Thursday, November 11, 2021

ವಿದ್ಯಾರ್ಜನೆಗೆ ಅಹಂಕಾರವೇ ಶತ್ರು (Vidyarjanege Ahamkarave Shatru)

ಲೇಖಕಿ: ಸೌಮ್ಯಾ ಪ್ರದೀಪ್ 
(ಪ್ರತಿಕ್ರಿಯಿಸಿರಿ lekhana@ayvm.in)



ಮಹರ್ಷಿ ಉದ್ಧಾಲಕರ ಪುತ್ರ ಶ್ವೇತಕೇತು. ಗುರುಕುಲದಲ್ಲಿ ಅಧ್ಯಯನವನ್ನು ಮುಗಿಸಿ ತಂದೆಯ ಬಳಿಗೆ ಬಂದು ನಾನು ಈಗ ಸಕಲಶಾಸ್ತ್ರ ಪಾರಂಗತನಾಗಿ ಸರ್ವಜ್ಞನಾಗಿದ್ದೇನೆ ಎಂಬ ಅಹಂಕಾರದಿಂದ ಬೀಗುತ್ತಾನೆ. ಮಗನ ಅಹಂಕಾರದ ವರ್ತನೆಯನ್ನು ನೋಡಿ, ಯಾವ ವಿದ್ಯೆಯ ಅನುಸoಧಾನದಿಂದ ಅಹಂಕಾರವು ಹತ್ತಿರವೂ ಸುಳಿಯಲಾರದೋ ಅಂತಹ ಬ್ರಹ್ಮವಿದ್ಯೆಯನ್ನು ಗುರುವಿನಿಂದ ಇನ್ನೂ ಇವನು ಪಡೆದಿಲ್ಲವೆಂಬುದು ತಂದೆ ಉದ್ದಾಲಕರಿಗೆ ಸ್ಪಷ್ಟವಾಯಿತು. ನಮಗೆ ಸತ್ಯದ ಸಾಕ್ಷಾತ್ಕಾರ ಮಾಡಿಸಲೆಂದೇ ವಿದ್ಯೆಗಳು ಬಂದಿರುವುದು. ಅದಿಲ್ಲದ ವಿದ್ಯಾರ್ಜನೆ ನಿಷ್ಪ್ರಯೋಜಕ. ಶ್ವೇತಕೇತು ಶಾಸ್ತ್ರಗಳ ಹೊರ ತಿಳಿವಳಿಕೆಯನ್ನು ಮಾತ್ರವೇ ವಿದ್ಯೆ ಎಂದುಕೊಂಡಿದ್ದ. ಅದರಿಂದ ಉದ್ದಾಲಕರು ಕರುಣೆಯಿಂದ ಆ ಪರತತ್ತ್ವದ ಅರಿವನ್ನು ಉಪದೇಶಿಸುವ ಮನವುಳ್ಳವರಾಗಿ, ಒಂದು ಆಲದ ಹಣ್ಣನ್ನು ತರಲು ಆದೇಶಿಸಿದರು. ಹಣ್ಣನ್ನು ಬಿಡಿಸಿ ನೋಡಿ ಅದರೊಳಗೆ ಏನಿದೆ ಎಂದು ಕೇಳಿದಾಗ,- ಬೀಜವಿದೆ ಎಂಬ ಉತ್ತರವನ್ನು ಮಗನಿಂದ ಪಡೆದ ನಂತರ ಪುನ: ಬೀಜದೊಳಗೆ ಏನು ಕಾಣುತ್ತಿದೆ ಎಂದು ಕೇಳಿದರು. ಬೀಜವನ್ನು ಕುಟ್ಟಿ ಪುಡಿಮಾಡಿದರೂ ಏನೂ ಕಾಣಿಸುತ್ತಿಲ್ಲ ಎಂಬ ಉತ್ತರವನ್ನು ನೀಡಿದ ಶ್ವೇತಕೇತುವನ್ನು ಉದ್ದೇಶಿಸಿ ಬೀಜದೊಳಗೆ ಏನೂ ಕಾಣದಿದ್ದರೂ ಸಹ ಬಿತ್ತಿದೊಡನೆ ಅಷ್ಟು ದೊಡ್ಡ ಹೆಮ್ಮರವಾಗಿ ಬೆಳೆಯಲು ಹೇಗೆ ಸಾಧ್ಯ? ಎಂದು ಕೇಳಿದಾಗ ಶ್ವೇತಕೇತು ನಿರುತ್ತರನಾದ. ಆಗ ಉದ್ದಾಲಕರೆಂದರು- ಆ ಬೀಜದೊಳಗಿರುವ ಆ ಶಕ್ತಿ ಕಾಣದಾದರೂ ಇದ್ದೇಇದೆ. ಹಾಗೆಯೇ ಪರಮಾತ್ಮಶಕ್ತಿಯೂ ಸಮಸ್ತ ಸೃಷ್ಟಿಗೆ ಕಾರಣ, ನಿಯಾಮಕವಾಗಿದೆ. ಅವನ ಸಂಕಲ್ಪವಿಲ್ಲದೇ ಒಂದು ಹುಲ್ಲುಕಡ್ಡಿಯೂ ಅಲ್ಲಾಡುವುದಿಲ್ಲ ಅವನೇ ಸರ್ವಶ್ರೇಷ್ಠ ಅವನು ಎಲ್ಲರಲ್ಲಿಯೂ ಇದ್ದಾನೆ ನೀನೂ ಅವನ ಅಂಶವೇ, ಹೇಗೆ ವ್ಯವಸಾಯಜ್ಞನು ಬೀಜದಲ್ಲಿ ಹುದುಗಿರುವ ಶಕ್ತಿಯನ್ನು ಅರಿಯಬಲ್ಲನೋ ಹಾಗೆ ಪರಮಾತ್ಮನನ್ನು ತಪಸ್ಸಿನಿಂದ ಆತ್ಮವ್ಯವಸಾಯ ಮಾಡಿ ಮಾತ್ರ ಅರಿಯಲು ಸಾಧ್ಯ, ಅವನನ್ನು ಅರಿತವನು ಮಾತ್ರ ವಿದ್ಯಾವಂತ. ಅವನನ್ನು ಅರಿತರೆ ಎಲ್ಲವನ್ನೂ ಅರಿತಂತೆ, ಎಂಬುದಾಗಿ ಬೇರೆ ಬೇರೆ ದೃಷ್ಟಾಂತಗಳಿಂದ, ಪ್ರಯೋಗಗಳಿಂದ ಪರತತ್ತ್ವದ ಬಗ್ಗೆ ಅರಿವನ್ನು ಮೂಡಿಸಿದಾಗ ಶ್ವೇತಕೇತುವಿನ ಅಹಂಕಾರವೆಲ್ಲವೂ ಕಳೆದು ವಿನೀತನಾಗಿ ತಂದೆಯಿಂದ ಜ್ಞಾನೋಪದೇಶವನ್ನು ಪಡೆದು ತಪಸ್ಯೆಯನ್ನು ಮಾಡಿ ಜ್ಞಾನಿಯಾಗುತ್ತಾನೆ.

