ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಚಿಂತಾಮಣಿಯಂತೆ ದುರ್ಲಭವಾದುದು ಯಾವುದು ?
ಉ. ಚತುರ್ಭದ್ರ.
ಚಿಂತಾಮಣಿ ಎಂದರೆ ಚಿಂತಿಸಿದ್ದನ್ನು, ಯೋಚಿಸಿದ್ದನ್ನು, ಇಚ್ಛಿಸಿದ್ದನ್ನು ಕೊಡುವ ಒಂದು ರತ್ನವಿಶೇಷ. ಅದೊಂದು ಮಣಿರೂಪದಲ್ಲಿ ಇರುವಂತಹ ವಸ್ತು. ಅತ್ಯಂತ ಅಪರೂಪದ ವಸ್ತು. ಅದನ್ನು ಪಡೆದವನು ಆ ಮಣಿಯ ಸಹಾಯದಿಂದ ಅವನು ಏನನ್ನು ಬೇಕಾದರೂ ಪಡೆಯಬಹುದು. ಅಂತಹ ಒಂದು ಅದ್ಭುತವಾದಂತಹ ಮಣಿರತ್ನವೇ 'ಚಿಂತಾಮಣಿ' ಎಂಬುದಾಗಿ. ಈ ಪ್ರಶ್ನೆಯಲ್ಲಿ ಮಣಿಯ ವಿಷಯವನ್ನು ಪ್ರಸ್ತಾಪಿಸಿಲ್ಲ. ಆದರೆ ಚಿಂತಾಮಣಿಯಂತೆ ದುರ್ಲಭವಾದದ್ದು ಯಾವುದು? ಎಂಬ ಪ್ರಶ್ನೆ ಇಲ್ಲಿದೆ. ಅದಕ್ಕೆ 'ಚತುರ್ಭದ್ರ' ಎಂಬ ಉತ್ತರವನ್ನು ನೀಡಲಾಗಿದೆ. ಹಾಗಾದರೆ ಚತುರ್ಭದ್ರವು ಹೇಗೆ ಚಿಂತಾಮಣಿಯಾಗಿದೆ? ಎಂಬುದನ್ನು ಚಿಂತಿಸಬೇಕಾಗಿದೆ.
ಚತುರ್ಭದ್ರ ಎಂದರೆ ನಾಲ್ಕು ಕಡೆ ಗಟ್ಟಿಯಾಗಿರುವ ಸಂಗತಿ ಎಂದರ್ಥ. ಅಂದರೆ ಒಂದು ವಿಷಯ ಅಥವಾ ಒಂದು ಪದಾರ್ಥ ಅಚಲವಾಗಿ ನೆಲೆ ನಿಲ್ಲಬೇಕಾದರೆ ಅದಕ್ಕೆ ಸುತ್ತಲೂ ರಕ್ಷಣೆ ಅತ್ಯಂತ ಅವಶ್ಯಕ. ಪ್ರಧಾನವಾಗಿ ನಾಲ್ಕು ದಿಕ್ಕುಗಳನ್ನು ಇಟ್ಟುಕೊಂಡು, ಆ ನಾಲ್ಕು ದಿಕ್ಕುಗಳಲ್ಲೂ ಯಾವುದೇ ರೀತಿಯ ಬಾಧೆ ಇಲ್ಲದಿದ್ದರೆ ಅದಕ್ಕೆ 'ಚತುರ್ಭದ್ರ' ಎಂಬುದಾಗಿ ಹೇಳಬಹುದು. ಹಾಗಾದರೆ ಇಲ್ಲಿ ಆ ಚತುರ್ಭದ್ರ ಯಾವುದು? ಎಂದರೆ 'ಪುರುಷಾರ್ಥ'. ಪುರುಷಾರ್ಥಗಳನ್ನೇ 'ಚತುರ್ಭದ್ರ' ಎಂಬ ಇನ್ನೊಂದು ಪದದಿಂದ ಬಳಸಲಾಗಿದೆ. "ಪುರುಷಾರ್ಥವಿದೆ. ಅದಕ್ಕನುಗುಣವಾದ ನಡೆ ನೋಡಿ ನಡೆಸಿದರೆ ಚತುರ್ಭದ್ರಮಯವಾದ ಜೀವನವಾಗುತ್ತದೆ" ಎಂಬುದಾಗಿ ಶ್ರೀರಂಗ ಮಹಾಗುರುಗಳು ಈ ಪುರುಷಾರ್ಥ ಮತ್ತು ಚತುರ್ಭದ್ರ ಎಂಬ ವಿಷಯವನ್ನು ಹೀಗೆ ಸಮೀಕರಿಸಿದ್ದನ್ನು ನಾವು ಇಲ್ಲಿ ಗಮನಿಸಬೇಕು. ಆ ಪುರುಷಾರ್ಥಗಳು ಧರ್ಮ, ಅರ್ಥ, ಕಾಮ, ಮೋಕ್ಷ ಎಂಬುದಾಗಿ.
