Sunday, November 14, 2021

ಯೋಗತಾರಾವಳಿ - 28 ಪರಮನಿರಂಜನತೆ (Yogataravali - 28 Parama-niranjanate)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ಯೋಗತಾರಾವಳೀ (ಶ್ಲೋಕ ೨೯)

ವಿಚರತು ಮತಿರೇಷಾ


ಯೋಗತಾರಾವಳಿಯ ಕೊನೆಯ ಶ್ಲೋಕವಿದು. ನನ್ನ ಮನಸ್ಸು ಹೀಗಾದರೂ ಆಡಲಿ ಹಾಗಾದರೂ ಆಡಲಿ - ಎನ್ನುತ್ತಾರೆ, ಶಂಕರರು! 

ಇಪ್ಪತ್ತೆಂಟು ಶ್ಲೋಕಗಳಲ್ಲಿ ಮನಸ್ಸಿನ ನಿಗ್ರಹ-ನಿಯಂತ್ರಣಗಳ ಬಗ್ಗೆ ಹೇಳಿ, ಮನಸ್ಸನ್ನು ಮೀರುವ ಸ್ಥಿತಿಯನ್ನು ನಿರೂಪಿಸಿ, ಮನಸ್ಸೇ ಇಲ್ಲದಂತಾಗುವ ಸ್ಥಿತಿಯನ್ನೂ ಚಿತ್ರಿಸಿ, ಈಗ ಇದ್ದಕ್ಕಿದ್ದಂತೆ ಅಷ್ಟೆತ್ತರದಿಂದ ಇಷ್ಟು ಸಾಧಾರಣವಾದ ಮಟ್ಟಕ್ಕೆ ಬರಲಾದೀತೇ? - ಎಂಬ ಪ್ರಶ್ನೆಯು ಯಾರಿಗಾದರೂ ಬರಬಹುದು. ಪರಮಾಶ್ಚರ್ಯವೂ ಆಗಬಹುದು! 

ಎಂದೇ ಮತ್ತೆ ಕೆಲವರು ಈ ಶ್ಲೋಕವು ಶಂಕರಾಚಾರ್ಯಕೃತವೇ ಆಗಿರಲಾರದು ಎನ್ನುತ್ತಾರೆ. ಕೆಲವು ಹಸ್ತಪ್ರತಿಗಳಲ್ಲಿಲ್ಲ, ಆದ್ದರಿಂದಲೂ ಇದು ಯಾವುದೋ ಪ್ರಕ್ಷಿಪ್ತ-ಶ್ಲೋಕವಿರಬೇಕು - ಎಂದುಕೊಂಡವರೂ ಇದ್ದಾರೆ.


ಶ್ರೀಗುರು ನೋಡಿದ ನೋಟ

ಆದರೆ ಮಹಾಯೋಗಿಗಳಾದ ಶ್ರೀರಂಗಮಹಾಗುರುಗಳು ಈ ಶ್ಲೋಕವನ್ನು ಉದ್ಧರಿಸಿದ್ದಾರೆ, ಕಿಂಚಿತ್ತಾಗಿ ವಿವರಿಸಿಯೂ ಇದ್ದಾರೆ. ಇದರ ಭಾವವನ್ನು ವಿಶದೀಕರಿಸಿದ್ದಾರೆ. 

ಹಾಗಿದ್ದರೆ ಈ ಶ್ಲೋಕ ಏನೆಂದು ಹೇಳಿದೆ, ಒಮ್ಮೆ ನೋಡಬೇಕಲ್ಲವೇ?: "ನನ್ನ ಈ ಮನಸ್ಸು ನಿರ್ವಿಕಲ್ಪ-ಸಮಾಧಿಯಲ್ಲಾದರೂ ವಿಹರಿಸಲಿ; ಅಥವಾ ಜಿಂಕೆಗಳ ಕಣ್ಣುಗಳನ್ನು ಹೋಲುವ ಹೆಣ್ಣುಗಳ, ಕಲಶಗಳನ್ನು ಹೋಲುವ ಸ್ತನ-ಯುಗಲಗಳ ಮೇಲಾದರೂ ಹರಿದಾಡಲಿ; ಹಾಗೆಯೇ ಜಡ-ಮತದಲ್ಲಾದರೂ ಸಂಚರಿಸಲಿ; ಅಥವಾ ಸಜ್ಜನರ ಮತದಲ್ಲಾದರೂ ವಿಹರಿಸಲಿ - ಮತಿಯಿಂದಾಗುವ ಗುಣ-ದೋಷಗಳು ವಿಭುವಾದ ನನ್ನನ್ನು ಸ್ಪರ್ಶಿಸವು". 

