ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಕೃಷ್ಣನಿಗೆ ಅಗ್ರಪೂಜೆಯೆಂಬುದನ್ನು ಪ್ರತಿಭಟಿಸಿ ಶಿಶುಪಾಲನು ಭೀಷ್ಮ-ಯುಧಿಷ್ಠಿರರನ್ನು ಮೂದಲಿಸಿ ಹೇಳುತ್ತಿದ್ದಾನೆ:
“ಭೀಷ್ಮನೇ, ನಿನ್ನಂತಹ ಧರ್ಮಾತ್ಮನಾದವನೂ ಸಹ ಯಾರಿಗೋ ಪ್ರಿಯವಾದುದನ್ನು ಮಾಡಬೇಕೆಂಬ ಬಯಕೆಯಿಂದ ಅತಿಯಾದ ವರ್ತನೆಯನ್ನು ತೋರಿದರೆ, ಲೋಕದಲ್ಲಿ ಸಜ್ಜನರಿಂದ ಅವಮಾನಕ್ಕೆ ಪಾತ್ರನಾಗಬೇಕಾದೀತು.
ಈ ಕೃಷ್ಣನಾದರೂ ರಾಜನೇ ಅಲ್ಲ. ಹಾಗಿರಲು ಸಮಸ್ತ ರಾಜರುಗಳ ನಡುವೆ ನೀವುಗಳು ತೋರಿಸಿರುವ ಆದರಕ್ಕೆ ಅವನು ಅದೆಂತು ಪಾತ್ರನಾದಾನು? ಒಂದು ವೇಳೆ ಕೃಷ್ಣನನ್ನು ಸಾಕಷ್ಟು ವಯಸ್ಸಾದವನೆಂದು ನೀನು ಭಾವಿಸುವೆಯಾದರೆ, ಆತನ ತಂದೆಯೂ ವೃದ್ಧನೂ ಆದ ವಸುದೇವನೇ ಇಲ್ಲಿರಲಾಗಿ, ಆತನ ಮಗನು ಇದಕ್ಕೆ ಹೇಗೆ ತಾನೆ ಅರ್ಹನಾದಾನು?
ಒಂದು ವೇಳೆ ವಾಸುದೇವನು ನಿಮ್ಮಗಳಿಗೆ ಪ್ರಿಯವಾದುದನ್ನು ಮಾಡತಕ್ಕವನು, ಹಾಗೂ ನಿಮ್ಮನ್ನು ಅನುಸರಿಸತಕ್ಕವನು - ಎಂಬುದೇ ಲೆಕ್ಕವಾದರೆ, ದ್ರುಪದನಿಲ್ಲಿರುವಾಗ ಮಾಧವನಿಗೆಂತು ಪೂಜೆಯು ಸಂದೀತು?
ಅಯ್ಯಾ ಕುರುನಂದನ, ಒಂದು ವೇಳೆ ಕೃಷ್ಣನನ್ನು ನೀನು ಆಚಾರ್ಯನೆಂಬುದಾಗಿ ಭಾವಿಸುವೆಯಾದರೆ, ದ್ರೋಣರೇ ಇಲ್ಲಿರಲು ಅದೆಂತು ಕೃಷ್ಣನ ಅರ್ಚನೆಯನ್ನು ಮಾಡಿರುವೆ?
ಅಲ್ಲಯ್ಯಾ, ಒಂದು ವೇಳೆ ನೀನು ಕೃಷ್ಣನನ್ನು ಋತ್ವಿಕ್ಕು ಎಂದು ಭಾವಿಸುವುದಾದರೆ, ವೃದ್ಧರಾದ ದ್ವೈಪಾಯನರೇ ಇಲ್ಲಿರಲಾಗಿ ಕೃಷ್ಣನಿಗೆ ನೀನು ಅರ್ಚನೆಯನ್ನು ಮಾಡಿದ್ದಾದರೂ ಹೇಗೆ?
ಇನ್ನು ಭೀಷ್ಮರು: ಅವರು ಪುರುಷಶ್ರೇಷ್ಠರು. ಸ್ವಚ್ಛಂದ-ಮೃತ್ಯುಗಳು - ಎಂದರೆ ಬೇಕೆನಿಸಿದಾಗ ಪ್ರಾಣಬಿಡಲು ಸಮರ್ಥರಾಗಿರತಕ್ಕವರು. ಅವರಿರುವಾಗ ಕೃಷ್ಣನ ಅರ್ಚನೆಯೇ?
ಸರ್ವಶಾಸ್ತ್ರವಿಶಾರದನಾದ ವೀರ ಅಶ್ವತ್ಥಾಮನು ಇರುವಾಗ ಕೃಷ್ಣನಿಗೆ ಅರ್ಚನೆಯೆಂಬುದು ಸಂದಿತೆಂತು? ಅಲ್ಲದೆ, ರಾಜರಾಜನಾದ ದುರ್ಯೋಧನನಿಲ್ಲವೇ, ಪುರುಷಶ್ರೇಷ್ಠನಾಗಿ? ಅಥವಾ ಭರತವಂಶಕ್ಕೇ ಆಚಾರ್ಯರೆನಿಸುವ ಕೃಪಾಚಾರ್ಯರಿಲ್ಲವೇ? ಅವರಿರುವಾಗ ಕೃಷ್ಣಾರ್ಚನೆಯೇ? ಕಿಂಪುರುಷರ ಆಚಾರ್ಯನಾದ ದ್ರುಮ, ಇವರಲ್ಲದೆ ಸುಲಕ್ಷಣನಾದ ಭೀಷ್ಮಕ, ರುಕ್ಮಿ, ಏಕಲವ್ಯ, ಶಲ್ಯ - ಇವರೆಲ್ಲ ಇಲ್ಲವೇ?
