ವಸಿಷ್ಠರ ಬ್ರಹ್ಮಬಲದಿಂದ ತಮ್ಮ ಕ್ಷಾತ್ರಬಲದ ಪರಾಭವದ ಪರಿಭವ(ಎಂದರೆ ಅವಮಾನ)ವನ್ನು ಅನುಭವಿಸಿದ ವಿಶ್ವಾಮಿತ್ರರು ತಪಸ್ಸಿನಲ್ಲಿ ನಿರತರಾಗಿದ್ದರು. ಬ್ರಹ್ಮತ್ವವನ್ನು ಪಡೆಯಲೋಸುಗ ಅವರು ತಪಸ್ಸನ್ನಾಚರಿಸುತ್ತಿದ್ದರೂ ಅವರಲ್ಲಿ ವೈರವು ಇನ್ನೂ ಹೊಗೆಯಾಡುತ್ತಲೇ ಇತ್ತು. ತಮ್ಮ ತಪಸ್ಸಿನಿಂದಾಗಿ ರಾಜರ್ಷಿಯ ಸ್ಥಾನ ದೊರೆತಾಗಲೂ ಅವರಿಗೆ ಸಮಾಧಾನವಾಗಿರಲಿಲ್ಲ. ಆ ಸಂದರ್ಭದಲ್ಲೇ ಅವರ ಮುಂದೆ ಪ್ರಾರ್ಥನೆಯನ್ನು ಹೊತ್ತು ತಂದದ್ದು ತ್ರಿಶಂಕು. ಶರೀರಸಮೇತವಾಗಿ ಸ್ವರ್ಗಕ್ಕೆ ಹೋಗಲು ಬಯಸಿದ್ದ ಅವನು, ವಸಿಷ್ಠರ ಮಾತನ್ನು ಉಲ್ಲಂಘಿಸಿ ವಸಿಷ್ಠಪುತ್ರರ ಬಳಿ ಹೋದದ್ದಕ್ಕೆ ಶಪಿತನಾಗಿ ಚಂಡಾಲರೂಪವನ್ನು ಹೊಂದಿದ್ದನು.
ವಿಶ್ವಾಮಿತ್ರರಿಗೆ ಅವನಲ್ಲಿ ಕಾರುಣ್ಯವುಕ್ಕಿಬಂದು ಅವನ ಚಂಡಾಲರೂಪದಲ್ಲಿಯೇ ಸ್ವರ್ಗಕ್ಕೇರುವಂತೆ ತಾನು ಮಾಡುತ್ತೇನೆಂದು ಮಾತುಕೊಟ್ಟರು. ತಮ್ಮ ತೇಜಶ್ಶಾಲಿಗಳಾದ ಪುತ್ರರನ್ನೂ ಎಲ್ಲ ಶಿಷ್ಯರನ್ನೂ ಕರೆದು ಯಜ್ಞಕ್ಕೆ ಸಿದ್ಧತೆ ಮಾಡಲು ಆಜ್ಞಾಪಿಸಿದರು. ಅವರ ಆಹ್ವಾನವನ್ನು ಮನ್ನಿಸಿ ಬಂದ ಮಹರ್ಷಿಗಳು ಹಲವರಾದರೂ ವಸಿಷ್ಠಪುತ್ರರು ನಿಷ್ಠುರದ ಮಾತುಗಳಿಂದ ನಿಮಂತ್ರಣವನ್ನು ಅಸ್ವೀಕಾರಮಾಡಿದರು. ಕ್ರುದ್ಧರಾದ ಕೌಶಿಕರು (ಎಂದರೆ ವಿಶ್ವಾಮಿತ್ರರು) ಅವರನ್ನು ಶಪಿಸಿ, ಸುಟ್ಟು ಬೂದಿಮಾಡಿ, ಯಜ್ಞ ನಡೆಸಿದರು. ತಮ್ಮ ತಪೋಬಲದಿಂದಲೇ ತ್ರಿಶಂಕುವನ್ನು ಸ್ವರ್ಗಕ್ಕೇರಿಸಿದರು. ಸ್ವರ್ಗದಲ್ಲಾದರೋ ದೇವೇಂದ್ರನು ಗುರುಶಾಪಗ್ರಸ್ತನಾದ ತ್ರಿಶಂಕುವನ್ನು ಪುನಃ ಭೂಮಿಗೆ ತಳ್ಳಿದನು. ಬೀಳುತ್ತಿದ್ದ ಅವನನ್ನು ಮಧ್ಯದಲ್ಲೇ "ನಿಲ್ಲು! ನಿಲ್ಲು!" ಎಂದು ಹೇಳಿ ಅವನ ಪತನ ತಡೆದ ವಿಶ್ವಾಮಿತ್ರರು, ಮತ್ತೊಬ್ಬ ಬ್ರಹ್ಮನಂತೆ ಇನ್ನೊಂದು ಸ್ವರ್ಗವನ್ನೇ ಸೃಷ್ಟಿಸಲು ಸಂಕಲ್ಪಿಸಿದರು. ತಮ್ಮ ತಪಶ್ಶಕ್ತಿಯಿಂದ ಮಾಡುತ್ತಿದ್ದ ಆ ಸರ್ಜನೆಯಿಂದ ಕಂಗಾಲಾದ ದೇವತೆಗಳು ಅವರನ್ನು ಯಾಚಿಸಲು, ಅವರು ತಮ್ಮ ಪ್ರತಿಸೃಷ್ಟಿಕಾರ್ಯವನ್ನು ನಿಲ್ಲಿಸಿದರು. ಅದಕ್ಕೆ ಪ್ರತಿಯಾಗಿ ತಮ್ಮ ಸೃಷ್ಟಿಯೂ, ತ್ರಿಶಂಕುವಿಗೆ ತಾವು ಕೊಟ್ಟ ಮಾತೂ, ಉಳಿಯಬೇಕೆಂದೂ ವಿಶ್ವಾಮಿತ್ರರೂ ಕೇಳಿಕೊಂಡರು. ಹೀಗೆ ತಪೋಧನವನ್ನು ವ್ಯಯಮಾಡಿ ಸೃಷ್ಟಿಸಿದ ಸ್ವರ್ಗದಲ್ಲಿ ತ್ರಿಶಂಕುವು ತಲೆಕೆಳಕಾಗಿ ನಿಲ್ಲುವಂತಾಯಿತು. ತಮ್ಮ ತಪಸ್ಸಿಗಾದ ಈ ಮಹಾವಿಘ್ನವನ್ನು ಅವರು ಗಮನಿಸಿ ಬೇರೊಂದು ದಿಕ್ಕಿಗೆ ಅವರು ತಪಸ್ಸನ್ನು ಮುಂದುವರೆಸಲು ಹೊರಟರು.
