Saturday, January 31, 2026

ಕೃಷ್ಣಕರ್ಣಾಮೃತ 92 ಗೋಪಿಯರ ಕಣ್ಣಂಚಿನಿಂದ ವಂಚಿತನಾದವನೇ ನನ್ನ ಕಾವ್ಯದ ಪ್ರಾಣ! (Krishakarnamrta 92)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in


 



ಕೃಷ್ಣನನ್ನು ಮೊದಲ ಬಾರಿಗೆ ಕಂಡ ಯುವತಿಯೊಬ್ಬಳು ತನ್ನ ಸಖಿಯನ್ನು ಮಾತಾಡಿಸುತ್ತ ಕೇಳುತ್ತಿದ್ದಾಳೆ - ಯಾರೇ ಇವನು? ಎಂಬುದಾಗಿ. ಸೊಬಗಿನ ಸುಪುರುಷನನ್ನು ಕಂಡರೆ ಯುವತಿಯರಿಗೆ ಕುತುಕವು ಉದಯಿಸದಿರುವುದೇ? ಸ್ವಲ್ಪದೂರದಲ್ಲಿ ಸಾಗುತ್ತಿರುವ ಕೃಷ್ಣನನ್ನು ಕುರಿತಾಗಿ ಇವಳ ಪ್ರಶ್ನೆ: "ಯಾರೇ ಇವನು? ಮಥುರೆಯ ವೀಥಿಯಲ್ಲಿ ಮೆಲ್ಲಮೆಲ್ಲನೆ ಸಾಗುತ್ತಿರುವವನು?"

ಲತಾಕುಂಜದೆಡೆಗೆ ಕೃಷ್ಣನು ಸಾಗುತ್ತಿದ್ದನೆಂದು ಕಾಣುತ್ತದೆ. ಲತಾಕುಂಜದ ಏಕಾಂತದಲ್ಲಿ ಇಂತಹ ಸುಂದರಾಂಗನ ಸನಿಹ ದೊರೆತರೆ ಅದಕ್ಕಿಂತಲೂ ಧನ್ಯತೆಯುಂಟೆ? ಅತನನ್ನೊಮ್ಮೆ ಕಂಡರೂ ಸಾಕು, ಎರಡು ಮಾತನಾಡಿದರೂ ಸಾಕು - ಎನ್ನುವ ಭಾವನೆ ಅವಳಿಗೆ.

ಮೊದಲಿಗೆ ತೋರಿದುದು ಆತನ ಶಿರೋಭೂಷಣ, ಆಮೇಲೆ ಮೈಸೊಬಗು, ಆಮೇಲೆ ಮೊಗ, ಆಮೇಲೆ ಕಣ್ಣು, ಆಮೇಲೆ ಮಾತು, ಹಾಗೂ ಅವನ ವಿಲಾಸಗತಿ - ಇವಿಷ್ಟೂ ಅಂಶಗಳಲ್ಲಿ ಕಂಡ ಸೊಬಗು ಅವಳಲ್ಲಿ ಕಾತರತೆಯನ್ನುಂಟುಮಾಡಿದೆ.

ದೂರದಲ್ಲಿ ಮೊದಲು ಕಂಡುದು ಆತನ ಶಿರಸ್ಸು, ಶಿರಸ್ಸಿನ ಮೇಲಿನ ಮಂಡನ. ಚಂದ್ರಕವೆಂದರೆ ನವಿಲುಗರಿಯ ಮೇಲೆ ಕಾಣುವ ಚಂದ್ರಾಕಾರವಾಗಿ ಪ್ರಕಾಶಿಸುವ ಭಾಗ, ಮಯೂರ-ಪಿಂಛದ "ಕಣ್ಣು". ಮೌಲಿಯೆಂದರೆ ತಲೆಯೂ ಆಗಬಹುದು, ತಲೆಯ ಮೇಲಿನ ಕಿರೀಟವೂ ಆಗಬಹುದು. ಎರಡು ಬಗೆಯಲ್ಲಿಯೂ ಕೃಷ್ಣನಿಗೆ ಅದು ಅಲಂಕಾರವೇ. ಹಲವು ವರ್ಣಗಳು ನವಿಲುಗರಿಯಲ್ಲಿರುವುವಲ್ಲವೇ? ನೀರಿನಲ್ಲಿ ತೈಲಬಿಂದುವೊಂದು ಬಿದ್ದರೂ ನಾನಾವರ್ಣಗಳು ಕಾಣುವುವಲ್ಲವೇ? ಎಂದೇ ಅದಕ್ಕೂ ಚಂದ್ರಕವೆಂಬ ಪದವೇ, ಸಂಸ್ಕೃತದಲ್ಲಿ. ಅಂತೂ ಹೀಗೆ ವರ್ಣರಂಜಿತವಾಗಿದ್ದು ಮನೋರಂಜಕವಾಗಿರುವ ಗರಿಯೇ ಶಿರೋಭೂಷಣವಾಗಿರುವುದು, ಕೃಷ್ಣನಿಗೆ.

