ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಧನಪತಿಯಾದ ಕುಬೇರನ ದಿಕ್ಕೆಂದು ಪ್ರಸಿದ್ಧವಾದದ್ದು ಉತ್ತರದಿಕ್ಕು. ಅರ್ಜುನನು ಆ ದಿಕ್ಕನ್ನು, ಹಾಗೆಯೇ ಭೀಮಸೇನನು ಪೂರ್ವದಿಕ್ಕನ್ನು, ಜಯಿಸಿದನು. ಸಹದೇವನು ದಕ್ಷಿಣವನ್ನು, ಮತ್ತು ಅಸ್ತ್ರಜ್ಞನಾದ ನಕುಲನು ಪಶ್ಚಿಮದಿಕ್ಕನ್ನು ಜಯಿಸಿದನು.
ಇತ್ತ ಧರ್ಮರಾಜನಾದ ಯುಧಿಷ್ಠಿರ-ಪ್ರಭುವು ಮಾತ್ರ ಖಾಂಡವಪ್ರಸ್ಥದ ಮಧ್ಯದಲ್ಲಿಯೇ ಇದ್ದುಕೊಂಡು, ಮಿತ್ರರಿಂದ ಸುತ್ತುವರಿಯಲ್ಪಟ್ಟವನಾಗಿ, ಉತ್ತಮವಾದ ರಾಜಲಕ್ಷ್ಮಿಯಿಂದ ಕಂಗೊಳಿಸಿದನು. ಹಾಗೆಂದು ಸಂಕ್ಷೇಪವಾಗಿ ಹೇಳಿದರೇನು ಬಂತು? ವಿಸ್ತೃತವಾಗಿಯೂ ಹೇಳಬೇಕಲ್ಲವೇ?
ಮೊದಲು ಅರ್ಜುನನ ವಿಷಯ. ಕುಲಿಂದದೇಶದ ಅರಸರನ್ನು ಅರ್ಜುನನು ಮೊಟ್ಟಮೊದಲು ಜಯಿಸಿದನು. ಅದಕ್ಕಾಗಿ ತೀವ್ರವಾದ ಶ್ರಮವೇನೂ ಆತನಿಗೆ ಬೇಕಾಗಲಿಲ್ಲ. ಅವರೊಂದಿಗೆ ಆನರ್ತ, ಕಾಲಕೂಟ ಎಂಬ ರಾಜ್ಯಗಳನ್ನು ಗೆದ್ದನು. ಬಳಿಕ ಸುಮಂಡಲನೆಂಬ ರಾಜನನ್ನು ಗೆದ್ದನು. ಆಮೇಲೆ ಶಾಕಲದ್ವೀಪ ಹಾಗೂ ಸಪ್ತದ್ವೀಪಗಳ ಅರಸರೊಂದಿಗೆ ತುಮುಲವಾದ ಯುದ್ಧವೇ ಆಯಿತು. ಅಲ್ಲೆಲ್ಲಾ ಉತ್ತಮ-ಧನುರ್ಧಾರಿಗಳೇ ಇದ್ದರು.
ಅವರನ್ನು ಸೋಲಿಸಿದ ಬಳಿಗೆ ಪ್ರಾಗ್ಜ್ಯೋತಿಷ-ಪುರದತ್ತ ಧಾವಿಸಿದನು. ಅಲ್ಲಿನ ರಾಜ ಭಗದತ್ತ. ಆತನಿಗೆ ಕಿರಾತರ ಹಾಗೂ ಚೀನದೇಶದವರ ಸಹಕಾರವಿತ್ತು. ಸಾಗರ ಹಾಗೂ ಅದರ ಬಳಿಯ ಅನೂಪ(ಎಂದರೆ ಜೌಗು ಪ್ರದೇಶ)ಗಳ ಮಂದಿಯ ಸಹಕಾರವೂ ಇತ್ತು. ಎಂಟು ದಿನಗಳ ಯುದ್ಧವದು.
ಅಷ್ಟು ದಿನ ಸೆಣಸಿದ ಭಗದತ್ತನು ನಗುತ್ತಾ ದಣಿವರಿಯದ ಅರ್ಜುನನಿಗೆ ಹೇಳಿದನು: "ಮಹಾಬಾಹೋ ಅರ್ಜುನ, ಸಂಗ್ರಾಮಕ್ಕೆ ಶೋಭೆ ನಿನ್ನ ಪರಾಕ್ರಮ. ಇಂದ್ರಪುತ್ರನೆನಿಸಿದ ನಿನಗೆ ಇದು ಒಪ್ಪುತ್ತದೆ ಬಿಡು! ನಾನು ಸಹ ಇಂದ್ರನ ಮಿತ್ರನೇ. ರಣದಲ್ಲಿ ಶಕ್ರನಿಗೆ ಏನೂ ಕಡಿಮೆಯಿಲ್ಲದವನು. ಆದರೂ ನಿನ್ನ ಮುಂದೆ ನಾ ನಿಲ್ಲಲಾರೆ. ಪಾಂಡುಪುತ್ರನೇ, ನಿನಗೇನು ಬೇಕು ಹೇಳು, ನಿನಗಾಗಿ ನಾನೇನನ್ನು ಮಾಡಲಿ? ವತ್ಸನೇ (ಎಂದರೆ ಪುತ್ರನೇ), ನೀನೇನನ್ನು ಹೇಳುವೆಯೋ ಅದನ್ನು ಮಾಡುವೆ" ಎಂದನು.
