Monday, January 26, 2026

ಕೃಷ್ಣಕರ್ಣಾಮೃತ 91 ರುಕ್ಮಿಣೀ-ಹರಣ ಮಾಡಿದ ಮಧುರ-ಮೂರ್ತಿ ಗರುಡ-ಧ್ವಜ (Krishakarnamrta 91)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in


ರುಕ್ಮಿಣಿಯು ಭೀಷ್ಮಕ ಎಂಬ ರಾಜನ ಮಗಳು. ಆತನು ವಿದರ್ಭ-ದೇಶದ ಅಧಿಪತಿ. ಆ ದೇಶದ ರಾಜಧಾನಿ ಕುಂಡಿನಪುರ. ಕೆಲವೊಮ್ಮೆ ಸಂಕ್ಷೇಪವಾಗಿ ಅದನ್ನೇ ಕುಂಡಿನ ಎಂದಷ್ಟೇ ಹೇಳುವುದೂ ಉಂಟು. ಹಾಗೆಯೇ, ರಾಜ್ಯವನ್ನು ಸೂಚಿಸಲು ಅಲ್ಲಿಯ ರಾಜಧಾನಿಯ ಹೆಸರಷ್ಟನ್ನೇ ಹೇಳುವುದೂ ಉಂಟು. ಆದ್ದರಿಂದ ಕುಂಡಿನವೆಂದರೆ ವಿದರ್ಭದೇಶವೆಂದೂ ಆಗಬಹುದು.

ಹೀಗಾಗಿ, ಭೀಷ್ಮಕನನ್ನು ವಿದರ್ಭ-ರಾಜನೆಂದಾದರೂ ಕರೆಯಬಹುದು, ಕುಂಡಿನೇಶನೆಂದಾದರೂ ಕರೆಯಬಹುದು. ಈಶ ಎಂದರೆ ಒಡೆಯ. ಹೀಗಾಗಿ ಕುಂಡಿನೇಶ-ತನಯಾ ಎಂದರೆ ಭೀಷ್ಮಕನ ಮಗಳಾದ ರುಕ್ಮಿಣಿಯೇ.

ರುಕ್ಮಿಣಿಯು ಕೃಷ್ಣನ ಅಷ್ಟ-ಮಹಿಷಿಯರಲ್ಲೊಬ್ಬಳು. ಅವಳೇ ಪಟ್ಟಮಹಿಷಿ, ಎಂದರೆ ಹಿರಿಯ ರಾಣಿ. ಅವಳು ಕೃಷ್ಣನನ್ನು ವಿವಾಹವಾಗುವ ಸಂನಿವೇಶವೇ, ಎಂದರೆ ತತ್ಪೂರ್ವ-ಭಾವಿಯಾದ ಸಂನಿವೇಶವೇ, ಇಲ್ಲಿ ಚಿತ್ರಿತವಾಗಿದೆ.

ರುಕ್ಮಿಣಿಯ ಅಣ್ಣ ರುಕ್ಮಿ. ತನ್ನ ತಂಗಿಯನ್ನು ಶಿಶುಪಾಲನಿಗೆ ಕೊಟ್ಟು ಮದುವೆಮಾಡಬೇಕೆಂಬ ಸಂಕಲ್ಪ ಆತನದು. ಆದರೆ ರುಕ್ಮಿಣಿಯ ಬಯಕೆ ಕೃಷ್ಣನೊಂದಿಗೆ ತನ್ನ ವಿವಾಹವಾಗಬೇಕೆಂಬುದು; ರುಕ್ಮಿಯನ್ನು ಬಿಟ್ಟು ಉಳಿದವರಿಗೂ ಅದುವೇ ಸಮ್ಮತವಾಗಿದ್ದದ್ದು. ಏಕೆಂದರೆ ಶಿಶುಪಾಲ ಶಕ್ತಿ-ಶಾಲಿಯಾಗಿದ್ದರೂ ದುಷ್ಟನೇ.

ಅಣ್ಣನ ಆಗ್ರಹದಿಂದಾಗಿ ತನಗೆ ಬಂದಿರುವ  ದುರವಸ್ಥೆಯನ್ನು ಕೃಷ್ಣನಿಗೆ ಸೂಚಿಸಲು ಅವಳು ಪ್ರಣಯ-ಪತ್ರವೊಂದನ್ನು ಬರೆದಳು; ಒಬ್ಬ ಬ್ರಾಹ್ಮಣನ ಮೂಲಕ ಶ್ರೀಕೃಷ್ಣನಿಗೆ ಅದನ್ನು ಕಳುಹಿಸಿದಳು.