ಅನೇಕ ರಾಜರನ್ನು ಯುದ್ಧದಲ್ಲಿ ಜಯಿಸಿರುವವನೂ, ಪರಶುರಾಮನ ಶಿಷ್ಯನೂ ಆಗಿರುವ ಕರ್ಣನೇ ಇಲ್ಲಿರುವಾಗ, ನೀನು ಕೃಷ್ಣನನ್ನು ಅರ್ಚಿಸುವುದೆಂತು? ಇತ್ತ ಋತ್ವಿಕ್ಕಲ್ಲ, ಅಥವಾ ಆಚಾರ್ಯನಲ್ಲ, ಅತ್ತ ರಾಜನಲ್ಲ. ಹೀಗಿರುವಾಗ ಅಂತಹ ಕೃಷ್ಣನಿಗೆ ಅರ್ಚನೆಯೆಂದರೆ ಅದಕ್ಕೆ ಕಾರಣವೇನು? - ನಿನಗಾವುದೋ ಪ್ರಿಯವಾದ ಕಾಮನೆಯು ಪೂರ್ತಿಗೊಳ್ಳಬೇಕಾಗಿದೆಯೆಂಬುದನ್ನು ಬಿಟ್ಟರೆ ಮತ್ತಿನ್ನೇನು?
ಅಥವಾ ನಿಮ್ಮ ಲೆಕ್ಕದಲ್ಲಿ ಈ ಮಧುಸೂದನನೇ ಅರ್ಚನೆಗೆ ಯೋಗ್ಯವೆಂಬುದಾದರೆ, ಇಲ್ಲಿಗೆ ಈ ರಾಜರನ್ನೆಲ್ಲ ಕರೆತಂದು ಅವಮಾನಪಡಿಸುವುದೇತಕ್ಕೆ? ಮಹಾತ್ಮನಾದ ಯುಧಿಷ್ಠರನಿಗೆ ನಾವೆಲ್ಲ ಕರವನ್ನು ಕೊಡುತ್ತಿರುವೆವೆಂದರೆ ಅದೇನೂ ಈತನ ವಿಷಯದಲ್ಲಿಯ ಭಯಕ್ಕಾಗಿಯಲ್ಲ, ಅಥವಾ ಯಾವುದೇ ಲೋಭಕ್ಕಲ್ಲ, ಮತ್ತಾವುದೇ ಆಶ್ವಾಸನೆಗಾಗಿಯೂ ಅಲ್ಲ. ನಾವಂದುಕೊಂಡದ್ದು ಈ ಯುಧಿಷ್ಠಿರನು ಧರ್ಮಿಷ್ಠನೆಂದು. ಸಮ್ರಾಟನಾಗಲು ಬಯಸಿರುವನೆಂದು. ನಾವೇನೋ ಈತನಿಗೆ ಕರವನ್ನು ಕೊಡುತ್ತಿದ್ದೇವೆ. ಆದರೆ ಈತನು ನಮ್ಮನ್ನು ಗಣನೆಗೇ ತೆಗೆದುಕೊಳ್ಳನೇ!
ಛತ್ರ-ಚಾಮರಾದಿಲಕ್ಷಣಗಳನ್ನೇ ಪಡೆದಿಲ್ಲದ ಈ ಕೃಷ್ಣನಿಗೆ ನೀನು ಪೂಜೆಯನ್ನು ಸಲ್ಲಿಸಿರುವೆಯೆಂದರೆ ರಾಜರುಗಳ ಸಭೆಯಲ್ಲಿ ಇದು ಅವಮಾನವಲ್ಲದೆ ಮತ್ತಿನ್ನೇನು? ಧರ್ಮಪುತ್ರನಾದ ಈ ಯುಧಿಷ್ಠಿರನಿಗೆ ಧರ್ಮಾತ್ಮನೆಂಬ ಯಶಸ್ಸೇನೋ ಸಂಪ್ರಾಪ್ತವಾಯಿತು. ಆದರೆ ಧರ್ಮಚ್ಯುತನಾದ ಅದಾವನಿಗೆ ಈ ರೀತಿಯಾಗಿ ಯಾರಾದರೂ ಪೂಜೆಯನ್ನು ಸಲ್ಲಿಸಿಯಾರು? ವೃಷ್ಣಿವಂಶದಲ್ಲಿ ಜನಿಸಿದ ಈ ದುರಾತ್ಮನು ಕೆಲಕಾಲದ ಹಿಂದೆ ಮಹಾತ್ಮನಾದ ಜರಾಸಂಧನನ್ನು ನ್ಯಾಯವಲ್ಲದ ಬಗೆಯಲ್ಲಿ ಕೊಲೆಗೈದಿರುವನು!
ಈಗ ಯುಧಿಷ್ಠಿರನಿಂದ ಧರ್ಮಾತ್ಮತೆಯೆಂಬುದು ದೂರ ಸರಿದಿದೆ; ಕೃಷ್ಣನಿಗೆ ಅರ್ಘ್ಯವೆಂಬುದನ್ನು ಸಲ್ಲಿಸಿರುವುದಾದ್ದರಿಂದ ತನ್ನ ಕೃಪಣತೆಯನ್ನೇ ಆತ ತೋರಿಸಿರುವುದಾಗಿದೆ.”