ನನ್ನ ಮನಸ್ಸು ನಿರ್ವಿಕಲ್ಪ-ಸಮಾಧಿಸ್ಥಿತಿಯಲ್ಲಿ ವಿಚರಿಸಲಿ, ವಿಹರಿಸಲಿ – ಎಂಬ ಭಾಗವೇನೋ ಸರಿಯಾಗಿಯೇ ಇದೆ. ಆದರೆ ಅದರ ಮುಂದಿನ ಪಾದದಲ್ಲಿ!: ಸಂಕೋಚಬಿಟ್ಟು ಹೇಳುವುದಾದರೆ, ಆಶ್ಚರ್ಯಕ್ಕಿಂತಲೂ ಲಜ್ಜಾಸ್ಪದವಾಗಿಯೇ ಇದೆ! 

ಏನೋ ಭರ್ತೃಹರಿಯ ಶೃಂಗಾರ-ಶತಕದ ಶ್ಲೋಕವೊಂದರಲ್ಲಿ ಹೀಗೆ ಹೇಳಿದೆಯೆಂದರೆ ಅಲ್ಲಿ ತುಂಬ ಆಶ್ಚರ್ಯಪಡುವ ವಿಷಯವೇನಿಲ್ಲ. ಏಕೆಂದರೆ ಎಷ್ಟಾದರೂ ಶೃಂಗಾರ-ಕಾವ್ಯವೇ ಅದು. ಇಲ್ಲಿನ ದ್ವಿತೀಯ-ಪಾದದಲ್ಲಿರುವ ಬಗೆಯ ಶ್ಲೋಕಗಳೇ ಅಲ್ಲಿಯ ವಸ್ತು. 

ಮೇಲೆ ಹತ್ತಿ ಮತ್ತೆ ಬೀಳುವುದೇ?

ಆದರೆ ಯೋಗಿಯೊಬ್ಬನ ಉತ್ತುಂಗ-ಸಾಧನೆಯನ್ನು ಚಿತ್ರಿಸುತ್ತಿರುವ ಸಂದರ್ಭದಲ್ಲಿ, ಅದೂ ಈಗಷ್ಟೆ ಅದು ಮುಗಿಯುತ್ತಿದ್ದಂತೆ, ಸುಂದರ-ಸ್ತ್ರೀಯರ ಕುಚಕುಂಭದತ್ತ ಮನಸ್ಸು ಹೊರಳುವುದು ಸಾಧ್ಯವೇ?: ಹಾಗಾಗಲೆಂದು ಹಾಗಾಡಲೆಂದು ಇಲ್ಲಿ ಮಾತಾಡಲಾದೀತೇ? – ಎಂಬುದೇ ಪ್ರಶ್ನೆ. 

"ಓ ಕಪಾಲಿಯೇ, ಕಪಿಯಂತಹ ಈ ಮನಸ್ಸು ಯುವತಿಯರ ಕುಚ-ಗಿರಿಯ ಮೇಲೆ ಅಲೆಯುತ್ತಿದೆ! ಭಕ್ತಿಯೆಂಬ ಹಗ್ಗದಿಂದ ಅದನ್ನು ಕಟ್ಟಿಹಾಕಯ್ಯಾ!" ಎಂದೆಲ್ಲ ಶಿವಾನಂದ-ಲಹರಿಯಲ್ಲಿ ವ್ಯಥೆಪಟ್ಟು, ಅಂಗಲಾಚಿ ಬೇಡಿ, ಇಲ್ಲಿ ಹೀಗೆ ಮನಸ್ಸನ್ನು ಯಥೇಚ್ಛವಾಗಿ ಹರಿಬಿಡುವುದರಲ್ಲಿ ಔಚಿತ್ಯವಿದೆಯೇ? ಶೃಂಗಾರವೂ ಅಧ್ಯಾತ್ಮವೂ ಪರಸ್ಪರ-ವಿರುದ್ಧ-ದಿಕ್ಕಿನವುಗಳಲ್ಲವೇ? ಅವುಗಳೆರಡನ್ನೂ ಒಂದೇ ಶ್ಲೋಕದ ಒಂದೇ ಅರ್ಧದ ಎರಡು ಅಕ್ಕಪಕ್ಕದ ಪಾದಗಳಲ್ಲೇ ತರಬೇಕೇ?