ಇನ್ನು ಆತನ ಶರೀರವೋ, ಅಭಿರಾಮವಾದುದು, ಎಂದರೆ ಸುಂದರವಾದುದು. ಎಷ್ಟು ಸುಂದರ? ಅದಕ್ಕೊಂದು ಉಪಮೆ ಕೊಡಬಹುದೇ? ಆಗಬಹುದು. ಅದು ಮರಕತ-ಸ್ತಂಭದಂತೆ ಅಭಿರಾಮ. ಮರಕತವೆಂದರೆ ಪಚ್ಚೆಮಣಿ. ಪಚ್ಚೆಮಣಿಯಿಂದಾದ ಕಂಭವೊಂದು ಹೇಗಿರಬಹುದೋ ಹಾಗಿದೆ, ಕೃಷ್ಣನ ಮೈಕಟ್ಟು. ಮರಕತ-ಸ್ತಂಭದಂತೆ ಎಂದೇನು, ಮರಕತ-ಸ್ತಂಭಕ್ಕಿಂತಲೂ ಅಭಿರಾಮ ಎಂದೂ ಸಮಾಸವನ್ನು ಬಿಡಿಸಬಹುದು!

ಮೂರನೆಯದಾಗಿ, ಕೃಷ್ಣನ ವಕ್ತ್ರವು, ಎಂದರೆ ಮುಖವು, ಮಧುರವಾಗಿದೆ. ಏಕೆ? ಹುಬ್ಬುಗಂಟಿಕ್ಕಿರುವ ಮುಖವು ಮಧುರವಾಗಿರುತ್ತದೆಯೇ? ಮುಗುಳ್ನಗೆಯುಳ್ಳ ಮುಖವೇ ಮಧುರವೆನಿಸುವುದು. ಮುಖದ ಮೇಲೆ ಮಿಂಚಿದ ಮಂದಹಾಸವು ಅದೇನೋ ವಿಶಿಷ್ಟವಾಗಿದೆ. ಏನದರ ವೈಶಿಷ್ಟ್ಯವೆಂದು ಹೇಳಬರುವಂತಿಲ್ಲ. ಎಂದೇ ಅದನ್ನು "ಚಿತ್ರ" ಎಂದಿರುವುದು.

ಸಂಸ್ಕೃತದಲ್ಲಿ ಚಿತ್ರ ಎಂಬ ಪದವನ್ನು ವಿಶೇಷಣವಾಗಿ ಬಳಸುವುದುಂಟು. ಅದಕ್ಕೆ ಆಶ್ಚರ್ಯಕರವಾದ ಎಂಬ ಅರ್ಥ. ಯಾವುದು ವಿಶೇಷವಾಗಿ ಮುಗ್ಧವೋ, ಎಂದರೆ ಮುದ್ದೋ, ಅದುವೇ ವಿಮುಗ್ಧ. ಹಾಗೆ ಶ್ರೀಕೃಷ್ಣನ ಸುಮುಖದಲ್ಲಿ ಮಧುರತೆಯನ್ನು ಮೂಡಿಸಿರುವುದು ಆತನ ಚಿತ್ರವೂ ವಿಮುಗ್ಧವೂ ಆದ ಹಾಸ.

