Sunday, December 5, 2021

ಅಷ್ಟಾಕ್ಷರ ದರ್ಶನ -1 ಧರ್ಮೋ ರಕ್ಷತಿ ರಕ್ಷಿತಃ (Astakshara Darshana -1 Dharmo Rakshati Rakshitah)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




'ಧರ್ಮ' - ಎಂಬುದು ಎಲ್ಲರೂ ಕೇಳಿರುವ ಪದವೇ. ಆದರೆ ಯಾರಾದರೂ "ಧರ್ಮ ಎಂದರೇನು ಹೇಳುವಿರಾ?" ಎಂದರೆ, ಉತ್ತರಕ್ಕಾಗಿ ತಡಕಾಡುವಂತಾಗುತ್ತದೆ! ಪುಟ್ಟದಾದ ಪದ, ದಟ್ಟವಾದ ಅರ್ಥ! ಕ್ಲಿಷ್ಟಪದಗಳಿಲ್ಲದೆ ಅರ್ಥವಾದಂತೆ ತೋರುತ್ತದೆ; ಸ್ಪಷ್ಟತೆಯಿಲ್ಲ. ಹೇಳಿದರೂ, ಕೇಳಿದವರಿಗಿರಲಿ, ಹೇಳಿದವರಿಗೂ ತೃಪ್ತಿಯಿರದು! ವಾಸ್ತವವಾಗಿ, "ಧರ್ಮೋ ರಕ್ಷತಿ ರಕ್ಷಿತಃ" ("ರಕ್ಷಿಸಲಾದ ಧರ್ಮವು ರಕ್ಷಿಸುತ್ತದೆ") - ಎಂಬುದರ ಅರ್ಥವು ತಿಳಿದರೆ ಧರ್ಮದ ಸ್ವರೂಪವೂ ತಿಳಿದಂತೆಯೇ ಸರಿ.

ಇಂದಂತೂ ಪರಿಸರಪ್ರಜ್ಞೆ ಅತಿಮುಖ್ಯವಲ್ಲವೇ? "ಮರಗಳನ್ನು ಕಾಪಾಡಿ, ಅವು ನಮ್ಮನ್ನು ಕಾಪಾಡುತ್ತವೆ" ಎಂದೀ ಮಾದರಿಯಲ್ಲೇ "ವೃಕ್ಷೋ ರಕ್ಷತಿ ರಕ್ಷಿತಃ" – ಎನ್ನಲಾಗುತ್ತಿದೆ:  "ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು" - ಎನ್ನುವಂತೆ, ಶೀರ್ಷಿಕೆ ಎಂಟೇ ಅಕ್ಷರಗಳ ಕಿರಿದಾದ ನುಡಿ;  ಅರ್ಥ ಹಿರಿದು. ಮಾತು ಮಿತವಾಗಿರಬೇಕು, ಒಳಗೆ ಅರ್ಥವು ಅಮಿತವಾಗಿರಬೇಕು: ಅದಲ್ಲವೆ ವಾಕ್-ಪಟುತ್ವ?: "ಮಿತಂ ಚ ಸಾರಂ ಚ".

ತನ್ನ ಗರ್ಭದಲ್ಲಿ ದೊಡ್ಡ ಅರ್ಥವನ್ನಿಟ್ಟುಕೊಂಡಿರುವ ಮಾತನ್ನೇ 'ಅರ್ಥಗರ್ಭಿತ' ಎನ್ನುವುದು. ಹಾಗೆ ಅತ್ಯಂತ ಅರ್ಥಗರ್ಭಿತವಾದ ಉಕ್ತಿಯಿದು. ಇಷ್ಟು ಹೇಳಿ ಪುಟ್ಟ ಸೂಕ್ತಿಯನ್ನು ದೊಡ್ಡದಾಗಿ ಕೊಂಡಾಡಿದಂತಾಯಿತೇ ವಿನಾ, ಆ ಉಕ್ತಿಯ ಅರ್ಥ ಹೊರಬರಲಿಲ್ಲ, ಮುಖ್ಯವಾಗಿ ಧರ್ಮವೆಂದರೇನೆಂದು ತಿಳಿದುಬರಲಿಲ್ಲ - ಅಲ್ಲವೇ?

ಹಿಂದೂ ಧರ್ಮ, ಕ್ರೈಸ್ತ ಧರ್ಮ, ಇಸ್ಲಾಂ ಧರ್ಮ – ಎಂದೆಲ್ಲಾ ಹೇಳಿದರೆ, ಇ(ವುಗಳ)ಲ್ಲಿ ಯಾವ ಧರ್ಮವನ್ನು ನಾವು ರಕ್ಷಿಸಬೇಕು? ಪ್ರತಿಯಾಗಿ ಯಾವುದು ನಮ್ಮನ್ನು ಕಾಪಾಡುತ್ತದೆ? - ಎಂಬ ಪ್ರಶ್ನೆ ಬರುವುದಲ್ಲವೇ? "ಎಲ್ಲ ಧರ್ಮಗಳೂ ಒಂದೇ" ಎನ್ನುವವರುಂಟು; ಹಾಗಾದರೆ ಇಸ್ಲಾಂ ಧರ್ಮವನ್ನು ಒಬ್ಬ ಬೌದ್ಧ ಕಾಪಾಡಿದರೆ, ಅದು ಅವನನ್ನು ಕಾಪಾಡುತ್ತದೆಯೆಂದರ್ಥಮಾಡಲಾದೀತೇ? ಈ ಬಗೆಯ ಪದಪ್ರಯೋಗವೇ ಭ್ರಾಮಕ, ತ್ಯಾಜ್ಯ.

