Sunday, February 22, 2026

ಪ್ರಶ್ನೋತ್ತರ ರತ್ನಮಾಲಿಕೆ 54 (Prasnottara Ratnamalike 54)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ - ೫೪ - ಮಾತಿಗೆ ಭೂಷಣ ಯಾವುದು ?

ಉ. ಸತ್ಯ.

ಮಾತಿಗೆ ಭೂಷಣವಾದುದು ಯಾವುದು? ಎಂಬುದು ಪ್ರಶ್ನೆ. ಅದಕ್ಕೆ ಉತ್ತರ 'ಸತ್ಯ' ಎಂಬುದು. ಅಂದರೆ ಮಾತು ಮತ್ತು ಸತ್ಯ ಇವೆರಡೂ ಪರಸ್ಪರ ಅನ್ಯೋನ್ಯವಾದವುಗಳು ಎಂಬುದು ಇದರ ತಾತ್ಪರ್ಯವಷ್ಟೇ. ಮಾತು ಯಾವಾಗ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬಲ್ಲದು? ಅಥವಾ ಮಾತು ಯಾವಾಗ ಪರಿಪೂರ್ಣವಾಗಬಲ್ಲದು? ಎಂದರೆ ಆ ಮಾತಿನಲ್ಲಿ ಸತ್ಯ ಹುದುಗಿದಾಗ, ಎಂಬುದು ಇದರ ಹಿಂದಿರುವ ಆಶಯವಷ್ಟೇ. ಮಾತಿನಲ್ಲಿ ಸತ್ಯವಿಲ್ಲದಿದ್ದರೆ ಅದು ಪೂರ್ಣವಾಗಲಾರದು. ಅದಕ್ಕಾಗಿ ಸತ್ಯವನ್ನು ಮಾತಿಗೆ ಭೂಷಣ ಎಂಬುದಾಗಿ ಹೇಳಲಾಗಿದೆ. 'ಭೂಷಣ' ಎಂದರೆ ಅಲಂಕಾರ ಎಂದರ್ಥ. ಅಂದರೆ ಸತ್ಯದಿಂದ ಮಾತ್ರವೇ ಮಾತು ಅಲಂಕೃತವಾಗುತ್ತದೆ. ಮಾತು ಆಡಿದವರನ್ನು ಅಲಂಕರಿಸುತ್ತದೆ. ಅವರನ್ನು ಮಾನ್ಯರನ್ನಾಗಿ ಮಾಡುತ್ತದೆ ಎಂಬುದಷ್ಟೇ ಇಲ್ಲಿನ ವಿಷಯ.

ಮಾತು ಹೇಗಿರಬೇಕು? ಮಾತಿನ ಮೌಲ್ಯವೇನು? ಇತ್ಯಾದಿ ವಿಷಯದ ಬಗ್ಗೆ ವೇದದಿಂದ ಹಿಡಿದು ಎಲ್ಲ ಸಾಹಿತ್ಯಗಳಲ್ಲೂ ವಿಪುಲವಾಗಿ ಹೇಳಿದ್ದನ್ನು ನಾವು ಕಾಣಬಹುದು. ಅಂತೆಯೇ ಮಾತಿಗೂ ಮಿಗಿಲಾಗಿ ಸತ್ಯವನ್ನು ಇನ್ನಷ್ಟು ವಿವರವಾಗಿ ಹೇಳಿದ್ದನ್ನು ಕಾಣಬಹುದು. ಹಾಗಾಗಿ ಮಾತು ಮತ್ತು ಸತ್ಯ ಎರಡು ಒಂದಕ್ಕೊಂದು ಎಡಬಿಡದೆ ಸೇರಿರುವ ಎರಡು ಸಂಗತಿಗಳು ಎಂಬುದನ್ನು ಹೇಳಬಹುದು. ಮಾತಿನಲ್ಲಿ ಸತ್ಯ ಎಂಬುದು ಅತ್ಯಂತ ಅನಿವಾರ್ಯ. ಉಪನಿಷತ್ತು ಈ ಮಾತನ್ನು ಸಾರುತ್ತದೆ - "ಸತ್ಯಂ ವದ" ಎಂಬುದಾಗಿ. ಸತ್ಯವನ್ನು ಮಾತನಾಡಬೇಕು. ಸತ್ಯವನ್ನೇ ಮಾತನಾಡಬೇಕು. ಸತ್ಯವನ್ನು ಬಿಟ್ಟು ಬೇರೆ ಯಾವುದೂ ಕೂಡ ಮಾತಿನಲ್ಲಿ ಇರಬಾರದು. ಅಷ್ಟರಮಟ್ಟಿಗೆ ಮಾತು ಸತ್ಯವನ್ನು ಆವರಿಸಿಕೊಂಡು ಇರಬೇಕು. ಮಾತಾಡಿದರೆ ಅದು ಸತ್ಯವೇ ಆಗಿರಬೇಕು. ಸತ್ಯವಲ್ಲದ ಮಾತನ್ನು ಆಡಬಾರದು ಎಂಬುದು ಇದರ ಅರ್ಥ. ರಘುವಂಶದ ರಾಜರು ಸತ್ಯವನ್ನು ಯಾವ ರೀತಿಯಾಗಿ ಆಚರಿಸುತ್ತಿದ್ದರು? ಎಂಬುದನ್ನು ಕಾಳಿದಾಸ ಹೀಗೆ ಹೇಳುತ್ತಾನೆ - "ಸತ್ಯಾಯ ಮಿತಭಾಷಿಣಾಮ್" ಎಂಬುದಾಗಿ. ಅಂದರೆ ಅವರ ಮಾತುಗಳಲ್ಲಿ ಮಿತಿ ಇರುತ್ತಿತ್ತು. ಅದಕ್ಕೆ ಕಾರಣ ಆ ಮಾತು ಸತ್ಯದಿಂದ ಕೂಡಿತ್ತು. ಯಾವ ಮಾತು ಸತ್ಯದಿಂದ ಕೂಡಿರುತ್ತದೆಯೋ, ಆ ಮಾತು ಹಿತವು ಮಿತವು ಆಗಿಯೇ ಇರಬೇಕು. ಅಂತಹ ಸತ್ಯದ ನಡೆಯನ್ನು ಆ ರಾಜರ ನಡೆಯಲ್ಲಿ ಕಾಣಬಹುದಾಗಿತ್ತು. 