ನಾಲ್ಕನೆಯದು ಇನ್ನೂ ಹತ್ತಿರದ ನೋಟ. ಆತನ ಕಣ್ಣುಗಳಲ್ಲಿ ಎರಡು ಸೊಗಸುಗಳು: ಎಳಸು, ಚಂಚಲತೆ. ವಯಸ್ಸಾದವರ ಕಣ್ಣ ಸುತ್ತ ಸುಕ್ಕೋ ಕಪ್ಪೋ ತೋರುವುದು. ಆಗಷ್ಟೆ ಯೌವನೋದಯವಾಗಿರುವವರ ಕಣ್ಣುಗಳಲ್ಲಿ ಹೊಳಪು ತುಂಬಿರುವುದು. ಜಿಂಕೆಯ ಕಣ್ಣು ಸೊಗಸಾಗಿ ಕಾಣುವುದೇ ಅದರ (ಗುಡ್ಡೆಯ) ಚಂಚಲತೆಯಿಂದಲ್ಲವೇ? ಹೀಗೆ ಬಾಲವೂ ಲೋಲವೂ ಆಗಿವೆ ಕೃಷ್ಣನ ನೋಟಗಳು. ವಿಶೇಷವಾಗಿ ಲೋಲವಾಗಿದ್ದರೆ ವಿಲೋಲವೆನ್ನುವುದು.

ಐದನೆಯದು ಆತನ ಮಾತುಗಳು. ಆತನಿನ್ನೂ ದೊಡ್ಡವನಾಗಿಲ್ಲ. ಆತನಲ್ಲಿ ಇನ್ನೂ ಉಳಿದಿರುವ ಆ "ಶೈಶವ"ದಿಂದಾಗಿಯೇ ಆತನ ಮಾತುಗಳು ಕೇಳಲೇ ತಂಪು. ಹೀಗೆ ಶೈಶವದಿಂದಾಗಿ ಶೀತಲವಾಗಿಯೇ ಉಳಿದಿವೆ ಅವು.

ಇನ್ನು ಕೊನೆಯದಾಗಿ, ಎಂದರೆ ಆರನೆಯದಾಗಿ, ಅವನ ನಡೆಯೇ ನೋಡಲು ಚೆನ್ನ. ಅವನು ಹೆಜ್ಜೆಯಿಡುವುದೇನು, ಕೈಚಲನ ಮಾಡುವುದೇನು,  ಎಲ್ಲವೂ ವಿಲಾಸಭರಿತವಾದವೇ. ಎಂತಹ ವಿಲಾಸವದು? ಮದಗಜಕ್ಕಿಂತಲೂ ಶ್ಲಾಘ್ಯವಾದುದು!

"ಮೆಲ್ಲಮೆಲ್ಲನೆ ಬಂದನೇ, ಗೋಪಮ್ಮ ಕೇಳೇ" ಎಂಬ ದಾಸರ ಪದವು ಈ ಪದ್ಯವನ್ನೋದಿದವರಿಗೆ ಸ್ಮರಣೆಗೆ ಬರುತ್ತದೆ.

ಮಂದ-ಗಮನದೊಂದಿಗೆ ಮಧುರವಾದ ಮಥುರೆಯ ಮಾರ್ಗದಲ್ಲಿ ಮುಂದುವರೆಯುತ್ತಿದ್ದಾನೆ, ಮುಗ್ಧ-ಮಧುಸೂದನ! ಯಾವುದು ಮನಸ್ಸನ್ನು ಮುದಗೊಳಿಸುವುದೋ, ಮಥಿಸುವುದೋ ಅದುವೇ ಮಥುರೆ - ಎಂದು ಈ ಪದಕ್ಕೆ ವಿವರಣೆಯನ್ನು ಕೊಡುವುದುಂಟು!

ಹೀಗೆ ಕೃಷ್ಣನಲ್ಲಿಯ ಆರು ಅಂಶಗಳನ್ನು ಗಮನಿಸಿ ಮಾರುಹೋಗಿದ್ದಾಳೆ, ಈ ಮುಗ್ಧ-ಗೋಪಿಕೆ, ಈ ಮಧುರ-ಮಾಧವನಿಗೆ.