ತ್ರಿಶಂಕುವಿಗೆ ಸಿಕ್ಕ ಶಾಶ್ವತಸ್ಥಾನದಂತೆ ಈ ತ್ರಿಶಂಕುಸ್ವರ್ಗವಾದರೋ ಗಾದೆಗಳಲ್ಲಿ ನಾಣ್ಣುಡಿಗಳಲ್ಲಿ ಶಾಶ್ವತವಾಗಿ ನಿಂತಿದೆ. ತಪಃಶಕ್ತಿಯಿಂದ ಈ ರೀತಿಯ ಸೃಷ್ಟಿಮಾಡುವುದೇನು ಸಣ್ಣ ಸಾಧನೆಯಲ್ಲ. ಮಹಾತ್ಮರೂ ಧರ್ಮಾತ್ಮರೂ ಆದ ವಿಶ್ವಾಮಿತ್ರರು ಕರುಣೆಯಿಂದಲೇ ತ್ರಿಶಂಕುವಿಗೆ ಸಹಾಯ ಮಾಡಲು ಹೊರಟದ್ದು. ಆದರೂ ಎಲ್ಲೋ ಒಂದು ಕಡೆ ಅವರಿಗೆ "ವಸಿಷ್ಠರು ಮಾಡಲು ಆಗದು ಎಂದದ್ದನ್ನು ನಾನು ಮಾಡಿ ತೋರಿಸುತ್ತೇನೆ" ಎನ್ನುವ ಅಹಂಭಾವವೂ ಆಡುತ್ತಿತ್ತು. ವಸಿಷ್ಠಪುತ್ರರಿಗೆ ಶಪಿಸಲೂ, ನಂತರ ತ್ರಿಶಂಕುವನ್ನು ಸಶರೀರನಾಗಿ ತಪೋಬಲದಿಂದಲೇ ಸ್ವರ್ಗಕ್ಕೇರಿಸಲೂ, ಅವನಿಗೆ ಸ್ವರ್ಗಕ್ಕೆ ಪ್ರವೇಶ ಸಿಗದಿದ್ದಾಗ ಮತ್ತೊಂದು ಸ್ವರ್ಗವನ್ನೇ ಸೃಷ್ಟಿಮಾಡಲೂ ಅವರು ತೆತ್ತ ಬೆಲೆ ಬಹುದೊಡ್ಡದು. ಒಂದು ಲೆಕ್ಕದಲ್ಲಿ ಅವರು ವ್ಯಯ ಮಾಡಿದ್ದನ್ನು ಶ್ರೀರಂಗಮಹಾಗುರುಗಳ ಈ ಮಾತುಗಳಿಗೆ ಹೋಲಿಸಬಹುದು: "ಸಂಪಾದಿಸಿದ್ದನ್ನು ಹೇಗೆ ಸದ್ವಿನಿಯೋಗಿಸಬೇಕೆಂಬುದು ವಿದ್ಯಾವಂತನಿಗೆ ತಾನೆ ಗೊತ್ತು. ತಲೆ ಕೆಟ್ಟವನಾದರೆ ನೋಟಿನ ಕಂತೆಯನ್ನು ಬೆಂಕಿಗೆ ಹಾಕಿ ಚಳಿ ಕಾಯಿಸಿಕೊಳ್ಳುತ್ತಾನೆ." ಆದ್ದರಿಂದ ನಾವು ಮದದ ಪೋಷಣೆ ಮಾಡದೆ, ದಮದಿಂದ ವರ್ತಿಸಿದರೆ ಅನಗತ್ಯವ್ಯಯಗಳನ್ನು ಮಾಡದ ವಿವೇಕಿಗಳಾಗುತ್ತೇವೆ.