ಹಿಂದೆಲ್ಲಾ ಭಿಕ್ಷುಕರೂ ಈ ಪದವನ್ನು ಸರಿಯಾಗಿ ಬಳಸುತ್ತಿದ್ದರು!: "ಧರ್ಮ ಮಾಡಿ ಸ್ವಾಮೀ" ಎನ್ನುತ್ತಿದ್ದರು; ಅವರ ಕೈಗೆ ಪುಡಿಗಾಸನ್ನು ಹಾಕುವವರು ಹಾಕುತ್ತಿದ್ದರು. ಹಾಗಾದರೆ "ಪುಡಿಗಾಸನ್ನು ಹಾಕುವುದು ಧರ್ಮ"ವೆಂದಾಯಿತು. ಅಲ್ಲಿಗೆ, ಈ ಪುಡಿಗಾಸು ಹಾಕುವುದನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸೀತೆಂಬ ಆಶಯವೇ?: ಇದೂ ತೃಪ್ತಿಕರವಲ್ಲ.

ಹಾಗಾದರೆ ಧರ್ಮವೆಂದರೆ ಏನಲ್ಲ? – ಎಂಬುದು ಸ್ವಲ್ಪಸ್ವಲ್ಪವಾಗಿ ಅರ್ಥವಾಗುತ್ತಿದೆಯೆನ್ನಬಹುದು. ಆದರೂ ಈ ಪದದ/ಉಕ್ತಿಯ ಉದ್ದೇಶವೇನೆಂಬುದು ಸ್ಫುಟವಾಗಲಿಲ್ಲ.

ಸರಿ, ಈ ಸೂಕ್ತಿಯು ಎಲ್ಲಿಯದೆಂದು ನೋಡೋಣವೇ?  ಮನುಸ್ಮೃತಿಯ ಮಾತಿದು, ಮಹಾಭಾರತದಲ್ಲೂ ಉಂಟು: "ಧರ್ಮವನ್ನು ಕೊಂದರೆ ಅದು ನಮ್ಮನ್ನು ಕೊಲ್ಲುವುದು; ರಕ್ಷಿಸಿದರೆ ರಕ್ಷಿಸುವುದು" ಎಂಬುದು ಪೂರ್ಣೋಕ್ತಿ.

ಈಗಿನ್ನೂ ಸಮಸ್ಯೆಯಾಯಿತು. ನಾನೊಂದು ಸಿಂಹವನ್ನು ಕೊಲ್ಲುತ್ತೇನೆನ್ನಿ; ಸತ್ತ ಸಿಂಹವು ಬಂದು ನನ್ನನ್ನು ಕೊಲ್ಲುವುದೇ? ಸತ್ತ ಧರ್ಮವು ನಮ್ಮನ್ನು ಸಾಯಿಸುವುದೇ?! "ಎಲ್ಲೋ ಹುಚ್ಚರ ಮಾತಿರಬೇಕಿದು" – ಎನ್ನಿಸುವುದಲ್ಲವೇ? ಅತ್ತ, "ಧರ್ಮವೆಂಬುದು ಎಷ್ಟು ದೊಡ್ಡದು!  ಅದನ್ನು ನಾವು ಕಾಪಾಡುವುದೇ?" - ಎಂದೂ ಪ್ರಶ್ನೆ ಬರುವುದೇ: ಹೇಗೂ ಗೋಜಲೇ!

"ಸುಡುವುದು ಬೆಂಕಿಯ ಧರ್ಮ", "ಬೋಧಿಸುವುದು ಶಿಕ್ಷಕರ ಧರ್ಮ" – ಎಂಬ ಈ ಯುಕ್ತ-ಪ್ರಯೋಗಗಳನ್ನು ನೋಡಿ: ಧರ್ಮ ಎಂಬುದು ಅಲ್ಲಲ್ಲಿಯ ಸಹಜಕರ್ಮ/ಸ್ವಭಾವ/ಕರ್ತವ್ಯಗಳನ್ನು ಹೇಳುತ್ತಿದೆಯಲ್ಲವೇ? ಹಾಗಾದರಿದೋ ಹೀಗೂ ಪ್ರಯೋಗಮಾಡಬಹುದು: ಕಂಪ್ಯೂಟರಿನ ಕೀಬೋರ್ಡ್ ಮೇಲೆ ಚಪ್ಪಡಿಕಲ್ಲು ತಳ್ಳಿ; ಅಕ್ಷರಗಳನ್ನು ಟಂಕಿಸುವ ಧರ್ಮವನ್ನು ಅದು ಕಳೆದುಕೊಳ್ಳುತ್ತದೆ:ಆ ಧರ್ಮವನ್ನು ನಾವೇ "ಸಾಯಿಸಿ"ದೆವು, ಎಂದರೆ, ಹಾಳುಗೆಡವಿದೆವು.