ಶ್ಲೋಕವಿದು:

ಮೌಲಿಃ ಚಂದ್ರಕ-ಭೂಷಣೋ, ಮರಕತ-ಸ್ತಂಭಾಭಿರಾಮಂ ವಪುಃ,/

ವಸ್ತ್ರಂ ಚಿತ್ರ-ವಿಮುಗ್ಧ-ಹಾಸ-ಮಧುರಂ, ಬಾಲೇ ವಿಲೋಲೇ ದೃಶೌ,|

ವಾಚಃ ಶೈಶವ-ಶೀತಲಾಃ, ಮದ-ಗಜ-ಶ್ಲಾಘ್ಯಾ ವಿಲಾಸ-ಸ್ಥಿತಿಃ,/

ಮಂದಂ ಮಂದಂ ಅಯೇ ಕ ಏಷ ಮಥುರಾ-ವೀಥೀಂ ಇತೋ ಗಾಹತೇ?||

ಮತ್ತೊಂದು ಪದ್ಯ:

ನನ್ನ ವಾಙ್ಮಯಕ್ಕೆ ಜೀವಿತವಾದವನು ಶ್ರೀಕೃಷ್ಣ. ಆತನು ವಿಜಯಿಸಲಿ ಎನ್ನುತ್ತದೆ, ಈ ಶ್ಲೋಕ.

ನನ್ನ ವಾಙ್ಮಯವೆಂದರೆ ಪ್ರಕೃತ, ಶ್ರೀಕೃಷ್ಣಕರ್ಣಾಮೃತ. ತನ್ನ ಈ ಕಾವ್ಯದ ವಸ್ತುವಾದ ಕೃಷ್ಣನಿಗೆ ಜಯಕಾರವನ್ನು ಹೇಳುತ್ತಿದ್ದಾನೆ, ಕವಿ.

ದೇವರಿಗೆ ನಾವೇನು ಜಯವನ್ನು ಹೇಳುವುದು? ನಾವು ಹೇಳದಿದ್ದರೆ ಅವನು ಸೋತುಬಿಡುವನೆಂದೇ? ಹಾಗಲ್ಲ. ಜಯವೆಂದರೆ ಸರ್ವೋತ್ಕರ್ಷ. ಹಾಗೆಂದರೆ ಎಲ್ಲವನ್ನೂ ಮೀರಿಸಿರುವಿಕೆ. ತನ್ನೆಲ್ಲ ವೈಭವವನ್ನೂ ತುಂಬಿಕೊಂಡು ನನ್ನನ್ನು ಅನುಗ್ರಹಿಸಲಿ - ಎಂಬ ಭಾವವಿಲ್ಲಿದೆ.

ಶ್ಲೋಕದಲ್ಲೆಲ್ಲೂಕೃಷ್ಣನ ಹೆಸರನ್ನೇ ಬಳಸದೆ,  ಶ್ರೀಕೃಷ್ಣನಿಗೇ ವಿಶಿಷ್ಟವಾಗಿರುವ ಅಂಶಗಳನ್ನು ಹೇಳತಕ್ಕ ನಾಲ್ಕು ವಿಶೇಷಣಗಳಿಂದ ಕೃಷ್ಣನನ್ನು ಜಾಣ್ಮೆಯಿಂದ ಸೂಚಿಸಿದ್ದಾನೆ, ಕವಿ. ತನ್ನ ವಾಙ್ಮಯಕ್ಕೇ ಪ್ರಾಣಭೂತನಾದವನು ಶ್ರೀಕೃಷ್ಣ. ಹಾಗೆಂದರೆ, ಶ್ರೀಕೃಷ್ಣನ ಸುತ್ತಲೇ ಹೆಣೆದಿರುವ ಕೃತಿಯಿದು ಎಂದರ್ಥ. ಕೃಷ್ಣಹೀಗಿರುವನೆಂಬುದೇ ಒಂದು ವಿಶೇಷಣ, ಆತನಿಗೆ.

ಇನ್ನುಳಿದ ಮೂರು ವಿಶೇಷಣಗಳನ್ನು ಗಮನಿಸಬಹುದು. ಕೃಷ್ಣನನ್ನು ಶಿಖಂಡ-ವಿಭೂಷಣನೆಂದು ವಿಶೇಷಿಸದೆ. ಶಿಖಂಡವೆಂದರೆ ನವಿಲಿನ ಗರಿ;  ಶಿಖಂಡಿಯೆಂದರೆ ನವಿಲು. ಮದಶಿಖಂಡಿಯೆಂದರೆ ಮದಿಸಿದ ನವಿಲು. ಮತ್ತ-ಮಯೂರವು ನರ್ತನಮಾಡುವಾಗ ಅದರ ಗರಿಗಳುದುರುತ್ತವೆ. ಕೃಷ್ಣನ ವರ್ಣವೂ ಮೇಘಗಳ ವರ್ಣವೂ ಒಂದೇ ಆದ್ದರಿಂದ ಆತನು ಕಾಣುತ್ತಲೇ ಮದಿಸಿದ ಮಯೂರಗಳು ನರ್ತಿಸಲಾರಂಭಿಸುತ್ತವೆ. ಹಾಗೆ ಬಿದ್ದ ಗರಿಯೊಂದನ್ನು ಭೂಷಣವನ್ನಾಗಿಸಿಕೊಂಡಿದ್ದಾನೆ, ಕೃಷ್ಣ.