ಶ್ರೀಕೃಷ್ಣನು ಅವಳ ಆಶಯವನ್ನು ಅರಿತಿದ್ದವನೇ. ಗೌರೀ-ಪೂಜೆಗೆಂದು ಊರಹೊರಗಿನ ಗುಡಿಗೆ ಬಂಧು-ಪರಿವಾರದೊಂದಿಗೆ ಅವಳು ಬರುತ್ತಿದ್ದಳು. ಆ ಸಮಯದಲ್ಲಿ ಕೃಷ್ಣ ಅವಳನ್ನು ಅಪಹರಿಸಿಕೊಂಡು ಹೋಗಬೇಕಾಯಿತು. ಅವರ ವಿವಾಹವು ನೆರವೇರಿದುದು ಆ ಸಂದರ್ಭದಲ್ಲಿ. ಅವಳನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ವೇಗವಾಗಿ ಹೋಗುತ್ತಿದ್ದ ಶ್ರೀಕೃಷ್ಣನ ವರ್ಣನೆ ಈ ಶ್ಲೋಕದಲ್ಲಿದೆ.

ಕೃಷ್ಣನನ್ನು ಕೃಷ್ಣನೆನ್ನದೆ "ಯಾವನೋ ಒಬ್ಬ ಶ್ಯಾಮಲ-ಪುರುಷ" - ಎಂದು ಈ ಶ್ಲೋಕದಲ್ಲಿ ಹೇಳಿದೆ. ಎಂತಹ ಶ್ಯಾಮಲ-ವರ್ಣದವನು ಆತ? ನವ-ತಮಾಲ-ಪಲ್ಲವದ ಹಾಗೆ ಶ್ಯಾಮಲ. ತಮಾಲವೆಂದರೆ ಹೊಂಗೆ (ಬೇರೆ ಇನ್ನೊಂದೆರಡು ಮರಗಳನ್ನೂ ತಮಾಲವೆನ್ನುವುದುಂಟು). ಹೊಂಗೆಯ ಬಣ್ಣ ಕಂದು. ತಮಾಲದ ಪಲ್ಲವ, ಅರ್ಥಾತ್ ಚಿಗುರು, ಸಹ ಅದೇ ಬಣ್ಣವೇ, ಆದರೆ ಹೊಳಪಿರುವುದು. ಹಾಗಿರುವವನು - ಎಂದರೆ ಹೊಳೆಯುವ ಕಂದುಬಣ್ಣದವನು, ಇಲ್ಲಿ ಶ್ರೀಕೃಷ್ಣನೇ ವಿನಾ ಮತ್ತಾರೂ ಅಲ್ಲ. 

ಸ್ಯಂದನವೆಂದರೆ ರಥ.  ಸ್ಯಂದನವು ಯಾರದ್ದೆಂಬ ಸೂಚನೆಗಾಗೆಂಬಂತೆ ಅದಕ್ಕೆ ಲಾಂಛನವುಳ್ಳ ಧ್ವಜವನ್ನು ಕಟ್ಟಿರುತ್ತಾರೆ. ಅರ್ಜುನನ ರಥ-ಕೇತನದಲ್ಲಿ ಹನುಮಂತನಿರುವಂತೆ, ಕೃಷ್ಣನ ಸ್ಯಂದನ-ಧ್ವಜದಲ್ಲಿ ವಿಷ್ಣು-ವಾಹನನೇ ಆದ ಗರುಡನಿರುವನು.

ಕುಂಡಿನೇಶ-ತನಯೆಯನ್ನು, ಎಂದರೆ ರುಕ್ಮಿಣಿಯನ್ನು, ರಥಕ್ಕೆ ಹತ್ತಿಸಿಕೊಂಡು ಹೊರಟುಹೋಗುತ್ತಿದ್ದಾನೆ, ಈ ಕರಿಯಕಳ್ಳ - ಎಂಬಂತೆ ಈ ಶ್ಲೋಕವು ಚಿತ್ರಿಸುತ್ತದೆ.