ಯಾವುದಕ್ಕಾಗಿ ಸೃಷ್ಟವಾಗಿದೆಯೋ ಆ ಶಕ್ತಿ-ಸ್ವಭಾವಗಳನ್ನು ಒಂದು ವಸ್ತು ಹಾಗೆಯೇ ಉಳಿಸಿಕೊಂಡರೆ ಅದು ತನ್ನ ಧರ್ಮದಲ್ಲಿದೆ – ಎನ್ನುತ್ತೇವೆ. ಹಾಲಿಗೇನಾದರೂ ಮೊಸರು ಸೋಕಿಬಿಟ್ಟರೆ, ಹಾಲಿನ ಧರ್ಮ ಹೋಗುವುದೇ. ಹಾಲಿನ ಧರ್ಮವನ್ನು ನಾವು "ಕಾಪಾಡು"ವುದೆಂದರೇನು? ಹಾಲು ಹಾಲಾಗಿರುವಂತೆ ಉಳಿಸಿರುವುದು; ಉದಾಹರಣೆಗೆ ಹುಳಿಹಿಂಡದಿರುವುದು. ಹಾಲಿನ ಧರ್ಮವು ಕೆಡದಂತೆ ನಾವು ಕಾಪಾಡಿದಲ್ಲಿ, ಅದು ನಮ್ಮನ್ನು "ಕಾಪಾಡು"ವುದು; ಹಾಗೆಂದರೇನು? ಅದನ್ನು ಸೇವಿಸಿದರೆ ನಮಗೆ ತುಷ್ಟಿ-ಪುಷ್ಟಿಲಾಭ. ಹುಳಿಹಿಂಡಿಟ್ಟಲ್ಲಿ ಅತ್ತ ಹಾಲಲ್ಲ, ಇತ್ತ ಮೊಸರಲ್ಲ: ಹಾಲು ಹಾಳು!

"ಬೀಜಕ್ಕೆ ಬೆಳೆಯುವುದು ಧರ್ಮ; ಅದಕ್ಕೆ ಪೋಷಕವಾದ ನೀರೆರೆಯುವ ಕ್ರಿಯೆಯೂ ಧರ್ಮವೇ"- ಎಂಬ ಸೂತ್ರರೂಪವಾದ ಭವ್ಯೋದಾಹರಣವನ್ನಿತ್ತು ಶ್ರೀರಂಗಮಹಾಗುರುಗಳು "ಧರ್ಮ"ಪದದ ಮರ್ಮವನ್ನು ಬಿಡಿಸಿಟ್ಟಿದ್ದಾರೆ: (ಮೂಲ)ಸ್ಥಿತಿ ಮತ್ತು (ಅನುಗುಣ)ಕ್ರಿಯೆ. ರೋಗಬಂದಾಗ ಬೇಕಾದುದು ಆರೋಗ್ಯವೆಂಬ ಧರ್ಮ. ಆ ಧರ್ಮದ ಪುನಸ್ಸಂಪಾದನೆ-ರಕ್ಷಣೆಗಳಿಗಾಗಿ ಪಾಲಿಸಬೇಕಾದುದು ಚಿಕಿತ್ಸಾಕ್ರಿಯೆಯೆಂಬ ಧರ್ಮ.

ಜೀವನಿಗೆ ದೇವನೊಂದಿಗಿನ ಯೋಗವು ಮೂಲಸ್ಥಿತಿ; ನಷ್ಟವಾಗಿದ್ದರೂ ಪುನಃಸಂಪಾದ್ಯವಾದ ಅದಕ್ಕಾಗಿನ ದಾನಪೂಜಾದಿಕ್ರಿಯೆಗಳೂ ಧರ್ಮವೇ. ನಾವು ಧರ್ಮವನ್ನು ರಕ್ಷಿಸಿಕೊಳ್ಳುವುದೆಂದರೆ ಇದುವೇ; ಇದರ ಫಲವೇ ನೆಮ್ಮದಿಯ ಮೂಲಧರ್ಮಪ್ರಾಪ್ತಿ: ಆತ್ಮರಕ್ಷಣೆ. ವ್ಯಕ್ತಿಧರ್ಮರಕ್ಷಣೆಯಂತೆಯೇ  ಸಮಾಜಧರ್ಮರಕ್ಷಣೆಯೂ.

ಸೂಚನೆ: 5/12/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.