ವಿದ್ಯಾರ್ಜನೆಗೆ ಅಹಂಕಾರವೇ ದೊಡ್ಡ ಶತ್ರು, ಯಾವುದೇ ಒಂದು ವಿದ್ಯೆಯನ್ನು ಗುರುವಿನಿಂದ ಪಡೆಯಲು ಅಹಂಕಾರವನ್ನು ತ್ಯಜಿಸಿ ವಿನೀತರಾಗುವುದು ಅತಿ ಮುಖ್ಯ, ಹಾಗಾದಾಗ ಮಾತ್ರ ಆ ವಿದ್ಯೆಯ ರಹಸ್ಯವನ್ನು ಅರಿಯಲು ಸಾಧ್ಯ. ಸಂಗೀತ,ಸಾಹಿತ್ಯ ನಾಟ್ಯ ಜೋತಿಷ್ಯ ಇತ್ಯಾದಿ ಎಲ್ಲಾ ಭಾರತೀಯವಾದ ವಿದ್ಯೆಗಳಿಗೂ ಪರಮಾತ್ಮನೇ ಮೂಲ, ಅವನಿಂದಲೇ ಎಲ್ಲಾ ವಿದ್ಯೆಗಳೂ ವಿಕಾಸವಾಗಿವೆ. ಯಾವ ಭಾರತೀಯ ವಿದ್ಯೆಯನ್ನಾದರೂ ಜ್ಞಾನಿಯಾದ ಗುರು ಮುಖೇನ ಉಪದೇಶವನ್ನು ಪಡೆದು ಅಹಂಕಾರವನ್ನು ಸಂಪೂರ್ಣವಾಗಿ ತ್ಯಜಿಸಿ ನಿಷ್ಠೆಯಿಂದ ಅನುಸಂಧಾನ ಮಾಡಿದಾಗ ಸರ್ವವಿದ್ಯಾ ಮೂಲನಾಗಿರುವ ಭಗವಂತನ ಸಾಕ್ಷಾತ್ಕಾರದ ಆನಂದವನ್ನು ಅನುಭವಿಸ ಬಹುದು. ಮಹರ್ಷಿಗಳು ತಾವು ಅಂತಹ ಫಲವನ್ನು ಪಡೆದು ಲೋಕದ ಉದ್ಧಾರಕ್ಕಾಗಿ ಅವುಗಳನ್ನು ಕರುಣಿಸಿ ಕೊಟ್ಟಿದ್ದಾರೆ. 