"ಬನ್ನಿ ಬನ್ನಿ, ನೋಡಿ ಈ ದೃಶ್ಯವನ್ನು!" ಎಂದು ಕರೆಕೊಟ್ಟು ಹೇಳುತ್ತಿರುವಂತೆ  ಶ್ಲೋಕವನ್ನು ರಚಿಸಿದ್ದಾನೆ, ಲೀಲಾಶುಕ.

ಮೇಲ್ನೋಟಕ್ಕೆ ಯಾವನೋ ಹುಡುಗಿಯೊಬ್ಬಳನ್ನು ಹಾರಿಸಿಕೊಂಡು ಹೋಗುತ್ತಿದ್ದಾನೆಂಬ ಲೆಕ್ಕ. ಆದರೆ ರುಕ್ಮಿಣಿಯಂತಹ ಉತ್ತಮ ಜೀವವನ್ನು ಶಿಶುಪಾಲನೆಂಬ ನೀಚನ ಪಾಲಿಗಾಗಿ ಬಿಡುವ ದುರವಸ್ಥೆಯನ್ನು ತಪ್ಪಿಸಿದವನು ಶ್ರೀಕೃಷ್ಣ.

ಅವಳನ್ನು ಕೃಷ್ಣನು ಕಾಪಾಡಿ, ತನ್ನ ಮಹಿಷಿಯನ್ನಾಗಿ ಮಾಡಿಕೊಂಡನಷ್ಟೆ. ಅದರ ಔಚಿತ್ಯವನ್ನು ಸವಿಯುವ ಪದ್ಯವಿದು. ರಥದಲ್ಲಿ ವೇಗವಾಗಿ ಹೋಗುತ್ತಿರುವುದರ ವರ್ಣನೆಯನ್ನು ರಥೋದ್ಧತಾ ಎಂಬ ವೃತ್ತದಲ್ಲೇ ಮಾಡಿರುವುದು ಸೊಗಸಾಗಿದೆ! ಮಂಡಿತ-ಕುಂಡಿನಗಳಲ್ಲಿ, ತಮಾಲ-ಶ್ಯಾಮಲಗಳಲ್ಲಿಯ ಅನುಪ್ರಾಸ ಗಮನೀಯ.

ಸ್ಯಂದನೇ ಗರುಡ-ಮಂಡಿತ-ಧ್ವಜೇ / ಕುಂಡಿನೇಶ-ತನಯಾಧಿರೋಪಿತಾ/ ಕೇನಚಿನ್ನವ-ತಮಾಲ-ಪಲ್ಲವ- / -ಶ್ಯಾಮಲೇನ ಪುರುಷೇಣ ನೀಯತೇ||


ಮತ್ತೊಂದು ಪದ್ಯ:

ಶ್ರೀಕೃಷ್ಣನೆಂದರೆ ಮಾಧುರ್ಯದ ಪ್ರವಾಹವೇ ಸರಿ. ಅದನ್ನು ಎಷ್ಟು ಹೇಳಿದರೂ ಹೇಗೆ ಹೇಳಿದರೂ ಲೀಲಾಶುಕನಿಗೆ ತೃಪ್ತಿಯೇ ಇಲ್ಲ. ಇಡಿಯಾಗಿಯೂ ಬಿಡಿಯಾಗಿಯೂ ಆ ಮಧುರತೆಯನ್ನು ಆಸ್ವಾದಿಸುತ್ತಿದ್ದಾನೆ.

"ಈ ವಿಭುವಿನ ಮೈಯೇ ಮಧುರ, ಮಧುರ" ಎಂದೇ ಶ್ಲೋಕದ ಆರಂಭ. 'ಈ' ಎಂಬ ಪದಕ್ಕೆ, "ಇದೋ, ಎದುರಿಗೆ ಕಾಣುತ್ತಿರುವಂತಹ" ಎಂಬ ಅರ್ಥ. ಹತ್ತಿರವಿರುವ ವಸ್ತುವಿಗೆ/ವ್ಯಕ್ತಿಗೆ ನಾವು ಇದು/ಇವನು/ಇವಳು/ ಈ  ಎನ್ನುತ್ತೇವೆ. ದೂರದ್ದಾದರೆ ಅದು/ಅವನು/ಅವಳು/ಆ ಎನ್ನುತ್ತೇವೆ. ಸಂಸ್ಕೃತದ 'ಇದಂ', ಕನ್ನಡದಲ್ಲಿ 'ಇದು'. ಸಂಸ್ಕೃತದ 'ಅದಸ್', ಕನ್ನಡದಲ್ಲಿ 'ಅದು'. ಒತ್ತಿ ಹೇಳಲು ಎರಡೆರಡು ಬಾರಿ ನುಡಿ: ಮಧುರಂ ಮಧುರಂ.