ಸತ್ಯ ಎಂದರೆ ಇದ್ದದ್ದನ್ನು ಇದ್ದಂತೆಯೇ ಹೇಳುವುದು, 'ಯಥಾರ್ಥವಚನಂ' ಎಂಬುದಾಗಿ. ಸತ್ಯವನ್ನು ಹೇಳುವುದರಿಂದ ಯಾವೆಲ್ಲ ಲಾಭಗಳು ಆಗುತ್ತವೆ ಎಂಬುದನ್ನು ವೇದ, ಪುರಾಣ, ಇತಿಹಾಸ ಮೊದಲಾದ ಎಲ್ಲಾ ಗ್ರಂಥಗಳೂ ಸಾರುತ್ತವೆ. ಯೋಗಶಾಸ್ತ್ರವು ಹೀಗೆ ಹೇಳುತ್ತದೆ 'ಯಾರು ಸತ್ಯವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುತ್ತಾರೋ, ಅವರು ಹಾಡಿದ ಮಾತುಗಳು ಯಥಾರ್ಥವಾಗುತ್ತವೆ ಎಂಬುದಾಗಿ. "ಸತ್ಯಪ್ರತಿಷ್ಠಾಯಾಂ ಕ್ರಿಯಾಫಲಾಶ್ರಯತ್ವಮ್" ಅಂದರೆ ಮಾಡದ ಕ್ರಿಯೆಗೆ ಫಲ ದೊರಕಿಸುವ ಸಾಮರ್ಥ್ಯ ಸತ್ಯವಚನಕ್ಕೆ ಇದೆ ಎಂಬಷ್ಟರ ಮಟ್ಟಿಗೆ ಸತ್ಯದ ಸಾಮರ್ಥ್ಯವನ್ನು ಇಲ್ಲಿ ಕೊಂಡಾಡಲಾಗಿದೆ. ಹಾಗಾಗಿ ಸತ್ಯವಿದ್ದರೆ ಮಾತ್ರ ಅದು ಮಾತಾಗುತ್ತದೆ. ಸತ್ಯವಿಲ್ಲದಿದ್ದರೆ ಅದು ಕೇವಲ ಶಬ್ದಾಡಂಬರವಾಗುತ್ತದೆ. ಸತ್ಯವೆಂದರೆ ಭಗವಂತ. ಅವನನ್ನು ಹೊತ್ತ ಮಾತು ಸತ್ಯವೇ ಆಗಿರುತ್ತದೆ. ಯಾವುದೇ ಮಾತನ್ನು ಆಡಬೇಕಾದರೂ ಆ ಮಾತು ಭಗವಂತನ ಅಥವಾ ಅವನ ಸೃಷ್ಟಿಯ ನಡೆಗೆ ವಿರೋಧವಾಗುವಂತೆ ಇರಬಾರದು. ಅಂತಹ ಸತ್ಯ ಮಾತಿಗೆ ಭೂಷಣ ಎಂಬುದು ಈ ಪ್ರಶ್ನೋತ್ತರದ ಆಶಯವಾಗಿದೆ.

ಸೂಚನೆ : 22/2/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.