ಮೂರನೆಯದಾಗಿ, ಶ್ರೀಕೃಷ್ಣ-ವದನಾರವಿಂದವು ಅತಿಮುದ್ದು. ಎಷ್ಟೆಂದರೆ, ಮದನನನ್ನೇ ಮಂಥರನನ್ನಾಗಿಸುವುದು ಅದು! ಏನು ಹಾಗೆಂದರೆ? ತಾನೇ ತ್ರಿಲೋಕ-ಸುಂದರನೆಂಬ ಭಾವನೆಯಲ್ಲವೇ  ಮದನನಿಗೆ? ಆದರೆ ಶ್ರೀಕೃಷ್ಣನ ಮುಖವನ್ನೊಮ್ಮೆ ಕಂಡುಬಿಟ್ಟರೆ, ಮದನನೇ ಸ್ತಂಭೀಭೂತನಾಗಿಬಿಡುವನು! ಯಾರು ಹಾಗೆ ಮನಸಾರೆ ಮೆಚ್ಚಿ ಸ್ತಬ್ಧರಾಗಿಬಿಡುವರೋ, ಅಂತಹವರು ಸರಸರನೆ ನಡೆಯಲಾರರು. ಎಂದೇ ಮಂಥರನಾಗಿದ್ದಾನೆ, ಮದನ. ಮಂಥರನೆಂದರೆ ಮೆಲ್ಲನೆಯ ನಡೆಯವನು.

ಕೊನೆಯದಾಗಿ, ಗೋಪಿಯರ ಕಟಾಕ್ಷಕ್ಕೆ ಮೋಸಹೋದವನು, ಕೃಷ್ಣ! ವ್ರಜ-ವಧುಗಳೆಂದರೆ ಗೋಪಸ್ತ್ರೀಯರು. ಅವರ ಕಣ್ಣಂಚೇ ನಯನಾಂಚಲ, ಕಟಾಕ್ಷ. ಅದಕ್ಕೆ ಮನಸೋತ ಪ್ರಭುವಿವನು! ತನ್ನೀ ಮಾನುಷಾವತಾರದಲ್ಲಿ ಪರಮ-ಸೌಲಭ್ಯವನ್ನು ತೋರಿಸಿಕೊಂಡಿರತಕ್ಕವನು. ಎಂದೇ ಗೋಪಿಕೆಯರ ಸಲಿಗೆಗಳಿಗೆ ಕಡಿವಾಣಹಾಕದವನು. ಗೋಪ-ಬಾಲೆಯರ ಮುಗ್ಧ-ಪ್ರೇಮಕ್ಕೆ ತನ್ನನ್ನೇ ಒಪ್ಪಿಸಿಕೊಂಡವನು.

ಅಂತಹ ನನ್ನ ಕೃಷ್ಣನು ಜಯಿಸಲಿ! – ಎಂದಿದ್ದಾನೆ, ಲೀಲಾಶುಕ:

ಮದ-ಶಿಖಂಡಿ-ಶಿಖಂಡ-ವಿಭೂಷಣಂ /
ಮದನ-ಮಂಥರ-ಮುಗ್ಧ-ಮುಖಾಂಬುಜಂ |
ವ್ರಜ-ವಧೂ-ನಯನಾಂಚಲ-ವಂಚಿತಂ /
ವಿಜಯತಾಂ ಮಮ ವಾಙ್ಮಯ-ಜೀವಿತಂ ||

ಮಕಾರ ಮೊದಲಾದುವುಗಳ ಅನುಪ್ರಾಸ ಶ್ಲೋಕಸೌಂದರ್ಯವನ್ನು ವರ್ಧಿಸಿದೆ.

ಸೂಚನೆ : 31/1/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.