ಈ ವಿಭು ಎನ್ನುವಾಗ ಈ ಎಂಬುದು ಎದುರಿಗಿರುವವನನ್ನೇ ಹೇಳುತ್ತದೆಯಾಗಿ, ಮತ್ತೆ ಮತ್ತೆ ಕಂಡು ಸಂತೋಷಿಸಲು, ಆನಂದವನ್ನು ಅನುಭವಿಸಲು, ಸುಲಭ-ಸಾಧ್ಯತೆಯನ್ನು ಹೇಳುತ್ತದೆ.

ಪ್ರಭುವೆಂಬ ಪದವು ಒಡೆತನವುಳ್ಳವನನ್ನು ಹೇಳಿದರೆ, ವಿಭುವೆಂಬ ಪದವು ವಿವಿಧವಾಗಿ ಆಗುವಿಕೆಯನ್ನು ಹೇಳುತ್ತದೆ: ವಿವಿಧಂ ಭವತಿ! ಭಗವಂತನು ಎಷ್ಟಾದರೂ ಅನಂತ-ರೂಪವುಳ್ಳವನಲ್ಲವೇ? ಯಾವ ರೂಪದಲ್ಲಿ ತೋರಿದರೂ, ಎಷ್ಟು ಬಾರಿ ಕಂಡರೂ, ಸವಿಯು ಕಡಿಮೆಯಾಗದಿರುವಿಕೆಯು ಮಾಧುರ್ಯ. ಮತ್ತೆ ಮತ್ತೆ ಕಂಡರೂ ವೈರಸ್ಯವುಂಟಾಗದಿರುವುದು, ಎಂದರೆ ವಿ-ರಸತೆಯು ಬರದಿರುವುದು, ಇನ್ನು ಸಾಕೆನಿಸದಿರುವುದು ಮಾಧುರ್ಯ. ಯಾವುದನ್ನು ನೋಡುತ್ತಾ ಇದ್ದರೆ ಮನಸ್ಸಿನಲ್ಲೊಂದು ಮಾರ್ದವವೂ ಒಂದು ಉಲ್ಲಾಸವೂ ಮೂಡುವುವೋ ಅದು ಮಾಧುರ್ಯ.

ಇಡೀ ಶರೀರದ ಬಗ್ಗೆಯೇ ಹೇಳಿಯಾಯಿತಾದರೂ ಮುಖವನ್ನು ಕುರಿತು ಹಾಗೂ ಮುಗುಳ್ನಗೆಯನ್ನು ಕುರಿತು ಮತ್ತೆ ಮತ್ತೆ ಹೇಳಲೇಬೇಕೆನಿಸುತ್ತದೆ, ಕವಿಗೆ. ಒಟ್ಟಾರೆ ಶರೀರ, ಹಾಗೂ ವಿಶೇಷವಾಗಿ ವದನ-ಮೃದುಸ್ಮಿತಗಳೆಂಬ ಅಂಶಗಳು - ಇವಿಷ್ಟಕ್ಕೂ ೨+೩+೪ ಬಾರಿ ಮಧುರವೆಂದು ಚಿತ್ರಿಸುತ್ತಾನೆ, ಕವಿ. ಇದು ಮಧುರ-ಮಧುರತರ-ಮಧುರತಮ ಎಂಬ ತಾರತಮ್ಯವನ್ನೂ ತೋರಿಸುತ್ತದೆ.

ವದನವು ಸುಂದರವೆನಿಸುವುದು ಮುಖ್ಯವಾಗಿ ಕ್ಷೋಭೆಗೊಳಗಾಗದ ಮನಸ್ಸಿನಿಂದಾಗಿ; ಹಾಗೂ ಬಾಹ್ಯ-ಲಕ್ಷಣವಾಗಿ ಪ್ರೀತಿತೋರಿಸುವ ದೃಷ್ಟಿಗಳಿಂದಾಗಿ; ಮತ್ತು ವಾಗ್-ವಿಲಾಸದಿಂದಾಗಿ - ಎಂದರೆ ಸವಿನುಡಿಗಳಿಂದಾಗಿ. ಜೊತೆಗೆ ಮುಖದ ಸಹಜ-ಕಾಂತಿಯೆಂಬುದಂತೂ ಮಾಧುರ್ಯವನ್ನು ಇಮ್ಮಡಿಗೊಳಿಸುವಂತಹುದೇ.