ಅಂತಹ ಮಹರ್ಷಿಪ್ರಣೀತವಾದ ವಿದ್ಯೆಗಳು ಕೇವಲ ಲೌಕಿಕವಾದ ತಿಳುವಳಿಕೆ ಮಾತ್ರವಲ್ಲ. ಜೀವನದ ಮೂಲದಿಂದ ವ್ಯಾಪಿಸಿ ತುದಿಯವರೆಗೂ ನಮ್ಮನ್ನು ಕರೆದೊಯ್ಯಬಲ್ಲವಾಗಿವೆ. 'ಸಾ ವಿದ್ಯಾ ಯಾ ವಿಮುಕ್ತಯೇ" ಎಂಬ ವಾಣಿಯಂತೆ ಜೀವನದ ನೆಲೆಯಾದ ಜ್ಞಾನವನ್ನು ಹೊಂದಿಸುವುದೇ ವಿದ್ಯೆ. ಭಾರತೀಯ ವಿದ್ಯೆಗಳು ಇಹ-ಪರ ಜೀವನಗಳೆರಡಕ್ಕೂ ತಂಪು ನೀಡಿ ಕೊನೆಗೆ ಪರಮಾರ್ಥದಲ್ಲಿ ನಿಲ್ಲಿಸುತ್ತವೆ, ಅಂತಹ ಆತ್ಮತತ್ವದ ಅರಿವನ್ನು ಮೂಡಿಸುವ ಬ್ರಹ್ಮವಿದ್ಯೆಯನ್ನು ಭಗವತ್ಸ್ವರೂಪರಾದ ಗುರುವಿನ ಬಳಿ ಯಾಚಿಸುವಾಗ ಅಹಂಕಾರ ವರ್ಜಿತರಾಗಿರಬೇಕು," ಹೇಗೆ ನೀರನ್ನು ತುಂಬಲು ಬಾವಿಗೆ ಇಳಿಬಿಟ್ಟ ಕೊಡ ಸಂಪೂರ್ಣವಾಗಿ ಬಾಗಿದಾಗ ತುಂಬಿದ ಕೊಡವಾಗಿ ಮೇಲಕ್ಕೆ ಬರುತ್ತದೆಯೋ ಅಂತೆಯೇ ಭಗವಂತನ ಬಳಿ ನಾವು ಅಹಂಕಾರವನ್ನು ತೊರೆದು ನಮ್ಮ ಮನೋಬುದ್ಧಿಗಳನ್ನು ಅವನೆಡೆಗೆ ಸಂಪೂರ್ಣವಾಗಿ ಬಾಗಿಸಿ ಶರಣಾಗತಿ ಯನ್ನು ಹೊಂದಿದಾಗ ಅವನು ನಮ್ಮಲ್ಲಿ ತುಂಬಿಕೊಳ್ಳುತ್ತಾನೆ, ಅಹಂಕಾರವಿದ್ದೆಡೆ ಭಗವಂತನು ಬರುವುದಿಲ್ಲಾಪ್ಪ" ಎಂಬ ಶ್ರೀರಂಗ ಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯ. ವಿನೀತನಾದ ಶಿಷ್ಯನಿಗೆ ಗುರುವು ತನ್ನ ಪರಿಪೂರ್ಣ ಜ್ಞಾನವನ್ನು ಧಾರೆಯೆರೆಯುತ್ತಾನೆ, ವಿದ್ಯೆಯು ವಿನಯವನ್ನು ಹೇಗೆ ತಂದುಕೊಡುತ್ತದೆಯೋ ಅಂತೆಯೇ ವಿನಯವಂತನಲ್ಲಿ ವಿದ್ಯೆಯು ನೆಲೆಗೊಳ್ಳುತ್ತದೆ ಎಂಬ ಮಾತೂ ಸತ್ಯ. ಅಹಂಕಾರವನ್ನು ತ್ಯಜಿಸಿ ವಿನಯವಂತರಾಗಿ ಜೀವನದ ನೆಲೆ ಮುಟ್ಟಿಸುವ ವಿದ್ಯಾರ್ಜನೆಯನ್ನು ಮಾಡುವತ್ತ ಮನಸ್ಸನ್ನು ಹರಿಸೋಣ.

ಸೂಚನೆ: 11/11/2021 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ಯಲ್ಲಿ ಪ್ರಕಟವಾಗಿದೆ.