ಆಗ ಅರ್ಜುನನು ಹೇಳಿದನು: "ಕುರುವಂಶದ ಅರಸರಲ್ಲಿ ಶ್ರೇಷ್ಠನಾದವನು ಧರ್ಮರಾಜನಾದ ಯುಧಿಷ್ಠಿರ. ಆತನು ಧರ್ಮಜ್ಞ, ಸತ್ಯಸಂಧ. ಆತನು ದೊಡ್ಡಯಜ್ಞವನ್ನು ಮಾಡಿ ವಿಪುಲವಾದ ದಕ್ಷಿಣೆಯನ್ನು ಕೊಡಲಿರುವನು. ಆತನು ಚಕ್ರವರ್ತಿಯಾಗಬೇಕೆಂಬುದು ನನ್ನ ಬಯಕೆ. ಆತನಿಗೆ ನೀನು ಕರವನ್ನೀಯಬೇಕೆಂಬುದೇ ನನ್ನ ಅಪೇಕ್ಷೆ. ನೀನು ನನ್ನ ತಂದೆಯ ಸಖ. ನನ್ನ ವಿಷಯದಲ್ಲೂ ಪ್ರೀತಿಯುಳ್ಳವನು. ಆದ್ದರಿಂದ ನಾನು ನಿನಗೆ ಅಪ್ಪಣೆ ಮಾಡಲಾರೆ. ಆದುದರಿಂದ ಪ್ರೀತಿಪೂರ್ವಕವಾಗಿಯೇ ಕರವನ್ನು ಕೊಡೋಣವಾಗಲಿ" ಎಂದನು.
ಅದಕ್ಕೆ ಭಗದತ್ತನು, "ಕುಂತಿಪುತ್ರನೇ, ನನಗೆ ನೀನೆಂತೊ ಅಂತೆಯೇ ಯುಧಿಷ್ಠಿರನೂ. ಅದೆಲ್ಲವನ್ನೂ ಮಾಡುತ್ತೇನೆ. ಮತ್ತೂ ಏನನ್ನು ಮಾಡಬೇಕು, ಹೇಳು" ಎಂದನು. ಆತನು ಹಾಗೆ ಹೇಳಲು ಅರ್ಜುನನು ಹೀಗೆಂದನು: "ಇಷ್ಟರಿಂದಲೇ ನನಗೆಲ್ಲವನ್ನೂ ನೀ ಮಾಡಿದಂತೆ. ನನಗೆ ಅನುಮತಿಯನ್ನು ಕೊಡು, ನಾನಿನ್ನು ಹೊರಡಬೇಕು" ಎಂದನು.
ಹೀಗೆ ಅವನನ್ನು ಜಯಿಸಿ ಅರ್ಜುನನು ಉತ್ತರದಿಕ್ಕಿನಲ್ಲಿ ಮತ್ತೂ ಮುಂದುವರೆದನು. ಅಂತರ್ಗಿರಿ, ಬಹಿರ್ಗಿರಿ, ಉಪಗಿರಿ - ಎಂಬ ಭೂಪ್ರದೇಶಗಳನ್ನು ಜಯಿಸಿದನು. ಅಲ್ಲಿದ್ದ ಪರ್ವತಗಳನ್ನೂ, ಪರ್ವತವಾಸಿಗಳನ್ನೂ ತನಗೆ ಅಧೀನರನ್ನಾಗಿ ಮಾಡಿಕೊಂಡು ಅವರಿಂದ ಮಾಡಬೇಕಾದ ವಸೂಲಿಯನ್ನು ಮಾಡಿದನು.
ಹಾಗೆ ಮಾಡಿಯೂ ಅವರನ್ನು ಪ್ರಸನ್ನಗೊಳಿಸಿ, ಅವರೆಲ್ಲರೊಂದಿಗೆ ಮುಂದಿನ ರಾಜ್ಯವಾದ ಉಲೂಕದ ರಾಜನಾದ ಬೃಹಂತನ ಮೇಲೇರಿಹೋದನು. ಆತನು ಹೋಗುವಾಗ ಮೃದಂಗದ ನಾದವೇನು, ರಥನೇಮಿಯ ನಾದವೇನು, ಗಜಗಳ ಗದ್ದಲಗಳೇನು! ಇವೆಲ್ಲವುಗಳಿಂದ ಭೂಮಿಯೇ ನಡುಗಿತು.
ಸೂಚನೆ : 31/5/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.