆತ್ಮಭಾವವನ್ನು ಸ್ಥಿರಗೊಳಿಸಲೂ ಸಪ್ತಸ್ವರಗಳ ವಿನ್ಯಾಸ-ವಿಶೇಷವಾಗಿದೆ! ಅಮಾನುಷವಾದ ಗಾನವಲ್ಲವೇ ಇದು?
ಹತ್ತನೆಯ ಪರಿಣಾಮವಾಗಿ ಓಂಕಾರವನ್ನೇ ಹೊಮ್ಮಿಸುತ್ತಿದೆ, ಈ ವೇಣುಗಾನ. ಎಲ್ಲ ವೇದಗಳೂ ಯಾವ ಪದ ಅಥವಾ ಸ್ಥಾನವನ್ನು ನಿರ್ದೇಶಿಸಿ ಹೇಳುತ್ತವೆಯೋ ಅದನ್ನೇ ಸಂಗ್ರಹವಾಗಿ ಹೇಳುವುದಾದರೆ ಅದು ಓಂಕಾರ - ಎಂದು ಕಠೋಪನಿಷತ್ತು ಹೇಳುವುದು. ಓಂಕಾರವೆಂದರೂ ಪ್ರಣವವೆಂದರೂ ಒಂದೇ. ಭಗವಂತನ ವಾಚಕವೇ ಪ್ರಣವವೆಂದು ಯೋಗಶಾಸ್ತ್ರವು ಹೇಳುತ್ತದೆ.
ಛಂದಸ್ಸುಗಳಿಗೆಲ್ಲ ಆದಿಯಾದುದು ಪ್ರಣವ. ಎಲ್ಲ ಧ್ವನಿಗಳಿಗೂ ಮೂಲವೆನಿಸುವ ಏಕಾಕ್ಷರವು ಯಾವುದೋ ಅದುವೇ ನಾನು – ಎನ್ನುತ್ತಾನೆ, ಗೀತೆಯಲ್ಲಿ ಶ್ರೀಕೃಷ್ಣ. ಓಂ - ಎಂಬುದು ಏಕಾಕ್ಷರಬ್ರಹ್ಮ. ಇದರ ಉಪಾಸನೆಯಿಂದಲೇ ಛಾಂದೋಗ್ಯೋಪನಿಷತ್ತಿನ ಆರಂಭವಾಗುವುದು! ಎಂದೇ ಓಂ ಎಂಬುದು ಬರೀ ಗಾನವಲ್ಲ, ಉದ್ಗಾನ! ಓಂ ಎಂಬುದೇ ಬ್ರಹ್ಮವೆನ್ನುತ್ತದೆ, ತೈತ್ತಿರೀಯ-ಶ್ರುತಿ. ನಾನಾ-ಪ್ರಕಾರಗಳಲ್ಲಿ ಓಂಕಾರದ ಆವಿರ್ಭಾವವನ್ನು ಮಾಂಡೂಕ್ಯೋಪನಿಷತ್ತು ತಿಳಿಸುತ್ತದೆ. ವೇದರಾಶಿಯನ್ನು ಓಂಕಾರ-ಸಂಪುಟಿತವಾಗಿಯೇ ಹೇಳುವುದು. ಸಾರಾಂಶವಾಗಿ ಓಂಕಾರದ ವಿಸ್ತಾರವೇ ತ್ರ್ಯಕ್ಷರವೂ ತ್ರಿಪಾದಾಗಾಯತ್ರಿಯೂ ವೇದತ್ರಯವೂ ಆಗಿರುವುದು. ಹೀಗೆ ಸೃಷ್ಟಿ-ಸರ್ವಸ್ವವನ್ನೂ ಸೃಷ್ಟಿಯ ಸಾರ-ಸರ್ವಸ್ವವನ್ನೂ ಹೇಳುವುದೇ ಓಂಕಾರ. ಅದನ್ನೇ ನುಡಿಸುತ್ತಿರುವುದು ಇದೋ ಈ ಬಾಲಕೃಷ್ಣನ ಕೊಳಲು! ಇಷ್ಟೆಲ್ಲ ಅಸಾಧಾರಣವೂ ಅದ್ಭುತವೂ ಲೋಕೋತ್ತರವೂ ತಾರಕವೂ ಆದ ಪರಿಣಾಮಗಳ ಪರಂಪರೆಯನ್ನೇ ಉಂಟುಮಾಡಿರುವುದು ಮತ್ತಾವುದಿದ್ದೀತು? ಶಿಶುವಿನ ವಂಶೀನಿನಾದ - ಅರ್ಥಾತ್ ಬಾಲಕೃಷ್ಣನ ವೇಣುನಾದವೊಂದೇ! ಎಂದೇ ಅದಕ್ಕೇ ಜಯಕಾರವನ್ನು ವಿಜಯತೇ - ಎಂದು ಹೇಳಿರುವುದು. ಅದು ಸರ್ವೋತ್ಕೃಷ್ಟವಾಗಿದೆ - ಎಂಬ ಅರ್ಥವೇ ಆ ಪದಕ್ಕಿರುವುದು. “ಒಂದೇ ನಾದವಾದರೂ ಅಧಿಕಾರಿಭೇದೇನ ಪರಿಣಾಮವನ್ನುಂಟುಮಾಡುತ್ತಿದೆ” -ಎಂಬ ಶ್ರೀಗುರುವಾಣಿಯು ಗಮನೀಯ.
ಜಗದ್ವೃಕ್ಷಕ್ಕೆ ಸರ್ವೋತ್ಕೃಷ್ಟವಾದ ಊರ್ಧ್ವಮೂಲವೇ ಪರಮಪುರುಷನಾದ ಭಗವಂತ. ಆ ಭಗವದ್ಭಾವವು ಇತ್ತ ಭಕ್ತರಲ್ಲಿ ತುಂಬುವಂತೆ ಮಾಡುವವರೇ ವರ-ಕವಿಗಳು! ಆರ್ಷಸಾಹಿತ್ಯಕ್ಕೆ ಸರಿಸಮನೆನಿಸುವ ಇಂತಹ ಸತ್-ಕಾವ್ಯಸಾಹಿತ್ಯವನ್ನೊದಗಿಸಿದ ವರಕವಿಯಾದ ಲೀಲಾಶುಕನಿಗೆ ನಮ್ಮ ನಮನಗಳು. ಶ್ಲೋಕ ಹೀಗಿದೆ:
ಲೋಕಾನ್ ಉನ್ಮದಯನ್, ಶ್ರುತೀರ್ಮುಖರಯನ್, ಕ್ಷೋಣೀರುಹಾನ್ ಹರ್ಷಯನ್, /
ಶೈಲಾನ್ ವಿದ್ರವಯನ್, ಮೃಗಾನ್ ವಿವಶಯನ್, ಗೋವೃಂದಮ್ ಆನಂದಯನ್, |
ಗೋಪಾನ್ ಸಂಭ್ರಮಯನ್, ಮುನೀನ್ ಮುಕುಳಯನ್, ಸಪ್ತಸ್ವರಾನ್ ಜೃಂಭಯನ್, /
ಓಂಕಾರಾರ್ಥಮ್ ಉದೀರಯನ್ - ವಿಜಯತೇ ವಂಶೀನಿನಾದಃ ಶಿಶೋಃ! ||