 ಜಡಮತ-ಸಜ್ಜನಮತ

ಅಷ್ಟೇ ಅಲ್ಲ. ಜಡಮತ-ಸಜ್ಜನಮತ – ಎಂಬ ಮತ್ತೆರಡು ವಿಷಯಗಳನ್ನೂ ಉತ್ತರಾರ್ಧದಲ್ಲಿ ತರಲಾಗಿದೆ. ಇವೂ ಹಾಗೆಯೇ: ಪರಸ್ಪರ ವಿರುದ್ಧವಾದವುಗಳು. ಹೇಗೆ? ಜಡ-ಮತವೆಂದರೆ ದೇಹವನ್ನೇ ತಾನೆಂದು ಭಾವಿಸುವುದು. ಸಜ್ಜನ-ಮತವೆಂದರೆ ಜಗನ್ಮೂಲವಾದ ಸದ್-ವಸ್ತುವಿನಲ್ಲಿ ಏಕೀಭೂತರಾಗುವ ಉತ್ಕಟೇಚ್ಛೆ-ತಪಃಪ್ರವೃತ್ತಿಗಳನ್ನು ಹೊಂದಿರುವುದು. 

ಅದಾದರೂ ಸರಿ, ಇದಾದರೂ ಸರಿ – ಎಂದು ಹೇಳುವುದು ಎಷ್ಟು ಸರಿ? – ಎಂಬ ಪ್ರಶ್ನೆ. ಜಡ-ಮತವೆಂದರೆ  ನಾಸ್ತಿಕ್ಯಕ್ಕೆ ಸಮಾನವಾದದ್ದೇ. ಸಜ್ಜನ-ಮತವೆಂದರೆ ಇದಕ್ಕೆ ಪ್ರತಿಯಾಗಿ, "ಅಸ್ತಿ ಬ್ರಹ್ಮೇತಿ ಚೇದ್ ವೇದ ಸನ್ತಮೇನಂ ತತೋ ವಿದುಃ" – ಎಂಬಂತಲ್ಲವೇ? ಸತ್ – ಎಂದರೆ ಸದ್ಭಾವ-ಸಾಧುಭಾವಗಳು -ಎಂದು ಗೀತೆಯ ಉಕ್ತಿಯಿಲ್ಲವೇ? - ಎಂದೆಲ್ಲ ಪ್ರಶ್ನೆಗಳು ಬರತಕ್ಕವೇ. 

ಶ್ಲೋಕದ ಕೊನೆಯ ಪಾದದಲ್ಲಿ ಇಷ್ಟಕ್ಕೂ ಉತ್ತರವಿದೆ. ಸಮಾಧಿ-ಸ್ಥಿತನಾಗಿ, ವಿಭುವಾದ ಸದ್ವಸ್ತುವಿನೊಂದಿಗೆ ಏಕೀಭಾವವನ್ನು ಒಮ್ಮೆ ವಾಸ್ತವವಾಗಿ ಹೊಂದಿರುವವನಿಗೆ, ಈ ಪ್ರವೃತ್ತಿಯೂ ಉಂಟಾಗದು, ಅಕಸ್ಮಾತ್ ಉಂಟಾದರೂ ದೋಷವಾಗದು.  (ಪಾಪ-ಲೇಪವಿಲ್ಲದ ಈ ಸ್ಥಿತಿಯು ಹೇಗೆಂದು ಗೀತೆಯ ೫.೧೦, ೧೮.೧೭ಗಳಲ್ಲಿ ವಿವರಿಸಿದೆ). 

ಹೀಗೆ ನಿರ್ಲಿಪ್ತಾವಸ್ಥೆಯ ತುಂಗಸ್ಥಿತಿಯನ್ನೇ ಇಲ್ಲಿ ಹೇಳಲಾಗಿದೆ.


ವಿಚರತು ಮತಿರ್ ಏಷಾ ನಿರ್ವಿಕಲ್ಪೇ ಸಮಾಧೌ

   ಕುಚ-ಕಲಶ-ಯುಗೇ ವಾ ಕೃಷ್ಣಸಾರೇಕ್ಷಣಾನಾಮ್ |

ಚರತು ಜಡಮತೇ ವಾ ಸಜ್ಜನಾನಾಂ ಮತೇ ವಾ

   ಮತಿ-ಕೃತ-ಗುಣ-ದೋಷಾ ಮಾಂ ವಿಭುಂ ನ ಸ್ಪೃಶಂತಿ ||೨೯||

ಸೂಚನೆ : 13/11/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.