ಕೃಷ್ಣನು ಬಹಳ ವಿಶೇಷ-ಪುರುಷನಾದ್ದರಿಂದ ಆತನ ವದನವು ಮಧು-ಗಂಧಿಯಾಗಿದೆ. ಮುಖವನ್ನು ಕಮಲವೆನ್ನುವುದಾದರೆ, ಮುಗುಳ್ನಗೆಯು ಅದರ ಮಕರಂದದಂತೆ. ಹೂಗಳ ಮಧುವೇ ಮಕರಂದವಲ್ಲವೇ? ಅಂತಹ ಸುಗಂಧದಿಂದ ಕೂಡಿರುವುದು ಕೃಷ್ಣ-ವದನ.

ಕೃಷ್ಣನ ಮೃದು-ಸ್ಮಿತವು ಅತ್ಯಂತ ಆಪ್ಯಾಯಕವಾಗಿದೆ. ಶರೀರವೇ ಮಧುರವಾಗಿದ್ದರೂ ವದನದ ಸುಗಂಧ-ಸುಸ್ಮಿತಗಳು ಆಶ್ಚರ್ಯಕರವಾದ ರೀತಿಯಲ್ಲಿ ಮಧುರವಾಗಿರುವುದರಿಂದಲೇ ಕವಿಯ ಬಾಯಲ್ಲಿ ಅಹೋ! ಎಂಬ ಮಾತು ಬಂದಿರುವುದು.

ಭಗವನ್ಮೂರ್ತಿಯನ್ನು ಧ್ಯಾನಿಸುವಾಗ ಆಪಾದ-ಮೌಳಿಪರ್ಯಂತವಾಗಿ - ಎಂದರೆ ಚರಣದಿಂದ ಆರಂಭಿಸಿ ಶಿರಸ್ಸಿನವರೆಗೂ – ಒಮ್ಮೆ ಧ್ಯಾನಿಸಿ, ಬಳಿಕ ಮುಖಸೌಂದರ್ಯ - ಮಂದಸ್ಮಿತಗಳತ್ತ ದೃಷ್ಟಿ-ಚಿತ್ತಗಳು ಹರಿಯಬೇಕೆಂಬ ಶಾಸ್ತ್ರೋಕ್ತ-ಧ್ಯಾನಕ್ರಮದ ಗುಟ್ಟು ಈ ಶ್ಲೋಕದಲ್ಲಿ ಮೂಡಿಬಂದಿದೆ.

೨+೩+೪ ಹೀಗೆ ಒಂಭತ್ತು ಬಾರಿ ಬಂದಿರುವ ಮಧುರಶಬ್ದವು ಸರ್ವದಾ 'ನವ'ವೆನಿಸುವ ಮಧುರತೆಯನ್ನು ಹೇಳುವುದು. ತೋಟಕ-ವೃತ್ತದಲ್ಲಿರುವ ಈ ಪದ್ಯವು ತಾಳಕ್ಕೆ ಹೊಂದುವಂತಿದ್ದು, ಹಾಡಿಗೆ ಸುಲಭವಾಗಿ ಒಗ್ಗಿಕೊಳ್ಳುವುದು. ಹೀಗೆ ಈ ಶ್ಲೋಕವು ಲಯ-ಬದ್ಧತೆಯಿಂದಲೂ ಗೇಯ-ಸೌಕರ್ಯದಿಂದಲೂ ಕೂಡಿದೆ.

ಮಧುರಂ ಮಧುರಂ ವಪುರಸ್ಯ ವಿಭೋರ್/
ಮಧುರಂ ಮಧುರಂ ವದನಂ ಮಧುರಮ್ |
ಮಧು-ಗಂಧಿ ಮೃದು-ಸ್ಮಿತಂ ಏತದಹೋ /
ಮಧುರಂ ಮಧುರಂ ಮಧುರಂ ಮಧುರಂ !! ||

ಸೂಚನೆ : 24/1/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.