ಒಬ್ಬ ವ್ಯಕ್ತಿ ಪರಿಪೂರ್ಣವಾಗಿ ಯಾವಾಗ ಆಗಬಲ್ಲ? ಎಂದರೆ ಯಾವಾಗ ಈ ನಾಲ್ಕು ಪುರುಷಾರ್ಥಗಳನ್ನು ಅವನು ಅನುಭವಿಸಬಲ್ಲನೋ ಆಗ. ಅವನು ಯಾವುದೇ ರೀತಿಯ ಅಪೇಕ್ಷಿತವಾದ ಅಥವಾ ಚಿಂತಿತವಾದ ವಿಷಯವನ್ನು ಕ್ಷಣಾರ್ಧದಲ್ಲಿ ಪಡೆಯಬಲ್ಲ ಎಂದು ತಾತ್ಪರ್ಯ. ಅಂದರೆ ಅವನಿಗೆ ಈ ಪ್ರಪಂಚದ ಪ್ರತಿಯೊಂದು ಪದಾರ್ಥದ ಅರಿವು ಆಗಿರುತ್ತದೆ ಮತ್ತು ಆ ಪದಾರ್ಥಗಳ ಸ್ವಾಮ್ಯವೂ ಅವನದ್ದಾಗಿರುತ್ತದೆ. ಪದಾರ್ಥಗಳನ್ನು ಹೇಗೆ ಬಳಸಿಕೊಳ್ಳಬೇಕು? ಹೇಗೆ ಬಳಸಿಕೊಂಡರೆ ಆ ಪದಾರ್ಥವು ಮತ್ತು ಆ ಪದಾರ್ಥದಿಂದ ವ್ಯಕ್ತಿಗೂ ಒಂದು ಸಾರ್ಥಕತೆ ಎಂಬುದು ಉಂಟಾಗುತ್ತದೆ? ಎಂಬುದನ್ನು ಆತ ಅರಿಯಬಲ್ಲವನಾಗಿರುತ್ತಾನೆ. ಹಾಗಾಗಿ ಅವನಿಗೆ ಈ ನಾಲ್ಕು ಪುರುಷಾರ್ಥಗಳು ಚಿಂತಾಮಣಿಯಂತೆ ಕೆಲಸ ಮಾಡುತ್ತವೆ ಎಂಬುದು ಇದರ ತಾತ್ಪರ್ಯ. ಹಾಗಾದರೆ ಈ ನಾಲ್ಕು ಪುರುಷಾರ್ಥಗಳನ್ನು ಪಡೆಯಬೇಕಾದರೆ ಅವನಿಗೆ ಬೇಕಾದ ಮೂಲಭೂತ ಅವಶ್ಯಕತೆ ಏನು? ಎಂಬುದನ್ನು ವಿವೇಕ ಚೂಡಾಮಣಿ ಎಂಬ ಗ್ರಂಥದಲ್ಲಿ ಹೀಗೆ ಹೇಳಲಾಗಿದೆ - "ದುರ್ಲಭಂ ತ್ರಯಮೇವೈತತ್ ದೈವಾನುಗ್ರಹಹೇತುಕಂ। ಮನುಷ್ಯತ್ವಂ ಮುಮುಕ್ಷುತ್ವಂ ಮಹಾಪುರುಷಸಂಶ್ರಯಃ॥" ಎಂಬುದಾಗಿ. ಅಂದರೆ ಒಬ್ಬ ಮಾನವನಾಗಿ ಹುಟ್ಟಿ, ಅವನಿಗೆ ಮೋಕ್ಷ ಪಡೆಯಬೇಕೆಂಬ ಉತ್ಕಟ ಇಚ್ಛೆಯು ಉಂಟಾಗಿ, ಅದನ್ನು ಪೂರೈಸಲು ಒಬ್ಬ ಮಹಾಪುರುಷನ ಸಂಸರ್ಗ ಉಂಟಾದರೆ ಅವನಿಗೆ ಇನ್ನು ಉಳಿದ ಎಲ್ಲವೂ ಸುಲಭ. ಏಕೆಂದರೆ ಈ ಮೂರು ಸಿಗುವುದು ಅತ್ಯಂತ ದುರ್ಲಭ. ಈ ಮೂರನ್ನು ಪಡೆದವನು ಪುರುಷಾರ್ಥ ಸಂಪತ್ತಿಯನ್ನು ಸುಲಭವಾಗಿ ತನ್ನದಾಗಿಸಿಕೊಳ್ಳುತ್ತಾನೆ. ಅಂದರೆ ಆತ ಚತುರ್ಭದ್ರಮಯವಾದ ಬಾಳಾಟವನ್ನು ಮಾಡಿದಂತೆ ಆಗುತ್ತದೆ ಎಂಬುದು ಇದರ ತಾತ್ಪರ್ಯವಾಗಿದೆ. ಇದೇ ಅವನಿಗೆ ಚಿಂತಾಮಣಿಯಂತೆ ಆಗುತ್ತದೆ.