Sunday, August 18, 2024

ಯಕ್ಷ ಪ್ರಶ್ನೆ 103 (Yaksha prashne 103)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ –  102 ಮತ್ಸರ ಎಂದರೆ ಯಾವುದು ?

ಉತ್ತರ - ಹೃದಯಸಂತಾಪ 

ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ ಎಂಬುದಾಗಿ ನಮ್ಮ ಒಳಗೆ ಆರು ಶತ್ರುಗಳಿವೆ. ಇವುಗಳಲ್ಲಿ ಕೊನೆಯ ಶತ್ರು ಮಾತ್ಸರ್ಯ. ಮತ್ಸರದಿಂದ ಉಟ್ಟಾಗುವ ಭಾವವೇ ಮಾತ್ಸರ್ಯ. ಬೇರೆಯವರ ಉಳ್ಳೆಯದನ್ನು, ಏಳಿಗೆಯನ್ನು ಒಪ್ಪಿಕೊಳ್ಳದ ಅಥವಾ ಬೇರೆಯವರ ಸಂಪತ್ತನ್ನು ನೋಡಿ ಸಹಿಸದಿರುವ ಸ್ವಭಾವಕ್ಕೆ ಮಾತ್ಸರ್ಯ ಎನ್ನುತ್ತಾರೆ. ಬೇರೆಯವರ ಹಿರಿತನವನ್ನು ಮಹಿಮೆಯನ್ನು ಅಥವಾ ಗರಿಮೆಯನ್ನು ನೋಡಿದಾಗ ತನ್ನ ಮೇಲೆ ಕೀಳರಿಮೆ ಬರುತ್ತದೆ. ಅವನ ಎದುರು ತಾನು ಮತ್ತು ತನ್ನದು ನ ಗಣ್ಯ ಎಂದು ಅನ್ನಿಸುತ್ತದೆ. ಆಗ ಅವನಲ್ಲಿ ತನ್ನ ಬಗ್ಗೆ, ತನ್ನ ತನತದ ತನ್ನಲಿರುವ ವಸ್ತು ವಿಚಾರ ವಿದ್ಯೆ ಮೊದಲಾದವುಗಳ ಬಗ್ಗೆ ಧಿಕ್ಕಾರವಿರಲಿ ಎಂಬ ಭಾವ ಬರುತ್ತದೆ. ಇದನ್ನೇ ವಸ್ತುತಃ ಮಾತ್ಸರ್ಯ ಎನ್ನಬಹುದು. ಇದನ್ನು ಅಂತಃಶತ್ರು ಎನ್ನಲಾಗಿದೆ. ಬಾಹ್ಯಶತ್ರುವಾದರೋ ನಮ್ಮ ಬಾಹ್ಯಜೀವನಕ್ಕೆ ತೊಡಕನ್ನು ಉಂಟುಮಾಡಬಹುದು. ಅದರಿಂದ ನಮ್ಮ ಶರೀರಕ್ಕೆ ತನ್ಮೂಲಕ ಮಾನಸಿಕವಾದ ಕ್ಲೇಶಕ್ಕೂ ಕಾರಣವಾಗಬಹುದು. ಇದರಿಂದ ಉಂಟಾಗುವ ಮಾನಸಿಕ ಕ್ಲೇಶವು ನಿಧಾನವಾಗಿ ಆಗಬಹುದು. ಆದರೆ ಅಂತರಂಗದ ಶತ್ರುವು ನೇರವಾಗಿ ಮನಸ್ಸಿನ ಮೇಲೆಯೇ ಪರಿಣಾಮವನ್ನು ನೀಡುತ್ತದೆ. ಅದು ಹೇಗೆ? ಎಂಬುದನ್ನು ಇಲ್ಲಿ ಯಕ್ಷಪ್ರಶ್ನೆಯಾಗಿ ಕೇಳಲಾಗಿದೆ. ಅದಕ್ಕೆ ಉತ್ತರ 'ಹೃದಯ ಸಂತಾಪ' ಎಂಬುದಾಗಿ. 

ಹೃದಯ ಸಂತಾಪವೆಂದರೆ ಹೃದಯವನ್ನು ಸುಡುವುದು. ಇದನ್ನೇ ಹೊಟ್ಟೆಕಿಚ್ಚು, ಅಸೂಯೆ ಮೊದಲಾದ ಪದಗಳಿಂದ ಕರೆಯುವುದೂ ಉಂಟು. ಗುಣ ಇರುವವರಲ್ಲಿ ದೋಷವನ್ನು ಹುಡುಕುವುದು, ಬೇರೆಯವರಲ್ಲಿ ಇಲ್ಲ ಸಲ್ಲದ ಆರೋಪವನ್ನು ಮಾಡುವುದು ಇಂತಹ ನಡೆಯನ್ನೇ ಮಾತ್ಸರ್ಯ ಎನ್ನುಬಹುದು.  ಸುಡುವಧರ್ಮದಿಂದ ಕೂಡಿದ್ದರಿಂದ ಅದು ಅಗ್ನಿಗೆ ಸಮಾನ. ಈ ಮಾತ್ಸರ್ಯ ಎಂಬ ಅಂತಃಶತ್ರುವು ನಮ್ಮ ಹೃದಯವನ್ನು ಸುಡುತ್ತದೆ. ಅಂದರೆ ಹೃದಯ ಎಂದು ಕರೆಸಿಕೊಳ್ಳುವ ಶರೀರದ ಭಾಗವನ್ನು ಭಸ್ಮವಾಗಿಸುತ್ತದೆ ಎಂಬ ಅರ್ಥವಲ್ಲ.  ಯಾವ ಶರೀರದ ಭಾಗದಿಂದ ನಮ್ಮ ಸುಖ ಅಥವಾ ದುಃಖದ ಸಂವೇದನೆಯನ್ನು ಭಾವಿಸುತ್ತೇವೋ ಅಥವಾ ಅನುಭವಿಸುತ್ತೇವೋ ಅದಕ್ಕೆ 'ಹೃದಯ' ಎಂದು ಕರೆಯುತ್ತೇವೆ. ಸುಖದುಃಖಗಳ ಸಂವೇದನೆಯು ಮನಸ್ಸಿನ ಕಾರಣದಿಂದ ಆಗುತ್ತದೆ ಎಂದು ಅನೇಕ ಶಾಸ್ತ್ರಗಳು ಸಾರುತ್ತವೆ. ಆ ಮನಸ್ಸು ಇರುವ ಸ್ಥಾನ ಎಂದು ಗುರುತಿಸುವ ಜಾಗವನ್ನೇ 'ಹೃದಿ ಅಯಂ ಹೃದಯಂ' ಎಂಬ ವಿವರಣೆಯನ್ನು ಕೊಡುವುದರ ಮೂಲಕ ಹೃದಯಶಬ್ದವನ್ನು ಅರ್ಥಮಾಡಿಕೊಳ್ಳುವುದು ಉಂಟು. ಈ ಮಾತ್ಸರ್ಯವೆಂಬ ಗುಣವು ನಮ್ಮ ಮನಸ್ಸನ್ನು ಹಾಳು ಮಾಡುತ್ತದೆ. ಅದು ಹಾಳಾದರೆ ಅದರ ಪರಿಣಾಮದಿಂದ ನಮ್ಮ ಸಂಪೂರ್ಣ ಜೀವನವೇ ಹಾಳಾದಂತೆ. ಹಾಗಾಗಿ ನಾವು ನಮ್ಮ ಮನಸ್ಸನ್ನು ಹಾಳುಮಾಡಿಕೊಳ್ಳದಂತೆ ನೋಡಿಕೊಳ್ಳಬೇಕಾದರೆ ಮಾತ್ಸರ್ಯವನ್ನು ಬಿಡಬೇಕು. ನಮ್ಮ ಜೀವನವನ್ನು ನಿರ್ಮಿಸಿಕೊಳ್ಳುವ ಮನಸ್ಸೇ ಹಾಳಾದರೆ ಜೀವನವೇ ಹಾಳಾದಂತೆ. ಹಾಗಾಗಿ ಅತ್ಯಂತ ಹೇಯವಾದದ್ದರಿಂದ ದೂರವಿರಬೇಕು.   

ಸೂಚನೆ :18/8/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.